ನಿಲುಮೆ ವೈಶಾಖ ಸಂಭ್ರಮ (ಬೇಸಿಗೆ ಶಿಬಿರ)
ಯಾವುದೇ ಐಡಿಯಾಲಜಿಗಳು,ದೊಡ್ಡವರು,ಚಿಕ್ಕವರು,ಹೊಸಬರು ಅಂತೆಲ್ಲಾ ಬೇಧ-ಭಾವವಿಲ್ಲದೇ ಎಲ್ಲಾ ರೀತಿಯ ಬರಹ ಮತ್ತು ಬರಹಗಳಿಗೊಂದು ವೇದಿಕೆಯಾಗುವ ಉದ್ದೇಶದಿಂದ ನಿಲುಮೆ ಆರಂಭಗೊಂಡು ಸರಿ ಸುಮಾರು ಏಳು ವರ್ಷ ಕಳೆದಿವೆ.ಇಂದು ನಿಲುಮೆ ಕೇವಲ ಒಂದು ಸಾಮಾಜಿಕ ಜಾಲತಾಣದ ವೇದಿಕೆಗೆ ಸೀಮಿತವಾಗಿಲ್ಲ.ಈ ನೆಲದ ಸಂಸ್ಕೃತಿಯ ಉಳಿವಿಗಾಗಿ ನಾವು ಬೀದಿಗೂ ಇಳಿದಿದ್ದೇವೆ.ನಮ್ಮ ಶಕ್ತ್ಯಾನುಸಾರ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ.ಈ ರಾಜ್ಯದ ಬುದ್ಧಿಜೀವಿಗಳ ಗುಂಪು ವೈಚಾರಿಕ ದ್ವೇಷದಿಂದ ನಿಲುಮೆಯನ್ನು ಮುಚ್ಛಿಸಲು ಹೊರಟಾಗ ಅವರಿಗೆ ಸೆಡ್ಡು ಹೊಡೆದು, ಈ ನೆಲದ ಸಂಸ್ಕೃತಿಯನ್ನು ನಮ್ಮದೇ ದೃಷ್ಟಿಯಲ್ಲಿ ಅರ್ಥೈಸಿಕೊಳ್ಳುವ ಸಲುವಾಗಿ ಮೂರು ಪುಸ್ತಕಗಳನ್ನು ಹೊರ ತಂದು ಯಶಸ್ವಿಯೂ ಆದೆವು.ಕಾಶ್ಮೀರದ ವಿಷಯದಲ್ಲಿ ದೇಶವನ್ನು ವಿಭಜಿಸಲು ಹೊರಟ ದುಷ್ಟಕೂಟಗಳು ಕರ್ನಾಟಕಕ್ಕೂ ಕಾಲಿಟ್ಟಾಗ ಅವರ ಷಡ್ಯಂತ್ರಕ್ಕೆ ವಿರುದ್ಧವಾಗಿ ರಾಜ್ಯಾದ್ಯಂತ ಪ್ರೊ.ಪ್ರೇಮಶೇಖರ್ ರವರ ನೇತೃತ್ವದಲ್ಲಿ “ಜಮ್ಮು ಕಾಶ್ಮೀರ ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು” ಎಂಬ ವಿಚಾರ ಸಂಕಿರಣ ನಡೆಸಿದೆವು. ಈ ಕಾರ್ಯಕ್ರಮವೂ ನಮ್ಮೆಲ್ಲರ ನಿರೀಕ್ಷೆಯನ್ನೂ ಮೀರಿ ಯಶಸ್ವಿಯಾಯಿತು. ಇದರ ಕುರಿತು ರಸಪ್ರಶ್ನೆ ಕಾರ್ಯಕ್ರಮ ಕೂಡ ಮಾಡಲಾಯಿತು. ಮುಂದಿನ ಭಾಗವಾಗಿ ನಮ್ಮ ಸಂಪ್ರದಾಯಗಳ ಕುರಿತು ಅರಿಯಲು “ನಮ್ಮೂರ ಹಬ್ಬ” ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆವು. ಇದಕ್ಕೂ ಕೂಡ ಉತ್ತಮ ಬೆಂಬಲ ವ್ಯಕ್ತವಾಯಿತು.ಈ ಎಲ್ಲಾ ಯಶಸ್ಸಲ್ಲೂ ನಿಲುಮೆಯನ್ನು ಅಪಾರವಾಗಿ ಪ್ರೀತಿಸುವ ನಿಲುಮಿಗರ ಪಾಲು ಬಹಳ ದೊಡ್ಡದು. ಮುಂದೇನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರವಾಗಿ ಈ ಸಲ ಮಕ್ಕಳಿಗಾಗಿ ಏನಾದರೂ ಮಾಡಬೇಕು ಎಂಬ ಆಶಯ ಬಲವಾಯಿತು. ಹಾಗಾಗಿ ಮೇ ೫,೬,೭ ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ, ಕುಂಜತ್ತೋಡಿ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡದಲ್ಲಿ ನಿಲುಮೆಯ ಹೊಸ ಪ್ರಯತ್ನ “ನಿಲುಮೆ – ವೈಶಾಖ ಸಂಭ್ರಮ” ಕಾರ್ಯಕ್ರಮ ನಡೆಯಿತು. ಅದರ ಕುರಿತ ಚಿತ್ರ ಸಹಿತ ಸಂಕ್ಷಿಪ್ತ ವರದಿ ಸ್ವಲ್ಪ ತಡವಾಗಿ ನಿಮ್ಮ ಮುಂದಿದೆ… – ನಿಲುಮೆ ನಿರ್ವಾಹಕರು