ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪುಸ್ತಕಗಳು’

27
ಜನ

ಪ್ರೇಮ, ಯುದ್ಧ ಮತ್ತು ಚುನಾವಣೆಯಲ್ಲಿ ಎಲ್ಲವೂ ನ್ಯಾಯವೇ

-ಚಾಮರಾಜ ಸವಡಿ

ಕೆಲವೊಬ್ಬರು ಏನು ಮಾಡಿದರೂ ವಿವಾದವಾಗುತ್ತದೆ. ಅವರು ಸೃಜನಶೀಲ ಕ್ಷೇತ್ರದಲ್ಲಿದ್ದರಂತೂ ವಿವಾದ ಇನ್ನಷ್ಟು ತೀವ್ರ. ಕನ್ನಡದ ಮಟ್ಟಿಗೆ ಆ ಕೀರ್ತಿ ಎಸ್.ಎಲ್. ಭೈರಪ್ಪ ಅವರದಾದರೆ, ಭಾರತೀಯ ಇಂಗ್ಲಿಷ್ ಬರಹಗಾರರ ಪೈಕಿ ಆ ಪಟ್ಟ ಸಲ್ಮಾನ್ ರಶ್ದಿಗೆ.
ಬಹುಶಃ, ದಿ ಸೆಟನಿಕ್ ವರ್ಸಸ್ ಕೃತಿಯನ್ನು ರಶ್ದಿ ಬರೆಯದೇ ಹೋಗಿದ್ದರೆ, ಅವರ ಪಾಲಿಗೆ ವಿವಾದಗಳಾಗಲಿ, ವಿವಾಹಗಳಾಗಲಿ ಈ ಪರಿ ಇರುತ್ತಿರಲಿಲ್ಲವೇನೋ. ಮುಸ್ಲಿಂ ಮನಃಸ್ಥಿತಿಯನ್ನು ಮಾತ್ರ ಕೆರಳಿಸುವಂಥ ಈ ಪುಸ್ತಕವನ್ನು ಮುಗಿಬಿದ್ದು ಮುಟ್ಟುಗೋಲು ಹಾಕಿಕೊಂಡ ಭಾರತ ಸರ್ಕಾರ, ರಶ್ದಿಗೆ ಜೀವಂತ ಇರುವಾಗಲೇ ಹುತಾತ್ಮನ ಪಟ್ಟ ಕಟ್ಟಿಬಿಟ್ಟಿತು.
ಅದರ ಮುಂದುವರಿದ ಅಧ್ಯಾಯವೇ ಜೈಪುರದ ಸಾಹಿತ್ಯ ಉತ್ಸವದಲ್ಲಿ ನಡೆದಿರುವ ಪ್ರಹಸನ. ಅಲ್ಲಿ ನಡೆಯಬೇಕಾಗಿದ್ದುದು ಸಾಹಿತ್ಯದ ಚರ್ಚೆ. ಆದರೆ, ನಡೆದಿದ್ದು ಮತ್ತು ನಡೆಯುತ್ತಿರುವುದು ಲೇಖಕ ಸಲ್ಮಾನ್ ರಶ್ದಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆ ಬೇಡವೆ ಎಂಬುದರ ಬಗ್ಗೆ. ಅಂತರ್‌ರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಯಾವ ರೀತಿ ದುರ್ಬಳಕೆ ಮಾಡಬಹುದು ಮತ್ತು ಅದರ ಉದ್ದೇಶವನ್ನು ಹಾಳು ಮಾಡಬಹುದು ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ.