ವಿಷಯದ ವಿವರಗಳಿಗೆ ದಾಟಿರಿ

Posts tagged ‘ವಿಮರ್ಶೆ’

10
ಜನ

ಪುಷ್ಪಕ ವಿಮಾನ..

– ಶಾರದ ಡೈಮಂಡ್

14484588_2162752720617409_3032744761678173016_nಅಪ್ಪ ಮಗಳ ನಡುವಿನ ಮುಗ್ಧ ಪ್ರಪಂಚದ ಸುತ್ತ ಹೆಣೆದಿರುವ ಕಥೆ ಈ ಪುಷ್ಪಕ ವಿಮಾನ. ಅವರದ್ದೇ ಭಾವ ಪ್ರಪಂಚದಲ್ಲಿ ಖುಷಿಯಾಗಿ ಮಧುರ ಕ್ಷಣಗಳನ್ನು ಸಂಭ್ರಮಿಸುತ್ತಿದ್ದ ಮನಸ್ಸುಗಳು ಅನ್ಯಾಯವಾಗಿ ಯಾರದೋ ಕ್ರೂರ ಮನಸ್ಸಿನ ಹಠ ಮತ್ತು ಸೇಡಿಗಾಗಿ ಒಡೆದು ದೂರವಾಗೋದೇ ಚಿತ್ರದ ಕಥೆ. ಇದು ರಮೇಶ್ ಅರವಿಂದ್ ರವರ ನೂರನೇ ಚಿತ್ರ . ಅವರ ಜೀವನದ ಮೈಲಿಗಲ್ಲು. ರಮೇಶ್ ಅವರ ಮುಗ್ದಾವತಾರದ ಆ ಅದ್ಭುತ ಅಭಿನಯವನ್ನು ಪದಗಳಲ್ಲಿ ವಿವರಿಸೋದು ಕಷ್ಟ ಸಾಧ್ಯ. ರಮೇಶ್ ಅರವಿಂದರ ಅಭಿಮಾನಿ ಅಂತ ಹೇಳಿಕೊಳ್ಳುವುದೇ ನನಗೆ ಖುಷಿ ವಿಚಾರ. ಅದರಲ್ಲೂ ಈ ಚಿತ್ರದಲ್ಲಿ ಅವರ ಅಭಿನಯವನ್ನು ನೋಡಿದ ಮೇಲೆ ನಿಜವಾಗಲೂ ಅವರ ಅಭಿಮಾನಿ ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಅನಿಸ್ತಾ ಇದೆ. ಮತ್ತಷ್ಟು ಓದು »

21
ಏಪ್ರಿಲ್

‘ಹೊಸ ತಲೆಮಾರಿನ ತಲ್ಲಣ’ ಕೃತಿ ಪರಿಚಯ

ಮು.ಅ ಶ್ರೀರಂಗ ಬೆಂಗಳೂರು

hosa talemarina tavaka tallanagalu0001ಡಾ. ರಹಮತ್ ತರೀಕೆರೆ ಅವರ ಸಂಪಾದಕತ್ವದಲ್ಲಿ  ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ಅವರು ೨೦೦೮ರಲ್ಲಿ ಪ್ರಕಟಿಸಿರುವ ‘ಹೊಸ ತಲೆಮಾರಿನ ತಲ್ಲಣ’ ಕೃತಿಯ ಒಂದು ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ. ಈ ಕೃತಿಯಲ್ಲಿ ಒಟ್ಟು   ೩೮ ಲೇಖನಗಳಿವೆ. ಸಂಪಾದಕರಾದ  ರಹಮತ್ ತರೀಕೆರೆಯವರು ತಮ್ಮ ಮುನ್ನುಡಿಯಲ್ಲಿ ಹೇಳಿರುವಂತೆ ‘ಈ ಸಂಕಲನವು ಬರಹದಲ್ಲಿ ತೊಡಗಿಕೊಂಡಿರುವವರಿಗೂ, ಸಾಹಿತ್ಯ ಅಧ್ಯಯನ ಮಾಡುವವರಿಗೂ, ಸಾಹಿತ್ಯದಲ್ಲಿ ಸಾಮಾನ್ಯ ಆಸಕ್ತಿ ಇರಿಸಿಕೊಂಡಿರುವ ಓದುಗರಿಗೂ ಉಪಯುಕ್ತ ಆಗಬಹುದು’.   ಈ ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ  ಹೊಸತಲೆಮಾರಿನ ಲೇಖಕರ ಆತ್ಮ ಕಥಾನಾತ್ಮಕ ಮಾದರಿಯ ಬರಹಗಳಿವೆ. ಎರಡನೇ ಭಾಗದ ಬರಹಗಳು ಸಂಪಾದಕರ ಕೆಲವು ನಿರ್ದಿಷ್ಟ ಪ್ರಶ್ನೆಗಳಿಗೆ ಕೊಟ್ಟ ಉತ್ತರವಾಗಿ ಮೂಡಿಬಂದ ಲೇಖನಗಳಿವೆ. ಮೂರನೇ ಭಾಗದಲ್ಲಿ ಈ ಎರಡೂ  ಭಾಗದ ಬರಹಗಳಿಗೆ ಸಂಪಾದಕರು ಮಾಡಿರುವ   ‘ತಲ್ಲಣಗಳ ಸ್ವರೂಪ’ ಎಂಬ ಉತ್ತಮ  ವಿಶ್ಲೇಷಣೆ ಇದೆ. ಮತ್ತಷ್ಟು ಓದು »

20
ಏಪ್ರಿಲ್

‘ಯಾನ’ ದಲ್ಲಿ ಒಂದು ಸುತ್ತು

– ಡಾ.ಸಂತೋಷ್ ಕುಮಾರ್ ಪಿ.ಕೆ

ಯಾನ‘ಯಾನ’ ಇತ್ತೀಚೆಗಷ್ಟೆ ಬಿಡುಗಡೆಯಾದ ಭೈರಪ್ಪನವರ ಕಾದಂಬರಿಯಾಗಿದೆ.ಹಾಟ್ ಕೇಕ್ ರೀತಿಯಲ್ಲಿ ಮಾರಾಟವಾದ ಪುಸ್ತಕ ಅವರ ಕಿರೀಟಕ್ಕೆ ದಕ್ಕಿದ ಮತ್ತೊಂದು ಗರಿ ಎಂದರೂ ತಪ್ಪಾಗಲಾರದು.ಮಾನವೀಯ ಸಂಬಂಧಗಳ ತಾಕಲಾಟವನ್ನು ಬಿಂಬಿಸುವ ಭೈರಪ್ಪನವರ ಹಲವಾರು ಕಾದಂಬರಿಗಳಲ್ಲಿ ಇದೂ ಸಹ ಒಂದಾಗಿದೆ. ಇಡೀ ಕಾದಂಬರಿ ಉತ್ತರಾ ಮತ್ತು ಸುದರ್ಶನ್ ಎಂಬ ಇಬ್ಬರು ಪ್ರಾಯೋಗಿಕ ಅಥವಾ ಎಕ್ಸ್ಪೆರಿಮೆಂಟ್ ದಂಪತಿಗಳ ಸಂಬಂಧದೊಳಗಿನ ತೊಳಲಾಟವನ್ನು ಅಂದವಾಗಿ ಚಿತ್ರಿಸುತ್ತದೆ. ಬೇರೊಂದು ಗ್ರಹಕ್ಕೆ (ಪ್ರಾಕ್ಸಿಮಾ ಸೆಂಟರ್) ಚಲಿಸುವ ಮತ್ತು ಎಂದೆಂದಿಗೂ ಭೂಮಿಗೆ ಹಿಂದಿರುಗದ ರಾಕೆಟ್ ಒಳಗೆ ಒಂದು ಲೋಕವನ್ನು ಸೃಷ್ಟಿಸಿ ಆಕಾಶ್ ಮತ್ತು ಮೇದಿನಿಯರ ಮೂಲಕ ಅವರ ಪೋಷಕರ ಜೀವನಗಾಥೆಯನ್ನು ಎಳೆಎಳೆಯಾಗಿ ಬಿಡಿಸುವ ಕಾರ್ಯವನ್ನು ಲೇಖಕರು ಮಾಡುತ್ತಾರೆ.

ಯಾನವು ವೈಜ್ಞಾನಿಕ ಪ್ರಯೋಗಕ್ಕಾಗಿ ಭೂಮಿಯಿಂದ ರಾಕೆಟ್ ಮೂಲಕ ಬೇರೊಂದು ನಕ್ಷತ್ರ/ಗ್ರಹಕ್ಕೆ ಪ್ರಯಾಣಿಸುವ ಕತೆಯಾಗಿದೆ. ಯಾನ ಎಂಬುದು ಇಲ್ಲಿ ಎರಡು ಅರ್ಥಗಳನ್ನು ಒಳಗೊಳ್ಳಬಹುದು, ಒಂದು, ಬೇರೆ ಗ್ರಹಕ್ಕೆ ಮಾಡುವ ಪ್ರಯಾಣ ಮತ್ತೊಂದು ಜೀವನದಲ್ಲಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಮಾಡುವ ಪ್ರಯಾಣ. ವಿಜ್ಞಾನದ ಕುರಿತು ಕೆಲವೊಂದು ಉಪಯುಕ್ತ ಮಾಹಿತಿಗಳನ್ನೂ ಸಹ ಈ ಕಾದಂಬರಿ ಒದಗಿಸುತ್ತದೆ. ಅದರ ಜೊತೆಗೆ ಮನುಷ್ಯರ ಜೀವನದಲ್ಲಿ ಸಹಜವಾಗಿ ನಡೆಯುವ ಸರಸ ಸಲ್ಲಾಪ, ಅನ್ವೇಷಣಾ ಗುಣ, ವಿರಸ, ಆಧ್ಯಾತ್ಮ, ಶರಣಾಗುವಿಕೆ, ಅಹಂ ಇನ್ನೂ ಮುಂತಾದ ಸೂಕ್ಷ್ಮ ಸಂಗತಿಗಳನ್ನು ಹಲವಾರು ಘಟನೆಗಳ ಮೂಲಕ ಕಾದಂಬರಿ ಹೊರಗೆಡಹುತ್ತದೆ. ಒಟ್ಟಿನಲ್ಲಿ ಓದುಗಾಸಕ್ತರಿಗೆ ಎಲ್ಲಿಯೂ ಬೋರ್ ಮಾಡದ ರೀತಿಯಲ್ಲಿ ತನ್ನೊಂದಿಗೆ ಕೊಂಡ್ಯೊಯ್ಯುವ ಗುಣ ಯಾನದ ವೈಶಿಷ್ಟ್ಯವಾಗಿದೆ.

ಯಾನವು ಒಂದು ರೋಚಕ ಕತೆಯಾಗಿದೆ. ಏಕೆಂದರೆ ಓದುಗರಿಗೆ ಎರಡು ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುವ ಮೂಲಕ ಕೊನೆಯವರೆಗೂ ಉತ್ತರದ ರಹಸ್ಯವನ್ನು ಕಾಪಾಡಿಕೊಳ್ಳುತ್ತದೆ. ಆ ಪ್ರಶ್ನೆಗಳೆಂದರೆ, 1.ಆಕಾಶ್ ಮತ್ತು ಮೇದಿನಿ ಎಂಬ ಸಹೋದರ ಸಹೋದರಿಯರು ವಿವಾಹವಾಗಲು ಹೇಗೆ ಸಾಧ್ಯ? ಹಾಗೂ 2. ಆಕಾಶ್ನ ತಂದೆ ಯಾರು? ಈ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿಯೇ ಕಾದಂಬರಿ ಕೊನೆಯವರೆಗೂ ಕುತೂಹಲವನ್ನು ಉಳಿಸುತ್ತದೆ. ಕಾದಂಬರಿಯನ್ನು ಓದಲು ಪ್ರಾರಂಭಿಸಿದಾಗ, ಮುಂದೆ ಏನಾಗಬಹುದು ಎಂಬ ನಿರೀಕ್ಷೆಗಳೂ ಸಹ ಓದುಗರಿಗೆ ಹುಟ್ಟದೆ ಇರಲಾರದು. ಇದಿಷ್ಟು ಕಾದಂಬರಿಯ ಮೇಲ್ನೋಟದ ವೈಶಿಷ್ಟ್ಯಗಳು. ಈ ಕಾದಂಬರಿಯಲ್ಲಿ ಇನ್ನೊಂದು ವಿಶೇಷವಿದೆ ಅದು ಈ ಕೆಳಗಿನಂತಿದೆ.

ಮತ್ತಷ್ಟು ಓದು »

7
ಜನ

PK ಎಂಬ ರಾಂಗ್ ನಂಬರ್

– ಸಂತೋಷ್ ಕುಮಾರ್ ಪಿ.ಕೆ

PKಅಮೀರ್ ಖಾನ್ ಎಂದರೆ ವಿಭಿನ್ನ ಶೈಲಿಯ ಚಿತ್ರಗಳನ್ನು ತೆರೆಗೆ ತರುವ ಸಾಮರ್ಥ್ಯ ಉಳ್ಳವರು ಎಂಬುದೇ ಬಹುತೇಕರ ಭಾವನೆ, ಅದು ಸತ್ಯ ಕೂಡ. ಈಗ ಬಂದಿರುವ ಪೀಕೆ ಚಿತ್ರ ಕೆಲವು ತಪ್ಪುಗ್ರಹಿಕೆಗಳ ಆಧಾರದ ಮೇಲೆ ಹೋಗುತ್ತದೆ ಎಂಬುದು ಬಿಟ್ಟರೆ ಅದನ್ನೊಂದು ಉತ್ತಮ ಲವ್ ಸ್ಟೋರಿ ಆಧಾರಿತ ಚಿತ್ರವನ್ನಾಗಿ ನಿರ್ದೇಶಕರು ಮಾಡಬಹುದಿತ್ತು ಎಂಬುದು ನನ್ನ ಅನಿಸಿಕೆ. ಹಾಗಾದರೆ ಆ ತಪ್ಪುಗ್ರಹಿಕೆಗಳು ಏನು?

1. ಭಾರತೀಯ ಸಂಪ್ರದಾಯ ಮತ್ತು ಸೆಮೆಟಿಕ್ ರಿಲಿಜನ್ ಗಳು ಭಗವಾನ್ ಮತ್ತು ಗಾಡ್ ಎಂದು ಮಾತನಾಡುವಾಗ ಇರುವ ವ್ಯತ್ಯಾಸವನ್ನು ಗುರುತಿಸಿಕೊಳ್ಳದಿರುವುದು. ನಮ್ಮಲ್ಲಿ ಸಾಮಾನ್ಯವಾಗಿ ದೇವರೇ ಕಾಪಾಡಬೇಕು, ದೇವರು ನಿನಗೆ ಕರುಣಿಸಲಿ, ಹೀಗೆ ಇತ್ಯಾದಿಗಳನ್ನು ದೇವರಿಗೆ ಆರೋಪಿಸುವಾಗ, ಅಕ್ಷರಶಃ ದೇವರನ್ನೇ ರೆಫರೆನ್ಸ್ ಪಾಯಿಂಟ್ ಆಗಿ ಇಟ್ಟುಕೊಂಡಿರುತ್ತೇವೆಯೆ? ಅದು ಹೇಳುವವರಿಗೂ ಸ್ಪಷ್ಟವಿರುವುದಿಲ್ಲ, ಕೇಳಿಸಿಕೊಳ್ಳುವವರಿಗೂ ತಿಳಿದಿರುವುದಿಲ್ಲ,. ಆಡುವ ಮಾತಿಗೂ ಕ್ರಿಯೆಗೂ ಕೆಲವು ಬಾರಿ ನಮ್ಮ ಸಂಸ್ಕೃತಿಯಲ್ಲಿ ಸಂಬಂಧವೇ ಇರುವುದಿಲ್ಲ, ದೇವರು ಇದ್ದಾನೆ ಎಂದರೆ ಇದ್ದಾನೆ ಎಂದಷ್ಟೇ..ಅವನು ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದು ನಮ್ಮ ಪ್ರಶ್ನೆಯೂ ಅಲ್ಲ ಆಸಕ್ತಿಯೂ ಅಲ್ಲ. ಆದರೆ ಇದನ್ನೇ ರಿಲಿಜನ್ ಸಮಾಜಗಳಲ್ಲಿ ಬಳಸಿದರೆ ಅದಕ್ಕೆ ನಿರ್ದಿಷ್ಟ ಅರ್ಥವೂ ಇದೆ, ಅದನ್ನು ಹುಡುಕಲು (ತೀರ ಸಿಗುವುದಿಲ್ಲ ಎಂದು ತಿಳಿದಿದ್ದರೂ) ಸಹಾಯ ಮಾಡುವ ಸಂಸ್ಥೆಗಳು ಹಾಗೂ ಗ್ರಂಥಗಳು ದೊರಕುತ್ತವೆ. ಇಲ್ಲಿ ಭಾಷೆಯ ಒಕ್ಕಣೆಯ ಆಧಾರದ ಮೇಲೆ ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳುವುದಕ್ಕಿಂತ ಏನನ್ನು ಹೇಳುತ್ತಿಲ್ಲ ಎಂಬುದು ಅರ್ಥೈಸಿಕೊಳ್ಳುವುದು ಸವಾಲಿನ ಕೆಲಸ. ಏಲಿಯನ್ ಮನುಷ್ಯನಿಗೆ ಭಾಷೆ ತಿಳಿದ ಮಾತ್ರಕ್ಕೆ ಸಂಸ್ಕೃತಿಯೇ ಅರ್ಥವಾಗಿಬಿಡುತ್ತದೆ ಎಂಬುದು ನಿರ್ದೇಶಕರ ತಪ್ಪುಗ್ರಹಿಕೆಗೆ ಒಂದು ನಿದರ್ಶನವಾಗಿದೆ.

ಮತ್ತಷ್ಟು ಓದು »

12
ನವೆಂ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೮
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೯

ಕವಲು 

ಆವರಣ ಕಾದಂಬರಿಗೆ ಬಂದಷ್ಟು ಪ್ರತಿರೋಧ, ಪ್ರತಿಭಟನೆಗಳು ಮತ್ತು ವಿಮರ್ಶಾ ಸಂಕಲನಗಳು  ಕವಲು ಕಾದಂಬರಿಗೆ ಬರದೇ ಇದ್ದರೂ ಸಹ ಪತ್ರಿಕೆಗಳಲ್ಲಿ ಸಾಕಷ್ಟು ಚರ್ಚೆಯಾಯಿತು. ಆವರಣಕ್ಕೆ ಕೋಮುವಾದಿ ಕೃತಿ ಎಂದು  ಹೆಸರಿಟ್ಟಹಾಗೆ ಕವಲು ಕಾದಂಬರಿಗೆ  ಸ್ತ್ರೀವಾದದ ವಿರೋಧಿ ಎಂಬ ಲೇಬಲ್ ಹಚ್ಚಲಾಯಿತು.   ಖ್ಯಾತ ಕತೆಗಾರ, ಪ್ರಭಂಧಕಾರ ಮತ್ತು ಪ್ರಕಾಶಕರಾದ (ಛಂದ ಪುಸ್ತಕ ಪ್ರಕಾಶನ ಬೆಂಗಳೂರು) ವಸುಧೇಂದ್ರ ಅವರು ಕನ್ನಡ ಪ್ರಭ ಪತ್ರಿಕೆಯ ಭಾನುವಾರದ ಸಾಪ್ತಾಹಿಕ ಪ್ರಭದಲ್ಲಿ ಮಾಡಿದ  ಕವಲು ಕಾದಂಬರಿಯ ವಿಮರ್ಶೆಗೆ ಪ್ರತಿಕ್ರಿಯೆಯಾಗಿ   ನಾನು ಬರೆದದ್ದು ಈ  ಪತ್ರ. .

 

ಶ್ರೀ ವಸುಧೇಂದ್ರ ಅವರಿಗೆ ನಮಸ್ಕಾರಗಳು,                                                                                                                                                                                                    ದಿನಾಂಕ:  ೧೩ ಜೂನ್ ೨೦೧೨

ಭೈರಪ್ಪನವರ ಕವಲು ಕಾದಂಬರಿಯ ಬಗ್ಗೆ ಸುಮಾರು ಎರಡು ವರ್ಷಗಳ ಹಿಂದೆ (೨೯–೮–೨೦೧೦) ಕನ್ನಡಪ್ರಭದ ಸಾಪ್ತಾಹಿಕ ಪ್ರಭದಲ್ಲಿ   ಪ್ರಕಟವಾದ ತಮ್ಮ  ವಿಮರ್ಶೆಯ ಬಗ್ಗೆ  ನನ್ನ ಅನಿಸಿಕೆಗಳನ್ನು ಈಗ ತಿಳಿಸುತ್ತಿದ್ದೇನೆ. ಇದನ್ನು ಬರೆದಿಟ್ಟುಕೊಂಡು ಎರಡು ವರ್ಷಗಳಾಗಿದ್ದರೂ ಈಗ ಕಳಿಸುತ್ತಿರುವುದಕ್ಕೆ ಕಾರಣ ನಿಮ್ಮ ಅಂಚೆ ವಿಳಾಸ/ ಇ ಮೇಲ್ ಐಡಿ ಸಿಗದೇ ಇದ್ದದ್ದು. ಇತ್ತೀಚಿಗೆ ‘ಸಂಚಯ’ ಸಾಹಿತ್ಯಿಕ ಪತ್ರಿಕೆಯ ಪ್ರತಿಗಳನ್ನು ಒಂದೆಡೆ ನೀಟಾಗಿ ಜೋಡಿಸಿಡುತ್ತಾ ಹಾಗೆ ಅದರ ಪುಟಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ಒಂದು ಸಂಚಿಕೆಯಲ್ಲಿ ನಿಮ್ಮ ವಿಳಾಸ ಸಿಕ್ಕಿತು. ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿದ್ದ ನಿಮ್ಮ ಆ ವಿಮರ್ಶೆಯ ಜೆರಾಕ್ಸ್ ಪ್ರತಿಯನ್ನೂ ಇದರ ಜತೆ ಇಟ್ಟಿದ್ದೇನೆ.

ತಮಗೆ ತಿಳಿದಿರುವಂತೆ ಭೈರಪ್ಪನವರ ಕಾದಂಬರಿಗಳ ಬಗ್ಗೆ ನಮ್ಮ ವಿಮರ್ಶಾವಲಯದಲ್ಲಿ ಪರಸ್ಪರ ವಿರುದ್ಧವಾದ ಅಭಿಪ್ರಾಯಗಳು ಅವರ ಧರ್ಮಶ್ರೀ ಕಾಲದಿಂದ ಇಂದಿನ ಕವಲು ಕಾದಂಬರಿಯ ತನಕ ಇದ್ದೇ ಇದೆ. ಇದನ್ನು ನಾನು ಪುನಃ ವಿವರಿಸುವುದು ಅನವಶ್ಯ ಎಂದು ಭಾವಿಸಿದ್ದೇನೆ. ಈಗ ನೇರವಾಗಿ ಕವಲು ಕಾದಂಬರಿಯನ್ನು ಕುರಿತ ತಮ್ಮ ವಿಮರ್ಶೆಯ ಬಗ್ಗೆ ಹೋಗೋಣ. ನಾಲ್ಕು ಕಾಲಂಗಳ ಆ ವಿಮರ್ಶೆಯಲ್ಲಿ ಎರಡು ಕಾಲಂಗಳು ಆ ಕಾದಂಬರಿಯ ಕಥಾಸಾರಾಂಶವನ್ನು ಹೇಳುವುದಕ್ಕೆ ವಿನಿಯೋಗವಾಗಿದೆ. ಉಳಿದ ಎರಡು ಕಾಲಂಗಳ ಬಗ್ಗೆ ಹೇಳುವುದಾದರೆ—

(೧) ಭೈರಪ್ಪನವರು ಎಲ್ಲಾ ಸ್ತ್ರೀವಾದಿಗಳೂ ಕೆಟ್ಟ ಹೆಂಗಸರೆಂದು  ಆ ಕಾದಂಬರಿಯಲ್ಲಿ  ಎಲ್ಲಿ ಹೇಳಿದ್ದಾರೆ? ಕವಲು ಕಾದಂಬರಿಯಲ್ಲಿ ಚಿತ್ರಿತವಾಗಿರುವ ಇಬ್ಬರು ಹೆಂಗಸರ ಬಗ್ಗೆ, ಅವರ ನಡತೆಯ ಬಗ್ಗೆ ಬರೆದಿದ್ದಾರೆ. ಅವರಿಬ್ಬರು  ಎಲ್ಲಾ ಸ್ತ್ರೀ ವಾದಿಗಳನ್ನು  ಪ್ರತಿನಿಧಿಸುತ್ತಾರೆ ಎಂದು ಭಾವಿಸುವುದು ಸರಿಯೇ? ಓದು ಬರಹ ಬಲ್ಲ ಹೆಂಗಸರಿಂದ, ಸ್ತ್ರೀವಾದಿಗಳಿಂದ ಮಾತ್ರ ವರದಕ್ಷಿಣೆ ವಿರೋಧಿ ಕಾನೂನು, ವಿವಾಹ ವಿಚ್ಛೇದನದ ಕಾನೂನು ದುರುಪಯೋಗವಾಗುತ್ತಿಲ್ಲ: ಅದನ್ನು ಇತರರೂ ಮಾಡುತ್ತಿದ್ದಾರೆ ಎಂಬುದಕ್ಕೆ ಕವಲು ಕಾದಂಬರಿಯಲ್ಲೇ ಒಂದು ನಿದರ್ಶನವಿದೆ. ಜಯಕುಮಾರನ ಅಣ್ಣ ಕೇಶವಮೂರ್ತಿಯ ಹೆಂಡತಿ ಇಂದಿರಾ ತನ್ನ ಅತ್ತೆಯನ್ನು ವರದಕ್ಷಿಣೆ ಕಾನೂನಿನ ಅಡಿಯಲ್ಲಿ ಜೈಲಿಗೆ ಹಾಕಿಸಲಿಲ್ಲವೇ?  (ಪುಟ ೨೬೧ ಕವಲು) ತಾವೇ ಹೇಳಿರುವಂತೆ  ಕಾನೂನಿನ ಲೂಪ್ ಹೋಲ್ ಗಳನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡವರ ಕಥೆ ಕವಲುವಿನದು. ಅಂತಹ ಒಂದು ಕಥೆಯನ್ನು ಹೇಳುವುದಕ್ಕೆ ಒಂದಷ್ಟು ಪಾತ್ರಗಳು ಬೇಕೇ ಬೇಕಲ್ಲವೇ?  ಅಂತಹ ಪಾತ್ರಗಳು ಇಡೀ ಸಮಾಜದ ಪ್ರತಿಬಿಂಬವಾಗಲು ಹೇಗೆ ತಾನೇ ಸಾಧ್ಯ? ಜತೆಗೆ ಮರೆಯಬಾರದ ಸಂಗತಿ ಎಂದರೆ ಪ್ರಗತಿಪರ ,ಬಂಡಾಯ, ದಲಿತ ಸ್ತ್ರೀ ವಾದಿ ಇತ್ಯಾದಿ ಪ್ರಣಾಳಿಕೆಗಳು, ಇವುಗಳ ಬಗ್ಗೆ ಒಲವುಳ್ಳ ಅಷ್ಟನ್ನೇ high light ಮಾಡುವಂತಹ ಸಾಹಿತ್ಯ,ವಿಮರ್ಶೆಗಳು ಏಕಮುಖೀ ಧೋರಣೆ ಉದ್ದೇಶವಿಟ್ಟುಕೊಂಡು ರಚಿತವಾಗಿ ಜೀವನದ ಇತರೆ ಮಗ್ಗುಲುಗಳ ಬಗ್ಗೆ ಗಮನಹರಿಸದೇ ಇರುವುದು ತಿಳಿದ ವಿಷಯವೇ.  ಒಬ್ಬ ಲೇಖಕ/ಸಾಹಿತಿ ಆಯಾ ಕಾಲದಲ್ಲಿ ಚಾಲ್ತಿಯಲ್ಲಿರುವಂತಹ ಸಾಮಾಜಿಕ/ರಾಜಕೀಯ ಸಿದ್ಧಾಂತ,ವಾದ ಇತ್ಯಾದಿಗಳ ಪರವಾಗಿ ಮತ್ತು ಅದರ ಚೌಕ್ಕಟ್ಟಿನೊಳಗೇ ಬರೆಯಬೇಕು ಎಂದು ನಿರೀಕ್ಷಿಸುವುದು/ಒತ್ತಾಯಿಸುವುದು  ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನೂ ಸಹ ನಾವು ಗಣನೆಗೆ ತೆಗೆದುಕೊಳ್ಳಬೇಕಲ್ಲವೇ?  ಸಾಹಿತಿಗೆ ಆ  ವಾದಗಳ ಸಾಧಕ  ಬಾಧಕಗಳನ್ನು ತನ್ನ ಕೃತಿಯಲ್ಲಿ ಚರ್ಚಿಸುವ ಸೃಜನಶೀಲತೆಗೆ ಅವಕಾಶವಿರಬಾರದೆ?

ಮತ್ತಷ್ಟು ಓದು »

25
ಸೆಪ್ಟೆಂ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೮

ಆವರಣಎಂಬ ವಿಕೃತಿ (ವಿಮರ್ಶಾ ಸಂಕಲನ) ಸಂಗ್ರಹ: ಗೌರಿ ಲಂಕೇಶ್ – ಭಾಗ ೪ : ಆವರಣ ಮಾಧ್ಯಮ-ಮಂಥನ ಮತ್ತು ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ 

ಆವರಣಎಂಬ ವಿಕೃತಿ:-ಮುಖಾಮುಖಿ -೮ (೩೦-೬-೧೪) ರಲ್ಲಿ ಹೇಳಿದಂತೆ ಈ ಭಾಗದಲ್ಲಿ ‘ಆವರಣ’ ಕಾದಂಬರಿಯನ್ನು ನೆಪಮಾತ್ರಕ್ಕೆ ಇಟ್ಟುಕೊಂಡು ಬರೆದಿರುವಂತಹ ಲೇಖನಗಳ ಬಗ್ಗೆ ನಮ್ಮ ಚರ್ಚೆಯನ್ನು ಮುಂದುವರಿಸೋಣ. ಇದು ‘ಆವರಣ’ ಎಂಬ ವಿಕೃತಿ ವಿಮರ್ಶಾಸಂಕಲನವನ್ನು ಕುರಿತ ಮುಖಾಮುಖಿಯ ಕೊನೆಯ ಭಾಗ.

ಬೊಳುವಾರು ಮಹಮದ್ ಕುಂಞ ಅವರ ‘ಅವರವರ ದೇವರುಗಳು’ … ಲೇಖನದಲ್ಲಿ ‘ಆವರಣ’ ಕಾದಂಬರಿಯ ಕಥಾವಸ್ತುವನ್ನು ಅವರ ಮಾವನವರನ್ನು(ಬೊಳುವಾರು ಅವರ ಹೆಂಡತಿಯ ತಂದೆ) ಕಾಡುತ್ತಿದ್ದ ಕ್ಯಾನ್ಸರ್ ಗೆ ಹೋಲಿಸಿದ್ದಾರೆ. ಆಪರೇಷನ್ ಆದ ನಂತರ ಅವರ ಮಾವನವರು ಗುಣಮುಖರಾಗಿ ಗೆಲುವಿನ ನಗೆ ಬೀರುತ್ತಿದ್ದಾರೆ. ಅದೇ ರೀತಿ ‘ಆವರಣ’ ಕಾದಂಬರಿ ಬರೆದ ನಂತರ ಭೈರಪ್ಪನವರೂ ಸಹ ಹತ್ತಾರು ವರ್ಷಗಳಿಂದ ತಮ್ಮನ್ನು ಹಿಂಸಿಸುತ್ತಿದ್ದ,ಕಾಡುತ್ತಿದ್ದ  ಚಿಂತನೆಗಳಿಂದ  ಮುಕ್ತರಾಗಿದ್ದಾರೆ. ಅವರವರು ನಂಬುವ ಅವರವರ ದೇವರುಗಳು ಅವರವರನ್ನು ಕಾಪಾದುತ್ತಿರಲಿ. ಆಮೆನ್ ……… ಎಂಬ ಹಿತೋಕ್ತಿಯಿಂದ ತಮ್ಮ ಲೇಖನವನ್ನು ಮುಗಿಸಿದ್ದಾರೆ.

ಇಬ್ರಾಹಿಂ ಸಾಹೇಬರ ಬಗ್ಗೆ ಭೈರಪ್ಪನ ಸುಳ್ಳು …  ಪೀರ್ ಬಾಷಾ ಅವರು ಸುಳ್ಳು ಹೇಳುತ್ತಿದ್ದಾರೋ ಅಥವಾ ತಮ್ಮ ಜನಾಂಗದವರ ಅಸಮಾಧಾನಕ್ಕೆ ಏಕೆ ಕಾರಣಕರ್ತನಾಗಬೇಕೆಂದು ಇಬ್ರಾಹಿಂ ಸಾಹೇಬರೇ ಸುಳ್ಳು ಹೇಳುತ್ತಿದ್ದಾರೋ ತಿಳಿಯದಾಗಿದೆ. (ತಮ್ಮ ಜನಾಂಗದ ಅಸಮಾಧಾನಕ್ಕೆ ಕಾರಣವಾಗುವ ಮಾತುಗಳನ್ನು ಆಡಲು, ಬರೆಯಲು ಹಿಂದೇಟು ಹಾಕುವ ಪ್ರವೃತ್ತಿಗೆ ಇತ್ತೀಚಿನ ಉದಾಹರಣೆಯಾಗಿ   ಕನ್ನಡದ  ‘ವರ್ತಮಾನ’ , ‘ಗುಜರಿ ಅಂಗಡಿ’ ಮತ್ತು ‘ಭೂತಗನ್ನಡಿ’ ಎಂಬ ಬ್ಲಾಗುಗಳಲ್ಲಿ ಪ್ರಕಟವಾದ ‘ಬುರ್ಖಾ’ ಕುರಿತ ಲೇಖನ ಮತ್ತು ಅದರ ಬಗ್ಗೆ ನಡೆದ ಚರ್ಚೆಯನ್ನು ಆಸಕ್ತರು ಗಮನಿಸಬಹುದು). ‘ಆವರಣ’ ಕಾದಂಬರಿಯ ಪ್ರವೇಶ ಎಂಬ ಭಾಗದಲ್ಲಿ ಭೈರಪ್ಪನವರು ಆ ಕಾದಂಬರಿ ಬರೆಯುವಾಗ ತಮಗೆ ಸಹಾಯ ಮಾಡಿದವರನ್ನು ಸ್ಮರಿಸಿಕೊಳ್ಳುವಾಗ  ‘ಶಿವಮೊಗ್ಗದ ಎಚ್ ಇಬ್ರಾಹಿಂ ಸಾಹೇಬರು ಎಷ್ಟೋ ಸೂಕ್ಷ್ಮಾಂಶಗಳನ್ನು ಹೇಳಿ ನನ್ನ ಮನಸ್ಸಿನ ಚಿತ್ರಗಳು ಸ್ಫುಟವಾಗಲು ಸಹಾಯಮಾಡಿದರು’ ಎಂದು ಹೇಳಿರುವ ಒಂದು ವಾಕ್ಯ ಪೀರ್ ಬಾಷಾ ಅವರ ಕೆಂಗಣ್ಣಿಗೆ,ಆಕ್ರೋಶಕ್ಕೆ ತುತ್ತಾಗಿದೆ. ಇದರ ಫಲವಾಗಿ ಆವೇಶದ,ನಾಲ್ಕನೇ ದರ್ಜೆಯ ಕೀಳು ಮಾತುಗಳು ಅವರ ಲೇಖನದಲ್ಲಿದೆ. ಜತೆಗೆ ತಮ್ಮ ಮಾತಿಗೆ ಸತ್ಯದ ಲೇಪ ಹಚ್ಚಲು ‘ಪಿ ಲಂಕೇಶರ ಮಿತ್ರರೂ,ಆಗಿದ್ದ ‘ಲಂಕೇಶ್’  ವಾರಪತ್ರಿಕೆಯ ಹಿತೈಷಿಯೂ ಆಗಿರುವ ಇಬ್ರಾಹಿಂ ಸಾಹೆಬರನ್ನೇ ಇದರ ಬಗ್ಗೆ ಕೇಳಿದೆ ‘ ಎಂದು  ಬರೆದಿರುವುದು  ಬಾಷಾ ಅವರ ಬಗ್ಗೆ ಮರುಕ ಹುಟ್ಟಿಸುತ್ತದೆ. ಏಕೆಂದರೆ ಇಲ್ಲಿ ಸಮಸ್ಯೆಯಿರುವುದು ಭೈರಪ್ಪನವರು ಮತ್ತು ಇಬ್ರಾಹಿಂ ಸಾಹೇಬರ ನಡುವೆ ಅಷ್ಟೇ. ಅದಕ್ಕೆ ಮೂರನೇ ವ್ಯಕ್ತಿ ಮತ್ತು ಅವರ ವಾರಪತ್ರಿಕೆಯ ಆಸರೆ ಏಕೆ ಬೇಕಾಗಿತ್ತು?  . ಇಬ್ರಾಹಿಂ ಸಾಹೇಬರಿಗೆ ಇನ್ನೂ ಕಾಲ ಮಿಂಚಿಲ್ಲ. ಈಗ ಬೇಕಾದರೂ ಸತ್ಯ ಹೇಳಬಹುದು. ತಾವು ಮುಸ್ಲಿಂ ಜನಾಂಗದ ರೀತಿ-ರಿವಾಜು,ನಂಬಿಕೆ, ಆಚರಣೆಗಳ ಬಗ್ಗೆ ಭೈರಪ್ಪನವರ ಜತೆ ಮಾತಾಡಿಲ್ಲ ಎಂದು ಪತ್ರಿಕೆಗಳಿಗೆ ಹೇಳಿಕೆ ಕೊಡಬಹುದು. ನಮ್ಮ  ಕನ್ನಡದ 24X7 ಸುದ್ದಿವಾಹಿನಿಗಳಿಗೆ ತಿಳಿಸಿದರೆ ಸಾಕು. ಅವರು ಒಂದಿಡೀ ದಿನ ಅದರ ಬಗ್ಗೆ ಕಾರ್ಯಕ್ರಮ ನಡೆಸುತ್ತಾರೆ. ಪೀರ್ ಬಾಷಾ ಅವರೂ  ಈ ನಿಟ್ಟಿನಲ್ಲಿ ಸಹಾಯ ಮಾಡಬಹುದು.

ಪಿ. ಲಂಕೇಶರ ಬರಡು ಮನಸ್ಸಿನ ತಡೆರಹಿತ ಅಶ್ಲೀಲತೆ  ಲೇಖನ ಭೈರಪ್ಪನವರ  ‘ಸಾರ್ಥ’  ಕಾದಂಬರಿಗೆ ಸಂಬಂಧಿಸಿದ್ದು. ತಮ್ಮ ತಂದೆಯವರ ಹೆಸರಿನ ಪ್ರಕಾಶನ ಸಂಸ್ಥೆಯಿಂದ ‘……….. ವಿಕೃತಿ’ ವಿಮರ್ಶಾ ಸಂಕಲನ ಪ್ರಕಟಿಸಿರುವುದರಿಂದ ಭೈರಪ್ಪನವರ ಬಗ್ಗೆ, ಅವರ  ಯಾವುದೇ ಕಾದಂಬರಿಯ ಬಗ್ಗೆ ಲಂಕೇಶ್ ಅವರು ಬರೆದ ಯಾವುದೇ ಲೇಖನ ಸೇರಿಸಲು, ಪ್ರಕಟಿಸಲು ಗೌರಿ ಲಂಕೇಶರು ಸ್ವತಂತ್ರರು. ಅದು ಅವರ ವಿವೇಚನೆಗೆ ಬಿಟ್ಟ ವಿಷಯ.  ಮತ್ತಷ್ಟು ಓದು »

16
ಜುಲೈ

ಸಾಹಿತ್ಯಕ್ಷೇತ್ರದ ಒಳಹೊರಗು-6

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ

ಕನ್ನಡ ಸಾಹಿತ್ಯಸಾಹಿತ್ಯ ಕ್ಷೇತ್ರದ ಒಳಹೊರಗು – 1
ಸಾಹಿತ್ಯ ಕ್ಷೇತ್ರದ ಒಳಹೊರಗು – 2
ಸಾಹಿತ್ಯ ಕ್ಷೇತ್ರದ ಒಳಹೊರಗು – 3
ಸಾಹಿತ್ಯ ಕ್ಷೇತ್ರದ ಒಳಹೊರಗು – 4

ಸಾಹಿತ್ಯ ಕ್ಷೇತ್ರದ ಒಳಹೊರಗು – 5

ನಾವಿಂದು ಬಹುಶಿಸ್ತು, ಬಹುಜ್ಞಾನದ ಯುಗದಲ್ಲಿದ್ದೇವೆ. ಅದರಲ್ಲೂ ಇದು ವಿಶೇಷಜ್ಞತೆಯ ಕಾಲ. ಎಲ್ಲದಕ್ಕೂ ಸ್ಪೆಶಲೈಸೇಶನ್ ಇರಬೇಕೆಂದು ಬಯಸುತ್ತೇವೆ. ಉಳಿದೆಲ್ಲ ಕ್ಷೇತ್ರಗಳಂತೆ ಸಾಹಿತ್ಯವನ್ನೂ ಇದು ಆವರಿಸಿದೆ. ಇಂಥ ವಿಶೇಷಜ್ಞತೆಯಲ್ಲಿ ಲಾಭವೂ ಇದೆ, ನಷ್ಟವೂ ಇದೆ. ಆಧುನಿಕ ಶಿಕ್ಷಣ ವ್ಯವಸ್ಥೆ ಬ್ರಿಟಿಷರ ಬಳುವಳಿಯಾಗಿ ನಮಗೆ ಬರುವವರೆಗೂ ಎಲ್ಲ ಜ್ಞಾನವನ್ನೂ ತತ್ತ್ವಶಾಸ್ತ್ರದ ಅಡಿಯಲ್ಲೇ ಅಧ್ಯಯನ ಮಾಡಲಾಗುತ್ತಿತ್ತು. ಆಗ ಗಣಿತ, ಸಾಹಿತ್ಯ, ಇತಿಹಾಸ, ಭಾಷೆ ಎಂದು ಬೇರ್ಪಡಿಸಿ ನೋಡುವ ಕ್ರಮ ಇರಲಿಲ್ಲ. ಇದರಿಂದ ಭಿನ್ನ ಜ್ಞಾನಗಳು ಒಂದೇ ಮರದ ವಿವಿಧ ಶಾಖೆಗಳಂತೆ ಪರಸ್ಪರ ಸಂಬಂಧವಿಟ್ಟುಕೊಳ್ಳಲು ಹಾಗೂ ಆ ಮೂಲಕ ಎಲ್ಲ ವಿಷಯಗಳಲ್ಲೂ ಮಾಹಿತಿ ಸಮವಾಗಿಯೂ ಸಮಗ್ರವಾಗಿಯೂ ಇರಲು ಅನುಕೂಲವಾಗುತ್ತಿತ್ತು. ಉದಾಹರಣೆಗೆ ಸಾಹಿತ್ಯ ಅಧ್ಯಯನದಲ್ಲಿ ಪ್ರಾಚೀನ ಕವಿಯೊಬ್ಬನ ಇತಿವೃತ್ತ ಹೇಳುವಾಗ ಅದಕ್ಕೆ ಇತಿಹಾಸ, ಹಸ್ತಪ್ರತಿಶಾಸ್ತ್ರ ಹಾಗೂ ಶಾಸನಶಾಸ್ತ್ರಗಳ ನೆರವು ಬೇಕೇ ಬೇಕು. ಸಾಹಿತ್ಯದ ವಿದ್ಯಾರ್ಥಿಗೆ ಈಗ ಬೇರೆಯಾಗಿರುವ ಈ ಎಲ್ಲ ಶಾಸ್ತ್ರಗಳ ಅರಿವೂ ಅಪೇಕ್ಷಣೀಯ. ಈಗೀಗ ಏನಾಗುತ್ತಿದೆ ನೋಡೋಣ. ವಿಶ್ವವಿದ್ಯಾನಿಲಯವೊಂದರಲ್ಲಿ ಇತಿಹಾಸ ವಿಭಾಗದ ಸಮ್ಮೇಳನವೋ ವಿಚಾರ ಸಂಕಿರಣವೋ ಅಥವಾ ಗೋಷ್ಠಿಯೋ ನಡೆಯುತ್ತದೆ. ಅದರಲ್ಲಿ ಇತಿಹಾಸ ವಿಭಾಗದವರದ್ದೇ ಮಾತು-ಚರ್ಚೆ. ಸಾಹಿತ್ಯ, ಶಾಸನಶಾಸ್ತ್ರ ವಿಭಾಗದವರು ಬೇಕಿದ್ದರೆ ತಾವೇ ಅಂಥದ್ದೊಂದು ಸಮ್ಮೇಳನ ಆಯೋಜಿಸಿಕೊಳ್ಳಬೇಕು. ತಮ್ಮ ಸಮ್ಮೇಳನಕ್ಕೆ ಬರಬೇಡಿ ಎಂದು ಇತಿಹಾಸದವರೇನೂ ಹೇಳುವುದಿಲ್ಲ. ಹಾಗಾಗಿ ಆ ಸಮ್ಮೇಳನದಲ್ಲಿ ಪ್ರೇಕ್ಷಕರಾಗಿ ಕುಳಿತೆದ್ದುಬರಬಹುದು. ವಿಜಯನಗರ ಅರಸರ ಕುರಿತ ಸಮ್ಮೇಳನವನ್ನು ಇತಿಹಾಸ ವಿಭಾಗ ಆಯೋಜಿಸಿದರೆ ಅಲ್ಲಿ ಶಾಸನತಜ್ಞರು, ಸಾಹಿತಿಗಳು ಇರಬೇಕಾದುದು ಅಗತ್ಯ. ಇಲ್ಲವಾದಲ್ಲಿ ಶಾಸನದವರು ತಮ್ಮ ಪಾಡಿಗೆ ಶಾಸನ ಓದಿ ಪಠ್ಯ ಬರೆದಿಡುವುದು, ಸಾಹಿತ್ಯದವರು ವಿಜಯನಗರ ಕಾಲದ ಸಾಹಿತ್ಯವನ್ನು ಸುಮ್ಮನೇ ಓದಿ ಇಡುವುದು, ಇತಿಹಾಸದವರು ಲಭ್ಯ ಐತಿಹಾಸಿಕ ದಾಖಲೆಗಳ ಪ್ರಕಾರ ತಮ್ಮ ಪಾಡಿಗೆ ತಾವು ಆ ಕಾಲದ ವಿಷಯವನ್ನು ದಾಖಲಿಸುವುದು ನಡೆದರೆ ಒಂದೊಂದು ವಿಷಯದಲ್ಲಿ ಒಂದೊಂದು ಮಾಹಿತಿಯ ಜೊತೆಗೆ ಅಸಮಗ್ರತೆಗೆ ದಾರಿಯಾಗಬಹುದು.

ಮತ್ತಷ್ಟು ಓದು »

9
ಜುಲೈ

ಸಾಹಿತ್ಯ ಕ್ಷೇತ್ರದ ಒಳಹೊರಗು – 5

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ

ಕನ್ನಡ ಸಾಹಿತ್ಯಸಾಹಿತ್ಯ ಕ್ಷೇತ್ರದ ಒಳಹೊರಗು – 1
ಸಾಹಿತ್ಯ ಕ್ಷೇತ್ರದ ಒಳಹೊರಗು – 2
ಸಾಹಿತ್ಯ ಕ್ಷೇತ್ರದ ಒಳಹೊರಗು – 3
ಸಾಹಿತ್ಯ ಕ್ಷೇತ್ರದ ಒಳಹೊರಗು – 4

ಏನ ಬಂದಿರಿ, ಹದುಳವಿದ್ದಿರೆ ಎಂದೊಡೆ ನಿಮ್ಮ ಮೈಸಿರಿ ಹಾರಿ ಹೋಹುದೆ? ಎಂದು ಬಸವಣ್ಣನವರು ಅಂದೇ ಕೇಳಿದ್ದರು. ನಮ್ಮ ಜನರ ವರ್ತನೆಯನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು ಎನಿಸುತ್ತದೆ. ಮನೆಗೆ ಬಂದವರನ್ನು ಉಪಚರಿಸುವ ಸಂದರ್ಭದಲ್ಲಿ ಅವರು ಹೇಳಿದ ಜನರ ಸಣ್ಣತನದ ವರ್ತನೆ ಕುರಿತ ಈ ಮಾತಿನ ಆಶಯವನ್ನು ಬೇರೆ ಬೇರೆ ಕಡೆಗಳಲ್ಲೂ ಅನ್ವಯಿಸಬಹುದು. ಸಾಹಿತ್ಯ ಕ್ಷೇತ್ರದಲ್ಲಂತೂ ಇದಕ್ಕೆ ಮತ್ತೆ ಮತ್ತೆ ನಿದರ್ಶನಗಳು ದೊರೆಯುತ್ತವೆ. ಒಂದು ಘಟನೆ. ಸಮ್ಮೇಳನವೊಂದರಲ್ಲಿ ಹೊಸಬರೊಬ್ಬರು ಪ್ರಬಂಧ ಮಂಡಿಸಿದ್ದರು. ಉತ್ತಮ ಪ್ರಬಂಧವೆಂದು ಆ ಗೋಷ್ಠಿಯ ಅಧ್ಯಕ್ಷರೊಬ್ಬರು ಸಕಾರಣವಾಗಿ ವಿಶ್ಲೇಷಿಸಿ, ಅಭಿನಂದಿಸಿದರು. ಅದೇ ಪ್ರಬಂಧಕಾರರೊಂದಿಗೆ ಮತ್ತೆ ಮೂವರು ಪ್ರಬಂಧ ಮಂಡಿಸಿದ್ದರು. ಅವುಗಳಲ್ಲಿ ಒಂದು ಪ್ರಬಂಧ ನೀಡಲಾದ ವಿಷಯಕ್ಕೆ ಸಂಬಂಧವೇ ಇಲ್ಲದಂತಿದ್ದರೆ, ಮತ್ತೊಬ್ಬರು ಏನನ್ನೂ ಬರೆದುಕೊಂಡು ಬಂದಿರದೇ ಆಶುಕವಿತ್ವದಂತೆ ಅಲ್ಲೇ ತೋಚಿದ್ದನ್ನು ಒಂದಿಷ್ಟು ಹೇಳಿದ್ದರು. ಇನ್ನೊಬ್ಬರು ತಕ್ಕಮಟ್ಟಿಗೆ ವಿಷಯಕ್ಕೆ ನ್ಯಾಯ ಒದಗಿಸಿದ್ದರೆಂದು ಅಧ್ಯಕ್ಷತೆ ವಹಿಸಿದ್ದ ಹಿರಿಯರು ಹೇಳಿ ಅಂಥ ಗಂಭೀರ ಸಮ್ಮೇಳನಗಳಲ್ಲಿ ವಿಷಯ ಮಂಡನೆ ಹೇಗಿರಬೇಕೆಂದೂ ತಿಳಿಸಿದರು. ವೇದಿಕೆಯಿಂದ ಇಳಿದ ಮೇಲೆ ಉಳಿದ ಪ್ರಬಂಧಕಾರರು ಉತ್ತಮ ಪ್ರಬಂಧ ಮಂಡಿಸಿದ್ದ ವ್ಯಕ್ತಿಯನ್ನು ಅಭಿನಂದಿಸುವುದಿರಲಿ, ಸೌಜನ್ಯಕ್ಕೂ ಮಾತನಾಡಿಸದೇ ಆಜನ್ಮ ವೈರಿಯಂತೆ ಕಂಡು ಮುಖ ತಿರುಗಿಸಿಕೊಂಡು ಹೊರಟೇಹೋದರಂತೆ. ಅಧ್ಯಕ್ಷತೆ ವಹಿಸಿದ್ದವರಿಗೂ ಉತ್ತಮ ಪ್ರಬಂಧ ಮಂಡಿಸಿದ್ದವರಿಗೂ ಉಳಿದ ಪ್ರಬಂಧಕಾರರಿಗೂ ಮೊದಲು ಪರಿಚಯವೇ ಇರಲಿಲ್ಲ. ವೇದಿಕೆಯಲ್ಲೇ ಅವರೆಲ್ಲ ಮೊದಲಬಾರಿ ಮುಖ ನೋಡಿಕೊಂಡಿದ್ದು. ವಸ್ತುನಿಷ್ಠವಾಗಿ ಅಧ್ಯಕ್ಷರು ಹೇಳಿದ್ದರು ಅಷ್ಟೆ. ಆದರೆ ಅನಂತರ ಹೊರಗೆ ಖಾಸಗಿಯಾಗಿ ಉಳಿದ ಪ್ರಬಂಧಕಾರರು ಮಾತನಾಡುತ್ತ ಆ ಪ್ರಬಂಧ ಚೆನ್ನಾಗಿತ್ತು ಕಣ್ರೀ, ಅಲ್ಲೇ ಅವರಿಗೆ ಹೇಳಿದ್ದರೆ ಸುಮ್ಮನೇ ಅವರಿಗೆ ಸ್ಕೋಪು ಕೊಟ್ಟಂತಾಗುತ್ತದೆ ಎಂದು ಹೇಳಿಲ್ಲ ಅಷ್ಟೆ ಅಂದರಂತೆ! ಅದೇನೇ ಇರಲಿ. ಅಧ್ಯಕ್ಷತೆ ವಹಿಸಿದವರು ಹೇಳಿದ ಮಾತಿನಲ್ಲಿ ಹುರುಳಿರಲಿಲ್ಲ, ಅದೊಂದು ಕೆಟ್ಟ ಪ್ರಬಂಧವಾಗಿತ್ತು ಎಂದಾದರೆ ಅದರ ಚರ್ಚೆಗೆ ಅವಕಾಶವಿತ್ತು. ಆ ಕುರಿತು ಪ್ರಶ್ನೆಯೇ ಇರದಿದ್ದರೆ ಉತ್ತಮ ಪ್ರಬಂಧ ಮಂಡಿಸಿದವರನ್ನು ಅಭಿನಂದಿಸುವ ಔದಾರ್ಯವಾದರೂ ಬೇಡವೇ ಎಂಬುದು ಇಲ್ಲಿರುವ ಪ್ರಶ್ನೆ.

ಮತ್ತಷ್ಟು ಓದು »

30
ಜೂನ್

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭

‘ಆವರಣ’ ಎಂಬ ವಿ-ಕೃತಿ  —   ಸಂಗ್ರಹ : ಗೌರಿ ಲಂಕೇಶ್   (ಭಾಗ–೩)
————————————————————————
‘ಆವರಣ’ ಎಂಬ ವಿಕೃತಿ ವಿಮರ್ಶಾಸಂಕಲನದಲ್ಲಿ ಒಟ್ಟು ಇಪ್ಪತ್ತೊಂದು ಲೇಖನಗಳಿವೆ. ಇವುಗಳಲ್ಲಿ ಎಂಟು ಲೇಖನಗಳ ಬಗ್ಗೆ ಈಗಾಗಲೇ ಎರಡು ಭಾಗಗಳಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದಾಗಿದೆ. ಇನ್ನು ಉಳಿದಿರುವ ಹದಿಮೂರು ಲೇಖನಗಳು ಎರಡು ರೀತಿಯವು. (೧) ‘ಆವರಣ’ ಕಾದಂಬರಿಗೆ ನೇರವಾಗಿ ಸಂಬಂಧಿಸಿರುವಂತಹವು. (೨) ‘ಆವರಣ’ ಕಾದಂಬರಿಯನ್ನು ನೆಪ ಮಾತ್ರಕ್ಕೆ ಇಟ್ಟುಕೊಂಡು ಭೈರಪ್ಪನವರ ನಡೆ-ನುಡಿಗಳನ್ನು ಹೇಳುವಂತಹವುಗಳು.

‘ಆವರಣ’ ಕಾದಂಬರಿಗೆ ಸಂಬಂಧಿಸಿರುವಂತಹ ಲೇಖನಗಳಲ್ಲಿ ಸಹ ಈ ಹಿಂದಿನ ಎರಡು ಭಾಗಗಳಲ್ಲಿ ಚರ್ಚಿತವಾದ ವಿಷಯಗಳನ್ನು ಬಿಟ್ಟು ವಿಶೇಷವಾದ,ಹೊಸದಾದ ಅಂಶಗಳು ಇಲ್ಲ. ಆದ್ದರಿಂದ ಅವುಗಳ ಬಗ್ಗೆ ವಿವರವಾದ ಚರ್ಚೆ ಪುನರುಕ್ತಿಯಾಗುತ್ತದೆ. ಪುನರುಕ್ತಿಯಾಗದಂತಹ ಕೆಲವು ಅಂಶಗಳ ಬಗ್ಗೆ ಮಾತ್ರ ಈ ಭಾಗದಲ್ಲಿ ಒತ್ತು ನೀಡಲಾಗಿದೆ.

ಹಿಂದಿನದನ್ನೆಲ್ಲ ‘ಆವರಣ’ದಲ್ಲಿ ಪೇರಿಸುವ ಪ್ರಯತ್ನ ಲೇಖನ ಬರೆದಿರುವ ಬಿ. ಎಸ್. ವೆಂಕಟಲಕ್ಷ್ಮಿಯವರಿಗೆ  ‘…… ಕಾದಂಬರಿಯೊಂದನ್ನು ಉಲ್ಲಾಸಕ್ಕಾಗಿಯೋ ಅಥವಾ ತಮ್ಮ ವೈಚಾರಿಕತೆಯನ್ನು ಹಿಗ್ಗಿಸಿಕೊಳ್ಳುವ ಸಲುವಾಗಿಯೋ ಕೈಗೆತ್ತಿಕೊಳ್ಳುವ ಸಾಮಾನ್ಯ ಓದುಗರಿಗೆ ಕಾದಂಬರಿಯೊಂದು ಸಹಜವಾಗಿ ಓದಿಸಿಕೊಂಡಾಗ ಮಾತ್ರ ಒಂದು ಬಗೆಯ ತೃಪ್ತಿ …….. ಸಾರ್ಥಕ ಭಾವನೆ ಮೂಡುತ್ತದೆ……… ‘ಆವರಣ’ದಲ್ಲಿ ಯಾವೊಂದು ಕಥೆಯನ್ನೂ ಸುಸೂತ್ರವಾಗಿ ಹೇಳದೆ ಅಹಿತಕರ ಘಟನೆಗಳಿಗೆ ಮಾತ್ರ ಒತ್ತುಕೊಟ್ಟಿದೆ ‘ ಎಂಬ ಅಸಮಾಧಾನ. ಉಲ್ಲಾಸ, ಸುಸೂತ್ರವಾದ ಕಥೆ ಇವುಗಳ ಜತೆ ವೈಚಾರಿಕತೆಯನ್ನೂ ಬಯಸುವುದು ತೀರಾ ದುಬಾರಿಯಾಗುತ್ತದೆ. ಕಾದಂಬರಿಯೊಂದರಲ್ಲಿ ‘ವೈಚಾರಿಕತೆ’ ಎಂಬುದು ವಿಶಾಲ ವ್ಯಾಪ್ತಿಯ ಚರ್ಚೆಯನ್ನು ಬೇಡುವಂತಹುದು. ಈಗಾಗಲೇ ಭೈರಪ್ಪನವರ ಮೇಲೆ  ಅವರು  ತಮ್ಮ’ ವೈಚಾರಿಕತೆ ‘ಯನ್ನು ಓದುಗರಿಗೆ ಹೇಳುವುದುಕ್ಕೊಸ್ಕರ  ಕಾದಂಬರಿಯನ್ನು ಒಂದು ಸಾಧನವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪ ನಮ್ಮ ಸಾಹಿತ್ಯವಲಯದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಓದುಗ ಬಯಸುವ ‘ವೈಚಾರಿಕತೆ’ ಯಾವ ರೀತಿಯದು ಎಂಬುದು ಸ್ಪಷ್ಟವಾಗಿಲ್ಲ. ‘ಆವರಣ’ದಮಟ್ಟಿಗೆ ಹೇಳುವುದಾದರೆ ವೆಂಕಟಲಕ್ಷ್ಮಿ ಅವರ ದೃಷ್ಟಿಯಲ್ಲಿ ಅಹಿತಕರ ಘಟನೆಗಳನ್ನು ಹೇಳುವುದು ವೈಚಾರಿಕತೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ಕಾದಂಬರಿಯೊಂದರ ಓದು ಕಾಲ ಕಳೆಯಲು ಅಲ್ಲ ಎಂದು ಭಾವಿಸಿರುವವರಿಗೆ ವೆಂಕಟಲಕ್ಷ್ಮಿ ಅವರ ವಿಚಾರಗಳು ತೀರಾ ತೆಳುವಾದವುಗಳು ಎಂದು ಅನಿಸುತ್ತದೆ.

ಮತ್ತಷ್ಟು ಓದು »

23
ಜೂನ್

ಸಾಹಿತ್ಯಕ್ಷೇತ್ರದ ಒಳಹೊರಗು – 4

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ

ಡಿವಿಜಿ ಹೇಳಿದರು: ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಗಸು! ಎಂಥಾ ಮಾತು! ಇದನ್ನು ಸಮಾಜ-ಕುಟುಂಬ ಸೇರಿದಂತೆ ಯಾವ ಕ್ಷೇತ್ರಕ್ಕೂ ಅನ್ವಯಿಸಬಹುದು. ಹಾಗೆಯೇ ಸಂಗೀತ, ಸಾಹಿತ್ಯಕ್ಕೂ ಅನ್ವಯಿಸಿ ನೋಡಬಹುದು. ಇದರಿಂದ ನಿರಾಸೆ ಕಾದಿದ್ದರೂ ಅಚ್ಚರಿ ಇಲ್ಲ.

ಮೈಸೂರಿನಲ್ಲಿ ವರ್ಷಗಳ ಹಿಂದೆ ಒಂದು ಕಾರ್ಯಕ್ರಮ. ಖ್ಯಾತ ನೃತ್ಯಗುರು, ಹಿರಿಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿ ಅವರಿಗೆ ಶಿಷ್ಯವೃಂದದಿಂದ ಅಭಿನಂದನೆ. ಆಮೇಲೆ ಅವರು ಮಾತನಾಡುತ್ತ, ನನ್ನ ಬಳಿ ಭರತ ನಾಟ್ಯ ಕಲಿಯಲು ಉತ್ಸಾಹದಿಂದಲೇ ಹೊಸಬರು ಬರುತ್ತಾರೆ. ನಾಲ್ಕಾರು ಹೆಜ್ಜೆಗಳನ್ನು, ಒಂದಿಷ್ಟು ಅಂಗಾಭಿನಯ ಕಲಿತು ವಿದೇಶಕ್ಕೆ ಹೋಗಿಬಿಡುತ್ತಾರೆ. ಹಣ ಮಾಡುವ ಹುಮ್ಮಸ್ಸು. ನಾಟ್ಯ, ನಟುವಾಂಗಗಳ ಬಗ್ಗೆ ಸಮಗ್ರ ಪರಿಜ್ಞಾನ ಪಡೆಯುವ ವ್ಯವಧಾನವೇ ಇಂದಿನ ತಲೆಮಾರಿನಲ್ಲಿ ಇಲ್ಲ ಎಂದು ಹೇಳಿದರು. ಅಸಾಧಾರಣ ಕಲಾವಿದೆಯಾದ ಅವರು ವಿಷಾದದಿಂದಲೇ ಈ ಮಾತು ಹೇಳಿದ್ದರು. ಕಲಿಕೆಯಲ್ಲಿನ ಶ್ರದ್ಧೆ ಕುರಿತ ಇದೇ ಮಾತು ಸಾಹಿತ್ಯಕ್ಕೂ ಸಲ್ಲುತ್ತದೆ. ಸಾಹಿತ್ಯ ಕ್ಷೇತ್ರ ಪ್ರವೇಶಿಸುವವರೆಲ್ಲ ವಿದೇಶಕ್ಕೆ ಹೋಗಿಬಿಡುವುದಿಲ್ಲ. ಕನ್ನಡ ಸಾಹಿತ್ಯ ಓದುದವವರ ಕಾರ್ಯವ್ಯಾಪ್ತಿಯೂ ದೇಶ, ಭಾಷೆಗಳ ಕಾರಣದಿಂದ ಸೀಮಿತವಾಗಿಹೋಗಿದೆ; ಅಥವಾ ಹಾಗೆ ಭಾವಿಸಲಾಗಿದೆ; ಅಥವಾ ತಮಗೆ ತಾವೇ ಮಿತಿಯನ್ನು ಇವರೇ ವಿಧಿಸಿಕೊಂಡುಬಿಡುತ್ತಾರೆ. ಸ್ನಾತಕೋತ್ತರ ಪದವಿ ಅಥವಾ ಪಿಎಚ್.ಡಿ ಪದವಿಯಲ್ಲಿ ಭಾಷಾ ಪ್ರಯೋಗವನ್ನು ಅರ್ಧಂಬರ್ಧ ಕಲಿತು ತಾವು ಚಿಂತಕರೆಂದೋ ಸಾಹಿತಿಗಳೆಂದೋ ಇಲ್ಲವಾದಲ್ಲಿ ಕೊನೆಗೆ ಲೇಖಕರೆಂದೋ ಬೋರ್ಡು ಹಾಕಿಕೊಂಡೇಬಿಡುತ್ತಾರೆ. ಜೊತೆಗೆ ಪತ್ರಿಕೆ, ಟಿವಿ ಕಾರ್ಯಕ್ರಮ ಇತ್ಯಾದಿಗಳ ಲಾಬಿ ಶುರು ಮಾಡಿ ಪ್ರಚಾರದ ಹಿಂದೆ ಹೋಗುತ್ತಾರೆ. ಅಲ್ಲಿಗೆ ಅವರ ಕಲಿಕೆ ಮುಗಿದಂತೆ. ಹಳೆಯದನ್ನು ತಿರುಗಿಯೂ ನೋಡದೇ ಹೊಸದನ್ನು ಅರಗಿಸಿಕೊಳ್ಳದೇ ಕಲಿತಷ್ಟೇ ವಿದ್ಯೆಯನ್ನು ತಿರುಚುತ್ತ ಚಾಲ್ತಿಯಲ್ಲಿ ಇರಲು ಬಯಸುತ್ತಾರೆ. ಇದು ಯುವ ಸಾಹಿತ್ಯಾಸಕ್ತರ ಒಂದು ಮುಖ.

ಮತ್ತಷ್ಟು ಓದು »