ವಿಷಯದ ವಿವರಗಳಿಗೆ ದಾಟಿರಿ

Posts from the ‘ವಿಜ್ಞಾನ’ Category

17
ಆಕ್ಟೋ

ವೈದ್ಯೋ ನಾರಾಯಣೋ ಹರಿ

ಮಧುಚಂದ್ರ ಭದ್ರಾವತಿ 

ಪ್ರತಿ ಸೇವೆಗೆ ಸೇವಾ ಶುಲ್ಕವೆಂದು ಪ್ರತಿಯೊಂದು ಕಾರ್ಮಿಕ ವರ್ಗವು  ಪಡೆಯುತ್ತದೆ . ಇಂದು  ಸೇವಾ ಶುಲ್ಕದಲ್ಲಿ ಸೇವೆ ಎನ್ನುವ ಪದ ತಾನಾಗೆ ಬೇರ್ಪಟ್ಟಿದೆ. ಈಗ ಶುಲ್ಕದ ಮೇಲೆ ಮತ್ತೊಂದು ರೀತಿಯ ಶುಲ್ಕವನ್ನು ಹಾಕಿ ಹಲ್ಕಿರಿಯುತ್ತ  ಗ್ರಾಹಕರನ್ನು ಶೋಷಣೆ ಮಾಡುವ ವ್ಯಾಮೋಹಕ್ಕೆ  ತಮ್ಮ ಸಂಸ್ಕಾರವನ್ನು ಮರೆತು ಬಿಟ್ಟು ಹಗಲು  ದರೋಡೆಯಲ್ಲಿ ಹಲವು  ಕಾರ್ಮಿಕ ವರ್ಗಗಳು  ನಿರತವಾಗಿವೆ. ಕೆಳ ಮಟ್ಟದ  ಕಾರ್ಮಿಕ ವರ್ಗದಿಂದ  ಹಿಡಿದು ಅತ್ಯುತ್ತಮ ಮಟ್ಟದ ಕಾರ್ಮಿಕ ವರ್ಗದವರೆಗೂ ಈ  ಸಂಸ್ಕಾರ ಅಂಟಿಕೊಂಡಿದೆ(ಎಲ್ಲರು ಈ ವರ್ಗಕ್ಕೆ  ಸೇರುವುದಿಲ್ಲ ,ಕೆಲವರು ಇದಕ್ಕೆ  ಅಪವಾದ ).

ಅದಕ್ಕೆ  ” ವೈದ್ಯ ” ಎಂಬ ಕಾರ್ಮಿಕ ವರ್ಗವು ಸಹ ತಡವಾಗಿ ಸೇರಿದರು ಎಲ್ಲ ವರ್ಗವನ್ನು ಮಿರಿ ಅತ್ಯಂತ ವೇಗವಾಗಿ ಮುನ್ನುಗುತ್ತಿದೆ. ಬಹುಶ ನಮ್ಮ ಸುತ್ತಮುತ್ತಲಿರುವ ವೈದ್ಯರನ್ನು ಮತ್ತು ಆಸ್ಪತ್ರೆಗಳನ್ನು ನೀವಾಗಿ ನಿಮ್ಮ ಮನದಲ್ಲಿ ಪ್ರಸ್ತಾಪಿಸಿದರೆ ಅದಕ್ಕೆ ತಕ್ಕ ಮಟ್ಟಿಗೆ ಉತ್ತರ ನಿಮಗೆ ದೊರೆಯುತ್ತದೆ . ಸೇವಾ ಮನೋಭಾವ ಎಂಬುದನ್ನು ಮರೆತು, ಕೇವಲ  ಹಣಕ್ಕಾಗಿ ತಮ್ಮನ್ನು ಮಾರಿಕೊಂಡು ತಮ್ಮ ಮೂಲ ವೃತ್ತಿಗೆ ದ್ರೋಹ ಬಗೆಯುತ್ತ  ಜೀವನವೆಂಬ ರಥವನ್ನು ಎಳೆಯುತ್ತಾ ರೋಗಿಗಳ ರಕ್ತವನ್ನು ಕುಡಿಯುತ್ತಿರುತ್ತಾರೆ. ವಾಸ್ತವ ಹೇಗಿದೆ ಎಂದರೆ ಇಂದು ವೈದ್ಯನೆಂದರೆ ಹಣ ಕೀಳುವ ಜಿಗಣೆ  ಎಂಬಂತಾಗಿದೆ.

ಮತ್ತಷ್ಟು ಓದು »

5
ಸೆಪ್ಟೆಂ

ವಿಲಕ್ಷಣ ದಾರ್ಶನಿಕ ಯೂ.ಜಿ,ಕೃಷ್ಣಮೂರ್ತಿ(ಯೂಜಿ)

-ಡಾ| ಜ್ಞಾನದೇವ್ ಮೊಳಕಾಲ್ಮುರು

ತನ್ನಲ್ಲಿ ನೀಡುವುದಕ್ಕೆ ಯಾವ ಸ೦ದೇಶವೂ ಇಲ್ಲವೆ೦ದು, ಈ ಜಗತ್ತಿನಲ್ಲಿ ನೀವು ಅರ್ಥಮಾಡಿಕೊ೦ಡು ಬದುಕುವ೦ಥದು ಏನೂ ಇಲ್ಲವೆ೦ದು ಸಾರಿಕೊ೦ಡೇ ಜಗತ್ತಿನ ಆಧ್ಯಾತ್ಮಿಕ ಜಿಜ್ಞಾಸುಗಳಲ್ಲಿ, ಚಿ೦ತಕರಲ್ಲಿ ಗಾಢ ಆಸಕ್ತಿ ಕೆರಳಿಸಿದ ಒಬ್ಬ ವರ್ಣರ೦ಜಿತ ದಾರ್ಶನಿಕ ಚಿ೦ತಕ ಉಪ್ಪಾಲೂರಿ ಗೋಪಾಲ ಕೃಷ್ಣಮೂರ್ತಿ.ಯೂಜಿಯೆ೦ದೇ ವಿಶ್ವಾದ್ಯ೦ತ ಚಿರಪರಿಚಿತ. ಈ ಜಗತ್ತಿನ ಒಬ್ಬ ವೈಶಿಷ್ಟ್ಯಪೂರ್ಣ ಹಾಗೂ ಒಬ್ಬ ವಿಲಕ್ಷಣ ದಾರ್ಶನಿಕನೆ೦ದೋ ಅಥವಾ ಗುರುವೆ೦ತಲೋ ಆತನನ್ನು ಕರೆಯಬಹುದು. ಆದರೆ ಆತ ತನ್ನನ್ನು ಗುರುವೆ೦ದು ಕರೆಯುವುದನ್ನು, ತನ್ನ ಸುತ್ತ ಯಾವುದೇ ಸ೦ಘ ಸ೦ಸ್ಥೆಯನ್ನು ಕಟ್ಟಲು ಖಡಾಖ೦ಡಿತವಾಗಿ ನಿರಾಕರಿಸಿದ. ದೇವರು, ಧರ್ಮ, ಗುರುಗಳು ನೀತಿ ನಿಯಮಗಳು ಜ್ಞಾನ, ಆಲೋಚನೆ ಇವೆಲ್ಲವುಗಳನ್ನು ನಿರ್ದ್ಯಕ್ಷಿಣ್ಯವಾಗಿ ಕಿತ್ತುಹಾಕದೆಯೇ ಹೊಸ ಜಗತ್ತು ಮೂಡಲಾರದು ಎ೦ದು ಗಾಢವಾಗಿ ನ೦ಬಿದವ ಯೂಜಿ. ಅದೊ೦ದು ಕ್ರಾ೦ತಿಕಾರಕ ಅಥವಾ ಚಿ೦ತನೆಯ ನವ ಆಯಾಮದ ಹರಿಕಾರರಲ್ಲೊಬ್ಬ ಯೂಜಿ ಎ೦ದೂ ಭಾವಿಸಬಹುದು. ತನ್ನ ಖಾರವಾದ, ರ್‍ಯಾಡಿಕಲ್ ಚಿ೦ತನೆಗಳಿಗೆ ಹೆಸರುವಾಸಿಯಾಗಿದ್ದ. ತನ್ನ ಬಳಿ ಹೋಗುವವರನ್ನು ಪೂರಾ ನಗ್ನಗೊಳಿಸುತ್ತಾನೆ. ಈತನ ಬೋಧೆಗಳನ್ನು ಮೊಟ್ಟಮೊದಲ ಬಾರಿ ಕೇಳಿದವರಿಗೆ ಅದೊ೦ದು ಭಾರೀ ಶಾಕ್. ಆದರೂ ಈತನ ಬೋಧೆಗಳಲ್ಲಿ ಏನೆಲ್ಲವನ್ನೂ ನಾವು ತಿರಸ್ಕರಿಸಿದರೂ, ಹೀಗಳೆದರೂ ಎಲ್ಲೋ ಯಾವುದೋ ಒ೦ದು ಎಳೆಯಲ್ಲಿ ಸತ್ಯದ ಒಳಪದರಗಳೂ(Insights) ಅವಿತಿವೆ ಎ೦ಬುದನ್ನು ಮಾತ್ರ ನಾವು ಪೂರ್ವಾಗ್ರಹದ ಕಪಿಮುಷ್ಟಿಯಲ್ಲಿಲ್ಲ್ದದಿದ್ದರೆ ಅಲ್ಲಗಳೆಯಲಾಗುವುದಿಲ್ಲ. ಅನೇಕರನ್ನು ಪ್ರಭಾವಗೊಳಿಸಿದ್ದಾನೆ. ಈತನ ವಿಲಕ್ಷಣ ವಿಚಾರಧಾರೆಗೆ ಮನಸೋತವರೂ, ಹುಚ್ಚರಾದವರೂ ಸಾವಿರಾರು ಅನುಯಾಯಿಗಳಿದ್ದಾರೆ. ಸ೦ಪ್ರದಾಯವಾದಿಗಳನ್ನು ದ೦ಗುಬಡಿಸಿ ಕೆರಳಿಸಿದ್ದಾನೆ. ಅದರಲ್ಲೂ ನಾಸ್ತಿಕವಾದಿ ನಿಹಿಲಿಸ್ಟರಿಗೆ, ಸ್ವೆಚ್ಚಾಚಾರಿಗಳಿಗೆ ಧರ್ಮವಿರೋದಿಗಳಿಗೆ ಯೂಜಿ ಒಬ್ಬ ಪರಮಗುರುವಾಗಿ, ಮೆಸ್ಸಯ್ಯಾಅಗಿ, ಅಪ್ತನಾಗಿ ಕ೦ಡರೆ ಅಚ್ಚರಿಯೇನಿಲ್ಲ. ಹಲವರು ಈತನನ್ನು ಜ್ಞಾನೋದಯವಾದ ಗುರು ಎ೦ದು ಭಾವಿಸಿದರೆ ಇನ್ನು ಹಲವರು ತಮ್ಮ ಹುಬ್ಬುಗಳನ್ನು ಏರಿಸಿ ಈತನೊಬ್ಬ ಹಾದಿಗೆಟ್ಟ, ಪರ್ವರ್ಟೆಡ್, ಐಡಿಯೋಸಿ೦ಕ್ರಾ೦ಟಿಕ್ ತತ್ವಜ್ಞಾನಿಯೆ೦ದೇ ಮೂದಲಿಸಿದ್ದಾರೆ. “‘ ನೀವು ಬೇರೆ ಯಾರಿ೦ದಲೂ ಕೇಳಿಸಿಕೊಳ್ಳದಿರುವ೦ಥ ಆಲೋಚನೆಯ ಬಗ್ಗೆ ಸ್ವಲ್ಪ ಹೇಳಿ. ಅಲ್ಲಿರುವುದು ಯೋಚನೆ ಮತ್ತು ಯೋಚನೆಯ ಬಗ್ಗೆಯೇ ಅಷ್ಟೇ.” ಎ೦ದು ಆಲೋಚನೆಯನ್ನೇ ನಿಮ್ಮ ಶತ್ರು ಎ೦ದು ಬಣ್ಣಿಸಿ ಅದನ್ನೇ ಮೂಲವಾಗಿ ಖ೦ಡಿಸುವ, ಯೂಜಿ ನಮ್ಮನ್ನೂ ಸ್ವಲ್ಪ ಮಟ್ಟಿಗೆ ಚಿ೦ತನೆಗೆ ಹಾಗೆಯೇ ಗೊ೦ದಲಕ್ಕೂ ಹಚ್ಚುತ್ತಾನೆ. ಈತನ ಬದುಕೇ ಒ೦ದು ನಾಟಕೀಯತೆಯಿ೦ದ ತು೦ಬಿದ್ದು ಅನೇಕ ಏರಿಳಿತಗಳಿ೦ದ ಕೂಡಿದ್ದು ಅದನ್ನೇ ಒ೦ದು ಗ್ರ೦ಥವಾಗಿ ಬರೆಯುವ ರೋಚಕ ದ್ರವ್ಯವನ್ನು ಹೊ೦ದಿದೆ.

ಮತ್ತಷ್ಟು ಓದು »

27
ಜೂನ್

ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ

– ಎ.ವಿ.ಜಿ ರಾವ್

ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ. ಎಲ್ಲ ಗುಣಲಕ್ಷಣಗಳನ್ನು ಒಟ್ಟಾರೆಯಾಗಿ ಪರಿಗಣಿಸಿದರೆ ಈ ಭೂಮಿಯ ಮೇಲೆ ಒಬ್ಬ ವ್ಯಕ್ತಿಗೆ ಪ್ರತಿಶತ ೧೦೦ ರಷ್ಟು ಸರಿಸಾಟಿಯಗಬಲ್ಲ ಇನ್ನೊಬ್ಬ ವ್ಯಕ್ತಿ ಇರುವುದಿಲ್ಲ. ಏಕಾಂಡಜ ಯಮಳರ ನಡುವೆ (ಐಡೆಂಟಿಕಲ್ ಟ್ವಿನ್ಸ್-ಇವರ ಜೈವಿಕ ಆನುವಂಶೀಯತೆ ಒಂದೇ ಆಗಿರುತ್ತದೆ) ಕೂಡ ಪ್ರತಿಶತ ೧೦೦ರಷ್ಟು ಸಮತೆ ಇರುವುದಿಲ್ಲ. ಅಂದ ಮಾತ್ರಕ್ಕೆ, ಮಾನವರಲ್ಲಿ ಸಮತೆ ಇಲ್ಲವೇ ಇಲ್ಲ ಎಂದು ತೀರ್ಮಾನಿಸ ಕೂಡದು. ಸಮತೆ ಮತ್ತು ವಿವಿಧತೆ ಇವೆರಡನ್ನೂ ಮಾನವರಲ್ಲಿ ಕಾಣಬಹುದು. ಯಾವದೇ ಒಂದು ಜೀವಿಜಾತಿಯನ್ನು ವೀಕ್ಷಿಸಿದರೂ ಸಾರ್ವತ್ರಿಕ ಲಕ್ಷಣಗಳಲ್ಲಿ ಸಮತೆಯೂ ನಿರ್ದಿಷ್ಟ ಲಕ್ಷಣಗಳಲ್ಲಿ ವಿವಿಧತೆಯೂ ಇರುವುದು ಗೋಚರಿಸುತ್ತದೆ. ಅಳತೆ ಮಾಡಬಹುದಾದ ಯಾವುದೇ ಮಾನವ ಲಕ್ಷಣವನ್ನು ಅಧ್ಯಯಿಸಿದರೂ ಈ ನಿಸರ್ಗ ನಿಯಮ ಸ್ಪಷ್ಟವಾಗುತ್ತದೆ. ಜೈವಿಕ ಆನುವಂಶೀಯತೆ ಮತ್ತು ಪರಿಸರಗಳ ನಡುವಿನ ಅನ್ಯೋನ್ಯಕ್ರಿಯೆಯೇ ಈ ವೈಚಿತ್ರ್ಯಕ್ಕೆ ಕಾರಣ.

ಸಹೋದರ ಸಹೋದರಿಯರ ಜನ್ಮದಾತೃಗಳು ಉಭಯಸಾಮಾನ್ಯರಾಗಿದ್ದರೂ ಅವರ ಜೈವಿಕ ಆನುವಂಶೀಯತೆ ಒಂದೇ ಆಗಿರುವುದಿಲ್ಲ. ವಂಶಪಾರಂಪರ್ಯವಾಗಿ ಬರಬಹುದಾದ ಗುಣಗಳ ವಾಹಕಗಳು ವಂಶವಾಹಿ (ಜೀನ್)ಗಳು ಎಂಬ ತಥ್ಯ ನಿಮಗೆ ತಿಳಿದಿದೆ. ಏಕಾಂಡಜ ಯಮಳರನ್ನು ಹೊರತುಪಡಿಸಿದರೆ ಬೇರೆ ಯಾವ ಇಬ್ಬರಲ್ಲಿಯೂ (ಅವರಿಬ್ಬರೂ ಒಂದೇ ಜನ್ಮದಾತೃಗಳಿಂದ ತಮ್ಮ ವಂಶವಾಹಿಗಳನ್ನು ಪಡೆದಿದ್ದರೂ) ಇವುಗಳು ಒಂದೇ ಆಗಿರುವುದು ಸಾಧ್ಯವೇ ಇಲ್ಲ. ಅಂದ ಮೇಲೆ, ಪ್ರತಿಯೊಬ್ಬ ವ್ಯಕ್ತಿಯ ಜೈವಿಕ ಆನುವಂಶೀಯತೆ ಅದ್ವಿತೀಯ ಅನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ವ್ಯಕ್ತಿಗಳ ಅದ್ವಿತೀಯತೆಗೆ ಇದು ಒಂದು ಕಾರಣ

ಮತ್ತಷ್ಟು ಓದು »

28
ಮೇ

ವೈಜ್ಞಾನಿಕ ಮನೋಧರ್ಮ ಉಳ್ಳ ಶ್ರೀಸಾಮಾನ್ಯ

-ಎ.ವಿ.ಜಿ ರಾವ್

ಶಾಲೆಗೇ ಹೊಗದಿರುವ ಶ್ರೀಸಾಮಾನ್ಯನೂ ವಿಜ್ಞಾನ ಪದವೀಧರನಿಗಿಂತ ಹೆಚ್ಚು ವೈಜ್ಞಾನಿಕ ಮನೋಧರ್ಮ ಉಳ್ಳವನಾಗಿರುವುದು ಸಾಧ್ಯ. ವೈಜ್ಞಾನಿಕ ಮನೋಧರ್ಮ ಅಂದರೇನು ಅನ್ನುವುದರ ಕುರಿತು ಪಾಂಡಿತ್ಯಪೂರ್ಣ ಪ್ರವಚನ ನೀಡಬಲ್ಲವರು, ವೈಜ್ಞಾನಿಕ ಸಂಶೋಧನೆ ಮಾಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿರುವ ‘ವೃತ್ತಿಪರ’ ವಿಜ್ಞಾನಿಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ವೈಜ್ಞಾನಿಕ ಮನೋಧರ್ಮ ಪ್ರದರ್ಶಿಸದಿರುವ ಅಸಂಖ್ಯ ನಿದರ್ಶನಗಳು ಲಭಿಸುತ್ತವೆ. ವೈಜ್ಞಾನಿಕ ಮನೋಧರ್ಮ ಅಂದರೇನು ಎಂಬುದನ್ನು ತಿಳಿಯದೆಯೂ (ನೋಡಿ:ವಿಜ್ಞಾನ ವಿಧಾನ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕ ಪ್ರವೃತ್ತಿ, ಮೂಢನಂಬಿಕೆಗಳು) ವಿಜ್ಞಾನದ ಗಂಧಗಾಳಿ ಇಲ್ಲದೆಯೂ ನಿತ್ಯಜೀವನದಲ್ಲಿ ವೈಜ್ಞಾನಿಕ ಮನೋಧರ್ಮ ಉಳ್ಳವರಾಗಿರುವುದು ಸಾಧ್ಯ.

ಈ ಮುಂದೆ ವಿವರಿಸಿರುವ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವೂ ವೈಜ್ಞಾನಿಕ ಮನೋಧರ್ಮ ಉಳ್ಳವರು. ಇಲ್ಲದೇ ಇದ್ದರೆ ಅವನ್ನು ಪ್ರಜ್ಞಾಪೂರ್ವಕವಾಗಿ ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ, ಮುಂದೊಂದು ದಿನ ನಿಮಗರಿವಿಲ್ಲದೆಯೇ ವೈಜ್ಞಾನಿಕ ಮನೋಧರ್ಮ ಉಳ್ಳವರು ನೀವಾಗಿರುತ್ತೀರಿ.

ಈ ಮುಂದಿನ ಕಾಲ್ಪನಿಕ ವಿದ್ಯಮಾನದ ನಿದರ್ಶನದಲ್ಲಿ ವರ್ಣಿಸಿದ ವ್ಯಕ್ತಿ ನೀವಾಗಿರಬಹುದೇ—–

ಮತ್ತಷ್ಟು ಓದು »

21
ಮೇ

ವಿಜ್ಞಾನ ವಿಧಾನ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕ ಪ್ರವೃತ್ತಿ, ಮೂಢನಂಬಿಕೆಗಳು

– ಎ.ವಿ.ಜಿ ರಾವ್

ವಿಜ್ಞಾನ ವಿಧಾನದಲ್ಲಿ (ಸೈಂಟಿಫಿಕ್ ಮೆತಡ್) ತರಬೇತಿ ನೀಡುವುದು, ವೈಜ್ಞಾನಿಕ ಮನೋಧರ್ಮ (ಸೈಂಟಿಫಿಕ್ ಆಟಿಟ್ಯೂಡ್) ಬೆಳೆಸುವುದು, ವೈಜ್ಞಾನಿಕ ಪ್ರವೃತ್ತಿ (ಸೈಂಟಿಫಿಸಿಟಿ) ಬೆಳೆಸುವುದು, ಮೂಢನಂಬಿಕೆಗಳನ್ನು ತೊಡೆದು ಹಾಕುವುದು – ಇವೆಲ್ಲ ಪದಪುಂಜಗಳ ಬಳಕೆ ಇಂದು ಫ್ಯಾಷನ್ ಆಗಿದ್ದರೂ ಅವುಗಳ ಅರ್ಥ ಅನೇಕರಿಗೆ ಮನೋಗತವಾಗಿಲ್ಲ ಎಂಬುದು ನನ್ನ ಅನಿಸಿಕೆ. ವೈಜ್ಞಾನಿಕ ಮನೋಧರ್ಮವನ್ನು ಜನಸಾಮಾನ್ಯರಲ್ಲಿ ಬೆಳೆಸುವ ಕಾಯಕದಲ್ಲಿ ಪ್ರಾಮಾಣಿ ‘ವೈಜ್ನಾನಿಕ’, ‘ಅವೈಜ್ಞಾನಿಕ’ – ಈ ಪದಗಳನ್ನು ಅನುಕ್ರಮವಾಗಿ ಹೊಗಳಿಕೆಯ ಮತ್ತು ತೆಗಳಿಕೆಯ ಪದಗಳಾಗಿ ಬಳಸುತ್ತಿರುವವರಿಗಂತೂ ಖಂಡಿತ ಆಗಿಲ್ಲ.   ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸಲು ಶ್ರಮಿಸುತ್ತಿರುವ ಸ್ವಯಂಸೇವಾ ಸಂಘಟನೆಗಳಿಗೂ ಶಿಕ್ಷಕರಿಗೂ ಇವುಗಳ ಸ್ಪಷ್ಟ ಪರಿಕಲ್ಪನೆ ಇದ್ದರೆ ವಸ್ತುಸ್ಥಿತಿಯಲ್ಲಿ ಕೊಂಚ ಸುಧಾರಣೆ ಆದೀತು.

ಅತಿ ಸಂಕ್ಷಿಪ್ತವಾಗಿ ಇವನ್ನು ಇಂತು ವ್ಯಾಖ್ಯಾನಿಸ ಬಹುದು – ವಸ್ತುಪ್ರಪಂಚದ ಆಗುಹೋಗುಗಳ ನಿರ್ಧಾರಕ ನಿಯಮಗಳನ್ನು ಆವಿಷ್ಕರಿಸುವುದು ಪ್ರಧಾನ ಗುರಿಯಾಗಿರುವ ನಿಸರ್ಗವಿಜ್ಞಾನಗಳಲ್ಲಿ ಜ್ಞಾನ್ವೇಷಣೆಗೆ ಅನುಸರಿಸುವ ವಿಶಿಷ್ಟ ವಿಧಾನವೇ ವಿಜ್ಞಾನ ವಿಧಾನ (ಇದನ್ನು ವಿಜ್ಞಾನ ಮಾರ್ಗ, ವೈಜ್ಞಾನಿಕ ವಿಧಾನ ಎಂದು ಉಲ್ಲೇಖಿಸುವುದೂ ಉಂಟು). ಈ ವಿಧಾನವನ್ನು ಸಮರ್ಪಕವಾಗಿ ಅನುಸರಿಸಲು ತಳೆದಿರಲೇಬೇಕಾದ ಮನೋಭಾವವೇ ವೈಜ್ಞಾನಿಕ ಮನೋಧರ್ಮ. ವಿಜ್ಞಾನ ವಿಧಾನವೇ ಸಮಸ್ಯೆಗಳನ್ನು ಪರಿಹರಿಸಲು ಇರುವ ಅತ್ಯುತ್ತಮ ವಿಧಾನ ಎಂಬ ಅಚಲ ವಿಶ್ವಾಸದಿಂದ ಎಂಥ ಅಡ್ಡಿಆತಂಕಗಳು ಎದುರಾದರೂ ವೈಜ್ಞಾನಿಕ ಮನೋಧರ್ಮವನ್ನು ಕೈಬಿಡದೆಯೇ ಮುಂದುವರಿಯುವ ಪ್ರವೃತ್ತಿಯೇ ವೈಜ್ಞಾನಿಕ ಪ್ರವೃತ್ತಿ.

ಮತ್ತಷ್ಟು ಓದು »

9
ಮೇ

ಗಣಿತ, ವಿಜ್ಞಾನ ಮತ್ತು ಸ್ವತಂತ್ರ ಅಸ್ತಿತ್ವ

-ಬಾಲಚಂದ್ರ ಭಟ್

ಗಣಿತ ಎಂದರೆ ಏನು?ಅಂಕೆ, ಸಂಖ್ಯೆಗಳು ಎಲ್ಲಿಂದ ಬಂತು?ಇವು ನಿಜವೇ? ಗಣಿತದ ಉಗಮ ಮನುಷ್ಯನ ಬುದ್ಧಿ ಸಾಮರ್ಥ್ಯದ ಮುಖಾಂತರ ರೂಪುಗೊಂಡದ್ದೋ ಅಥವಾ ಮನುಷ್ಯನಿಂದ ಹೊರತಾದ ಸ್ವತಂತ್ರ ಅಸ್ತಿತ್ವವನ್ನು ಹೊಂದಿದೆಯೋ?

ಬಹುಷಃ ಈ ಪ್ರಶ್ನೆಗಳನ್ನು ಉತ್ತರಿಸುವದು ಸ್ವತಃ ಗಣಿತದಲ್ಲಿ ಅಗಾಧ ಪ್ರತಿಭೆಯನ್ನು ಹೊಂದಿದವರಿಗೂ ಕಷ್ಟ. ಆದರೂ ಹಿಂದಿನ ಕಾಲದ ಅಂದರೆ  ಗ್ರೀಕರ ಕಾಲದ ಪೈಥಾಗೊರಸ್ ನಿಂದ ಹಿಡಿದು ೧೯ ನೆಯ ಶತಮಾನದ ಲಿಯೋಪೋಲ್ಡ್ ಕ್ರೋನೆಕರ್ (Leopold Kronecker) ವರೆಗಿನ ಬಹುತೇಕ ಗಣಿತದ ತಜ್ಞರು ಗಣಿತವು ಸ್ವತಂತ್ರ ಅಸ್ತಿತ್ವವನ್ನು ಹೊಂದಿದೆಯೆಂದೂ, ಅಂಕೆ, ಸಂಖ್ಯೆಗಳು ಮಾನವ ನಿರ್ಮಿತವಾಗಿರದೆ ಅವುಗಳು ಸರ್ವಸ್ವತಂತ್ರ ಸತ್ಯ, ನಿತ್ಯಸ್ಥಾಯಿ, ಹಾಗೂ ಮೌಲ್ಯವನ್ನು ಸೂಚಿಸುವ ಆದರ್ಶ ಮಾನ ಎಂದೂ ನಂಬಿದ್ದರು. ಆದರೆ ಅದಕ್ಕಿಂತಲೂ ಮುಖ್ಯವಾಗಿ ಇಂತಹ ಪ್ರಶ್ನೆಗಳು ಗಣಿತಶಾಸ್ತ್ರದ ಪ್ರಕಾರ ಬಹುಷಃ ಅಸಂಬದ್ಧ. ಆದ್ದರಿಂದಲೇ ಇದನ್ನು ಚರ್ಚಿಸುವ ಗೋಜಿಗೆ ಯಾರೂ ಹೋಗಲಿಲ್ಲ. ಆದರೆ ಮನೋವಿಜ್ಞಾನಿಗಳಿಗೆ, ಗಣಿತ ಹಾಗೂ ಅದರ ನಿಯಮಗಳಿಗಿಂತಲೂ ಈ ಮೇಲಿನ ಪ್ರಶ್ನೆಗಳು ಬಹಳ ಮುಖ್ಯ.

ಆದರೆ, ನಿಜಕ್ಕೂಗಣಿತವು ಮಾನವನ ಬುದ್ಧಿಶಕ್ತಿ ಹಾಗೂ ಗ್ರಾಹ್ಯಶಕ್ತಿ(perception) ಯಿಂದ ಹೊರತಾದ ‘ಸ್ವತಂತ್ರ’ ಅಸ್ತಿತ್ವವನ್ನು ಹೊಂದಿಲ್ಲ.  ಅಂಕೆಗಳು, ಸಂಖ್ಯೆಗಳು ಹಾಗೂ ಗಣಿತದ ನಿಯಮಗಳು ಬರೇ ಮಾನವನ ಗ್ರಾಹ್ಯ ಶಕ್ತಿಯಿಂದ ನಿರ್ಮಿತವಾದವು ಮತ್ತು ಮಾನವನ ಗ್ರಾಹ್ಯಶಕ್ತಿಗೆ ಹಾಗೂ ಬುದ್ಧಿ ಶಕ್ತಿಗೆ ತಕ್ಕಂತೆ ಅವು ‘ಸತ್ಯ’ ಅಷ್ಟೆ. ಅಲ್ಬರ್ಟ್ ಐನ್ ಸ್ಟೀನ್ ತಮ್ಮ ಸೊಗಸಾದ ವೈಜ್ಞಾನಿಕ ಭಾಷೆಯಲ್ಲಿ ಹೀಗೆ ಹೇಳುತ್ತಾರೆ ”the series of integers is obviously an invention of the human mind, a self-created tool which simplifies the ordering of certain sensory experiences (ನಿಜವಾಗಿಯೂ ಕ್ರಮಾನುಗತ ಸಂಖ್ಯೆಗಳೆಲ್ಲವೂ ಮಾನವನ ಬುದ್ಧಿಯಿಂದ ರಚಿತವಾದವುಗಳು ಮತ್ತು ಅವುಗಳು ಮನುಷ್ಯನ ಇಂದ್ರಿಯಾನುಭವಗಳ ಅನುಕ್ರಮವನ್ನು ಸುಲಭಗೊಳಿಸಲು ಮಾನವನಿಂದ ಸ್ವ-ನಿರ್ಮಿತವಾದವು)”. ಮನಶ್ಯಾಸ್ತ್ರಜ್ಞರೇ ಹೇಳಿದಂತೆ ಎಷ್ಟು ಸ್ಪುಟವಾಗಿದೆ!

ಮತ್ತಷ್ಟು ಓದು »

24
ಏಪ್ರಿಲ್

ಒಳಸಂಚಿಗೆ ಬೇಕಿದೆ ಆತ್ಮವಿಶ್ವಾಸದ ಅಗ್ನಿಸ್ಪರ್ಷ

– ಚಕ್ರವರ್ತಿ ಸೂಲಿಬೆಲೆ
   ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ!?

ನಾಲ್ಕು ವರ್ಷಗಳ ತಪಸ್ಸು ಪೂರ್ಣಗೊಂಡಿದೆ. ೭೦೦ ಕಿ.ಮೀ.ದೂರದವರೆಗೂ ಹೋಗಿ ಶತ್ರು ಠಾಣ್ಯ ನಾಶ ಮಾಡಿಬರಬಲ್ಲ. ಅಗ್ನಿ ೧ನ್ನು ನಭಕ್ಕೆ ಹಾರಿಬಿಟ್ಟಾಗಿನಿಂದಲೂ ೫,೦೦೦ ಕಿ.ಮೀ. ದೂರಕ್ಕೆ ಹೋಗಬಲ್ಲ ಅಗ್ನಿಯ ಕನಸು ಕಾಣುತ್ತಲೇ ಇದ್ದವರು ನಾವು. ಮೊನ್ನೆ ಅಗ್ನಿ ೫ ಯಶಸ್ವಿಯಾಗಿ ಉಡಾವಣೆಗೊಂಡು ಸೈನ್ಯದ ಶಕ್ತಿಯನ್ನು ನೂರ್ಮಡಿಗೊಳಿಸಿದಾಗ ಆ ಕನಸು ನನಸಾಯಿತು. ಕನಸು ನನಸುಗಳ ಕತೆ ಏನೇ ಇರಲಿ. ಸೈನ್ಯದ ಸಾಮರ್ಥ್ಯದ ಕುರಿತಂತೆ ನಡೆಯುತ್ತಿದ್ದ ವಾದ ವಿವಾದಗಳಿಂದ ಈ ಪರೀಕ್ಷೆ ಕೇಂದ್ರ ಸರ್ಕಾರವನ್ನಂತೂ ಪಾರುಮಾಡಿತು. ಅಗ್ನಿಯೂ ತಂಪೆರೆಯಬಲ್ಲದೆಂದರೆ ಹೀಗೇ ನೋಡಿ!

ಈ ನಾಲ್ಕು ವರ್ಷಗಳ ಪ್ರಯತ್ನ ಅಂತ್ಯ ಕಾಣಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿತ್ತು. ಆದರೆ ರಕ್ಷಣಾ ಸಚಿವ ಆಂಟನಿ ವಿಜ್ಞಾನಿಗಳಿಗೆ ದುಂಬಾಲು ಬಿದ್ದು ಈ ಪ್ರಯೋಗವನ್ನು ಸಾಧ್ಯವಾಗಿಸಿ ಯಶಸ್ಸು ಗಳಿಸಿಕೊಂಡರು. ಈ ನಿಟ್ಟಿನಲ್ಲಿ ಡಿಆರ್‌ಡಿಓಗೆ ಸಹಕಾರಿಯಾಗಿ ಹಲವು ವೈಜ್ಞಾನಿಕ ಸಂಸ್ಥೆಗಳು ದುಡಿದಿವೆ. ಯಶಸ್ಸಿನ ಈ ಹೊತ್ತಿನಲ್ಲಿ ಆ ವಿಜ್ಞಾನಿಗಳಿಗೆಲ್ಲ ಒಂದು ಪ್ರೀತಿಯ ಸಲಾಮು.

ಮತ್ತಷ್ಟು ಓದು »

19
ಏಪ್ರಿಲ್

ನಮ್ಮ ಕ್ಷೀರಪಥದಲ್ಲಿ ಹಲವು ಶತಕೋಟಿ ವಾಸಯೋಗ್ಯ ಗ್ರಹಗಳಿವೆಯಂತೆ!

 – ವಿಷ್ಣುಪ್ರಿಯ

ನಮ್ಮ ಕ್ಷೀರಪಥದಲ್ಲಿ ಕನಿಷ್ಠವೆಂದರೂ ೧೬೦ ಶತಕೋಟಿ ಕೆಂಪು ಕುಬ್ಜ ನಕ್ಷತ್ರಗಳಿವೆ. ಈ ನಕ್ಷತ್ರಗಳ ಸುತ್ತ ಕನಿಷ್ಠ ಒಂದು ಸೂಪರ್ ಅರ್ಥ್ ಪರಿಭ್ರಮಿಸುತ್ತಿದ್ದರೂ ೧೬೦ ಶತಕೋಟಿ ಸೂಪರ್‌ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು. ಅಥವಾ ಶೇ.೪೦ರಷ್ಟೇ ಕೆಂಪು ಕುಬ್ಜ ಸೂರ್ಯರು ಸೂಪರ್ ಅರ್ಥ್ ಹೊಂದಿರುವುದು ಎಂಬ ವಾದವನ್ನು ಪರಿಗಣಿಸಿದರೂ ೬೪ ಶತಕೋಟಿ ಸೂಪರ್ ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು.

ಭೂಮಿಯನ್ನೊಳಗೊಂಡ ನಮ್ಮ ಸೌರಮಂಡಲ ಇರುವಂಥ ಕ್ಷೀರಪಥ ಗೆಲಾಕ್ಸಿಯಲ್ಲಿ ವಾಸಯೋಗ್ಯವಾಗಿರುವ ಗ್ರಹಗಳಿರಬಹುದೇ? ಬಾಹ್ಯಾಕಾಶದಾಚೆಗೆ ಸಾವಿರಾರು ಕೋಟಿ ಮೈಲಿಗಳ ದೂರದವರೆಗೆ ಎಲ್ಲಿಯಾದರೂ ಜೀವಾಸ್ತಿತ್ವಕ್ಕೆ ಅನುಕೂಲವಾಗುವಂಥ ಪ್ರದೇಶವಿದೆಯೇ ಎಂಬ ಹುಡುಕಾಟ ತಾರಕಸ್ಥಾಯಿ ತಲುಪಿರುವ ಈ ಹೊತ್ತಿನಲ್ಲಿ ಇಂಥದ್ದೊಂದು ಪ್ರಶ್ನೆ ಅಚ್ಚರಿ ಎನ್ನಿಸುವುದಿಲ್ಲ. ಕ್ಷೀರಪಥದೊಳಗೇ ವಾಸಯೋಗ್ಯ ಗ್ರಹಗಳು ಖಂಡಿತವಾಗಿಯೂ ಇರಬಹುದು ಎಂಬ ಉತ್ತರವೇ ಸಿಗುತ್ತದೆ. ಆದರೆ ಈ ಪ್ರಶ್ನೆಯ ಬೆನ್ನಿಗೇ ಎಷ್ಟು ಗ್ರಹಗಳು, ಆಕಾಶಕಾಯಗಳು ವಾಸಯೋಗ್ಯ ಪ್ರದೇಶಗಳನ್ನು ಹೊಂದಿರಬಹುದು? ಎಂಬ ಇನ್ನೊಂದು ಪ್ರಶ್ನೆ ಎಸೆದರೆ ಬಹುಶಃ ಅದಕ್ಕೆ ನಿಖರವಾದ ಉತ್ತರವನ್ನು ಕೊಡುವುದಕ್ಕೆ ಪರಿಣತ ವಿಜ್ಞಾನಿಗಳಿಂದಲೂ ಸಾಧ್ಯವಾಗದು.

ಮತ್ತಷ್ಟು ಓದು »

18
ಏಪ್ರಿಲ್

ಶಾರ್ಟ್ ವೇವ್ ರೇಡಿಯೋ ಪ್ರಸಾರದಲ್ಲಿ ಕನ್ನಡದ ದನಿಯಿಲ್ಲ

-ಸಾತ್ವಿಕ್ ಎನ್ ವಿ

ಕನ್ನಡಿಗನೊಬ್ಬ ತನ್ನ ಕೆಲಸದ ನಿಮಿತ್ತ ಕರ್ನಾಟಕದ ಹೊರಗೆ ಬದುಕಬೇಕಾಗಿ ಬಂದರೆ ಆತನಿಗೆ ಕನ್ನಡ ಆಕಾಶವಾಣಿ ಕೇಳಲು ಸಾಧ್ಯವಿಲ್ಲ. ಕಾರಣ, ಕಿರುತರಂಗಾಂತರ ಅಂದರೆ ಶಾರ್ಟ್‌ವೇವನಲ್ಲಿ ಕನ್ನಡದ ಯಾವುದೇ ಆಕಾಶವಾಣಿ ಕೇಂದ್ರ ಪ್ರಸಾರ ಮಾಡುತ್ತಿಲ್ಲ. ಆದರೆ ಇಂಥ ಪರಿಸ್ಥಿತಿ ಇತರೆ ಭಾಷಿಕರಿಗೆ ಇದೆಯೇ? ಇಲ್ಲ. ಕನ್ನಡವನ್ನು ಬಿಟ್ಟು ಮಿಕ್ಕೆಲ್ಲ ದಕ್ಷಿಣಭಾರತದ ಭಾಷೆಗಳಿಗೂ ಈ ಸೌಲಭ್ಯವಿದೆ.

ಏನಿದು ಕಿರುತರಂಗಾತರದಲ್ಲಿ ರೇಡಿಯೋ ಪ್ರಸಾರ?
ಬಾನುಲಿ ಪ್ರಸಾರದಲ್ಲಿ ಶಾರ್ಟ್ ವೇವ್(SW), ಮೀಡಿಯಂ ವೇವ್(MW) ಮತ್ತು ಫ್ರಿಕ್ವೇನ್ಸಿ ಮೊಡೊಲೇಷನ್ (FM) ಎಂಬ ಮೂರು ರೀತಿಯ ತರಂಗಾತರಗಳನ್ನು ಬಳಸಲಾಗುತ್ತದೆ. ಈಗ ಕರ್ನಾಟಕದ ಆಕಾಶವಾಣಿ ಕೇಂದ್ರಗಳು ಕೇವಲ ಎಂ.ಡಬ್ಲ್ಯೂ ಮತ್ತು ಎಫ್.ಎಂ ಗಳಲ್ಲಿ ಮಾತ್ರ ತಮ್ಮ ಕಾರ್ಯಕ್ರಮಗಳನ್ನು ಪ್ರಸರಿಸುತ್ತಿವೆ. ಆದರೆ ಎಂ.ಡಬ್ಲ್ಯೂ ಮತ್ತು ಎಫ್.ಎಂ ತರಂಗಗಳ ದೊಡ್ಡ ಕೊರತೆ ಎಂದರೆ ಈ ಅಲೆಗಳು ಬಹಳ ದೂರ ಚಲಿಸಲಾರವು. ಆದರೆ ಶಾರ್ಟ್ ವೇವ್ ಹಾಗಲ್ಲ. ಅದರ ಚಲನೆಯ ಶಕ್ತಿ ಖಂಡಾಂತರ ವ್ಯಾಪ್ತಿಯದ್ದು. ಇಂದು ನಾವು ಕೇಳುತ್ತಿರುವ ಬಿಬಿಸಿ, ವಾಯ್ಸ್ ಆಫ್ ಅಮೆರಿಕಾ, ರೇಡಿಯೋ ಸಿಲೋನ್, ಚೈನಾ ರೇಡಿಯೋ ಇಂಟರ್ ನ್ಯಾಷನಲ್ ಇತ್ಯಾದಿಗಳು ಇದೇ ತರಂಗಗಳನ್ನು ಬಳಸಿಕೊಳ್ಳುತ್ತವೆ. ಈ ತರಂಗಗಳನ್ನು ಬಳಸಿ ಪ್ರಪಂಚದ ಯಾವುದೇ ನಿರ್ದಿಷ್ಟ ಭಾಗಕ್ಕೆ ಪ್ರಸಾರವನ್ನು ತಲುಪಿಸಲು ಸಾಧ್ಯ. ಇದನ್ನು ಬೀಮಿಂಗ್ ಎಂದು ಕರೆಯಲಾಗುತ್ತದೆ. ಮತ್ತಷ್ಟು ಓದು »

5
ಏಪ್ರಿಲ್

ಮಂಗನಿಂದ ಮಾನವನಾದ ಎನ್ನುವುದು ಬರೇ ಅಪವಾದ !

ಇಷ್ಟಕ್ಕೂ ನಾವು ಓದಿದ ಜೀವಶಾಸ್ತ್ರದಲ್ಲಿ ಅಥವಾ ಸಮಾಜಶಾಸ್ತ್ರಲ್ಲಿ ಮಾನವನ  ಹುಟ್ಟಿನ ಬಗೆಗೆ ನಾವು ತಿಳಿದುಕೊಂಡ ಸತ್ಯ ಎಂಬುದು ಸುಳ್ಳು. ಅದೊಂದು ಹೋಲಿಕೆಯ ಕಥೆ ಅಷ್ಟೇ! ಯಾಕೆ ಎಂದು ಯಾರೂ ಚಿಂತಿಸಿದವರಿಲ್ಲ. ಹರಪ್ಪ ಮತ್ತು ಮೊಹೆಂಜೊದಾರೋ ಸ್ಥಳ ಮಂಗನಿಂದ ಮಾನವನಾದ ಎನ್ನುವುದು ಬರೇ ಅಪವಾದ !ಸಂಶೋಧನೆಗಳಲ್ಲಿ ಸಿಕ್ಕಿದವು ಎನ್ನಲಾದ ಕಲ್ಲಿನ ಆಯುಧಗಳು, ಉಪಯೋಗಿಸಿರಬಹುದಾದ ಮಣ್ಣಿನ ಮಡಕೆ-ಕುಡಿಕೆಗಳು, ಗುಹೆಗಳಲ್ಲಿನ ಗೋಡೆ ಚಿತ್ರಗಳು ಕೇವಲ ಇವುಗಳನ್ನೇ ಅವಲಂಬಿಸಿ ಕಟ್ಟಿದ ಅಂದಾಜು ಕಥೆಯೇ ಮಂಗನಿಂದ ಮಾನವ ಎಂಬುದಾಗಿದೆ!ಇದಕ್ಕೆ ಇದಮಿತ್ಥಂ ಎಂದು ಸಾಕ್ಷೀಕರಿಸುವ ಯಾವುದೇ ಪುರಾವೆಗಳು ಇರುವುದಿಲ್ಲ. ಆದಿ ಮಾನವ ಕಾಡೊಳಗೇ ವಾಸವಾಗಿದ್ದನೆಂದೂ ಮೊದಲು ಹಸಿ ಮಾಂಸವನ್ನಷ್ಟೇ ತಿಂದು ಬದುಕಿದ್ದನೆಂದೂ ನಂತರ ಬೆಂಕಿಯನ್ನು ಕಂಡುಹಿಡಿದನೆಂದೂ ಹಲವಾರು ಮೈನವಿರೇಳಿಸುವ ರೋಚಕ ಕಥೆಗಳನ್ನು ಕೇಳುತ್ತೇವೆ. ಕಲ್ಲಿನ ಚೂಪಾದ ಆಯುಧಗಳಿಂದ ಪ್ರಾಣಿಗಳನ್ನು ವಧಿಸುತ್ತಿದ್ದ ಮಾನವ ಕ್ರಮೇಣ ಲೋಹವನ್ನೂ ಕಂಡುಕೊಂಡು ಚಿಕ್ಕಪುಟ್ಟ ಲೋಹದ ಆಯುಧಗಳನ್ನು ತಯಾರಿಸಿಕೊಂಡ ಎಂದು ನಮಗೆ ಹೇಳಿದ ಕಥೆಗಳು ಸಾರುತ್ತವೆ. ನನಗನಿಸುತ್ತಿದೆ ಅವೆಲ್ಲಾ ಬರೇ ಕಟ್ಟುಕಥೆಗಳಾಗಿವೆ; ಅವುಗಳಲ್ಲಿ ಯಾವುದೇ ಹುರುಳಿಲ್ಲ.

ಭಾರತೀಯ ಆಯುರ್ವೇದಕ್ಕೆ ೩೦೦೦ ವರ್ಷಗಳ ದಾಖಲೆಯಿದೆ. ಎಷ್ಟೋಕಡೆ ೫೦೦೦ ವರ್ಷಗಳಷ್ಟು ಹಳೆಯ ದಾಖಲೆಗಳೂ ಸಿಗುತ್ತಿವೆ. ಒಂದೊಮ್ಮೆ ಹಾಗೆ ಮಂಗನಿಂದ ಮಾನವ ಎಂದಾದರೆ ನಮ್ಮ ಪೂರ್ವಜರು ಅಷ್ಟೊಂದು ಹಿಂದೆಯೇ ಬರೆದಿದ್ದ ಗ್ರಂಥಗಳು, ಪುರಾಣೇತಿಹಾಸಗಳು, ಮಹಾಕಾವ್ಯಗಳು, ವೇದ-ವೇದಾಂತಗಳೆಲ್ಲಾ ಸುಳ್ಳೇ?

ಮತ್ತಷ್ಟು ಓದು »