ಶಂಕರಾಚಾರ್ಯರನ್ನು ಸ್ತುತಿಸಿದ್ದಾಯಿತು, ವಿದ್ಯಾರಣ್ಯರನ್ನೂ ಸ್ಮರಿಸೋಣ….
-ಶ್ರೀನಿವಾಸ ರಾವ್
||ಅವಿದ್ಯಾರಣ್ಯಕಾನ್ತಾರೇ ಭ್ರಮತಾಂ ಪ್ರಾಣಿನಾಂ ಸದಾ
ವಿದ್ಯಾಮಾರ್ಗೋಪದೇಷ್ಟಾರಂ ವಿದ್ಯಾರಣ್ಯಗುರುಂ ಶ್ರಯೇ||
ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮಾರ್ಗದರ್ಶನ ನೀಡಿದರು. ದಕ್ಷಿಣಪಥದಲ್ಲಿ ಹಿಂದೂ ಧರ್ಮದ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಶೃಂಗೇರಿ ಪೀಠಾಧಿಪತಿಗಳ ಬಿರುದಾವಳಿಗೆ ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದನ್ನು ತಂದುಕೊಟ್ಟಿದ್ದೂ ಅವರೇ. ಶೃಂಗೇರಿಯ ಈಗಿನ ಪೀಠಾಧಿಪತಿಗಳಿಗೆ ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂದು ಬಿರುದಾವಳಿಗಳಲ್ಲಿ ಹೇಳಿದರೂ ನಮಗೆ ಆ ಯತಿಶ್ರೇಷ್ಠರೇ ನೆನಪಾಗುತ್ತಾರೆ. ಮನಸ್ಸು ಪುಟಿದೇಳುತ್ತದೆ. ‘ವಿದ್ಯಾಶಂಕರ ಪಾದಪದ್ಮಾರಾಧಕ’ ಎಂದಾಗಲೂ ವಿದ್ಯಾತೀರ್ಥರ ಶಿಷ್ಯರಾಗಿ-ಭಾರತೀ ತೀರ್ಥರ ಕರಕಮಲ ಸಂಜಾತರಾಗಿದ್ದ ಅವರನ್ನೇ ಮನಸ್ಸು ನೆನೆಯುತ್ತದೆ. ಮತ್ತಷ್ಟು ಓದು
ಇತಿಹಾಸದ ಅಚ್ಚರಿಗಳಲ್ಲಿ ಒಂದು ಇಣುಕು: ‘ಕರ್ನಾಟಕದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಹುಗಳು’
– ರಾಘವೇಂದ್ರ ಅಡಿಗ ಹೆಚ್.ಎನ್
ಕಳೆದ ವಾರ ಕನ್ನಡದ ಒಂದು ಅಪೂರ್ವ ಮತ್ತು ನೂತನ ಸ್ವರೂಪದ ಕೃತಿಯೊಂದರ ಬಿಡುಗಡೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೆರವೇರಿತು.( ಆ ಸಂದರ್ಭದಲ್ಲಿ ನಾನೂ ಸಹ ಅಲ್ಲಿ ಇದ್ದೆ ಎನ್ನುವ ವಿಚಾರವೇ ನನಗೊಂದು ಖುಷಿಯ ಸಂಗತಿ.) ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಅಗ್ರರಲ್ಲಿ ಒಬ್ಬರಾದ ಡಾ. ಎಮ್. ಚಿದಾನಂದಮೂರ್ತಿಯವರ ‘ಕರ್ನಾಟದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಗಳು’ ಎನ್ನುವ ಹೆಸರಿನ ಕೃತಿಯು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅದರಲ್ಲಿರುವ ವಿಷಯದ ದೃಷ್ಟಿಯಿಂದ ತೀರಾ ವಿನೂತನವಾದುದ ಅಷ್ಟೇ ಅಲ್ಲ ಬಹು ಮೌಲ್ಯಯುತವಾದುದು ಕೂಡ. ಲೇಖಕರೇ ಹೇಳುವಂತೆ ‘ಇಂತಹಾ ಒಂದು ಪುಸ್ತಕ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು,ಇತರೆ ಭಾರತೀಯ ಭಾಷೇಗಳಲ್ಲಿಯೂ ಬಂದಂತಿಲ್ಲ’. ಈ ಒಂದು ಪುಸ್ತಕದಿಂದ ನಾವು-ನೀವು ಓದಿರುವ ಕನ್ನಡದ ಪ್ರಾಚೀನ ಕವಿಗಳು, ನಮ್ಮನ್ನಾಳಿದ ರಾಜ ಮಹಾರಾಜರ ವಂಶಸ್ಥರ ಕುರಿತಾಗಿ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಬಹುದು.
ಕನ್ನಡದ ಶ್ರೇಷ್ಠ ಸಂಶೋಧಕರೂ, ಚಿಂತಕರೂ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಾ. ಎಮ್. ಚಿದಾನಂದಮೂರ್ತಿಗಳ ಈ ಕಿರುಹೊತ್ತಿಗೆ ಅವರ ಹಲವು ವರ್ಷಗಳ ಪರಿಶ್ರಮದ ಫಲ. ಶತ ಶತಮಾನಗಳ ಹಿಂದೆ ಆಳಿಹೋದ ರಾಜವಂಶಸ್ಥರ, ನೂರಾರು-ಸಾವಿರಾರು ವರ್ಷಗಳ ಹಿಂದೆ ಬದುಕಿ ಕಾವ್ಯಗಳನ್ನು ರಚಿಸಿದ ಪ್ರಾಚೀನ ಕವಿಮಹೋದಯರ ಈಗಿನ ವಂಶಸ್ಥರು ಯಾರೆನ್ನುವುದನ್ನು ಪತ್ತೆ ಮಾಡಿ ಅವರನ್ನು ಸಂದರ್ಶಿಸಿ, ಅವರ ಬಳಿ ಇದ್ದ ಅಂದಿನ ಕಾಲದ ಕುರುಹುಗಳನ್ನು ನೋಡಿ ಅದರ ಬಗ್ಗೆ ಲೇಖನ ಅಥವಾ ಪುಸ್ತಕ ಬರೆಯುವುದು ಅಷ್ಟೇನೂ ಸುಲಭವಲ್ಲ. ಉದಾಹರಣೆಗೆ ಕನ್ನಡದ ಆದಿಕವಿ ಪಂಪನನ್ನು ತೆಗೆದುಕೊಂಡರೆ ಅವನ ಕಾಲ ಕ್ರಿ.ಶ.೯೦೨. ಅವನು ‘ವಿಕ್ರಮಾರ್ಜುನ ವಿಜಯ’ ಕಾವ್ಯವನ್ನು ಪೂರ್ಣಗೊಳಿಸಿದ್ದು ಕ್ರಿ.ಶ.೯೪೨ ರಲ್ಲಿ. ಅಂದರೆ ಇಂದಿಗೆ ಸುಮಾರು ಸಾವಿರದ ನೂರು ವರ್ಷಗಳಾದವು. ಹೀಗೆ ಸಾವಿರ ವರ್ಷಗಳ ಹಿಂದೆ ಬದುಕಿದ್ದ ಪಂಪನ ತಂದೆ ಹಾಗೂ ತಾಯಿಯ ವಂಶಸ್ಥರ ವಿವರಗಳಾನ್ನು ಪತ್ತೆ ಮಾಡುವುದು ಮತ್ತು ಅವರನ್ನು ಸ್ವತಃ ಸಂದರ್ಶಿಸಿ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿ ಪುಸ್ತಕ ಪ್ರಕಟಿಸುವುದು ಬಲು ಅಪರೂಪದ ಸಂಗತಿ. ಹೀಗಾಗೆ ಇಂತಹಾ ಪುಸ್ತಕವು ಕನ್ನಡದಲ್ಲಿ ತೀರಾ ನೂತನವಾಗಿರುವುದು ಸಾಧ್ಯ.