ವಿಷಯದ ವಿವರಗಳಿಗೆ ದಾಟಿರಿ

Recent Articles

11
ಜನ

ಅಪ್ರಾಮಾಣಿಕ, ಅವಕಾಶವಾದಿ, ಆಷಾಡಭೂತಿ ಪ್ರಗತಿಪರರು : ಭಾಗ ೧

– ಪ್ರೇಮ ಶೇಖರ

ಅಯ್ಯೋ!  ನಮ್ಮ ರಾಜ ಹೀಗೇಕೆ ಬೆತ್ತಲಾಗಿದ್ದಾನೆ?

ಖಾಲಿ ತಲೆಮನುಷ್ಯನ ಕ್ಷುದ್ರತನದ ಬಗ್ಗೆ ಮಾತಾಡುವುದು, ಬರೆಯುವುದು ನನಗೆ ಖುಶಿ ನೀಡದ ಸಂಗತಿ.  ಆದರೆ ಒಬ್ಬ ಅಂಕಣಕಾರನಾಗಿ ವೈವಿಧ್ಯಮಯ ವಸ್ತುವಿಷಯಗಳಲ್ಲಿ ನಾನು ಕೈಯಾಡಿಸ- ಬೇಕಾಗುತ್ತದೆ. ಇದು ಅಗತ್ಯವಾಗುವುದು ಬರಹಗಳ ಸಮಕಾಲೀನತೆ, ಉಪಯುಕ್ತತೆ ಹಾಗೂ ಒಟ್ಟಾರೆ ನಿರಂತರ ಚಲನಶೀಲ ಬೌದ್ಧಿಕ ಬೆಳವಣಿಗೆಯ ಪ್ರಕ್ರಿಯೆಗೆ ಅವುಗಳ ಕೊಡುಗೆಯ ಕುರಿತಾದ ನಿರೀಕ್ಷೆಗಳಿಗನುಗುಣವಾಗಿ.  ಈ ‘ನಿರೀಕ್ಷೆ’ಗಳನ್ನು ಪರಿಗಣಿಸಿ ಇಂದು ನಾನು ವಿಶ್ಲೇಷಣೆಗೆತ್ತಿಕೊಳ್ಳುತ್ತಿರುವ ವಿಷಯ ಇಂಗ್ಲಿಷ್ನಲ್ಲಿ Political Correctiveness ಅಥವಾ “Political Correctitude” ಮತ್ತು ಇವೆರಡನ್ನೂ ಚಿಕ್ಕದಾಗಿಸಿ PC ಎಂದು ಕರೆಯಲಾಗುವ ಮನುಷ್ಯಸ್ವಭಾವ.ಇದು ಸಂಭಾಷಣೆಯಲ್ಲಿ ಹಾಗೂ ಬರವಣಿಗೆಯಲ್ಲಿ “politically correct” ಆಗಿ ಮಾತಾಡುವುದು, “ಜಾಣತನದ ಹೇಳಿಕೆ ನೀಡುವುದು” ಎಂದು ಬಳಕೆಯಾಗುತ್ತದೆ.  ಇದು ಸೂಚಿಸುವ “ವಾಸ್ತವವನ್ನು, ನಿಜವನ್ನು ಮರೆಮಾಚುವುದು” ಎಂಬ ಅರ್ಥವಂತೂ ಈ ದಿನದ ವಾಸ್ತವವನ್ನು ಢಾಳಾಗಿ ಪ್ರತಿಬಿಂಬಿಸುತ್ತದೆ.

ಈ PCಯ ಮೂಲವನ್ನು ಶೋಧಿಸಹೊರಟರೆ ನಾವು ಸ್ಟ್ಯಾಲಿನ್ ಯುಗಕ್ಕೆ ಹೋಗಿ ನಿಲ್ಲುತ್ತೇವೆ.ಆತನ ಕಮ್ಯೂನಿಸ್ಟ್ ಸರಕಾರ ಏನೇ ಮಾಡಿದರೂ ಅದೆಲ್ಲವೂ ಸರಿಯೇ ಎಂದು ವಾದಿಸುವ ಪರಿಪಾಠ ಮೂವತ್ತರ ದಶಕದಲ್ಲಿ ಸೋವಿಯೆತ್ ಯೂನಿಯನ್ನಲ್ಲಿ ಕಾಣಿಸಿಕೊಂಡಿತು.  ಇದು ಅವಾಸ್ತವಿಕ ವರ್ತನೆಯೇನೋ ನಿಜ, ಆದರೆ ಇದರ ಹಿಂದಿದ್ದ ಸದಾಶಯವನ್ನು ನಾವು ಗುರುತಿಸಲೇಬೇಕು.ಸ್ಟ್ಯಾಲಿನ್ನ ನೀತಿಗಳು ಆ ದಿನಕ್ಕೆ ತಪ್ಪಾಗಿ, ಕ್ರೂರವಾಗಿ ಕಂಡರೂ, ಭವಿಷ್ಯದಲ್ಲಿ ಒಟ್ಟಾರೆ ಸಮಾಜದ ಹಿತದೃಷ್ಟಿಯಿಂದ ಸರಿಯಾಗಿಯೇ ಇವೆ ಎಂಬ ಸದಾಶಯ ಅದಾಗಿತ್ತು.  ಯುದ್ಧಕಾಲದಲ್ಲಿ ಅದು ಅಮೆರಿಕಾಗೂ ತಲುಪಿತು.ಜರ್ಮನ್ ಪೈಶಾಚಿಕ ಧಾಳಿಯ ವಿರುದ್ಧ ಮಹಾನ್ ದೇಶಾಭಿಮಾನಿ ಯುದ್ಧದಲ್ಲಿ ಧೀಮಂತವಾಗಿ ಸೆಣಸುತ್ತಿದ್ದ ಸೋವಿಯೆತ್ ಯೂನಿಯನ್, ಆ ಮೂಲಕ ಅಮೆರಿಕಾಗೆ ಸ್ಟ್ಯಾಲಿನ್ ನೀಡುತ್ತಿದ್ದ ಸಹಕಾರ ಅಮೆರಿಕನ್ ಬುದ್ಧಿಜೀವಿಗಳಿಗೆ, ಮಾಧ್ಯಮದ ಒಂದು ವರ್ಗಕ್ಕೆ ಪ್ರಿಯವಾದದ್ದು ಸಹಜವೇ.  ಆದರೆ ಎಡಪಂಥೀಯ ಬುದ್ಧಿಜೀವಿಗಳು ಇದನ್ನು ಅತಿಯಾಗಿ ಉಪಯೋಗಿಸತೊಡಗಿ ಎಲ್ಲ ವಿಷಯದಲ್ಲೂ “politically correct” ಆಗಿ ಮಾತಾಡುವುದು ಅಂದರೆ ಜಾಣತನದ ಹೇಳಿಕೆ ನೀಡುವುದು ಅವರ ಅಭ್ಯಾಸವಾಗಿಹೋಯಿತು.ಇದು ಮುಖ್ಯವಾಹಿನಿ ಮಾಧ್ಯಮದಲ್ಲೂ ಪ್ರಧಾನವಾಗಿ ಕಾಣಿಸಿಕೊಳ್ಳಲು ಹೆಚ್ಚುಕಾಲ ಬೇಕಾಗಲಿಲ್ಲ.  ಅಂದರೆ ವಾಸ್ತವಕ್ಕೆ ವಿರುದ್ಧವಾಗಿ ಮಾತಾಡುವುದು, ಅದೇ ಪರಮಸತ್ಯವೆಂದು ವಾದಿಸುವುದು ಬುದ್ಧಿಜೀವಿ ವರ್ಗದ ಜಾಯಮಾನವಾಗಿಹೋಯಿತು.ಅತಿಯಾದರೆ ಹಾಲೂ ಹಾಲಾಹಲವಾಗುತ್ತದಂತೆ.  PC ವಿಷಯದಲ್ಲಿ ಆದದ್ದೂ ಅದೇ.

ಮತ್ತಷ್ಟು ಓದು »

8
ಜನ

ಫ್ರೀ ಬೇಸಿಕ್ಸ್ ಅಸಲಿತನ

– ಲಹರಿ ಎಂ.ಹೆಚ್

ನೆಟ್ ನ್ಯೂಟ್ರಾಲಿಟಿಆ ಆಫೀಸಲ್ಲಿ ನಿಯಮವೊಂದಿತ್ತು. ಯಾರಾದರೂ ಕೆಲಸಕ್ಕೆ ರಜಾ ಹಾಕಿದ್ದಲ್ಲಿ ರಜಾ ಮುಗಿಸಿ ಕೆಲಸಕ್ಕೆ ಮರಳಿದ ನಂತರ ಅದಕ್ಕೆ ಕಾರಣವನ್ನು ಪುಸ್ತಕವೊಂದರಲ್ಲಿ ನಮೂದಿಸಬೇಕಾಗಿತ್ತು. ಒಮ್ಮೆ ಒಬ್ಬಳು ಮಹಿಳಾ ಉದ್ಯೋಗಿ ಮೂರು ದಿನಗಳ ರಜಾ ತೆಗೆದುಕೊಂಡಿದ್ದಳು. ಕೆಲಸಕ್ಕೆ ಮರಳಿದ ದಿನವೇ ಅವಳು ಪುಸ್ತಕದಲ್ಲಿ ಕಾರಣವನ್ನು ನಮೂದಿಸಿದಳು, ‘ಮುಟ್ಟಿನಿಂದಾಗಿ ಹೊಟ್ಟೆ ನೋವು’.

ಆ ಅವಧಿಯಲ್ಲಿ ಬೇರೆ ಕೆಲವು ಉದ್ಯೋಗಿಗಳೂ (ಪುರುಷರೂ ಕೂಡ) ಕಾರಣವಿಲ್ಲದೇ ಕೆಲಸಕ್ಕೆ ಚಕ್ಕರ್ ಹಾಕಿದ್ದರು. ಅವರೆಲ್ಲರಿಗೂ ಯಾವ ಕಾರಣವನ್ನು ಕೊಟ್ಟು ತಪ್ಪಿಸಿಕೊಳ್ಳುವುದು ಎಂದು ಬಗೆಹರಿಯಲಿಲ್ಲ. ಯಾವ ಉಪಾಯವೂ ಹೊಳೆಯದೇ ಹೀಗೆ ಮಾಡುವುದೇ ಒಳಿತೆನಿಸಿ ಪುಸ್ತಕದಲ್ಲಿ ‘ನಮ್ಮದೂ ಅದೇ’ ಎಂದು ಬರೆದು ಆ ಮಹಿಳೆಯ ಕೊಟ್ಟ ಕಾರಣವನ್ನೇ ಎಲ್ಲರೂ ನಕಲಿಸಿದರು. ಅವಳು ಬರೆದುದಾದರೂ ಏನು ಎಂಬುದನ್ನು ಯಾರೊಬ್ಬರೂ ಓದುವ ಗೋಜಿಗೆ ಹೋಗಲಿಲ್ಲ.

ಪ್ರತಿದಿನ ಫೇಸ್ ಬುಕ್ ತೆರೆದಾಗಲೂ ಒಂದು ನೋಟಿಫಿಕೇಷನ್ ‘chek out, chek out’ ಎಂದು ಕುಣಿಯುತ್ತಿರುತ್ತದೆ. ಅದೇನೆಂದು ಓದಹೋದರೆ ಕಾಣಿಸಿವುದು ಇಷ್ಟು, “A, B and 15 others sent message to TRAI about digital equality in India. You can too.” ನಮ್ಮಲ್ಲಿ ಈಗ ಹೊಸದೊಂದು ಚಟ ಶುರುವಾಗಿದೆ. ಕೈ, ಕಾಲು, ಗಂಟಲುಗಳಿಗೆ ಕೆಲಸ ಸಿಗಲೆನ್ನುವಷ್ಟು ಉತ್ಸಾಹ ಇದ್ದವರೂ ಬೀದಿಗಿಳಿದು ಪ್ರತಿಭಟನೆ, ಬಂದ್ ಎನ್ನುತ್ತಾ ಹೋರಾಟ ಮಾಡಿದರೆ, ಇದೆಲ್ಲದಕ್ಕೂ ಆಲಸಿತನ ತೋರುವವರು ಮೊಬೈಲ್, ಟ್ಯಾಬ್ಲೆಟ್, ಪಿಸಿಗಳಲ್ಲಿ ಪಿಟಿಷನ್, ಮೆಸೇಜ್ ಕಳಿಸುತ್ತಾ ಹೋರಾಡುತ್ತಾರೆ. ಹೇಗೆ ಹೋರಾಡುವವರಲ್ಲಿ ೭೫% ಮಂದಿಗೆ ಯಾತಕ್ಕಾಗಿ ಈ ಪ್ರತಿಭಟನೆ, ಬಂದ್, ಪಿಟಿಷನ್ ಎನ್ನುವ ಅಸಲಿ ಸಂಗತಿಯೇ ಗೊತ್ತಿರುವುದಿಲ್ಲ. ಒಬ್ಬರು ಮಾಡಿದರೆಂದು ಇನ್ನೊಬ್ಬರು ಮಾಡುತ್ತಾರೆ. ಅಲ್ಲಿಗೆ ಹೋರಾಟವೆನ್ನುವುದು ಹಾರಾಟವಾಗುತ್ತದೆ. ಪ್ರಸ್ತುತ TRAI ಗೆ ಸಂದೇಶ ಕಳಿಸುವ ವಿಚಾರದಲ್ಲಿ ೯೦% ಜನರದ್ದು ಮೇಲೆ ಉದಾಹರಿಸಿದ ‘ನಮ್ಮದೂ ಅದೇ’ ಎನ್ನುತ್ತಾ ಆ ಮಹಿಳೆಯನ್ನು ನಕಲು ಹೊಡೆದ ಸಹೋದ್ಯೋಗಿಗಳ ಕತೆಯೇ ಆಗಿದೆ.

ಮತ್ತಷ್ಟು ಓದು »

8
ಜನ

ಪ್ರವಾಸಿಗರ ಸ್ವರ್ಗ ಮಧ್ಯ ಯೂರೋಪ್‍ನ ಸುಂದರ ನಗರಗಳ ಪ್ರವಾಸ

– ಅಗರ ಪ್ರಸಾದ್‍ರಾವ್

ಪ್ರಾಗ್ಈ ಬಾರಿಯ ಬೇಸಿಗೆ ಪ್ರವಾಸವನ್ನು ಯೂರೋಪ್‍ನಲ್ಲಿ ಕಳೆಯಲೆಂದು ನಾನು ಮತ್ತು ಕುಟುಂಬ ವರ್ಗದವರು ಹಾಗೂ ಸ್ನೇಹಿತರೊಂದಿಗೆ ತೀರ್ಮಾನಿಸಿ ಮೇ 2015 ತಿಂಗಳಲ್ಲಿ ಮಧ್ಯ ಯೂರೋಪ್‍ನ ದೇಶಗಳಾದ ಸಿ-ಝೆಕ್, ಸ್ಲೊವೊಕಿಯ, ಹಂಗೇರಿ ಮತ್ತು ಆಸ್ಟ್ರಿಯ ಪ್ರವಾಸವನ್ನು (ಭಾರತೀಯರು ಅತಿ ಕಡಿಮೆ ವೀಕ್ಷಿಸುವ ದೇಶಗಳು) ಬೆಂಗಳೂರಿನಿಂದ ಆರಂಭಿಸಿ ಮುಂಬೈ, ಅಬುದಾಬಿ ಮುಖಾಂತರ ಆಸ್ಟ್ರಿಯ ರಾಜಧಾನಿಯಾದ ವಿಯೆನ್ನಾ ತಲುಪಿ ಅಲ್ಲಿಂದ ನಮ್ಮ ಪ್ರವಾಸವನ್ನು ಆರಂಭಿಸಿದೆವು.

ಮೊದಲನೆ ದಿನ, ವಿಯೆನ್ನಾದಿಂದ ಬಸ್ಸಿನಲ್ಲಿ ನಮ್ಮ ಪ್ರಯಾಣವನ್ನು ಸಿ-ಝೆಕ್ ನ ರಾಜಧಾನಿಯಾದ “ಪ್ರಾಗ್” (ಪ್ರಾಹ) ಕ್ಕೆ ಮುಂದುವರೆಸಿದ ನಮಗೆ ರಸ್ತೆಯ ಇಕ್ಕೆಲಗಳ ಆ ಸುಂದರ ಹಸಿರಿನಿಂದ ಮತ್ತು ಹಳದಿ ಬಣ್ಣದಿಂದ ಕೂಡಿದ ಸಾಸಿವೆ, ಬಾರ್ಲಿ ಮತ್ತು ಗೋಧಿ ಹೊಲಗಳು ಕಣ್ಣಿಗೆ ಹಬ್ಬವೆನಿಸಿ ನಾವು ಎಂದೋ ನೋಡಿದ ಹಿಂದಿ ಸಿನೆಮಾಗಳ ಹಾಡುಗಳು ನೆನಪಾಗುತ್ತಿದ್ದವು.ಎಷ್ಟು ನೋಡಿದರೂ ಕಣ್ತಣಿಯದ ಹಾಗೂ ಸಮಯದ ಪರಿವೆಯಿಲ್ಲದೆಯೇ 6 ಗಂಟೆಗಳ ಪ್ರಯಾಣ ಮುಗಿಸಿದ ನಾವುಗಳು ಪ್ರಾಗ್‍ನ ಹೋಟೆಲ್ ಕೋಣೆಯ ಕಿಟಿಕಿಯನ್ನು ತೆರೆದಾಗ ನಾವು ಅದೆಷ್ಟು ಸುಂದರ ಸ್ಥಳದಲ್ಲಿ ಇದ್ದವೆಂದು ಪುಳಕಿತವಾಯಿತು.

ಮುಂದಿನ ದಿನ ನಮ್ಮ ಪ್ರಯಾಣ ಪ್ರಾಗ್‍ನ ಸುಂದರ ಸ್ಥಳಗಳ ವೀಕ್ಷಣೆ, ಅದರಲ್ಲಿ ಮುಖ್ಯವಾದ “ ಓಲ್ಡ್ ಟೌನ್ ಚೌಕ, 600 ವರ್ಷಗಳಷ್ಟು ಹಳೆಯದಾದ ಮತ್ತು ಇಂದಿಗೂ ಚಲಿಸುತ್ತಿರುವ ಖಗೋಳ ಗಡಿಯಾರ, ವೆನ್‍ಸೆಲಾಸಸ್ ಚೌಕ ಮತ್ತು ಓಟಾವ ನದಿಗೆ ಅಡ್ಡಲಾಗಿ ಕಟ್ಟಿರುವ ಚಾರ್ಲಸ್ ಸೇತುವೆ, ಇನ್‍ಫೆಂಟ್ ಜೀಸಸ್ ಆಫ್ ಪ್ರಾಗ್ ಮತ್ತು ಪ್ರಾಗ್‍ನ ಹಳೆಯ ಕಾಲದ ಮನೆಗಳು ಮತ್ತು ಮಹಲ್‍ಗಳು, ಜರ್ಮನಿಯ ಹಿಡಿತದಿಂದ ಬೇರ್ಪಡೆಗೊಂಡು ಯುಗೋಸ್ಲಾವಕಿಯ ಪುನರ್ ವಿಂಗಡಣೆಗೊಂಡು (ವೆಲ್‍ವೆಟ್ ಕ್ರಾಂತಿಯೊಂದಿಗೆ) ಝೆಕ್ ಮತ್ತು ಸ್ಲೋವೋಕಿಯ ಸ್ವತಂತ್ರ ದೇಶಗಳಾಗಿ ಇಬ್ಭಾಗವಾದಾಗ ಕಮ್ಯುನಿಸ್ಟ್ ಆಡಳಿತಕ್ಕೆ ಒಳಪಟ್ಟು ಇಂದಿಗೂ ಜೀವನ ಶೈಲಿಯಲ್ಲಿ ಅದೇ ನೀತಿ ಅಳವಡಿಸಿಕೊಂಡಿರುವ ಜನರು ತುಂಬ ಶಿಸ್ತು ಮತ್ತು ಸಂಯಮದಿಂದ ಕೂಡಿರುತ್ತಾರೆ.ಪ್ರಾಗ್‍ನ ಸುಂದರ ಮತ್ತು 600 ವರ್ಷಗಳಿಗೂ ಹಳೆಯದಾದ ಕಟ್ಟಡಗಳನ್ನು ಇಂದಿಗೂ ಅತ್ಯಂತ ಸುಸ್ಥಿತಿ ಮತ್ತು ಸುಂದರವಾಗಿ ನಿರ್ವಹಣೆ ಮಾಡಿರುವ ಬಗೆ ನೋಡಿದರೆ ಎಂತವರಿಗೂ ಅಚ್ಚರಿ ಮತ್ತು ಅಸೂಯೆ ಮೂಡುತ್ತದೆ(ನಾವೇಕೆ ಈ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು).ಆ ಸುಂದರ ಹಳೆಯ ಕಟ್ಟಡಗಳು ಸ್ವಚ್ಛ ಮತ್ತು ಕಿರಿದಾದ ರಸ್ತೆಗಳು, ಶಿಸ್ತಿನ ಜನ ಮತ್ತು ಎಲ್ಲಿ ನೋಡಿದರೂ ಹಸಿರು ನಿಜಕ್ಕೂ ಅದ್ಭುತವೆನಿಸುತ್ತದೆ ಮತ್ತು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಈ ನಗರ ಸ್ಥಾನ ಪಡೆದಿದೆ.
ಮತ್ತಷ್ಟು ಓದು »

7
ಜನ

ಅನುಭವ, ಅನುಭಾವ, ಅನುಭೂತಿ ಇತ್ಯಾದಿ…

– ನಾಗೇಶ ಮೈಸೂರು

ಮುಂಜಾನೆಬದುಕಿನ ಎಷ್ಟೊ ಒಡನಾಟಗಳಲ್ಲಿ ಕೆಲವಷ್ಟೆ ಆಳಕ್ಕಿಳಿದು ಬೇರೂರಿ ನಿಲ್ಲುವಂತಹವು. ಮಿಕ್ಕವೆಲ್ಲಿ ಕೆಲವು ಹಾಗೆ ಬಂದು ಹೀಗೆ ಹೋಗುವ ಗುಂಪಿನದಾದರೆ ಬಾಕಿಯೆಲ್ಲ ತಾವರೆಯೆಲೆಯ ಮೇಲಿನ ಅಂಟಿಯೂ ಅಂಟದ ನಿರ್ಲಿಪ್ತ ಕೊಂಡಿಗಳು. ಹಿಂದೆಲ್ಲ ಈ ತರಹೆವಾರಿ ಬಂಧಗಳೆಲ್ಲವನ್ನು ಅದರದರ ಸ್ಥಾಯಿ / ಚಲನ ಶಕ್ತಿಗನುಗುಣವಾಗಿ ಒಗ್ಗೂಡಿಸಿಡಲು ಮುಂಜಿ, ನಾಮಕರಣ, ಮದುವೆಗಳಂತಹ ಖಾಸಗಿ ಸಮಾರಂಭಗಳಿಂದ ಹಿಡಿದು ಸಾರ್ವಜನಿಕ ಸಭೆ, ಕಾರ್ಯಕ್ರಮ, ಚಟುವಟಿಕೆಗಳು ನೆರವಾಗುತ್ತಿದ್ದವು. ಒಂದಲ್ಲ ಒಂದು ಕಡೆ ಭೇಟಿಯಾಗುವ, ಕೊಂಡಿಯ ಸಂಪರ್ಕವನ್ನುಳಿಸಿಕೊಳ್ಳುವ ಸಾಧ್ಯತೆಯಿರುತ್ತಿತ್ತು.

ಆದರೀಗ ಅಷ್ಟೊಂದು ಹೆಣಗುವ ಅವಶ್ಯಕತೆಯಿಲ್ಲದೆಯೆ ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್ ಗಳಂತಹ ತಂತ್ರಜ್ಞಾನ ಪ್ರೇರಿತ ಸಾಮಾಜಿಕ ಸಾಧನ ಸಲಕರಣೆಗಳನ್ನು ಬಳಸಿ ಸಂಪರ್ಕ ಕೊಂಡಿಯನ್ನು ನಿತ್ಯವೂ ಜೀವಂತವಿರಿಸಿಕೊಳ್ಳುವ ಸಾಧ್ಯತೆ. ಕಾಲೇಜಿನ ದಿನಗಳ ಒಡನಾಟದ ನಂತರ ಎಲ್ಲಿ, ಹೇಗಿರುವರೆಂದೆ ಗೊತ್ತಿರದೆ ಇದ್ದ ಅನೇಕ ಮಿತ್ರರು ಈ ಮೂಲಕ ಮತ್ತೆ ನಂಟಿಗೆ ಅಂಟಿಕೊಳ್ಳಲು ಸಾಧ್ಯವಾಗಿಸುತ್ತಿರುವುದೂ ಈ ತಂತಜ್ಞಾನ ಪರಿಕರಗಳೆ. ಹೀಗಾಗಿ ಖಾಸಗಿಯಾಗಲಿ, ಸಾರ್ವತ್ರಿಕವಾಗಲಿ ‘ಕಮ್ಯೂನಿಕೇಷನ್’ ಗೆ ಮೊದಲಿಗಿಂತ ಹೆಚ್ಚು ಸುಲಭ, ಸರಳ ಮಾರ್ಗೋಪಾಯಗಳು ಈಗ ಸದಾ ಬೆರಳ ತುದಿಯಲ್ಲಿ ಸಿದ್ದ. ಅದರಲ್ಲು ಮೊಬೈಲು ಜಗದಲ್ಲೆ ಎಲ್ಲಾ ನಿಭಾಯಿಸುವ ಸಾಧ್ಯತೆಯಿರುವುದರಿಂದ ನೆಟ್ವರ್ಕ್ / ಅಂತರ್ಜಾಲಕ್ಕೆ ಸಂಪರ್ಕವೊಂದಿದ್ದರೆ ಸಾಕು ಎಲ್ಲೆಂದರಲ್ಲಿ ಪರಿಸ್ಥಿತಿಗೆ ಸ್ಪಂದಿಸಬಹುದು ಕನಿಷ್ಠ ಪದಗಳಲ್ಲಾದರು.

ಮತ್ತಷ್ಟು ಓದು »

7
ಜನ

ಅಶ್ವತ್ಥಾಮನಿಗೆ ಬ್ರಹಾಸ್ತ್ರ ಒಲಿದಂತೆ – ಪ್ಲುಟೋನಿಯಂ ಬೆಂಕಿಗೆ ಜಲಜನಕದ ತುಪ್ಪ

– ವಿನಾಯಕ್ ಹಂಪಿಹೊಳಿ

ಉತ್ತರ ಕೊರಿಯಾ1ಸ್ಪೆಷಲ್ ರಿಲೇಟಿವಿಟಿ ಸಿದ್ಧಾಂತವನ್ನು ಐನ್ಸ್ಟೈನ್ ಮುಂದಿಟ್ಟಾಗ ಅದರದ್ದೊಂದು ಇಕ್ವೇಷನ್ನು E= mc2 ತುಂಬಾ ಸಂಚಲನ ಉಂಟು ಮಾಡಿತ್ತು. ಏಕೆಂದರೆ ಅದು ದ್ರವ್ಯರಾಶಿ ಮತ್ತು ಶಕ್ತಿಗಳನ್ನು ಸಮೀಕರಣಗೊಳಿಸಿತ್ತು. ಆದರೂ ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಸಿಕ್ಕಿರಲಿಲ್ಲ. ಅದು ಸಿಕ್ಕಿದ್ದು ಯುರೇನಿಯಂ ಎಂಬ ಭಾರದ ಪರಮಾಣುವಿಗೆ ನ್ಯೂಟ್ರಾನೊಂದು ಬಡಿದಾಗ ಬೀಜವಿದಳನ ನಡೆದು ಬೇರಿಯಂ ಮತ್ತ್ರು ಕ್ರಿಪ್ಟಾನ್ ಪರಮಾಣುಗಳು ರಚನೆಯಾದಾಗ. ಆ ಬೀಜವಿದಳನದಲ್ಲಿ ಕೊಂಚ ಪ್ರಮಾಣದ ದ್ರವ್ಯರಾಶಿ ಕಾಣೆಯಾಗಿತ್ತು ಮತ್ತು ಊಹಿಸಲಿಕ್ಕೇ ಆಗದಷ್ಟು ಪ್ರಮಾಣದ ಶಕ್ತಿಯು ಬಿಡುಗಡೆಯಾಗಿತ್ತು. ತನ್ಮೂಲಕ ಬಹುಚರ್ಚಿತ ಈ ಸಮೀಕರಣವು ಸರಿಯೆಂದು ಸಾರಿತ್ತು.

ಪಾರಮಾಣ್ವಿಕ ಕ್ರಿಯೆಗಳು(ನ್ಯೂಕ್ಲಿಯರ್ ರಿಯಾಕ್ಷನ್ಸ್) ಎಂಬುದು ಪ್ರಕೃತಿಗೇನೂ ಹೊಸತಲ್ಲ ಬಿಡಿ. ನಮಗೆ ಹಗಲೆಲ್ಲ ಸಿಗುವ ಸೂರ್ಯನ ಬೆಳಕು ಇದೇ ಕ್ರಿಯೆಗಳ ಶಕ್ತಿಯೇ. ಆದರೆ ಸೂರ್ಯನಲ್ಲಿ ಯುರೇನಿಯಂ ವಿದಳನವಾಗುವದಿಲ್ಲ. ಬದಲಿಗೆ ಅಲ್ಲಿ ಎರಡು ಜಲಜನಕಗಳ ಸಂಯೋಜನೆಗೊಂಡು ಹೀಲಿಯಂ ಆಗುವದು. ಈ ಪ್ರಕ್ರಿಯೆ ನಮ್ಮ ವಿಜ್ಞಾನಿಗಳಿಗೆ ತೀವ್ರ ಕುತೂಹಲ ಕೆರಳಿಸಿತ್ತು. ಏಕೆಂದರೆ ಭೂಮಿಯಲ್ಲಿ ಯುರೇನಿಯಂ ಪ್ರಮಾಣ ಕಡಿಮೆ. ಆದರೆ ಜಲಜನಕ ಹಾಗಲ್ಲ ನೋಡಿ. ೭೦% ನೀರಿನಿಂದಲೇ ತುಂಬಿರುವ ಭೂಮಿಗೆ ಜಲಜನಕಕ್ಕೆ ಕೊರತೆಯೇ? ಅಲ್ಲದೇ ೧ ಗ್ರಾಂ ಯುರೇನಿಯಂನಿಂದ ಸಿಗುವ ವಿದಳನ ಶಕ್ತಿಗಿಂತ ೧ ಗ್ರಾಂ ಜಲಜನಕದಿಂದ ಸಿಗುವ ಸಂಯುಗ್ಮಶಕ್ತಿ ನೂರಾರು ಪಟ್ಟು ಜಾಸ್ತಿ ಬೇರೆ.

ಮತ್ತಷ್ಟು ಓದು »

6
ಜನ

ನಾನ್ ವೆಜ್ ತಿನ್ನುವ ಬಗ್ಗೆ ಒಂದು ವಿಶ್ಲೇಷಣೆ

– ವಿಕ್ರಂ ಪತ್ತಾರ್

ತಂದೂರಿ ಚಿಕನ್ಮನುಷ್ಯನು ಕೆಲವೊಂದು ಅನವಶ್ಯಕ ಬಂಧನಗಳಿಗೆ ಧರ್ಮದ ಹೆಸರಿನಲ್ಲಿ ಸಿಲುಕುತ್ತಾನೆ.ಧರ್ಮದ ತಾತ್ಪರ್ಯವನ್ನಾಗಲೀ ಅಥವಾ ತತ್ವಗಳ ಮರ್ಮವನ್ನಾಗಲೀ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಒದ್ದಾಡುತ್ತಾನೆ ಅಲ್ಲದೇ ಕೆಲವೊಮ್ಮೆ ಇಂಥ ಸಂಗತಿಗಳೇ ವ್ಯರ್ಥ ಗುದ್ದಾಟಕ್ಕೆ ಈಡು ಮಾಡುವದಲ್ಲದೇ ಸೂಕ್ತ ತೀರ್ಮಾನಕ್ಕೆ ಬರುವಲ್ಲಿ ಹೆಣಗುತ್ತಾನೆ.ಅಂಥವುಗಳಲ್ಲಿ ಈ ನಾನ್ ವೆಜ್ ತಿನ್ನುವದು ಕೂಡ ಒಂದು.

ಮನುಷ್ಯನ ಅಂತಃಕರಣ ಏನಾದರೂ ಹಿಂಸಾತ್ಮಕ ಸನ್ನಿವೇಶವನ್ನು ನೋಡಿದಾಗ ಮರುಗುತ್ತದೆ. ನೀವು ಪರಿಪೂರ್ಣ ಅಹಿಂಸೆಯನ್ನಾಚರಿಸಿದರೆ ಬದುಕುವದಕ್ಕಾಗುವದಿಲ್ಲ.ನಿಮಗೆ ಅರಿವಿಲ್ಲದೇ ಅನೇಕ ಸೂಕ್ಷ್ಮಜೀವಿಗಳ ನಾಶಕ್ಕೆ ನಾವು ಕಾರಣವಾಗುತ್ತೇವೆ.ಕೃಷಿಯಲ್ಲಿ ಭೂಮಿಯನ್ನು ಊಳುವಾಗ ಅನೇಕ ಜೀವಿಗಳ ಸಾವಿಗೆ ಕಾರಣವಾಗುತ್ತೇವೆ.ಅದಕ್ಕಾಗಿಯೇ ಪ್ರಾರಂಭದಲ್ಲಿ ಜೈನ ಧರ್ಮವು ಕೃಷಿಯನ್ನು ಅಹಿಂಸೆಯ ಹೆಸರಿನಲ್ಲಿ ನಿಷೇಧಿಸಿತ್ತು.ಪ್ರಾಣಿಗಳಿಗೆ ಜೀವವಿದೆ,ಭಾವನೆಗಳಿವೆ ಎಂಬುದು ಎಷ್ಟು ಸತ್ಯವೋ ಸಸ್ಯಗಳಿಗೆ ಜೀವ ಮತ್ತು ಭಾವನೆಗಳಿವೆ ಎಂಬುದು ಅಷ್ಟೇ ಸತ್ಯ.ನೀವು ಹಿಂಸೆಯೆಂದು ಭಾವಿಸಿದರೆ ಸಸ್ಯಗಳನ್ನು ಆಹಾರವಾಗಿ ಬಳಸುವದನ್ನು ಬಿಡಲೇಬೇಕಾಗುತ್ತದೆ,ಕೃಷಿಯನ್ನು ನಿಷೇಧಿಸಬೇಕಾಗುತ್ತದೆ. ಮಹಾಭಾರತದಲ್ಲಿ ಒಂದು ಸಸ್ಯವನ್ನು ಕಡಿದರೆ ನೂರು ಮಕ್ಕಳನ್ನು ಕೊಂದ ಪಾಪ ಬರುತ್ತದೆ ಎಂಬ ಭಾವನೆಯಿತ್ತು.ಆದರೆ ಅದೇ ಮಹಾಭಾರತದಲ್ಲಿ ಸೈನ್ಯದಲ್ಲಿ ರಥಗಳು, ಮನೆಯಲ್ಲಿ ಕಟ್ಟಿಗೆಯ ಉಪಕರಣಗಳನ್ನು ಹೇಗೆ ಮಾಡುತ್ತಿದ್ದರು? ಮರಗಳನ್ನು ಕಡಿಯುವದರಿಂದಲೇ ಅಲ್ಲವೇ ? ಹಾಗಾದರೆ ಬಡಗಿಗಳೆಲ್ಲರೂ ಪಾಪಿಗಳಾ?

ಮತ್ತಷ್ಟು ಓದು »

5
ಜನ

ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ

ಇತ್ತೀಚೆಗೆ, ಲೇಖಕ ರೋಹಿತ್ ಚಕ್ರತೀರ್ಥ ಅವರ ಕಥಾಸಂಕಲನಕ್ಕೆ ಹಿರಿಯ ಲೇಖಕರಾದ ಬೊಳುವಾರ ಮಹಮ್ಮದ್ ಕುಂಞ್ ಯವರು ಮುನ್ನುಡಿ ಬರೆದಿರುವ ವಿಷಯವಾಗಿ ಫೇಸ್ಬುಕ್ಕಿನಲ್ಲಿ ವಾದ-ವಿವಾದಗಳು ನಡೆಯುತ್ತಿವೆ.ಅದಕ್ಕೆ ಪ್ರತಿಕ್ರಿಯಿಸಿದ ಬೊಳುವಾರರು, ಮೂವತ್ತು ವರ್ಷಗಳ ಹಿಂದೆ ಬರೆದಿದ್ದ “ಮುಸ್ಲಿಮನಾಗಿರುವುದೆಂದರೆ…” ಲೇಖನವನ್ನು ನೆನೆಸಿಕೊಂಡರು.ಆ ಲೇಖನದ ಕುರಿತಾಗಿ ಕಥೆಗಾರರು ಮತ್ತು ವಿಜಯವಾಣಿಯ ಅಂಕಣ ಬರಹಗಾರರಾದ ಪ್ರೇಮಶೇಖರ ಅವರು ತಮ್ಮ ವಾಲ್ನನಲ್ಲೊಂದು ಅಭಿಪ್ರಾಯ ಹಾಕಿದ್ದರು.ಆ ಅಭಿಪ್ರಾಯದ ಕುರಿತು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಅವರು “ಪ್ರೇಮಶೇಖರ ಅವರೇ, ನಿಮ್ಮಲ್ಲಿ ಲೇಖನ ಇದ್ದರೆ ಮತ್ತೊಮ್ಮೆ ಓದಿ. ಯಾವುದು ಬದಲಾಗಿದೆ? ಮುಸ್ಲಿಮರನ್ನು ಹಿಂದುತ್ವವಾದಿಗಳು ನೋಡುವ ಯಾವ ದೃಷ್ಟಿ ಬದಲಾಗಿದೆ ಎಂದು ಒಂದೊಂದಾಗಿ ಹೇಳಿಬಿಡಿ” ಎಂದಿದ್ದರು.ಪ್ರೇಮಶೇಖರ ಅವರು ಅಮೀನರಿಗೆ ಕೊಟ್ಟ ಉತ್ತರ ಇಲ್ಲಿದೆ… ಜೊತೆಗೆ ಬೊಳುವಾರರ ಹಳೇ ಲೇಖನದ ಪ್ರತಿಯೂ ಇದೆ – ನಿಲುಮೆ

– ಪ್ರೇಮ ಶೇಖರ ಅವರ ಮೊದಲ ಅಭಿಪ್ರಾಯ 

ಮುಸ್ಲಿಮನಾಗಿರುವುದೆಂದರೆ.. ಬೊಳುವಾರುಬೊಳುವಾರರು “ಸುಧಾ” ಸಾಪ್ತಾಹಿಕದಲ್ಲಿ “ಮುಸ್ಲಿಮನಾಗಿರುವುದೆಂದರೆ…” ಎಂಬ ಲೇಖನ ಬರೆದು ಮೂವತ್ತನಾಲ್ಕೂವರೆ ವರ್ಷಗಳಾಗುತ್ತಾ ಬಂದಿವೆ. ಈ ಆವಧಿಯಲ್ಲಿ ನೇತ್ರಾವತಿಯಲ್ಲಿ ಅದೆಷ್ಟು ನೀರು ಹರಿದಿದೆ! ಹಾಗೆಯೇ ಬೊಳುವಾರರು ಬೆಳೆಯುತ್ತಾ ಹೋಗಿದ್ದಾರೆ, ಅದು ಅವರ ಹೆಗ್ಗಳಿಕೆ. ಆದರೆ ಅದಕ್ಕೆ ವಿರುದ್ಧವಾಗಿ, ಆ ಲೇಖನವನ್ನು ಅಂದು ಓದಿದವರು ಅಲ್ಲೇ ಉಳಿದುಬಿಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಸಾಂಸ್ಕೃತಿಕ ವಾತಾವರಣ ಅಧಃಪಾತಾಳಕ್ಕಿಳಿಯುತ್ತಿದೆ.

ಮೂವತ್ತೂ ದಾಟದ ಆ ದಿನಗಳಲ್ಲಿ ಬೊಳುವಾರರು ಬರೆದ, ವೈಚಾರಿಕತೆಗಿಂತಲೂ ಭಾವನಾತ್ಮಕತೆಗೆ ಒತ್ತುಕೊಟ್ಟಿದ್ದ, ಆ ಲೇಖನದಲ್ಲಿ ಒಳ್ಳೆಯ ಒಳನೋಟಗಳಿದ್ದಂತೇ ಉಪಖಂಡದ ಇತಿಹಾಸದ ಬಗ್ಗೆ, ದೇಶವಿಭಜನೆಯ ಬಗ್ಗೆ ಹಲವು ತಪ್ಪುಗ್ರಹಿಕೆಗಳೂ ಇದ್ದವು. ಭಾರತಕ್ಕೆ ಮುಸ್ಲಿಮರ, ನಂತರ ಬ್ರಿಟಿಷರ ಆಗಮನದ ಸ್ವರೂಪದ ಬಗ್ಗೆ, ದೇಶವಿಭಜನೆಯ ಬಗ್ಗೆ ಬೊಳುವಾರದ ತಿಳುವಳಿಕೆಗಳಲ್ಲಿ ಅಸ್ಪಷ್ಟತೆಯಿತ್ತು. ನನಗೆ ತಕ್ಷಣಕ್ಕೆ ನೆನಪಾಗುವುದು ಇದು- “ಪಾಕಿಸ್ತಾನ ಬೇಕೇ ಬೇಡವೇ ಎಂದು ಒಂದು ಜನಮತಗಣನೆ ನಡೆಯಿತಂತೆ, ಆದರೆ ಅಂಥದು ನಡೆದ ಬಗ್ಗೆ ನನ್ನ ತಂದೆಯವರಿಗೆ ಗೊತ್ತೇ ಇಲ್ಲ” ಎಂಬುದಾಗಿ ಬೊಳುವಾರರು ಬರೆದಿದ್ದರು. ವಾಸ್ತವವೆಂದರೆ ಬೊಳುವಾರರ ತಂದೆಯವರಿಗೆ ಆ ಜನಮತಗಣನೆಯ ಬಗ್ಗೆ ಗೊತ್ತಾಗಿ ಅವರದರಲ್ಲಿ ಭಾಗಿಯಾಗುವ ಸಾಧ್ಯತೆಯೇ ಇರಲಿಲ್ಲ. ಯಾಕೆಂದರೆ ಅಂಥದೊಂದು ಆಯ್ಕೆ ಎದುದಾದದ್ದು ಗಡಿನಾಡು ಪ್ರಾಂತ್ಯ ಮತ್ತು ಸಿಲ್ಹೆಟ್ (ಈಗ ಬಾಂಗ್ಲಾದೇಶದಲ್ಲಿದೆ) ಜಿಲ್ಲೆಯ ಜನತೆಗೆ ಮಾತ್ರ. ದೇಶವಿಭಜನೆಯ ನಿಜವಾದ ಆರೋಪಿಗಳಾದ ಮುಸ್ಲಿಂ ಲೀಗ್‍ ಮತ್ತು ಬ್ರಿಟಿಷರ ಪಾತ್ರವನ್ನು ಕಡೆಗಣಿಸಿ ಪರಿಸ್ಥಿತಿಯ ಕೈಗೊಂಬೆಯಾದ ಕಾಂಗ್ರೆಸ್‍ನ ಪಾತ್ರವನ್ನು ದೊಡ್ಡದಾಗಿ ತೋರಿಸುವ ಪ್ರಯತ್ನವೂ ಆ ಲೇಖನದಲ್ಲಿತ್ತು. ಕೋಮುವಾದದ ಉಗಮದ ಬಗೆಗೂ ಅಂಥದೇ ತಪ್ಪುತಿಳುವಳಿಕೆಯ ಭಾವನಾತ್ಮಕ ವಿವರಣೆಗಳಿದ್ದವು. ಅಂಥದೊಂದು ತಪ್ಪುಗ್ರಹಿಕೆಯನ್ನು ಎರಡುವಾರಗಳ ನಂತರ ಸಮುದ್ರಮಧನ ವಿಭಾಗದಲ್ಲಿ ಪ್ರಜ್ಞಾವಂತ ಓದುಗರೊಬ್ಬರು “ಮುಸ್ಲಿಂ ಲೀಗ್ ಯಾವಾಗ ಸ್ಥಾಪನೆಯಾಯಿತು, ಆರ್‌ಎಸ್‌ಎಸ್ ಯಾವಾಗ ಸ್ಥಾಪನೆಯಾಯಿತು ಎಂದು ನೋಡಿದರೆ ಯಾವುದು ಯಾವುದಕ್ಕೆ ಪ್ರತಿಕ್ರಿಯೆ ಎಂದು ತಿಳಿಯುತ್ತದೆ” ಎಂಬುದಾಗಿ ಹೇಳುವುದರ ಮೂಲಕ ಬೊಳುವಾರರಿಗೆ ಈ ದೇಶದ ಚರಿತ್ರೆಯ ಒಂದು ಸತ್ಯವನ್ನು ಮನಗಾಣಿಸಲು ಪ್ರಯತ್ನಿಸಿದ್ದರು. ನಂತರ ಬೊಳುವಾರದು ಬೆಳೆಯುತ್ತಾ ಹೋದರು. ಐದೇ ತಿಂಗಳಲ್ಲಿ “ದೇವರುಗಳ ರಾಜ್ಯದಲ್ಲಿ” ಎಂಬ ಅದ್ಭುತ ಕಥೆ ರಚಿಸಿದರು. ಅವರ ಬೆಳವಣಿಗೆಯ ಓಟ ಇನ್ನೂ ಸಾಗಿದೆ. ನನಗವರು ಅನುಕರಣೀಯವಾಗುವುದು, ಈ ನಾಡಿಗೆ ಅವರು ಮುಖ್ಯವಾಗುವುದು ಈ ಕಾರಣಕ್ಕಾಗಿ.

ದುರಂತವೆಂದರೆ ಆ ಲೇಖನವನ್ನು ಅಂದು ಓದಿದವರು ಅದನ್ನೇ ಪವಿತ್ರಗ್ರಂಥವೆಂದು ಇಂದಿಗೂ ನಂಬಿಬಿಟ್ಟಿದ್ದಾರೆ. ಅದರಾಚೆಗೆ ಬೆಳೆಯುವ ಪ್ರಯತ್ನವನ್ನೇ ಅವರು ಮಾಡಿಲ್ಲ. ತಾವೂ ಬೆಳೆಯಲಿಲ್ಲ, ಕರ್ನಾಟಕವನ್ನೂ ಬೆಳೆಯಲು ಬಿಡುತ್ತಿಲ್ಲ. ಬೊಳುವಾರರನ್ನೂ ಅಂದಿನ ದಿನಗಳಿಗೇ ಕಟ್ಟಿಹಾಕಲು ನೋಡುತ್ತಿದ್ದಾರೆ. ನಮ್ಮ ಬೊಳುವಾರರನ್ನೂ, ನಮ್ಮ ನಾಡನ್ನೂ, ನಮ್ಮ ಸಾಂಸ್ಕೃತಿಕ ಚಿಂತನೆಯನ್ನೂ ಈ ಪ್ರತಿಗಾಮಿಗಳಿಂದ ರಕ್ಷಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.

ಮತ್ತಷ್ಟು ಓದು »

5
ಜನ

ವೃತ್ತಿಯ ಬಗೆಗೆ ಕೀಳರಿಮೆ ಬೇಡ!

– ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ

ವೃತ್ತಿ ಗೌರವಹೀಗೇ ಸುಮ್ಮನೆ ನಾನು ಕೆಲಸ ಮಾಡುವ ಸಂಸ್ಥೆಯ ತಡೆಗೋಡೆಯ ಹೊರಗಡೆ ಬಂದಾಗ, ಒಬ್ಬಾತ ೧೨ ಚಕ್ರದ ಉದ್ದನೆಯ ಲಾರಿಯೊಂದನ್ನು ಬಹಳ ಸಲೀಸಾಗಿ ಹಿಮ್ಮಖವಾಗಿ ಚಲಾಯಿಸುತ್ತಿದ್ದ ,ಯಾವುದೇ ನಿರ್ವಾಹಕರೂ ಜೊತೆ ಇರಲಿಲ್ಲ. ಸರಿಯಾದ ಜಾಗದಲ್ಲಿ ತಂದು ನಿಲ್ಲಿಸಿದ ನಂತರ ಲಾರಿಯಿಂದಿಳಿದ, ಸುಮಾರು 60 ವರ್ಷ ಪ್ರಾಯದ ಸಿಂಗ್ ಜೀ, ಅತ್ತಿತ್ತ ನೋಡುತ್ತಾ ನನ್ನ ಬಳಿ ಬಂದರು, ಪೇಪರ್ ಒಂದು ಕೊಟ್ಟು ಇದನ್ನು ಓದಿ ಸ್ವಲ್ಪ ಅರ್ಥ ಹೇಳ್ತೀರಾ ಎಂದರು. ಅದು ವಾಹನದ ಬಗ್ಗೆ ಕೊಟ್ಟಿದ್ದ ಸೇವಾ ಮಾಹಿತಿಯಾಗಿತ್ತು.ಹಿಂದಿಯಲ್ಲಿ ವಿವರಿಸಿ ಹೇಳಿದೆ,ಹಾಗೇ ಮುಂದುವರೆಸುತ್ತಾ, ನನ್ನ ಹೆಸರು, ಊರು ,ಏನು ಉದ್ಯೋಗ ಎಂದು ವಿಚಾರಿಸಿದರು.ಎಲ್ಲವೂ ಹೇಳಿದೆ.ಆ ಕ್ಷಣವೇ ಆ ವ್ಯಕ್ತಿ ಎಂದರು, ನೀವೆಲ್ಲಾ ಭಾಗ್ಯವಂತರು. ಒಳ್ಳೆಯ ಕೆಲಸದಲ್ಲಿದ್ದೀರಾ ಹಾಗೂ ನಿಮ್ಮ ಕೆಲಸಕ್ಕೆ ಗೌರವ ಇದೆ, ತುಂಬಾ ಚತುರತೆ ನಿಮ್ಮ ಬಳಿ ಇರುತ್ತೆ ಎಂದು.

ನನಗೆ ಅವರ ಮಾತು ಸರಿ ಅನಿಸಲಿಲ್ಲ.ಪ್ರತ್ಯುತ್ತರ ನೀಡುತ್ತಾ ನಾನಂದೆ,ನೀವು ಈಗ ತಾನೇ ಅಷ್ಟು ಉದ್ದದ ಲಾರಿಯನ್ನು ನಿರ್ವಾಹಕನ ಸಹಾಯವಿಲ್ಲದೆ ಹಿಮ್ಮಖವಾಗಿ ಚಲಾಯಿಸಿದಿರಿ ತಾನೇ? ಆ ಕೆಲಸವೇನು ಸುಲಭ ಎಂದುಕೊಂಡಿರೇ? ನನ್ನ ಕೈಯಲ್ಲಿ ಒಂದು ಇಂಚು ಮುಂದೆ ಕೊಂಡೋಗಲು ಆಗುತ್ತಿರಲಿಲ್ಲ,ನಿಮ್ಮ ವೃತ್ತಿಯ ಬಗ್ಗೆ ನಿಮಗೆ ಗೌರವ ಭಾವನೆ ಇರಬೇಕು, ಶಿಕ್ಷಣ ಪಡೆದು ಸಿಕ್ಕ ಉದ್ಯೋಗಕ್ಕೆ ಮಾತ್ರ ಗೌರವ ಇರೋದಲ್ಲ, ಬೆವರು ಸುರಿಸಿ ದುಡಿಯುವ ಪ್ರತಿಯೊಂದು ಉದ್ಯೋಗವೂ ತನ್ನದೇ ಆದ ಶ್ರೇಷ್ಟತೆ ಹೊಂದಿದೆ ಅಂದೇ.ಆಗ ಉತ್ತರಿಸುತ್ತಾ ಆ ಹಿರಿಯ ವ್ಯಕ್ತಿ ಎಂದರು, ಈಗಿನ ತಲೆಮಾರಿನಲ್ಲಿ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುತ್ತೆ ಎಂದು ತಿಳಿದಿರಲಿಲ್ಲ, ಈಗ ತಿಳಿದು ಸಂತೋಷವಾಯಿತು, ಇನ್ನು ಯಾವತ್ತೂ ಕೀಳಾಗಿ ಯೋಚಿಸುವುದಿಲ್ಲ ಎಂದು,ನಮಸ್ಕರಿಸುತ್ತಾ ಹೊರಟು ಹೋದರು.

ಮತ್ತಷ್ಟು ಓದು »

4
ಜನ

ಕಳೆದುಹೋಗುತ್ತಿರುವ ದಲಿತ ಚಿಂತನೆ

– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ

ದಲಿತ ಸಾಹಿತ್ಯ ಸಮ್ಮೇಳನದಲಿತ ಸಾಹಿತ್ಯವಲಯ ಒಂದಿಷ್ಟು ಹೆಚ್ಚೇ ಎನ್ನುವಷ್ಟು ಮುನಿಸಿಕೊಂಡಿದೆ. ಅದಕ್ಕೆಂದೇ ಕಳೆದ ಆರು ವರ್ಷಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಅವರು ದಲಿತ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸುತ್ತಿರುವರು. ಸಾಹಿತ್ಯದ ಮುಖ್ಯವಾಹಿನಿಯಲ್ಲಿ ನಮಗೆ ಪ್ರವೇಶ ದೊರೆಯುತ್ತಿಲ್ಲ, ಪ್ರಶಸ್ತಿ-ಪುರಸ್ಕಾರ-ಗೌರವಗಳಿಂದ ನಾವು ವಂಚಿತರು, ದಲಿತ ಸಾಹಿತ್ಯ ಮತ್ತು ಬರಹಗಾರರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಕನ್ನಡದ ದಲಿತ ಸಾಹಿತ್ಯವಲಯ ತನ್ನ ಅಸ್ಮಿತೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಿಜಕ್ಕೂ ಕನ್ನಡದ ಒಟ್ಟು ಸಾಹಿತ್ಯ ಕ್ಷೇತ್ರಕ್ಕೆ ಆತಂಕ ತಂದೊಡ್ಡುತ್ತಿರುವ ಬೆಳವಣಿಗೆಯಿದು. ದಲಿತ ಸಾಹಿತ್ಯ ಈಗ ಕನ್ನಡ ಸಾಹಿತ್ಯದ ಬಹುಮುಖ್ಯ ಭಾಗ ಎನ್ನುವ ಮನ್ನಣೆಗೆ ಪಾತ್ರವಾಗಿದೆ. ದಲಿತ ಸಾಹಿತ್ಯವನ್ನು ಹೊರಗಿಟ್ಟು ಕನ್ನಡ ಸಾಹಿತ್ಯದ ಬೆಳವಣಿಗೆ ಹಾಗೂ ಇತಿಹಾಸವನ್ನು ನೋಡುವುದು ಅಧ್ಯಯನ ಹಾಗೂ ಸಂಶೋಧನೆಯ ದೃಷ್ಟಿಯಿಂದ ಅಸಾಧ್ಯದ ಸಂಗತಿ. ಹಾಗೆ ನೋಡುವುದು ಕೂಡ ಸಲ್ಲದು. ಹಾಗೊಂದು ವೇಳೆ ದಲಿತ ಸಾಹಿತ್ಯವನ್ನು ಹೊರಗಿಟ್ಟು ನೋಡಿದಲ್ಲಿ ಕನ್ನಡ ಸಾಹಿತ್ಯದ ಒಟ್ಟು ಚಿತ್ರಣ ನಮಗೆ ದಕ್ಕಲಾರದು. ಇಲ್ಲಿ ಕುವೆಂಪು, ಕಾರಂತ, ಬೇಂದ್ರೆ ಅವರಷ್ಟೇ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯ ಸಹ ಕನ್ನಡದ ಬಹುಮುಖ್ಯ ಬರಹಗಾರರು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ದಲಿತ ಬರಹಗಾರರು ನೀಡಿದ ಕೊಡುಗೆ ತುಂಬ ಮೌಲಿಕವಾದದ್ದು. ಇವತ್ತು ದಲಿತ ಸಾಹಿತ್ಯ ಕನ್ನಡ ಸಾಹಿತ್ಯದ ಮುಖ್ಯಧಾರೆಯಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಅನೇಕ ದಲಿತ ಲೇಖಕರ ಸಾಹಿತ್ಯವನ್ನು ಆದರ್ಶವಾಗಿಟ್ಟುಕೊಂಡು ಬರವಣಿಗೆಯ ಕೃಷಿಯಲ್ಲಿ ತೊಡಗಿಸಿಕೊಂಡ ಹಲವಾರು ದಲಿತೇತರ ಬರಹಗಾರರು ಇಲ್ಲಿರುವರು. ಕಾರಂತರ ‘ಚೋಮನ ದುಡಿ’ಯಷ್ಟೇ ಮಹಾದೇವರ ‘ಕುಸುಮ ಬಾಲೆ’ ಸಹ ಅಸಂಖ್ಯಾತ ಓದುಗರ ಓದಿನ ವ್ಯಾಪ್ತಿಗೆ ದಕ್ಕಿದೆ. ಅನೇಕ ದಲಿತ ಲೇಖಕರು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ಗೌರವಕ್ಕೆ ಭಾಜನರಾಗಿರುವರು. ದಲಿತ ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುತ್ತಿಲ್ಲ ಎನ್ನುವ ಆಪಾದನೆಯಿಂದ ಕಳಚಿಕೊಳ್ಳುವ ಪ್ರಯತ್ನವಾಗಿ 81 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧಲಿಂಗಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಗೆ ದಲಿತ ಸಾಹಿತಿಗಳನ್ನು ಆಯ್ಕೆ ಮಾಡಿದ ಉದಾಹರಣೆಗಳಿವೆ. ಹೀಗಿದ್ದೂ ದಲಿತ ಸಾಹಿತ್ಯವಲಯ ಮುನಿಸಿಕೊಂಡಿದೆ.

ಮತ್ತಷ್ಟು ಓದು »

3
ಜನ

ಹಣದ ಹೊಳೆ ನಿಲ್ಲಿಸಿ, ಮೇಲ್ಮನೆ ಮಾನ ಉಳಿಸಿ

– ಎಸ್‌. ಸುರೇಶ್‌ ಕುಮಾರ್‌, ಮಾಜಿ ಸಚಿವರು,ಹಿರಿಯ ಬಿಜೆಪಿ ನಾಯಕ

ಎಸ್‌. ಸುರೇಶ್‌ ಕುಮಾರ್‌ಕರ್ನಾಟಕದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ 25 ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ಮುಗಿದು ಫ‌ಲಿತಾಂಶಗಳೂ ಪ್ರಕಟವಾಗಿವೆ. ಈಗೇನಿದ್ದರೂ ಆಯಾ ಪಕ್ಷ ಎಷ್ಟು ಸ್ಥಾನಗಳನ್ನು ಗೆದ್ದಿದೆ? ಸೋತಿರುವ ಕ್ಷೇತ್ರಗಳಲ್ಲಿ ಕಾರಣಗಳೇನು? ಎಂಬುದರ ಲೆಕ್ಕಾಚಾರ ನಡೆಯುವ ಸಮಯ. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ನನ್ನದೊಂದು ಈ ಮನವಿ ಪತ್ರ.

ಕೆಲವು ವರ್ಷಗಳ ಹಿಂದೆ ನನ್ನ ಮೊಬೈಲ್‌ಗೆ ಒಂದು ವಿಚಿತ್ರವಾದ, ಆದರೆ ಅರ್ಥಗರ್ಭಿತ ಸಂದೇಶ ಬಂದಿತ್ತು. ‘ಸ್ನೇಹಿತರೇ. ನಾನು ಮಹಾತ್ಮಾ ಗಾಂಧೀಜಿಯವರ ಫೋಟೋಗಳನ್ನು ಸಂಗ್ರಹಿಸುತ್ತಿದ್ದೇನೆ. ನನ್ನ ಈ ಸಂಗ್ರಹ ಕಾರ್ಯದಲ್ಲಿ ನೀವು ಸಹಕರಿಸಿ. ನಿಮ್ಮ ಕೊಡುಗೆಯನ್ನು ನೀಡಿ. ಆದರೆ ಒಂದು ಷರತ್ತು. ನನಗೆ ಸಂಗ್ರಹವಾಗಬೇಕಿರುವ ಮಹಾತ್ಮಾ ಗಾಂಧೀಜಿ ಪೋಟೋಗಳು ಒಂದು ಸಾವಿರ ರೂಪಾಯಿ ನೋಟುಗಳ ಮೇಲೆ ಇರಬೇಕು.’ ಇದು ಆಘಾತಕಾರಿ ಎನಿಸಿದರೂ ಇಂದಿನ ಅತ್ಯಂತ ಕಟು ಸತ್ಯವನ್ನು ಬಿಂಬಿಸುತ್ತದೆ.

ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಹಣದ ಬಲ ವಹಿಸುವ ಪಾತ್ರ ಎಲ್ಲರಿಗೂ ತಿಳಿದಿದೆ. ಟಿ. ಎನ್‌.ಶೇಷನ್‌ ಅವರು ಭಾರತದ ಮುಖ್ಯ ಚುನಾವಣಾಧಿಕಾರಿ ಆಗಿದ್ದಾಗ ಈ ಕುರಿತು ಕೈಗೊಂಡ ಕೆಲವು ಕಠಿನ ಕ್ರಮಗಳು ಚುನಾವಣಾ ಸುಧಾರಣೆಯ ಪಥದಲ್ಲಿ ಮಹತ್ವ ಪಡೆದುಕೊಂಡಿದ್ದವು. ಆದರೆ, ದಿನೇ ದಿನೇ ಚುನಾವಣೆಗಳಲ್ಲಿ ಹಣದ ಪಾತ್ರ ಹೆಚ್ಚಾಗುತ್ತಿದೆ ಎಂಬುದು ಎಲ್ಲರ ಅನುಭವ. ನಗರ ಪಾಲಿಕೆ ಚುನಾವಣೆಗಳಲ್ಲಿಯೂ ಹಲವಾರು ಕೋಟಿ ರೂ. ಖರ್ಚು ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಂದೊಮ್ಮೆ ಮಹಾತ್ಮ ಗಾಂಧೀಜಿ, ಅಬ್ದುಲ್‌ ಕಲಾಂ ಅಥವಾ ಅಣ್ಣಾ ಹಜಾರೆಯಂಥವರು ನಿಲ್ಲಲು ಬಯಸಿದರೆ ಅವರ ಬಳಿ ಹಣವಿಲ್ಲವೆಂಬ ಅಂಶವೇ ದೊಡ್ಡ ತೊಡಕೆಂದು ಇಂದಿನ ರಾಜಕಾರಣದಲ್ಲಿ ಆಗಾಗ ಕೇಳಿ ಬರುವ ಮಾತು.

ಮತ್ತಷ್ಟು ಓದು »