ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

20
ನವೆಂ

ಕೋಮುವಾದವೂ ಮೂಲಭೂತವಾದವೂ

ಅಜಕ್ಕಳ ಗಿರೀಶ ಭಟ್

ದಕ್ಷಿಣ ಕನ್ನಡದಲ್ಲಿ ಈಚಿನ ವರ್ಷಗಳಲ್ಲಿ ಹಿಂದೂ- ಮುಸ್ಲಿಂ ಸಂಘರ್ಷಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಸಾಕಷ್ಟು ಲೇಖನಗಳು ಕಾಲಕಾಲಕ್ಕೆ ವಿವಿಧ ಪತ್ರಿಕೆಗಳಲ್ಲಿ ಬಂದಿವೆ. ಪುಸ್ತಕಗಳೂ ಬಂದಿವೆ. ಆದರೆ , ಹೆಚ್ಚಿನ ಲೇಖನಗಳು ಸಮಸ್ಯೆಯ ಆಳಕ್ಕಿಳಿದು ಚರ್ಚಿಸುವುದಿಲ್ಲ. ಮೇಲು ಮೇಲಿಂದ ನೊಡಿ ಎಲ್ಲ ಕೋಮುವಾದಿಗಳನ್ನು ಖಂಡಿಸಬೇಕು ಎಂದು ಹೇಳಿದಾಕ್ಷಣ ಸಮಸ್ಯೆ ಪರಿಹಾರವಾಗದು.

ವಾಸ್ತವವಾಗಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳು ಬದುಕನ್ನು ಗ್ರಹಿಸುವ ಬಗೆಯಲ್ಲಿಯೇ ವ್ಯತ್ಯಾಸಗಳಿವೆ.

ಹಿಂದೂ ಎಂಬೊಂದು ಏಕರೂಪಿ ಘಟಕ ಇಲ್ಲ ನಿಜ. ಆದರೆ ಸೃಷ್ಟಿ ಮತ್ತು ಸೃಷ್ಟಿಕರ್ತ ಇವೆಲ್ಲ ಪೂಜನೀಯ ಎಂದು ಗ್ರಹಿಸುವ ,ಅಂಥ ನಂಬಿಕೆಗಳನ್ನು ಹೊಂದಿರುವುದೇ ಈ “ಹಿಂದು” ಎಂದು ನಾವು ಅನುಕೂಲಕ್ಕಾಗಿ ಕರೆಯುವ ಗುಂಪುಗಳ ನಡುವೆ ಇರುವ ಸಾಮ್ಯತೆ ಎನ್ನಬಹುದು. ಇಂಥ ನಂಬಿಕೆಗಳು ಬಹುಸಂಸ್ಕೃತಿಗಳ ಅಸ್ತಿತ್ವಕ್ಕೆ ಪೂರಕ ಎಂದು ಬೇರೆ ಹೇಳಬೇಕಾಗಿಲ್ಲ. ಹಿಂದೂ ಧರ್ಮಗಳ ಒಳಗೇ ಭೇದಭಾವ ಇತ್ಯಾದಿ ಸಮಸ್ಯೆಗಳಿವೆ.ಅದು ಸಾಕಷ್ಟು ಚರ್ಚಿತವಾದ ವಿಷಯವೇ ಆಗಿದೆ.

ವಾಸ್ತವವಾಗಿ ಹಿಂದೂ-ಮುಸ್ಲಿಂ ಸಂಘರ್ಷವೆಂದರೆ ಅದು ಆಧುನಿಕತೆಗೆ ತೆರೆದುಕೊಂಡ ಮತ್ತು ಹಾಗೆ ತೆರೆದುಕೊಳ್ಳಲು ಹಿಂಜರಿಯುವ ಸಂಸ್ಕೃತಿಗಳ ನಡುವಿನ ಸಂಘರ್ಷವೂ ಹೌದು.ಅವರವರು ಅವರವರಷ್ಟಕ್ಕೇ ಇರಲಿ ಏನು ಸಮಸ್ಯೆ ಎನ್ನಲು ಸಾಧ್ಯವಿಲ್ಲ ಯಾಕೆಂದರೆ ಇವೆರಡೂ ಸಂಸ್ಕೃತಿಗಳೂ ಒಟ್ಟಿಗೇ ಬದುಕಬೇಕಾಗಿದೆ ಇಲ್ಲಿ.

ದಕ್ಷಿಣ ಕನ್ನಡದಲ್ಲಿ “ಹಿಂದೂ ಹುಡುಗಿ ” ಮತ್ತು “ಮುಸ್ಲಿಂ ಹುಡುಗ” ಜತೆಯಾಗಿ ಬಸ್ಸಲ್ಲಿ ಪ್ರಯಾಣಿಸಿದರೆ ಅಥವಾ ಪರಸ್ಪರ ಮಾತನಾಡಿದರೆ ಹಲ್ಲೆಗೆ ಒಳಗಾಗುವ ಪ್ರಸಂಗಗಳು ವರದಿಯಾಗುತ್ತವೆ.ಇಂಥ ಹಲ್ಲೆಗಳು ಖಂಡನೀಯವೇ ಹೌದು. ಇದರ ಹಿಂದೆ ಪುರುಷಾಹಂಕಾರದ ಪ್ರವೃತ್ತಿ ಇದೆ ಎನ್ನುವುದು ಎಲ್ಲರಿಗೂ ಅರ್ಥವಾಗುವ ವಿಚಾರ. ಆದರೆ ಇಂಥ ಪ್ರಸಂಗಗಳ ಬಗ್ಗೆ ಚಿಂತಿಸುವಾಗ ಇನ್ನಷ್ಟು ಸೂಕ್ಷ್ಮವಾಗಿ ನೋಡಬೇಕಾದ ಅಗತ್ಯವಿದೆ. ಉದಾಹರಣೆಗೆ ಮಂಗಳೂರಿನ ಕುಪ್ರಸಿದ್ಧ ಪಬ್ ದಾಳಿಯ ನಂತರ ಮಂಗಳೂರು ಹೇಗೆ ಕೋಮುವಾದಿಗಳ ತಾಣವಾಗುತ್ತಿದೆ ಎನ್ನುವ ಲೇಖನ ದ ವೀಕ್ ಪತ್ರಿಕೆಯಲ್ಲಿ ಪ್ರಕಟವಾಯಿತು. ( ಎನ್, ಭಾನುತೇಜ್, ವೀಕ್, ಫೆಬ್ರವರಿ -೨೦೦೯). ಎಲ್ಲ ಸರಿ; ಆದರೆ ಅದರಲ್ಲಿದ್ದ ಕೆಲವು ಸಾಲುಗಳು ಹೀಗಿದ್ದವು.”ಮುಸ್ಲಿಂ ಹುಡುಗರು ಮತ್ತು ಹಿಂದೂ ಹುಡುಗಿಯರ ನಡುವಿನ ಸ್ನೇಹಕ್ಕೆ ಗರಿಷ್ಟ ಶಿಕ್ಷೆ. ಹಿಂದು ಹುಡುಗ-ಮುಸ್ಲಿಂ ಹುಡುಗಿ ಸ್ನೇಹದ ವಿರುದ್ಧ ಯಾವುದೇ ಅಟ್ಯಾಕ್ ಆದ ಬಗ್ಗೆ ವರದಿಗಳಿಲ್ಲ.”(ಪು.೧೬). ಈ ಹೇಳಿಕೆ ನಿಜವಾಗಿ ಮಿಸ್ ಲೀಡ್ ಮಾಡುವಂಥದ್ದು. ದ.ಕ.ದಲ್ಲಿ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಝತೆಯಾಗಿ ಓಡಾಡುವ ಸನ್ನಿವೇಶಗಳು ಇಲ್ಲವೆಂಬಷ್ಟು ಕಡಮೆ ಎನ್ನುವ ಸತ್ಯವನ್ನು ಈ ಹೇಳಿಕೆ ಮರೆಮಾಚುತ್ತದೆ. ಮತ್ತಷ್ಟು ಓದು »

17
ನವೆಂ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಳ್ಳಿಮೋಡ ಸೇರಿದಂತೆ ತೆರೆಕಂಡ ೧೬ ಸಿನಿಮಾಗಳು

ಕರುಣಾಕರ ಬಳ್ಕೂರು

ಸಿನಿಮಾ ಅಂದ್ರೆ ಯಾರಿಗೆ ಇಷ್ಟಯಿಲ್ಲ ಹೇಳಿ? ಊಟ-ತಿಂಡಿ ಬಿಟ್ಟು 5-6 ಸಿನಿಮಾಗಳನ್ನು ನೊಡುವವರಿಗೇನು ನಮ್ಮಲ್ಲಿ ಬರವಿಲ್ಲ. ಆದರೆ ಇವತ್ತು ಕಲಾತ್ಮಕ ಸಿನಿಮಾಗಳನ್ನುನೋಡುವವರು ಮಾತ್ರ ಬೆರೆಳಣಿಯಷ್ಟೇ ಜನ ಸಿಗತ್ತಾರೆ? ಆದರೆ ಅವರಿಗೆ ನೋಡುವ ಅವಕಾಶ ಕೊಟ್ಟರೆ ಸಿನಿಮಾ ನೋಡುತ್ತಾರೆ ಎನ್ನುವುದಕ್ಕೆ ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವೇ ಸಾಕ್ಷಿಯಾಯಿತು. ತೆರೆಯ ಮೇಲೆ ಬೆಳ್ಳಿಮೋಡ ಅನಾವರಣ ಕಂಡಾಗ ಪ್ರೇಕ್ಷಕನ ಮೈರೋಮಾಂಚನ ಗೊಂಡಿರುವುದು ಆಶ್ಚರ್ಯದ ಸಂಗತಿ. ಮತ್ತಷ್ಟು ಓದು »

16
ನವೆಂ

ಕನಸಿನ ಬಂಡಿಗೆ ನಿಲ್ದಾಣವಿಲ್ಲ

ವೇಣುವಿನೋದ್

ಅದು ಫೆಬ್ರವರಿಯ ಥಂಡಿ ಸುರಿಯುವ ರಾತ್ರಿ. ನಕ್ಷತ್ರಗಳ ಹಿಮ್ಮೇಳದಲ್ಲಿ ಬೆಳ್ಳನೆ ಬೆಳದಿಂಗಳು ಚೆಲ್ಲುತ್ತಾ ಚಂದಿರ ಸವಾರಿ ಹೊರಟಿರುವಾಗಲೇ ಜಮ್ಮುತಾವಿ ಎಕ್ಸ್‌ಪ್ರೆಸ್ ರೈಲು ಯಾವುದೋ ಗೋಧಿಯ ಬಯಲುಗದ್ದೆಗಳ ನಡುವೆ ಮಂಜು ಪರದೆ ಸೀಳುತ್ತಾ ಓಡುತ್ತಿದೆ.

ರೇಲು ಗಾಡಿಯ ಸ್ಲೀಪರ‍್ ಕೋಚ್ ಎಸ್‌-8ರಲ್ಲಿ ಇರುವ ಕೆಲವೇ ಪ್ರಯಾಣಿಕರು ತಮ್ಮ ಇಹಲೋಕ ಪರಿವೆಯೆಲ್ಲ ಮರೆತು ನಿದ್ರೆ ಮಾಡುತ್ತಿದ್ದರೆ ಇಡೀ ಬೋಗಿಯೇ ಆಲಸ್ಯದಿಂದ ತುಂಬಿರುವಂತೆ ಕಾಣುತ್ತದೆ. ಮಬ್ಬು ಬೆಳಕಲ್ಲಿ ಅಪ್ಪರ‍್ ಬರ್ತ್‌ನಲ್ಲಿ ಬ್ಯಾಗ್‌ಗೆ ಬೆನ್ನು ಕೊಟ್ಟು ನಿದ್ರಿಸಲು ಯತ್ನಿಸುತ್ತಿದ್ದಾನೆ ಆ ೨೫ರ ಹುಡುಗ. ಆತ ಮಗ್ಗುಲಾಗಿ ಮಲಗಿದ್ದಾನೆ.

ಕಣ್ಣೆವೆ ಮುಚ್ಚಿಕೊಂಡರೆ ಸಾಕು ಆಕೆ ಕಣ್ಣಮುಂದೆ ಬರುತ್ತಾಳೆ. ಕಣ್ಣೆವೆ ತೆರೆದರೆ ಅಲ್ಲೇ ಮುಂಭಾಗದ ಮಧ್ಯೆಯ ಬರ್ತ್‌ನಲ್ಲೇ ಮಲಗಿದ್ದಾಳೆ. ಆಕೆಯ ಕಂಗಳಲ್ಲೂ ಈತನ ಪ್ರತಿಬಿಂಬ ಕಂಡಂತಿದೆ. ನಿನ್ನೆ ಬೆಳಗ್ಗಿನಿಂದ ಆತನಿಗೆ ಆಕೆ ಪರಿಚಯವಾಗಿದ್ದಾಳೆ, ಚೂಡಿದಾರ‍್ ಉಟ್ಟ ಸರಳ ಹುಡುಗಿ.

ಮಾತಿಗಾಗಿ ಆತನೂ ತಡವರಿಸಿದ್ದಾನೆ. ಆಕೆಯೂ ಅಂತಹಾ ಮಾತುಗಾರ್ತಿ ಅಲ್ಲ. ಆಕೆಯ ತಂದೆ ತಾಯಿ ಅಲ್ಲೇ ಕೆಳಗಿನ ಎರಡು ಬರ್ತ್‌ಗಳಲ್ಲಿ ಮಲಗಿದ್ದಾರೆ.
ಅವರು ಬೇಕೆಂದಾಗ ಪೇಪರನ್ನೋ, ನೀರನ್ನೋ ತಂದು ಕೊಟ್ಟು ಈತ ಉಪಕಾರ ಮಾಡಿದ್ದಿದೆ. ನನ್ನ ಬಗ್ಗೆ ಅವರೇನಂದುಕೊಂಡಿರಬಹುದು ಎಂದು ಆತ ಚಿಂತೆ ಮಾಡಿಲ್ಲ, ಆದರೆ ಗುಲಾಬಿ ವರ್ಣದ ಚೂಡಿದಾರದ ಆ ಚೆಲುವೆ ಮುಖ ನೋಡಿ ನಕ್ಕಾಗೆಲ್ಲ ಈತ ನಡುಗುತ್ತಾನೆ.

ಈ ಮಂಗಳೂರು ಹುಡುಗನಿಗೆ ಕನ್ನಡ, ಇಂಗ್ಲಿಷ್ ಬರುತ್ತದೆ. ವಿಚ್‌ ಪ್ಲೇಸ್ ಆರ‍್ ಯೂ ಫ್ರಂ, ಓ..ಯು ಆರ‍್.ಕನ್ನಡಿಗ…ಎಂದು ಪರಿಚಯ ಅಷ್ಟೇ ಮಾಡಿಕೊಂಡಿದ್ದಾಳೆ. ಆಕೆ ಅಹ್ಮದಾಬಾದ್‌ನವಳು.

ಇನ್ನು ಮೂರು-ನಾಲ್ಕು ಗಂಟೆಯಲ್ಲಿ ಬೆಳಗಾಗುವಾಗ ಅಹ್ಮದಾಬಾದ್ ಸ್ಟೇಷನ್ ಬರುತ್ತದೆ. ಆಕೆ ಅಲ್ಲಿ ಇಳಿಯು‌ತ್ತಾಳಂತೆ. ಬೆಳಗ್ಗಿನಿಂದಲೇ ಆಗಾಗ್ಗೆ ಮೊಬೈಲ್‌ನಲ್ಲಿ ಮೆಸೇಜ್ ನೋಡುತ್ತಿದ್ದವಳು, ಆಕೆಯ ಪ್ರಿಯಕರನ ಅಲ್ಲ, ಗೆಳೆಯರ ಸಂದೇಶ ಓದುತ್ತಿದ್ದಳೋ ಏನೋ. ಮಧ್ಯಾಹ್ನ ನಂತರ ಮೊಬೈಲ್ ನೋಡಿಲ್ಲ. ರೋಮಿಂಗಲ್ವಾ ಅಂತ ಬೆಂಗಳೂರು ಹುಡುಗ ಮೊಬೈಲ್ ಆಫ್ ಮಾಡಿಟ್ಟಿದ್ದಾನೆ.

ಆಕೆಯ ಮೇಲೆ ಆತನಿಗೆ ಪ್ರೇಮವೇ, ಆಕರ್ಷಣೆಯೇ ಗೊತ್ತಿಲ್ಲ. ಗುಜರಾತಿ ಹುಡುಗಿ ಮನದೊಳಗೆ ಗೂಡು ಕಟ್ಟಿದಳೇ? ಆತನಿಗೆ ಗೋಜಲು.
‘ನೀ ಹೋದರೆ ಮತ್ತೆ ನನ್ನ ಒಂದು ದಿನದ ಪ್ರಯಾಣ ಮಹಾ ಬೋರಿಂಗ್’ ಎನ್ನ ಹೊರಟಾಗ ರೇಲು ಇಂಜಿನ್ ಸುರಂಗ ಹೊಕ್ಕು ಕರ್ಕಶವಾಗಿ ಸೀಟಿ ಹಾಕುತ್ತಾ ವೇಗ ಹೆಚ್ಚಿಸಿಕೊಂಡಿವೆ. ಮಾತುಗಳನ್ನು ಹುಡುಗ ನುಂಗಿಕೊಂಡಿದ್ದಾನೆ. ಈತನ ಮುಖವನ್ನೇ ನೋಡುತ್ತಿದ್ದಾಕೆ ನುಂಗಿದ ಮಾತುಗಳನ್ನು ಹೆಕ್ಕಿಕೊಂಡಂತೆ ಮುಗುಳ್ನಗುತ್ತಾಳೆ. ಕಿಟಿಕಿಯಿಂದ ಒಳಹೊಕ್ಕ ಕುಳಿರ್ಗಾಳಿಗೆ ಮಲಗಿದ್ದವಳ ತಲೆಕೂದಲಿನ ಜೊಂಪೆ ಒಮ್ಮೆ ಮೇಲೆದ್ದು ಅಲೆ ಅಲೆಯಾಗಿ ಕಣ್ಣು, ಕೆನ್ನೆ ಮೇಲೆ ಜಾರುತ್ತಾ ಮುಖವನ್ನು ಆವರಿಸಿದ ದೃಶ್ಯ ಮನಃಪಟಲದಲ್ಲಿ ಅಚ್ಚೊತ್ತಿದೆ.

ಚಂದಿರ ರಾತ್ರಿ ಪಾಳಿ ಮುಗಿಸಿ ಬದಿಗೆ ಸರಿಯಲಿದ್ದಾನೆ, ಸೂರ್ಯನಿಗೆ ಹೊಸ ಪಾಳಿ ಇನ್ನು. ಪಾಳಿ ಬದಲಾವಣೆಯಾಗುವಾಗ ಆಕೆ ತನ್ನವರೊಂದಿಗೆ ರೈಲ್ವೇ ನಿಲ್ದಾಣದಲ್ಲಿ ಇಳಿದು ಬಿಡುತ್ತಾಳೆ. ಆಕೆ ಮಲಗಿದ್ದ ಬರ್ತ್‌ಗೆ ಇನ್ಯಾರೋ ಬಂದು ಬಿಡುತ್ತಾರೆ ಎಂಬ ನೆನಪುಗಳೇ ಈಗ ಆತನನ್ನು ಇರಿಯುತ್ತವೆ.
ಎಷ್ಟೊಂದು ಮಾತುಗಳು ಮನದ ಫ್ಯಾಕ್ಟರಿಯಲ್ಲಿ ಸಿದ್ಧಗೊಳ್ಳುತ್ತಿದ್ದವು, ಆಕೆಯ ಪಿಂಕ್ ಚೂಡಿ, ಅಲೆ ಅಲೆಗೂದಲು, ಗುಜರಾತಿ ಮಿಶ್ರಿತ ಇಂಗ್ಲಿಷ್, ಕಣ್ಣಿನ ನೇರನೋಟ ಇವೆಲ್ಲ ಸೇರಿ ಆತನಿಗೆ ಆಕೆಯ ಬಗ್ಗೆ ಯಾವ ಭಾವನೆ ಮೂಡುತ್ತಿದೆ ಎನ್ನುವುದನ್ನು ಇನ್ನೂ ನಿರ್ಧಾರ ಮಾಡುವ ಮೊದಲೇ ಆಕೆ ಹೊರಟು ಹೋಗುವವಳಿದ್ದಾಳೆ. ಆಕೆ ಇನ್ನೊಂದಿಷ್ಟು ಹೊತ್ತು ತನ್ನೊಂದಿಗಿದ್ದರೆ…
ಆತನ ಮನದ ಕೊರಗು ಆಕೆಗೂ ಇತ್ತೇ ಗೊತ್ತಿಲ್ಲ…ಸಂಜೆಯಾದಾಗ ಮುದುಡುವ ಗುಲಾಬಿಯಂತಿರುವ ಮುಖ ಏನೋ ಹೇಳುತ್ತಿದೆ.
ಈಗ ಬೆಳಕು ಹರಿದಿದೆ. ವೇಗ ಇಳಿಸಿದ ರೇಲು ನಿಲ್ದಾಣದತ್ತ ಜಾರುತ್ತಿದೆ. ಆಕೆಯ ಪೋಷಕರು ಬ್ಯಾಗೇರಿಸಿದ್ದಾರೆ. ಆಕೆಯೂ ತನ್ನ ತುರುಬು ಕಟ್ಟಿಕೊಂಡು ನಿದ್ದೆಗಣ್ಣಿಗೆ ತಣ್ಣೀರೆರಚಿ ಬಂದು ಸಿದ್ಧಳಾಗುತ್ತಿದ್ದಾಳೆ, ಆತನ ಕನಸಿನ ಬಂಡಿಯಿಂದ ಇಳಿದು ಹೋಗುವುದಕ್ಕೆ.
ಪ್ಲಾಟ್‌ಫಾರಂ ಬಂದು ನಿಂತಿದೆ ರೇಲು, ಆಕೆಯ ಹೆತ್ತವರ ಕೈಲಿದ್ದ ಬ್ಯಾಗ್ ಈತ ತೆಗೆದುಕೊಂಡಿದ್ದಾನೆ, ಅವರನ್ನು ಕೆಳಗಿಳಿಸಿ, ಬ್ಯಾಗ್ ಕೈಗೆ ಕೊಡುತ್ತಾನೆ. ಹಮ್ ಫಿರ‍್ ಮಿಲೇಂಗೇ….ನಕ್ಕ ಆಕೆಯ ತಂದೆ ಹುಡುಗನ ಬೆನ್ನು ಸವರಿದ್ದಾನೆ, ತಾಯಿಗಂಟಿ ನಿಂತ ಹುಡುಗಿ ತೀಕ್ಷ್ಣವಾಗಿ ಈತನತ್ತ ನೋಡುತ್ತಾಳೆ.
ಆಕೆಯ ಮೊಬೈಲ್ ನಂಬರ‍್ ಕೇಳಿ ಬಿಡಲೇ ಬೇಕೇ ಎನ್ನುವ ಗೊಂದಲದಲ್ಲಿದ್ದಾನೆ ಹುಡುಗ…ಆಗಲೇ ರೈಲು ಹೊರಟಿದೆ ಮತ್ತೆ…
ಒಲವೂ ಅಲ್ಲದ, ಸ್ನೇಹವೂ ಅಲ್ಲದ ನವಿರು ಭಾವಗಳ ಕನಸು ಹಾಗೇ ಹರಿಯಲಿ ಎನ್ನುತ್ತಾ ಹುಡುಗ ಅವ್ಯಕ್ತ ನೋವಿನಿಂದ ತಿರುಗಿಯೂ ನೋಡದೆ ರೈಲು ಏರಿದ್ದಾನೆ….ಲವ್‌ ಯೂ ಎಂದು ಕೂಗಿ ಹೇಳೋಣ ಎಂದು ಬಾಯ್ತೆರೆದರೆ ಮತ್ತೆ ಅದೇ ರೈಲಿನ ಸೀಟಿ….
ಮಾತುಗಳು ಬಾಯಲ್ಲೇ ಉಳಿದಿವೆ…ಆಕೆಯ ಕಂಗಳ ಅಂಗಳದಲ್ಲೆ ಹೊಳೆದ ಕಂಬನಿ ಮಾತ್ರ ಇನ್ನೂ ಹುಡುಗನ ಕಂಗಳಲ್ಲಿ ಶಾಶ್ವತವಾಗಿವೆ.
15
ನವೆಂ

ಪೇಟೆ ಸಾಕು, ನಡೀರಿ ಹಳ್ಳಿಗೆ!

ಮಹೇಶಕುಮಾರ್ ನೀರ್ಕಜೆ
ಹಳ್ಳಿ ಮೇಲೋ ಪಟ್ಟಣ ಮೇಲೋ? ಶಾಲೆಗಳ ಚರ್ಚಾಕೂಟಗಳಲ್ಲಿ ಇಂಥಾದ್ದೊಂದು ಚರ್ಚೆ ಸಾಮಾನ್ಯವಾಗಿ ಇರುತ್ತಿತ್ತು. ಈ ಪ್ರಶ್ನೆಗೆ ಆಗ ಪರಿಹಾರ ಸಿಕ್ಕಿತ್ತೇ? ಗೊತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಂತೂ ಉತ್ತರವಿಲ್ಲದಂತಾಗಿದೆ. ನಿಖರವಾದ ಉತ್ತರವೊಂದನ್ನು ನಿರೀಕ್ಷಿಸುವುದು ಸಾಧುವೂ ಅಲ್ಲ. ಯಾಕೆಂದರೆ ಈ ಪ್ರಶ್ನೆಗೆ ಉತ್ತರ ಬಹುತೇಕವಾಗಿ ವೈಯಕ್ತಿಕ ಆಸಕ್ತಿ, ಕುಟುಂಬದ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಹಳ್ಳೀಲಿ ಯಾರನ್ನಾದರೂ ಈ ಪ್ರಶ್ನೆ ಕೇಳಿದರೆ ನೂರಕ್ಕೆ ತೊಂಭತ್ತರಷ್ಟು ಜನ ಪೇಟೇನೇ ಒಳ್ಳೆದು ಎನ್ನಬಹುದು. ಅದಕ್ಕೆ ಕಾರಣಗಳೂ ಸಾಕಷ್ಟು ಇರಬಹುದು. ಅದೇ ಪಟ್ಟಣಗಳಲ್ಲಿ ವಾಸಿಸುತ್ತಿರುವವರು ಅಲ್ಲಿನ ಜಂಜಾಟದಿಂದ ಬೇಸತ್ತಿರುತ್ತಾರೆ ಮತ್ತು ಹಳ್ಳಿ ಜೀವನದ ಬಗ್ಗೆ ಒಂದು ರೀತಿಯ ಕೃತ್ರಿಮವಾದ ಸುಂದರ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಲೇಖನದ ಉದ್ದೇಶ ಹಳ್ಳಿ ಮತ್ತು ಪಟ್ಟಣದ ಮಧ್ಯದ ಆಯ್ಕೆಯ ಬಗ್ಗೆ ಅಲ್ಲ, ಬದಲಾಗಿ ಇತ್ತೀಚೆಗೆ ಭಾರತೀಯ ಸಾಮಾಜದಲ್ಲಿ ಮತ್ತು ಪರಿಸರದಲ್ಲಾದ ಬದಲಾವಣೆಗಳ ಕುರಿತು ಒಂದು ಜಿಜ್ಞಾಸೆ – ಸಮಸ್ಯೆಗಳು, ಪರಿಹಾರಗಳು ಹಾಗೂ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವವರ ಬಗ್ಗೆ ಒಂದಿಷ್ಟು ವಿವರಗಳು.

ಮೊದಲಿಗೆ ಕೆಲವೊಂದು ಸರಳ ಮಾಹಿತಿಗಳು. ೨೦೦೮  ಅಂಕಿ-ಅಂಶಗಳ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯ ಶೇ ೩೦ ರಷ್ಟು ಜನ ಪಟ್ಟಣಗಳಲ್ಲಿ (ಮಹಾನಗರಗಳು, ನಗರಗಳು) ವಾಸಿಸುತ್ತಿದ್ದಾರೆ. ಈ ಸಂಖ್ಯೆ ೨೦೩೦ ರ ಹೊತ್ತಿಗೆ ಶೇ ೪೦ ಏರುತ್ತದೆ. ಈಗಿನ ಗತಿಯಲ್ಲೇ ಜನಸಂಖ್ಯೆ ಏರುತ್ತಿದ್ದರೆ ೨೦೩೦ ಕ್ಕೆ ಒಟ್ಟು ಜನಸಂಖ್ಯೆ ೧೪೭ ಕೋಟಿಗಳಷ್ಟಾಗುತ್ತದೆ ಮತ್ತು ಆ ಹೊತ್ತಿಗೆ ಶೇ ೪೦, ಅಂದರೆ ಸುಮಾರು ೬೦ ಕೋಟಿ ಜನ ಪಟ್ಟಣಗಳಲ್ಲಿ ವಾಸಿಸುತ್ತಾರೆ! ಇದು ಈಗಿನ ಪಟ್ಟಣಿಗರ ಸಂಖ್ಯೆ (ಸುಮಾರು ೩೫ ಕೋಟಿ) ಗಿಂತ ೨೫ ಕೊಟಿ ಹೆಚ್ಚು. ಮತ್ತಷ್ಟು ಓದು »

13
ನವೆಂ

ಕನ್ನಡವೇ ಸತ್ಯ-ನಿತ್ಯ ಸತ್ಯ……

ಅರೆಹೊಳೆ ಸದಾಶಿವ ರಾವ್

ಕನ್ನಡ ಡಿ೦ಡಿಮ ಮತ್ತೆ ಮೊಳಗಿದೆ. ಇಲ್ಲಿ‘ಮತ್ತೆ’ ಯಾಕೆ೦ದರೆ ಪ್ರತೀ ವರ್ಷ ಕನ್ನಡ ಡಿ೦ಡಿಮ ಮೊಳಗುವುದು ಕೇವಲ ನವೆ೦ಬರ್‌ನಲ್ಲಿ ಮಾತ್ರ. ಈ ಒ೦ದು ತಿ೦ಗಳು ಎಲ್ಲೆಡೆಯಲ್ಲಿಯೂ, ಎಲ್ಲರ ಬಾಯಲ್ಲೂ ಕನ್ನಡ.. ಕನ್ನಡ.. ಕನ್ನಡ !ಮತ್ತೆ ಹನ್ನೊ೦ದು ತಿ೦ಗಳು ಆ ಮಾತಿಗೆ ದೀರ್ಘ ರಜೆ. ನವೆ೦ಬರ್ ಕಳೆದು ಡಿಸೆ೦ಬರ್ ಬ೦ದರೆ, ಚಳಿಗಾಲದ ಆರ೦ಭದೊಡನೆ, ಕನ್ನಡ ಚಳಿಹಿಡಿಸಿಕೊ೦ಡ೦ತೆ ಮೂಲೆಗೆ ಕುಳಿತುಕೊಳ್ಳುತ್ತದೆ. ಅದಕ್ಕೆ೦ದೇ ಈ ‘ಮತ್ತೆ’ ಇಲ್ಲಿ ಪ್ರಸ್ತುತ.

ಇದೆಲ್ಲಾ ಯಾಕೆ ಎನ್ನುವುದಕ್ಕೂ ಈ ನವೆ೦ಬರ್‌ನಲ್ಲಿಯೇ ಉತ್ತರದ ಹುಡುಕಾಟ ಆರ೦ಭವಾಗುತ್ತದೆ. ನಮಗೆ ನೇರವಾಗಿ ಸಿಗುವುದು ಸರ್ಕಾರ. ಎಲ್ಲದರ೦ತೆ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ, ಅಭಿಮಾನ ಶೂನ್ಯತೆ, ನಿರ್ವೀರ್ಯತೆ…..ಇತ್ಯಾದಿ ಅರ್ಥಕೋಶದ ಪದಬಳಕೆ ಮಾಡಿ, ಸರ್ಕಾರವನ್ನು ಬೈದು ನವೆ೦ಬರ್ ತಿ೦ಗಳು ಮುಗಿಸಿ, ಮತ್ತೆ ಸುಮ್ಮನಾಗುತ್ತೇವೆ. ನಿಜಕ್ಕೂ ನಮ್ಮ ಭಾಷೆಯ ಬಗ್ಗೆ ನಾವು ತೆಗೆದುಕೊಳ್ಳಬೇಕಾದ ಯಾವ ಜವಾಬ್ದಾರಿಗಳೂ ಇಲ್ಲವೇ ಎ೦ಬುದು ಇ೦ದಿನ ಪ್ರಶ್ನೆ.

ಒ೦ದು ವಿಚಾರವನ್ನು ನಾನಿಲ್ಲಿ ಪ್ರಸ್ತಾಪಿಸಬಯಸುತ್ತೇನೆ. ಈ ಹಿ೦ದೆಯೂ ನಾನಿದರ ಬಗ್ಗೆ ಹೇಳಿದ್ದೆ. ಅ೦ತರಾಷ್ಟ್ರೀಯ ಸ೦ಸ್ಥೆಯೊ೦ದಕ್ಕೆ ನಾನು ಸೇರಿದ ನ೦ತರ ಅಲ್ಲಿ ಒಮ್ಮೆ ಕನ್ನಡದಲ್ಲಿ ಮಾತಾಡುವ ಸುಯೋಗ ಒದಗಿತು. ಹೆಚ್ಚಾಗಿ ಆ೦ಗ್ಲಮಯವಾದ ಆ ಸಭೆಯಲ್ಲಿ ನಾನು ಕನ್ನಡದಲ್ಲಿಯೇ ಮಾತಾಡಿದೆ. ಅದು ತು೦ಬಾ ಜನರನ್ನು ಬಹು ಬೇಗ ಮುಟ್ಟಿತು-ತಟ್ಟಿತು. ಇತ್ತೀಚೆಗೆ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ, ಭಾಷಣದ  ಆರೋಗ್ಯಕರ ಬೆಳವಣಿಗೆ ಎಲ್ಲೆಡೆಯಲ್ಲೂ ಆರ೦ಭವಾಗಿದೆ.ಕೇವಲ ಆ೦ಗ್ಲಭಾಷೆಯಲ್ಲಿಯೇ ಇರುತ್ತಿದ್ದ ಹೆಚ್ಚಿನೆಲ್ಲಾ ಕಾರ್ಯಕ್ರಮಗಳು ಕನ್ನಡೀಕರಣಗೊಳ್ಳುತ್ತಾ ಬ೦ದಿವೆ. ಈ ಬೆಳವಣಿಗೆ ‘ನನ್ನಿ೦ದ’ ಆದದ್ದು ಎ೦ದು ನಾನು ಹೇಳುತ್ತಿಲ್ಲ. ಕನ್ನಡ-ಅ೦ದರೆ ನಮ್ಮ ಮಾತ್ರಭಾಷೆ ನಮ್ಮ ಹೃದಯವನ್ನು ತಟ್ಟಿದಷ್ಟು ಬೇಗನೇ, ಬೇರೆ ಭಾಷೆ ತಟ್ಟುವುದಿಲ್ಲ. ತಿಳಿದೋ ತಿಳಿಯದೆಯೋ ನಾವು ಬೇರೆ ಭಾಷೆಗಳನ್ನು, ಮುಖ್ಯವಾಗಿ ಆ೦ಗ್ಲವನ್ನು ನೆಚ್ಚಿಕೊ೦ಡಿರುತ್ತೇವೆ. ಮತ್ತಷ್ಟು ಓದು »

13
ನವೆಂ

ರೈನ್ ಕೋಟಾಯಣ…..

ಇರ್ಷಾದ್ ಎಂ.ವೇಣೂರು

ಬೈಕ್ ಯಾವತ್ತೂ ಜಾಲಿ ರೈಡ್ ಗೆ ಫೇಮಸ್. ಬೈಕ್ ಇದ್ರೆ ಬೇಕಾದ ಟೈಮಿಗೆ ಹೋಗಬಹುದು ಬೇಕಾದ ಟೈಮಿಗೆ ಬರಬಹುದು ಎಂಬುದು ಯುವಜನತೆ ಕಂಡುಕೊಂಡ ಸುಲಭ ವಿಧಾನ. ಆಫೀಸ್ ಗೆ ಹೋಗಲು ಯಾವತ್ತೂ ಲೇಟಾಗುತ್ತಿದ್ದ ಹಿರಿತಲೆಗಳೆಲ್ಲಾ ಟ್ರಾಫಿಕ್ ಸಹವಾಸ ಉಸ್ಸಪ್ಪ ಎಂದು ಬೈಕ್ ನಲ್ಲಿ ಸುಯ್ಯನೆ ಟ್ರಾಫಿಕ್ ಪಾಸ್ ಮಾಡುವ ಶಾರ್ಟ್ ಕಟ್ ವಿಧಾನ ಹುಡುಕಿಕೊಂಡು ಫುಲ್ ಖುಷ್ ಆಗಿದ್ದಾರೆ. ಕಾಲೇಜು ಹೋಗುವ ಹುಡುಗಿಯೂ ಸಿಟಿ ಬಸ್ ನಲ್ಲಿ ಉಸಿರುಗಟ್ಟುವಂತೆ ನಿಂತುಕೊಂಡು ಹೋಗುವುದಕ್ಕಿಂತ ಸ್ಕೂಟಿಯಲ್ಲಿ ಹೋಗುವುದೇ ಉತ್ತಮವೆಂದುಕೊಂಡಿದ್ದಾಳೆ.

ಎಲ್ಲಾ ಸರಿ ಸ್ವಾಮಿ ಆದರೆ ಮಳೆ ಬಂದರೆ ಇವರಿಗೆಲ್ಲಾ ಕೊಡೆ ಹಿಡಿಯಲು ಆ ಪರಮಾತ್ಮ ಬರುತ್ತಾನಾ ಎಂದು ಕೇಳಬೇಡಿ. ಇದೆಯಲ್ಲಾ ರೈನ್ ಕೋಟ್. ಹ್ಮ್… ಮಳೆಯಲ್ಲಿ ರೈನ್ ಕೋಟ್ ಹಾಕಿಕೊಂಡು ರೈಡ್ ಮಾಡುವಾಗ ಸಿಗುವ ಮಜಾ ಕೊಡೆ ಹಿಡಿದುಕೊಂಡು ನಡೆದಾಡುವಾಗಲು ಸಿಗುವುದಿಲ್ಲ. ಹೆಲ್ಮೆಟ್ ಹಾಕಿಕೊಂಡು, ಜಾಕೆಟ್ ಝಿಪ್ ಹಾಕಿ, ಪ್ಯಾಂಟ್ ಎಕ್ಸ್ೞ್ೞ್ ಲೇಟರ್ ಕೊಟ್ಟರೆ ಹೊರಗಡೆ ಎಷ್ಟೇ ಮಳೆ ಇದ್ದರೂ ಲೋಕದ ಪರಿವೇ ಇರುವುದಿಲ್ಲ. ಎಲ್ಲೋ ಗಾಜಿನ ಮನೆಯೊಳಗೆ ಕೂತು ಮಳೆಯನ್ನು ನೋಡಿದ ಹಾಗಾಗುಗುತ್ತದೆ.
ರೈನ್ ಕೋಟ್ ನಲ್ಲೂ ಹಲವಾರು ವಿಧವಿದೆ. ಕಾಲೇಜು ಹೋಗುವ ಹುಡುಗ ಮಾತ್ರ ಅಲ್ಲ ಆಫೀಸ್ ಗೆ ಸೀರೆ ಉಟ್ಟಕೊಂಡು ಹೋಗುವ ನಾರಿಯೂ ರೈನ್ ಕೋಟ್ ತೊಡುತ್ತಾಳೆ ಎಂದು ರೈನ್ ಕೋಟ್ ತಯಾರಕರಿಗೆ ಗೊತ್ತಿದೆ. ಹಾಗಾಗಿ ಜಾಕೆಟ್ – ಪ್ಯಾಂಟ್, ಕೋಟ್ ರೀತಿಯ ರೈನ್ ಕೋಟುಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತವೆ. ಕಾಲೇಜು – ಆಫೀಸುಗಳಿಗೆ ಹೋಗುವ ನಾರಿಯರಂತೂ ಉದ್ದನೆಯ ಕೋಟ್ ರೀತಿಯ ರೈನ್ ಕೋಟ್ ಧರಿಸುತ್ತಾರೆ. ಅದರ ಬಟನ್ ಗಳನ್ನು ಹಾಕಿದಷ್ಟೇ ವೇಗವಾಗಿ ಸುಲಭವಾಗಿ ಕಳಚಬಹುದು. ಲೇಟಾಗಿದ್ರೂ ರೈನ್ ಕೋಟ್ ಬೈಕ್ ಮೇಲಿಟ್ಟು ಹೋಗಬಹುದು. ಆದರೆ ಜಾಕೆಟ್ ಪ್ಯಾಂಟ್ ತೊಟ್ಟರೆ ಅದನ್ನು ಕಳಚುವುದು ಅಷ್ಟು ಸುಲಭವಲ್ಲ. ಬೆಲ್ಟ್ ಸ್ಯಾಂಡಲ್ ಹಾಕಿದ್ದರಂತೂ ಚಪ್ಪಲಿ ತೆಗಿಯಲೇಬೇಕು. ಒಂಟಿ ಕಾಲಿನಲ್ಲಿ ನಿಂತು ಸ್ವಲ್ಪ ಸರ್ಕಸ್ ಮಾಡಲೇಬೇಕು. ಸರ್ಕಸ್ಸು ಒಂಟಿಕಾಲು ಏನೇ ಇರಲಿ. ಈ ರೀತಿಯ ರೈನ್ ಕೋಟ್ ತೊಟ್ಟರೆ ಬೆಚ್ಚನೆ ಇರಬಹುದು. ರೈನ್ ಕೋಟ್ ಒಳಗೆ ಸ್ವಲ್ಪವೂ ನೀರು ಬರುವುದಿಲ್ಲ.
ರೈನ್ ಕೋಟ್ ನಲ್ಲಿ ಗಂಡಸರಿಗಾಗಿ – ಹೆಂಗಸರಿಗಾಗಿ ಎಂದೇನೂ ಪ್ರತ್ಯೇಕ ಕೋಟಾಗಳಿಲ್ಲ. ಕೋಟು ಬೇಕಾದರೆ ಕೋಟು – ಜಾಕೆಟ್ ಪ್ಯಾಂಟ್ ಬೇಕಾದರೆ ಜಾಕೆಟ್ ಪ್ಯಾಂಟು ಬೇಕಾದ್ದನ್ನು ಆರಿಸಿಕೊಳ್ಳಬಹುದು. ಬ್ಯೂಸಿ ಮನುಷ್ಯರೆಲ್ಲಾ ಹೆಚ್ಚಾಗಿ ಕೋಟು ತೆಗೆದುಕೊಳ್ಳುತ್ತಾರೆ. ರೈನ್ ಕೋಟು ಸೀಸನ್ ಗಳಲ್ಲಿ ಎಲ್ಲಾ ರೆಡಿಮೇಡ್ ಮಳಿಗೆಗಳು ರೈನ್ ಕೋಟು ಮಳಿಗೆಗಳಾಗುಗುತ್ತವೆ. ಫೂಟ್ ಪಾಟ್ ಗಳೂ ಮಾರಾಟ ಮಳಿಗೆಗಳಾಗಿ ಬಿಡುತ್ತವೆ. ಫುಟ್ ಪಾಟ್ ನಲ್ಲಾದರೆ ಚೌಕಾಶಿಯೂ ನಡೆಯುತ್ತದೆ. ರೈನ್ ಕೋಟ್ ಗಳು ಹೆಚ್ಚಿನ ಬಾಳಿಕೆ ಬರುವಂತಹವು ಬೇಕಾದರೆ ಅವುಗಳ ಬೆಲೆ ಸಾವಿರ ರೂ.ಗಳಿಗಿಂತಲೂ ಮೇಲಿರುತ್ತದೆ.
ರೈನ್ ಕೋಟ್ ಹಾಕಿಕೊಂಡು ರೈಡ್ ಮಾಡುವಾಗ ಮಳೆಯನ್ನು ಅನುಭವಿಸಿದಷ್ಟು ಕೊಡೆ ಹಿಡಿದು ನಡೆದಾಡಿದಾಗಲೂ ಅನುಭವಿಸಲಾಗುವುದಿಲ್ಲ ಎಂದು ಒಂದೇ ಮಾತಿನಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಶರ್ವಾನ್. ರೈನ್ ಕೋಟ್ ಕಥೆ ಇಲ್ಲಿಗೇ ಮುಗಿದಿಲ್ಲ. ಶಾಲೆಗೆ ಹೋಗುವ ಮಕ್ಕಳು ಭಾರವಾದ ಬ್ಯಾಗ್ ಜೊತೆ ಛತ್ರಿ ಹಿಡಿಯುವ ಕಷ್ಟ ಪಡುವುದು ಬೇಡ ಎಂದು ಅವರಿಗೂ ರೈನ್ ಕೋಟ್ ಕೊಡಿಸುತ್ತಾರೆ. ಅವರು ಮಳೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಬರುವುದನ್ನು ನೋಡಿದರೆ ರೈನ್ ಕೋಟ್ ಹಾಕಿಕೊಳ್ಳುವ ಮನಸ್ಸು ಹಿರಿತಲೆಗಳಿಗೂ ಉಂಟಾಗುತ್ತದೆ. ಮಳೆಯ ನೆನಪನ್ನು ಮತ್ತೆ ಬಿಚ್ಚಿಸುವ ರೈನ್ ಕೋಟ್ ಗೆ ಹ್ಯಾಟ್ಸ್ ಆಫ್ ಎನ್ನಲೇ ಬೇಕಲ್ವಾ?

ಚಿತ್ರ ಕೃಪೆ : ಅಂತರ್ಜಾಲ

12
ನವೆಂ

ಈ ಕಾಯ್ಕಿಣಿ ಖಾಲಿಯಾಗುವುದೇ ಇಲ್ಲವಾ ಅಂತ…

ರಾಕೇಶ್ ಕುಮಾರ್ ಕಮ್ಮಜೆ

ಅನಿಸುತಿದೆ ಯಾಕೋ ಇಂದು

ನೀನೇನೆ ನನ್ನವಳೆಂದು…

‘ಮಂಗಾರು ಮಳೆ’ ಸಿನಿಮಾದ ಈ ಹಾಡು ಅದೆಷ್ಟು ಪ್ರಖ್ಯಾತಿ ಪಡೆಯಿತೆಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಪ್ರತಿಯೊಬ್ಬರ ಬಾಯಲ್ಲೂ ‘ಅನಿಸುತಿದೆ..’ಯದೇ ಅನುರಣನೆ. ಈಗಲೂ ಗುನುಗುವಿಕೆ ನಿಂತು ಹೋಗಿಲ್ಲ. ಯಾರಿಗಾದರೂ ಕರೆ ಮಾಡಿದರೆ ಕೇಳಿಸುವುದು ರಿಂಗ್ ಟೋನಲ್ಲ, ಅನಿಸುತಿದೆ.. ಹಾಡು!

ವಿಷಯ ಅದಲ್ಲ, ಈ ಹಾಡನ್ನು ಬರೆದ ಜಯಂತ ಕಾಯ್ಕಿಣಿ ಇದ್ದಾರಲ್ಲ, ಅವರ ಕಲ್ಪನೆ ಅದೆಷ್ಟು ಸೊಗಸಾಗಿದೆಯೆಂಬುದು! ಅಂದು ಹಾಡು ಬರೆಯಲು ಕೂತ ಕಾಯ್ಕಿಣಿ ಇನ್ನೂ ಅದ್ಭುತ ಅನ್ನಿಸುವಂತಹ ಹಾಡುಗಳನ್ನು ನೀಡುತ್ತಲೇ ಇದ್ದಾರಲ್ಲಾ ಅನ್ನುವುದು!

ನೀವೇ ನೋಡಿ, ಮುಂಗಾರು ಮಳೆಯ ಆ ಹಾಡು ಬಂದ ಕೆಲವೇ ದಿನಗಳಲ್ಲಿ ‘ಈ ಸಂಜೆ ಯಾಕಾಗಿದೆ… ನೀನಿಲ್ಲದೇ..’ ಅನ್ನುವ ನವಿರಾದ ಹಾಡು ಬರೆದರು ಕಾಯ್ಕಿಣಿ. ಅದರ ಗುಂಗು ಮುಗಿಯಿತೆನ್ನುವಷ್ಟರಲ್ಲಿ ‘ಮಿಂಚಾಗಿ ನೀನು ಬರಲು…’ ಅಂದುಬಿಟ್ಟರು. ಅದರ ಛಾಯೆಯಿಂದ ಹೊರಬಂದೆವೆನ್ನುವಷ್ಟರಲ್ಲಿ ‘ನಿನ್ನಿಂದಲೇ…ನಿನ್ನಿಂದಲೇ.. ಕನಸೊಂದು ಶುರುವಾಗಿದೆ…’ ಅನ್ನುವ ಮತ್ತೊಂದು ಅಮೋಘ ಹಾಡನ್ನು ತಯಾರಿಸಿಬಿಟ್ಟರು ಜಯಂತ ಕಾಯ್ಕಿಣಿ. ಅವರ ಸೂಪರ್ ಹಿಟ್ ಹಾಡುಗಳ ಭರಾಟೆ ಅಲ್ಲಿಗೂ ಮುಗಿಯಲಿಲ್ಲ. ಅದೆಲ್ಲಾ ಯಾಕೆ? ಮೊನ್ನೆ ಮೊನ್ನೆ ಬಂದ ‘ಹಾಗೇ ಸುಮ್ಮನೇ’ ಸಿನಿಮಾದ ಅಷ್ಟೂ ಹಾಡುಗಳನ್ನು ಅವರೇ ಬರೆದು ಸೋಜಿಗ ಸೃಷ್ಟಿಸಿದ್ದಾರೆ. ಅಚ್ಚರಿಯೆಂದರೆ ಎಲ್ಲವೂ ಮತ್ತೆ ಮತ್ತೆ ಗುನುಗುವಂಥ ಹಾಡುಗಳೇ! ಇಷ್ಟು ಸಾಲದ್ದಕ್ಕೆ ಈಗ ಬಂದ ‘ಜಂಗ್ಲಿ’ ಸಿನಿಮಾದಲ್ಲೂ ‘ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ…’ ಎಂಬ ಭಲೇ ಹಾಡನ್ನು ರಚಿಸಿ ಯುವಕ-ಯುವತಿಯರೆದೆಯಲ್ಲಿ ಸಂಚಲನ ತಂದಿದ್ದಾರೆ. ಮತ್ತಷ್ಟು ಓದು »

11
ನವೆಂ

ಕನಸು ನನಸಾದಾಗ…………..

ಅರವಿಂದ್

ಇವತ್ತು ನಿಮ್ಮೊಂದಿಗೆ ಒಂದು ಸುಂದರ ಕನಸುಗಳನ್ನ ಹಂಚಿಕೊಳ್ಳುವ ಇರಾದೆ. ಕನಸುಗಳೆಂದರೆ ಕಪ್ಪು ಬಿಳಿಪಿನ ಕನಸೇ, ಕಲರ್ ಪುಲ್ ಕನಸೇ ? ಅಕಸ್ಮಾತ್ ಕನಸು ಕಪ್ಪು ಬಿಳುಪಾಗಿಯು ಬೀಳ್ತವೆಯೇ ? (ಇದುವರೆಗೂ ಯಾವ ಕನಸು ನನಗಂತೂ ಕಪ್ಪು ಬಿಳುಪಾಗಿ ಬಿದ್ದಿಲ್ಲ ) 🙂 ನನದು ಒಂದು ಕಲರ್ ಪುಲ್ ಕನಸ ಕೇಳಿ ………,

ನೆನ್ನೆ ರಾತ್ರಿ ಮಲಗುವಾಗಲೇ ತಡವಾಯ್ತು ಬಹುಶಃ ಎರಡು ಮೂರು ಘಂಟೆ ಇರಬಹುದು. ಸ್ವಲ್ಪ ಹೊತ್ತಿನಲ್ಲೇ ವಾಸ್ತವದಲ್ಲಿ ನನಗೆ ಪರಿಚಯವಿಲ್ಲದವರೊಬ್ಬರು, ಆದರೆ ತುಂಬಾ ಪರಿಚಿತರಂತೆ ಮಾತನಾಡುತಿದ್ದಾರೆ. ಎಷ್ಟು ಹೊತ್ತಾದರೂ ಅವರ ಮುಖವೇ ಕನಸಿನಲ್ಲಿ ಮೂಡುತ್ತಿಲ್ಲ . ಆದರೆ ಆ ಧ್ವನಿ ನನಗೆ ತುಂಬಾ ಪರಿಚಿತವೇನೋ ಎಂಬಂತೆ, ಎಚ್ಚರವಾದರೂ ಅವರೊಂದಿಗೆ ಮಾತಾನುದುತ್ತಿರುವಂತೆ ಭಾಸ. ಅಷ್ಟರೊಳಗೆ ಬೆಳಗಿನ ಜಾವವಾದ್ದರಿಂದ ನಾನು ನನ್ನ ನಿತ್ಯ ಕೆಲಸಗಳಲ್ಲಿ ತೊಡಗಿಕೊಂಡೆ, ಇಂದು ಮಧ್ಯಾನ್ಹ ೧೨ಕ್ಕೆ ನನ್ನ ಕಚೇರಿಯಲ್ಲಿ ಅಕೌಂಟ್ ಅಸಿಸ್ಟಂಟ್ ಹುದ್ದೆಗೆ ಸಂದರ್ಶನವಿತ್ತು. ಅಷ್ಟರೊಳಗೆ ನಾನು ಆ ಕನಸನ್ನು ಮರೆತುಹೋಗಿದ್ದೆ. ಸಂದರ್ಶನಕ್ಕೆ ಬಂದ ೫ ಜನರಲ್ಲಿ ೨ ಹುಡುಗಿಯರು ಮತ್ತೆಲ್ಲ ಹುಡುಗರು. ಆಗತಾನೆ ಪದವಿ ಮುಗಿಸಿ ಬಂದಿದ್ದ ಹೊಸಬರು. ಒಬ್ಬೊಬ್ಬರಾಗಿ ಸಂದರ್ಶನಕ್ಕೆ ಹಾಜರಾಗುತ್ತಿದ್ದರು. ಇನ್ನೇನು ಎಲ್ಲರ ಸಂದರ್ಶನ ಮುಗಿಸುವ ಹೊತ್ತಿಗೆ ಮತ್ತೊಂದು ಹುಡುಗಿಯು ಸಂದರ್ಶನಕ್ಕೆ ಬಂದಿದ್ದಾಳೆ ಎಂದು ನನ್ನ ಕಚೇರಿಯ ಸ್ವಾಗತಕಾರಿಣಿ ಪೋನ್ ಮೂಲಕ ಮೀಟಿಂಗ್ ರೂಮಲ್ಲಿದ್ದ ನನಗೆ ತಿಳಿಸಿದಳು, ಆಗಲೇ ಘಂಟೆ ೧.೩೦ ಆಗಿತ್ತು. ಸರಿ ಆಕೆಯನ್ನು ಸಂದರ್ಶನಕ್ಕೆ ಬರಲು ಹೇಳಿ, ಈಗಾಗಲೇ ಸಂದರ್ಶಿಸಿದವರಲ್ಲಿ ಯಾರು ಉತ್ತಮರೆಂದು ಮನಸ್ಸಿನಲ್ಲೆ ಲೆಕ್ಕಾಚಾರ ಹಾಕುತ್ತಿದ್ದೆ. ಒಳಗೆ ಬರಬಹುದ ?????????? ಎಂದು ಕೇಳಿದ ಧ್ವನಿಗೆ ಆಶ್ಚರ್ಯಚಕಿತನಾದೆ, ಏಕೆಂದರೆ ಇದೆ ಧ್ವನಿಯನ್ನು ತಾನೇ ಕನಸಿನಲ್ಲಿ ಕೇಳಿದ್ದು. ಒಂದು ಕ್ಷಣ ಮೂಕ ವಿಸ್ಮಿತನಂತಾಗಿ, ಕಮಿನ್ ಎಂದು ಹೇಳಿದೆ. “ನ್ಯೆಸ್ ” ಟೆಲ್ ಮಿ ಅಬೌಟ್ ಯುವರ್ ಸೇಲ್ಪ್ಹ್ ? ಅಂತಷ್ಟೇ ಉಗುಳು ನುಂಗಿಕೊಂಡು ಹೇಳಿದ್ದು. ಆ ಹುಡುಗಿಯ ಹೆಸರು ಮಾನಸ, ಊರು ಶಿವಮೊಗ್ಗದ ಹತ್ತಿರ ಶಿರಾಳಕೊಪ್ಪ, ಆ ಕಡೆಯಿಂದ ಉಳಿಯಿತು ಆ ಧ್ವನಿ. ಆಕೆ ಏನೇನೋ ಹೇಳತೊಡಗಿದಳು, ಒಂದು ಯಾವುದು ಕೇಳಿಸಿದಂತಾಯಿತು. ಒಂದೈದು ನಿಮಿಷ ಕಾಟಾಚಾರಕ್ಕೆ ಮಾತಾಡಿ ಆಕೆಯನ್ನು ಹೊರಡುವಂತೆ ಹೇಳಿ ಹೊರಬಂದೆ. ಮತ್ತಷ್ಟು ಓದು »

11
ನವೆಂ

ಈಗಿನವರು ಪ್ರೇಮ ಪತ್ರವನ್ನೂ ಬರೆಯುವುದಿಲ್ಲ, ಛೆ!

ರಾಕೇಶ್ ಕುಮಾರ್ ಕಮ್ಮಜೆ

ಪ್ರೀತಿಯ ಅಮ್ಮ,
ಬೇಡುವ ಆಶೀರ್ವಾದಗಳು. ಹೇಗಿದ್ದೀಯಾ? ಚೆನ್ನಾಗಿದ್ದಿ ತಾನೆ? ಅಪ್ಪ, ಅಣ್ಣ, ಎಲ್ಲರೂ ಕುಶಲವಷ್ಟೇ? ನಾನಂತೂ ತುಂಬಾ ಆರಾಮ.

ಹಾಂ, ಅಮ್ಮ,.. ಮೊನ್ನೆ ನಮಗೆ ಪರೀಕ್ಷೆಯಿತ್ತು. ಪರವಾಗಿಲ್ಲ ಪಾಸಾದೇನು! ಅಂದ ಹಾಗೆ ಅಮ್ಮ, ಇನ್ನೆರಡು ವಾರ ಕಳೆದರೆ ನಮಗೆ ರಜ ಸಿಗುತ್ತದೆ. ಮತ್ತೆ ಮನೆಗೆ ಬಂದು ನಿನ್ನ ಮಡಿಲಲ್ಲಿ ಮಲಗಿ ನಿದ್ರಿಸಬಹುದು…

ಅಮ್ಮ, ಆ ಎಮ್ಮೆ ಈಗ ನೆಟ್ಟಗೆ ಕರೆಯಲು ಬಿಡುತ್ತದೆಯೋ ಇಲ್ಲವೋ? ಮತ್ತೆ ದನ ಕರುಗಳು, ಹಗಲಿರುಳೂ ಸುಮ್ಮನೇ ತಲೆಹರಟೆ ಮಾಡುವ ನಾಯಿ, ಇಲಿಯೊಂದಿಗೆ ಫ್ರೆಂಡ್ ಶಿಪ್ ಮಾಡಿಕೊಂಡಿರುವ ಬೆಕ್ಕು…ಎಲ್ಲವೂ ಏನು ಮಾಡುತ್ತಿವೆ? ಬಂದಾಗ ಎಲ್ಲದರ ಹಣೆಗೂ ಮುತ್ತುಕೊಟ್ಟು ಮುದ್ದಾಡಬೇಕು ನಾನು.

ಸರಿ ಅಮ್ಮ, ಬೇರೇನೂ ವಿಶೇಷವಿಲ್ಲ. ಇಂದಿನಿಂದ ಹದಿನೈದನೇ ದಿನಕ್ಕೆ ಮನೆಯಲ್ಲಿರುತ್ತೇನೆ. ಅಲ್ಲಿಯವರೆಗೆ ನಿನ್ನದೇ ನೆನಪುಗಳು…
ಪ್ರೀತಿಯಿಂದ, ಮತ್ತಷ್ಟು ಓದು »

10
ನವೆಂ

ಬರಾಕ್ ಓಬಾಮನ ವಿವಿಧ ವೇಷಗಳು

ಅರವಿಂದ್

ಒಬಾಮ ಭಾರತೀಯ ರಾಜಕಾರಣಿಗಳ ವೇಷಧಾರಿಯಾದರೆ ಹೇಗಿರಬಹುದು ?

ಹೀಗೆಲ್ಲಾ ಇರಬಹುದಾ………….


image001

image002

image003

image004

image005

 ಮತ್ತಷ್ಟು ಓದು »