ಸ್ವದೇಶ, ಸ್ವಧರ್ಮ, ಸ್ವಾತಂತ್ರ್ಯಗಳ ನೈಜದನಿ ವೀರ್ ಸಾವರ್ಕರ್
ಲೇಖಕರು : ಬಿ ಎಸ್ ಜಯಪ್ರಕಾಶ ನಾರಾಯಣ
ಪತ್ರಕರ್ತರು, ಖ್ಯಾತ ಅನುವಾದಕರು
ವೈಭವ್ ಪುರಂದರೆಯವರ ವೀರ್ ಸಾವರ್ಕರ್ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ.
ಸಾವರ್ಕರ್ ಜನ್ಮದಿನ (ಮೇ 28)
ವಿನಾಯಕ ದಾಮೋದರ ಸಾವರ್ಕರ್ ಎನ್ನುವ ಹೆಸರೇ ಮೈಮನಗಳಲ್ಲಿ ದೇಶಹಿತದ ಸಂಕಲ್ಪವನ್ನು ತಾಳುವಂತೆ ಮಾಡುವಂಥದ್ದು! ಇಂದು ಅವರಿದ್ದಿದ್ದರೆ 140ನೇ ವಸಂತಕ್ಕೆ ಕಾಲಿಡುತ್ತಿದ್ದರು. ವ್ಯವಸ್ಥಿತ ಅಪಪ್ರಚಾರ ಮತ್ತು ಕ್ಷುಲ್ಲಕ ಶಕ್ತಿಗಳು ಸೃಷ್ಟಿಸಿರುವ ವಿಸ್ಮೃತಿಯಲ್ಲಿ ಸಾವರ್ಕರ್ ಅವರ ಕ್ಷಾತ್ರತೇಜಸ್ಸಿಗೆ ಅನ್ಯಾಯವೆಸಗಲಾಗಿದೆ. ಅವರ ಹುಟ್ಟುಹಬ್ಬದ ನೆಪದಲ್ಲಿ ಇಲ್ಲಿ ಅನಾವರಣಗೊಂಡಿದೆ, ಸಾವರ್ಕರ್ ಅವರ ಸಾಚಾ ಕಥನ!
ಸ್ವತಂತ್ರ ಭಾರತದ ಇತಿಹಾಸದಲ್ಲಿ ತುಂಬಾ ವ್ಯವಸ್ಥಿತವಾಗಿ ಹಲವು ವಿಸ್ಮೃತಿಗಳನ್ನೂ ಹೇವರಿಕೆಗಳನ್ನೂ ಸೃಷ್ಟಿಸಲಾಗಿದೆ. ಇದಕ್ಕಾಗಿ, ನಮ್ಮನ್ನು ಬಹುಕಾಲ ಆಳಿದ ಸರಕಾರಗಳು ಸೆಕ್ಯುಲರಿಸಂ, ಧರ್ಮನಿರಪೇಕ್ಷತೆ, ಮೈನಾರಿಟಿಯಿಸಂ ಇತ್ಯಾದಿ ವಿಭ್ರಮೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿವೆ; ತಮ್ಮ ಹಿಡನ್ ಅಜೆಂಡಾ ಸಾಧಿಸಲು ಅವು ರಾಜಕೀಯ ಅಧಿಕಾರ, ಅಕಾಡೆಮಿಕ್ ಸೌಖ್ಯ, ತಾವೇ ಹುಟ್ಟುಹಾಕಿದ ನೂರಾರು ಸಂಘ ಸಂಸ್ಥೆಗಳು/ವಿಶ್ವವಿದ್ಯಾಲಯಗಳನ್ನು ನಿರ್ಲಜ್ಜವಾಗಿ ದುರ್ಬಳಕೆ ಮಾಡಿಕೊಂಡಿವೆ. ಇಷ್ಟೇ ಅಲ್ಲ, ಈ ಕುತಂತ್ರಗಳ ಮೂಲಕ ಸ್ವಧರ್ಮ ಮತ್ತು ಸ್ವದೇಶಗಳ ಬಗ್ಗೆ ಅಸಹ್ಯದ/ಕೀಳರಿಮೆಯ ಭಾವನೆ ಬರುವಂತೆ ಮಾಡುವಲ್ಲಿ ಈ ಶಕ್ತಿಗಳು ನಿರತವಾಗಿದ್ದವು. ಜತೆಯಲ್ಲೇ, ಭಾರತದ ಚರಿತ್ರೆಯ ಕ್ಷಾತ್ರ ತೇಜಸ್ಸಿನ ಉಜ್ಜ್ವಲ ಅಧ್ಯಾಯಗಳನ್ನು ಮರೆಮಾಚುವ ವಿಕೃತಿಯನ್ನು ಇವು ಮೈಗೂಡಿಸಿಕೊಂಡಿದ್ದವು. ದುರಂತವೆಂದರೆ, ನಾಲ್ಕೈದು ದಶಕಗಳ ಕಾಲ ಈ ʼಅತೀ ಬುದ್ಧಿವಂತಿಕೆ’ಯ ಮತ್ತು ಆತ್ಮನಾಶಕವಾದ ಕೆಲಸಗಳೆರಡೂ ಪ್ರಶ್ನಾತೀತವಾಗಿದ್ದವು!
ಭಾರತದ ಇತಿಹಾಸದಲ್ಲಿ ಇಂತಹ ವ್ಯವಸ್ಥಿತ ಅನ್ಯಾಯಕ್ಕೊಳಗಾದವರಲ್ಲಿ `ಸ್ವಾತಂತ್ರ್ಯವೀರ’ ವಿನಾಯಕ ದಾಮೋದರ ಸಾವರ್ಕರ್ ಕೂಡ ಒಬ್ಬರು. ಮಹಾರಾಷ್ಟ್ರದ ನಾಸಿಕ್ ಬಳಿಯ ಭಾಗೂರಿನಲ್ಲಿ ತಮ್ಮ ಚಿಕ್ಕಂದಿನಲ್ಲೇ `ಮಿತ್ರಮೇಳ’ವನ್ನು ಕಟ್ಟುವ ಮೂಲಕ, ಸಾವರ್ಕರ್ ದೇಶಾಭಿಮಾನದ ಎರಕದಲ್ಲಿ ಬೆಳೆದು ಬಂದವರು. ವಯಸ್ಕರಾದ ಮೇಲೆ, ಆ ಕಾಲದ ಎಲ್ಲ ಪ್ರತಿಭಾವಂತರಂತೆಯೇ ಲಂಡನ್ನಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದ ಅವರು, ತಮ್ಮ ಹೆಚ್ಚಿನ ಸಮಕಾಲೀನರಂತೆ ಲೌಕಿಕ ಸುಖದ ಹಾದಿಯಲ್ಲಿ ಹೋಗಲಿಲ್ಲ. ಬದಲಿಗೆ, ಅದನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸಿ, ಬ್ಯಾರಿಸ್ಟರ್ ಪದವಿಗೆ ಓದುತ್ತಿದ್ದ ದಿನಗಳಲ್ಲೇ ದೇಶದ ಸ್ವಾತಂತ್ರ್ಯಪ್ರಾಪ್ತಿಗಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟದ ಮಾರ್ಗದಲ್ಲಿ ಹೊರಟರು. ತಮ್ಮ ಪ್ರಖರ ವಿಚಾರಗಳ ಮೂಲಕ ಮದನ್ ಲಾಲ್ ಧಿಂಗ್ರಾ ತರಹದ ಕ್ರಾಂತಿಕಾರಿಗಳನ್ನು ಅವರು ರೂಪಿಸಿದರು. ಲಂಡನ್ನಿನಲ್ಲಿದ್ದ `ಇಂಡಿಯಾ ಹೌಸ್’ ಅನ್ನು ತಮ್ಮ ಚಟುವಟಿಕೆಗಳ ಆಡುಂಬೊಲವನ್ನಾಗಿ ಮಾಡಿಕೊಂಡು, ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಅದಕ್ಕೂ ಮೊದಲು, ಭಾರತದಲ್ಲಿ ಓದುತ್ತಿದ್ದಾಗ ಲೋಕಮಾನ್ಯ ಬಾಲಗಂಗಾಧರ ತಿಲಕರ ಅನುಯಾಯಿಯಾಗಿ ಸ್ವದೇಶಿ ಚಳವಳಿಯನ್ನು ಸಂಘಟಿಸಿ, ಸಂಚಲನ ಸೃಷ್ಟಿಸಿದ್ದರು. ಅವರು ಲಂಡನ್ನಿನಲ್ಲಿದ್ದ ದಿನಗಳಲ್ಲಿ ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ನಡೆಸಿದ ಚಟುವಟಿಕೆಗಳ ವೃತ್ತಾಂತವೇ ರೋಮಾಂಚಕ! ದೇಶವಾಸಿಗಳು ಸ್ವಾತಂತ್ರ್ಯಕ್ಕಾಗಿ 1857ರಲ್ಲಿ ನಡೆಸಿದ ಹೋರಾಟವನ್ನು `ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ’ ಎಂದು ಬಣ್ಣಿಸಿ, ಅದರ ಬಗ್ಗೆ ಸಮಗ್ರ ಗ್ರಂಥವನ್ನು ಬರೆದ ಹೆಗ್ಗಳಿಕೆ ಸಾವರ್ಕರ್ ಅವರದು. ವಾಸ್ತವವಾಗಿ, ಆ ದಿನಗಳಲ್ಲಿ ಲಂಡನ್ನಿನಲ್ಲಿ ಇವರಂತೆಯೇ ಬ್ಯಾರಿಸ್ಟರ್ ಪದವಿಗೆ ಓದುತ್ತಿದ್ದ ಜವಾಹರಲಾಲ್ ನೆಹರು ಕೂಡ ಈ ಗ್ರಂಥವನ್ನು ಅಪಾರವಾಗಿ ಮೆಚ್ಚಿಕೊಂಡು, ತಮ್ಮ ತಂದೆ ಮೋತಿಲಾಲ್ ನೆಹರು ಅವರಿಗೆ ಪತ್ರ ಬರೆದಿದ್ದಕ್ಕೆ ಪುರಾವೆಗಳಿವೆ. ವಿಷಾದದ ಸಂಗತಿಯೆಂದರೆ, ಲಂಡನ್ನಿನಿಂದ ಭಾರತಕ್ಕೆ ವಾಪಸ್ ಬಂದಮೇಲೆ, ನೆಹರು ಅವರು ಸಾವರ್ಕರ್ ಬಗ್ಗೆ ವಿರೋಧ ಬೆಳೆಸಿಕೊಂಡು ಬಿಟ್ಟರು. ಇದು ಕೊನೆಗೆ ಎಲ್ಲಿಯವರೆಗೆ ಹೋಯಿತೆಂದರೆ, ತುಷ್ಟೀಕರಣದ ರಾಜಕಾರಣ ಮತ್ತು ದೇಶವಿಭಜನಗಾಗಿ ಮುಸ್ಲಿಂ ಲೀಗ್ ಮಾಡುತ್ತಿದ್ದ ಆಗ್ರಹಗಳನ್ನು ವಿರೋಧಿಸುತ್ತಿದ್ದ ಸಾವರ್ಕರ್ ಅವರಿಗೆ ಕೋಮುವಾದಿ, ಮೂಲಭೂತವಾದಿ, ದೇಶ ವಿಭಜಕ, ಗಾಂಧಿಯವರ ಹತ್ಯೆಯ ಹಿಂದಿನ ಪಾತ್ರಧಾರಿ ಎನ್ನುವ ರೋಗಗ್ರಸ್ತ ಹಣೆಪಟ್ಟಿಗಳನ್ನು ಹಚ್ಚಲಾಯಿತು. ಹಾಗಾದರೆ, ಸಾವರ್ಕರ್ ನಿಜಕ್ಕೂ ಏನಾಗಿದ್ದರು?
ಸಾವರ್ಕರ್ ಬಗ್ಗೆ ರಾಜಕೀಯ ವಿರೋಧಿಗಳು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯೇನೂ ಇಲ್ಲ ಎನ್ನುತ್ತಿದ್ದಾರೆ. ಅಂಡಮಾನಿನ ಜೈಲಿನಲ್ಲಿ ಅವರು ಕರಾಳ `ಕಾಲಾಪಾನಿ’ ಶಿಕ್ಷೆ ಅನುಭವಿಸುತ್ತಿದ್ದಾಗ ಬ್ರಿಟಿಷರಿಗೆ ಬರೆದ ಕ್ಷಮಾಪಣಾ ಧಾಟಿಯ ಜಾಣ್ಮೆಯ ಪತ್ರಗಳನ್ನಿಟ್ಟುಕೊಂಡು ಅವರನ್ನು ದೇಶದ್ರೋಹಿಯೆಂದು ಬಿಂಬಿಸಿದ್ದಾರೆ. ಅವರೊಬ್ಬ ಬ್ರಾಹ್ಮಣವಾದಿಯಾಗಿದ್ದರು ಎಂದು ರಚ್ಚೆ ಮಾಡುತ್ತಿರುವವರ ಸಂತತಿಯೂ ಇದೆ. ಹಾಗಾದರೆ, ಇವುಗಳ ಸತ್ಯಾಸತ್ಯತೆ ಏನು? ಇಂತ ಮಿಥ್ಯೆಗಳನ್ನು ಸತ್ಯದ ಒರೆಗಲ್ಲಿಗೆ ಹಚ್ಚಿ, ಭಗ್ನಗೊಳಿಸಲು ಇದು ಸಕಾಲ. ಈ ದೃಷ್ಟಿಯಿಂದ ನೋಡಿದರೆ, ಇದು ಭಾರತದ ನೈಜ ಚರಿತ್ರೆಯು ವಿಕೃತಿ ಮತ್ತು ವಿಸ್ಮೃತಿಗಳ ಪೊರೆಯನ್ನು ಕಿತ್ತೆಸೆದು, ವಸ್ತುನಿಷ್ಠ ಆಕೃತಿಯನ್ನು ಪಡೆದುಕೊಳ್ಳುತ್ತಿರುವ ನಿರ್ಣಾಯಕ ಕಾಲಘಟ್ಟವಾಗಿದೆ.
ದೇಶದಲ್ಲಿ ಇಂದು ʼಹಿಂದುತ್ವʼದ ಅಲೆ ಪ್ರಖರವಾಗಿದೆ. ಇದರ ಕೀರ್ತಿಯಲ್ಲಿ ಹೆಚ್ಚಿನ ಪಾಲು ಸಲ್ಲಬೇಕಾದ್ದು ಸಾವರ್ಕರ್ ಅವರಿಗೆ! ಏಕೆಂದರೆ, ಈ ಪರಿಕಲ್ಪನೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ವ್ಯಾಪಕವಾಗಿ ಮುನ್ನೆಲೆಗೆ ತಂದವರೇ ಅವರು. ಇದರ ಜತೆಗೆ ಅವರು, ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ದೇಶದಲ್ಲಿ ಎಬ್ಬಿಸಿದ ಹಿಂದೂ ಅಸ್ಮಿತೆಯ ನಂದಾದೀಪ ಈಗ ಜಾಜ್ವಲ್ಯಮಾನವಾಗಿ ಬೆಳಗುತ್ತಿದೆ. ಅದರ ಪ್ರಭೆಯ ಮುಂದೆ ಬಣ್ಣಬಣ್ಣದ ತರಹೇವಾರಿ ಸಿದ್ಧಾಂತಗಳ ವೇಷ ಕಳಚಿ ಬಿದ್ದಿದೆ.
ಸಾವರ್ಕರ್ ಅವರ ಬಹುಮುಖಿ ಮತ್ತು ಸಮಾಜಪರ ವ್ಯಕ್ತಿತ್ವದ ಇನ್ನೊಂದಿಷ್ಟು ಆಯಾಮಗಳನ್ನು ಇಲ್ಲಿ ನೆನೆಯಬೇಕು. ನಮಗೆಲ್ಲ ಗೊತ್ತಿರುವಂತೆ, ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಅದರ ಬೆರಳೆಣಿಕೆಯಷ್ಟು ನಾಯಕರು ಮಾತ್ರ ಶ್ರಮಿಸಿದರು ಎನ್ನುವ ಚಿತ್ರಣ ಹಲವು ತಲೆಮಾರುಗಳ ಜನರಲ್ಲಿ ಬೇರೂರಿದೆ. ಅಂದಂತೆ, ಕಾಂಗ್ರೆಸ್ ಪಕ್ಷವು ಬ್ರಿಟಿಷರಿಂದ ಭಾರತಕ್ಕೆ ಪೂರ್ಣಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದ್ದು 1929ರಷ್ಟು ತಡವಾಗಿ! ಅಲ್ಲಿಯವರೆಗೂ ಆ ಪಕ್ಷದ ನಾಯಕರೆಲ್ಲ ಭಾರತವು ಬ್ರಿಟಿಷರ ಅಧೀನದಲ್ಲೇ (ಡೊಮಿನಿಯನ್ ಸ್ಟೇಟ್) ಮುಂದುವರಿಯುವುದರ ಪರವಾಗಿದ್ದರು. ಆದರೆ, ಸಾವರ್ಕರ್ ಇದಕ್ಕೂ 20 ವರ್ಷಗಳ ಮುಂಚೆಯೇ -1909ರಲ್ಲೇ- `ಸಂಪೂರ್ಣ ಸ್ವಾತಂತ್ರ್ಯವು ನಮ್ಮ ಹಕ್ಕು! ಇದರಲ್ಲಿ ಗುಲಗಂಜಿಯಷ್ಟು ಕಡಿಮೆಯಾದರೂ ನಾವು ಅದನ್ನು ಒಪ್ಪುವುದಿಲ್ಲ!!’ ಎಂದು ಘರ್ಜಿಸಿದ್ದರು. ಇದನ್ನು ಸಹಿಸದ ಬ್ರಿಟಿಷರು, ಸಾವರ್ಕರ್ ಅವರನ್ನು ಅಂಡಮಾನ್ ಜೈಲಿಗೆ ತಳ್ಳಿ, 50 ವರ್ಷಗಳ ಜೀವಾವಧಿ ಶಿಕ್ಷೆಯನ್ನು ವಿಧಿಸಿದರು. ಅಲ್ಲಿ ಈ `ಸ್ವಾತಂತ್ರ್ಯವೀರ’ ಅನುಭವಿಸಿದ ಯಮಯಾತನೆ ವರ್ಣಿಸಲಸದಳ.
ಅಂಡಮಾನಿನಿಂದ ಬಿಡುಗಡೆಯಾಗಿ ಬಂದಮೇಲೂ ಸಾವರ್ಕರ್ ಅವರಿಗೆ ಇತರರಂತೆ ಮುಕ್ತವಾಗಿ ಓಡಾಡಲು ಬ್ರಿಟಿಷರು ಅವಕಾಶ ಕೊಡಲಿಲ್ಲ. ಬದಲಿಗೆ, ಮಹಾರಾಷ್ಟ್ರದ ರತ್ನಗಿರಿಯಲ್ಲಿ ಅವರನ್ನು 14-15 ವರ್ಷಗಳ ಕಾಲ ನಿರ್ಬಂಧಿತ ವಾಸದಲ್ಲಿ ಇಡಲಾಗಿತ್ತು! ಆದರೂ ಭಾರತದ ಶ್ರೇಯಸ್ಸಿಗೆ ತುಡಿಯುತ್ತಿದ್ದ ಅವರು ಆ ಇತಿಮಿತಿಗಳನ್ನು ಮೆಟ್ಟಿ ನಿಂತು, ಹಲವು ಶ್ರೇಯಸ್ಕರವಾದ ಉಪಕ್ರಮಗಳನ್ನು ಕೈಗೊಂಡರು. ಈ ನಿಟ್ಟಿನಲ್ಲಿ ಮೊದಲು ಅವರು ಕೈಗೆತ್ತಿಕೊಂಡಿದ್ದು, ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ನಿವಾರಣೆಯ ಕೆಲಸ. ಇದಕ್ಕಾಗಿ ಅವರು ದಲಿತ ಸಮುದಾಯಕ್ಕೆ ಸೇರಿದ ಮಹಾಡ್ ದಂಪತಿಗಳ ಪಾದಪೂಜೆ ಮಾಡಿದರು. ದೇವಸ್ಥಾನದ ಗಣೇಶೋತ್ಸವಗಳಲ್ಲಿ ದಲಿತರಿಗೆ ಅಗ್ರಮನ್ನಣೆ ಕೊಡಿಸಿದರು. ಜಾತಿಪಂಥಗಳ ಭೇದವಿಲ್ಲದ ಭಜನಾ ಮಂಡಲಿಗಳನ್ನು ಏರ್ಪಡಿಸಿದರು. ಶಾಲೆಗಳನ್ನು ಕಟ್ಟಿಸಿದರು. ದಲಿತರ ಮಕ್ಕಳಿಗೆ ಪುಸ್ತಕಗಳನ್ನು ಹಂಚಿದರು. ಇವೆಲ್ಲಕ್ಕೂ ಕಲಶವಿಟ್ಟಂತೆ, ದಲಿತರಿಗೆ ದೇವಸ್ಥಾನ ಪ್ರವೇಶದ ಮುಕ್ತ ಹಕ್ಕು ಎಷ್ಟೊಂದು ಅಗತ್ಯವೆನ್ನುವುದನ್ನು ಮನಗಂಡಿದ್ದ ಅವರು, ಅವರಿಗೆಂದೇ `ಪತಿತ ಪಾವನ ಮಂದಿರ’ವನ್ನೇ ಕಟ್ಟಿಸಿದರು!
ಎಲ್ಲವೂ ಅವರು ಅಂದುಕೊಂಡಂತೆಯೇ ನಡೆದಿದ್ದರೆ, ಬಾಬಾಸಾಹೇಬ್ ಅಂಬೇಡ್ಕರರೇ ಈ ಮಂದಿರವನ್ನು ಉದ್ಘಾಟಿಸಬೇಕಿತ್ತು. ಆದರೆ, ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ ಅವರು ಬರಲಾಗಲಿಲ್ಲ. ಆದರೇನಂತೆ, ಅಸ್ಪೃಶ್ಯತೆ ನಿವಾರಣೆಯ ನಿಟ್ಟಿನಲ್ಲಿ ಸಾವರ್ಕರರ ಪ್ರಾಮಾಣಿಕ ಕಳಕಳಿಯನ್ನು ಮನಗಂಡಿದ್ದ ಅವರು, `ಸಾವರ್ಕರರಂಥ ಹತ್ತು ಮಂದಿ ಇದ್ದರೆ, ಒಂದೆರಡು ದಶಕಗಳಲ್ಲಿ ಈ ದೇಶದಿಂದ ಅಸ್ಪೃಶ್ಯತೆ ನಾಮಾವಶೇಷವಾಗಿ ಹೋಗಲಿದೆ!’ ಎಂದು ಉದ್ಗರಿಸಿದ್ದರು.
ಈ ಉಪಕ್ರಮವನ್ನು ಮತ್ತಷ್ಟು ವಿಸ್ತರಿಸಿದ ಸಾವರ್ಕರ್, ಅಂತರ್ಜಾತೀಯ ಭೋಜನ ಕೂಟಗಳನ್ನು ಏರ್ಪಡಿಸಿದರು. ಅಂತರ ಜಾತೀಯ ವಿವಾಹಗಳ ಜತೆಗೆ ಅಂತರಪ್ರಾಂತೀಯ ವಿವಾಹಗಳನ್ನು ಪ್ರೋತ್ಸಾಹಿಸಿದರು. ನಿಜ ಹೇಳಬೇಕೆಂದರೆ, ಇವೆಲ್ಲವನ್ನೂ ಅವರು ಮಾಡಿದ್ದು ಗಾಂಧೀಜಿಯವರು ಅಸ್ಪೃಶ್ಯತೆ ನಿವಾರಣೆಗೆ ಕರೆ ಕೊಡುವುದಕ್ಕೂ ಎಷ್ಟೋ ವರ್ಷಗಳ ಮುಂಚೆಯೇ! ಆದರೆ, ಗಾಂಧೀಜಿಯವರು ದಲಿತರ ಕೇರಿಗೆ ಹೋಗಿ ಮಲ ಎತ್ತಿದ್ದನ್ನು ಮಾತ್ರ ಹೇಳುವ `ಅನುಕೂಲಸಿಂಧು ಶಕ್ತಿಗಳು’, ಸಾವರ್ಕರರ ಈ ಸೇವೆಯನ್ನು ಮತ್ತು ಅವರು ರವಾನಿಸಿದ ಪರಿವರ್ತನೆಯ ಸಂಕೇತಗಳನ್ನು ನೇಪಥ್ಯಕ್ಕೆ ಸರಿಸಿರುವುದು ನಮ್ಮ ದೇಶದಲ್ಲಿ ಬೇರೂರಿರುವ `ಬೌದ್ಧಿಕ ಅಪ್ರಾಮಾಣಿಕತೆ’ಗೊಂದು ನಿದರ್ಶನವಷ್ಟೆ. ಇದಿಷ್ಟೇ ಅಲ್ಲ, ಹಿಂದೂಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ನಗರೀಕರಣದ ಪ್ರಜ್ಞೆಗಳು ಹೆಚ್ಚುವುದರಿಂದ ಭಾರತ ಅಖಂಡವಾಗಿ ಉಳಿಯಲಿದೆ ಎಂದು ಅಚಲವಾಗಿ ನಂಬಿದ್ದ ಅವರು, ದಲಿತರ ಆಹಾರದ ಹಕ್ಕಿನ ವಿಚಾರದಲ್ಲಿ ಆ ಸಮುದಾಯದ ಪರವಾಗಿ ನಿಂತಿದ್ದರು! ಇದಕ್ಕಾಗಿ ಅವರು, ಮೇಲ್ಜಾತಿಗಳ ಮೇಲೆ ವೈಚಾರಿಕ ಪ್ರಹಾರವನ್ನೇ ನಡೆಸಿದರು.
ಇನ್ನು, ಸಾವರ್ಕರ್ ಅವರೊಬ್ಬ `ಮುಸ್ಲಿಂ ವಿರೋಧಿ’ ಎನ್ನುವ ವಿಚಾರಕ್ಕೆ ಬರೋಣ. ಇಂಥವರಿಗೆ ಚರಿತ್ರೆಯ ಪ್ರಜ್ಞೆ ಎಷ್ಟೊಂದು ಅಳ್ಳಕವಾಗಿದೆ ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆ. ಏಕೆಂದರೆ, ಸಾವರ್ಕರ್ ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಪ್ರಾಮಾಣಿಕವಾಗಿ ಹಿಂದೂ-ಮುಸ್ಲಿಂ ಐಕ್ಯತೆಗೆ ಶ್ರಮಿಸಿದವರು. ಅವರ ಈ ಪ್ರತಿಪಾದನೆಯನ್ನು ಸ್ವತಃ ಗಾಂಧೀಜಿಯೇ ಮೆಚ್ಚಿಕೊಂಡಿದ್ದರು. ವಿಲಕ್ಷಣ ಸಂಗತಿಯೆಂದರೆ, ಇವತ್ತಿನ ಗಾಂಧೀವಾದಿಗಳಿಗೆ ಇದು ಗೊತ್ತಿಲ್ಲ! ಆದರೆ, ದೂರದ ಟರ್ಕಿಗೆ ಸಂಬಂಧಿಸಿದ ವಿದ್ಯಮಾನವಾಗಿದ್ದ ಖಿಲಾಫತ್ ಚಳವಳಿಯ ಬಗ್ಗೆ ಅತಾರ್ಕಿಕವಾದ ಸಹಾನುಭೂತಿಯನ್ನು ಹೊಂದಿದ್ದ ಒಂದು ವರ್ಗ/ಪಕ್ಷವು ಬಿತ್ತತೊಡಗಿದ ಪ್ರತ್ಯೇಕತೆಯ ಭಾವನೆಯನ್ನು ನೋಡಿದ ಮೇಲೆ ಸಾವರ್ಕರ್, ಮುಂದಿನ ಅಪಾಯವನ್ನು ಗ್ರಹಿಸಿ ನಿಷ್ಠುರವಾಗಿ ಮಾತನಾಡತೊಡಗಿದರು. ಅಲ್ಲಿಯವರೆಗೂ ಬ್ರಿಟಿಷರ ಸೇನೆಯಲ್ಲಿ ತೀರಾ ಅತ್ಯಲ್ಪ ಪ್ರಮಾಣದಲ್ಲಿದ್ದ ಹಿಂದೂಗಳು ಹೆಚ್ಚುಹೆಚ್ಚಾಗಿ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳಿಗೆ ಸೇರುವ ಕೆಲಸವನ್ನು ಆಂದೋಲನದಂತೆ ನಡೆಸಿದರು. ಜಾಗತಿಕ ಮಟ್ಟದಲ್ಲಿ ಬೆಳಗುತ್ತಿರುವ ಭಾರತದ ಈ ಚರಿತ್ರೆಯನ್ನು ನಾವೆಲ್ಲರೂ ಅರಿಯಬೇಕು.
ಸಾವರ್ಕರ್ ಎಂದರೆ ಇಷ್ಟೇ ಅಲ್ಲ, ಭಾರತದ ತ್ರಿವರ್ಣ ಧ್ವಜದಲ್ಲಿ ಇಂದು ಸಾರನಾಥದ ಧರ್ಮಚಕ್ರವಿದ್ದರೆ ಅದಕ್ಕೆ ಕಾರಣರಾದವರೂ ಇವರೇ! ಇಂತಹ ಉದಾತ್ತ ಚಿಂತನಗಳ ಜತೆಯಲ್ಲೇ ಅವರು, ತಮ್ಮ ಕಾಲದ ಜಾಗತಿಕ ನಾಯಕರೊಂದಿಗೆ ಭಾರತದ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಪತ್ರ ವ್ಯವಹಾರಗಳನ್ನು ನಡೆಸುತ್ತಿದ್ದರು. ಅಂಬೇಡ್ಕರ್, ನೆಹರು, ಶಾಮಪ್ರಸಾದ್ ಮುಖರ್ಜಿ ಅವರಷ್ಟೆ ಅಲ್ಲದೆ, ಕಮ್ಯುನಿಸ್ಟರು ಮತ್ತು ಸಮಾಜವಾದಿಗಳಂತೆಯೇ ಇವರು ಕೂಡ `ಕ್ವಿಟ್ ಇಂಡಿಯಾ’ ಚಳವಳಿಯನ್ನು ನಿರಾಕರಿಸಿದ್ದರು. ದೇಶ ವಿಭಜನೆಯ ಪ್ರಸ್ತಾಪವನ್ನು ಎಲ್ಲರಿಗಿಂತಲೂ ಮೊದಲೇ ವಿರೋಧಿಸಿದ್ದರು. ಹಾಗೆಯೇ, ಈ ದೇಶದ ಬಹುಸಂಖ್ಯಾತರನ್ನು ಮಾತ್ರ ಸದಾ ನೈತಿಕ ಬಿಕ್ಕಟ್ಟಿಗೆ ದೂಡುತ್ತಿದ್ದ ಕುಟಿಲ ರಾಜಕಾರಣವನ್ನು ಅವರು ತಿರಸ್ಕರಿಸುತ್ತ, `ಮಾತೃಭೂಮಿ’ ಮತ್ತು `ಪಿತೃಭೂಮಿ’ಗಳ ರಚನಾತ್ಮಕ ಪರಿಕಲ್ಪನೆಗಳನ್ನು ಮುಂಚೂಣಿಗೆ ತಂದರು.
ಬಹುಸಂಖ್ಯಾತರ ಪರವಾಗಿ ಮಾತನಾಡುವುದೇ ಅಪರಾಧವೆನ್ನುವ ದುಷ್ಟಕಾಲ ನಮ್ಮಲ್ಲಿ ಇತ್ತೀಚಿನವರೆಗೂ ತಾಂಡವವಾಡುತ್ತಿತ್ತು. ಅದರ ಪಳೆಯುಳಿಕೆಗಳು ಈಗಲೂ ಇವೆ. ಆದರೆ, ದೇಶದ ಪುಣ್ಯಸಂಚಯ ದೊಡ್ಡದಿದೆ. ಹೀಗಾಗಿ, ಸಾವರ್ಕರ್ ಮತ್ತು ಅವರಂತಹ ಇನ್ನೂ ಅನೇಕರ ವಿಚಾರಗಳು ಈಗ ಪುನರುಜ್ಜೀವನಗೊಂಡು, ಪ್ರಖರವಾಗಿ ಗೊತ್ತಾಗುತ್ತಿವೆ. ಇಂತಹ ದ್ರಷ್ಟಾರರ ವಾರಸುದಾರರಾಗಿರುವುದಕ್ಕೆ ಭಾರತೀಯರೆಲ್ಲರೂ ಹೆಮ್ಮೆ ಪಡಬೇಕು!
ಡಿಕೆ ಶಿವಕುಮಾರ್ ಅವರ ಗುರಿಯೇನು?
– ಅಜಿತ್ ಶೆಟ್ಟಿ ಹೆರಂಜೆ
ಡಿಕೆಶಿಯವರು ಮೊದಲು ಯಾರೊಡೊನೆ ಜಗಳವಾಡಬೇಕು ಎಂದು ತೀರ್ಮಾನ ಮಾಡಬೇಕು. ವರ್ತಮಾನದ ರಾಜಕಾರಣದಲ್ಲಿ ಅವರಿಗೆ ತಮ್ಮ ಸ್ವಪಕ್ಷೀಯರ ಜೊತೆಗೆ ಜಗಳವಾಡುವುದು ಮುಖ್ಯವೋ ಅಥವಾ ತಮ್ಮ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವುದು ಮುಖ್ಯವೋ ಎಂಬ ತೀರ್ಮಾನಕ್ಕೆ ಅವರ ಮೊದಲು ಬರಬೇಕು. ಈ ಎರಡೂ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಅವರೊಬ್ಬರೇ ಇಡೀ ಕೆಪಿಸಿಯನ್ನು ತಲೆಯಲ್ಲಿ ಹೊತ್ತವರಂತೆ ಆಡುತ್ತಿರುವುದು ಇತ್ತೀಚೆಗೆ ಕಾಣುತ್ತಿದೆ. ತನ್ನನ್ನ ತಾನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಪಾಪವನ್ನೆಲ್ಲಾ ತೊಳೆಯಲು ಅವತಾರ ಎತ್ತಿ ಬಂದಿದ್ದಾರೋ ಎಂಬಂತೆ ವರ್ತಿಸಿಸುತ್ತಿದ್ದಾರೆ. ಡಿಕೆಶಿ, ಕರ್ನಾಟಕ ಕಾಂಗ್ರೆಸ್ ಪಕ್ಷದ ಮೊದಲ ಪ್ರದೇಶಾಧ್ಯಕ್ಷರೂ ಅಲ್ಲ, ಕೊನೆಯವರೂ ಆಗುವುದಿಲ್ಲ. ಸೋಜಿಗದ ಸಂಗತಿ ಅಂದರೆ ಇವರ ವರ್ತನೆ ಹಾಗಿದೆ. ಇಲ್ಲದೇ ಹೋದರೆ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಧ್ಯಾಕ್ಷನೊಬ್ಬ ಹೀಗೆ ವರ್ತಿಸವುದು ಎಷ್ಟು ಸರಿ?

ಅವರ ಪಕ್ಷದೊಳಗೆ ಗುರುತರವಾದ ಜವಾಬ್ದಾರಿ ಇರುವ ವ್ಯಕ್ತಿಯೊಬ್ಬ ಇನ್ನೊಂದು ರಾಜಕೀಯ ಪಕ್ಷದ ನಾಯಕರನ್ನು ಭೇಟಿಯಾದರೆ, ಮತ್ತು ಅದು ಪಕ್ಷ ವಿರೋಧಿ ಚಟುವಟಿಕೆ ಅಂತ ಅನ್ನಿಸದರೆ ಅವರು ಆ ವ್ಯಕ್ತಿಯ ಬಳಿ ನೇರವಾಗಿ ಮಾತನಾಡಿ ವಿಷಯವನ್ನು ಬಗೆಹರಿಸಿಕೊಳ್ಳಬಹುದು ಅಲ್ವೆ? ಅವರ ಪಕ್ಷದ ನಾಯಕರೊಡನೆ ಮಾತನಾಡಲೂ ಡಿಕೆಶಿ ಅವರಿಗೆ ಮಾಧ್ಯಮದ ಅಗತ್ಯ ಬಂತು ಅಂದರೆ, ಅವರ ಪಕ್ಷದೊಳಗೆ ಸಂಬಂಧ ಬಹಳ ಹದಗೆಟ್ಟಿದೆ ಅಂತ ತಾನೆ ಅರ್ಥ. ಅಷ್ಟಕ್ಕೂ ಎಂ ಬಿ ಪಾಟೀಲರು ಕಾಂಗ್ರೆಸ್ ಪಕ್ಷದಲ್ಲಿ ಅಂತಿಂತಾ ಕಾಂಜೀ ಪೀಂಜಿ ನಾಯಕರಲ್ಲ. ಅವರು ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರು. ಅರಮನೆ ಮೈದಾನದಲ್ಲಿ ಅವರ ಪದಗ್ರಹಣ ಸಮಾರಂಭ ನೋಡಿದವರಿಗೆ, ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಭೆಗಿಂತಲೂ ಅದು ಜೋರಾಗೆ ಇತ್ತು ಅನಿಸಿದರೆ ತಪ್ಪೇನಿಲ್ಲ. ಈ ಸಮಾರಂಭ ಕರ್ನಾಟಕ ಕಾಂಗ್ರೇಸಿನಲ್ಲಿ ಎಲ್ಲವೂ ಸರಿ ಇಲ್ಲ ಜೊತೆಗೆ ಪಕ್ಷದ ಹೈ ಕಮಾಂಡ್ ಕೂಡ ಎಲ್ಲವನ್ನೂ ಡಿಕೆಶಿ ಅವರ ಹಗಲ ಮೇಲೆ ಹಾಕಿ ಸುಮ್ಮನೆ ಕೂರುವ ರಿಸ್ಕ್ ತೆಗೆದುಕೊಳ್ಳುವ ಕೆಲಸಕ್ಕೆ ಕೈ ಹಾಕಿಲ್ಲ ಎಂಬುದು ಸ್ಪಷ್ಟವಾಗಿಸುತ್ತದೆ. ಆ ಕಾರಣಕ್ಕೆ power ಬ್ಯಾಲೆನ್ಸಿಗಾಗಿ ಡಿಕೆಶಿಯ ವಿರೋಧ ಬಣಕ್ಕೂ ಸ್ವಲ್ಪ ಅಧಿಕಾರದ ಹಂಚಿಕೆ ಆಗಬೇಕು ಎಂಬ ಕಾರಣಕ್ಕೇ ಎಂ.ಬಿ ಪಾಟೀಲರಿಗೆ ಕೆಪಿಸಿಸಿ ಅಧ್ಯಕ್ಷರಿಗೆ ಸಮಾನಾಂತರವಾದ ಅಧಿಕಾರ ಇರುವ ಇನ್ನೊಂದು ಹುದ್ದೆಯನ್ನ ಸೃಷ್ಟಿ ಮಾಡಿಕೊಟ್ಟಿದ್ದು. ಅಲ್ಲಿಗೆ ರಾಜ್ಯ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನ ಕೈ ಕಮಾಂಡ್ ಪೂರ್ಣ ಪ್ರಮಾಣದಲ್ಲಿ ಡಿಕೆಶಿ ಕೈಗೂ ಕೊಡದೇ ಸಿದ್ದರಾಮಯ್ಯನವರ ಬಣಕ್ಕೂ ಕೊಡದೆ ಆಟ ಆಡುತ್ತಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಹಗ್ಗದ ಎರಡೂ ತುದಿಗೆ ಬೆಂಕಿ ಹಾಕಿದೆ. ಈ ಬೆಂಕಿಯಲ್ಲಿ ಯಾರು ಸುಡುತ್ತಾರೆ? ಯಾರು ಪಾರಾಗುತ್ತಾರೆ ಎಂಬುದನ್ನ ಸಮಯವೇ ನಿರ್ಧರಿಸಬೇಕು.
ಇನ್ನು ಡಿಕೆಶಿಯವರಿಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ, ತಾನೇ ಮುಖ್ಯಮಂತ್ರಿ ಆಗಬೇಕು ಎಂಬ ಎಲ್ಲಿಲ್ಲದ ತುಡಿತ ಇದೆ. ಆದರೆ ಅವರ ಬಗ್ಗೆ ಮಾತನಾಡುವ, ಅವರ ಬಗ್ಗೆ ಲಾಭಿ ಮಾಡುವ ಪ್ರಭಾವಿ ನಾಯಕರ ಸಂಖ್ಯೆ ರಾಜ್ಯದಲ್ಲೂ ಕೇಂದ್ರದಲ್ಲೂ ದಿನೇ ದಿನೇ ಕಡಿಮೆ ಆಗುತ್ತಿದೆ. ಈ ಮಧ್ಯೆ ಸಿದ್ದರಾಮಯ್ಯನವರು ತಾನೇ ಮುಂದಿನ ಮುಖ್ಯಮಂತ್ರಿ ಎಂದು ಒಂದಷ್ಟು ಭಾರಿ ನೇರವಾಗಿ ಹೇಳಿಕೊಂಡರೆ ಒಂದಷ್ಟು ಸಾರಿ ಅವರ ಬೆಂಬಲಿಗರ ಮುಖಾಂತರ ಹೇಳಿಸುತ್ತಾರೆ. ಬೆಂಬಲಿಗರು ಅಂದ್ರೆ ಸಾಮಾನ್ಯ ನಾಯಕರಲ್ಲ. ಜಮೀರ್ ಅಹ್ಮದ್ ಮುಖಾಂತರವೇ ಬಹಳಷ್ಟು ಸಾರಿ ಹೇಳಿಸಿದ್ದಾರೆ. ಇನ್ನು ಈ ವಾದ ತೀರಾ ಅತಿರೇಕಕ್ಕೆ ಹೋದಾಗ ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ವಿತಂಡ ವಾದನ್ನೂ ಅವರೇ ಅನೇಕ ಸಾರಿ ಮಾಡಿದ್ದಾರೆ. ಕೊನೆಗೆ ಅದೂ ತಾರಕಕ್ಕೆ ಹೋದಾಗ ತಾನೂ ಕೂಡ ದಲಿತನೇ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದರ ಬಗ್ಗೆ ಬಂದ ತೀರಾ ಇತ್ತಿಚೀಗಿನ ಹೇಳಿಕೆ ಎಂದರೆ ಕೆಪಿಸಿಸಿಯ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂಬಿ ಪಾಟೀಲರದ್ದು. ಅವರೂ ಕೂಡ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆ ಕೊಟ್ಟರು. ಇದು ಹಿಂದಿನಿಂದಲೂ ತೆರೆಯ ಮರೆಯಲ್ಲಿ ಎಂ.ಬಿ ಪಾಟೀಲರು, ಡಿಕೆಶಿ ನಡುವೆ ಇದ್ದ ರಾಜಕೀಯ ಕುಸ್ತಿ ತೆರೆಯ ಮುಂದೆ ಬರಲು ಪ್ರಮುಖ ಕಾರಣ ಆಯಿತು, ಒಂದಷ್ಟು ಹೊಸ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಕಳೆದ ಭಾನುವಾರ ಸುವರ್ಣ ಸುದ್ದಿವಾಹಿನಿಯಲ್ಲಿ ಡಿಕೆಶಿಯವರನ್ನ ನೇರವಾಗಿ ಪ್ರಶ್ನೆ ಮಾಡುವ ಅವಕಾಶ ನನಗೆ ಸಿಕ್ಕಿತು. ಸಮಯದ ಅಭಾವದ ಕಾರಣಕ್ಕೆ ಅಲ್ಲಿ ಚರ್ಚೆಯ ಪೂರ್ಣ ಭಾಗವನ್ನು ಪ್ರಸಾರ ಮಾಡಿಲ್ಲ. ಇಲ್ಲಿ ಕೂಡ ಅಜಿತ್ ಹನಮಕ್ಕನವರ್ ಅವರು ಡಿಕೆಶಿ ಅವರಿಗೆ ಒಂದಷ್ಟು ಮುಜುಗರ ತರುವ ಪ್ರಶ್ನೆಗಳನ್ನ ಕೇಳಿದರು, ಅದಕ್ಕೆ ಡಿಕೆಶಿ ಅಡ್ಡ ಗೋಡಯ ಮೇಲೆ ದೀಪ ಇಟ್ಟ ಹಾಗೆ ಉತ್ತರ ಕೊಟ್ಟರು. ಹಿಂದುತ್ವದ ವಿಚಾರ ಬಂದಾಗ ನೀವು ಯಾಕೆ ಡಬ್ಬಲ್ ಸ್ಟಾಂಡರ್ಡ್ ತಗೊಂತೀರಿ ಅನ್ನುವ ಪ್ರಶ್ನೆಗೆ ಡಿಕೆಶಿ ಬಹಳಾ ವಿದ್ವಾಂಸನಂತೆ ಉತ್ತರ ಕೊಡುವ ಪ್ರಯತ್ನ ಮಾಡಿದರು. ಅಸಲಿಗೆ ವಿಷಯ ಅದಲ್ಲ. ಈ ವಿಚಾರದಲ್ಲಿ ಪಕ್ಷದೊಳಗೆಯೇ ಅವರ ನಿಲುವು ಮತ್ತು ಅವರ ಅವರ ವಿರೋಧಿ ಬಣದ ನಿಲುವು ಬೇರೆ ಬೇರೆ. ಸಿದ್ದರಾಮಯ್ಯ ತಾನು ಮುಸಲ್ಮಾನರ ಪರ ಎಂದು ತಮ್ಮ ನಡೆ ನುಡಿಗಳ ಮೂಲಕ ನೇರವಾಗಿ ತೋರಿಸಿಕೊಂಡು ಬರುತ್ತಾರೆ. ಆದರೆ ಡಿಕೆಶಿಯವರ ಅಭಿಪ್ರಾಯ ತಾವು ಕಳೆದ ಸಾರಿ ಚುನಾವಣೆಯಲ್ಲಿ ಸೋಲಲು ಮುಖ್ಯ ಕಾರಣವೆ ಸರ್ಕಾರದ ಹಿಂದೂ ವಿರೋಧಿ ನೀತಿ ಎಂಬುದು. ಈ ಭಾರಿಯೂ ಅಂತಹ ನಿಲುವನ್ನು ತೆಗೆದುಕೊಂಡರೆ ಮತ್ತೆ ಪಕ್ಷಕ್ಕೆ ಹಾನಿಯಾಗಾಲಿದೆ. ಈಗ ತಾನೇ ಅಧ್ಯಕ್ಷ ಬೇರೆ. ಪಕ್ಷ ಈ ಭಾರಿಯೂ ಸೋತರೆ ತಾವು ಮುಖ್ಯಮಂತ್ರಿ ಆಗುವ ಕನಸು ಕನಸಾಗಿಯೇ ಉಳಿಯಲಿದೆ ಎಂಬದು ಅವರಿಗೆ ಗೊತ್ತಾಗಿದೆ. ಹಾಗಾಗಿ, ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸಂಪೂರ್ಣವಾಗಿ ಹಿಂದುಗಳನ್ನು ವಿರೋಧಿಸುವ ಸಾಹಸಕ್ಕೆ ಹೋಗಲಿಲ್ಲ, ಜೊತೆಗೆ ತಮ್ಮ ಪಕ್ಷದ ಎಲ್ಲರಿಗೂ ಹಾಗೆಯೇ ವ್ಯವಹರಿಸಲೂ ಆದೇಶ ಕೊಟ್ಟರು. ಆದರೆ ಅವರನ್ನ ವಿರೋಧಿಸಲೆಂದೇ ಇರುವ, ಅವರಿಗೆ ಮುಜಗರ ಉಂಟು ಮಾಡಲೇಬೇಕು ಎಂದು ಇರುವ ಇನ್ನೊಂದು ಬಣ ಇವರ ಮಾತನ್ನ ದಿಕ್ಕರಿಸಿ ಅಗೊಮ್ಮೆ ಈಗೊಮ್ಮೆ ಇವರು ಹಾಕಿದ ಬೇಲಿ ದಾಟಿ ಡಿಕೆಶಿ ಅವರಿಗೆ ಮುಜುಗರ ಮಾಡುತ್ತಲೇ ಇದೆ. ಈ ಬೆಳವಣಿಗೆಯ ಕಾರಣಕ್ಕೆ ಒಂದು ಕಡೆ ಕಾಂಗ್ರೆಸ್ ಪಕ್ಷವನ್ನು ಹಿಂದೂಗಳೂ ನಂಬದ, ಇನ್ನೊಂದು ಕಡೆ ಅವರ ಪಾರಂಪರಿಕೆ ಮತದಾರರಾದ ಮುಸಲ್ಮಾನರೂ ನಂಬದ ಒಂದು ಇಕ್ಕಟ್ಟಿನ ಪರಿಸ್ಥಿತಿ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ ಎಂಬುದ ಕಾಂಗ್ರೆಸ್ ವಲಯದಲ್ಲಿ ಬಹಳಷ್ಟು ಜನರಿಗೆ ನೋವು ಕೂಡ ತಂದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯನವರ ನಡುವೆ ಎಲ್ಲವೂ ಸರಿ ಇಲ್ಲ, ಇದು ಮಾದ್ಯಮಗಳು ಕಟ್ಟಿದ ಕಟ್ಟು ಕಥೆ ಅಲ್ಲ, ಸತ್ಯ ವಿಚಾರ ಎಂಬುದು ನನಗೂ ಅನುಭವಕ್ಕೆ ಬಂತು. ಅಜಿತ್ ಹನಮಕ್ಕನವರ್ ಕೇಳಿದ ಒಂದು ಪ್ರಶ್ನಯಲ್ಲಿ ನೀವು ಯಾಕೆ ಮುಸಲ್ಮಾನರ ಪರ ಮಾತನಾಡಲಿಲ್ಲ? ಸಿದ್ದರಾಮಯ್ಯ ಒಂದು ಸ್ಟ್ಯಾಂಡ್ ತೆಗೆದುಕೊಂಡ್ರು ಎಂದಾಗ, ಡಿಕೆಶಿ ಅದಕ್ಕೆ ಸಿದ್ದರಾಮಯ್ಯನವರು ಮಾತನಾಡಿದರೆ ಅದು ಕಾಂಗ್ರೆಸ್ ಪಕ್ಷ ಮಾತನಾಡಿದಂತೆ ಅಲ್ವಾ ಎಂದು ಮರು ಪ್ರಶ್ನೆ ಹಾಕಿದರು. ಅವರು ಆ ಉತ್ತರಕ್ಕೆ ನಾನು ಹಿಂದೆ ಸಿದ್ದರಾಮಯ್ಯ ತೆಗೆದುಕೊಂಡ ಹಿಂದೂ ವಿರೋಧಿ ನೀತಿಗಳ ಬಗ್ಗೆ ಪ್ರಸ್ತಾಪ ಮಾಡಿದಾಗ ಅದೇ ಲಾಜಿಕ್ಕಿನಲ್ಲಿ ಉತ್ತರ ಕೊಡಲಾಗದ ಡಿಕೆಶಿ ನೀವು ಅದನ್ನ ಸಿದ್ದರಾಮಯ್ಯನವರ ಬಳಿಯೇ ಕೇಳಿ ಎಂದು ಹೇಳುತ್ತಾರೆ. (ಚರ್ಚೆಯ ಆ ಭಾಗ ವಾಹಿನಿಯಲ್ಲಿ ಪ್ರಸಾರ ಆಗಲಿಲ್ಲ, ಬಹುಶಃ ಸಮಯದ ಅಭಾವದ ಕಾರಣಕ್ಕೆ ಇರಬೇಕು) ಹೀಗೆ ಸಾಗಿದ ಚರ್ಚೆಯ ಒಂದು ಭಾಗದಲ್ಲಿ, ಕಾಂಗ್ರೆಸ್ ಪಕ್ಷದ ಎನ್ ಎಸ್ ಯು ಐ ನ ಅದ್ಯಕ್ಷನೊಬ್ಬ ನೀವು ಮುಂದೆ ಮುಖ್ಯಮಂತ್ರಿ ಆದರೆ ಎಂತಹಾ ಯೊಜನೆಗಳನ್ನ ಜಾರಿಗೆ ತರುತ್ತೀರಿ ಎಂದು ಕೇಳಿದಾಗ ತಕ್ಷಣವೇ ಆತನನ್ನು ನಿಲ್ಲಿಸಿದ ಅಜಿತ್ ಹನಮಕ್ಕನವರ್ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆಯೇ ಗೊಂದಲ ಇದೆ. ನಿಮಗೆ ಯಾರು ಮುಖ್ಯಮಂತ್ರಿ ಆಗಬೇಕು ಅಂದಾಗ ಆತ ಸ್ವಲ್ಪ ಅಳುಕುತ್ತಲೇ ಡಿಕೆಶಿ ಅಂದ. ಹಿಂದೆ ನಮ್ಮದು ಸಾಮೂಹಿಕ ನಾಯಕತ್ವ, ಪಕ್ಷ ಮುಖ್ಯಮಂತ್ರಿಯ ತೀರ್ಮಾನ ಮಾಡಲಿದೆ ಎಂಬ ನೈತಿಕತೆಯ ಮಾತನಾಡಿದ್ದ ಡಿಕೆಶಿಗೆ ಹುಡುಗನ ಈ ಮಾತು ಖುಷಿಕೊಟ್ಟಿತು ಎಂಬುದು ಅವರ ಮುಖಭಾವದಿಂದ ನನಗೆ ಅರ್ಥವಾಯಿತು. ಆ ಕ್ಷಣದಲ್ಲಿ ಅವರಿಗೆ ಕೆಲವೇ ನಿಮಿಷಗಳ ಹಿಂದೆ ಅವರೇ ಹೇಳಿದ ಪಕ್ಷದ ತೀರ್ಮಾನದ ಮಾತು ಅವರಿಗೆ ನೆನಪು ಇರಲಿಲ್ಲ. ಈ ಮದ್ಯೆ ನಾನು ಮಾತನಾಡಿ (ಹಾಗೆ ಮಾತನಾಡುವುದು ಚರ್ಚೆಯ ನಿಯಮಕ್ಕೆ ವಿರುದ್ಧವಾಗಿತ್ತು. ಆದರೂ ತಡೆಯಲಾಗದೆ ಒಂದು ಪ್ರಶ್ನೆ ಕೇಳಿದೆ) ಎರಡು ದಿನದ ಹಿಂದೆ ಎಂ.ಬಿ ಪಾಟೀಲರೇ ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಅಂದಿದ್ದಾರೆ ಅಂದಾಗ ಅವರ ಮುಖದಲ್ಲೊಂದು ಅಹಸನೆ ಗೆರೆ ಮೂಡಿದ್ದನ್ನು ಗಮನಿಸಿದೆ. ಅಂದಹಾಗೆ ಈ ಪ್ರಶ್ನೆಯನ್ನು ನಾನು ಚರ್ಚೆಯ ನಿಯಮಕ್ಕೆ ವಿರುದ್ದವಾಗಿ ಕೇಳಿದ ಕಾರಣ ಅದೂ ಕೂಡ ಪ್ರಸಾರ ಆಗಿಲಿಲ್ಲ.
ಒಟ್ಟಿನಲ್ಲಿ ಡಿಕೆಶಿ ಅವರ ಜೊತೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಇದ್ದ ನನಗೆ ಒಂದಷ್ಟು ವಿಚಾರಗಳು ಸ್ಪಷ್ಟವಾಗಿ ಕಾಣಿಸಿತು. ಅವರಲ್ಲಿ ಬೌದ್ಧಿಕ ಚರ್ಚೆ ಮಾಡುವ ಸಾಮರ್ಥ್ಯ ಮತ್ತು ವ್ಯವಧಾನ ಎರಡೂ ಇಲ್ಲ ಅವರದ್ದೇನಿದ್ದರೂ “ಸ್ಕೋರ್ ಸೆಟಲ್” ಮಾಡುವ ರಾಜಕಾರಣ. ಜೊತೆಗೆ ಅವರು ಮುಖ ಭಾವದಲ್ಲಿ ಸಿದ್ದರಾಮಯ್ಯನವರ ಮುಸಲ್ಮಾನರ ತುಷ್ಟಿಕರಣದ ರಾಜಕಾರಣದಿಂದಾಗಿ ಹಿಂದುಗಳ ವಿರುದ್ಧ ಮಾಡಿರುವ ಅನ್ಯಾಯದ ಪಾಪದ ಮೂಟೆಯನ್ನ ಇಡೀ ಪಕ್ಷದಲ್ಲಿ ತಾನೊಬ್ಬನೇ ಹೊತ್ತು ನಡೆಯುತ್ತಿದ್ದೇನೆ ಎಂಬ ಭಾವ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರ ಜೊತೆಗೆ ಅವರು ಪಕ್ಷದೊಳಗೆ ಮತ್ತು ಪಕ್ಷದ ಹೊರಗೆ ಒಬ್ಬಂಟಿ ಎರಡೂ ಕಡೆ ಪ್ರವಾಹದ ವಿರುದ್ದ ಈಜಾಡುತ್ತಿದ್ದಾರೆ, ಅದರಲ್ಲಿ ಬಳಲಿ ಬೆಂಡಾಗಿರುವುದೂ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಿರುವಾಗ “ಸ್ಕೋರ್ ಸೆಟಲ್” ಮಾಡುವ ರಾಜಕಾರಣದಿಂದ ಹೊರಗೆ ಬಂದು, ವೈಯಕ್ತಿಕ ಪ್ರತಿಷ್ಠೆ ಬಿಟ್ಟು, ಪಕ್ಷ ಕಟ್ಟುವ ರಾಜಕಾರಣ ಮಾಡಿದರಷ್ಟೆ ಪಕ್ಷಕ್ಕೆ ಮತ್ತು ಪಕ್ಷದ ಪ್ರಾದೇಶಿಕ ಅಧ್ಯಕ್ಷರಿಗೆ ಉಳಿಗಾಲ. ಇಲ್ಲದೇ ಹೋದರೆ ಇವರು ದಿನಂಪ್ರತಿ ವಿರೋಧ ಪಕ್ಷಗಳಿಗಿಂತ ಸ್ವ ಪಕ್ಷದವರ ಜೊತೆಗೆ ಹೆಚ್ಚು ಜಗಳವಾಡಬೇಕಾಗುತ್ತದೆ. ಅದರ ಪರಿಣಾಮವೇನು ಎಂಬುದಕ್ಕೆ ಮಹಾ ಭಾರತದ ಕರ್ಣನಿಗಿಂತ ಬೇರೆ ನಿದರ್ಶನ ಬೇಕಿಲ್ಲ ಅಲ್ಲವೆ?