ವಿಷಯದ ವಿವರಗಳಿಗೆ ದಾಟಿರಿ

Posts from the ‘ಇತಿಹಾಸ’ Category

3
ಜನ

ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತಾ …

– ರಾಕೇಶ್ ಶೆಟ್ಟಿ

ಹಿಂದಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ತಮ್ಮ ಹೊಸ ಪುಸ್ತಕ “ಟಿಪ್ಪು ಸುಲ್ತಾನ್” ಕುರಿತು ಚರ್ಚಿಸುತ್ತ, ಲೇಖಕ ವಿಕ್ರಂ ಸಂಪತ್ ಅವರು, “ಟಿಪ್ಪುವನ್ನು, ರಾಜಕೀಯ ಪಕ್ಷಗಳು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ಸಿನವರು ಟಿಪ್ಪು ಜಯಂತಿ ಅಂತ ಮಾಡಿ ಬಳಸಿಕೊಂಡರು. ಬಿಜೆಪಿಯವರು, ಮೈಸೂರಿನ ಇತಿಹಾಸದಲ್ಲಿ ಬ್ರಿಟಿಷರು, ಮೈಸೂರಿನವರಿಂದ ಎಲ್ಲೂ ದಾಖಲಾಗದ ಉರಿಗೌಡ, ನಂಜೇಗೌಡ ಎನ್ನುವ ಫಿಕ್ಷನಲ್ ಕ್ಯಾರೆಕ್ಟರ್ ಗಳನ್ನು ಕಳೆದ ಚುನಾವಣೆಯಲ್ಲಿ ಸೃಷ್ಟಿಸಿ ಆಗಿನ ಎದುರಾಳಿಯಾಗಿದ್ದ ಜೆಡಿಎಸ್ ಪಕ್ಷದಿಂದ ಒಕ್ಕಲಿಗರ ಮತಗಳಿಸಲು ವ್ಯರ್ಥ ಪ್ರಯತ್ನ ಮಾಡಿದರು. ಕಡೆಗೆ ಒಕ್ಕಲಿಗ ಸಂಘದವರು, ನಮ್ಮ ಹೆಸರಿನಲ್ಲಿ ಸುಳ್ಳುಗಳನ್ನು ಹರಡಬೇಡಿ ಎಂದು ಆದೇಶ ನೀಡಿದ ನಿಂತರ ವಿಷಯಕ್ಕೆ ಮುಕ್ತಾಯ ಹಾಡಲಾಯಿತು.” ಎಂದಿದ್ದರು (ವಿಡಿಯೋ ಕೊಂಡಿ ಕಮೆಂಟ್ ಬಾಕ್ಸಿನಲ್ಲಿ). ಇದೇ ಮಾತನ್ನು ಅವರು ಪುಸ್ತಕದಲ್ಲಿಯೂ ಬರೆದಿದ್ದಾರೆ.

    ವಿಕ್ರಂ ಸಂಪತ್ ಹೇಳಿದ ಮಾತು ನಿಜವೇ. ಟಿಪ್ಪುವನ್ನು, ರಾಜಕೀಯ ಪಕ್ಷಗಳು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಂಡಿವೆ. ಆದರೆ, ಕೇವಲ ರಾಜಕೀಯ ಪಕ್ಷಗಳು ಮಾತ್ರ ಬಳಸಿಕೊಂಡಿವೆಯೇ?

    ಇತಿಹಾಸಕಾರರು ತಮ್ಮ ಐಡಿಯಾಲಾಜಿಕಲ್ ಕ್ಯಾಂಪ್ ಬದಲಾದಾಗ, ತಾವಿರುವ ಕ್ಯಾಂಪಿನ ಗುಣಧರ್ಮಕ್ಕೆ ಹೊಂದುವಂತೆ ಇತಿಹಾಸವನ್ನು ಬಳಸಿಕೊಂಡಿಲ್ಲವೇ?

    ಇಬ್ಬರು ಇತಿಹಾಸಕಾರರ ಉದಾಹರಣೆಯನ್ನು ಕೊಡುತ್ತೇನೆ.

    ಮೊದಲಿಗರು ಪ್ರೊ.ನಂಜರಾಜ ಅರಸ್ ಅವರು. ಒಂದು ಕಾಲದಲ್ಲಿ “ಮೈಸೂರು ನೂರಿನ್ನೂರು ವರ್ಷಗಳ ಹಿಂದೆ” ಎನ್ನುವ ಪುಸ್ತಕವನ್ನು ಇವರು ಬರೆದಿದ್ದರು. ಬಹಳ ಚಂದದ ಪುಸ್ತಕ. ಆ ಪುಸ್ತಕದಲ್ಲಿ ಒಡೆಯರ್ ವಂಶವನ್ನು ಹೊಗಳಿ, ಟಿಪ್ಪುವನ್ನು ತೆಗಳಿ ಬರೆದಿದ್ದರು. ಅದೇ ಪುಸ್ತಕದ ಲೇಖಕರ ಅಭಿಪ್ರಾಯದಲ್ಲಿ, ಟಿಪ್ಪುವಿನ ಬಗ್ಗೆ ಸತ್ಯಾಂಶವನ್ನು ಹೇಳಿದ್ದರಿಂದ ಬರಗೂರು ರಾಮಚಂದ್ರಪ್ಪ ಇತ್ಯಾದಿ ಸೆಕ್ಯುಲರ್ ಸಾಹಿತಿ,ಚಿಂತಕರಿಂದ ಟೀಕೆ ವ್ಯಕ್ತವಾದ ಬಗ್ಗೆಯೂ ಬರೆದುಕೊಂಡಿದ್ದರು.

    ಕಾಲ ಚಕ್ರ ಉರುಳಿತು. ಅದೇನು ಕಾರಣವೋ ಗೊತ್ತಿಲ್ಲ ನಂಜರಾಜ ಅರಸ್ ಅವರು ಒಡೆಯರ್ ವಂಶವನ್ನು ಟೀಕಿಸುತ್ತಾ, ಟಿಪ್ಪುವನ್ನು ಹೊಗಳಲು ಆರಂಭಿಸಿದರು. ನಂತರ “ಟಿಪ್ಪು ಮಾನ್ಯತೆ ಸಿಗದ ಸುಲ್ತಾನ” ಎನ್ನುವ ಪುಸ್ತಕವನ್ನು ಪ್ರಕಟಿಸಿದರು. ಮೊದಲ ಪುಸ್ತಕದಲ್ಲಿ ಹೊಗಳಿದ್ದನ್ನು ಇದರಲ್ಲಿ ತೆಗಳಿದರು. ಮೊದಲು ತೆಗಳಿದವರನ್ನು ಈಗ ಹೊಗಳಿ, ಅವನೊಬ್ಬ ನತದೃಷ್ಟ ಮಹಾನ್ ನಾಯಕ ಎಂಬಂತೆ ಚಿತ್ರಿಸಿದರು. (ಎರಡೂ ಅಭಿರುಚಿ ಪ್ರಕಾಶನದಿಂದ ಪ್ರಕಟಿತ)

    ಮತ್ತೊಬ್ಬ ಇತಿಹಾಸಕಾರರ ಉದಾಹರಣೆ ಕೊಡುವ ಮೊದಲು, ಅವರ ಪುಸ್ತಕಗಳಲ್ಲೇ ಉಲ್ಲೇಖವಾಗಿರುವುದನ್ನು ತೋರಿಸುತ್ತೇನೆ ನೋಡಿ.

    “ವರ್ತಮಾನದ ಹಾಸ್ಯಾಸ್ಪದ ರಾಜಕೀಯ ಸನ್ನಿವೇಶಗಳ ಸಂದರ್ಭದಲ್ಲಿ ನಾವು ಸೃಷ್ಠಿಸಿಕೊಂಡಿರುವ ಮಾನದಂಡಗಳ ಮೂಲಕ ಭೂತಕಾಲದ ಜನರನ್ನು ನಿರ್ಣಯಿಸುವುದು ಸಂಪೂರ್ಣವಾಗಿ ನಿರರ್ಥಕವೆಂದು ತೋರುತ್ತದೆ. ಹಿಂದಿನ ಕಾಲದ ಈ ವೀರರು ಅವರ ಸಮಯ ಮತ್ತು ಸಂದರ್ಭಗಳ ಉತ್ಪನ್ನಗಳೆಂದು ಅರಿತುಕೊಳ್ಳಬೇಕು. ವರ್ತಮಾನದ ನೈತಿಕತೆಯ ಕನ್ನಡಕದಲ್ಲಿ ಅವರ ಬಗ್ಗೆ ತೀರ್ಪು ನೀಡುವುದು ಸರಿಯಲ್ಲ. ಟಿಪ್ಪು ಕೂಡ ಇತರ ಎಲ್ಲರಂತೆ ವಿವಿಧ ಭಾವನೆಗಳಿರುವ ಮನುಷ್ಯರಾಗಿದ್ದರು. ಅವರಿಗೆ ಶುದ್ಧ ಕಪ್ಪು ಅಥವಾ ಬಿಳಿ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದು ತೋರುತ್ತದೆ…”

    “… ನಿಸ್ಸಂದೇಹವಾಗಿ, ಟಿಪ್ಪು ಒಬ್ಬ ಮಹಾನ್ ಆಡಳಿತಗಾರ. ಅವರ ಕಾಲಕ್ಕಿಂತ ಮುಂದಿನದನ್ನು ಗ್ರಹಿಸಬಲ್ಲ ದಾರ್ಶನಿಕನಾಗಿದ್ದರು. ಹಿಂದೆ (ಹಿಂದಿನ ಅಧ್ಯಾಯಗಳಲ್ಲಿ) ಚರ್ಚಿಸಿದಂತೆ ಅವರ ಪ್ರಗತಿಪರ ಕ್ರಮಗಳು, ಮೈಸೂರು ರಾಜ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅಂದಿನ ದುರ್ಬಲ ಒಡೆಯರ್‌ಗಳ ಅಡಿಯಲ್ಲಿ (ಮೈಸೂರು ರಾಜ್ಯ) ಕಾರ್ಡ್‌ಗಳ ಪ್ಯಾಕ್‌ನಂತೆ ಕುಸಿಯುತ್ತಿತ್ತು…”

    ಟಿಪ್ಪು ಬಗ್ಗೆ ಇಷ್ಟು ಪ್ರೀತಿಯಿಂದ ಮಾತನಾಡಿದವರು ಯಾರಿರಬಹುದು? ಯಾರೋ ಸೆಕ್ಯುಲರ್ ಇತಿಹಾಸಕಾರರಲ್ಲ. ಈದೀಗ ಬಿಜೆಪಿ ಆಂಡ್ ಪರಿವಾರದವರ ಕಣ್ಮಣಿಯಾಗಿರುವ ಲೇಖಕ ವಿಕ್ರಂ ಸಂಪತ್ ಅವರೇ. (ಪುಸ್ತಕ : ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರು. ಅಧ್ಯಾಯ : ದಿ ಲೆಗೆಸಿ ಆಫ್ ಟೀಪು ಸುಲ್ತಾನ್. ಪುಟ.ಸಂ ೩೭೩. ರೂಪ ಪಬ್ಲಿಕೇಷನ್ಸ್, ೨೦೦೮)

    ಆಗ ಹಾಗೆ ಬರೆದವರು, ಈಗ ತಮ್ಮ ಹೊಸ ಪುಸ್ತಕದಲ್ಲಿ ಟಿಪ್ಪು ಕುರಿತು ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಗೊತ್ತೇ? (ಪು: ಟಿಪ್ಪು ಸುಲ್ತಾನ್ , ಅಧ್ಯಾಯ : ಎ ಬ್ಲಡೀಡ್ ಲೆಗೆಸಿ. ಪುಟ ಸಂ. ೬೭೩-೬೭೪. ಪೆಂಗ್ವಿನ್ ಪಬ್ಲಿಕೇಷನ್, ೨೦೨೪)

    “ಅವರದೇ ಪತ್ರಗಳು, ಅವರ ಗ್ರಂಥಾಲಯದಲ್ಲಿನ ಪುಸ್ತಕಗಳು ಮತ್ತು ಅವರ ಸ್ವಂತ ಕನಸಿನ ಬಗೆಗಿನ ದಾಖಲಾತಿಗಳ ಬರಹಗಳಿಂದ, ಟಿಪ್ಪು ಮುಸ್ಲಿಮೇತರರ ಬಗ್ಗೆ ಅಪಾರವಾದ ದ್ವೇಷವನ್ನು ಹೊಂದಿದ್ದರು ಮತ್ತು ಅವರ ವಿರುದ್ಧ ಪವಿತ್ರ ಯುದ್ಧವನ್ನು (ಜಿಹಾದ್) ನಡೆಸುವುದು ತನ್ನ ಬದ್ಧ, ಧಾರ್ಮಿಕ ಕರ್ತವ್ಯವೆಂದು ಪರಿಗಣಿಸಿದ್ದರು ಎನ್ನುವುದು ಸ್ಪಷ್ಟವಾಗಿದೆ…”

    “… ಹೈದರ್‌ನಂತೆ, ಟಿಪ್ಪು ಕೂಡ, ಹಿಂದೂ ಬಹುಸಂಖ್ಯಾತರನ್ನು ಒಳಗೊಂಡಿರುವ ಮೈಸೂರು ಸಾಮ್ರಾಜ್ಯದ ಪ್ರಜೆಗಳಿಗೆ, ತನ್ನ ತಂದೆಯಿಂದ ಅಧಿಕಾರ ಕಳೆದುಕೊಂಡ ಒಡೆಯರ್ ಕುಟುಂಬದ ಬಗ್ಗೆ ಅಪರಿಮಿತವಾದ ಗೌರವ ಮತ್ತು ಮೃದು ಧೋರಣೆಯಿದೆ ಎನ್ನುವುದನ್ನು ಅರಿತುಕೊಂಡಿದ್ದರು. ಮೈಸೂರಿನಲ್ಲಿ ಬಹಿರಂಗವಾಗಿ ಯಾವುದೇ ರೀತಿಯ ಧಾರ್ಮಿಕ ಬದಲಾವಣೆಯ ಪ್ರಯತ್ನಗಳಲ್ಲಿ ತೊಡಗಿಕೊಂಡರೆ, ಪ್ರಜೆಗಳ ನಡುವೆ ಕುದಿಯುತ್ತಿರುವ ಕೋಪವು ಪೂರ್ಣ ಪ್ರಮಾಣದ ದಂಗೆಯಾಗಿ ಬದಲಾಗಬಹುದು ಎಂದು ಅವರು ತಿಳಿದಿದ್ದರು. ಯುದ್ಧರಂಗದಲ್ಲಿ ಅನೇಕ ಶತ್ರುಗಳೊಂದಿಗೆ ರಕ್ತಸಿಕ್ತ ಯುದ್ಧಗಳಲ್ಲಿ ತೊಡಗಿರುವಾಗ ಮತ್ತು ಇತರ ಸ್ಥಳಗಳಲ್ಲಿ ದಂಗೆಗಳನ್ನು ಅಡಗಿಸುವಲ್ಲಿ ಮಗ್ನರಾಗಿರುವಾಗ ಇದನ್ನೂ ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ಅವರಿಗೆ ಗೊತ್ತಿತ್ತು… ಆದರೆ, ಅವರ ಆಲೋಚನೆಗಳು, ಅವರ ಬರಹ ಅವರ ಕನಸುಗಳು, ತಮ್ಮ ನಂಬಿಕೆಯ ಜೊತೆಗೆ ಇಲ್ಲದ ಜನರೆಡೆಗೆ ಸಹಜವಾದ ದ್ವೇಷವನ್ನು ಮತ್ತು ಅಂತವರನ್ನು ಹಿಂಸಾತ್ಮಕವಾಗಿ ಹತ್ತಿಕ್ಕುವ ಆಲೋಚನೆ ಅವರ ಮನಸ್ಸಿನಲ್ಲಿ ನಿರಂತರವಾಗಿತ್ತು ಎನ್ನುವುದನ್ನು ತೋರಿಸಿಕೊಡುತ್ತವೆ.”

    ಇದಿಷ್ಟೇ ಅಲ್ಲ. ಮೊದಲ ಪುಸ್ತಕದಲ್ಲಿ ಶ್ರೀರಂಗಪಟ್ಟಣದ ಮೂಡಲು ಬಾಗಿಲು ಕೋಟೆ ಆಂಜನೇಯ ದೇವಸ್ತಾನವನ್ನು ಕೆಡವಿ ಮಸೀದಿ ಮಾಡಿದ ಕುರಿತು ಏನು ವಿವರವಾಗಿ ಬರೆದಿಲ್ಲ. ಬಹುಶಃ ಲೇಖಕರ ಆಗಿನ ಮನಸ್ಥಿತಿಗೆ ಅದು ಪೂರಕವಾಗಿರಲಿಲ್ಲವೇನೋ. ಅದೇ ಘಟನೆಯನ್ನು ಹೊಸ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈಗ ಆಂಜನೇಯ ನೆನಪಾಗಿದ್ದಾನೆ.

    ಮೊದಲ ಪುಸ್ತಕದಲ್ಲಿ ಟಿಪ್ಪುವನ್ನು ಟೈಗರ್, ಸುಲ್ತಾನ್ ಈ ಖುದಾದಾದ್ ಇತ್ಯಾದಿಯಾಗಿ ಹೊಗಳಲಾಗಿದೆ. ಉದಾಹರಣೆಗೆ, ಟಿಪ್ಪುವಿನ ಮೃತ ದೇಹವನ್ನು ಬ್ರಿಟಿಷರು ಹುಡುಕಿದ ಸಂದರ್ಭದಲ್ಲಿ, “ಟಿಪ್ಪುವಿನ ದೇಹ ಸಿಕ್ಕರೂ, ಹುಲಿ ಇನ್ನೂ ಜೀವಂತ ಇರಬಹುದು ಎಂದು ಮುಟ್ಟಲು ಬ್ರಿಟಿಷರು ಹೆದರಿದರು.” ಎಂದು ವರ್ಣಿಸಿದ್ದಾರೆ. ಹೊಸ ಪುಸ್ತಕದಲ್ಲಿ ಟೈಗರ್ ನಾಪತ್ತೆಯಾಗಿದೆ, ‘ಸುಲ್ತಾನ್ ಈ ಖುದಾದಾದ್’ ಹೋಗಿ ‘ಸರ್ಕಾರ್ ಈ ಖುದಾದಾದ್’ ಆಗಿದೆ.

    ಮೊದಲ ಪುಸ್ತಕದಲ್ಲಿ ಟಿಪ್ಪು ರಾಕೆಟ್ ಪಿತಾಮಹ ಎಂಬ ಸೆಕ್ಯುಲರ್ ಕಲ್ಪನೆಯನ್ನೇ ಯಥಾವತ್ ಚಿತ್ರಿಸಲಾಗಿದ್ದರೇ, ಹೊಸ ಪುಸ್ತಕದಲ್ಲಿ ರಾಕೆಟ್ ಬಳಕೆ ಪುರಾತನ ಗ್ರಂಥಗಳಲ್ಲಿ ಉಲ್ಲೇಖವಿರುವುದರ ಬಗ್ಗೆ ಎಲ್ಲಾ ಹೇಳುತ್ತಾ, ಇದ್ದಿದ್ದನ್ನು ಇವರು ಇಂಪ್ರೂವ್ ಮಾಡಿಕೊಂಡಿದ್ದಾರೆ ಎನ್ನುತ್ತಾರೆ.

    ಮೊದಲ ಪುಸ್ತಕದಲ್ಲಿ ಕೊಡಗಿನಲ್ಲಿ ಟಿಪ್ಪು ನಡೆಸಿದ ದಮನಕಾರಿ ಯುದ್ಧಗಳ ಬಗ್ಗೆ ಮಾತನಾಡುತ್ತಾ, ಕೊಡವರಿಗೆ ಭೋಜನ ಕೂಟವನ್ನು ಏರ್ಪಡಿಸುವ ಮೂಲಕ ಅವರ ಜೊತೆಗಿನ ಯುದ್ಧಕ್ಕೆ ಕೊನೆ ಹಾಡಿದರು ಎಂದು ಬರೆದಿದ್ದಾರೆ. ಹೊಸ ಪುಸ್ತಕದಲ್ಲಿ ದೇವಾಟ್ ಪರಂಬು ಹತ್ಯಾಕಾಂಡದ ನೆನಪಾಗಿದೆ. ಐ.ಮಾ ಮುತ್ತಣ್ಣ,ಪಟ್ಟೋಲೆ ಪಳಮೆ, ಅಡ್ಡಂಡ ಕಾರ್ಯಪ್ಪ ಅವರ ಈ ಕುರಿತು ಬರೆದಿರುವುದಾಗಿ ಹೇಳಿದ್ದಾರೆ.

    ಇದು ವಿಕ್ರಂ ಹೇಳಿಕೆಯ ಮೊದಲ ಭಾಗವಾದ ಟಿಪ್ಪುವನ್ನು “ಬಳಸಿಕೊಂಡ” ಬಗ್ಗೆಯಾದರೇ, ಹೇಳಿಕೆಯ ಎರಡನೇ ಭಾಗವಾದ “ಬ್ರಿಟೀಷ್ , ಮೈಸೂರಿನ ಯಾವ ಇತಿಹಾಸಕಾರನೂ ದಾಖಲಿಸಿದ ಇಬ್ಬರನ್ನು ಬಿಜೆಪಿ ಸೃಷ್ಠಿಸಿತು” ಎಂದಿದ್ದಾರಲ್ಲ ಅದರ ಬಗ್ಗೆಯೂ ಬೆಳಕು ಚೆಲ್ಲಬೇಕಾದ ಸಮಯವಿದು.

    ಟಿಪ್ಪು ಸುಲ್ತಾನ್ ಪುಸ್ತಕದಲ್ಲಿ ತಮಗೆ ಸಹಾಯ ಮಾಡಿದ ಬಿಜೆಪಿಯ ನಾಯಕರ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ನಾಯಕರ ಸಾಲಿನಲ್ಲಿ ಅಡ್ಡಂಡ ಕಾರ್ಯಪ್ಪ ಅವರ ಹೆಸರು ಕಾಣಿಸಲಿಲ್ಲ! ಏಕೆಂದರೆ ಟಿಪ್ಪು ನಿಜ ಕನಸುಗಳು ಎಂಬ “ನಾಟಕ” ವನ್ನು ರಚಿಸಿದ ಅಡ್ಡಂಡ ಕಾರ್ಯಪ್ಪನವರು ನನಗೆ ತಿಳಿದ ಮಟ್ಟಿಗೆ ಆಗ ರಂಗಾಯಣದ ನಿರ್ದೇಶಕರಾಗಿದ್ದರೇ ಹೊರತು ಬಿಜೆಪಿಯ ಪದಾಧಿಕಾರಿಯೇನೂ ಆಗಿರಲಿಲ್ಲ. ಹೀಗಿದ್ದಾಗ ಬಿಜೆಪಿಯವರ ಸೃಷ್ಟಿ ಎಂದು ಹೇಳುವ ಬದಲಿಗೆ “ಅಡ್ಡಂಡ ಕಾರ್ಯಪ್ಪ ಆಂಡ್ ಟೀಮ್” ಅವರ ಸೃಷ್ಟಿ ಎಂದು ನೇರವಾಗಿ ಹೇಳಬಹುದಿತ್ತಲ್ಲ? ಬಿಜೆಪಿಯೆಂದರೇ ಸಾರ್ವಜನಿಕ ಜಾಗದಲ್ಲಿರುವ ಗಂಟೆ ಯಾರಾದರೂ ಬಂದು ಸುಲಭವಾಗಿ ಬಡಿದು ಹೋಗಬಹುದು ಎನ್ನುವ ಕಾರಣಕ್ಕೆ ಹಾಗೆ ಹೇಳಿದರೇ?

    ಆದರೆ, ಈ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿಯ ನಾಯಕರು ಹೆಡ್ಡರಂತೆ ಮುಂದೆ ಬಂದಿದ್ದೇನೂ ಸುಳ್ಳಲ್ಲ.(ಮುಂದೆ ಬಂದರೋ, ಮುಂದೆ ಹೋಗಿ ಎಂದು ಸೂಚನೆ ನೀಡಲಾಯಿತೋ?) , ಆಗುತ್ತಿದ್ದ ರಗಳೆ ಸಾಲದು ಎಂಬಂತೆ ಆ ಕುರುಕ್ಷೇತ್ರದ ಮುನಿರತ್ನ ನಿರ್ಮಾಪಕರಾಗಿ, ಆರ್. ಅಶೋಕ್-ಸಿ.ಟಿ ರವಿ ಅರ್ಪಿಸುವ, ಅಶ್ವತ್ ನಾರಾಯಣ್ ಚಿತ್ರಕಥೆ ಅಂತೆಲ್ಲಾ ಚೀಪ್ ಕ್ವಾಲಿಟಿಯ ಪೋಸ್ಟರ್ ಅನ್ನು ಬಿಟ್ಟು ವಿಷಯದ ಗಂಭೀರತೆಯನ್ನು ಎಷ್ಟು ಹಾಳು ಮಾಡಲು ಸಾಧ್ಯವಿತ್ತೋ ಅದೆಲ್ಲವನ್ನೂ ಮಾಡಿದರು ಪುಣ್ಯಾತ್ಮರು. ಆ ಸಂದರ್ಭ ಪೂಜ್ಯ ನಿರ್ಮಲಾನಂದ ಶ್ರೀಗಳು ಬಂದು ಈ ಅಸಹ್ಯವನ್ನು ನಿಲ್ಲಿಸದೇ ಇದ್ದಿದ್ದರೇ, ಈ ಪ್ರಹಸನದ ಹಿಂದೆ ಇದ್ದ ಬುದ್ಧಿವಂತ ಸ್ಟಾಟರ್ಜಿಸ್ಟುಗಳು ಇನ್ನೇನು ಮಾಡುವವರಿದ್ದರೋ?

    ಈ ನಾಟಕವನ್ನು ಬರೆದ ಕಾರ್ಯಪ್ಪನವರಿಗೆ, ಈ ಹೋರಾಟಗಾರರ ಬಗ್ಗೆ ಬೇಸಿಕ್ ಇತಿಹಾಸವೂ ಗೊತ್ತಿಲ್ಲ ಎನ್ನುವುದನ್ನು ಖುದ್ದು ಅವರೇ ಮಾಧ್ಯಮಗಳ ಮುಂದೆ ತೋರಿಸಿಕೊಂಡರು. ಖಾಸಗಿ ವಾಹಿನಿಯ ಪ್ರಖ್ಯಾತ ಸಂವಾದ ಕಾರ್ಯಕ್ರಮವೊಂದರಲ್ಲಿ ಕುಳಿತ ಅಡ್ಡಂಡ ಕಾರ್ಯಪ್ಪನವರಿಗೆ, ಪ್ರೇಕ್ಷಕರ
    ಗ್ಯಾಲರಿಯಲ್ಲಿದ್ದವರೊಬ್ಬರು ಕೇಳಿದರು, ಇತಿಹಾಸದಲ್ಲಿ ಎಲ್ಲಿ “ಉರಿಗೌಡ, ನಂಜೇಗೌಡರ ಬಗ್ಗೆ ದಾಖಲಾಗಿದೆ?”. ಕಾರ್ಯಪ್ಪನವರ ಉತ್ತರ “ಮಲಬಾರ್ ಮ್ಯಾನುವಲ್” ನೋಡಿ ಎಂದಾಗಿತ್ತು. ಅಸಲಿಗೆ ಮಲಬಾರ್ ಮ್ಯಾನುವಲ್ ಅಲ್ಲಿರುವುದು ಏನೆಂದರೆ, ಮಲಬಾರಿನ ಜನರ ಆಚಾರ, ವಿಚಾರ, ಉಡುಗೆ, ತೊಡುಗೆ, ಜೀವನ ಶೈಲಿ ಇತ್ಯಾದಿ. ಇವರಿಬ್ಬರ ಉಲ್ಲೇಖ ಅಲ್ಯಾಕೆ ಬರುತ್ತದೆ? ಈ ಕಾಲದಲ್ಲೂ ಜನರು ದಡ್ಡರು, ನಾವು ಮಾತ್ರ ಬುದ್ಧಿವಂತರು ಅಂತ ಹೊರಡುವವರಿಗೆ ಏನು ಹೇಳಬೇಕು?

    ಪುಸ್ತಕಗಳು, ನಾಟಕದ ಟಿಕೆಟ್ ಗಳು ಭರ್ಜರಿಯಾಗಿ ಮಾರಾಟವಾಗಿ ಸಂಬಂಧಪಟ್ಟವರಿಗೆ ಭರ್ಜರಿ ಆರ್ಥಿಕ ಲಾಭವೇ ಆಗಿರಬಹುದು. ಆದರೆ, ನಷ್ಟವಾಗಿದ್ದು ಯಾರಿಗೆ ಗೊತ್ತೇ? ಟಿಪ್ಪುವಿನ ವಿರುದ್ಧ ನಿಜಕ್ಕೂ ತೊಡೆ ತಟ್ಟಿದ್ದ ಆ ಜೀವಗಳಿಗೆ. ಗಂಭೀರ ಅಕಾಡೆಮಿಕ್ ಚರ್ಚೆಯಾಗಬೇಕಾಗಿದ್ದ ಸ್ಥಳೀಯರ ಹೋರಾಟ ಅಧ್ಯಾಯವೊಂದು ಟ್ರೋಲ್ ಗೆ ಒಳಗಾಯಿತು. ಬರೆದವರಿಗೆ, ಬರೆಸಿದವರಿಗೆ ಲಾಭವಾಯಿತು, ವಿಷಯ ಸತ್ತು ಹೋಯಿತು.

    ವಿಕ್ರಂ ಸಂಪತ್ ಅವರು ಈ ಕುರಿತು ಇತಿಹಾಸದಲ್ಲಿ ಎಲ್ಲೂ ದಾಖಲಾಗಿಲ್ಲ ಎಂದು ಮೈಸೂರಿನ ಇತಿಹಾಸದಲ್ಲಿ ನನಗೆ ಗೊತ್ತಿಲ್ಲದ್ದು ಏನೂ ಇಲ್ಲವೇ ಇಲ್ಲ ಎನ್ನುವ ಅಧಿಕಾರವಾಣಿಯಲ್ಲಿ ಹೇಳಿದ್ದಾರೆ. ಕನಿಷ್ಠ ನನ್ನ ಓದಿಗೆ ಸಿಕ್ಕಂತೆ ಇಲ್ಲ ಅಂದಿದ್ದರು ನಮ್ರತೆ ಅನ್ನಿಸಿಕೊಂಡಿರೋದು.

    ಬಹುಶಃ “ಅಡ್ಡಂಡ ಕಾರ್ಯಪ್ಪ ಆಂಡ್ ಟೀಮ್” ಟಿಪ್ಪು ಅಂತ್ಯದ ಬಗ್ಗೆ ಬರೆದು ಕೈ ಸುಟ್ಟುಕೊಂಡ ಕಾರಣಕ್ಕೋ ಏನೋ, ಇದೇ ವಿಕ್ರಂ ಸಂಪತ್ ಅವರು ಟಿಪ್ಪುವಿನ ಅಂತ್ಯದ ಚಿತ್ರಣವನ್ನು ಬ್ರಿಟಿಷ್ ಇತಿಹಾಸಕಾರರು ಸೃಷ್ಟಿಸಿಕೊಟ್ಟಿರುವ ನರೇಟಿವ್ ಅನ್ನು ಬಿಟ್ಟು ಆಚೀಚೆ ಅಲುಗಾಡಿಲ್ಲ. ಎಷ್ಟರಮಟ್ಟಿಗೆ ಎಂದರೆ, ಟಿಪ್ಪು ಸತ್ತ ಎಂದು ಗೊತ್ತಾದ ತಕ್ಷಣ “ಇನ್ನು ಇಂಡಿಯಾ ನಮ್ಮದೇ” ಎಂದು ಹ್ಯಾರಿಸ್ ಉದ್ಘಾರ ತೆಗೆದ ಎಂದು ಮೊದಲ ಪುಸ್ತಕದಲ್ಲಿ ಬರೆದಿದ್ದಾರೆ. (ನನ್ನ ಓದಿಗೆ ಅವನು ಹಾಗೆ ಹೇಳಿದ ಬಗ್ಗೆ ಬ್ರಿಟಿಷ್ ದಾಖಲೆಗಳಲ್ಲಿ ಸಿಗಲಿಲ್ಲ. ವಿಕ್ರಂ ಅವರಿಗೆ ಎಲ್ಲಿ ಸಿಕ್ಕಿತೋ, ಗೊತ್ತಾದರೆ ನನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳಬಹುದು.) ಆದರೆ, ಇದೇ ಉದ್ಘಾರ ಹೊಸ ಪುಸ್ತಕದಲ್ಲಿ ಕಾಣಿಸಿಲ್ಲ. ಹೀಗ್ಯಾಕೆ?

    ಇನ್ನು ಟಿಪ್ಪುವಿನ ಸೋಲಿಗೆ, ಸಾವಿಗೆ ಏಕೈಕ ಕಾರಣ ಎಂಬಂತೆ ಚಿತ್ರಿಸಲಾಗಿರುವ “ಮೀರ್ ಸಾದಿಖ್” ನನ್ನು ಮೊದಲ ಪುಸ್ತಕದಲ್ಲಿ “ಶೇಖರ್” ಎಂಬ ಟಿಪ್ಪು ಆಪ್ತ ಕೊಂದ ಎನ್ನುವ ವಿಕ್ರಂ , ಹೊಸ ಪುಸ್ತಕದಲ್ಲಿ ಮಾತ್ರ ಅನಾಮಿಕರಿಂದ “ಮೀರ್ ಸಾದಿಖ್” ಸತ್ತ ಎನ್ನುತ್ತಾರೆ.
    ಹಾಗಿದ್ದರೇ, ವಿಕ್ರಂ ಚಿತ್ರಿಸಿರುವಂತೆಯೇ ಟಿಪ್ಪು ಹತನಾದನೇ? ಅಲ್ಲಿ ಬ್ರೀಟಿಷರು-ನಿಜಾಮರನ್ನು ಬಿಟ್ಟರೆ ಮೂರನೇ ಶಕ್ತಿಗಳು ಇರಲಿಲ್ಲವೇ? ಖಂಡಿತ ಇದ್ದರು ಅದಕ್ಕೆ ಬೇಕಾದ ಇತಿಹಾಸದ ದಾಖಲೆಗಳನ್ನು, ಅಂದಿನ ಕಾಲದ ಮರಾಠ-ನಿಜಾಮ-ಬ್ರಿಟೀಷ್ ಸರ್ಕಾರಗಳು ಮೈಸೂರಿನ ಒಡೆಯರ್ ವಂಶವನ್ನು ನಡೆಸಿಕೊಂಡ ರೀತಿಯ ಬಗ್ಗೆ, ‘ದಕ್ಷ-ಸಮರ್ಥ ಆಡಳಿತಗಾರ” ಎಂದು ಬಿಂಬಿಸಲಾಗಿರುವ ದಿವಾನ್ ಪೂರ್ಣಯ್ಯ ಆಂಡ್ ಟೀಮ್ ಮಾಡಿದ್ದೇನು ಇತ್ಯಾದಿ ಅಪ್ರಿಯ ಸತ್ಯಗಳನ್ನು ನನ್ನ ಪುಸ್ತಕ “ಮುಚ್ಚಿಟ್ಟ ಕರ್ನಾಟಕ ಚರಿತ್ರೆ’ಯಲ್ಲಿ ನಾನು ನೀಡಿದ್ದೇನೆ.

    ಟಿಪ್ಪುವಿನ ಅಂತ್ಯದ ಕುರಿತ ಗಿಳಿಪಾಠದ ನಡುವೆಯೂ ಬ್ರಿಟಿಷರ ಇತಿಹಾಸದಲ್ಲೇ “Read between the lines” ಮಾಡಿದರೇ ಅನುಮಾನದ ಗೆರೆಗಳು ಖಂಡಿತ ಮೂಡುತ್ತವೆ. ಆದರೆ, ಈಗ ಸತ್ಯ ಯಾರಿಗೆ ಬೇಕಾಗಿದೆ? ತಮ್ಮ ತಮ್ಮ ಅಜೆಂಡಾಗಳು ಪೂರೈಸಿದರೆ ಸಾಕಷ್ಟೇ.

    ವಿಕ್ರಂ ಅವರ ಹೊಸ ಪುಸ್ತಕಕ್ಕಾಗಿ ಇಂಗ್ಲೀಷ್-ಹಿಂದಿಯ ಪ್ರಖ್ಯಾತ ಚಾನೆಲುಗಳಲ್ಲೆಲ್ಲಾ ವೇದಿಕೆ ಸಿಕ್ಕಿದೆ. ಅವರ ಹಿಂದೆ ಅಂತಹ ಪ್ರಭಾವಳಿಯಿರುವುದು ಸಂತೋಷವೇ. ಯಾವ ಲೇಖಕನಿಗೂ ಹಾಗೆ ವೇದಿಕೆ ಸಿಗುವುದು ಒಳ್ಳೆಯದೇ. ಪುಸ್ತಕ ಬಿಡುಗಡೆಗೆ ಬಿಜೆಪಿಯ ಸರ್ಕಾರದ ಮಂತ್ರಿಗಳಾದ ಜೈ ಶಂಕರ್, ಸಂಸದ ತೇಜಸ್ವಿ ಸೂರ್ಯ ಎಲ್ಲಾ ಹೋಗಿದ್ದರು ಎಂದು ಮಾಧ್ಯಮಗಳಲ್ಲಿ ಓದಿದ್ದೆ. ಬಿಜೆಪಿಯವರ ಬಗ್ಗೆ ಹೀಗೆ ಬರೆಯಲಾಗಿದೆ ಎನ್ನುವುದು ಪಾಪ ಇವರುಗಳಿಗೆ ಗೊತ್ತಿತ್ತೋ ಇಲ್ಲವೋ?

    “ಇತಿಹಾಸದಲ್ಲಿ, ‘ಏನು ಬರೆದರು?’ ಎನ್ನುವುದಕ್ಕಿಂತ ‘ಯಾರು ಬರೆದರು?’ ” ಎನ್ನುವ ಮಾತೊಂದಿದೆ ಎನ್ನುವುದನ್ನು ಲೇಖಕ ರೋಹಿತ್ ಅವರು “ಕಥನ-ಮಥನ” ಪುಸ್ತಕದ ಪೀಠಿಕೆಯಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಅನುಭವದ ಪ್ರಕಾರ, ಪ್ರಸಕ್ತ ಸನ್ನಿವೇಶಕ್ಕೆ ಇನ್ನಷ್ಟನ್ನು ಸೇರಿಸಿ ಹೀಗೆ ಸೇರಿಸಬಹುದು ಅನ್ನಿಸಿತು. – “ಇತಿಹಾಸದಲ್ಲಿ, ‘ಏನು ಬರೆದರು?’ ಎನ್ನುವುದಕ್ಕಿಂತ ‘ಯಾರು ಬರೆದರು?’ , ಬರೆದವರ ‘ನೇಮ್’ ಏನು , ‘surname’ ಏನು? ಯಾರನ್ನು ಕೇಳಿ ಬರೆದರು?” ಎನ್ನುವುದರ ಮೇಲೆಯೂ ಪುಸ್ತಕದ ಭವಿಷ್ಯವನ್ನು ನಿರ್ಧರಿಸಬಹುದು ಅನ್ನಿಸಿತು. (ಈ ಹೇಳಿಕೆ ಸಾಮಾನ್ಯ ಓದುಗರಿಗೆ ಅನ್ವಯಿಸವುದಿಲ್ಲ, ಅವರಿಗೆ ಏನು ಬರೆದಿದ್ದಾರೆ ಎನ್ನುವುದಷ್ಟೇ ಮುಖ್ಯವೆನಿಸುತ್ತದೆ. ಇದು ಕೇವಲ ಸಾಂಸ್ಥಿಕ ವ್ಯವಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ.)

    ಕಡೆಯಲ್ಲಿ, ರಾಜಕೀಯ ಪಕ್ಷಗಳಿರುವುದೇ ರಾಜಕೀಯ ಲಾಭ ಎತ್ತಲು ಬಿಡಿ. ಆದರೆ ಇತಿಹಾಸಕಾರರು ಎನ್ನಿಸಿಕೊಂಡವರು, ಇತಿಹಾಸವನ್ನು ತಿರುಚಲಾಗಿದೆ ಎಂದೆಲ್ಲಾ ಮಾತನಾಡುವವರು ಹೀಗೆ ಬರೆಯುವುದನ್ನು ಹೇಗೆ ಅರ್ಥೈಸಿಕೊಳ್ಳಬೇಕು?

    ಯಾರಾದರೂ ಇತಿಹಾಸದ ವಿದ್ಯಾರ್ಥಿಗಳಿದ್ದರೆ, ಈ ಪುಸ್ತಕಗಳನ್ನಿಟ್ಟುಕೊಂಡೇ ಇತಿಹಾಸಕಾರರ ಬಗ್ಗೆ ಪಿಹೆಚ್ಡಿ ಪ್ರಬಂಧ ಬರೆಯಬಹುದು ಅನ್ನಿಸುತ್ತದೆ. ಟಿಪ್ಪು ಕಟ್ಟರ್ ಇಸ್ಲಾಮಿಸ್ಟ್ ಆಗಿದ್ದ ಮತ್ತು ತನ್ನ ನಂಬಿಕೆಯನ್ನು ಜಾರಿಗೊಳಿಸಲು ಏನೇನು ಮಾಡಬೇಕೋ ಅದನ್ನೇ ಮಾಡಿದ. ಕನಿಷ್ಠ, ಟಿಪ್ಪು ಹೀಗೆ, ಅವನನ್ನು ವಿರೋಧಿಸುವ-ಪರವಹಿಸುವವರಂತೆ ಲಾಭ-ನಷ್ಟದ ಆಧಾರದಲ್ಲಿ ತನ್ನ ಧಾರ್ಮಿಕ ನಿಲುವು ಬದಲಿಸುವ ದ್ವಂದ್ವ ನೀತಿಯವನೇನೂ ಆಗಿರಲಿಲ್ಲ.

    ಈ ಸತ್ಯ ಹಲವರಿಗೆ ಅಪ್ರಿಯ ಅನ್ನಿಸಬಹುದು. ಅನ್ನಿಸಲಿ. ಕೆಲವೊಮ್ಮೆ ಅನ್ಯಾಯವನ್ನು ನೋಡಿಯೂ ಸುಮ್ಮನಿರಬೇಕಾದ ಸಂದರ್ಭವಿರುತ್ತದೆ. ಕೆಲವೊಮ್ಮೆ ಅನ್ಯಾಯ, ತಾರತಮ್ಯ, ಹಿಪೊಕ್ರೇಸಿಗಳ ಬಗ್ಗೆ ದನಿಯೆತ್ತಲೇಬೇಕಾಗುತ್ತದೆ. ಇದು ಅದೇ ಸಮಯ.

    ( 1.ವಿಕ್ರಂ ಅವರ ಮೇಲೆ ನನಗೇನೋ ವೈಯಕ್ತಿಕ ಸಮಸ್ಯೆಯಿದೆ ಅಂದುಕೊಳ್ಳುವವರು ಇದ್ದರೆ, ಅಂತವರಿಗಾಗಿ – ನನಗೆ ಅವರ ಪರಿಚಯವಿಲ್ಲ. 2015-16ರಲ್ಲಿ ದೆಹಲಿಯಲ್ಲಿ ನಡೆದ ನ್ಯಾಷನಲ್ ರೈಟರ್ಸ್ ಮೀಟ್ ಅಲ್ಲಿ, ಹೈ ಹಲೋ ಹೇಳಿದ್ದು ನೆನಪಷ್ಟೇ. So, ಈ ಬರಹ ಅವರ ಪುಸ್ತಕದ ವಿಷಯವನ್ನು ಆಧರಿಸಿ ಮಾತ್ರವೇ ಹೊರತು ವ್ಯಕ್ಯಿಯ ಬಗ್ಗೆಯಲ್ಲ.

    2.ಈ ಲೇಖನ ಬೇಡ ತೆಗೆಯಿರಿ ಎಂದು ಕಾಲ್ ಬರಬಹುದಾದ್ದರಿಂದ, ಅಂತವರಿಗೆ ಹೇಳ ಬಯಸುವುದು ದಯವಿಟ್ಟು ಹಾಗೆ ಹೇಳಲು ಕಾಲ್ ಮಾಡಬೇಡಿ. ನಾನು ತೆಗೆಯುವುದಿಲ್ಲ. No ಎನ್ನಲು ನಾನು ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದು ನನ್ನ ಜೊತೆ ಒಡನಾಡಿದವರಿಗೆ ಗೊತ್ತಿರುತ್ತದೆ.)

    23
    ಜೂನ್

    ಶಿಕ್ಷಣ ತಜ್ಞ ಶ್ಯಾಮಪ್ರಸಾದ್ ಮುಖರ್ಜಿ

    – ಅಜಿತ್ ಶೆಟ್ಟಿ ಹೆರಂಜೆ

    ಇವತ್ತು ಶ್ಯಾಮಾ ಪ್ರಸಾದ್ ಮುಖರ್ಜಿಯವರು ಹತ್ಯೆಯಾದ ದಿನ. 1953ರ ಈ ದಿನ, ನೆಹರೂ ಸರಕಾರದ ಆದೇಶದ ಮೇರೆಗೆ ಕಾಶ್ಮೀರ ರಾಜ್ಯ ಸರಕಾರ ಅವರನ್ನು ಒಂದು ಅಜ್ಞಾತ ಪ್ರದೇಶದಲ್ಲಿ  ಗೃಹ ಬಂಧನದಲ್ಲಿ ಇಟ್ಟಿತ್ತು. ಕಾಶ್ಮೀರದಲ್ಲಿ ಇದ್ದ ಆರ್ಟಿಕಲ್ 370ರ ವಿರುದ್ಧ ಪ್ರತಿಭಟಿಸಲು ಹೋದಾಗ ನೆಹರೂ ಸರಕಾರ ಇವರ ಬಂಧನಕ್ಕೆ ಆದೇಶ ಹೊರಡಿಸಿತ್ತು. 40 ದಿನಗಳ ಗೃಹ ಬಂಧನದ ಅವಧಿಯಲ್ಲಿ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗುತ್ತದೆ. ಅವರಿಗೆ ಔಷಧೋಪಚಾರವನ್ನು ಸರಕಾರ ಒದಗಿಸಿತ್ತಾದರೂ ಅವರು ಮರಣ ಹೊಂದುತ್ತಾರೆ.

    ಅವರ ಸಾವಿನ ನಂತರ ಅವರ ತಾಯಿ ಜೋಗಮಾಯಾ ದೇವಿಯವರು ತನ್ನ ಮಗನ ಸಾವಿನ ಬಗ್ಗೆ ತಮಗೆ ಅನೇಕ ಅನುಮಾನಗಳಿವೆ, ಅವನ ಬಂಧನದಲ್ಲಿದ್ದಾಗ ಅವನಿಗೆ ಚಿಕಿತ್ಸೆ ಕೊಟ್ಟವರು ಯಾರು? ಯಾವ ರೀತಿಯ ಚಿಕಿತ್ಸೆ ಕೊಡಲಾಯಿತು? ಯಾವ ಕಾಯಿಲೆಗೆ ಕೊಡಲಾಯಿತು? ಇದು ಸಹಜ ಸಾವೋ? ಅಥವಾ ನನ್ನ ಮಗನ ರಾಜಕೀಯ ಚಳುವಳಿಯ ಕಾರಣಕ್ಕೆ  ಸರಕಾರೀ ಪ್ರಾಯೋಜಕತ್ವದಲ್ಲಿ ನಡೆಸಿದ ಕೊಲೆಯೋ ಎಂಬುದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು   ಪ್ರಧಾನಿ ನೆಹರುವಿಗೆ ಪತ್ರ ಬರೆಯುತ್ತಾರೆ. ಆದರೆ ಅದು ನೆಹರೂ ಕಛೇರಿಯ ಕಸದ ಬುಟ್ಟಿ ಸೇರುತ್ತದೆ.

    ಶ್ಯಾಮಪ್ರಸಾದ್ ಮುಖರ್ಜಿಯವರು ಯಾವುದನ್ನು ವಿರೋಧಿಸಿ ತಮ್ಮ ಸರ್ವೋಚ್ಛ ಬಲಿದಾನವನ್ನು ನೀಡಿದರೋ, ಅದನ್ನ ಮೋದಿ ಸರಕಾರ 2 ವರ್ಷದ ಹಿಂದೆ ತೆಗೆದುಹಾಕಿತು. ಕಾಶ್ಮೀರ ಪೂರ್ಣ ಪ್ರಮಾಣದಲ್ಲಿ ಭಾರತದ ಭಾಗವಾಯಿತು.
    ಬಹುತೇಕ ಮಂದಿಗೆ ಶ್ಯಾಮಾ ಪ್ರಸಾದ್ ಮುಖರ್ಜಿಯವರ 30 ವರ್ಷಗಳ ಸುದೀರ್ಘವಾದ ಸಾರ್ವಜನಿಕ ಜೀವನದಲ್ಲಿ ಅವರ ಕೊನೆಯ ಮೂರು ವರ್ಷಗಳ ಪರಿಚಯ ಮಾತ್ರ ಇರುವುದು. 1950ರಲ್ಲಿ ಅವರು ನೆಹರೂ  ಸರಕಾರಕ್ಕೆ ರಾಜಿನಾಮೆ ಕೊಡುತ್ತಾರೆ, 1951ರಲ್ಲಿ ಸಂಘದ ಸಂಪರ್ಕಕ್ಕೆ ಬರುತ್ತಾರೆ, ‘ಜನಸಂಘ’ದ ಸ್ಥಾಪನೆ ಮಾಡುತ್ತಾರೆ. 1952 ರ ಚುನಾವಣೆಯಲ್ಲಿ ಜನಸಂಘ 3 ಸ್ಥಾನವನ್ನು ಗೆಲ್ಲುತ್ತದೆ. 1953ರಲ್ಲಿ ಅವರು ಕಾಶ್ಮೀರದ ವಿಚಾರವಾಗಿ ಹೋರಾಡಿ ನಿಗೂಢವಾಗಿ ಸಾವನ್ನು ಕಾಣುತ್ತಾರೆ ಎನ್ನುವುದಷ್ಟೆ ತಿಳಿದಿರುವ ವಿಚಾರ.

    ಶ್ಯಾಮಪ್ರಸಾದ ಮುಖರ್ಜಿ 1934 ರಿಂದ 1938ರ ತನಕ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ ಕೆಲಸ ಮಾಡುತ್ತಾರೆ. 1933ರಲ್ಲಿ ಉಪಕುಲಪತಿಯಾಗಿ ನೇಮಕವಾದಾಗ ಅವರ ವಯಸ್ಸು ಇನ್ನೂ 33. ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ವಿಶ್ವವಿದ್ಯಾನಿಲಯದ ಉಪಕುಲಪತಿಯಾದವರು. ಆ ವಯಸ್ಸಿಗಾಗಲೇ ಅವರು ಇಂಗ್ಲೀಷಿನಲ್ಲಿ ಬಿ ಎ, ಬಂಗಾಳಿ ಭಾಷೆಯಲ್ಲಿ ಎಂ ಎ, ಕಾನೂನು ಶಿಕ್ಷಣದಲ್ಲಿ  ಬ್ಯಾಚುಲರ್ ಪದವಿ ಹಾಗು ಇಂಗ್ಲೆಂಡ್ ಗೆ ತೆರಳಿ  ಭ್ಯಾರಿಷ್ಟರ್ ಪದವಿಯನ್ನೂ ಪಡೆದಿದ್ದರು. ಇವರ ತಂದೆ ಆಶುತೋಷ್ ಮುಖರ್ಜಿ ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಮೊದಲ ಭಾರತೀಯ  ಉಪಕುಲಪತಿಗಳಾಗಿದ್ದವರು. ಶ್ಯಾಮಾ ಪ್ರಸಾದ್ ಮುಖರ್ಜಿಯವರು ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿದ್ದಾಗಲೆ ವಿಶ್ವವಿದ್ಯಾನಿಲಯದ ಕೆಲಸಗಳಲ್ಲಿ ತಂದೆಗೆ ಸಹಾಯ ಮಾಡಿದ ಅನುಭವವನ್ನು ಹೊಂದಿದ್ದರು.
     
    ಶ್ಯಾಮ ಪ್ರಸಾದ್ ಮುಖರ್ಜಿಯವರು ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದಾಗ, ವಿಶ್ವವಿದ್ಯಾನಿಲಯಗಳ ಇತಿಹಾಸದಲ್ಲೇ ನಡೆಯದ ಹಲವು ಪ್ರಥಮಗಳಿಗೆ ಮುನ್ನುಡಿಯನ್ನು ಬರೆಯುತ್ತಾರೆ. ಬ್ರಿಟೀಷರ ಆಳ್ವಿಕೆಯಲ್ಲಿ ಭಾರತೀಯ ಮೂಲದ ಶಿಕ್ಷಣ ಪದ್ಧತಿಯ ನಲುಗಿ ಹೋಗಿತ್ತು. ಅದರ ಜೊತೆಗೆ ಬ್ರಟೀಷ್ ಸಾಮ್ರಾಜ್ಯಶಾಹಿ ವ್ಯವಸ್ಥೆ ಹುಟ್ಟು ಹಾಕಿದ ಆಧುನಿಕ ಶಿಕ್ಷಣ ವ್ಯವಸ್ಥೆ, ಸಂಪೂರ್ಣವಾಗಿ ಇಂಗ್ಲೀಷ್ ಮಯವಾಗಿತ್ತು. ಅಲ್ಲಿ ಭಾರತೀಯ ಭಾಷೆಗಳಿಗೆ ಯಾವುದೇ ಪ್ರಾಧಾನ್ಯತೆ ಇರಲಿಲ್ಲ. ಬಂಗಾಳದಲ್ಲಿ  ಬಂಗಾಳದ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಪಡೆಯುವುದು ಅತ್ಯಂತ ಪ್ರಯಾಸದ ವಿಷಯವಾಗಿತ್ತು ಹಾಗಾಗಿ ತಮ್ಮ ಕಾಲದಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಮತ್ತು ಬಂಗಾಳದ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳಿಯ ಭಾಷೆಗಳಿಗೆ ಪ್ರಾತಿನಿದ್ಯತೆ ಕೊಡಿಸುವ ತೀರ್ಮಾನ ಮಾಡುತ್ತಾರೆ ಹಾಗು ಬಂಗಾಳಿ ಭಾಷೆಯಲ್ಲೇ ಹತ್ತನೆ ತರಗತಿಯವರೆಗೆ ಶಿಕ್ಷಣ ಪಡೆಯುವ ಅವಕಾಶವನ್ನು ಬಂಗಾಳಿ ವಿಧ್ಯಾರ್ಥಿಗಳಿಗೆ ಮಾಡಿಸಿಕೊಡುತ್ತಾರೆ. ಇದಕ್ಕೆ 1935ರ ‘ಯೂನಿವರ್ಸಿಟಿ ಕಾಯಿದೆ’ಯಲ್ಲಿ ಮಾನ್ಯತೆಯನ್ನೂ ಕೊಡಿಸುತ್ತಾರೆ. 

    ವಿವಿಯಲ್ಲಿ ಬ್ರಿಟಿಷರ ಲಾಂಛನ
    ಮುಖರ್ಜಿಯವರು ಬದಲಾಯಿಸಿದ ಲಾಂಛನ

    ವಿಶ್ವವಿದ್ಯಾನಿಲಯ ಪ್ರಾರಂಭವಾದಾಗಿನಿಂದ ಅಲ್ಲಿಯ ತನಕ  ಬ್ರಿಟೀಷರ ದಾಸ್ಯದ ಚಿಹ್ನೆಯಾಗಿದ್ದ ‘ವಿಶ್ವವಿದ್ಯಾನಿಲಯದ ಚಿಹ್ನೆ’ಯನ್ನು ಬದಲಾಯಿಸಿ ಅದಕ್ಕೆ ಸಂಪೂರ್ಣವಾಗಿ ಭಾರತದ ಆದ್ಯಾತ್ಮ ಸ್ವರೂಪವನ್ನು ಕೊಡುತ್ತಾರೆ.  ಕುದುರೆ ಮತ್ತು ಇಂಗ್ಲೆಂಡಿನ ರಾಜ ಪ್ರಭುತ್ವದ ಸೂಚಕದ ಚಿಹ್ನೆಯನ್ನು ತೆಗೆದು ‘ಕಮಲದ ಹೂವುಗಳ ದಳ ಇರುವ ವ್ರತ್ತಾಕಾರದ ಚಿಹ್ನೆ’ಯನ್ನು ನೀಡುತ್ತಾರೆ. ಇದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗುತ್ತದೆ. ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಗುರುದೇವ ರಬೀಂದ್ರನಾಥ ಠಾಗೋರ್ ಅವರನ್ನು ಕರೆಯಿಸಿ ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಮೊದಲಬಾರಿಗೆ ಘಟಿಕೋತ್ಸವದ ಭಾಷಣ ಬಂಗಾಳಿ ಭಾಷೆಯಲ್ಲಿ ಮಾಡಿಸುತ್ತಾರೆ. ಇದು ಬ್ರಿಟಿಷರನ್ನ ಇನ್ನೂ ಕೆರಳಿಸುತ್ತದೆ. ರಬೀಂದ್ರನಾಥ ಠಾಗೋರರನ್ನು ವಿಶ್ವವಿದ್ಯಾನಿಲಯದಲ್ಲಿ  ಬಂಗಾಳಿ ಭಾಷಾ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೂಡ ನೇಮಿಸುತ್ತಾರೆ. ಬಂಗಾಳಿ ಭಾಷೆಯಲ್ಲಿ ಹೆಚ್ಚಿನ ಸಾಹಿತ್ಯ ಸೃಷ್ಟಿಸಲು ಪ್ರೇರಣೆ ಸಿಗಲಿ ಎನ್ನುವ ಕಾರಣಕ್ಕೆ ವಿಶ್ವವಿದ್ಯಾನಿಲಯದಿಂದಲೇ ಅನೇಕ ಬಂಗಾಳಿ ಸಾಹಿತ್ಯದ ಕೈಪಿಡಿಗಳನ್ನು ಮುದ್ರಿಸಿ ಪ್ರಕಟಿಸುತ್ತಾರೆ,  ಇವರ ಕಾಲದಲ್ಲೇ, ಅಂದರೆ 1937 ರಲ್ಲಿ ಮೊದಲ ಬಾರಿಗೆ ಬಂಗಾಳಿ ಭಾಷೆಯಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ ಒಂದಕ್ಕೆ ಡಾಕ್ಟರೇಟ್ ಗೌರವ ಸಿಗುತ್ತದೆ.
     
    ಶ್ಯಾಮ ಪ್ರಸಾದ್  ಮುಖರ್ಜಿಯವರು ವಿಶ್ವವಿದ್ಯಾನಿಲಯದಲ್ಲಿ, ಇತರ ಅನೇಕ ಆಧುನಿಕ ಮತ್ತು ಹೊಸತಲೆಮಾರಿಗೆ ಆವಶ್ಯಕವಾಗಿ ಬೇಕಾಗಿದ್ದ ವಿಷಯಗಳ ತರಗತಿಯನ್ನೂ ಪ್ರಾರಂಭಿಸುತ್ತಾರೆ. ಬಂಗಾಳಿ ಭಾಷೆಯ ಜೊತೆಗೆ ಉರ್ದು, ಹಿಂದಿ, ಅಸ್ಸಾಮಿ ಮುಂತಾದ ಸ್ಥಳೀಯ ಭಾರತೀಯ ಭಾಷೆಗಳಿಗೂ ಅವಕಾಶ ಕೊಡಿಸುತ್ತಾರೆ.  ಔದ್ಯೋಗಿಕ ಜಗತ್ತಿಗೆ ಅಗತ್ಯವಿದ್ದ  ತಾಂತ್ರಿಕ ವಿಷಯಗಳ ಬಗ್ಗೆ ತರಬೇತಿ ಕೊಡಿಸುವ ಕೆಲಸ ಮಾಡುತ್ತಾರೆ.  ಇವರು ‘ಅಪ್ಲೈಡ್ ಫಿಸಿಕ್ಸ್’ ವಿಭಾಗವನ್ನು ಆರಂಭಿಸಿ, ಅಲ್ಲಿ ಇವತ್ತಿನ  ಮಾಹಿತಿ ತಂತ್ರಜ್ನಾನದ ಇಂಜಿನೀಯರಿಂಗ್ ಗೆ ಸಮನಾಗಿದ್ದ  ‘ಕಮ್ಯುನಿಕೇಶನ್ ಇಂಜಿನೀಯರಿಂಗ್’ ಪ್ರಾರಂಭಿಸುತ್ತಾರೆ. 1934 ರಲ್ಲಿ ಡಿಸಿಎಸ್ ಪದವಿಯನ್ನು ಪಬ್ಲಿಕ್ ಹೆಲ್ತ್ ವಿಭಾಗದಲ್ಲಿ ಪ್ರಾರಂಭಿಸುತ್ತಾರೆ. ಸೈನ್ಯಕ್ಕೆ ಸೇರಬಯಸುವ ವಿಧ್ಯಾರ್ಥಿಗಳಿಗೆ ತರಬೇತಿ ಕೊಡಿಸುವ ವ್ಯವಸ್ಥೆ ಮಾಡಿಸುತ್ತಾರೆ. ನಂತರದ ದಿನಗಳಲ್ಲಿ ಭಾರತೀಯ ವಾಯುಪಡೆಯೊಂದಿಗೆ ಸೇರಿ  3 ತಿಂಗಳ ಇಂಟರ್ನಶಿಪ್  ಕೋರ್ಸ್‍ಗಳನ್ನು ಪ್ರಾರಂಭಿಸುತ್ತಾರೆ.  ಪ್ರಾಚ್ಯವಸ್ತು ಶಾಸ್ತ್ರ,ಆರೋನಾಟಿಕ್ಸ್ ವಿಭಾಗದಲ್ಲಿ ಬಿಎ, ಖಗೋಳ ಶಾಸ್ತ್ರದಲ್ಲಿ ಪದವಿ, ಗಣಿತದಲ್ಲಿ ಹಾನರರಿ ಕೋರ್ಸ್‍ಗಳನ್ನೂ ಪ್ರಾರಂಭಿಸುತ್ತಾರೆ. ವಿಧ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೆ ತರೆಬೇತಿ ಕೊಡಿಸುವ ಕಲಿಕಾ ವ್ಯವಸ್ಥೆಯನ್ನೂ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸುತ್ತಾರೆ. ಇವರ ಕಾರ್ಯಕಾಲದಲ್ಲಿ ಬಂಗಾಳದಲ್ಲಿ 2 ಪ್ರಮುಖ ಶಿಕ್ಷಕರ ತರಬೇತಿ ಕಾಲೇಜ್ ಗಳನ್ನು ಆರಂಭಿಸುತ್ತಾರೆ. ಮಹಿಳೆಯದ ಶಿಕ್ಷಣಕ್ಕೆ ಒತ್ತುಕೊಡಲು,  ಬಿಹಾರಿಲಾಲ್ ಮಿತ್ರರವರು  ಮಹಿಳೆಯರಿಗಾಗಿ ಹೊಮ್ ಸಯನ್ಸ್ ತರಗತಿಗಳನ್ನು ಪ್ರಾರಂಭಿಸಲು ನಿಶ್ಚಯಿಸಿದಾಗ ಅವರಿಗೆ ಆ ಕಾಲದಲ್ಲೇ 6500 ರೂಪಾಯಿಗಳ ದೇಣಿಗೆ ನೀಡುತ್ತಾರೆ.  ಮುಂದೆ ಅದೇ ಸಂಸ್ಥೆ ಬೆಳೆದು ‘ಬಿಹಾರಿಲಾಲ್ ಕಾಲೇಜ್’ಆಗುತ್ತದೆ. ಶ್ಯಾಮಾಪ್ರಸಾದ ಮುಖರ್ಜಿ ವಿಶ್ವವಿದ್ಯಾನಿಲಯದಲ್ಲಿ  ಏಷಿಯಾದ ಸಂಸ್ಕ್ರತಿಯನ್ನು ಕಲಿಕಾ ವಿಷಯವನ್ನಾಗಿಸುವ ಹೊಸ ಪ್ರಯತ್ನವೊಂದಕ್ಕೆ ಮುಂದಾಗುತ್ತಾರೆ.  ಅವರು  ಚೀನಾ ಮತ್ತು ಟಿಬೇಟಿನ ಭಾಷಾ ಅಧ್ಯಯನ ಕೇಂದ್ರವನ್ನ ಸ್ಥಾಪಿಸುತ್ತಾರೆ. 
     
    ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ, ಅವರ ಇತರ ಶಿಕ್ಷಣೇತರ ಹಿತಗಳನ್ನು ಕಾಪಾಡಲು ಅವರು ವಿಶ್ವವಿದ್ಯಾನಿಲಯದಲ್ಲಿ ಒಂದು ಸ್ಟೂಡೆಂಟ್ ವೆಲ್‍ಫೇರ್ ಅಸೋಸಿಯೇಶನ್ ಪ್ರಾರಂಭಿಸುತ್ತಾರೆ. ವಿದ್ಯಾರ್ಥಿಗಳು , ಶಿಕ್ಷಕರು ಮತ್ತು ಭೋಧನೇತರ ಸಿಬ್ಬಂಧಿಗಳ ಒಳಿತಿಗಾಗಿ ಸುಮಾರು 30ಕ್ಕೂ ಹೆಚ್ಚು  ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಾರೆ. ‘ವಿಶ್ವವಿದ್ಯಾನಿಲಯದ ಸಿಬ್ಬಂಧಿಗಳ ಸಂಘಟನೆ’ಯ ಅಧ್ಯಕ್ಷರೂ ಆಗುತ್ತಾರೆ. ವಿಶ್ವವಿದ್ಯಾನಿಲಯದ ಇತಿಹಾಸದಲ್ಲೆ ಮೊದಲ ಬಾರಿಗೆ  ಸಿಬ್ಬಂಧಿಗಳಿಗೆ ‘ಪ್ರಾವಿಡೆಂಟ್ ಫಂಡ್’ ಕೊಡಿಸುವ ಬಗ್ಗೆ ಸಿಂಡಿಕೇಟ್ ಬಳಿ ಪ್ರಸ್ಥಾಪವನ್ನು ಇಡುತ್ತಾರೆ.
     
    ಶಿಕ್ಷಣ ಕ್ಷೇತ್ರದಲ್ಲಿ ಶ್ಯಾಮಾ ಪ್ರಸಾದ್ ಮುಖರ್ಜಿಯವರ ಅತ್ಯಂತ ಮಹತ್ವದ ಕೊಡುಗೆ ಅಂದರೆ, ಅವರು ಜಾರಿಗೆ ತಂದ ‘ಪಂಚ ಶೀಲ  ನೀತಿ ಭಾರತದ ಭವಿಷ್ಯವನ್ನು ನಿರ್ಮಿಸುವ ಯುವ ವರ್ಗದ ಶಿಕ್ಷಣ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗಿದಾಗ ಮಾತ್ರ, ದೇಶದ ಭವಿಷ್ಯವೂ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ ಎನ್ನುವ  ವಿಷಯವನ್ನು ಪ್ರತಿಪಾದಿಸಿತ್ತಾ ಶ್ಯಾಮಪ್ರಸಾದ ಮುಖರ್ಜಿಯವರು ತನ್ನ 2ನೇ ಘಟಿಕೋತ್ಸವದ ಭಾಷಣದಲ್ಲಿ 5 ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.


    1.           ಸಮಾಜದಲ್ಲಿ  ಯುವಕರ ಸರ್ವಾಂಗೀಣ ಅಭಿವೃದ್ದಿಗೆ  ಸಹಾಯವಾಗಲು, ಶಿಕ್ಷಣ ಸಮಾಜದ ಎಲ್ಲಾ ವರ್ಗಗಳಲ್ಲೂ ಸಿಗಬೇಕು.
    2.           ಸಂಸ್ಕೃತಿ ಮತ್ತು ವಿಜ್ಞಾನದ  ಸರಿಯಾದ ಸಮನ್ವಯ ಶಿಕ್ಷಣ ವ್ಯವಸ್ಥೆಯೊಳಗಿರಬೇಕು.
    3.           ದೇಶದ ಆಯಾಯ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ಶಿಕ್ಷಕರು ಶಿಕ್ಷಣವನ್ನು ಕೊಡಬೇಕು.
    4.           ಶಿಕ್ಷಣ ವ್ಯವಸ್ಥೆ ಸಮಾಜದೊಳಗೆ ಸ್ವಸ್ಥ, ಸುಂದರ ಮತ್ತು ಭಯ ಮುಕ್ತ ವಾತಾವರಣದ ನಿರ್ಮಾಣಕ್ಕೆ ಪೂರಕವಾಗಿರಬೇಕು.
    5.           ಶಿಕ್ಷಣ ಹೆಚ್ಚು ಹೆಚ್ಚು ಸರಕಾರಿ ಪ್ರಾಯೋಜಕತ್ವದಲ್ಲೇ ದೊರಕಬೇಕು.


    ಶ್ಯಾಮಾ ಪ್ರಸಾದ್ ಮುಖರ್ಜಿಯರ ಈ ನೀತಿಯನ್ನು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವವರು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡಿದರು. ಅವರು ವಿಶ್ವವಿಧ್ಯಾನಿಲಯದಲ್ಲಿ  ಪ್ರಾರಂಭಿಸದ ಅನೇಕ ವಿಷಯಗಳು ಮುಂದಿನ ದಿನಗಳಲ್ಲಿ ಪ್ರತ್ಯೇಕ ಶಿಕ್ಷಣ ಪ್ರಭೇದಗಳಾಗಿ ವಿಶ್ವವಿದ್ಯಾನಿಲಯಗಳಲ್ಲಿ ಬೋದಿಸಲ್ಪಡುತ್ತದೆ.  ವರ್ತಮಾನದ ಕೇಂದ್ರ ಸರ್ಕಾರ ರೂಪಿಸಿರುವ ‘ಹೊಸ ಶಿಕ್ಷಣ ನೀತಿ’ಯು ಕೂಡ ಶ್ಯಾಮಾ ಪ್ರಸಾದ ಮುಖರ್ಜಿವರ ಶಿಕ್ಷಣ ನೀತಿಯಂದ ಪ್ರೇರಣೆ ಪಡೆದಿದೆ.
     
    ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಅವರ ಅನುಭವ, ಅವರು ಮುಂದೆ ದೇಶದ ಕೈಗಾರಿಕೆ ಮತ್ತು ಸರಬರಾಜು ಮಂತ್ರಿಗಳಾಗಿ ಕಾರ್ಯನಿರ್ವಹಿಸುವಾಗ ಸಹಾಯಕ್ಕೆ ಬರುತ್ತದೆ. ಅವರು ತಮ್ಮ ಕಾರ್ಯಕಾಲದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಿದ ಅನೇಕ ವೃತ್ತಿಪರ ಶಿಕ್ಷಣ ಮಾದರಿಯಲ್ಲಿ ಕಲಿತವರೇ ದೇಶದ ಪ್ರಖ್ಯಾತ ಉದ್ದಿಮೆಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಈ ಕಾರಣಕ್ಕೆ ಅವರಿಗೆ ಕೈಗಾರಿಕೆ ಮತ್ತು ಅವುಗಳ ಸವಾಲುಗಳನ್ನು ಆಧರಿಸಿ ಉದ್ದಿಮೆ ಮತ್ತು ಕಾರ್ಮಿಕರಿಬ್ಬರ ಹಿತವನ್ನೂ ಕಾಯುವ, ಅವರ ನಡುವೆ ಸಂಭವಿಸುತ್ತಿದ್ದ ಸಂಘರ್ಷಗಳನ್ನ ತಡೆದು, ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರದ ಜೊತೆಗೆ ಅವುಗಳ ಮೂಲವನ್ನು ಅರಿತು ಪರಹಾರ ಕಂಡುಕೊಳ್ಳುವುದು ಸುಲಭವಾಯಿತು. ಕೈಗಾರಿಕೆಗಳು ದೇಶದ ಅಭಿವೃದ್ದಿಗೆ ಮತ್ತು ಕೈಗಾರಿಕೆ ಬೇಕಿರುವ ವೃತ್ತಿ ಕೌಶಲ್ಯ ಹೊಂದಿರುವ, ನುರಿತ ತರಬೇತಿ ಪಡೆದಿರುವ ಕಾರ್ಮಿಕ ವರ್ಗದ ಪೂರೈಕೆಗೆ ಅಗತ್ಯವಿರುವ ದೂರಗಾಮಿ ಯೋಜನೆಗಳನ್ನು ರೂಪಿಸುವಲ್ಲಿ ಸಹಾಯ ಮಾಡಿತು. ಶ್ಯಾಮಾ ಪ್ರಸಾದ್
    ಮುಖರ್ಜಿಯವರು ರಾಜಕಾರಣದ ಕಾರಣಕ್ಕೆ ಈ ದೇಶಕ್ಕೆ ಎಷ್ಟು ಪ್ರಸ್ತುತವೋ,  ಅವರು ಒಬ್ಬ ಶಿಕ್ಷಣ ತಜ್ಞನಾಗಿ, ಒಬ್ಬ ನುರಿತ ಆಡಳಿತಗಾರನಾಗಿ, ಒಬ್ಬ ಒಳ್ಳೆಯ ಸಮಾಜ ಚಿಂತಕನಾಗಿ, ಕೂಡ ನಮಗೆ ಇಂದಿಗೂ ಅಷ್ಟೇ ಪ್ರಸ್ತುತ.

    4
    ಜುಲೈ

    ಲಡಾಖ್‍ನಲ್ಲಿ ಚೀನೀ ಕಾಸೂ ಕೇಡು, ತಲೆಯೂ ಬೋಳು?

    – ಪ್ರೇಮಶೇಖರ

    ಭಾಗ – 2

    ಜೂನ್ 15ರ ಘರ್ಷಣೆ ಮತ್ತು ಅದರಿಂದಾಗಿ ಎರಡೂ ಕಡೆ ಘಟಿಸಿದ ಪ್ರಾಣಹಾನಿಯಿಂದಾಗಿ ಉಂಟಾದ ವಿಷಮ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಭಾರತೀಯ ಮತ್ತು ಚೀನೀ ಸೇನೆಗಳ ನಡುವೆ ಜೂನ್ 22ರಂದು ಲೆಫ್ಥಿನೆಂಟ್ ಜನರಲ್ ಮಟ್ಟದ ಮಾತುಕತೆಗಳು ನಡೆದು, ಹತೋಟಿ ರೇಖೆಯಲ್ಲಿ ಮುಖ್ಯವಾಗಿ ಗಲ್ವಾನ್ ಕಣಿವೆಯಲ್ಲಿ ಶಾಂತಿ ಕಾಪಾಡಲು ಎರಡೂ ಪಕ್ಷಗಳು ಒಮ್ಮತಕ್ಕೆ ಬಂದವು.  ಜೂನ್ 6ರ ಒಪ್ಪಂದವನ್ನು ಚೀನಾ ಉಲ್ಲಂಘಿಸಿ ಘರ್ಷಣೆಗಳಿಗೆ ಕಾರಣವಾಗಿದ್ದರ ಹಿನ್ನೆಲೆಯಲ್ಲಿ ಹೊಸ ಒಪ್ಪಂದದ ಬಾಳಿಕೆಯ ಬಗ್ಗೆ ಪ್ರಶ್ನೆಗಳೆದ್ದರೂ ಈ ಬಾರಿ ಚೀನಾದಿಂದ ಹಿಂದಿನ ವಿಶ್ವಾಸಘಾತಕತನ ಮರುಕಳಿಸಲಾರದು ಎಂಬ ಆಶಾಭಾವನೆಯನ್ನೂ ಮೂಡಿಸುವ ಕಾರಣಗಳು ನಮ್ಮೆದುರಿಗಿದ್ದವು.

    ವಸ್ತುಸ್ಥಿತಿಯನ್ನು ಹೊರಜಗತ್ತಿನಿಂದ ಮುಚ್ಚಿಡಲು ಚೀನಾ ಅದೆಷ್ಟೇ ಹೆಣಗಿದರೂ ಜೂನ್ ತಿಂಗಳಲ್ಲಿ ದೇಶದ ಆಂತರಿಕ ಸಂಕಷ್ಟಗಳು ಮಿತಿಮೀರಿದ ಬಗೆಗಿನ ವಿವರಗಳು ನಮಗೆ ತಿಳಿಯತ್ತಲೇ ಇವೆ. ಜೂನ್ 11ರಂದು ಆರಂಭವಾದ ವಾರ್ಷಿಕ ಮಳೆ ದೇಶದ ಮೂರನೆಯ ಎರಡು ಭಾಗಗಳಲ್ಲಿ ಅಗಾಧ ಪ್ರಮಾಣದ ಪ್ರವಾಹ ಮತ್ತು ಭೂಕುಸಿತಗಳನ್ನುಂಟು ಮಾಡುತ್ತಿದೆ.  ಇಂತಹ ಭಾರಿ ಮಳೆಯನ್ನು ಚೀನಾ ದೇಶ 1940ರ ನಂತರ ಕಂಡಿರಲಿಲ್ಲಂತೆ.  ಈ ಪ್ರಾಕೃತಿಕ ವಿಕೋಪ ಬೆಳೆಗಳಿಗೆ ವ್ಯಾಪಕ ಹಾನಿ ಮಾಡುವುದರ ಜತೆಗೆ ಸಾರಿಗೆ ಸಂಪರ್ಕವ್ಯವಸ್ಥೆಯನ್ನೂ ಹಾಳುಗೆಡವಿದೆ. ಇದು ಈಗಾಗಲೇ ಕೆಟ್ಟಿರುವ ಆಹಾರಪೂರೈಕೆಯನ್ನು ಮತ್ತಷ್ಟು ಬಿಗಡಾಯಿಸಿದೆ.  ಈ ನಡುವೆ ಯಾಂಗ್ಟ್‍ಝೆ ನದಿಗೆ ಕಟ್ಟಲಾಗಿರುವ ಬೃಹತ್ ಅಣೆಕಟ್ಟು ಕುಸಿಯುವ ಅಪಾಯ ಉಂಟಾಗಿದೆ. ಜಗತ್ತಿನ ಅತಿ ದೊಡ್ಡ ಅಣೆಕಟ್ಟುಗಳಲ್ಲೊಂದಾದ ಈ “ತ್ರೀ ಗಾರ್ಜಸ್ ಡ್ಯಾಮ್” ನಿಜಕ್ಕೂ ಕುಸಿದರೆ 24 ಪ್ರಾಂತ್ಯಗಳ ನಲವತ್ತು ಕೋಟಿ ಜನರ ಜೀವಗಳು ಅಪಾಯಕ್ಕೀಡಾಗುತ್ತವೆ.  ಅಪಾಯವನ್ನು ತಡೆಯುವ ಕ್ರಮವಾಗಿ ಅಣೆಕಟ್ಟೆಯ ಮೇಲಿನ ನೀರಿನ ಒತ್ತಡವನ್ನು ಕಡಿಮೆಗೊಳಿಸಲೆಂದು ಸರ್ಕಾರ ಜೂನ್ 29ರಂದು ಏಕಾಏಕಿ ಗೇಟ್‍ಗಳನ್ನು ತೆರೆದಿದೆ. ಆದರೆ ಮುನ್ಸೂಚನೆ ನೀಡದೆ ಹಾಗೆ ಮಾಡಿದ್ದರಿಂದಾಗಿ ನದಿಯುದ್ದಕ್ಕೂ ಉಕ್ಕಿದ ಪ್ರವಾಹಕ್ಕೆ ಹಲವಾರು ಹಳ್ಳಿ ಪಟ್ಟಣಗಳ ಲಕ್ಷಾಂತರ ಜನ ಸಿಲುಕಿಹೋದರು. ಪ್ರವಾಹ ಮತ್ರು ವಿದ್ಯುದಾಘಾತದಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ.

    ಇದರ ಜತೆಗೆ ಕೊರೋನಾ ಸೋಂಕು ದೇಶದೆಲ್ಲೆಡೆ ಮತ್ತಷ್ಥು ಉಗ್ರವಾಗಿದೆ. ರಾಜಧಾನಿ ಬೀಜಿಂಗ್ ದೊಡ್ಡ ವೂಹಾನ್ ಆಗಿ ಬದಲಾಗಿಹೋಗಿದೆ. ದಿನೇ ದಿನೇ ಅಂಕೆಮೀರಿ ಹೆಚ್ಚುತ್ತಲೇ ಇರುವ ಸೋಂಕಿತರನ್ನು ಉಪಚರಿಸಲು ರಾಜಧಾನಿಯ ಆಸ್ಪತ್ರೆಗಳಿಗೆ ಸಾಧ್ಯವಾಗುತ್ತಿಲ್ಲ.  ನಗರದ 70% ಜನತೆಗೆ ಆಹಾರಪದಾರ್ಥಗಳನ್ನು ಪೂರೈಸುವ ಮಾರುಕಟ್ಟೆಗಳು ಸೋಂಕಿನ ಪರಿಣಾಮವಾಗಿ ಜೂನ್ ಆರಂಭದಲ್ಲಿ ಮುಚ್ಚಲ್ಪಟ್ಟ ಕಾರಣ ಸಾಮಾನ್ಯ ಜನತೆ ಅತೀವ ಕಷ್ಥಕ್ಕೀಡಾಗಿದ್ದಾರೆ. ಈ ನಡುವೆ ಲಾಕ್‍ಡೌನ್ ಜಾರಿಗೊಳಿಸುವ ಅತ್ಯುತ್ಸಾಹದಲ್ಲಿಯೋ ಅಥವಾ ಸರ್ಕಾರೀ ಆದೇಶದ ಪಾಲನೆಯ ಮೇರೆಗೋ ಪೊಲೀಸರು ನಗರದ ಕೆಲವೆಡೆ ಜನರನ್ನು ಮನೆಗಳೊಳಗೆ ಕೂಡಿಹಾಕಿ ಅಪಾರ್ಟ್‍ಮೆಂಟ್ ಕಟ್ಟಡಗಳ ಪ್ರವೇಶದ್ವಾರಗಳನ್ನು ಕಬ್ಬಿಣದ ಪಟ್ಟಿಗಳಿಂದ ಬಂದ್ ಮಾಡಿದ ಕಾರಣ ಜನರ ಸಂಕಷ್ಟಗಳು ಇನ್ನಷ್ಟು ಹೆಚ್ಚಿವೆ. ಈ ನಡುವೆ ಕಮ್ಯೂನಿಸ್ಟ್ ಪಾರ್ಟಿಯ ನೇತಾರರಿಗಷ್ಟೇ ಮೀಸಲಾದ “ಮಿಲಿಟರಿ ಹಾಸ್ಪಿಟಲ್ 301”ಗೇ ಕೊರೋನಾ ಸೋಂಕು ಹರಡಿದ ಸುದ್ಹಿ ಬಂದಿದೆ.

    ಮತ್ತಷ್ಟು ಓದು »

    3
    ಜುಲೈ

    ಕಮ್ಯುನಿಸಂನ ಅಭದ್ರತೆ ಮತ್ತು ಅಸಹನೆಯೇ ಚೀನಾ ಆಕ್ರಮಣದ ಮೂಲ

    – ಅಜಿತ್ ಶೆಟ್ಟಿ ಹೆರಂಜೆ

    ಯಾವುದೇ ದೇಶ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪ್ರಭುತ್ವ ಸ್ಥಾಪಿಸಬೇಕಾದರೆ ಅದು ವ್ಯಾಪಾರ ನಡೆಸುವ ಮಾರ್ಗ ಸುರಕ್ಷಿತವಾಗಿರಬೇಕು ಮತ್ತು ಬಹುತೇಕ ಅದು ಆ ದೇಶದ ನಿಯಂತ್ರಣದಲ್ಲಿ ಇರಬೇಕು. ಈ ಭೂಮಿಯ ಮೇಲೆ ಶತಮಾನಗಳಿಂದಲೂ ಅಂತಾರಾಷ್ಟ್ರೀಯ ವ್ಯಾಪಾರ ಬಹುತೇಕ ಸಮುದ್ರ ಮಾರ್ಗದ ಮುಖಾಂತರವೇ ನೆಡೆದಿದ್ದು. ಇದರ ನಿಯಂತ್ರಣ ಯಾರ ಕೈಯಲ್ಲಿ ಇರುತ್ತದೆಯೋ ಅವರು ಜಗತ್ತಿನ ರಾಜಕೀಯವನ್ನು ನಿಯಂತ್ರಿಸುತ್ತಾರೆ. ಇದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ನೆಪೋಲಿಯನ್ ಬೊನಪಾರ್ಟೆ ಇಂಗ್ಲೆಂಡನ್ನು ಸಾಮರಿಕವಾಗಿ ಬಗ್ಗುಬಡಿಯಲು ಆಗದ ಸಂದರ್ಭದಲ್ಲಿ ಅದರ ಆರ್ಥಿಕತೆಯ ನರಮಂಡಲವಾಗಿದ್ದ ಸಮುದ್ರ ವ್ಯಾಪಾರ ಮಾರ್ಗದ ಮೇಲೆ ದಿಗ್ಭಂಧನವನ್ನು ಹಾಕುತ್ತಾನೆ. ಇದು ಆ ಕಾಲದಲ್ಲಿ ಇಂಗ್ಲೆಂಡಿಗೆ ಬಲವಾದ ಹೊಡತವನ್ನೇ ಕೊಟ್ಟಿತ್ತು. ಯೂರೋಪ್ ಮತ್ತು ಪೂರ್ವ ರಾಷ್ಟ್ರಗಳ ನಡುವೆ ವಾಣಿಜ್ಯ ವ್ಯವಹಾರಗಳ ಸಂಪರ್ಕದ ಕೊಂಡಿಯಾಗಿದ್ದ ಕಾಂನ್‌ಸ್ಟಾಂಟಿನೋಪಲನ್ನು ಒಟ್ಟೋಮನ್ ತುರ್ಕರು ವಶಪಡಿಸಿಕೊಂಡಾಗ ಯುರೋಪಿಯನ್ನರಿಗೆ ಪೂರ್ವದ ಜೊತೆಗೆ ವ್ಯವಹಾರ ಮಾಡಲು ಹೊಸ ಮಾರ್ಗದ ಅನ್ವೇಷಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಹಾಗೆಯೆ ಇವತ್ತು ಚೀನಾ ಇಂತಹುದೇ ಒಂದು ಕೃತ್ಯಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳುತ್ತಿದೆ.

    ಕಳೆದ ಕೆಲವು ದಿನಗಳಿಂದ ಲಡಾಕಿನ ಗಲ್ವಾನ್ ಸರೋವರದ ತೀರದಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉಪದ್ರವ ಚೀನಾ ಇಡೀ ಜಗತ್ತಿನಲ್ಲಿ ತಾನು ವಿಶ್ವದ ಆರ್ಥಿಕ ಜಗತ್ತಿನ ಅನಭಿಶಕ್ತ ದೊರೆಯಾಗಬೇಕು ಎನ್ನುವ ಕೂಟ ನೀತಿಯ ಒಂದು ಚಿಕ್ಕ ಭಾಗ. ಇದು ಭಾರತ ಮತ್ತು ಚೀನಾದ ಒಂದು ಸಣ್ಣ ಗಡಿ ವಿವಾದ ಎಂದು ಭಾವಿಸಿದರೆ ಖಂಡಿತ ತಪ್ಪಾಗುತ್ತದೆ.

    ಮತ್ತಷ್ಟು ಓದು »

    23
    ಏಪ್ರಿಲ್

    ಎಲ್ಲದಕ್ಕೂ ಹಿಂದೂಗಳನ್ನು ದೂಷಿಸುವ ಮುನ್ನ …

    – ಬೇಲಾಡಿ ದೀಪಕ್ ಶೆಟ್ಟಿ 

    So called ವಿಚಾರವಾದಿಗಳೇ, ಲಿಬರಲ್ಗಳೇ ದ್ವೇಷ ಮಾಡಬೇಡಿ, ಫೋಭೀಯಾ ಬೆಳೆಸಬೇಡಿ ಅನ್ನುವವರೇ,

    ಅರ್ಥ ಮಾಡ್ಕೊಳ್ಳಿ.ನಮ್ಮ ಸಿಟ್ಟು ಇರೋದು ಯಾವುದೇ ಧರ್ಮದ ಮೇಲಲ್ಲ. ಹಾಗಂತ ದ್ವೇಷನೂ ಸಾಧಿಸುತ್ತಿಲ್ಲ, ಫೋಭೀಯಾನೂ ಹುಟ್ಟು ಹಾಕುತ್ತಿಲ್ಲ.

    ಅಲ್ಪಸಂಖ್ಯಾತಧರ್ಮದ ಹೆಸರಿನಲ್ಲಿ ಜಾತ್ಯಾತೀತತೆಯ ಸೋಗಿನಲ್ಲಿ, ಬಹುಸಂಖ್ಯಾತರ ಭಾವನೆಗಳಿಗೆ ರಾಷ್ಟ್ರ ಮತ್ತು ಜೀವನ ಪದ್ದತಿಯ ವಿಚಾರಗಳಲ್ಲಿ ನಮ್ಮ ಭಾವನೆಗಳಿಗೆ ಘಾಸಿ ಆದ್ರೂ ಸುಮ್ಮನೆ ಎಷ್ಟು ದಿನ ಅಂತ ತಾಳ್ಮೆಯಿಂದ ಇರೋದು. ಒಂದಲ್ಲ ಒಂದು ದಿನ ಆಕ್ರೋಶದ ಕಟ್ಟೆ ಒಡೆಯಲೇಬೇಕಲ್ಲವೇ.

    ಅದೂ ಹೋಗ್ಲಿ, ಆರೈಕೆ ಕೇಂದ್ರದಲ್ಲಿ ಮಲ ವಿಸರ್ಜನೆ, ನರ್ಸ್ಗಳ ಎದುರು ಬಟ್ಟೆ ಬಿಚ್ಚೋದು, ನೋಟಿಗೆ ಬಾಯಲ್ಲಿ ಉಗುಳು ಹಚ್ಚೋದು. ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ, ಮೊನ್ನೆ ಮೊನ್ನೆ ಪೋಲಿಸರ ಮೇಲೆ ಹಲ್ಲೆ , ಇಡೀ ದೇಶ ಪಕ್ಷಾತೀತವಾಗಿ ಸ್ವಲ್ಪ ವಿಚಾರದಲ್ಲಿ ವ್ಯತ್ಯಾಸ ವಿದ್ದರೂ ಸಾಮೂಹಿಕವಾಗಿ ಹೋರಾಡುವಾಗ,ಇವರ ಈ ಕಿರಿಕ್ಕು. ಎಲ್ಲರಂತೆ ಇರಲು ಏನು ಪ್ರಾಬ್ಲಂ. ಇದೇ ರೀತಿ ಅರಬ್ ದೇಶಗಳಲ್ಲಿ ಮಾಡಿದ್ರೆ ಏನು ಮಾಡ್ತಿದ್ದರು. ಇಲ್ಲಿ ಏನು ಮಾಡಿದ್ರು ನಡೀತಿದೆ ಅನ್ನೋ ಮನೋಭಾವನೆ. ಸರ್ವೇ ಜನೋ ಸುಖಿನೋ ಭವಂತು, ವಸುದೈವ ಕುಟುಂಬಕಂ ಅಂದವರಿಗೆ ಈ ಗತಿ.

    ಮತ್ತಷ್ಟು ಓದು »

    1
    ಮಾರ್ಚ್

    ಭಾರತವನ್ನು ಅರಿಯಲು ಶ್ರೀ ಅರವಿಂದರೆನ್ನುವ ಕೀಲಿ ಕೈ

    – ಡಾ. ರೋಹಿಣಾಕ್ಷ ಶಿರ್ಲಾಲು
    ಕರ್ನಾಟಕ ಕೆಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

    ಭಾರತೀಯರೆಲ್ಲಾ ಭಾರತವನ್ನು ಅರ್ಥಮಾಡಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಕೇಳಿದರೆ ಅಪ್ರಸ್ತುತವಾದೀತೆ? ಸೂಕ್ಷ್ಮವಾಗಿ  ಗಮನಿಸಿದರೆ ಈ ಪ್ರಶ್ನೆ ಸಕಾರಣವಾಗಿದೆ. ಹೌದಲ್ಲಾ ನಮಗೆ ಭಾರತವೆಷ್ಟು ಅರ್ಥವಾಗಿದೆ? ಅರ್ಥಮಾಡಿಕೊಳ್ಳಲು ಬಳಸಿದ ಆಕರಗಳೇನು? ಈ ಆಕರಗಳ ಅಧಿಕೃತತೆಯೇನು? ಅಥವಾ ನಮ್ಮ ಆಕರಗಳೇ ಪರಕೀಯವೇ? ಪರಕೀಯ ಎಂದಾದರೆ ನಿಜದ ಭಾರತವನ್ನು ತಿಳಿಯುವುದಾದರೂ ಹೇಗೆ? ಹೀಗೆ ಪ್ರಶ್ನೆಗಳ ಸರಮಾಲೆಯೇ ಹುಟ್ಟಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದೊಳಗೇ ಇರುವ ಒಂದು ಸಣ್ಣ ಗುಂಪು ಇಲ್ಲಿನ ಭೌತಿಕ – ಲೌಖಿಕ ಅನುಕೂಲತೆಗಳೆಲ್ಲವನ್ನು ಪಡೆದುಕೊಂಡೂ ಬೇರೊಂದು ದೇಶಕ್ಕೆ ಜಯಕಾರವನ್ನು ಹಾಕುವ, ತನ್ನ ದೇಶವನ್ನೆ ಭಂಜಿಸುವ, ತುಂಡರಿಸುವ ಕಾರ್ಯೋದ್ದೇಶವನ್ನೇ ಬಹಿರಂಗವಾಗಿ ಸಾರುವ ಪ್ರವೃತ್ತಿಯನ್ನು ತೋರಿಸುತ್ತಿದೆ. ಹಾಗಾದರೆ ಈ ಬಗೆಯ ಪ್ರವೃತ್ತಿಗೆ ಮೂಲ ಕಾರಣವಾದರೂ ಏನು ಎಂದು ಯೋಚಿಸಿದರೆ ಈ ವಿಕೃತಿ ಮೆರೆವ ಮನಸುಗಳಿಗೆ ಭಾರತ ಅರ್ಥವಾಗಿಲ್ಲ ಎನ್ನುವುದು ಸ್ಪಷ್ಟ. ಅಥವಾ ಭಾರತವನ್ನು ಭಾರತೀಯ ಕಣ್ಣುಗಳಿಂದ ನೋಡುವ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎನ್ನಬೇಕು. ಹಾಗೆಂದು ಈ ದೇಶವನ್ನು ಅರ್ಥೈಸಿಕೊಳ್ಳಲು ಮಾಡಿದ ಪ್ರಯತ್ನಕ್ಕೂ ನೂರಾರು ವರ್ಷಗಳ ಇತಿಹಾಸವಿದೆ. ಅಂತಹ ಹಲವು ಪ್ರಯತ್ನಗಳ ಪರಿಣಾಮವಾಗಿಯೇ ಭಾರತ ಉಳಿದಿದೆ. ಇಂದಿನ ತಲೆಮಾರಿಗೆ ಭಾರತವನ್ನು ಅದರ ಮೂಲ ಸ್ವರೂಪದಲ್ಲೇ ಗ್ರಹಿಸಲು ಇರುವ ಜ್ಞಾನದ ಆಕರಗಳನ್ನು ಶೋಧಿಸಲು ಹೊರಟರೆ ಕಣ್ಮುಂದೆ ಕಾಣಿಸಿಕೊಳ್ಳುವ ಜ್ಞಾನನಿಧಿ ಸ್ವರೂಪದ ಶಿಖರಗಳಲ್ಲಿ ಶ್ರೀ ಅರಬಿಂದೋ ಅವರ ವಿಚಾರಧಾರೆಯೂ ಒಂದು.

    ಒಂದು ಶತಮಾನದ ಹಿಂದೆ ಅಂದರೆ 1920ರಲ್ಲಿ ಪ್ರಕಟವಾದ ಶ್ರೀ ಅರಬಿಂದೋ ಅವರ ಒಂದು ಕಿರು ಗ್ರಂಥ ‘The Renaissance in India’ ಇಂದಿಗೂ ದೃಷ್ಟಿ ಕಳೆದುಕೊಂಡ ಭಾರತೀಯರಿಗೆ ಭಾರತವನ್ನು ಕಾಣಿಸುವ ಜ್ಞಾನದ ಕನ್ನಡಕದಂತಿದೆ. ಈ ಕೃತಿ ಮೂಲತಃ ನಾಲ್ಕು ಪ್ರಬಂಧಗಳ ಸಂಕಲನ. 1920ರಲ್ಲಿ ಪರಿಷ್ಕೃತಗೊಂಡು ಗ್ರಂಥ ರೂಪದಲ್ಲಿ ಪ್ರಕಟವಾಗುವ ಪೂರ್ವದಲ್ಲಿ 1918ರಲ್ಲಿ ‘ಆರ್ಯ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮಿ. ಜೇಮ್ಸ್ ಕಝಿನ್ಸ್ ಎಂಬ ವಿದ್ವಾಂಸರು ಬರೆದ ಭಾರತದ ನವೋತ್ಥಾನ ಎನ್ನುವ ವಿಚಾರಪೂರ್ಣ ಗ್ರಂಥದ ಹಿನ್ನೆಲೆಯಲ್ಲಿ ಈ ಪ್ರಬಂಧ ಸರಣಿ ಹುಟ್ಟಿಕೊಂಡು, ಈ ಸರಣಿ ಬೆಳೆದು ಶ್ರೀ ಅರವಿಂದ ವಿಚಾರಧಾರೆಯು ತುಂಬಿ ಹರಿಯಿತು.

    ಮತ್ತಷ್ಟು ಓದು »

    10
    ನವೆಂ

    ಅಥೆನ್ಸ್‌ನಲ್ಲಿಲ್ಲದ ಒಂದು ಅಯೋಧ್ಯೆಯಲ್ಲಿತ್ತು! ಅದೇ ಧರ್ಮ

    – ಸಂತೋಷ್ ತಮ್ಮಯ್ಯ

    ಆಧುನಿಕ ವಾಸ್ತು ಪ್ರಾಕಾರಗಳಲ್ಲಿ ಅತ್ಯಂತ ಜನಪ್ರೀಯತೆಯನ್ನು ಗಳಿಸಿರುವ ಶೈಲಿಗಳಲ್ಲಿ ಗ್ರೀಕ್ ಶೈಲಿಯೂ ಒಂದು. ಅಮೆರಿಕಾದ ವೈಟ್ ಹೌಸಿನಿಂದ ಹಿಡಿದು ಕರ್ನಾಟಕದ ಮಹಾನಗರಗಳ ಪುರಭವನಗಳವರೆಗೂ ಗ್ರೀಕ್ ವಾಸ್ತುಶೈಲಿ ತನ್ನ ಛಾಪನ್ನು ಒತ್ತಿದೆ. ಬೃಹದಾಕಾರದ ಉದ್ದನೆಯ ಕಂಬಗಳು, ಏನೋ ಒಂದು ಗಾಂಭೀರ್ಯವನ್ನೂ ರಾಜಕಳೆಯನ್ನೂ ಒಡಲಲ್ಲಿಟ್ಟುಕೊಂಡ ಈ ಶೈಲಿಯ ಕಟ್ಟಡಗಳು ಕೊಂಚ ಅಧ್ಯಾತ್ಮದ ಭಾವವನ್ನೂ, ಕೊಂಚ ಭೀತಿಯ ಲಕ್ಷಣವನ್ನೂ ಸೂಸುತ್ತಿರುವಂತೆ ಕಾಣಿಸುತ್ತವೆ. ಇಂಥ ಕಟ್ಟಡಗಳು ಇಂದು ಜಗತ್ತಿನ ಸಾಮಾಜಿಕ ಸಂರಚನೆಯನ್ನೂ ಮೀರಿ, ರಾಜಕೀಯ ವಾತಾವರಣವನ್ನೂ ದಾಟಿ, ಪ್ರಾದೇಶಿಕತೆಯ ಶೈಲಿಗಳೆಡೆಯಲ್ಲೂ ಜನಪ್ರೀಯತೆಯನ್ನು ಪಡೆದುಕೊಂಡಿವೆ. ಪುರಾತನ ಗ್ರೀಕ್ ಸಂಸ್ಕೃತಿಗೆ ಮೆರುಗನ್ನೂ ಆಧುನಿಕ ವಾಸ್ತುಶೈಲಿಗೆ ಸವಾಲನ್ನೂ ಒಡ್ಡಿರುವ ಈ ಶೈಲಿ ಗ್ರೀಕ್ ನಾಗರಿಕತೆ ಅಳಿದರೂ ತಾನು ಅಳಿಯದೆ ಉಳಿದುಕೊಂಡಿದೆ. ಅಷ್ಟೇನೂ ಸೂಕ್ಷ್ಮತೆಯಿಲ್ಲದ, ನಾಜೂಕುತನವಿಲ್ಲದ, ಹೆಚ್ಚೇನೂ ಕೌಶಲ್ಯವಿಲ್ಲದಂತೆ ಕಾಣುವ ಗ್ರೀಕ್ ಶೈಲಿ ತನ್ನ ಸರಳತೆಯಿಂದಲೂ ಯೂರೋಪನ್ನು ದಾಟಿ ದೂರದ ಕೊಡಗು-ಚಿಕ್ಕಮಗಳೂರಿನ ಕಾಫಿ ಪ್ಲಾಂಟರುಗಳ ಬೃಹತ್ ಬಂಗಲೆಗಳಲ್ಲೂ ಪ್ರಾತಿನಿಧ್ಯವನ್ನು ಪದೆದುಕೊಂಡಿವೆ. ಜಗತ್ತಿನ ಚಿತ್ರರಂಗದ ಸಿನೆಮಾ ಸೆಟ್ಟುಗಳಲ್ಲಿ, ಕಾವ್ಯ-ಕಥೆಗಳಲ್ಲಿ ರೂಪಕದಂತೆಯೂ ಬಳಕೆಯಾಗಿದೆ. ಭಗ್ನ ಪ್ರೇಮದ ಸಂಕೇತಗಳಂತೆಯೂ ಬಳಕೆಯಾಗಿದೆ ಎಂದರೆ ಅದರ ಜನಪ್ರೀಯತೆಯನ್ನು ಅಂದಾಜಿಸಬಹುದು. ವಸಹಾತುಷಾಹಿ ಬುದ್ಧಿಯ ಬ್ರಿಟಿಷ್,ಫ್ರೆಂಚ್,ಡಚ್ ಜನಗಳ ಕಡಲು ದಾಟಿ ಮೆರೆಯುವ ಜಾಯಮಾನಗಳಿಂದ ಆ ಶೈಲಿ ವಿಶ್ವವ್ಯಾಪಿಯಾಗಿದ್ದೇನೋ ನಿಜ. ಆದರೆ ಅದನ್ನು ಜಗತ್ತು ಗುರುತಿಸುವುದು ಗ್ರೀಕ್ ಶೈಲಿ ಎಂದೇ.

    ಇಂಥಾ ವಿಖ್ಯಾತ ವಾಸ್ತು ಶೈಲಿಯ ಮೂಲವಿರುವುದು ಪುರಾತನ ಅಥೆನ್ಸಿನ ಪಾರ್ಥೆನಾನ್ ದೇವಿ ಮಂದಿರದಲ್ಲಿ. ತನ್ನ ಶೈಲಿ ಜಗತ್ತಿನಾದ್ಯಂತ ಹರಡಿದ್ದರೂ ಇಂದಿಗೂ ಪಾರ್ಥೆನಾನ್ ಒಂದು ಮುರುಕು ಮಂಟಪವೇ. ತನ್ನತನವನ್ನು ಜಗತ್ತಿಗೆ ಹರಡಿದ ಮೇಲೆ ಇನ್ನು ಕೆಲಸವೇನಿದೆ ಎಂಬಂತೆ ಒಂದು ಕಾಲದ ಪಾರ್ಥೆನಾನ್ ಅದೇ ಗ್ರೀಸಿನ ಅಕ್ರೊಪೊಲೀಸ್ ಬೆಟ್ಟದ ಮೇಲೆ ನಿಡುಸುಯ್ಯುವಂತೆ ಬಿದ್ದುಕೊಂಡಿದೆ. ಇಷ್ಟೇ ಆಗಿದ್ದರೆ ಅದರಲ್ಲೇನೋ ವಿಶೇಷವಿರುತ್ತಿರಲಿಲ್ಲ. ಕೇವಲ ವಾಸ್ತು ಶಾಸದ ಶೈಲಿಯೊಂದರ ಬಣ್ಣನೆ ಸದ್ಯದ ಆವಶ್ಯಕತೆಯಂತೂ ಖಂಡಿತಾ ಅಲ್ಲ.

    ಮತ್ತಷ್ಟು ಓದು »

    17
    ಆಗಸ್ಟ್

    ರಾಮಸ್ವರೂಪ್ – ಭಾರತೀಯ ಚಿಂತನೆಯ ಶತಮಾನದ ಬೆಳಕು

    ಡಾ.ರೋಹಿಣಾಕ್ಷ ಶಿರ್ಲಾಲು

    ಅನ್ಯಾಕ್ರಮಣದಿಂದ ಸ್ಮೃತಿ ಅಳಿದು ವಿಸ್ಮೃತಿಗೆ ಒಳಗಾಗಿದ್ದ ಭಾರತೀಯ ಮನಸ್ಸುಗಳನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಿದ ಮಹನೀಯರು, ಬೌದ್ಧಿಕ ದಾಸ್ಯವನ್ನು ಹೋಗಲಾಡಿಸಲು ಅಕ್ಷ ರಶಃ ಹೋರಾಡಿದವರು. ಕಳೆದು ಹೋಗಿದ್ದ ಅಸ್ಮಿತೆಯ ಹುಡುಕಾಟಕ್ಕೆ ಮತ್ತು ಬುದ್ಧಿಗೆ ಹಿಡಿದ ದಾಸ್ಯದ ಮುಸುಕನ್ನು ಸರಿಸಲು ವಿದ್ವತ್ತುಳ್ಳ ಅನೇಕರು ತಮ್ಮ ಬದುಕಿನ ಸಮರ್ಪಣೆಯನ್ನೇ ಮಾಡಿದ್ದಾರೆ. ಬೌದ್ಧಿಕ ಲೋಕದ ಕ್ಷಾತ್ರ ಪ್ರವೃತ್ತಿಯ ಮಹೋನ್ನತರ ಸಾಲಿಗೆ ಸೇರುವ, ಈ ಶತಮಾನದ ಬೆಳಕಾದ ವಿದ್ವಾಂಸರಲ್ಲಿ ರಾಮಸ್ವರೂಪ್‌ ಒಬ್ಬರು. ಭಾರತೀಯ ಮಣ್ಣಿನ ಸತ್ವವನ್ನು ತನ್ನ ಚಿಂತನೆಗಳಲ್ಲಿ ಮೈಗೂಡಿಸಿಕೊಂಡಿದ್ದ ರಾಮಸ್ವರೂಪರು 20ನೇ ಶತಮಾನ ಕಂಡ ಶ್ರೇಷ್ಠ ಚಿಂತಕ ಎಂದರೆ ಅತಿಶಯೋಕ್ತಿಯಲ್ಲ.

    1919ರಲ್ಲಿ ಜನಿಸಿದ ರಾಮಸ್ವರೂಪ್‌, ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಜೈಲುವಾಸವನ್ನೂ ಅನುಭವಿಸಿದ್ದರು. ಗಾಂಧಿಯ ಅನುಯಾಯಿಯಾಗಿ ಕಾರ್ಯ ನಿರ್ವಹಿಸಿದ ಇವರು ಕಾರ್ಲ್‌ ಮಾರ್ಕ್ಸ್‌ನ ಚಿಂತನೆಗಳಿಂದ ಪ್ರಭಾವಿತರಾಗಿ ಮಾರ್ಕ್ಸ್‌ವಾದ ಒಂದೇ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಎಂದು ನಂಬಿದ್ದರು. ಸ್ವಾತಂತ್ರ್ಯಾನಂತರದ ಭಾರತದ ವೈಚಾರಿಕ ವಲಯದಲ್ಲಿ ಕಮ್ಯುನಿಸಂಪ್ರಬಾವಿಯಾಗಿ ನೆಲೆಯಾಗುತ್ತಿದ್ದ ಸಂದರ್ಭದಲ್ಲಿ ಭಾರತೀಯ ಕಮ್ಯುನಿಸ್ಟರ ಬಗ್ಗೆ ರಾಮ ಸ್ವರೂಪರಲ್ಲಿ ಹುಟ್ಟಿದ ಅನುಮಾನಗಳಿಗೆ ಕಮ್ಯುನಿಸ್ಟ್‌ ನಾಯಕತ್ವದಲ್ಲಿ ಉತ್ತರವಿರಲಿಲ್ಲ. ಅಂತಿಮವಾಗಿ ಭಾರತದ ಪ್ರಮುಖ ಕಮ್ಯುನಿಸ್ಟ್‌ ವಿರೋಧಿ ವಿಮರ್ಶಕನಾಗಿ ಬದಲಾಗುತ್ತಾರೆ.

    ಮತ್ತಷ್ಟು ಓದು »

    30
    ನವೆಂ

    ಸ್ವದೇಶೀ ಆಂದೋಲನದ ಭಗೀರಥ: ರಾಜೀವ ದೀಕ್ಷಿತ!

    – ತುರುವೇಕೆರೆ ಪ್ರಸಾದ್

    ಕಂಪ್ಯೂಟರ್ ಇಂಜನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಒಬ್ಬ ಪ್ರತಿಭಾವಂತ ಯುವಕ, ಇಲೆಕ್ಟ್ರಾನಿಕ್ ಹಾಗೂ ಟೆಲಿಕಮ್ಯುನಿಕೇಶನ್‍ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಒಬ್ಬ ಮೇಧಾವಿ,ಹೆಸರಾಂತ ಸಂಶೋಧನಾ ಸಂಸ್ಥೆ ಸಿ.ಎಸ್.ಐ.ಆರ್‍ನಲ್ಲಿ ಸೆಟೆಲೈಟ್ ಕಮ್ಯುನಿಕೇಶನ್‍ನಲ್ಲಿ ವಿಜ್ಞಾನಿಯಾಗಿ ದುಡಿದಿದ್ದವರು, ಮನಸ್ಸು ಮಾಡಿದ್ದರೆ ವಿದೇಶಗಳಲ್ಲಿ ವೈಭವದ ಐಶಾರಾಮಿ ಜೀವನ ನಡೆಸಬಹುದಾಗಿದ್ದ ಒಬ್ಬ ಯುವಕ ಈ ದೇಶದ ದುರ್ಘಟನೆಯೊಂದರ ಸಂತ್ರಸ್ತರಿಗಾಗಿ ತನ್ನ ಸುಖ, ಸಂತೋಷ ಎಲ್ಲಾ ತ್ಯಾಗ ಮಾಡುತ್ತಾರೆ. ಸಂತ್ರಸ್ತರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಒಂದು ಅಂದೋಲನವನ್ನೇ ಆರಂಭಿಸಿ ತನ್ನ ಜೀವನವನ್ನೇ ಅದಕ್ಕಾಗಿ ಮೀಸಲಿಡುತ್ತಾರೆ. ಭಾರತ ಎದೆಂದಿಗೂ ಎದೆಯುಬ್ಬಿಸಿ, ತಲೆಎತ್ತಿ ಹೆಮ್ಮೆಯಿಂದ ಕೂಗಿ ಹೇಳಿಕೊಳ್ಳಬಹುದಾದ ಆ ಅದಮ್ಯ ಚೇತನವೇ ದೇಶಭಕ್ತ ರಾಜೀವ್ ದೀಕ್ಷಿತ್, ಅವರು ಪ್ರಾರಂಭಿಸಿದ ಆಂದೋಲನವೇ ‘ಆಜಾದಿ ಬಚಾವೋ’ ಆಂದೋಲನ. ಮತ್ತಷ್ಟು ಓದು »

    21
    ಆಕ್ಟೋ

    ಅರ್ಝಿ ಹುಕುಮತ್-ಇ-ಹಿಂದ್ ಆಜಾದ್: ಸ್ವತಂತ್ರ ಭಾರತದ ಪ್ರಾಂತೀಯ ಸರಕಾರಕ್ಕೆ 75..!

    – ಶ್ರೇಯಾಂಕ ಎಸ್ ರಾನಡೆ.

    netaji-subhash-chandra-bose-01-1501591576‘ಬೋಸ್ ಹಾಗೂ ಐಎನ್‍ಎ ಪ್ರತಿನಿಧಿಗಳನ್ನು “ದೇಶಭಕ್ತರಲ್ಲೇ ಶ್ರೇಷ್ಠರು” ಎಂದು ಬ್ರಿಟಿಷ್‍ರಾಜ್ ಪರಿಗಣಿಸಿತು’- ಎಡ್ವಡ್ಸ್ ಮೈಕಲ್, ದಿ ಲಾಸ್ಟ್ ಇಯರ್ಸ್ ಆಫ್ ಬ್ರಿಟಿಷ್ ಇಂಡಿಯಾ, ಕ್ಲೀವ್‍ಲ್ಯಾಂಡ್ ಪ್ರಕಾಶನ, 1964, ಪುಟ: 93.

    ಅಕ್ಟೋಬರ್ 21, 1943, ಭಾರತ ಬ್ರಿಟಿಷರಿಂದ ದಾಸ್ಯದ ಮುಕ್ತಿಗಾಗಿ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಕೊನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ತುದಿಗಾಲಲ್ಲಿ ನಿಂತಿದ್ದ ಸಂದರ್ಭ. ಒಂದೆಡೆ ಗಾಂಧೀಜಿಯೇ ಸ್ವಾತಂತ್ರ್ಯ ದೊರಕಲು ಹಳೆಯ ಮಾರ್ಗಗಳಿಗೆ ಶುಭವಿದಾಯ ಹೇಳಿ, 1942ರಲ್ಲಿ “ಮಾಡು ಇಲ್ಲವೆ ಮಡಿ: ಭಾರತ ಬಿಟ್ಟು ತೊಲಗಿ” ಆಂದೋಲನಕ್ಕೆ ಕರೆ ನೀಡಿದ್ದರೆ, ಮತ್ತೊಂದೆಡೆ ಅದಕ್ಕೆ ಪರೋಕ್ಷ ಉತ್ತೇಜನ ಮತ್ತು ಅಂತಹ ಹೋರಾಟಕ್ಕೆ ಅನಿವಾರ್ಯತೆಯನ್ನು ಸೃಷ್ಟಿಸುವ ಪ್ರಕ್ರಿಯೆ ವಿದೇಶಿ ನೆಲದಲ್ಲಿ ನೆಲೆಸಿದ್ದ ಭಾರತೀಯ ಹೋರಾಟಗಾರರಿಂದ ನಡೆಯುತ್ತಿತ್ತು. ಮತ್ತಷ್ಟು ಓದು »