ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

31
ಮೇ

ಸಾಮಾಜಿಕ ಕಳಕಳಿಯೆಂದರೆ…..

-ಡಾ.ಅಶೋಕ್ ಕೆ.ಆರ್

ತೀರ ಗಂಗಾಧರ್ ಮೊದಲಿಯಾರ್ ಕೂಡ ಈ ರೀತಿಯಾಗಿ ಬರೆಯಬಲ್ಲರು ಎಂದು ನಿರೀಕ್ಷಿಸಿರಲಿಲ್ಲ! ಪ್ರಜಾವಾಣಿಯ ಸಿನಿಮಾರಂಜನೆಯ ಫಿಲಂ ಡೈರಿ ಅಂಕಣದಲ್ಲಿ ಅಮೀರ್ ಖಾನನ ಸತ್ಯಮೇವ ಜಯತೆಯ ಬಗ್ಗೆ ಬರೆದಿದ್ದಾರೆ. ‘ಬುರುಡೆ ಪುರಾಣ’ ಎಂಬ ಶೀರ್ಷಿಕೆಯೇ ಅಸಂಬದ್ಧವಾಗಿದೆ. ಅಮೀರ್ ಖಾನನ ಕೆಲಸವನ್ನು ಮೆಚ್ಚುತ್ತಲೇ ಅವನನ್ನು ತೆಗಳುತ್ತಾ ಹೋಗುತ್ತಾರೆ. ಭಾವನೆಗಳನ್ನು ಉದ್ರಿಕ್ತಗೊಳಿಸಿ ಹಣ ಮಾಡುವ ‘ದಂಧೆ’ ಎಂದುಬಿಡುತ್ತಾರೆ. ಅಮೀರ್ ಖಾನ್ ಹೋರಾಟಗಾರನಲ್ಲ, ಸಾಮಾಜಿಕ ಕಾರ್ಯಕರ್ತನೂ ಅಲ್ಲ; ಆತ ಒಬ್ಬ ನಟ, ನಿರ್ಮಾಪಕ, ನಿರ್ದೇಶಕ. ಹಣವಿಲ್ಲದೆ ಏನೂ ಮಾಡಲಾಗದ ಚಿತ್ರರಂಗದವನು. ಯಾವ ಕಾರ್ಯಕ್ರಮ ಮಾಡಿದರೂ ಅದರಿಂದ ಲಾಭ ಬರುವುದನ್ನು ಅವನು ಗಮನಿಸಲೇಬೇಕು. ‘ಏರ್ ಟೆಲ್ನಿಂದ ಮೇಸೇಜ್ ಮಾಡಿ, ಕೇವಲ ಒಂದು ರುಪಾಯಿ’ ಎಂದವನು ಕಾರ್ಯಕ್ರಮದ ಕೊನೆಯಲ್ಲಿ ಹೇಳುವುದು ಕೂಡ ಲಾಭದ ಒಂದು ಮುಖ. ಇವೆಲ್ಲವೂ ಸತ್ಯವೇ, ಆದರೆ….
ಪತ್ರಿಕೆಗಳಿರಬಹುದು, ಅಂತರ್ಜಾಲ ತಾಣಗಳಲ್ಲಿರಬಹುದು ಇಂದು ಅಮೀರ್ ಖಾನನ ಕಾರ್ಯಕ್ರಮವನ್ನು ಅಮಿತಾಭ್ ನಡೆಸಿಕೊಟ್ಟ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಹೋಲಿಸಿ ಮಾತನಾಡುತ್ತಾರೆ. ಕೋಟ್ಯಧಿಪತಿಗೆ ಹೆಚ್ಚು ಟಿ.ಆರ್.ಪಿ ಇತ್ತು ಎಂದು ಹೇಳುತ್ತಾರೆ. ಇವೆರಡೂ ಕಾರ್ಯಕ್ರಮಗಳನ್ನು ಹೋಲಿಸುವುದೇ ಹಾಸ್ಯಾಸ್ಪದ. ಎರಡರ ಉದ್ದಿಶ್ಯವೂ ಬೇರೆ. ‘ಪ್ರೈಮ್ ಟೈಮ್’ ಎಂದು ಕರೆಯಲ್ಪಡುವ ರಾತ್ರಿ ಎಂಟರ ಸಮಯವನ್ನು ಬಿಟ್ಟು ಅಮೀರ್ ಖಾನ್ ಭಾನುವಾರ ಬೆಳಿಗ್ಗೆ ಹನ್ನೊಂದರ ಸಮಯವನ್ಯಾಕೆ ಆರಿಸಿದ ಎಂಬುದನ್ನೂ ಗಮನಿಸಬೇಕಲ್ಲವೇ? ಹಣ ಮಾಡುವುದಷ್ಟೇ ಉದ್ದೇಶವಾಗಿದ್ದರೆ ಈ ‘ಮೂರ್ಖ’ ಕೆಲಸವನ್ಯಾಕೆ ಮಾಡಬೇಕಿತ್ತವನು?
18
ಮೇ

ಹುಚ್ಚು ಬುದ್ದಿಯ ಹತ್ತು ಪ್ರತಿಜ್ಞೆಗಳು

-ಪ್ರಶಸ್ತಿ. ಪಿ ಶಿವಮೊಗ್ಗ


೧) FB ಬಿಡಬೇಕು
ನಿನ್ನೆ Times Of India ದಲ್ಲಿ ಓದ್ತಾ ಇದ್ದೆ. ಒಬ್ಬ ಭಾರತೀಯ ದಿನದಲ್ಲಿ ಅಂದಾಜು ೮ ಘಂಟೆ ಕಾಲ ಇಂಟನ್ರೆಟ್ಟಲ್ಲೇ ಕಳೀತಾನೆ ಅಂತ.ಅಂದ್ರೆ ನಾವು ಎಚ್ಚರ ಇರೋದ್ರಲ್ಲಿ ಅರ್ಧ ಭಾಗ ಇಲ್ಲೇ ಆಯ್ತು!! ಅದರಲ್ಲಿ ಕೆಲ ಭಾಗ ಕೆಲಸಕ್ಕಾದ್ರೆ ಕೆಲ ಭಾಗ ಇಲ್ಲೇ.. ಇದರಿಂದ ಏನಾದ್ರೂ ಲಾಭ ಇದ್ಯಾ ? ಸಾಮಾಜಿಕ ತಾಣಗಳು ಇರೋದೇ Time Pass ಗೆ,  ಜೀವನದಲ್ಲಿ ಎಲ್ಲದನ್ನೂ ಲಾಭ , ನಷ್ಟ ಅನ್ನೋ ವ್ಯಾಪಾರಿ ಬುದ್ದಿಯಿಂದ ತೂಗಕ್ಕಾಗಲ್ಲಾ ಅಂದ್ರಾ? ಹೂಂ ಅಂದೆ ಕಣ್ರಿ… ಆದ್ರೂ..

೨)ಸಂದೇಶ ಕಳ್ಸೋದನ್ನ(ಮೆಸೇಜ್ ಮಾಡೋದನ್ನ) ಬಿಡ್ಬೇಕು
ಈಗೊಂದು ಆರು ದಿನದ ಹಿಂದೆ ಸಂದೇಶ ಕೌಂಟರನ್ನ ಮರುಸ್ಥಾಪಿಸಿಟ್ಟಿದ್ದೆ. ಖಾಲಿ ಕೂತಾಗ ಅತ್ವಾ ಬೇಜಾರಾದ ದಿನಗಳಲ್ಲಿ ಅಂದಾಜು ಎಷ್ಟು ಸಂದೇಶ ಕಳಿಸ್ತೀನಿ ನೋಡ್ಬೇಕು ಅಂತ.. ಆರು ದಿನ ಬಿಟ್ಟು ನೋಡಿದ್ರೆ ಐನೂರು ಚಿಲ್ರೆ ಆಗಿತ್ತು. ಅದೇನು ಮಹಾ ಅಂದ್ರಾ? ಒಂದು ಮೆಸೇಜಿಗೆ ಒಂದು ೩೦ ಸೆಕೆಂಡು ಅಂತಿಟ್ಕೊಳ್ರಿ.( ದೊಡ್ಡ ಮೆಸೇಜು ಬರ್ಯೋದು ಅಂದ್ರೆ ಒಂದೋ , ಎರ್ಡೋ ನಿಮಿಷನೂ ಆಗ್ಬೋದು. ಅದ್ನ ಸದ್ಯಕ್ಕೆ ಬಿಡೋಣ). ಅದನ್ನ ಕಳಿಸಿದ ಮೇಲೆ ಮತ್ತೊಂದು ೩೦ ಸೆಕೆಂಡಾದ್ರೂ ಅದೇ ಮೂಡಲ್ಲಿರ್ತೀವಾ ?..ಅಲ್ಲಿಗೆ ೧ ನಿಮಿಷ ಆಯ್ತು. ದಿನಕ್ಕೆ ನೂರು ಮೆಸೇಜು ಅಂದ್ರೆ ನೂರು ನಿಮಿಷ ಅಂದ್ರೆ ಸುಮಾರು ಒಂದೂವರೆ ,೨ ಘಂಟೆ !!.. “ಹರ್ ಏಕ್ ಪ್ರೆಂಡ್ ಜರೂರಿ ಹೋತಾ ಹೈ..”  ಯಾರ್ನೂ ಬಿಡಕ್ಕೆ ಬರಲ್ಲ.. ಆದ್ರೂ..
ಮತ್ತಷ್ಟು ಓದು »

14
ಮೇ

ಹದಿವಯಸೆಂದು ತುಳಿದದ್ದೇ ಹಾದಿಯಾಗಬೇಕೆ?

– ರೂಪಾ ಎಲ್ ರಾವ್
ತಿಳಿಯದೆ ನಮಗೆ ತಿಳಿಯದೇ ಬದುಕುವ ದಾರಿ ತಿಳಿಯದೆ?
ಹೀಗಂತ ಯುವಜನ ಎಲ್ಲರನ್ನ  ಹೆಚ್ಚಾಗಿ ಪೋಷಕರನ್ನ ಧಿಕ್ಕರಿಸಿ ಹೋಗುತ್ತಿದ್ದರೆ, ಪೋಷಕರು ಅಸಹಾಯಕರಾಗಿ ತಾವು ಅತಿಯಾಗಿ ಮುದ್ದು ಮಾಡಿ ಬೆಳೆಸಿದ ಫಲದ ಅಧೋಗತಿಯನ್ನ ನೋಡುತ್ತಿದ್ದಾರೆ…… ಮಾತಿಗೆ ಮುಂಚೆ ನಿಂಗೆ ಏನೂ ಗೊತ್ತಿಲ್ಲ, ಅನ್ನುವ ಮಾತು ಕೇವಲ ಒಂದು ವರೆ ದಶಕದ ಹಿಂದೆ ಸಕಲಕಲಾವಲ್ಲಭರಂತಿದ್ದ ಈ ಮಧ್ಯವಯಸ್ಕ ಜೀವಿಗಳನ್ನ ಈ ಇಂಟರ್ನೆಟ್ , ಮೊಬೈಲ್ ಬ್ಲೂ ಟೂತ್ , ಅನ್ನುವ ನಿರ್ಜೀವ ಪದಗಳು ನಿಸ್ಸಾಹಯಕರನ್ನಾಗಿ ಮಾಡುತ್ತಿದೆ.
ನನ್ನ ಮಗ ಈಗಲೇ ಮೊಬೈಲ್ ಕೇಳ್ತಿದಾನೆ, ನನ್ ಮಗಳಿಗೆ ಕಂಪ್ಯೂಟರ್ ಗೇಮ್ ಅಂದ್ರೆ ತುಂಬಾ ಇಷ್ಟ , ನನ್ ಮಗ ಇಂಟರ್ನೆಟ್ ನಲ್ಲಿ ಪ್ರಾಜೆಕ್ಟ್ ಮಾಡ್ತಿದಾನೆ. ಹೀಗೆಲ್ಲಾ ಕೊಚ್ಚಿಕೊಳ್ಳುತ್ತಾ ಮಹತ್ತರವಾದುದೇನೋ ಸಾಧಿಸುತ್ತಿದ್ದಾರೆ ಎಂದುಕೊಳ್ಳುತಿದ್ದ ಮಕ್ಕಳು ಇಂದು ಅಪ್ಪ ಅಮ್ಮನ್ನ ನಿನಗೆ ಏನು ಗೊತ್ತಿದೆ, ಸುಮ್ಮನೆ ಬಾಯಿ ಮುಚ್ಚಿಕೊಂಡಿರು ಅನ್ನುವ ಮಟ್ಟಕ್ಕೆ ಬೆಳೆದಿದ್ದಾರೆ
ಹದಿ ಹರೆಯದ ಮಕ್ಕಳನ್ನು ಸ್ನೇಹಿತರನ್ನಾಗಿ ನೋಡಿಕೊಳ್ಳಬೇಕು ನಿಜ ಆದರೆ ಹಾಗಂತ ಅವರನ್ನ ಇಷ್ಟ ಬಂದ ಹಾಗೆ ನಡೆಯಲು ಬಿಟ್ಟರೆ ಏನೇನಾಗಬಹುದು ಎನ್ನುವುದಕ್ಕೆ  ಎಷ್ಟೊ ಉದಾಹರಣೆಗಳು ಸುತ್ತಾ ಮುತ್ತಾ ಇವೆ ಅಂತಾಹುದರಲ್ಲಿ ವೀರೂ ಸಹ ಒಬ್ಬ (ಹೆಸರು ಬದಲಾಯಿಸಲಾಗಿದೆ) ಹತ್ತು ವರ್ಷದ ಹಿಂದೆ ನನ್ನ ಬಳಿ ಟ್ಯೂಷನ್ ಗೆ ಬರುತ್ತಿದ್ದ . ಅಪ್ಪ ಅಮ್ಮ ಸೋಪ್ ಪೌಡರ್ ಅದೂ ಇದೂ ಮಾಡಿ ಮಾರಿ ಮಗನನ್ನು ಓದಿಸುತ್ತಿದ್ದರು. ಎಷ್ಟೆ ಬಡತನವಿದ್ದರೂ ಮಗನಿಗೆ ಯಾವ ಕೊರತೆಯನ್ನೂ ಮಾಡಿರಲಿಲ್ಲ. ನಾನೂ  ಕಾಲದ ಚಕ್ರದ ಜೊತೆ ಪಯಣಿಸುತ್ತಾ  ಅವನನ್ನು ಮರೆತೇ ಬಿಟ್ಟಿದ್ದೆ . ಹೋದ ತಿಂಗಳು , ಅಮ್ಮ ಮಗ ಇಬ್ಬರೂ ಬಂದಿದ್ದರು .ಅಂದಿನ ಆ ಪುಟ್ಟ ವೀರು ಇಂದು ನನ್ನನ್ನು ಮೀರಿ ಬೆಳೆದಿದ್ದಾನೆ, ದೊಡ್ಡ ಹುಡುಗ…. ಒಮ್ಮೆ ಸಂತೋಷವಾಯ್ತು ಆದರೆ ಅವನ ಅಮ್ಮ ಅವನ ಬಗ್ಗೆ ಹೇಳಿದ್ದು ತುಂಬಾ ಬೇಸರ, ಜೊತೆಗೆ ಯಾವುದೋ ಜವಾಬ್ದಾರಿಯನ್ನು ನೆನಪಿಸಿತು(ನಾನೂ ಒಬ್ಬ ತಾಯಿ)
8
ಮೇ

ಡಬ್ಬಿಂಗ್ ಅವಶ್ಯಕವೇ?

 ಡಾ ಅಶೋಕ್. ಕೆ. ಆರ್.

ಡಬ್ಬಿಂಗ್ ವಿವಾದ ಮತ್ತೆ ಗರಿಗೆದರಿದೆ. ಕಳೆದ ಹಲವಾರು ತಿಂಗಳುಗಳಿಂದ ‘ಏನ್ ಗುರು’ವಿನಂಥ ಬ್ಲಾಗುಗಳಲ್ಲಿ, ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಿಗೆ ಸೀಮಿತವಾಗಿದ್ದ ಈ ಚರ್ಚೆ ಅಮೀರ್ ಖಾನನ ‘ಸತ್ಯಮೇವ ಜಯತೆ’ಯ ಕನ್ನಡದವತರಣಿಕೆಯ ತಯಾರಿಕೆಯ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗಳಲ್ಲೂ ಚರ್ಚೆಗೊಳಪಡುತ್ತಿದೆ. ‘ಸತ್ಯಮೇವ ಜಯತೆ’ಯನ್ನು ಕನ್ನಡದಲ್ಲಿ ಪ್ರಸರಿಸಲು ಮುಂದಾಗಿದ್ದ ಸುವರ್ಣ ವಾಹಿನಿಯು ಚಿತ್ರೋದ್ಯಮದ ‘ಬೆದರಿಕೆ’ ಭರಿತ ವಿರೋಧದ ಹಿನ್ನೆಲೆಯಲ್ಲಿ ಪ್ರಸಾರದಿಂದ ಹಿಂದೆ ಸರಿದಿದೆ. ‘ಪ್ರಾಣ ಹೋದರೂ ಸರಿಯೇ ಡಬ್ಬಿಂಗಿಗೆ ಅವಕಾಶ ಕೊಡುವುದಿಲ್ಲ. ಅಪ್ಪಾಜಿಯ ಮೇಲಾಣೆ’ ಎಂದು ಶಿವರಾಜ್ ಕುಮಾರ್ ಆರ್ಭಟಿಸಿದ್ದಾರೆ. ಪ್ರಜಾವಾಣಿ ಶನಿವಾರದ ಪುಟವೊಂದನ್ನು ಡಬ್ಬಿಂಗಿನ ಚರ್ಚೆಗೆ ಮೀಸಲಿರಿಸಿದರೆ ಸುವರ್ಣ ವಾರ್ತಾ ವಾಹಿನಿಯು ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಮದನ್ ಪಟೇಲ್ ಮತ್ತು ಬನವಾಸಿ ಬಳಗದ ಆನಂದ್ ರನ್ನು ಕರೆಸಿ ಜುಗಲ್ ಬಂದಿ ನಡೆಸಿದ್ದಾರೆ.
ಡಬ್ಬಿಂಗ್ ಪರವಾಗಿರುವವರು ವಾದಿಸುವುದೆಂದರೆ ‘ ನಾವು ಗ್ರಾಹಕರು. ಏನು ಪಡೆಯಬೇಕು ಎಂಬುದನ್ನು ನಾವು ನಿರ್ಧರಿಸಬೇಕೆ ಹೊರತು ಚಿತ್ರರಂಗದ ಕೆಲವರಲ್ಲ. ಇತರೆ ರಾಜ್ಯದವರು ತಮ್ಮ ತಮ್ಮ ಮಾತೃಭಾಷೆಯಲ್ಲೇ ಕಾರ್ಟೂನ್, ಡಿಸ್ಕವರಿ, ಪೋಗೋದಂಥಹ ವಾಹಿನಿಗಳನ್ನು, ಆಂಗ್ಲ ಸಿನಿಮಾಗಳನ್ನು ನೋಡುತ್ತಿರುವಾಗ ನಾವ್ಯಾಕೆ ಪರಭಾಷೆಯಲ್ಲೇ ಅವುಗಳನ್ನು ವೀಕ್ಷಿಸಬೇಕು? ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಕನ್ನಡದಲ್ಲಿ ಚಿತ್ರ – ವಾಹಿನಿಗಳನ್ನು ವೀಕ್ಷಿಸುವ ಸೌಲಭ್ಯದಿಂದ ವಂಚಿತನಾಗಬೇಕೇಕೆ? ಅರ್ಥವಾಗದ ಭಾಷೆಯ ಸಿನಿಮಾಗಳನ್ನು ನೋಡಿ ಅರ್ದಂಬರ್ಧ ತಿಳಿದುಕೊಳ್ಳುವ ಬದಲು ಡಬ್ಬಿಂಗ್ ಮಾಡಿದರೆ ನನ್ನ ಭಾಷೆಯಲ್ಲೇ ನೋಡಿ ಆನಂದಿಸಿ ಸಂಪೂರ್ಣ ಅರಿತುಕೊಳ್ಳುವುದು ಒಳ್ಳೆಯದಲ್ಲವೇ? ತಮಿಳಿನಲ್ಲೇ ಪೋಗೋ ವೀಕ್ಷಿಸುವ ಹುಡುಗನಿಗೆ ತನ್ನ ಭಾಷೆಯ ಬಗ್ಗೆ ಪ್ರೀತಿ ಬೆಳೆಯುತ್ತದೆಯೇ ಹೊರತು ಅದೇ ಕಾರ್ಯಕ್ರಮಗಳನ್ನು ಇಂಗ್ಲೀಷಿನಲ್ಲಿ ನೋಡುವ ನಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಪ್ರೀತಿ ಬೆಳೆಯಲು ಹೇಗೆ ಸಾಧ್ಯ? ನಮ್ಮ ಹಕ್ಕನ್ನು ಕಸಿದುಕೊಂಡಿರುವ ಚಿತ್ರೋದ್ಯಮದ ಈ ನೀತಿ ಸಂವಿಧಾನಬಾಹಿರ’
ಇನ್ನು ಡಬ್ಬಿಂಗ್ ವಿರೋಧಿಸುವವರು ಮುಂದಿಡುವ ವಾದವೆಂದರೆ ‘ಡಬ್ಬಿಂಗ್ ವಿರೋಧಿ ಚಳುವಳಿಗೆ ದಶಕಗಳ ಇತಿಹಾಸವಿದೆ. ಅನಕೃರಂಥ ಹಿರಿಯ ಲೇಖಕರು ಆರಂಭಿಸಿದ ಈ ಚಳುವಳಿ ರಾಜ್ ಕುಮಾರ್ ರಂಥ ಮೇರು ನಟರ ನೇತೃತ್ವದಲ್ಲಿ ಮುಂದುವರಿದು ಕನ್ನಡ ಚಿತ್ರೋದ್ಯಮದ ಉಳಿವಿನ ದೃಷ್ಟಿಯಿಂದ ಡಬ್ಬಿಂಗ್ ನಿಷೇಧಿಸಲಾಗಿದೆ. ಈ ನಿಷೇಧ ತೆರವುಗೊಳಿಸಿದರೆ ಹೆಚ್ಚು ಬಂಡವಾಳದ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಕಿತ್ತುಕೊಳ್ಳುತ್ತದೆ. ಚಿತ್ರೋದ್ಯಮವನ್ನೇ ಅವಲಂಬಿಸಿದ ಜನರ ಹೊಟ್ಟೆಪಾಡಿಗೆ ಚ್ಯುತಿಯುಂಟಾಗುತ್ತದೆ. ಮೇಲಾಗಿ ಪರಸಂಸ್ಕೃತಿ ಬಿಂಬಿಸುವ ಚಿತ್ರಗಳು ಎಂದಿಗೂ ನಮ್ಮವಲಾಗಲಾರವು ಮತ್ತು ನಮ್ಮ ಕನ್ನಡ ಸಂಸ್ಕೃತಿಯನ್ನು ಅವನತಿಗೆ ದೂಡುತ್ತದೆ’ ಮತ್ತಷ್ಟು ಓದು »
30
ಏಪ್ರಿಲ್

ಬೌದ್ಧ, ಬ್ರಾಹ್ಮಣ ಮತ್ತು ಗೋಭಕ್ಷಣೆ

– ಸಾತ್ವಿಕ್ ಎನ್ ವಿ

ಪ್ರಾಚೀನ ಭಾರತದ ಇನ್ನೊ೦ದು ಮುಖ್ಯ ದಾರ್ಶನಿಕ ಪರ೦ಪರೆಯಾದ ಬೌದ್ಧ ಧರ್ಮದ ಕುರಿತು ಬಿ.ವಿ. ವೀರಭದ್ರಪ್ಪ ಅವರು ವೇದಾ೦ತ ರೆಜಿಮೆ೦ಟ್ ಮತ್ತು ಇತರ ಲೇಖನಗಳು ಎ೦ಬ ಕೃತಿಯ ಸುಮಾರು ೧೪ ಅ೦ಕಣಬರಹಗಳಲ್ಲಿ ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಬೌದ್ಧ ಮತ್ತು ವೈದಿಕರ ನಡುವಿನ ಹೋರಾಟವು ಮಹತ್ವದ್ದಾಗಿದೆ. ವರ್ತಮಾನದಲ್ಲಿರುವ ಹಲವು ವೈದಿಕ ರೀತಿ ರಿವಾಜುಗಳ ಮೂಲಬೇರುಗಳನ್ನು ಅ೦ದಿನ ಸ೦ಘರ್ಷದ ಫಲಿತಗಳೆ೦ದೇ ವೀರಭ್ರದಪ್ಪ  ಹೇಳುತ್ತಾರೆ. ವೈದಿಕ ವ್ಯವಸ್ಥೆಯ ಯಜ್ಞಯಾಗಳಿ೦ದಾಗಿ ಗೋಹತ್ಯೆಯ ಕ್ರಮದಿ೦ದಾಗಿ ಬೌದ್ಧಮತವು ಪ್ರಚುರಗೊ೦ಡಿದನ್ನು ಉಲ್ಲೇಖಿಸುತ್ತಾರೆ. ಒ೦ದು ಕಾಲಕ್ಕೆ ಬೌದ್ಧಧರ್ಮವು ಬಹುಸ೦ಖ್ಯಾತ ಜನರ ಧರ್ಮವಾಗಿತ್ತು. ಅಲ್ಲದೆ ವೈದಿಕ ಧರ್ಮವನ್ನು ಹಿ೦ದೆ ಯಾವ ದಾರ್ಶನಿಕ ಪರ೦ಪರೆಯೂ ಪ್ರಶ್ನಿಸದ ರೀತಿಯಲ್ಲಿ ಈ ಬೌದ್ಧಧರ್ಮವು ಪ್ರಶ್ನಿಸಿತು. ಇದರಿ೦ದಾಗಿ ವೈದಿಕವಾದವು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿತ್ತು. ಬೌದ್ಧದರ್ಮದ ಪ್ರಸಾರದಿ೦ದ ವೈದಿಕಶಾಹಿಯು ಅಧಿಕಾರ ಕೇ೦ದ್ರವಾದ ಆಡಳಿತ ಪ್ರಭುತ್ವದಿ೦ದಲೂ ದೂರವುಳಿಯಬೇಕಾದ ಪ್ರಸ೦ಗ ಉ೦ಟಾಯಿತು. ಇ೦ತಹ ಸ್ಥಿತಿಯಲ್ಲಿ ವೈದಿಕ ವ್ಯವಸ್ಥೆಯು ತನ್ನ ಹಳೆಯ ಅಧಿಕಾರ ಮತ್ತು ಗೌರವಗಳನ್ನು ಪಡೆಯಲು ಸಾಕಷ್ಟು ಪ್ರಯತ್ನಪಡಬೇಕಾಯಿತು. ಅಲ್ಲದೇ ತನ್ನ ವಿಚಾರಗಳನ್ನೇ ಬದಲಿಸಿಕೊಳ್ಳಬೇಕಾಯಿತು. ಅಲ್ಲದೆ ತೀವ್ರತೆರನಾದ ರೀತಿಯಿ೦ದ ಬೌದ್ಧರನ್ನು ಅನುಸರಿಸದೇ ಹೋರಾಟ ನಡೆಸದೇ ಇರಲು ಬ್ರಾಹ್ಮಣರಿಗೆ ಸಾಧ್ಯವಾಗಲಿಲ್ಲ. ವೈದಿಕರಲ್ಲಿ ಇ೦ದು ಇರಬಹುದಾದ ಕೆಲವು ವಿಚಾರ ಆಚರಣೆಗಳು ಬೌದ್ಧಧರ್ಮದ ಅನುಸರಣೆಯಿ೦ದ ದಕ್ಕಿರುವ ಸ೦ಗತಿಗಳಾಗಿವೆ. ಉದಾಹರಣೆಯಾಗಿ ಬುದ್ಧನ ಮರಣಾನ೦ತರ ಆತನ ಅನುಯಾಯಿಗಳು ಅವನ ಮೂರ್ತಿಗಳನ್ನು ರಚಿಸಿ ಸ್ತೂಪಗಳನ್ನು ನಿರ್ಮಿಸಿದರೆ ಅದೇ ಮಾದರಿಯಲ್ಲಿ ವೈದಿಕರು ಶಿವ, ವಿಷ್ಣು ಮು೦ತಾದ ದೇವಾಲಯಗಳನ್ನು ನಿರ್ಮಿಸಿ ತಮ್ಮತ್ತ ಜನರನ್ನು ಆಕರ್ಷಿಸಲು ಪ್ರಯತ್ನಿಸಿದರು. ಮತ್ತಷ್ಟು ಓದು »

28
ಏಪ್ರಿಲ್

ಡಬ್ಬಿಂಗ್ ಎಂಬ ರುಚಿಗೆಟ್ಟ ದಿಢೀರ್ ಅಡುಗೆ ಏಕೆ?

– ರೂಪ ರಾವ್

ಇತ್ತೀಚಿಗೆ ಡಬ್ಬಿಂಗ್ ಬೇಕು ಬೇಡ ಅನ್ನುವ ಹುಯಿಲು ಮತ್ತೆ ಕಾಣ್ತಿದೆ. ರಾಕೇಶ್ ಶೆಟ್ಟಿಯವರ ಲೇಖನ ಓದಿದ ಮೇಲೆ ಇದರ ಬಗ್ಗೆ ನನ್ನದೊಂದಿಷ್ಟು ಅನಿಸಿಕೆ.

ಸ್ವಾಮಿ ಡಬ್ಬಿಂಗ್ ಬೇಡ ಅನ್ನೋದು ಹಳೆಯ ರಾಗವಿರಬಹುದು. ಆದರೆ ಕಾರಣ ಮಾತ್ರ ನಿಚ್ಚಳ… ಅದು ಕನ್ನಡದ ಕಲಾವಿದರಿಗೆ ಆಗೋ ಅನ್ಯಾಯ ಅಷ್ಟೆ. ಅದು ಯಾವತ್ತಿಗೂ ಸಲ್ಲುವ ಕಾರಣ. ಚಿತ್ರರಂಗವನ್ನೇ ನಂಬಿಕೊಂಡು ನಿಂತ ಅಸಂಖ್ಯಾತ ಕಲಾವಿದರಿಗೆ. ನಾಯಕ ,ನಾಯಕಿ ಪಾತ್ರದಿಂದ ಹಿಡಿದು ಪೋಷಕ ಪಾತ್ರಧಾರಿಗಳು, ಛಾಯಾಗ್ರಾಹಕರು, ನಿರ್ದೇಶಕರು,ನೂರಾರು ಜನ ನೇರವಾಗಿ ಇಲ್ಲವೇ ಪರೋಕ್ಷವಾಗಿ ಒಂದು ಚಿತ್ರದ  ಮೇಲೆ ಅವಲಂಬಿತರಾಗಿರುತ್ತಾರೆ.. ಅಷ್ಟೂ ಜನರ ಹೊಟ್ಟೆಯ ಮೇಲೆ ಹೊಡೆಯುವ ಹುನ್ನಾರವಿದು.

ರಿಮೇಕ್ ಚಿತ್ರಗಳ ಆರ್ಭಟಕ್ಕೆ ನಿರ್ದೇಶಕರ ಸೃಜನಾತ್ಮಕತೆ ಈಗಾಗಲೇ ಕಡಿಮೆಯಾಗಿದೆ.ಒಂದು ವೇಳೆ ಡಬ್ಬಿಂಗ್ ನಿಷೇಧ ತೆರವು ಗೊಳಿಸಿದರೆ,ಕನ್ನಡದಲ್ಲಿ ನಿರ್ದೇಶಕ, ಕತೆಗಾರ, ಸತ್ತಂತೆ…..! ಉಪೇಂದ್ರ, ಸೂರಿ, ಶಶಾಂಕ್, ಚಂದ್ರು,ಯೋಗರಾಜ್ ಭಟ್ ರವರಂತೆ ಆಗಬೇಕೆನ್ನುವ ಯುವ ನಿರ್ದೇಶಕರ ಗತಿ ?

ಮತ್ತೆ ಯಾವುದೋ ಪ್ರಾದೇಶಿಕತೆಗೆ ಹೊಂದುವ ಅಲ್ಲಿನ ವಾತಾವರಣಕ್ಕೆ ನಿರ್ಮಿಸಲಾಗಿರುವ ಚಿತ್ರವೊಂದನ್ನ ಹಾಗೆಯೇ ಡಬ್ಬಿಂಗ್ ಮಾಡಿದಲ್ಲಿ ಅದನ್ನು ಕೂತು ನೋಡುವ ಕರ್ಮ ನಮ್ಮದಾಗುತ್ತದೆ.ಪಾತ್ರದ ತುಟಿಯ ಚಲನೆ ಒಂದಾದರೆ. ಹಿನ್ನಲೆ ದ್ವನಿಯ  ಮಾತು ಒಂದಾಗಿರುತ್ತದೆ. ಅದಕ್ಕೂ ಇದಕ್ಕೂ  ಜೋಡಿಸಿ ನೋಡುವ ದರ್ದು ನಮಗೆ ಬೇಕಾ?
ಮತ್ತಷ್ಟು ಓದು »

27
ಏಪ್ರಿಲ್

’ಸತ್ಯ ಮೇವ ಜಯತೇ’ ಅನ್ನಲು ಕನ್ನಡಿಗರು ಅಪ್ಪಣೆ ಪಡೆಯಬೇಕಾ?

– ರಾಕೇಶ್ ಶೆಟ್ಟಿ

ಕಳೆದ ವರ್ಷ ‘ಕನ್ನಡ ಚಲನ ಚಿತ್ರ ಅಕಾಡೆಮಿ’ಯು ಬಿಡುಗಡೆ ಮಾಡಿದ್ದ ವರದಿ ಡಬ್ಬಿಂಗ್ ಪರವಾಗಿತ್ತು.ಆ ವರದಿ ಬಿಡುಗಡೆಯಾದ ತಕ್ಷಣ ಚಿತ್ರರಂಗದ ಬಹುತೇಕ ಮಂದಿ ನಾಗಾಭರಣರ ಮೇಲೆ ಮುಗಿಬಿದ್ದರು.ಕಡೆಗೆ ಅವ್ರು ವರದಿಯನ್ನ ಹಿಂಪಡೆದರು.ಇಲ್ಲಿ ನಷ್ಟ ಆಗಿದ್ದು ಯಾರಿಗೆ? ಕನ್ನಡ ಚಿತ್ರ ರಂಗಕ್ಕಾ? ಅಲ್ಲ … ಕನ್ನಡ ಪ್ರೇಕ್ಷಕನಿಗೆ.

ಇಷ್ಟಕ್ಕೂ, ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”

ಡಬ್ಬಿಂಗ್ ಯಾಕೆ ಬೇಡ ಅಂದ್ರೆ, ಅದರಿಂದ ಕನ್ನಡದ ಮಕ್ಕಳಿಗೆ ಕೆಲಸವಿರೋದಿಲ್ಲ ಅಂತ ಹಳೆ ಕತೆ ಹೇಳ್ತಾ ಇದ್ದಾರೆ.ಈಗ ಬರ್ತಾ ಇರೋ ಅದಿನ್ನೆಷ್ಟು ಚಿತ್ರಗಳಲ್ಲಿ ಕನ್ನಡದ ಕಲಾವಿದರು,ತಂತ್ರಜ್ಞರು,ನಟಿಯರು,ಪೋಷಕ ನಟರು,ಖಳನಟರು,ಸಂಗೀತ ನಿರ್ದೇಶಕರು,ಗಾಯಕ-ಗಾಯಕಿಯರಿಗೆ ಕೆಲ್ಸ ಇದೆ?,ಎಲ್ಲದಕ್ಕೂ ಬೇರೆ ಭಾಷೆಯವರೇ ಬೇಕು.ಆಗ ಮಾತ್ರ ಯಾರು ಕನ್ನಡ ಮಕ್ಕಳಿಗೆ ಅನ್ಯಾಯವಾಗ್ತಾ ಇದೆ ಅಂತ ಉಸಿರೆತ್ತುವುದಿಲ್ಲ. ಭಾಷೆಯ ಉಚ್ಚಾರಣೆ ಬರದೆ ಇದ್ರೂ ನಮಗೆ ಬಾಲಿವುಡ್ ಗಾಯಕರು ಬಂದು ಉಸಿರು ಕಟ್ಟಿ ಹಾಡ್ಬೇಕು,ಬಾಯಿ ಅಲ್ಲಾಡಿಸಲು ಬರದ ಖಳ ನಟರು ಅಲ್ಲಿಂದಲೇ ಬರಬೇಕು.ಒಟ್ಟಿನಲ್ಲಿ ಬೇರೆ ಕಡೆಯಿಂದ ಜನ ಆಮದಾದಷ್ಟು ಚಿತ್ರ ಅದ್ದೂರಿ ಅನ್ನೋ ಭ್ರಮೆ! ಈಗಲೂ ಕನ್ನಡದ ಮಕ್ಕಳಿಗೆ ಆಗುತ್ತಿರುವುದು ಅನ್ಯಾಯವೇ ಅಲ್ಲವೆ?

ಇಷ್ಟಕ್ಕೂ ಡಬ್ಬಿಂಗ್ಗೆ ಅವಕಾಶ ಕೊಟ್ರೆ ಎಲ್ರೂ ಅದೇ ಮಾಡ್ತಾರೆ ಅನ್ನೋ ಅತಂಕವಿದ್ದರೆ,ಅದಕ್ಕಾಗಿ ಕೆಲ ನೀತಿ ನಿಯಮಗಳನ್ನ ಮಾಡಿಕೊಳ್ಳಬಹುದು. ಡಬ್ಬಿಂಗ್ ಮಾಡುವ ಹಕ್ಕನ್ನ ಮುಕ್ತವಾಗಿಡದೆ ‘ವಾಣಿಜ್ಯ ಮಂಡಳಿ’ ಯೇ ಆಯ್ದ ಚಿತ್ರಗಳನ್ನ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು.ಹಾಗೆ ಡಬ್ಬಿಂಗ್ ಮಾಡಿದ ಸಿನೆಮಾಗಳಲ್ಲಿ ನಮ್ಮ ನೇಟಿವಿಟಿ ಇಲ್ಲ ಅಂದ್ರೆ ಅವು ಗೆಲ್ಲೋದು ಅಷ್ಟರಲ್ಲೇ ಇದೆ,ಅದರಿಂದ ಯಾವ ಅಪಾಯವು ಇಲ್ಲ. ವಿಷಯ ಹೀಗಿರುವಾಗ ಇನ್ನು ಆಗಿನ ಕಾಲದ ಕತೆಯನ್ನೇ ಹೇಳಿ ಕನ್ನಡ ಪ್ರೇಕ್ಷಕರಿಗೆ ಒಳ್ಳೊಳ್ಳೆ ಚಿತ್ರವನ್ನ ನಮ್ಮ ಭಾಷೆಯಲ್ಲಿ ನೋಡದಂತೆ ಚಿತ್ರ ರಂಗದ ಕೆಲವರು ಯಾಕೆ ಮಾಡುತಿದ್ದಾರೆ!?, ಹಾಗೆ ಡಬ್ಬಿಂಗ್ನಿಂದ ಮುಳುಗಿ ಹೋಗುವಷ್ಟು ‘ಕನ್ನಡ ಚಿತ್ರ ರಂಗ’ ದುರ್ಬಲವಾಗಿಲ್ಲ.೭೫ ವರ್ಷದ ಇತಿಹಾಸವಿರುವ ಚಿತ್ರ ರಂಗದ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು ಅಂತ ಇನ್ನ ಎಷ್ಟು ದಿನ ಹೆದರ್ತಿರ ಸ್ವಾಮೀ?

ಮತ್ತಷ್ಟು ಓದು »

25
ಏಪ್ರಿಲ್

ಈ ಯುದ್ಧ ಭೂಮಿಯಲ್ಲಿ ಸೈನಿಕರ ಬಡಿದಾಟ ಪ್ರಕೃತಿಯೊಂದಿಗೆ!

– ಡಾ ಅಶೋಕ್. ಕೆ. ಆರ್

          ಇದು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವಿರ ಮತ್ತು ಭಾರತದ ಐದು ಸಾವಿರಕ್ಕೂ ಹೆಚ್ಚು ಸೈನಿಕರು ಇಲ್ಲಿ ಹತರಾಗಿದ್ದಾರೆ [ಅನಧಿಕೃತ ವರದಿ; ಅಧಿಕೃತ ವರದಿಯನ್ನು ಎರಡೂ ದೇಶದ ಸರಕಾರಗಳು ಬಹಿರಂಗಗೊಳಿಸುವುದಿಲ್ಲ]. ಬಹಳಷ್ಟು ಮಂದಿಯ ದೇಹವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. 80%ಗಿಂತ ಹೆಚ್ಚು ಸಂಖ್ಯೆಯ ಸೈನಿಕರ ಮರಣಕ್ಕೆ ಕಾರಣವಾಗಿದ್ದು ಎದುರಾಳಿಗಳ ಬಂದೂಕಾಗಲೀ, ಆಧುನಿಕ ಕ್ಷಿಪಣಿಗಳಾಗಲೀ ಅಲ್ಲ. ದೇಶಗಡಿಗಳ ಲೆಕ್ಕಿಸದೆ ಈ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ಪ್ರಕೃತಿ! ಪ್ರಕೃತಿಯ ಪ್ರಮುಖಾಯುಧ ಹಿಮ!! ಇದು ಸಿಯಾಚಿನ್ ಯುದ್ಧಭೂಮಿ.

ಆಪರೇಷನ್ ಮೇಘದೂತ: –

ಬಾಂಗ್ಲಾದೇಶದ ವಿಮೋಚನಾ ಯುದ್ಧದ ನಂತರ 1972ರಲ್ಲಿ ಸಿಮ್ಲಾ ಒಪ್ಪಂದಕ್ಕೆ ಯು.ಎನ್ ನೇತೃತ್ವದಲ್ಲಿ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕುತ್ತವೆ. ಗಡಿರೇಖೆಯನ್ನು ವಿವರಿಸುವ ಆ ಒಪ್ಪಂದದಲ್ಲಿ ಸಿಯಾಚಿನ್ ಸೇರಿರಲಿಲ್ಲ. ಹಿಮಚ್ಛಾದಿತ ಮರುಭೂಮಿಯ ಮೇಲೆ ಹಕ್ಕು ಸಾಧಿಸಲು ಇವೆರಡೂ ದೇಶಗಳು ಬಡಿದಾಡಲಾರವು ಎಂದುಕೊಂಡಿತ್ತು ಯು.ಎನ್. ಆದರೆ ನಡೆದಿದ್ದೇ ಬೇರೆ! 1967ರಿಂದಲೇ ಅಮೆರಿಕಾದ ರಕ್ಷಣಾ ಸಂಸ್ಥೆಗಳು ತಯಾರಿಸಿದ ನಕ್ಷೆಗಳಲ್ಲಿ ಸಿಯಾಚಿನ್ ಪ್ರದೇಶವನ್ನು ಯಾವುದೇ ಐತಿಹಾಸಿಕ ಆಧಾರಗಳಿಲ್ಲದಾಗ್ಯೂ ಪಾಕಿಸ್ತಾನದ ಭಾಗವಾಗಿ ತೋರಿಸಲಾರಂಭಿಸಿತು. ಪಾಕಿಸ್ತಾನ ಕೂಡ ಅಮೆರಿಕದ ಕುಮ್ಮಕ್ಕಿನಿಂದಾಗಿ ಕ್ರಮೇಣವಾಗಿ ಸಿಯಾಚಿನ್ ಪ್ರದೇಶದ ಮೇಲೆ ಹಕ್ಕು ಚಲಾಯಿಸಲಾರಂಭಿಸಿತು. ಪಾಕಿನ ಈ ವರ್ತನೆಯನ್ನು ಗಮನಿಸಿದ ಭಾರತ ಸರಕಾರ ಕೂಡ ತನ್ನ ಸೈನ್ಯವನ್ನು ‘ಎತ್ತರದ ಪ್ರದೇಶಗಳಲ್ಲಿ ಯುದ್ಧ ತರಬೇತಿಯ’ ನೆಪದಲ್ಲಿ ಸಿಯಾಚಿನ್ ಪ್ರದೇಶಕ್ಕೆ ನಿಯೋಜಿಸಲಾರಂಭಿಸಿತು.

ಕುದಿಯಲಾರಂಭಿಸಿದ ದ್ವೇಷ 1984ರಲ್ಲಿ ಯುದ್ಧ ರೂಪವನ್ನು ಪಡೆಯಿತು. ಸಿಯಾಚಿನ್ ಪ್ರದೇಶವನ್ನು ಹಿಂಪಡೆದುಕೊಳ್ಳಲು ಆಪರೇಷನ್ ಮೇಘದೂತದ ಹೆಸರಿನಲ್ಲಿ ಭಾರತದ ಸೈನಿಕರು ಸಿಯಾಚಿನ್ ಏರಲಾರಂಭಿಸಿದರು. ಸರಿಸುಮಾರು ಸಾವಿರ ಚದುರ ಮೈಲು ಪ್ರದೇಶವನ್ನು ವಶಪಡಿಸಿಕೊಳ್ಳುವುದರಲ್ಲಿ ಭಾರತ ಸಫಲವಾಗಿ ಯುದ್ಧದಲ್ಲಿ ಗೆಲುವು ಪಡೆಯಿತು.

ಮತ್ತಷ್ಟು ಓದು »

23
ಏಪ್ರಿಲ್

ನನ್ನ ಊಟದ ಮೆನು ನಿರ್ಧರಿಸಲು ನೀವ್ಯಾರು?

– ರಾಕೇಶ್ ಶೆಟ್ಟಿ

ಕುಡಿಯುವ ನೀರು ಕೇಳಿದಾಗ “ನೀರು ಕೊಟ್ಟರೆ ನನ್ನ ಜಾತಿ ಕೆಡುತ್ತದೆ” ಅಂದ ಮಂಗಲ್ ಪಾಂಡೆಗೆ, “ಸ್ವಲ್ಪ ಇರು,ದನದ ಕೊಬ್ಬು ಹಚ್ಚಿರುವ ಕಾಡತೂಸು ಕಚ್ಚಲು ಹೇಳುತ್ತಾರೆ,ಆಮೇಲೆ ನಿನ್ನ ಜಾತಿ ಅದೇನಾಗುತ್ತೋ ನಾನು ನೋಡುತ್ತೇನೆ” ಅಂದಿದ್ದ ಆ ಕೆಳ ಜಾತಿಯ ಹುಡುಗ.ಮೊದಲೆ ಈ ಕಾಡತೂಸಿನ ಗುಸು-ಗುಸಿಗೆ ಗಾಯಗೊಂಡಿದ್ದವನಿಗೆ ಉಪ್ಪು ಸವರಿದಂತಾಗಿತ್ತು ಹುಡುಗನ ಮಾತು,ಕಡೆಗದು ’ಬ್ಯಾರಕ್ ಪುರ’ದಲ್ಲಿ ಕ್ರಾಂತಿಯ ಕಿಡಿಯಾಗಿ ಭಾರತವನ್ನ ವ್ಯಾಪಿಸಿಕೊಂಡಿತ್ತು.ಇತಿಹಾಸ ಅದಕ್ಕೆ ಕೊಟ್ಟ ಹೆಸರು “೧೮೫೭ರ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ’.

೧೭೫೭ರಲ್ಲಿ ಪ್ಲಾಸಿ ಕದನದ ನಂತರ ಭಾರತವನ್ನ ಇಡಿಯಾಗಿ ಆಪೋಶನ ತೆಗೆದುಕೊಂಡ ಬ್ರಿಟಿಶರಿಂದ ತೆಪ್ಪಗೆ ಆಳಿಸಿಕೊಳ್ಳುತಿದ್ದ ಭಾರತದ ಸತ್-ಪ್ರಜೆಗಳ ಎದೆಯೊಳಗಿನ ನೋವಿನ ಜ್ವಾಲಾಮುಖಿ ಸ್ಫೋಟವಾಗಲು ಕಾರಣವೊಂದು ಬೇಕಿತ್ತು,ಕಾರಣವಾಗಿ ಬಂದದ್ದು ದನದ ಮತ್ತು ಹಂದಿಯ ಕೊಬ್ಬು ಸವರಿದ ಎನ್-ಫಿಲ್ಡ್ ಬಂದೂಕು..!

ಹೌದು.ಭಾರತದ ಸತ್-ಪ್ರಜೆಗಳೇ ಹಾಗೆ ಹೊಟ್ಟೆಗೆ ಅನ್ನ,ತಲೆಗೊಂದು ಸೂರು ಕೊಡದ ಸರ್ಕಾರವಾದರೂ ಸರಿ,ಕೋಟಿಗಟ್ಟಲೆ ಹಣ ಲೂಟಿ ಮಾಡಿದರೂ ಸರಿ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.ಆದರೆ ಧರ್ಮದ ವಿಚಾರಕ್ಕಿಳಿದಿರೋ ಅಲ್ಲಿಗೆ ಮುಗಿಯಿತು..! ಇದು ಕೇವಲ ಇತಿಹಾಸದ ಕತೆಯಲ್ಲ,ತೀರಾ ಕಳೆದ ವರ್ಷ ತಸ್ಲೀಮಾ ನಸ್ರೀನ್ ಅವರು ಬರೆದ ಲೇಖನ (ಎಂದು ಹೇಳಲಾದ )ಪ್ರಕಟವಾದಾಗ ಶಿವಮೊಗ್ಗ-ಹಾಸನದಲ್ಲಿ ಏನಾಗಿತ್ತು ಅನ್ನುವುದು ನೆನಪಿದೆಯಲ್ವಾ?

ಕಳೆದ ಒಂದು ವರ್ಷಗಳಿಂದಲೂ ರಾಜ್ಯದಲ್ಲಿ ಸದ್ದು ಮಾಡುತ್ತಿರುವುದು ’ಗೋ-ಹತ್ಯೆ ನಿಷೇಧ’ ಮಸೂದೆ.ಸಾಕಷ್ಟು ಚರ್ಚೆಗಳು,ವಾದಗಳು ನಡೆದಿವೆ.ಬಹುಷಃ ಅದು ಎಂದಿಗೂ ಮುಗಿಯಲಾರದು.

ಮತ್ತಷ್ಟು ಓದು »

18
ಏಪ್ರಿಲ್

ಶಾರ್ಟ್ ವೇವ್ ರೇಡಿಯೋ ಪ್ರಸಾರದಲ್ಲಿ ಕನ್ನಡದ ದನಿಯಿಲ್ಲ

-ಸಾತ್ವಿಕ್ ಎನ್ ವಿ

ಕನ್ನಡಿಗನೊಬ್ಬ ತನ್ನ ಕೆಲಸದ ನಿಮಿತ್ತ ಕರ್ನಾಟಕದ ಹೊರಗೆ ಬದುಕಬೇಕಾಗಿ ಬಂದರೆ ಆತನಿಗೆ ಕನ್ನಡ ಆಕಾಶವಾಣಿ ಕೇಳಲು ಸಾಧ್ಯವಿಲ್ಲ. ಕಾರಣ, ಕಿರುತರಂಗಾಂತರ ಅಂದರೆ ಶಾರ್ಟ್‌ವೇವನಲ್ಲಿ ಕನ್ನಡದ ಯಾವುದೇ ಆಕಾಶವಾಣಿ ಕೇಂದ್ರ ಪ್ರಸಾರ ಮಾಡುತ್ತಿಲ್ಲ. ಆದರೆ ಇಂಥ ಪರಿಸ್ಥಿತಿ ಇತರೆ ಭಾಷಿಕರಿಗೆ ಇದೆಯೇ? ಇಲ್ಲ. ಕನ್ನಡವನ್ನು ಬಿಟ್ಟು ಮಿಕ್ಕೆಲ್ಲ ದಕ್ಷಿಣಭಾರತದ ಭಾಷೆಗಳಿಗೂ ಈ ಸೌಲಭ್ಯವಿದೆ.

ಏನಿದು ಕಿರುತರಂಗಾತರದಲ್ಲಿ ರೇಡಿಯೋ ಪ್ರಸಾರ?
ಬಾನುಲಿ ಪ್ರಸಾರದಲ್ಲಿ ಶಾರ್ಟ್ ವೇವ್(SW), ಮೀಡಿಯಂ ವೇವ್(MW) ಮತ್ತು ಫ್ರಿಕ್ವೇನ್ಸಿ ಮೊಡೊಲೇಷನ್ (FM) ಎಂಬ ಮೂರು ರೀತಿಯ ತರಂಗಾತರಗಳನ್ನು ಬಳಸಲಾಗುತ್ತದೆ. ಈಗ ಕರ್ನಾಟಕದ ಆಕಾಶವಾಣಿ ಕೇಂದ್ರಗಳು ಕೇವಲ ಎಂ.ಡಬ್ಲ್ಯೂ ಮತ್ತು ಎಫ್.ಎಂ ಗಳಲ್ಲಿ ಮಾತ್ರ ತಮ್ಮ ಕಾರ್ಯಕ್ರಮಗಳನ್ನು ಪ್ರಸರಿಸುತ್ತಿವೆ. ಆದರೆ ಎಂ.ಡಬ್ಲ್ಯೂ ಮತ್ತು ಎಫ್.ಎಂ ತರಂಗಗಳ ದೊಡ್ಡ ಕೊರತೆ ಎಂದರೆ ಈ ಅಲೆಗಳು ಬಹಳ ದೂರ ಚಲಿಸಲಾರವು. ಆದರೆ ಶಾರ್ಟ್ ವೇವ್ ಹಾಗಲ್ಲ. ಅದರ ಚಲನೆಯ ಶಕ್ತಿ ಖಂಡಾಂತರ ವ್ಯಾಪ್ತಿಯದ್ದು. ಇಂದು ನಾವು ಕೇಳುತ್ತಿರುವ ಬಿಬಿಸಿ, ವಾಯ್ಸ್ ಆಫ್ ಅಮೆರಿಕಾ, ರೇಡಿಯೋ ಸಿಲೋನ್, ಚೈನಾ ರೇಡಿಯೋ ಇಂಟರ್ ನ್ಯಾಷನಲ್ ಇತ್ಯಾದಿಗಳು ಇದೇ ತರಂಗಗಳನ್ನು ಬಳಸಿಕೊಳ್ಳುತ್ತವೆ. ಈ ತರಂಗಗಳನ್ನು ಬಳಸಿ ಪ್ರಪಂಚದ ಯಾವುದೇ ನಿರ್ದಿಷ್ಟ ಭಾಗಕ್ಕೆ ಪ್ರಸಾರವನ್ನು ತಲುಪಿಸಲು ಸಾಧ್ಯ. ಇದನ್ನು ಬೀಮಿಂಗ್ ಎಂದು ಕರೆಯಲಾಗುತ್ತದೆ. ಮತ್ತಷ್ಟು ಓದು »