ವಿಷಯದ ವಿವರಗಳಿಗೆ ದಾಟಿರಿ

Recent Articles

23
ಡಿಸೆ

ಕನ್ನಡ ಮಿಡಿಯಾ – ಎಡವುತ್ತಿರುವುದೆಲ್ಲಿ ?

ವಸಂತ ಶೆಟ್ಟಿ, ಬೆಂಗಳೂರು

ದಿನಾ ಓದೋ ಕನ್ನಡ ಪತ್ರಿಕೆಗಳಿರಬಹುದು (ವಿ.ಕ, ಪ್ರ.ವಾ,ಉ.ವಾ, ಕ.ಪ್ರ), ನೋಡೋ ಕನ್ನಡ ಸುದ್ದಿ ವಾಹಿನಿಗಳಿರಬಹುದು (ಟಿವಿ9, ಸುವರ್ಣ) ಇಲ್ಲವೇ ಕನ್ನಡದ ಮನರಂಜನೆ ಚಾನೆಲ್ ಗಳಿರಬಹುದು( ಜೀ ಕನ್ನಡ, ಕಸ್ತೂರಿ, ಈ ಟಿವಿ ಕನ್ನಡ, ಸುವರ್ಣ), ಇವರೆಲ್ಲರಲ್ಲಿ ಒಂದು ಸಾಮಾನ್ಯವಾದ ಅಂಶವೆಂದರೆ ಇವರಿಗಿರೋ ಹಿಂದಿ ಸಿನೆಮಾ, ಬಾಲಿವುಡ್ ಬಗೆಗಿನ ವಿಪರೀತ ಅಭಿಮಾನ. ಇವರ ಹಿಂದಿ ಸಿನೆಮಾ, ಹಾಡು, ನಟರ ಬಗೆಗಿನ disproportionate ಪ್ರಚಾರದ ವೈಖರಿ ನೋಡಿದವರಿಗೆ ಕರ್ನಾಟಕದಲ್ಲಿ ಹಿಂದಿ ಚಿತ್ರೋದ್ಯಮ ಕನ್ನಡಕ್ಕಿಂತ ದೊಡ್ಡದು ಅನ್ನುವಂತೆ ಅನ್ನಿಸುವ ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ. ಹಾಗಿದ್ರೆ ಇದೆಷ್ಟು ಸರಿಯಾದದ್ದು ?

ಮಾಧ್ಯಮದ ಮಂದಿಗೆ ಕೆಲವು ಪ್ರಶ್ನೆಗಳು

’ಹಿಂದಿ’ಗಿಂತ ’ಕನ್ನಡ’ದ ಮನರಂಜನೆ, ಕನ್ನಡ ಚಿತ್ರಗಳು ಗ್ರಾಹಕರಾಗಿ ಕನ್ನಡಿಗರ ಮನಸಿಗೆ ಹೆಚ್ಚು ಹತ್ತಿರ ಅನ್ನುವುದನ್ನು ಹಲವು ಹಿಟ್ ಚಿತ್ರಗಳು ( ಈ ವರ್ಷ ಜಾಕಿ, ಸೂಪರ್, ಪಂಚರಂಗಿ, ಆಪ್ತರಕ್ಷಕ, ಪೃಥ್ವಿ, ಕೃಷ್ಣನ್ ಲವ್ ಸ್ಟೋರಿ) ಸಾಬೀತು ಮಾಡಿದ್ದರೂ ಹಿಂದಿ ಚಿತ್ರಗಳ ಬಗ್ಗೆ ಕನ್ನಡದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಪ್ರಚಾರ ಇಂದಿಗೂ ಹಾಗೆಯೇ ಸಾಗಿದೆ. ಮತ್ತಷ್ಟು ಓದು »

22
ಡಿಸೆ

ಅಲೆಲ್ಲೆಲ್ಲೆ…. ಸಿಂಗ್ರಿ!

ಇರ್ಷಾದ್ ಎಂ.ವೇಣೂರು

ಸಿಂಗ್ರಿ ರೌಂಡ್ಸ್…

 ಬೆಳಿಗ್ಗೆ 8.15 ದಾಟಿದರೆ ಸಾಕು ಯಾವುದೇ ಕೆಲಸದಲ್ಲಿ ಬ್ಯೂಸಿ ಆಗಿರುವವರು ಟಿ.ವಿ ಮುಂದೆ ಹಾಜರಾಗ್ತಾರೆ. ಬೇರೆ ಯಾವುದೇ ಚಾನಲ್ ನೋಡ್ತಿರೋರು ಸುವರ್ಣ ನ್ಯೂಸ್ ಚಾನೆಲ್ ಗೆ ಜಂಪ್ ಆಗ್ತಾರೆ. 8 ಗಂಟೆಯ ನ್ಯೂಸ್ ಓದ್ತಿರೋ ಆಂಕರ್ ‘ಈಗ ಸಿಂಗ್ರಿ ರೌಂಡ್ಸ್ ಪ್ರಸಾರವಾಗತ್ತೆ, ಕ್ಷಣ ಕ್ಷಣದ ಸುದ್ದಿಗಾಗಿ ಸುವರ್ಣ ನ್ಯೂಸ್ 24X7 ನೋಡ್ತಾ ಇರಿ’ ಎಂದಾಗ ಟಿವಿ ಮುಂದೆ ಕೂತವರ ಮುಖದಲ್ಲಿ ಮಂದಹಾಸ ಬೀರುತ್ತೆ. ಇನ್ನು ಸಿಂಗ್ರಿ ಮ್ಯೂಸಿಕ್ ಬಂತು ಅಂದ್ರೆ ಮನೆ ಮಂದಿಯ ಕಣ್ಣೆಲ್ಲಾ ಟಿ.ವಿ ಪರದೆಯ ಮೇಲೆ ಬೀಳುತ್ತೆ!
ಹಿಂದಿನ ದಿನದ ಆಗು ಹೋಗುಗಳನ್ನು ತನ್ನದೇ ಆದ ಶೈಲಿಯಲ್ಲಿ ಉಣಬಡಿಸುವ ಸಿಂಗ್ರಿ ಎಲ್ಲರ ಅಚ್ಚುಮೆಚ್ಚು. ತೆರೆಯ ಮೇಲೆ ಕುಡುಕನೋರ್ವ 90 ಹಾಕ್ಕೊಂಡು ಗಾಳಿಯಲ್ಲಿ ತೂರಾಡ್ತಾ ಇರ್ತಾನೆ. ಅವನಿಗೆ ಸಾಥಿಯಾಗಿ ಕುಡುಕನ ವಾಯ್ಸ್ ರಾಜಕೀಯ – ಪ್ರಚಲಿತ ವಿದ್ಯಮಾನಗಳ ಬಗ್ಗೆ ತನ್ನ ಅನಿಸಿಕೆ ಹೇಳುತ್ತಾ ಹೋಗುತ್ತೆ. ಕೇವಲ ರಾಜಕೀಯದ ಸುತ್ತ ಮಾತ್ರ ಸಿಂಗ್ರಿ ರೌಂಡ್ ಹಾಕಲ್ಲ. ಕೆಲವೊಮ್ಮೆ ವಿಶಿಷ್ಟ ಸುದ್ದಿಗಳೂ ಅಲ್ಲಿರುತ್ತೆ! ಪ್ರತಿಯೊಂದು ಟಾಂಗ್ – ಟಾಂಟ್ ಮೂಲಕ ಚಾಟಿಯೇಟು ನೀಡಿದ ಬಳಿಕ ಹ್ಹಿಹ್ಹಿಹ್ಹಿ ಎಂಬ ಮಗುವಿನ ನಗು ಪ್ರೇಕ್ಷಕರ ಬಾಯಲ್ಲೂ ಪ್ರತಿಫಲನವಾಗುತ್ತೆ.
21
ಡಿಸೆ

ಅಪರಾಧ ಮತ್ತು ಶಿಕ್ಷೆ

ಅಜಕ್ಕಳ ಗಿರೀಶ ಭಟ್

 ಕ್ಷಮಿಸಿ, ನನ್ನ ಅಭಿಪ್ರಾಯ ಈಗಿನ ಬಹುತೇಕ ಜನರ ಅಭಿಪ್ರಾಯಕ್ಕಿಂತ ಬೇರೆಯಾಗಿದೆ. ಅದರಲ್ಲೂ ಮಾನವ ಹಕ್ಕಿನ ಬಗ್ಗೆ ಕಾಳಜಿ ಉಳ್ಳವರ ಮಟ್ಟಿಗಂತೂ ಅಮಾನವೀಯವಾಗಿ ಕಾಣುವಂತಿರಬಹುದು.ಇರಲಿ. ಅಪರಾಧಕ್ಕೆ ಶಿಕ್ಷೆ ಯಾಕೆ?ಈ ಪ್ರಶ್ನೆ ವಿಚಿತ್ರವಾಗಿ ಕಾಣಬಹುದು. ತುಂಬಾ ಜನ ಅಂದುಕೊಳ್ಳುವುದೇನೆಂದರೆ ಅಪರಾಧ ಮಾಡಿದ್ದಕ್ಕಾಗಿ ಶಿಕ್ಷೆ ಅಂತ. ವಾಸ್ತವವಾಗಿ ಶಿಕ್ಷೆ ಕೊಡಬೇಕಾದದ್ದು ಮತ್ತು ಕೊಡುವುದು ಆತ ಇನ್ನು ಮುಂದೆ ಅಪರಾಧ ಮಾಡಬಾರದು ಎಂದಷ್ಟೆ ಅಲ್ಲ .ಅದಕ್ಕಿಂತ ಮುಖ್ಯವಾಗಿ,ಅಂಥ ಅಪರಾಧಗಳನ್ನು ಬೇರೆಯವರು ಮಾಡಬಾರದು ಎಂಬ ಕಾರಣಕ್ಕಾಗಿ. ಹಾಗಾಗಿ ಅಪರಾಧದ ಪ್ರಮಾಣಕ್ಕೆ ಅನುಗುಣವಾಗಿ ಕಠಿಣ ಶಿಕ್ಷೆಯೇ ಆಗಬೇಕಾಗುತ್ತದೆ. ಭಿನ್ನಾಭಿಪ್ರಾಯ ಎಂದೆನಲ್ಲ, ಅದು ಜೈಲುಗಳ ಬಗ್ಗೆ. ಜೈಲುಗಳು ಕೆಟ್ಟ ಸ್ಥಿತಿಯಲ್ಲಿವೆಯೆಂದು ಎಲ್ಲರೂ ಬೊಬ್ಬೆ ಹೊಡೆಯುತ್ತಾರೆ.ಜೈಲುಗಳು ಇರಬೇಕಾದದ್ದೇ ಹಾಗೆ. ಅಲ್ಲದಿದ್ದರೆ ಅದು ಶಿಕ್ಷೆಯಾಗುವುದು ಹೇಗೆ? ವಿಚಾರಣಾಧೀನ ಕೈದಿಗಳಿಗೆ ಮಾತ್ರ ಒಳ್ಳೆ ವ್ಯವಸ್ಥೆಯಿರಬೇಕು ನಿಜ.ಹಾಗಾಗಿ ಅವರಿಗೆ ಬೇರೆಯೇ ಜೈಲುಗಳು ಬೇಕು.ಈ ಮಟ್ಟಿಗೆ ಜೈಲು ವ್ಯವಸ್ಥೆ ಸುಧಾರಣೆಯಾಗಬೇಕೆಂಬುದು ನಿಜ. ನ್ಯಾಯಾಲಯದಿಂದ ತಪ್ಪಿತಸ್ಥರೆಂದು ತೀರ್ಮಾನವಾದ ಕೈದಿಗಳಿಗೆ ಈಗಿರುವುದಕ್ಕಿಂತ ಕೆಟ್ಟ ಜೈಲುಗಳೇ ಬೇಕು. ಅವರಿಗೆ ನಾಟಕ ಅದು ಇದು ಮನರಂಜನೆ ಇತ್ಯಾದಿ ಇರಬಾರದು. ಅವರ ಮನಪರಿವರ್ತನೆ ಮಾಡಬೇಕು ಎಂಬುದೆಲ್ಲ ಬರೀ ಬೊಗಳೆ. ಹಾಗೆ ಮನಪರಿವರ್ತನೆ ಆಗಬೇಕಾದರೆ ಶಿಕ್ಷಿಸದೆ ಬಿಡುವುದೇ ಒಳ್ಳೆಯದು. ಮತ್ತಷ್ಟು ಓದು »

19
ಡಿಸೆ

ಭಾರತಕ್ಕೆ ರಾಹುಲ್ ಡೇಂಜರ್!

ರಾಕೇಶ್ ಶೆಟ್ಟಿ

’ಭಾರತಕ್ಕೆ ರಾಹುಲ್ ಡೇಂಜರ್!’ ಅನ್ನೋ ಹೇಳಿಕೆಯನ್ನ ಕೊಟ್ರೆ ಕಾಂಗ್ರೆಸ್ಸಿಗರು,ರಾಹುಲ್ ಅಭಿಮಾನಿಗಳಿಗೆ ನನ್ನ ಅಟ್ಟಾಡಿಸಿಕೊಂಡು ಹೊಡಿಬೇಕು ಅನ್ನಿಸೋದಿಲ್ವಾ? ಅವ್ರಿಗ್ ಯಾಕೆ ಬೇರೆಯವರಿಗೂ ಇದೆಂತ ಎಡಬಿಡಂಗಿ ಹೇಳಿಕೆ ಮಾರಾಯ? ಅಂತ ಅನ್ನಿಸ್ಬಹುದು.ಆದ್ರೆ,ಒಂದ್ನಿಮಿಷ ಕೆಳಗೆ ಓದಿಬಿಡೀಪ್ಪಾ 😉

ಜಗತ್ತಿನ ರಾಜತಾಂತ್ರಿಕರ ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಇಬ್ಬಗೆ ನೀತಿಯನ್ನ ಬಯಲು ಮಾಡುತ್ತ ಬಂದ ಜುಲಿಯನ್ ಅಸಾಂಜ್ನ ವಿಕಿಲೀಕ್ಸ್ ವರದಿಯಿಂದ ಈವರೆಗೂ ಭಾರತದಲ್ಲಿ ಅಂತ ಹಂಗಾಮವೇನು ಆಗಿರ್ಲಿಲ್ಲ,ಆದ್ರೆ ಮೊನ್ನೆ ಮೊನ್ನೆ ಕಾಂಗ್ರೆಸ್ಸಿನ ಪ್ರಧಾನಿ ರಾಹುಲ್ ಗಾಂಧಿ (ಸದ್ಯ! ಭಾರತದ ಪ್ರಧಾನಿ ಅಲ್ಲ! 😉 ) “ಮುಸ್ಲಿಂ ಉಗ್ರ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾದಂಥ ಸಂಘಟನೆಗಳಿಗೆ ಭಾರತದ ಕೆಲ ಮುಸ್ಲಿಂ ಸಂಘಟನೆಗಳಿಂದ ಬೆಂಬಲವಿದೆ. ಆದರೆ, ಅವರಿಗಿಂತ ಹಿಂದೂ ಉಗ್ರವಾದಿಗಳಿಂದ ಹೆಚ್ಚು ಆತಂಕವನ್ನು ಭಾರತ ಎದುರಿಸುತ್ತಿದೆ” ಅಂತ ಅಮೆರಿಕಾದ ರಾಜತಾಂತ್ರಿಕನ ಜೊತೆ ಹೇಳ್ಕೊಂಡಿದ್ರು ಅನ್ನೋ ಕೇಬಲ್ ಬಿಡುಗಡೆ ಮಾಡಿದಾಗ ನಂಗೂ ಮೇಲೆ ಹೇಳಿದಂತೆ ಅನ್ನಿಸಿತ್ತು,ಕಾಮನ್ ಸೆನ್ಸ್ ಇರೋ ಭಾರತದ ಬಹುತೇಕರಿಗೆ ರಾಹುಲ್ನ ಹೇಳಿಕೆಯು ಎಡಬಿಡಂಗಿತನದ್ದು ಅನ್ನಿಸಿರಿಬಹ್ದು. ಮತ್ತಷ್ಟು ಓದು »

19
ಡಿಸೆ

ಹೊಲಸು ತುಂಬಿದ ರಾಜಕೀಯವೂ….. ಮಹಿಳಾ ರಾಜಕೀಯದ ಹೊಸ ಬದಲಾವಣೆಯೂ…

-ಶಂಶೀರ್, ಬುಡೋಳಿ, ಪತ್ರಕರ್ತ

ನಿಮಗೆ ಇದನ್ನು ಹೇಳಲೇಬೇಕು. ಕರ್ನಾಟಕ ರಾಜ್ಯದಲ್ಲಿ ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಇರುವುದು ನಿಮಗೆ ತಿಳಿದಿರಬಹುದು. ಈ ಯೋಜನೆ ಕರ್ನಾಟಕದಲ್ಲಿ ಇನ್ನಷ್ಟೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಗೊಳ್ಳಬೇಕಷ್ಟೇ. ಹೀಗಾಗಿ ಈ ಯೋಜನೆಯ ಯಶಸ್ಸಿನ ಕುರಿತು ಈಗ ಮಾತನಾಡುವುದು ಔಚಿತ್ಯವಲ್ಲ. ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಮಹಿಳೆಯರು ಸ್ಥಳೀಯ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಹೊಸ ರಾಜಕೀಯದ ಭಾಷ್ಯಕ್ಕೆ ಮುನ್ನುಡಿ ಬರೆದರು. ಕಳೆದ ಚುನಾವಣೆ ಸಂದರ್ಭದಲ್ಲಿ ಕೇರಳದಲ್ಲಿ ಶೇಕಡಾ ೫೦ರಷ್ಟು ಮಹಿಳೆಯರು ಚುನಾವಣಾ ಕಣಕ್ಕಿಳಿದಿದ್ದರು. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ರೈತ ಮಹಿಳೆ, ಟೈಲರಿಂಗ್ ವೃತ್ತಿಯಲ್ಲಿರುವ , ಬೀದಿ ಬದಿ ವ್ಯಾಪಾರ ಮಾಡುವ, ಲೆಕ್ಕಪರಿಶೋಧಕಿಯರ ಜೊತೆಗೆ ಸ್ನಾತಕೋತ್ತರ ಪದಧರೆಯರು ಕೇರಳದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದವರು. ಇವರಲ್ಲಿ ಹೆಚ್ಚಿನವರು ಕೇರಳದಲ್ಲಿ ಬಹಳ ಯಶಸ್ಸನ್ನು ಗಳಿಸಿಕೊಂಡಿರುವ ಕುಟುಂಬಶ್ರೀ ಯೋಜನೆಯಡಿಯಲ್ಲಿ ಪಳಗಿದವರಾಗಿದ್ದಾರೆ. ವಿವಿಧ ಪಕ್ಷಗಳಲ್ಲಿ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕೇರಳಿ ಮಹಿಳೆಯರು ಹೊಸ ರಾಜಕೀಯದ ಭಾಷ್ಯ ಬರೆಯುವತ್ತ ದಾಪುಗಾಲು ಇಟ್ಟಿದ್ದಾರೆ ಎಂದು ಹೇಳಬಹುದು. ಮತ್ತಷ್ಟು ಓದು »

18
ಡಿಸೆ

ಸಾವನ್ನು ನಾಚಿಸಿದ ರ್ಯಾಂಡಿ!

– ಸುಪ್ರೀತ್.ಕೆ.ಎಸ್

‘ದಿ ಲಾಸ್ಟ್ ಲೆಕ್ಚರ್’ ಎಂಬ ಹೆಸರಿನಲ್ಲಿ ಕಾರ್ನೆಗಿ ಮೆಲ್ಲನ್ ವಿಶ್ವವಿದ್ಯಾಲಯ ಉಪನ್ಯಾಸ ಸರಣಿಯನ್ನು ಏರ್ಪಡಿಸುತ್ತದೆ. ವರ್ಷಕ್ಕೊಬ್ಬರ ಹಾಗೆ ತನ್ನ ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರು ‘ಇದೇ ತಮ್ಮ ಬದುಕಿನ ಕಟ್ಟ ಕಡೆಯ ಉಪನ್ಯಾಸ’ ಎಂದು ಕಲ್ಪಿಸಿಕೊಂಡು ವಿದ್ಯಾರ್ಥಿಗಳಿಗೆ ಲೆಕ್ಚರ್ ಕೊಡಬೇಕು. ತಾವು ತಮ್ಮ ಬದುಕಿನ ಅಂತಿಮ ಘಟ್ಟದಲ್ಲಿ ನಿಂತಾಗ ತಮಗೆ ತಮ್ಮಿಡೀ ಬದುಕಿನಲ್ಲಿ ಬಹುಮುಖ್ಯವಾಗಿ ಕಾಣುವ ಸಂಗತಿಗಳ್ಯಾವುವು ಎಂಬ ವಿವೇಚನೆ ನಡೆಸಲು ಅಧ್ಯಾಕಪರಿಗೆ ಇದು ಅವಕಾಶ ಮಾಡಿಕೊಟ್ಟರೆ, ಅಕಾಡೆಮಿಕ್ ಮುಖವಾಡದಾಚೆಗಿನ ತಮ್ಮ ಲೆಕ್ಚರರ ವ್ಯಕ್ತಿತ್ವದ ಪರಿಚಯ ವಿದ್ಯಾರ್ಥಿಗಳಿಕ್ಕೆ ಸಿಕ್ಕುತ್ತದೆ ಎಂಬ ಉದ್ದೇಶ ವಿಶ್ವವಿದ್ಯಾಲಯದ್ದು .

ಸೆಪ್ಟೆಂಬರ್ ಹದಿನೆಂಟು ೨೦೦೭ರಂದು ‘ದಿ ಲಾಸ್ಟ್ ಲೆಕ್ಚರ್’ ಸರಣಿಯಲ್ಲಿ ಉಪನ್ಯಾಸ ನೀಡಿದವರು ಮೆಲಾನ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಬೋಧಿಸುತ್ತಿದ್ದ ರಾಂಡಾಲ್ಫ್ ಫೆಡ್ರರಿಕ್ ಪೌಚ್. ಅವರ ಉಪನ್ಯಾಸ ಸಾಮಾನ್ಯವಾದುದಾಗಿರಲಿಲ್ಲ. ಉಳಿದೆಲ್ಲಾ ಅಧ್ಯಾಪಕರು ಅದು ತಮ್ಮ ಬದುಕಿನ ಕಟ್ಟ ಕಡೆಯ ಉಪನ್ಯಾಸ ಎಂದು ‘ಕಲ್ಪಿಸಿ’ಕೊಂಡು ಮಾತಾಡಿದ್ದರೆ ರ್‍ಯಾಂಡಿಗೆ ಅದು ನಿಜಕ್ಕೂ ಕಟ್ಟ ಕಡೆಯ ಉಪನ್ಯಾಸವಾಗಿತ್ತು. ಭಾಷಣ ನೀಡುವ ಹೊತ್ತಿಗೆ ಆತ ದೇಹದಲ್ಲಿ ಮನೆ ಮಾಡಿಕೊಂಡಿದ್ದ ಯಕೃತ್ತಿನ ಕ್ಯಾನ್ಸರ್ ಅಂತಿಮ ಘಟ್ಟದಲ್ಲಿತ್ತು. ಆತನಿಗೆ ಹೆಚ್ಚೆಂದರೆ ಆರು ತಿಂಗಳು ಬದುಕುವ ಅವಕಾಶವನ್ನು ನೀಡಿತ್ತು ಕ್ಯಾನ್ಸರ್. ಸಾವಿನ ಸಮ್ಮುಖದಲ್ಲಿ ನಿಂತಂತೆ ಕಲ್ಪಿಸಿಕೊಂಡು ಉಪನ್ಯಾಸ ಕೊಡುವುದು ಬೇರೆ. ಆದರೆ ಸಾವು ಡೇಟು ಕೊಟ್ಟು ಹೋದ ನಂತರ ತನ್ನ ಬದುಕಿನ ಬಗ್ಗೆ ಮಾತನಾಡುವುದು ಬೇರೆ.ಹಾಗೆ ಮಾತಾಡುವ ಮನುಷ್ಯನಲ್ಲಿ ಅದಮ್ಯ ಜೀವನೋತ್ಸಾಹ, ಆತ್ಮವಿಶ್ವಾಸ ಇರಬೇಕಾಗುತ್ತದೆ. ಅವೆಲ್ಲವೂ ರ್‍ಯಾಂಡಿಯಲ್ಲಿದ್ದವು. ಮತ್ತಷ್ಟು ಓದು »

17
ಡಿಸೆ

ಲಲಿತ ಪ್ರಬಂಧ: ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!

ಸುಪ್ರೀತ್ ಕೆ ಎಸ್

‘ಎಷ್ಟನೆ ಸಲದ ದಂಡ ಯಾತ್ರೆಯಪ್ಪಾ ಇದು?’ ಹಾಗಂತ ಕಾಫಿಗೆ ಕರೆಯುವ ಗೆಳೆಯರನ್ನು ರೇಗಿಸುತ್ತಿರುತ್ತೇನೆ. ಹಾಸ್ಟೆಲ್ಲಿನ ಹುಡುಗರು ಕಾಫಿಗೆ ಹೋಗುವ ಸಂಭ್ರಮವೇ ಬೇರೆ. ಬೆಳಿಗಿನ ಚಳಿಯಲ್ಲಿ ಧೈರ್ಯ ಮಾಡಿ ಎದ್ದವರು ಮಾಡಿಟ್ಟ ಕಾಫಿಯನ್ನು ತಮ್ಮ ಕೆಪಾಸಿಟಿಗೆ ತಕ್ಕಂತ ಹೀರಿಬಿಟ್ಟಿರುತ್ತರಾದ್ದರಿಂದ ನನ್ನಂಥ ಸೂರ್ಯದ್ವೇಷಿಗಳಿಗೆ, ಏಳು ಗಂಟೆಯ ಮೊದಲು ಎದ್ದು ಬಿಡುವುದು ನೈತಿಕ ಅಧಃಪಥನ ಎಂದು ಭಾವಿಸಿರುವವರಿಗೆ ಖಾಲಿ ಕಾಫಿ ಜಗ್ ಮಾತ್ರ ಕಾದಿರುತ್ತದೆ!

ಎಲ್ಲಾ ಹುಡುಗರು ಇದ್ದಾಗ ಹಾಸ್ಟೆಲ್ಲಿನ ವಾತಾವರಣ ಕಲಕಲ ಎನ್ನುತ್ತಿರುತ್ತದೆ. ಎಲ್ಲರಿಗೂ ಕಾಲೇಜು ರಜೆಯಿದ್ದರೆ, ಇಲ್ಲವೇ ಪರೀಕ್ಷೆಗಳಿಗೆ ಓದಲು ಕಾಲೇಜಿನವರೇ ರಜೆ ಕರುಣಿಸಿ ಓಡಿಸಿದ್ದರೆ ಕಾಫಿ ಟೀ ಕುಡಿಯಲು ಸಮೀಪದ ಕಾಫಿ ಬಾರ್‌ಗೆ ದಂಡು ದಂಡು ಸಮೇತ ಲಗ್ಗೆ ಹಾಕುವುದನ್ನು ನೋಡುವುದು ಕಣ್ಣಿಗೆ ಹಬ್ಬ. ಬೆಳಗಿನ ತಿಂಡಿ ಮುಗಿಸಿಕೊಂಡ ನಂತರ ಒಂದು ಸುತ್ತು, ಮಧ್ಯಾನದ ಊಟಕ್ಕೂ, ತಿಂಡಿಗೂ ನಡುವಿನ ಸಮಯದಲ್ಲಿ ಓದಿ ಓದಿ ಸುಸ್ತಾದವರಿಗಾಗಿ ಒಂದು ಸುತ್ತು, ಮಧ್ಯಾನದ ಊಟ ಮುಗಿಸಿ ಗಡದ್ದಾಗಿ ನಿದ್ದೆ ಹೊಡೆದು ಸಂಜೆಗೆ ಎದ್ದು ಒಂದು ಸುತ್ತು, ರಾತ್ರಿ ಊಟವಾದ ಮೇಲೆ ಓದುತ್ತಾ ಕೂರಲು ಎನರ್ಜಿ ಬೇಕಾದವರದ್ದು ಒಂದು ಸುತ್ತು ಕಾಫಿ ಬಾರ್ ಪರ್ಯಟನೆ- ಇದು ನಮ್ಮ ದೈನಂದಿನ ಅವಿಭಾಜ್ಯ ಅಂಗ. ಕೆಲವೊಮ್ಮೆ ಕಾಲೇಜು ಗೆಳೆಯರು ನಮ್ಮ ಭೇಟಿಗೆ ಹಾಸ್ಟೆಲ್ಲಿಗೇ ಬಂದಾಗ, ಒಲ್ಲದ ಅತಿಥಿ ರೂಮಿನಲ್ಲಿ ಒಕ್ಕರಿಸಿಕೊಂಡು ಕೊರೆತದಿಂದ ರೋಧನೆ ಕೊಡುವಾಗ ಅವನನ್ನು ಸಾಗಿ ಹಾಕಲು ಈ ‘ಕಾಫಿ’ ಆಪದ್ಭಾಂದವನ ಹಾಗೆ ನೆರವಿಗೆ ಬರುವುದೂ ಇದೆ. ಮತ್ತಷ್ಟು ಓದು »

15
ಡಿಸೆ

ಕೋರೆ-ಷಡಕ್ಷರಿ-ಮಯ್ಯ ಶುರು ಮಾಡ್ತಾರಂತೆ ಸುವರ್ಣ ಕರ್ನಾಟಕ…ಹೌದಾ?

ಆತ್ರಾಡಿ ಸುರೇಶ ಹೆಗ್ಡೆ

ಹೌದು ಸುದ್ದಿಮನೆಯ ಸುತ್ತುಮುತ್ತಲಿಂದ, ಹೊಸ ಹೊಸ ಗಾಳಿ ಸುದ್ದಿಗಳು, ದಿನದಿಂದ ದಿನಕ್ಕೆ ಹೊಸ ಹೊಸ ಸಂಗತಿಗಳೊಂದಿಗೆ, ಯಾವುದೇ ಲಂಗು ಲಗಾಮಿಲ್ಲದೇ ತೇಲಿಬರುತ್ತಿವೆ.

ನಿನ್ನೆ ಸಂಜೆ ವಿಶೇಷವಾಗಿ ನನ್ನ ಕಿವಿಗಳಿಗೆ ಕೇಳಿಸಿದ ಪಿಸುಮಾತುಗಳ ಪ್ರಕಾರ, ವಿಜಯ ಕರ್ನಾಟಕದ ಮಾಜಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ನವದೆಹಲಿಯಿಂದ ಬೆಂಗಳೂರಿಗೆ, ಹೊಸ ಸುದ್ದಿಯೊಂದನ್ನು, ಹೊಸ ಯೋಜನೆಯೊಂದರ ರೂಪುರೇಷೆಯನ್ನು ಗುಟ್ಟಾಗಿ ಹಿಡಿದುಕೊಂಡು ಬಂದಿರುತ್ತಾರಂತೆ.

ವಿಜಯ ಸಂಕೇಶ್ವರರ “ಆನಂದ ಕರ್ನಾಟಕ”ದ ಯೋಜನೆಗಳು ಪ್ರಾಥಮಿಕ ಹಂತದಲ್ಲಿ ಇರುವಾಗಲೇ, ಉದ್ಯಮಿ ಹಾಗೂ ಸಂಸದ ಪ್ರಭಾಕರ ಕೋರೆಯವರು ಮೀನಿಗೆ ಗಾಳ ಬೀಸಿದ್ದಾರೆ ಎನ್ನುವ ಸುದ್ದಿ ಇದೆ.

ಅಣಿಮುತ್ತುಗಳನ್ನು ದಿನವೂ ಉಣಬಡಿಸುವ ಷಡಕ್ಷರಿಯವರು ಮತ್ತು ಹೊಸ ಹೊಸ ಅಡುಗೆಗಳನ್ನು ಉಣಬಡಿಸುವ ಮಯ್ಯರವರನ್ನು ಸೇರಿಸಿಕೊಂಡು, ಕೋರೆಯವರು ಸುಮಾರು ೬೦-೭೦ ಕೋಟಿ ರೂಪಾಯಿಗಳ ಯೋಜನೆಯೊಂದನ್ನು ಭಟ್ಟರ ಮುಂದಿಟ್ಟಿದ್ದಾರಂತೆ. ಆ ಯೋಜನೆಯ ಪ್ರಕಾರ “ಸುವರ್ಣ ಕರ್ನಾಟಕ” ಅನ್ನುವ ಹೊಸ ದಿನಪತ್ರಿಕೆ ಈ ನಾಡಿನ ಪತ್ರಿಕಾ ರಂಗದಲ್ಲಿ ಸದ್ಯದಲ್ಲೇ ಸಂಚಲನ ಹೊರಡಿಸಲಿದೆಯಂತೆ. ಮತ್ತಷ್ಟು ಓದು »

15
ಡಿಸೆ

೧೨ ವರ್ಷದ ಪೋರ ಅಲೆಕ್ಸ್ ಮಿಲ್ಲರ್ ನ ಕಥೆ

ಓಂಶಿವಪ್ರಕಾಶ್ ಎಚ್. ಎಲ್.

ಸ್ಕೂಲ್ ಮೆಟ್ಟಿಲೇರುತ್ತ, ಸಣ್ಣ ಪುಟ್ಟ ಲೆಕ್ಕ ಪಾಠಗಳನ್ನು ಕಲಿಯುತ್ತ, ೧೨ನೇ ವರ್ಷದ ಆಸುಪಾಸಿಗೆ ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುತ್ತ ಬೆಳೆದ ನನ್ನ, ನಿಮ್ಮಂತಹವರ ಕಥೆ ಹಳೆಯದಾಯಿತು ಬಿಡಿ. ವಿಶ್ವವ್ಯಾಪಿ ತನ್ನ ಚಾಚನ್ನು ಹರಿಸಿರುವ ಕಂಪ್ಯೂಟರು,  ಕೀಲಿಮಣೆಯ ಮೇಲೆಯೇ ಸಂಪರ್ಕವನ್ನು ನೀಡುವ ಇಂಟರ್ನೆಟ್ ಇರುವ ಈ ಶತಮಾನದಲ್ಲಿ, ಅಪ್ಪ ಅಮ್ಮಂದಿರನ್ನೂ ಮೀರಿಸಿ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಳ್ಳುತ್ತಿರುವ ಅನೇಕರು ಇಂದು ನಮ್ಮ ಸುತ್ತಮುತ್ತಲಿದ್ದಾರೆ. ವಿಸ್ಮಯಗಳ ಲೋಕದಲ್ಲಿ ಇದೂ ಒಂದು. ಆಗಾಗ್ಗೆ ಹೀಗೆ ನಮ್ಮ ಮಧ್ಯೆ ಕಂಡು ಬರುವ ಇಂತಹವರು ನಮ್ಮ ಹುಡುಗರಿಗೂ ಒಂದಿಷ್ಟು ಸ್ಪೂರ್ತಿಯಾಗಲಿ, ಜೊತೆಗೆ ವೇಳೆ, ತಂತ್ರಜ್ಞಾನ, ಸೌಲಭ್ಯಗಳ ಕೊರತೆ ಇವುಗಳ ಮಧ್ಯೆ ಇದು ನಮ್ಮವರಿಗೆ ಹೊರೆಯೂ ಆಗದಿರಲಿ.

ಈ ಕಥೆ ೧೨ ವರ್ಷದ ಪೋರ ಅಲೆಕ್ಸ್ ಗ್ಲೆನ್ ನದ್ದು. ಪೋರನಾಗಿದ್ದರೂ ಈತ ಸಾಮಾನ್ಯನಲ್ಲ. ಇಂಟರ್ನೆಟ್ ಬ್ರೌಸ್ ಮಾಡಲು ಬಳಸುವ ಮೋಜಿಲ್ಲಾ ಫೈರ್ ಫಾಕ್ಸ್ ನ ಸುರಕ್ಷತೆಯ ಕೊರತೆಗಳನ್ನು ಹೆಕ್ಕಿ ತೆಗೆಯುವುದು ಈತನ ಹವ್ಯಾಸ.  ಎರಡು ವಾರಗಳ ಇವನದೊಂದು ಹುಡುಕು ೩೦೦೦$ ಗಳನ್ನು ನಿರಾಯಾಸವಾಗಿ ಮೋಜಿಲ್ಲಾ ಫೌಂಡೇಶನ್ ನಿಂದ ಸಂಪಾದಿಸುವಂತೆ ಮಾಡಿದೆ.

ಸುರಕ್ಷತೆಗೆ ಪ್ರಾಶಸ್ತ್ಯ ನೀಡುವ ಸಾಪ್ಟ್ವೇರ್ ಕಂಪೆನಿಗಳು, ತಮ್ಮ ತಂತ್ರಾಂಶದ ಸುರಕ್ಷತೆಯ ಕೊರತೆಯ ಬಗ್ಗೆ ಸುಳಿವನ್ನು ನೀಡುವವರಿಗೆ ಡಾಲರುಗಳ ಮೊತ್ತದಲ್ಲಿ ಇನಾಮು ನೀಡುತ್ತವೆ. ಇದೇ ಯುನಿವರ್ಸಿಟಿ ಪ್ರೆಪ್ ಅಕ್ಯಾಡೆಮಿಯಲ್ಲಿ ೭ನೇ ಇಯತ್ತೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಲೆಕ್ಸ್ ಗೆ ಪ್ರೇರೇಪಣೆ. ತನ್ನ ಕಂಪ್ಯೂಟರಿನ ಬ್ರೌಸರ್ ನಲ್ಲೇ ಇರಬಹುದೇ ಕೊರತೆ ಎಂದು ಇವನು ಪ್ರತಿದಿನ ೯೦ ನಿಮಿಷಗಳಷ್ಟು ಹೊತ್ತು ನೆಡೆಸಿದ ಸಂಶೋಧನೆ ಕೊನೆಗೂ ಫಲ ನೀಡಿದೆ. ಕಂಪ್ಯೂಟರಿನ ಸೃತಿಯಲ್ಲಿನ ಒಂದು ದೋಷವನ್ನು ಕಂಡುಹಿಡಿದ ಈತನ ಸಾಧನೆ ಸಾಮಾನ್ಯವಾದುದ್ದಲ್ಲ ಮತ್ತು ಇಂತಹ ನ್ಯೂನ್ಯತೆಯನ್ನು ಕಂಡು ಹಿಡಿಯುವುದು ನಿಷ್ಣಾತರಿಗೇ ಸೈ ಎಂದು ಮೋಜಿಲ್ಲಾದ ಸೆಕ್ಯೂರಿಟಿ ಕಾರ್ಯಕ್ರಮದ ನಿರ್ವಾಹಕ ಹೇಳುತ್ತಾರೆ. ಮತ್ತಷ್ಟು ಓದು »

14
ಡಿಸೆ

ಭೈರಪ್ಪ ಮತ್ತು ತರ್ಲೆ ರಾಜ್ಯ ರಾಜಕೀಯ…

-ಶಂಶೀರ್, ಬುಡೋಳಿ

ಇವರೆಗೆ ನೀವು  ಜೆಡಿ‌ಎಸ್, ಕಾಂಗ್ರೆಸ್ಸನ್ನು ಬಿಜೆಪಿ ತಮ್ಮ ತರಲೆ ಮನೋಸ್ಥಿತಿಯ ಮೂಲಕ ತರಾಟೆಗೆ ತೆಗೆದುಕೊಂಡಿರುವುದನ್ನು ನೋಡಿರಬಹುದು. ಆದರೆ ಈಗ ನಡೆದಿರುವುದು ವಿಶೇಷವೇನೂ ಅಲ್ಲವಾದರೂ ರಾಜಕೀಯ ವ್ಯಕ್ತಿಯಲ್ಲದ, ರಾಜಕೀಯ ಪರ ಮಾತನಾಡುವ ಸಾಹಿತಿಯೊಬ್ಬರು ತಮ್ಮ ಮನೋಸ್ಥಿತಿಯನ್ನು, ಕೋಮುವಾದಿ ಸಾಹಿತಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕನ್ನಡ ಸಾಹಿತಿ ಎಸ್.ಎಲ್.ಭೈರಪ್ಪ ಹೊರಗೆಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.

ಹೆಚ್ಚಿನದಾಗಿ ತಮ್ಮ ಕೃತಿಗಳಲ್ಲಿ ಜಾತಿ, ಧರ್ಮಗಳ ಬಗ್ಗೆ ಮಾತನಾಡುತ್ತಿದ್ದ ಭೈರಪ್ಪನವರು, ಏಕಾ‌ಏಕಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರ ಹೊತ್ತಿನಲ್ಲಿ ಗುಜರಾತ್ ಮಾದರಿ ರಾಜಕೀಯವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರವನ್ನು ಬೆಂಬಲಿಸಬೇಕೆಂದು ಪರೋಕ್ಷವಾಗಿ ಕರೆ ಕೊಟ್ಟಿದ್ದಾರೆ. ತಾನು ವಾಸಿಸುವ, ಜನ್ಮ ತಾಳಿದ ಕರ್ನಾಟಕದ  ರಾಜ್ಯದ ಜನರ ಮನಸ್ಥಿತಿಯನ್ನು ತರಲೆಗೆ ಹೊಲಿಸಿರುವ ಇಂತಹವರನ್ನು ಏನೆನ್ನಬೇಕು? ಕರ್ನಾಟಕ ರಾಜ್ಯದ ಜನರ ತರ‍್ಲೆ  ಮನೋಸ್ಥಿತಿಯೇ  ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗಿದೆ ಎಂದು ಇವರು ಹೇಳಿದ್ದು ತಪ್ಪಾಗಿದೆ ಎಂದೆನಿಸುತ್ತದೆ. ನಿಜವಾದ ಕಾರಣವೆಂದರೆ ರಾಜ್ಯ ಸಚಿವ ಸಂಪುಟದ ತರ‍್ಲೆ ಮನೋಸ್ಥಿತಿಯೆ ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಬೇಕಾಗಿತ್ತು. ಆದರೆ ಭೈರಪ್ಪನವರು ಬೇಕೆಂತಲೂ ಅಥವಾ ಗೊತ್ತಿಲ್ಲದೆಯೋ ಇಂತಹ ಹೇಳಿಕೆ  ಕೊಡುವ ಮೂಲಕ ಮತ್ತೊಮ್ಮೆ ತಮ್ಮ ಮನೋಸ್ಥಿತಿಯ ಅತಂತ್ರತೆಯನ್ನು ಬಿಚ್ಚಿಟ್ಟಿದ್ದಾರೆ ಎಂದೆನಿಸುತ್ತದೆ. ಮತ್ತಷ್ಟು ಓದು »