ನಾಡು- ನುಡಿ:ಮರುಚಿಂತನೆ :– “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 5
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ಕುರುಬರ ಮೂಲವನ್ನು ಕುರಿತಾದ ವಿಶ್ಲೇಷಣೆಗಳನ್ನು ನೋಡವುದಾದರೆ ಪ್ರಸ್ತುತ ಲಭ್ಯವಿರುವ ಸಾಹಿತ್ಯವು ಕುರುಬರ ಮೂಲಕ್ಕೆ ಕೆಲವು ಕಥೆ ಮತ್ತು ಪುರಾಣಗಳನ್ನು ಆಧಾರವಾಗಿರಿಸಿರುವುದನ್ನು ಕಾಣಬಹುದಾಗಿದೆ. ಉದಾಹರಣೆಗೆ ಹಾಲುಮತ ಪುರಾಣ ಮತ್ತು ಉಂಡಾಡು ಪದ್ಮಣ್ಣನ ಕಥೆಗಳು ಕುರುಬರ ಮೂಲದ ಕುರಿತಾದ ವಿಶ್ಲೇಷಣೆಗಳನ್ನು ಬಹಳವಾಗಿ ಪ್ರಭಾವಿಸಿದೆ. ಇದನ್ನು ನಾವು ಕುರುಬರ ಕುರಿತಾಗಿ ಅಧ್ಯಯನ ನಡೆಸಿರುವ ಪಾಶ್ಚಾತ್ಯ ಚಿಂತಕರಾದ ಎಡ್ಗರ್ ಥಸ್ರ್ಟನ್ ರವರ ದಿ ಟ್ರೈಬ್ಸ್ ಅಂಡ್ ಕ್ಯಾಸ್ಟ್ ಆಫ್ ಸೌಥ ಇಂಡಿಯಾ (1987) ಮತ್ತು ಎಂಥೋವೆನ್ ರವರ ದಿ ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಬಾಂಬೆ, (1990) ಪುಸ್ತಕಗಳ ವಿವರಗಳಲ್ಲಿಯೇ ಗುರುತಿಸಬಹುದಾಗಿದೆ. ಕುರುಬರ ಮೂಲವನ್ನು ಕುರಿತಾಗಿ ಹಲವಾರು ಕಥೆಗಳು ಚಾಲಿಯಲ್ಲಿವೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಕುರುಬರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾದಂತಹ ಕಥೆಗಳನ್ನು ಹೇಳುವುದು ಅಲ್ಲದೇ, ಈ ಎಲ್ಲಾ ಕಥೆಗಳು ಅಂದಿನ ಅಥವಾ ಆ ಪ್ರದೇಶದ ಜಾನಪದ ಹಿನ್ನೆಲೆಯಲ್ಲಿ ರೂಪ ಪಡೆದಿದ್ದು, ಮೌಖಿಕವಾಗಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬದಲಾವಣೆಗಳೊಂದಿಗೆ ಉಳಿದು ಬಂದಿವೆ ಎಂಬುದು ಸ್ಪಷ್ಟವಾಗುತ್ತದೆ. ಮತ್ತು ಈ ಎಲ್ಲಾ ಕಥೆಗಳು ಕುರುಬರ ಮೂಲವನ್ನೇ ವಿವರಿಸುತ್ತವೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಅಲ್ಲದೇ ಬಹುಪಾಲು ಉಪಜಾತಿಗಳು (ಅವುಗಳನ್ನು ಉಪಜಾತಿಗಳು ಎಂದು ಹೇಗೆ ಗುರುತಿಸುವುದು ಎನ್ನುವುದು ಬೇರೆಯದೇ ಪ್ರಶ್ನೆ) ತಮ್ಮದೇ ಆದಂತಹ ಬೇರೆ ಬೇರೆ ಕಥೆಗಳನ್ನು ಹೇಳುವುದು ಕಂಡುಬರುತ್ತದೆ. ಕುರುಬ ಸಮುದಾಯದಲ್ಲಿನ ಆಚರಣೆ ಮತ್ತು ಉಪಜಾತಿಗಳ ಕುರಿತಾದ ವಿವರವನ್ನು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗಲಿದೆ.
ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 3
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ಜಾತಿ ವರ್ಗೀಕರಣದ ಬಗ್ಗೆ ಅನೇಕ ಜನಾಂಗ ಅಧ್ಯಯನಕಾರರು ಮತ್ತು ಸಮಾಜಶಾಸ್ತ್ರಜ್ಞರುಗಳು ವಿವರಣೆಗಳನ್ನು ನೀಡಿದರೂ ಸಹ ಅದರ ಬಗೆಗಿನ ಅಸ್ಪಷ್ಟತೆ ಹಾಗೆಯೇ ಮುಂದುವರೆದಿದೆ. ಈ ಸಂಗತಿಯ ಬಗ್ಗೆ ಅಧ್ಯಯನಕಾರರು ನೀಡಿರುವ ವಿವರಣೆಗಳನ್ನು ನೋಡುತ್ತಾ ಹೋದಂತೆ ಮುಖ್ಯವಾದ ಕೆಲವು ಸಮಸ್ಯೆಗಳಿರುವುದು ಕಂಡುಬರುತ್ತವೆ. ಅವುಗಳನ್ನು ಕೆಳಗಿನಂತೆ ನೋಡೋಣ.
ಜಾತಿ, ಉಪ-ಜಾತಿ – ರಚನಾಂಶದ ಸಮಸ್ಯೆ: ಜನಾಂಗ ಮತ್ತು ಸಮಾಜಶಾಸ್ತ್ರ ಅಧ್ಯಯನಕಾರರು ಜಾತಿ, ಉಪ-ಜಾತಿಯ ರಚನಾಂಶಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ನೀಡುವಾಗ ಒಳವಿವಾಹ ಪದ್ಧತಿ(Endogamy)ಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದಾರೆ, ಮತ್ತು ಇಂದಿನ ಸಮಾಜಶಾಸ್ತ್ರಜ್ಞರುಗಳು ಜಾತಿ, ಉಪ-ಜಾತಿಯ ರಚನಾಂಶವೆಂದರೆ ಒಳವಿವಾಹ ಪದ್ಧತಿ ಎಂದೇ ನಿಖರವಾಗಿ ಹೇಳುತ್ತಾರೆ. ಅಧ್ಯಯನಕಾರರು ಇಷ್ಟು ನಿಖರತೆಯಿಂದ ಹೇಳಿದರೂ ಸಹ ಜಾತಿಯ ರಚನಾಂಶದ ಕುರಿತಂತೆ ಸ್ಪಷ್ಟತೆಯಿಲ್ಲ. ಒಳವಿವಾಹ ಪದ್ಧತಿಯು ಜಾತಿಯ ರಚನಾಂಶ ಎಂದು ಒಬ್ಬ ಅಧ್ಯಯನಕಾರನು ತನ್ನ ಅಧ್ಯಯನದ ತಿರುಳನ್ನು ಮುಂದಿಟ್ಟರೆ, ಇಲ್ಲ ಒಳವಿವಾಹ ಪದ್ಧತಿಯು ಉಪ-ಜಾತಿಯ ನಿರ್ಣಾಯಕ ರಚನಾಂಶ ಎಂದು ಮತ್ತೊಬ್ಬ ಅಧ್ಯಯನಕಾರನು ಪ್ರತಿವಾದವನ್ನು ಮುಂದಿಡುವುದು ಕಂಡುಬರುತ್ತದೆ. ಇದರ ಜೊತೆಗೆ (ಏಕಕಾಲದಲ್ಲಿಯೇ) ಜಾತಿ, ಉಪ-ಜಾತಿ ಎರಡು ಘಟಕಗಳೂ ಸಹ ಒಳ ವಿವಾಹ ಪದ್ಧತಿಯ ಗುಂಪುಗಳು ಎಂಬ ವಾದಗಳೂ ಕೂಡ ಲಭ್ಯವಿದೆ. ಅಧ್ಯಯನಕಾರರ ವಿವರಣೆಗಳನ್ನು ಗಮನಿಸಿದರೆ ಒಳವಿವಾಹ ಪದ್ಧತಿಯು ಜಾತಿ, ಉಪ-ಜಾತಿ ಮತ್ತು ಕೆಲವೊಮ್ಮೆ ಉಪ-ಉಪ-ಜಾತಿಯ ರಚನಾಂಶವೂ ಸಹ ಆಗುತ್ತದೆ. ಹಾಗೂ ಏಕಕಾಲದಲ್ಲಿಯೇ ಇದು ಜಾತಿ ಮತ್ತು ಅದರ ಉಪ-ಜಾತಿಗಳ ರಚನಾಂಶವೂ ಸಹ ಆಗುತ್ತದೆ. ಈ ವಿವರಣೆಗಳು ಮುಂದಿನ ಪ್ರಶ್ನೆಗಳಿಗೆ ದಾರಿ ಮಾಡಿಕೊಡುತ್ತಿವೆ; ಜಾತಿಯು ಒಳವಿವಾಹ ಪದ್ಧತಿಯ ಘಟಕವಾಗಿ ಮತ್ತು ಅದರ ಉಪ-ಜಾತಿಗಳೂ ಸಹ ಒಳವಿವಾಹ ಪದ್ಧತಿಯ ಘಟಕಗಳಾದರೆ ಜಾತಿಯು ಅದರ ಉಪ-ಜಾತಿಗಳೊಡನೆ ಯಾವ ರೀತಿಯ ಸಂಬಂಧ ಹೊಂದಿರುತ್ತದೆ? ಹಾಗೆಯೇ ಒಂದು ಜಾತಿಯ, ಉಪ-ಜಾತಿಗಳು ಮಧ್ಯೆ ವೈವಾಹಿಕ ಸಂಬಂಧ ಏರ್ಪಡುವುದಿಲ್ಲ ಎಂದಾದ ಮೇಲೆ ಉಪ-ಜಾತಿಗಳು ಪರಸ್ಪರ ಯಾವ ರೀತಿಯ ಸಂಬಂಧವನ್ನು ಹೊಂದಿರುತ್ತವೆ? ಆದ್ದರಿಂದ ಯಾವ ನಿರ್ದಿಷ್ಟ ಅಂಶವು ಒಂದು ಜನಗುಂಪನ್ನು ‘ಜಾತಿ’ಯನ್ನಾಗಿಸುತ್ತದೆ ಎಂಬುದರ ಕುರಿತಾಗಲೀ ಅಥವಾ ಯಾವ ಇನ್ನೊಂದು ನಿರ್ದಿಷ್ಟ ಅಂಶವು ಒಂದು ಜನಗುಂಪನ್ನು ‘ಉಪ-ಜಾತಿ’ಯನ್ನಾಗಿಸುತ್ತದೆ ಎಂಬುದರ ಕುರಿತಾಗಲೀ ಸ್ಪಷ್ಟತೆಯಿಲ್ಲ. ಮತ್ತಷ್ಟು ಓದು 
ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೨
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೧
ನವ ಸಾಮಾಜಿಕ ಚಳುವಳಿ ಸಿದ್ಧಾಂತಗಳು:
1960 ಹಾಗೂ 70ರ ದಶಕದಲ್ಲಿ ಪ್ರಾರಂಭವಾದ ನವ ಸಾಮಾಜಿಕ ಚಳುವಳಿ ಸಿದ್ಧಾಂತಗಳು ಮಾರ್ಕ್ಸ್ ವಾದಿ ನಿಲುವುಗಳಿಗಿಂತ ಭಿನ್ನವಾದ ನಿಲುವನ್ನು ಮುಂದಿಡಲು ಯಶಸ್ವಿಯಾದವು. ವರ್ಗಾದಾರಿತವಲ್ಲದ ಅಸ್ಮಿತೆಯ ರಾಜಕೀಯ ಕೇವಲ ಸಾಂಕೇತಿಕ ಎನ್ನುವ ಮಾರ್ಕ್ಸ್ ವಾದಿ ನಿಲುವನ್ನು ಇವು ಅಲ್ಲಗಳೆಯುತ್ತವೆ. ಈ ಸಿದ್ಧಾಂತವು ಅಸ್ಮಿತೆ ರಾಜಕೀಯವನ್ನು ಒಂದು ವಿಶಿಷ್ಟ ಬಗೆಯ ರಾಜಕೀಯ ಎಂದೇ ಪ್ರತಿಪಾದಿಸುತ್ತದೆ. ಅಸ್ಮಿತೆಯಾದಾರಿತ ಚಳುವಳಿಗಳನ್ನು ಆಧುನಿಕತೆಯ ಪರಿಣಾಮವಾಗಿ ಆರ್ಥಿಕ ಮತ್ತು ಸಾಮಾಜಿಕ ವಲಯದ ಉನ್ನತ ಸ್ಥರದಲ್ಲಿ ಆದ ರಾಚನಿಕ ಬದಲಾವಣೆ ಅಸ್ಮಿತೆ ರಾಜಕೀಯವನ್ನು ಹುಟ್ಟು ಹಾಕಿದೆ ಮತ್ತು ಇದೊಂದು ಐತಿಹಾಸಿಕವಾದ ಸಾಮೂಹಿಕ ಪ್ರತಿಕ್ರಿಯೆ ಎಂದು ಈ ಸಿದ್ಧಾಂತದ ಪ್ರತಿಪಾದನೆಯಾಗಿದೆ. ಕೆಲವು ವಿದ್ವಾಂಸರು ಹೇಳುವಂತೆ ಅಸ್ಮಿತೆ ರಾಜಕೀಯವು ಕೈಗಾರಿಕೋತ್ತರ ಸಮಾಜದಲ್ಲಾಗುತ್ತಿರುವ ಒಂದು ಬಗೆಯ ಸ್ಥಿತ್ಯಂತರ (ಟೌರಿನ್ 1981). ಹಬರ್ಮಾಸ್ರವರ ಅಭಿಪ್ರಾಯದಲ್ಲಿ ಅಸ್ಮಿತೆ ಚಳುವಳಿಗಳು ಪ್ರಭುತ್ವದ ನಿಯಂತ್ರಣ ಹಾಗೂ ಅದರ ನಿರ್ಣಯಗಳ ಒತ್ತಡಕ್ಕೆ ಹೆಚ್ಚು ಹೆಚ್ಚಾಗಿ ಒಳಗಾಗುತ್ತಿರುವ ಸಮುದಾಯಗಳು ಅಂತಹ ಹಿಡಿತದಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ಫಲವಾಗಿವೆ (ಹಬರ್ಮಾಸ್ 1985).
ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೧
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ರಾಜಕೀಯ ಸಿದ್ಧಾಂತದಲ್ಲಿ ಅಸ್ಮಿತೆ ರಾಜಕೀಯದ ಪರಿಕಲ್ಪನೆ ಪ್ರಬಲವಾಗಿದ್ದು 20ನೇ ಶತಮಾನದ ಉತ್ತರಾರ್ಧದಲ್ಲಿ. ತಮ್ಮ ಅಸ್ತಿತ್ವ ಸಂಪೂರ್ಣ ಅವಗಣನೆಗೆ ಒಳಗಾಗಿದೆ ಮತ್ತು ಆ ಕಾರಣದಿಂದ ತಮ್ಮನ್ನು ಪ್ರಾತಿನಿಧ್ಯದಿಂದ ವಂಚಿತರನ್ನಾಗಿಸಿ ರಾಜಕೀಯ ಮುಖ್ಯವಾಹಿನಿಯಿಂದ ದೂರವಿರಸಲಾಗಿದೆ ಎನ್ನುವ ಭಾವನೆ ಬೆಳೆಸಿಕೊಂಡ ಒಂದು (ಸಾಮಾಜಿಕ/ಸಾಂಸ್ಕೃತಿಕ) ಗುಂಪು ರಾಜಕೀಯ ಸಂಚಲನೆಗೆ ತೊಡಗುವ ಪ್ರಕ್ರಿಯೆಯನ್ನು ಅಸ್ಮಿತೆ ರಾಜಕೀಯ ಎಂದು ಕರೆಯಲಾಗುತ್ತದೆ. ಸಾರ್ವತ್ರಿಕ ಒಳಿತು ಅಸ್ಮಿತೆ ರಾಜಕೀಯದ ಗುರಿಯಾಗಿರುವುದಿಲ್ಲ ಮತ್ತು ಅಂತಹ ರಾಜಕೀಯ ಹೋರಾಟ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟ ತನ್ನನ್ನು ಮುಖ್ಯವಾಹಿನಿಯೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುವುದು ಒಂದು ಗುಂಪಿನ ಅಸ್ಮಿತೆ ರಾಜಕೀಯದ ಮುಖ್ಯ ಉದ್ದೇಶವಾಗಿರುತ್ತದೆ.
20ನೇ ಶತಮಾನದ ಉತ್ತರಾರ್ಧದಲ್ಲಿ ಅಮೇರಿಕಾ ದೇಶದಲ್ಲಿ ಪ್ರಾರಂಭವಾದ (ದ್ವಿತೀಯ ಹಂತದ) ಸ್ತ್ರೀವಾದೀ ಚಳುವಳಿ, ಕರಿಯರ ನಾಗರೀಕ ಹಕ್ಕುಗಳ ಹೋರಾಟ, ಸಲಿಂಗಿಗಳು ತಮ್ಮ ಹಕ್ಕಿಗಳಿಗಾಗಿ ಮಾಡಿದ ಹೋರಾಟ ಮೊದಲಾದವುಗಳನ್ನು ಅಸ್ಮಿತೆ ರಾಜಕೀಯ ಎಂದು ಮೊತ್ತ ಮೊದಲ ಬಾರಿಗೆ ಗುರುತಿಸಲಾಯಿತು. ಈ ಎಲ್ಲಾ ಗುಂಪುಗಳು ತಮ್ಮ ವಿಶಿಷ್ಟ ಅಸ್ಮಿತೆಯನ್ನು ಗುರುತಿಸಿ ಗೌರವಿಸದೆ ಆ ಕಾರಣಕ್ಕಾಗಿ ತಾವು ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟ ಪ್ರಕ್ರಿಯೆಯ ವಿರುದ್ಧ ಹೋರಾಟ ಪ್ರಾರಂಬಿಸಿದವು. ತಾವು ಸಾಮಾಜಿಕವಾಗಿ ರಾಜಕೀಯವಾಗಿ ತುಳಿತಕ್ಕೊಳಗಾಗಿದ್ದೇವೆ ಎನ್ನುವ ಭಾವನೆಯನ್ನು ಆಧರಿಸಿ ಅಸ್ಮಿತೆ ರಾಜಕೀಯದ ಸಂಘಟನೆಯು ತನ್ನ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಅಸ್ಮಿತೆ ರಾಜಕೀಯ ಎಂದು ಕರೆಯಲ್ಪಡುವ ರಾಜಕೀಯ/ಸಾಮಾಜಿಕ ಚಳುವಳಿಗಳ ವ್ಯಾಪ್ತಿ ವಿಶಾಲವಾದುದಾಗಿದೆ. ರಾಜಕೀಯ ಶಾಸ್ತ್ರದ ಅಧಯಯನಗಳಲ್ಲಿ ಅಸ್ಮಿತೆ ರಾಜಕೀಯಕ್ಕೆ ಸಂಬಂದಿಸಿದ ಬರವಣೆಗೆಗಳು ಪಾಶ್ಚಾತ್ಯ ಬಂಡವಾಳಿಶಾಹಿ ಪ್ರಜಾಪ್ರಭುತ್ವಗಳಿಗೆ ಸಂಬಂದಿಸಿರುತ್ತವೆ. ಬಂಡವಾಳಶಾಹಿ ವ್ಯವಸ್ಥೆಯ ಹಿಡಿತ ಪ್ರಬಲವಾಗುತ್ತಾ ಹೋದ ಹಾಗೆ ಪರಂಪರಾನುಗತವಾಗಿ ಬಂದ ಸಮುದಾಯಗಳು ತಮ್ಮ ಅಸ್ಮಿತೆಗಳನ್ನು ಕಳೆದುಕೊಳ್ಳುತ್ತಾ ಹೋಗಿ ಅಂತಹ ಸಮುದಾಯಗಳ ಸದಸ್ಯರಲ್ಲಿ ಪರಕೀಯತೆಯ ಭಾವನೆ ಹೆಚ್ಚಗುತ್ತಾ ಹೋದದ್ದರ ಪರಿಣಾಮದಿಂದಾಗಿ ಅಸ್ಮಿತೆ ರಾಜಕೀಯ ಹುಟ್ಟಿಕೊಂಡಿದೆ ಎಂದು ಕೆಲವರು ಭಾವಿಸುತ್ತಾರೆ.
ಮತ್ತಷ್ಟು ಓದು 
ನಾಡು-ನುಡಿ: ಮರುಚಿಂತನೆ
ಸಮಾಜ ವಿಜ್ಞಾನದ ಪರಿಭಾಷೆಗಳನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಹಾಗೂ ಇದುವರೆಗೂ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಕುರಿತ ಚಿತ್ರಣಗಳನ್ನು ಮರುಪರಿಶೀಲನೆ ಮಾಡುತ್ತಾ, ಭಾರತೀಯರ ಬದುಕನ್ನು ಪ್ರತಿನಿಧಿಸುವ ನೈಜ ವಿವರಣೆಗಳನ್ನು ಕಟ್ಟಲು ಸಾಧ್ಯವೇ ಎಂದು ಕಂಡುಕೊಳ್ಳುವ ಒಂದು ಚಿಕ್ಕ ಪ್ರಯತ್ನದ ಉದ್ದೇಶವನ್ನು ಹೊಂದಿರುವ “ನಾಡು-ನುಡಿ: ಮರುಚಿಂತನೆ” ಅಂಕಣ ನಿಲುಮೆಯ ಓದುಗರಿಗಾಗಿ – ನಿಲುಮೆ
ಒಂದು ವಿಷಯದ ಕುರಿತು ಸಾಮಾನ್ಯವಾಗಿ ಎರಡು ತರಹದ ಜ್ಞಾನವಿರುತ್ತದೆ. ಒಂದು, ಸಾಮಾನ್ಯ ಜ್ಞಾನ, ಎರಡು, ವಿಶಿಷ್ಟ ಜ್ಞಾನ ಅಥವಾ ಅಧ್ಯಯನದಿಂದ ಮೂಡಿಬರುವ ತಿಳುವಳಿಕೆ. ಸಾಮಾನ್ಯ ಜ್ಞಾನವು ಯಾವುದೋ ಒಂದು ಕಾಲಘಟ್ಟದಲ್ಲಿದ್ದ ವಿಶಿಷ್ಟ ಜ್ಞಾನದ ಪಲಶೃತಿಯೇ ಆಗಿರುತ್ತದೆ. ವಿಶಿಷ್ಟ ಜ್ಞಾನವು ಶೈಕ್ಷಣಿಕ ಕ್ಷೇತ್ರದಿಂದ ಹೊರಗೆ ಹೋಗುವಾಗ ಮತ್ತು ಶ್ರೀಸಾಮಾನ್ಯರ ಬಳಿ ಹರಡುವಾಗ ಅದು ಸಾಮಾನ್ಯಜ್ಞಾನದ ರೂಪವನ್ನು ತಳೆಯುತ್ತದೆ. ಆದರೆ ವಿಶಿಷ್ಟ ಜ್ಞಾನವು ತನ್ನ ಅಸ್ತಿತ್ವದಲ್ಲಿ ಮತ್ತು ಸ್ವಭಾವದಲ್ಲಿ ಸಾಮಾನ್ಯ ಜ್ಞಾನದಂತೆ ಸಾರ್ವಕಾಲಿಕವಾಗಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಏಕೆಂದರೆ ವಿಶಿಷ್ಟ ಜ್ಞಾನವು ಕಾಲದಿಂದ ಕಾಲಕ್ಕೆ ಪರಿಷ್ಕೃತಗೊಳ್ಳುತ್ತಾ ಹೋಗುತ್ತದೆ. ಆಗ ಮಾತ್ರವೇ ಅದು ವಿಶಿಷ್ಟ ಜ್ಞಾನವಾಗಿ ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅದು ಸಾಮಾನ್ಯಜ್ಞಾನವಾಗಿ ಬದಲಾಗುತ್ತದೆ. ಸಾಮಾನ್ಯಜ್ಞಾನವು ಪರಿಷ್ಕರಣೆಗೆ ಒಳಗಾಗದೆ ಯಾವುದೋ ಕಾಲದ ವಿಶಿಷ್ಟ ಜ್ಞಾನವನ್ನೇ ಸಾರ್ವಕಾಲಿಕ ಸತ್ಯ ಎಂಬಂತೆ ಪುನರುತ್ಪಾದಿಸುತ್ತಿರುತ್ತವೆ. ಇದೇ ರೀತಿ, ಭಾರತೀಯ ಸಮಾಜದ ಕುರಿತು ಸಾಮಾನ್ಯ ಜ್ಞಾನ ಹಾಗೂ ವಿಶೇಷ ಜ್ಞಾನಗಳಿಗೆ ವ್ಯತ್ಯಾಸವಿರದ ರೀತಿಯಲ್ಲಿ ಮಾತನಾಡುವ ಸಂದರ್ಭವೇರ್ಪಟ್ಟಿದೆ. ಇದಕ್ಕೆ ಕಾರಣವೆಂದರೆ ಸಮಾಜದ ಕುರಿತು ಮಾತನಾಡುವವರು ಸಾಮಾನ್ಯಜ್ಞಾನವನ್ನು ಆಧರಿಸಿ ಸಮಾಜವಿಜ್ಞಾನ ಎಂಬಂತೆ ಮಾತನಾಡುತ್ತಿರುತ್ತಾರೆ. ಸಮಾಜದಲ್ಲಿ ಯಾವುದೇ ಘಟನೆಗಳು ಸಂಭವಿಸಿದರೆ ಕೆಲವು ಹಿಂದಿನಿಂದ ಬಂದಂತಹ ತಿಳುವಳಿಕೆಯ ಆಧಾರದ ಮೇಲೆಯೇ ಅವುಗಳಿಗೆ ಸಮಜಾಯಶಿ ಕೊಡಲಾಗುತ್ತಿರುತ್ತದೆ. ನಡೆದ ಘಟನೆಯ ಕುರಿತು ಅಧ್ಯಯನ ನಡೆಸಿ ಮಾತನಾಡುವ ಕ್ರಮವನ್ನು ಸಾಮಾನ್ಯ ಜ್ಞಾನದ ಅರೆ ತಿಳುವಳಿಕೆಯು ಮೂಲೆಗುಂಪು ಮಾಡುತ್ತಿದೆ.
ಬಸವ ಚಳುವಳಿಯನ್ನು ಕಾಡುತ್ತಿರುವ ಸಾಹಿತ್ಯ ಲೋಕದ ಬು(ಲ)ದ್ಧಿ ಜೀವಿಗಳು !
– ವಿಶ್ವಾರಾಧ್ಯ ಸತ್ಯಂಪೇಟೆ, ಶಹಾಪುರ
ಇಷ್ಟು ದಿನಗಳವರೆಗೆ ಧಾರ್ಮಿಕ ಲೋಕದ ಗುಂಗಾಡುಗಳು ಬಸವಣ್ಣನರನ್ನು ಕಾಡುತ್ತಿದ್ದವು. ಅವರು ರಚಿಸಿದ ವಚನಗಳಿಗೆ ತದ್ವಿರುದ್ಧವಾಗಿ ತಾವು ಬದುಕಿದ್ದಲ್ಲದೆ ತಮ್ಮ ಭಕ್ತರ ಹಿಂಡನ್ನು ತಮ್ಮ ಹಿಂದೆ ಕಟ್ಟಿಕೊಂಡು ಬಸವಾದಿ ಶರಣರಿಗೆ ಸಾಕಷ್ಟು ಅಪಚಾರ ಮಾಡಿದ್ದರು. ಇದೀಗ ಸಾಹಿತ್ಯ ಲೋಕದ ಗುಂಗಾಡುಗಳೂ ತಾವೇನು ಕಡಿಮೆ ಇಲ್ಲ ಎಂದು ಬಸವಣ್ಣನವರನ್ನು ಹಾಗೂ ಅವರು ಬರೆದ ವಚನ ಸಾಹಿತ್ಯವನ್ನು ಪರಾಮರ್ಶಿಸುವ ಎಗ್ಗತನ ತೋರುತ್ತ, ಇಲ್ಲ ಸಲ್ಲದ ಕುಯುಕ್ತಿಗಳನ್ನು ನಡೆಸಿದ್ದಾರೆ. ಹಲವಾರು ವರ್ಷಗಳಿಂದ ಬಸವಣ್ಣನವರ ಕುರಿತು ಪರಾಮರ್ಶಿಸುವ ಬುದ್ದಿವಂತಿಕೆಯನ್ನು ತೋರುತ್ತಿರುವ ಬುದ್ಧಿಜೀವಿ ವೇಷದಾರಿ ಬರಹಗಾರರು ಸಮಯ ಸಿಕ್ಕಾಗಲೆಲ್ಲ ಬಸವಣ್ಣನವರ ಮೇಲೆ ಕೆಸರನ್ನು ಎರಚುತ್ತ ತಾವು ದೊಡ್ಡವರಾಗಬೇಕೆಂಬ ಹುನ್ನಾರ ನಡೆಸಿದ್ದು ಎಲ್ಲರಿಗೂ ಗೊತ್ತಿರುವಸಂಗತಿಯೆ ಆಗಿದೆ.
ಹಿಂದೊಮ್ಮೆ ಗುಲ್ಬರ್ಗಾದ ಕಪಟರಾಳ ಕೃಷ್ಣರಾವ್ ಎಂಬ ಸಂಶೋಧಕನೋರ್ವ ಅನುಭವ ಮಂಟಪವೇ ಇಲ್ಲ ಎಂದು ಸಂಶೋಧಿಸಿ ಹೇಳಿದ್ದ. ಆಗ ಲಿಂಗಾಯತ ಧರ್ಮದವರೆಂದು ಸೋಗುಹಾಕಿರುವ ಸೋಗಲಾಡಿ ಗುರು- ಜಗದ್ಗುರುಗಳೆಲ್ಲ ತಮ್ಮ ತುಟಿಗಳನ್ನು ಹೊಲಿದುಕೊಂಡು ತೆಪ್ಪಗಿದ್ದರು. ಅರೆಬರೆ ಜ್ಞಾನದ ಲಿಂಗವಂತ ಸಮಾಜದ ಜನಗಳು ‘ನಮಗೂ ಬಸವಣ್ಣನವರಿಗೂ ಯಾವ ಬಾದರಾಯಣ ಸಂಬಂಧ ?’ ಎಂದುಕೊಂಡು ಕಪಟರಾಳರ ಕಪಟತನವನ್ನು ಪ್ರಶ್ನಿಸಲು ಹೋಗಲಿಲ್ಲ. ಈಗೀಗ ಬುದ್ದಿಜೀವಿಗಳೆಂದು ತಮ್ಮಷ್ಟಕ್ಕೆ ತಾವೇ ಕರೆದುಕೊಂಡಿರುವ ಕೆಲವು ಸೋಕಾಲ್ಡ ಜನಗಳು ಬಸವಣ್ಣನವರ ಘನ ವ್ಯಕ್ತಿತ್ವವನ್ನು ಸಂಶೋಧಿಸುತ್ತಿದ್ದೇವೆ ಎಂಬ ನೆವದಲ್ಲಿ ಸಾಕಷ್ಟು ಘಾಸಿಯನ್ನುಂಟುಮಾಡಿದ್ದಾರೆ. ‘ಮಹಾಚೈತ್ರ’ ಕೃತಿಯ ಮೂಲಕ ಎಚ್.ಎಸ್. ಶಿವಪ್ರಕಾಶ, ‘ಆನುದೇವ ಹೊರಗಣದವನು’ ಪುಸ್ತಕದ ಮೂಲಕ ಬಂಜಗೇರಿ ಜಯಪ್ರಕಾಶ, ‘ಧರ್ಮಕಾರಣ’ದ ಮೂಲಕ ಪಿ.ವಿ.ನಾರಾಯಣ ಮುಂತಾದವರು ತಮ್ಮ ಮೂಗಿನ ನೇರಕ್ಕೆ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಈಗಾಗಲೇ ಮೂತಿಗೆ ಇಕ್ಕಿಸಿಕೊಂಡಿದ್ದಾರೆ.
ಆದರೂ ಇತ್ತೀಚೆಗೆ ಬಾಲಗಂಗಾಧರ ಮತ್ತು ಡಂಕಿನ್ ಝಳಕಿ ಎಂಬ ಮಹಾಶಯರುಗಳು ವಚನಕಾರರು ಜಾತಿ ವಿರೋಧಿಗಳಾಗಿದ್ದರು ಎಂಬ ಅಭಿಪ್ರಾಯವು ಆಧುನಿಕ ಸಂದರ್ಭದಲ್ಲಿ ವೀರಶೈವರು ವಸಾಹತುಶಾಹಿ ಪಾಶ್ಚಾತ್ಯ ಚಿಂತಕರ ಪ್ರಭಾವದಿಂದ ಕಟ್ಟಿಕೊಂಡ ಪ್ರಮೇಯವಾಗಿದೆ ಎಂದು ವಾದಿಸುತ್ತಾರೆ. ಜೊತೆಗೆ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು ವಚನಕಾರರ ಮೂಲಭೂತ ಗುರಿಯಾಗಿತ್ತು ಎನ್ನುವುದು ಅಸಂಬದ್ಧ ತರ್ಕವಾಗಿದೆ ಎಂದೂ ಜೊತೆಗೆ ಅದು ಬ್ರಾಹ್ಮಣ ವಿರೋಧಿ ಚಳುವಳಿಯ ಅಭಿವ್ಯಕ್ತಿಗಳೆಂದು ಹೇಳಲು ವಚನಗಳಲ್ಲಿಯೇ ಆಧಾರವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಕೆಲವು ಜನ ಸೋಕಾಲ್ಡ ಬು(ಲ)ದ್ದಿ ಜೀವಿಗಳು ವಚನಗಳ ಬಗ್ಗೆ ಹೊಸ ಚಿಂತನೆ ಮತ್ತು ಚರ್ಚೆಗಳಿಗೆ ಅನುವುಮಾಡಿಕೊಟ್ಟದ್ದಕ್ಕೆ ಧನ್ಯವಾದಗಳನ್ನೂ ಅರ್ಪಿಸಿದ್ದು ಅವರ ಎಬಡತನಕ್ಕೆ ಸಾಕ್ಷಿಯಾಗಿದೆಯೆಂದರೂ ತಪ್ಪಾಗುವುದಿಲ್ಲ.
CSLC ಯ ಸಂಶೋಧನೆ ಮತ್ತು ಪ್ರಗತಿಪರರ ಫ್ಯಾಸಿಸ್ಟ್ ಧೋರಣೆ
ಅಲ್ಲಿಯವರೆಗೂ ಸುಖಾ ಸುಮ್ಮನೆ ಭೂಮಿಯ ಸುತ್ತ ಗಿರಕಿ ಹೊಡೆಯುತಿದ್ದ ಸೂರ್ಯನಿಗೆ ಸುತ್ತುವುದರಿಂದ ಮುಕ್ತಿ ಕೊಡಿಸಿ,’ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತಿದೆ’ ಅಂದವನು ಕೋಪರ್ನಿಕಸ್. ಅವನ ಕೆಲಸವನ್ನ ಮುಂದುವರಿಸಿದವರು ಗೆಲಿಲಿಯೋ ಮತ್ತು ಬ್ರುನೋ.ಈ ಮೂವರು ಬರುವವರೆಗೂ ಸೂರ್ಯನೇ ಭೂಮಿಯ ಸುತ್ತ ಸುತ್ತುತ್ತಾನೆ ಅಂತಲೇ ಜನರು ನಂಬಿದ್ದರು.ಅದೇ ಜನರ ಮಧ್ಯದಿಂದ ಎದ್ದು ಬಂದು,’ಇಲ್ಲ ಸ್ವಾಮಿ ಭೂಮಿಯೇ ಸುತ್ತೋದು’ ಅಂದಿದ್ದ ಕೋಪರ್ನಿಕಸ್ ಅದೇ ಜನರಿಂದ ಹುಚ್ಚ ಅನ್ನಿಸಿಕೊಂಡಿದ್ದ.ಅವನ ನಂತರ ಬಂದ ಗೆಲಿಲಿಯೋ ಮತ್ತು ಬ್ರುನೋ ಸಹ ಕೋಪರ್ನಿಕಸ್ ವಾದಕ್ಕೆ ಸೈ ಅಂದರು.
ಸಮಾಜದ ನಂಬಿಕೆಯ ಬುಡವನ್ನು ಅಲುಗಾಡಿಸುವ ಯಾವುದೇ ಪ್ರಯತ್ನಕ್ಕೆ ದೊಡ್ಡ ಮಟ್ಟದಲ್ಲೇ ಅಡೆ-ತಡೆಗಳು ಎದುರಾಗಬೇಕಲ್ಲವೇ? ಗೆಲಿಲಿಯೋ,ಬ್ರೂನೋಗು ಅದೇ ಆಯಿತು. ಇವರ ಸಂಶೋಧನೆಯಿಂದ ಕನಲಿ ಕೆಂಡವಾದ ಪೋಪ್ ಎಂಟನೇ ಅರ್ಬನ್,“Heliocentric System” ಅನ್ನುವುದೇ ಸುಳ್ಳು ಎಂದು ಸಾರ್ವಜನಿಕವಾಗಿ ಗೆಲಿಲಿಯೋ ಮತ್ತು ಬ್ರೂನೋನನ್ನು ಖಂಡಿಸಿ, ಅವರಿಬ್ಬರ ಸಂಶೋಧನೆಗೂ ನಿರ್ಬಂಧವನ್ನೂ ಹೇರಿದರು.
ಗೆಲಿಲಿಯೋನನ್ನು ಜೈಲಿಗೂ ತಳ್ಳಲಾಯಿತು, ಸಾಯುವವರೆಗೂ ಗೃಹ ಬಂಧನದಲ್ಲಿರಿಸಲಾಯಿತು.1642ರಲ್ಲಿ ಗೆಲಿಲಿಯೋ ಮರಣವನ್ನಪ್ಪಿದಾಗ ಆತನನ್ನು ಕ್ರೈಸ್ತರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೂ ಬಿಡಲಿಲ್ಲ.ಇನ್ನು ಬಾಹ್ಯಾಕಾಶವೆಂಬುದು Finite ಅಲ್ಲ, Infinite. ಅದಕ್ಕೆ ಕೊನೆಯೇ ಇಲ್ಲ ಎಂದು ವಾದಿಸುವ ಧೈರ್ಯ ತೋರಿದ ಬ್ರೂನೋನನ್ನಂತೂ,೧೫೯೨ರಲ್ಲಿ ಬಂಧಿಸಿ ರೋಮನ್ ಕ್ಯಾಥೋಲಿಕ್ ಚರ್ಚ್ನ ನ್ಯಾಯಾಲಯದ(The Inquisition) ಮುಂದೆ 7 ವರ್ಷಗಳ ಕಾಲ ವಿಚಾರಣೆ ಗೊಳಪಡಿಸಿ, ಕೊನೆಗೆ ಉರಿವ ಜ್ವಾಲೆಯಲ್ಲಿ ಸುಡುವ ಮರಣದಂಡನೆಯನ್ನು ವಿಧಿಸಿದರು.
ಜಾತಿವ್ಯವಸ್ಥೆ ಇಲ್ಲ ಎಂದರೆ…
-ಡಾ. ಷಣ್ಮುಖ ಮತ್ತು ಡಾ. ಪ್ರವೀಣ
ಜಾತಿಗಳಿವೆ ಜಾತಿವ್ಯವಸ್ಥೆ ಇಲ್ಲ ಎಂದರೆ ಏನು? ಹಾಗಾದರೆ ಈ ಮೇಲು-ಕೀಳು, ತಾರತಮ್ಯ, ಶೋಷಣೆಗಳು ಇಲ್ಲ ಅಂತ ಹೇಳ್ತಾ ಇದೀರಾ? ಪದೇ ಪದೇ ನಮಗೆ ಇದುವರೆಗೂ ಎದುರಾಗಿರುವ (ಅಂತರ್ಜಾಲದ ಚರ್ಚೆಗಳಲ್ಲಿರಬಹುದು, ಸೆಮಿನಾರ್, ಕಾರ್ಯಾಗಾರಗಳಲ್ಲಿರಬಹುದು) ಕೆಲವೇ ಒಳ್ಳೆಯ ಪ್ರಶ್ನೆಗಳಲ್ಲಿ ಇವೂ ಕೂಡ. ಅವುಗಳ ಸುತ್ತ ಈ ಬರಹ ಚರ್ಚಿಸುವ ಪ್ರಯತ್ನ ಮಾಡುತ್ತದೆ.
ಜಾತಿಗಳಿಲ್ಲ ಎಂದು ವಾದಿಸುತ್ತಿರುವ ಮೂರ್ಖರ ಗುಂಪೊಂದು ಇದೆ ಎಂದು ಹೇಳುತ್ತಾ ಬಂದಿರುವುದನ್ನು ನೀವು ಕೇಳಿರುವ ಸಾಧ್ಯತೆ ಇದೆ. ಆಗ ನಿಮಗೂ ಅನಿಸಿರಬಹುದು -ಇವರೆಂಥ ಮೂರ್ಖರಯ್ಯ.! ಕಣ್ಮುಂದೆ ಕಾಣುವ ಸಂಗತಿಗಳನ್ನು ನಿರಾಕರಿಸುತ್ತಿರುವರಲ್ಲ! ಇದೆಂಥಾ ಸಂಶೋಧನೆ, ಇದರ ಹಿಂದೆ ಯಾವುದೋ ಹುನ್ನಾರ/ ಕುಯುಕ್ತಿ ಇದ್ದಿರಬಹುದು! ಅಂತಹ ಯಾವುದೇ ಪ್ರಮೇಯಗಳನ್ನು, ಹೇಳಿಕೆಗಳನ್ನು ಮಾಡಿರುವ ಒಂದೇ ಒಂದು ಉದಾಹರಣೆ ಕೂಡ ನಮ್ಮ ಗುಂಪಿನ ಬರಹಗಳಿಂದ ತೆಗೆದು ತೋರಿಸಲು ಸಾಧ್ಯವಿಲ್ಲ. ಹಾಗಿದ್ದರೂ ಈ ರೀತಿಯ ಆರೋಪಗಳು ಎಲ್ಲಿಂದ ಹೊರಟಿತು? ಹಾಗಾದರೆ ಜಾತಿಗಳ ಕುರಿತು ನಮ್ಮ ವಾದವೇನು? ಎಂಬ ಪ್ರಶ್ನೆಗಳು ಏಳುವುದು ಸಹಜ.
ಜಾತಿಯ ಕುರಿತ ನಮ್ಮ ವಾದವನ್ನು ಸರಳವಾಗಿ ಸಾರಾಂಶೀಕರಿಸುವುದಾದರೆ, ಭಾರತದಲ್ಲಿ ವಸಾಹತು ಪೂರ್ವದಿಂದಲೂ ಜಾತಿಗಳಿದ್ದವು, ಈಗಲೂ ಇವೆ.. ಇವುಗಳನ್ನು ಯೂರೋಪಿಯನ್ನರು ತೆಗೆದುಕೊಂಡು ಬಂದರು, ಇಲ್ಲಿ ಸೃಷ್ಟಿ ಮಾಡಿದರು ಎಂಬುದು ಸರಿಯಾದ ವಿವರಣೆಯಲ್ಲ. ಆದರೆ ಭಾರತೀಯ ಸಮಾಜವನ್ನು ನೋಡುವ ಒಂದು ನಿರ್ದಿಷ್ಟ ಚೌಕಟ್ಟನ್ನು ಯೂರೋಪಿಯನ್ನರು ನಿರ್ಮಿಸಿದರು. ಅದುವೇ “ಜಾತಿವ್ಯವಸ್ಥೆ”.
ಹಾಗಾದರೆ, ’ವ್ಯವಸ್ಥೆ’ಎಂದರೇನು? ಅವುಗಳ ಲಕ್ಷಣಗಳಾವುವು ?
ಸಾಮಾಜಿಕ ಸಂಶೋಧನೆ ಯಾಕಾಗಿ?
– ಪ್ರೊ.ಜೆ.ಎಸ್.ಸದಾನಂದ
{ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನಕ್ಕೆ ಪ್ರತಿಕ್ರಿಯೆ, ಈ ಲೇಖನವನ್ನು ಪ್ರಜಾವಾಣಿಗೆ ಬಹಳ ಹಿಂದೆಯೇ ಕಳುಹಿಸಿದ್ದು ಪ್ರಜಾವಾಣಿಯಲ್ಲಿ ಮಾತ್ರ ಇನ್ನೂ ಪ್ರಕಟಿಸಲಾಗಿಲ್ಲ}
ದೇವನೂರು ಮಹಾದೇವ ಅವರ ಲೇಖನದಲ್ಲಿ (ಪ್ರಜಾವಾಣಿ ದಿನಾಂಕ: 29/4/2013) ನಮಗೆ ಕಾಣುವುದು ನಮ್ಮ ಸಂಶೋಧನೆಯ ಬಗ್ಗೆ ಇರುವ ಕೋಪ, ಅಸಹನೆ ಹಾಗೂ ತಿರಸ್ಕಾರ. ಇದಕ್ಕೆ ಕಾರಣವೇನು? ಅವರನ್ನು ಸ್ವಲ್ಪಮಟ್ಟಿಗೆ ಬಲ್ಲ ನನಗೆ ಅನಿಸುವುದಿಷ್ಟು. ಇಂತಹ ಸಿಟ್ಟು ಅಸಹನೆಗೆ ಮೂಲ ಕಾರಣ ಸಮಾಜದಲ್ಲಿರುವ ಅನ್ಯಾಯ, ಶೋಷಣೆ ಮುಂತಾದ ನಕಾರಾತ್ಮಕ ಅಂಶಗಳನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಗುರಿಯ ಬಗ್ಗೆ ಅವರಿಗಿರುವ ಬದ್ಧತೆ ಹಾಗೂ ಅಂತಹ ಅನ್ಯಾಯ, ಶೋಷಣೆಗಳಿಗೆ ಮೂಲ ಕಾರಣ ಯಾವುದು ಎನ್ನುವುದು ಎನ್ನುವುದರ ಕುರಿತು ಅವರಿಗಿರುವ ದೃಢ ನಂಬಿಕೆ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯದ ಹೊರತು ನಮ್ಮ ಸಮಾಜದ ಅನ್ಯಾಯಗಳನ್ನು ಸರಿಪಡಿಸಲಾಗದು ಎನ್ನುವುದರ ಬಗ್ಗೆ ಅವರಿಗೆ ಯಾವ ಸಂಶಯವೂ ಇಲ್ಲ. ಅವರು ಮುಟ್ಟಬೇಕಾದ ಗುರಿ ಹಾಗೂ ಆ ನಿಟ್ಟಿನಲ್ಲಿ ಅವರು ಸಾಗುತ್ತಿರುವ ಮಾರ್ಗದ ನಡುವೆ ಯಾವ ವ್ಯತ್ಯಾಸವೂ ಅವರಿಗೆ ಕಾಣಿಸುವುದಿಲ್ಲ. ಹಾಗಾಗಿ ಸಾಗುತ್ತಿರುವ ಮಾರ್ಗದ ಕುರಿತು ಎತ್ತಲಾಗುವ ಪ್ರಶ್ನೆಗಳು ಮುಟ್ಟಬೇಕಾದ ಗುರಿಯನ್ನೇ ಪ್ರಶ್ನಾರ್ಹಗೊಳಿಸುವಂತೆ ಅಥವಾ ಅಂತಹ ಗುರಿಗಳಿಂದ ನಮ್ಮನ್ನು ವಿಮುಖಗೊಳಿಸುವ ಹುನ್ನಾರದಂತೆ ಅವರಿಗನಿಸುತ್ತಿದೆ.
ಅವರ ಈ ಅನಿಸಿಕೆ ಎಷ್ಟರಮಟ್ಟಿಗೆ ಸರಿ? ಈ ಪ್ರಶ್ನೆಗೆ ಉತ್ತರಿಸಬೇಕಾದರೆ ಬಾಲುರವರು ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ ಎನ್ನುವ ಪ್ರಾಕ್ಕಲ್ಪನೆಯನ್ನು (ಇದೊಂದು ಸಂಶೋಧನೆಯ ಮುಖಾಂತರ ಸಾಬೀತಾಗಬೇಕಾದ ಪ್ರಾಕ್ಕಲ್ಪನೆ ಮಾತ್ರ) ಏಕೆ ಮುಂದಿಡುತ್ತಾರೆ ಎನ್ನುವುದರ ಹಿನ್ನೆಲೆಯನ್ನು ನಾವು ನೋಡಬೇಕು. ಭಾರತದಲ್ಲಿ ಜಾತಿವ್ಯವಸ್ಥೆಯ ಸ್ವರೂಪ ಹಾಗು ಅದರ ಪರಿಣಾಮಗಳ ಕುರಿತು ಈಗಾಗಲೇ ಅಸಂಖ್ಯಾತ ಸಂಶೋಧನಾ ಗ್ರಂಥಗಳು ಹೊರಬಂದಿವೆ. ಜಾತಿವ್ಯವಸ್ಥೆಯ ಸ್ವರೂಪದ ಬಗ್ಗೆ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವನ್ನು ನಾವು ಕಾಣುವುದಿಲ್ಲ. ಅದಕ್ಕೆ ತದ್ವಿರುದ್ದವಾಗಿ ಭಾರತದಲ್ಲಿ ಎಲ್ಲಡೆ ಕಂಡುಬರುವ ಜಾತಿಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವಿಲ್ಲ ಎನ್ನುವುದುನ್ನು ಎಲ್ಲಾ ವಿದ್ವಾಂಸರೂ ಹೆಚ್ಚು ಕಡಿಮೆ ಒಪ್ಪುತ್ತಾರೆ. ಬಾಲು ಅವರ ಪ್ರಕಾರ ಇದ್ಕಕೆ ಮುಖ್ಯ ಕಾರಣ ಈ ಎಲ್ಲಾ ಸಂಶೋಧನೆಗಳು ಜಾತಿವ್ಯವಸ್ಥೆ ಎನ್ನುವುದು ಹಿಂದೂ ರಿಲಿಜನ್ನ ಪ್ರಧಾನ ಲಕ್ಷಣ ಎನ್ನುವ ಇದುವರೆಗೆ ಯಾವುದೇ ಸಂಶೋಧನೆಯಿಂದ ಸಾಬೀತಾಗದ ನಂಬಿಕೆಯನ್ನು ಆಧರಿಸಿವೆ. ಹಿಂದೂ ರಿಲಿಜನ್ ಎನ್ನುವುದು ಅಸ್ತಿತ್ವದಲ್ಲಿ ಇದೆ ಮತ್ತು ಭಾರತದಲ್ಲಿರುವ ಎಲ್ಲಾ ಜಾತಿಗಳು ಅದರ ನ್ಯೆತಿಕ ನಿರ್ಬಂಧದಲ್ಲಿ ಬಂದಿಸಲ್ಪಟ್ಟಿವೆ ಎನ್ನುವುದು ಒಂದು ಸಾಮಾನ್ಯ ನಂಬಿಕೆಯಾಗಿ ಮುಂದುವರೆದುಕೊಂಡು ಬಂದಿದೆಯೇ ಹೊರತು ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳನ್ನು ಯಾರಿಗೂ ಕೊಡಲು ಸಾಧ್ಯವಾಗಿಲ್ಲ.
ಹೇಗೆ ಹೇಳಲಿ? ಏನು ಹೇಳಲಿ?
– ಪ್ರೊ.ರಾಜಾರಾಮ ಹೆಗಡೆ
ದೇವನೂರು ಮಹಾದೇವರವರ ಲೇಖನಕ್ಕೆ ಪ್ರತಿಕ್ರಿಯೆ {ಪ್ರಜಾವಾಣಿಯಲ್ಲಿ ಅಪ್ರಕಟಿತ ಲೇಖನ}
ದೇವನೂರು ಮಹಾದೇವರ ಪ್ರತಿಕ್ರಿಯೆಯನ್ನು ಓದಿದ ನಂತರ, ಅವರು ಏನನ್ನು ಹೇಗೆ ಹೇಳಿದ್ದಾರೆ ಎಂಬುದನ್ನು ಕಂಡ ನಂತರ ಅವರನ್ನು ಕಾಡಿದ ಆ “ಹೇಗೆ ಹೇಳಲಿ? ಏನು ಹೇಳಲಿ?” ಎಂಬ ಪ್ರಶ್ನೆ ಈಗ ಅವರದಕ್ಕಿಂತ ನನ್ನದೇ ಆಗಿದೆ. ಅವರು ನಮ್ಮ ಕುರಿತು ಏಕೆ ಇಂಥ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟ. ಅವರಿಗೆ ಸಿಟ್ಟಿದೆ. ದೇವನೂರರು ಒಂದು ಸಮೂಹದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೀವನ ಈ ಕುರಿತಾಗಿಯೇ ಒಂದು ಹೋರಾಟ ಎಂದರೂ ತಪ್ಪಿಲ್ಲ. ಇಷ್ಟನ್ನು ಖಚಿತವಾಗಿ ಹೇಳಬಲ್ಲಷ್ಟು ನಾನು ಅವರನ್ನು ಬಲ್ಲೆ. ಹಾಗೂ ಅದನ್ನು ಗಮನಿಸುವುದು ಮುಂದಿನ ಸಂವಾದಕ್ಕೆ ನಿರ್ಣಾಯಕ ಎಂಬುದಾಗಿ ನನಗನಿಸುತ್ತದೆ. ಏಕೆಂದರೆ ಯಾರದೇ ಪ್ರಾಮಾಣಿಕತೆಯ ಮೇಲೆ ಅಪನಂಬಿಕೆಯನ್ನಿಟ್ಟು ಬೌದ್ಧಿಕ ಚರ್ಚೆಯನ್ನು ಪ್ರಾರಂಭಿಸುವುದರಿಂದ ಚರ್ಚಿಸತಕ್ಕ ವಿಷಯಕ್ಕೆ ನ್ಯಾಯ ಸಲ್ಲುವುದಿಲ್ಲ.
ನಮ್ಮ ದುರುದ್ದೇಶದ ಕುರಿತು ಅವರು ಕಟ್ಟಿಕೊಂಡಿರುವ ಚಿತ್ರಗಳನ್ನು ಅವರ ಲೇಖನದ ಮೂಲಕ ಗ್ರಹಿಸುತ್ತ ಹೋದಾಗ ನಮ್ಮ ಕುರಿತು ಯಾವ ರೀತಿಯ ಚಿತ್ರಣವು ಅವರ ವಲಯದಲ್ಲಿ ಗಟ್ಟಿಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ದೃಷ್ಟಾಂತ ಸಿಕ್ಕಂತಾಯಿತು. ಹಾಗಂತ ಇದೇನೂ ನನಗೆ ಆಘಾತ ನೀಡಲಿಲ್ಲ. ಈ ಥೆರಪಿಯನ್ನು ನನಗೆ ಹಾಗೂ ನನ್ನ ಗುಂಪಿಗೆ ನಾವು ಬಾಲು ಜೊತೆ ಸೇರಿ ಸಂಶೋಧನೆ ಪ್ರಾರಂಭಿಸಿದಾಗಿನಿಂದಲೂ ನೀಡಲಾಗುತ್ತಿದೆ. ಸಂಶೋಧನೆ ಮಾಡುವುದು ಕೇವಲ ಬೌದ್ಧಿಕ ಪ್ರಶ್ನೆಯೊಂದೇ ಅಲ್ಲ, ಅದು ಪ್ರವಾಹದ ವಿರುದ್ಧ ಈಜುವ ಕೆಲಸ ಕೂಡ ಆಗಿದೆ ಎಂಬುದು ನಮಗೆ ಈಗಾಗಲೇ ಅನುಭವ ವೇದ್ಯವಾಗಿದೆ. ನಮ್ಮ ದುರುದ್ದೇಶದ ಕುರಿತು ಹುಟ್ಟುತ್ತಿರುವ ಕಥೆ ಸಾಕಷ್ಟು ಬೇರುಬಿಡುತ್ತಿದೆ ಎಂಬುದನ್ನು ಪ್ರಜಾವಾಣಿ ಪ್ರತಿಕ್ರಿಯೆಗಳಿಂದ ಮನಗಾಣುತ್ತಿದ್ದೇನೆ. ದೇವನೂರರೇ ಕೊಟ್ಟ ಆಡಿನ ಕಥೆಯಂತೆ ಹತ್ತಾರು ಮಂದಿ ಒಂದು ಸುಳ್ಳನ್ನು ಹೇಳುತ್ತಿದ್ದರೆ, ಹಾಗೂ ನಾವು ಸುಮ್ಮನೇ ಇದ್ದರೆ ಜನ ಅದನ್ನೇ ಸತ್ಯವೆಂದು ನಂಬಿಬಿಡುವ ಸಾಧ್ಯತೆಯಿದೆ. ಒಂದೊಮ್ಮೆ ನಮ್ಮ ಸಂಶೋಧನೆಯು ದೇವನೂರರು ಅಂದುಕೊಂಡಂತೇ ಯಾವುದೇ ಮಾನವ ಸಮುದಾಯದ ಅಹಿತವನ್ನು ಬಯಸುವ ದುರುದ್ದೇಶವನ್ನು ಹೊಂದಿಲ್ಲ ಅಂತಾದರೆ, ಈ ನಿಟ್ಟಿನಲ್ಲಿ ಈಗಿರುವ ಜ್ಞಾನದ ಮಿತಿಗಳನ್ನು ಕಳೆದು ಇನ್ನೂ ಹೆಚ್ಚು ಸ್ಪಷ್ಟತೆಯನ್ನು, ನ್ಯಾಯವನ್ನು ಸಾಧಿಸುವುದು ಅಂತಾದರೆ, ದೇವನೂರರ ನೋವಿಗೆ ಇರಬಹುದಾದ ಕಾರಣಗಳೇ ಮಾಯವಾಗುತ್ತವೆ. ಮುಂದೆ ಅವರ ಜೊತೆ ಅರ್ಥಪೂರ್ಣ ಸಂವಾದ ಸಾಧ್ಯವಾಗಬಹುದು ಎಂಬ ಆಶಯದಿಂದ ಈ ಲೇಖನ.





