ಮಹಿಳೆಯರ ಸಮಸ್ಯೆಗಳು – ಒಂದು ನೋಟ
– ಮು.ಅ ಶ್ರೀರಂಗ, ಬೆಂಗಳೂರು
ನಮ್ಮ ಬುದ್ಧಿಜೀವಿಗಳು ಸಾಹಿತಿಗಳು ಅದರಲ್ಲೂ ಮುಖ್ಯವಾಗಿ ಸ್ತ್ರೀವಾದಿ ಸ್ತ್ರೀಸಂವೇದನೆ ಎಂಬ ಹೆಸರುಗಳಿಂದ ಪ್ರಸಿದ್ಧರಾಗಿರುವ ಒಂದು ಸಾಕಷ್ಟು ದೊಡ್ಡ ಗುಂಪು ಮಾಡುತ್ತಿರುವ ಒಂದು ಪ್ರಮಾದವೆಂದರೆ,ನಮ್ಮ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಇಂದಿನ ಎಲ್ಲಾ ಸಮಸ್ಯೆಗಳಿಗೆ ಒಬ್ಬ ಊಹಾತ್ಮಕ ಶತ್ರುವನ್ನು ತಂದು ಜನತೆಯ ಮುಂದಿರಿಸಿ, ಆ ಎಲ್ಲಾ ಸಮಸ್ಯೆಗಳಿಗೂ ಈತನೇ ಕಾರಣ ಎಂದು ದೂಷಿಸುತ್ತಿರುವುದು. ಆ ಊಹಾತ್ಮಕ ಶತ್ರುವೇ “ಮನು”ಮತ್ತು ಆತನ ಹೆಸರಿನಲ್ಲಿದೆ ಎನ್ನಲಾಗುತ್ತಿರುವ “ಮನು ಸಂಹಿತೆ”. ಜತಗೆ ಆತನ ವಂಶಜರಂತೆ ವರ್ತಿಸುತ್ತಿರುವ ಇಂದಿನ ಮೇಲ್ಜಾತಿಗಳು. ಈ ಬುದ್ಧಿಜೀವಿಗಳು ತಮ್ಮ ವಾದಕ್ಕೆ ಪೂರಕವಾಗಿ “ಬ್ರಿಟೀಶ್ ಚರಿತ್ರಕಾರರು”ಬರೆದ “ನಮ್ಮ ಇತಿಹಾಸ”ವನ್ನು ತಮ್ಮ ವಾದಕ್ಕೆ ಸಾಕ್ಷ್ಯ ಎಂಬಂತೆ ತೋರಿಸುತ್ತಿದ್ದಾರೆ.
ಇಂದು ಆಗಾಗ ಚರ್ಚೆಗೆ ವಸ್ತುವಾಗಿರುವ ಎರಡು ವಿಷಯಗಳೆಂದರೆ:-
(೧) ಮಹಿಳೆಯರ “ಆ ಮೂರುದಿನಗಳ” ಮತ್ತು (೨) “ವಿಧವೆಯರ”ಸಮಸ್ಯೆಗಳು.