ಹೀಗೆಲ್ಲಾ ಉಂಟು!
ಬೃಹತ್ ಬೆಂಗಳೂರಿನ ಕೆಲವು ಅನುಭವಗಳನ್ನು ನಾನೀಗ ಹೇಳ ಹೊರಟಿರುವೆ .ನೆನಪಾದರೆ ನಗು, ಅಳು ಎರಡೂ ಬರುವ ಘಟನೆಗಳವು. ಅದೊಂದು ಶನಿವಾರ ರಜೆಯಿದ್ದ ಕಾರಣ ಸ್ನೇಹಿತೆಯ ರೂಮಿಗೆ ಹೊರಟಿದ್ದೆ. ನಾನಿದ್ದ BTM ನಿಂದ ಅಷ್ಟು ದೂರದ ಕೋರಮಂಗಲಕ್ಕೆ ಆಟೋದಲ್ಲೇ ಹೊರಟಿದ್ದೆ. .(ನನ್ನಂತಹ ಇನ್ನೊಂದು ೪ ಜನರಿದ್ದರೆ ಆಟೋದವರ ಹೊಟ್ಟೆಪಾಡು ಬಹು ಸುಲಭ !)ಕೋರಮಂಗಲ (ಮೊನ್ನೆ ಮೊನ್ನೆ ಗೊತ್ತಾಗಿದ್ದು ಹೆಸರು )ದಲ್ಲೊಂದು ಸಿಗ್ನಲ್ ಬಿತ್ತು.ಇಳಿಯಲಿರುವ ಸ್ಟಾಪ್ ಮುಂದಿತ್ತು.ನಾನು ವಾಹನದಲ್ಲಿ ಕೂತ ಪಯಣಿಗರ ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದ ಭಿಕ್ಷುಕರು ,ಮಾರಾಟಗಾರರನ್ನು ನೋಡುತ್ತಿದ್ದೆ .ಆಗ ನನ್ನ ದೃಷ್ಟಿ ಬಿತ್ತು ನೋಡಿ, ಸಿಗ್ನಲ್ ಕೆಳಗೆ ನಿಂತ ಬೈಕ್ ಸವಾರನ ಜೊತೆ ಜಗಳ ಆಡುತ್ತಿದ್ದ ಒಬ್ಬ ಹಿಜಡಾ ಮೇಲೆ. ನಮ್ಮ ಉಡುಪಿ ,ಕುಂದಾಪುರದ ಕಡೆ ಇವರು ಬೆರಳೆಣಿಕೆಯಷ್ಟು ಇರಬಹುದು ..ಆದ್ರೆ ನಾನಂತೂ ನೋಡಿದ್ದೇ ಇಲ್ಲ, t .v ಲೆಲ್ಲಾ ನೋಡಿದ್ದಾಗ ಭಯಮಿಶ್ರಿತ ಕುತೂಹಲ ಇದ್ದೆ ಇತ್ತು .ನಾ ಕಣ್ಣು ಬಾಯಿ ಬಿಟ್ಟುಕೊಂಡು ಅವಳನ್ನೇ ನೋಡುತ್ತಿದ್ದುದು ಅವಳಿಗೆ ಅದು ಹ್ಯಾಗೆ ಗೊತ್ತಾಯ್ತೋ, ಸ್ಮೈಲ್ ಕೊಡುತ್ತಲೇ ಬಂದುಬಿಟ್ಟಳಲ್ಲ ನಮ್ಮ ಆಟೋದ ಕಡೆ !ನನ್ನ ಫ್ರೆಂಡ್ ಹೇಳಿದ್ದು ನೆನಪಾಯ್ತು ,ಅವರು ಹುಡುಗೀರ ಹತ್ತಿರ ಏನೂ ಕೇಳಲ್ಲ ಅಂತ…. !ಸುಳ್ಳೇ ಸುಳ್ಳು ಕ್ಯಾರೆ ಅನ್ನದೆ ಆಟೋ ಹತ್ತಿ ನನ್ನ ಪಕ್ಕ ಕುಳಿತು ಕೈ ಚಾಚಿದಳು.. ಅಬ್ಬಾ! ಎಂದೂ ನಂಬದ ದೇವರು ಕೂಡ ನೆನಪಿಗೆ ಬಂದುಬಿಟ್ಟ ! ಆಟೋದವರಿಗೆ ಕೊಡಲು ಕೈಯಲ್ಲೇ ಇದ್ದ ನೂರರ ನೋಟನ್ನೇ ನಡುಗುವ ಕೈಯಿಂದ ಕೊಟ್ಟುಬಿಟ್ಟೆ.ಅವಳು ಅದನ್ನು ತೆಗೆದುಕೊಂಡು ತನ್ನಲ್ಲಿದ್ದ ಐವತ್ತರ ನೋಟನ್ನು ಅದು ಹೇಗೋ ತಲೆಗೆ ಸುತ್ತು ಹಾಕಿ (ನಾ ನೋಡಲಿಲ್ಲ) ಕೊಟ್ಟು ಬಿಟ್ಟಳಪ್ಪ.ನಾ ತೊದಲುತ್ತ ಬೇಡ ಬೇಡ ಅಂದಿರಬೇಕು…ಸ್ವರ ಹೊರಗೆ ಬಂದಿದ್ದು ಅನುಮಾನ !ಅವಳು ಬೇಡ ಅನ್ನೋಲ್ಲ, ಒಳ್ಳೆದಾಗುತ್ತೆ ಅಂತ ನನ್ನ ತಲೆ ಮುಟ್ಟಿ ಕೆಳಗಿಳಿದು ಹೋಗಿಬಿಟ್ಟಳು .ಅಲ್ಲಿ ತನಕ ನಾ ಉಸಿರಾಡಿದ್ದರೆ ಕೇಳಿ !……..ಆಗ ಬಾಯಿ ತೆರೆದ ಆಟೋದವನು, “ಮ್ಯಾಡಂ ಅವರನ್ನು ಹಾಗೆಲ್ಲ ನೋಡಬಾರದು ಅಂತ..ನಮಸ್ಕಾರ !ಮೊದಲೇ ಹೇಳಿದ್ದರೆ ಏನಾಗ್ತಿತ್ತೋ !?! ..ಈಗ ಹೋಗೋವಾಗ ಎಲ್ಲಾದರೂ ಅವರನ್ನು ನೋಡಿದರೆ ಕೈಯ್ಯಲ್ಲಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದ್ದರೂ ಕೂಡ ಅಲ್ಲಾಡದೆ ಅದನ್ನೇ ನೋಡುತ್ತಿರುತ್ತೇನೆ!
ಹ್ಮ್.. ಇದೊಂದು ಮಾಯಾನಗರೀನೆ ಹೌದು ಕಣ್ರೀ…. ಇದು ಕೊಟ್ಟ ಪಾಡು , ನಾ ಪಟ್ಟ ಬವಣೆ ಎಷ್ಟೆಲ್ಲಾ ಅಂತ ಗೊತ್ತಾ..ಬರೆಯ ಹೋದರೆ ಕಾದಂಬರಿನೇ ಆದೀತು !3 ಸ್ಟಾಪ್ ಹಿಂದೆ ಹೋದರೆ ಸಿಗೋ ಸಿಲ್ಕ್ ಬೋರ್ಡ್ ಗೆ ಹೋಗಲು ಗೊತ್ತಿಲ್ಲದೇ btm ನಿಂದ ಮೆಜೆಸ್ಟಿಕ್ ಹೋಗಿ ಅಲ್ಲಿಂದ ಸಿಲ್ಕ್ ಬೋರ್ಡ್ಗೆ ಹೋದ ಪರಮ ಬುದ್ದಿವಂತೆ ನಾನು !.ಒಬ್ಬ ಆಸಾಮಿನ ಕೇಳಿದ್ದೆ,ಸಿಲ್ಕ್ ಬೋರ್ಡ್ಗೆ ಹೋಗಬೇಕಾದ್ರೆ ಹ್ಯಾಗ್ ಹೋಗ್ಬೇಕು ಅಂತ ! ಪಾಪ ,ಗೊತ್ತಿಲ್ಲ ಅನ್ನೋಕೆ ನಾಚಿಕೆ ಆಗಿರಬೇಕು !ನೆಕ್ಸ್ಟ್ ಸ್ಟಾಪ್ಗೆ ಹೋಗಿ ಯಾರ್ನಾದ್ರೂ ಕೇಳಿ ಅಂದ .ಅದಕ್ಕೆ ಅಲ್ಲಿ ತನಕ ಯಾಕೆ ಹೋಗ್ಬೇಕು ??ಮೆಜೆಸ್ಟಿಕ್ ನಲ್ಲಿ ಎಲ್ಲ ಬಸ್ಸು ಸಿಗತ್ತೆ ಅಂತ ಅಲ್ಲಿಗೆ ಹೋಗೋಕೆ ಬಸ್ ಸ್ಸ್ಟ್ಯಾಂಡ್ ನಲ್ಲಿ ನಿಂತರೆ ಬರೋ ಬಸ್ಸುಗಳ ಮೇಲಿದ್ದ ಹೆಸರು ಕೆಂ.ಬ.ನಿ (!!?!!)ಆಮೇಲೆ ಬಂದ ಬಸ್ಸುಗಳ ಮೇಲೆ ಬರೆದಿತ್ತು ಕೆಂಪೇಗೌಡ ಬಸ್ ನಿಲ್ದಾಣ ಅಂತ !ಓಹೋ ಗೊತ್ತಾಯ್ತು ಗೊತ್ತಾಯ್ತು !ಅಲ್ಲಾ….ನಮ್ಮ ಕಡೆ ಕಂಡಕ್ಟರುಗಳು ಕಿರುಚುತ್ತಾರಪ್ಪ ಪ್ರಸ್ತುತ ನಿಲ್ದಾಣ ಮತ್ತೆ ಹೋಗಲಿರೋ ನಿಲ್ದಾಣದ ಹೆಸರನ್ನು ..ಇವರೆಲ್ಲ ಯಾಕೆ ಹಿಂಗೆ ?!ಛೆ ಸರಿಯಿಲ್ಲಪ್ಪ ಬೆಂಗಳೂರು !ಆಮೇಲೆ ಫ್ರೆಂಡ್ ಮೂಲಕ ಮೆಜೆಸ್ಟಿಕ್ ಮತ್ತೆ ಕೆಂ.ಬ.ನಿ ಎರಡೂ ಒಂದೇ ಅಂತ ಗೊತ್ತಾದಾಗ ನಗು ಬಂತು ..ಸಂಜೆ ಸಿಲ್ಕ್ ಬೋರ್ಡ್ ಅನ್ನೋದು ನಾನಿದ್ದ ಸ್ಟಾಪಿನ ೩ ಸ್ಟಾಪ್ ಹಿಂದೇನೆ ಅಂತ ಗೊತ್ತಾದಾಗ ನಗು ,ಅಳು ಎರಡೂ ಬಂತು !
ನನ್ನ ಆಫಿಸ್ ಇರೋದು ಸಿ ವಿ ರಾಮನ್ ನಗರದಲ್ಲಿ !ಗಮನಿಸಿದ್ದೀರಾ ಹಿಂದೆ ಸಿಗೋ BEML ಗೇಟ್ ಪಕ್ಕ ದೊಡ್ಡ ಕಮಾನಿನ ಮೇಲೆ ಬರೆದಿದೆ ವಿಜಯನಗರದ ಹೆಬ್ಬಾಗಿಲು !ನನ್ನ ದೂರದ ಸಂಬಂಧಿಯೊಬ್ಬರು ಬೆಂಗಳೂರಿಗೆ ಬರೋ ಮೊದಲು ಹೇಳಿದ್ದರು ನಾವಿರೋದು ವಿಜಯ ನಗರ ಅಂತ… ಇದೂ ಅದೂ ಒಂದೇ ಅಂತ ನಾ ಅಂದುಕೊಂಡಿದ್ದೆ !ಆಮೇಲೆ ತಿಳೀತು ಎರಡೂ ಏರಿಯಗಳಿಗೆ ಒಂದಕ್ಕೊಂದು ಕನೆಕ್ಷನ್ನೇ ಇಲ್ಲ ಅಂತ !ಹೀಗೆ ಅರ್ಥವೇ ಇಲ್ಲದ ಹಲವಾರು ವಿಷಯ, ವಿಶೇಷಗಳಿವೆ ಇಲ್ಲಿ..ಆದರೂ ಅವಕ್ಕೆ ಏನಾದರೊಂದು ಕಾರಣ ಇದ್ದಿರಬಹುದು,ಒಂದಿನ ನಗೆ ಗೊತ್ತಾಗಬಹುದು ಅಂತ ಅಂದ್ಕೊಂಡಿದ್ದೀನಿ .ಕಾರಣ, ಅರ್ಥ ಇಲ್ಲ ಅಂತ ಗೊತ್ತಾದ ದಿನ ಕೇಳಬೇಕಿದೆ ಅದು ಯಾಕೆ ಹ್ಯಾಗೆ ಅಂತ
ಮತ್ತೆ ಇಲ್ಲಿ ನಂಗೆ ಅರ್ಥ ಆಗದೆ ಇರೋರಿದ್ದಾರೆ ಸ್ವಲ್ಪ ಮಂದಿ ..ದೊಡ್ಡ ಮಾಲ್ ಗಳಿಗೆಲ್ಲ ಹೋಗಿ fixed ರೇಟ್ ನ ಹಣ್ಣು ತರಕಾರಿನ ಮಾತಿಲ್ಲದೆ ತರೋ ಜನ ರಸ್ತೆಯಲ್ಲಿನ ತಳ್ಳು ಗಾಡಿ ಮೇಲೆ ಮಾರೋ ಕೊತ್ತಂಬರಿ ಸೊಪ್ಪನ್ನು ತಗೋಳ್ಳೋವಾಗ ಆ ಚೌಕಾಸಿ ಯಾಕೆ ? ರಸ್ತೆ ಬದಿಯ ಕುರುಡನಿಗೆ ಒಂದ್ರುಪಾಯಿ ದಾನ ಮಾಡದ ಕಾರಿನಲ್ಲಿ ಹೋಗೋ ಮಂದಿ ಬ್ಲೈಂಡ್ ಸ್ಕೂಲ್ ಗೆ ಬಂದು ಮಗನ ಹುಟ್ಟುಹಬ್ಬಕ್ಕೆ ಸ್ವೀಟ್ ಕೊಟ್ಟು ಫೋಟೋ ತೆಗ್ಸಿಕೊಳ್ಳೋದು ಯಾಕೆ?ಪಕ್ಕದ ಪಾರ್ಕಲ್ಲಿ ಬೊಜ್ಜು ಕರಗಿಸಲು ದಿನವೂ ನಡೆದಾಡುವ… ಅಲ್ಲಲ್ಲ ನಡೆದೋಡುವ ಜನ ಮನೆಗೆ ಬಂದು T .V ನೋಡುತ್ತಾ ಗಡದ್ದಾಗಿ ತಿಂದು ಮಧ್ಯಾನ್ನ ನಿದ್ದೆ ಹೊಡೆಯೋದ್ ಯಾಕೆ??? ಬರಿ 2 ಹೂವಿನ ಕುಂಡವನ್ನು ತರೋವಾಗ ಹೆಲ್ಪ್ ಬೇಕಾ ಅಂತ 21 ವರ್ಷದವಳನ್ನು ಕೇಳೋ ಅಂಕಲ್,ಅವರ 13 ವರ್ಷದ ಮನೆ ಕೆಲಸದ ಹುಡುಗ ಅಷ್ಟು ಭಾರದ ಸಿಲಿಂಡರನ್ನು ತರಲಾರದೆ ತರೋವಾಗ ಸುಮ್ಮನೆ ನಿಂತಿದ್ದು ಯಾಕೆ ?ಕ್ರೀಡಾಂಗಣ ಉಧ್ಘಾಟನೆ ಮಾಡಿದ ರಾಜಕೀಯ ಪುಂಡ, ಮನೆ ಪಕ್ಕ ವಾಚ್ಮೆನ್ ಮಕ್ಕಳು ಆಟ ಆಡಿದರೆ ಸಿಡಿಮಿಡಿಗೊಂಡು ಅವರನ್ನು ತಳ್ಳಿದ್ಯಾಕೆ?(ಈ ಪ್ಯಾರ ನಮ್ಮ ಬಿಲ್ಡಿಂಗಿನ ಎಲ್ಲ ಸದಸ್ಯರಿಗೂ ಅರ್ಪಣೆ )……..ಹ್ಹ ಹ್ಹ. .ಸಿಟ್ಟು ಬಂತೆ ??ಹಾಗಾದರೆ ಮತ್ತೆ ಮಕ್ಕಳ ಪರ ವಹಿಸಿ ಮಾತಾಡಿದವಳನ್ನು ಗದರಿಸಿ ನಿನ್ ಕೆಲಸ ನೀ ನೋಡ್ಕೋ ಹೋಗು ಅಂದಿದ್ದು ಯಾಕೆ ?
ಚಿತ್ರಕೃಪೆ:stumbleupon.com






ಈಗ ತಾವು ಅರಿತಿರಿ ಹೀಗೆಲ್ಲಾ ಉಂಟೆಂದು…
ದಿನ ಕಳೆದಂತೆ ತಮಗೂ ಅರಿವಾಗುತ್ತದೆ ಇನ್ನೂ ಏನೇನೆಲ್ಲಾ ಉಂಟೆಂದು…
ನನ್ನ ಸಲಹೆ ಇಷ್ಟೇ, ಹೆಜ್ಜೆ ಹೆಜ್ಜೆಗೂ ತಮ್ಮಲ್ಲಿ ಎಚ್ಚರವಿರಲಿ ಮತ್ತು ಅರಿತಿರಿ, ಮುಂದೆ ಕಂದಕ ಉಂಟೆಂದು…
ಕಣ್ಣ ಮುಂದೆ ಮುಂದೆ ಕಂದಕ ಇದ್ದರೆ ನಾವೇ ತಪ್ಪಿಸಿಕೊಳ್ಳಬೇಕು.
ಇನ್ನೊಬ್ಬರು ಬಂದು ಆ ಕಂದಕದಲ್ಲಿ ನನ್ನ ತಳ್ಳಿ ಹೋಗದಿದ್ದರಷ್ಟೇ ಸಾಕು 🙂
ಇನ್ನೂ ಏನೇನೆಲ್ಲ ಉಂಟು ಸರ್??!? 😦
ಚೆನ್ನಾಗಿದೆ. ವಿಶೇಷವಾಗಿ ಕೊನೇ ಪ್ಯಾರಾ.
ಕುವೆಂಪು ನಗರ(BTM)ದಿಂದ ಮೆಜೆಸ್ಟಿಕ್ ಗೆ ಹೋಗೆ ಮತ್ತೆ ಸಿಲ್ಕ್ ಬೋರ್ಡಿಗೆ ಬಂದಿದ್ದು ಒಳ್ಳೇ ತಮಾಷೆ.
ಧನ್ಯವಾದ ವಿಕಾಸ್
ಅಂತಹ ಸುಮಾರು ತಮಾಷೆಗಳು ನಡೆದಿದ್ದವು 😦
good article. last para was vey very good
thank u 🙂
ಬಾಳು ಒಂದು ಗೊಂದಲಾಪುರ…
ಗೊಂದಲದೊಳಗೆ ಕೆಲವೊಂದು ಮರೆಯಲಾಗದ ಕ್ಷಣಗಳು…
ಮೊದಲ ಅನುಭವ ಕಹಿಯಾಗಿತ್ತು.. ನೆನಪಿನೊಳಗೆ ಬೆರೆತಾಗ ಸಿಹಿ ಔತಣ…
ಶೋಕು ಬರೆದರ್ ಶೆಟ್ರೆ…. ಮುಂದುವರಿಸಾಲೆ…
ಕಾದಂಬರಿ ಆಂಡಲಾ ಮಲ್ಲೆಜ್ಜಿ…
ಗೊಂದಲಪುರದ ಗೊಂದಲಗಳು ಒಂದೆರಡಲ್ಲ
ಅಂದ ಹಾಗೆ ನಂಗೆ ತುಳು ಬರೋದಿಲ್ಲ 😦
(ನಾನು ಕುಂದಾಪುರದವಳು:) 🙂
ಬರದ ಬಾಷೆಯ ಬಗ್ಗೆ ಕುತೊಹಲವೊ ಒಂದು ಗೊಂದಲ… ಆದರೊ ತುಳು ಭಾಷೆ ಎಂದು ಗುರುತಿಸಿದ್ದಕ್ಕೆ ಧನ್ಯವಾದ…
ಅಂದದ ಮನದ ಮನೆಯ ಅಂಗಳದಲ್ಲಿ ಬೆಳದಿಂಗಳ ಹುಡುಕುವ ಕಂದನ ಮುಗುಳು ನಗೆಯ ಉಲ್ಲಾಸವೆ ಅಮ್ಮನಿಗೆ ಅಂಗಳ ಸಾರುವಲ್ಲಿ ಮತ್ತೂ ಹೆಚ್ಚಿನ ಕುತೊಹಲ ಮೊಡಿಸಿತ್ತಂತೆ,,, ಹಾಗಂತ ಅಮ್ಮನೇ ಹೇಳಿದ್ದಳು.. ಪ್ರತಿಯೊಂದು ಉತ್ತಮ ಪ್ರತಿಭೆಯ ಹಾಳೆಯ ಅಂಚು.. ಕೊಂಚವಾದರೊ ಪರರನ್ನು ಆಕರ್ಷಿಸದಿರುವುದಿಲ್ಲ ಮತ್ತು ಅವರು ಅದನ್ನು ಅನುಕರಿಸದೇ ಇರಲ್ಲ ಅನ್ನೊದಕ್ಕೆ ನಿಮ್ಮ ನೆನಪುಗಳ ಸವಿಯುವ ಲೇಖನದ ಸಾರವೇ ಉದಾಹರಣೆ..! ಪಕ್ಕದ ಮನೆಯವಳು ರೇಷ್ಮೆ ಸೀರೆ ಉಟ್ಟರೆ ನನ್ನ ಮನೆಯವಳೊ ಕೊಂಡುಕೊಳ್ಳಲು ಪ್ರಯತ್ನಿಸುತ್ತಾಳೆ… ಈಗ ಯಾಕಿದರ ವಿಮರ್ಷೆ ಎಂದರೆ ನಿಮ್ಮ ಹೊಸ ಅನುಭವಗಳ ಲೇಖನದ ನಂತರ… ಮೊರು ನಾಲ್ಕು ಅನುಭವದ ಲೇಖನಗಳನ್ನು ಒಂದರ ಮೇಲೊಂದು ಓದಿದೆ..ಒಂದಕ್ಕಿಂತ ಒಂದು ವಿಭಿನ್ನವಾಗಿದೆ… ಅಲ್ಲಿ ಅನುಭವಗಳ ಚಿತ್ತಾರವಿದೆ, ಸುಂದರ ಸಾರವಿದೆ,ಆಗ ಅವರಲ್ಲಿ ದುಗುಡ ದುಮ್ಮಾನವಂತೆ, ಈಗ ನಗೆಯ ನೆನಪಿನ ನಗೆಯ ಸನ್ಮಾನವಂತೆ…
ವಾಣಿಯವರೇ ನಿಮ್ಮ ಲೇಖನ ಆ ದಿನಗಳ ನೆನಪೆಂಬ ಕಲ್ಲಿಂದ ಕೆತ್ತಿದ ಸುಂದರ ಶಿಲ್ಪವಾಗಿದೆ… ಉತ್ತಮವಾಗಿದೆ,,, ಮುಂದುವರಿಸಿ…
ಖಂಡಿತವಾಗಿಯೊ ಹೊಗಳುತ್ತಿಲ್ಲ…. ಉತ್ತಮ ಲೇಖನಕ್ಕೆ ಪ್ರೇರಣೆಯಷ್ಟೆ…
ಬೆಂಗಳೂರಿಗೆ ಬಂದ ಹೊಸತರಲ್ಲಿ ನಾನು ಹೀಗೆಲ್ಲ ಪಾಡು ಪಟ್ಟಿದ್ದಿದೆ.ಲೇಖನ ಚಂದ ಉಂಟು.ಕಡೆಯ ಪ್ಯಾರ ಮಸ್ತ್ 🙂
ಹೀಗೆ ಬರೆಯುತ್ತಿರಿ 🙂
thanks ರಾಕೇಶ್
ಇವತ್ತು ಬಸವೇಶ್ವರ ಸರ್ಕಲ್ ಸಿಗ್ನಲ್ ನಲ್ಲಿನಿಂತಿದ್ದಾಗ ಅಲ್ಲೊಂದು ಬಸವಣ್ನನವರ ವಚನ ಓದಿದೆ..”ಲೋಕದ ಡೊಂಕ ನೀವೇಕೆ ತಿದ್ದುವಿರಿ….” ಈಗ ನಿಮ್ಮ ಲೇಖನ ನೋಡಿ ನೆನೆಯುವಂತಾಯಿತು….
🙂 ತಿದ್ದಲಾಗಲಿಲ್ಲವಲ್ಲ … ಅದಕ್ಕೇ ಆಡಿ ನಕ್ಕಿದ್ದು!
ನಾನು ಬೆಂಗಳೂರಲ್ಲಿ ಎರಡು ವರ್ಷಗಳ ಹಿಂದೆ ಪೆಚಾಟಕ್ಕೆ ಸಿಕ್ಕಿದನ್ನು ನಿಮ್ಮ ಬರಹ ನೆನಪಿಸಿತು . ಅಲ್ಲಿ ದಿನ ದಿನಕ್ಕು ಹೊಸ ಅನುಭವ ಆಗುತ್ತದೆ ಈ ಕಸ್ಟ ಬೇಡ ಎಂದು ಊರಿಗೆ ವಾಪಸಾಗಿಬಿಟ್ಟೆ.ನೀವು ನಿಮ್ಮ ಅನುಭವವನ್ನು ಚೆನ್ನಾಗಿ
ಅಕ್ಷರಕ್ಕೆ ಇಳಿಸಿದ್ದೀರಿ .ಕೊನೆಯ ಪ್ಯಾರ ಇನ್ನೂ ಚೆನ್ನಾಗಿದೆ. ನಿಮ್ಮ ಸುತ್ತ ಮುತ್ತಲಿನವರನ್ನು ಗಮನಿಸುತ್ತ ಚಿಂತನೆಗೆ ತಂದುಕೊಂಡ ರೀತಿ ಅದ್ಭುತ.