ವಸಾಹತುಪ್ರಜ್ಞೆಯಲ್ಲಿ ಪುಣ್ಯಯೋನಿ-ಪಾಪಯೋನಿ
– ವಿನಾಯಕ್ ಹಂಪಿಹೊಳಿ
ಇತ್ತೀಚೆಗೆ ಕೆ. ಎಸ್. ಭಗವಾನ್ ಎಂಬ ಬುದ್ಧಿಜೀವಿಯೋರ್ವರಿಂದಾಗಿ ಭಗವದ್ಗೀತೆಯ ಒಂಬತ್ತನೇ ಅಧ್ಯಾಯದ ೩೨ ಮತ್ತು ೩೩ನೇ ಶ್ಲೋಕಗಳು ಭಾರೀ ವಿವಾದಕ್ಕೊಳಗಾದವು. ಆ ಶ್ಲೋಕಗಳಲ್ಲಿ ಕೆಲವೇ ವರ್ಗದ ಜನರನ್ನು ಪುಣ್ಯಯೋನಿಗಳೆಂತಲೂ ಉಳಿದ ಬಹುಸಂಖ್ಯಾತರನ್ನು ಪಾಪಯೋನಿಗಳೆಂತಲೂ ಕೃಷ್ಣ ಕರೆದದ್ದು ಈ ಹಿಂದೂ ರಿಲಿಜನ್ನಿನಲ್ಲಿ ಇರುವ ಸಾಮಾಜಿಕ ಅಸಮಾನತೆಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಚಿತ್ರಿಸಲಾಯಿತು. ಆ ಎರಡು ಶ್ಲೋಕಗಳನ್ನು ಗದ್ದೆಯಲ್ಲಿನ ಕಳೆಗೆ ಹೋಲಿಸಿ, ಇವುಗಳನ್ನು ತೆಗೆದು ಹಾಕಬೇಕೆಂದು ಅಭಿಪ್ರಾಯಪಟ್ಟರು. ಆ ಎರಡು ಶ್ಲೋಕಗಳು “ಶ್ರುಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ” ಎಂಬ ಉಪನಿಷದ್ವಾಕ್ಯಕ್ಕೆ ವಿರುದ್ಧವಾದ ಆಶಯವನ್ನು ಹೊಂದಿದೆ ಎಂಬುದಾಗಿ ಸಾರಿದರು. ಈ ಹಿಂದೂ ಎಂಬ ಧರ್ಮದಲ್ಲಿ ಎರಡು ಭಾಗಗಳಿವೆ, ಅವು ಸಾಮಾಜಿಕ ಮತ್ತು ಅಧ್ಯಾತ್ಮಿಕ, ಎರಡೂ ಕ್ಷೇತ್ರಗಳಲ್ಲಿ ಅನೇಕ ಕೃತಿಗಳಿವೆ, ಅದರಲ್ಲಿ ಅಧ್ಯಾತ್ಮಿಕ ಕೃತಿಗಳ ಕುರಿತು ಅವರಿಗೆ ಸಮ್ಮತಿಯಿದೆ, ಆದರೆ ಸಾಮಾಜಿಕ ಕೃತಿಗಳ ಕುರಿತು ಅವರಿಗೆ ಭಾರೀ ಆಕ್ಷೇಪವಿದೆ ಎಂಬ ಅವರ ಹೇಳಿಕೆಯನ್ನು ಅವರ ವಾದದ ಸಾರಾಂಶ ಎನ್ನಬಹುದು.
ನಮ್ಮ ಸಂಪ್ರದಾಯಗಳು ಪುನರ್ಜನ್ಮವನ್ನು ನಂಬುತ್ತವೆ. ಮತ್ತು ಜೀವನದಲ್ಲಿ ಕಾಣುವ ಪರಿಣಾಮಗಳಿಗೆ ಪ್ರತ್ಯಕ್ಷವಾಗಿ ಕಾಣದ ಕಾರಣಗಳನ್ನು ಪೂರ್ವಜನ್ಮಕ್ಕೆ ಹೊಂದಿಸಿ ಅರಿಯುವದು ನಮ್ಮಲ್ಲಿ ಮೊದಲಿನಿಂದ ಇರುವ ಪರಂಪರೆ. ತನ್ಮೂಲಕ ಒಬ್ಬ ಜೀವನದಲ್ಲಿ ಪಡೆದಿರುವ ಪ್ರತಿಯೊಂದಕ್ಕೂ ಒಂದು ಕಾರಣವನ್ನು ಹುಡುಕಿಕೊಳ್ಳುವದು ಸಹಜವಾದ ಪ್ರಕ್ರಿಯೆ. ಆತ್ಮಕ್ಕೆ ಲಿಂಗವಿರುವದಿಲ್ಲ, ಲಿಂಗವೆಂಬುದು ಕೇವಲ ದೇಹದ ಒಂದು ಗುಣ ಎಂಬುದು ನಮ್ಮ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗಿರುವ ವಿಚಾರ. ಹೀಗಾಗಿ ಆತ್ಮ-ಪುನರ್ಜನ್ಮ-ದೇಹಗಳ ಕುರಿತು ಇರುವ ಈ ಆಧ್ಯಾತ್ಮಿಕ ವಿಚಾರಗಳಲ್ಲಿ ಒಂದು ಆತ್ಮ ಒಮ್ಮೆ ಗಂಡಾಗಿ, ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಮತ್ತೊಂದು ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುವ ಕಲ್ಪನೆಗಳು ಕಥೆಗಳು ಹೇರಳವಾಗಿ ಕಂಡುಬರುತ್ತವೆ. ಹೀಗಾಗಿ ಜನ್ಮದಿಂದ ಜನ್ಮಕ್ಕೆ ಅಲೆಯುವ ಒಂದು ಆತ್ಮ ಗಂಡು ದೇಹ ಪಡೆಯುವದಕ್ಕೋ, ಇಲ್ಲವೇ ಹೆಣ್ಣು ದೇಹ ಪಡೆಯುವದಕ್ಕೋ ಒಂದು ಕಾರಣ ಬೇಕಾಗುತ್ತದೆ.
Sin ಅನ್ನು ಭಾಷಾಂತರಿಸಿದ ಪಾಪವೇ ವಸಾಹತುಪ್ರಜ್ಞೆ
– ವಿನಾಯಕ ಹಂಪಿಹೊಳಿ
Sin ಶಬ್ದದ ಅರ್ಥವೇನು ಎಂದು ಕೇಳಿದರೆ ಎಗ್ಗಿಲ್ಲದೇ ಪಾಪ ಎಂದು ಉಚ್ಚರಿಸಿಬಿಡುತ್ತೇವೆ. ಇದರಲ್ಲಿ ಅಷ್ಟು ತಲೆಕೆಡಿಸಿಕೊಳ್ಳುವಂಥದ್ದೇನೂ ಇಲ್ಲ ಎಂದೇ ಅನ್ನಿಸುತ್ತದೆ. ಮಾಡಬಾರದ್ದನ್ನು ಮಾಡುವದು ಪಾಪ ಎಂದು ನಾವೂ ಹೇಳುತ್ತೇವೆ. ಪಾಶ್ಚಿಮಾತ್ಯ ಕ್ರೈಸ್ತರೂ ಹೇಳುತ್ತಾರೆ. ಹೀಗಾಗಿ ಒಂದು ಹಂತದಲ್ಲಿ Sin=ಪಾಪ ಎನ್ನುವದು ಒಪ್ಪಿತವೇ. ಹಾಗೆಯೇ sinner=ಪಾಪಿ ಎಂಬುದೂ ಸರಿ. ಆದರೆ ಇಲ್ಲೊಂದು ಸಮಸ್ಯೆಯಿದೆ. ಪಾಪದ ವಿರುದ್ಧ ಪದ ಏನು ಎಂದಾಗ ಕ್ಷಣವೂ ತಡಮಾಡದೇ ಪುಣ್ಯ ಎನ್ನುತ್ತೇವೆ. ಆದರೆ Sin ಶಬ್ದದ ವಿರುದ್ಧ ಪದ ಏನು ಎಂದು ಕೇಳಿದರೆ?
ಮುಗ್ಗರಿಸಿ ಬಿದ್ದ ಅನುಭವವಾಯಿತಲ್ಲವೇ? ಇರಲಿ, Thesaurus ನಲ್ಲಿ Sin ಗೆ ಎಷ್ಟೊಂದು ವಿರುದ್ಧಪದಗಳಿವೆಯೋ ಅವನ್ನೆಲ್ಲ ಗಮನಿಸೋಣ, ಅವುಗಳು advantage, good, goodness, good deed, kindness, obedience, right, virtue, perfection, behavior, morality.ಇವೆಲ್ಲ ಶಬ್ದಗಳೂ ಪುಣ್ಯದ ಸುತ್ತ ಗಿರಕಿ ಹೊಡೆಯುತ್ತವೆಯೇ ವಿನಃ ಒಂದಾದರೂ ಪುಣ್ಯವನ್ನು ಸಂಪೂರ್ಣವಾಗಿ ಪ್ರತಿನಿಧಿಸುವಷ್ಟು ಪುಣ್ಯ ಕಟ್ಟಿಕೊಂಡಿದೆಯೇ? “ನೀವು ಜೀವನದಲ್ಲಿ ಬಹಳಷ್ಟು ಪುಣ್ಯ ಗಳಿಸಿದ್ದೀರಿ” ಎನ್ನುವದನ್ನು ಹೇಗೆ ಭಾಷಾಂತರಿಸುತ್ತೀರಿ?
5ನೇ ವರ್ಷಕ್ಕೆ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳು
ಅಂದು ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ,”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ”ವೆಂದಾಗ,ನನ್ನ ಮುಖಾಮುಖಿಯಾಗಿದ್ದವರು “ಮೊದಲ ಬಾರಿ ಕ್ಯಾಮೆರಾ ಮುಂದೆ ಬಂದಿರುವ ಜೋಷ್ ಹೀಗೆಲ್ಲ ಮಾತನಾಡಿಸುತ್ತದೆ” ಅನ್ನುವ ಅರ್ಥದಲ್ಲೆನೋ ವ್ಯಂಗ್ಯವಾಡಿದ್ದರು.ನನಗದು ಕೇಳಿಸಿತಾದರೂ,ಉತ್ತರಿಸಬೇಕಾದ ಸಮಯ ಅದಲ್ಲ ಅಂತ ಸುಮ್ಮನಾಗಿದ್ದೆ…
ಮತ್ತಷ್ಟು ಓದು
“ಬೌದ್ಧಿಕ ದಾಸ್ಯದಲ್ಲಿ ಭಾರತ” ಪುಸ್ತಕದ ಕುರಿತ ಓದುಗರ ಅಭಿಪ್ರಾಯಗಳು
– ವಿನಾಯಕ್ ಹಂಪಿಹೊಳಿ
ಬೌದ್ಧಿಕ ದಾಸ್ಯದಲ್ಲಿ ಭಾರತವನ್ನು ಬಹಳ ಮುಂಚೆಯೇ ಖರೀದಿಸಿದ್ದೆನಾದರೂ ಅದನ್ನು ಮರುದಿನವೇ ಮನೆಯಲ್ಲಿ ಇಟ್ಟು ಬರಬೇಕಾಯಿತು. ಹೀಗಾಗಿ ಸರಿಯಾಗಿ ಓದಲು ಆಗಿರಲಿಲ್ಲ. ಹೀಗಾಗಿ ನಿನ್ನೆ ಇನ್ನೊಂದು ಪ್ರತಿಯನ್ನು ಖರೀದಿಸಿ ಇವತ್ತು ಅದನ್ನು heathen in his blindness ಮತ್ತು ಸ್ಮೃತಿ ವಿಸ್ಮೃತಿ: ಭಾರತೀಯ ಸಂಸ್ಕೃತಿ ಪುಸ್ತಕಗಳ ಪಿಡಿಎಫ಼್ ಪ್ರತಿಗಳೊಂದಿಗೆ ತಾಳೆ ಮಾಡಿ ಸರಿಯಾಗಿ ಓದಿದೆ. ಪುಸ್ತಕ ಚೆನ್ನಾಗಿ ಮೂಡಿ ಬಂದಿದೆ. ಪುಸ್ತಕದ ಶೀರ್ಷಿಕೆ ಅಕ್ಷರಶಃ ಸಿದ್ಧವಾಗುತ್ತದೆ.
ಮೊದಲನೇಯದಾಗಿ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರವನ್ನು ಬುದ್ಧಿಜೀವಿಗಳು ಏಕೆ ಮುಚ್ಚಿಸಿದ್ದಾರೆ ಎಂಬುದು ಈಗ ತಿಳಿಯಿತು. ಏಕೆಂದರೆ ಹಿಂದೂ-ಸಂಪ್ರದಾಯಗಳನ್ನು ರಿಲಿಜನ್ನಿನ ಅಡಿಯಲ್ಲಿ ತಂದರಷ್ಟೇ ಅಲ್ಲವೇ, ಅದರಲ್ಲಿನ ಗ್ರಂಥಗಳ ಆಧಾರವಿಲ್ಲದ ಸಂಪ್ರದಾಯಗಳನ್ನು ತೆಗಳಿ, ಪ್ರಗತಿಪರರೆಂದೆನಿಸಿಕೊಂಡು ಇವರು “ಬುದ್ಧಿಜೀವಿ”ಗಳಾಗುವದು? ರಿಲಿಜನ್ನೇ ಇಲ್ಲದ ಸಮಾಜದಲ್ಲಿ ಬುದ್ಧಿಜೀವಿಗೇನು ಕೆಲಸ?
ನನಗೆ ತುಂಬ ಮೆಚ್ಚಿಗೆಯಾದ ಅಂಶ ಕ್ರಿಯೆಯಿಂದ ಜ್ಞಾನವನ್ನು ಪಡೆಯುವದು ಭಾರತೀಯ ಪದ್ಧತಿ ಎಂಬ ಅಂಶವನ್ನು ಇದು ತೋರಿಸಿರುವದು. ನನ್ನ+ಅಣ್ಣ=ನನ್ನಣ್ಣ ಆಗುವದರಿಂದ ಕನ್ನಡದಲ್ಲಿ ಲೋಪಸಂಧಿ ಹುಟ್ಟಿಕೊಂಡಿದೆಯೋ ಅಥವಾ ಲೋಪಸಂಧಿ ಇರುವದರಿಂದ ನನ್ನ+ಅಣ್ಣ=ನನ್ನಣ್ಣ ಎಂದು ಮಾಡಲು ಭಾಷೆ ಅನುಮತಿ ನೀಡುತ್ತದೆಯೋ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಮೊದಲು ಪ್ರಯೋಗ, ನಂತರ ವ್ಯಾಕರಣ ಎಂಬುದು ಅನುಭವಕ್ಕೆ ಸರಿಹೊಂದುತ್ತಿದ್ದರೂ ಅದಕ್ಕೆ ಸರಿಯಾದ ವಾದ ಇಲ್ಲಿ ಸಿಕ್ಕಿತು.
ಮತ್ತಷ್ಟು ಓದು
“ಬೌದ್ಧಿಕ ದಾಸ್ಯದಲ್ಲಿ ಭಾರತ” ಪುಸ್ತಕ ದೊರೆಯುವ ಬಗ್ಗೆ ಮಾಹಿತಿ
ಬೆಂಗಳೂರು :
1.ಅಂಕಿತ ಪುಸ್ತಕ,ಗಾಂಧಿ ಬಜಾರ್
2.ಸಾಹಿತ್ಯ ಗಂಗಾ,ಚಾಮರಾಜಪೇಟೆ (ಉಮಾ ಟಾಕೀಸ್ ಹಿಂದಿನ ರಸ್ತೆ)
3.ಸಾಹಿತ್ಯ ಸಿಂಧು,ನೃಪತುಂಗ ರಸ್ತೆ,ರಿಸರ್ವ್ ಬ್ಯಾಂಕ್ ಎದುರು (ಮಿಥಿಕ್ ಸೊಸೈಟಿಯ ನಂತರದ ಬಿಲ್ಡಿಂಗ್)
4.ರಾಷ್ಟ್ರೋತ್ಥಾನ ಸಾಹಿತ್ಯ,೩೬ನೇ ಕ್ರಾಸ್,೧೦ ನೇ ಮುಖ್ಯ ರಸ್ತೆ, ಜಯನಗರ ೪ನೇ ಬ್ಲಾಕ್ (ಬಿ.ಎಸ್.ಎನ್.ಎಲ್ ಆಫೀಸ್ ಹಿಂಬಾಗ )
5.ನಾಗಶ್ರೀ ಬುಕ್ ಹೌಸ್, ಜಯನಗರ ಬಿಡಿಎ ಕಾಂಪ್ಲೆಕ್ಸ್,ಜಯನಗರ ೪ನೇ ಬ್ಲಾಕ್.Tel: 26630993/26543465
6.ಟೋಟಲ್ ಕನ್ನಡ,ಜಯನಗರ ೪ನೇ ಬ್ಲಾಕ್,ಬೆಂಗಳೂರು
7.ರಾಕೇಶ್ ಶೆಟ್ಟಿ – 9964000058
8.ಸಂದೀಪ್ – 8147953299
ನಿಲುಮೆ ಪ್ರಕಾಶನ ಚೊಚ್ಚಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ” ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ
ನಿಲುಮೆಯ ಓದುಗರೇ,
ಮುಂದಿನ ಭಾನುವಾರ,ಮಾರ್ಚ್ ೧ರಂದು ಬೆಳಿಗ್ಗೆ ೧೦.೩೦ಕ್ಕೆ,ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ “ನಿಲುಮೆ ಪ್ರಕಾಶನ”ದ ಮೊದಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ” ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ಬಾಲಗಂಗಾಧರ,ಶತಾವಧಾನಿ ಗಣೇಶ್,ಪ್ರೊ.ಪ್ರಧಾನ್ ಗುರುದತ್ತ,ಪ್ರೊ.ರಾಜಾರಾಮ್ ಹೆಗಡೆ ಹಾಗೂ ಇನ್ನಿತರ ಗಣ್ಯರು ನಮ್ಮೊಂದಿಗಿರಲಿದ್ದಾರೆ.
ಪುಸ್ತಕ ಬಿಡುಗಡೆಗೆ ಸರ್ವರಿಗೂ ಸುಸ್ವಾಗತ.
ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಮುಗಿದ ನಂತರ “ನಿಲುಮಿಗರ ದಿನ”ವಿರಲಿದೆ. ನಿಲುಮಿಗರ ದಿನದಲ್ಲಿ ಪಾಲ್ಗೊಳ್ಳುವವರು ತಮ್ಮ ಸ್ವ-ವಿವರಗಳನ್ನು ಈ http://goo.gl/X981PX ಕೊಂಡಿಯಲ್ಲಿ ದಾಖಲಿಸಿ.ನಮಗೆ ಕಾರ್ಯಕ್ರಮದ ತಯಾರಿಗೆ ಇದು ಅವಶ್ಯಕ.ಈ ವಿವರಗಳನ್ನು ದಾಖಲಿಸಲು ಕಡೆಯ ದಿನ ೨೫ನೇ ತಾರೀಖು.ಅದರಾಚೆಗೆ ಈ ಕೊಂಡಿ ಲಭ್ಯವಿರುವುದಿಲ್ಲ.
ಮಿಥಿಕ್ ಸೊಸೈಟಿ,ನೃಪತುಂಗ ರಸ್ತೆ.ತಲುಪುವ ಮಾರ್ಗ : ಮೆಜೆಸ್ಟಿಕ್ ಕಡೆಯಿಂದ ಬರುವುದಾದರೆ ಕೆ.ಆರ್ ಸರ್ಕಲ್ ನಲ್ಲಿ ಬಲ ತಿರುವು (ಕಬ್ಬನ್ ಪಾರ್ಕಿನೊಳಗಿನಿಂದ ಬಂದರೆ,ಕಾರ್ಪೊರೇಶನ್ ಸರ್ಕಲ್ ಕಡೆಗೆ ಎಡತಿರುವು) ತೆಗೆದುಕೊಂಡು ರಸ್ತೆಯ ಬಲಭಾಗದಲ್ಲೆ ಮುಂದುವರೆದರೆ ಸರ್ಕಾರಿ ವಿಜ್ನಾನ ಕಾಲೇಜಿನ ನಂತರದ ಕಟ್ಟಡವೇ ಮಿಥಿಕ್ ಸೊಸೈಟಿ (ಎದುರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೆ). ಬಸ್ಸಿನಲ್ಲಿ ಬರುವವರು ಬನ್ನಪ್ಪ ಪಾರ್ಕ್ ಬಸ್ ನಿಲ್ದಾಣದಲ್ಲಿ ಇಳಿದು ಸಿಟಿ ಸಿವಿಲ್ ಕೋರ್ಟ್ ರಸ್ತೆಯ ಕಡೆ ನಡೆದುಕೊಂಡು ಬಂದರೂ ತಲುಪಬಹುದು.(ಹತ್ತು-ಹದಿನೈದು ನಿಮಿಷದ ಹಾದಿ)
ನಿಮ್ಮ ಆಗಮನದ ನಿರೀಕ್ಷೆಯಲ್ಲಿ.
ನಿಮ್ಮೊಲವಿನ,
ನಿಲುಮೆ ಬಳಗ
5ನೇ ವರ್ಷದ ಸಂಭ್ರಮದಲ್ಲಿ ಶುರುವಾಗಲಿದೆ “ನಿಲುಮೆ ಪ್ರಕಾಶನ”
ನಿಲುಮೆಯ ಪ್ರಿಯ ಓದುಗರೇ,
“ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ,ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು.ಅಷ್ಟಕ್ಕೂ ‘ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ.ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು” ಎನ್ನುವ “ನಿಲುವು” ಮತ್ತು “ಎಲ್ಲ ತತ್ವದ ಎಲ್ಲೆ ಮೀರಿ” ಎಂಬ ಅಡಿ ಬರಹದೊಂದಿಗೆ ನಾವೊಂದಿಷ್ಟು ಗೆಳೆಯರು ಸೇರಿಕೊಂಡು “ನಿಲುಮೆ” (nilume.net) ವೆಬ್ ತಾಣವನ್ನು ಪ್ರಾರಂಭಿಸಿ ನಾಲ್ಕು ವರ್ಷಗಳನ್ನು ಪೂರೈಸಿ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ “ನಿಲುಮೆ ಪ್ರಕಾಶನ”ವನ್ನು ಪ್ರಾರಂಭಿಸುತ್ತಿದ್ದೇವೆ.
ಈಗಾಗಲೇ ಕನ್ನಡದಲ್ಲಿ ಹಲವಾರು ಪ್ರಕಾಶನಗಳಿರುವಾಗ ಇನ್ನೊಂದು ಏಕೆ? ಅನ್ನೋ ಪ್ರಶ್ನೆ ಕೂಡ ಹುಟ್ಟಲಾರದ ಸಮಯವಿದು.ಹಾಗಾಗಿ ಈ ಮೇಲಿನ ಪ್ರಶ್ನೆ ಓದುಗರಲ್ಲಿ ಏಳುವ ಸಾಧ್ಯತೆಯೂ ಇಲ್ಲ.ಈ ಕಾರಣದಿಂದ ನಾವೇ ಈ ಪ್ರಶ್ನೆಯನ್ನು ಎತ್ತಿ ನಮ್ಮ ಉದ್ದೇಶದ ಕುರಿತು ತಮ್ಮ ಗಮನವನ್ನು ಸೆಳೆಯುವ ಪ್ರಯತ್ನ ಮಾಡುತ್ತೇವೆ.
ರಮಾನಂದ ಐನಕೈಯವರ ‘ಸಂಸ್ಕೃತಿ ಸಂಕಥನ” ಲೇಖನ ಸರಣಿಯ (ಈ ಲೇಖನಗಳು “ನಮಗೇ ನಾವೇ ಪರಕೀಯರು” ಪುಸ್ತಕವಾಗಿ ಹೊರಬಂದು ಇದೀಗ ಮೂರನೇ ಮುದ್ರಣವನ್ನು ಕಾಣುತ್ತಿದೆ) ಮೂಲಕ ಶುರುವಾದ ನಿಲುಮೆ ಮತ್ತು CSLC ತಂಡಗಳ ಬಾಂಧವ್ಯ ಇನ್ನಷ್ಟು ಆಪ್ತವಾಗಿದ್ದು ೨೦೧೩ರಲ್ಲಿ ಕರ್ನಾಟಕದ ಬೌದ್ಧಿಕ ವಲಯದಲ್ಲಿ ದೊಡ್ಡ ಸಂಚಲವನ್ನುಂಟು ಮಾಡಿದ್ದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆಯ ಸಂದರ್ಭದಲ್ಲಿ.ರಾಜ್ಯದ ಪ್ರಗತಿಪರ ಪತ್ರಿಕೆಯೊಂದರಲ್ಲಿ ಶುರುವಾದ ಈ ಚರ್ಚೆ ಏಕಮುಖವಾಗಿ ಸಾಗಿ ಒಂದು ಕಡೆಯವರ ಲೇಖನಗಳಿಗೆ ಮಾತ್ರ ಮನ್ನಣೆ ನೀಡಿ ಇನ್ನೊಂದು ಗುಂಪಿನ ವಾದವನ್ನೂ ಆಲಿಸುವ ನಿಲುವನ್ನು ತೋರಿಸದಿದ್ದಾಗ ಸಿ.ಎಸ್.ಎಲ್.ಸಿ ತಂಡದ ಜೊತೆ ನಿಂತು,ನಿಲುಮೆಯ ನಿಲುವಿಗೆ ಬದ್ಧವಾಗಿ ನಾವು ಬೌದ್ಧಿಕ ಫ್ಯಾಸಿಸಂ ಅನ್ನು ವಿರೋಧಿಸಿದೆವು.
ಈ ಚರ್ಚೆಯ ಸಮಯದಲ್ಲಿ ಮತ್ತು ಆ ನಂತರ ಕರ್ನಾಟಕದ ಬುದ್ಧಿಜೀವಿ ವಲಯ ನಡೆದುಕೊಂಡ ರೀತಿ ಆಘಾತಕಾರಿಯಾಗಿತ್ತು. ಅವರ ನಡೆ ಹೇಗಿತ್ತೆಂದರೆ,ತಮಗೇ ಬೇಕಾದ ವಾದಗಳಿಗೆ ಮಾತ್ರ ಮನ್ನಣೆ ನೀಡುತ್ತ,ಅಂತ ವಾದವನ್ನು ಮುಂದಿಡುವ ಜನರನ್ನು ಒಂದಾಗಿಸಿಕೊಂಡು ಉಳಿದವರನ್ನು ಬೌದ್ಧಿಕ ಅಸ್ಪೃಷ್ಯರನ್ನಾಗಿಸುವುದು.ಇಂತ ಬೌದ್ಧಿಕ ಫ್ಯಾಸಿಸಂನ ಉಸಿರುಗಟ್ಟಿಸುವ ಕಾಲದಲ್ಲಿ ಹೊಸತೊಂದು ಬೌದ್ಧಿಕ ಚಳುವಳಿ ಸಾಮಾನ್ಯ ಜನರನ್ನು ತಲುಪಬೇಕೆಂದರೆ ಅದಕ್ಕೊಂದು ಪ್ರಕಾಶನದ ಅಗತ್ಯವನ್ನು ನಾವು ಮನಗಂಡೆವು.ಹಾಗೇ ರೂಪು ತಳೆದಿದ್ದೇ ನಿಲುಮೆ ಪ್ರಕಾಶನ.
ನಮ್ಮ ಪ್ರಕಾಶನದ ಮೊದಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ”.ಈ ಪುಸ್ತಕ ಪ್ರೊ.ಬಾಲಗಂಗಾಧರ ಅವರ ಸಂಶೋಧನಾ ಗ್ರಂಥ “The Heathen in his Blindness” ನ ವಿಚಾರಧಾರೆಗಳನ್ನು ಆಧರಿಸಿ ಪ್ರೊ.ರಾಜಾರಾಮ್ ಹೆಗಡೆ ಅವರು ಬರೆದಿರುವ ಮತ್ತು ವಿಜಯವಾಣಿ ಪತ್ರಿಕೆಯಲ್ಲಿ ಕೆಲಕಾಲ “ವಸಾಹತುಶಾಹಿಯ ವಿಶ್ವಪ್ರಜ್ಞೆ” ಸರಣಿಯಾಗಿ ಪ್ರಕಟಗೊಂಡಿದ್ದ ಲೇಖನಗಳಗುಚ್ಛ.
ಪ್ರೊ.ಎಸ್ ಎನ್ ಬಾಲಗಂಗಾಧರ ಅವರ ನೇತೃತ್ವದಲ್ಲಿ 5 ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಬೆಲ್ಜಿಯಂನ ಗೆಂಟ್ ವಿವಿಯ ಸಹಭಾಗಿತ್ವದೊಂದಿಗೆ ಶುರುವಾದ ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ(CSLC) ಭಾರತೀಯ ಸಮಾಜ, ಸ್ಥಳಿಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.(ಕರ್ನಾಟಕದ ಕೆಲವು ಬುದ್ಧಿಜೀವಿಗಳ ಚಿತಾವಣೆಯಿಂದಾಗಿ ಈಗ ಆ ಸಂಶೋಧನಾ ಕೇಂದ್ರವನ್ನು ಮುಚ್ಚಿಸಲಾಗಿರುವುದು ನಿಮಗೇ ತಿಳಿದೇ ಇದೆ.)
ಕಳೆದ ಕೆಲವು ವರ್ಷಗಳಿಂದ ಪ್ರೊ.ಬಾಲಗಂಗಾಧರರಿಂದ ಕನ್ನಡದಲ್ಲಿ ಹೊಸ ಚಿಂತನೆಯ ಅಲೆ ಹುಟ್ಟಿಕೊಂಡಿದೆ.ಅವರು ಭಾರತೀಯ ಸಂಸ್ಕೃತಿಯ ಕುರಿತು ಹೊಸ ವಿಚಾರಗಳನ್ನು ತಿಳಿಸುತ್ತಿದ್ದಾರೆ.ಕನ್ನಡದ ಹಾಗೂ ಭಾರತೀಯ ಚಿಂತಕರು ಶತಮಾನಕ್ಕೂ ಹಿಂದಿನಿಂದ ಎದುರಿಸಿದ ಬೌದ್ಧಿಕ ಸಮಸ್ಯೆಗಳನ್ನು ತಮ್ಮ ಸಂಶೋಧನೆಗಳ ಮೂಲಕ ಉತ್ತರಿಸಲು ಬಾಲು ಪ್ರಯತ್ನಿಸುತ್ತಾರೆ.ಈ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವು ನಿರ್ದಿಷ್ಟವಾಗಿ ಏಕೆ ಹುಟ್ಟಿಕೊಳ್ಳುತ್ತವೆ,ಅವುಗಳಿಂದ ಹೊರಬರುವ ದಾರಿ ಯಾವುದು ಎಂಬುದನ್ನು ಕಂಡುಕೊಳ್ಳಲು ಅವರ ಸಂಶೋಧನೆ ಸಹಾಯಮಾಡುತ್ತದೆ. ಹಾಗಾಗಿ ಸ್ವಾಭಾವಿಕವಾಗಿಯೇ ಅವರ ಸಂಶೋಧನೆಗಳು ಸ್ವೀಕೃತ ವಿಚಾರಗಳನ್ನು ಅಲ್ಲಗಳೆಯುತ್ತವೆ ಹಾಗೂ ಪ್ರಶ್ನೆಗೀಡುಮಾಡುತ್ತವೆ.ಇಂದಿನ ಭಾರತೀಯ ಸಮಾಜದಲ್ಲಿ ಇಂಥ ಸ್ವೀಕೃತ ಚಿಂತನೆಗಳು ಬಗೆಹರಿಯದ ಸಮಸ್ಯೆಗಳನ್ನು ಸೃಷ್ಟಿಸಿವೆ.ಬಾಲಗಂಗಾಧರರ ವಿಚಾರಗಳು ತುಂಬ ಸಮರ್ಥವಾಗಿ ಅವುಗಳಿಂದ ಹೊರಬರುವ ದಾರಿಯನ್ನು ಸೂಚಿಸುತ್ತಿವೆ.ಜೊತೆಗೇ ನಮ್ಮ ಹಿಂದಿನ ಚಿಂತಕರ ಒಳನೋಟಗಳನ್ನು ಸ್ಪಷ್ಟವಾಗಿ ಗ್ರಹಿಸಿ ಅವುಗಳ ಮಹತ್ವವನ್ನು ಅರಿಯಲೂ ಅವು ಸಹಾಯ ಮಾಡುತ್ತವೆ.ಈ ಕಾರಣದಿಂದ ಕಳೆದ ಒಂದು ದಶಕದಿಂದ ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಬೌದ್ಧಿಕ ವಲಯದಲ್ಲಿ ಅವರ ವಿಚಾರಗಳ ಕುರಿತು ತೀವ್ರ ಆಸಕ್ತಿ ಹಾಗೂ ಕುತೂಹಲ ಮೂಡಿದೆ.
ಬಾಲಗಂಗಾಧರ ಚಿಂತನೆಗಳು ಕೇವಲ ಶೈಕ್ಷಣಿಕ ಕಸರತ್ತುಗಳಲ್ಲ.ಅಥವಾ ಒಬ್ಬ ವ್ಯಕ್ತಿಯ ಖಾಸಗಿ ಸಂಗತಿಗಳಲ್ಲ.ಇದು ಭಾರತೀಯ ಸಂಸ್ಕೃತಿಯ ಪುನರುಜ್ಜೀವನದತ್ತ ನಡೆಯುತ್ತಿರುವ ಒಂದು ಬೌದ್ಧಿಕ ಚಳವಳಿಯಾಗಿದೆ.ಅವರು ಇದನ್ನು ಪ್ರತ್ಯಭಿಜ್ಞಾನ ಎಂದು ಗುರುತಿಸುತ್ತಾರೆ.ಅಂದರೆ ವಸಾಹತುಕಾಲದಲ್ಲಿ ನಾವೊಂದು ಸಾಂಸ್ಕೃತಿಕ ಮರೆವೆಗೆ ಒಳಗಾಗಿದ್ದೇವೆ.ಪ್ರತ್ಯಭಿಜ್ಞಾನ ಎಂದರೆ ಆ ಮರೆವೆಯಿಂದ ಹೊರಬಂದು ನಮ್ಮ ಸಂಸ್ಕೃತಿಯನ್ನು ಮತ್ತೆ ನೆನಪಿಗೆ ತಂದುಕೊಳ್ಳುವುದು.
ಇಂತಹ ಬೌದ್ಧಿಕ ಚಳವಳಿಯ ಮೂಲಕ ಒಂದು ಓದುಗರ ಬಳಗವನ್ನು ಕಟ್ಟುತ್ತಾ ಚಿಂತನ ಮಂಥನಗಳಿಗೆ ಕನ್ನಡದಲ್ಲಿ ಸರಾಗ ಮಾರ್ಗವನ್ನು ನಿರ್ಮಿಸುವುದೂ ನಿಲುಮೆ ಪ್ರಕಾಶನದ ಗುರಿ.ಪ್ರತ್ಯಭಿಜ್ಞಾನಕ್ಕಾಗಿ ತುಡಿಯುತ್ತಿರುವ ಕನ್ನಡ ಓದುಗರು ನಮ್ಮ ಈ ಪ್ರಯತ್ನವನ್ನು ಬೆಂಬಲಿಸಿ,ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆಯೊಂದಿಗೆ ಮುಂದಡಿಯಿಡುತ್ತಿದ್ದೇವೆ.
ಈ ಬೌದ್ಧಿಕ ಚಳವಳಿಯ ಭಾಗವಾಗಿಸಿಕೊಂಡು ಇತರೆ ಉತ್ಸಾಹಿ ಚಿಂತಕರು ಬರೆಯಲು ಆರಂಭಿಸಿದ್ದಾರೆ.ಬಾಲು ಅವರ ಚಿಂತನೆಗಳನ್ನು ಅಧ್ಯಯನ ನಡೆಸಿ ಆ ಮೂಲಕ ತತ್ಕಾಲೀನ ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿದ್ದಾರೆ.ಅವರ ಪುಸ್ತಕಗಳನ್ನೂ ಪ್ರಕಟಿಸುವ ಉದ್ದೇಶವಿದೆ.
ಇವೆಲ್ಲದರ ಜೊತೆಗೆ,”ಎಲ್ಲ ತತ್ವದ ಎಲ್ಲೆ ಮೀರಿ” ನಿಲ್ಲುವ ನಿಲುಮೆಯ ನಿಲುವಿಗೆ ಬದ್ಧವಾಗಿ ಎಲ್ಲಾ ಸಾಹಿತ್ಯ ಪ್ರಕಾರದ ಸೃಜನಶೀಲ ಕೃತಿಗಳನ್ನು ಪ್ರಕಟಿಸುವ ಮೂಲಕ ಮತ್ತು ಹೊಸ ಪ್ರತಿಭೆಗಳಿಗೆ ವೇದಿಕೆಯಾಗುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಳಿಲು ಸೇವೆ ಸಲ್ಲಿಸುವುದು ನಮ್ಮ ಯೋಜನೆಯಾಗಿದ್ದು ಆದ್ಯತೆಯ ಆಧಾರದಲ್ಲಿ ಕಾರ್ಯನಿರ್ವಹಿಸಲು ಯೋಚಿಸಲಾಗಿದೆ.
ನಿಮ್ಮ ಬೆಂಬಲ,ಹಾರೈಕೆ ನಮ್ಮ ಜೊತೆಗಿರಲಿ.
ನಿಮ್ಮೊಲುಮೆಯ,
ನಿಲುಮೆ ಬಳಗ