ವಿಷಯದ ವಿವರಗಳಿಗೆ ದಾಟಿರಿ

Posts from the ‘ಭಾರತ’ Category

11
ಜೂನ್

ಚುಟುಕು ಕ್ರಿಕೆಟ್ ನೈತಿಕತೆಯ ಕೊನೆಗುಟುಕು

-ರಾಕೇಶ್ ಎನ್ ಎಸ್
 
ಭಾರತ ೨೦೦೭ರಲ್ಲಿ ವಿಶ್ವ ಟೆಂಟಿ ಟ್ವೆಂಟಿ ಚಾಂಪಿಯನ್ ಆದ ಕುರುಹಾಗಿ ಮತ್ತು ಜೀ ಸಮೂಹದ ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಸಡ್ಡು ಹೊಡೆಯಲಿಕ್ಕಾಗಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಅಕಾಲದಲ್ಲಿ ಜನ್ಮ ತಾಳಿ ಐದು ವರ್ಷ ಸಂದಿದೆ. ’ಶುದ್ಧ ಕ್ರಿಕೆಟ್’ ಎಂಬುದು ಐಪಿಎಲ್‌ನ ಜಾತಕದಲ್ಲೇ ಬರೆದಿಲ್ಲ ಎಂಬುದು ಈ ಪಂಚ ವರ್ಷದಲ್ಲೆ ಸಾಬೀತಾಗಿದೆ.
ಭಾರತ ಟ್ವೆಂಟಿ-ಟ್ವೆಂಟಿ ವಿಶ್ವ ಚಾಂಪಿಯನ್ ಆದದ್ದು ಒಂದೇ ಐಪಿಎಲ್‌ನ ಉಗಮಕ್ಕೆ ಕಾರಣವಾಗಿರಲಿಲ್ಲ. ಭಾರತದಲ್ಲಿ ಕ್ರಿಕೆಟ್‌ನ ಏಕಸ್ವಾಮ್ಯ ಹೊಂದಿರುವ ಬಿಸಿಸಿಐಯ ಅಧಿಪತ್ಯಕ್ಕೆ ಜೀ ಸಮೂಹದ ಸುಭಾಶ್ ಚಂದ್ರ ಐಸಿಎಲ್‌ನ ಮೂಲಕ ಕೊಡಲಿಯೇಟು ನೀಡಿದಾಗ ತನ್ನ ಕ್ರಿಕೆಟ್ ಕೊಪ್ಪರಿಗೆ ಇನ್ನೊಬ್ಬರ ಪಾಲಾಗುವುದನ್ನು ಯಾವುದೇ ಬೆಲೆ ತೆತ್ತು ತಪ್ಪಿಸಬೇಕು ಎಂಬ ಬಿಸಿಸಿಐ ಯೋಚನೆಯೇ ಐಪಿಎಲ್‌ನ ತಳಪಾಯ. ಉಳಿದಂತೆ ಕ್ರಿಕೆಟಿಗರ ಉದ್ಧಾರ, ಮನರಂಜನೆ ಮುಂತಾದ ಬಿಸಿಸಿಐ
ಹೇಳಿಕೆಗಳು ಸುಮ್ಮನೆ ತೋರಿಕೆಯದ್ದು ಅಷ್ಟೆ.
 
ಟ್ವೆಂಟಿ-ಟ್ವೆಂಟಿ ನಿಂತಿರುವುದೇ ಹೊಡಿ ಬಡಿ ಸಿದ್ಧಾಂತದ ಮೇಲೆ. ಕ್ರಿಕೆಟ್‌ನ ಮೂಲ ಧರ್ಮಕ್ಕೆ ಇದು ವಿರುದ್ಧವಾದರೂ ಕಾಲ ಧರ್ಮಕ್ಕನುಗುಣವಾಗಿ ಈ ಸಂಸ್ಕ್ರತಿಯನ್ನು ಒಪ್ಪಿಕೊಂಡರೆ ಅದರಲ್ಲಿ ತಪ್ಪೇನಿಸಲಾಗದು. ಆದರೆ ಕ್ರಿಕೆಟ್ ಎಂಬ ಆಟ ಉದ್ದಿಮೆಗಳ ತೆಕ್ಕೆಗೆ ಸೇರಿಕೊಂಡಾಗ ಉಂಟಾಗುವ ಉತ್ಪಾತಗಳು ಮಾತ್ರ ಸಹ್ಯವಾಗಿಲ್ಲ. ಮನರಂಜನೆ ಮತ್ತು ವ್ಯಾಯಾಮ ಕ್ರೀಡೆಯ ಎರಡು ಕಣ್ಣುಗಳಿದ್ದಂತೆ. ಮನರಂಜನೆ ಆಡುವವನಿಗೆ ಮತ್ತು ನೋಡುವವನಿಗೆ ಹಾಗೆ ವ್ಯಾಯಾಮ ಆಡುವವನಿಗೆ ಸಿಗುತ್ತದೆ. ಆದರೆ ವೃತ್ತಿಪರ ಆಟಗಾರರಿಗೆ ಪ್ರತ್ಯೇಕವಾದ ವ್ಯಾಯಾಮವೇ ಇರುತ್ತದೆ. ನಮ್ಮಂತವರಿಗೆ ಮಾತ್ರ ಆಡುವುದೇ ವ್ಯಾಯಾಮ! ಅದ್ದರಿಂದ ಯಾವುದೇ ವೃತ್ತಿಪರ ಆಟಗಾರನಿಗೆ ಆತ ನಮ್ಮ ಮುಂದೆ ನೀಡುವ ಪ್ರದರ್ಶನ ಆತನಿಗೆ ವ್ಯಾಯಾಮ ಮತ್ತು ಮನರಂಜನೆಯಾಗಿ ಮುಖ್ಯವಾಗುವುದಕ್ಕಿಂತ ನೋಡುಗನಿಗೆ ಅದು ನೀಡುವ ಮನರಂಜನೆಯಷ್ಟೆ ಪ್ರಮುಖವಾಗುತ್ತದೆ. ಐಪಿಎಲ್ ನಂತಹ ಕ್ರೀಡಾಕೂಟದಲ್ಲಿ ಒಬ್ಬ ಆಟಗಾರ ಎಷ್ಟು ಮನರಂಜನೆ ನೀಡಬಲ್ಲ ಎಂಬುದರ ಮೇಲೆ ಅತನ ಹಣದ ಜೋಳಿಗೆ ತುಂಬುತ್ತದೆ. ಅದ್ದರಿಂದ ಇಲ್ಲಿ ಒಬ್ಬ ಆಟಗಾರ ಪ್ರದರ್ಶಕನಾಗಿ ಮುಖ್ಯನಾಗುತ್ತಾನೆಯೇ ಹೊರತು ಆತನ ಕೌಶಲ್ಯಗಳಿಂದಾಗಿ ಅಲ್ಲ. ಮತ್ತಷ್ಟು ಓದು »
5
ಜೂನ್

ಒಮ್ಮೆ ಜನಮತಸಾಂದ್ರತೆ (Demography) ಬದಲಾದರೆ…

– ಎಂ.ಡಿ ಸುಬ್ರಮಣ್ಯ ಮಾಚಿಕೊಪ್ಪ

ಪ್ರದೇಶವೊಂದನ್ನು (ಅದು ರಾಜ್ಯವಾಗಿರಲಿ ಅಥವಾ ರಾಜ್ಯವೊಂದರ ಭಾಗವಾಗಿರಲಿ) ದೇಶದಲ್ಲಿ ಇರುವಂತೆ ಮಾಡುವ ಅನೇಕ ಸಮಾನ ಅಂಶಗಳಿರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾಗಿದ್ದು ಆ ಪ್ರದೇಶದ ಜನಮತಸಾಂದ್ರತೆ (demography) ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಒಮ್ಮೆ ಆ ಪ್ರದೇಶದ ಜನಮತಸಾಂದ್ರತೆ ಬದಲಾದರೆ ಎಲ್ಲವೂ ಬದಲಾಗುತ್ತದೆ. ಇಲ್ಲಿ ಎಲ್ಲವೂ ಅಂದರೆ ಆ ಪ್ರದೇಶದ ಭಾಷೆ, ಆಚಾರ-ವಿಚಾರ, ರಾಷ್ಟ್ರನಿಷ್ಠೆ, ನಾಯಕರುಗಳು-ಎಲ್ಲವೂ ಬದಲಾಗುತ್ತದೆ!!! ಇದಕ್ಕೆ ಕಶ್ಮೀರಕಣಿವೆಯ ಉದಾಹರಣೆಯೇ ನಮ್ಮ ಕಣ್ಣುಮುಂದೆ (ಕಣ್ಣಿದ್ದವರಿಗೆ) ಕಾಣುತ್ತಿದೆ. ಕಲ್ಹಣ ಸಾಹಿತ್ಯ ರಚಿಸಿದ ಆ ಕಾಶ್ಮೀರಿ ಭಾಷೆ ಕಣಿವೆಯಲ್ಲಿ ಎಲ್ಲಿದೆ? ಬೋರ್ಡ್ ಗಳಲ್ಲೆಲ್ಲಾ ಅರಬಿ ಲಿಪಿ. ‘India’ ಎಂದು ಕಾಣುವ ಬೋರ್ಡ್ ಗಳ ಮೇಲೆ ಕಲ್ಲು, ಆಗಸ್ಟ್ ೧೫ ಬಂದ್!! ವಿಜೃಂಭಣೆಯ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ!!! ನಾಗಲ್ಯಾಂಡ್, ಮಿಜೊರಾಂ ಪರಿಸ್ಥಿತಿಯೂ (ಸದ್ಯಕ್ಕೆ ತಣ್ಣಕ್ಕಿದ್ದಂತೆ ಕಂಡರೂ) ತುಂಬವೇನು ಭಿನ್ನವಾಗಿಲ್ಲ. ಒಟ್ಟು ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು ಕಶ್ಮೀರ, ನಾಗಲ್ಯಾಂಡ್ ಮತ್ತು ಮಿಜೋರಾಂಗಳಲ್ಲಿ ಅವರು ತುಂಬಾ ಅಲ್ಪಸಂಖ್ಯಾತರಾಗಿದ್ದು ಮುಸ್ಲಿಂ ಹಾಗೂ ಕ್ರೈಸ್ತರು ಅಲ್ಲಿ ಬಹುಸಂಖ್ಯಾತರಾಗಿರುವುದೇ ಇದಕ್ಕೆ ಕಾರಣ. (ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಆದರೆ ಬೌದ್ದರೇ ಸಾಕಷ್ಟು ಸಂಖ್ಯೆಯಲ್ಲಿರುವ ಲಡಕ್ ಪ್ರದೇಶದಲ್ಲಿ ಈ ಸಮಸ್ಯೆ ಅಷ್ಟಿಲ್ಲ!!) ಒಮ್ಮೆ ಜನಮತಸಾಂದ್ರತೆ ಬದಲಾದರೆ ರಾಷ್ಟ್ರನಿಷ್ಟೆಯೂ ಬದಲಾಗುತ್ತದೆಂಬುದು (ಪ್ರಪಂಚ ಮಟ್ಟದಲ್ಲಿ) ಅಪ್ರಿಯ ಸತ್ಯ.

16
ಮೇ

ನಮ್ಮ ಇತಿಹಾಸ ನಾವೇ ಬರೆದು ಓದೋದು ಬೇಡವೆ?

– ಚಕ್ರವರ್ತಿ ಸೂಲಿಬೆಲೆ

ಬ್ರಿಟಿಷ್ ಅಧಿಕಾರಿ ಮ್ಯಾಲೆಸನ್ ಈ ದೇಶದ ಜನರನ್ನು ಹುಚ್ಚರು ಅಂತ ಕರೀತಾನೆ. ಏಕೆ ಗೊತ್ತೇನು? ನೇಣು ಶಿಕ್ಷೆಗೆ ಕಳಿಸಿದರೆ ಈ ದೇಶದ ಜನ ಹೆದರೋದಿರಲಿ, ತಾವೇ ನೇಣುಗಂಬದ ಬಳಿ ಧಾವಿಸಿ ನೇಣು ಕುಣಿಕೆಯನ್ನು ಕೊರಳಿಗೆ ಹಾಕಿಕೊಂಡುಬಿಡ್ತಾ ಇದ್ದರಂತೆ. ಆದಷ್ಟು ಬೇಗ ನನ್ನ ನೇಣಿಗೇರಿಸಿ ಅಂತ ಗೋಗರಿಯುತ್ತಾ ಇದ್ದರಂತೆ. ಹೀಗೇಕೆಂದು ಪ್ರಶ್ನಿಸಿದಾಗ, ಪುನರ್ಜನ್ಮ ನಂಬೋರು ನಾವು, ಬೇಗ ಹೊರಟರೆ, ಬೇಗ ಮರಳಿ ಬರುತ್ತೇವಲ್ಲ! ಅನ್ನುವ ವಾದ ಮಂಡಿಸುತ್ತಿದ್ದರಂತೆ. ಹೆದರಿಸಬೇಕೆಂದು ನೇಣಿಗೇರಿಸಿದರೆ, ಅದೇ ಪ್ರೇರಣೆಯಾಗುವ ರೀತಿ ಅತೀ ವಿಶಿಷ್ಟವಲ್ಲವೆ? ಅದಕ್ಕೇ ಬ್ರಿಟಿಷರಿಗೆ ಅಷ್ಟೊಂದು ಕೋಪ.

ಮೇ ೧೦ಕ್ಕೆ ೧೮೫೭ರಲ್ಲಿ ಸಂಗ್ರಾಮವೊಂದಕ್ಕೆ ಮುನ್ನುಡಿ ಬರೆಯಲಾಗಿತ್ತು. ಬ್ಯಾರಕ್‌ಪುರದ ಮಂಗಲ್‌ಪಾಂಡೆ ಆಂಗ್ಲ ಪೊಲೀಸ್ ಅಧಿಕಾರಿಯತ್ತ ಗುಂಡು ಸಿಡಿಸಿ, ತಿಂಗಳ ಕೊನೆಯಲ್ಲಿ ಆರಂಭವಾಗಬೇಕಾಗಿದ್ದ ಕ್ರಾಂತಿಗೆ ಆಗಲೇ ಕಿಡಿ ಹಚ್ಚಿಬಿಟ್ಟಿದ್ದ. ಅಲ್ಲಿಂದಾಚೆಗೆ ಮೀರತ್, ದೆಹಲಿಗಳು ಕ್ರಾಂತಿಯ ಕಿಡಿಗೆ ಉರಿದು ಬಿದ್ದವು. ಕಾನ್‌ಪುರ, ಝಾನ್ಸಿಗಳು ಜಯಘೋಷ ಮೊಳಗಿಸಿದವು. ಬಿಹಾರ ಕುದಿಯಿತು. ದಕ್ಷಿಣದಲ್ಲೂ ಬ್ರಿಟಿಷರ ಬುಡಕ್ಕೆ ಬಲವಾದ ಪೆಟ್ಟು ಬಿತ್ತು. ಅಂದುಕೊಂಡಂತೆಯೇ ಎಲ್ಲವೂ ಆಗಿದ್ದರೆ, ಇತಿಹಾಸದ ಹಾದಿ ಬೇರೆಯೇ ಇರುತ್ತಿತ್ತು. ಆ ವೇಳೆಗೆ ಆಂಗ್ಲರೊಟ್ಟಿಗೆ ಕಾದಾಡಿ ಹೈರಾಣಾಗಿದ್ದ ಸಿಕ್ಖರು ಭಾರತೀಯ ಸೈನಿಕರ ಬೆಂಬಲಕ್ಕೆ ಬರಲಿಲ್ಲ. ಅಯ್ಯೋ ಪಾಪ! ಅನ್ನುವ ಕೆಲವಷ್ಟು ಜನ ಆಂಗ್ಲ ಅಧಿಕಾರಿಗಳಿಗೆ ಉಳಿದುಕೊಳ್ಳುವ ಮಾರ್ಗ ತೋರಿದರು. ಅಂತೂ ಮಹಾಯುದ್ಧವೊಂದರಲ್ಲಿ ನಾವು ಸೋತಿದ್ದೆವು.

ಮತ್ತಷ್ಟು ಓದು »

30
ಏಪ್ರಿಲ್

ಬೌದ್ಧ, ಬ್ರಾಹ್ಮಣ ಮತ್ತು ಗೋಭಕ್ಷಣೆ

– ಸಾತ್ವಿಕ್ ಎನ್ ವಿ

ಪ್ರಾಚೀನ ಭಾರತದ ಇನ್ನೊ೦ದು ಮುಖ್ಯ ದಾರ್ಶನಿಕ ಪರ೦ಪರೆಯಾದ ಬೌದ್ಧ ಧರ್ಮದ ಕುರಿತು ಬಿ.ವಿ. ವೀರಭದ್ರಪ್ಪ ಅವರು ವೇದಾ೦ತ ರೆಜಿಮೆ೦ಟ್ ಮತ್ತು ಇತರ ಲೇಖನಗಳು ಎ೦ಬ ಕೃತಿಯ ಸುಮಾರು ೧೪ ಅ೦ಕಣಬರಹಗಳಲ್ಲಿ ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಬೌದ್ಧ ಮತ್ತು ವೈದಿಕರ ನಡುವಿನ ಹೋರಾಟವು ಮಹತ್ವದ್ದಾಗಿದೆ. ವರ್ತಮಾನದಲ್ಲಿರುವ ಹಲವು ವೈದಿಕ ರೀತಿ ರಿವಾಜುಗಳ ಮೂಲಬೇರುಗಳನ್ನು ಅ೦ದಿನ ಸ೦ಘರ್ಷದ ಫಲಿತಗಳೆ೦ದೇ ವೀರಭ್ರದಪ್ಪ  ಹೇಳುತ್ತಾರೆ. ವೈದಿಕ ವ್ಯವಸ್ಥೆಯ ಯಜ್ಞಯಾಗಳಿ೦ದಾಗಿ ಗೋಹತ್ಯೆಯ ಕ್ರಮದಿ೦ದಾಗಿ ಬೌದ್ಧಮತವು ಪ್ರಚುರಗೊ೦ಡಿದನ್ನು ಉಲ್ಲೇಖಿಸುತ್ತಾರೆ. ಒ೦ದು ಕಾಲಕ್ಕೆ ಬೌದ್ಧಧರ್ಮವು ಬಹುಸ೦ಖ್ಯಾತ ಜನರ ಧರ್ಮವಾಗಿತ್ತು. ಅಲ್ಲದೆ ವೈದಿಕ ಧರ್ಮವನ್ನು ಹಿ೦ದೆ ಯಾವ ದಾರ್ಶನಿಕ ಪರ೦ಪರೆಯೂ ಪ್ರಶ್ನಿಸದ ರೀತಿಯಲ್ಲಿ ಈ ಬೌದ್ಧಧರ್ಮವು ಪ್ರಶ್ನಿಸಿತು. ಇದರಿ೦ದಾಗಿ ವೈದಿಕವಾದವು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿತ್ತು. ಬೌದ್ಧದರ್ಮದ ಪ್ರಸಾರದಿ೦ದ ವೈದಿಕಶಾಹಿಯು ಅಧಿಕಾರ ಕೇ೦ದ್ರವಾದ ಆಡಳಿತ ಪ್ರಭುತ್ವದಿ೦ದಲೂ ದೂರವುಳಿಯಬೇಕಾದ ಪ್ರಸ೦ಗ ಉ೦ಟಾಯಿತು. ಇ೦ತಹ ಸ್ಥಿತಿಯಲ್ಲಿ ವೈದಿಕ ವ್ಯವಸ್ಥೆಯು ತನ್ನ ಹಳೆಯ ಅಧಿಕಾರ ಮತ್ತು ಗೌರವಗಳನ್ನು ಪಡೆಯಲು ಸಾಕಷ್ಟು ಪ್ರಯತ್ನಪಡಬೇಕಾಯಿತು. ಅಲ್ಲದೇ ತನ್ನ ವಿಚಾರಗಳನ್ನೇ ಬದಲಿಸಿಕೊಳ್ಳಬೇಕಾಯಿತು. ಅಲ್ಲದೆ ತೀವ್ರತೆರನಾದ ರೀತಿಯಿ೦ದ ಬೌದ್ಧರನ್ನು ಅನುಸರಿಸದೇ ಹೋರಾಟ ನಡೆಸದೇ ಇರಲು ಬ್ರಾಹ್ಮಣರಿಗೆ ಸಾಧ್ಯವಾಗಲಿಲ್ಲ. ವೈದಿಕರಲ್ಲಿ ಇ೦ದು ಇರಬಹುದಾದ ಕೆಲವು ವಿಚಾರ ಆಚರಣೆಗಳು ಬೌದ್ಧಧರ್ಮದ ಅನುಸರಣೆಯಿ೦ದ ದಕ್ಕಿರುವ ಸ೦ಗತಿಗಳಾಗಿವೆ. ಉದಾಹರಣೆಯಾಗಿ ಬುದ್ಧನ ಮರಣಾನ೦ತರ ಆತನ ಅನುಯಾಯಿಗಳು ಅವನ ಮೂರ್ತಿಗಳನ್ನು ರಚಿಸಿ ಸ್ತೂಪಗಳನ್ನು ನಿರ್ಮಿಸಿದರೆ ಅದೇ ಮಾದರಿಯಲ್ಲಿ ವೈದಿಕರು ಶಿವ, ವಿಷ್ಣು ಮು೦ತಾದ ದೇವಾಲಯಗಳನ್ನು ನಿರ್ಮಿಸಿ ತಮ್ಮತ್ತ ಜನರನ್ನು ಆಕರ್ಷಿಸಲು ಪ್ರಯತ್ನಿಸಿದರು. ಮತ್ತಷ್ಟು ಓದು »

28
ಏಪ್ರಿಲ್

ಡಬ್ಬಿಂಗ್ ಎಂಬ ರುಚಿಗೆಟ್ಟ ದಿಢೀರ್ ಅಡುಗೆ ಏಕೆ?

– ರೂಪ ರಾವ್

ಇತ್ತೀಚಿಗೆ ಡಬ್ಬಿಂಗ್ ಬೇಕು ಬೇಡ ಅನ್ನುವ ಹುಯಿಲು ಮತ್ತೆ ಕಾಣ್ತಿದೆ. ರಾಕೇಶ್ ಶೆಟ್ಟಿಯವರ ಲೇಖನ ಓದಿದ ಮೇಲೆ ಇದರ ಬಗ್ಗೆ ನನ್ನದೊಂದಿಷ್ಟು ಅನಿಸಿಕೆ.

ಸ್ವಾಮಿ ಡಬ್ಬಿಂಗ್ ಬೇಡ ಅನ್ನೋದು ಹಳೆಯ ರಾಗವಿರಬಹುದು. ಆದರೆ ಕಾರಣ ಮಾತ್ರ ನಿಚ್ಚಳ… ಅದು ಕನ್ನಡದ ಕಲಾವಿದರಿಗೆ ಆಗೋ ಅನ್ಯಾಯ ಅಷ್ಟೆ. ಅದು ಯಾವತ್ತಿಗೂ ಸಲ್ಲುವ ಕಾರಣ. ಚಿತ್ರರಂಗವನ್ನೇ ನಂಬಿಕೊಂಡು ನಿಂತ ಅಸಂಖ್ಯಾತ ಕಲಾವಿದರಿಗೆ. ನಾಯಕ ,ನಾಯಕಿ ಪಾತ್ರದಿಂದ ಹಿಡಿದು ಪೋಷಕ ಪಾತ್ರಧಾರಿಗಳು, ಛಾಯಾಗ್ರಾಹಕರು, ನಿರ್ದೇಶಕರು,ನೂರಾರು ಜನ ನೇರವಾಗಿ ಇಲ್ಲವೇ ಪರೋಕ್ಷವಾಗಿ ಒಂದು ಚಿತ್ರದ  ಮೇಲೆ ಅವಲಂಬಿತರಾಗಿರುತ್ತಾರೆ.. ಅಷ್ಟೂ ಜನರ ಹೊಟ್ಟೆಯ ಮೇಲೆ ಹೊಡೆಯುವ ಹುನ್ನಾರವಿದು.

ರಿಮೇಕ್ ಚಿತ್ರಗಳ ಆರ್ಭಟಕ್ಕೆ ನಿರ್ದೇಶಕರ ಸೃಜನಾತ್ಮಕತೆ ಈಗಾಗಲೇ ಕಡಿಮೆಯಾಗಿದೆ.ಒಂದು ವೇಳೆ ಡಬ್ಬಿಂಗ್ ನಿಷೇಧ ತೆರವು ಗೊಳಿಸಿದರೆ,ಕನ್ನಡದಲ್ಲಿ ನಿರ್ದೇಶಕ, ಕತೆಗಾರ, ಸತ್ತಂತೆ…..! ಉಪೇಂದ್ರ, ಸೂರಿ, ಶಶಾಂಕ್, ಚಂದ್ರು,ಯೋಗರಾಜ್ ಭಟ್ ರವರಂತೆ ಆಗಬೇಕೆನ್ನುವ ಯುವ ನಿರ್ದೇಶಕರ ಗತಿ ?

ಮತ್ತೆ ಯಾವುದೋ ಪ್ರಾದೇಶಿಕತೆಗೆ ಹೊಂದುವ ಅಲ್ಲಿನ ವಾತಾವರಣಕ್ಕೆ ನಿರ್ಮಿಸಲಾಗಿರುವ ಚಿತ್ರವೊಂದನ್ನ ಹಾಗೆಯೇ ಡಬ್ಬಿಂಗ್ ಮಾಡಿದಲ್ಲಿ ಅದನ್ನು ಕೂತು ನೋಡುವ ಕರ್ಮ ನಮ್ಮದಾಗುತ್ತದೆ.ಪಾತ್ರದ ತುಟಿಯ ಚಲನೆ ಒಂದಾದರೆ. ಹಿನ್ನಲೆ ದ್ವನಿಯ  ಮಾತು ಒಂದಾಗಿರುತ್ತದೆ. ಅದಕ್ಕೂ ಇದಕ್ಕೂ  ಜೋಡಿಸಿ ನೋಡುವ ದರ್ದು ನಮಗೆ ಬೇಕಾ?
ಮತ್ತಷ್ಟು ಓದು »

27
ಏಪ್ರಿಲ್

’ಸತ್ಯ ಮೇವ ಜಯತೇ’ ಅನ್ನಲು ಕನ್ನಡಿಗರು ಅಪ್ಪಣೆ ಪಡೆಯಬೇಕಾ?

– ರಾಕೇಶ್ ಶೆಟ್ಟಿ

ಕಳೆದ ವರ್ಷ ‘ಕನ್ನಡ ಚಲನ ಚಿತ್ರ ಅಕಾಡೆಮಿ’ಯು ಬಿಡುಗಡೆ ಮಾಡಿದ್ದ ವರದಿ ಡಬ್ಬಿಂಗ್ ಪರವಾಗಿತ್ತು.ಆ ವರದಿ ಬಿಡುಗಡೆಯಾದ ತಕ್ಷಣ ಚಿತ್ರರಂಗದ ಬಹುತೇಕ ಮಂದಿ ನಾಗಾಭರಣರ ಮೇಲೆ ಮುಗಿಬಿದ್ದರು.ಕಡೆಗೆ ಅವ್ರು ವರದಿಯನ್ನ ಹಿಂಪಡೆದರು.ಇಲ್ಲಿ ನಷ್ಟ ಆಗಿದ್ದು ಯಾರಿಗೆ? ಕನ್ನಡ ಚಿತ್ರ ರಂಗಕ್ಕಾ? ಅಲ್ಲ … ಕನ್ನಡ ಪ್ರೇಕ್ಷಕನಿಗೆ.

ಇಷ್ಟಕ್ಕೂ, ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”

ಡಬ್ಬಿಂಗ್ ಯಾಕೆ ಬೇಡ ಅಂದ್ರೆ, ಅದರಿಂದ ಕನ್ನಡದ ಮಕ್ಕಳಿಗೆ ಕೆಲಸವಿರೋದಿಲ್ಲ ಅಂತ ಹಳೆ ಕತೆ ಹೇಳ್ತಾ ಇದ್ದಾರೆ.ಈಗ ಬರ್ತಾ ಇರೋ ಅದಿನ್ನೆಷ್ಟು ಚಿತ್ರಗಳಲ್ಲಿ ಕನ್ನಡದ ಕಲಾವಿದರು,ತಂತ್ರಜ್ಞರು,ನಟಿಯರು,ಪೋಷಕ ನಟರು,ಖಳನಟರು,ಸಂಗೀತ ನಿರ್ದೇಶಕರು,ಗಾಯಕ-ಗಾಯಕಿಯರಿಗೆ ಕೆಲ್ಸ ಇದೆ?,ಎಲ್ಲದಕ್ಕೂ ಬೇರೆ ಭಾಷೆಯವರೇ ಬೇಕು.ಆಗ ಮಾತ್ರ ಯಾರು ಕನ್ನಡ ಮಕ್ಕಳಿಗೆ ಅನ್ಯಾಯವಾಗ್ತಾ ಇದೆ ಅಂತ ಉಸಿರೆತ್ತುವುದಿಲ್ಲ. ಭಾಷೆಯ ಉಚ್ಚಾರಣೆ ಬರದೆ ಇದ್ರೂ ನಮಗೆ ಬಾಲಿವುಡ್ ಗಾಯಕರು ಬಂದು ಉಸಿರು ಕಟ್ಟಿ ಹಾಡ್ಬೇಕು,ಬಾಯಿ ಅಲ್ಲಾಡಿಸಲು ಬರದ ಖಳ ನಟರು ಅಲ್ಲಿಂದಲೇ ಬರಬೇಕು.ಒಟ್ಟಿನಲ್ಲಿ ಬೇರೆ ಕಡೆಯಿಂದ ಜನ ಆಮದಾದಷ್ಟು ಚಿತ್ರ ಅದ್ದೂರಿ ಅನ್ನೋ ಭ್ರಮೆ! ಈಗಲೂ ಕನ್ನಡದ ಮಕ್ಕಳಿಗೆ ಆಗುತ್ತಿರುವುದು ಅನ್ಯಾಯವೇ ಅಲ್ಲವೆ?

ಇಷ್ಟಕ್ಕೂ ಡಬ್ಬಿಂಗ್ಗೆ ಅವಕಾಶ ಕೊಟ್ರೆ ಎಲ್ರೂ ಅದೇ ಮಾಡ್ತಾರೆ ಅನ್ನೋ ಅತಂಕವಿದ್ದರೆ,ಅದಕ್ಕಾಗಿ ಕೆಲ ನೀತಿ ನಿಯಮಗಳನ್ನ ಮಾಡಿಕೊಳ್ಳಬಹುದು. ಡಬ್ಬಿಂಗ್ ಮಾಡುವ ಹಕ್ಕನ್ನ ಮುಕ್ತವಾಗಿಡದೆ ‘ವಾಣಿಜ್ಯ ಮಂಡಳಿ’ ಯೇ ಆಯ್ದ ಚಿತ್ರಗಳನ್ನ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು.ಹಾಗೆ ಡಬ್ಬಿಂಗ್ ಮಾಡಿದ ಸಿನೆಮಾಗಳಲ್ಲಿ ನಮ್ಮ ನೇಟಿವಿಟಿ ಇಲ್ಲ ಅಂದ್ರೆ ಅವು ಗೆಲ್ಲೋದು ಅಷ್ಟರಲ್ಲೇ ಇದೆ,ಅದರಿಂದ ಯಾವ ಅಪಾಯವು ಇಲ್ಲ. ವಿಷಯ ಹೀಗಿರುವಾಗ ಇನ್ನು ಆಗಿನ ಕಾಲದ ಕತೆಯನ್ನೇ ಹೇಳಿ ಕನ್ನಡ ಪ್ರೇಕ್ಷಕರಿಗೆ ಒಳ್ಳೊಳ್ಳೆ ಚಿತ್ರವನ್ನ ನಮ್ಮ ಭಾಷೆಯಲ್ಲಿ ನೋಡದಂತೆ ಚಿತ್ರ ರಂಗದ ಕೆಲವರು ಯಾಕೆ ಮಾಡುತಿದ್ದಾರೆ!?, ಹಾಗೆ ಡಬ್ಬಿಂಗ್ನಿಂದ ಮುಳುಗಿ ಹೋಗುವಷ್ಟು ‘ಕನ್ನಡ ಚಿತ್ರ ರಂಗ’ ದುರ್ಬಲವಾಗಿಲ್ಲ.೭೫ ವರ್ಷದ ಇತಿಹಾಸವಿರುವ ಚಿತ್ರ ರಂಗದ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು ಅಂತ ಇನ್ನ ಎಷ್ಟು ದಿನ ಹೆದರ್ತಿರ ಸ್ವಾಮೀ?

ಮತ್ತಷ್ಟು ಓದು »

26
ಏಪ್ರಿಲ್

ಕನ್ನಡದಲ್ಲೇ ಹೇಳೋಣ ಬನ್ನಿ – “ಸತ್ಯಮೇವ ಜಯತೇ”

25
ಏಪ್ರಿಲ್

ಈ ಯುದ್ಧ ಭೂಮಿಯಲ್ಲಿ ಸೈನಿಕರ ಬಡಿದಾಟ ಪ್ರಕೃತಿಯೊಂದಿಗೆ!

– ಡಾ ಅಶೋಕ್. ಕೆ. ಆರ್

          ಇದು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವಿರ ಮತ್ತು ಭಾರತದ ಐದು ಸಾವಿರಕ್ಕೂ ಹೆಚ್ಚು ಸೈನಿಕರು ಇಲ್ಲಿ ಹತರಾಗಿದ್ದಾರೆ [ಅನಧಿಕೃತ ವರದಿ; ಅಧಿಕೃತ ವರದಿಯನ್ನು ಎರಡೂ ದೇಶದ ಸರಕಾರಗಳು ಬಹಿರಂಗಗೊಳಿಸುವುದಿಲ್ಲ]. ಬಹಳಷ್ಟು ಮಂದಿಯ ದೇಹವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. 80%ಗಿಂತ ಹೆಚ್ಚು ಸಂಖ್ಯೆಯ ಸೈನಿಕರ ಮರಣಕ್ಕೆ ಕಾರಣವಾಗಿದ್ದು ಎದುರಾಳಿಗಳ ಬಂದೂಕಾಗಲೀ, ಆಧುನಿಕ ಕ್ಷಿಪಣಿಗಳಾಗಲೀ ಅಲ್ಲ. ದೇಶಗಡಿಗಳ ಲೆಕ್ಕಿಸದೆ ಈ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ಪ್ರಕೃತಿ! ಪ್ರಕೃತಿಯ ಪ್ರಮುಖಾಯುಧ ಹಿಮ!! ಇದು ಸಿಯಾಚಿನ್ ಯುದ್ಧಭೂಮಿ.

ಆಪರೇಷನ್ ಮೇಘದೂತ: –

ಬಾಂಗ್ಲಾದೇಶದ ವಿಮೋಚನಾ ಯುದ್ಧದ ನಂತರ 1972ರಲ್ಲಿ ಸಿಮ್ಲಾ ಒಪ್ಪಂದಕ್ಕೆ ಯು.ಎನ್ ನೇತೃತ್ವದಲ್ಲಿ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕುತ್ತವೆ. ಗಡಿರೇಖೆಯನ್ನು ವಿವರಿಸುವ ಆ ಒಪ್ಪಂದದಲ್ಲಿ ಸಿಯಾಚಿನ್ ಸೇರಿರಲಿಲ್ಲ. ಹಿಮಚ್ಛಾದಿತ ಮರುಭೂಮಿಯ ಮೇಲೆ ಹಕ್ಕು ಸಾಧಿಸಲು ಇವೆರಡೂ ದೇಶಗಳು ಬಡಿದಾಡಲಾರವು ಎಂದುಕೊಂಡಿತ್ತು ಯು.ಎನ್. ಆದರೆ ನಡೆದಿದ್ದೇ ಬೇರೆ! 1967ರಿಂದಲೇ ಅಮೆರಿಕಾದ ರಕ್ಷಣಾ ಸಂಸ್ಥೆಗಳು ತಯಾರಿಸಿದ ನಕ್ಷೆಗಳಲ್ಲಿ ಸಿಯಾಚಿನ್ ಪ್ರದೇಶವನ್ನು ಯಾವುದೇ ಐತಿಹಾಸಿಕ ಆಧಾರಗಳಿಲ್ಲದಾಗ್ಯೂ ಪಾಕಿಸ್ತಾನದ ಭಾಗವಾಗಿ ತೋರಿಸಲಾರಂಭಿಸಿತು. ಪಾಕಿಸ್ತಾನ ಕೂಡ ಅಮೆರಿಕದ ಕುಮ್ಮಕ್ಕಿನಿಂದಾಗಿ ಕ್ರಮೇಣವಾಗಿ ಸಿಯಾಚಿನ್ ಪ್ರದೇಶದ ಮೇಲೆ ಹಕ್ಕು ಚಲಾಯಿಸಲಾರಂಭಿಸಿತು. ಪಾಕಿನ ಈ ವರ್ತನೆಯನ್ನು ಗಮನಿಸಿದ ಭಾರತ ಸರಕಾರ ಕೂಡ ತನ್ನ ಸೈನ್ಯವನ್ನು ‘ಎತ್ತರದ ಪ್ರದೇಶಗಳಲ್ಲಿ ಯುದ್ಧ ತರಬೇತಿಯ’ ನೆಪದಲ್ಲಿ ಸಿಯಾಚಿನ್ ಪ್ರದೇಶಕ್ಕೆ ನಿಯೋಜಿಸಲಾರಂಭಿಸಿತು.

ಕುದಿಯಲಾರಂಭಿಸಿದ ದ್ವೇಷ 1984ರಲ್ಲಿ ಯುದ್ಧ ರೂಪವನ್ನು ಪಡೆಯಿತು. ಸಿಯಾಚಿನ್ ಪ್ರದೇಶವನ್ನು ಹಿಂಪಡೆದುಕೊಳ್ಳಲು ಆಪರೇಷನ್ ಮೇಘದೂತದ ಹೆಸರಿನಲ್ಲಿ ಭಾರತದ ಸೈನಿಕರು ಸಿಯಾಚಿನ್ ಏರಲಾರಂಭಿಸಿದರು. ಸರಿಸುಮಾರು ಸಾವಿರ ಚದುರ ಮೈಲು ಪ್ರದೇಶವನ್ನು ವಶಪಡಿಸಿಕೊಳ್ಳುವುದರಲ್ಲಿ ಭಾರತ ಸಫಲವಾಗಿ ಯುದ್ಧದಲ್ಲಿ ಗೆಲುವು ಪಡೆಯಿತು.

ಮತ್ತಷ್ಟು ಓದು »

24
ಏಪ್ರಿಲ್

ಒಳಸಂಚಿಗೆ ಬೇಕಿದೆ ಆತ್ಮವಿಶ್ವಾಸದ ಅಗ್ನಿಸ್ಪರ್ಷ

– ಚಕ್ರವರ್ತಿ ಸೂಲಿಬೆಲೆ
   ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ!?

ನಾಲ್ಕು ವರ್ಷಗಳ ತಪಸ್ಸು ಪೂರ್ಣಗೊಂಡಿದೆ. ೭೦೦ ಕಿ.ಮೀ.ದೂರದವರೆಗೂ ಹೋಗಿ ಶತ್ರು ಠಾಣ್ಯ ನಾಶ ಮಾಡಿಬರಬಲ್ಲ. ಅಗ್ನಿ ೧ನ್ನು ನಭಕ್ಕೆ ಹಾರಿಬಿಟ್ಟಾಗಿನಿಂದಲೂ ೫,೦೦೦ ಕಿ.ಮೀ. ದೂರಕ್ಕೆ ಹೋಗಬಲ್ಲ ಅಗ್ನಿಯ ಕನಸು ಕಾಣುತ್ತಲೇ ಇದ್ದವರು ನಾವು. ಮೊನ್ನೆ ಅಗ್ನಿ ೫ ಯಶಸ್ವಿಯಾಗಿ ಉಡಾವಣೆಗೊಂಡು ಸೈನ್ಯದ ಶಕ್ತಿಯನ್ನು ನೂರ್ಮಡಿಗೊಳಿಸಿದಾಗ ಆ ಕನಸು ನನಸಾಯಿತು. ಕನಸು ನನಸುಗಳ ಕತೆ ಏನೇ ಇರಲಿ. ಸೈನ್ಯದ ಸಾಮರ್ಥ್ಯದ ಕುರಿತಂತೆ ನಡೆಯುತ್ತಿದ್ದ ವಾದ ವಿವಾದಗಳಿಂದ ಈ ಪರೀಕ್ಷೆ ಕೇಂದ್ರ ಸರ್ಕಾರವನ್ನಂತೂ ಪಾರುಮಾಡಿತು. ಅಗ್ನಿಯೂ ತಂಪೆರೆಯಬಲ್ಲದೆಂದರೆ ಹೀಗೇ ನೋಡಿ!

ಈ ನಾಲ್ಕು ವರ್ಷಗಳ ಪ್ರಯತ್ನ ಅಂತ್ಯ ಕಾಣಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿತ್ತು. ಆದರೆ ರಕ್ಷಣಾ ಸಚಿವ ಆಂಟನಿ ವಿಜ್ಞಾನಿಗಳಿಗೆ ದುಂಬಾಲು ಬಿದ್ದು ಈ ಪ್ರಯೋಗವನ್ನು ಸಾಧ್ಯವಾಗಿಸಿ ಯಶಸ್ಸು ಗಳಿಸಿಕೊಂಡರು. ಈ ನಿಟ್ಟಿನಲ್ಲಿ ಡಿಆರ್‌ಡಿಓಗೆ ಸಹಕಾರಿಯಾಗಿ ಹಲವು ವೈಜ್ಞಾನಿಕ ಸಂಸ್ಥೆಗಳು ದುಡಿದಿವೆ. ಯಶಸ್ಸಿನ ಈ ಹೊತ್ತಿನಲ್ಲಿ ಆ ವಿಜ್ಞಾನಿಗಳಿಗೆಲ್ಲ ಒಂದು ಪ್ರೀತಿಯ ಸಲಾಮು.

ಮತ್ತಷ್ಟು ಓದು »

23
ಏಪ್ರಿಲ್

ನನ್ನ ಊಟದ ಮೆನು ನಿರ್ಧರಿಸಲು ನೀವ್ಯಾರು?

– ರಾಕೇಶ್ ಶೆಟ್ಟಿ

ಕುಡಿಯುವ ನೀರು ಕೇಳಿದಾಗ “ನೀರು ಕೊಟ್ಟರೆ ನನ್ನ ಜಾತಿ ಕೆಡುತ್ತದೆ” ಅಂದ ಮಂಗಲ್ ಪಾಂಡೆಗೆ, “ಸ್ವಲ್ಪ ಇರು,ದನದ ಕೊಬ್ಬು ಹಚ್ಚಿರುವ ಕಾಡತೂಸು ಕಚ್ಚಲು ಹೇಳುತ್ತಾರೆ,ಆಮೇಲೆ ನಿನ್ನ ಜಾತಿ ಅದೇನಾಗುತ್ತೋ ನಾನು ನೋಡುತ್ತೇನೆ” ಅಂದಿದ್ದ ಆ ಕೆಳ ಜಾತಿಯ ಹುಡುಗ.ಮೊದಲೆ ಈ ಕಾಡತೂಸಿನ ಗುಸು-ಗುಸಿಗೆ ಗಾಯಗೊಂಡಿದ್ದವನಿಗೆ ಉಪ್ಪು ಸವರಿದಂತಾಗಿತ್ತು ಹುಡುಗನ ಮಾತು,ಕಡೆಗದು ’ಬ್ಯಾರಕ್ ಪುರ’ದಲ್ಲಿ ಕ್ರಾಂತಿಯ ಕಿಡಿಯಾಗಿ ಭಾರತವನ್ನ ವ್ಯಾಪಿಸಿಕೊಂಡಿತ್ತು.ಇತಿಹಾಸ ಅದಕ್ಕೆ ಕೊಟ್ಟ ಹೆಸರು “೧೮೫೭ರ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ’.

೧೭೫೭ರಲ್ಲಿ ಪ್ಲಾಸಿ ಕದನದ ನಂತರ ಭಾರತವನ್ನ ಇಡಿಯಾಗಿ ಆಪೋಶನ ತೆಗೆದುಕೊಂಡ ಬ್ರಿಟಿಶರಿಂದ ತೆಪ್ಪಗೆ ಆಳಿಸಿಕೊಳ್ಳುತಿದ್ದ ಭಾರತದ ಸತ್-ಪ್ರಜೆಗಳ ಎದೆಯೊಳಗಿನ ನೋವಿನ ಜ್ವಾಲಾಮುಖಿ ಸ್ಫೋಟವಾಗಲು ಕಾರಣವೊಂದು ಬೇಕಿತ್ತು,ಕಾರಣವಾಗಿ ಬಂದದ್ದು ದನದ ಮತ್ತು ಹಂದಿಯ ಕೊಬ್ಬು ಸವರಿದ ಎನ್-ಫಿಲ್ಡ್ ಬಂದೂಕು..!

ಹೌದು.ಭಾರತದ ಸತ್-ಪ್ರಜೆಗಳೇ ಹಾಗೆ ಹೊಟ್ಟೆಗೆ ಅನ್ನ,ತಲೆಗೊಂದು ಸೂರು ಕೊಡದ ಸರ್ಕಾರವಾದರೂ ಸರಿ,ಕೋಟಿಗಟ್ಟಲೆ ಹಣ ಲೂಟಿ ಮಾಡಿದರೂ ಸರಿ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.ಆದರೆ ಧರ್ಮದ ವಿಚಾರಕ್ಕಿಳಿದಿರೋ ಅಲ್ಲಿಗೆ ಮುಗಿಯಿತು..! ಇದು ಕೇವಲ ಇತಿಹಾಸದ ಕತೆಯಲ್ಲ,ತೀರಾ ಕಳೆದ ವರ್ಷ ತಸ್ಲೀಮಾ ನಸ್ರೀನ್ ಅವರು ಬರೆದ ಲೇಖನ (ಎಂದು ಹೇಳಲಾದ )ಪ್ರಕಟವಾದಾಗ ಶಿವಮೊಗ್ಗ-ಹಾಸನದಲ್ಲಿ ಏನಾಗಿತ್ತು ಅನ್ನುವುದು ನೆನಪಿದೆಯಲ್ವಾ?

ಕಳೆದ ಒಂದು ವರ್ಷಗಳಿಂದಲೂ ರಾಜ್ಯದಲ್ಲಿ ಸದ್ದು ಮಾಡುತ್ತಿರುವುದು ’ಗೋ-ಹತ್ಯೆ ನಿಷೇಧ’ ಮಸೂದೆ.ಸಾಕಷ್ಟು ಚರ್ಚೆಗಳು,ವಾದಗಳು ನಡೆದಿವೆ.ಬಹುಷಃ ಅದು ಎಂದಿಗೂ ಮುಗಿಯಲಾರದು.

ಮತ್ತಷ್ಟು ಓದು »