ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಂಸ್ಕೃತಿ’ Category

22
ಡಿಸೆ

ಪುನರ್ಜನ್ಮ ಪರಿಕಲ್ಪನೆಯ ಕುರಿತು ಆಸಕ್ತಿ ಇರುವವರು ಓದಲೇ ಬೇಕಾದ ಪುಸ್ತಕ

– ಗೋವಿಂದ ರಾವ್ ವಿ ಅಡಮನೆ

ನಾನೀಗ ಶಿಫಾರಸ್ಸು ಮಾಡುತ್ತಿರುವುದು ಒಂದು ಇಂಗ್ಲಿಷ್ ಪುಸ್ತಕ. ಈ ಪುಸ್ತಕ ೧೯೫೦ ರಲ್ಲಿ ಪ್ರಕಟವಾದ ಪುಸ್ತಕವಾದರೂ ಜನಪ್ರಿಯತೆ ಇನ್ನೂ ಕುಗ್ಗಿಲ್ಲ. ಅದರ ವಿಷಯವೇ ಅಂಥದ್ದು. ಪುನರ್ಜನ್ಮ ಕ್ಕೆ ಸಂಬಂಧಿಸಿದಂತೆ ನಿಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಲು ನೆರವು ನೀಡಬಲ್ಲ ಪುಸ್ತಕ ಇದು. ನಾನು ಇದನ್ನು ಖರೀದಿಸಿದ್ದು ೧೯೮೨ ರಲ್ಲಿ. ನನ್ನ ಬ್ಲಾಗ್ : ‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ ಬರೆಯಲು ನೆರವು ನೀಡಿದ ಪುಸ್ತಕ ಇದು. ಯಾವುದೇ ವಿಷಯವನ್ನು ಮನೋಗತ ಮಾಡಿಕೊಳ್ಳ ಬೇಕಾದರೆ ಆ ವಿಷಯದ ಮೂಲ ಆಕರವನ್ನೇ ನೋಡು ಎಂಬುದು ನನ್ನ ಅಧ್ಯಾಪಕರು ನನಗೆ ಕಲಿಸಿದ ಅಮೂಲ್ಯ ಪಾಠಗಳಲ್ಲಿ ಒಂದು. ಪುನರ್ಜನ್ಮ ಕುರಿತಾದ ಕುತೂಹಲಜನಕ ಉದಾಹರಣೆಗಳು ಈ ಪುಸ್ತಕದಲ್ಲಿವೆ.  ಎಂದೇ, ಈ ವಿಷಯದಲ್ಲಿ ಆಸಕ್ತಿ ಇರುವವರು ನೀವಾಗಿದ್ದರೆ ಈ ಪುಸ್ತಕ ಓದುವುದು ಒಳಿತು ಎಂಬುದು ನನ್ನ ಸಲಹೆ.

ಪುಸ್ತಕದ ಹೆಸರು: Many Manisions – “The Edgar Cayce Story On Reincarnation”. ಬರೆದವರು: Gina Cerminaria [ಗಿನಾ ಸರ್ಮಿನಾರಾ (ಏಪ್ರಿಲ್ ೧೯೧೪ – ಏಪ್ರಿಲ್ ೧೯೮೪). ಮನೋವಿಜ್ಙಾನದಲ್ಲಿ Ph.D ಪದವೀಧರೆ. ವಿಷಯದ ಕುರಿತು ಸುದೀರ್ಘ ಕಾಲ ಸಂಶೋಧನೆ ಮಾಡಿದ ಬಳಿಕ ಪ್ರಕಟಿಸಿದ ಪುಸ್ತಕ ಇದು.] ಪ್ರಕಾಶನ: A Signet Bool from New American Library.

ಮತ್ತಷ್ಟು ಓದು »

21
ಡಿಸೆ

ರಷ್ಯಾದಲ್ಲಿ ಭಗವದ್ಗೀತೆ ನಿಷೇಧಕ್ಕೆ ಯಾಕೀ ಕೂಗಾಟ ?

-ಅರವಿಂದ್

ಮಾಧ್ಯಮಗಳಲ್ಲಿ ಹಾಗೂ ಲೋಕಸಭೆಯಲ್ಲಿ ನೆನ್ನೆಯಿಂದಲೂ ಒಕ್ಕೊರಲಿಗಿನ ವಾದ-ವಿವಾದ. ಬಿಜೆಪಿ ಇನ್ನಿತರ ವಿರೋಧಪಕ್ಷಗಳು, ಹಿಂದೂ ಹೋರಾಟಗಾರರು, ಇಸ್ಕಾನು ಎಲ್ಲರದೂ ಒಂದೇ, ಮಾತು. ರಷ್ಯಾದಲ್ಲಿ ಭಗವದ್ಗೀತೆ ನಿಷೇಧ ಬೇಡವೆಂಬ ಕೂಗು. ಇದ್ಯಾಕೋ ಗೊತ್ತಾಗಲಿಲ್ಲ. ರಷ್ಯಾದಲ್ಲಿ ಭಗವದ್ಗೀತೆ ನಿಷೇಧಿಸಿದರೆ ಭಾರತಕ್ಕಾಗುವ ನಷ್ಟವೇನು ? ಹೇಳಿ ಕೇಳಿ ರಷ್ಯಾ ಕಮ್ಯೂನಿಷ್ಟ್ ದೇಶ. ಆ ದೇಶ ಭಾರತದಂತೆ ಯಾವುದೇ ಧರ್ಮ ತಳಹದಿಯ ಮೇಲೆ ನಿರ್ಮಾಣವಾದ ದೇಶವಲ್ಲ. ಅದು ಧರ್ಮವನ್ನು ಅಫೀಮು ಎಂದುಕೊಂಡ ದೇಶ. ಇಂಥ ದೇಶಕ್ಕೆ ಧರ್ಮಗಳಿಂದ ನಾಗರೀಕರನ್ನು ಉದ್ಧಾರ ಮಾಡುವ ರಾಜಕೀಯವೂ ಇಲ್ಲ. ಇಂಥ ದೇಶದಲ್ಲಿ ಭಗವದ್ಗೀತೆಯಾದರೇನು, ಖುರಾನಾದರೇನು ಇನ್ಯಾವುದೇ…. ಇದ್ದರೇನು ಧರ್ಮಗ್ರಂಥಗಳಿಗೆ ವಿಶೇಷ ಮಾನ್ಯತೆಯೂ ಇಲ್ಲ.

ರಷ್ಯಾಕ್ಕೆ ತನ್ನದೇ ಆದ ಇತಿಹಾಸವಿದೆ, ಕಮ್ಯೂನಿಷ್ಟ್ ಮ್ಯಾನಿಫೆಸ್ಟೋ ಅಲ್ಲಿನ ಧರ್ಮಗ್ರಂಥವಿದ್ದಂತೆ. ಇಂಥ ದೇಶದಲ್ಲಿ ಭಗವದ್ಗೀತೆ ನಿಷೇಧಿಸಬಾರದೆಂಬ ಕೂಗು, ಅದಕ್ಕೆ ಬೇಕಾದ ರಾಜತಾಂತ್ರಿಕತೆಯ ರಾಯಭಾರ ಭಾರತಕ್ಯಾಕೆ ಅಂತ ತಿಳಿಯುತ್ತಿಲ್ಲ. ಹೋರಾಟ ಇವೆಲ್ಲ ಅವಶ್ಯಕತೆ ಇದ್ಯಾ ? ಭಾರತದಲ್ಲಿ ಮುಸಲ್ಮಾನ, ಕ್ರ್ಯೆಸ್ತ ಅನುಯಾಯಿಗಳು ಆ ಧರ್ಮದ ಪ್ರಚಾರ ಕ್ಯೆಗೊಂಡರೆ ಅದು ಮತಾಂತರವಾದರೆ, ರಷ್ಯಾಗೂ ಅದು ಅನ್ವಯಿಸುವುದಿಲ್ಲವೇ ? ನಾನಿಲ್ಲಿ ಯಾವುದೇ ಧರ್ಮ ದೊಡ್ಡದು ವಿಶಾಲವಾದದ್ದೂ ಅನ್ನೋ ತುಲನೆಗೆ ಹೇಳುತ್ತಿಲ್ಲ. ಪ್ರತಿ ದೇಶಕ್ಕೂ ಅದರದ್ದೇ ಆದ ಸಂವಿಧಾನ ಕರಡು ಇರುತ್ತದೆ. ರಷ್ಯಾಕ್ಕೆ ಭಗವದ್ಗೀತೆಯ ಅವಶ್ಯಕತೆಯಿಲ್ಲ ಮತ್ತು ಅಲ್ಲಿ ಭಗವದ್ಗೀತೆಯ ಯಾವುದೋ ಅಧ್ಯಾಯದ ಯಾವುದೋ ಸಾಲು ಅಹಿಂಸೆಯನ್ನು ಸೃಷ್ಠಿಮಾಡುತ್ತದೆ ಎಂಬ ಆಲೋಚನೆಯಿದ್ದರೆ ಇರಲಿ ಬಿಡಿ, ಅದರಿಂದ ನಮಗ್ಯಾವ ನಷ್ಟವೂ ಇಲ್ಲ. ಭಗವದ್ಗೀತೆ ಭಾರತದ ಸಂಸ್ಕೃತಿಗೆ ತಳಹದಿಯಾದರೆ, ಅದು ಭಾರತಕ್ಕಾದೀತು. ರಷ್ಯಾವೂ ಭಾರತದಂತೆ ಪಾಲಿಸಬೇಕು ಅನ್ನುವ ಹಠ ಯಾಕೆ ? ಅದೇನೋ ಆಗಬಾರದ್ದು ಮಾಡಬಾರದ್ದು ಮಾಡುತ್ತಿರುವಂತೆ ಕೂಗಾಡುವ ಅವಶ್ಯಕತೆಯೇನಿದೆ. ಮತ್ತಷ್ಟು ಓದು »

20
ಡಿಸೆ

ಆಧುನಿಕ ವಿಕ್ರಮಾದಿತ್ಯ, ಬೇತಾಳನೂ ಮತ್ತು ಕುರುನಾಡ ಉಳಿಸಿ ವೇದಿಕೆಯ ವ್ಯಥೆಯೂ…

-ಸಾತ್ವಿಕ್ ಎನ್ ವಿ

ಎಂದಿನಂತೆ ಬೇತಾಳವು ಲೇಡಿಸ್ ಹಾಸ್ಟೆಲ್ ಎದುರಿಗಿನ ಹುಣಸೆ ಮರದ ತನ್ನ ಕೊಂಬೆಯ ಮೇಲೆ ನೇತಾಡುತ್ತಿತ್ತು. ರಸ್ತೆ ಅಗಲೀಕರಣವಾಗುವಾಗ  ತನ್ನ ಮರಕ್ಕೂ ಎಲ್ಲಿ ಕೊಡಲಿ ಬೀಳುತ್ತದೋ ಎಂಬ ಭಯ ಇದ್ದುದರಿಂದ ತರಗತಿಯಲ್ಲಿರುವ ಸಭ್ಯ ವಿದ್ಯಾರ್ಥಿಯಂತೆ ಒಂದೇ ಕಣ್ಣಿನಲ್ಲಿ ನಿದ್ದೆ ಮಾಡುತ್ತಿತ್ತು. ಇಂಥ ಸ್ಥಿತಿಯಲ್ಲಿ ವೋಟರ್ ಐಡಿಯಲ್ಲಿರುವ ಫೋಟೋದಂತೆ ಮುಖ ಮಾಡಿಕೊಂಡು ವಿಕ್ರಮರಾಜನು ಬೇತಾಳವನ್ನು ಸೆಳೆದುಕೊಂಡು ಹೋಗಲು ಧಾವಿಸಿದನು. ಆಗ ಬೇತಾಳವು ‘ನಿನಗಂತೂ ಕೆಲಸವಿಲ್ಲ. ಪದೇಪದೇ ಬಂದು ನನ್ನನ್ನು ಹೊತ್ತುಕೊಂಡು ಹೋಗುತ್ತಿಯಾ. ಆದರೆ ಒಮ್ಮೆಯೂ ನೀನು ನಿನ್ನ ಕೆಲಸದಲ್ಲಿ ಉತ್ತೀರ್ಣನಾಗಿಲ್ಲ. ಇದೆಲ್ಲ ನೋಡಿದರೆ ಮುಂದಿನ ಜನ್ಮದಲ್ಲಿ ನೀನು ಎಂಜಿನಿಯರಿಂಗ್ ವಿದ್ಯಾರ್ಥಿಯಾಗುವ ಎಲ್ಲ ಅರ್ಹತೆಗಳಿವೆ’ ಎಂದಿತು.

ಇದೆಲ್ಲವನ್ನೂ ತಲೆಗೆ ತೆಗೆದುಕೊಳ್ಳದ ವಿಕ್ರಮನು, ಮುಂದೆ ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ಭರವಸೆ ಇಲ್ಲದಿದ್ದರೂ ಮಕ್ಕಳಿಗೆ ಒಳಿತನ್ನೇ ಬಯಸುವ ಪಾಪದ ತಂದೆತಾಯಿಗಳ ಹಾಗೆ ತನ್ನಷ್ಟಕ್ಕೆ ತನ್ನ ಕಾರ್ಯದಲ್ಲಿ ನಿರತನಾದನು. ಇವನ ಹಸುತನವನ್ನು ಗಮನಿಸಿದ ಬೇತಾಳದ ಮನಸ್ಸು ಕರಗಿ ವಿಕ್ರಮನೇ, ನಿನ್ನ ಕಾರ್ಯಶ್ರದ್ಧೆಯನ್ನು ಮೆಚ್ಚಿದ್ದೇನೆ. ಪದೇ ಪದೇ ವಿಫಲನಾದರೂ ಸ್ವಮೇಕ್ ಚಿತ್ರವನ್ನೇ ಮಾಡುವ ಕನ್ನಡ ನಿರ್ದೇಶಕನಂಥ ನಿನ್ನ ಅಚಲ ನಿರ್ಧಾರವನ್ನು ಗೌರವಿಸುತ್ತೇನೆ. ದಾರಿ ಸವೆಯಲಿ ಎಂದು ಕಥೆಯೊಂದನ್ನು ಹೇಳುತ್ತೇನೆ ಎಂದು ಹೇಳಿ ವಿಕ್ರಮನ ಅನುಮತಿಯನ್ನೂ ಕಾಯದೇ ಕಥೆಯೊಂದನ್ನು ಹೇಳಲು ಪ್ರಾರಂಭಿಸಿತು. ಮತ್ತಷ್ಟು ಓದು »

20
ಡಿಸೆ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ – ಇಂದು ಮತ್ತು ಮುಂದು

-ಓಂ ಶಿವಪ್ರಕಾಶ್

(ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ಮಾಡಿದ ಭಾಷಣದ ಪ್ರತಿ )

ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ – ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರಲ್ಲಿ ಕನ್ನಡ ಒಂದು ಪ್ರಶ್ನೆ. ಮೊಬೈಲ್‌ಗಳಿಂದ ಹಿಡಿದು ಹತ್ತಾರು ವಿಷಯಗಳಲ್ಲಿನ ಶಿಷ್ಟತೆ/ಸ್ಟಾಂಡರ್ಡ್ಸ್ ನ ಕೊರತೆಯಿಂದಾಗಿ ತಂತ್ರಜ್ಞಾನದಲ್ಲಿ ಕನ್ನಡದ ಬಳಕೆಗೆ ಬಹಳಷ್ಟು ತೊಡಕುಗಳಿವೆ. ಆದರೂ, ಕನ್ನಡ ಮಾಹಿತಿ ತಂತ್ರಜ್ಞಾನದ ಸುತ್ತ ಬೆಳದಿದೆ. ನಿಮಗೆ ಈ ವಿಷಯಗಳನ್ನು ಸುಲಭವಾಗಿ ವಿವರಿಸಲು ಒಂದೆರಡು ಕಥೆಗಳನ್ನು ಹೇಳುತ್ತೇನೆ.
ಮತ್ತಷ್ಟು ಓದು »

20
ಡಿಸೆ

ರಾಮುಲು ಗೆಲುವು ಬಿಜೆಪಿಗೆ ದಿಗಿಲು

-ರಾಕೇಶ್ ಎನ್ ಎಸ್
ಈ ಬಾರಿ ಮಾಗಿಯ ಚಳಿಯಲ್ಲಿ ರಾಜ್ಯದ ಶ್ರೀಸಾಮಾನ್ಯ ಆರಾಮವಾಗಿ ದಿನ ಸಾಗಿಸುತ್ತಿದ್ದರೆ ರಾಜ್ಯದ ಅಧಿಕಾರರೂಢರು ಮಾತ್ರ ಗಡಗಡ ನಡುಗುತ್ತ ಅಯ್ಯೋ ರಾಮ ರಾಮ ಅನ್ನುತ್ತಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಕಂಬಳಿ ಹೊದ್ದುಕೊಂಡೆ ವಿಧಾನ ಸೌಧವನ್ನು ಆಳುತ್ತಿದ್ದವರನ್ನು ಈ ಬಾರಿ ಬಳ್ಳಾರಿಯಿಂದ ಬೀಸಿದ ರಾಮುಲು ನಾಮಧೇಯದ ಶೀತಲ ಮಾರುತ ಥರಗುಟ್ಟುವಂತೆ ಮಾಡಿದೆ.ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ‘ಸ್ವಾಭಿಮಾನಿ’ ಶ್ರೀರಾಮುಲು ಮತ್ತು ಕುಮಾರಸ್ವಾಮಿ ಗೆದ್ದಿದ್ದಾರೆ. ಬಿಜೆಪಿ ಸೋತಿದೆ. ಕಾಂಗ್ರೆಸ್ ಉಪಚುನಾವಣೆಗಳಲ್ಲಿ ಸೋಲುವ ತನ್ನ ಸಂಪ್ರದಾಯವನ್ನು ಇಲ್ಲಿಯೂ ಚಾಚು ತಪ್ಪದೆ ಪಾಲಿಸಿಕೊಂಡು ಬಂದಿದೆ. ಇದು ಮೊನ್ನೆ ಭಾನುವಾರದ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾಗಿದ್ದ ವಿದ್ಯಮಾನ. ಆದರೆ ಈ ಚುನಾವಣೆ ನಡೆಯಲು ಕಾರಣ, ಚುನಾವಣೆಗೆ ನಡೆದ ಪ್ರಚಾರ ಯಾವುವು ಕೂಡ ಜನರ ಕಣ್ಣಿಗೆ ಇನ್ನೂ ಸ್ಪಷ್ಟವಾಗಿಲ್ಲ. ಎಲ್ಲವೂ ರಾಜಕೀಯದ ಕರಾಳ ಕತ್ತಲೆಯ ಕೂಪದಲ್ಲಿ ನಡೆದ, ಆದರೆ ನಡೆಯಬಾರದ ಸಂಗತಿಗಳಾಗಿದ್ದವು ಎಂದೇ ನಾಡಿನ ಪ್ರಜ್ಞಾವಂತರು ಅಭಿಪ್ರಾಯಪಡುತ್ತಾರೆ.ರಾಮುಲು ಒಂದೆ ಒಂದು ಮತದಿಂದ ಗೆದ್ದಿದ್ದರೂ ಕೂಡ ರಾಜ್ಯ ರಾಜಕೀಯ ಮಗ್ಗಲು ಬದಲಾಯಿಸುವುದು ಸಾಧ್ಯವಿತ್ತು. ಅಂತಹದ್ದರಲ್ಲಿ ಅವರು ಗಳಿಸಿರುವ ಈ ಭಾರಿ ಅಂತರದ ಗೆಲುವಂತೂ ನಮ್ಮ ರಾಜ್ಯದ ರಾಜಕೀಯ ಚಿತ್ರಣವನ್ನೆ ಬದಲಾಯಿಸುವ ಎಲ್ಲ ಸಾಧ್ಯತೆಗಳಿವೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ (ಈ ಹಿಂದೆ ಕುರಗೋಡು ಕ್ಷೇತ್ರ ಎಂದು ಕರೆಯಲಾಗುತ್ತಿತ್ತು) ಹೆಚ್ಚಾಗಿ ಲಿಂಗಾಯತರೇ ಗೆದ್ದು ಬರುತ್ತಿದ್ದರು. ರಾಮುಲು ಈ ಪರಂಪರೆಯನ್ನು ಮುರಿದಿದ್ದಾರೆ (ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ). ಆದರೆ ಈ ಮುರಿಯುವ ಪ್ರಕ್ರಿಯೆಯಲ್ಲಿ ರಾಜ್ಯದ ಲಿಂಗಾಯತ ಸಮುದಾಯದ ಅನಭಿಷಿಕ್ತ ನಾಯಕ ತಾನೇ ಎಂದು ಸ್ವಯಂಘೋಷಿಸಿಕೊಂಡಿರುವ ಅಥವಾ ಆ ರೀತಿ ತನ್ನ ಭಟ್ಟಂಗಿಗಳಿಂದ ಘೋಷಿಸಲ್ಪಟ್ಟಿರುವ ಯಡಿಯೂರಪ್ಪರಿಗೆ ಒಂದು ರೀತಿಯಲ್ಲಿ ಹೊಡೆತ ಮತ್ತು ಮತ್ತೊಂದು ರೀತಿಯಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ. ಮತ್ತಷ್ಟು ಓದು »

19
ಡಿಸೆ

ಸಂಸ್ಕೃತಿ ಸಂಕಥನ -14 -ಏನಿದು ಸೆಕ್ಯುಲರಿಸಂ

ರಮಾನಂದ ಐನಕೈ

ರಿಲಿಜನ್ ಅನ್ನುವುದು ಮನುಷ್ಯ ಚಿಂತನೆಯಿಂದ ಹುಟ್ಟಿದ್ದಲ್ಲ. ಅದು ಗಾಡ್ನ  ಕೊಡುಗೆ. ಹಾಗಾಗಿ ರಿಲಿಜನ್ನಿನ ನಂಬಿಕೆ ಹಾಗೂ ಆಚರಣೆ ಎಂಬುದು ಮನುಷ್ಯನಿಗೆ ಗಾಡ್ ಹಾಕಿಕೊಟ್ಟ ಪಾಠ. ರಿಲಿಜನ್ ಅನುಭವಿಸುವುದು ಪ್ರತಿಯೊಬ್ಬ ಕ್ರಿಶ್ಚಿಯನ್ನನ ಹಕ್ಕು. ರಿಲಿಜನ್ ಅನ್ನುವುದು ಮನುಷ್ಯ  ನಿರ್ಮಿತ ಪ್ರಭುತ್ವವನ್ನೂ ಮೀರಿದ ಒಂದು ದೈವಿವ್ಯವಸ್ಥೆ ಎಂಬ ಗಾಢವಾದ ನಂಬಿಕೆಯಿದ್ದ  ಸಂದರ್ಭದಲ್ಲಿ ಕೆಥೋಲಿಕ್ ಹಾಗೂ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿ ಪಂಥ ರಿಲಿಜನ್ನಿನ ನಂಬಿಕೆಯ ಕುರಿತು ಒಳಜಗಳವನ್ನು ಪಂಚಾಯತಿಗೆ ತಂದಾಗ ಪ್ರಭುತ್ವ ಏನು ಮಾಡಬೇಕು? ಯಾರಿಗೆ ನ್ಯಾಯ ಕೊಟ್ಟರೂ ರಿಲಿಜನ್ನಿಗೆ ಅನ್ಯಾಯವಾಗುತ್ತದೆ. ಇದು ಪ್ರಭುತ್ವದ ಸಂದಿಗ್ಧ ಅಲ್ಲೇ ಹುಟ್ಟಿತು ಈ ಸೆಕ್ಯುಲರಿಸಂ ಎಂಬ ಹೊಸ ವಾಸ್ತವ……………

ದಿನನಿತ್ಯ ಒಂದಲ್ಲಾ ಒಂದು ಕಾರಣಕ್ಕಾಗಿ ನಾವು ‘ಸೆಕ್ಯುಲರಿಸಂ’ ಅನ್ನುವ ಪದವನ್ನು ಉಪ ಯೋಗಿಸುತ್ತೇವೆ. ಸೆಕ್ಯುಲರಿಸಂ ಆಧುನಿಕ ಚಿಂತನೆಯ ಪ್ರಮುಖ ಅಂಗವೇ ಆಗಿದೆ. ಹಾಗಾ ದರೆ ಸೆಕ್ಯುಲರಿಸಂ ಅನ್ನುವುದರ ಅರ್ಥ ಏನು? ನಮ್ಮ ಪರಿಸ್ಥಿತಿ ಏನಾಗಿದೆ ಎಂದರೆ ಸೆಕ್ಯುಲರಿಸಂ ಅಂದರೆ ಮನಸ್ಸಿನಲ್ಲಿ ಅರ್ಥವಾದಂತಾಗುತ್ತದೆ. ಆದರೆ ಅದನ್ನು ಬಾಯಲ್ಲಿ ಹೇಳಲಿಕ್ಕೆ ಬರುವುದಿಲ್ಲ. ಅದಕ್ಕೆ ಕಾರಣ ನಮ್ಮಲ್ಲಿ ಸೆಕ್ಯುಲರಿಸಂನ ಅನುಷ್ಠಾನ ಅಷ್ಟು ಗೋಜಲಾಗಿದೆ. ಹೀಗೆ ಹೇಳಲಿಕ್ಕೆ ಬಾರದ ಸೆಕ್ಯುಲರಿಸಮ್ಮೆ ದೇಶದ ಅನೇಕ ತೊಂದರೆಗಳಿಗೆ ಕಾರಣವಾಗಿದೆಯೋ ಎಂಬುದನ್ನು ಅರಿತುಕೊಳ್ಳ ಬೇಕಾಗಿದೆ. ಸಮಾಜಶಾಸ್ತ್ರದ ಹಕೀಮರಾದ ಬಾಲಗಂಗಾಧರರು ಕರ್ನಾಟಕದ ತುಂಬ ಸಂಚರಿ ಸುತ್ತ ಹೀಗೆ ಹೇಳಲುಬಾರದ ಅನೇಕಾನೇಕ ಸಂಗತಿಗಳನ್ನು ಸುಸಂಬದ್ಧವಾಗಿ ಹೇಳುವ ತಿಳುವಳಿಕೆ ನೀಡುತ್ತಿದ್ದಾರೆ.

ಮತ್ತಷ್ಟು ಓದು »

16
ಡಿಸೆ

ಏನ್ ಇವಾಗ? ನಾವ್ ಇರೋದೇ ಹೀಗೆ…

-ಸಾತ್ವಿಕ್ ಎನ್ ವಿ

ಒಮ್ಮೊಮ್ಮೆ ಇಂಥ ಪ್ರಸಂಗಗಳಿಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯುವುದಿಲ್ಲ.  ನಿನ್ನೆ ನಮ್ಮ ಮೇಡಂ ಒಬ್ಬರು ಕಾಲ್ ಮಾಡಿ ’ಸಾತ್ವಿಕ್ ನಿಮ್ಮ ಕಡೆ ಯಾರಾದ್ರೂ ಹುಡುಗಿಯಿದ್ದರೆ ಹೇಳೋ ಅಂದ್ರು’. ಅದಕ್ಕೆ ತಮಾಷೆಯಿಂದ ’ನಾನು ಒಂದು ವಧುವರರ ಕೇಂದ್ರ ತೆಗೆದ್ರೆ ಒಳ್ಳೆ ಕಲೆಕ್ಷನ್ ಆಗಬಹುದು ಅಲ್ವಾ ಮೇಡಂ’ ಅಂದೆ. ಅವರು ತಮ್ಮ ಮಾತಿನಲ್ಲಿ ಗಂಭೀರತೆಯನ್ನು ಬಿಟ್ಟು ಕೊಡದೇ ’ಹಾಗಲ್ಲ, ನಿನಗೆ ಗೊತ್ತಲ್ಲ. ನಮ್ಮಲ್ಲಿ ಅಬಕ ಜಾತಿಯ ವಧುಗಳು ಸಿಗೋದು ಬಹಳ ಕಷ್ಟ ಆಗಿದೆ.  ಹಾಗಾಗಿ ಅನಿವಾರ್ಯವಾಗಿ ಬೇರೆ ಜಾತಿಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಅಂದ್ರು. ನನ್ನ ವಯಸ್ಸಿನ ಯೋಚನೆಗೆ ನಿಲುಕದ ವಿಷಯವಾದ ಕಾರಣ ’ಆಯ್ತು ಮೇಡಂ ಪ್ರಯತ್ನಿಸುತ್ತೇನೆ’ ಅಂತ ಹೇಳಿ ಮಾತನ್ನು ಮುಗಿಸಲು ನೋಡಿದೆ.

ಕುತೂಹಲಕ್ಕೆ ’ವರನ ಮನೆಯ ಕಡೆಯಿಂದ ಏನೇನು ನಿರೀಕ್ಷೆಗಳಿರುತ್ತವೆ’ ಅಂತ ಕೇಳಿದೆ. ’ಅಂಥ ವಿಶೇಷಗಳೇನು ಇಲ್ಲ. ಹುಡುಗಿ ತಕ್ಕ ಮಟ್ಟಿಗೆ ಓದಿದ್ದರೆ ಸಾಕು. ಆದರೆ ಆಕೆ ಹುಟ್ಟಿನಿಂದ ಸಸ್ಯಾಹಾರಿ ಕುಟುಂಬದ ಹುಡುಗಿ ಆಗಿರಬೇಕು. ಮದುವೆಯ ನಂತರ ತನ್ನ ತವರಿನ ಜೊತೆಗಿರುವ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕು. ಅಕೆಯ ಮನೆಯವರು ವರನ ಮನೆಗೆ ಬರುವುದಾಗಲಿ ಅಥವಾ ಸಂಪರ್ಕ ಇಟ್ಟುಕೊಳ್ಳುವುದಾಗಲಿ ಮಾಡಬಾರದು. ಇವು ಸದ್ಯ ವರನ ಮನೆಯವರು ನಿರೀಕ್ಷಿಸುತ್ತಿರುವ ಅಗತ್ಯಗಳು’ ಎಂದರು. ಎರಡನೆಯ ಸಂಗತಿಯನ್ನು ಕೇಳಿ ನನಗೆ ಸಖೇದಾಶ್ಚರ್ಯವಾಯಿತು.

ಹೆಣ್ಣು ಮಕ್ಕಳ ಕೊರತೆಯಿರುವ ಬೇರೊಂದು ಜಾತಿಯ ಹೆಣ್ಣು ಮಕ್ಕಳನ್ನು ಮದುವೆಯಾಗಬೇಕಾದ ಪರಿಸ್ಥಿತಿಯಿರುವ ಜನರಿಗೂ ಇಷ್ಟೊಂದು ಕರಾರು ಮತ್ತು ಆಯ್ಕೆಗಳಿರುತ್ತವೆಯೇ? ಕೊಡುವವರಿಗೆ ಆಯ್ಕೆಗಳಿರುತ್ತವೆ. ಆದರೆ ಕೇಳುವವರಿಗೆ? ಮತ್ತಷ್ಟು ಓದು »

16
ಡಿಸೆ

ಹೇಳುವುದು ಒಂದು……

-ಅಭಿನಂದನ್

ಆದರೆ ಒಂದೊಂದ್ ಸಲ ಅದು ಕೇಳಿಸೋದೇ ಇನ್ನೊಂದು ಥರ!!

ಮೊನ್ನೆ ಟ್ರೈನಿನಲ್ಲಿ ಶಿವಮೊಗ್ಗಕ್ಕೆ ಹೋಗ್ತಾ ಇದ್ದೆ. ಮುಂಜಾನೆ ಮಂಪರು..ಯಥಾ ಪ್ರಕಾರ ಮಲಗಿದ್ದೆ.
“ಮಲ್ಗೋರ್ರಿ..ಮಲ್ಗೋರ್ರಿ….!” ಅಂತ ಕೂಗಿಕೊಂಡು ಹೋದ ನಾಸಿಕ ವಾಣಿಯೊಂದು ಮಲಗಿದ್ದ ನನ್ನನ್ನು ಎಬ್ಬಿಸಿತು. ಯಾರಪ್ಪ pirvate ಆಗಿ ಮಲ್ಗಿರೋದನ್ನ public ಮಾಡ್ತಿದಾರೆ ಅಂತ ಕಣ್ಣು ತೆಗೆದು ನೋಡಿದಾಗ ಗೊತ್ತಾಯ್ತು, ಮಲ್ಲಿಗೆ ಹೂವು ಮಾರುವವ ಅವನ ಸಂಕ್ಷಿಪ್ತ, ಕ್ಷಿಪ್ರ, ಗೌಪ್ಯ ಶೈಲಿಯಲ್ಲಿ, “ಮಲ್ಲಿಗೆ ಹೂವು ರೀ, ಮಲ್ಲಿಗೆ ಹೂವು ರೀ….” ಅಂತಿದ್ರು ಅಂತ. ಅವರ speed ಗೆ ಒದ್ದಾಡಿ ಹೋಗಿ, ಬಾಯಿಂದ ಹೊರಗೆ ಬೀಳೋ ಹೊತ್ತಿಗೆ ಅದು “ಮಲ್ಗೋರ್ರಿ” ಆಗೋಗಿತ್ತು.

ಈ ಆಸಾಮಿ ಎಷ್ಟೋ ಪರವಾಗಿಲ್ಲ. ನಮ್ಮ ಮನೆ ಹತ್ತಿರ ಹೂವು ಮಾರುವವ ಏನು ಹೇಳುತ್ತಾರೋ ಇದುವರೆಗೂ ನಂಗೆ ಗೊತ್ತಾಗಿಲ್ಲ. ಒಟ್ಟಿನಲ್ಲಿ “ನಾನು ಹೂವು ಮಾರುತ್ತಿದ್ದೀನಿ” ಅನ್ನೋದನ್ನ ಅವ ಭಾರೀ effective ಆಗಿ ವರ್ಷಗಳಿಂದ communicate ಮಾಡುತ್ತಾ ಬಂದಿದ್ದಾರೆ…ಅದೂ ಅವರದೇ ಬಾಯಿಂದ.

ಇನ್ನು ಎಳನೀರಿನ ಗತಿಯಂತೂ ಬ್ಯಾಡ್ವೇ ಬ್ಯಾಡ. “ಎನ್ನೀರ್ರು”, “ನ್ನೀರ್ರು”, “ಈರ್ರು”, “…ರ್ರು”…ಅದಕ್ಕೇ ಒಂದು ತತ್ಸಮ ತದ್ಭವ ಗ್ರಂಥ ಬರೀಬೋದೇನೋ.

ಬಸ್ಸಿನಲ್ಲಿ ಕಂಡಕ್ಟರ್ರು “ಓಲ್ಡೈನ್” ಅಂತಿದ್ದಿದ್ದು ನನಗೆ ಚಿಕ್ಕಂದಿನಲ್ಲಿ ಸುಮಾರು ವರ್ಷಗಳ ಕಾಲ ತಲೆ ಕೆಡೆಸಿತ್ತು, ಅದ್ಯಾವ ಭಾಷೆಯಲ್ಲಿ ಅದರ ಅರ್ಥ ಎನು ಅಂತ. ಯಾರೋ ಪುಣ್ಯಾತ್ಮೆ sophisticated ಅಜ್ಜಿ ಒಂದು ದಿನ ಸ್ಟಾಪಿನಲ್ಲಿ ನಿಲ್ಲಿಸದೆ ಮುಂದೆ ಹೋಗುತ್ತಿದ್ದ ಬಸ್ಸಿನಿಂದ ಇಳೀಬೇಕಾದ್ರೆ ದಯನೀಯವಾಗಿ “HOLD ON PLEASE” ಅಂತ ಕೂಗಿದಾಗ್ಲೇ ಗೊತ್ತಾಗಿದ್ದು , ಓಲ್ಡೈನ್ ಎಲ್ಲಿಂದ ದಾರಿ ತಪ್ಪಿ ಬಂತು ಅಂತ.
ರೈಲು, ಬಸ್ಸು ಸ್ಟೇಷನ್ನುಗಳಲ್ಲಿ ಇಡ್ಲೀನ ಹೇಗೆಲ್ಲಾ ಚಿತ್ರಾನ್ನ ಮಾಡಲ್ಲ. “ಯಾರ್ರೀಡ್ಲಿ?”, “ಯಾರ್ಗಿಡ್ಲಿ?”, “ಎಲ್ರೀಡ್ಲಿ?”…

ಅಮೇರಿಕ ಕಡೆ ವಿಮಾನಗಳಲ್ಲಂತೂ orange juice ಅಂದ್ರೆ ಅರ್ಥ ಆಗದೆ ಇರೋ ಅಷ್ಟರ ಮಟ್ಟಿಗೆ ಅದು “onjuce” ಆಗೋಗಿದೆ. :) ಮತ್ತಷ್ಟು ಓದು »

16
ಡಿಸೆ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 15: ಸಣ್ಣವರು,ದೊಡ್ಡವರು…

ನಾನು ಸಣ್ಣವನಿದ್ದಾಗ, ಹಲವು ಮಂದಿ ದೊಡ್ಡವರು ನನ್ನ ಕೈ ಹಿಡಿದು ನಡೆಸಿದ್ದರು. ದೈನಂದಿನ ಜೀವನಕ್ಕೆ ಅನ್ವಯಿಸುವಷ್ಟೇ ಪರಿಣಾಮಕಾರಿಯಾಗಿ ಆ ಮಾತು ಕಲಾ ಜೀವನಕ್ಕೂ ಅನ್ವಯಿಸುವಂತಹುದು. ಆಮೇಲೆ, ನಾನೂ ಒಬ್ಬ ಕಲಾವಿದ ಎಂದು ಹೇಳಿಕೊಳ್ಳುವ ಶಕ್ತಿ ಬಂದಾಗ (ಶಕ್ತಿಗಿಂತಲೂ ಹೆಚ್ಚಿನ ಕುರುಡು ಧೈರ್ಯವೂ ಇದ್ದಾಗ) ಹಲವು ಮಂದಿ ದೊಡ್ಡವರೆನಿಸಿಕೊಂಡವರ ಸ್ನೇಹ-ಪರಿಚಯಗಳನ್ನು ಮಾಡಿಕೊಂಡಿದ್ದೇನೆ. ಎಷ್ಟೋ ಮಂದಿ ಸಣ್ಣವರನ್ನು ಕಲಾರಂಗಕ್ಕೆ ಪರಿಚಯ ಮಾಡಿಸಿಕೊಟ್ಟಿದ್ದೇನೆ.
ದೊಡ್ಡವರೆನಿಸಿದವರು ಹಲವರಲ್ಲಿ ಕೆಲವರು ಈಗ ಕಣ್ಮರೆಯಾಗಿದ್ದಾರೆ. ಇನ್ನು ಕೆಲವರು ನಿವೃತ್ತರಾಗಿದ್ದಾರೆ. ಸಣ್ಣವರಾಗಿದ್ದವರು ಮೆಲ್ಲಮೆಲ್ಲನೆ ದೊಡ್ಡವರಾಗುತ್ತಲಿದ್ದಾರೆ. ನಾನು ಎಳೆಯ ಕಲಾವಿದರನ್ನು ತರಬೇತಿಗಾಗಿ ನಮ್ಮಲ್ಲಿಗೆ ಎಳೆದು ತಂದಾಗ, ನನ್ನ ಆಯ್ಕೆಯ ಕ್ಷೇತ್ರವನ್ನು ವಿಸ್ತಾರಗೊಳಿಸುವ ಧೈರ್ಯ ನನಗಿರಲಿಲ್ಲ. ಮನೆಯವರಿಂದ ಬೇರ್ಪಡಿಸಿ ಹುಡುಗರನ್ನು ನನ್ನ ಬಳಿಗೆ ಕರೆತರಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ನಮ್ಮ ಮನೆಯ ಸಮೀಪದವರನ್ನಾದರೂ ಕರೆತಂದು ಸೇರಿಸಿಕೊಳ್ಳುವ ಮೊದಲು “ನಿಮ್ಮ ಹುಡುಗನಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇನೆ.” ಎಂಬ ಭರವಸೆ ಕೊಟ್ಟೇ ಕರೆತರಬೇಕಾಗುತ್ತಿತ್ತು. ಹಾಗೆ ತಂದು ತರಬೇತಿ ಮಾಡಿಸಿದವರಲ್ಲಿ ಹೆಚ್ಚಿನವರು ತಮ್ಮ ರಂಗಪ್ರವೇಶದ ಹಾರೈಕೆಗಳನ್ನು ಸಾರ್ಥಕಗೊಳಿಸಿದ್ದಾರೆ. ಇನ್ನು ಕೆಲವರು ತಾವು ಪರಿಣತರಾದೆವೆಂದು ತಿಳಿದುಕೊಂಡಿದ್ದಾರೆ. ಇನ್ನೂ ಕೆಲವರು, ಜೀವನದ ಇತರ ಜಂಜಾಟಗಳಿಗೆ ಸಿಕ್ಕಿ ತಮ್ಮ ಪ್ರತಿಭೆಯನ್ನು ಕಳೆದುಕೊಳ್ಳುವ ಮಟ್ಟಕ್ಕೂ ಮುಟ್ಟಿದ್ದಾರೆ.

ಎಲ್ಲರೂ ಒಂದೇ ರೀತಿಯಾಗಿರಬೇಕೆಂದು ನಿರೀಕ್ಷಿಸುವುದಾದರೂ ಹೇಗೆ? ಏಕರೂಪದ ಸಾಕಾರವೇ ಸಾಕ್ಷಾತ್ಕಾರವಾಗುವುದಾದರೆ, ಭಗವದ್ ಸೃಷ್ಟಿಯಲ್ಲಿ ವೈವಿಧ್ಯವೇ ಇರಲಾರದಲ್ಲ? ನನ್ನೊಂದಿಗೆ ಸಣ್ಣವರಾಗಿದ್ದು ದೊಡ್ಡವರಾಗುತ್ತಿರುವಾಗಲೇ ವಿಧಿಯ ಕಡೆ ಸೇರಿದವರು ಇಬ್ಬರು-ನಮ್ಮ ದೊಡ್ಡಪ್ಪನ ಮಕ್ಕಳು. ಒಬ್ಬನ ಹೆಸರು ರಾಮ, ಇನ್ನೊಬ್ಬನ ಹೆಸರು ಕೃಷ್ಣ. ರಾಮನ ಹೆಸರು ಅವನು ನಿರ್ವಹಿಸುತ್ತಿದ್ದ ರಾಕ್ಷಸ ಪಾತ್ರಗಳಿಂದಾಗಿ ಮೆರೆದಿತ್ತು. ಕೃಷ್ಣ ಸ್ತ್ರೀ ಪಾತ್ರಗಳಿಗೆ ಹೆಸರಾಗಿದ್ದ. ಅವರಿಬ್ಬರೂ ಪಡೆದು ಬಂದಿದ್ದ ಪ್ರತಿಭೆಯನ್ನು ಮೆರೆಸಲು ಸರಿಯಾದ ಅವಕಾಶ ದೊರೆಯುವ ಮೊದಲೇ ಇಬ್ಬರೂ ಅನಾರೋಗ್ಯಕ್ಕೆ ತುತ್ತಾದರು. ನನ್ನ ಜೊತೆಗೇ- ಅಥವಾ ಒಂದೆರಡು ವರ್ಷಗಳ ಹಿಂದು ಮುಂದಿನ ವ್ಯತ್ಯಾಸದಲ್ಲಿ- ರಂಗಪ್ರವೇಶ ಮಾಡಿ ಇಂದಿಗೂ ತಮ್ಮ ಕಲಾಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗುತ್ತಲಿರುವವರು ಕೆಲವರಿದ್ದಾರೆ. ಅವರೆಲ್ಲರನ್ನೂ ನಾನು ಪ್ರತ್ಯೇಕವಾಗಿ ಹೆಸರಿಸಬೇಕಾಗಿಲ್ಲ.

15
ಡಿಸೆ

ಮೂಢನಂಬಿಕೆಗಳು ಅಂಧಾನುಕರಣೆಯೇ ?

-ರಾವ್ ಎವಿಜಿ

ಮೂಢನಂಬಿಕೆ ಎಂದರೇನು? ಈ ಪ್ರಶ್ನೆ ನನ್ನಲ್ಲಿ ಉದ್ಭವಿಸಲು ಕಾರಣವಾದದ್ದು ಹಾಲಿ ಅಸ್ತಿತ್ವದಲ್ಲಿ ಇರುವ ಕೆಲವು ಮತೀಯ ಆಚರಣೆಗಳ ಪರ-ವಿರೋಧ ವಾದಗಳು. ಇದಕ್ಕೆ ಸಂಬಂಧಿಸಿದಂತೆ ನನ್ನ ಗಮನ ಸೆಳೆದ ಪತ್ರಿಕೆಗಳಲ್ಲಿ ವರದಿ ಆದ ಮತೀಯ ಆಚರಣೆಗಳು ಇವು:

(೧) ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಲು ಹಿಂದಿನಿಂದ ಆಚರಣೆಯಲ್ಲಿ ಇರುವ ‘ಬ್ರಾಹ್ಮಣರು ಉಂಡೆದ್ದ ಎಂಜಲೆಲೆಗಳ ಮೇಲೆ ಉರುಳು ಸೇವೆ ಮಾಡುವ ಮಡೆಸ್ನಾನ ಪದ್ಧತಿ’

(೨) ಗುಲ್ಬರ್ಗ ಜಿಲ್ಲೆಯಲ್ಲಿ ಆಚರಣೆಯಲ್ಲಿ ಇರುವ ‘ಸೂರ್ಯಗ್ರಹಣ ಕಾಲದಲ್ಲಿ ಸುಮಾರು ೬ ತಾಸು ಕಾಲ ಮಕ್ಕಳನ್ನು ಆಂಗವೈಕಲ್ಯದ ನಿವಾರಣೆಗಾಗಿ ಕುತ್ತಿಗೆಯ ತನಕ ಭೂಮಿಯಲ್ಲಿ ಹುಗಿದಿರಇಸುವ ಪದ್ಧತಿ’

(೩) ಮಹಾರಾಷ್ಟ್ರದ ಶೋಲಾಪುರದಲ್ಲಿ ಆಚರಣೆಯಲ್ಲಿ ಇರುವ  ‘ಸುಮಾರು  ೫೦ ಅಡಿ ಎತ್ತರದಿಂದ ಹಸುಗೂಸುಗಳನ್ನು ಕೆಳಗೆ ಬಿಗಯಾಗಿ ಎಳದು ಹಿಡಿದುಕೊಂಡಿರುವ ಬೆಡ್ ಶೀಟಿಗೆ ಎತ್ತಿ ಹಾಕುವ ಪದ್ಧತಿ’

(೪) ತಮಿಳುನಾಡಿನಲ್ಲಿ ಆಚರಣೆಯಲ್ಲಿ ಇರುವ ‘ಗಲ್ಲದ ಮೂಲಕ ಚೂಪಾದ ದಬ್ಬಳದಂಥ ಸಾಧನಗಳನ್ನು, ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಕ್ಕೆಗಳನ್ನು ಸಿಕ್ಕಿಸಿಕೊಂಡು ಆವೇಶದಿಂದ ಕುಣಿಯುವ ಕಾವಡಿ ಆಟಮ್ ಪದ್ಧತಿ’

(೫) ಭಾರತದ ಗಡಿಗೆ ತಾಗಿಕೊಂಡಿರುವ ನೇಪಾಳದ ಹಳ್ಳಿಯೊಂದರಲ್ಲಿ  ೫ ವರ್ಷಕ್ಕೊಮ್ಮೆ ಜರಗುವ ಹಿಂದೂ ಹಬ್ಬದಲ್ಲಿ ಸುಮಾರು ೨೫೦೦೦೦ ಕ್ಕೂ ಅಧಿಕ ಪ್ರಾಣಿಗಳನ್ನು (ವಿಶೇಷತಃ ಎಮ್ಮೆಗಳನ್ನು) ಬಲಿ ಕೊಡುವ ಪದ್ಧತಿ

(೬) ಒರಿಸ್ಸಾದ ಕೆಲವೆಡೆ ಆಚರಣೆಯಲ್ಲಿ ಇರುವ ‘ಪುಟ್ಟ ಬಾಲಕರನ್ನು ನಾಯಿಯೊಂದಿಗೆ ಮದುವೆ ಮಾಡುವ ಪದ್ಧತಿ’

(೭) ಚಾಮರಾಜನಗರ ಜಿಲ್ಲೆಯಲ್ಲಿ ಸುಬ್ರಹ್ಮಣ್ಯ ಷಷ್ಠಿಯಂದು ಆಚರಿಸುವ ‘ಹುತ್ತಕ್ಕೆ ಪೂಜೆ ಸಲ್ಲಿಸಿ ಅದರ ಮೇಲೆ ಒಂದು ಕೋಳಿಮೊಟ್ಟೆ ಇಟ್ಟು (ಸಾಮಾನ್ಯವಾಗಿ ಹೆಂಗಸರು) ಕೋಳಿಯ ಕತ್ತು ಕೊಯ್ದು ಬಿಸಿರಕ್ತ ಸುರಿಯುವ ಪದ್ಧತಿ’

ಇಲ್ಲಿ ನಮೂದಿಸಿರುವ ಪ್ರತೀ ಆಚರಣೆಯನ್ನು ಸಮರ್ಥಿಸಿಕೊಳ್ಳಲು ‘ಅನಾದಿಕಾಲದಿಂದಲೂ ಆಚರಣೆಯಲ್ಲಿದೆ’, ‘ಆಚರಣೆಯಿಂದ ಅನೇಕರಿಗೆ ಒಳ್ಳೆಯದಾಗಿದೆ’, ‘ಅನೇಕರಿಗೆ ರೋಗ ವಾಸಿ ಆಗಿದೆ’ ‘ನಮಗೆ ಮನಶ್ಶಾಂತಿ ದೊರೆತಿದೆ’, ‘ಇತರರಿಗೆ ತೊಂದರೆ ಕೊಡುವುದಿಲ್ಲ’ ಮುಂತಾದ ವಾದಗಳನ್ನು ಮುಂದಿಡುತ್ತಾರೆ. ಇವುಗಳನ್ನು ‘ಆಧ್ಯಾತ್ಮಿಕ ಪ್ರತೀಕಗಳಾಗಿ’ ಏಕೆ ಪರಿಗಣಿಸ ಬೇಕು ಅನ್ನುವುದನ್ನು ವಿವರಿಸುವುದೂ ಉಂಟು. ಇವು ‘ಅಮಾನವೀಯ’, ‘ಅನಾಗರೀಕ’. ‘ವೈದಿಕ ಸಂಪ್ರದಾಯವಾದಿಗಳು ಅರ್ಥಾತ್ ಬ್ರಾಹ್ಮಣ ವರ್ಗದವರು ಹಿಂದುಳಿದವರನ್ನೂ ದಲಿತರನ್ನೂ ಶೋಷಿಸಲೋಸುಗವೇ ಹುಟ್ಟುಹಾಕಿ ಪೋಷಿಸಿಕೊಂಡು ಬಂದಿರುವ ಮೂಢನಂಬಿಕೆಗಳು’ ಎಂದೆಲ್ಲ ವಿರೋಧಿಸುವವರೂ ಇದ್ದಾರೆ. ಇರುವ   ಅಸಂಖ್ಯ ಸ್ವಘೋಷಿತ ಮತ್ತು ಪರಂಪರಾಗತ ಮಠಾಧಿಪತಿಗಳ ಪೈಕಿ ಬಹುತೇಕರು ಈ ಕುರಿತು ‘ದಿವ್ಯಮೌನ’ ತಳೆದಿದ್ದಾರೆ, ಕೆಲವರು ‘ಇವೆಲ್ಲ ನಂಬಿಕೆಯ ಪ್ರಶ್ನೆಗಳು, ಬಲು ಹಿಂದಿನಿಂದ ಪರಂಪರಾಗತ ನಂಬಿಕೆಯನ್ನು ಪ್ರಶ್ನಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಸರಿಯಲ್ಲ’, ಆತ್ಮಸಂತೋಷಕ್ಕಾಗಿ ಅವರಿಗೆ ಸರಿ ಅನ್ನಿಸಿದ್ದನ್ನು ಮಾಡುವ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವುದು ಸರಿಯೇ?’ ಅನ್ನುವುದರ ಮೂಲಕ ಈ ಆಚರಣೆಗಳನ್ನು ಪರೋಕ್ಷವಾಗಿ ಪೋಷಿಸುತ್ತಿದ್ದಾರೆ. ಮತ್ತಷ್ಟು ಓದು »