ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

4
ಸೆಪ್ಟೆಂ

ಅಂಕಣರಂಗ – 3 : ಡಿ.ವಿ ಪ್ರಹ್ಲಾದ್ ಅವರ ‘ಅನುದಿನವಿದ್ದು…’ ಪುಸ್ತಕದ ಪರಿಚಯ

– ಮು.ಅ ಶ್ರೀರಂಗ ಬೆಂಗಳೂರು

‘ಅನುದಿನವಿದ್ದು… ‘ ಕಿರು ಪುಸ್ತಕದಲ್ಲಿ ಒಂಭತ್ತು  ಜನ ಲೇಖಕರ ಸಾವಿಗೆ ಮಿಡಿದ ಬರಹಗಳು ಮತ್ತು ಇಬ್ಬರು ಲೇಖಕರು ಬದುಕಿದ್ದಾಗಲೇ  ಬರೆದ ಲೇಖನಗಳಿವೆ.   ಇದರಲ್ಲಿ ರಾಘವೇಂದ್ರ ಖಾಸನೀಸ, ರಾಮಚಂದ್ರ ಶರ್ಮ,ಎಂ. ವ್ಯಾಸ, ಚಿ.ಶ್ರೀನಿವಾಸರಾಜು,ಸು.ರಂ.ಎಕ್ಕುಂಡಿ, ಕುಸುಮಾಕರ ದೇವರಗೆಣ್ಣೂರು,ಬೆಳಗೆರೆ ಕೃಷ್ಣಶಾಸ್ತ್ರಿ,ದೇಶಕುಲಕರ್ಣಿ,ಸ್ವಾಮಿನಾಥ,ಕಿ.ರಂ. ನಾಗರಾಜ ಮತ್ತು ನೀಲತ್ತಹಳ್ಳಿ ಕಸ್ತೂರಿ ಅವರುಗಳನ್ನು ಕುರಿತ ಅಪರೂಪದ ಬರಹಗಳಿವೆ. ಇಲ್ಲಿನ ಬರಹಗಳು ‘ಸಂಚಯ’ ಮತ್ತು ರಾಜ್ಯವ್ಯಾಪಿ ಪ್ರಸಾರದ ಕನ್ನಡ ದಿನಪತ್ರಿಕೆಗಳಲ್ಲಿಈ ಹಿಂದೆ ಪ್ರಕಟವಾಗಿದ್ದಂತಹವು. ಆಯಾ ಲೇಖಕರನ್ನು ಕುರಿತಂತೆ ಡಿ ವಿ ಪ್ರಹ್ಲಾದರ ಅಪರೂಪದ ಒಳನೋಟ ಮತ್ತು  ಅವರುಗಳ ಬಗ್ಗೆ ಹಾಗೂ ಅವರ ಕೃತಿಗಳ  ಬಗ್ಗೆ ವಿವರಗಳನ್ನು ಒಳಗೊಂಡ ‘ಅನುಬಂಧ’ ಈ ಪುಸ್ತಕದ ಪ್ಲಸ್ ಪಾಯಿಂಟ್. ಏಕೆಂದರೆ ಎಷ್ಟೋ ಸಲ ನಾವುಗಳು ಕೆಲವು ಲೇಖಕರ ಹೆಸರು ಕೇಳಿರುತ್ತೇವೆ ಆದರೆ ಅವರ ಪುಸ್ತಕಗಳ ಬಗ್ಗೆ ತಿಳಿದಿರುವುದಿಲ್ಲ. ಹಾಗೆಯೇ ನಾವು ಓದಬೇಕಾದಂತಹ   ಲೇಖಕರು ಹಾಗೂ ಅವರ ಕೃತಿಗಳ ಬಗ್ಗೆ ಯಾವ ಮಾಹಿತಿಯೂ ನಮಗಿರುವುದಿಲ್ಲ. ಆ ಕೊರತೆಯನ್ನು ‘ಅನುದಿನವಿದ್ದು … ‘ ತುಂಬಿಕೊಟ್ಟಿದೆ. ಈ ಒಂದು ಪ್ರಸ್ತಾವನೆಯ ನಂತರ ಇಲ್ಲಿನ ಕೆಲವು ಲೇಖನಗಳ ಬಗ್ಗೆ ಪರಿಚಯ ಮಾಡಿಕೊಳ್ಳೋಣ.

ರಾಘವೇಂದ್ರ ಖಾಸನೀಸ –ಬದುಕೆನ್ನುವ ಖಾಲಿ ಆಕಾಶದ ಎದುರು : ಕನ್ನಡದಲ್ಲಿ ಕೆಲವೇ ಕಥೆಗಳನ್ನು ಬರೆದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ಪಾರ್ಕಿನ್ ಸನ್ಸ್ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ಸನ್ನಿವೇಶದಿಂದ ಲೇಖನ ಪ್ರಾರಂಭವಾಗುತ್ತದೆ. ‘ಅದೊಂದು ವಿಚಿತ್ರ ಭೇಟಿ. ತಮ್ಮ ಕಥೆಗಳ ಮೂಲಕವಷ್ಟೇ ಪರಿಚಿತರಾಗಿದ್ದ ಅಪರೂಪದ ಕಥೆಗಾರರನ್ನು ನೋಡಲು ಹೋಗಿದ್ದೆವು. …… ಆ ಮಧ್ಯಾನ್ಹದ ಮೌನದಲ್ಲಿ ಇಂತಿಂಥವರು ಬಂದಿದ್ದಾರೆ, ನಿಮ್ಮನ್ನು ಕಾಣಬೇಕಂತೆ ಎನ್ನುವ ಒಳಮನೆಯ ಮಾತುಗಳು ನಮ್ಮ ಕಿವಿಗಳಿಗೂ ತಲುಪುತ್ತಿದ್ದವು.  ನಿಧಾನವಾಗಿ ಬಾಗಿಲ ಹತ್ತಿರ ಬರುವ ಸದ್ದಾಗಿ ಉಳಿದಿಬ್ಬರು ಎದ್ದು ನಿಂತರು. ನಾನೂ ಎದ್ದವನು ಅವರನ್ನ ಕಂಡು ಅವಾಕ್ಕಾಗಿಬಿಟ್ಟೆ. ಅಕ್ಷರಶಃ ಕೋಲಿನ ಹಾಗಿದ್ದ ಅವರ ಮೈ ಒಂಚೂರೂ ಸ್ವಾಧೀನದಲ್ಲಿರಲಿಲ್ಲ…. ನಡುಗುತ್ತಿದ್ದ ಅವರ ದೇಹ, ದಟ್ಟನೆಯ ದಾಡಿ ಬೆಳೆದ ಅವರ ಮುಖ, ಹೊಳೆಯುತ್ತಿದ್ದದ್ದು ಕಣ್ಣುಗಳು ಮಾತ್ರ. ಔಷಧಿಗಳ ಪರಿಣಾಮ ಅವರ ಕಿವಿಯೂ ಕೇಳಿಸದಂತೆ ಆಗಿದೆ. ನಡುಗುತ್ತಾ ನಿಂತೇ ನಮ್ಮ ಪರಿಚಯ ಆದ ಮೇಲೆ ಪ್ರಯಾಸದಿಂದ ಕರೆತಂದು ಕುರ್ಚಿಯ ಮೇಲೆ ಕೂಡಿಸಲಾಯಿತು. ……… ನಡುಗುತ್ತಿದ್ದ ದೇಹವನ್ನು ಸ್ವಾಧೀನಕ್ಕೆ ತಂದುಕೊಳ್ಳಲು ಬಹಳ ಪ್ರಯತ್ನಪಟ್ಟರು. ……. ಸುಮ್ಮನೆ ನಡುಗುತ್ತಲೇ ಇದ್ದ ಅವರ ಕೈಗಳನ್ನು ಗಮನಿಸುತ್ತಿದ್ದೆ. ಜೀವದ ಹಾಗೆ ಅದು ಚಡಪಡಿಸುತ್ತಿತ್ತು. ….. ದುಗುಡ ಹೊತ್ತು ಅವರಿಂದ ಬೀಳ್ಕೊಂಡು ನಾವು ಹೊರಬಂದೆವು…. ಅವರನ್ನು ಕಂಡುಬಂದ ಒಂದಿಡೀ ದಿನ ಮನಸ್ಸು ಮುರಿದುಬಿದ್ದಿತ್ತು. ಯಾವುದನ್ನು ಮಾಡಲು ಹೊರಟರೂ ಅದೇ ಚಿತ್ರ ಕಣ್ಣಿಗೆ ಕಟ್ಟತೊಡಗಿತ್ತು. ಯಾವತ್ತೋ ಓದಿದ ಅವರ ಕಥೆಗಳನ್ನು ಮತ್ತೆ ಓದಬೇಕೆನಿಸಿ ಪುಸ್ತಕದ ಗೂಡಿನಲ್ಲಿ ತಡಕಾಡಿದೆ. ಆ ಪುಸ್ತಕ ಅವರ ಹಾಗೆ ಅಜ್ಞಾತವಾಗಿ ಇತ್ತು. ಭಾನುವಾರವಾದ್ದರಿಂದ ಆ ಇಡೀ ಪುಸ್ತಕ, ಏಳು ಕಥೆಗಳ ‘ಕಥಾ ಜಗತ್ತು  ತೆರೆದಿಟ್ಟುಕೊಂಡಿತು. …. ‘ ತಬ್ಬಲಿಗಳು ಕಥೆ ಖಾಸನೀಸರ ಮಾಸ್ಟರ್ ಪೀಸ್. ನವ್ಯೋತ್ತರ ಕಾಲದ ಮುಖ್ಯ ಕಥೆಗಳಲ್ಲಿ ಒಂದು. ಕೌಟುಂಬಿಕ ಹಿನ್ನಲೆಯ ಆತ್ಮಹತ್ಯೆಯೊಂದರ ಸುತ್ತಾ ಬಿಡಿಸಿಟ್ಟುಕೊಳ್ಳುವ ಕಥೆಯ ಶಿಲ್ಪ ….. ಮಂತ್ರಾಲಯದ ಪರಿಸರದಲ್ಲಿ ಕುಟುಂಬದ ಎಲ್ಲರೂ ತಮ್ಮ ತಮ್ಮ ನಿಜಗಳನ್ನು ಕಂಡುಕೊಳ್ಳುತ್ತಾ ಮಾನಸಿಕವಾಗಿ ಹಾಗೂ ಭೌತಿಕವಾಗಿ ಛಿದ್ರಗೊಳ್ಳುತ್ತಾರೆ ….. ಖಾಸನೀಸರ ಕಥಾಜಗತ್ತು ಕುಟುಂಬ,ಕೌಟುಂಬಿಕ ಕ್ರೌರ್ಯ, ಇವೆಲ್ಲದರ ಜೊತೆಗೆ ಮನುಷ್ಯರ ಅಸಹಾಯಕತೆ, ಅಸಹನೀಯತೆಗಳನ್ನು ತನ್ನ ವಿವರಗಳಲ್ಲಿ ಎತ್ತಿ ತೋರುತ್ತದೆ. ಇಂಥ ಪ್ರಬುದ್ಧ ಹಾಗೂ ಸೂಕ್ಷ್ಮ ಕಥೆಗಾರರಾದ ಅವರು ಬರೆದದ್ದು ಕಡಿಮೆ ಆದರೂ ನಮ್ಮಲ್ಲಿ ಅದನ್ನು ಕುರಿತು ಗಮನಹರಿಸಿದ್ದು ಇನ್ನೂ ಕಡಿಮೆ.

ಮತ್ತಷ್ಟು ಓದು »

30
ಆಗಸ್ಟ್

ನಮ್ಮೂರ ಹಬ್ಬ : ನಮ್ಮೂರ ಜಾತ್ರೆ

– ಆದರ್ಶ

ಸಾಗರ ಮಾರಿಕಾಂಬ ದೇವಸ್ಥಾನ

ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಲೇಖನ

ಜಾತ್ರೆಯೆಂದರೆ ಸಾಕು.. ಥಟ್ಟನೆ ಮನಸ್ಸು ಬಾಲ್ಯಕ್ಕೋಡುತ್ತದೆ!

ಅಪ್ಪನ ಬೆನ್ನುಹತ್ತಿ ಹೆಗಲ ಮೇಲೆ ಕೂತು ಪುಟ್ಟ ಕಣ್ಣುಗಳನ್ನ ಇಷ್ಟಗಲ ಅರಳಿಸಿ ನೋಡಿದ್ದ ಇಡೀ ಜಾತ್ರೆಯ ಪನೋರಮಿಕ್ ನೋಟ ಮತ್ತೆ ಅಷ್ಟೇ ರಂಗು ರಂಗಾಗಿ ತೆರೆದುಕೊಳ್ಳುತ್ತದೆ..

ಶಿವಮೊಗ್ಗದಿಂದ ಸಾಗರ, ಹೊಸನಗರ, ಶಿಕಾರಿಪುರಗಳಿಗೆ ಹೋಗುವ ಮಾರ್ಗದಲ್ಲಿ ಮಲೆನಾಡಿನ ಪ್ರವೇಶ ದ್ವಾರದಂತಿರುವ ನಮ್ಮೂರು “ಆನಂದಪುರ”ದ ಕಡ್ಲೆಹಕ್ಲು ಮಾರಿಕಾಂಬಾ ಜಾತ್ರೆಯೆಂದರೆ ನಮ್ಮ ಮಟ್ಟಿಗೆ ಅದು ಬಹುದೊಡ್ಡ ಹಬ್ಬ! ಶಿರಸಿ ಮಾರಿಕಾಂಬಾ, ಸಾಗರದ ಮಾರಿಕಾಂಬಾ, ಆನಂದಪುರದ ಕಡ್ಲೆಹಕ್ಲು ಮಾರಿಕಾಂಬಾ ಈ ಮೂವರೂ ಅಕ್ಕ ತಂಗಿಯರೆಂಬ ಪ್ರತೀತಿಯಿದೆ. ಹಾಗಾಗಿ 3 ವರ್ಷಕ್ಕೊಮ್ಮೆ ಮೊದಲಿಗೆ ಶಿರಸಿಯ ಹಿರಿಯಕ್ಕನ ಜಾತ್ರೆ, ನಂತರ ಸಾಗರದ ಜಾತ್ರೆ, ಕೊನೆಯಲ್ಲಿ ನಮ್ಮೂರ ಜಾತ್ರೆ ನಡೆಯುತ್ತದೆ. ನಮ್ಮ ಸಂಸ್ಕೃತಿಯಲ್ಲಿ ದೈವವನ್ನೂ ಮರ್ತ್ಯ ಸಂಬಂಧಗಳಲ್ಲಿ(ಅಕ್ಕ-ತಂಗಿ) ಬೆಸೆದು ವಾತ್ಸಲ್ಯದಿಂದ ಕಾಣುವುದು ಸೋಜಿಗವಲ್ಲದೇ ಮತ್ತೇನು?! ಮತ್ತಷ್ಟು ಓದು »

30
ಆಗಸ್ಟ್

ಹಿಂದೂ ಮುಸ್ಲಿಂ ಸಮ್ಮಿಲನಕ್ಕೆ ಸೆಕ್ಯಲರಿಸಮ್ಮೇ ಬೇಕೆ? ಅಲಾದಿ ಹಬ್ಬ ಸಾಕೆ?

-ವೀಣಾ. ಈ
(ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.)

ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಎರಡನೆಯ ಸ್ಥಾನ ಪಡೆದ ಲೇಖನ..

ಪ್ರಸ್ತುತ ಐಡಿಯಾಲಜಿಗಳ ಯುಗದಲ್ಲಿ ಹಿಂದೂ ಮುಸಲ್ಮಾನ ಎನ್ನುವುದು ಎರಡು ವೈರಿ ಗುಂಪುಗಳೆಂದು ಪರಿಗಣಿಸಲ್ಪಡುತ್ತಿವೆ. ಕೆಲವು ಚಿಂತಕರು ಮತ್ತು ಹಾಗೆನ್ನಿಸಿಕೊಳ್ಳಲು ಹಾತೊರೆಯುವವರು ಎಲ್ಲಾ ಘಟನೆಗಳಲ್ಲೂ ಈ ವೈರತ್ವವನ್ನೇ ಕಾಣುತ್ತಿರುತ್ತಾರೆ. ಹೀಗಿರುವಾಗ ಹಬ್ಬಗಳು, ಆಚರಣೆಗಳು ಅವರಿಗೆ ಒದಗಿದ ಸದಾವಕಾಶಗಳಂತೆ ಭಾವಿಸುತ್ತಾರೆ. ಗಣೇಶ ಹಬ್ಬ ಎಂದರೆ ಗಣೇಶನ ಆಗಮನದಿಂದ ವಿಸರ್ಜನೆಯವರೆಗೆ ಆರಕ್ಷಕರ ಕಾವಲಿನೊಂದಿಗೇ ನಡೆಯುವ ಸ್ಥಿತಿ ಬಂದೊದಗಿದೆ. ಉದ್ದೇಶಪೂರ್ವಕವಾಗಿಯೇ ಮುಸ್ಲಿಂ ಕೇರಿಗಳಲ್ಲಿ ಗಣೇಶನ ಮೆರವಣಿಗೆ ಮಾಡುವುದು, ಮಸೀದಿಗಳ ಮುಂದೆ ಪಟಾಕಿ ಸಿಡಿಸುವುದು ಮಾಡಿದರೆ, ಮುಸ್ಲೀಮರು ಇದಕ್ಕೆ ಹೊರತಾಗಿಲ್ಲದಂತೆ ಇದ್‍ಮೀಲಾದ್‍ನಂತಹ ಹಬ್ಬದ ಮೆರವಣಿಗೆಯಲ್ಲಿ ಇವೇ ಪ್ರವೃತ್ತಿಗಳು ಪುನಾರವರ್ತನೆಯಾಗುತ್ತವೆ. ಇದರಿಂದ ಹಬ್ಬಗಳೆಂದರೆ ಭಯದ ವಾತಾವರಣ ಸೃಷ್ಟಿಯಾಗುವ ಕಾಲ ಅಲ್ಲಲ್ಲಿ ಕಂಡುಬರುತ್ತಿದೆ. ಇದು ಹೀಗೆ ಮುಂದುವರೆದರೆ ಹಬ್ಬಗಳೆಂದರೆ ಗಲಾಟೆಯುಂಟು ಮಾಡುವ ಸಂಗತಿಗಳೆಂದು ಕಾನೂನು ಮೂಲಕವೇ ಅವುಗಳನ್ನು ನಿಷೇಧ ಮಾಡುವ ಸಂದರ್ಭ ಬಂದರೂ ಬರಬಹುದು. ಆದರೆ ಹಬ್ಬಗಳು ಈ ಕೆಲಸವನ್ನು ಮಾಡುತ್ತವೆಯೇ? ಅವುಗಳ ಸ್ವರೂಪವೇನು? ಮತ್ತಷ್ಟು ಓದು »

30
ಆಗಸ್ಟ್

ನಮ್ಮೂರ ಹಬ್ಬ : ಶ್ರೀ ಸಿದ್ದಿ ವಿನಾಯಕನ ಜಾತ್ರೆ

– ಮನುಶ್ರೀ ಕೆ.ಎಸ್

ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಲೇಖನ

ಸಾಂದರ್ಭಿಕ ಚಿತ್ರ

‘ಊರು’ ಅಂದರೆ ನಮಗೆಲ್ಲರಿಗೂ ಮನೆಯ ನಂತರ ಮನಸಿಗೆ ಹತ್ತಿರವಾಗುವ ಮತ್ತೊಂದು ಅಚ್ಚು ಮೆಚ್ಚಿನ ಜಾಗ. ಇಲ್ಲಿಯೂ ಕೂಡ ನಮ್ಮ ಮನೆಯ ಹಾಗೆಯೇ ಒಂದು ದೊಡ್ಡ ಸಂಸಾರವಿದೆ. ಅದರಲ್ಲಿ ಸುಖ ದುಃಖಗಳ ಕಥೆಯಿದೆ, ನೆಮ್ಮದಿಯ ಆಚರಣೆಯಿದೆ, ನಂಬುವ ಸಂಪ್ರದಾಯವಿದೆ, ದುಡಿಯುವ ಕಸುಬಿದೆ, ಕಣ್ಣೀರಿಡಿಸುವ ಪ್ರೀತಿಯಿದೆ, ಕಂಡರಾಗದ ದ್ವೇಷವಿದೆ, ದೆವ್ವದ ಭಯವಿದೆ, ದೈವದ ಭಕ್ತಿಯಿದೆ ಎಲ್ಲಾ ಕೂಡಿ ಕೊಂಡಿರುವ ಒಂದು ಹಳೇ ಆಲದ ಮರದ ಹಾಗೆ. ಮತ್ತಷ್ಟು ಓದು »

29
ಆಗಸ್ಟ್

ನಮ್ಮೂರ ಹಬ್ಬ : ತಿಂಗಳು ಮಾಮನ ಹಬ್ಬ

– ಶಾಂತಮ್ಮ ಕೋಡಯ್ಯ 

ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಲೇಖನ

ಪೀಠಿಕೆ: ಹಬ್ಬಗಳು ಗ್ರಾಮದ ಅವಿಭಾಜ್ಯ ಅಂಗಗಳು ಹಳ್ಳಿಗರಿಗೆ ಹಬ್ಬಗಳೇ ಜೀವಾಳ. ಹಬ್ಬಗಳೇ ಮಾದ್ಯಮಗಳು, ಮನೋರಂಜನೆಗಳು.. ನಮ್ಮ ಪೂರ್ವಜರಿಂದ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಪರಿಚಯಿಸುವ ನಮ್ಮ ಜೀವನದಲ್ಲಿ ಸುಂದರ ಅನುಭವಗಳು ಮತ್ತು ಬಾಲ್ಯ, ಯೌವನ, ಮುಪ್ಪು, ಪ್ರೇಮ ಮುಂತಾದವುಗಳ ಸಂಗಮ. ಹಬ್ಬಗಳು ಹಳ್ಳಿಗರ ಪ್ರತಿಷ್ಠೆ ಕೂಡ ಹೌದು. ಎಲ್ಲ ಜಾತಿಯವರು ಬೆರೆತು, ಭೇದ ಮರೆತು ಒಂದಾಗುವ ಪರಿ ಅದ್ಭುತ. ನಮ್ಮ ಹಿರಿಯರ ಹಾಡು, ಹಸೆ, ಬೈಗುಳ, ಬೆಡಗು, ಬಿನ್ನಾಣ, ಕಾರ್ಯ ವೈಖರಿ ಎಲ್ಲ ಸಂಸ್ಕೃತಿಯನ್ನ ಹೊಂದಿ ಬೆಳೆಯಲು ಸಹಾಕಾರಿ ಈ ತಿಂಗಳಮಾಮನ ಹಬ್ಬ. ಮತ್ತಷ್ಟು ಓದು »

29
ಆಗಸ್ಟ್

ವಿಜಯನಗರ ಸಾಮ್ರಾಜ್ಯದ ಧ್ವಜವೇ ಕರ್ನಾಟಕದ ಧ್ವಜವಾಗಲಿ

– ರಾಕೇಶ್ ಶೆಟ್ಟಿ

“ನಿಮ್ಮಲ್ಲಿ ಕತ್ತರಿಸುವ ಕತ್ತರಿಯಿದೆ. ನಮ್ಮಲ್ಲಿ ಹೊಲಿಯುವ ಸೂಜಿಯಿದೆ.ಅಂತಿಮ ಗೆಲುವು ಸೂಜಿಯದ್ದು.ಕತ್ತರಿಯದ್ದಲ್ಲ. #ಬೆಂಕಿ ಆರಿಸಿ ಬೆಳಕು ಹಚ್ಚುವ”  ಹೀಗೊಂದು ಟ್ವೀಟನ್ನು ಬಿಜೆಪಿಯವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಟ್ವಿಟರ್ ಖಾತೆಯಿಂದ ಹತ್ತು ದಿನಗಳ ಹಿಂದೆ ಮಾಡಿದ್ದರು.ಅದಾದ ನಂತರ ಸಾಹೇಬರ ಪಕ್ಷ ಮತ್ತು ಸರ್ಕಾರ ರಾಜ್ಯದಲ್ಲಿ ನಡೆಸುತ್ತಿರುವ ಚುನಾವಣಾ ರಾಜಕೀಯದ ಪರಿ ನೋಡಿದರೆ,ಸಿಎಂ ಸಿದ್ಧರಾಮಯ್ಯನವರ ಬಳಿಯಿರುವುದು ಸೂಜಿಯಲ್ಲ, ವಿಭಜನಕಾರಿ “ಕೊಡಲಿ” ಎನ್ನುವುದು ಮನವರಿಕೆಯಾಗುತ್ತಿದೆ.ಭಾಷೆ,ಧರ್ಮ,ಜಾತಿ ಹೀಗೆ ವಿಭಜನೆಯ ಎಲ್ಲಾ ದಾಳಗಳನ್ನು ಬಳಸಿಕೊಂಡು ರಾಜ್ಯ ಹಾಳಾದರೂ ಸರಿಯೇ ಮತ್ತೊಮ್ಮೆ ಅಧಿಕಾರದ ಪೀಠವೇರಬೇಕು ಎಂದು ಹೊರಟು ನಿಂತಿದ್ದಾರೆ. ಪಾಪ! ಸಾಹೇಬರಿಗೆ ಅರ್ಥವಾಗದಿರುವುದೇನೆಂದರೆ ತಾವು ಕುಳಿತಿರುವ ಕೊಂಬೆಯನ್ನೇ ಅವರು ಕಡಿಯುತ್ತಿರುವುದು. ಕೊಂಬೆ ಮುರಿದಾಗ ಅವರು ಸೇರಬಹುದಾದ ಪ್ರಪಾತದ ಅರಿವು ಸಾಹೇಬರಿಗೆ ಇಲ್ಲವೋ ಅಥವಾ ತಮ್ಮ ರಾಜಕೀಯ ಜೀವನದ ಕೊನೆ ಇನ್ನಿಂಗ್ಸನ್ನು ಗೆಲ್ಲಲ್ಲು ಸಮಾಜದ ಏಕತೆಗೆ ಭಂಗವಾದರೂ ಸರಿಯೇ ಎನ್ನುವ ಧೋರಣೆಯಲ್ಲಿದ್ದಾರೆ.

ಪ್ರತ್ಯೇಕ ಲಿಂಗಾಯಿತ ಧರ್ಮ ಬೇಕೆನ್ನುವ ಕೂಗು ಏಳಲು ಕಾರಣವಾಗಿದ್ದೆ ಸಿಎಂ ಅಭಿನಂದನಾ ಸಮಾರಂಭದಲ್ಲಿ ನೀಡಿದ ಹೇಳಿಕೆಯಿಂದಾಗಿ. ಧರ್ಮ,ಮತ, ರಿಲಿಜನ್, ಸಂಪ್ರದಾಯಗಳ ನಡುವಿನ ವ್ಯತ್ಯಾಸ ತಿಳಿಯದವರೆಲ್ಲಾ (ಕೆಲವು ಕಾವಿಧಾರಿಗಳನ್ನೂ ಸೇರಿಸಿ) ಈ ವಿಷಯದ ತರೇವಾರಿ ಮಾತನಾಡುವದು ಕೇಳಿದಾಗ ಸಮಾಜದಲ್ಲಿ ಮೂರ್ಖರ ಸಂಖ್ಯೆಯೇನು ಕಡಿಮೆಯಿಲ್ಲ ಎನ್ನುವುದು ಖಾತ್ರಿಯಾಗುತ್ತದೆ. ಆ ವಿಷಯ ಪಕ್ಕಕ್ಕಿಟ್ಟು ನೋಡಿದರೆ, ನಮ್ಮ ಸಿಎಂ ಸಾಹೇಬರು ಕೊಡಲಿ ಹಿಡಿದು ಹೊರಟಿರುವ ಮತ್ತೊಂದು ವಿಷಯ ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ ಬೇಕು ಎಂದು ಎಬ್ಬಿಸಿರುವ ಕೂಗಿನಿಂದ. ಈ ರಾಜ್ಯದಲ್ಲಿ (ಅಧಿಕೃತ)ವಲ್ಲದಿದ್ದರೂ 1960ರಲ್ಲಿ ಮ.ರಾಮಮೂರ್ತಿಯವರೂ ಕನ್ನಡಕ್ಕೊಂದು ಧ್ವಜವನ್ನು ರೂಪಿಸಿದ್ದರು. ಇಂದಿಗೂ ಜನಮಾನಸದಲ್ಲಿ ಅದೇ ಧ್ವಜ ಚಿರಸ್ಥಾಯಿಯಾಗಿದೆ. ಗೋಕಾಕ್ ಚಳವಳಿಯಿಂದ ಹಿಡಿದು ಇತ್ತೀಚಿನ ಕಂಬಳ ಹೋರಾಟದಲ್ಲೂ ಸ್ಫೂರ್ತಿ ನೀಡಿದ್ದು ಅದೇ ಅರಿಶಿಣ-ಕುಂಕುಮದ ಧ್ವಜವೇ.

ಮತ್ತಷ್ಟು ಓದು »

28
ಆಗಸ್ಟ್

ಕಾಂಗ್ರೆಸ್ಸಿನ ವೈಚಾರಿಕತೆಯು ಇಸ್ಲಾಮಿಕ್ ಐಡಿಯಾಲಜಿಯ ಸೆಕ್ಯುಲರ್ ರೂಪವೇ?

– ವಿನಾಯಕ ಹಂಪಿಹೊಳಿ

ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳ ಪರ ವಹಿಸುವ ಬುದ್ಧಿಜೀವಿಗಳು ಮತ್ತು ಜಾಕೀರ್ ನಾಯ್ಕ್ ಮುಂತಾದ ಇಸ್ಲಾಮಿಕ್ ಐಡಿಯಾಲಜಿಯ ಪ್ರಚಾರಕರು ವಾದಿಸುವ, ಪ್ರತಿಕ್ರಿಯಿಸುವ, ಸಮರ್ಥಿಸಿಕೊಳ್ಳುವ, ವಿರೋಧಿಸುವ ರೀತಿಗಳಲ್ಲಿ ಬಹಳ ಸಾಮ್ಯತೆಗಳಿವೆ ಎಂದು ನನಗೆ ಹಲವು ಸಲ ಅನಿಸಿದ್ದಿದೆ. ಈ ಎರಡೂ ಪಂಗಡಗಳು ಬೇರೆ ಬೇರೆ ಐಡಿಯಾಲಜಿಗಳನ್ನೇ ಹೊಂದಿದ್ದರೂ ಕೂಡ ಇವು ಮಂಡಿಸುವ ವಾದಗಳ ರೂಪರೇಷೆಗಳು ಒಂದೇ ತೆರನಾಗಿವೆ. ಇದನ್ನು ಅರಿಯಲು ಈ ಎರಡೂ ಗುಂಪುಗಳ ವಾದಸರಣಿಗಳನ್ನು ಹಾಗೂ ಪ್ರತಿಕ್ರಿಯೆಗಳನ್ನು ನೋಡೋಣ.

ಇಸ್ಲಾಮಿಕ್ ಸಂಘಟನೆಗಳಿಗೆ ಇಸ್ಲಾಮಿಕ್ ಐಡಿಯಾಲಜಿಯೇ ಸರ್ವಶ್ರೇಷ್ಠವಾಗಿದೆ. ಉಳಿದ ರಿಲಿಜನ್ನುಗಳು ಸುಳ್ಳು ರಿಲಿಜನ್ನುಗಳಾಗಿವೆ. ಸಂವಿಧಾನಕ್ಕಿಂತ ಕುರಾನೇ ಶ್ರೇಷ್ಠವಾಗಿದೆ. ಆದರೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಬುದ್ಧಿಜೀವಿಗಳು ತಾವು ಸೆಕ್ಯುಲರ್ ಆಗಿದ್ದು, ಮೂಲಭೂತವಾದಿಗಳಲ್ಲ ಎಂಬುದನ್ನು ಪದೇ ಪದೇ ಹೇಳುತ್ತಿರುತ್ತಾರೆ. ಭಾರತದಲ್ಲಿ ಸಂವಿಧಾನವೇ ಶ್ರೇಷ್ಠವಾಗಿದ್ದು, ರಿಲಿಜನ್ನುಗಳು ವೈಯಕ್ತಿಕವೆಂದು ಅವರು ಒಪ್ಪುತ್ತಾರೆ. ಇಸ್ಲಾಮಿಕ್ ಐಡಿಯಾಲಜಿಯ ಪ್ರಚಾರಕರಂತೆ ಕುರಾನೇ ಶ್ರೇಷ್ಠವೆಂಬ ಭಾವನೆ ಬುದ್ಧಿಜೀವಿಗಳಲ್ಲಿಲ್ಲ. ಅವರು ಕುರಾನ್ ಹಾಗೂ ಬೈಬಲ್ಲನ್ನು ಏಕರೀತಿಯಲ್ಲಿ ಗೌರವಿಸಬಲ್ಲರು ಹಾಗೂ ಎರಡರಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳಬಲ್ಲರು. ಆದರೆ ಹಿಂದೂಗಳ ಕುರಿತು, ಹಿಂದೂ ಧರ್ಮಗ್ರಂಥಗಳೆಂದು ಕರೆಯಲ್ಪಡುವ ಕೃತಿಗಳ ಕುರಿತು ಬುದ್ಧಿಜೀವಿಗಳ ಅಭಿಪ್ರಾಯವು ಇಸ್ಲಾಂ ಮುಂತಾದ ಐಡಿಯಾಲಜಿಯನ್ನು ಪ್ರತಿಪಾದಿಸುವವರ ಅಭಿಪ್ರಾಯಕ್ಕಿಂತ ಎಷ್ಟು ಭಿನ್ನವಾಗಿದೆ ಎನ್ನುವದು ಈಗಿನ ಪ್ರಶ್ನೆ.

ಮೊದಲು ಜಾಕೀರ್ ನಾಯ್ಕ್ ಮುಂತಾದ ಇಸ್ಲಾಮಿಕ ಪ್ರಚಾರಕರು ಕೆಲವು ಪ್ರಶ್ನೆಗಳನ್ನು ಹೇಗೆ ಉತ್ತರಿಸುತ್ತಾರೆ ಎಂಬುದನ್ನು ಗಮನಿಸಿ. ಉದಾಹರಣೆಗೆ, ಅಸ್ಪೃಶ್ಯತೆಗೂ ಹಾಗೂ ಮನುಸ್ಮೃತಿಗೂ ಸಂಬಂಧವಿದೆಯೇ ಎಂದು ಜಾಕೀರ್ ಮುಂತಾದವರಿಗೆ ಕೇಳಿದರೆ ಅವರು ನಿರ್ಭಿಡೆಯಿಂದ ಹೌದು ಎನ್ನುತ್ತಾರೆ. ಮನುಸ್ಮೃತಿಯಲ್ಲಿ ಶೂದ್ರರ ಮೇಲಿರುವ ನಿಬಂಧನೆಗಳನ್ನು ತಿಳಿಸುವ ಶ್ಲೋಕಗಳನ್ನೆಲ್ಲ ಉದಾಹರಿಸಿ ಅದನ್ನು ಸಾಧಿಸುತ್ತಾರೆ. ಆಗ ಅದೇ ಸ್ಮೃತಿಯಲ್ಲಿ ಬರುವ ಬ್ರಾಹ್ಮಣರ ಮೇಲಿರುವ ನಿಬಂಧನೆಗಳನ್ನು ಹಾಗೂ ಶೂದ್ರರಿಗಿರುವ ವಿನಾಯಿತಿಗಳನ್ನು ಬೇಕೆಂದೇ ಮರೆಮಾಚುತ್ತಾರೆ.

ಮತ್ತಷ್ಟು ಓದು »

27
ಆಗಸ್ಟ್

ನಮ್ಮೂರ ಹಬ್ಬ : ಚೌತ

– ಸುಜೀತ್ ಕುಮಾರ್

ಸಾಂದರ್ಭಿಕ ಚಿತ್ರ

ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದ ಲೇಖನ

ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು. ರೆನೊಲ್ಡ್ಸ್ ಹಾಗು ‘ಟಿಕ್- ಟಿಕ್’ ಪೆನ್ನುಗಳೊಟ್ಟಿಗೆ ಗಾಜಿನ ದೇಹದಂತಹ ಪ್ಲಾಸ್ಟಿಕ್ನ ಪೆನ್ನುಗಳೂ ಮಕ್ಕಳ ಕೈಸೇರತೊಡಗಿದ್ದವು. ಟಿ.ವಿ.ಎಸ್ ಹಾಗು ಬಜಾಜ್ ಬೈಕುಗಳೊಟ್ಟಿಗೆ ಓತಿಕ್ಯಾತದ ಮುಖಕ್ಕೆ ಹೋಲುವ ಹೆಡ್ಲೈಟ್ ನ  ನವ ಮಾದರಿಯ ಬೈಕುಗಳು ರಸ್ತೆಯ ಮೇಲೆ ಕಾಣತೊಡಗಿದ್ದವು, ಫೋನೆಂದರೆ ರಸ್ತೆ ಬದಿಯ ಬೋರವೆಲ್ ನ ಕುತ್ತಿಗೆಯನ್ನು ಸಾಧ್ಯವಾದಷ್ಟು ಮೇಲಕ್ಕೆಳೆದು ನಿಲ್ಲಿಸಿರಿವ ಕಂಬಗಳು ಹಾಗು ಅವುಗಳ ಬುಡದಲ್ಲಿ ಶಾವಿಗೆ ಪಾಯಸದ ಶಾವಿಗೆಗಳಂತೆ ನುಲಿದುಕೊಂಡಿರುವ ರಾಶಿ ರಾಶಿ ವೈರುಗಳು ಎಂದರಿತ್ತದ್ದ ಎಷ್ಟೋ ಜನರಿಗೆ ಇವುಗಳ್ಯಾವುದರ  ಕಿರಿ- ಕಿರಿ ಇಲ್ಲದೆ ಜೇಬಿನ ಒಳಗೆ ಎಲ್ಲೆಂದರಲ್ಲಿಗೆ ಕೊಡೊಯ್ಯಬಲ್ಲ ಫೋನುಗಳು ಬರುತ್ತಿದೆ ಎಂದು ಕೇಳಿ ಆಶ್ಚರ್ಯ ಚಕಿತವಾಗುತ್ತಿದ್ದ ಕಾಲವದು.. ಅಲ್ಲದೆ ಪ್ರಪಂಚದ ಯಾವುದೇ ಸಮಸ್ಯೆಗಳಿಗೂ ಒಂದಿಲ್ಲೊಂದು ಉತ್ತರವನ್ನು ಕೊಡಬಲ್ಲ ‘ಗೂಗಲ್’ ಎಂಬೊಂದು ಯಂತ್ರವಿದೆ ಎಂದರೆ ಕೇಳಿದವರು ಗಹಗಹನೇ ನಕ್ಕಿ ಸುಮ್ಮನಾಗಿಬಿಡುತ್ತಿದ್ದರು. ಒಟ್ಟಿನಲ್ಲಿ ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು. ಮತ್ತಷ್ಟು ಓದು »

27
ಆಗಸ್ಟ್

ನಮ್ಮೂರ ಹಬ್ಬ : ಪರಿಸರಸ್ನೇಹಿ ದೊಡ್ಡಹಬ್ಬ

– ಮಾಲತಿ ಹೆಗಡೆ

ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆದ ಲೇಖನ

ಬಾಲ್ಯದಲ್ಲಿ ಕಂಡ ಮಲೆನಾಡಿನ ಪರಿಸರದ ಸ್ನೇಹಿಯಾದ ದೀಪಾವಳಿ ಮನದಲ್ಲಿ ನಂದಾದೀಪದಂತೆ ಬೆಳಗುತ್ತಲೇ ಇರುತ್ತದೆ. ಅಲ್ಲಿ ದೀಪಾವಳಿಗೆ ದೊಡ್ಡಹಬ್ಬ ಎಂದು ಕರೆಯುವ ವಾಡಿಕೆ. ಮಳೆಗಾಲದ ಆರಂಭದಲ್ಲಿ ಗೊಂಡೆರು ಹೂವಿನ (ಚೆಂಡು ಹೂವಿನ) ಬೀಜ ಹಾಕಿದರೆ ದೀಪಾವಳಿಯಲ್ಲಿ ಹೂವು ಸಿಗುತ್ತದೆ ಎಂಬ ಕರಾರುವಾಕ್ಕಾದ ಲೆಕ್ಕಾಚಾರದಲ್ಲಿ ಹಬ್ಬದ ತಯಾರಿ ಶುರುವಾಗುತ್ತಿತ್ತು. ಹಬ್ಬಕ್ಕೆ ವಾರದ ಮೊದಲು ಮನೆಯ ಹೊರ ಗೋಡೆಗೆ ಹಳದಿ ಮಣ್ಣು, ಅಡುಗೆ ಮನೆಗೆ ಕೆಮ್ಮಣ್ಣು, ಕಟ್ಟಿಗೆ ಒಲೆ ಇರುವೆಡೆಗೆ ಕಪ್ಪು ಮಸಿಯನ್ನೆ ಸಾರಣೆ ಮಾಡುತ್ತಿದ್ದೆವು. ಅಣಲೆಕಾಯಿ ಮಸಿ, ಕೆಮ್ಮಣ್ಣು, ಹಳದಿ ಮಣ್ಣು ಎಲ್ಲಾ ನೀರಿನಲ್ಲಿ ಕದಡಿ ಹತ್ತಿಯ ಬಟ್ಟೆ ಮುಳುಗಿಸಿ ಮಣ್ಣಿನ ಗೋಡೆಗೆ ಬರೆಸುತ್ತಾ ಹೋಗುವ ಸಂಭ್ರಮದಲ್ಲಿ ಹಿರಿಯರೊಂದಿಗೆ ನಾವೂ ಭಾಗಿಗಳು. ಮತ್ತಷ್ಟು ಓದು »

26
ಆಗಸ್ಟ್

ನಮ್ಮೂರ ಹಬ್ಬ : ಮುಗಬಾಳ ಕರಗ ಸಂಪ್ರದಾಯ

– ಸುರೇಶ್ ಮುಗಬಾಳ್

ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದ ಲೇಖನ ..

ಕರದಲ್ಲಿ ಮುಟ್ಟದೆ, ರುಂಡದಲ್ಲಿ ಧರಿಸಿ ಚಲಿಸುವುದೇ “ಕರಗ”, ಸ್ತ್ರೀ ವೇಷಧಾರಿ ಪುರುಷ (ಕರಗ ಪೂಜಾರಿ) ತನ್ನ ತಲೆಯ ಮೇಲೆ ಕರಗವನ್ನು ಹೊತ್ತು ಕುಣಿಯುವುದನ್ನು ಕಣ್ತುಂಬಿಕೊಳ್ಳುವುದೇ ಸೊಗಸು, ಮೂರು ಕಳಶಗಳನ್ನು ಒಂದರ ಮೇಲೊಂದರಂತೆ ಜೋಡಿಸಿ, ಕಳಶಗಳನ್ನು ಸುಗಂಧ ಬೀರುವ ಮಲ್ಲಿಗೆ ಹೂಗಳಿಂದ ಸಿಂಗರಿಸಿ, ಅಲಂಕೃತಗೊಂಡ ಕರಗವನ್ನು ತಲೆಯಮೇಲೆ ಹೊರುವ ಕರಗ ಪೂಜಾರಿಯು, ಎಲ್ಲೂ ಸಮತೋಲನವನ್ನು ತಪ್ಪದೆ, ಬಲಗೈನಲ್ಲಿ ಕತ್ತಿ (ಬಾಕು), ಎಡಗೈನಲ್ಲಿ ಮಂತ್ರದಂಡವನ್ನು ಹಿಡಿದು, ಘಂಟೆ ಪೂಜಾರಿಯ ಘಂಟೆ ಸದ್ದಿಗೆ, ವೀರಕುಮಾರರ “ಗೋವಿಂದ-ಗೋವಿಂದ” ಕೂಗಿಗೆ ತಾಳಬದ್ಧವಾಗಿ ಕುಣಿಯುವ ಆಚರಣೆ ಕರಗ ಶಕ್ತ್ಯೋತ್ಸವ ಎನಿಸಿಕೊಂಡಿದೆ, ಕರಗ ಪೂಜಾರಿಯು ಕಳಶವನ್ನು ತಲೆಯಮೇಲೆ ಹೊತ್ತು ಕುಣಿಯುವಾಗ ಎಂತಹ ನಾಸ್ತಿಕನ ಎದೆಯಲ್ಲೂ ಆಸ್ತಿಕತೆಯ ಪ್ರಜ್ಞೆಯನ್ನು ಬಡಿದೆಬ್ಬಿಸಿಬಿಡುತ್ತದೆ. “ಕರಗ” ಎಂದೊಡನೆ ಬೆಂಗಳೂರು ಕರಗ ನೆನಪಾಗುವುದು ಸಾಮಾನ್ಯ.. ಮೈಸೂರಿನ ದಸರ ಬಿಟ್ಟರೆ ಸಾಂಸ್ಕೃತಿಕ ಐತಿಹ್ಯವನ್ನು ಹೊಂದಿದ ಮತ್ತೊಂದು ಆಚರಣೆಯೇ ಬೆಂಗಳೂರಿನ ದ್ರೌಪತಾಂಭ ದೇವಿ ಕರಗ. ಬೆಂಗಳೂರು ಕರಗವನ್ನು ಸುಮಾರು 800 ವರುಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂಬ ಮಾಹಿತಿ ಧರ್ಮರಾಯಸ್ವಾಮಿ ದೇವಸ್ಥಾನದ ಮೂಲ ದಾಖಲೆಗಳಲ್ಲಿ ಉಲ್ಲೇಖಿತವಾಗಿದೆ. ಬೆಂಗಳೂರು ಕರಗದ ರೀತಿಯಲ್ಲೇ ಬೆಂಗಳೂರು ನಗರದ ಸುತ್ತ-ಮುತ್ತ ಕರಗವನ್ನು ಆಚರಿಸಿಕೊಂಡು ಬರುವ ಪದ್ಧತಿಯಿದೆ. ಮುಖ್ಯವಾಗಿ ಹೊಸಕೋಟೆ, ಮಾಲೂರು, ವರ್ತೂರು, ಕೆಂಗೇರಿ ಹಾಗೂ ಆನೇಕಲ್ ಭಾಗಗಳಲ್ಲಿ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗಿದೆ. ಈ ಎಲ್ಲಾ ಕರಗ ಆಚರಣೆಗಳು ಭೌಗೋಳಿಕವಾಗಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಿಸಲಾಗುವುದರಿಂದ ಹೆಚ್ಚು ಪ್ರಸಿದ್ಧಿ ಪಡೆದಿವೆ. ಮತ್ತಷ್ಟು ಓದು »