ವಿಷಯದ ವಿವರಗಳಿಗೆ ದಾಟಿರಿ

Archive for

25
ಸೆಪ್ಟೆಂ

ಕನ್ನಡ ಸಾರಸ್ವತ ಲೋಕಕ್ಕೊಂದು ಹೊಸ ಓದು

ಶ್ರೀಪಾದ್ ಭಟ್

ಈಗ ಲೇಖಕರಾದ, ಬ್ಲಾಗರ್ ಆದ ಮಿತ್ರ ರಾಕೇಶ ಶೆಟ್ಟರು ಹೊಸ ಓದನ್ನು ಕೊಟ್ಟಿದ್ದಾರೆ. ಕೃತಿಯ ಹೆಸರು’ ಮುಚ್ಚಿಟ್ಟ ಕರ್ನಾಟಕದ ಚರಿತ್ರೆ’. ಯಾಕೆ ಇದು ಹೊಸ ಓದು ಅಂದರೆ – ಇದು ಇತಿಹಾಸದ ಹೊಸ ಓದು. ಇದುವರೆಗೆ ಶಾಲೆ ಕಲಿತ ನಾವು ಯಾರೂ ಕೇಳಿರದ ಇತಿಹಾಸದ ಸಂಗತಿಗಳು ಇರುವುದರಿಂದ.

ನಮ್ಮಲ್ಲಿನ ಅಂದರೆ ನಮ್ಮ ದೇಶದ ಸಮಸ್ಯೆ ಇರುವುದೇ ಇಲ್ಲಿ- ಇತಿಹಾಸದಲ್ಲಿ. ನಮ್ಮ ದೇಶಕ್ಕೆ ಆಧುನಿಕ ಇತಿಹಾಸ ಅಥವಾ ಚರಿತ್ರೆ ಕೊಟ್ಟವರು ಬ್ರಿಟಿಷರು. ಅದನ್ನು ಹೇಗೆ ನೋಡಬೇಕು, ಯಾವುದು ಇತಿಹಾಸ ಅನಿಸಿಕೊಳ್ಳುತ್ತದೆ. ಅದಕ್ಕೆ ಆಧಾರಗಳು ಯಾವುವು ಎಂಬುದನ್ನೂ ತಿಳಿಸಿದವರೂ ಅವರೇ. ಅದನ್ನೇ ನಾವು ಉರು ಹೊಡೆದು ಮುಂದುವರೆಸಿಕೊಂಡು ಶಿರಸಾವಹಿಸಿ ಪಾಲಿಸಿಕೊಂಡುಬರುತ್ತಿದ್ದೇವೆ. ಅದಕ್ಕೆ ವಿರುದ್ಧವಾದ ಅಥವಾ ಪ್ರತಿಯಾದ ಸಾಲುಗಳನ್ನು ನಾವು ಒಪ್ಪಲು ತಯಾರಿಲ್ಲ ಎಂಬಂತೆ ನಮ್ಮನ್ನು ನಮ್ಮ ಶಾಲಾ ವ್ಯವಸ್ಥೆ ಅಣಿಗೊಳಿಸಿ ಕೃತಾರ್ಥವಾಗಿದೆ.ಆದರೆ ಈಚೆಗೆ ಈ ದೃಷ್ಟಿಕೋನ ಬದಲಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಕಾರಣದಿಂದ ಸಾಮಾಜಿಕ ಜಾಲ ತಾಣಗಳ ಪ್ರಾಚುರ್ಯದಿಂದ ಜನರ ವಿವಿಧ ಬಗೆಯ ಅಭಿಪ್ರಾಯಗಳಿಗೆ ವೇದಿಕೆಗಳು ಸಾರ್ವಜನಿಕವಾಗಿ ದೊರೆಯುತ್ತಿದೆ. ಈ ಮೊದಲು ಪರಿಸ್ಥಿತಿ ಹೀಗೆ ಇರಲಿಲ್ಲ. ಸಾರ್ವಜನಿಕ ವೇದಿಕೆಯ ಜೊತೆಗೆ ಅಲ್ಲಿ ಹೇಳಬೇಕಾದ ವಿಷಯಗಳಿಗೂ ನಿರ್ದಿಷ್ಟ ದಿಕ್ಕು ದೆಸೆ, ನಿಯಂತ್ರಣ ಇರುತ್ತಿತ್ತು. ಈ ನಿಯಂತ್ರಣವನ್ನು ಕೂಡ ಯಾರು ಹೇಗೆ ಎಂಬುದೂ ನಿರ್ಧಾರವಾಗಿರುತ್ತಿತ್ತು. ಅಭಿಪ್ರಾಯ ಸ್ವಾತಂತ್ರ್ಯ ಮುಕ್ತತೆಗಳು ಮಾತಲ್ಲಿ ಮಾತ್ರ ಇತ್ತು ಅಂದರೂ ತಪ್ಪಿಲ್ಲ. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಿಯಂತ್ರಿತ ಮಾಧ್ಯಮಗಳು ಮೂಲೆ ಸೇರಿವೆ. ಸಾಮಾಜಿಕ ಮಾಧ್ಯಮ ಮುಕ್ತತೆ ಕೊಟ್ಟಿದೆ. ಹೀಗಾಗಿ ಜನರ ಅಭಿಪ್ರಾಯಕ್ಕೆ ಒಂದಲ್ಲ ಒಂದು ವೇದಿಕೆ ಸಾರ್ವಜನಿಕವಾಗಿ ಲಭಿಸಿ ಮುಕ್ತ ಚರ್ಚೆ ಆಗುತ್ತದೆ. ಲೆಕ್ಕವಿಲ್ಲದಷ್ಟು ಜನ ತಮ್ಮ ಮಾತನ್ನು ಹೇಳಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಹಿಂದೆ ಹತ್ತಿಕ್ಕಿದ್ದ ಮಾತು, ವಿಷಯಗಳೆಲ್ಲ ಎಲ್ಲ ಕ್ಷೇತ್ರಗಳಿಂದಲೂ ಹೊರಬರುತ್ತಿವೆ. ನಮ್ಮೆಲ್ಲರನ್ನೂ ಬೇಗ ಪ್ರಭಾವಿಸುವ ಹಾಗೂ ಕಾಡುವ ಇತಿಹಾಸ ಇಂಥ ವಿಷಯಗಳಲ್ಲಿ ಒಂದು. ಬೇರೆ ಬೇರೆ ಈ ಮೊದಲು ಚರಿತ್ರೆ ಅಥವಾ ಇತಿಹಾಸದ ಬಗ್ಗೆ ಅದರ ಪಂಡಿತರು ಅನಿಸಿಕೊಂಡವರು ಅದರಲ್ಲೂ ಎಲ್ಲವನ್ನೂ ತಮ್ಮ ನಿಲುವು, ಸಿದ್ಧಾಂತಗಳ ಮೂಲಕ ಪ್ರತಿಪಾದಿಸುತ್ತಿದ್ದ ರೋಮಿಲಾಥಾಪರ್ ಅವರಂಥವರು ಮಾತ್ರ ಮಾತನಾಡಬಹುದಿತ್ತು. ಆದರೆ ಇಂದು ಇತಿಹಾಸದ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಯಾರು ಬೇಕಾದರೂ ಮಾತನಾಡಬಹುದು. ಏಕೆಂದರೆ ಇಂದು ಯಾರು ಮಾತನಾಡುತ್ತಾರೆಂಬುದಕ್ಕಿಂತಲೂ ಏನು ಮಾತನಾಡುತ್ತಿದ್ದಾರೆಂಬುದು ಮುಖ್ಯವಾಗುತ್ತದೆ. ಆದ್ದರಿಂದಲೇ ಇತಿಹಾಸದಂಥ ವಿಷಯದ ಬಗ್ಗೆ ಇಂದು ಹೊಸ ತಲೆಮಾರಿನ ವಿಕ್ರಂ ಸಂಪತ್, ಅಭಿಜಿತ್ ಚಾವ್ಡಾರಂಥ ಹೊಸ ಯುವ ವಿದ್ವಾಂಸರು ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಜೊತೆಗೆ ನಮ್ಮ ಯಾವುದೇ ವಿಷಯದ ಬಗ್ಗೆ ಹತ್ತಾರು ಮೂಲಗಳಿಂದ ವಿಷಯ ಹೊರತೆಗೆದು ಚರ್ಚಿಸಬಹುದಾಗಿದೆ. ಇಲ್ಲಿ ರಾಕೇಶ್ ಶೆಟ್ಟರು ಕೂಡ ಇಂಥ ಯತ್ನವನ್ನು ಮಾಡಿದ್ದಾರೆ. ಅವರ ವೃತ್ತಿ ತಂತ್ರಜ್ಞಾನ, ಆಸಕ್ತಿ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಇತ್ಯಾದಿ. ತಮ್ಮ ಆಸಕ್ತಿಯನ್ನು ಈ ಕೃತಿಯಲ್ಲಿ ಸಾಧಿಸಿಕೊಳ್ಳಲು ಏನೆಲ್ಲ ಶ್ರಮಪಡಬೇಕಾಯಿತು ಎಂಬುದನ್ನು ಲೇಖಕರು ಇದರಲ್ಲಿ ದಾಖಲಿಸಿದ್ದಾರೆ. ತಾವು ಯಾವ ಕಾರಣಕ್ಕೆ ಈ ಕೆಲಸಕ್ಕೆ ಕೈ ಹಾಕಬೇಕಾಯಿತು ಎಂಬುದನ್ನೂ ಹೇಳಿದ್ದಾರೆ. ಅಷ್ಟೇ ನಮ್ರವಾಗಿ ಇದು ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯೇ ವಿನಾ ಇದೇ ಸಂಪೂರ್ಣ ಸತ್ಯ ಎಂದಲ್ಲವೆಂದು ಹೇಳಿದ್ದಾರೆ.

ಹೌದು. ನಿಸರ್ಗದಲ್ಲಿ ಎಲ್ಲವೂ ಬದಲಾಗುವಂತೆ ನಮ್ಮ ದೃಷ್ಟಿಯೂ ಬದಲಾಗುತ್ತದೆ. ಇತಿಹಾಸದ ಬಗ್ಗೆ ಇಂದು ಆಗಿರುವುದೂ ಅದೇ.ನಮಗೆ ಪಾಶ್ಚಾತ್ಯರು ಹೇಳಿಕೊಟ್ಟ ಇತಿಹಾಸ ಕಾಲಿಟ್ಟ ಕಡೆಯಲ್ಲೆಲ್ಲ ಘರ್ಷಣೆ ಆಗುತ್ತದೆ, ಶಾಂತಿ ನೆಲೆಸುವುದು ಕಷ್ಟವಾಗುತ್ತದೆ. ದಾಖಲೆಗಳು ದೊರೆತಂತೆ ಇತಿಹಾಸ ಮಾತಾಡುತ್ತಲೇ ಹೋಗುತ್ತದೆ. ಅಲ್ಲಿ ಮೌನ ಇರುವುದಿಲ್ಲ. ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಬ್ರಿಟಿಷ್ ಪೂರ್ವದಲ್ಲಿ ನಮ್ಮ ಸಮಾಜದಲ್ಲಿ ಗತ ಇತ್ತು. ಅದು ಕಾಲಾತೀತವಾಗಿದ್ದು ಅದನ್ನು ನಾವು ಜೀವಿಸುತ್ತಿದ್ದೆವು. ಅದರಲ್ಲಿ ನಂಬಿಕೆ ಮತ್ತು ಶ್ರದ್ಧೆಗಳಿದ್ದವು, ಆಚರಣೆ, ಸಂಪ್ರದಾಯಗಳನ್ನು ಅದು ಬೆಳೆಸಿತ್ತು. ಆದರೆ ಪಾಶ್ಚಾತ್ಯ ಹಿಸ್ಟರಿಯ ಚಿಂತನೆ ಹಾಗೂ ದೃಷ್ಟಿಕೋನ ಬಂದಮೇಲೆ ಎಲ್ಲವನ್ನೂ ಪ್ರಶ್ನಿಸುವ, ಶ್ರದ್ಧೆಯನ್ನು ಅಲುಗಾಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯತೊಡಗಿತು. ಇದರಿಂದ ಸಾಮಾಜಿಕ ಶಾಂತಿ ಮತ್ತು ನೆಮ್ಮದಿಗಳು ಇಲ್ಲವಾದವು. ಪಾಶದಚಾತ್ಯ ಹಿಸ್ಟರಿಯ ದೃಷ್ಟಿ ನಮ್ಮಲ್ಲಿ ನುಸುಳುವವರೆಗೂ ರಾಮಾಯಣ ಮತ್ತು ಮಹಾಭಾರತಗಳಂಥ ಗ್ರಂಥಗಳ ಯಾವ ವಿವರಗೂ ವಿವಾದಕ್ಕೆ ಆಸ್ಪದ ಮಾಡಿರಲಿಲ್ಲ. ಆದರೆ ಇಂದು ಅವುಗಳ ಸಣ್ಣಪುಟ್ಟ ವಿಚಾರಗಳೂ ಗದ್ದಲಕ್ಕೆ ಕಾರಣವಾಗುತ್ತಿವೆ. ಅದು ರಾಮಸೇತು, ಮಹಾಭಾರತ ಯುದ್ಧ ನಡೆದಿದ್ದು ನಿಜವಾ ಇತ್ಯಾದಿ ಆಗಿರಬೇಕಿಲ್ಲ. ಗಾಂಧಾರ, ಥುರಾ ಇವೆಲ್ಲ ಇಂದು ಎಲ್ಲಿವೆ ಕುರುಕ್ಷೇತ್ರ ಯುದ್ಧದಲ್ಲಿ ಅಷ್ಟುಜನ ಹೊಡೆದಾಡುವಷ್ಟು ಜಾಗ ಎಲ್ಲಿತ್ತು ಇತ್ಯಾದಿ ಏನು ಬೇಕಾದರೂ ಆಗಬಹುದು. ಪಾಶ್ಚಾತ್ಯ ಹಿಸ್ಟರಿ ದೃಷ್ಟಿ ನಮ್ಮ ಶ್ರದ್ಧೆ ಮತ್ತು ನಂಬಿಕೆಗಳನ್ನು ಮತ್ತೆ ಮತ್ತೆ ಘಾಸಿಗೊಳಿಸುತ್ತಿದೆ.ಅದು ಅಯೋಧ್ಯೆ ಆಗಲಿ, ಆಗ್ರಾ ಆಗಲಿ, ಯಾವುದೇ ಜಾಗವಾಗಲಿ, ವ್ಯಕ್ತಿ ಆಗಲಿ ಇವೆಲ್ಲಕ್ಕೂ ಹಿಸ್ಟರಿಯಲ್ಲಿ ಎರಡೂ ಕಡೆ ಮಾತನಾಡಬಹುದಾದ ದಾಖಲೆಗಳು ದೊರೆಯುತ್ತವೆ.

ನಮ್ಮ ರಾಜ್ಯದಲ್ಲಿ ಈಚೆಗೆ ಇಂಥ ದೃಷ್ಟಿಯಿಂದ ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿ ಅಂದರೆ ಅದು ಟಿಪ್ಪು ಸುಲ್ತಾನ. ಒಂದಿಷ್ಟು ಜನ ಆ ಕಡೆ ನಿಂತರೆ ಮತ್ತಷ್ಟು ಜನ ಈ ಕಡೆ ನಿಂತು ಹೊಡೆದಾಡುತ್ತರೆ, ಇಬ್ಬರ ಬಳಿ ಇರುವ ಅಸ್ತ್ರ ಒಂದೇ. ಅದು ಹಿಸ್ಟರಿ ಕೇಳುವ ದಾಖಲೆ. ಸಾಲದ್ದಕ್ಕೆ ಆಧುನಿಕ ಹಿಸ್ಟರಿ ಒಂದು ನಿರ್ದಿಷ್ಟ ವಾದಕ್ಕೆ ಬದ್ಧವಾಗಿ ಹಿಸ್ಟರಿ ಅಂದರೆ ಇಷ್ಟೇ ಹೇಳಬೇಕು ಎಂಬುದನ್ನೂ ಕಲಿಸಿ ತಾನು ಪ್ರತಿಪಾದಿಸುವ ದಾಖಲೆ ಆಧಾರಿತ ಸತ್ಯದ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ರಾಕೇಶ್ ಶೆಟ್ಟರು ಈ ಕೃತಿಯಲ್ಲಿ ಆಧುನಿಕ ಹಿಸ್ಟರಿಯ ದೃಷ್ಟಿಯನ್ನೇ ಬಳಸಿಕೊಂಡು ಇದುವರೆಗೆ ಅದು ಏನೆಲ್ಲವನ್ನು ಹೇಳಿದೆ, ಅದರ ದೃಷ್ಟಿಯಲ್ಲಿ ಎಲ್ಲೆಲ್ಲಿ ಏನು ಇರಬೇಕಿತ್ತು ಎಂದು ಸಾಧಾರ ತೋರಿಸಿದ್ದಾರೆ. ನಿಜ. ಆಧುನಿಕ ಹಿಸ್ಟರಿ ಕೆಲವು ಸಂಗತಿಗಳನ್ನು ಉದ್ದೇಶಪೂರ್ವಕ ಪಕ್ಕಕ್ಕೆ ಸರಿಸುತ್ತದೆ. ಮೈಸೂರು ಅರಸು ಮನೆತನ ಹಾಗೂ ಟಿಪ್ಪೂ ಕುರಿತ ವಿಷಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಂತೆ ರಾಕೇಶ್ ಶೆಟ್ಟರು ಅದೇ ಹಿಸ್ಟರಿಯ ಆಯುಧಗಳನ್ನು ಬಳಸಿ ಪ್ರತಿ ದಾಖಲೆ ಕೊಡುತ್ತಾರೆ, ಚರ್ಚೆ ಅಥವಾ ವಿವಾದವನ್ನು ಜೀವಂತ ಇಡುತ್ತಾರೆ. ಅಲ್ಲಿಗೆ ಆಧುನಿಕ ಹಿಸ್ಟರಿಯ ಒಂದು ದೃಷ್ಟಿ ಸಾಧಿತವಾಯಿತು.

ಆಧುನಿಕ ಶಾಲೆ ಅಥವಾ ಉನ್ನತ ಶಿಕ್ಷಣ ಪಡೆದ ನಮಗೆ ಯಾರಿಗೂ ಮೈಸೂರು ರಾಜಮನೆತನ ಹಾಗೂ ಟಿಪ್ಪು ಕುರಿತು ಮಾತನಾಡುವಾಗ ಅಥವಾ ಓದುವಾಗ ಸೀತಾದಂಡು ಎಂಬ ಹೆಸರು ಕೇಳಿದ ಅಥವಾ ಓದಿದ ನೆನಪೇ ಇರುವುದಿಲ್ಲ. ಹೌದು, ಟಿಪ್ಪು ಬಗ್ಗೆ ನಮ್ಮ ನಡುವೆ ಪ್ರತಿವರ್ಷ ಸಾಕಷ್ಟು ಚರ್ಚೆ ಆಗುತ್ತದೆ. ಆದರೆ ಇಲ್ಲಿ ಇದೇ ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸೀತಾದಂಡಿನ ಪ್ರಸ್ತಾಪ ಬರುತ್ತದೆ. ಟಿಪ್ಪು ಕುರಿತು ಜನಪದರಲ್ಲಿ ಸಾಕಷ್ಟು ಸಂಗತಿಗಳು ಇವೆಯಾದರೂ ಆಧುನಿಕ ಹಿಸ್ಟರಿ ಅವನ್ನೆಲ್ಲ ಮಾನ್ಯ ಮಾಡುವುದಿಲ್ಲ. ನಮ್ಮ ಮೌಖಿಕ ಪರಂಪರೆಯಲ್ಲಿ ಅದಕ್ಕೆ ಸಾಕಷ್ಟು ಬೆಲೆ ಇದೆ. ಏಕೆಂದರೆ ಅದು ನಮ್ಮ ಗತ. ಬ್ರಿಟಿಷ್ ಪೂರ್ವದ ನಮ್ಮ ಚರಿತ್ರೆ. ಇದನ್ನು ಆಧಾರವಾಗಿಟ್ಟುಕೊಂಡು ಜನಪದ ತಜ್ಞ ಹನೂರು ಕೃಷ್ಣ ಮೂರ್ತಿಯವರ ಅಜ್ಞಾತನೊಬ್ಬನ ಆತ್ಮ ಚರಿತ್ರೆ ಎಂಬ ಕಾದಂಬರಿಯನ್ನೂ ರಚಿಸಿದ್ದಾರೆ. ಅದು ಆಧುನಿಕ ಹಿಸ್ಟರಿ ಆಧರಿಸಿದ್ದಲ್ಲ. ಮೌಖಿಕ ಪರಂಪರೆ ಆಧರಿಸಿದ್ದು. ಜನಸಾಮಾನ್ಯರಿಗೆ ಇದು ಹಿಡಿಸುತ್ತದೆ, ಆಪ್ತವಾಗುತ್ತದೆ, ಹಿಸ್ಟರಿಗೆ ಅಲ್ಲ. ಈ ಕೃತಿಯಲ್ಲಿ ರಾಕೇಶರು ದಾಖಲಿಸುವ ಬಹುತೇಕ ಸಂಗತಿಗಳು ಹಾಗೂ ತಿರುಮಲರಾವ್  ಮತ್ತು ನಾರಾಯಣರಾವ್, ಉರಿಗೌಡ, ಹುಲಿಗೌಡರಂಥ ಹೆಸರುಗಳು ನಮಗೆ ತೀರಾ ಅಪರಿಚಿತವಾದವು. ಇದುವರೆಗೆ ಒಂದೇ ಒಂದು ರಸ್ತೆಗೂ ಅವರ ಹೆಸರು ಇಡದಂತೆ ಆಧುನಿಕ ಹಿಸ್ಟರಿ ನೋಡಿಕೊಂಡಿದೆ.

ಪ್ರಾಥಮಿಕ ಶಾಲಾ ಪಠ್ಯದಿಂದ ಹಿಡಿದು ಉನ್ನತ ಶಿಕ್ಷಣ ಪಠ್ಯದವರೆಗೆ ಯಾರದು ಯಾವುದನ್ನು ಬೋಧಿಸಬೇಕು ಎಂಬುದನ್ನು ತೀರ್ಮಾನಿಸುವ ಶಕ್ತಿಗಳು ಲಾಬಿಗಳು ಪಾಶ್ಚಾತ್ಯ ಚಿಂತನೆಯ ಪ್ರಭಾವದಲ್ಲಿ ಮುಳುಗಿಹೋಗಿವೆ. ಯಾವುದೇ ವಿಷಯದ ಪಠ್ಯ ಸಿದ್ಧಾಂತ ಬೋಧೊಸುತ್ತದೆಯೇ ವಿನಾ ಸಾಹಿತ್ಯ ಪಠ್ಯ ಸಾಹಿತ್ಯವನ್ನಾಗಲಿ, ಇತಿಹಾಸದ ಪಠ್ಯ ಚರಿತ್ರೆಯನ್ನಾಗಲೀ ಮಕ್ಕಳಿಗೆ ಕಲಿಸುವ ಬದಲು ಒಂದು ನಿರ್ದಿಷ್ಟ ಚಿಂತನೆಗೆ ಸದಸ್ಯರನ್ನು ಸೃಷ್ಟಿಸಿಕೊಡುತ್ತದೆ. ಭಾಷೆಯ ಪಠ್ಯ ಭಾಷೆಯನ್ನು ಎಲ್ಲಿಂದ ಹೇಗೆ ಕಲಿಯಬೇಕು ಅನ್ನುವುದಕ್ಕಿಂತಲೂ ಭಾಷಿಕ ರಾಜಕಾರಣ ಹಾಗೂ ಅನ್ಯ ಭಾಷೆಗಳ ವಿರುದ್ಧ ಎತ್ತಿಕಟ್ಟುತ್ತದೆ. ಹಾಗಾಗಿ ನಮ್ಮ ಸಂಪೂರ್ಣ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಏನನ್ನು ಕಲಿಸಬೇಕಿತ್ತೋ ಅದನ್ನು ಬಿಟ್ಟು ಬೇರೆಲ್ಲವನ್ನೂ ಮಾಡಲು ಕಲಿಸುತ್ತದೆ. ಹೊರತಾಗಿ ಯಾವುದಾದರೂ ವಿಷಯದ ಜ್ಞಾನ ಬೇಕು ಅನಿಸಿದರೆ ಸ್ವಂತ ಪರಿಶ್ರಮ ಅಗತ್ಯವಾಗುತ್ತದೆ. ಅಂಥ ಅಗತ್ಯವನ್ನು ಈ ಕೃತಿ ಪೂರೈಸಲು ಶ್ರಮಿಸುತ್ತದೆ.

ಹಾಗೆ ನೋಡಿದರೆ, ಮೈಸೂರನ್ನು ನೆಪವಾಗಿಟ್ಟುಕೊಂಡು ರಾಕೇಶರು ಮಾಡಿದ ಇತಿಹಾಸದ ಈ ಕೆಲಸ ನಮ್ಮ ದೇಶದ ಹಳ್ಳಿಯ ಇತಿಹಾಸದ ವಿಷಯದಲ್ಲೂ ನಡೆದು ಹೊಸದಾಗಿ ಗ್ರಾಮ ಚರಿತ್ರೆಗಳನ್ನು ರೂಪಿಸುವ ದಂಡು ಸಿದ್ಧವಾಗಬೇಕಿದೆ. ಆಗ ಮಾತ್ರ ಪಾಶ್ಚಾತ್ಯ ರೂಪಿತ ಇತಿಹಾಸದ ಬದಲಾಗಿ ನಮಗೆ ನಮ್ಮ ಗತದ ಚಿತ್ರಣ ಲಭಿಸಲು ಸಾಧ್ಯ. ಇಂಥ ಕೆಲಸ ಎಲ್ಲ ಕಡೆ ಶುರುವಾಗಲಿ.

ಇದು ನೇರ ಮಾರಾಟದಲ್ಲಿ ಮಾತ್ರವಲ್ಲದೇ ಆನ್ ಲೈನ್ ನಲ್ಲೂ ಲಭ್ಯ ಅನ್ನುವುದು ಖುಷಿಯ ಸಂಗತಿ. ಬಹುತೇಕ ಪುಸ್ತಕಗಳಂತೆ ಇದನ್ನು ಸಾಧ್ಯವಾದಷ್ಟು ಶಕ್ತಿ ಬಳಸಿ ಆದಷ್ಟು ದೂರ ಎಸೆಯುವಂಥದ್ದಲ್ಲ, ಎತ್ತಿಟ್ಟುಕೊಂಡು ಮತ್ತೆ ಮತ್ತೆ ಗಮನಿಸಬೇಕಾದ್ದು. ಇದರಿಂದ ನಮ್ಮ ಸಾಂಪ್ರದಾಯಿಕ ಜ್ಞಾನಭಂಡಾರಕ್ಕೆ ಮಾನ್ಯತೆ ದೊರೆಯುತ್ತದೆ.

ಕೃತಿ ವಿವರ: ಮುಚ್ಚಿಟ್ಟ ಕರ್ನಾಟಕ ಚರಿತ್ರೆ,

ಲೇ: ರಾಕೇಶ್ ಶೆಟ್ಟಿ,

ಪ್ರಕಾಶಕರು – ನಿಲುಮೆ ಪ್ರಕಾಶನ, ಬೆಂಗಳೂರು,

ಬೆಲೆ – ರೂ 350.

ಪುಟಗಳು-372

#ಮುಚ್ಚಿಟ್ಟಕರ್ನಾಟಕಚರಿತ್ರೆ #ರಾಕೇಶ್ ಶೆಟ್ಟಿ



– ಪುಸ್ತಕ, ಈ ಅಂಗಡಿಗಳಲ್ಲಿ ಲಭ್ಯವಿದೆ. (ದೂರದ ಊರಿನವರು ಪೋಸ್ಟ್ ಮೂಲಕ ತರಿಸಬಹುದು. ವಿವರ ಕೆಳಗಿನ ಚಿತ್ರದಲ್ಲಿದೆ)

ಬೆಂಗಳೂರು :

ರಾಷ್ಟ್ರೋತ್ಥಾನ
ನವಕರ್ನಾಟಕ
ಅಯೋಧ್ಯಾ

ದಾವಣಗೆರೆ :
ಜ್ಞಾನ ವಿಕಾಸ ಸಾಹಿತ್ಯ

11
ಸೆಪ್ಟೆಂ

ಟಿಪ್ಪುವಿನ‌ ಮುಚ್ಚಿಟ್ಟ ಅಸಲಿ ಕಥೆಯನ್ನು ಬಿಚ್ಚಿಟ್ಟ ನಿಲುಮೆ ಪ್ರಕಾಶನದ ಹೊಸ ಪುಸ್ತಕ “ಮುಚ್ಚಿಟ್ಟಕರ್ನಾಟಕಚರಿತ್ರೆ”

ಪುರುಷೋತ್ತಮ ಸಾಲಿಯಾನ್

ಅಸಲಿ ಚರಿತ್ರೆಯನ್ನು ಚಾಲ್ತಿಗೆ ತರುವ ಭಾಗವಾಗಿ ಹಲವಾರು ಪುಸ್ತಕಗಳ ಅಧ್ಯಯನದ ಜೊತೆಗೆ, ಕ್ಷೇತ್ರ ಕಾರ್ಯವನ್ನೂ ಕೈಗೊಂಡು ಬರೆದಿರುವ ಈ ಪುಸ್ತಕದಲ್ಲಿ ಮನಸ್ಸಿಗೆ ಮುಟ್ಟುವಂತೆ ಅಕ್ಷರಗಳು ಅಚ್ಚೊತ್ತಿದೆ.

ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂಬ ನಾಣ್ಣುಡಿ ಈ ಪುಸ್ತಕದಲ್ಲಿ ಮತ್ತೆ ರುಜುವಾತಗಿದೆ. ಒಂದು ಕಡೆ ಟಿಪ್ಪು ಹೈದರಾಲಿ ಜತೆಗೆ ಸೇರ್ಕೊಂಡ ಪೂರ್ಣಯ್ಯ ಇವರೆಲ್ಲರೂ ಸೇರಿ ಮೈಸೂರು ಸಂಸ್ಥಾನ ಮುಗಿಸಬೇಕೆಂಬ ಆಸೆಗೆ ಬಿದ್ದಾಗಲೇ ನೋಡಿ ರಾಣಿಯಾಗಿದ್ದವಳು ಆ ಮೂವರ ಪಾಲಿಗೆ ಮಾರಿಯಾಗಿ ಬಿಟ್ಟರು.

ಅದ್ಭುತವಾಗಿ ಅಕ್ಷರಗಳನ್ನು ಪೋಣಿಸಿ ಹೊರಬಂದಿರುವ ಕರ್ನಾಟಕದ ಮುಚ್ಚಿಟ್ಟ ಚರಿತ್ರೆ ಸದ್ಯ ಎರಡನೇ ಮುದ್ರಣಕ್ಕೆ ಅಣಿಯಾಗಿದೆ.

ನಮ್ಮದು ಶಕ್ತಿ ಆರಾಧಕರ ದೇಶ. ಮಹಾರಾಣಿಯವರ ಮೂಲಕ ಆ ಶಕ್ತಿ ಇಡೀ ಮೈಸೂರು ರಾಜ್ಯವನ್ನು ಉಳಿಸಿದ ಅಸಲಿ ಕಥೆಯನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಅದರ ಜತೆಗೆ ಅರಮನೆಯ ದಿವಾನರಾಗಿದ್ದ ಪೂರ್ಣಯ್ಯ ಮಾಡಿದ್ದ ಕುತಂತ್ರ ಹಾಗೂ ಮೋಸದಾಟವನ್ನು ಕೂಡ ಉಲ್ಲೇಖಿಸಲಾಗಿದೆ.

ಒಬ್ಬ ಒಡೆಯ(ಅರಸ)ನಾಗಬೇಕಾದ ವ್ಯಕ್ತಿ, ಶ್ರೀರಂಗಪಟ್ಟಣ ರಂಗನಾಥಸ್ವಾಮಿ ದೇಗುಲದ ಬದಿಯಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಗುಟ್ಟಾಗಿ ಹುಟ್ಟಿದ !
ಯಾಕೇ ಹುಟ್ಟಿದ? ಗುಟ್ಟಾಗಿ ಕೃಷ್ಣ ದೇವಾಲಯದಲ್ಲಿ ಜನಿಸಲು ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ಬರೆದಿದ್ದಾರೆ.

ಬಸಿರಾದ ಹೆಣ್ಣು ಮಗಳೊಬ್ಬಳು ತಾಯ್ತನ ಪಡೆಯಲು ಎಷ್ಟು ಕಷ್ಟ ಪಡುತ್ತಾಳೆ, ಮಗುವನ್ನು ಉಳಿಸಲು ಪಟ್ಟ ಹರಸಾಹ ಅಂದರೆ, ಮುಮ್ಮಡಿಯ ಜನನಕ್ಕಾಗಿ ಪಟ್ಟ ಕಷ್ಟ, ಟಿಪ್ಪು ಮಾಡಿದ ಅನ್ಯಾಯ ಕಣ್ಣಮುಂದೆ ಹಾಗೇಯೆ ಹಾದುಹೋಗಿದೆ “#ಮುಚ್ಚಿಟ್ಟಕರ್ನಾಟಕಚರಿತ್ರೆ” ಪುಸ್ತಕದಲ್ಲಿ.

ನಾವು ನೀವುಗಳು ಇವತ್ತು ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕೈ ಮುಗಿಯುವ ಚಾಮುಂಡಿ ವಿಗ್ರಹ ಏನಿದೆ ನೋಡಿ ಅದನ್ನ ಮತಾಂಧರಿಂದ ಉಳಿಸಲು ಪಟ್ಟ ಶ್ರಮಕ್ಕಿಂತಲೂ ಯುಕ್ತಿ ಪ್ರದರ್ಶಸಿದ ಬಗ್ಗೆಯೂ ಕೂಲಂಕಷವಾಗಿ ಅಧ್ಯಯನ ಮಾಡಿ ಪುಸ್ತಕದ ಲೇಖಕ #ರಾಕೇಶ್ ಬರೆದಿದ್ದಾರೆ.

ಒಂದು ವ್ಯಕ್ತಿಗೆ ಶಿಕ್ಷಣ ಸಿಕ್ಕರೆ ಆತ ಏನು ಬೇಕಾದರೂ ಮಾಡಬಲ್ಲ ರಾಜನಾದರೂ ಸರಿ ಕೂಲಿಯಾದರೂ ಸರಿ. ಆದರೆ, ದಿವಾನ ಪೂರ್ಣಯ್ಯ ಮುಮ್ಮಡಿಯವರಿಗೆ ಶಿಕ್ಷಣ ಕೊಡುವಲ್ಲಿ ಮಾಡಿದ ನಾಟಕ ಮತ್ತು ಅದರ ಹಿಂದಿನ ಅಸಲಿ ಕಥೆ ಇರುವುದು ಈ ಪುಸ್ತಕದಲ್ಲಿ ಮಾತ್ರ ಅನಿಸುತ್ತದೆ.

ಸ್ವಾರ್ಥದ ಈ ಪ್ರಪಂಚ ಜಾತಿಯ ಹಿಂದೆ ಓಡುತ್ತಿದೆ. ಅದರಂತೆಯೇ ಪೂರ್ಣಯ್ಯನು ಅದನ್ನೇ ಮಾಡಿದ, ದಿವಾನ ಹುದ್ದೆ ಆನುವಂಶಿಕವಾಗಿಯೇ ಉಳಿಯಬೇಕೆಂಬ ಆಸೆಯಿಂದ ಆಸೆ ಪಟ್ಟಿರಬಹುದೇ‌ ಮತ್ತು ಆತನೂ 43 ಲಕ್ಷ ರೂಪಾಯಿಗಳ ಲೆಕ್ಕಾಚಾರದಲ್ಲಿ ಎಡವಿದ್ದಾನೇಯೇ ಎಂಬುದು ಕೂಡ ಇಲ್ಲಿ ಪ್ರಮುಖವಾಗುತ್ತೆ ಅದೂ ದಾಖಲೆ ಸಮೇತವಾಗಿ ಮುದ್ರಣವಾಗಿದೆ.

ಟಿಪ್ಪುವನ್ನು ವಧೆ ಮಾಡಲು ಸೀತಾ ದಂಡು ಹುಟ್ಟಿಕೊಂಡಿತೆ ಅಥವಾ ಈ ದಂಡಿನ ಹಿಂದೆ ರೋಚಕವಾದ ಕಥಾ ಸಂಕಲನ ಯಾವುದಿದೆ? ಸೀತಾ ದಂಡು ಎಂಬ ಹೆಸರು ಹುಟ್ಟಲು ಮೂಲ ಕಾರಣವಾದರೂ ಯಾವುದು? ದಂಡು ನಿರ್ವಹಿಸುತ್ತಿದ್ದ ಕೆಲಸವಾದರೂ ಏನು? ಇರ್ವರು ಗೌಡರ ಟೆಕ್ನಿಕ್ ಟಿಪ್ಪುವಿನ ವಧೆಗೆ ಕಾರಣವಾಗಿರಬಹುದೇ ಅಥವಾ ಬ್ರಿಟಿಷರೇ ಕೊಂದರೇ? ಅಲ್ಲದೆ ಈ ದಂಡಿಗೆ ತರಬೇತಿ ನೀಡಲು ಬಂದಿರುವ ಸಿಖ್ಖ್ ಕುಟುಂಬಗಳು ಅಥವಾ ಸೈನ್ಯಗಳು ಮುಂದೆ ಏನಾದವು? ಎಂಬ ಊಹಾಪೋಹಕ್ಕೆ ಈ ಪುಸ್ತಕದಲ್ಲಿ ತೆರೆ ಎಳೆಯಾಲಾಗಿದೆಂದರು ತಪ್ಪಾಗದು.

ಟಿಪ್ಪುವಿನ ಮನಸ್ಥಿತಿ ಬಗ್ಗೆ ಜೊಲ್ಲು ಸುರಿಸಿಕೊಂಡು ಪರವಾದ ಮಂಡಿಸುತ್ತಿರುವ ಬುದ್ದಿ ಜೀವಿಗಳ ಮುಖಕ್ಕೆ ಕರಿಮಸಿ ಬಳಿದಂತೆ ಶ್ರೀರಂಗಪಟ್ಟಣದ ಹನುಮಂತ ದೇವಸ್ಥಾನ ಮಸೀದಿಯಾಗಿ ಪರಿವರ್ತನೆಯಾದ ಕುರಿತು ಅತ್ಯಂತ ಸೂಕ್ಷ್ಮವಾಗಿ ಲೇಖಕ #ರಾಕೇಶ್ ಶೆಟ್ಟಿ ಅಕ್ಷರಗಳನ್ನು ಪೋಣಿಸಿ, ಈ ಪುಸ್ತಕದಲ್ಲಿ ಬರೆಯುವುದರಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಮುಂದಿನ‌ ತಲಾ ತಲೆಮಾರುಗಳಿಗೂ ಇದೊಂದು ಮಸೀದಿಯೋ ಮಂದಿರವೋ ಎಂಬುದುದರ ಅನುಮಾನಗಳಿಗೆ ಎಡೆಕೊಡದಷ್ಟು ಪ್ರಿಂಟ್ ಆಗಿಬಿಟ್ಟಿದೆ ಪುಸ್ತಕ ” #ಮುಚ್ಚಿಟ್ಟ #ಕರ್ನಾಟಕಚರಿತ್ರೆ “.

ಟಿಪ್ಪು ಎಂಬ ವ್ಯಕ್ತಿ ಕನ್ನಡವನ್ನು ಎಷ್ಟರಮಟ್ಟಿಗೆ ನೆಲಕಚ್ಚಿಸಲು ಪ್ರಯತ್ನ ಪಟ್ಟ ಎಂಬುದನ್ನು ಸುಲ್ತಾನನ ಬೆನ್ನಿಗೆ ನಿಂತು ಬೆಂಬಲಿಸಿ ಕನ್ನಡ ಹೋರಾಟಗಾರರು, ಸ್ಸಾರಿ ಸೋ ಕಾಲ್ಡ್ ಹೋರಾಟಗಾರರು ಓದಬೇಕು. ಎಟ್ಲೀಸ್ಟ್ ಕನ್ನಡಾಂಬೆಯ ಮುಂದಿನ ಮಕ್ಕಳಾದರೂ ಇದನ್ನು ತಿಳಿದುಕೊಂಡರೆ ಉತ್ತಮ.ಆತನ ಖುದಾದಾದ್ ಸರ್ಕಾರ್ ಕನ್ನಡದ ಜಾಗದಲ್ಲಿ ಪರ್ಷಿಯನ್ ಭಾಷೆ ಜಿರಳೆ ಮೀಸೆ ಹೊಕ್ಕಂತೆ ಹೊಕ್ಕಿಲ್ಲ ಬದಲಾಗಿ ಲಾಗಮಿಲ್ಲದ ಕುದುರೆ ಓಡಿದಂತೆ ಕನ್ನಡದ “ಬಹುಳ ಪುಷ್ಯ ಕಾಲಯುಕ್ತಿ ” ರಜಬ್ ” ಆಗಿ ಬದಲಾಗಿದ್ದು ವಿಪರ್ಯಾಸ, ಅಷ್ಟು ಮಾಡಿದ ಟಿಪ್ಪುವನ್ನು ಮತ್ತೆ ಮತ್ತೆ ಹೊಗಲಿ ಕರ್ನಾಟಕದಲ್ಲಿ ಕಿಂಗ್ ಮಾಡಲು ಹೊರಟಿರುವ ಹೋರಾಟಗಾರರಿಗೂ ಲೇಖಕ‌ ತನ್ನ ತೀಕ್ಷ್ಣವಾದ ನುಡಿಗಳಿಂದ ಅಚ್ಚು ಒತ್ತಿದ್ದು ಮಾತ್ರವಲ್ಲದೇ, ನಮ್ಮ ನಿಮ್ಮ ಪ್ರಾಂತ್ಯದ ಭಾಗವೂ ಯಾವ ರೀತಿ ಮರುನಾಮಕರಣ ಮಾಡಿದ್ದ ಅಲ್ಲದೆ ಇಸ್ಲಾಮಿನ ಅಮಲನ್ನು ಯಾವ ಯಾವ ಜಾಗದಲ್ಲಿ ತುರುಕಿಸಲು ಪ್ರಯತ್ನ ಪಟ್ಟ ಎಂಬುದರ ಬಗ್ಗೆ ಪುಟಪುಟಗಳಲ್ಲಿ ಸ್ಪುಟವಾಗಿ ಅಕ್ಷರಗಳನ್ನು ಸ್ಪೋಟಿಸಿದ್ದಾರೆ ಶೆಟ್ರು..!!

ಮೈಸೂರಿಗೆ ತೆರಳುವ ಪ್ರತಿಯೊಂದು ಪ್ರವಾಸಿಗನು ಕೂಡ ಈ ವಿಚಾರವನ್ನೊಮ್ಮೆ ತಿಳ್ಕೋಬೇಕು, ನಾವೂ ನೀವೂ ಯಾರೇ ಪ್ರವಾಸಿಗರು ಬಂದರು ನಮ್ಮ ವಾಹನವನ್ನು ಪಾರ್ಕ್ ಮಾಡುವ ಜಾಗವಿದೆ. ಅಲ್ಲಿಯೇ ಪಕ್ಕದಲ್ಲೊಂದು ಮೇಲ್ಚಾವಣಿಯಿಲ್ಲದ ಸಣ್ಣ ಗುಡಿಯಿದೆ ಆ ಗುಡಿಯ ಮಹಾತ್ಮೆ, ಅಲ್ಲಿನ ಶಕ್ತಿ, ಕಾರಣಿಕ ಪೂಜೆ, ಪುರಸ್ಕಾರ ಆ ಗುಡಿಗೂ ಮೈಸೂರು ಸೀಮೆಗೂ ವಿಶೇಷವಾಗಿ ಅರಮನೆಗೂ ಇರುವ ಸಂಬಂಧ ಮತ್ತು ಅಲ್ಲಿ ಇಂದು ನಡೆಯುತ್ತಿರುವ ಪೂಜೆಗಾಗಿ ನೀಡಿರುವ ತಾಮ್ರದ ಪತ್ರದ ದಾಖಲೆ ಸಮೇತವಾಗಿ ನೈಜಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಲೇಖಕ ರಾಕೇಶ್ ಶೆಟ್ಟಿ ಸಂಶೋಧನೆ ನಡೆಸಿ “#ಮುಚ್ಚಿಟ್ಟಕರ್ನಾಟಕಚರಿತ್ರೆಯಲ್ಲಿ” ಬರೆದಿರುವುದು ನನಗಂತೂ ಅಚ್ಚರಿ ತಂದುಬಿಟ್ಟಿದೆ .

ಹಾಗಾಗಿ ಓದಲು ಕುಳಿತರೆ ಬೆರಳುಗಳು ಪುಟಗಳನ್ನು ತನ್ನಿಂದ ತಾನೇ ಮೆದುಳಿನ ಆಜ್ಞೆಯನ್ನು ಆಲಿಸಿಕೊಂಡು ತಿರುಗಿಸಿಕೊಂಡು ಹೋಗುತ್ತಿತ್ತು.
ಹೀಗೆ ಒಂದು ಗುಡಿಯಲ್ಲ ಪ್ರವಾಸಕ್ಕೆಂದು ಹೋಗಿ ಅರಮನೆ ಮುಂದೆ ಸೆಲ್ಫಿಹೊಡೆದು ಕೊಂಡು ಸಾಮಾಜಿಕ ಜಾಲಾತಾಣದಲ್ಲಿ “I am in Mysore palace” ಎಂದು ಬರೆದುಕೊಳ್ಳುವ ನಾವಿಂದು ಒಂದು ವಿಚಾರ ಅರ್ಥಮಾಡಿಕೊಂಡು ಸಾಗಬೇಕಿದೆ ಅರಮನೆಯ ಸುತ್ತಮುತ್ತಲಿನ ಪ್ರತಿಯೊಂದು ಗುಡಿಗೋಪುರಕ್ಕೂ ಇತಿಹಾಸವಿದೆ. ಮತಾಂಧ ಟಿಪ್ಪುವಿನ ಕ್ರೂರತೆ ಎಷ್ಟರ ಮಟ್ಟಿಗೆ ಇತ್ತು ಎಂಬುದು ತಿಳಿಯಬೇಕೆಂದರೆ ಈ ಪುಸ್ತಕದ ಓದು ಅತ್ಯಂತ ಅನಿವಾರ್ಯವಾಗಿದೆ.

ಸುಮಾರು ಮೂನ್ನೂರ ಎಪ್ಪತ್ತು ಪುಟಗಳ ಪುಸ್ತಕ ನನಗಂತೂ ಎರಡು ದಿನಗಳಲ್ಲಿ ಓದಿ ಮುಗಿಸಿಯಾಗಿದೆ. ಕಾರಣ ಒಬ್ಬ ಓದುಗನಾದವನಿಗೆ ಪುಸ್ತಕ ಓದಿಸಿಕೊಂಡು ಹೋಗಬೇಕು ಆವಾಗಷ್ಟೆ ಮಜಾ ಬರುತ್ತೆ. ಪುಟ ತಿರುವಿ ಹಾಕಿದಷ್ಟು ಕುತೂಹಲ ಮೂಡಿಸುತ್ತಿದೆ ,ಅಚ್ಚೊತ್ತಿದ ಚಿತ್ರಗಳು ನೈಜ ಚಿತ್ರಣವನ್ನು ಕಣ್ಣಮುಂದೆ ಹಾಗೇಯೆ ಹಾದು ಹೋಗುವಂತೆ ಮಾಡಿದೆ. ನನಗಂತೂ ಬಡತನದ ಕ್ರೂರತೆ ಮತಾಂಧನ ಕ್ರೌರ್ಯದ ನಡುವೆಯೂ ಹುಟ್ಟಿ ಬೆಳೆದ ಸಣ್ಣ ಮಗುವಿನ (ಮುಮ್ಮಡಿ)ಯ ಚಿತ್ರ ನೋಡಿ ಕಥೆ ಓದಿ ಕಣ್ಣಂಚಲಿ ಹನಿಬಿಂದುವೊಂದು ಪುಟದೊಳಗಿನ ಭೂಗರ್ಭವನ್ನು ಸೇರಿಬಿಟ್ಪಿತು. ರಾಣಿಯಾದವಳು ಅವತ್ತು ಅಂತಹ ನಿರ್ಧಾರ ಕೈಗೊಳ್ಳದೆ ಇದ್ದಿದ್ದರೆ ಇವತ್ತು ಮೈಸೂರೆಂಬ ಅರಮನೆ ವಂಶಸ್ಥರು ಇದ್ದರು ಎಂಬುದು ಶಿಲಾಶಾಸನದಲ್ಲಿ ಓದ ಬೇಕಿತ್ತೋ ಏನೋ….?? ಅಥವಾ ಶಾಲೆಯಲ್ಲಿ ಹೇಳಿದ ಹಾಗೆ ಟಿಪ್ಪುವೇ ಪುಣ್ಯಾತ್ಮ ಅಂತ ಒಪ್ಕೊ ಬೇಕಿತ್ತೋ…ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಅಂದು ಹರಸಾಹಸ ಪಡದಿದ್ದರೆ ಏನಾಗುತ್ತಿತ್ತೋ ಎಂದು ನೆನೆದು ಆಕೆಯ ಪಾದಕಮಲಗಳಿಗೆ ಶಿರ ಭಾಗಬೇಕೆಂದು ಅನ್ನಿಸಿಬಿಡುವಷ್ಟು “#ಮುಚ್ಚಿಟ್ಟಕರ್ನಾಟಕಚರಿತ್ರೆ ” ಹೊರಬಂದಿದೆ.

ಇತಿಹಾಸ-ಶಕ್ತಿ ಮುಚ್ಚಿಡಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ ಅದೆಷ್ಟೋ ಶಕ್ತಿ-ಇತಿಹಾಸ ಕಾಲಗಳು ಕಳೆದುಹೋದಂತೆ ಮತ್ತೆ ಮತ್ತೆ ಹೊರಬಿದ್ದಿದೆ ಅದಕ್ಕಾಗಿಯೇ ಆ ಚಾಮುಂಡಿ ಬೆಟ್ಟದ ಮೇಲೆ ಕುಳಿತು ನಿಲುಮೆ ರಾಕೇಶ್ ಶೆಟ್ಟಿಯಂತ ಲೇಖಕನನ್ನು ಹುಟ್ಟಿಸಿದ್ದಾರೆ ಅನಿಸುತ್ತಿದೆ. ಕಾರಣ ಇಷ್ಟೇ ಬರೆಯುವುದು ಸುಲಭ ಅನ್ನಿಸಬಹುದು ಆದರೆ ಸಂಶೋಧನೆ ನಡೆಸಿ ದಾಖಲೇ I mean ಸಾಕ್ಷಿ ಕೇಳುವ ಪುಣ್ಯಾತ್ಮರ ಮುಂದೆ ದಾಖಲೆ ಸಮೇತವಾಗಿ ಬರೆದು ಮನಕೆ ಮುದ ನೀಡುವಷ್ಟು ಅಕ್ಷರಗಳನ್ನು ಪೋಣಿಸುವುದಿದ್ಯಲ್ಲ, ಅದ್ರಲ್ಲೂ ಎಲ್ಲಾ ಕಡೆ ಬಚ್ಚಿಟ್ಟು -ಕತ್ತರಿಸಿಟ್ಟ ಇತಿಹಾಸವನ್ನು ಪುನರುತ್ಥಾನಗೊಳಿಸುವುದು ಸುಲಭದ ಮಾತಲ್ಲ.!

ಕಡೆಯಾದಾಗಿ ಒಂದು ಮಾತು “#ಮುಚ್ಚಿಟ್ಟಕರ್ನಾಟಕಚರಿತ್ರೆ ” ಹೊಸ ಇತಿಹಾಸ ಬರೆಯುವಲ್ಲಿ ಮುನ್ನುಡಿಯಾಗಬೇಕು,ಮೈಸೂರಿಗೆ ಹೋಗಿಬಂದವರು ಹೋಗಬೇಕಾದವರು ಇದನ್ನು ಓದಬೇಕು. ಟಿಪ್ಪುವನ್ನು ಅಪ್ಪಾ ಎಂದು ಕೊಂಡಾಡುವ ಎಡಬಿಡಂಗಿಗಳ ಮುಂದೆ ಪುಸ್ತಕ ತೆರೆದಿಡಬೇಕು. ಕನ್ನಡವನ್ನು ನಿಜವಾಗಿಯೂ ಪ್ರೀತಿಸುವ ಗೌರವಿಸುವ ಕನ್ನಡಿಗರಿಗೆ ನಿಜವಾದ ಅಸ್ಮಿತೆ ಗೊತ್ತಾಗಬೇಕೆಂದರೆ ಈ ಪುಸ್ತಕ ನಿಮ್ಮ ಮನೆಯೊಳಗೆ ಪ್ರವೇಶ ಮಾಡಬೇಕು, ನಾಟಕ- ಹೈಡ್ರಾಮ- ರಾಜಕಾರಣ ನಡೆಸಿ ಏನೇನೋ ಕಥೆ ಹೇಳಿ ದುಡ್ಡು ಕೊಳ್ಳೆಹೊಡೆಯುವವ ಇದನ್ನೊಮ್ಮೆ ಓದಿ ಬೆಚ್ಚಗೆ ನಿದ್ರಿಸಲು ಸಾಧ್ಯವೇ ಎಂದು ತಿಳಿಯಬೇಕು. because ಇದು ಅಸಲಿ ಕಥೆಯನ್ನು ಬಿಚ್ಚಿಟ್ಟಿದೆ,ನೈಜತೆ ಜೀವಂತವಾಗಿದೆ. ದಾಖಲೆ ಸಮೇತವಾದ ಪ್ರತಿಗಳು ಮುದ್ರಿತವಾಗಿದೆ. ಮರೂನ್ ಬಣ್ಣದ ಮುಖ ಪುಟದಲ್ಲಿ ಮುದ್ರಿತವಾದ ಬಂಗಾರ ಬಣ್ಣದ ಶೀರ್ಷಿಕೆ ,ಮುದ್ದಾದ ಮಗು,ಮತಾಂಧ ಟಿಪ್ಪು, ವೀರ ನಾರಿ ರಾಣಿಯ ಚಿತ್ರಗಳು ಹಾಗೇಯೇ ಮತ್ತೊಮ್ಮೆ ಕಣ್ಣಮುಂದೆ ಹಾದುಹೋಯಿತು.
ಕಣ್ಣು ಮನಸ್ಸು ತೇವಗೊಂಡಿತು.
“#ಮುಚ್ಚಿಟ್ಟಕರ್ನಾಟಕಚರಿತ್ರೆ” ಪುಸ್ತಕ ನನ್ನ ಮನಗೆದ್ದಿತು.

“ಪುಸ್ತಕ ಓದಿಯಾಗಿದೆ -ವಿಮರ್ಶೆ ಬರೆದಾಗಿದೆ ಹಾಗಾಗಿ ಮುಂದಿನ ಪಯಣ ಶ್ರೀರಂಗಪಟ್ಟಣಕ್ಕೆ ಮುಮ್ಮಡಿ ಹುಟ್ಟಿದ ಕೃಷ್ಣನ ದೇಗುಲ ನೋಡಲಿಕ್ಕೆ ” ದರುಶನ ತೋರಯ್ಯ ಕೃಷ್ಣಾ…. “
ನಮಸ್ಕಾರ