ವಿಷಯದ ವಿವರಗಳಿಗೆ ದಾಟಿರಿ

ಜನವರಿ 27, 2011

28 ವರ್ಷಗಳ ಬಳಿಕ ಬ್ಲೂ ಪಡೆ ಗೆಲ್ಲಬಹುದೇ ವಿಶ್ವಕಪ್!?

‍ನಿಲುಮೆ ಮೂಲಕ

– ಶಂಶೀರ್ ಬುಡೋಳಿ

ಜನವರಿ ೧೭. ಫೆಬ್ರವರಿ ೧೯ರಿಂದ ಎಪ್ರಿಲ್ ೨ ರವರೆಗೆ ಭಾರತ, ಬಾಂಗ್ಲಾದೇಶ ಹಾಗೂ  ಶ್ರೀಲಂಕಾ ದೇಶಗಳ ಅತಿಥೇಯತ್ವದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ಗಾಗಿ ೧೫ ಮಂದಿ ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ ದಿನ. ಸಮತೋಲನ  ರೀತಿಯಲ್ಲಿ ವಿಶ್ವಕಪ್‌ಗಾಗಿ ತಂಡವನ್ನು ಆಯ್ಕೆ ಮಾಡಿರುವ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಜೊತೆಗೆ ಯಶ್ಪಾಲ್ ಶರ್ಮಾ,  ಸುರೇಂದ್ರ ಭಾವೆ, ನರೇಂದ್ರ ಹಿರ್ವಾನಿ ಹಾಗೂ ರಾಜಾ ವೆಂಕಟ್ ಸಮಿತಿಯು ಇಪ್ಪತ್ತೆಂಟು ವರ್ಷಗಳ ಬಳಿಕ ಭಾರತ ತಂಡ ವಿಶ್ವಕಪ್ ಗೆಲ್ಲಬೇಕೆಂಬ ನೆಲೆಯಲ್ಲಿ ತಂಡವನ್ನು ಪ್ರಕಟಿಸಿದಂತಿದೆ.

ಧೋನಿ ನೇತೃತ್ವದ ಭಾರತೀಯ ತಂಡ ಫೇವರೀಟ್ ತಂಡಗಳಲ್ಲೊಂದು ಎಂಬುದು ಸಂಶಯವಿಲ್ಲ. ಟೆಸ್ಟ್ ಅಗ್ರಸ್ಥಾನಿ ಹಾಗೂ ಏಕದಿನ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ ಕ್ರಿಕೆಟ್ ತಂಡ ೨೦೧೧ರ ವಿಶ್ವಕಪ್ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆಲ್ಲುವುದು  ಅನಿವಾರ್ಯವೆಂದು ಗುರಿ ಇಟ್ಟುಕೊಂಡರೆ ಫೈನಲ್ ಹಾದಿಗೇರಬಹುದು. ತಂಡದ ಆಯ್ಕೆ ಸಮತೋಲನವಾಗಿದೆ. ಈ ಜೊತೆಗೆ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ನ್ಯೂಝಿಲೆಂಡ್ ವಿರುದ್ಧ  ಯಾವ  ರೀತಿಯ  ಪ್ರದರ್ಶನ ನೀಡುತ್ತದೆಯೆಂಬುದು ಕೌತುಕವಾಗಿದೆ. ಯಾಕೆಂದರೆ ಇವರೆಗೆ ತವರಿನಲ್ಲಿ ನಡೆದ  ಸರಣಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭಾರತ, ಈ ಬಾರಿಯ ವಿಶ್ವಕಪ್,  ತವರಿನಲ್ಲಿ ನಡೆಯುವುದರಿಂದ್ದ  ವಿಶ್ವಕಪ್ ಜಯಿಸುವ ಫೇವರೀಟ್ ತಂಡಗಳಲ್ಲೊಂದಾಗಿದೆ. ಗ್ರೂಪ್ ಬಿಯಲ್ಲಿ ಸ್ಥಾನ ಪಡೆದಿರುವ ಭಾರತದ ಫೈನಲ್ ಹಾದಿ ಸುಗಮವಾಗಿದೆ ಎಂದು ಹೇಳಬಹುದು. ಯಾಕೆಂದರೆ ಗ್ರೂಪ್ ಬಿಯಲ್ಲಿ  ಭಾರತದ ಜೊತೆಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ, ಐರ್ಲೆಂಡ್ ಹಾಗೂ ಹಾಲೆಂಡ್ ತಂಡಗಳು ಸ್ಥಾನ ಪಡೆದಿವೆ.

ಈಗಾಗಲೇ ವಿಶ್ವಕಪ್ ಮುನ್ನ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್‌ಇಂಡೀಸ್  ತಂಡಗಳ ವಿರುದ್ಧ ಸರಣಿಯಾಡಿರುವ ಭಾರತಕ್ಕೆ ಯಾವ ರೀತಿ ಈ ಎದುರಾಳಿ ತಂಡಗಳನ್ನು ಎದುರಿಸಬೇಕೆಂಬ ತಂತ್ರಗಾರಿಕೆ ಗೊತ್ತಿರಬಹುದು. ಸ್ಪಲ್ಪ ಮಟ್ಟಿಗೆ ದಕ್ಷಿಣ ಆಫ್ರಿಕಾ, ಇಂಡೀಸ್  ಹಾಗೂ ಇಂಗ್ಲೆಂಡ್   ತಂಡದ ವಿರುದ್ಧ ಪ್ರಬಲ ಸ್ಪರ್ಧೆ ಎದುರಿಸುವ ಸಾಧ್ಯತೆಯಿದೆ. ಹೀಗಾಗಿ  ಧೋನಿ ಪಡೆ ಇದನ್ನು ಎದುರಿಸಲು ಸಿದ್ದತೆ ನಡೆಸಬೇಕು. ತವರಿನಲ್ಲಿ  ನಡೆಯುವ  ಪಂದ್ಯವೆಂದು ಅತೀ ಉತ್ಸಾಹ ತಂಡಕ್ಕೆ ಮಾರಕವಾಗಬಹುದು. ವಿಶ್ವದ ಜನತೆಯನ್ನು  ತುದಿಗಾಲಲ್ಲಿ ನಿಲ್ಲಿಸಿರುವ  ಈ ವಿಶ್ವಕಪ್ ಕ್ರಿಕೆಟ್ ಏಷ್ಯಾ ಖಂಡದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.  ಭಾರತಕ್ಕೆ ಮತ್ತೊಮ್ಮೆ ಎರಡನೆ ಸಲ ತವರಿನಲ್ಲಿ ವಿಶ್ವಕಪ್ ಗೆಲ್ಲುವ ಅಪೂರ್ವ ಅವಕಾಶ  ಬಂದಿದೆ ಎನ್ನಬಹುದು. ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿಗೂ ವಿಶ್ವಕಪ್ ಗೆಲ್ಲುವ ತಂಡದ ಆಯ್ಕೆ ಮಾಡುವುದು ಬಹಳ ಸವಾಲಾಗಿಬಿಟ್ಟಿತ್ತಂತೆ. ಹಾಗಾದರೆ  ಧೋನಿ ನಾಯಕತ್ವದ ತಂಡದ ಮೇಲೆ ಎಷ್ಟು ಒತ್ತಡ ಇರಲಿಕ್ಕಿಲ್ಲ? ಹಾಗೂ ಎಷ್ಟೊಂದು ನಿರೀಕ್ಷೆಗಳಿರಲಿಕ್ಕಿಲ್ಲ?  ಏಷ್ಯಾ ಖಂಡದಲ್ಲಿ ನಡೆಯುವ  ವಿಶ್ವಕಪ್‌ಅನ್ನು ಭಾರತ ಒಂದು ವೇಳೆ ಗೆಲ್ಲಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಶ್ರೀಲಂಕಾ , ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಗೆದ್ದರೆ  ಸ್ಪಲ್ಪಮಟ್ಟಿಗೆ ತೃಪ್ತಿ ಪಡಬಹುದು. ಭದ್ರತಾ ಕಾರಣದಿಂದಾಗಿ ಪಾಕಿಸ್ತಾನದಲ್ಲಿ ವಿಶ್ವಕಪ್ ಪಂದ್ಯ ನಡೆಸಲು ಹಿಂದೇಟು ಹಾಕಲಾಗಿದೆ.

ಕಪಿಲ್ ದೇವ್ ನಾಯಕತ್ವದ ತಂಡ , ಮಾಡಿದ ಸಾಧನೆ ೨೦೧೧ರಲ್ಲಿ ಧೋನಿ ಪಡೆ  ಮಾಡಿದರೆ ಅದು  ಧೋನಿ,  ತನ್ನ ನಾಯಕತ್ವದಲ್ಲಿ ಮಾಡುವ ಅತಿ ದೊಡ್ಡ ಸಾಧನೆಯಾಗಲಿದೆ.  ಹೀಗಾಗಿ ಧೋನಿ ನಾಯಕತ್ವದ ಮೇಲೆ ಆಯ್ಕೆ ಸಮಿತಿಯ ಜೊತೆಗೆ ದೇಶದ ಜನತೆಯೆ ಬಹಳ ನಿರೀಕ್ಷೆಯನ್ನಿಟ್ಟುಕೊಂಡಿದೆ. ಆರು ಬ್ಯಾಟ್ಸ್‌ಮನ್, ನಾಲ್ಕು ವೇಗದ ಬೌಲರ್‌ಗಳು, ಮೂರು ಸ್ಪಿನ್ನರ್‌ಗಳು, ಒಂದು ಆಲ್‌ರೌಂಡರ್ ಹಾಗೂ ಒಂದು ವಿಕೆಟ್ ಕೀಪರ್‌ಗಳನ್ನೊಳಗೊಂಡ ಭಾರತ ಕ್ರಿಕೆಟ್ ತಂಡಕ್ಕೆ ಒಂದು ವೇಳೆ ವಿಶ್ವಕಪ್ ಪಂದ್ಯದ ವೇಳೆ ಯಾರಾದರೂ ಗಾಯಾಗೊಂಡರೆ ಅದು ತಂಡಕ್ಕೆ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಹೀಗಾಗಲೇ ಗಾಯಾಗೊಂಡಿರುವ ಸಚಿನ್  ತೆಂಡುಲ್ಕರ್, ಗೌತಮ್ ಗಾಂಭೀರ್, ಪ್ರಣ್ ಕುಮಾರ್ ವಿಶ್ವಕಪ್ ಪಂದ್ಯದ ವೇಳೆ ಚೇತರಿಸಿಕೊಳ್ಳುತ್ತಾರೆಂಬ ನಿರೀಕ್ಷೆಯಿದೆ. ಒಂದು ವೇಳೆ ಇವರು ಫಿಟ್‌ನೆಸ್ ಮತ್ತು ಫಾರ್ಮ್‌ಅನ್ನು ಉತ್ತಮಪಡಿಸಲು ಸಾಧ್ಯವಾಗದಿದ್ದರೆ, ಆಯ್ಕೆ ಸಮಿತಿಯು ಬದಲಿ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಕೂಡಾ ಇರಬಹುದು. ಬಹಳ ನಿರೀಕ್ಷೆ ಮೂಡಿಸಿದ್ದ  ಶಾಂತಕುಮಾರನ್ ಶ್ರೀಶಾಂತ್, ಪ್ರಗ್ಯಾನ್ ಓಝಾ, ರೋಹಿತ್ ಶರ್ಮಾ ಹಾಗೂ ಪಾರ್ಥಿವ್ ಪಟೇಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಮಾತ್ರವಲ್ಲ,  ತಂಡದಲ್ಲಿ ಧೋನಿ  ಜೊತೆಗೆ ಇತರ ವಿಕೆಟ್ ಕೀಪರ್‌ಗಳಾದ ಅಜೆಂಕ್ಯಾ ರಹಾನೆ,  ಪಾರ್ಥಿವ್ ಪಟೇಲ್‌ರನ್ನು ಸೇರಿಸಿಕೊಳ್ಳುವ ಚರ್ಚೆ ನಡೆಯುತ್ತಿತ್ತು. ಆದರೆ ಕೊನೆಗೆ ಧೋನಿಯನ್ನು ತಂಡದ ಏಕೈಕ ವಿಕೆಟ್ ಕೀಪರ್‌ಆಗಿ ಉಳಿಸಿಕೊಳ್ಳಲಾಗಿದೆ. ಸಚಿನ್ ತೆಂಡುಲ್ಕರ್‌ಗೆ ಒಂದು ವೇಳೆ ಇದು ಕೊನೆಯ ವಿಶ್ವಕಪ್ ಆಗುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಹಾಗೂ ಜಾಕ್ ಕಾಲಿಸ್‌ಗೆ ಇದು  ಕೊನೆಯ ವಿಶ್ವಕಪ್ ಎನ್ನಲಾಗುತ್ತಿದೆ. ಭಾರತ ತಂಡ ಮಾತ್ರ ಅಲ್ಲ ಗಾಯಾಳುಗಳ ಸಮಸ್ಯೆ ಎದುರಿಸುತ್ತಿದೆ. ಬದಲು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ,  ಶ್ರೀಲಂಕಾ, ನ್ಯೂಝಿಲೆಂಡ್ ತಂಡಗಳು ಸಹ ಗಾಯಾಳುಗಳ ಸಮಸ್ಯೆ ಎದುರಿಸುತ್ತಿದೆ.

ಭಾರತದ ಬೌಲಿಂಗ್ ನೇತೃತ್ವ ವಹಿಸಿರುವ ಝಹೀರ್ ಖಾನ್‌ರ ಮೇಲೆ ಭಾರೀ ನಿರೀಕ್ಷೆಯಿಡಲಾಗಿದೆ. ಇವರ ಜೊತೆಗೆ ಆಶೀಶ್ ನೆಹ್ರಾ, ಮುನಾಫ್ ಪಟೇಲ್, ರವಿಚಂದ್ರನ್ ಅಶ್ವಿನ್ ಸಾಥ್ ನೀಡಲಿದ್ದಾರೆ. ಸ್ಪಿನ್  ವಿಭಾಗದ  ಹರ್ಭಜನ್ ಸಿಂಗ್‌ರ ಜೊತೆಗೆ ಪಿಯೂಸ್ ಚಾವ್ಲಾ ಕೂಡಾ ಯಾವ ರೀತಿಯ ಪ್ರದರ್ಶನ ನೀಡಬಲ್ಲುರು ಎಂಬುದು ಕೌತುಕವಾಗಿದೆ.  ಹದಿನೈದು ಮಂದಿಯಲ್ಲಿ  ಯಾರನ್ನು  ಆಡುವ ಬಳಗದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂಬುದರ ಮೇಲೆ ಕೂಡಾ ಬಹಳ  ನಿರೀಕ್ಷೆಯಿಡಲಾಗಿದೆ. ತಂಡದ ಆಯ್ಕೆ ಸಮರ್ಥವಾಗಿದೆಯೊ ಅಥವಾ ಆಗಿಲ್ಲವೆಂಬುದು ಮುಖ್ಯವಲ್ಲ. ಬದಲು ಆಯ್ಕೆಗೊಂಡಿರುವ ಆಟಗಾರರು ವಿಶ್ವಕಪ್ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ  ನೀಡುತ್ತಾರೆ ಎಂಬುದು ಮುಖ್ಯ ಇದರ ಮೇಲೆ ತಂಡದ ಭವಿಷ್ಯ ನಿಂತಿದೆ. ಎಲ್ಲಾ ಆಟಗಾರರು ಸಮರ್ಥರೆ.  ಹೀಗಾಗಿ ಆಟಗಾರರ ಆಟದ ಸಾಮರ್ಥ್ಯದ ಬಗ್ಗೆ ಚರ್ಚೆ ಮಾಡುವುದು ಒಳಿತಲ್ಲ.

ಚೊಚ್ಚಲ ವಿಶ್ವಕಪ್‌ಗೆ ಆಯ್ಕೆಗೊಂಡಿರುವ ಆರ್.ಅಶ್ವಿನ್ ಹಾಗೂ ಪಿಯೂಸ್ ಚಾವ್ಲಾರಿಗೆ ಆಡುವ ಅವಕಾಶ ನೀಡಿದರೆ ಇದನ್ನು ಇವರು ಸಮರ್ಥವಾಗಿ ಬಳಸಿಕೊಂಡರೆ ಇದು ಇವರಿಬ್ಬರ ಮುಂದಿನ ಭವಿಷ್ಯವನ್ನು ನಿರ್ಧರಿಸಬಲ್ಲುದು. ಬಾಯಿಗೆ ಬಂದ ತುತ್ತನ್ನು ಕಳೆದುಕೊಳ್ಳಬಾರದು ಎಂಬ ಮಾತು ಈ ಆಟಗಾರರಿಗೆ ಹಾಗೂ ಭಾರತ ತಂಡಕ್ಕೆ ಅನ್ವಯಿಸುತ್ತದೆ. ೧೯೮೩ರ ವಿಶ್ವಕಪ್ ಗೆದ್ದ  ಸಂಭ್ರಮವನ್ನೇ ಈಗಲೂ ಸವಿಯುತ್ತಿರುವ ಭಾರತೀಯರಿಗೆ ಈಗ ಹೊಸ ವಿಶ್ವಕಪ್  ಗೆದ್ದ ಸವಿ ಸವಿಯುವ ಆಶೆ ಮೂಡಿದೆ. ಹೀಗಾಗಿ  ಧೋನಿ ನೇತೃತ್ವದ ತಂಡ ಫೈನಲ್ ಗಾದಿ ಏರುವವರೆಗೆ ಪ್ರಬಲ ಹಾಗೂ ಸಾಮಾನ್ಯ ಸ್ಪರ್ಧೆಯನ್ನು ಸಮರ್ಥವಾಗಿ ನಿಭಾಯಿಸಬೇಕು. ಒಂದು ದೃಷ್ಟಿಯಲ್ಲಿ ನೋಡುವುದಾದರೆ ಭಾರತಕ್ಕೆ ವಿಶ್ವಕಪ್ ಗೆಲ್ಲುವುದು ಕಷ್ಟದ ಸಂಗತಿಯೇನಲ್ಲ.

ಸಮರ್ಥ ಆಟಗಾರರು ಇದ್ದ ಮೇಲೆ ಭಾರತ ಏನೂ ಚಿಂತೆ ಮಾಡಬೇಕಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಹಾಗೂ ತೃತೀಯ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಸ್ಫೋಟಕ ಬ್ಯಾಟ್ಸ್‌ಮನ್ ಯೂಸುಫ್ ಪಠಾಣ್‌ರ ಮೇಲೆ ಹಾಗೂ ಯುವರಾಜ್ ಸಿಂಗ್, ಮುನಾಫ್ ಪಟೇಲ್, ಝಹೀರ್ ಖಾನ್, ನೆಹ್ರಾ ಹಾಗೂ  ಐಪಿ‌ಎಲ್‌ನ ದುಬಾರಿ ಆಟಗಾರ ಗೌತಮ್ ಗಾಂಭೀರ್  ಮೇಲೆ ಭಾರೀ ನಿರೀಕ್ಷೆಯಿಡಲಾಗಿದೆ. ಒಂದು ವೇಳೆ ವಿಶ್ವಕಪ್  ಗೆಲ್ಲುವುದಕ್ಕಿಂತ ಮುಂಚೆ ತಂಡದ ಪ್ರದರ್ಶನ ಬಹಳ ಮುಖ್ಯವಾಗುತ್ತದೆ. ವಿವಿಧ ದೇಶಗಳ ಕ್ರಿಕೆಟ್ ತಂಡಗಳು ಭಾಗವಹಿಸುತ್ತಿರುವುದರಿಂದ್ದ  ಟೀಮ್ ಇಂಡಿಯಾ ವಿಶ್ವಕಪ್ ಪಂದ್ಯದಲ್ಲಿ ಸಂಘಟಿತ ಹೋರಾಟ ಪ್ರದರ್ಶಿಸಬೇಕಾಗಿದೆ. ಹೀಗಾದಲ್ಲಿ ಮಾತ್ರ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಬಹುದು.  ಆರಂಭಿಕ ಬ್ಯಾಟ್ಸ್‌ಮನ್‌ಗಳ ವಿಕೆಟ್ ಬೇಗನೆ ಪತನಗೊಂಡರೆ ಮತ್ತೆ ತಂಡದ ಬಲ ಹೀನವಾದಂತೆ ಇತರ ಆಟಗಾರರ ವಿಕೆಟ್ ಉರುಳುವುದು  ಬ್ಲೂ ತಂಡದ ಒಂದು  ಮೈನಸ್ ಪಾಯಿಂಟ್. ಇದು ವಿಶ್ವಕಪ್‌ನಲ್ಲಿ ಪುನರಾವರ್ತನೆಯಾಗಬಾರದು. ವಿಶ್ವಕಪ್ ಪಂದ್ಯದ ಸಮಯದಲ್ಲಿ ಜಯವೊಂದೆ ತಮ್ಮ ಗುರಿ ಎಂಬ ಭಾವನೆ ಟೀಮ್ ಇಂಡಿಯಾದಲ್ಲಿದ್ದರೆ ಧೋನಿ ಪಡೆಗೆ ಯಾವ ತಂಡಗಳು  ಪ್ರಬಲವಾಗಿ  ತೋರಲಾರವು.  ಏನೇ ಚರ್ಚೆಗಳಿದ್ದರೂ, ಯಾರು, ಯಾವಾಗ ಸೋಲುತ್ತಾರೆ,  ಗೆಲ್ಲುತ್ತಾರೆ ಎಂಬುದಕ್ಕೆ ವಿಶ್ವಕಪ್ ಆರಂಭವಾಗುವವರೆಗೆ ಕಾಯಬೇಕು. ಧೋನಿ ಪಡೆಯಂತೂ ವಿಶ್ವಕಪ್ ಗೆಲ್ಲುವ ಗುರಿಯಲ್ಲಿದೆ.

ಗುಡ್‌ಲಕ್ ಟೀಮ್ ಇಂಡಿಯಾ!

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments