ಸಾ ನಿಗಮ..ಪಾದ ನೀ ಸಾ?
– ತುರುವೇಕೆರೆ ಪ್ರಸಾದ್
ಎಂಎಲ್ಎ ಮುಳ್ಳಪ್ಪನವರ ಏಕಮಾತ್ರ ಪುತ್ರಿ ಪದ್ಮಾವತಿ ‘ಸ…’ ಎಂದು ಬಾಯಿ ತೆರೆದಾಗ ಸಂಗೀತ ಮೇಷ್ಟ್ರು ಶಾಮಾ ದೀಕ್ಷಿತರು ‘ಸ್ವಲ್ಪ ಎಳೆಯಮ್ಮ..’ ಎಂದರು. ಕೂಡಲೇ ಪದ್ಮಾವತಿ ಬಾಯಲ್ಲಿದ್ದ ಚೂಯಿಂಗ್ ಗಮ್ನ ದೀಕ್ಷಿತರ ಮೂತಿಗೇ ಬರುವಂತೆ ಎಳೆದಾಗ ದೀಕ್ಷಿತರು ಅಸಹ್ಯದಿಂದ ಮುಖ ಹಿಂಡಿದರು. ‘ ಎಳೆಯೋದು ಅಂದ್ರೆ ಈ ಸುಡುಗಾಡು ಚೂಯಿಂಗ್ಗಮ್ನಲ್ಲ..ಸ್ವರನಮ್ಮ..’ ಎಂದರು ಅಸಹನೆಯಿಂದ. ಪದ್ಮಾ ತಾರಕ ಸ್ವರದಲ್ಲಿ ‘ ಸಾ…’ ಎಂದು ಬೊಬ್ಬೆ ಹೊಡೆದಾಗ, ಆ ಕರ್ಕಶ ಸ್ವರ ಕೇಳಲಾಗದೆ ‘ಶಿವ ಶಿವಾ’ಎಂದು ಕಿವಿ ಮುಚ್ಚಿಕೊಂಡರು.’ಅಷ್ಟೊಂದು ಎಳೀಬಾರದಮ್ಮ..’ ಎಂದು ಕಿವಿಯಲ್ಲಿ ಬೆರಳಿಟ್ಟುಕೊಂಡೇ ಬೇಡಿಕೊಂಡರು. ಪದ್ಮಾವತಿ ತಲೆಯಾಡಿಸಿ ದೀಕ್ಷಿತರ ಮುಖಕ್ಕೇ ಕೆಮ್ಮಿ, ಕ್ಯಾಕರಿಸಿ ಕಾಫಿ ಎಂಬ ಕಲಗಚ್ಚು ಹೀರಿ ಗಂಟಲು ಹದಮಾಡಿಕೊಂಡು ಬರಲು ಒಳಗೆ ಹೋದಳು. ದೀಕ್ಷಿತರು ಧೋತರದಿಂದ ಪದ್ಮಾವತಿ ಉಗಿದಿದ್ದನ್ನು ಒರೆಸಿಕೊಂಡು ನಿಟ್ಟುಸಿರಿಟ್ಟರು.
ಪಾಪ್, ರ್ಯಾಪ್, ರಾಕ್ ಅಬ್ಬರದಲ್ಲಿ ದೀಕ್ಷಿತರ ಶಾಸ್ತ್ರೀಯ ಸಂಗೀತ ಔಟ್ ಡೇಟೆಡ್ ಆಗಿಹೋಗಿತ್ತು. ಮನೆಯೊಳಗಿನ ಹೆಂಡತಿ ಮಕ್ಕಳೆಂಬ ಪಕ್ಕ ವಾದ್ಯಗಳ ಮಧ್ಯೆ ದೀಕ್ಷಿತರಿಗೆ ಮುತ್ತಯ್ಯ ದೀಕ್ಷಿತರ ಕೀರ್ತನೆಯನ್ನು ಮೆಲುಕು ಹಾಕಲೂ ಅವಕಾಶವಿರಲಿಲ್ಲ. ರಾಮನವಮಿ, ಶಂಕರ ಜಯಂತಿ ಮುಂತಾದ ಸಮಾರಂಭಗಳಲ್ಲಿ ಲೈಟ್ ಮ್ಯೂಸಿಕ್ ಎಂದು ಬಳ್ಳಿ ನಡುವಿನ ಲತಾಂಗಿ ಸ್ಟೇಜ್ ಹತ್ತಲು ಶುರುಮಾಡಿದ ಮೇಲಂತೂ ದೀಕ್ಷಿತರ ಆಲಾಪನೆಯನ್ನು ಕೇಳುವವರೇ ಇಲ್ಲದಾಗಿ ಹೋಯಿತು. ಅಸ್ತಮಾದಿಂದ ದೀಕ್ಷಿತರು ಅನವರತ ಗೊರ ಗೊರ ಎನ್ನುವಂತೆ ತಿದಿಯೊತ್ತಿದರೆ ಅವರ ಹಾರ್ಮೊನಿಯಂ ಪೆಟ್ಟಿಗೆಯೂ ಬುಸ ಬುಸ ಎಂದು ನಿಟ್ಟುಸಿರುಬಿಡುತ್ತಿತ್ತು. ದೀಕ್ಷಿತರು ಇಂತಹ ಸಂಕಷ್ಟ ಸಮಯದಲ್ಲಿ ಎಂಎಲ್ಎ ಮುಳ್ಳಪ್ಪನವರ ಮಗಳು ಪದ್ಮಾವತಿಗೆ ಸಂಗೀತ ಕಲಿಯುವ ಹುಚ್ಚು ಹತ್ತಿತ್ತು. ತಾನೂ ಫಿಲಂ ಸ್ಟಾರ್ ರಮಯಾ ತರ ಆಗುತ್ತೇನೆಂದು ಅಪ್ಪನ ಬೆನ್ನು ಹತ್ತಿದ್ದಳು.
ಅನ್ನ ಭಾಗ್ಯದ ಮುಂದೆ ಇನ್ನು ಭಾಗ್ಯವುಂಟೆ?
– ತುರುವೇಕೆರೆ ಪ್ರಸಾದ್
ಉಡುಪಿ ಕೃಷ್ಣನ ದರ್ಶನಕ್ಕೆ ಕನಕನ ಕಿಂಡೀಲಿ ಭಕ್ತರು ಕಾದಿದ್ದಂತೆ, ಕೃಷ್ಣಾ ಮುಂದೆ ಬೆಳಗಿನ ಥಂಡೀಲಿ ಸಾವಿರಾರು ಜನ ಸಿಎಂ ಸಾಹೇಬ್ರ ದರ್ಶನಕ್ಕೆ ಕಾದಿದ್ರು. ಅಂತೂ ಸಿಎಂ ಸಾಹೇಬ್ರು ಕಾರಿಳಿದು ಸರ ಸರ ಬಂದ್ರು. ಅವರದ್ದೇ ಪಕ್ಷದ ಎಮ್ಮೆಲ್ಯೆ ಓಡಿ ಬಂದು ಒಂದು ಅರ್ಜಿ ಕೊಟ್ರು:
‘ಏನ್ರೀ ಇದು? ಟ್ರಾನ್ಸ್ಫರ್ ಕ್ಯಾನ್ಸಲೇಶನ್ಗೆ ಅರ್ಜಿ ಕೊಟ್ಟಿದೀರಿ?’
‘ ನನ್ನ ಕ್ಷೇತ್ರದಲ್ಲಿ ಇದ್ದ ಬದ್ದ ಆಫೀಸರ್ಗಳನ್ನೆಲ್ಲಾ ಎತ್ತಂಗಡಿ ಮಾಡಿದೀರಿ.ಎಲೆಕ್ಷನ್ನಲ್ಲಿ ನಮ್ ಕೈ ಬಲಪಡಿಸೋಕೆ ಎಷ್ಟೆಲ್ಲಾ ದುಡ್ದಿದಾರೆ. ಒಂದಿಷ್ಟು ಕೈ ಬಿಸಿ ಮಾಡ್ಕೊಳಾದು ಬೇಡ್ವಾ? ಅಷ್ಟರಲ್ಲೇ ಎಲ್ಲರನ್ನ ಎತ್ತಂಗಡಿ ಮಾಡುದ್ರೆ ಹೇಗೆ? ಎಲ್ಲರನ್ನ ವಾಪಸ್ ಹಾಕುಸ್ಕೊಡಬೇಕು’
‘ಸರಿ! ನೋಡೋಣ ನಡೀರಿ, ನೆಕ್ಸ್ಟ್..!’ ಒಬ್ಬ ಹುಡುಗ ಒಂದು ಅರ್ಜಿ ಹಿಡ್ಕಂಡು ಬಂದ.
ಉತ್ತರಕುಮಾರರ ‘ಚೋರ್’ದಾಮ್ ಯಾತ್ರೆ!
– ತುರುವೇಕೆರೆ ಪ್ರಸಾದ್
ಸುಂದ್ರಮ್ಮನ ವಠಾರದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಕೈಲಾಸ್ ಟ್ರಾವೆಲ್ಸ್ನಲ್ಲಿ ಚಾರ್ದಾಮ್ ಯಾತ್ರೆಗೆ ಹೋದ ವಠಾರದ ಕಲಿಗಳಾದ ವೆಂಕ, ಸೀನ,ನಾಣಿ ವಾರವಾದರೂ ಪತ್ತೇನೇ ಆಗಿರಲಿಲ್ಲ. ಟಿವಿನಲ್ಲಿ ಅಲ್ಲಿನ ಪ್ರಚಂಡ ಜಲಪ್ರಳಯ ನೋಡಿದ ಮೇಲೆ, ಅಲ್ಲಿಂದ ಬಚಾವ್ ಆಗಿ ಬಂದೋರು ತಮ್ಮ ಥರಗುಟ್ಟುವ ಅನುಭವ ಹೇಳಿದ ಮೇಲೆ ಆ ಮಹಾ ಪ್ರಳಯದಲ್ಲಿ ಈ ಮೂವರೂ ಹರೋ ಹರ ಅಂದು ಕೇದಾರನಾಥನ ಪಾದ ಸೇರ್ಕಂಡಿದಾರೆ ಅಂತ ಗ್ಯಾರೆಂಟಿ ಆಗಿತ್ತು. ಸುಂದ್ರಿಗೆ ಒಳಗೊಳಗೇ ಖುಷಿನೇ ಆಗಿತ್ತು. ಮನೆಹಾಳು ಮುಂಡೇವು! ವಠಾರನೂ ಕಾಲಿ ಮಾಡದೆ,ಇಲ್ಲಿರೋರನ್ನ ನೆಮ್ಮದಿಯಾಗಿ ಇರೋಕೂ ಬಿಡದೆ ದಿನಬೆಳಗಾದರೆ ಪ್ರಾಣ ತಿಂತಿದ್ವು. ಈ ನೆವದಲ್ಲಾದರು ನೆಗದು ಬಿದ್ದು ಸತ್ತವಲ್ಲ!
ಪೀಡೆ ತೊಲಗ್ತು ಅಂತ ನಿರಾಳವಾದ್ಲು. ಮೊದ್ಲೇ ಆಸೆಬುರಕ ಮುಂಡೇವು! ಅರ್ಧದಲ್ಲೇ ಸತ್ತಿವೆ..ಇಷ್ಟು ದಿವಸ ಕಾಡಿದ್ದು ಸಾಲದೆ ಮತ್ತೆಲ್ಲಾದರೂ ಪೀಡೆಯಾಗಿ ಕಾಡಾವು ಎಂದು ಒಂದು ವಡೆ, ಪಾಯಸದ ಊಟ ಹಾಕಿಸಿ ಮೊಸಳೆ ಕಣ್ಣೀರು ಸುರಿಸಿ ಎಳ್ಳು ನೀರು ಬಿಟ್ಟು ಬಿಡಬೇಕು ಅಂತ ತೀರ್ಮಾನ ಮಾಡುದ್ಲು ಸುಂದ್ರಿ. ಅದರಂತೆ ಒಂದು ಸಂತಾಪ ಸೂಚಕ ಸಭೆನೂ ಏರ್ಪಾಡಾಯ್ತು. ಮೂರು ಜನರ ಎಲೆಕ್ಷನ್ ಐಡೆಂಟಿಟಿ ಕಾರ್ಡ್ ಇಟ್ಟು( ದೊಡ್ಡ ಫೋಟೊ ಮಾಡಿಸೋದು ದಂಡ ಅಂತ) ಒಂದೊಂದು ಕಣಗಲೆ, ಚೆಂಡು ಹೂವಿಟ್ಟು ವಠಾರದೋರು ಶೋಕ ಆಚರಿಸುದ್ರು. ಎಲ್ಲಾ ಮೂವರ ( ಇಲ್ಲದ) ಗುಣಗಳ ಗುಣಗಾನ ಮಾಡುದ್ರು.ಇನ್ನೇನು ವಡೆ ಕಡೀಬೇಕು ಅನ್ನುವಷ್ಟರಲ್ಲಿ ವಠಾರದ ಬಾಗಿಲಲ್ಲಿ ನೆರಳು ಕಾಣಿಸ್ಕೊಂತು. ಅತ್ತ ನೋಡುದ್ರೆ ಬಾಗಿಲಲ್ಲಿ ವೆಂಕ, ಸೀನ, ನಾಣಿ ತಟ್ಟಂತ ಪ್ರತ್ಯಕ್ಷ ಆದ್ರು. ಎಲ್ಲಾ ಶಾಕ್ ಆದ್ರು.ಸುಂದ್ರಿ ಅಂತೂ ಧರೆಗಿಳಿದು ಹೋದ್ಲು.ಕೆಲವರಂತೂ ದೆವ್ವ ಅಂತ ಹೆದರಿಕೊಂಡು ಊಟದ ಎಲೆನೂ ಬಿಟ್ಟು ಚಡ್ಡಿಲೇ ಒಂದು ಎರಡು ಮಾಡಿಕೊಂಡು ಓಡಿ ಹೋದ್ರು. ಉತ್ತರಖಂಡ ದುರಂತದಲ್ಲಿ ಮಾಂಸದ ಮುದ್ದೆಯಾಗಿ ಎಲ್ಲೋ ಕೊಚ್ಕಂಡು ಹೋಗಿದಾರೆ ಅಂದ್ಕೊಂಡಿದ್ದ ಈ ಪಾಕಡಾಗಳು ಧಿಡೀರಂತ ಪ್ರತ್ಯಕ್ಷ ಆದರೆ ಹೇಗಾಗಿರಬೇಡ? ಇದ್ದಿದ್ದರಲ್ಲಿ ಸ್ವಲ್ಪ ಧೈರ್ಯ ವಹಿಸಿ ಸುಂದ್ರಿ ಕೇಳುದ್ಲು.
ಕೃಷ್ಣ ಗಾರುಡಿ ವರ್ಸಸ್ ನರೀಂದ್ರ ಮೋಡಿ!
– ತುರುವೇಕೆರೆ ಪ್ರಸಾದ್
ಮೋದಿ: ಗುರುಗಳೇ, ಕಮಲ ಸೈನ್ಯದ ಮುಂದಿನ ಮಹಾಸಮರ ದಳಪತಿಯಾಗಿ ನೇಮಿಸಲ್ಪಟ್ಟಿರುವೆ. ಕೃಪೆ ಮಾಡಿ ಆಶೀರ್ವದಿಸಿ
ಅಡ್ವಾನಿ: ಛೀ! ಗುರುದ್ರೋಹಿ, ತೊಲಗಿಲ್ಲಿಂದ! ನಿನ್ನ ಮುಖ ತೋರಿಸಬೇಡ ನನಗೆ..!
ಮೋದಿ: ಈ ದುರಾಗ್ರಹವೇಕೆ ಗುರುವೇ! ಇದು ನೀವೇ ಕಲಸಿಕೊಟ್ಟ ಪಟ್ಟು.. ಏಕೀ ವಿರೋಧ? ಗುರು ಮಿಂಚಿನ ಶಿಷ್ಯಡು ಎಂದು ಎದೆ ತಟ್ಟಿ ಹೇಳುವುದು ಬಿಟ್ಟು! ನಿಮ್ಮ ಮುಖವಾಣಿಯಾಗಿದ್ದ ನನಗೇ ನೀವು ಅಡ್ಡವಾಣಿಯಾಗುವುದೇ?
ಅಡ್ವಾನಿ: ರಥ ಹತ್ತಿ ಅತಳ ಸುತಳ ಪಾತಾಳ ಸುತ್ತಿದ ಈ ಅತಿರಥ ಮಹಾರಥನ ಮುಂದೆ ನೀನ್ಯಾವ ಲೆಕ್ಕ?
ಮೋದಿ: ಯಾರು ತಿಳಿಯರು ನಿಮ್ಮ ರಥಬಲದ ಪರಾಕ್ರಮ
ಸಂದಿಗೊಂದಿಗಳೊಳ್ ಸಂಚರಿಸಿದ ನಿಮ್ಮ ರಥಯಾತ್ರೆಗಳ ಕರ್ಮ
ಎಲ್ಲದಕೂ ಕಾರಣವು ಶ್ರೀ ರಾಮ ನಾಮ
ಕಲ್ಯಾಣಸಿಂಗ್ ಇಲ್ಲದಿದ್ದರೆ ಮೂರು ನಾಮ
ಕಡಾಣಿ ಮುರಿದ ರಥದೊಡೆಯ ನೀವು ತೃಣಕ್ಕೆ ಸಮಾನ..!
ಅಡ್ವಾನಿ: ಜನಸಂಘ ಶೂರ ನಾ ಶ್ರೀರಾಮ ಬಲನೋ, ಸಂಘದೊಡನೆ ಹೋರಾಡಿ ಅಧ್ಯಕ್ಷ ಗಾದಿಯಂ ಪಡೆದವನೋ,ಗಡ್ಕರಿಯ ಉತ್ಸವಕೆ ಸಂಚಕಾರ ತಂದವನೋ? ಪ್ರಧಾನಿ ಪಟ್ಟಕ್ಕೆ ಎದುರಾಗೋ ಕುರಿಗಳಂ ನೀವಾಳಿಸೋ ವ್ಯಾಘ್ರನಿವನೋ..ಉಗ್ರ ಪ್ರತಾಪಿ..





