ದೇವನೂರು ಮಹಾದೇವರ ಪ್ರತಿಕ್ರಿಯೆ ಮತ್ತು ನನ್ನ ಗೊಂದಲಗಳು
-ಡಾ.ಸಂತೋಷ್ ಕುಮಾರ್ ಪಿ.ಕೆ
ಪ್ರಜಾವಾಣಿಯಲ್ಲಿ ದೇವನೂರು ಮಹಾದೇವ ರವರು ಬರೆದ ಲೇಖನಕ್ಕೆ ಪ್ರತಿಕ್ರಿಯೆ.
ನನ್ನ ವಿದ್ಯಾರ್ಥಿ ಜೀವನದಿಂದಲೂ ದೇವನೂರು ಮಹಾದೇವ ಎಂಬ ಆದರ್ಶವ್ಯಕ್ತಿಯ ಕುರಿತು ಕೇಳಿದ್ದೆ, ಹಾಗೂ ಕೆಲವೊಮ್ಮೆ ನೋಡುವ ಭಾಗ್ಯವೂ ಒದಗಿತ್ತು. ಕನ್ನಡ ಬಂಡಾಯ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಶಾಂತಿ ಮತ್ತು ಅಹಿಂಸಾ ಮಾರ್ಗವಾಗಿ ಹೋರಾಡುತ್ತಿರುವುದು ಅವರ ವ್ಯಕ್ತಿತ್ವದ ಆಕರ್ಷಣೆಯಾಗಿದೆ. ಇದಕ್ಕೆ ಮಾರುಹೋದ ಹಲವಾರು ಯುವಸಮುದಾಯಗಳು ಅವರನ್ನು “ಆಧುನಿಕ ಸಂತ” ಎಂಬಂತೆ ಬಿಂಬಿಸುತ್ತವೆ. ಅಷ್ಟು ಶಾಂತಚಿತ್ತ ಮತ್ತು ಧೀಮಂತ ಹೋರಾಟಗಾರೆಂದೆ ಖ್ಯಾತಿ ಪಡೆದ ದೇವನೂರು ರವರು ಏನೇ ಬರೆದರೂ ಅದನ್ನು ಓದಲು ನನ್ನನ್ನೂ ಸೇರಿ ಅಪಾರ ಅಭಿಮಾನಿಗಳ ಬಳಗವೇ ಇದೆ. ವಚನ ಕುರಿತ ಚರ್ಚೆಗೆ ಅವರ ಪ್ರತಿಕ್ರಿಯೆಯನ್ನು ಓದಿದ ಮೇಲೆ ಅವರ ಮೇಲಿದ್ದ ನನ್ನ ಗೌರವ, ನಂಬಿಕೆಗಳು ಆ ಲೇಖನವನ್ನು ಅವರೇ ಬರೆದಿದ್ದಾ ಎಂಬ ಅನುಮಾನವನ್ನು ಮೂಢಿಸಿದೆ. ಅದೇನೇ ಇದ್ದರೂ ದೇವನೂರು ಮಹಾದೇವ ರವರು ಕೆಲವು ತಪ್ಪುನಂಬಿಕೆಗಳ ಹಿನ್ನೆಲೆಯಲ್ಲಿ ಈ ಲೇಖನವನ್ನು ಬರೆದಿದ್ದಾರೆ, ಅವುಗಳನ್ನು ನನ್ನ ಓದಿನ ಮಿತಿಯಲ್ಲಿ ಚರ್ಚಿಸಲು ಬಯಸುತ್ತೇನೆ.
೧. ಲೇಖನದ ಪ್ರಾರಂಭದಲ್ಲಿ ಒಂದು ಉದಾಹರಣೆಯನ್ನು ನೀಡುವ ಮೂಲಕ ಅಂಕಿ ಸಂಖ್ಯೆಯ ಆಧಾರವಾದ ವಿವರಣೆಯನ್ನು ವಿರೋಧಿಸಿದ್ದಾರೆ: ಅದೆಂದರೆ “ತಾಯಿಯನ್ನು ’ತಾಯಿ” ಎಂದು ಇಷ್ಟು ಸಾರಿ (ಅಂಕಿ ಸಂಖ್ಯೆಗಳ ಲೆಕ್ಕದಲ್ಲಿ) ಕರೆಯದಿದ್ದರೆ ಬಂಜೆ ಎಂದು ಕರೆದು ದಿಗ್ವಿಜಯ ಸಾಧಿಸಿಬಿಡುತ್ತಾರೆ”. ಇಲ್ಲಿ ತೆಗೆದುಕೊಂಡಿರುವ ಉದಾಹರಣೆಯನ್ನು ಮತ್ತೊಂದು ರೀತಿಯಲ್ಲಿ ಇಡಬಹುದು, ಒಲ್ಲೊಬ್ಬರು ಮಹಿಳೆ ಇದ್ದಾರೆ ಹಾಗೂ ಮಗನ ವಯಸ್ಸಿನ ವ್ಯಕ್ತಿಯೊಬ್ಬ ಇದ್ದಾನೆ ಎಂದಿಟ್ಟುಕೊಳ್ಳಿ. ಆಕೆಗೆ ಅಪಾರ ಆಸ್ತಿ ಇದ್ದು ಬೇರೆ ಯಾರೂ ವಾರಸ್ದಾರರು ಇಲ್ಲ ಎಂದಿಟ್ಟುಕೊಳ್ಳುವ, ಅವಳ ಆಸ್ತಿಯನ್ನು ಕಬಳಿಸಲು ಯಾರೋ ಆಕೆಯನ್ನು ಅಮ್ಮ ಅಮ್ಮ ಎಂದು ನೂರು ಸಾವಿರ ಲಕ್ಷ ಬಾರಿ ಕರೆಯುತ್ತಾರೆ ಎಂದಾದರೆ, ಅವರ ನಡುವೆ ಇರುವುದು ತಾಯಿ ಮಕ್ಕಳ ಸಂಬಂಧವೆ? ಅಥವಾ ಬೇರೆ ತರಹದ ಸಂಬಂಧವೆ? ಇಲ್ಲಿ ಆಸ್ತಿಗೋಸ್ಕರ ಆತ ಎಷ್ಟು ಬಾರಿ ತಾಯಿ ಎಂದು ಕರೆದರೂ ಆಕೆ ಆತನಿಗೆ ತಾಯಿಯಾಗಲು ಸಾಧ್ಯವಿಲ್ಲ, ಇದನ್ನು ಪ್ರಮಾಣೀಕರಿಸುವುದು ಹೇಗೆ? ಹೇಗೆಂದರೆ ಅವರ ನಡುವೆ ನಿಜವಾಗಿಯೂ ತಾಯಿ-ಮಗನ ಸಂಬಂಧವಿದೆಯೇ? ಎಂದು ಪರೀಕ್ಷೆ ಮಾಡುವುದು. ಆ ಪರೀಕ್ಷೆಯನ್ನೇ ಮಾಡದೆ ಕೆಲವು ಬಾರಿ ಆತ ಆಕೆಯನ್ನು ತಾಯಿ ಎಂದು ಕರೆದಿದ್ದಾನೆ ಆದ್ದರಿಂದ ಆಕೆ ಆತನ ತಾಯಿಯೇ ಎಂದು ನಿರ್ಣಯಕ್ಕೆ ಬರುವುದು ತೀರಾ ಅವಾಸ್ತವಿಕವಾಗುತ್ತದೆ. ಅಂತೆಯೇ ಜಾತಿ, ಕುಲ ಎಂಬ ಪದಗಳು ವಚನಗಳಲ್ಲಿ ಇದ್ದ ಮಾತ್ರಕ್ಕೆ ಅವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡದೆ ಜಾತಿ ವಿರೋಧ ಎಂದು ನಿರ್ಣಯಕ್ಕೆ ಬರುವುದು ಅವಸರದ ತೀರ್ಮಾನವಾಗುತ್ತದೆ. ಹಾಗೆ ನೋಡಿದರೆ ಅಂಕಿ ಅಂಶಗಳ ಮೂಲಕ ವಚನಗಳನ್ನು ಅರ್ಥೈಸುವುದು ಮುಖ್ಯವಾದ ಗುರಿ ನಮ್ಮದಲ್ಲ ಹಾಗೂ ಅದರ ಆಧಾರದ ಮೇಲೆಯೇ ವಚನಗಳ ಕುರಿತ ವಾದವೂ ಬೆಳೆದಿಲ್ಲ, ಬದಲಿಗೆ ವಚನಗಳನ್ನು ಸಮಗ್ರವಾಗಿ ನೋಡಿದಾಗ ಹೇಗೆ ಕಾಣುತ್ತದೆ ಎಂಬುದನ್ನು ವಾದಿಸುವ ಸಂದರ್ಭದಲ್ಲಿ ನಗಣ್ಯವಾಗಿ ಅಥವಾ ಅಷ್ಟೇನೂ ಪ್ರಮುಖವಲ್ಲದ ವಿಷಯ ಅದಾಗಿದೆ.
ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಿದಾಗ ಕಾಣಿಸುವುದೇನು?
– ಬಾಲಗಂಗಾಧರ ಎಸ್. ಎನ್.
ಗೆಂಟ್ ವಿಶ್ವವಿದ್ಯಾಲಯ, ಬೆಲ್ಜಿಯಂ
ವಚನಗಳ ಉದ್ದೇಶವು ಜಾತಿವಿನಾಶ ಚಳವಳಿಯಲ್ಲ ಎಂಬ ನನ್ನ ಹಾಗೂ ನನ್ನ ಸಹಸಂಶೋಧಕರ ವಾದವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ನನ್ನ ವಾದಕ್ಕೆ ಪ್ರತಿಕ್ರಿಯಿಸಿದವರೆಲ್ಲರೂ ನನ್ನ ವಾದವು ವಚನಗಳ ಹಿರಿಮೆಯನ್ನು ಅಲ್ಲಗಳೆಯುತ್ತಿದೆ ಎಂಬುದಾಗಿ ಭಾವಿಸಿದ್ದಾರೆ. ಅದನ್ನು ಸ್ಪಷ್ಟೀಕರಿಸಲು ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಬೇಕೆಂಬುದು ನಮ್ಮ ವಾದವೆಂಬುದನ್ನು ಓದುಗರ ಗಮನಕ್ಕೆ ತಂದಿದ್ದೂ ಆಗಿದೆ. ಆ ಹೇಳಿಕೆಯ ಕುರಿತೂ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಪ್ರತಿಕ್ರಿಯೆಗಳಲ್ಲಿ ಪರೋಕ್ಷವಾಗಿ ಇವರೆಲ್ಲರೂ ಆಧ್ಯಾತ್ಮ ಸಂಪ್ರದಾಯವನ್ನು ಬ್ರಾಹ್ಮಣರಿಗೆ ಸಮೀಕರಿಸುವುದು ಕಂಡುಬರುತ್ತದೆ. ಇಲ್ಲಿ ಬಹುಶಃ ಈ ಅಭಿಪ್ರಾಯಗಳಿಗೆ ಉತ್ತರ ನೀಡುವುದಕ್ಕಿಂತ ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಮತ್ತೂ ಸ್ಪಷ್ಟೀಕರಿಸುವುದು ಸೂಕ್ತ ಎನ್ನಿಸುತ್ತದೆ.
ಭಾರತೀಯ ಆಧ್ಯಾತ್ಮ ಪರಂಪರೆಯು ಇಂದಿನವರೆಗೂ ಐತಿಹಾಸಿಕ ಏಳು ಬೀಳುಗಳನ್ನೆಲ್ಲ ದಾಟಿಕೊಂಡು ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ. ಆದರೆ ಅದರ ಕುರಿತು ಅಧಿಕೃತವಾಗಿ ತಿಳಿದುಕೊಳ್ಳುವ ಗುರಿಯನ್ನು ಸಮಾಜ ವಿಜ್ಞಾನವು ಇನ್ನೂ ತಲುಪಿಲ್ಲ. ಏಕೆಂದರೆ, ಅದರ ಒಂದು ವಿಶೇಷತೆಯೆಂದರೆ ಅದನ್ನು ಗುರು, ಶಿಷ್ಯವೃತ್ತಿ, ಸತತ ಸಾಧನೆ ಇತ್ಯಾದಿಗಳಿಂದಲೇ ಕಲಿಯಬೇಕಾಗುತ್ತದೆ. ಅದರ ಕುರಿತು ನಮ್ಮ ಆಧುನಿಕ ಪರಿಭಾಷೆಗಳಲ್ಲಿ ಮಾತನಾಡಲು ಹಾಗೂ ಅರ್ಥಮಾಡಿಕೊಳ್ಳಲು ನಾವಿನ್ನೂ ಸರಿಯಾದ ಭಾಷೆಯನ್ನು ಬೆಳೆಸಿಕೊಂಡಿಲ್ಲವೆಂಬುದು ವಚನದ ಕುರಿತ ಈ ಚರ್ಚೆಯಂದ ಧೃಡಪಡುತ್ತದೆ. ಏಕೆ ಈ ಸಂಪ್ರದಾಯವನ್ನು ಪ್ರವೇಶಿಸಲು ನಮಗೆ ಸಾಧ್ಯವಾಗುತ್ತಿಲ್ಲವೆಂದರೆ ಈಗ ಇರುವ ವಿವರಣೆಗಳೆಲ್ಲವೂ ಕ್ರೈಸ್ತ ಥಿಯಾಲಜಿಯನ್ನಾಧರಿಸಿ ಹುಟ್ಟಿದಂಥವು. ಅಂದರೆ, ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಪ್ರಪ್ರಥಮವಾಗಿ ಸಮಾಜ ವಿಜ್ಞಾನದ ಪರಿಭಾಷೆಯಲ್ಲಿ ಇಟ್ಟ ಐರೋಪ್ಯರು ತಮಗೆ ಗೊತ್ತಿದ್ದ ಒಂದೇ ಒಂದು ಪರಿಭಾಷೆಗಳ ಲೋಕದಿಂದ ಇದನ್ನು ವರ್ಣಿಸಿದರು, ಅದೇ ಕ್ರೈಸ್ತರ ಥಿಯಾಲಜಿಯ ಲೋಕ. ಅಂದರೆ, ಇಂದು ಆಧ್ಯಾತ್ಮದ ಜ್ಞಾನದ ಹಿನ್ನೆಲೆಯನ್ನು ಹೊಂದಿದವರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಇಂದಿನ ಸಮಾಜ ವಿಜ್ಞಾನಿಗಳು ಸಂಶೋಧನಾ ಭಾಷೆಯಲ್ಲಿ ವರ್ಣಿಸಬೇಕಾದರೆ ಥಿಯಾಲಜಿಗೂ ಹೊರತಾದ ವೈಜ್ಞಾನಿಕ ಭಾಷೆಯೊಂದರ ಅಗತ್ಯವಿದೆ.
ಮತ್ತಷ್ಟು ಓದು
ಜಾತಿ-ವಿರೋಧಿ ನಿಲುವು : ಸರಿಯಾದ ವೈಧಾನಿಕತೆ!
– ಡಂಕಿನ್ ಝಳಕಿ
ಇಂದಿನ ಪ್ರಜಾವಾಣಿಯಲ್ಲಿ (೦೪/೦೪/೨೦೧೩) ಎಂ.ಎಸ್. ಆಶಾದೇವಿಯವರು ಬರೆದ ವಚನ ಕುರಿತ ಚರ್ಚೆಯ ಬರಹಕ್ಕೆ ಇದು ನನ್ನ ಉತ್ತರ.
ನಮ್ಮ ಸಂಶೋಧನೆಯ ಕುರಿತು ಇವರು ಮಾಡುವ ಗುರುತರ ಆಪಾದನೆಯೆಂದರೆ, ಇದಕ್ಕೆ ವಚನಗಳ “ಜೀವಪರ ನಿಲುವು” ಕಾಣಿಸುವುದಿಲ್ಲ. ಏಕೆಂದರೆ ಈ ಸಂಶೋಧನೆಗೆ ಒಂದು “ವೈಧಾನಿಕತೆಯ ಕಣ್ಕಟ್ಟು” ಇದೆ. ಯಾವುದಿದು ವೈಧಾನಿಕತೆಯ ಕಣ್ಕಟ್ಟು? ಆಧ್ಯಾತ್ಮಿಕ ವಿಚಾರವನ್ನು ಅಕಾಡೆಮಿಕ್ ಅಧ್ಯಯನದಲ್ಲಿ ತರುವ ಪ್ರಯತ್ನವೇ ಈ ಕಣ್ಕಟ್ಟು ಅಥವಾ ಮಾಯೆ. ಮುಂದುವರೆಸಿ ಇವರು ಹೇಳುತ್ತಾರೆ, ಈ ಕುರುಡು ವೈಧಾನಿಕತೆಯು ಈ ಮುಂದಿನ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ: “ಆ ಆಧ್ಯಾತ್ಮಿಕ ಪರಂಪರೆಯ ಸ್ವರೂಪ ಮತ್ತು ವ್ಯಾಖ್ಯಾನ ಯಾವುದು?”
ಇವರ ಈ ಹೇಳಿಕೆಗಳನ್ನು ನಾನು ‘ಆಪಾದನೆ’ ಎಂದು ಯಾಕೆ ಹೇಳಿದೆನೆಂದರೆ ಇವರು ತಮ್ಮ ಈ ಹೇಳಿಕೆಗಳನ್ನು ಮುಂದೆ ಎಲ್ಲೂ ವಿವರಿಸುವುದೂ ಇಲ್ಲ, ಸಮರ್ಥನೆ ಮಾಡಿಕೊಳ್ಳುವುದೂ ಇಲ್ಲ. ಈ ಆಪಾದನೆಯ ನಂತರ ಇವರ ಲೇಖನ ಬೇರೆಡೆ ಹೊರಳುತ್ತದೆ. ತಮ್ಮ ಹೇಳಿಕೆಗಳನ್ನು ಇವರು ತಾವೇ ವಿವರಿಸದೆ ಹೋಗುವುದರಿಂದ ಅದನ್ನು ಅರ್ಥಮಾಡಿಕೊಳ್ಳುವುದು ಓದುಗನಿಗೆ ಬಿಟ್ಟ ಕೆಲಸ. ನನಗೆ ಇವರ ಕಷ್ಟದ ಭಾಷೆ ಅರ್ಥವಾದ ಮಟ್ಟಿಗೆ ಹೇಳುವುದಾದರೆ, ಯಾವುದೇ ಸಂಶೋಧನೆ ಮಾಡದೆ, ನೂರು ವರ್ಷಗಳಿಂದ ಹೇಳುತ್ತಾ ಬಂದಿರುವ ‘ವಚನಗಳು ಜಾತಿವಿರೋಧಿ’ ಎಂಬ ವಿಚಾರವನ್ನು ಒಪ್ಪಿಕೊಳ್ಳುವುದೇ ವಚನಗಳ ಜೀವಪರ ನಿಲುವನ್ನು ಗುರುತಿಸುವ ವೈಧಾನಿಕತೆ ಎಂದಾಯಿತು ಅಲ್ಲವೇ?
ಮೀನಾಕ್ಷಿ ಬಾಳಿಯವರ ಅಸೈದ್ಧಾಂತಿಕ ವಿಮರ್ಶೆಗೊಂದು ಸೈದ್ಧಾಂತಿಕ ಉತ್ತರ
– ಡಂಕಿನ್ ಝಳಕಿ
ನಮ್ಮ ವಚನ ಸಂಶೋಧನೆ ಕುರಿತು ಡಾ.ಮೀನಾಕ್ಷಿ ಬಾಳಿಯವರು ಪ್ರಜಾವಾಣಿಯ ೧೮/ಮಾರ್ಚ್/೨೦೧೩ರ ಸಂಚಿಕೆಯಲ್ಲಿ ಬರೆದ “ಆಧುನಿಕೋತ್ತರ ವಾದದ ಅಪಸವ್ಯ” ಎಂಬ ಬರಿಯ ಬೈಗುಳಗಳಿಂದಲೇ ತುಂಬಿರುವ ಇವರ ಬರಹಕ್ಕೆ ಇದು ನನ್ನ ಪ್ರತಿಕ್ರಿಯೆ.
(೧) ಅವರ ಟೀಕಾ ಪ್ರಹಾರ ಆರಂಭವಾಗುವುದೇ ನಮ್ಮ ವಾದದಲ್ಲಿ “ಯಾವುದೇ ಹೊಸ ಚಿಂತನೆಯಾಗಲಿ ಅಥವ ಆರೋಗ್ಯಪೂರ್ಣವಾದ ಚರ್ಚೆಗಾಗಲಿ ಅವಕಾಶವಿಲ್ಲ” ಎಂದು ಸಾರುತ್ತಾ, ನಮ್ಮ ಸಂಶೋಧನೆಯು ಪೂರ್ವಗ್ರಹ ಪೀಡಿತವಾಗಿದೆ ಮತ್ತು “ಈ ನಿಲುವಿಗೆ ಬರಲು ಬಳಸಿಕೊಂಡ ಸಂಶೋಧನ ಮಾದರಿಯೇ ಪ್ರಶ್ನಾರ್ಹವಾಗಿದೆ” ಎನ್ನುವ ಮೂಲಕ. ನಮ್ಮ ವಾದದಲ್ಲಿ ಆರೋಗ್ಯಪೂರ್ಣವಾದ ಚರ್ಚೆಗಾಗಲಿ ಅವಕಾಶವಿಲ್ಲದ ಮೇಲೆ ಬಾಳಿಯವರು ಈ ಲೇಖನವನ್ನು ಬರೆದದ್ದಾದರೂ ಹೇಗೆ, ಪ್ರಜಾವಾಣಿ ನಮ್ಮ ವಿರುದ್ಧ ಅಷ್ಟೊಂದು ಲೇಖನಗಳನ್ನು ಪ್ರಕಟಿಸಿದ್ದು ಹೇಗೆ? ಈ ಪ್ರಶ್ನೆಗಳು ಹಾಗಿರಲಿ, ಮುಖ್ಯವಾದ ವಿಷಯಕ್ಕೆ ಬರೋಣ. ನಮ್ಮ ಸಂಶೋಧನ ಮಾದರಿಯೇ ಪ್ರಶ್ನಾರ್ಹವಾಗಿದೆ ಎಂದು ಇವರು ಹೇಳುವುದು ನಾವು ಕೇವಲ ವಚನಗಳಲ್ಲಿನ ಶಬ್ದ ಬಳಕೆಯ ಲೆಕ್ಕ ಮಾತ್ರ ಮಾಡುತ್ತೇವೆ, ಒಟ್ಟು ವಚನಗಳ ಜೀವಧ್ವನಿ, ಅವರ ಬದುಕಿನ ಸಂಘರ್ಷ ಮುಂತಾದವುಗಳನ್ನು, ವಚನಕಾರರ ನಂತರ ಅವರ ಬದುಕು ಕುರಿತು ರಚನೆಯಾದ ಕಾವ್ಯ ಪುರಾಣಗಳು ಶಾಸನಗಳು ಜಾನಪದ ಸಾಹಿತ್ಯರಾಶಿ ಇತ್ಯಾದಿಗಳನ್ನು ನಾವು ಗುರುತಿಸುವುದಿಲ್ಲವಂತೆ. ಇಂತಹ ಹೇಳಿಕೆಗಳನ್ನು ಮಾಡುವ ಮೊದಲು ನಾವು ಬರೆದ ಲೇಖನ, ಪುಸ್ತಕಗಳನ್ನು ಇವರು ಓದಬೇಕಿತ್ತು. ಅವರು ಉಲ್ಲೇಖಿಸುವುದು ನಮ್ಮೆಲ್ಲ ವಚನ ಸಂಶೋಧನೆಯ ಸಾರಾಂಶವನ್ನು ಕೊಟ್ಟಿರುವ, ನಾನು ಸಂಪಾದಿಸಿದ ಭಾರದಲ್ಲಿ ಜಾತಿವ್ಯವಸ್ಥೆ ಇದೆಯೇ? ಕೃತಿಯಲ್ಲಿನ ಎರಡು ಪುಟಗಳ ಲೇಖನವನ್ನಷ್ಟೇ. ಇದನ್ನು ಏನೆಂದು ಕರೆಯೋಣ: ಬಾಳಿಯವರ ವಿದ್ವತ್ತಿನಲ್ಲಿನ ಕೊರತೆ ಎಂದೋ ಅಥವಾ ಸೋಮಾರಿತಂವೆಂದೋ?
ವಚನ ಸಾಹಿತ್ಯದ ಬಗೆಗಿನ ಚರ್ಚೆಯ ಕುರಿತು…
– ಜೆ.ಎಸ್.ಸದಾನಂದ
ಸ್ಥಳೀಯ ಸಂಸ್ಕಂತಿಗಳ ಅಧ್ಯಯನ ಕೇಂದ್ರ,
ಕುವೆಂಪು ವಿಶ್ವ ವಿದ್ಯಾನಿಲಯ.
‘ಪ್ರಜಾವಾಣಿ’ಯಲ್ಲಿ ನಡೆಯುತ್ತಿರುವ ಢಂಕಿನ್ರವರ ವಚನ ಸಾಹಿತ್ಯ ಹಾಗು ಜಾತಿ ವ್ಯವಸ್ಥೆಯ ಕುರಿತಾದ ಸಂಶೋಧನೆಯ ಮೇಲಿನ ಚರ್ಚೆ ಹೆಚ್.ಎಸ್.ಶಿವಪ್ರಕಾಶ್ ಹಾಕಿಕೊಟ್ಟ ಅಕಾಡಮಿಕ್ ಅಡಿಪಾಯವನ್ನು ಬಿಟ್ಟು ಅತ್ತಿತ್ತ ಓಲಾಡತೊಡಗಿದೆ ಎಂದು ನನಗನಿಸುತ್ತಿದೆ. ಕೆಲವು ನಿರ್ಧಿಷ್ಟ ಲಕ್ಷಣಗಳನ್ನೊಳಗೊಂಡ ಬ್ರಾಹ್ಮಣ ಪುರೋಹಿತಶಾಹಿ ಪ್ರಚೋದಿತ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆ ಎನ್ನುವ ಪೂರ್ವನಂಬಿಕೆಯಿಂದ ವಚನ ಸಾಹಿತ್ಯವನ್ನು ನೋಡಿದಾಗ ಅವು ಜಾತಿ ವ್ಯವಸ್ಥೆಯ ವಿರುದ್ಧದ ಚಳುವಳಿಗಳಂತೆ ನಮಗೆ ಕಾಣಿಸುತ್ತದೆ. ಅಂತಹ ಭೌದ್ಧಿಕ ಚೌಕಟ್ಟಿನಿಂದ ಹೊರಬಂದು ವಚನಗಳನ್ನು ಓದಿದಾಗ ಅವು ಜಾತಿ ವ್ಯವಸ್ಥೆಯ ವಿರುದ್ಧದ ಚಳುವಳಿ ಎಂದು ಸಿದ್ಧಪಡಿಸಿ ತೋರಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಢಂಕಿನ್ರವರ ವಾದದ ಸಾರಾಂಶ ಎಂದು ನಾನು ತಿಳಿದುಕೊಂಡಿದ್ದೇನೆ. ಮತ್ತು ಇದಕ್ಕೆ ಪೂರಕವಾಗಿ ಜಾತಿಯ ಉಲ್ಲೇಖವಿರುವ ವಚನಗಳ ಸಂಖ್ಯೆ ಅತ್ಯಂತ ಕಡಿಮೆ ಎಂದು ಅವರು ಕೊಡುವ ಪುರಾವೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಅವರು ಬಳಸುವ ಕೇವಲ ಒಂದು ಅಂಶವಷ್ಟೇ ಎನ್ನುವುದು ನನ್ನ ತಿಳುವಳಿಕೆಯಾಗಿದೆ. ಕೇವಲ ಅದೊಂದರಿಂದಲೇ ತಮ್ಮ ವಾದವನ್ನು ಅವರು ಸಮರ್ಥಿಸಿಕೊಂಡಿರಲು ಸಾಧ್ಯವಿಲ್ಲ. ಹೆಚ್.ಎಸ್.ಶಿವಪ್ರಕಾಶ್ರವರು ಈ ಒಂದು ಅಂಶವನ್ನು ಉಲ್ಲೇಖಿಸಿರುವುದರಿಂದ ಅದೇ ಚರ್ಚೆಯ ಪ್ರಮುಖ ಗುರಿಯಾಗಿ ಚರ್ಚೆಗೆತ್ತಿಕೊಳ್ಳಬುದಾಗಿದ್ದ ಇನ್ನಿತರ ಮಹತ್ತರ ಅಂಶಗಳು ಕಣ್ಮರೆಯಾಗಿರುವ ಸಾಧ್ಯತೆ ಇದೆ.
ನನಗನಿಸುವಂತೆ ಇಲ್ಲಿ ಅತ್ಯಂತ ಪ್ರಮುಖವಾಗಿ ಚರ್ಚೆಗೊಳಬೇಕಾದ ಸಂಗತಿಗಳು ಎಂದರೆ: ಢಂಕಿನ್ರವರ ಸಂಶೋಧನೆಯು ಅದರ ಅಧ್ಯಯನದ ಕೇಂದ್ರವಾದ ವಿಧ್ಯಮಾನದ ಮೇಲೆ ಎಷ್ಟರ ಮಟ್ಟಿಗೆ ಬೆಳಕು ಚೆಲ್ಲುತ್ತದೆ; ಅವರ ಸಂಶೋಧನೆಯ ಪ್ರಾಕ್ಕಲ್ಪನೆಗೆ (ಜಾತಿ ವ್ಯವಸ್ಥೆಯ ಚೌಕಟ್ಟಿನಲ್ಲಿ ವಚನಗಳನ್ನು ಗ್ರಹಿಸಿದಾಗ ಮಾತ್ರ ಅವು ಜಾತಿ ವಿರೋಧಿ ಚಳುವಳಿಗಳಂತೆ ಕಾಣುತ್ತವೆ ಎನ್ನುವ ಪ್ರಾಕ್ಕಲ್ಪನೆ) ಇರುವ ಸಮರ್ಥನೆ ಯಾವುದು; ಸಂಶೋಧನೆಯಲ್ಲಿ ಮಂಡಿಸಲಾಗಿರುವ ವಾದ ಎಷ್ಟು ತರ್ಕಬದ್ಧವಾಗಿದೆ ಇತ್ಯಾದಿ. ಚರ್ಚೆ ಈ ನಿಟ್ಟಿನಲ್ಲಿ ಮುಂದುವರೆದಿದ್ದರೆ ಇದೊಂದು ಅರ್ಥಪೂರ್ಣ ಚರ್ಚೆಯಾಗಿರುತ್ತಿತ್ತು ಹಾಗು ಓದುಗರಿಗೂ ಉಪಯುಕ್ತವಾಗುತ್ತಿತ್ತು.
ವಚನ ಸಾಹಿತ್ಯವು ಜಾತಿವ್ಯವಸ್ಥೆಯ ವಿರುದ್ಧ ಮಾತನಾಡುತ್ತದೆಯೆ?
(ಪ್ರಜಾವಾಣಿಯಲ್ಲಿ CSLC ಯ ಡಂಕಿನ್ ಝಳಕಿ ಮತ್ತು ಎಸ್.ಎನ್. ಬಾಲಗಂಗಾಧರ ’ವಚನ ಸಾಹಿತ್ಯವು ಜಾತಿವ್ಯವಸ್ಥೆಯ ವಿರುದ್ಧ ಮಾತನಾಡುತ್ತದೆಯೆ?’ ಅನ್ನುವ ಲೇಖನದ ಬಗ್ಗೆ ಚರ್ಚೆ ಹುಟ್ಟುಹಾಕಿದವರು ಎಚ್.ಎಸ್. ಶಿವಪ್ರಕಾಶ್.ಆದರೆ ಸುಮಾರು ೧೫ ದಿನಗಳ ಈ ಇಡಿ ಚರ್ಚೆಯಲ್ಲಿ ಮೂಲ ಲೇಖನದ ವಿರುದ್ಧವಾದ ದನಿಗಳಿಗೆ ಮಾತ್ರ ಇದುವರೆಗೆ ವೇದಿಕೆ ಕಲ್ಪಿಸಿ, ಲೇಖಕರ ಅಭಿಪ್ರಾಯ ಮಂಡನೆಗೆ ಅವಕಾಶವನ್ನೇ ನೀಡಲಾಗಿಲ್ಲ ..!
ಡಂಕಿನ್ ಝಳಕಿ ಯವರ ಮೂಲ ಲೇಖನ ಇಲ್ಲಿದೆ. ಈ ಚರ್ಚೆಯ ಎಲ್ಲಾ ರೀತಿಯ ಅಭಿಪ್ರಾಯಗಳಿಗೂ “ನಿಲುಮೆ” ಮುಕ್ತ ವೇದಿಕೆಯಾಗಲಿದೆ – ನಿಲುಮೆ)
– ಡಂಕಿನ್ ಝಳಕಿ, ಎಸ್.ಎನ್. ಬಾಲಗಂಗಾಧರ
[ಇದು ಚಿಂತನ ಬಯಲು ಸಂಪುಟ ೧, ಸಂಚಿಕೆ ೩ರಲ್ಲಿ ಪ್ರಕಟಗೊಂಡ ಮೂಲ ಲೇಖನದ ಸಂಕ್ಷಿಪ್ತ ಪಾಠ. ಲೇಖನದ ಪೂರ್ಣ ಪಾಠ, ಆಕರ ಗ್ರಂಥಗಳ ಪಟ್ಟಿ ಮತ್ತು ಅಡಿಟಿಪ್ಪಣಿಗಳಿಗಾಗಿ ಮೂಲ ಲೇಖನವನ್ನು ನೋಡಿ ಅಥವಾ ಇವರನ್ನು ಸಂಪರ್ಕಿಸಿ: dunkinjalkiAToutlookDOTcom]
ವಚನಗಳ ಆಧುನಿಕ ಅಧ್ಯಯನಗಳ ಒಂದು ಮರು ಪರಿಶೀಲನೆ
ಕನ್ನಡ ಸಾಹಿತ್ಯದ ಬಹು ಮುಖ್ಯ ಭಾಗವಾಗಿರುವ ವಚನಗಳನ್ನು ‘ಲಿಂಗಾಯತ/ವೀರಶೈವ ಚಳುವಳಿ’ ಅಥವಾ ‘ವಚನ ಚಳುವಳಿ’ ಎಂಬ ಹನ್ನೆರಡನೇ ಶತಮಾನದ ಒಂದು ಆಂದೋಲನದ ಭಾಗವೆಂದು ನೋಡುವುದು ಇಂದು ಒಂದು ವಾಡಿಕೆಯಾಗಿ ಬಿಟ್ಟಿದೆ. ಹನ್ನೆರಡನೇ ಶತಮಾನದ ಈ ಆಂದೋಲನವನ್ನು, ಬುದ್ಧಿಸಂನ ಬಳಿಕ ಭಾರತ ಕಂಡ ಅತ್ಯಂತ ಪ್ರಮುಖ ಜಾತಿ ವಿರೋಧೀ ಚಳುವಳಿ ಎಂಬಂತೆ ಬಿಂಬಿಸಲಾಗಿದೆ. ಇಪ್ಪತ್ತನೇ ಶತಮಾನದ ಹೊತ್ತಿಗೆ ಈ ವಚನಗಳನ್ನು ಭಾರತ ಕಂಡ ಜಾತಿಯ ವಿರುದ್ಧ ಹೋರಾಡಿದ ಮೊಟ್ಟಮೊದಲ ಚಳುವಳಿಯ ಭಾಗವೆಂದು ಗುರುತಿಸಲಾಯಿತು. ಪ್ರಸ್ತುತ ಬಹುಮತಾಭಿಪ್ರಾಯದ ಪ್ರಕಾರ ಜಾತಿ ವಿರೋಧಿ ವಿಚಾರವು ವಚನ ಚಳುವಳಿಯ ಮತ್ತು ವಚನಗಳ ಮೂಲ ಆಶಯ. ಈ ಪ್ರಸಿದ್ಧ ವಾದಕ್ಕೆ ತರ್ಕದ ಅಥವಾ ನಿಜಾಂಶಗಳ ಯಾವುದೇ ಆಧಾರವಿಲ್ಲ ಎಂಬುದನ್ನು ತೋರಿಸುವುದೇ ಈ ಲೇಖನದ ಉದ್ದೇಶ.
ಈ ವಾದವನ್ನು ನಾವು ಬೆಳೆಸಿಕೊಂಡು ಹೋಗಲು ಹೀಗೊಂದು ಊಹಾಸಿದ್ಧಾಂತವನ್ನು ಮಾಡೋಣ: ವಚನಗಳು ಜಾತಿಯ ವಿರುದ್ಧದ ಚಳುವಳಿಯನ್ನು ಪ್ರತಿನಿಧಿಸುತ್ತವೆ ಎಂಬ ಪ್ರಚಲಿತ ಜನಪ್ರಿಯ ನಂಬಿಕೆಯು ನಿಜವೇ ಆಗಿದ್ದರೆ, ಬಹುತೇಕ ವಚನಗಳು ಜಾತಿಯ ಕುರಿತು ಮಾತನಾಡಲೇಬೇಕು. ಏಕೆಂದರೆ ಜಾತಿ ವಿರುದ್ಧದ ಚಳುವಳಿಯ ಭಾಗವಾಗಿದ್ದುಕೊಂಡೂ ವಚನಗಳು ಜಾತಿಯ ವಿರುದ್ಧ ಮಾತನಾಡದೆ ಊಳಿದಿರಬಹುದಾದ ಪರಿಸ್ಥಿತಿ ಸಾಧ್ಯವಿಲ್ಲದ ಮಾತು. ಈ ಊಹಾಸಿದ್ಧಾಂತದ ಪ್ರಕಾರ, ಒಂದುವೇಳೆ ನಾವು ವಚನಗಳು ಜಾತಿಯ ವಿರುದ್ಧ ಮಾತನಾಡುವುದಿಲ್ಲ ಅಥವಾ ಜಾತಿಯ ವಿಚಾರ ವಚನಗಳಿಗೆ ಮಹತ್ವದ ವಿಚಾರವೇ ಅಲ್ಲವೆಂದು ತೋರಿಸಿದರೆ, ವಚನಗಳು ಜಾತಿವಿರೋಧಿ ಸಾಹಿತ್ಯವೆಂಬ ಪ್ರಚಲಿತ ವಾದವನ್ನು ತಳ್ಳಿ ಹಾಕಿದಂತಾಗುತ್ತದೆ.
ಮೂರುವರೆ ರೂಪಾಯಿ ಓದುಗ ಆರೂವರೆ ರೂಪಾಯಿಯ ಜಾಹೀರಾತುದಾರ…
– ಡಾ.ಅಶೋಕ್ ಕೆ.ಆರ್
ಪ್ರಜಾವಾಣಿಯಿಂದ ನಿವೃತ್ತರಾದ ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್ ರವರು ವ್ಯಂಗ್ಯಚಿತ್ರಕಾರರ ಬವಣೆ, ಹಣ ನೀಡದ ಪತ್ರಿಕಾ ಸಂಸ್ಥೆಗಳಬಗ್ಗೆ ತಮ್ಮ ಅಭಿಪ್ರಾಯವನ್ನು ಫೇಸ್ ಬುಕ್ಕಿನಲ್ಲಿ ಪತ್ರದ ರೂಪದಲ್ಲಿ ಬರೆದುಕೊಂಡಿದ್ದರು.ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟುರವರು ಫೇಸ್ ಬುಕ್ಕಿನಲ್ಲಿ ಕೆಳಗಿನಂತೆ ಬರೆದಿದ್ದಾರೆ.

ಸ್ವಾಮಿ ವಿವೇಕಾನಂದರೊಳಗಿನ ’ಮನುಷ್ಯ’ ಮತ್ತು ಮನುಷ್ಯನೊಳಗಿನ ’ಅವಿವೇಕ’
– ರಾಕೇಶ್ ಶೆಟ್ಟಿ
ಓದು,ಅನುಭವ ಮತ್ತು ವಯಸ್ಸು,ಮನುಷ್ಯನನ್ನ ಮಾಗಿಸುತ್ತದೆ ಅನ್ನುತ್ತಾರೆ,ಆದರೆ ಕೆಲವರ ಪಾಲಿಗೆ ಓದು,ಅನುಭವದ ಜೊತೆಗೆ ವಯಸ್ಸು ಬಾಗಿಸುತ್ತದೆ ದೇಹ ಮತ್ತೆ ತಲೆ ಎರಡನ್ನೂ…! ಅಂತವರ ವಿಷಯ ಪಕ್ಕಕ್ಕಿರಲಿ….ವಿವೇಕಾನಂದರ ವಿಷಯಕ್ಕೆ ಬರೋಣ…
ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಸ್ವಾಮಿ ವಿವೇಕಾನಂದರು ಜಪಾನ್ ಮೂಲಕ ಸಾಗುವಾಗ ಅಲ್ಲಿನ ನಗರ ವೀಕ್ಷಣೆಯ ನಂತರ ತಮ್ಮ ಮದರಾಸಿ ಶಿಷ್ಯರಿಗೆ ಬರೆದ ಪತ್ರದ ಸಾಲುಗಳಿವು.ಈ ಪತ್ರದ ಕೆಲವು ಸಾಲುಗಳು ಇಂದಿಗೂ ನಮ್ಮ ನಡುವಿನ ತಲೆ ಕೆಟ್ಟ ಸಮಸ್ಯೆಗಳ ಅರಿವಿದ್ದೆ ಅವರು ಅಂದೇ ಹೇಳಿದ್ದರೇನೋ ಅನ್ನುವಂತಿವೆ.
“ಜಪಾನೀಯರ ಪಾಲಿಗಂತೂ ಭಾರತವೆಂದರೆ ಇನ್ನೂ ಎಲ್ಲ ಶ್ರೇಷ್ಠ-ಉನ್ನತ ವಿಚಾರಗಳ ಸ್ವಪ್ನ ಲೋಕವೇ ಆಗಿದೆ.ಆದರೆ ನೀವು?ನೀವೆಂಥವರು?… ಜೀವನವಿಡೀ ಕಾಡು ಹರಟೆಯಲ್ಲೇ ಮುಳುಗಿರುವವರು.ಕೇವಲ ಹರಟೆ ಮಲ್ಲರು.ಇನ್ನೆಂಥವರು ನೀವು? ಬನ್ನಿ ಇಲ್ಲಿಗೆ.ಈ ಜನರನ್ನು ನೋಡಿ ಬಳಿಕ ನಾಚಿಕೆಯಿಂದ ಮುಖ ಮುಚ್ಚಿ ಕುಳಿತುಕೊಳ್ಳಿ.
ಸಮುದ್ರ ದಾಟಿದರೆ ನಿಮ್ಮ ಜಾತಿ ಕೆಟ್ಟು ಹೋಗುತ್ತದಲ್ಲವೇ…!? ಬುದ್ದಿ ಕೆಟ್ಟ ಅರಳು ಮರಳು ಜನಾಂಗ…! ಶತಶತಮಾನಗಳಿಂದಲೂ ಮೂಢನಂಬಿಕೆ-ಕಂದಾಚಾರಗಳ ಕಂತೆಗಳನ್ನೇ ತಲೆಯ ಮೇಲೆ ಹೊತ್ತು ಕುಳಿತಿರುವವರು…!
ಈ ಆಹಾರವನ್ನು ಮುಟ್ಟಬಹುದೇ? ಆ ಆಹಾರವನ್ನು ಮುಟ್ಟಬಹುದೇ? ಎಂಬ ಬಹಳ ದೊಡ್ಡ ವಿಮರ್ಶೆಯಲ್ಲಿ ನೂರಾರು ವರ್ಷಗಳಿಂದ ಮುಳುಗಿದ್ದೀರಲ್ಲಾ-ಎಂಥ ಮನುಷರು ನೀವೆಲ್ಲ!