ದಹಿಸಬೇಕಾಗಿರುವುದು ಧರ್ಮಗ್ರಂಥವನ್ನಲ್ಲ ಸಂಕುಚಿತ ಮನಸ್ಸಿನ ತ್ಯಾಜ್ಯವನ್ನು!
– ಸಂದೇಶ್.ಎಚ್.ನಾಯ್ಕ್ ಹಕ್ಲಾಡಿ,ಕುಂದಾಪುರ
ಯಾವ ದೇಶ ತನ್ನ ಸಂಸ್ಕೃತಿ,ಸಂಸ್ಕಾರ, ಆಚಾರ, ವಿಚಾರಗಳಂತಹ ಮೇರು ಮೌಲ್ಯಗಳ ಮೂಲಕ ಜಗತ್ತಿನ ಜನಮಾನಸದಲ್ಲಿ ವೈಶಿಷ್ಟ್ಯಪೂರ್ಣ ಹೆಗ್ಗಳಿಕೆಗೆ ಭಾಜನವಾಗಿದೆಯೋ ಅದೇ ದೇಶದಲ್ಲಿನ ಬಹುಪಾಲು ನಾಗರೀಕರ ಮನಸ್ಸಿನಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ಹಾಗೂ ಆಹ್ಲಾದತೆಗಳನ್ನು ಪಸರಿಸುವ ಧರ್ಮ, ಧಾರ್ಮಿಕತೆಯ ಅಂಶಗಳೆಂದರೆ ಕೆಲವು ವಿಚಾರವಾಧಿಗಳು ಹಾಗೂ ಪ್ರಗತಿಪರರಿಗೆ ಅದೇಕೋ ಕಡು ದ್ವೇಷ. ದೇವರು, ಆರಾಧನೆ, ಪೂಜೆ, ಪುನಸ್ಕಾರ, ಧರ್ಮಗ್ರಂಥಗಳೆಂಬ ಶಬ್ಧಗಳು ಅಂತಹವರ ಕಿವಿಗೆ ಬೀಳುತ್ತಲೇ ಕಾದ ಕಬ್ಬಿಣವನ್ನು ಕಿವಿಗೆ ಸುರಿದಂತೆ ವರ್ತಿಸಲಾರಂಭಿಸುತ್ತಾರೆ. ತಮ್ಮ ವೈಚಾರಿಕ ಹೊಳಹುಗಳಷ್ಟೇ ಸಾರ್ವಕಾಲಿಕವೆಂಬ ತಪ್ಪುಗ್ರಹಿಕೆಯನ್ನೇ ಸದಾ ಸಮಾಜದ ಮೇಲೆ ಹೇರುವ ಹಾಗೂ ಇನ್ನುಳಿದವೆಲ್ಲವೂ ದೋಷಪೂರಿತ, ಅಪಾಯಕಾರಿಯೆಂಬಂತೆ ಬಿಂಬಿಸುವ ನಿರಂತರ ಪ್ರಯತ್ನದಲ್ಲಿ ತೊಡಗಿರುವವರು ಕಟ್ಟುವುದಕ್ಕಿಂತಲೂ ಕೆಡವುದು, ಒಡೆಯುವುದು ಹಾಗೂ ಬೀದಿಗೆ ಬೀಳಿಸಿ ವಿಕೃತ ಖುಷಿ ಪಡುವುದರಲ್ಲೇ ತಮ್ಮ ಉದ್ಧೇಶ ಈಡೇರಿಸಿಕೊಳ್ಳಬಲ್ಲೆವೆಂಬ ಅನಾರೋಗ್ಯಕರ ಮನಸ್ಥಿತಿಯೊಂದನ್ನು ಬೆಳೆಸಿಕೊಂಡಿದ್ದಾರೆ ಹಾಗೂ ಅದನ್ನು ಒತ್ತಾಯಪೂರ್ವಕವಾಗಿ ಸಮಾಜದ ಮೇಲೆ ಹೇರುವ ವಿಫಲ ಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಒಂದು ಭಾಗವೇ ‘ಭಗವದ್ಗೀತೆ’ಗೆ ಬೆಂಕಿ ಇಡಲು ಮುಂದಾಗಿರುವ ಆಕ್ರಮಣಕಾರಿ ಮನೋಪ್ರವೃತ್ತಿಯ ದುರಹಂಕಾರಿ ವರ್ತನೆ.
ಸಿಕ್ಕ ವೇದಿಕೆಯ ಘನತೆ ಗಾಂಭೀರ್ಯತೆಗೆ ನ್ಯಾಯ ಒದಗಿಸದೆ ತಮ್ಮ ವೈಯಕ್ತಿಕ ಅಸ್ತಿತ್ವ ಹಾಗೂ ವೈಚಾರಿಕ ಧೋರಣೆಯ ಚಲಾವಣೆಯನ್ನು ಕಾಯ್ದುಕೊಳ್ಳಲೋಸುಗ ಸಮಾಜೋದ್ಧಾರದ ಸೋಗು ತೊಟ್ಟು ಸದಾ ಅನ್ಯರ ಭಾವನೆಗಳನ್ನು ಅಪಮಾನಿಸುತ್ತಾ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವವರ ವರ್ತನೆಯಲ್ಲಿ ಢಾಳಾಗಿ ಗೋಚರಿಸುವುದು ವಿವೇಕ ಹಾಗೂ ವಿವೇಚನೆಗಳ ಕೊರತೆ. ಈ ಅಪಭ್ರಂಶ ವರ್ತನೆಯನ್ನು ಅನುಮೋದಿಸುವ, ಬೆಂಬಲಿಸುವ ಸಣ್ಣ ಹಿಂಬಾಲಕರ ಗುಂಪು ವೇದಿಕೆ ಮುಂದಿದ್ದರಂತೂ ಮುಗಿದೇ ಹೋಯಿತು. ಅವರ ಮಾತು, ಕೃತಿಗಳ ಮೇಲಿನ ಸ್ಥಿಮಿತವನ್ನೇ ಕಳೆದುಕೊಳ್ಳುತ್ತಾರೆ. ಆ ಮೂಲಕ ತಮ್ಮಲ್ಲಡಗಿರುವ ಅಸಹಿಷ್ಣುತೆ, ಸಂಕುಚಿತತೆಗಳನ್ನು ಮತ್ತೆ ಮತ್ತೆ ಜಾಹೀರುಗೊಳಿಸುತ್ತಾರೆ.
ಮತ್ತಷ್ಟು ಓದು 
ನಿಲುಮೆ ಪ್ರಕಾಶನ ಚೊಚ್ಚಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ” ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ
ನಿಲುಮೆಯ ಓದುಗರೇ,
ಮುಂದಿನ ಭಾನುವಾರ,ಮಾರ್ಚ್ ೧ರಂದು ಬೆಳಿಗ್ಗೆ ೧೦.೩೦ಕ್ಕೆ,ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ “ನಿಲುಮೆ ಪ್ರಕಾಶನ”ದ ಮೊದಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ” ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ಬಾಲಗಂಗಾಧರ,ಶತಾವಧಾನಿ ಗಣೇಶ್,ಪ್ರೊ.ಪ್ರಧಾನ್ ಗುರುದತ್ತ,ಪ್ರೊ.ರಾಜಾರಾಮ್ ಹೆಗಡೆ ಹಾಗೂ ಇನ್ನಿತರ ಗಣ್ಯರು ನಮ್ಮೊಂದಿಗಿರಲಿದ್ದಾರೆ.

ಪುಸ್ತಕ ಬಿಡುಗಡೆಗೆ ಸರ್ವರಿಗೂ ಸುಸ್ವಾಗತ.
ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಮುಗಿದ ನಂತರ “ನಿಲುಮಿಗರ ದಿನ”ವಿರಲಿದೆ. ನಿಲುಮಿಗರ ದಿನದಲ್ಲಿ ಪಾಲ್ಗೊಳ್ಳುವವರು ತಮ್ಮ ಸ್ವ-ವಿವರಗಳನ್ನು ಈ http://goo.gl/X981PX ಕೊಂಡಿಯಲ್ಲಿ ದಾಖಲಿಸಿ.ನಮಗೆ ಕಾರ್ಯಕ್ರಮದ ತಯಾರಿಗೆ ಇದು ಅವಶ್ಯಕ.ಈ ವಿವರಗಳನ್ನು ದಾಖಲಿಸಲು ಕಡೆಯ ದಿನ ೨೫ನೇ ತಾರೀಖು.ಅದರಾಚೆಗೆ ಈ ಕೊಂಡಿ ಲಭ್ಯವಿರುವುದಿಲ್ಲ.
ಮಿಥಿಕ್ ಸೊಸೈಟಿ,ನೃಪತುಂಗ ರಸ್ತೆ.ತಲುಪುವ ಮಾರ್ಗ : ಮೆಜೆಸ್ಟಿಕ್ ಕಡೆಯಿಂದ ಬರುವುದಾದರೆ ಕೆ.ಆರ್ ಸರ್ಕಲ್ ನಲ್ಲಿ ಬಲ ತಿರುವು (ಕಬ್ಬನ್ ಪಾರ್ಕಿನೊಳಗಿನಿಂದ ಬಂದರೆ,ಕಾರ್ಪೊರೇಶನ್ ಸರ್ಕಲ್ ಕಡೆಗೆ ಎಡತಿರುವು) ತೆಗೆದುಕೊಂಡು ರಸ್ತೆಯ ಬಲಭಾಗದಲ್ಲೆ ಮುಂದುವರೆದರೆ ಸರ್ಕಾರಿ ವಿಜ್ನಾನ ಕಾಲೇಜಿನ ನಂತರದ ಕಟ್ಟಡವೇ ಮಿಥಿಕ್ ಸೊಸೈಟಿ (ಎದುರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೆ). ಬಸ್ಸಿನಲ್ಲಿ ಬರುವವರು ಬನ್ನಪ್ಪ ಪಾರ್ಕ್ ಬಸ್ ನಿಲ್ದಾಣದಲ್ಲಿ ಇಳಿದು ಸಿಟಿ ಸಿವಿಲ್ ಕೋರ್ಟ್ ರಸ್ತೆಯ ಕಡೆ ನಡೆದುಕೊಂಡು ಬಂದರೂ ತಲುಪಬಹುದು.(ಹತ್ತು-ಹದಿನೈದು ನಿಮಿಷದ ಹಾದಿ)
ನಿಮ್ಮ ಆಗಮನದ ನಿರೀಕ್ಷೆಯಲ್ಲಿ.
ನಿಮ್ಮೊಲವಿನ,
ನಿಲುಮೆ ಬಳಗ
ವೈಕುಂಠದಲ್ಲಿ ಕೋಲಾ(ಕ್ಲೋನಾ)ಹಲ-ವಿಡಂಬನಾ ಕಥೆ
– ಸುದರ್ಶನ್ ರಾವ್
ಕ್ಷೀರ ಸಾಗರದ ಮಧ್ಯದಲ್ಲಿ ಶೇಷ ಶಾಯಿಯಾಗಿ ಶ್ರೀ ಲಕ್ಷ್ಮಿಯ ಸೇವೆ ಪಡೆಯುತ್ತಿದ್ದ ಶ್ರೀಮನ್ನಾರಾಯಣನಿಗೆ ಡಿಸ್ಟರ್ಬ್ ಮಾಡುವ ಇರಾದೆ ಜಯ ವಿಜಯರಿಗೆ ಖಂಡಿತಾ ಇರಲಿಲ್ಲ. ತ್ರೇತಾ ದ್ವಾಪರ ಯುಗಗಳಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡಿದ ನಂತರ ದೀರ್ಘ ವಿಶ್ರಾಂತಿಯಲ್ಲಿದ್ದ ಅವನು ಯಾವ ಕಿರಿ ಕಿರಿಯನ್ನೂ ನಿರೀಕ್ಷಿಸುತ್ತಿರಲಿಲ್ಲ. ಜಾಗತಿಕ ತಾಪಮಾನ ಏರುತ್ತಿರುವ ತೆರದಲ್ಲೇ ಮಾನವರ ಅನಾಚಾರಗಳೂ ಹೆಚ್ಚುತ್ತಿರುವುದು ಅವನಿಗೆ ತಿಳಿಯದ ವಿಷಯವಾಗಿರದಿದ್ದರೂ ಪ್ರಪಂಚವನ್ನು ಹಾಲು ಕಾಯಿಸಿದಂತೆ ತನ್ನಷ್ಟಕ್ಕೆ ತಾನು ಕಾಯ್ದು ಕೊಳ್ಳಲಿ, ಉಕ್ಕಿದಾಗ ನೋಡೋಣ ಎಂಬ ಎಣಿಕೆ ಅವನದು.ಅದೂ ಅಲ್ಲದೆ ದೇವಸ್ಥಾನಗಳ ಹುಂಡಿಯಲ್ಲಿ ಹಣದ ಮಹಾಪೂರವೇ ಹರಿಯುತ್ತಿರಲಾಗಿ ಧರ್ಮಕ್ಕೆ ಚ್ಯುತಿ ಬಂದಿರಲಾರದೆಂದು ಅವನ ಊಹೆ. ಇಷ್ಟಕ್ಕೂ ತಿರುಪತಿಯ ಹುಂಡಿಯಿಂದ ಕುಬೇರನ ಸಾಲಕ್ಕೆ ಹಣ ಚುಕ್ತಾ ಆಗುತ್ತಿರಲು ಒಂದು ರೀತಿಯ ನಿರಾಳವೇ ಅವನಲ್ಲಿತ್ತು.
ಆದರೆ ಅಂದು ಬೆಳ್ಳಂಬೆಳಿಗ್ಗೆಯೇ ಭೂದೇವಿ ಬಹಳ ಅಸ್ತವ್ಯಸ್ತ ವೇಷದಲ್ಲಿ ವಿಷ್ಣುದರ್ಶನಕ್ಕಾಗಿ ಬಂದಳು. ಸ್ವಾಮಿ ಇನ್ನೂ ಮಲಗಿರಬಹುದೆಂದೇ ದ್ವಾರಪಾಲಕರ ಎಣಿಕೆ. ತಾನು ತನ್ನ ಪತಿಯೊಡನೆ ಮಾತುಕತೆ ನಡೆಸಬೇಕಾಗಿದೆಯೆಂದೂ, ತುರ್ತಾಗಿ ತನಗೆ ಬಾಗಿಲು ತೆಗೆಯಬೇಕೆಂದೂ ಆಗ್ರಹಿಸಿದಳು. ಜಯ-ವಿಜಯರಿಗೆ ಧರ್ಮ ಸಂಕಟ. ಬಿಟ್ಟ್ರೂ ತೊಂದರೆ ಬಿಡದೇ ಇದ್ದರೂ ತೊಂದರೆ.’ಇತ್ತ ಹಾವು ಅತ್ತ ಹುಲಿ ’ ಎಂಬ ಪರಿಸ್ಥಿಗೆ ಸಿಲುಕಿ ಹಲುಬಿದರು. ಸನಕಾದಿ ಮುನಿಗಳ ಶಾಪಕ್ಕೆ ತುತ್ತಾಗಿ, ಭೂಭಾರ ಇಳಿಸಲು ದುಷ್ಟಾತಿ ದುಷ್ಟರಾಗಿ ಜನ್ಮ ತಾಳಿ ಹತರಾಗಿದ್ದ ನೆನಪು ಇನ್ನೂ ಮಾಸಿರಲಿಲ್ಲ. ಮುಖ ಮುಖ ನೋಡಿಕೊಂಡು ತಮ್ಮ ಹಣೆ ಬರಹವನ್ನು ಹಳಿಯುತ್ತಾ ಬಾಗಿಲು ತೆಗೆದು ಭೂದೇವಿಯನ್ನು ಒಳಗೆ ಬಿಟ್ಟರು.
ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
– ಪ್ರೊ.ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
ಕನ್ನಡದ ಅಂಕಣಕಾರರೊಬ್ಬರು ನಾಲ್ಕಾರು ವರ್ಷಗಳ ಹಿಂದೆ ವಿವೇಕಾನಂದರ ಕುರಿತು ಬರೆದ ಲೇಖನವೊಂದು ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತು. ಇದು ತುಂಬಾ ವಿವಾದಾತ್ಮಕವಾದ ಲೇಖನವಾಗಿತ್ತು, ಕಾರಣ, ವಿವೇಕಾನಂದರ ಕುರಿತು ಇರುವ ಅತಿಮಾನುಷ ಕಲ್ಪನೆಗಳನ್ನು ಒಡೆಯುವುದು ತನ್ನ ಗುರಿ ಎಂಬುದೇ ಆ ಲೇಖನದ ಘೋಷಣೆ. ಆ ಲೇಖನದಲ್ಲೇ ವಿವೇಕಾನಂದರು ಮತ್ತೊಂದು ರೀತಿಯ ಅತಿಮಾನುಷರಾಗಿ ಚಿತ್ರಿತರಾದುದು ವಿಪರ್ಯಾಸ. ಅದೆಂದರೆ ಅವರು ಅಕ್ಷರಶಃ ಇಂದಿನ ಪ್ರಗತಿಪರರಂತೆ ವಿಚಾರ ಮಾಡುತ್ತಿದ್ದುದು: ಹಿಂದೂ ಧರ್ಮವೊಂದು ನರಕ, ಹಾಗಾಗಿ ಅದು ನಾಶವಾಗಬೇಕು, ಜಾತಿ ವ್ಯವಸ್ಥೆ ಹೋಗಬೇಕು, ಕ್ರಿಸ್ತನ ಪಾದವನ್ನು ತಮ್ಮ ರಕ್ತದಿಂದ ತೊಳೆದರೂ ಕಡಿಮೆಯೇ, ಭಾರತೀಯ ಸಂಸ್ಕøತಿಗೆ ಇಸ್ಲಾಂನ ಶರೀರ ಇರಬೇಕು, ಬ್ರಾಹ್ಮಣರು ಭಾರತಕ್ಕೆ ಶಾಪ, ಇತ್ಯಾದಿ. ಅವರು ಮಾಂಸವನ್ನು ತಿಂದಿದ್ದು, ಹುಕ್ಕಾ ಸೇದಿದ್ದು, ಹಾಗೂ ಹಲವಾರು ರೋಗಗಳಿಂದ ನರಳಿದ್ದು ಆ ಲೇಖನಕ್ಕೆ ಬಹಳ ನಿರ್ಣಾಯಕವಾಗಿ ಕಂಡಿದೆ. ಏಕೆಂದರೆ ಇಂದ್ರಿಯಗಳ ಮೇಲೆ ನಿಯಂತ್ರಣವನ್ನೇ ಕಳೆದುಕೊಂಡು ಇಲ್ಲದ ಚಟಗಳನ್ನು, ರೋಗಗಳನ್ನು ಆಹ್ವಾನಿಸಿಕೊಂಡು, ಸಮಾಜವನ್ನು( ತನಗೆ ಬೇಕಾದಾಗ) ಧಿಕ್ಕರಿಸಿ ಬದುಕುವುದು ಪ್ರಗತಿಪರ ಜೀವನ ಶೈಲಿಯ ಸಂಕೇತವಾಗಿದೆ. ಇಂಥವರಿಗೆ ವಿವೇಕಾನಂದರು ಪ್ರಗತಿಪರರಾಗಬೇಕಾದರೆ ಹೀಗೇ ಇರಬೇಕಾದುದು ಸಹಜ.
ಒಬ್ಬ ವ್ಯಕ್ತಿಯು ಗತಿಸಿ 110 ವರ್ಷಗಳಾದ ಮೇಲೆ ಅವನ ಜೀವನ ಶೈಲಿ ಹಾಗೂ ದೈಹಿಕ ಆಕೃತಿಯ ಕುರಿತು ಅವನ ಆರಾಧಕರಲ್ಲಿ ಏನೇನು ತಪ್ಪು ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಅಷ್ಟು ಮುಖ್ಯವಲ್ಲ. ಹಾಗೂ ಜೀವನ ಶೈಲಿ ಮತ್ತು ದೇಹಸ್ಥಿತಿಗಳು ಒಬ್ಬನ ಜ್ಞಾನಸಾಧನೆಯನ್ನು ಆಳೆಯಲು ಮಾನದಂಡಗಳಲ್ಲ. ಭಾರತೀಯ ಅಧ್ಯಾತ್ಮ ಪರಂಪರೆಯು ಈ ಕುರಿತು ಯಾವುದೇ ಸಂದೇಹವನ್ನೂ ಉಳಿಸುವುದಿಲ್ಲ. ಹಾಗಾಗಿ ನಿಜವಾಗಿಯೂ ಕಾಳಜಿ ವಹಿಸಬೇಕಾದದ್ದು ವಿವೇಕಾನಂದರ ವಿಚಾರಗಳ ಕುರಿತು ಹುಟ್ಟಿಕೊಳ್ಳಬಹುದಾದ ತಪ್ಪು ಕಲ್ಪನೆಗಳ ಕುರಿತು. ಅವರ ವಿಚಾರಗಳ ಕುರಿತು ಏನೇನು ವಿಕೃತ ಚಿತ್ರಣಗಳು ಹುಟ್ಟಿಕೊಂಡಿವೆಯೆಂಬುದಕ್ಕೆ ಈ ಮೇಲಿನ ಲೇಖನವೂ ಒಂದು ಉದಾಹರಣೆ. ಇಲ್ಲಿ ವಿವೇಕಾನಂದರ ಭಾಷಣಗಳಿಂದ ನಾಲ್ಕಾರು ಆಯ್ದ ಸಾಲುಗಳನ್ನು ಸಂದರ್ಭದಿಂದ ಎತ್ತಿ ತಮ್ಮ ಪ್ರತಿಪಾದನೆಗೆ ಅಸಹಜವಾಗಿ ಒಗ್ಗಿಸಿಕೊಳ್ಳಲಾಗಿದೆ. ವಿವೇಕಾನಂದರ ಭಾಷಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇಂದು ಪ್ರಗತಿಪರರೆಂದು ಕರೆದುಕೊಳ್ಳುವವರು ಪ್ರತಿಪಾದಿಸಬಯಸುವ ಸಮಾಜ ಸುಧಾರಣೆಯ ಕುರಿತು ಒಟ್ಟಾರೆಯಾಗಿ ವಿವೇಕಾನಂದರ ಅಭಿಪ್ರಾಯಗಳು ಏನು ಎಂಬುದು ತಿಳಿದುಬರುತ್ತದೆ. ಈ ಕೆಳಗೆ ನಾನು ವಿವೇಕಾನಂದರ ಹೇಳಿಕೆಗಳನ್ನೇ ಸಂಕ್ಷಿಪ್ತಗೊಳಿಸಿದ್ದೇನೆ.
ಮತ್ತಷ್ಟು ಓದು 
ಸಿಕ್ಕಾಪಟ್ಟೆ ನಿರೀಕ್ಷೆ ಮುಕ್ತಾಯವಾಗುವುದು ಶೂನ್ಯದೊ೦ದಿಗೇ!!
– ಕೆ.ಎಸ್ ರಾಘವೇಂದ್ರ ನಾವಡ
ಯಾವಾಗ ಭಾ.ಜ.ಪಾ ಇದ್ದಕ್ಕಿದ್ದ೦ತೆ ತನ್ನ ದೆಹಲಿ ಘಟಕದ ಕಡೆಯ ಹ೦ತದ ಕಾರ್ಯಕರ್ತರಿರಲಿ, ಮೇರು ಪ್ರಭೃತಿಗಳನ್ನೂ ಲೆಕ್ಕಿಸದೇ ಮಾಜಿ ಐಪಿಎಸ್.ಅಧಿಕಾರಿಣಿ ಕಿರಣ್ ಬೇಡಿಯವರನ್ನು ದೆಹಲಿಯ ತನ್ನ ಮುಖ್ಯಮ೦ತ್ರಿ ಅಭ್ಯರ್ಥಿಯೆ೦ದು ಘೋಷಿಸಿತ್ತೋ ದೆಹಲಿಯಲ್ಲಿ ಮು೦ದಿನ ಐದು ವರುಷಗಳ ಕಾಲ ತಣ್ಣನೆ ರಜಾಯಿ ಹೊದ್ದು ಮಲಗಬೇಕಾಗುತ್ತದೆ೦ದು ಆಗಲೇ ಗೊತ್ತಾಗಿ ಹೋಗಿತ್ತು! ದೆಹಲಿ ಜನರು ತೀಕ್ಷ್ಣ ಬೇಡಿಕೆಗಳ ಈಡೇರಿಕೆಗೆ ಒಲಿಯುವವರೇ ವಿನ: ದೂರಗಾಮಿ ಯೋಜನೆಗಳಿಗಲ್ಲ!
ಸ್ವಲ್ಪ ಹಿ೦ದೆ ಹೋಗೋಣ.. ೧೯೯೯ ರ ಚುನಾವಣೆಯಲ್ಲಿ ಸೋನಿಯಾ ವಾಜಪೇಯಿಯವರನ್ನು “ಗದ್ದಾರ್” ಎ೦ದು ಕರೆದರು! ವಾಜಪೇಯಿ ಬಾಯಿ ತಪ್ಪಿಯೂ ಸೋನಿಯಾರನ್ನು ಅ೦ತರ೦ಗಿಕವಾಗಿಯಾಗಲೀ-ಬಹಿರ೦ಗ ಸಭೆಗಳಲ್ಲಾಗಲೀ ಜರಿಯಲಿಲ್ಲ. ಅವರ ಈ ತಣ್ಣನೆಯ ಮೌನ, ಸ೦ಪೂರ್ಣ ರಾಷ್ಟ್ರವೇ ಅಲ್ಲದೇ ಪಕ್ಷಾತೀತರಾಗಿ ರಾಜಕಾರಣಿಗಳ ಪ್ರತಿಭಟನೆಯ ಕಾವು ಸೋನಿಯಾರಿಗೆ ತಾನು ಅವರನ್ನು ಹಾಗೆ ಕರೆದಿದ್ದು ತಪ್ಪೆ೦ದು ಮನವರಿಕೆಮಾಡಿಕೊಡುವಷ್ಟರಲ್ಲಿ ರಾಜಕೀಯ ಭೀಷ್ಮ ಚುನಾವಣೆಯನ್ನು ಗೆದ್ದಾಗಿತ್ತು! ಸೋನಿಯಾ ತಾನುದುರಿಸಿದ ಆ ಪದಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಯಿತೆ೦ಬುದೂ ಸತ್ಯವೇ!. ವಾಜಪೇಯಿಯ ಅದೇ ನೀತಿಯನ್ನು ಇಲ್ಲಿ ಕೇಜ್ರಿವಾಲ್ ಅನುಸರಿಸಿ ಅಕ್ಷರಶ: ದೆಹಲಿ ಚುನಾವಣೆಯಲ್ಲಿ ಭಾ.ಜ.ಪಾ.ವನ್ನು ಮಕಾಡೆ ಮಲಗಿಸಿದರು! ನರೇ೦ದ್ರ ಮೋದಿಯವರ ಅಥವಾ ಬೇರವುದೇ ಭಾ.ಜ.ಪಾ ನಾಯಕರ ಬಹಿರ೦ಗ ಊದುವಿಕೆಗೆ ಕೇಜ್ರಿವಾಲ್ ಕಿವಿಗೊಡಲೂ ಇಲ್ಲ… ಮರುತ್ತರಿಸಲೂ ಇಲ್ಲ! ತಲೆಯ ಮೇಲೆ ಕೈಹೊತ್ತುಕೊಳ್ಳುವ ಸರದಿ ಈಗ ಮೋದಿ-ಅಮಿತರದ್ದು ಎ೦ದರೆ ತಪ್ಪಾಗಲಾರದು!
ಮತ್ತಷ್ಟು ಓದು 
ದಿ ಲಾಸ್ಟ್ ಲೆಕ್ಚರ್: ಆತ ಸಾವಿನ ಸಾಂಗತ್ಯದಲ್ಲಿ ಬದುಕನ್ನು ಪ್ರೀತಿಸಿದ
– ರಾಜಕುಮಾರ.ವ್ಹಿ.ಕುಲಕರ್ಣಿ, ಗ್ರಂಥಪಾಲಕರು
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
‘ಸಾವಿನ ಬಗ್ಗೆ ಮಾತನಾಡುವುದು ಸುಲಭ. ಸಾವು ಹೀಗೆ ಬರಬಹುದೋ ಹಾಗೆ ಬರಬಹುದೋ ಎಂದು ಕಲ್ಪಿಸಿಕೊಳ್ಳುವುದೂ ಸುಲಭ. ಸಾವು ಹೀಗೇ ಬರಲಿ ಎಂದು ಆಸೆ ಪಡುವುದೂ ಸುಲಭ. ತುಂಬು ಆರೋಗ್ಯವಂತನೊಬ್ಬ ಸಾವಿನ ಬಗ್ಗೆ, ಆ ಕ್ಷಣದ ತಲ್ಲಣದ ಬಗ್ಗೆ, ಸಾವಿನ ಅನಿವಾರ್ಯತೆಯ ಬಗ್ಗೆ ಭಾಷಣ ಹೊಡೆಯುವುದು, ಪ್ರಬಂಧ ಬರೆಯುವುದು ಇನ್ನೂ ಸುಲಭ. ಆದರೆ ಸಾವೆಂಬುದು ಕಣ್ಮುಂದೆಯೇ ಗಿರಿಗಿಟ್ಲೆ ತಿರುಗುತ್ತಿದೆ ಮುಂದಿನ ಕೆಲವೇ ದಿನಗಳಲ್ಲಿ ನನ್ನ ಬದುಕೇ ಮುಗಿದು ಹೋಗಲಿದೆ ಎಂದು ಗೊತ್ತಾದಾಗ ನಗು ನಗುತ್ತಲೆ ಬದುಕು ಸುಂದರ, ಸಂತೋಷದಿಂದ ಇರಿ ಎಂದು ಹೇಳುವುದಿದೆಯಲ್ಲ ಅದು ಕಷ್ಟ ಕಷ್ಟ’ ದಿ ಲಾಸ್ಟ್ ಲೆಕ್ಚರ್ ಕೃತಿಯ ಮುನ್ನುಡಿಯಲ್ಲಿ ಶ್ರೀ ವಿಶ್ವೇಶ್ವರ ಭಟ್ ಹೇಳಿದ ಮಾತಿದು.
ಹೌದು.ಸಾವು ಮನುಷ್ಯನ ಕೊನೆಯ ಸೋಲು. ಮನುಷ್ಯ ಜೀವನದಲ್ಲಿ ಯಾವ ಸೋಲಿಗೂ ಎದೆಗುಂದದಿದ್ದರೂ ಸಾವಿನಂಥ ಸೋಲಿಗೆ ಅಧೀರನಾಗುವುದು ಸತ್ಯ. ಆದರೆ ಅವನೊಬ್ಬನಿದ್ದ ಅವನು ಸಾವಿನಂಥ ಸಾವಿಗೇ ಸವಾಲೊಡ್ಡಿ ನಿಂತ. ಸಾವು ಬಂದು ಬದುಕನ್ನು ಕಬಳಿಸಲು ಹೊಂಚು ಹಾಕಿ ಕುಳಿತಿದೆ ಎಂದು ಗೊತ್ತಾದಾಗಲೂ ಆತ ಎದೆಗುಂದಲಿಲ್ಲ. ಇನ್ನು ನೀನು ಬದುಕಿರುವುದು ಕೆಲವೇ ದಿನಗಳು ಎನ್ನುವ ಸತ್ಯ ಬಂದು ತಟ್ಟಿದಾಗಲೂ ಆತ ಅಂಜಲಿಲ್ಲ ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳಲಿಲ್ಲ. ಸಾಯುತ್ತೇನೆ ಎಂದು ಗೊತ್ತಾದ ಮೇಲೆ ಹೆಚ್ಚು ಹೆಚ್ಚು ಕ್ರಿಯಾಶೀಲನಾದ. ಹೆಂಡತಿ, ಮಕ್ಕಳು ಮತ್ತು ವೃತ್ತಿಯನ್ನು ಅಪಾರವಾಗಿ ಪ್ರೀತಿಸಿದ. ಇಂಥದ್ದೊಂದು ಕ್ರಿಯಾಶೀಲ ಬದುಕಿಗೆ ತನ್ನನ್ನು ಅಣಿಗೊಳಿಸಿದ ಆ ಸಾವಿಗೇ ಆತ ಕೃತಜ್ಞತೆ ಸಲ್ಲಿಸಿದ. ಒಂದರ್ಥದಲ್ಲಿ ಆತ ಸಾವಿನ ಸಾಂಗತ್ಯದಲ್ಲೂ ಬದುಕನ್ನು ಪ್ರೀತಿಸಿದ. ಸಾವಿನಲ್ಲೂ ಬೇರೆಯವರ ಬದುಕಿಗೆ ಮಾದರಿಯಾದ. ಆತನೇ `ದಿ ಲಾಸ್ಟ್ ಲೆಕ್ಚರ್’ ಕೃತಿಯ ನಾಯಕ ಮತ್ತು ಲೇಖಕ ರ್ಯಾಂಡಿ ಪಾಶ್.
ಯಾರು ಈ ರ್ಯಾಂಡಿ ಪಾಶ್ ?
ಈ ರ್ಯಾಂಡಿ ಪಾಶ್ ಅಮೇರಿಕಾ ದೇಶದವನು. ಕಾರ್ನಿಗಿ ಮೆಲಿನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಆಗಿ ಬಹು ದೊಡ್ಡ ಹೆಸರು ಗಳಿಸಿದವನು. ವೃತ್ತಿಯಿಂದ ಉಪನ್ಯಾಸಕನಾದರೂ ಅವನು ಮಾಡಿದ ಸಾಧನೆಗಳು ಅನೇಕ. ಅಡೋಬ್, ಗೂಗಲ್, ವಾಲ್ಟ್ ಡಿಸ್ನಿಯಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ. ಪಿಹೆಚ್ಡಿ ಅಭ್ಯಸಿಸಿ ಡಾಕ್ಟರೇಟ್ ಪಡೆದವ ನಂತರ ಗಗನಯಾತ್ರಿಯಾದ. ಅನಂತರ ವಿಜ್ಞಾನಿಯಾದ. ಅಷ್ಟಕ್ಕೆ ತೃಪ್ತನಾಗದೆ ಪೋಲಿಸ್ ಅಧಿಕಾರಿಯಾದ. ಕೊನೆಗೆ ಉಪನ್ಯಾಸಕನಾದ. ಹೀಗೆ ಬದುಕಿನಲ್ಲಿ ಅನೇಕ ಕನಸುಗಳನ್ನು ಕಂಡು ಅವುಗಳನ್ನು ನನಸಾಗಿಸಿಕೊಂಡ.
ದೆಹಲಿ ಚುನಾವಣೆಯ ಫಲಿತಾಂಶ ಕುರಿತು ಫೇಸ್ಬುಕ್ಕಿನಲ್ಲಿ …
– ರಾಘವೇಂದ್ರ ಸುಬ್ರಹ್ಮಣ್ಯ
ನನ್ನ ಮಾತು ಬಹಳಷ್ಟು ಜನರಿಗೆ ಹಿಡಿಸಲಿಕ್ಕಿಲ್ಲ…ಆದರೂ ಹೇಳದೇ ವಿಧಿಯಿಲ್ಲ.
ಮೋದಿ ಎಲ್ಲಾದ್ರೂ ಹಿಂದುತ್ವದ ಬಗ್ಗೆ ಭಾಷಣ ಮಾಡಿದ್ದು ಕೇಳಿದ್ರಾ? ಮೋದಿ ‘ಘರ್ ವಾಪಸಿ ಮಾಡ್ಲೇಬೇಕು’ ಅಂತಾ ಅವಲತ್ತುಕೊಂಡಿದ್ದು ಒತ್ತು ಕೊಟ್ಟಿದ್ದು ನೋಡಿದ್ರಾ? ಮೋದಿ ಯಾವಾತ್ತಾದ್ರೂ ಇತ್ತೀಚೆಗೆ ‘ರಾಮ್ ಮಂದಿರ ಕಟ್ಟಿ ಮುಗಿಸ್ತೀನಿ’ ಅಂತಾ ಕೂಗಾಡಿದ್ದು ಕೇಳಿದ್ರಾ?
ಅವರು ತನ್ನ ಪಾಡಿಗೆ ಅಭಿವೃದ್ಧಿ, ಸ್ವಚ್ಚ ಭಾರತ, ರಸ್ತೆ ಸುರಕ್ಷತೆ, ಸಾಮರಸ್ಯ, ಮನ್ ಕಿ ಬಾತ್ ಅಂತಾ ದೇಶದ ಬೆಳವಣಿಗೆ ಬಗ್ಗೆ ಮಾತಾಡ್ತಾ ಇದ್ರೆ, ಉಳಿದವರು ಮರುಮತಾಂತರ, ಗೋಹತ್ಯಾ ನಿಷೇಧ, ರಾಮಮಂದಿರ, ಹತ್ತು ಮಕ್ಕಳನ್ನು ಹೆರೋದು ಇದ್ರಲ್ಲೇ ಮುಳುಗಿದ್ದಾರೆ. ಜನ ಅಲ್ಪಸಂಖ್ಯಾತರ ತುಷ್ಟೀಕರಣದ ವಿರುದ್ದ ಇದ್ದಾರೆ ಅಂದ್ರೆ ಅರ್ಥ ಹಿಂದುತ್ವದ ಅಜೆಂಡಾ ಪರ ಇದ್ದಾರೆ ಅಂತ ಅಲ್ಲ! ಬರ್ತಾ ಬರ್ತಾ ದೇಶ, ಅಭಿವೃದ್ಧಿ ಅನ್ನೋದೆಲ್ಲಾ ಮೋದಿಯೊಬ್ಬರ ಮಾತಷ್ಟೇ ಆಗಿ ಉಳೀತಿದೆ! ಉಳಿದವರೆಲ್ರೂ ಅದೇ ಹಳೇ ಹಿಂದುತ್ವಕ್ಕೆ ಹೊಸ ಟ್ಯೂನ್ ಹಾಕ್ಕೊಂಡು ಕುಣೀತೀದಾರೆ! ಜನ ತಮಗೆ ಯಾಕೆ ಓಟು ಹಾಕಿ ಗೆಲ್ಸಿದ್ದಾರೆ ಅನ್ನೋದನ್ನೂ ಅರ್ಥಮಾಡಿಕೊಳ್ಲದ ಇವರು ಬಹುಬೇಗ ತಮ್ಮ ಪತನವನ್ನು ತಾವೇ ಕಾಣ್ತಾರೆ ಅನ್ನೊಸೋಲ್ವಾ! ಮೋದಿ ಸರ್ಕಾರಕ್ಕೆ ಇವರೆಲ್ಲ ಬಗಲಮುಳ್ಳು.
ತಿರುಚಿ ಬರೆದ ಮಾತ್ರಕ್ಕೆ ಇತಿಹಾಸ ಬದಲಾದೀತೆ…?
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
‘ಭಾರತವೆನ್ನುವುದು ವಿಶ್ವದ ಅತ್ಯ೦ತ ಅಪಾಯಕಾರಿ ರಾಷ್ಟ್ರ.ಅದು ಮನುಷ್ಯತ್ವದ ಶತ್ರುರಾಷ್ಟ್ರಗಳಲ್ಲೊ೦ದು.ದೇಶ ವಿಭಜನೆಯ ಸ೦ದರ್ಭದಲ್ಲಿ ಪಾಕಿಸ್ತಾನವು ತನ್ನ ಮಡಿಲಲ್ಲಿದ್ದ ಹಿ೦ದೂ ಮತ್ತು ಸಿಖ್ಖ ನಾಗರಿಕರನ್ನು ಅತ್ಯ೦ತ ಗೌರವಯುತವಾಗಿ ಭಾರತಕ್ಕೆ ಕಳುಹಿಸಿಕೊಟ್ಟಿತು.ಆದರೆ ಹಿ೦ದೂಸ್ತಾನವೆನ್ನುವ ಕ್ರೂರ ರಾಷ್ಟ್ರದ ಹಿ೦ದೂಗಳು ಮತ್ತು ಸಿಖ್ಖರು ಮಾಡಿದ್ದೇನು? ಭಾರತದಿ೦ದ ಪಾಕಿಸ್ತಾನಕ್ಕೆ ನಿರಾಶ್ರಿತರಾಗಿ ಮರಳುತ್ತಿದ್ದ ಅಮಾಯಕ ಮುಸ್ಲಿಮರನ್ನು ಎರಡೂ ಸಮುದಾಯದ ಜನರು ಸೇರಿ ಬರ್ಬರವಾಗಿ ಹತ್ಯೆಗೈದರು.ಮುಸಲ್ಮಾನರು ಸಾಗುತ್ತಿದ್ದ ರೈಲು ,ಬಸ್ಸುಗಳನ್ನು ಲೂಟಿಗೈದರು.ಮುಗ್ಧ ಮುಸ್ಲಿ೦ ಮಹಿಳೆಯರನ್ನು ಅಮಾನುಷವಾಗಿ ಮಾನಭ೦ಗಕ್ಕೊಳಪಡಿಸಿದರು.ಹಿ೦ದೂಸ್ತಾನಿಗಳ ಈ ಅತಿಶಯದ ವರ್ತನೆಯಿ೦ದಾಗಿ ಶಾ೦ತಿಯುತವಾಗಿ ಜರುಗಬೇಕಿದ್ದ ದೇಶ ವಿಭಜನೆಯ ಪ್ರಕ್ರಿಯೆ, ರಕ್ತಸಿಕ್ತ ಚರಿತ್ರೆಯಾಗಿ ಗುರುತಿಸಲ್ಪಟ್ಟಿತು.ಸುಮಾರು ಹತ್ತು ಲಕ್ಷ ಮುಸ್ಲಿ೦ ಬಾ೦ಧವರು ವಿನಾಕಾರಣ ಹಿ೦ದೂ ಮತ್ತು ಸಿಖ್ಖ ಧರ್ಮದ ಧಾರ್ಮಿಕ ಅಸಹಿಷ್ಣುತೆಗೆ ಬಲಿಯಾದರು .ಹಿ೦ದೂಸ್ತಾನವೆನ್ನುವ ಭಯಾನಕ ರಾಷ್ಟ್ರದ ಚರ್ಯೆಯೇ ಅ೦ಥದ್ದು.ಕ್ರೌರ್ಯ ಮತ್ತು ಅಸಮಾನತೆಯೇ ಭಾರತೀಯ ಸ೦ವಿಧಾನಕ್ಕೆ ಅಡಿಪಾಯ.ಅಲ್ಲಿನ ಮಕ್ಕಳೂ ಸಹ ಧರ್ಮದ ಅಧಾರದಲ್ಲಿ ಪ್ರತ್ಯೇಕತೆಯನ್ನು ಬಯಸುತ್ತಾರೆ.ನಮಗ೦ತೂ ಅದು ಅತ್ಯ೦ತ ಕಡು ದ್ವೇಷಿ ರಾಷ್ಟ್ರ.ಭಾರತವೆನ್ನುವ ದೇಶವನ್ನು ಎದುರಿಸಲು ಸದಾಕಾಲ ನಾವೆಲ್ಲರೂ ಸಿದ್ದರಾಗಿರಬೇಕು.’
ಮೇಲಿನ ಸಾಲುಗಳನ್ನು ಓದಿ ನಿಮ್ಮ ರಕ್ತ ಕುದ್ದು,ನನ್ನನ್ನು ಹುಡುಕಿಕೊ೦ಡು ಬ೦ದು ಸರಿಯಾಗಿ ತದುಕಬೇಕು ಎ೦ದು ನಿಮಗನ್ನಿಸುತ್ತಿದ್ದರೆ ಸ್ವಲ್ಪ ತಡೆಯಿರಿ,ಇದನ್ನು ಹೇಳುತ್ತಿರುವುದು ನಾನಲ್ಲ.ಪಾಕಿಸ್ತಾನವೆನ್ನುವ ಮೂಢ ರಾಷ್ಟ್ರ ತನ್ನ ಮು೦ದಿನ ಪೀಳಿಗೆಗೆ ಹೇಳಿಕೊಡುತ್ತಿರುವ ಪಾಠವಿದು.ಅರ್ಥವಾಗಲಿಲ್ಲವೇ?ಪಾಕಿಸ್ತಾನದ ಪ್ರಾಥಮಿಕ ಶಾಲೆಗಳ ನಾಲ್ಕನೆಯ ತರಗತಿಯಿ೦ದ ಏಳನೆಯ ತರಗತಿಯವರೆಗಿನ ವಿದ್ಯಾರ್ಥಿಗಳ ’ಸಮಾಜ ವಿಜ್ನಾನ’ದ ಪಾಠಗಳಲ್ಲಿ ಬರುವ ಕೆಲವು ಸಾಲುಗಳ ಸಣ್ಣ ಸಾರಾ೦ಶವಿದು.ವಿಪರ್ಯಾಸವೆ೦ದರೆ ಇ೦ಥಹ ಅಪದ್ಧಗಳಿ೦ದ ಕೂಡಿದ ಇತಿಹಾಸದ ಪಾಠಗಳಿಗೆ ಪಾಕಿಸ್ತಾನಿ ಶಿಕ್ಷಣ ಮ೦ಡಳಿಯು ಯಾವುದೇ ತಕರಾರಿಲ್ಲದೆ ತನ್ನ ಅನುಮತಿಯ ಮೊಹರೆಯನ್ನೊತ್ತಿದೆ ಎ೦ದರೆ ನೀವು ನ೦ಬಲೇಬೇಕು.ಮೇಲಿನ ಹೇಳಿಕೆಗಳನ್ನು ಓದಿದಾಗ ಇಡೀ ವಿಶ್ವದ ಎಳೆಯರು ಓದುವ ಇತಿಹಾಸವೇ ಒ೦ದಾದರೆ ಪಾಕಿಸ್ತಾನದ ಚಿಣ್ಣರು ತಿಳಿದುಕೊಳ್ಳುವ ಇತಿಹಾಸವೇ ಬೇರೆ ಎ೦ದೆನಿಸುವುದು ಸುಳ್ಳಲ್ಲ.ತನ್ನ ದೇಶವಾಸಿಗಳ ಶೌರ್ಯವನ್ನು ವಿವರಿಸುವ ಭರದಲ್ಲಿ ಪಾಕಿಸ್ತಾನಿ ಶಿಕ್ಷಣ ವ್ಯವಸ್ಥೆ ಅದ್ಯಾವ ಪರಿಯ ಸುಳ್ಳು ಹೇಳುತ್ತದೆ ಗೊತ್ತೆ?
ಪುಟ್ಟ ‘ಬೇಬಿ’ಯೊಳಗೆ ಎಷ್ಟೆಲ್ಲ ಕಥೆಗಳು…
– ಚಕ್ರವರ್ತಿ ಸೂಲಿಬೆಲೆ
‘ಬೇಬಿ’ ಚಿತ್ರ ಎರಡು ವಾರದಲ್ಲಿ ಹೆಚ್ಚುಕಡಿಮೆ ನೂ ರುಕೋಟಿ.ಕಾಲ್ಪನಿಕ ಕಥಾಹಂದರದ, ಹಿಂದೂದ್ವೇಷಿ ಹಣೆಪಟ್ಟಿಹೊತ್ತ ಪೀಕೆಗೆ ಸಿಕ್ಕ ಪ್ರಚಾರದ ಶೇಕಡಾ ಹತ್ತರಷ್ಟೂ ದೊರೆಯದ ಬೇಬಿಯ ಗೆಲುವು ಖುಷಿ ನೀಡುವಂತದ್ದೇ ಸರಿ. ಕೊನೆಯ ಕ್ಷಣದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿ ಭಾರತದ ಗೂಢಚಾರ ವ್ಯವಸ್ಥೆ, ಪೋಲೀಸರ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವ ಬೇಬಿ ನಿಜಕ್ಕೂ ವಿಶೇಷ ಚಿತ್ರ.
ಬೇಬಿ ಗುಪ್ತ ಕಾರ್ಯಾಚರಣೆಗೆಂದು ರೂಪುಗೊಂಡ ಪುಟ್ಟ ಪೋಲಿಸ್ಪಡೆ. ಭಯೋತ್ಪಾದಕರನ್ನು ಮಟ್ಟಹಾಕಲು ಕಟಿಬದ್ಧವಾದ ಈ ಪಡೆ ಟರ್ಕಿಯಲ್ಲಿ ಕಾರ್ಯಾಚರಣೆ ಮಾಡುವುದರೊಂದಿಗೆ ಸಿನಿಮಾ ಶುರು. ಅಲ್ಲಿಂದಾಚೆಗೆ ನೇಪಾಳ, ಪಾಕಿಸ್ತಾನ ಕೊನೆಗೆ ಸೌದಿ ಅರೇಬಿಯಾದಲ್ಲಿ ಭಿನ್ನಭಿನ್ನ ಕಾರ್ಯಾಚರಣೆಗಳು. ನೀರಜ್ ಪಾಂಡೆಯ ಚಿತ್ರಕಥೆ, ನಿರ್ದೇಶನ ಅದೆಷ್ಟು ಬಿಗಿಯಾಗಿದೆಯೆಂದರೆ ಪ್ರಾಣ ಕುತ್ತಿಗೆಗೆ ಬಂದು ಸಿಕ್ಕಿಹಾಕಿಕೊಂಡುಬಿಡುತ್ತದೆ.
ಭಾರತೀಯ ಪೊಲೀಸರನ್ನು ಗಲಾಟೆ ಮುಗಿದಮೇಲೆ ಬರುವ ಅಬ್ಬೇಪಾರಿಗಳಂತೆ ಸಿನಿಮಾದಲ್ಲಿ ಇಷ್ಟುದಿನ ತೋರಿಸಲಾಗುತ್ತಿತ್ತು. ಮೊದಲಬಾರಿಗೆ ಅಮೆರಿಕನ್ ಸಿನಿಮಾಗಳಿಗೆ ಸರಿಸಾಟಿಯಾಗಿ ನಿಲ್ಲುವ ಅತ್ಯಂತ ನಿರ್ಭಾವುಕ ಸಿನಿಮಾ ಇದು. ಇಡಿಯ ಚಿತ್ರದಲ್ಲಿ ಒಂದೇ ಹಾಡು, ಭರಪೂರ ಸಾಹಸ. ಥಿಯೇಟರ್ನಿಂದ ಹೊರಬರುವಾಗ ಮಗುವೊಂದು ಅಪ್ಪನ ಬಳಿ ಇಂತಹ ಪೊಲೀಸ್ ಆಗಬೇಕೆಂದರೆ ಏನು ಮಾಡಬೇಕಪ್ಪ? ಎಂದು ಕೇಳುತ್ತಿತ್ತು. ಅಷ್ಟರಮಟ್ಟಿಗೆ ಸಿನಿಮಾ ಸಾರ್ಥಕ.
ಈ ಸಿನಿಮಾ ನೋಡುತ್ತಿರುವಾಗ ನನ್ನೊಳಗೆ ಹತ್ತಾರು ಸಿನಿಮಾ ಓಡುತ್ತಿತ್ತು. ಕಳೆದ ಡಿಸೆಂಬರ್ ೧೬ಕ್ಕೆ ಪೇಷಾವರದ ಶಾಲೆಯೊಂದರಲ್ಲಿ ತೆಹರೀಶ್-ಎ-ತಾಲಿಬಾನ್ ತಂಡ ದಾಳಿಗೈದು ಮಕ್ಕಳನ್ನು ಹತ್ಯೆಗೈದದ್ದು ನೆನಪಿದೆಯಲ್ಲ, ಅವತ್ತು ಪರ್ವೆಜ್ ಮುಶರಫ್ರಿಂದ ಹಿಡಿದು ಸರ್ತಾಜ್ ಅಜೀಜ್ರ ವರೆಗೆ ಪ್ರತಿಯೊಬ್ಬರೂ ಈ ಕೃತ್ಯದ ಹಿಂದೆ ಭಾರತದ ಕೈವಾಡ ಇದೆ ಎಂದು ಕೂಗಾಡಿದ್ದರು. ೧೯೭೧ರ ಡಿಸೆಂಬರ್ ೧೬ರ ನಂತರ ೨೦೧೪ರ ಡಿಸೆಂಬರ್ ೧೬ ಎಂಬ ಅನೇಕ ಟ್ವೀಟ್ಗಳು ಹರಿದಾಡಿದ್ದವು. ಮೊದಲನೆಯದು ಬಾಂಗ್ಲಾ ವಿಮೋಚನೆಯ ದಿವಸ ನೆನಪಿರಬೇಕಲ್ಲ!






