ಗಾಳಿಪಟ ಮತ್ತು ಆಲದ ಮರ
– ಗುರುರಾಜ ಕೋಡ್ಕಣಿ. ಯಲ್ಲಾಪುರ
ಗಲಿರಾಮ್ ನಾಥನ್ ಎನ್ನುವ ಗಲ್ಲಿಯಲ್ಲಿದ್ದ ಹಳೆಯ ಪಾಳುಬಿದ್ದ ಮಸೀದಿಯ ಸಂದಿಯೊಂದರಿಂದ ಟಿಸಿಲೊಡೆದು ವಿಶಾಲವಾಗಿ ಬೆಳೆದುಕೊಂಡಿತ್ತು ಆ ಆಲದಮರ. ಅದೇ ಮರದ ಟೊಂಗೆಯೊಂದಕ್ಕೆ ಸಿಕ್ಕಿಕೊಂಡಿತ್ತು ಅಲಿಯ ಗಾಳಿಪಟ. ಹರುಕು ಅಂಗಿಯನ್ನು ಧರಿಸಿದ್ದ ಅಲಿ, ಮರದ ಮೇಲೆ ಸಿಕ್ಕಿಬಿದ್ದಿದ್ದ ಪಟವನ್ನು ಬಿಡಿಸಿಕೊಳ್ಳಲು ಹಲವು ಬಾರಿ ವಿಫಲಪ್ರಯತ್ನ ನಡೆಸಿ ಕೊನೆಗೊಮ್ಮೆ ಹತಾಶನಾಗಿ ಕೈಚೆಲ್ಲಿದ್ದ. ಅಲ್ಲಲ್ಲಿ ಉರುಟುಕಲ್ಲುಗಳೆದ್ದು ಕಾಣುತ್ತಿದ್ದ ಕಿರಿದಾದ ಓಣಿಯಲ್ಲಿ ಬರಿಗಾಲಿನಲ್ಲಿ ಓಡುತ್ತ ತನ್ನ ತಾತನತ್ತ ತೆರಳಿದ. ಮನೆಯ ಹಿತ್ತಲಿನಲ್ಲಿ ನೀರವ ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಸಣ್ಣ ಮಂಪರಿನ ನಡುವೆ ಹಗಲುಗನಸು ಕಾಣುತ್ತ ಕುಳಿತಿದ್ದ ತಾತನನ್ನು ಕಾಣುತ್ತಲೇ, ‘ಅಜ್ಜಾ, ನನ್ನ ಗಾಳಿಪಟ ಕಳೆದುಹೋಯಿತು’ ಎಂದು ಜೋರಾಗಿ ಕಿರುಚಿದ. ಮೊಮ್ಮಗನ ಕೂಗಿನಿಂದ ಮಂಪರು ಹಾರಿಹೋದ ಮುದಿಯ ನಿಧಾನವಾಗಿ ತನ್ನ ತಲೆಯನ್ನೆತ್ತಿದ. ಮದರಂಗಿಯ ಬಣ್ಣದಿಂದಾಗಿ ಕೆಂಚಗಾಗಿದ್ದ ತನ್ನ ಮುಪ್ಪಿನ ಗಡ್ಡವನ್ನೊಮ್ಮೆ ಸಾವಕಾಶವಾಗಿ ನೀವುತ್ತ, ‘ಪಟದ ನೂಲು ಕಿತ್ತು ಹೋಗಿತ್ತಾ..’? ಎಂದು ಮೊಮ್ಮಗನನ್ನು ಪ್ರಶ್ನಿಸಿದ. ಕಳಪೆ ಗುಣಮಟ್ಟದ ದಾರದಿಂದ ಹಾರಿಸಲ್ಪಟ್ಟ ಪಟವಿದ್ದಿರಬಹುದು ಎಂಬ ಊಹೆ ಆತನದ್ದು. ‘ಇಲ್ಲಾ ಅಜ್ಜ, ನೂಲು ಹರಿದಿಲ್ಲ, ಅದು ಆಲದ ಮರದ ಕೊಂಬೆಗೆ ಸಿಕ್ಕಿಬಿದ್ದಿದೆ’ ಎಂದುತ್ತರಿಸಿದ ಮೊಮ್ಮಗ. ಮತ್ತಷ್ಟು ಓದು
ಮರೆತೇಬಿಟ್ಟಿರುವ ನವಿಲುಗರಿ ಮರಿ ಹಾಕಿದೆಯೋ ಏನೋ!
-ರೋಹಿತ್ ಚಕ್ರತೀರ್ಥ
ಅದೊಂದು ಅನೂಹ್ಯ ಪ್ರಪಂಚ. ನನ್ನ ಅಜ್ಜಿ ವಾರ, ಎರಡು ವಾರಕ್ಕೊಮ್ಮೆ ಅಲ್ಲಿ ಹೋಗುವುದಿತ್ತು. ಶ್ರಾದ್ಧಕ್ಕೆ ಗಿಂಡಿಗಳು ಬೇಕಾದವೆಂದೋ ಭರಣಿಯಲ್ಲಿಟ್ಟ ಉಪ್ಪಿನಕಾಯಿ ಖರ್ಚಾಯಿತೆಂದೋ ಅಥವಾ ದಿನದಲ್ಲಿಪ್ಪತ್ತೈದು ಗಂಟೆ ಬೇಡುತ್ತಿದ್ದ ಕೆಲಸಗಳು ಅಂದು ತುಸು ಬೇಗನೆ ಮುಗಿದು ಜೇಡರ ಬಲೆ ತೆಗೆಯುವುದಕ್ಕೆ, ಬಾವಲಿಗಳ ಹಿಕ್ಕೆ ತೆಗೆದು ಹೊರಹಾಕುವುದಕ್ಕೆ ಸಮಯ ಮಿಕ್ಕಿತೆಂದೋ, ಅಂತೂ ಅಲ್ಲಿಗೆ ಹೋಗಲು ಯಾವುದಾದರೊಂದು ಕಾರಣ ಅಜ್ಜಿಗೆ ಸಿಕ್ಕರೆ ನಮಗೆ ಸ್ವರ್ಗದ ಬಾಗಿಲು ತೆರೆದುಕೊಂಡಷ್ಟೇ ಖುಷಿ. “ಅಜ್ಜಿ, ನಾನೂ ಬತ್ತೆ” ಅಂತಿದ್ದೆವು. ನಮ್ಮ ವಿನಂತಿಗೆ ಪ್ರತಿಯಾಗಿ ಆಕೆಯಿಂದ ಅರ್ಧಗಂಟೆ ಪ್ರವಚನ ಹೇಳಿಸಿಕೊಂಡು, ಕೋಪದಿಂದ ಮುಖ ಊದಿಸಿಕೊಂಡರೆ ಅದೂ ಒಂದು ಲಾಭವೇ. ಯಾಕೆಂದರೆ ಅಷ್ಟೆಲ್ಲ ಬಯ್ದು ಗುಡ್ಡೆ ಹಾಕಿ ಕೊನೆಗೆ ನಮ್ಮ ಗಂಟುಮುಖ ನೋಡಲಾಗದೆ ಮೊಸರವಲಕ್ಕಿ ಮಾಡಿ ತಿನ್ನಿಸಿ, “ಬಾ ಬಾ ಆದರೆ ಹನುಮಂತನ ಹಾಗೆ ಕುಣೀಬೇಡ ಅಲ್ಲಿ” ಎಂಬ ಎಚ್ಚರಿಕೆ ಕೊಟ್ಟು ಒಯ್ಯುತ್ತಿದ್ದಳು ಆಕೆ ಆ ಅಟ್ಟವೆಂಬ ನಿಗೂಢ ವಿಸ್ಮಯ ಪ್ರಪಂಚಕ್ಕೆ.
ಅಟ್ಟವೇ? ಹಾಗೆಂದರೇನು? ಎಂದು ಕೇಳುವ ಕಾಲ ಬಂದಿದೆ. ಮತ್ತಷ್ಟು ಓದು
ಮನದಾಳದ ಮೌನ ಮಾತಾದಾಗ : ಬಾಲ್ಯದ ಮುಗ್ಧ ಭಾವಗಳು -೧
– ರಂಜಿತಾ
ಮುಗ್ಧ ಮನಸ್ಸುಗಳ ಆ ನಮ್ಮ ಮುಗ್ಧತೆಯ ದಿನಗಳನ್ನು ನೆನಪಿಸಿಕೊಂಡರೆ ಎದೆಯಾಳದ ಕಡಲಲ್ಲಿ ಅವಿತಿರುವ ಆ ಸುಂದರ ಮುಗುಳ್ನಗೆಯು ನಮಗೆ ಅರಿವಿಲ್ಲದೆ ತುಟಿಯಂಚಿನಲ್ಲಿ , ಅಮಾವಾಸೆಯ ಕತ್ತಲಲ್ಲೂ ಚಂದ್ರನನ್ನು ಕಂಡಂತೆ ಮೂಡಿಬರುವುದು.ಆಗಿದ್ದ ಆ ನಿಷ್ಕಲ್ಮಶ ಹೃದಯಕ್ಕೆ ಈಗಿನ ಕೋಟ್ಯಂತರ ಬೆಲೆಬಾಳುವ ಸಾವಿರಾರು ಕೋಹಿನುರು ವಜ್ರಗಳ ಬೆಲೆಯೂ ಸಹ ಸರಿಸಾಟಿ ಆಗದು….
ನಕ್ಷತ್ರಗಳಂತೆ ಮಿಂಚುವ ಆ ಕಣ್ಣುಗಳ ಕಾಂತಿಯು ಪ್ರತಿಯೊಂದು ವಸ್ತುವಿನಲ್ಲು ವಿಶೇಷತೆ ಕಂಡು ಅದರ ಸೌಂಧರ್ಯವ ಆಸ್ವಾದಿಸುತಿತ್ತು.. ಅದರ ವಿಷಶತೆಯನ್ನು ಅರಿಯಲು ಮನಸ್ಸು ಚಡಪಡಿಸುತಿತ್ತು… ಆದರೆ ಇಂದಿನ ಈ ದಿನಗಳಲ್ಲಿ ವಿಶೇಷತೆಯ ವಸ್ತುವನ್ನು ಕಂಡರೂ ಕೇವಲ ಅಥವಾ ಸಹಜ ವೆಂಬ ಪ್ರತಿಕ್ರಿಯೆ ನೀಡುತ್ತೇವೆ..
ಅಂದು ಮಾತಡುತಿದ್ದ ಆ ಮಾತುಗಳಲ್ಲಿ ಸ್ಪಷ್ಟತೆ ಕಾಣದಿದ್ದರೂ , ತೊದಲು ನುಡಿಯ ಮಾತಲ್ಲೇ ಎಲ್ಲರ ಮನ ಗೆಲ್ಲುತಿದ್ದೆವು..ಎಲ್ಲರ ಮುಗುಳ್ನಗೆಗೂ ಕಾರಣವಾಗಿರುತ್ತಿದ್ದೆವು …ತತ್ ಕ್ಷಣಕ್ಕೆ ಅವರ ಎಲ್ಲ ನೋವುಗಳನ್ನು ಮರೆತು ನಮ್ಮ ತುಂಟಾಟಗಳ ಜೊತೆ ಬೆರೆತು ನಗುವಿನ ರಥದಲ್ಲಿ ಸಂಚರಿಸುತ್ತಿದ್ದರು.. ಆದರೆ ಇಂದಿನ ನಮ್ಮ ಈ ಸ್ಪಷ್ಟವಾದ ಮಾತುಗಳು ಒಬ್ಬರಿಗೆ ಹಿತವೆನಿಸಿದರೆ ಮತ್ತೊಬ್ಬರಿಗೆ ಕಹಿ ಬೇವಿನ ರುಚಿಯನ್ನು ಪರಿಚಯಿಸುತ್ತದೆ .. ಒಬ್ಬರಿಗೆ ಸರಿ ಎನ್ಸಿದರೆ ಮತ್ತೊಬ್ಬರಿಗೆ ಆ ಸ್ಪಷ್ಟವಾದ ಮಾತಲ್ಲೂ ತಪ್ಪನ್ನು ಹುಡುಕುವ ತವಕ..
ಅಂದು ನಮ್ಮದು , ನನ್ನವರು ಎಂಬ ನಮ್ಮೊಳಗಿನ ” ಅಹಂ ವೆಂಬ ಪುಟ್ಟ ಮಾನವ ” ತನಗೆ ಹಾಗು ತನ್ನನ್ನು ಇರಿಸಿಕೊಂದವರಿಗೆ ಎಷ್ಟು ಬೇಕೋ ಅಷ್ಟಕ್ಕೇ ಮಾತ್ರ ಸೀಮಿತವಾಗಿದ್ದ ಅವನು ” ಆರೋಗ್ಯಕರ ಅಹಂ ” ಎಂಬ ಬಿರುದಿಗೆ ಮಾತ್ರ ಪಾತ್ರನಾಗಿದ್ದ , ತನ್ನ ಬೇಲಿಯೊಳಗೆ ಮಾತ್ರ ಸಂಚಾರಿಸುತಿದ್ದ.. ಆದರೆ ಇಂದು ಅದೇ ಅಹಂ ಎಂಬ ಮಾನವ ಬೆಳೆದು ದೊಡ್ಡವನಾಗಿ ನಾನು , ನನ್ನದು , ನನಗೆ ಮಾತ್ರ , ನನ್ನ ಸಂತೋಷ , ನನ್ನ ಇಷ್ಟ ಎಂಬ ಇತ್ಯಾದಿ ಗುಣಗಳನ್ನು ಬೆಳೆಸಿಕೊಂಡು ” ಆರೋಗ್ಯ ಹಾನಿಕಾರ ಅಹಂ ” ಎಂಬ ಛೀಮಾರಿ ಹಾಕಿಸಿಕೊಂಡು , ತನ್ನ ತಪ್ಪನ್ನು ತಿಳಿದಿದ್ದರೂ ತಿದ್ದಿಕೊಳ್ಳದೆ , ತನ್ನನ್ನು ಇರಿಸಿಕೊಂದವರಿಗೆ ಹಾಗು ಸುತ್ತಮುತ್ತಲಿನವರಿಗೂ ಸದಾಕಾಲ ಕೇಡು ಬಯುಸುವವನಾಗಿದ್ದಾನೆ.. ತನ್ನ ಬೇಲಿಯನ್ನು ದಾಟಿ , ಇತರರ ಬೇಲಿಯೋಲಗು ಪ್ರವೇಶಿಸಿ ತನ್ನ ಅಟ್ಟಹಾಸವ ಮೆರೆದು , ಕೊಪಾಗ್ನಿಯಲ್ಲಿ ಮಿಂದು ಇತರರ ಸಂತಸಕ್ಕೆ ಯಮನಾಗಿದ್ದಾನೆ….
ಕಳ್ಳಹೊಳೆ ಮತ್ತು ಹೇಮಾವತಿ
– ಹಂಸಾನಂದಿ
ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ, ಹೊಳೆಯ ಪಾತ್ರದಲ್ಲಿ ಆಟವಾಡುತ್ತಿದ್ದ ಮಕ್ಕಳು, ದನ ಕರುಗಳೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದವಂತೆ. ಯಾವಾಗ ನೀರು ಬರುತ್ತೆ ಅನ್ನೋದು ಗೊತ್ತಾಗದೇ, ಕಳ್ಳನ ತರಹ ಜನ ಜಾನುವಾರನ್ನೆಲ್ಲ ನುಂಗಿಕೋತಾ ಇದ್ದಿದ್ದರಿಂದಲೇ ಇದು ಕಳ್ಳ ಹೊಳೆ ಅಂತ ಹೆಸರಾಗಿತ್ತಂತೆ. ಇವೆಲ್ಲ ನಾನು ಗೊರೂರು ರಾಮಸ್ವಾಮಿ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದ ವಿಷಯಗಳು.
ಮೂರನೇ ತರಗತಿಯಲ್ಲಿ ನಮಗೆ ಎರಡು ಪಠ್ಯ ಪುಸ್ತಕಗಳಿದ್ದವು – ಒಂದು ನಮ್ಮ ರಾಜ್ಯ ಅಂತ, ಮತ್ತೊಂದು ನಮ್ಮ ಜಿಲ್ಲೆ ಅಂತ. ನಮ್ಮ ಜಿಲ್ಲೆ ಅಂದರೆ ನೋಡುವ ಸ್ಥಳಗಳು ಬೇಲೂರು ಹಳೇಬೀಡು ಶ್ರವಣಬೆಳಗೊಳ; ಬೆಳೆಯೋ ಬೆಳೆಗಳು ರಾಗಿ ಆಲೂಗೆಡ್ಡೆ ಕಾಫಿ ಬೀಜ; ಕೈಗಾರಿಕೆ ಅಂದರೆ ಯಂತ್ರಭಾಗಗಳ ಕಾರ್ಖಾನೆ, ಕಾಫಿ ಬೀಜ ಸಂಸ್ಕರಣೆ ಅಂತ ನಾವು ಓದಿಕೊಂಡಿದ್ದೇ ಓದಿಕೊಂಡಿದ್ದು. ಅದರಲ್ಲಿ ಜಿಲ್ಲೆಯ ನದಿಗಳು ಅಂದರೆ ಕಾವೇರಿ ಹೇಮಾವತಿ ಮತ್ತೆ ಯಗಚಿ ಅಂತಲೂ ಇರ್ತಿತ್ತು. ನನ್ನ ಊರಿಗೆ ತೀರ ಹತ್ತಿರವಿದ್ದ ಯಗಚಿಯ ಹರಿವನ್ನ ನಾನು ನೋಡಿದ್ದೇ ಕಡಿಮೆ. ಊರಿನ ಪಶ್ಚಿಮದ ಹಾಲುಬಾಗಿಲು ಅನ್ನುವ ಕಡೆ ಯಗಚಿ ಹೊಳೆ ಪಕ್ಕದಲ್ಲಿ ಒಂದು ನೀರನ್ನು ಶುಚಿಮಾಡಿ, ಊರಿಗೆ ಸರಬರಾಜು ಮಾಡುವ ವ್ಯವಸ್ಥೆ ಇತ್ತು. ಕೆಲವೊಮ್ಮೆ ನಮ್ಮ ತರಗತಿಯ ಕೆಲವು ಹುಡುಗರು ಹಾಲುಬಾಗ್ಲಿನಲ್ಲಿ ಹೋಗಿ ಈಜಿ ಬಂದೆವು ಅಂತ ಹೇಳ್ತಿದ್ದಿದ್ದೂ ಉಂಟು.