ಅನಂತದಿಂದ ಸೊನ್ನೆಯವರೆಗೆ: ಸಂಖ್ಯೆಗಳ ಸಂಕ್ಷಿಪ್ತ ಚರಿತ್ರೆ
– ರೋಹಿತ್ ಚಕ್ರತೀರ್ಥ
ಒಂದಾನೊಂದು ಕಾಲ ಇತ್ತು. ಮನುಷ್ಯ ಪ್ರಾಣಿಜಗತ್ತಿನ ಉಳಿದ ಜೀವರಾಶಿಗಿಂತ ಕೊಂಚ ಭಿನ್ನನಾಗಿ, ಚತುಷ್ಪಾದಗಳ ಅವಲಂಬನೆಯಿಂದ ಹೊರಬಂದು, ಎರಡು ಕಾಲಿನಲ್ಲಿ ನಿಂತು ಬ್ಯಾಲೆನ್ಸ್ ಮಾಡುತ್ತ ನಡೆಯಲು ತೊಡಗಿದ್ದ ಕಾಲ. ಹಾಗೆ ಓಲಾಡುತ್ತ ಡ್ಯಾನ್ಸ್ ಮಾಡುತ್ತ ಕೊನೆಗೊಂದು ದಿನ ದೃಢವಾಗಿ ನಿಲ್ಲಬಲ್ಲ ತಾಕತ್ತು ಗಳಿಸಿಕೊಂಡವನಿಗೆ ದೃಷ್ಟಿ ಹೋದದ್ದು ಆಕಾಶದತ್ತ. ರಾತ್ರಿ ಹೊತ್ತಲ್ಲಿ ಅಲ್ಲಿ ಮಿನುಗುವ ಚುಕ್ಕಿಗಳೆಷ್ಟು! ಸಂಜೆಯಾದರೆ ಹಾರುವ ಹಕ್ಕಿಗಳೆಷ್ಟು! ಬೇಸಗೆಯಲ್ಲಿ ತೇಲುವ ಬಿಳಿ ಮೋಡಗಳೆಷ್ಟು! ಮಳೆಗಾಲದಲ್ಲಿ ಫಳಾರನೆ ಹೊಳೆದು ಮರೆಯಾಗುವ ಮಿಂಚುಗಳೆಷ್ಟು! ಇವುಗಳನ್ನೆಲ್ಲ ನೋಡುತ್ತಿದ್ದವನಿಗೆ ಅವುಗಳೆಲ್ಲ ಎಷ್ಟು ಎಷ್ಟು ಎಷ್ಟು ಎನ್ನಿಸುತ್ತ ಆಶ್ಚರ್ಯವಾಗುತ್ತಿತ್ತೇ ಹೊರತು ನಿಜವಾಗಿಯೂ ಎಷ್ಟಿವೆ ಎಂಬ ಅಂದಾಜು ಮಾತ್ರ ಸಿಕ್ಕಿರಲಿಲ್ಲ. ಯಾಕೆಂದರೆ ಆ ಕಾಲದ ಮನುಷ್ಯನಿಗೆ “ಲೆಕ್ಕ ಮಾಡುವುದು” ಎಂಬ ಪರಿಕಲ್ಪನೆಯೇ ಹುಟ್ಟಿರಲಿಲ್ಲ! ಹೀಗೆಯೇ ದಿನಗಳು ಸರಿಯುತ್ತಿದ್ದಾಗ ಆ ಆದಿಮಾನವ ಒಂದು ವಿಚಿತ್ರ ಕಂಡ. ಆಕಾಶದಲ್ಲಿ ಚಂದ್ರ ರೊಟ್ಟಿಯಂತೆ ದುಂಡಗಿದ್ದವನು ದಿನ ಹೋದಂತೆ ಕರಗುತ್ತಾ ಕರಗುತ್ತಾ ಹೋಗಿ ಒಂದು ದಿನ ಮಾಯವಾಗಿಬಿಡುತ್ತಾನೆ. ಅಂದು ಕಾಡೆಲ್ಲ ಗಾಢಾಂಧಕಾರ! ಕಾರ್ಗತ್ತಲೆ! ಅದರ ಮರುದಿನದ ರಾತ್ರಿ ಸಣ್ಣಗೆ ಬೆಳ್ಳಿಯ ಸರಿಗೆಯಂತೆ ಮತ್ತೆ ಮೂಡಿದವನು ಚಾಪೆ ಬಿಡಿಸಿದಂತೆ ದೊಡ್ಡವನಾಗುತ್ತಾ ಬಂದು ಕೊನೆಗೊಂದು ದಿನ ಪೂರ್ಣಾವತಾರಿಯಾಗುತ್ತಾನೆ. ಅಂದು ಕಾಡೆಲ್ಲ ಬೆಳ್ಳಂಬೆಳಕು! ತರುಲತೆಗಳ ನಡುವಲ್ಲಿ ತೂರಿಕೊಂಡಾದರೂ ಬಂದು ನೆಲಮುಟ್ಟುವ ಹಾಲು ಬೆಳುದಿಂಗಳು! ಹೀಗೆ ಚಂದ್ರ ಉರುಟಾಗುವುದಕ್ಕೂ ಪೂರ್ತಿಯಾಗಿ ಕಾಣೆಯಾಗುವುದಕ್ಕೂ ನಡುವಿನ ಅವಧಿ ಕರಾರುವಾಕ್ಕಾಗಿ ಒಂದೇ ರೀತಿ ಇದೆ ಎನ್ನುವುದು ಮನುಷ್ಯನಿಗೆ ನಿಧಾನವಾಗಿ ತಿಳಿಯುತ್ತ ಹೋಯಿತು. ಬದುಕೆಲ್ಲ ಕಾಡಲ್ಲೇ ಕಳೆದುಹೋಗುತ್ತಿದ್ದುದರಿಂದ, ಚಂದ್ರನ ಇಂಥ ಬದಲಾವಣೆಗಳನ್ನು ಗುರುತು ಮಾಡಿಟ್ಟುಕೊಳ್ಳುವುದು ಅವನಿಗೆ ಮುಖ್ಯವೂ ಆಗಿತ್ತು. ಚಂದ್ರ ಮಾಯವಾಗುವ ದಿನವನ್ನು ಅವನು ಅಮವಾಸ್ಯೆ ಎಂದು ಕರೆದ. ಪೂರ್ತಿಯಾಗಿ ಬೆಳಗುವ ದಿನವನ್ನು ಹುಣ್ಣಿಮೆ ಎಂದ. ಅಮವಾಸ್ಯೆಗಳಂದು ಕಾಡಿನಲ್ಲಿ ಅಲೆದಾಡುವುದನ್ನು ತಪ್ಪಿಸಿಕೊಂಡ. ಹುಣ್ಣಿಮೆಯ ಬೆಳಕಲ್ಲಿ ಗುಂಪು ಸೇರಿ ಕುಣಿಯುತ್ತ ಹಾಡು ಹಾಡುವ, ಊಟ ಬೇಯಿಸುವ ಕಾರ್ಯಕ್ರಮಗಳನ್ನು ಇಟ್ಟುಕೊಂಡ. ನಾವಿಂದು ಸಂಸ್ಕೃತಿ ಎಂದು ಕರೆಯುವ ಎಲ್ಲವೂ ಹೀಗೆ ನಿಧಾನವಾಗಿ ಕಣ್ಣುಬಿಟ್ಟವು. ಮತ್ತಷ್ಟು ಓದು