ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೊಂದು ಬಹಿರಂಗ ಪತ್ರ
– ನಾಗರಾಜ್ ಹೆತ್ತೂರು
ಕಾರ್ಯಾಧ್ಯಕ್ಷರು, ಅಂಬೇಡ್ಕರ್ ಯುವ ಸೇನೆ ರಾಜ್ಯ ಸಮಿತಿ
ವಿಷಯ: ಅಕಾಡೆಮಿ ಪ್ರಶಸ್ತಿ ಮೌಲ್ಯವನ್ನು ಉಳಿಸಲು ಮತ್ತು ವಾಪಾಸು ಮಾಡಿದ ಪ್ರಶಸ್ತಿಗಳನ್ನು ಆಯಾ ಸಾಲಿನ ಪ್ರಶಸ್ತಿ ವಂಚಿತ ಪ್ರತಿಭಾವಂತರಿಗೆ ನೀಡಲು ಒತ್ತಾಯ
ನಮ್ಮೆಲ್ಲರ ಪ್ರೀತಿಯ ಸಾಹಿತಿಗಳೂ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿಪಟ್ಟಣಶೆಟ್ಟಿ ಅವರಿಗೆ ನಮಸ್ಕಾರಗಳು. ತಾವು ಅಕಾಡೆಮಿ ಅಧ್ಯಕ್ಷರಾದ ನಂತರ ಸಾಹಿತ್ಯ ಅಕಾಡೆಮಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು ಇತರೆ ಎಲ್ಲಾ ಅಕಾಡೆಮಿಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಈ ನಡುವೆ ಕೆಲವು ತಿಂಗಳಿಂದ ದೇಶದಲ್ಲಿ ಸಹಿಷ್ಣುತೆ-ಅಸಹಿಷ್ಣುತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ನಮ್ಮೊಳಗಿನ ಪ್ರಮುಖ ಚಿಂತಕರಾದ ಕಲಬುರ್ಗಿ ಅವರ ಹತ್ಯೆ ನಂತರ ರಾಜ್ಯದಲ್ಲಿ ಈ ಕುರಿತು ದೊಡ್ಡ ಜನಾಭಿಪ್ರಾಯ ರೂಪಿತವಾಗಿದ್ದು ಕೆಲವು ಸಾಹಿತಿಗಳು ಪ್ರಶಸ್ತಿ ವಾಪಾಸ್ ನೀಡುವ ಮೂಲಕ ಪ್ರತಿಭಟನಾತ್ಮಕ ನಡೆ ಇಟ್ಟಿದ್ದಾರೆ. ಈಚೆಗೆ ಅಕಾಡೆಮಿ ಯಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಕಿರಿಯ ಸಾಹಿತಿಯೊಬ್ಬರು ಪ್ರಶಸ್ತಿ ಬಹಿಷ್ಕರಿಸಿ, ನಿಮಗೆ ಮತ್ತು ಮಾಧ್ಯಮಗಳಲ್ಲಿ ಪತ್ರ ಬರೆದಿದ್ದನ್ನು ಗಮನಿಸಿದ್ದೇವೆ. ಅವರ ಪ್ರತಿಭಟನೆ ಹಕ್ಕನ್ನು ಗೌರವಿಸುತ್ತೇವೆ. ಕಲಬುರ್ಗಿ ಸೇರಿದಂತೆ ದೇಶದಲ್ಲಿ ನಡೆದ ಸಾಹಿತಿಗಳ ಅವರ ಹತ್ಯೆಯನ್ನು ಖಂಡಿಸುತ್ತೇವೆ ಮತ್ತು ಈ ಸಂಬಂಧ ಪ್ರತಿಭಟನೆ ಮಾಡಿ ಸರಕಾರಕ್ಕೆ ಒತ್ತಾಯಿಸಿದ್ದೇವೆ ಎಂಬುದನ್ನು ನಿಮಗೆ ನೆನಪಿಸುತ್ತಲೇ ಪ್ರಶಸ್ತಿ ವಾಪಾಸತಿ ಕುರಿತಂತೆ ಕೆಲವು ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದು ಈ ಬಗ್ಗೆ ಸಾರ್ವಜನಿಕ ಹಿತಾದೃಷ್ಟಿಯಿಂದ ಅಕಾಡೆಮಿ ಕೆಲವು ಸ್ಪಷ್ಟೀಕರಣ ನೀಡಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ.