ನನ್ನ ಊಟದ ಮೆನು ನಿರ್ಧರಿಸಲು ನೀವ್ಯಾರು?
– ರಾಕೇಶ್ ಶೆಟ್ಟಿ
ಕುಡಿಯುವ ನೀರು ಕೇಳಿದಾಗ “ನೀರು ಕೊಟ್ಟರೆ ನನ್ನ ಜಾತಿ ಕೆಡುತ್ತದೆ” ಅಂದ ಮಂಗಲ್ ಪಾಂಡೆಗೆ, “ಸ್ವಲ್ಪ ಇರು,ದನದ ಕೊಬ್ಬು ಹಚ್ಚಿರುವ ಕಾಡತೂಸು ಕಚ್ಚಲು ಹೇಳುತ್ತಾರೆ,ಆಮೇಲೆ ನಿನ್ನ ಜಾತಿ ಅದೇನಾಗುತ್ತೋ ನಾನು ನೋಡುತ್ತೇನೆ” ಅಂದಿದ್ದ ಆ ಕೆಳ ಜಾತಿಯ ಹುಡುಗ.ಮೊದಲೆ ಈ ಕಾಡತೂಸಿನ ಗುಸು-ಗುಸಿಗೆ ಗಾಯಗೊಂಡಿದ್ದವನಿಗೆ ಉಪ್ಪು ಸವರಿದಂತಾಗಿತ್ತು ಹುಡುಗನ ಮಾತು,ಕಡೆಗದು ’ಬ್ಯಾರಕ್ ಪುರ’ದಲ್ಲಿ ಕ್ರಾಂತಿಯ ಕಿಡಿಯಾಗಿ ಭಾರತವನ್ನ ವ್ಯಾಪಿಸಿಕೊಂಡಿತ್ತು.ಇತಿಹಾಸ ಅದಕ್ಕೆ ಕೊಟ್ಟ ಹೆಸರು “೧೮೫೭ರ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ’.
೧೭೫೭ರಲ್ಲಿ ಪ್ಲಾಸಿ ಕದನದ ನಂತರ ಭಾರತವನ್ನ ಇಡಿಯಾಗಿ ಆಪೋಶನ ತೆಗೆದುಕೊಂಡ ಬ್ರಿಟಿಶರಿಂದ ತೆಪ್ಪಗೆ ಆಳಿಸಿಕೊಳ್ಳುತಿದ್ದ ಭಾರತದ ಸತ್-ಪ್ರಜೆಗಳ ಎದೆಯೊಳಗಿನ ನೋವಿನ ಜ್ವಾಲಾಮುಖಿ ಸ್ಫೋಟವಾಗಲು ಕಾರಣವೊಂದು ಬೇಕಿತ್ತು,ಕಾರಣವಾಗಿ ಬಂದದ್ದು ದನದ ಮತ್ತು ಹಂದಿಯ ಕೊಬ್ಬು ಸವರಿದ ಎನ್-ಫಿಲ್ಡ್ ಬಂದೂಕು..!
ಹೌದು.ಭಾರತದ ಸತ್-ಪ್ರಜೆಗಳೇ ಹಾಗೆ ಹೊಟ್ಟೆಗೆ ಅನ್ನ,ತಲೆಗೊಂದು ಸೂರು ಕೊಡದ ಸರ್ಕಾರವಾದರೂ ಸರಿ,ಕೋಟಿಗಟ್ಟಲೆ ಹಣ ಲೂಟಿ ಮಾಡಿದರೂ ಸರಿ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.ಆದರೆ ಧರ್ಮದ ವಿಚಾರಕ್ಕಿಳಿದಿರೋ ಅಲ್ಲಿಗೆ ಮುಗಿಯಿತು..! ಇದು ಕೇವಲ ಇತಿಹಾಸದ ಕತೆಯಲ್ಲ,ತೀರಾ ಕಳೆದ ವರ್ಷ ತಸ್ಲೀಮಾ ನಸ್ರೀನ್ ಅವರು ಬರೆದ ಲೇಖನ (ಎಂದು ಹೇಳಲಾದ )ಪ್ರಕಟವಾದಾಗ ಶಿವಮೊಗ್ಗ-ಹಾಸನದಲ್ಲಿ ಏನಾಗಿತ್ತು ಅನ್ನುವುದು ನೆನಪಿದೆಯಲ್ವಾ?
ಕಳೆದ ಒಂದು ವರ್ಷಗಳಿಂದಲೂ ರಾಜ್ಯದಲ್ಲಿ ಸದ್ದು ಮಾಡುತ್ತಿರುವುದು ’ಗೋ-ಹತ್ಯೆ ನಿಷೇಧ’ ಮಸೂದೆ.ಸಾಕಷ್ಟು ಚರ್ಚೆಗಳು,ವಾದಗಳು ನಡೆದಿವೆ.ಬಹುಷಃ ಅದು ಎಂದಿಗೂ ಮುಗಿಯಲಾರದು.