ಇವರ ಪಾಲಿಗೆ ‘ಹೆಣ್ಣು’ ಟಿ ಆರ್ ಪಿ ಹೆಚ್ಚಿಸುವ ಕ್ಯಟಲಿಸ್ಟ್ ಮಾತ್ರ…
– ಚೇತನಾ ತೀರ್ಥಹಳ್ಳಿ
ಸತ್ತು ಬಿದ್ದಿತ್ತು ಭಾರತ’ – ಇದು ಡಿಸೆಂಬರ್ 2, 2007ರಂದು ಬರೆದು ನನ್ನ ಬ್ಲಾಗ್ ನಲ್ಲಿ ಹಾಕಿಕೊಂಡಿದ್ದ ಲೇಖನ.
ಆ ದಿನ ಅಸ್ಸಾಮಿನ ಬುಡಕಟ್ಟು ಜನಾಂಗವೊಂದು ತನ್ನ ಹಕ್ಕುಗಳಿಗಾಗಿ ಒತ್ತಾಯಿಸಿ ಧರಣಿ ಹೂಡಿತ್ತು. ಅದರಲ್ಲಿ ಹೆಂಗಸರೂ ಇದ್ದರು. ದಿಬ್ರುಗಡ್ ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿತ್ತು. ಅದೇ ಸಮಯಕ್ಕೆ ಗುವಹಾಟಿಯ ಬೀದಿಯೊಂದರಲ್ಲಿ ಒಬ್ಬ ಟ್ರೈಬಲ್ ಹೆಣ್ಣುಮಗಳು ಪ್ರತಿಭಟನೆಯ ಬೋರ್ಡ್ ಹಿಡಿದು ತನ್ನ ಪಾಡಿಗೆ ನಿಂತಿದ್ದಳು. ತನ್ನ ಜನಾಂಗದ ಹಕ್ಕಿಗಾಗಿ ಶಾಂತಿಯುತ ಪ್ರತಿರೋಧ ತೋರುತ್ತಿದ್ದ ಆ ಹೆಣ್ಣನ್ನು ಗುವಹಾಟಿಯ ಕೆಲವು ಗಂಡಸರು ಅಟ್ಟಾಡಿಬಿಟ್ಟಿದ್ದರು. ಜನಾಂಗೀಯ ದ್ವೇಷ, ಮತ್ತೆಲ್ಲೋ ನಡೆದ ಹಿಂಸೆಗೆ ಪ್ರತಿಯಾಗಿ ಇಲ್ಲಿ ಅಸಹಾಯಕ ಹೆಣ್ಣಿನ ಮೇಲೆ ಮುಗಿಬಿದ್ದಿದ್ದರು. ಆಗಲೂ ಒಬ್ಬ ಮೀಡಿಯಾ ಹುಡುಗ ಫೋಟೋಗಳನ್ನ ತೆಗೆದು “ಭೇಷ್” ಆಗಿದ್ದ!
~
2012ರ ಜುಲೈ 13. ಪಬ್ ನಿಂದ ಹೊರಬಂದು ಸ್ನೇಹಿತರ ಜತೆ ಜಗಳಾಡುತ್ತಿದ್ದ ಹುಡುಗಿಯ ಮೇಲೆ 20 ಜನ ಗಂಡಸರು ಕೈಮಾಡಿದರು. ಕೈಹೋದಲ್ಲೆಲ್ಲ ಮುಟ್ಟಿ ತೆವಲು ತೀರಿಸಿಕೊಂಡರು. ಅವಳ ಬಟ್ಟೆ ಚಿಂದಿಯಾಯ್ತು. ಇದು ಕೂಡ ನಡೆದಿದ್ದು ಗುವಹಾಟಿಯಲ್ಲೇ. ಆಗಲೂ ಒಬ್ಬ ಲೋಕಲ್ ಮೀಡಿಯಾದ ಫೋಟೋಗ್ರಾಫರ್ ಇದ್ದ. ಘಟನೆಯನ್ನ ವಿಡಿಯೋ ಮಾಡಿದ. ನನ್ನಿಂದ ಸಹಾಯ ಅಂತೂ ಮಾಡಲಾಗಲಿಲ್ಲ, ಅದಕ್ಕೆ ಚಿತ್ರೀಕರಣ ಮಾಡಿದೆ ಅಂದ. ಶೂಟ್ ಮಾಡುವಾಗ ವಿಡಿಯೋಗೆ ಬೆಳಕು ಸಾಕಾಗ್ತಿಲ್ಲ, ಅವಳನ್ನ ಈಚೆ ಎಳಕೊಂಡು ಬನ್ನಿ ಅಂತ ಅವನಂದಿದ್ದು ರಟ್ಟಾಯ್ತು.
~
2009ರ ಜನವರಿ 24. ಮಂಗಳೂರಿನ ಪಬ್ ಒಂದರ ಮೇಲೆ ಶ್ರೀರಾಮ ಸೇನೆಯ ವಾನರರು ದಾಳಿ ಮಾಡಿದರು. ಹೆಣ್ಣುಮಕ್ಕಳನ್ನ ಹಿಗ್ಗಾಮುಗ್ಗ ಬಡಿದರು. ಚಾನೆಲ್ ಒಂದು ಅಚ್ಚುಕಟ್ಟಾಗಿ ಚಿತ್ರೀಕರಿಸಿ ಟಿ ಆರ್ ಪಿ ಹೆಚ್ಚಿಸಿಕೊಂಡಿತು. ತಪ್ಪಿಸುವ ಗೋಜಿಗೆ ಹೋಗುವುದು ಹಾಗಿರಲಿ, ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಿತು.
ಮತ್ತಷ್ಟು ಓದು 




