ಅಧಿಕಾರ ನಿಮಿತ್ತಂ ಬಹುಕೃತ ವೇಷಂ
– ಬಿದಿರೆ ಪ್ರಕಾಶ್
ಎಂತಹ ಮಾತು? : ‘ನನ್ನ ಮೇಲೆ ಬಿಜೆಪಿಯ ಕೃಪೆಯಿದೆ, ಬಿಜೆಪಿಯ ಕೃಪೆಯಿಂದ, ಬಿಜೆಪಿಯ ಹಿರಿಯರು ನೀಡಿದ ನನಗೊಂದು ಅವಕಾಶದಿಂದ ನಾನು ಇಂತಹ ಸ್ಥಾನದಲ್ಲಿದ್ದೇನೆ’ ಇದು ಇಡೀ ದೇಶದಲ್ಲಿ ತನ್ನದೇ ನಾಮಬಲದಿಂದ ಬಿಜೆಪಿಯನ್ನು ಮೇರು ಶಿಖರಕ್ಕೆ ಹೊತ್ತೊಯ್ದ ದೇಶದ ನೆಚ್ಚಿನ ಪ್ರಧಾನಿಯವರ ಮಾತುಗಳು.
ಕಳೆದ ಲೋಕಸಭಾ ಚುನಾವಣೆಯಲ್ಲಿ 282ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದದ್ದೂ ಇವರ ನಾಮಬಲದಿಂದಲೇ, ನಂತರ ಒಂದಾದ ಮೇಲೆ ಒಂದರಂತೆ ದೇಶದ ರಾಜ್ಯಗಳೆಲ್ಲಾ ಬಿಜೆಪಿ ಗೆಲುವು ಸಾಧಿಸುತ್ತಿರುವುದೂ ಇವರ ಸಾಮರ್ಥ್ಯದಿಂದಲೇ. ಆದರೆ ಈ ಗೆಲುವು, ಸಾಧನೆಗಳೆಲ್ಲವಕ್ಕೂ ತಾವೇ ಕಾರಣೀ ಪುರುಷನಾಗಿದ್ದರೂ ಅದನ್ನು ‘ಕಾರ್ಯಕರ್ತರ ಗೆಲುವು’, ಹಿರಿಯರು ಕೊಟ್ಟ ಅವಕಾಶ’ ಎಂದು ಹೇಳುವ ಶ್ರೀ ನರೇಂದ್ರ ಮೋದಿಯವರಂತಹ ಮೇರು ವ್ಯಕ್ತಿತ್ವವಿರುವುದೂ ಬಿಜೆಪಿಯಲ್ಲೇ.
ಎಂತಹ ವಿಪರ್ಯಾಸ… ! : ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತ್ರ ಬಿಜೆಪಿಗೆ ಬಂದರು, ಅಧಿಕಾರವನ್ನೂ ಅನುಭವಿಸಿದರು. ಬಿಜೆಪಿಗೆ ಏನನ್ನೂ ಕೊಡದೆ, ಬಿಜೆಪಿಯಿಂದಲೇ ಎಲ್ಲವನ್ನೂ ಪಡೆದರು. ಕೊನೆಗೆ ಬಿಜೆಪಿಯನ್ನೂ, ಬಿಜೆಪಿ ನಾಯಕರನ್ನೂ ಜರಿದು ಬಿಡುವ ಬಿ.ಜೆ. ಪುಟ್ಟಸ್ವಾಮಿಯಂತಹ ನಾಯಕ(?)ರುಗಳು ಇರುವುದೂ ಬಿಜೆಪಿಯಲ್ಲೇ.ಬಿಜೆಪಿಗೆ ಒಳಹೊಕ್ಕಾಗ ಇದರಿಂದ ಬರುವಂತಹ ಮಾತುಗಳೆಂತಹವು? ಬಿಜೆಪಿ ಬಿಡುವಾಗ ಇವರುಗಳ ಬಾಯಿಂದ ಉದುರುವ ನುಡಿಮುತ್ತುಗಳೆಂತವು? ಎಂಎಲ್ಸಿ ಸ್ಥಾನ ವಂಚಿತರಾದ ಕೂಡಲೇ ಎಂತಹ ಮಾತುಗಳು ಈ ಪುಟ್ಟಸ್ವಾಮಿಯವರಿಂದ ಬಂದು ಬಿಟ್ಟಿತು! ಇವರು ಬಂದ ಮೇಲೆಯೇ ಬಿಜೆಪಿಯಲ್ಲಿ ಹಿಂದುಳಿದ ವರ್ಗ ಸಂಘಟನೆಯಾಯಿತಂತೆ! ಪುಟ್ಟಸ್ವಾಮಿಯವನರನ್ನು ಒಮ್ಮೆ ಕೇಳಲೇಬೇಕು. ಎಲ್ಲಿದ್ದೀರಾ ಪುಟ್ಟಸ್ವಾಮಿಯವರೇ? ನೀವು ಬರುವ ಮೊದಲು ಬಿಜೆಪಿ ಏನಾಗಿತ್ತು? ನೀವು ಬಂದ ಮೇಲೆ ಬಿಜೆಪಿ ಏನಾಯಿತು? ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ, ಹಾಗೆಯೇ ಬಿಜೆಪಿಗೆ ನೀವು ಬಂದ ಮೇಲೆ, ನೀವೂ, ನಿಮ್ಮ ಅಂತಸ್ತು ಏನಾಯಿತೆಂಬುದನ್ನೂ ಮನನ ಮಾಡಿಕೊಳ್ಳಿ.
ಗಲ್ವಾನ್ ಗಲಾಟೆ – ಭಾರತ ಚೀನಾ ತಗಾದೆಯ ಒಳಸುಳಿಗಳು
– ರಾಘವೇಂದ್ರ ಸುಬ್ರಹ್ಮಣ್ಯ
1962 ಭಾರತಕ್ಕೆ ಕಹಿನೆನಪುಗಳನ್ನು ಕೊಟ್ಟ ವರ್ಷ. 1950ರ ಟಿಬೇಟ್ ಆಕ್ರಮಣದ ಕೆಲವೇ ದಿನಗಳನಂತರದ ಪತ್ರದಲ್ಲೇ ಸರ್ದಾರ್ ಪಟೇಲರು ನೆಹರೂಗೆ ನಮ್ಮ ನಿಜವಾದ ಶತ್ರು ಯಾರು ಅಂತಾ ತಿಳಿಸಿಕೊಟ್ಟಿದ್ದರೂ (7 November 1950ರ ಪತ್ರ, ಲಿಂಕ್ ಕಮೆಂಟಿನಲ್ಲಿದೆ), ನೆಹರೂ ನಿರ್ಲಕ್ಷ್ಯದಿಂದಾಗಿ ಚೀನಾ ಬೆಳೆಯುತ್ತಲೇ ಹೋಯಿತು, ತನ್ನ ಬೇಳೆ ಬೆಳೆಸಿಕೊಳ್ಳುತ್ತಲೇ ಹೋಯಿತು. 62ರ ಯುದ್ಧವೂ ನಡೆಯಿತು. ನಮ್ಮ ದುರಾದೃಷ್ಟವೋ, ಅಥವಾ ಚೀನಾದ ಅಪಾರ ಆಳದ ಇಂಟೆಲಿಜೆನ್ಸೋ, ಅಥವಾ ಕಾಕತಾಳಿಯವೋ ಎಂಬಂತೆ ಅಮೇರಿಕಾ ಮತ್ತು ರಷ್ಯಾ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಇಲ್ಲವಾದಲ್ಲಿ ಬೇರೇನಲ್ಲದಿದ್ದರೂ ನಾನೇ ದೊಡ್ಡಣ್ಣ ಅಂತಾ ತಿಳಿಸಿಕೊಡಲಿಕ್ಕೆ ಅಮೇರಿಕವೂ, ನೆಹರೂವಿನ ಖಾಸಾ ದೋಸ್ತು ಅಂತೆನಿಸಿಕೊಂಡಿದ್ದ ನಿಖಿತಾ ಕ್ರುಶ್ಚೇವನ ರಷ್ಯಾವೂ ಖಂಡಿತಾ ಭಾರತದ ಪರವಾಗಿ ನಿಲ್ಲುತ್ತಿದ್ದವು. ಡ್ರಾಗನ್ ತನ್ನ ಬಾಲ ಮುದುರಲೇಬೇಕಿತ್ತು. (ಚೀನಾ ತನ್ನ ಆಕ್ರಮಣವನ್ನು ಕ್ಯೂಬನ್ ಮಿಸೈಲ್ ಕ್ರೈಸಿಸ್ ಸಮಯಕ್ಕೆ ಸರಿಯಾಗಿ ಪ್ರಾರಂಭಿಸಿದ್ದು ಕಾಕತಾಳಿಯವಲ್ಲ, ಅದಕ್ಕೆ ಕ್ಯೂಬಾದ ಕಥೆಯ ಬಗ್ಗೆ ಮೊದಲೇ ಗೊತ್ತಿತ್ತು ಎಂಬುದೊಂದು ಕಾನ್ಸ್ಪಿರಸಿ ಥಿಯರಿ).
ಹೋಗಲಿ ಬಿಡಿ. ಆದದ್ದಾಯಿತು. ಭಾರತಕ್ಕೆ 62ರ ರಕ್ತದ ಕಲೆಯಂತೂ ಮಾಸಲಿಲ್ಲ. ಆದರೆ ನನಗೆ ಬೇಸರ ಅದಲ್ಲ. ನಮ್ಮ ನೆನಪೂ ಸಹ 62ಕ್ಕೇ ಮೀಸಲಾಗಿ ನಿಲ್ಲುತ್ತದೆಯೇ ಹೊರತು ಅದಾದ ಮೇಲೆ ನಾವು ಅಂದರೆ ಭಾರತದವರು ಕಡಿದುಕಟ್ಟೆಹಾಕಿದ್ದು ಏನೂ ಇಲ್ಲ. ನೆಹರೂನನ್ನೇ ಬೈಕಂಡು ಕೂತಿದ್ದೇವೆಯೇ ಹೊರತು ರಾಜತಾಂತ್ರಿಕವಾಗಿ, ಆರ್ಥಿಕವಾಗಿ, ವೈಜ್ಞಾನಿಕವಾಗಿ ಚೀನಾಕ್ಕೆ ಎದುರೇಟು ಕೊಟ್ಟಿದ್ದೇನೂ ಇಲ್ಲ. 1950ರ ಚೀನಾದ ಟಿಬೇಟ್ ಆಕ್ರಮಣವನ್ನು ಟೀಕಿಸಿದ ನೆಹರೂವನ್ನು ಶಿಕ್ಷಿಸಲು ಚೀನಾ 1962ರ ಆಕ್ರಮಣ ಅವಕಾಶವನ್ನು ಸಮರ್ಥವಾಗಿ ಉಪಯೋಗಿಸಿಕೊಂಡಿತು. 1966ರಲ್ಲಿ ಚೀನಾ ಭೂತಾನ್ ಅನ್ನು ಆಕ್ರಮಿಸಲು ಪ್ರಯತ್ನಿಸಿದಾಗ ಚೀನಾದ ಪ್ರಯತ್ನವನ್ನು ಟೀಕಿಸಿದ ಮತ್ತು ಭೂತಾನ್ ಪರವಾಗಿ ಹೋರಾಡಲು ತನ್ನ ಸೈನ್ಯ ಕಳಿಸಿದ್ದ ಇಂದಿರಾಳನ್ನು ಶಿಕ್ಷಿಸಲು ಚೀನಾ ಪ್ರಯತ್ನ ಮಾಡುತ್ತಲೇ ಹೋಯಿತು. ಇಂದಿಗೂ ಮಾಡುತ್ತಲೇ ಇದೆ. ಡೋಕ್ಲಾಮ್ ಚಕಮಕಿ ಬಗ್ಗೆ ಸ್ವಲ್ಪವಾದರೂ ರೀಸರ್ಚ್ ಮಾಡಿದವರಿಗೆ ಇದರಬಗ್ಗೆ ಗೊತ್ತಿರುತ್ತೆ. ಹೌದು, ಡೋಕ್ಲಾಮ್ ಗಲಾಟೆ ಇವತ್ತಿನದ್ದಲ್ಲ, 1966ರಿಂದ ನಡೆದುಕೊಂಡೂ ಬಂದಿರುವುದು. ಅದಾದ ಮೇಲೆ ಬಂದ ಎಲ್ಲಾ ಪ್ರಧಾನಿಗಳೂ ಚೀನಾಕ್ಕೆ ಸ್ವಲ್ಪ ಹೆದರಿಕೊಂಡೇ ಇದ್ದವರು, ಚಂದ್ರಶೇಖರ್ ಒಬ್ಬರನ್ನು ಬಿಟ್ಟರೆ. ಎನ್.ಡಿ.ಎ ಕೂಡಾ ಜಾರ್ಜ್ ಫರ್ನಾಂಡಿಸ್’ರಂತಹ ಎದೆಗಾರಿಕೆಯ ವ್ಯಕ್ತಿಯಿದ್ದರೂ ಸಹ (ಅದೂ ಸಹ ಕಟ್ಟಾ ಚೀನಾ ವಿರೋಧಿಯಾಗಿದ್ದ ವ್ಯಕ್ತಿ) ಯಾಕೋ ಚೀನಾ ವಿರುದ್ಧ ಮಂಕಾಯಿತು. ಸಿಂಗರ ಕಾಲವಂತೂ ಕೇಳುವುದೇ ಬೇಡ. ಆದರೆ 2013ರ ನಂತರವೂ ನಾವು ನೆಹರೂ-ಅಕ್ಸಾಯ್ ಚಿನ್-ಹಿಮಾಲಯನ್ ಬ್ಲಂಡರ್ ಅನ್ನುವ ಘೋಷಣೆಗಳನ್ನು ಬಿಟ್ಟರೆ ಚೀನಾಕ್ಕೆ ಅದರ ಭಾಷೆಯಲ್ಲೇ ಉತ್ತರಿಸಲು ಪ್ರಯತ್ನಿಸಿಲ್ಲ. ಬದಲಿಗೆ ನಮ್ಮ ದೇಶದಲ್ಲಿ ಹೆಚ್ಚೆಚ್ಚು ಚೀನಾ ಬೇರೂರಿತು. ಚೀನೀ ಕಂಪನಿಗಳ ಮೇಲೆ ಭಾರತ ಯಾವುದೇ ನಿಷೇಧ ಹೇರಿಲ್ಲ. ನಮ್ಮ ಸರ್ಕಾರ ಮತ್ತು ಖಾಸಗೀ ಕಂಪನಿಗಳು ಚೀನಿಯರಿಗೆ ಹೆಚ್ಚೆಚ್ಚು ಕಾಂಟ್ರಾಕ್ಟುಗಳನ್ನು ಕೊಟ್ಟಿವೆ. ಮೋದಿ ಮತ್ತೆ ಮತ್ತೆ ‘ವಿನ್ನಿ ದ ಪೂ’ವನ್ನು ಭೇಟಿಯಾದರು. ಅವರಿಲ್ಲಿಗೆ ಬಂದರು, ಇವರಲ್ಲಿಗೆ ಹೋದರು. ಭಾರತ ಇನ್ನೂ ಹೆಚ್ಚೆ ಚೀನಾದ ವಸ್ತುಗಳ ಮೇಲೆ ಅವಲಂಬಿತವಾಗುತ್ತಲೇ ಹೋಯ್ತು.
ಅಂದು ಇತಿಹಾಸ ಬದಲಿಸಬಲ್ಲ ತಿಮ್ಮಯ್ಯನಿದ್ದರು, ಆದರೆ ಮೋದಿಯಂಥಾ ಪ್ರಧಾನಿಯಿರಲಿಲ್ಲ!
– ಸಂತೋಷ್ ತಮ್ಮಯ್ಯ
೧೫೮೦ರಿಂದಲೂ ಲಡಾಕ್ ಭಾರತೀಯ ಬುಡಕಟ್ಟು “ಸ್ಕಾರ್ಡೋ” ಜನಾಂಗದ ಅಧೀನದಲ್ಲಿದ್ದ ಪ್ರದೇಶ. ಟಿಬೇಟಿನೊಂದಿಗೆ ನಡೆಯುತ್ತಿದ್ದ ನಿರಂತರ ಯುದ್ಧಗಳಿಗೆ ಕೊನೆ ಹಾಡಬೇಕೆಂಬ ಉದ್ದೇಶದಿಂದ ೧೬೮೪ರಲ್ಲಿ ಲಡಾಕ್ ಮತ್ತು ಟಿಬೇಟ್ ಟಿಂಗ್ ಮೋಸ್ಗಂಗ್ನಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿತು. ಒಪ್ಪಂದದ ಪ್ರಕಾರ ಪಾಂಗಾಂಗ್ ತ್ಸು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳೆಲ್ಲವೂ ಲಡಾಕಿನದ್ದು ಎಂದು ತೀರ್ಮಾನವಾಗಿತ್ತು. ಮುಂದೆ ಲಡಾಕ್ ಸಿಕ್ಖರ ಆಳ್ವಿಕೆಗೆ ಒಳಪಟ್ಟಾಗ ಮಹಾರಾಜ ಗುಲಾಬ್ ಸಿಂಗ್ ತನ್ನ ಸರದಾರ ಜೊರಾವರ ಸಿಂಹನನ್ನು ದಂಡಯಾತ್ರೆಗೆ ಕಳುಹಿಸಿದಾಗ ನಡೆದ ಒಂದು ಘಟನೆ ಅತ್ಯಂತ ಕುತೂಹಲಕಾರಿಯಾಗಿದೆ.
ದಂಡಯಾತ್ರೆಗೆ ಹೊರಟ ಜೊರಾವರ ಸಿಂಹ ಸುಂದರ ಸರೋವರದ ದಂಡೆಯಲ್ಲಿ ಬೀಡುಬಿಟ್ಟಿದ್ದ. ಆದರೆ ಕುದುರೆಗಳು ಆ ನೀರನ್ನು ಕುಡಿಯದಿದ್ದಾಗ ಪ್ರತಿಜ್ಞೆಯೊಂದನ್ನು ಕೈಗೊಂಡು ಇದಕ್ಕಿಂತಲೂ ಸುಂದರವೂ, ವಿಶಾಲವೂ ಆದ ಸರೋವರದಲ್ಲಿ ನೀರು ಕುಡಿಸುತ್ತೇನೆ ಎಂದು ಆತ ಸಂಕಲ್ಪ ಮಾಡಿದನಂತೆ! ಅದರಂತೆ ಜೊರಾವರ ಸಿಂಹ ಮುಂದುವರಿದು ಕೈಲಾಸ ಮಾನಸ ಸರೋವರದಲ್ಲಿ ಮನಸೋ ಇಚ್ಛೆ ಮಿಂದನಂತೆ. ಇವು ಸಿಕ್ಖ್ ಲಾವಣಿಗಳಲ್ಲಿ ಮಾತ್ರವಲ್ಲ, ಆಧುನಿಕ ಮಿಲಿಟರಿ ಇತಿಹಾಸದಲ್ಲೂ ದಾಖಲಾಗಿದೆ(Prepare Or Perish-page76). ಅಂದರೆ ಪಾಂಗಾಂಗ್ ಮಾತ್ರವಲ್ಲ ಮಾನಸ ಸರೋವರವೂ ಒಂದು ಕಾಲದಲ್ಲಿ ಭಾರತೀಯರ ಅನದಲ್ಲಿದ್ದ ಭೂಭಾಗವಾಗಿತ್ತು ಎನ್ನುವುದಕ್ಕೆ ಭರಪೂರ ಸಾಕ್ಷಿಗಳಿವೆ ಎಂದಾಯಿತು. ಅಷ್ಟೇ ಅಲ್ಲ, ೧೮೪೨ರಲ್ಲಿ ಜೊರಾವರ ಸಿಂಹನಿಗೆ ಹೆದರಿದ ಟಿಬೇಟ್ ಶಾಂತಿ ಮಾತುಕತೆಗೆ ಮುಂದಾಯಿತು. ಜೊತೆಗೆ ಟಿಬೇಟ್ ಎಡವಟ್ಟೊಂದನ್ನು ಮಾಡಿಕೊಂಡಿತು. ಏಕೆಂದರೆ ಮಾತುಕತೆಯಲ್ಲಿ ಒಂದೆಡೆ ಜೊರಾವರ ಸಿಂಹ ಕುಳಿತಿದ್ದರೆ ಇನ್ನೊಂದೆಡೆ ಲ್ಹಾಸಾದ ದಲೈ ಲಾಮಾನೊಂದಿಗೆ ಸ್ವತಃ ಚೀನಾದ ಅರಸ ಕುಳಿತಿದ್ದ! ಇದು ಮುಂದಿನ ಭಯಾನಕ ಇತಿಹಾಸವೊಂದಕ್ಕೆ ಸಾಕ್ಷಿಯಾಗಲಿದೆ ಎಂಬುದು ಅಂದು ಟಿಬೇಟಿನ ಲಾಮಾನಿಗೂ ಗೊತ್ತಿರಲಿಲ್ಲ, ಜೊರಾವರ ಸಿಂಹನಿಗೂ ಗೊತ್ತಿರಲಿಲ್ಲ. ಚೀನಾದ ಅರಸ ಮಾತುಕತೆಯನ್ನು ಎಷ್ಟೊಂದು ಎಳೆದನೆಂದರೆ ಶ್ರೀನಗರದಿಂದ ದಿವಾನ್ ಹರಿಚಂದ್ ಮತ್ತು ವಜೀರ ರತನು ಆಗಮಿಸಿ ಟಿಬೇಟಿನ ಹಕ್ಕನ್ನು ಸಂಪೂರ್ಣ ಬಿಟ್ಟುಕೊಡಬೇಕಾಯಿತು. ಭಾರತ ಹಾಗೆ ಮಾಡಲು ಇದ್ದ ಏಕೈಕ ಕಾರಣ ಟಿಬೇಟಿನ ಸಾಂಸ್ಕೃತಿಕ ಬೇರುಗಳು ಮತ್ತು ಲಾಮಾನ ಸಾತ್ವಿಕತೆ. ಮುಂದೆ ಬ್ರಿಟಿಷ್ ಆಳ್ವಿಕೆಯಲ್ಲಿ ಕೂಡಾ ಲಡಾಕಿನ್ನು ಕಾಶ್ಮೀರದ್ದು ಎಂದು ತೀರ್ಮಾನಿಸಿ ಗಡಿ ಕೂಡಾ ನಿರ್ಧರಿಸಲಾಗಿತ್ತು. ಅದಕ್ಕೆ ಆಸ್ಥೆ ವಹಿಸಿದ್ದವನು ಬ್ರಿಟಿಷ್ ಕಮಿಷನರ್ ಕನ್ನಿಂಗ್ ಹ್ಯಾಂ. ಅಲ್ಲಿಗೆ ಎಲ್ಲವೂ ಮುಗಿಯಿತು ಎಂದು ಭಾರತ ಭಾವಿಸಿತ್ತು. ಆದರೆ ಅಸಲಿ ಸಂಗತಿ ಆರಂಭವಾಗಿದ್ದೇ ಅಲ್ಲಿಂದ.
ದನಗಾಹಿ ಬಾಲಕ ರಾಷ್ಟ್ರರಥ ಚಾಲಕನಾದಲ್ಲಿ ಇದರಲ್ಲೇನಿದೆ ಅಚ್ಚರಿ?
– ಸಂತೋಷ್ ತಮ್ಮಯ್ಯ
ಆಚಾರ್ಯ ಚಾಣಕ್ಯರಿಗೆ ಚಂದ್ರಗುಪ್ತ ಮೌರ್ಯ ಸಿಗುವವರೆಗೂ ಆತ ಯಕಶ್ಚಿತ್ ಒಬ್ಬ ದನಗಾಹಿ ಬಾಲಕ. ವಿದ್ಯಾರಣ್ಯರು ಭೇಟಿಯಾಗುವವರೆಗೂ ಹಕ್ಕ-ಬುಕ್ಕರು ಗುರಿ ಇಲ್ಲದೆ ಕಾಡುಮೇಡುಗಳನ್ನು ಅಲೆಯುತ್ತಿದ್ದ ವೀರರು. ಅಷ್ಟೇ ಏಕೆ? ಸುದತ್ತ ಮುನಿಗಳು “ಪೊಯ್ ಸಳ” ಎನ್ನುವವರೆಗೂ ಸಳನೆಂಬವನು ಇನ್ನೂ ಹಾಲುಗಲ್ಲದ ಬಾಲಕ. ಗುರುಗೋವಿಂದ ಸಿಂಹರು ಬಲಿದಾನಕ್ಕೆ ಕರೆ ನೀಡದೇ ಇರುತ್ತಿದ್ದರೆ ‘ಪಂಚಪ್ಯಾರೇ’ಗಳೂ ಹುಟ್ಟುತ್ತಿರಲಿಲ್ಲ, ವೀರ ಖಾಲ್ಸಾ ಪರಂಪರೆಯೂ ಮುಂದುವರಿತ್ತಿರಲಿಲ್ಲ. ಹೀಗೆ ಭಾರತದ ಪ್ರತೀಯೊಂದು ಪರಂಪರೆಯ, ಪ್ರತೀಯೊಂದು ಸಂಸ್ಥಾನಗಳ, ಪ್ರತೀಯೊಂದು ರಾಜ ಮನೆತನಗಳ, ಪ್ರತೀಯೊಂದು ಚರಿತ್ರೆಯ ಹಿಂದೆ ಇಂಥದ್ದೊಂದು ವಿಶೇಷತೆ ಇದ್ದೇ ಇರುತ್ತದೆ. ಹಾಗಾಗಿ ನಮಗೆ ಕೃಷ್ಣದೇವರಾಯನಂತೆ ಆತನ ತಂದೆಯ ಹೆಸರು ಗೊತ್ತಿಲ್ಲ, ವಿಕ್ರಮಾತ್ಯನ ಅಪ್ಪನ ಹೆಸರೂ ತಿಳಿದಿಲ್ಲ! ಚರಿತ್ರೆಯೂ ಅವರ ಹೆಸರನ್ನು ಒಡಲಲ್ಲಿಟ್ಟುಕೊಂಡಿಲ್ಲ. ಅದಕ್ಕೆ ಅದನ್ನು ನೆನಪಿಟ್ಟುಕೊಳ್ಳುವ ಆವಶ್ಯಕತೆಯೇ ಬಂದಿಲ್ಲ. ಏಕೆಂದರೆ ಭಾರತವೆಂಬ ಈ ನೆಲ ದನಗಾಹಿ ಬಾಲಕರನ್ನೇ ರಾಷ್ಟ್ರರಥ ಚಾಲಕರನ್ನಾಗಿ ಮಾಡಿದ್ದೇ ಹೆಚ್ಚು. ಮತ್ತು ಹಾಗೆ ಮಾಡಿದ ಜಗತ್ತಿನ ಮೊದಲ ಹಾಗೂ ಅಪರೂಪದ ನೆಲ ಈ ಭಾರತ. ಇಂಥ ಪರಂಪರೆ ಕಾಲಕಾಲಕ್ಕೆ ಮುಂದುವರಿಯುತ್ತಾ ಅವಿಚ್ಛಿನ್ನವಾಗಿ ಬಂದಿದೆ ಎನ್ನುವುದೂ ಈ ನೆಲದ ಇನ್ನೊಂದು ವಿಶೇಷತೆ. ಭಾರತವನ್ನು ಭಾರತವನ್ನಾಗಿ ಉಳಿಸಿದ್ದು ಕೂಡಾ ನೆಲದ ಈ ಗುಣವೇ ಎಂಬುದಕ್ಕೆ ಇಲ್ಲಿ ಸಾಕ್ಷಿಗಳು ಕೂಡಾ ಹಲವು.
ಆಧುನಿಕ ರಾಜಕಾರಣದಲ್ಲಿ ಮೊನ್ನೆ ನಡೆದ ವಿದ್ಯಮಾನವೊಂದು ಅಂಥ ಪರಂಪರೆ ಮುಂದುವರಿಯುತ್ತಿದೆ ಎಂಬುದಕ್ಕೆ ಒಂದು ಉದಾಹರಣೆ ಮಾತ್ರ. ಅಂಥಲ್ಲಿ ಭಾರತೀಯ ಜನತಾ ಪಕ್ಷ ತನ್ನ ಇಬ್ಬರು ಅನಾಮಿಕ ಕಾರ್ಯಕರ್ತರನ್ನು ರಾಜ್ಯಸಭೆಗೆ ಕಳುಹಿಸುತ್ತಿದೆ ಎಂದಾಗ ಅದರಲ್ಲಿ ಮಹದಾಶ್ಚರ್ಯ ಪಡುವಂಥಾದ್ದೇನಿದೆ? ಭಾರತದ ಪರಂಪರೆ ಇರುವುದೇ ಹಾಗೆ ಮತ್ತು ಅಂಥದ್ದೇ ಪರಂಪರೆಯ ಮುಂದುವರಿಕೆಗಾಗಿ ಸ್ಥಾಪನೆಯಾದ ಪಕ್ಷವೊಂದು ತನ್ನ ಸಿದ್ಧಾಂತದ ಆಧಾರದಲ್ಲಿ ಅಂಥದ್ದೊಂದು ನಿರ್ಣಯವನ್ನು ಕೈಗೊಂಡಾಗ ಅಪಾರ್ಥವನ್ನೂ, ಗೊಂದಲವನ್ನೂ ಕಲ್ಪಿಸುವ ಅಗತ್ಯವೇನಿದೆ? ಬಿಜೆಪಿಯಂಥಾ ಪಕ್ಷ ತನ್ನ ಅನಾಮಿಕ-ಸಾಮಾನ್ಯ ಕಾರ್ಯಕರ್ತರನ್ನು ರಾಜ್ಯಸಭೆಗೆ ಕಳುಹಿಸುವುದು ಯಾವ ಕೋನದಲ್ಲಿ ಒಬ್ಬ ನಾಯಕ, ಮತ್ತೊಬ್ಬ ನಾಯಕನ ಮೇಲೆ ಹೂಡಿದ ವಿಷ ಬಾಣವಾಗುತ್ತದೆ? ಯಾವ ರೀತಿಯಲ್ಲಿ ಅದು ಸೇಡು ತೀರಿಸಿಕೊಂಡಂತಾಗುತ್ತದೆ? ಬಹುಶಃ ಆಧುನಿಕ ರಾಜಕಾರಣವನ್ನು ಕಾಂಗ್ರೆಸ್ ಕಣ್ಣಿನಿಂದ ನೋಡುವವರಿಗೆ ಹೀಗನ್ನಿಸಬಹುದೇನೋ! ಆದರೆ ವಾಸ್ತವದಲ್ಲಿ ಈ ನಿರ್ಣಯ ಭಾರತೀಯ ಪರಂಪರೆಯ ಮೂಲ ಪಾಠವನ್ನು ಕೊಂಚವಾದರೂ ಅರಿತವರಿಗೆ ಅಚ್ಚರಿಯೆನಿಸುವುದಿಲ್ಲ. ಯಾರಿಗೆ ಯಾರೂ ಬಾಣ ಹೂಡಿದಂತೆಯೂ ಅನಿಸುವುದಿಲ್ಲ. ಅಸಲಿಗೆ ಭಾರತೀಯ ಜನತಾ ಪಕ್ಷದ ಹುಟ್ಟೇ ಹಾಗಿಲ್ಲ. ಆ ಮೂಲ ‘ಆನಂದ ಭವನ’ವನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ್ದರೆಂಬ ಒಂದೇ ಕಾರಣಕ್ಕೆ ಮಗನನ್ನು, ಮೊಮ್ಮಗಳನ್ನು, ಮರಿಮಕ್ಕಳನ್ನು ಪ್ರಧಾನಮಂತ್ರಿಗಳಾಗಿ ಮಾಡುವ ಉದ್ದೇಶದಂತಲ್ಲ ಎಂಬುದನ್ನು ರಾಜಕೀಯ ವಿಶ್ಲೇಷಕರು ಅರ್ಥೈಸಿಕೊಳ್ಳಬೇಕಿತ್ತು. ಆದರೆ ಮಹಾ ಭಯಂಕರವೆಂದುಕೊಳ್ಳುವ ವಿಶ್ಲೇಷಕರುಗಳು ಅದನ್ನರಿಯುವಲ್ಲೇ ಎಡವಿದರು. ವಿಶ್ಲೇಷಕರ ಅರಿವಿನ ಕೊರತೆಯನ್ನು ನೀಗಿಸಲು ಆಧುನಿಕ ರಾಜಕೀಯ ಚರಿತ್ರೆಯಲ್ಲೇ ಹಲವು ಸಾಕ್ಷಿಗಳಿವೆ.
ಇದು ಅಂಥಾ ಸಾಕ್ಷಿಗಳಲ್ಲೊಂದು.
1950ರಲ್ಲಿ ಕಟ್ಟರ್ ಕಾಂಗ್ರೆಸಿಗ, ಹಿರಿಯ ನಾಯಕ ಪುರುಷೋತ್ತಮದಾಸ್ ಟಂಡನ್ ಕಾಂಗ್ರೆಸಿನ ಅಧ್ಯಕ್ಷರಾದರು. ನೆಹರೂ ಜನಪ್ರೀಯತೆ, ಕಾಂಗ್ರೆಸಿನ ಅಸಾಧಾರಣವಾದ ಅಬ್ಬರದ ಅಲೆ ಇದ್ದರೂ ಟಂಡನ್ ಅವರು ರಾಜಕಾರಣದಲ್ಲಿ ಭಾರತೀಯತೆಯನ್ನು ಪ್ರತಿಪಾದಿಸುವ ಅಪರೂಪದ ನಾಯಕರಾಗಿದ್ದರು. ಗಾಂಧೀವಾದಿಗಳಾಗಿದ್ದ ಟಂಡನ್, ಗಾಂಧೀಜಿಯವರ “ವಿಭಿನ್ನ ವಿಚಾರಧಾರೆಯ ಹಲವು ಪಕ್ಷಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತವೆ” ಎಂಬ ವಿಚಾರದಲ್ಲಿ ನಂಬಿಕೆಯನ್ನಿರಿಸಿದ್ದರು. ಈ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಟಂಡನ್ ಆರೆಸ್ಸೆಸ್ ಸ್ವಯಂಸೇವಕರನ್ನು ಕಾಂಗ್ರೆಸಿನೊಳಗೆ ಸೇರಿಸಿಕೊಳ್ಳಬೇಕು ಎಂಬ ಪ್ರಸ್ಥಾವವನ್ನು ಮಂಡಿಸಿದ್ದರು. ಗಾಂಧಿ ಹಂತಕರೆಂಬ ವ್ಯರ್ಥಾರೋಪ ಮತ್ತು ನೆಹರೂ ನರಿಬುದ್ಧಿಯ ಕಾರಣದಿಂದ ಟಂಡನ್ ಅವರ ಪ್ರಸ್ಥಾವಕ್ಕೆ ಕಾಂಗ್ರೆಸಿನಲ್ಲಿ ಭಾರೀ ವಿರೋಧ ವ್ಯಕ್ತವಾಯಿತು. ಸ್ವತಃ ನೆಹರೂ ಅವರೇ ಟಂಡನ್ ಅವರನ್ನು ಕಟುವಾಗಿ ಟೀಕಿಸಿದರು. ಇದರಿಂದ ಟಂಡನ್ ಎಷ್ಟೊಂದು ನೊಂದುಕೊಂಡರೆಂದರೆ ಕಾಂಗ್ರೆಸಿನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸಿ ರಾಜಕೀಯ ಸನ್ಯಾಸಕ್ಕೆ ಹೊರಟುಹೋದರು.
ಅಲ್ಲಿಗೆ ರಾಜಕೀಯದಲ್ಲೂ ಭಾರತೀಯತೆ ಇರಬೇಕೆನ್ನುತ್ತಿದ್ದ ಆರೆಸ್ಸೆಸ್ಸಿಗೆ ಕಾಂಗ್ರೆಸಿನ ಬಾಗಿಲು ಶಾಶ್ವತವಾಗಿ ಮುಚ್ಚಿತು.
ಸರಿಯಾಗಿ ಅದೇ ಸಮಯದಲ್ಲಿ ಕಾಂಗ್ರೆಸಿನ ಹಿರಿಯ ನಾಯಕರೂ, ಕೇಂದ್ರ ಸಚಿವರೂ ಆಗಿದ್ದ ಡಾ।। ಶಾಮಪ್ರಸಾದ್ ಮುಖರ್ಜಿಯವರಿಗೂ ಕಾಂಗ್ರೆಸಿನಲ್ಲಿ ವಂಶವಾದವೆಂಬುದು ಅಂಟುಜಾಡ್ಯವಾಗಿ ಬಹುವರ್ಷಗಳ ಕಾಲ ಕಾಡಲಿದೆ ಎಂಬ ವಾಸನೆ ಹತ್ತಿತು. ಅವರೂ ಕಾಂಗ್ರೆಸಿಗೆ ರಾಜಿನಾಮೆ ನೀಡಿ ನೇರ ಬಂದಿದ್ದು ನಾಗಪುರದ ಸಂಘದ ಅಂಗಳಕ್ಕೆ. ಎಲ್ಲಾ ಕ್ಷೇತ್ರಗಳಲ್ಲಿ ರಾಷ್ಟ್ರೀಯತೆ ವ್ಯಾಪಿಸಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದ ಸಂಘದ ಅಂದಿನ ಸರಸಂಘಚಾಲಕ್ ಗುರೂಜಿ ಗೋಳ್ವಾಲ್ಕರ್ ರೊಡನೆ ಮಾತುಕತೆ ನಡೆಸಿದ ಮುಖರ್ಜಿಯವರಿಗೆ ದಾರಿಯೇನೋ ಸ್ಪಷ್ಟವಾಯಿತು. ಸಂಘದ ಬೆಂಬಲವೂ ಸಿಕ್ಕಿತು. ಆದರೆ ಅಧಿಕಾರದ ಮದ ಮತ್ತು ಶ್ರೀಮಂತ ರಾಜಕಾರಣದ ಅಬ್ಬರದೆದುರಲ್ಲಿ ಸೆಣಸಬಲ್ಲ ಕಾರ್ಯಕರ್ತರು ಮತ್ತು ನಾಯಕರನ್ನೆಲ್ಲಿ ತರುವುದೆಂಬ ಬೃಹದಾಕಾರದ ಪ್ರಶ್ನೆಯೊಂದು ಎದುರಾಯಿತು. ಅದಕ್ಕೂ ಗುರೂಜಿಯವರ ಬಳಿ ಉತ್ತರವಿತ್ತು. ಅವರು ಕೆಲ ಸ್ವಯಂಸೇವಕರನ್ನು ಮುಖರ್ಜಿಯವರೊಡನೆ ಕೆಲಸ ಮಾಡಲು ಸೂಚಿಸಿದರು. ಆದರೆ ಅವರಾರಿಗೂ ರಾಜಕಾರಣದ ಗಂಧಗಾಳಿಯೇ ತಿಳಿದಿರಲಿಲ್ಲ. ಮುಖರ್ಜಿಯವರಾದರೋ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದವರು, ಅಲ್ಲದೆ ಮಂತ್ರಿಗಳಾಗಿದ್ದವರು! ಆದರೆ ಅವರ ಹಿಂದಿರುವವರು ರಾಜಕಾರಣದ L ಬೋರ್ಡುಗಳು! ಅಂದು ಗುರೂಜಿಯವರು ಹಾಗೆ ಕಳುಹಿಸಿದ ಸ್ವಯಂಸೇವಕರಲ್ಲೊಬ್ಬರು ಪಂ.ದೀನದಯಾಳ ಉಪಾಧ್ಯಾಯರು. ವೈಯಕ್ತಿಕ ಬದುಕೆಂಬುದೇ ಇಲ್ಲದ, ಉಟ್ಟಬಟ್ಟೆಯೊಂದನ್ನು ಬಿಟ್ಟು ಬೇರೇನೂ ಇಲ್ಲದ, ಸಂಘದ ಶಾಖೆಯಲ್ಲಿ ಮಕ್ಕಳೊಡನಾಡುತ್ತಿದ್ದ ದೀನದಯಾಳರು ಮುಖರ್ಜಿಯವರ ಜೊತೆ ಕೆಲಸ ಮಾಡಲು ಹೋದಾಗ ಅಹಂಕಾರಿ ಕಾಂಗ್ರೆಸಿಗರು ಮತ್ತು ಮಾತಿನಲ್ಲಿ ಚತುರರಾಗಿದ್ದ ಕಮ್ಯುನಿಸ್ಟರು ಅಂದು ಹೇಗೆ ಹಂಗಿಸಿದ್ದರೆಂದರೆ ಇಂದು ಗಸ್ತಿ ಮತ್ತು ಕಡಾಡಿಯವರನ್ನು ಬಿಜೆಪಿ ರಾಜ್ಯಸಭೆಗೆ ಕಳುಹಿಸಲಿದೆ ಎಂದಾಗ ಹಂಗಿಸಿದಂತೆ!
ಅಂದು ಗುರೂಜಿಯವರು ಕೈಗೊಂಡ ನಿರ್ಧಾರ ಎಷ್ಟೊಂದು ಕಠೋರವಾಗಿತ್ತೆಂದರೆ, ಸ್ವತಃ ದೀನದಯಾಳರಿಗೇ ಅಳುಕು ಆರಂಭವಾಗತೊಡಗಿತ್ತು. ದೀನದಯಾಳರಿಗೆ ತಮ್ಮ ಮಿತಿಯ ಅರಿವಿತ್ತು. ಅದನ್ನು ನೇರ ಗುರೂಜಿಯವರಲ್ಲೇ ಹೇಳಿಕೊಂಡರು. “ನಾನೊಬ್ಬ ಸಂಘದ ಪ್ರಚಾರಕ, ನನಗೆ ರಾಜಕೀಯದ ಬಗ್ಗೆ ಏನೆಂದರೆ ಏನೂ ತಿಳಿಯದು. ಅಲ್ಲಿ ನಾನೇನನ್ನು ತಾನೇ ಮಾಡಬಲ್ಲೆ?” ಅದಕ್ಕೆ ಗುರೂಜಿಯವರ ಉತ್ತರ ಹೀಗಿತ್ತು, “ನಿನಗೆ ರಾಜಕೀಯದ ಬಗ್ಗೆ ಏನೂ ತಿಳಿಯದೆಂದೇ ನಿನ್ನನ್ನು ಅಲ್ಲಿಗೆ ಕಳುಹಿಸುತ್ತಿರುವೆ!”
ಪರಿವ್ರಾಜಕನಿಗೆ ಯಾವ ಕ್ಷೇತ್ರವಾದರೇನು? ರಾಜಕೀಯದ ಬಗ್ಗೆ ಏನನ್ನೂ ತಿಳಿಯದಿದ್ದ ದೀನದಯಾಳರು ಒಂದೂವರೆ ವರ್ಷದಲ್ಲಿ ಹೇಗೆ ಬೆಳೆದರೆಂದರೆ 1952ರಲ್ಲಿ ಜನಸಂಘದ ಪ್ರಧಾನ ಕಾರ್ಯದರ್ಶಿಯಾದರು, ಇತಿಹಾಸಕಾರರಾದರು, ಶಿಕ್ಷಣ ತಜ್ಞರಾದರು, ವಿದೇಶಾಂಗ ನೀತಿನಿಪುಣರಾದರು, ಪ್ರಧಾನ ಮಂತ್ರಿಗಳಿಗೆ ಸಲಹೆ ನೀಡುವಂಥಾದರು, ಸಂಘಟನಾ ಕುಶಲರಾದರು. ಸ್ವತಃ ಮುಖರ್ಜಿಯವರೇ “ನನಗೇನಾದರೂ ಇಬ್ಬರು ದೀನದಯಾಳರು ಸಿಗುವುದಾದರೆ ನಾನು ಭಾರತದ ನಕಾಶೆಯನ್ನೇ ಬದಲಿಸುತ್ತೇನೆ” ಎಂದರು.
ದೀನದಯಾಳರು ರಾಜಕಾರಣದಲ್ಲಿ ಸಾಂಸ್ಕೃತಿಕ ರಾಯಭಾರಿಯಾದರು. ಎಲ್ಲಾ ಕಾಲಕ್ಕೂ ರಾಜಕಾರಣದಲ್ಲಿರಲೇಬೇಕಾದ ಒಂದು ಸ್ಥಾನವನ್ನು ಅವರು ಅಂದು ತುಂಬಿದ್ದರು. 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜೌನ್ ಪುರದಲ್ಲಿ ಸ್ಪರ್ಧಿಸಿದಾಗ ರಜಪೂತರ ವಿರುದ್ಧ ಬ್ರಾಹ್ಮಣರನ್ನು ಎತ್ತಿಕಟ್ಟಿ ಸುಲಭವಾಗಿ ಗೆಲ್ಲಬಹುದಾದ ಕ್ಷೇತ್ರವನ್ನು ಸೋತು ಸಿದ್ಧಾಂತವನ್ನು ಗೆಲ್ಲಿಸಿದ್ದರು. ಜನಸಂಘ ಉಳಿದ ಪಕ್ಷಗಳ ರಾಜಕಾರಣಕ್ಕಿಂತ ಸಂಪೂರ್ಣ ವಿಭಿನ್ನ ಎಂಬುದನ್ನು ನಿರೂಪಿಸಿದರು. ಅಂಥಾ ಹಿನ್ನೆಲೆಯ ಸಿದ್ಧಾಂತ ಭಾರತೀಯ ಜನತಾ ಪಕ್ಷದಲ್ಲಿ ಗುಪ್ತಗಾಮಿಯಂತೆ ಹರಿಯುತ್ತದೆ ಎಂಬುದಕ್ಕೆ ರಾಜ್ಯಸಭೆಗೆ ಆರಿಸಿದ ಅಭ್ಯರ್ಥಿಗಳ ಪ್ರಕರಣ ಉದಾಹರಣೆ ಎನಿಸುವುದಿಲ್ಲವೇ? ಎನಿಸಿದರೂ ಕೆಲವರಿಗೆ ಅದನ್ನು ಒಪ್ಪಿಕೊಳ್ಳಲೇಕೆ ಕಷ್ಟವಾಗುತ್ತಿದೆ? ಗಸ್ತಿಯವರ ಉದಾಹರಣೆಯನ್ನೇ ತೆಗೆದುಕೊಳ್ಳಿ, ಕರ್ನಾಟಕದಲ್ಲಿ ಸವಿತಾ ಸಮಾಜ ಯಾವುದೇ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಲ್ಲ. ಬಿಜೆಪಿಗೆ ಸವಿತಾ ಸಮಾಜವನ್ನು ಓಲೈಸುವ ಅನಿವಾರ್ಯತೆಯೇ ಇರಲಿಲ್ಲ. ಒಂದು ವೇಳೆ ಇದ್ದಿದ್ದರೂ ಗಸ್ತಿಯವರನ್ನು ಯಾವುದೋ ಪ್ರಾಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕೈತೊಳೆದುಕೊಳ್ಳಬಹುದಿತ್ತು. ಆದರೆ ಪಕ್ಷ ಅವರನ್ನು ರಾಜ್ಯಸಭೆಗೆ ಕಳುಹಿಸಿ ದೀನದಯಾಳರು ರೂಪಿಸಿದ ಸಂಹಿತೆಯನ್ನು ಪಾಲಿಸಿತು.
ನಿಜ, ದೀನದಯಾಳರ ಕಾಲಾನಂತರ ಭಾರತೀಯ ರಾಜಕಾರಣದಲ್ಲಿ ಸಾಕಷ್ಟು ನೀರು ಹರಿದಿದೆ. ಕಾಂಗ್ರೆಸ್ ನಿರ್ಮಿಸಿದ ರಾಜಕಾರಣದ ನೆಲೆಗಟ್ಟು ರಾಜಕಾರಣದ ಮೇಲೆ ಅದೆಷ್ಟು ಪ್ರಭಾವವನ್ನು ಬೀರಿದೆಯೆಂದರೆ ಕ್ರಮೇಣ ಉಳಿದ ಪಕ್ಷಗಳೂ ಕಾಂಗ್ರೆಸಿನಂತೆಯೇ ಯೋಚಿಸಲಾರಂಭಿಸಿದವು. ಕುದುರೆ ರೇಸಿನಲ್ಲಿ ಗೆಲ್ಲುವ ಕುದುರೆಗೆ ಮಾತ್ರ ಬಾಜಿ ಕಟ್ಟುವಂತೆ ಎಲ್ಲಾ ಪಕ್ಷಗಳೂ ಗೆಲ್ಲುವ ಕುದುರೆಯ ಹಿಂದೋಡಿದವು. ರಾಜಕಾರಣದಲ್ಲಿ ಸಾಂಸ್ಕೃತಿಕತೆಗಿಂತ ಸಂಖ್ಯಾಬಲವೇ ಮುಖ್ಯ ಎಂಬುದು ಬಲವಾಯಿತೋ ಅದರೊಂದಿಗೆ ವ್ಯಕ್ತಿಪೂಜೆಯೂ ಪುಕ್ಕಟೆಯಾಗಿ ಬಂದವು. ಅಂದು ಜೌನ್ಪುರದಲ್ಲಿ ಗೆದ್ದ ಸಿದ್ಧಾಂತ ಜಾತಿ-ಪ್ರಾದೇಶಿಕತೆ-ವಂಶವಾದದೆದುರಲ್ಲಿ ಮಕಾಡೆ ಮಲಗಿತೋ ಎಂದು ಕಾರ್ಯಕರ್ತರು ಮರುಕಪಟ್ಟರು. ಪುಣ್ಯವಶಾತ್ ಬಿಜೆಪಿಯಂಥಾ ಪಕ್ಷ ಇತರರಂತೆ ಸಂಪೂರ್ಣ ಕೆಟ್ಟುಹೋಗುವ ಪಕ್ಷವಲ್ಲ ಎಂಬುದನ್ನು ರಾಜ್ಯಸಭಾ ಅಭ್ಯರ್ಥಿ ಪ್ರಕರಣ ತೋರಿಸಿಕೊಟ್ಟಿದೆ. ಮತ್ತು ರಾಜಕಾರಣದ ಸಿದ್ಧ ಚೌಕಟ್ಟನ್ನು ಮುರಿಯಲು ಬಿಜೆಪಿಯಂಥಾ ಪಕ್ಷಕ್ಕೆ ಮಾತ್ರ ಸಾಧ್ಯ ಎಂಬ ಸಂದೇಶವನ್ನೂ ಈ ಘಟನೆ ನಿರೂಪಿಸಿದೆ. ನಾಯಕನಾದವನೊಬ್ಬನಲ್ಲಿ ನೈತಿಕತೆ, ನಿಸ್ವಾರ್ಥ ಗುಣಗಳಿದ್ದರೆ ಇಂಥವು ರಾಜಕಾರಣದಲ್ಲಿ ತನ್ನಿಂದ ತಾನೇ ಆರಂಭವಾಗುತ್ತವೆ. ಅಂಥಾ ನೈತಿಕತೆಯನ್ನು ವ್ಯಕ್ತಿ ನಿರ್ಮಾಣದ ಮೂಲಕ ಸೃಷ್ಟಿ ಮಾಡುವ ಬಿಜೆಪಿಯಲ್ಲಿ ಮಾತ್ರ ಇದು ಸಾಧ್ಯ. ಹಾಗಾಗಿ ಈ ರಾಜ್ಯಸಭಾ ಸೀಟುಗಳು ಕೇವಲ ಲೆಕ್ಕಾಚಾರದ ಸಂಗತಿಯಾಗಿ ಮಾತ್ರ ಕಾಣುವುದಿಲ್ಲ. ಅದನ್ನು ಭಾರತೀಯ ಪರಂಪರೆಯ ಅವಿಚ್ಛಿನ್ನ ಪರಂಪರೆಯ ಗುಪ್ತಗಾಮಿ ರೂಪವೆನ್ನದೆ ಇರಲಾಗುವುದಿಲ್ಲ.
ಇವೆಲ್ಲವೂ ಸಂಖ್ಯಾಬಲದಿಂದ ರಾಜಕಾರಣವನ್ನು ವಿಶ್ಲೇಷಿಸುವವರಿಗೆ ಪೇಲವ ವಾದಗಳಾಗಿ ಕಾಣಿಸಬಹುದು. ಸಾಮಾನ್ಯ ಕಾರ್ಯಕರ್ತರಿಗೆ ಟಿಕೇಟು ಕೊಟ್ಟರೆ ಅಭಿವೃದ್ಧಿಯಾಗುವುದೇ ಎಂಬ ಪ್ರಶ್ನೆಯೂ ಬರಬಹುದು, ರಾಜ್ಯದ ಪರವಾದ ಸಮರ್ಥ ಮಂಡನೆ ಇಂಥವರಿಂದ ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಬಹುದು. ಆದರೆ ಏನೂ ನಡೆಯದಿದ್ದರೂ ಚಿಂತೆಯಿಲ್ಲ. ಈ ಎರಡು ಅಭ್ಯರ್ಥಿಗಳ ಘೋಷಣೆ ಜಾತಿಯನ್ನು ಮೀರಿದೆ, ಪ್ರಾದೇಶಿಕತೆಯನ್ನು ಲೆಕ್ಕಿಸದೆ ಮುನ್ನಡೆದಿದೆ, ವಂಶವಾದಕ್ಕೆ ಸೆಡ್ಡುಹೊಡೆದಿದೆ. ದರ್ಪ-ದೌಲತ್ತುಗಳಿಗೆತಪರಾಕಿ ಕೊಟ್ಟಿದೆ. ವ್ಯಕ್ತಿಪೂಜೆ ನಡೆಯದು ಎಂಬುದನ್ನು ಸಾರಿದೆ, ಸಿದ್ಧಾಂತದೆದುರು ಯಾರೂ ದೊಡ್ಡವರಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪರಂಪರೆ ಗುಪ್ತಗಾಮಿನಿಯಾಗಿ ಹರಿದಿದೆ ಎಂಬ ಸಂದೇಶವನ್ನು ನೀಡಿದೆ. ಏಕೆಂದರೆ ಬಾಳಾಸಾಬ್ ದೇವರಸರು ಕರೆತಂದ ಯುವಕ ವಾಜಪೇಯಿಯಾಗುತ್ತಾನೆಂದು ಅಂದು ಯಾರೂ ಭಾವಿಸಿರಲಿಲ್ಲ, ಲಕ್ಷ್ಮಣರಾವ್ ಇನಾಂದಾರ್(ವಕೀಲ್ ಸಾಬ್)ಅವರ ಹುಡುಗ ಮೋದಿಯಾಗುವನು ಎಂದು ಯಾರೂ ಭಾವಿಸಿರಲಿಲ್ಲ. ಶಾಖೆಯಲ್ಲಿ ಕಬಡ್ಡಿಯಾಡುತ್ತಿದ್ದ ಹುಡುಗ ಸಿ.ಟಿ ರವಿಯಾಗುವನು ಎಂದು ಯಾರೂ ಅಂದುಕೊಂಡಿರಲಿಲ್ಲ. ಅಂಕಣ ಬರೆಯುತ್ತಿದ್ದ ಪತ್ರಕರ್ತನೊಬ್ಬ ಸಂಸದನಾಗುವನು ಎಂದು ಯಾರೂ ಅಂದುಕೊಂಡಿರಲಿಲ್ಲ. ಅಷ್ಟೇ ಏಕೆ ನಮ್ಮ ಕರ್ನಾಟಕದಲ್ಲೇ ಅರಕಲಿ ನಾರಾಯಣ, ಬೆನಕ ಭಟ್, ಪ್ರಭಾಕರ ಭಟ್ಟರಂಥ ವ್ಯಕ್ತಿ ನಿರ್ಮಾಣದ ಅದ್ವೈರ್ಯುಗಳಿಲ್ಲದಿರುತ್ತಿದ್ದರೆ ಇಂದಿನ ಹಲವು ನಾಯಕರುಗಳೇ ಹುಟ್ಟುತ್ತಿರಲಿಲ್ಲ ಎಂಬ ಉದಾಹರಣೆಯೂ ನಮ್ಮ ಮುಂದಿದೆ. “ನಡೆಯಲಾರದೆ ತೆವಳುತ್ತಿದ್ದೆನು ನಡಿಗೆ ಕಲಿಸಿತು ಸಂಘವು, ನುಡಿಯಲಾರದೆ ತೊದಲುತ್ತಿದ್ದೆನು ಮಾತು ಕಲಿಸಿತು ಸಂಘವು” ಎಂಬ ಗೀತೆಯೇ ಎಲ್ಲವನ್ನೂ ಹೇಳುತ್ತದೆ. ಹಾಗಾಗಿ ಇದರಲ್ಲೇನೂ ಅಚ್ಚರಿಯಲ್ಲ! ಇದೇನು ಮೊದಲಲ್ಲ, ಕೊನೆಯೂ ಅಲ್ಲ.
ಮೌಲ್ಯಾಧಾರಿತ ಪತ್ರಿಕೋದ್ಯಮ ಮೌಲ್ಯಾಧಾರಿತ ರಾಜಕಾರಣಿಯನ್ನು ಕಾಣಬೇಕಾದುದು ಹೇಗೆ?
– ವಿನುತಾ ಗೌಡ
ಕೆಲವು ದಿನಗಳ ಹಿಂದೆ ಕನ್ನಡದ ಸುದ್ದಿವಾಹಿನಿಯೊಂದು ತಿಪಟೂರಿನ ಶಾಸಕ ಬಿ.ಸಿ.ನಾಗೇಶ್ರ ಬಗ್ಗ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿ ಅವರ ತೇಜೋವಧೆಯ ಪ್ರಯತ್ನವನ್ನು ನಡೆಸಿತ್ತು. ಆ ಸಂದರ್ಭದಲ್ಲಿ ತಿಪಟೂರು ಮಾತ್ರವಲ್ಲ, ಶಾಸಕರನ್ನು ಅರಿತಿದ್ದ, ಮೌಲ್ಯಾಧಾರಿತ ರಾಜಕಾರಣವೆಂದರೇನೆಂದು ಅರಿವಿದ್ದ ನಾಗರಿಕರು ಆ ವಾಹಿನಿಯ ಕ್ರಮಕ್ಕೆ ಅಪಾರವಾಗಿ ನೊಂದುಕೊಂಡರು. ಪಕ್ಷ ಭೇದವಿಲ್ಲದೆ ಶಾಸಕ ನಾಗೇಶ್ ಅವರ ಬೆಂಬಲಕ್ಕೆ ನಿಂತರು. ವೈಚಾರಿಕವಾಗಿ ಅವರನ್ನು ಪನಿಧಿಸುವ ಸಂಘಟನೆಯನ್ನು ವಿರೋಧಿಸುವ ಸಮಾಜದ ಅನೇಕ ಪ್ರಮುಖರೂ ಅವರ ಬೆಂಬಲಕ್ಕೆ ನಿಂತರು. ಇಂತಹವರೆಲ್ಲರುಗಳ ಬೆಂಬಲ ಅದೆಷ್ಟು ತೀವ್ರವಾಗಿತ್ತೆದರೆ ಇವರುಗಳೆಲ್ಲರೂ ಶಾಸಕ ನಾಗೇಶ್ ಅವರ ವಕ್ತಾರರಂತೆ ಅವರನ್ನು ಸಮರ್ಥಿಸಿಕೊಂಡರು. ಶಾಸಕರ ತೇಜೋವಧೆಯ ಹುನ್ನಾರವಿದ್ದ ಈ ಘಟನೆ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಯಿತು. ಈ ಘಟನೆಯ ಮೂಲಕ ಇಂತಹ ಒಬ್ಬ ಶಾಸಕರಿದ್ದಾರೆಂಬುದೂ ಜನಜನಿತವಾಯಿತು.
ನಾನೇನು ತಿಪಟೂರಿನ ಮತದಾರಳಲ್ಲ, ನಾಗೇಶ್ ಅವರಿಂದ ಪ್ರಯೋಜನ ಪಡೆದುಕೊಂಡವಳೂ ಅಲ್ಲ. ಆದರೆ ಗಾಂಧೀಜಿ ಹೇಳಿದ, ಅಂಬೇಡ್ಕರ್ ಭೋದಿಸಿದ, ಪಂಡಿತ್ ದೀನದಯಾಳ ಉಪಾಧ್ಯಾಯರು ಜೀವನದಲ್ಲಿ ಅಳವಡಿಸಿಕೊಂಡ ಮೌಲ್ಯಾಧ್ಯಾರಿತ ರಾಜಕಾರಣದ ಬಗ್ಗೆ ಒಂದಿಷ್ಟು ಓದಿಕೊಂಡಿದ್ದೇನೆ. ಹಾಗಾಗಿ ಒಂದಷ್ಟು ವಿಷಯವನ್ನು ಹೇಳಲೇಬೇಕೆನಿಸುತ್ತದೆ. ಜೊತೆಗೆ ನಾಗೇಶ್ ಅವರು ಯಾವ ಪಕ್ಷದವರೆನ್ನುವುದೂ ಅವರ ವ್ಯಕ್ತಿತ್ವದ ಎದುರಲ್ಲಿ ನಗಣ್ಯವಾಗಿ ಬಿಡುತ್ತದೆ. ಎಲ್ಲಾ ಪಕ್ಷಗಳಲ್ಲಿ ಇವರಂತಹ ರಾಜಕಾರಣಿಗಳಿರಬೇಕು ಎನಿಸತೊಡಗುತ್ತದೆ. ಅಂತಹವರುಗಳೇ ಜನಪ್ರತಿನಿಧಿಗಳಾಗಬೇಕು ಎನಿಸುತ್ತದೆ. ಸಂಧಿಗ್ಧತೆಯಲ್ಲೂ ಬಹುಜನರು ತಮ್ಮೆಲ್ಲಾ ಗಡಿಗಳನ್ನು ದಾಟಿ ನಾಗೇಶ್ ಪರ ನಿಂತಿದ್ದಕ್ಕೆ ಕಾರಣ ಇಂತಹುದೊಂದು ವ್ಯಕ್ತಿತ್ವವೇ ಕಾರಣ ಎಂದೂ ಅನಿಸುತ್ತದೆ.
ದೇಶದ ಕೆಲವು ರಾಜಕಾರಣಿಗಳ ಬಗ್ಗೆ ಎಲ್ಲರಂತೆ ನನಗೂ ಕುತೂಹಲವಿದೆ.ರಾಜ್ಯದ ಅಂಥಾ ಕೆಲವರನ್ನು ಸುಮ್ಮನೆ ಕುತೂಹಲಕ್ಕೆಂದೇ ಭೇಟಿಯಾಗಿದ್ದೇನೆ. ನಾನು ನಾಗೇಶ್ ಅವರನ್ನು ಭೇಟಿಯಾಗಿದ್ದು ಕೂಡಾ ಹಾಗೆಯೇ. ಆ ಪರಿಚಯ, ಕಂಡ ವಿಶೇಷತೆ, ಆ ವಿಶೇಷತೆಯಿಂದ ಕಂಡರಿದ ಕೆಲವು ಸಂಗತಿಗಳನ್ನು ಬಿಚ್ಚಿಡಬೇಕೆನಿಸುತ್ತದೆ.
ಅಷ್ಟಕ್ಕೂ ಆಗಬೇಕಿರುವುದು ಅವರಿಗೇನೂ ಇಲ್ಲ!
– ಸಂಕೇತ್ ಡಿ ಹೆಗಡೆ
ಕಳೆದೆರಡು ದಿನಗಳಿಂದ ಸಾವರ್ಕರ್ ಕುರಿತ ಬರಹಗಳಿಂದ ಫೇಸ್ಬುಕ್ ತುಂಬಿ ಹೋಗಿದೆ. ಬಹಳ ಒಳ್ಳೆಯ ವಿಷಯ.
ಅಷ್ಟಕ್ಕೂ ಸಾವರ್ಕರ್ ರಿಗೆ ನಮ್ಮ-ನಿಮ್ಮ ಪ್ರೀತಿ ಬೇಕಿಲ್ಲ. ಸ್ವಾತಂತ್ರ್ಯ ಒಂದು ಮುಗಿದ ವಿಷಯ. ನೀವು ಈಗ ಅವರಿಗೆ ಎಷ್ಟು ಗೌರವ ತೋರಿಸುತ್ತೀರಿ ಎಂಬುದರ ಮೇಲೆ ಅವರ ಬದುಕು ಬದಲಾಗುವುದಿಲ್ಲ. ನೀವು ಫ಼್ಲೈ-ಓವರ್ ಗೆ ಹೆಸರಿಟ್ಟ ಮಾತ್ರಕ್ಕೆ ಅವರ ಗೌರವ ಏರುವುದೋ ಅಥವಾ ತಗ್ಗುವುದೋ ಆಗುವುದಿಲ್ಲ.
ಆದರೆ ನಾವು ಇವತ್ತು ಹೀಗೆ ಬದುಕುತ್ತಿರಲು ಕಾರಣವಾದ ಅಸಂಖ್ಯಾತ ಜೀವಿಗಳ ಬಗ್ಗೆ ಚೂರು ಗೌರವಾದಾರಗಳಿಲ್ಲದೇ ಬದುಕಿದರೆ, ನಷ್ಟವಾಗುವುದು ನಮಗೆ. ಸೃಷ್ಟಿ ನಮಗೆ ಇಂಥದ್ದೊಂದು ಹೃದಯ, ಇಂಥದ್ದೊಂದು ತಲೆ, ನೆನಪಿನ ಶಕ್ತಿ, ಭಾವಿಸುವ ಶಕ್ತಿ ಇದನ್ನೆಲ್ಲ ಧಾರೆಯೆರೆಯಿತಲ್ಲ? ಅದನ್ನೆಲ್ಲ ಮೊಟಕುಗೊಳಿಸಿ, ಅಂಥವರ ಕುರಿತು ಚೂರು ಕೃತಜ್ಞತೆಯಿಲ್ಲದೇ ಬದುಕಿದರೆ, ನಷ್ಟವಾಗುವುದು ನಮಗೆ.
ಸಾವರ್ಕರ್ ಒಬ್ಬ ದೇಶಭಕ್ತಿಯ, ದೇಶಕ್ಕಾಗಿ ಮಾಡಬಲ್ಲ ತ್ಯಾಗದ, ಇತರರ ಒಳಿತಿಗಾಗಿ ಒಬ್ಬ ಮನುಷ್ಯ ಹೋಗಬಲ್ಲ ತೀವ್ರತೆಯ ಕುರಿತು ಒಂದು ಅಪ್ರತಿಮ ಉದಾಹರಣೆಯಷ್ಟೇ. ನೀವು ಗೌರವ ಕೊಡುವುದರಿಂದ ಅಥವಾ ಕೊಡದಿರುವುದರಿಂದ ಅವರಲ್ಲೇನು ಬದಲಾಗುವುದಿಲ್ಲ. ಬದಲಾಗುವುದು ನಮ್ಮ ಪ್ರಜ್ಞೆಯಲ್ಲಿ ಮತ್ತು ನಾವು ಬದುಕುತ್ತಿರುವ ಮಟ್ಟದಲ್ಲಿ ಅಷ್ಟೇ.
ಅಷ್ಟಕ್ಕೂ ಈ ದೇಶದ ಇತಿಹಾಸವನ್ನು ನಮಗೆ ಕಲಿಸಿದವರ್ಯಾರು? ಬ್ರೀಟೀಷರು ಬಿಟ್ಟುಹೋದ ಹಾಳುಮೂಳನ್ನೇ ಹೌದೌದೆಂದು ನಂಬಿಕೊಂಡು ಬರುತ್ತಿರುವ ಜನಸಮೂಹವಲ್ಲವೇ ನಾವು? ಊಹೂಂ, ನಾವು ಹೀಗೆ ಇರಲಿಲ್ಲ. ಈ ದೇಶದ ಕಾಲಮಾನದಲ್ಲಿ ಸ್ವಲ್ಪವೇ ಹಿಂದೆ ಹೋದರೆ, ನಾವು ಹೀಗಿರಲಿಲ್ಲ.
ಜಗತ್ತಿನ ಬೇರೆಡೆಗಳಲ್ಲಿ ಇನ್ನೂ ನಾಗರೀಕತೆಗಳ ಶುರುವಿಲ್ಲದಾಗ – ಅಧ್ಯಾತ್ಮ, ವಿಜ್ಞಾನ. ಗಣಿತ, ಖಗೋಳ, ವೈದ್ಯಕೀಯ, ಯೋಗ ಶಾಸ್ತ್ರಗಳಲ್ಲಿ ಔನ್ನತ್ಯವನ್ನು ಸಾಧಿಸಿದ್ದ ನೆಲವಿದು. ವಿಶ್ವವೇ ನಿಬ್ಬೆರಗಾಗುವಂತ ಸಾಮ್ರಾಜ್ಯಗಳು, ರಾಜಾಡಳಿತ ಪರಂಪರೆಗೆ ಮುಕುಟವಾಗಬಲ್ಲ ರಾಜರುಗಳು, ಮಾನವ ವ್ಯವಸ್ಥೆಯನ್ನು ಪರಿಶೋಧಿಸಿದ ಅತ್ಯುತ್ಕೃಷ್ಟ ಯೋಗಿಗಳು, ವಿಜ್ಞಾನಿಗಳು ಆಗಿಹೋದ ನೆಲವಿದು. ಮಾರ್ಕ್ ಟ್ವೇನ್ ಒಂದು ಕಡೆ ‘Anything that can ever be done either by man or God has been done in this land’ ಎಂದಿದ್ದ ಈ ದೇಶದ ಕುರಿತು!
ಹೀಗಿದ್ದಿದ್ದ ಈ ದೇಶ, ಕಳೆದ ಸಹಸ್ರಮಾನದಲ್ಲಿ ತೀವ್ರ ಆಕ್ರಮಣಗಳಿಗೆ, ಲೂಟಿಗಳಿಗೆ, ಹೇರಿಕೆಗಳಿಗೆ ಒಳಗಾಯಿತು. ಜೇನು ಸವಿಯಲು ಜಂತುಗಳು ಬರುವುದು ಸಾಮಾನ್ಯವಲ್ಲವೇ? ತೀವ್ರ ದಾಳಿಗಳಿಗೆ ಒಳಗಾಗಬೇಕಾಯಿತು. Exploration ಮನಸ್ಥಿತಿಯಿದ್ದ ಇಂಥ ದೇಶ, ಇಂಥ ಖಂಡ ಭಾರತ ಮೇಲೆ ಆಕ್ರಮಣ ಮಾಡಿಲ್ಲ ಅಂತ ಇಲ್ಲ. ಅಷ್ಟು ದೇಶಗಳ ಜನರು ಇಲ್ಲಿ ಬಂದು ತಮ್ಮ ನೆಲೆ ಸ್ಥಾಪಿಸಲು ಪ್ರಯತ್ನಿಸಿದರು.
ಅದರಲ್ಲೆಲ್ಲ ಅತ್ಯಂತ ನಿರ್ದಯಿ, ಕ್ರೂರಿ ಸಾಮ್ರಾಜ್ಯಗಳಲ್ಲಿ ಆಂಗ್ರರ ದಂಡೂ ಒಂದು. ಇವರದ್ದು sophesticated ತಂತ್ರಗಾರಿಕೆ. ತಮ್ಮ ಸೈನಿಕರನ್ನೇ ತಂದು, ಅದೆಂಥದೋ ಯುದ್ಧವಾಡಿ, ಒಂದಷ್ಟು ಕಬಳಿಸಿ, ಲೂಟಿ ಹೊಡೆದು ಹೋಗುವ ಕ್ರೂಡ್ ಜನರಲ್ಲ. ಸಣ್ಣಗೆ ಒಳನುಸುಳುತ್ತಾರೆ. ನಿಧಾನವಾಗಿ ಪೂಸಿಹೊಡೆಯುತ್ತಾರೆ. ನಮ್ಮವರನ್ನೇ ನಮ್ಮ ವಿರುದ್ಧವಾಗಿ ತಿರುಗಿಸುತ್ತಾರೆ. ನಮ್ಮ ನಮ್ಮಲ್ಲೇ ಜಗಳ ಹಚ್ಚುತ್ತಾರೆ. ನಮ್ಮ ಸಂಸ್ಕೃತಿಯನ್ನು ವಿವಿಧ ಹಂತಗಳಲ್ಲಿ ನಾಶ ಮಾಡಲು ಪ್ರಯತ್ನಿಸುತ್ತಾರೆ. ವಿವಿಧ ಮಾರ್ಗಗಳಲ್ಲಿ ನಾವು ತುಚ್ಛರು, ಅವರು ಶ್ರೇಷ್ಠರು ಎಂದು ನಮ್ಮನ್ನೇ ನಂಬಿಸುತ್ತಾರೆ. ನಮ್ಮನ್ನು ಉಪವಾಸ ಕೆಡುಗಿ ತಮ್ಮ ದೇಶದಲ್ಲಿ ಐಶಾರಾಮಿ ಜೀವನ ನಡೆಸುತ್ತಾರೆ. ಇದು ನಯವಂಚಕ ಸಾಮ್ರಾಜ್ಯ!
ಇದು ಭಾರತೀಯರಿಗೆ ಅರ್ಥವಾದರೂ, ಅವರ ತಂತ್ರಗಾರಿಕೆಯ ಮುಂದೆ ವ್ಯವಸ್ಥಿತವಾದ ಹೋರಾಟ ಮಾಡಿ ಅವರನ್ನು ಓಡಿಸಲು ಎಷ್ಟು ವರ್ಷ ಬೇಕಾಯಿತು ನೋಡಿ. ಅದು ಆ ಸಾಮ್ರಾಜ್ಯದ ‘ಹರಿತ’ಕ್ಕೆ ಹಿಡಿದ ಕನ್ನಡಿ.
ಹಾಗಂತ ಭಾರತೀಯರೇನು ಸುಮ್ಮನೆ ಕುಳಿತಿರಲಿಲ್ಲ. ಎಲ್ಲರೂ ಅವರವರಿಗೆ ತೋಚಿದ ಮಾರ್ಗದಲ್ಲಿ ಪ್ರತಿಭಟನೆಗೆ ಇಳಿದರು. ಕೆಲವರು ಕ್ರಾಂತಿಕಾರಿಗಳಾದರು, ಕೆಲವರು ರಾಜಕೀಯ ಚಳುವಳಿಗಳ ನೇತಾರರಾದರು, ಕೆಲವರು ಜಾಗತಿಕ ಮಟ್ಟದಲ್ಲಿ ಶಮಿಸಿದರು. ಇನ್ನು ಕೆಲವರು ಬಂದ್, ಹರತಾಳ, ಉಪವಾಸಗಳ ರೂಪದಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿದರು. ಅವರವರು ಅವರವರಿಗೆ ಅತ್ಯುತ್ತಮ ಅನ್ನಿಸಿದ ಮಾರ್ಗದಲ್ಲಿ ರಕ್ತ ಕೊಟ್ಟರು.
ಸಾವರ್ಕರ್ ಅಂದಾಗ ನೆನಪಿಗೆ ಬರುವುದೇ ಅವರು ಅನುಭವಿಸಿದ ಕರಾಳ ಕಷ್ಟಗಳು. 50 ವರ್ಷ ಕಾಲಾಪಾನಿ! ಇದು ಆಂಗ್ಲರು ಅವರಿಗೆ ವಿಧಿಸಿದ ಶಿಕ್ಷೆ. ಸರಿಯಾದ ಊಟವಿಲ್ಲ, ನಿದ್ದೆಯಿಲ್ಲ, ಗಾಣಕ್ಕೆ ಎತ್ತು ಕಟ್ಟಿದಂತೆ ಕಟ್ಟಿ ಎಣ್ಣೆ ತೆಗೆಯುವ ಕೆಲಸ. ಇಷ್ಟೇ ನೀರು ಕುಡಿಯಬೇಕು, ಇಷ್ಟೇ ತಿನ್ನಬೇಕು, ನಿದ್ದೆಯೋ ದೇವರಿಗೇ ಪ್ರೀತಿ. ಬೆಳಿಗ್ಗೆ ತಿಂಡಿ ತಿನ್ನದೇ ಮಧ್ಯಾಹ್ನವಾಗುವಷ್ಟರಲ್ಲಿ ಹಸಿಯುತ್ತೇವೆ ನಾವು. ಮಧ್ಯಾಹ್ನವೂ ಏನಾದರೂ ತಪ್ಪಿಹೋಯಿತು ಅಂದುಕೊಳ್ಳಿ. ಅಷ್ಟೇ! ಸಂಜೆಯಾಗುವಷ್ಟರಲ್ಲಿ ಹೈರಾಣಾಗುತ್ತೇವೆ ನಾವು. ’ಗಾಣ ತಿರುಗಿಸಿ ಇಷ್ಟು ಎಣ್ಣೆ ತೆಗೆಯಬೇಕು, ಇಲ್ಲವಾದರೆ ನಿನಗೆ ಊಟವಿಲ್ಲ’ ಅಂದರೆ ಹೇಗಿರುತ್ತೆ ಹೇಳಿ? ಸಾವರ್ಕರ್ ಅನುಭವಿಸಿದ್ದು ಅದನ್ನು. ಎರಡು ಸೊಳ್ಳೆಗಳು ಹಾರಾಡುತ್ತಿದ್ದರೆ ಮಲಗುವುದು ಕಷ್ಟ. ಸಾವರ್ಕರ್ ಮಲಗಿದ್ದು ಎಂಥ ಪರಿಸ್ಥಿತಿಯಲ್ಲಿರಬಹುದು ಹೇಳಿ? ಅದೂ ಒಂದೆರಡು ದಿನವೇ?
ಇಲ್ಲ, ಅವರ ಕಷ್ಟಗಳನ್ನು ಹೇಳಲು ಇದನ್ನೆಲ್ಲ ಹೇಳುತ್ತಿಲ್ಲ. ಅವರಿಂದ ಸ್ವಾತಂತ್ರ್ಯ ಪೂರ್ಣವಾಗಿ ಬಂತು ಎಂಬ ಲೋಕವನ್ನೂ ನಿಮ್ಮ ಮುಂದೆ ತೆರೆದಿಡುತ್ತಿಲ್ಲ. ಆದರೆ ಒಬ್ಬ ಮನುಷ್ಯ ತನ್ನ ದೇಶಕ್ಕಾಗಿ, ತನ್ನ ದೇಶದ ಜನರಿಗಾಗಿ ಈ ರೀತಿಯ ಬದುಕನ್ನು ತನ್ನದಾಗಿಸಿಕೊಳ್ಳುತ್ತಾನೆ ಅಂದರೆ ನಿಮಗೆ ಊಹಿಸಲು ಸಾಧ್ಯವೇ? ಸಾವರ್ಕರ್ ಮಾಡಿದ್ದು ಅದನ್ನ. ತಮ್ಮ ಸಾಮರ್ಥ್ಯದಲ್ಲಿ ಏನೇನನ್ನೆಲ್ಲ ಮಾಡಬಹುದೋ, ಅದನ್ನ ಶಕ್ತಿ ಮೀರಿ ಮಾಡಿದರು. ಮನುಷ್ಯರು ಒಳಹೋಗಬಾರದ ಕಷ್ಟಗಳನ್ನೆಲ್ಲ ತಮ್ಮದಾಗಿಸಿಕೊಂಡರು.
‘ಅವರು ಕ್ಷಮಾಪಣೆ ಪತ್ರ ಬರೆದರು’ ಅನ್ನುತ್ತಾರೆ. ಮೇಲಿನ ಸ್ಥಿತಿಯಲ್ಲಿ 9 ವರ್ಷ ಜೈಲಿನಲ್ಲಿದ್ದರೆ ನೀವೇನು ಮಾಡುತ್ತಿದ್ದಿರಿ? ನಾನೇನು ಮಾಡುತ್ತಿದ್ದೆ? ಇಲ್ಲ, ಅವರು ಕ್ಷಮಾಪಣೆಯನ್ನು ಕೇಳಿದರು ಎಂದು ನಾನು ಹೇಳುತ್ತಿಲ್ಲ. ಅದು ತಂತ್ರಗಾರಿಕೆಯ ನಡೆ. ಅದು ಬಿಡಿ, ಕಾಂಗ್ರೆಸ್ ಮುಟ್ಠಾಳರಿಗೆ ಎಂದಿಗೂ ಅರ್ಥವಾಗುವುದಿಲ್ಲ. ಸಾವರ್ಕರ್ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ? ಟಿವಿ ಸ್ಟುಡಿಯೋಗಳಲ್ಲಿ ಬಂದು ಮಾತನಾಡುವುದು ಸುಲಭ. ಆದರೆ ಇವರುಗಳೇ ಆ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದರು?
ಬಿಡಿ, ಇದಕ್ಕೆಲ್ಲ ಅರ್ಥವಿಲ್ಲ. ನೂರುವರ್ಷದ ಹಿಂದೆ ಇದ್ದ ಸ್ವಾತಂತ್ರ್ಯ ಹೋರಾಟಗಾರನನ್ನು ಗೌರವಿಸುವುದೋ, ಬೇಡವೋ ಎಂಬ ದ್ವಂದ್ವದಲ್ಲೇ ನನಗೆ ಹುರುಳು ಕಾಣಿಸುತ್ತಿಲ್ಲ. It’s a shame we’re still thinking about it. ಅವರನ್ನು ಹೃದಯದಲ್ಲಿಟ್ಟುಕೊಂಡು, ಕೃತಜ್ಞರಾಗಿ, ದೇಶದ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವುದನ್ನು ನೋಡುವ ಬದಲು ಇದನ್ನು ಒಂದು ವಿವಾದವನ್ನಾಗಿ ಮಾಡಿ ಎಲ್ಲರ ಸಮಯ ವ್ಯರ್ಥಮಾಡುತ್ತಿದ್ದೀರಲ್ಲ, ನಿಮಗೆ ಏನು ಹೇಳುವುದು? ಸಾವಿರಾರು ಸ್ಮಾರಕಗಳು , ಫ್ಲೈ ಓವರ್ ಗಳು ಇವೆ. ಗೌರವಾರ್ಥವಾಗಿ ನಾವು ಹೆಸರುಗಳನ್ನು ಇಡುತ್ತೇವೆ. ಇದಕ್ಕೆ ಸಾವರ್ಕರ್ ಹೆಸರಿಡುತ್ತಿದ್ದೇವೆ. ಮತ್ತೊಂದಕ್ಕೆ ಗಾಂಧಿ ಹೆಸರಿಡುತ್ತೇವೆ. ಇದು ನಮ್ಮ ಕೃತಜ್ಞತಾ ಭಾವದ ಸಮರ್ಪಣೆಯೇ ಹೊರತು, ಅವರಿಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ಇಟ್ಟು ಮುಂದೆ ಸಾಗುತ್ತೇವೆ. ದೇಶದ ಇತರ ಸವಾಲುಗಳ ಬಗ್ಗೆ ಗಮನಹರಿಸುತ್ತೇವೆ. ಊಹೂಂ, ಇದಿಲ್ಲ! ಇದು ನಿಜವಾಗಿಯೂ ಶೋಚನೀಯ.
ನಾವು ಇಂಥವುಗಳಿಗೆ ಸೊಪ್ಪು ಹಾಕಬಾರದು. ಇಲ್ಲವಾದರೆ 10 ವರ್ಷಗಳಲ್ಲಿ ಸಾಧಿಸಬಹುದಾದ ಪ್ರಗತಿಯನ್ನು ಸಾಧಿಸಲು 100 ವರ್ಷಗಳು ಬೇಕಾಗುತ್ತವೆ!