ಹಾರೋ ಬೂದಿಯ ನೋಡಿದಿರಾ?
ಪವನ್ ಎಂ ಟಿ
ಒಂದು ದಿನ ಮನೆಯಲ್ಲಿ ಬಿದ್ದಿರುವ ಧೂಳನ್ನು ಗುಡಿಸದೇ ಇದ್ದರೇನೆ ಕಿರಿಕಿರಿ ಆಗ್ತಾ ಇರುತ್ತೆ. ಹಾಗಿರುವಾಗ ಹೇಗೆ ಇದ್ರೂ ಧೂಳಿನ ಒಳಗೆ ಇರಬೇಕಂದ್ರೆ ಹೇಗಾಗಬಹುದು?
ದಿನನಿತ್ಯದ ಸಣ್ಣ ಸಂಗತಿಯೇ ಹೀಗಾದರೆ ಉಡುಪಿ ಜಿಲ್ಲೆಯ ಪಡುಬಿದ್ರೆಯ ನಂದಿಕೂರು ಗ್ರಾಮದ ಸುತ್ತಮುತ್ತಲಿನ ಜನರ ಸ್ಥಿತಿ ನೆನಪಿಸಿಕೊಂಡರೇ ಮೈ ಜುಮ್ ಎನ್ನುತ್ತದೆ. ಕಾರಣವಿಷ್ಟೆ. ಪಡುಬಿದ್ರಿ ಸಮೀಪದಲ್ಲಿ ಇತ್ತೀಚೆಗೆ ಬೃಹತ್ ಕಂಪೆನಿಯೊಂದು ತನ್ನ ಕಾರ್ಯಾರಂಭ ಮಾಡಿದೆ. ಅದರ ಆರಂಭದ ಸಂದರ್ಭದಲ್ಲೇ ತೀವ್ರ ಪ್ರತಿರೋಧ ಇತ್ತಾದರೂ ಹಣವಂತರ ಮುಂದೆ ಈ ಚಳುವಳಿ ಸೋತು ಸುಣ್ಣವಾಯಿತು. ಸಮಾಜ ಸೇವೆ ಮಾಡುತ್ತೇವೆಂದು ಹೇಳಿ ಮತ ಪಡೆದ ಜನಪ್ರತಿನಿಧಿಗಳು ಈ ಕಂಪೆನಿಯ ರಕ್ಷಣೆಗೆ ನಿಂತರು. ಇದೀಗ ಕಂಪೆನಿಯು ತನ್ನ ಹತ್ತು ಶೇಕಡಾ ಕೆಲಸ ಆರಂಭ ಮಾಡಿದೆ ಅಷ್ಟೇ. ಆದರೆ ಅದು ಕೊಟ್ಟ ಹೊಡತಕ್ಕೆ ಇಲ್ಲಿನ ಸ್ಥಳೀಯ ಜನತೆ ತತ್ತರಿಸುತ್ತಿದೆ. ಇಲ್ಲಿನ ಕಾರ್ಖಾನೆಯು ಉಗುಳುತ್ತಿರುವ ತ್ಯಾಜ್ಯದ ಧೂಳಿನಿಂದ ಅನೇಕ ರೀತಿಯ ಶಾರೀರಿಕ ತೊಂದರೆಗಳನ್ನು ಇಲ್ಲಿನ ಪ್ರಜೆಗಳು ಅನುಭವಿಸುತ್ತಿದ್ದಾರೆ. ತನ್ನದಲ್ಲದ ತಪ್ಪಿಗೆ ಮಕ್ಕಳು ಮಹಿಳೆಯರು ಸೇರಿದಂತೆ ಚರ್ಮ, ಶ್ವಾಸಕೋಶ ಸಂಬಂಧಿ ರೋಗಗಳಿಂದ ಬಳಲುತ್ತಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನೇಕ ವರ್ಷಗಳಿಂದ ಜನ ಮತ್ತು ಸಂಘಟನೆಗಳ ವಿರೋಧದ ನಡುವೆಯೂ, ಅನೇಕ ಕೈಗಾರಿಕೆಗಳಿಗೆ ಸರಕಾರ ಅನುಮೋದನೆಯನ್ನು ನೀಡಿದೆ. ಇವೆರಡು ಜಿಲ್ಲೆಗಳು ಕೈಗಾರಿಕೆಗಳಿಗೆ ಸೂಕ್ತ ಸ್ಥಳವೆಂದುಕೊಂಡು ಕೈಗಾರಿಕೆಗಳಿಗೆ ಸರಕಾರ ಅವಕಾಶ ನೀಡಿದೆ ಎಂಬ ಸಮಜಾಯಿಷಿ ಇದೆಯಾದರೂ ಅದರಿಂದ ಸಾಮಾನ್ಯ ಜನರಿಗಾಗುವ ತೊಂದರೆ ಏನು ಎಂಬುದರ ಕುರಿತು ಸ್ವಲ್ಪವು ಯೋಚನೆ ಮಾಡದೆ ಇರುವುದು ವಿಪರ್ಯಾಸವಲ್ಲವೇ.
ಪಡುಬಿದ್ರೆಯ ಸುತ್ತ ಮುತ್ತಲಿನ ಜನರು ಈ ಧೂಳಿನ ರೂಪದ ತ್ಯಾಜ್ಯದಿಂದ ಕಂಗೆಟ್ಟು ಹೋಗಿದ್ದಾರೆ. ಈ ಕಂಪೆನಿ ಧೂಳನ್ನು ಸಂಗ್ರಹಿಸಲು ನಂದಿಕೂರು ಗ್ರಾಮದಲ್ಲಿ ಸುಮಾರು ೧೦ ಎಕರೆ ಪ್ರದೇಶದಲ್ಲಿ ಸ್ಥಳವನ್ನು ಗೊತ್ತುಪಡಿಸಿದೆ. ಈ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡು ಸುಮಾರು ಸಾವಿರಕ್ಕೂ ಹೆಚ್ಚು ಕುಟುಂಬಗಳು ಬದುಕುತ್ತಿವೆ. ಕಂಪೆನಿಯು ತನ್ನ ನಿಗದಿತ ಸ್ಥಳದಲ್ಲಿ ಬೂದಿಯನ್ನು ಹಾಕುವುದರ ತೀವ್ರತೆಗೆ ಆ ಬೂದಿಯೂ ಗಾಳಿಯಲ್ಲಿ ಹೋಗಿ ಸುತ್ತಲಿನ ಮನೆಯವರಿಗೆಲ್ಲಾ ಗಂಭೀರವಾದ ಸಮಸ್ಯೆಯನ್ನು ಬೀರಿದೆ ಮತ್ತು ಬೀರುತ್ತಿದೆ. ಆದರೆ ಅದರ ಪರಿಣಾಮಗಳು ಹಲವು.
ಇಲ್ಲಿ ಬೂದಿಯ ಕಣಗಳಿಂದ ಸುತ್ತಲಿನ ಎಲ್ಲಾ ಮನೆಗಳ ಕೆಂಪಗಿನ ಹಂಚುಗಳು ಬಿಳಿಯಾಗಿವೆ, ಹಸಿರಾಗಿರಬೇಕಾದ ಎಲೆಗಳು ಬಿಳಿಯಾಗಿವೆ, ಹಸಿರು ಹುಲ್ಲನ್ನು ಮೇಯುವ ದನಗಳು ಕಲುಷಿತವಾದ ಬಿಳಿಯ ಹುಲ್ಲನ್ನು ಮೇಯುವ ಪರಿಸ್ಥಿತಿ ಬಂದಿದೆ, ಇಲ್ಲಿಯ ತೆಂಗಿನ ಮರಗಳಲ್ಲಿ ರುಂಡ ಹೋಗಿ ಬುಡ ಮಾತ್ರ ಉಳಿದಿದೆ. ಮಲ್ಲಿಗೆ ಗಿಡಗಳಿವೆ ಆದರೆ ಘಮಘಮಿಸುವ ಹೂಗಳಲ್ಲಿಲ್ಲ. ಭತ್ತದ ಸಸಿಗಳಿವೆ. ಬಣ್ಣ ಹಸಿರಿನ ಬದಲಾಗಿ ಕೆಂಪು, ಬಿಳಿ, ಅರಿಸಿನವಾಗಿದೆ.
ಅಷ್ಟಾದರೂ ಪರ್ವಾಗಿಲ್ಲ ಇದೆಲ್ಲವನ್ನು ಸಹಿಸಿ ನೆಮ್ಮದಿಯಿಂದ ನಿದ್ರೆ ಮಾಡೋಣವೆಂದು ಕೊಂಡು ಚಾಪೆ ಹಾಸಿ ಮಲಗಿದ್ರೆ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಹಾಸಿಕೊಂಡ ಬೆಡ್ ಮೇಲೆ, ಹೊದ್ದುಕೊಂಡ ಬೆಡ್ಶೀಟ್ ಮೇಲೆಲ್ಲಾ ಬರೀ ಬೂದಿಯ ಧೂಳು. ಚಾಪೆ ಹಾಸಿದ ಜಾಗದಿಂದ ಚಾಪೆ ತೆಗೆದು ನೋಡಿದ್ರೆ ಹಾಸಿದ್ದ ಸ್ಥಳವನ್ನು ಬಿಟ್ಟು ಮಿಕ್ಕೆಲ್ಲ ಕಡೆ ಬರೀ ಹಾರುಬೂದಿಯೇ. ಈ ಬೂದಿ ಹಾರುವ ರಭಸಕ್ಕೆ ಬರುವ ಧೂಳು ಮನೆಯೊಳಗೆ ಬಾರದಂತೆ ಎಷ್ಟೇ ಬಂದೋಬಸ್ತ್ ಮಾಡಿದರೂ ಅದನ್ನು ತಡೆಯಲಾಗುತ್ತಿಲ್ಲ. ಅಂದರೆ ನೀವೇ ಯೋಚಿಸಿ ಅದರ ತೀವ್ರತೆ ಎಷ್ಟಿದೆ ಎಂದು! ಇದೆಲ್ಲ ಆಗುತ್ತಿರುವುದು ಕಾರ್ಖಾನೆಯ ಬೂದಿಯ ಧೂಳಿನಿಂದ.
ಇಲ್ಲಿಯ ಮನೆಯ ಜನರು ಧೂಳನ್ನು ತೆಗೆಯಲು ಪ್ರತಿದಿನ ಮೂರು ನಾಲ್ಕು ಬಾರಿ ಮನೆಯನ್ನು ತೊಳೆಯುತ್ತಾರೆ. ಆದರೂ ಈ ಹಾರುವ ಬೂದಿಯನ್ನು ನಿಯಂತ್ರಿಸಲಾಗುತ್ತಿಲ್ಲ. ಇವರು ಒಗೆದು ಹಾಕುವ ಬಟ್ಟೆಗಳ ಮೇಲೆಯು ಈ ಬೂದಿ ನಿಲ್ಲುತ್ತದೆ. ತಿನ್ನುವ ಆಹಾರವನ್ನು ಬೇಯಿಸಿದ ನಂತರ ಬೂದಿ ಬೀಳದಂತೆ ಕಾಪಾಡಲು, ಆಹಾರವನ್ನು ಪೆಟ್ಟಿಗೆಯಲ್ಲಿ ಹಣವಿಟ್ಟಂತೆ ಇಟ್ಟು ಕಾಪಾಡಬೇಕಾದ ಪರಿಸ್ಥಿತಿ ಅವರದಾಗಿದೆ. ಆ ಪ್ರದೇಶದಲ್ಲಿ ತಿರುಗಾಡುವ ಜನರು ಬಾಯಿಗೆ, ಮೂಗಿಗೆ ಬಟ್ಟೆಯನ್ನು ಕಟ್ಟಿಕೊಂಡು ತಿರುಗಾಡಬೇಕಾಗಿದೆ.
ಇಂತಹ ವಿಚಿತ್ರವಾದ ವಾತಾವರಣ ಮತ್ತು ಹಸಿರು ಎಲೆಯ ಬದಲು ಬಿಳಿಯ ಎಲೆಯನ್ನು ಹೊಂದಿರುವ ವಿಸ್ಮಯ ಪ್ರದೇಶವನ್ನು, ಅಲ್ಲಿಯ ಜನರ ಕಣ್ಣೀರ ಬದುಕನ್ನು ನೀವು ನೋಡಬೇಕಾ? ನೋಡಬೇಕೆಂದರೆ, ಪಡುಬಿದ್ರಿಯ ನಂದಿಕೂರಿನ ಸುತ್ತಮುತ್ತಲಿನ ಪ್ರದೇಶಗಳಿಗೊಮ್ಮೆ ಭೇಟಿ ನೀಡಿ.
ಈ ಕೈಗಾರಿಕಾ ಕಂಪೆನಿ ಮಾಡುತ್ತಿರುವ ಮಾಲಿನ್ಯವನ್ನು ತಡೆಯಲಾರದೆ ಇಲ್ಲಿನ ವೃದ್ಧೆಯೊಬ್ಬರು ಹೇಳುವ ಮಾತಿದು. ‘ನಮಗೆ ಈ ರೀತಿಯ ಹಿಂಸೆ ನೀಡುವುದರ ಬದಲಾಗಿ ಒಮ್ಮೆಲೇ ಬಾಂಬ್ ಸಿಡಿಸಿ ನಮ್ಮನ್ನು ಒಂದೇ ಸಲಕ್ಕೆ ಸಾಯಿಸಿ ಬಿಡಿ’ ಎಂದು ರೋಧಿಸುತ್ತಾರೆ.
ಇಲ್ಲಿಯ ಜನರು ಕಂಪೆನಿಯ ಧೂಳಿನಿಂದ ಇಷ್ಟೆಲ್ಲಾ ತೊಂದರೆಯಾಗಿದೆ ಎಂದು ಸರ್ಕಾರಕ್ಕೆ ಮತ್ತು ಕಂಪೆನಿಯವರಿಗೆ ಮನವಿ ನೀಡಿದರೂ ಸಹಾ ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಾಗಿದೆ. ಮಾಧ್ಯಮ ಮಿತ್ರರು ದಿನಂಪ್ರತಿ ಇಲ್ಲಿಯ ಜನರ ಗೋಳನ್ನು ಪತ್ರಿಕೆಯಲ್ಲಿ, ಟಿ.ವಿಯಲ್ಲಿ ಪ್ರಸಾರ ಮಾಡುತ್ತಿದ್ದರೂ ಇದಕ್ಕೆ ಕಾರಣಕರ್ತರಾದವರು ಏನೂ ಆಗಿಯೇ ಇಲ್ಲವೆಂಬಂತೆ ‘ತಣ್ಣಗಿದ್ದಾರೆ’. ಸರಕಾರ ಇಲ್ಲಿಯ ಜನರ ನೋವು ತಿಳಿದಿದ್ದರೂ ಯಾಕೆ ಸುಮ್ಮನೇ ಕಣ್ಣುಮುಚ್ಚಿ ಕುಳಿತು ಮಾನವೀಯತೆಯನ್ನು ಮರೆತಿದೆ ಎಂಬುದು ಎಲ್ಲರ ಮುಂದಿರುವ ಪ್ರಶ್ನೆ? ಇದೇ ರೀತಿ ಇಲ್ಲಿಯ ಜನರ ಪರಿಸ್ಥಿತಿ ಮುಂದುವರಿದರೆ ನಮ್ಮ ಉಡುಪಿ ಜಿಲ್ಲೆಯ ಪಡುಬಿದ್ರಿ ಮತ್ತೊಂದು ‘ದಹನ್’ ಆಗುವುದರಲ್ಲಿ ಎರಡು ಮಾತಿಲ್ಲ.





ಛೆ, ನಮ್ಮ ಸರಕಾರ, ವ್ಯವಸ್ಥೆಯ ಬಗ್ಗೆ ಕೆಟ್ಟ ಕೋಪ ಬರುತ್ತಿದೆ ಇದನ್ನು ಓದುತ್ತಿದ್ದಂತೆ. ಏನು ಮಾಡುವುದು ಗೊತ್ತಾಗುತ್ತಿಲ್ಲ.
tnks
ಪವನ್, ಸಾಮಾಜಿಕ ಕಳಕಳಿಯಿಂದ ಕೂಡಿರುವ ನಿಮ್ಮ ಲೇಖನ ಓದಿ ಖುಷಿಯಾಯಿತು. ಆದರೆ, ಕೈಗಾರಿಕರಣದ ಹೆಸರಲ್ಲಿ ನಗರೀಕರಣದ ಹೆಸರಲ್ಲಿ ಜನರ ಶೋಷಣೆಯನ್ನು ಮಾಡುತ್ತಿರುವ ಈ ವ್ಯವಸ್ಥೆ ನೋಡಿ ಬೇಸರವಾಗುತ್ತಿದೆ. ಇಂತಹ ಕಾರ್ಯವನ್ನು ಸರಕಾರವಾಗಲಿ ,ಕಂಪನಿಯಾಗಲಿ ಮಾಡಲೇ ಬಾರದು. ಕಂಪನಿಗೆ ಸ್ಥಳಾವಕಾಶ ನೀಡಿದ್ದು ಯಾವುದೇ ಸರಕಾರದ ಕೆಲಸವಾಗಿರಲಿ , ಇನ್ನು ಮುಂದೆ ಮಾಲಿನ್ಯ ರಹಿತ ಪರಿಸರಕ್ಕಾಗಿ ಆಧುನಿಕ ಕ್ರಮ ಕೈಗೊಳ್ಳುವ ಕಾರ್ಯ ಸರಕಾರದಿಂದ ಬೇಗ ನಡೆಯಬೇಕಿದೆ. ಜನರ ನೆಮ್ಮದಿಯ ಬದುಕು ಅವರಿಗೆ ವಾಪಾಸು ಸಿಗಬೇಕು. ಹಾಗೆ ನಿಲುಮೆಯಲ್ಲಿ ಇಂತಹ ಲೇಖನಗಳು ಇನ್ನೂ ಹೆಚ್ಚು ಮೂಡಿ ಬರಲಿ.
danyavaadagalu
ಯಾರು ಗಮನ ಹರಿಸಬೇಕೋ ಅವರು ಗಮನ ಹರಿಸುತ್ತಿಲ್ಲ. ಅವರಿಗೆ ಪುರುಸೊತ್ತೆಲ್ಲಿದೆ? ಸರ್ಕಾರಕ್ಕೆ ತನ್ನನ್ನು ಮುಚ್ಚಿ ಕೊಳ್ಳೋ ಕೆಲಸ, ವಿರೋಧಪಕ್ಷಕ್ಕೆ ಸರ್ಕಾರ ಬೀಳಿಸೋ ಕೆಲಸ.
ಇನ್ನು ಜನಸಾಮಾನ್ಯರಂತೂ ಪೂರ್ತಿ ಕುರುಡ, ಕಿವುಡರು ಮತ್ತು ನಿರ್ಲಿಪ್ತರು . ಆದರೂ ಅನುಭವಿಸುವವರು(ಕಷ್ಟ) ಮಾತ್ರ ಜನಸಾಮಾನ್ಯರೇ.
ಇನ್ನು ಪ್ರಳಯ ಬೇರೆ ಬೇಕಾ?
abiprayakagi dnyavadagalu
ಸಾಮಾಜಿಕ ಕಳಕಳಿಯುಳ್ಳ ಲೇಖನಗಳನ್ನ ಬರೆದ ನಿಮ್ಮ ಹಾಗೂ ಇಂತದ್ದರ ವಿರುದ್ಧ ದನಿಯೆತ್ತುವ ಜನರ ಹೊಟ್ಟೆ ತಣ್ಣಗಿರಲಿ.
ನಿಮ್ಮ ಲೇಖನಗಳು ಹೀಗೆ ಮುಂದುವರಿಯಲಿ ಪವನ್