ವಿಷಯದ ವಿವರಗಳಿಗೆ ದಾಟಿರಿ

Posts from the ‘ಭಾರತ’ Category

29
ಡಿಸೆ

ಭೈರಪ್ಪ ಎಂಬ STAR WRITER

ವಿಕಾಸ್ ಹೆಗಡೆ
ಪ್ರಕಟವಾದ ಮೊದಲನೇ ವಾರವೇ ಮೂರು ಮುದ್ರಣ, ಅಧಿಕೃತವಾಗಿ ಪುಸ್ತಕ ಬಿಡುಗಡೆ ಮಾಡಿದ್ದು ಎಂಟನೇ ಮುದ್ರಣ, ಪ್ರಕಟವಾಗುವ ಮೊದಲೇ ಬುಕ್ಕಿಂಗ್, ಎಲ್ಲಾ ಪ್ರತಿಗಳು ಖಾಲಿ, ಬೆಲೆ ದುಬಾರಿಯಾದರೂ ಎಲ್ಲಾ ಕಡೆ ಪುಸ್ತಕಗಳ ಜೋರು ಮಾರಾಟ, ಪತ್ರಿಕೆಗಳಲ್ಲಿ ಚರ್ಚೆ, ವಾದ, ವಿವಾದ, ಸಮರ್ಥನೆ, ದೂಷಣೆ – ಇಷ್ಟು ಹೇಳುತ್ತಿದ್ದಂತೆ ಎಲ್ಲರಿಗೂ ತಿಳಿದುಬಿಡುತ್ತದೆ. ಇದು ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದ ವಿದ್ಯಮಾನ. ಅದು ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ. ೨೩ ಮುದ್ರಣಗಳನ್ನು ಕಂಡ ಅವರ ಹಿಂದಿನ ಕಾದಂಬರಿ ‘ಆವರಣ’ದ ವಿಷಯವಂತೂ ಹೇಳುವುದೇ ಬೇಡ. ಬಹುಶಃ ಈ ಮಟ್ಟಿಗೆ ಸಂಚಲನ ಉಂಟು ಮಾಡುವ ಮತ್ತೊಬ್ಬ ಬರಹಗಾರ ಭಾರತದಲ್ಲಿಲ್ಲ. ಆ ಮಟ್ಟಿಗೆ ಜನಪ್ರಿಯ. ಎಲ್ಲಾ ವಯೋಮಾನದ ಓದುಗರನ್ನು ಹೊಂದಿರುವ ಲೇಖಕರಲ್ಲೊಬ್ಬರು. ಅಧ್ಯಯನ ಶೀಲ, ಸಮರ್ಪಣಾ ಮನೋಭಾವದ ಕಾದಂಬರಿಕಾರರಾಗಿ, ಅದ್ಭುತ ಬರಹಗಾರರಾಗಿ ಭೈರಪ್ಪನವರು ಪ್ರಸಿದ್ಧಿ. ಪಕ್ಕದ ರಾಜ್ಯದ ಸಾಹಿತ್ಯ ಲೋಕದಲ್ಲೇನಾಗುತ್ತಿದೆ ಎಂದು ಸರಿಯಾಗಿ ಗೊತ್ತಾಗದಿರುವ ಈ ಪರಿಸ್ಥಿತಿಯಲ್ಲೂ ಇವರ ಹಲವಾರು ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಳ್ಳುತ್ತವೆ.ನಾನು ಓದಿದ ಇವರ ಮೊದಲ ಕಾದಂಬರಿ ‘ಧರ್ಮಶ್ರೀ’. ಅದಾದ ಮೇಲೆ ಅವರ ಅಂಚು, ದಾಟು, ಪರ್ವ, ವಂಶವೃಕ್ಷ, ನಿರಾಕರಣ, ಜಲಪಾತ, ಸಾರ್ಥ ಮುಂತಾದ ಹಲವು ಕಾದಂಬರಿಗಳನ್ನು ಓದಿದ್ದೇನೆ. ಒಂದೊಂದೂ ಕೂಡ ವಿಷಯಗಳ ಆಗರವಾಗಿ ಕಂಡಿವೆ. ಇನ್ನೂ ಕೆಲವು ಓದುವುದು ಬಾಕಿ ಇವೆ. ಘಟನೆಗಳನ್ನು ಕತೆಯಂತೆ ಹೇಳಿಬಿಡಬಹುದು, ಕಾಲ್ಪನಿಕ ಕತೆಗಳನ್ನು ಹೆಣೆದುಬಿಡಬಹುದು ಆದರೆ ಅದರಲ್ಲಿನ ಪಾತ್ರಗಳ ಮನಸ್ಸಿನ ತುಮುಲಗಳನ್ನು, ಸಮಾಜ, ಧರ್ಮ, ಸಂಪ್ರದಾಯ ಸಂಬಂಧಿತ ಸಂಗತಿಗಳನ್ನು ಚಿತ್ರಿಸುವುದು ಮಾತ್ರ ಎಲ್ಲರಿಗೂ ಸಾಧ್ಯವಿಲ್ಲ. ಅದನ್ನು ಸಮರ್ಥವಾಗಿ ಮಾಡುವುದರಿಂದಲೇ ಭೈರಪ್ಪನವರು ಅತ್ಯಂತ ಯಶಸ್ವಿ ಬರಹಗಾರರೆನ್ನಬಹುದು. ಭೈರಪ್ಪನವರ ಬರವಣಿಗೆಯ ವಿಷಯಗಳು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗಿರುತ್ತವೆ ಎಂದರೆ ಅವು ಮೇಲ್ನೋಟಕ್ಕೆ ಸುಮ್ಮನೇ ಕಥೆಯಾಗಿದ್ದರೂ ಅದು ಸರಿಯಾಗಿ ಅರ್ಥವಾಗಲು ಅಂತಹ ಸನ್ನಿವೇಶಗಳನ್ನು, ಪರಿಸ್ಥಿತಿಗಳನ್ನು, ಮನಸ್ಥಿತಿಯನ್ನು ಸ್ವತಃ ಅನುಭವಿಸಿರಬೇಕು, ಇಲ್ಲವೇ ಕಂಡಿರಬೇಕು. ಆವಾಗಲಷ್ಟೇ ಅದು ಇನ್ನೂ ಚೆನ್ನಾಗಿ ತಾಗಬಲ್ಲುದು. ಜೊತೆಗೆ ಅವರ ಕಾದಂಬರಿಗಳ ವಿಷಯ ವ್ಯಾಪ್ತಿ ಮತ್ತು ಆಳ ಎಂತವರಿಗೂ ಹೊಸ ಹೊಸ ಲೋಕಗಳನ್ನು, ಸತ್ಯಗಳನ್ನು ತೋರಿಸಿಕೊಡುವಂತವು. ಮತ್ತಷ್ಟು ಓದು »
19
ಡಿಸೆ

ಹೊಲಸು ತುಂಬಿದ ರಾಜಕೀಯವೂ….. ಮಹಿಳಾ ರಾಜಕೀಯದ ಹೊಸ ಬದಲಾವಣೆಯೂ…

-ಶಂಶೀರ್, ಬುಡೋಳಿ, ಪತ್ರಕರ್ತ

ನಿಮಗೆ ಇದನ್ನು ಹೇಳಲೇಬೇಕು. ಕರ್ನಾಟಕ ರಾಜ್ಯದಲ್ಲಿ ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಇರುವುದು ನಿಮಗೆ ತಿಳಿದಿರಬಹುದು. ಈ ಯೋಜನೆ ಕರ್ನಾಟಕದಲ್ಲಿ ಇನ್ನಷ್ಟೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಗೊಳ್ಳಬೇಕಷ್ಟೇ. ಹೀಗಾಗಿ ಈ ಯೋಜನೆಯ ಯಶಸ್ಸಿನ ಕುರಿತು ಈಗ ಮಾತನಾಡುವುದು ಔಚಿತ್ಯವಲ್ಲ. ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಮಹಿಳೆಯರು ಸ್ಥಳೀಯ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಹೊಸ ರಾಜಕೀಯದ ಭಾಷ್ಯಕ್ಕೆ ಮುನ್ನುಡಿ ಬರೆದರು. ಕಳೆದ ಚುನಾವಣೆ ಸಂದರ್ಭದಲ್ಲಿ ಕೇರಳದಲ್ಲಿ ಶೇಕಡಾ ೫೦ರಷ್ಟು ಮಹಿಳೆಯರು ಚುನಾವಣಾ ಕಣಕ್ಕಿಳಿದಿದ್ದರು. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ರೈತ ಮಹಿಳೆ, ಟೈಲರಿಂಗ್ ವೃತ್ತಿಯಲ್ಲಿರುವ , ಬೀದಿ ಬದಿ ವ್ಯಾಪಾರ ಮಾಡುವ, ಲೆಕ್ಕಪರಿಶೋಧಕಿಯರ ಜೊತೆಗೆ ಸ್ನಾತಕೋತ್ತರ ಪದಧರೆಯರು ಕೇರಳದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದವರು. ಇವರಲ್ಲಿ ಹೆಚ್ಚಿನವರು ಕೇರಳದಲ್ಲಿ ಬಹಳ ಯಶಸ್ಸನ್ನು ಗಳಿಸಿಕೊಂಡಿರುವ ಕುಟುಂಬಶ್ರೀ ಯೋಜನೆಯಡಿಯಲ್ಲಿ ಪಳಗಿದವರಾಗಿದ್ದಾರೆ. ವಿವಿಧ ಪಕ್ಷಗಳಲ್ಲಿ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕೇರಳಿ ಮಹಿಳೆಯರು ಹೊಸ ರಾಜಕೀಯದ ಭಾಷ್ಯ ಬರೆಯುವತ್ತ ದಾಪುಗಾಲು ಇಟ್ಟಿದ್ದಾರೆ ಎಂದು ಹೇಳಬಹುದು. ಮತ್ತಷ್ಟು ಓದು »

13
ಡಿಸೆ

ರಾಷ್ಟ್ರಭಾಷೆಯಿಲ್ಲದ ರಾಷ್ಟ್ರದಲ್ಲಿ…

ರಾಕೇಶ್ ಶೆಟ್ಟಿ
 
ಅದು ೧೯೩೭ ರ ಸಮಯ ಇಡಿ ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿತ್ತು.ಆದರೆ ಇತ್ತ ತಮಿಳು ನಾಡಿನಲ್ಲಿ ಬೇರೆಯದೇ ಹೋರಾಟ ಶುರುವಾಗಿತ್ತು! ಒಂದು ಕಡೆ ನೋಡಿದರೆ ವಿದೇಶಿಗಳ ವಿರುದ್ಧ ಹೋರಾಟ ಇನ್ನೊಂದು ಕಡೆ ಇದೆ ದೇಶದ ಮತ್ತೊಂದು ಭಾಷೆಯ ಹೇರಿಕೆಯ ಮೇಲೆ ಹೋರಾಟ! ಅದು ‘ಹಿಂದಿ ಹೇರಿಕೆಯ ವಿರುದ್ಧ’!
ಮೇಲ್ನೋಟಕ್ಕೆ ಸ್ವಾತಂತ್ರ್ಯ ಹೋರಾಟದಂತಹ ಸಮಯದಲ್ಲಿ ದಂಗೆಯೆದ್ದ ತಮಿಳರ ಮೇಲೆ ಕೋಪ ಉಕ್ಕಿ ಬರುವುದು ಸಹಜವೇ.ಆದರೆ ಅವರೇನು ಸುಮ್ ಸುಮ್ನೆ ಬಾಯಿ ಬಡ್ಕೊತಿದ್ರಾ? ಅವರು ಹಾಗೆ ತಿರುಗಿ ಬೀಳುವಂತೆ ಮಾಡಿದ್ದಾದರು ಏನು? ಮಾಡಿದ್ದಾದರೂ ಯಾರು? ಅವ್ರ ಹೆಸರು ಸಿ.ರಾಜಗೋಪಾಲಚಾರಿ.

ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ೧೯೩೭ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಕಾಂಗ್ರೆಸ್ಸಿನ ರಾಜಗೋಪಾಲಚಾರಿಯವರು, ಶಿಕ್ಷಣದಲ್ಲಿ ‘ಹಿಂದಿ’ ಕಲಿಕೆಯನ್ನ ಕಡ್ಡಾಯ ಮಾಡಿಬಿಟ್ಟರು.ಅಷ್ಟು ಸಾಕಾಯ್ತು ಪೆರಿಯಾರ್ ನೇತೃತ್ವದಲ್ಲಿ ಶುರುವಾದ ಹೋರಾಟ ಮೂರು ವರ್ಷಗಳಷ್ಟು ಕಾಲ ನಡೆದು ಕಡೆಗೆ ೧೯೪೦ರಲ್ಲಿ ಬ್ರಿಟಿಷರು ಆ ನಿರ್ಧಾರವನ್ನ ವಾಪಸ್ ಪಡೆದ ಮೇಲಷ್ಟೇ ತಮಿಳುನಾಡು ಶಾಂತವಾಗಿದ್ದು.ಹಿಂದಿಯನ್ನ ರಾಷ್ಟ್ರ ಭಾಷೆ ಮಾಡುವ ನಾಯಕರ ಆಸೆಗೆ ಈ ಹೋರಾಟ ಭಂಗ ತರುವಲ್ಲಿ ತಮಿಳರ ಹೋರಾಟ ಯಶಸ್ವಿಯಾಗಿತ್ತು. ಮತ್ತಷ್ಟು ಓದು »

9
ಡಿಸೆ

ಇದು ನಿತೀಶಣ್ಣನ ದರ್ಬಾರು!! ಕಾರುಬಾರು!!

ಕೆ ಎಸ್ ರಾಘವೇಂದ್ರ ನಾವಡ

ಛೇ!ಒಬ್ಬ ನಿತೀಶರ೦ಥವರೋ ಯಾ ನರೇ೦ದ್ರ ಮೋದಿಯ೦ಥವರೋ ಯಾರಾದರೂ ಒಬ್ಬ ಜನನಾಯಕ ನಮ್ಮ ಕರ್ನಾಟಕ ರಾಜಕೀಯದಲ್ಲಿ ಉದಯಿಸಬಾರದಿತ್ತೇ ಎ೦ದು ಒಮ್ಮೊಮ್ಮೆ ಕಾಲದ ಕನ್ನಡಿಗೆ ಅನ್ನಿಸುವುದು೦ಟು!ಆದರೆ ಏನು ಮಾಡುವುದು? ಕಾ೦ಗ್ರೆಸ್ಸೂ ಬೇಡ, ಕುಮಾರಣ್ಣನೂ ಬೇಡ ಅ೦ತ ಅವರಿಗೂ  ಹಾಗೂ ನಮಗೂ ಒಮ್ಮೆ ಬದಲಾವಣೆಯ ಗಾಳಿ ಬೀಸಲೆ೦ಬ ಕಾರಣದಿ೦ದಲೋ ಯಾ ಒಳ ಮನಸ್ಸಿನಲ್ಲಿ ಭಾ.ಜ.ಪಾದ ಮೇಲಿದ್ದ ನಿರೀಕ್ಷೆ ಕಾತುರತೆಗಳಿ೦ದ ಮತ್ತು ಕುಮಾರಣ್ಣನಿ೦ದ ವ೦ಚನೆಗೊಳಗಾದ ಯಡಿಯೂರಪ್ಪನವರ ಮೇಲಿನ ಕರುಣೆಯಿ೦ದಲೋ  ಮತದಾರರು ಎರಡೂವರೆ ವರ್ಷಗಳ ಹಿ೦ದೆ ಯಡಿಯೂರಪ್ಪನವರನ್ನು ಆರಿಸಿದರೆ, ಅವರೋ ಇವರನ್ನೆಲ್ಲಾ ಮೀರಿಸಿದರು!!ಕರ್ನಾಟಕದ ಸಮಸ್ತ ಜನತೆ ಬೇಸರದಿ೦ದ ನಿಟ್ಟುಸಿರು ಬಿಡುತ್ತಿರುವ ಈ ಸ೦ರ್ಭದಲ್ಲಿ ದೂರದ ಗುಜರಾತ್ ನಲ್ಲಿ ಮೋದಿಯವರ ಮೋಡಿ ಎರಡನೇ ಅವಧಿಗೂ ಮು೦ದುವರೆದಿದ್ದು ಹಾಗೂ ಬಿಹಾರದಲ್ಲಿ ನಿತೀಶರು ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದು ನೈಜ ಜಾತ್ಯಾತೀತವಾದಿಗಳಿಗೆ ಹಾಗೂ ಅಭಿವೃಧ್ಧಿಯನ್ನು ಬಯಸುವ ಮನಸ್ಸುಗಳಿಗೆ ತುಸುವಾದರೂ ನೆಮ್ಮದಿ ನೀಡಿದೆ ಎ೦ದೇ ಹೇಳಬೇಕಾಗುತ್ತದೆ!! ಏಕೆ೦ದರೆ ಈ ಎರಡೂ ಗೆಲುವುಗಳು ಭಾರತೀಯ ಜನತಾ ಪಕ್ಷದ ವೈಯಕ್ತಿಕ ದೃಷ್ಟಿಯಿ೦ದ ಹಾಗೂ ಆಯಾ ರಾಜ್ಯಗಳ ಮಹಾ ಜನತೆಗಳ ದೃಷ್ಟಿಯಿ೦ದ ಮೈಲುಗಲ್ಲುಗಳೆ೦ದೇ ಹೇಳಬಹುದು! ಆ ನಿಟ್ಟಿನಲ್ಲಿ ನರೇ೦ದ್ರ ಮೋದಿಯವರ ಮೇಲೆ ಕಾಲದ ಕನ್ನಡಿ ತನ್ನ ಕ್ಷಕಿರಣ ಈಗಾಗಲೇ ಬೀರಿದೆ. ಈಗ “ಬಿಹಾರಿ ಬಾಬು“ ನಿತೀಶ“ರ ಸರದಿ. ಮತ್ತಷ್ಟು ಓದು »

29
ನವೆಂ

ಯದಾ ಯದಾಹಿ ಧರ್ಮಸ್ಯ… : ಕಲಿಕಾ ಪ್ರಕ್ರಿಯೆಯ ಅವನತಿ ಮತ್ತು ಪುನರುಜ್ಜಿವನ.

ಪ್ರೊ. ಬಾಲಗಂಗಾಧರ

Degeneration of a Learning Process and its Rejuvenation

Prof. Balagangadhar

Ghent University, Belgium

ಯದಾ ಯದಾಹಿ ಧರ್ಮಸ್ಯ … ಸಂಭವಾಮಿ ಯುಗೇಯುಗೇ : ಭಗವದ್ ಗೀತೆಯ ಈ ಶ್ಲೋಕ ಬಹಳಷ್ಟು ಜನರಿಗೆ ಚಿರಪರಿಚಿತ. ಈ ಮಂದಿನ ಚರ್ಚೆಯ ಸಲುವಾಗಿ ಈ ಶ್ಲೋಕದ  ಒಂದು ಕರಡು ಭಾಷಾಂತರವನ್ನು ಮಾಡಲು ನನಗೆ ಅನುಮತಿ ನೀಡಿ.

ಯಾವಾಗ ಮತ್ತು ಎಲ್ಲೆಲ್ಲಿ ಧರ್ಮದಲ್ಲಿ ಏರುಪೇರುಗಳು ವ್ಯಕ್ತಗೊಂಡು, ಅಧರ್ಮವು ಮೆರೆಯತೊಡಗುತ್ತದೆಯೋ (ಪ್ರತಿ ಯುಗದಲ್ಲೂ ಪುನಾರಾವರ್ತಿತವಾಗುವ ವಿದ್ಯಮಾನವಿದು), ಆಗ ಶಿಷ್ಟ ರಕ್ಷಣೆ ಮತ್ತು ದುಷ್ಟರ ನಿಗ್ರಹಕ್ಕಾಗಿ, ಹಾಗೂ ಧರ್ಮವನ್ನು ಪುನರ್ಸ್ಥಾಪಿಸಲು ನಾನು ಸ್ವಯಂ ವ್ಯಕ್ತವಾಗುತ್ತೇನೆ.

ಪ್ರತಿ ಯುಗದಲ್ಲಿಯೂ ಕೂಡ ಕೃಷ್ಣನ ಅವತಾರ ಸಂಭವಿಸುತ್ತದೆ, ಅದು ನಮ್ಮ ಯುಗದಲ್ಲಿಯೂ ಆಗಿರಬಹುದು, ಅಥವಾ ಮುಂದಿನ ದಿನಗಳಲ್ಲಿ ಘಟಿಸಬಹುದು ಇತ್ಯಾದಿ, ಇದು ನಮಗೆಲ್ಲಾ ಕಲಿಸುತ್ತಾ ಬಂದಿರುವ ಹಾಗೂ ಈ ಶ್ಲೋಕವನ್ನು ವ್ಯಾಖ್ಯಾನಿಸುವ ಒಂದು ಪ್ರಸಿದ್ಧ ಮತ್ತು ಪ್ರಮುಖ ರೀತಿ.

ಆದರೆ, ನೀವು ಇಪ್ಪತ್ತೊಂದನೆಯ ಶತಮಾನದ ದೃಷ್ಟಿಕೋನದಿಂದ ಈ ಶ್ಲೋಕವನ್ನು ಮತ್ತೊಮ್ಮೆ ಓದಿದರೆ ಇಲ್ಲೊಂದು ಎದ್ದು ಕಾಣುವ ಹಾಗೂ ಬೆಕ್ಕಸ ಬೆರಗಾಗುವಂತೆ ಮಾಡುವ ವಿಚಾರವಿದೆ. ಈ ವಿಚಾರವನ್ನು ನಾನು ನನ್ನಪದಗಳಲ್ಲಿ ನಿರೂಪಿಸುವವನಿದ್ದೇನೆ; (ಇದು ಶ್ಲೋಕಗಳ ಕೇವಲ ಒಂದು ಹೊಸ ವ್ಯಾಖ್ಯಾನವಷ್ಟೆ ಅಲ್ಲ): ನೈತಿಕವಾಗಿರಲು *ಕಲಿಯುವ* ಒಂದು ಪ್ರಕ್ರಿಯೆ ಇದೆ, ಹಾಗೂ ಈ ಪ್ರಕ್ರಿಯೆಯು ಸಮಾಜದಲ್ಲಿರುವ ಕಲಿಕಾ ಪ್ರಕ್ರಿಯೆ ಎಂಬುದು ಒಂದು ಸಿದ್ಧಾಂತ. ಇಂತಹ ಒಂದು ಕಲಿಕಾ ಪ್ರಕ್ರಿಯೆಯು ಕ್ರಮೇಣ ಅವನತಿಯ ದಾರಿ ಹಿಡಿಯಬಹುದು ಅಥವಾ ಹಿಡಿಯುತ್ತದೆ, ಮತ್ತು ಇದೊಂದು ಅನಿವಾರ್ಯ ಸಂಗತಿ ಎಂಬುದು ಎರಡನೇಯ ಸಿದ್ಧಾಂತ. ತಾರ್ಕಿಕವಾಗಿ, ಈ ಎರಡು ಸಿದ್ದಾಂತಗಳಿಂದ ಹೊರಡುವ ವಿಚಾರವಿದು: ಯಾವಾಗೆಲ್ಲ ಸಾಮಾಜಿಕ ಕಲಿಕಾ ಪ್ರಕ್ರಿಯೆಯು ಅವನತಿ ಎಡೆಗೆ ಸಾಗುತ್ತದೆಯೋ, ಆಗ ಅವನತಿ ಒಂದು ಸಂದಿಗ್ಧ ಘಟ್ಟದಲ್ಲಿ, ಸಮಾಜದ ಮಟ್ಟದಲ್ಲಿ, ಕೆಲವು ಹೊಸ ಪ್ರಕ್ರಿಯೆಗಳು ಹುಟ್ಟಿಕೊಂಡು, ಈ ಕಲಿಕಾ ಪ್ರಕ್ರಿಯೆಯನ್ನು (ನೈತಿಕವಾಗಿರಲು, *ಕಲಿಯುವ* ಪ್ರಕ್ರಿಯೆ) ಪುನರುಜ್ಜೀವನಗೊಳಿಸುತ್ತವೆ.

ಭಾರತದಲ್ಲಿರುವ ನೈತಿಕ ಕಲಿಕೆಯ ಸ್ವರೂಪದ ಬಗ್ಗೆ ಇದೊಂದು ಅದ್ಭುತ ಹೇಳಿಕೆ (ಸದ್ಯಕ್ಕೆ ಇದರ ವ್ಯಾಪ್ತಿಯ ಮಿತಿಯನ್ನು ಭಾರತದ ಮಟ್ಟಿಗಷ್ಟೆ ಇಟ್ಟುಕೊಳ್ಳೋಣ). ಸಹಜವಾಗಿಯೆ ಅವರು (ಗೀತೆಯನ್ನು ಬರೆದ ಲೇಖಕನು/ಲೇಖಕರು) ತಮಗೆ ಪರಿಚಿತವಿದ್ದಂತಹ ಕೃಷ್ಣ ಮತ್ತು ಅವನ ‘ಅವತಾರಗಳ’ ಬಗೆಗಿನ ರೂಪಕಗಳನ್ನು ಬಳಸಿಕೊಂಡು ಈ ಮೇಲಿನ ಒಳನೋಟವನ್ನು ನಿರೂಪಿಸಿದ್ದಾರೆ. ಈ ರೂಪಕಗಳು ನಮ್ಮ ಕೈಕಟ್ಟಿ ಹಾಕಬೇಕಿಲ್ಲ. ಆದರೆ ಸಮಾಜದ ಸ್ವರೂಪದ ಬಗ್ಗೆ ಅವರು ನೀಡುವ ಈ ಒಳನೋಟಗಳು ಮಾತ್ರ ನಮ್ಮನ್ನು ಒಮ್ಮೆ ಅಲ್ಲಾಡಿಸಿ ಎಚ್ಚರಗೊಳಿಸಬೇಕು. ಅವರು ಹೇಗೆ ಮತ್ತು ಎಲ್ಲಿ ಈ ಒಳನೋಟಗಳನ್ನು ಕಂಡುಕೊಂಡರು? ಈ ವಿಚಾರಗಳನ್ನು ಚರ್ಚಿಸಿದ್ದಾದರೂ ಹೇಗೆ? ಯಾವ ರೀತಿಯ ಸಂಶೋಧನೆಯಿಂದ ಅವರು ಅದ್ಭುತವಾದ ಈ ಒಳನೋಟವನ್ನು ಪಡಕೊಂಡರು? ನಾವು ಹೆಸರಿಸಬಹುದಾದ (ನೈತಿಕ ಕಲಿಕೆಯ ಬಗೆಗಿರುವ ) ಮನಶ್ಯಾಸ್ತ್ರ ಅಥವಾ ಸಮಾಜಶಾಸ್ತ್ರದ ಯಾವ್ಯದೇ ಸಿದ್ದಾಂತಗಳಿಗಿಂತ ಈ ಒಳನೋಟವು, ಒಂದು ವೇಳೆ ಅದು ತಪ್ಪಾಗಿದ್ದರೂ ಸಹ, * ಹಲವು ಜ್ಯೋತಿರ್ವಷಗಳಷ್ಟು* ಮುಂದಿದೆ.

ಈ ಎಲ್ಲಾ ಕಾರಣಗಳಿಂದಾಗಿ, ಕೇವಲ ಈ ಎರಡು ಶ್ಲೋಕಗಳು ನೈತಿಕ ಕಲಿಕೆಯ ಸ್ವರೂಪದ ಕುರಿತು ಒಂದು ಉತ್ಕೃಷ್ಟ ವೈಜ್ಞಾನಿಕ ಉಹಾಸಿದ್ದಾಂತವನ್ನು (hypothesis) ನಿರೂಪಿಸುತ್ತವೆ. ಯಾವ ವಿಚಾರವನ್ನು (ಉದಾಹರಣೆಗೆ, ನಾನು ಮೇಲೆ ಗುರುತಿಸಿದ ಎರಡು ಸಿದ್ಧಾಂತಗಳು) ಈ ಶ್ಲೋಕಗಳು ಪ್ರಮಾಣಿತ ಸಿದ್ಧಾಂತವೆಂದು ಪರಿಗಣಿಸುತ್ತವೆಯೋ, ಆ ವಿಚಾರದ ಅಸ್ತಿತ್ವದ ಬಗ್ಗೆ ಪಾಶ್ಚಿಮಾತಯ ಸಂಸ್ಕೃತಿಗೆ ಸಣ್ಣ ಕಲ್ಪನೆ ಕೂಡಾ ಇಲ್ಲವಲ್ಲ. ಹೇಗೆ ಮತ್ತು ಏತಕ್ಕಾಗಿ ಅಷ್ಟೊಂದು ಸಾವಿರ ವರ್ಷಗಳ ಕೆಳಗೆ ಭಾರತೀಯರು ಈ ವಿಚಾರಗಳ ಬಗ್ಗೆ ಯೋಚಿಸಿದರು? ನಿಜವಾಗಿಯು ರುದ್ರಾ, ನಾನು ಮೂಕವಿಸ್ಮಿತನಾಗಿದ್ದೇನೆ

ಯದಾ ಯದಾಹಿ ಧರ್ಮಸ್ಯ

ಗ್ಲಾನಿರ್ಭವತಿ ಭಾರತ

ಅಭ್ಯುತ್ಥಾನಮಧರ್ಮಸ್ಯ

ತದಾತ್ಮಾನಂ ಸೃಜಾಮ್ಯಹಮ್ (ಭಗವದ್ಗೀತಾ 4: 7)

ಪರಿತ್ರಾಣಾಯ ಸಾಧೂನಾಂ

ವಿನಾಶಯ ಚ ದುಷ್ಕೃತಾಮ್

ಧರ್ಮಸಂಸ್ಥಾಪನಾರ್ಥಾಯ

ಸಂಭವಾಮಿ ಯುಗೇ ಯುಗೇ (ಭಗವದ್ಗೀತಾ 4: 8)

ಹೆಚ್ಚಿನ ಓದಿಗಾಗಿ

20
ನವೆಂ

ಕೋಮುವಾದವೂ ಮೂಲಭೂತವಾದವೂ

ಅಜಕ್ಕಳ ಗಿರೀಶ ಭಟ್

ದಕ್ಷಿಣ ಕನ್ನಡದಲ್ಲಿ ಈಚಿನ ವರ್ಷಗಳಲ್ಲಿ ಹಿಂದೂ- ಮುಸ್ಲಿಂ ಸಂಘರ್ಷಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಸಾಕಷ್ಟು ಲೇಖನಗಳು ಕಾಲಕಾಲಕ್ಕೆ ವಿವಿಧ ಪತ್ರಿಕೆಗಳಲ್ಲಿ ಬಂದಿವೆ. ಪುಸ್ತಕಗಳೂ ಬಂದಿವೆ. ಆದರೆ , ಹೆಚ್ಚಿನ ಲೇಖನಗಳು ಸಮಸ್ಯೆಯ ಆಳಕ್ಕಿಳಿದು ಚರ್ಚಿಸುವುದಿಲ್ಲ. ಮೇಲು ಮೇಲಿಂದ ನೊಡಿ ಎಲ್ಲ ಕೋಮುವಾದಿಗಳನ್ನು ಖಂಡಿಸಬೇಕು ಎಂದು ಹೇಳಿದಾಕ್ಷಣ ಸಮಸ್ಯೆ ಪರಿಹಾರವಾಗದು.

ವಾಸ್ತವವಾಗಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳು ಬದುಕನ್ನು ಗ್ರಹಿಸುವ ಬಗೆಯಲ್ಲಿಯೇ ವ್ಯತ್ಯಾಸಗಳಿವೆ.

ಹಿಂದೂ ಎಂಬೊಂದು ಏಕರೂಪಿ ಘಟಕ ಇಲ್ಲ ನಿಜ. ಆದರೆ ಸೃಷ್ಟಿ ಮತ್ತು ಸೃಷ್ಟಿಕರ್ತ ಇವೆಲ್ಲ ಪೂಜನೀಯ ಎಂದು ಗ್ರಹಿಸುವ ,ಅಂಥ ನಂಬಿಕೆಗಳನ್ನು ಹೊಂದಿರುವುದೇ ಈ “ಹಿಂದು” ಎಂದು ನಾವು ಅನುಕೂಲಕ್ಕಾಗಿ ಕರೆಯುವ ಗುಂಪುಗಳ ನಡುವೆ ಇರುವ ಸಾಮ್ಯತೆ ಎನ್ನಬಹುದು. ಇಂಥ ನಂಬಿಕೆಗಳು ಬಹುಸಂಸ್ಕೃತಿಗಳ ಅಸ್ತಿತ್ವಕ್ಕೆ ಪೂರಕ ಎಂದು ಬೇರೆ ಹೇಳಬೇಕಾಗಿಲ್ಲ. ಹಿಂದೂ ಧರ್ಮಗಳ ಒಳಗೇ ಭೇದಭಾವ ಇತ್ಯಾದಿ ಸಮಸ್ಯೆಗಳಿವೆ.ಅದು ಸಾಕಷ್ಟು ಚರ್ಚಿತವಾದ ವಿಷಯವೇ ಆಗಿದೆ.

ವಾಸ್ತವವಾಗಿ ಹಿಂದೂ-ಮುಸ್ಲಿಂ ಸಂಘರ್ಷವೆಂದರೆ ಅದು ಆಧುನಿಕತೆಗೆ ತೆರೆದುಕೊಂಡ ಮತ್ತು ಹಾಗೆ ತೆರೆದುಕೊಳ್ಳಲು ಹಿಂಜರಿಯುವ ಸಂಸ್ಕೃತಿಗಳ ನಡುವಿನ ಸಂಘರ್ಷವೂ ಹೌದು.ಅವರವರು ಅವರವರಷ್ಟಕ್ಕೇ ಇರಲಿ ಏನು ಸಮಸ್ಯೆ ಎನ್ನಲು ಸಾಧ್ಯವಿಲ್ಲ ಯಾಕೆಂದರೆ ಇವೆರಡೂ ಸಂಸ್ಕೃತಿಗಳೂ ಒಟ್ಟಿಗೇ ಬದುಕಬೇಕಾಗಿದೆ ಇಲ್ಲಿ.

ದಕ್ಷಿಣ ಕನ್ನಡದಲ್ಲಿ “ಹಿಂದೂ ಹುಡುಗಿ ” ಮತ್ತು “ಮುಸ್ಲಿಂ ಹುಡುಗ” ಜತೆಯಾಗಿ ಬಸ್ಸಲ್ಲಿ ಪ್ರಯಾಣಿಸಿದರೆ ಅಥವಾ ಪರಸ್ಪರ ಮಾತನಾಡಿದರೆ ಹಲ್ಲೆಗೆ ಒಳಗಾಗುವ ಪ್ರಸಂಗಗಳು ವರದಿಯಾಗುತ್ತವೆ.ಇಂಥ ಹಲ್ಲೆಗಳು ಖಂಡನೀಯವೇ ಹೌದು. ಇದರ ಹಿಂದೆ ಪುರುಷಾಹಂಕಾರದ ಪ್ರವೃತ್ತಿ ಇದೆ ಎನ್ನುವುದು ಎಲ್ಲರಿಗೂ ಅರ್ಥವಾಗುವ ವಿಚಾರ. ಆದರೆ ಇಂಥ ಪ್ರಸಂಗಗಳ ಬಗ್ಗೆ ಚಿಂತಿಸುವಾಗ ಇನ್ನಷ್ಟು ಸೂಕ್ಷ್ಮವಾಗಿ ನೋಡಬೇಕಾದ ಅಗತ್ಯವಿದೆ. ಉದಾಹರಣೆಗೆ ಮಂಗಳೂರಿನ ಕುಪ್ರಸಿದ್ಧ ಪಬ್ ದಾಳಿಯ ನಂತರ ಮಂಗಳೂರು ಹೇಗೆ ಕೋಮುವಾದಿಗಳ ತಾಣವಾಗುತ್ತಿದೆ ಎನ್ನುವ ಲೇಖನ ದ ವೀಕ್ ಪತ್ರಿಕೆಯಲ್ಲಿ ಪ್ರಕಟವಾಯಿತು. ( ಎನ್, ಭಾನುತೇಜ್, ವೀಕ್, ಫೆಬ್ರವರಿ -೨೦೦೯). ಎಲ್ಲ ಸರಿ; ಆದರೆ ಅದರಲ್ಲಿದ್ದ ಕೆಲವು ಸಾಲುಗಳು ಹೀಗಿದ್ದವು.”ಮುಸ್ಲಿಂ ಹುಡುಗರು ಮತ್ತು ಹಿಂದೂ ಹುಡುಗಿಯರ ನಡುವಿನ ಸ್ನೇಹಕ್ಕೆ ಗರಿಷ್ಟ ಶಿಕ್ಷೆ. ಹಿಂದು ಹುಡುಗ-ಮುಸ್ಲಿಂ ಹುಡುಗಿ ಸ್ನೇಹದ ವಿರುದ್ಧ ಯಾವುದೇ ಅಟ್ಯಾಕ್ ಆದ ಬಗ್ಗೆ ವರದಿಗಳಿಲ್ಲ.”(ಪು.೧೬). ಈ ಹೇಳಿಕೆ ನಿಜವಾಗಿ ಮಿಸ್ ಲೀಡ್ ಮಾಡುವಂಥದ್ದು. ದ.ಕ.ದಲ್ಲಿ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಝತೆಯಾಗಿ ಓಡಾಡುವ ಸನ್ನಿವೇಶಗಳು ಇಲ್ಲವೆಂಬಷ್ಟು ಕಡಮೆ ಎನ್ನುವ ಸತ್ಯವನ್ನು ಈ ಹೇಳಿಕೆ ಮರೆಮಾಚುತ್ತದೆ. ಮತ್ತಷ್ಟು ಓದು »

15
ನವೆಂ

ಪೇಟೆ ಸಾಕು, ನಡೀರಿ ಹಳ್ಳಿಗೆ!

ಮಹೇಶಕುಮಾರ್ ನೀರ್ಕಜೆ
ಹಳ್ಳಿ ಮೇಲೋ ಪಟ್ಟಣ ಮೇಲೋ? ಶಾಲೆಗಳ ಚರ್ಚಾಕೂಟಗಳಲ್ಲಿ ಇಂಥಾದ್ದೊಂದು ಚರ್ಚೆ ಸಾಮಾನ್ಯವಾಗಿ ಇರುತ್ತಿತ್ತು. ಈ ಪ್ರಶ್ನೆಗೆ ಆಗ ಪರಿಹಾರ ಸಿಕ್ಕಿತ್ತೇ? ಗೊತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಂತೂ ಉತ್ತರವಿಲ್ಲದಂತಾಗಿದೆ. ನಿಖರವಾದ ಉತ್ತರವೊಂದನ್ನು ನಿರೀಕ್ಷಿಸುವುದು ಸಾಧುವೂ ಅಲ್ಲ. ಯಾಕೆಂದರೆ ಈ ಪ್ರಶ್ನೆಗೆ ಉತ್ತರ ಬಹುತೇಕವಾಗಿ ವೈಯಕ್ತಿಕ ಆಸಕ್ತಿ, ಕುಟುಂಬದ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಹಳ್ಳೀಲಿ ಯಾರನ್ನಾದರೂ ಈ ಪ್ರಶ್ನೆ ಕೇಳಿದರೆ ನೂರಕ್ಕೆ ತೊಂಭತ್ತರಷ್ಟು ಜನ ಪೇಟೇನೇ ಒಳ್ಳೆದು ಎನ್ನಬಹುದು. ಅದಕ್ಕೆ ಕಾರಣಗಳೂ ಸಾಕಷ್ಟು ಇರಬಹುದು. ಅದೇ ಪಟ್ಟಣಗಳಲ್ಲಿ ವಾಸಿಸುತ್ತಿರುವವರು ಅಲ್ಲಿನ ಜಂಜಾಟದಿಂದ ಬೇಸತ್ತಿರುತ್ತಾರೆ ಮತ್ತು ಹಳ್ಳಿ ಜೀವನದ ಬಗ್ಗೆ ಒಂದು ರೀತಿಯ ಕೃತ್ರಿಮವಾದ ಸುಂದರ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಲೇಖನದ ಉದ್ದೇಶ ಹಳ್ಳಿ ಮತ್ತು ಪಟ್ಟಣದ ಮಧ್ಯದ ಆಯ್ಕೆಯ ಬಗ್ಗೆ ಅಲ್ಲ, ಬದಲಾಗಿ ಇತ್ತೀಚೆಗೆ ಭಾರತೀಯ ಸಾಮಾಜದಲ್ಲಿ ಮತ್ತು ಪರಿಸರದಲ್ಲಾದ ಬದಲಾವಣೆಗಳ ಕುರಿತು ಒಂದು ಜಿಜ್ಞಾಸೆ – ಸಮಸ್ಯೆಗಳು, ಪರಿಹಾರಗಳು ಹಾಗೂ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವವರ ಬಗ್ಗೆ ಒಂದಿಷ್ಟು ವಿವರಗಳು.

ಮೊದಲಿಗೆ ಕೆಲವೊಂದು ಸರಳ ಮಾಹಿತಿಗಳು. ೨೦೦೮  ಅಂಕಿ-ಅಂಶಗಳ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯ ಶೇ ೩೦ ರಷ್ಟು ಜನ ಪಟ್ಟಣಗಳಲ್ಲಿ (ಮಹಾನಗರಗಳು, ನಗರಗಳು) ವಾಸಿಸುತ್ತಿದ್ದಾರೆ. ಈ ಸಂಖ್ಯೆ ೨೦೩೦ ರ ಹೊತ್ತಿಗೆ ಶೇ ೪೦ ಏರುತ್ತದೆ. ಈಗಿನ ಗತಿಯಲ್ಲೇ ಜನಸಂಖ್ಯೆ ಏರುತ್ತಿದ್ದರೆ ೨೦೩೦ ಕ್ಕೆ ಒಟ್ಟು ಜನಸಂಖ್ಯೆ ೧೪೭ ಕೋಟಿಗಳಷ್ಟಾಗುತ್ತದೆ ಮತ್ತು ಆ ಹೊತ್ತಿಗೆ ಶೇ ೪೦, ಅಂದರೆ ಸುಮಾರು ೬೦ ಕೋಟಿ ಜನ ಪಟ್ಟಣಗಳಲ್ಲಿ ವಾಸಿಸುತ್ತಾರೆ! ಇದು ಈಗಿನ ಪಟ್ಟಣಿಗರ ಸಂಖ್ಯೆ (ಸುಮಾರು ೩೫ ಕೋಟಿ) ಗಿಂತ ೨೫ ಕೊಟಿ ಹೆಚ್ಚು. ಮತ್ತಷ್ಟು ಓದು »