ನೆನಪುಗಳ ಮಾತೆ ಮಧುರ.. ನಿಮಗೂ ಹಾಗೇನಾ?
ಅಂತೂ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದು ಹುಡುಗರೆಲ್ಲ ಸೇರಿ ಬಾಡಿಗೆ ಮನೆ ಮಾಡಿ ಆಮೇಲೆ ಒಂದು ಕೆಲಸ ಹುಡ್ಕಿದ್ದಾಯ್ತು. ಇನ್ನೇನು ಆರಾಮು ಅಂದ್ಕೊಂಡ್ರೆ ಸಮಸ್ಯೆ ಶುರುವಾಗಿದ್ದೆ ಆಗ. ಬೆಳಗ್ಗೆ ಎದ್ರೆ ಏನು ತಿಂಡಿ ಮಾಡೋದು ಅನ್ನೋ ಯೋಚನೆ, ಏನೋ ಮಾಡೋಣ ಅಂದ್ಕೊಂಡು ಶುರು ಮಾಡಿದ್ರೆ, ಇಲ್ಲ ಈರುಳ್ಳಿ ಅಥವಾ ಟೊಮೇಟೊ ಅಥವಾ ಮೆಣಸಿನಕಾಯಿ ಅಥವಾ ಹೆಸರುಬೇಳೆ ಹೀಗೆ ಏನಾದರೂ ಒಂದು ಮಿಸ್. ಅಂತೂ ತಿಂಡಿ ಮಾಡಿ ಆಫೀಸಿಗೆ ರೆಡಿ ಆಗಿ ಬಸ್ ಹಿಡಿಯೋಕೆ ಹೋದ್ರೆ, ನಮ್ಮ ಹಳ್ಳಿ ಬಸ್ಸಾದ್ರೂ ಆಗಬಹುದು ಉಹುಂ ಬಿ.ಎಂ.ಟಿ.ಸಿ ಬಸ್ ಸಹವಾಸ ಅಲ್ಲ. ಮಕ್ಕಳನ್ನು ಕಂಡ್ರೆ ಬೆಂಗ್ಳೂರಿನ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿ ಕಚ್ಹೋ ಹಾಗೆ ಜನಗಳು ಸೀಟ್ ಹಿಡ್ಕೊಳ್ಳೋಕೆ ನುಗ್ತಿರ್ತಾರೆ. ಆ ಟ್ರಾಫಿಕ್ನಲ್ಲಿ ಆ ರಶ್ನಲ್ಲಿ ಆಫೀಸ್ ತಲ್ಪೋಹೊತ್ತಿಗೆ ಹೈರಾಣಾಗಿ ಹೋಗಿರ್ತೇವೆ.
ಆಫೀಸಲ್ಲಿ ಆ ಡೆಡ್ ಲೈನ್ಗಳು, ಮೀಟಿಂಗ್ಗಳು, ಟ್ಯೂಬ್ ಲೈಟ್ಗಳು, ಕಣ್ಣು ಕುಕ್ಕುವ ಮಾನಿಟರ್ಗಳು, ಟೇಸ್ಟ್ ಇಲ್ಲದ ಟೀ, ಕಾಫೀಗಳು, ಬೇಡದೆ ಇರೋ ಗಾಸಿಪ್ಗಳು. ಅಬ್ಬ ಸಾಕಪ್ಪಾ ಇದೇನು ಜೀವನ ಅನ್ಸಿಬಿಡತ್ತೆ ಆದ್ರೆ ಏನು ಮಾಡೋ ಹಾಗಿಲ್ಲ, ಹೊಟ್ಟೆಪಾಡು.
ಕೆಲಸ ಮುಗಿಸಿ ಮತ್ತೆ ಮನೆ ಕಡೆ ಹೊರಟ್ರೆ ಮತ್ತೆ ಅದೇ ಬಿ.ಎಂ.ಟಿ.ಸಿ ಬಸ್, ಸಂತೆಯಂತೆ ಜನ, ಟ್ರಾಫಿಕ್ ಜಾಮ್. ಮನೆ ತಲುಪೋ ಹೊತ್ತಿಗೆ ನಮ್ಮ ಪಾಡು ಹೇಗಾಗಿರತ್ತೆ ಅಂದ್ರೆ ನೀರಿನಲ್ಲಿ ಅದ್ದಿಟ್ಟ ಬಟ್ಟೆಯನ್ನು ತೆಗೆದು ಹಿಂಡಿಹಾಕ್ತಾರಲ್ಲ ಹಾಗೆ ಆಗಿರ್ತೀವಿ. ರಾತ್ರಿ ಮತ್ತದೇ ಕಥೆ, ಬೆಳಗ್ಗೆ ನಡೆದ ಘಟನೆಗಳ ಪುನರಾವರ್ತನೆ. ಮತ್ತಷ್ಟು ಓದು 
ಓಶೋ ಕಂಡಂತೆ ಗಾಂಧಿ!
ಓಶೋ ರಜನೀಶ್ ಜಗತ್ತು ಕಂಡ ಅತ್ಯಂತ ವಿವಾದಾಸ್ಪದ ವ್ಯಕ್ತಿ. ಮಧ್ಯಪ್ರದೇಶದ ಜೈನ ಕುಟುಂಬವೊಂದರಲ್ಲಿ ಹುಟ್ಟಿದ ರಜನೀಶ್ ಬಾಲ್ಯದಿಂದಲೇ ಸ್ವತಂತ್ರ ಚಿಂತನೆಯೆಡೆಗೆ ಒಲವು ಹೊಂದಿದ್ದ. ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ತನಗೆ ಜ್ಞಾನೋದಯವಾಯಿತು ಎಂದು ಹೇಳಿಕೊಳ್ಳುವ ಈತ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅತ್ಯಂತ ವಸ್ತುನಿಷ್ಠವಾದ, ಹಿಂದೆ ಯಾರೂ ಹೇಳಿರದಿದ್ದ ಸಂಗತಿಗಳನ್ನು ಹೇಳಿದ. ನಂಬಿಕೆಗಳನ್ನು ಬಿತ್ತುವ, ಆ ಮೂಲಕ ಸ್ವತಂತ್ರ ಚಿಂತನೆಯನ್ನು ನಾಶ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಖಂಡಿಸಿದ. ಮನುಷ್ಯ ತತ್ಕ್ಷಣಕ್ಕೆ ಮಾತ್ರ ಸ್ಪಂದಿಸಬೇಕು. ಯಾವ ಪೂರ್ವಾಗ್ರಹವಿಲ್ಲದೆ, ಭವಿಷ್ಯತ್ತಿನ ಬಗ್ಗೆ ಯೋಜನೆಯಿಲ್ಲದೆ ಈ ಕ್ಷಣದಲ್ಲಿ ಬದುಕಬೇಕು ಎಂದು ಹೇಳಿದ. ಜಗತ್ತಿನ ಯಾವ ವ್ಯಕ್ತಿಯನ್ನೂ, ನಂಬಿಕೆಗಳನ್ನೂ ಬಿಡದೆ ಜಾಲಾಡಿದವ ಈತ. ೧೯೯೦ರಂದು ಹೃದಯಾಘಾತದಿಂದ ನಿಧನನಾದ.
ಇಡೀ ಜಗತ್ತೇ ಮಹಾತ್ಮಾ ಗಾಂಧಿಯನ್ನು ಅಹಿಂಸಾ ಮಾರ್ಗದ ಅನ್ವೇಷಕ ಎಂದು ಕೊಂಡಾಡಿದರೆ ಈತ ಗಾಂಧಿಯನ್ನು ಕುಟಿಲ ರಾಜಕಾರಣಿ ಎಂದು ಕರೆದ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಸತ್ಯಾಗ್ರಹವೆಲ್ಲವೂ ಕೇವಲ ರಾಜಕೀಯ ತಂತ್ರಗಳು ಎಂದು ವಾದಿಸಿದ. ಗಾಂಧೀಜಿಯ ಸರಳತೆ ಢೋಂಗಿಯದು ಎಂದು ಜರೆದ. ಅವರ ಆಧ್ಯಾತ್ಮ, ಶಿಸ್ತು, ಬ್ರಹ್ಮಚರ್ಯ, ದೇವರ ಕಲ್ಪನೆ ಎಲ್ಲವನ್ನೂ ಲೇವಡಿ ಮಾಡಿದ.
ನಿಜವಾದ ಚಿನ್ನವನ್ನು ಯಾವ ಒರಗೆ ಹಚ್ಚಿದರೂ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆಯೇ ಹೊರತು ಕಳೆಗುಂದುವುದಿಲ್ಲ. ಹೀಗಾಗಿ ಓಶೋ ರಜನೀಶ್ ಗಾಂಧಿಯ ಬಗ್ಗೆ ಮಾತಾಡಿರುವ ಬಗ್ಗೆ ಸ್ವಲ್ಪ ತಿಳಿಯೋಣ. ಇದರಲ್ಲಿ ನಮಗೆ ಗಾಂಧೀಜಿಯ ವ್ಯಕ್ತಿತ್ವದ ಬಗ್ಗೆ, ಘನತೆಯ ಬಗ್ಗೆ ಹೊಸತೊಂದು ಆಯಾಮ ಸಿಕ್ಕಬಹುದು. ಯಾರನ್ನೂ ಕಣ್ಣು ಮುಚ್ಚಿ ಒಪ್ಪಬಾರದು ಎಂಬ ಎಚ್ಚರಿಕೆಯಿದ್ದರೆ ನಮ್ಮ ಪ್ರಯತ್ನ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.
***
… ನನ್ನ ಪ್ರಕಾರ ಮಹಾತ್ಮ ಗಾಂಧಿ ಒಬ್ಬ ಕಪಟ ರಾಜಕಾರಣಿ. ಅಹಿಂಸೆಯನ್ನು ಅಳವಡಿಸಿಕೊಳ್ಳುವ ಮೂಲಕ ಆತ ಎಷ್ಟೋ ಸಂಗತಿಗಳನ್ನು ತನಗೆ ಹಿತವಾಗುವಂತೆ ನಿರ್ವಹಿಸಿದ. ಎಲ್ಲಾ ಜೈನರು ಆತನ ಅನುಯಾಯಿಗಳಾದರು. ತಾವು ನಂಬಿದ ಅಂಹಿಸೆಯ ತತ್ವವನ್ನು ಬೆಂಬಲಿಸುವ ಒಬ್ಬ ವ್ಯಕ್ತಿಯನ್ನು ಅವರು ಆತನಲ್ಲಿ ಕಂಡಿದ್ದರು. ಗಾಂಧಿ ಜೈನನಾಗಿರಲಿಲ್ಲ. ಆತ ಕೇವಲ ಶೇ ೯ರಷ್ಟು ಜೈನನಾಗಿದ್ದ. ನಾನು ಗಾಂಧಿಯನ್ನು ಹೀಗೆ ವರ್ಣಿಸಲು ಇಚ್ಚಿಸುತ್ತೇನೆ: ಆತ ಹುಟ್ಟಿನಿಂದ ಹಿಂದು ಆದರೆ ಆತ ಕೇವಲ ಶೇ ೧ರಷ್ಟು ಹಿಂದು. ಆತ ಹುಟ್ಟಿದ್ದು ಜೈನರು ಹೆಚ್ಚು ಸಂಖ್ಯೆಯಲ್ಲಿದ್ದ ಗುಜರಾತಿನಲ್ಲಿ ಹೀಗಾಗಿ ಆತ ಶೇ ೯ರಷ್ಟು ಜೈನ. ಉಳಿದ ಶೇ ೯೦ರಷ್ಟು ಆತ ಕ್ರಿಶ್ಚಿಯನ್ ಆಗಿದ್ದ. ಮೂರು ಬಾರಿ ಆತ ಕ್ರೈಸ್ತನಾಗಿ ಮತಾಂತರವಾಗುವ ಹಂತದಲ್ಲಿದ್ದ. ಮತ್ತಷ್ಟು ಓದು 
ಹವ್ಯಕರೇ ಉದಾಹರಣೆಯಾದರೇಕೆ??
ಇಂದು ಬೆಳಗ್ಗೆ ಹಾಸ್ಟೆಲ್ ತಿಂಡಿ ಮುಗಿಸಿ ಪೇಪರ್ ಓದುತ್ತಿದ್ದೆ. ಪಕ್ಕದಲ್ಲೇ ಕುಳಿತವಳು ಸಂಯುಕ್ತ ಕರ್ನಾಟಕ ಓದುತ್ತಿದ್ದಳು. ನಿನ್ನದು ಓದಿ ಆದ ನಂತರ ನನಗೆ ಕೊಡು ಎಂದು ಬುಕ್ ಮಾಡಿದೆ. ಒಮ್ಮೆಲೇ ಅವಳು ನೀವು ಹವ್ಯಕರೇ ಅಲ್ವಾ ಅಂತ ಕೇಳ್ಬೇಕಾ.. ಹ್ಮ್ಮ್ ಅಂದೆ. ಏನು ಹೀಗೆ ಕೇಳಿದಳಲ್ಲ, ಎಂದು ಅವಳನ್ನೊಮ್ಮೆ ದಿಟ್ಟಿಸಿ ನೋಡಿದೆ. ಆಗ ಅವಳು”ಅಲ್ಲ ನಿಮ್ಮಲ್ಲಿ ಪೇಪರ್ ಅಲ್ಲೆಲ್ಲ ಬರೋವಷ್ಟರ ಮಟ್ಟಿಗೆ ಹುಡುಗಿಯರು ಕಡಿಮೆಯಾಗಿದಾರಾ ಅಂದಳು. ಏನು ಉತ್ತರಿಸದೆ ಪ್ರಶ್ನಾರ್ಥಕವಾಗಿ ಅವಳನ್ನೇ ನೋಡಿದೆ. ಪೇಪರ್ ಕೈಗಿತ್ತು ಹೋದಳು.
ಓಹ್!! ನೋಡಿದರೆ,” ವಧು ಬೇಕಾಗಿದ್ದಾರೆ” ಎಂದು ದೊಡ್ಡದಾಗಿ ಬರೆದಿತ್ತು ಶ್ರೀಮತಿ ಕೆ.ಎಚ್.ಸಾವಿತ್ರಿಯವರ ಜೀವನ್ಮುಖಿ ಕಾಲಂನಲ್ಲಿ!! ಅಲ್ಲಿ ಹವ್ಯಕರಲ್ಲಿ ವಧುಗಳಿಗೆ ಕೊರತೆ ಎನ್ನೋ ಉದಾಹರಣೆಗಳು. ಹವ್ಯಕರೇ ಏಕೆ ಉದಾಹರಣೆಯಾಗುತ್ತಿದ್ದಾರೆ? ಬೇರೆಯವರಲ್ಲಿ ಉದಾಹರಣೆಗಳಿಲ್ಲವೇ?ಕಾರಣಗಳು ಕಾಣುತ್ತಿರುವುದೆಲ್ಲ ಹವ್ಯಕರಲ್ಲೇ ಜಾಸ್ತಿಯಾಗಿದೆಯೇ? ಎನ್ನೋ ಪ್ರಶ್ನೆಗಳು. ೨ ವರುಷಗಳ ಹಿಂದೆಯೇ ಈ ಟಿವಿ ಹೆಡ್ಲೈನ್ ಅಲ್ಲಿ “ಹವ್ಯಕರಲ್ಲಿ ವಧುಗಳ ಕೊರತೆ, ವರರಿಗೆ ಮದುವೆಯ ಚಿಂತೆ” ಎಂದು ದೊಡ್ಡದಾಗಿ ಕೊಟ್ಟಿದ್ದರು. ಮತ್ತೊಮ್ಮೆ ಸಾಪ್ತಾಹಿಕ ವಿಜಯದಲ್ಲೂ ಪುಟವೆಲ್ಲ ಇದೇ ವಿಷ್ಯ!ಹೀಗೆ ಮನೆ ಮಾತಾಗುವ ಮಟ್ಟಕ್ಕಿಳಿಯಿತೇ? ಮತ್ತಷ್ಟು ಓದು 
ಪ್ರೀತಿಯ (?) ರಾಜಕಾರಣಿಗಳಿಗೆ ೩ ಪ್ರಶ್ನೆ-೧ ಸಲಹೆ
ಪ್ರಶಾಂತ್ ಯಾಳವಾರಮಠ
ಇಂದಿನ ನಮ್ಮ ರಾಜಕೀಯ ಪರಿಸ್ತಿತಿಯೇನ್ನು ನೋಡಿ ನಮ್ಮ ಪ್ರೀತಿಯ ರಾಜಕಾರಣಿಗಳಿಗೆ ೩ ಪ್ರಶ್ನೆಗಳನ್ನು ಕೇಳೋಣ ಅಂತ ಅಂದುಕೊಂಡಿದಿನೀ…
೧. ನಿಮಗೆ ಸಾಮಾನ್ಯರಂತೆ ಬದುಕಲು ಆಗುವುದಿಲ್ಲವೇ?
ಇಂದು ಯಾವುದೇ ಪಕ್ಷ ಅತವಾ ವ್ಯಕ್ತಿಯನ್ನ ತಗೊಳ್ಳಿ ಎಲ್ಲರೂ ದುಡ್ಡು ದುಡ್ಡು ಅಂತಿದ್ದಾರೆ.ಒಬ್ಬ ಸಾಮಾನ್ಯ ವ್ಯಕ್ತಿ ಎಲ್ಲ ಸವಲತ್ತುಗಳನ್ನು ಪಡೆದು, ಮನೆ ಮಟ ಮಾಡಿ, ಮಕ್ಕಳನ್ನ ಒಳ್ಳೆ ಶಾಲೆಗಳಿಗೆ ಸೇರಿಸಿ ಸಂತೋಷದಿಂದ ಬದುಕಲು ಕೇವಲ ೧ ಕೋಟಿಗಿಂತ [ಬೆಂಗಳೂರಲ್ಲಿ] ಕಡಿಮೆ ದುಡ್ಡು ಸಾಕು.
ಆದರೆ ಇವತ್ತು ರಾಜಕೀಯದಲ್ಲಿರೋ ಎಲ್ಲರೂ [೯೯%] ಕೋಟ್ಯದಿಪತಿಗಳೇ ಇದ್ದೀರಾ… ಆದರು ನಿಮಗೆ ಯಾಕೆ ಇಷ್ಟೊಂದು ಆಸೆ ಯಾರಿಗೋಸ್ಕರ ಇಷ್ಟೆಲ್ಲಾ ಆಸ್ತಿಯನ್ನ ಮಾಡ್ತಾ ಇದ್ದೀರಾ … ನಿಮಗೂ ಗೊತ್ತು ನಮಗೂ ಗೊತ್ತು ಎಲ್ಲರೂ ಹೋಗುವಾಗ ಏನನ್ನು ತೆಗೆದುಕೊಂಡು ಹೋಗೋದಿಲ್ಲ ಅಂತ ಆದರೂ …
೨. ನೀವು ಯಾಕೆ ಆತ್ಮವಂಚಕರಾಗಿ ಬದುಕುತ್ತಾ ಇದ್ದೀರಿ?
ನೀವು ಎಷ್ಟೊಂದು ತಪ್ಪುಗಳನ್ನ ಮಾಡಿದ್ದಿರೀ, ಮಾಡುತ್ತ ಇದ್ದೀರಿ ಅಂತ ನಮಗಿಂತ ನಿಮಗೆ ಚೆನ್ನಾಗಿ ಗೊತ್ತು ಆದರು ನೀವು ಏನು ಮಾಡಿಯೇ ಇಲ್ಲ ಅಂತೀರಾ.
ನೀವು ಮಾಡಿದ್ದೂ ತಪ್ಪು ಅಂತ ಒಬ್ಬ ಸಾಮಾನ್ಯನು ಹೇಳುತ್ತಾನೆ… ಲಂಚ ತೊಗೊತಿರಿ, ಧಮಕಿ ಹಾಕಸ್ತಿರಿ, ಸರಕಾರಿ ದುಡ್ಡನ್ನ/ಜಾಗವನ್ನ/ವಸ್ತುಗಳನ್ನ/ಮೋಟಾರುಗಳನ್ನ ಗುಳುಂ ಅನಸ್ತಿರಿ, ಗುಂಡಾಗಳನ್ನ ಸಾಕುತ್ತಿರೀ …ಅಬ್ಬಾ ಒಂದಾ ಎರಡಾ …. ಇಷ್ಟೆಲ್ಲಾ ಮಾಡಿದ್ದು ನಿಮಗೂ ಗೊತ್ತು ಆದರು ಯಾಕೆ ನೀವು ಆತ್ಮವಂಚಕರಾಗಿ, ಸಭ್ಯರತರ ನಟಸ್ತೀರಿ ಅಥವಾ ನಿಮಗೆ ಆತ್ಮ ಅನ್ನೋದೇ ಇಲ್ಲವಾ ಹೇಗೆ?
೩. ನಿಮ್ಮ ನಡವಳಿಕೆ ಅಧಿಕಾರದಲ್ಲಿದ್ದಾಗ ಬೇರೆ ಇಲ್ಲದಿದ್ದಾಗ ಬೇರೆ ಯಾಕೆ ?
ನಾನು ಎಷ್ಟೊಂದು ರಾಜಕೀಯ ವ್ಯಕ್ತಿಗಳ ಬಗೆಗಿನ ವಿವರಗಳನ್ನ ನೋಡಿದೆ ಎಲ್ಲರೂ ಎಷ್ಟೊಂದು ಒಳ್ಳೆಯವರು,ಎಷ್ಟೊಂದು ಹೋರಾಟಗಳನ್ನ ಮಾಡಿದ್ದಾರೆ, ಒಳ್ಳೊಳ್ಳೆಯ ಮಾತುಗಳನ್ನ ಆಡಿದ್ದಾರೆ, ಬಡಬಗ್ಗರಿಗೆ ಸಹಾಯ ಮಾಡಿದ್ದಾರೆ ಆದರೆ ಈ ಎಲ್ಲವನ್ನು ಅವರು ವಿರೋಧ ಪಕ್ಷದಲ್ಲಿದ್ದಾಗ ಮಾಡಿದ್ದಾರೆ. ಅಂದರೆ ಇವೆಲ್ಲ ನೀವು ಅಧಿಕಾರ ಹಿಡಿಯಲು ಮಾಡಿರುವ/ಆಡಿರುವ ನಾಟಕಗಳಾ? ಏಕೆಂದರೆ ಅದೇ ವ್ಯಕ್ತಿಗಳು ಅಧಿಕಾರ ಹಿಡಿದಮೇಲೆ ಎಷ್ಟೊಂದು ಭ್ರಷ್ಟಾಚಾರ, ಅನ್ಯಾಯಗಳನ್ನ ಮಾಡಿದ್ದಾರೆ ಅಂದರೆ ಅವುಗಳಿಗೆ ಲೆಕ್ಕವಿಲ್ಲ. ಇದು ಯಾಕೆ ಹೀಗೆ, ಅಧಿಕಾರದ ಮುಂದೆ ಒಳ್ಳೆಯತನ ನಿಲ್ಲೋದಿಲ್ಲವಾ? ಇದು ನಿಜ ಅಂದರೆ ನೀವು ಅಧಿಕಾರದಲ್ಲಿ ಇರೋದೇ ಬೇಡಾ.
ಸಲಹೆ :
ದಯವಿಟ್ಟು ನೀವು ದುಡ್ಡುಮಾಡೋದಕ್ಕೆ ರಾಜಕೀಯ ಸೇರಬೇಡಿ … ಯಾಕಂದರೆ ದುಡ್ಡು ಮಾಡೋದಕ್ಕೆ ನಾನಾ ದಾರಿಗಳಿವೆ.ನಿಮ್ಮ ಮಕ್ಕಳಿಗೆ ಚೆನ್ನಾಗಿ ಜೀವನ ಮಾಡಲು ಕಲಿಸೋ ಶಕ್ತಿ ಇಲ್ಲಾ ಅಂದರೆ ಮಕ್ಕಳನ್ನ ಹಡಿಯಬೇಡಿ ಯಾಕಂದರೆ ನೀವು ಮಾಡೋ ಎಲ್ಲ ತಪ್ಪುಗಳು ನಿಮ್ಮ ಮಕ್ಕಳಿಗೊಸ್ಕರನೆ.ಇನ್ನು ಉಳಿದ ಸಲಹೆಗಳನ್ನ ಈ ಕೆಳಗಿನ ಗೆಳೆಯರು ಕೊಡ್ತಾರೆ ಕೇಳಿ 🙂
ಬ್ಲಾಗರ್ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ
‘ಸಂಪಾದಕೀಯ’
ಇವರು ತಮ್ಮ ಪಾಡಿಗೆ ತಾವು ಬರೆಯುತ್ತಾರೆ. ಪಿಕ್ನಿಕ್ಕಿಗೆ ಹೋಗಿ ಬಂದ ಖುಷಿ, ಮನೆಯಲ್ಲಿ ಮಗು ಹುಟ್ಟಿದ ಸಡಗರ, ಕಸದ ತೊಟ್ಟಿಯಲ್ಲಿ ಎಸೆಯಲ್ಪಟ್ಟು ಸತ್ತ ಮಗುವಿನ ಕುರಿತ ಮರುಕ, ಹೊಸದಾಗಿ ಓದಿದ ಕವಿತೆಯ ಕನವರಿಕೆ, ಮನೆಯಲ್ಲಿ ಘಟಿಸಿದ ಸಾವಿನ ವಿಷಾದ, ರಸ್ತೆ ಅಪಘಾತದಲ್ಲಿ ಸತ್ತೋದವರ ಕುರಿತು ನೋವು, ಹಬ್ಬಗಳ-ವಿವಿಧ ಡೇ ಗಳ ಸಂಭ್ರಮ, ಹೊಸದಾಗಿ ಶಾಪಿಂಗ್ ಮಾಡಿದ ವಸ್ತುಗಳ ವಿವರ, ರಾತ್ರಿಯಷ್ಟೇ ಕಂಡ ದುಸ್ವಪ್ನದ ಕಿರಿಕಿರಿ… ಹೀಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.
ಇವರ ಬ್ಲಾಗುಗಳಿಗೆ ಇವರೇ ಮಾಲೀಕರು, ಇವರೇ ಸಂಪಾದಕರು, ಇವರೇ ಉಪಸಂಪಾದಕರು, ಇವರೇ ವರದಿಗಾರರು, ಇವರೇ ಡಿಟಿಪಿ ಆಪರೇಟರ್ಗಳು. ಯಾರ ಅಂಕೆಯಲ್ಲಿ ಇವರಿಲ್ಲವಾದರೂ ತಮ್ಮ ತಮ್ಮ ಅಂಕೆಯಲ್ಲಿ ಇದ್ದು ಬರೆಯುವವರು. ಮತ್ತಷ್ಟು ಓದು 
ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?
ಸಂಸ್ಕೃತದಲ್ಲಿ ಅಡಗಿರುವ ಅರಿವನ್ನು ಹೆಚ್ಚು ಜನರಿಗೆ ಪರಿಚಯಿಸುವ ಉದ್ದೇಶದಿಂದ ಶುರುವಾದ ಸಂಸ್ಕೃತ ಭಾರತಿ ಸಂಸ್ಥೆ ಬೆಂಗಳೂರಿನಲ್ಲಿ ಸಂಸ್ಕೃತ ಪುಸ್ತಕ ಮೇಳ ಆಯೋಜಿಸಿದೆ ಅನ್ನುವ ಜಾಹೀರಾತು ಪತ್ರಿಕೆಗಳಲ್ಲಿ ಕಂಡೆ. ವೇದ, ಉಪನಿಷತ್ತು, ಆಯುರ್ವೇದ ಸೇರಿದಂತೆ ಹಲವು ಜ್ಞಾನ ಸಂಪತ್ತನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದು ಈ ಮೇಳದ ಉದ್ದೇಶವಾಗಿದೆಯಂತೆ. ಪುಸ್ತಕ ಮೇಳಕ್ಕೆ ನನ್ನ ಯಾವುದೇ ವಿರೋಧವಿಲ್ಲ. ಸಂಸ್ಕೃತದ ಬಗ್ಗೆ ಮೊದಲೇ ವಿರೋಧ ಇಲ್ಲ. ಸಂಸ್ಕೃತದಲ್ಲಿರುವ ಎಲ್ಲ ಒಳ್ಳೆಯದು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರಿಗೆ ದೊರಕಲಿ ಅನ್ನುವುದು ನನ್ನ ನಿಲುವು. ಆದರೆ ಈ ಮೇಳದ ಜಾಹೀರಾತು ನೋಡಿದಾಗ ಅಚ್ಚರಿಯಾಗಿದ್ದು, ಈ ಮೇಳದ ಸಹ ಪ್ರಾಯೋಜಕರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಬುದು !
ಆರ್.ಎಸ್.ಎಸ್ ನ ಅಂಗಸಂಸ್ಥೆಯಾದ “ಸಂಸ್ಕೃತ ಭಾರತಿ” ಸಂಸ್ಕೃತ ಪ್ರಚಾರ, ಪುಸ್ತಕ ಮೇಳ ಅಂತ ಖಾಸಗಿಯಾಗಿ ಕಾರ್ಯಕ್ರಮ ನಡೆಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇಂತಹ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುವುದರ ಹಿಂದಿನ ರಹಸ್ಯವೇನು? ಇಮಾಮ ಸಾಬಿಗೂ ಗೋಕುಲಾಷ್ಟಮಿಗೂ ಏನ್ ಸಂಬಂಧ? ಬೆಳಗಾವಿಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಸರಿಯಾದ ಆದ್ಯತೆ, ಗಮನ ಕೊಡದೇ ವರ್ಷಾನುಗಟ್ಟಲೆ ಅದನ್ನು ಮುಂದೆ ಹಾಕುವ ಸರ್ಕಾರ ಸಂಸ್ಕೃತ ಪುಸ್ತಕ ಮೇಳದ ಯಶಸ್ಸಿಗೆ ಟೊಂಕ ಕಟ್ಟಿ ನಿಲ್ಲುವುದನ್ನು ನೋಡಿದಾಗ ಅದನ್ನು misplaced priority ಅನ್ನದೇ ವಿಧಿಯಿಲ್ಲ. ಹೇಗೆ ಕೊಂಕಣಿ ಅಕಾಡೆಮಿಯ ಕೆಲಸ ಕೊಂಕಣಿ ಭಾಷೆ, ಸಂಸ್ಕೃತಿಯ ಉಳಿಸುವಿಕೆ-ಬೆಳೆಸುವಿಕೆಯೋ, ಹೇಗೆ ತುಳು ಅಕಾಡೆಮಿಯ ಕೆಲಸ ತುಳು ನುಡಿ, ತುಳು ಸಂಸ್ಕೃತಿಯ ಪೋಷಣೆ, ರಕ್ಷಣೆಯೋ, ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸ ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವು,ಬೆಳೆವು, ಕನ್ನಡಿಗರಲ್ಲಿ ಕನ್ನಡತನದ ಅರಿವು ಹೆಚ್ಚಿಸುವತ್ತ ಗಮನ ಹರಿಸುವುದೇ ವಿನಹ ಇಂದು ಸಂಸ್ಕೃತ ಮೇಳ ಇಲ್ಲವೇ ನಾಳೆ ದಿನ ತಮಿಳು ಮೇಳ, ಹಿಂದಿ ಮೇಳ ಅಂತ ತನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸದ ಮೇಳಗಳನ್ನು ಪ್ರಾಯೋಜಿಸುವುದಲ್ಲ. ಕನ್ನಡ ವಿಶ್ವವಿದ್ಯಾಲಯಗಳು ಅನುದಾನವಿಲ್ಲದೇ ಒದ್ದಾಡುತ್ತಿವೆ. ಗಡಿ ಭಾಗದ ಕನ್ನಡ ಶಾಲೆಗಳೆಲ್ಲ ಒಂದೊಂದಾಗಿ ಬಾಗಿಲು ಹಾಕಿ, ಅಲ್ಲಿನ ಕನ್ನಡಿಗರೆಲ್ಲ ಪರಭಾಷಿಕರಾಗುತ್ತಿದ್ದಾರೆ, ಇದಾವುದನ್ನೂ ಗಮನಿಸದ ಸರ್ಕಾರ, ಸಂಸ್ಕೃತ ಪುಸ್ತಕ ಮೇಳವನ್ನು ಪ್ರಾಯೋಜಿಸುವುದನ್ನು ನೋಡಿದಾಗ, ಕೋಟ್ಯಾಂತರ ಜನ ಆಡುವ ಜೀವಂತ ಭಾಷೆಯತ್ತ ಅದಕ್ಕಿರುವ ಆದ್ಯತೆ ಏನಿದೆ, ಎಷ್ಟಿದೆ ಅನ್ನುವ ಪ್ರಶ್ನೆ ಕನ್ನಡಿಗರ ಮನಸಲ್ಲಿ ಬರದೇ ಇರದು. ಮತ್ತಷ್ಟು ಓದು

ಇರುವೆ ಕೊಟ್ಟ ಕಿರಿಕಿರಿ
ಪ್ಯಾಂಟ್ ಹಾಕಿ ಇನ್ ಶರ್ಟ್ ಮಾಡಿ, ಶಾಲೆಗೆ ಟಿಪ್ ಟಾಪಾಗಿ ಹೋಗುತ್ತಿದ್ದೆ. ಸ್ವಲ್ಪ ತುಂಟನಾಗಿದ್ದ ನಾನು ತರಗತಿಯ ಕೊನೆಯ ಬೆಂಚಿನಲ್ಲಿ ಕೂರಲು ಇಷ್ಟ ಪಡುತ್ತಿದ್ದೆ. ಟೀಚರ್ ತರಗತಿಗೆ ಬಂದೊಡನೆ “ದೀಪಕ್ ಎಲ್ಲಿ ಬಾ” ಎಂದು ಮುಂದಿನ ಬೆಂಚಿನಲ್ಲಿ ಕೂರಿಸಿ ನನ್ನಾಸೆಗೆ ತಣ್ಣೀರು ಹಾಕುತ್ತಿದ್ದರು.
ನಾಲ್ಕು ಕಣ್ಣಿನ ಆ ಟೀಚರ್ ಬಾರಿ ಸೀರಿಯಸ್ ಮತ್ತು ಜೋರಿನವರು. ಅವರ ಮುಖದಲ್ಲಿ ನಗು ನೋಡಿದರೆ ಏನೋ ವಿಸ್ಮಯ ಕಂಡಂತೆ ಆಗುತ್ತಿತ್ತು. ಎಂದಿನಂತೆ ಟೀಚರ್ ತರಗತಿಗೆ ಬಂದು ಹಾಜರಾತಿ ಕರೆದರು. ಒಂದು ಕೈಯಲ್ಲಿ ಬೆತ್ತ ಮತ್ತೊಂದು ಕೈಯಲ್ಲಿ ‘ಸಮಾಜ ವಿಜ್ಞಾನ’ ಪುಸ್ತಕ ಹಿಡಿದು ಪಾಠ ಶುರು ಮಾಡಿದರು.
ಅಷ್ಟರಲ್ಲಿ ನನ್ನ ಕಾಲಿನಲ್ಲಿ ಏನೋ ಹರಿದಂತೆ ಆಯಿತು. ನಿಧಾನವಾಗಿ ಮೇಲೆ-ಮೇಲೆ ಹತ್ತುತ್ತಾ ಬಂದ ಅ ಜೀವಿ ಎಡ ತೊಡೆಗೆ ‘ಚುನ್ಕ್ ‘ಎಂದು ಕಚ್ಚಿತು. ಓಹೋ … ಇದು ಇರುವೆಯದೆ ಕೆಲಸ ಎಂದು ತಿಳಿಯಿತು. ಹೇಗೋ ಸಹಿಸಿಕೊಂಡು ಕಾಲನ್ನು ಆ ಕಡೆ ಈ ಕಡೆ ಆಡಿಸಿದೆ. ಸ್ವಲ್ಪ ಹೊತ್ತು ಸುಮ್ಮನಾದ ಇರುವೆ ಮತ್ತೊಮ್ಮೆ ‘ಚೋಇಕ್ ‘ಎಂದು ಕಚ್ಚಿತ್ತು. ಉರಿ ತಡೆಯಲಾರದೆ ಮೆಲ್ಲೆ ” ಹ್ಹೂ …. ” ಎಂದೆ. ಟೀಚರ್ ನ ಕಿವಿ ನನ್ನ ಬಾಯಿಯಲ್ಲೇ ಇತ್ತೇನೋ ಎಂಬಂತೆ ಸರಕ್ಕನೆ ನನ್ನೆಡೆಗೆ ತಿರುಗಿದರು. ಹುಬ್ಬಾಡಿಸುತ್ತಾ “ಏನೋ? ” ಎಂದರು. “ಏನಿಲ್ಲ ” ಎಂದೆ. ಎದ್ದು ನಿಲ್ಲಲು ಹೇಳಿದರು. ” ಯಾರದ್ರು ಏನಾದ್ರು ಮಾಡಿದ್ರಾ ?” ಎಂದು ಕೇಳಿದರು. ‘ಇಲ್ಲ’ ಎಂಬಂತೆ ತಲೆಯಾಡಿಸಿದೆ. ನಾನು ಎದ್ದ ವೇಗಕ್ಕೆ ಇರುವೆಗೆ ಕೋಪ ನೆತ್ತಿಗೀರಿರಬೇಕು. ಅದು ಮತ್ತೊಮ್ಮೆ -ಮಗದೊಮ್ಮೆ ಕಚ್ಚ ತೊಡಗಿತು. ಪ್ಯಾಂಟಿನ ಒಳಗೆ ಇರುವೆ ಕಚ್ಚುತ್ತಿದೆ ಎಂದು ಹೇಳಿ ಬಿಡಲೇ?. ಬೇಡ- ಬೇಡ ಎಲ್ಲಾ ನಗುತ್ತಾರೆ, ಹೇಳದೆ ಹೋದರೆ ಟೀಚರ್ ಹೊಡಿಯುತ್ತಾರೆ. ಇರುವೆಯ ಕಡಿತ, ಟೀಚರ್ ಹೊಡೆತ ಯಾರಿಗೆ ಬೇಕು ? ಆ ಮಳೆಗಾಲದ ಚಳಿಯಲ್ಲೂ ಬೆವರತೊಡಗಿದೆ. ಯಾವ ಜನ್ಮದ ಶಾಪವೋ ಎಂದು ಯೋಚಿಸುತ್ತಿರಬೇಕಾದರೆ:, “ಕುಳಿತುಕೋ , ನಿನ್ನ ಕಪಿ ಚೆಸ್ತೆ ಮನೆಯಲ್ಲಿಟ್ಟುಕೋ, ನನ್ ಜೊತೆ ತೋರಿಸಬೇಡ ” ಎಂದು ಟೀಚರ್ ಗುಟುರು ಹಾಕಿ ಕೂರಿಸಿದರು . ಮತ್ತಷ್ಟು ಓದು 
ಮೆಸೆಜ್ನ ಸ್ವಗತ
ಅಶ್ವಥ್ ಸಂಪಾಜೆ
ಅಯ್ಯೇ ಇಲ್ಲೊಬ್ಬಳು ಹುಡುಗಿ ಮುಸಿ ಮುಸಿ ಅಳುತ್ತಿದ್ದಾಳೆ, ಯಾಕಿರಬಹುದು? ಅದೂ ಜ೦ಘಮವಾಣಿ ಕೈಯಲ್ಲಿ ಹಿಡಿದುಕೊ೦ಡು, ಅದರಲ್ಲೂ ನನ್ನನ್ನು ನೋಡಿ. ನಾನು ಇಷ್ಟೊ೦ದು ಪ್ರಭಾವಿತನೇ. . . !
ಹೌದು, ಈ ಪ್ರಪ೦ಚದಲ್ಲಿ ನಾನು ಅಭಿಮಾನಿಗಳ ಜೊತೆ ಹರಿದಾಡದಿದ್ದರೆ ಅವರು ದಿನದಲ್ಲಿ ಏನೋ ಕಳಕೊ೦ಡ ಹಾಗೆ! ಬೆಳಗ್ಗಿನಿ೦ದ ಮಧ್ಯರಾತ್ರಿಯವರೆಗೂ ನನ್ನ ಸ೦ಚಾರ. ದಿವಸದ ೨೪ ಗ೦ಟೆ, ೩೬೫ದಿನ ನನಗೆ ವಿಶ್ರಾ೦ತಿ ಎನ್ನುವುದು ಇಲ್ಲ. ನಿರ೦ತರ ಚಲನಶೀಲವ್ಯಕ್ತಿ ಅ೦ತಾ ಬಿರುದು ಕೊಡುವುದು ಏನೂ ಬೇಡ. ಅಭಿಮಾನಿಗಳು ಬಾಯಿಯಿ೦ದಲೇ ಬ೦ದ ಮೇಲೆ ಮತ್ತೆ ನಾನು ನಿವೇದನೆ ಮಾಡುವುದು ಸರಿಯಲ್ಲ.
ನನಗೆ ಎಷ್ಟು ಹೆಸರುಗಳಿವೆ ಎನ್ನುವುದು ನನಗೆ ಗೊತ್ತಿಲ್ಲ. ` ಸ೦ದೇಶ’ ಅ೦ತಾ ಎಲ್ಲರೂ ಸಾಮಾನ್ಯವಾಗಿ ಕರೆಯುತ್ತಾರೆ. ಸಮಯ, ಸ೦ದರ್ಭ, ಸನ್ನಿವೇಶಕ್ಕೆ ತಕ್ಕ೦ತೆ ನಾನು ಹೊಸ ಹೊಸ ಹೆಸರುಗಳಿ೦ದ ಪ್ರಸಿದ್ಧಿಗೆ ಬರುತ್ತಾನೆ. ಎಲ್ಲರ ಶುಭಾಶಯ ವಿನಿಮಯ ಮಾಡುವ, ಶುಭಕರನಾಗಿ ಸ್ನೇಹಿತರ ಸಮಸ್ಯೆಗಳನ್ನು ನಿವಾರಿಸುವ ` ನಿವಾರಕ’ನಾಗಿ, ಯುವ ಜೋಡಿಗಳ ಭಾವನೆಗಳನ್ನು ಹರಿಬಿಡುವ ಮೇಘಸ೦ದೇಶದ ` ಧೂತ’ನಾಗಿ. ಕಿರುಕುಳ ನೀಡಿ ಮಜ ತೆಗೆದುಕೊಳ್ಳುವ ದಾಳದ `ಆಟಗಾರ’ನಾಗಿ, ಅದನ್ನು ಓದಿ ಕಿರಿಕಿರಿ ಅ೦ತಾ ಅನಿಸುವವರಿಗೆ `ಕಿರಿಕ್ ವ್ಯಕ್ತಿಯಾಗಿ. . . . ಹೀಗೆ ನಾನು, ನಾನಾ ಹೆಸರು, ವೇಷ ಧರಿಸಿ ನಿಮ್ಮ ಸ೦ಚಾರಿ ದೂರವಾಣಿಯ ಜೊತೆ ಅ೦ದು ಸೇರಿ ಕುಳಿತುಬಿಡುತ್ತೇನೆ. ಮತ್ತಷ್ಟು ಓದು 
ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ,ಕನ್ನಡ ಮಾತ್ರ ಸಾಕು
ಕಲ್ಯಾಣ ರಾಮನ್ ಚಂದ್ರಶೇಖರನ್
*****
ಕಳೆದ ಭಾನುವಾರ, ೨೬ ಡಿಸಂಬರ್ ೨೦೧೦ ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ, ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿಯ ೩೭ನೇ ಘಟಿಕೋತ್ಸವದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತ “ರಾಷ್ಟ್ರ ಭಾಷೆ ಹಿಂದಿ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳು ಭಾರತದ ಏಕತೆಯ ಸಂಕೇತಗಳಿದ್ದಂತೆ” ಎಂದು ತಿಳಿಸಿರುತ್ತಾರೆ(ವಿಜಯ ಕರ್ನಾಟಕ ಸುದ್ಧಿ ೨೭/೧೨/೨೦೧೦, ಪುಟ ೧೧).
ಮೊದಲಿಗೆ ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ. ಹಾಗೆಂದು ನಮ್ಮ ಸಂವಿಧಾನದಲ್ಲಿ ಎಲ್ಲೂ ನಮೂದಾಗಿಲ್ಲ. ಅರಿವು-ತಿಳಿವುಳ್ಳ ಕಾಯ್ಕಿಣಿಯಂತಹವರೇ, ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ತಪ್ಪು ಅಭಿಪ್ರಾಯ ಹೊಂದಿರುವಾಗ ಇನ್ನು ಜನ ಸಾಮಾನ್ಯರ ಆಭಿಪ್ರಾಯದ ಕುರಿತಾಗಿ ಹೇಳುವುದೇನಿದೆ? ಇದು ಈ ಹಿಂದಿ ಸೇವಾ ಸಮಿತಿಗಳು, ತಮ್ಮ ಪ್ರಚಾರಕ್ಕಾಗಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಬಿಂಬಿಸುತ್ತಿರುವ ಪರಿಯನ್ನು ಎತ್ತಿ ತೋರಿಸುತ್ತಿದೆ ಮತ್ತು ಜನಸಾಮಾನ್ಯರಲ್ಲಿ, ಹಿಂದಿ ಭಾರತದ ರಾಷ್ಟ್ರ ಭಾಷೆ, ಹಿಂದಿ ಬಲ್ಲವ ಮಾತ್ರ ರಾಷ್ಟ್ರ ಭಕ್ತಿ ಹೊಂದಿರಲು ಸಾಧ್ಯ , ಇಡೀ ಭಾರತದ ಸಂಸ್ಕೃತಿಯೆಂದರೆ ಕೇವಲ ಹಿಂದಿ ಸಂಸ್ಕೃತಿ ಮಾತ್ರ, ಹಿಂದಿ ಬಲ್ಲವನಿಗೆ ಮಾತ್ರ ಸರ್ಕಾರದ ಎಲ್ಲಾ ಉದ್ಯಮಗಳಲ್ಲಿ ಕೆಲಸ ಲಭ್ಯ, ಹಿಂದಿಯನ್ನು ಕಲಿತು ಇಡೀ ಭಾರತವನ್ನು ಸುತ್ತಾಡಿ ಎಲ್ಲವನ್ನು ಗ್ರಹಿಸಿ, ಎಲ್ಲರೊಂದಿಗೆ ಐಕ್ಯತೆಯನ್ನು ಸಾಧಿಸಿಬಿಡಬಹುದು ಮತ್ತು ಹಿಂದಿ ಬಾರದಿರುವುದೇ ನಮ್ಮ ಜನಪ್ರತಿನಿಧಿಗಳಿಗೆ ರಾಷ್ಟ್ರ ವರ್ಚಸ್ಸು ಗಳಿಸಲು ಸಾಧ್ಯವಾಗದಿರುವ ಕಾರಣ ಎಂಬ ಕಲ್ಪನೆ – ಭ್ರಮೆಯನ್ನು ಆಳವಾಗಿ ಬಿತ್ತಿದೆ. ವಾಸ್ತವವೆಂದರೆ ಭಾರತದೆಲ್ಲೆಡೆ ಹಿಂದಿಯ ಪ್ರತಿಪಾದನೆ ಕೇವಲ ಹಿಂದಿ ಭಾಷಿಕರಿಗೆ/ಪ್ರದೇಶಗಳಿಗೆ ಮಾತ್ರ ಒಲಿದಿರುವ ವರದಾನವಾಗಿ ಪರಿಣಮಿಸಿದೆ ಮತ್ತು ಹಿಂದಿ ಭಾಷಿಕರು ತಾವು ನೆಲಸಲು ಬರುವ ಪ್ರದೇಶಗಳ ಭಾಷೆಯನ್ನು ಕಡೆಗಣಿಸಲು ಮತ್ತು ಅಸಡ್ಡೆ ತೋರಲು ಪರೋಕ್ಷವಾಗಿ ಸಹಕಾರಿಯಾಗಿದೆ. ಮತ್ತಷ್ಟು ಓದು 
ತುಕ್ರ ಬೆಂಗಳೂರಿಗೆ ಹೋದದ್ದು..
ಕಿಟಕಿಯ ಕಡೆಯಿಂದ ಬೀಸುವ ಚಳಿಗಾಳಿಗೆ ಕಬ್ಬಿಣವೂ ಮಂಜುಗಡ್ಡೆಯಾಗಿತ್ತು. `ಏನು ಚಳಿ ದೇವ್ರೆ’ ಅಂತ ಗೊಣಗುತ್ತ ತಣ್ಣಗಿನ ರೈಲಿನ ಕಬ್ಬಿಣದ ಸೀಟ್ ಮೇಲೆ ಮಲಗಲಾರದೇ ತುಕ್ರ ಎದ್ದು ಕುಳಿತುಕೊಂಡ. ಕಿಸೆಯಿಂದ ಬೆಲ್ಟ್ ತುಂಡಾಗಿರುವ ಟೈಟಾನ್ ಕಂಪನಿಯ ವಾಚ್ ತೆರೆದು ಗಂಟೆ ನೋಡಿಕೊಂಡ. ಇನ್ನೂ ಆರೂವರೆಯಷ್ಟೇ. ಏಳುವರೆಗೆ ಮೆಜೆಸ್ಟಿಕ್ಗೆ ತಲುಪುವುದಾಗಿ ಆತನಿಗೆ ಗೊತ್ತಿತ್ತು. ಈ ಚಳಿಯಲ್ಲಿ ಜನ ಹೇಗೆ ಬದುಕುತ್ತಾರಪ್ಪ ಅಂದುಕೊಳ್ಳುತ್ತ ರೈಲಿನ ಬಾಗಿಲ ಬಳಿ ಕುಳಿತುಕೊಂಡು ಒಂದು ಬೀಡಿಗೆ ಬೆಂಕಿ ಹಚ್ಚಿದ. ಒಳಗೆ ಹೊಗೆ ಪ್ರವೇಶಿಸಿದಾಗ ಮೈ ಒಂದಿಷ್ಟು ಬಿಸಿಯಾಗಿ ಹಾಯೆನಿಸಿತ್ತು. `ಸಾಬ್ ಬೀಡಿ’ ಅಂತ ಮುದುಕನೊಬ್ಬ ಇವನ ಪಕ್ಕ ಕುಳಿತುಕೊಂಡಾಗ ಅವನಿಗೂ ಒಂದು ತೆಗೆದುಕೊಟ್ಟ. ಆತ ಸಹ ಬಾಗಿಲ ಪಕ್ಕದಲ್ಲಿ ಇವನಿಗೆ ಒರಗಿ ಕುಳಿತ. ಸ್ವಲ್ಪ ಸಮಯವಾದಗ ಒಂದಿಷ್ಟು ತೂಕಡಿಕೆ ಬಂದಂತಾಗಿ ಅಲ್ಲಿಂದ ಎದ್ದು ಬಂದ ತುಕ್ರ ಸೀಟ್ನಲ್ಲಿ ಕುಳಿತುಕೊಂಡ.
****
ದಿನಾ ಕುಡಿದು ಬರುವುದನ್ನು ತುಕ್ರಾನ ಹೆಂಡತಿ ಕಮಲ ಆಕ್ಷೇಪಿಸುತ್ತಿದ್ದಳು. ಇದೇ ಕಾರಣಕ್ಕೆ ದಿನನಿತ್ಯ ಸಣ್ಣಪುಟ್ಟ ಜಗಳವೂ ಆಗುತ್ತಿತ್ತು. ನಿನ್ನೆ ರಾತ್ರಿ ಹೆಂಡತಿ ಏನೋ ಹೇಳಿದ್ದು ಇವನ ಪಿತ್ತವನ್ನು ನೆತ್ತಿಗೇರಿಸಿತ್ತು. ನೀನು ಒಬ್ಬಳೇ ಇಲ್ಲಿರು. ನಾನು ಮಗನಲ್ಲಿಗೆ ಹೋಗ್ತಿನಿ ಅಂದಾಗ ಕಮಲ ಮೊದಲು ಕುಡಿದ ಅಮಲಿಗೆ ಹೇಳುತ್ತಿದ್ದಾನೆ ಅಂದುಕೊಂಡಳು. ಕ್ವಿಂಟಾಲ್ ಅಕ್ಕಿ ತರಲೆಂದು ಕಪಾಟ್ನಲ್ಲಿಟ್ಟಿದ್ದ ಒಂದು ಸಾವಿರ ರೂಪಾಯಿಯನ್ನು ಕಿಸೆಗೆ ಹಾಕಿಕೊಂಡು ಅಂಗಿ ಹಾಕಿದಾಗ ಕಮಲ ಕಳವಳಗೊಂಡು ಕ್ಷಮೆ ಕೇಳಿದರೂ ತುಕ್ರ ಹಠ ಬಿಡಲಿಲ್ಲ. ಯಾಕೋ ಎಂದು ನೋಡಿರದ ಬೆಂಗಳೂರು ಕುಡಿದ ಅಮಲಿನಲ್ಲಿ ತುಕ್ರನಿಗೆ ಸುಂದರವಾಗಿ ಕಾಣಿಸಿತ್ತು. ಮತ್ತೆ ಒಂದಿಷ್ಟು ಜಗಳ ಮಾಡಿ ಸೀದಾ ಪುತ್ತೂರು ರೈಲ್ವೆ ಸ್ಟೇಷನ್ಗೆ ಬಂದಿದ್ದ. ಸ್ಟೇಷನ್ವರೆಗೆ ಹೂವಿನ ಅಂಗಡಿಯ ಗಡಂಗ್ ಗೆಳೆಯ ನಾರಾಯಣನನ್ನು ಕರೆದುಕೊಂಡು ಹೋಗಿದ್ದ.
**** ಮತ್ತಷ್ಟು ಓದು 












