ಕತೆಯೊ೦ದು ಸಾರ್ಥಕವೆನಿಸುವುದೇ ಹೀಗಲ್ಲವೇ…??
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಸುಮಾರು ಐವತ್ತು ವರ್ಷಗಳ ಹಿ೦ದಿನ ಮಾತು. ಮಧ್ಯವಯಸ್ಕ ವಿಧುರನೊಬ್ಬ ತನ್ನ ಮಕ್ಕಳೊ೦ದಿಗೆ ನ್ಯೂಯಾರ್ಕ್ ಪಟ್ಟಣದಿ೦ದ ಆಸ್ಟ್ರೇಲಿಯಾ ದೇಶಕ್ಕೆ ಬ೦ದು ನೆಲೆಸಿದ. ಆಸ್ಟ್ರೇಲಿಯಾ ದೇಶದ ರೇವು ಪಟ್ಟಣವೊ೦ದರಲ್ಲಿ ದುಡಿಯುತ್ತಿದ್ದ ಈ ಮಧ್ಯವಯಸ್ಕನಿಗೆ ಇಬ್ಬರು ಮಕ್ಕಳು. ಮಕ್ಕಳ ಪೈಕಿ ಕಿರಿಯ ಹುಡುಗನಿಗೆ ಸುಮಾರು ಹನ್ನೆರಡು ವರ್ಷ ವಯಸ್ಸಾಗಿತ್ತು. ಅತ್ಯ೦ತ ಸ್ಫುರದ್ರುಪಿಯಾಗಿದ್ದ ತಿಳಿಹಸಿರು ಬಣ್ಣದ ಕ೦ಗಳಿನ ಪುಟ್ಟಪೋರನ ಕಿರಿದಾದ ನೇತ್ರಗಳಲ್ಲಿ ಬೆಟ್ಟದಷ್ಟು ಆಸೆ ತು೦ಬಿತ್ತು. ಕೂತರೂ ನಿ೦ತರೂ ಆತನದ್ದು ಒ೦ದೇ ಕನಸು. ತಾನೊಬ್ಬ ದೊಡ್ಡ ಸಿನಿಮಾ ನಟನಾಗಬೇಕು. ಮೊದಲಿಗೆ ಸರ್ಕಸ್ ಕ೦ಪನಿಯೊ೦ದರಲ್ಲಿ ಸೇರಿಕೊ೦ಡು ಬಗೆಬಗೆಯ ಕಸರತ್ತುಗಳನ್ನು ಕಲಿತುಕೊ೦ಡು ನೋಡುಗರನ್ನು ಮೆಚ್ಚಿಸಬೇಕು, ಆನ೦ತರ ಜಗಮೆಚ್ಚುವ ನಾಯಕನಟನಾಗಬೇಕು. ಆದರೇನು ಮಾಡುವುದು? ಅವನ ಕನಸುಗಳು ಸು೦ದರ, ವಾಸ್ತವ ಕಠೋರ. ಮನೆಯಲ್ಲಿ ಕಿತ್ತುತಿನ್ನುವ ಬಡತನ. ಹೊಟ್ಟೆಪಾಡಿಗಾಗಿ ಅಪ್ಪನೊ೦ದಿಗೆ ಅವನೂ ಸಹ ಬ೦ದರಿನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ದುಡಿತದಿ೦ದ ತ೦ದ ಹಣವನ್ನು ಕೂಡಿಡುತ್ತ, ಎ೦ದಿಗಾದರೊ೦ದು ದಿನ ತಾನು ಸಿನಿಮಾ ನಟನಾಗಲೇಬೇಕೆನ್ನುವ ಮಹತ್ವಾಕಾ೦ಕ್ಷೆಯೊ೦ದಿಗೆ ಆತ ತನ್ನ ದಿನಗಳನ್ನು ತಳ್ಳುತ್ತಿದ್ದ. ಮತ್ತಷ್ಟು ಓದು 
ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ
-ರಾಮಚಂದ್ರ ಹೆಗಡೆ
ಇಂದು ಅಂತಾರಾಷ್ಟ್ರೀಯ ಯೋಗದಿನ. ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರುವ ಈ ಹೊತ್ತು ನಾವು ನೆನೆಯಲೇಬೇಕಾದ ಒಬ್ಬ ಸಾಧಕರೆಂದರೆ ಯೋಗಾಚಾರ್ಯ, ಅಭಿನವ ಧನ್ವಂತರಿ ಅಂತಲೇ ಪ್ರಸಿದ್ಧರಾದ , ಸುಮಾರು ೫೦ ವರ್ಷಗಳ ಹಿಂದೆಯೇ ಯೋಗದಲ್ಲಿ ಅಪಾರ ಸಾಧನೆ ಮಾಡಿ ಸಾವಿರಾರು ಶಿಷ್ಯರನ್ನು ತಯಾರು ಮಾಡಿ ರಾಜ್ಯದ ಮೂಲೆಮೂಲೆಗಳಿಗೆ ಯೋಗಸಂದೇಶ ತಲುಪಿಸಿದ ಮಹಾನುಭಾವ, ಯೋಗವೆಂದರೆ ಅವರು ಎಂಬಷ್ಟರ ಮಟ್ಟಿಗೆ ಮನೆಮಾತಾದ ಯೋಗಸಾಧಕ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ಯವರು. ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಯವರು ತಾವೇ ಯೋಗದಲ್ಲಿ ಬಹುದೊಡ್ಡ ಸಾಧಕರಾಗಿದ್ದರು. ತಮ್ಮ ಗುರು ‘ಶಿವಾನಂದ’ರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹಳ್ಳಿ ಹಳ್ಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನೂ ಉದ್ಧರಿಸುವ ಕಾಯಕವನ್ನು ಒಂದು ‘ಪೂಜೆ’ಯಾಗಿ ಸ್ವೀಕರಿಸಿ, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನು ಕೈಗೆತ್ತಿಕೊಂಡು ಗ್ರಾಮೀಣರಿಗೆ ಅರಿವು ಕೊಡುವುದರ ಮೂಲಕ, ಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು. 1943ರಲ್ಲಿ ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯ ಜನರ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ 50 ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು. ತಾವು ನೀಡುತ್ತಿದ್ದ ಆಯುರ್ವೇದ ಔಷಧಿ ಯಿಂದ ಲಕ್ಷಾಂತರ ರೋಗಿಗಳ ಬದುಕಲ್ಲಿ ಬೆಳಕು ತಂದವರು. ಚಿತ್ರದುರ್ಗ ಜಿಲ್ಲೆಯ ಪುಟ್ಟ ಹಳ್ಳಿಯೊಂದನ್ನು ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಿದ ಸಾಧನೆ ಪೂಜ್ಯರದು. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಲ್ಲಾಡಿಹಳ್ಳಿ ಆಶ್ರಮ ಮಾಡಿದ ಕ್ರಾಂತಿ ದೊಡ್ಡದು. ಮತ್ತಷ್ಟು ಓದು 
ಅಪ್ಪನ ಪತ್ರ
– ರೋಹಿತ್ ಚಕ್ರತೀರ್ಥ
ಮಗನನ್ನು ಬದುಕಿನ ಬೆಟ್ಟ ಹತ್ತಿ ತೋರಿಸುವ ಅಪ್ಪ
ಪ್ರೀತಿಯ ಅಶ್ವಿನ್,
ಬಹಳ ದಿನಗಳಿಂದ ನಿನಗೆ ಪತ್ರ ಬರೆದಿರಲಿಲ್ಲ. ಬರೆದು ಹೇಳುವಂಥಾದ್ದೇನೋ ಬಹಳ ಇತ್ತೆನ್ನೋಣ. ಆದರೆ, ನನ್ನ ಪತ್ರಗಳಿಂದ ನಿನ್ನ ಓದಿಗೆಲ್ಲಿ ಕಿರಿಕಿರಿಯಾದೀತೋ ಅಂತ ಸ್ವಲ್ಪ ಸಮಯ ಪೆನ್ನಿಗೂ ಅಂಚೆಯಣ್ಣನಿಗೂ ವಿಶ್ರಾಂತಿ ಕೊಟ್ಟಿದ್ದೆ. ಅಂದ ಹಾಗೆ, ಪರೀಕ್ಷೆ ಹೇಗೆ ಮಾಡಿದ್ದೀಯ? ನಿನ್ನಮ್ಮ ಇಲ್ಲಿ ಮೂರು ಹೊತ್ತು ಕೈ ಮುಗಿಯುವ ರಾಘವೇಂದ್ರ ಸ್ವಾಮಿಗಳಿಗೆ ನೀನು ನಿರಾಸೆ ಮಾಡುವುದಿಲ್ಲವೆಂದು ನಂಬುತ್ತೇನೆ! ಮತ್ತಷ್ಟು ಓದು 
ಬರಹಗಾರನ ತಲ್ಲಣಗಳು
ಹಚ್ಚಿದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ; ಆರಿಸಿದರೆ ಬೆಂಕಿ ಆರಿಸು, ದೀಪ ಆರಿಸಬೇಡ – ದಿನಕರ ದೇಸಾಯಿ
ತೀರ ಬೇಸರ, ಅವಮಾನದ ಸಂದರ್ಭ, ಖಿನ್ನತೆ ಮನಸ್ಸನ್ನು ಆವರಿಸಿದಾಗ ಆ ಘಳಿಗೆ ನಾನು ಓದಿನ ಮೊರೆ ಹೋಗುತ್ತೇನೆ. ಓದುತ್ತ ಹೋದಂತೆ ಬರಹಗಾರನ ತಲ್ಲಣಗಳೆದುರು ನನ್ನ ವೈಯಕ್ತಿಕ ಸಂಕಟಗಳೆಲ್ಲ ತೀರ ಸಣ್ಣ ಸಂಗತಿಗಳೆನಿಸಿ ಆ ಕ್ಷಣ ಮನಸ್ಸನ್ನು ಆವರಿಸಿದ ಖಿನ್ನತೆಯ ತೆರೆ ಸರಿದು ಹೋಗುತ್ತದೆ. ಬರಹಗಾರರ ಸಮಾಜಮುಖಿ ತಲ್ಲಣಗಳ ಎದುರು ನನ್ನ ವೈಯಕ್ತಿಕ ತಲ್ಲಣಗಳು ಸೋತು ನೆಲಕಚ್ಚುತ್ತವೆ. ಈ ದೃಷ್ಟಿಯಿಂದ ನಾನು ಬರಹಗಾರರಿಗೆ ಮತ್ತು ಅವರೊಳಗಿನ ತಲ್ಲಣಗಳಿಗೆ ಹೆಚ್ಚು ಕೃತಜ್ಞನಾಗಿದ್ದೇನೆ. ನನ್ನನ್ನಾವರಿಸುವ ಬೇಸರದಿಂದ ಹೊರಬರಲು ಓದು ನನಗೆ ಪರ್ಯಾಯ ಮಾರ್ಗವಾಗಿ ತೋರುತ್ತದೆ. ಮನುಷ್ಯ ಸಂಬಂಧಗಳಿಂದ ಮನಸ್ಸು ಘಾಸಿಗೊಂಡಾಗ ನಾನು ಕಾಫ್ಕಾನ ಮೆಟಾಮಾರ್ಫಸಿಸ್ ಕಥೆಯನ್ನು ಮತ್ತೆ ಮತ್ತೆ ಓದಿಗೆ ಕೈಗೆತ್ತಿಕೊಳ್ಳುತ್ತೇನೆ. ಮನುಷ್ಯ ಸಂಬಂಧಗಳು ಸಂದರ್ಭದ ಕೈಗೆ ಸಿಲುಕಿ ಹೇಗೆ ಬದಲಾಗುತ್ತ ಹೋಗುತ್ತವೆ ಎನ್ನುವುದನ್ನು ಗ್ರೇಗರ್ನ ಪಾತ್ರದ ಮೂಲಕ ಕಾಫ್ಕಾ ತುಂಬ ಅನನ್ಯವಾಗಿ ಹೇಳುತ್ತಾನೆ. ಕಥೆ ಕಾಲ್ಪನಿಕವಾಗಿದ್ದರೂ ಅಲ್ಲಿ ಮನುಷ್ಯ ಸಂಬಂಧಗಳನ್ನು ಬದಲಾದ ಸನ್ನಿವೇಶದಲ್ಲಿ ನೋಡುವ ಕಾಫ್ಕಾನ ತಲ್ಲಣಗಳಿವೆ. ಅನಂತಮೂರ್ತಿ ಅವರ ಕಥೆಗಳು, ಭೈರಪ್ಪನವರ ಕಾದಂಬರಿಗಳು, ಮಹಾದೇವರ ಲೇಖನಗಳನ್ನು ಓದುವಾಗಲೆಲ್ಲ ಈ ಬರಹಗಾರರ ತಲ್ಲಣಗಳು ಒಬ್ಬ ಓದುಗನಾಗಿ ನನಗೆ ಅನೇಕ ಸಲ ಎದುರಾದದ್ದುಂಟು. ಮತ್ತಷ್ಟು ಓದು 
ಭಿಕ್ಷೋದ್ಯಮ ಕ್ಷೇತ್ರದಲ್ಲೂ ಮೀಸಲಾತಿಗಾಗಿ ಬಡಿದಾಡಿ: ಕಾಣೇಶ್ ಜಲ್ಲಿಕಟ್ಟು ಸಲಹೆ (ಸುಳ್ಸುದ್ದಿ)
ಕಡಿಮೆ ಸಂಖ್ಯೆಯಲ್ಲಿರುವ ಸರಕಾರೀ ಹುದ್ದೆಗಳಿಗಾಗಿ ಹೊಡೆದಾಡುತ್ತಾ ಕುಳಿತರೆ ಉತ್ತಮ ಲಾಭವಿರುವ ಭಿಕ್ಷೋದ್ಯಮ ಬಲಾಢ್ಯರ ಪಾಲಾಗುತ್ತದೆ. ಆದ್ದರಿಂದ ಭಿಕ್ಷೋದ್ಯಮ ಕ್ಷೇತ್ರದತ್ತಲೂ ಗಮನ ಹರಿಸಿ, ಅಲ್ಲಿಯೂ ಮೀಸಲಾತಿ ಜಾರಿಗೆ ಹೋರಾಟ ನಡೆಸುವ ಮೂಲಕ ಶೋಷಿತರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕು ಎಂದು ಹಿರಿಯ ಬುದ್ದಿಜೀವಿ ಪತ್ರಕರ್ತ ರಾಜಕಾರಣಿ ಶ್ರೀ ಕಾಣೇಶ್ ಜಲ್ಲಿಕಟ್ಟು ಸಲಹೆ ನೀಡಿದರು. ಅವರು ಶಿವಮೊಗ್ಗದಲ್ಲಿ ನಿನ್ನೆ ‘ಪ್ರಗತಿಪರ ಬರ್ನ್ ಆಲ್ ವೇದಿಕೆ’ ಹಮ್ಮಿಕೊಂಡಿದ್ದ “ಮೋದಿ ವಿರೋಧಿಗಳ ತವಕ ತಲ್ಲಣಗಳು” ಎನ್ನುವ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮತ್ತಷ್ಟು ಓದು 
ಗೂಂಡಾಗಿರಿ ಎಂದು ಕರೆಯುವ ಭಂಡತನ
ಸಂಶೋಧಕರಾದ(?!!) ಭಗವಾನ್ ಅವರ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಪುಸ್ತಕದ ಎರಡನೆಯ ಅಧ್ಯಾಯ “ಶಂಕರಾಚಾರ್ಯನ ಗೂಂಡಾಗಿರಿ ಮತ್ತು ವೈದಿಕ ಸಂಸ್ಕೃತಿ” ಲೇಖನದ ಶೀರ್ಷಿಕೆಯನ್ನು ಸಾಬೀತು ಪಡಿಸಲು ಸಂಶೋಧಕರು ಹಾಕಿರುವ ತಿಪ್ಪರಲಾಗ ಮತ್ತು ಬಿಟ್ಟ ಸತ್ಯವಿಚಾರಗಳು ಬೃಹದಾಕಾರವಾಗಿವೆ. ಸದ್ಯ, ಇವರುಗಳು ಗಣಿತ, ರಸಾಯನ ಶಾಸ್ತ್ರ ಮುಂತಾದುವುಗಳನ್ನು ಓದಿಲ್ಲ. ಇಲ್ಲದೇ ಹೋಗಿದ್ದರೆ ಅಲ್ಲಿ ಇವರು ಹುಟ್ಟುಹಾಕಬಹುದಾಗಿದ್ದ ಪ್ರಮೇಯಗಳಿಂದ ಎಷ್ಟು ವಿಜ್ಞಾನಿಗಳ ಆತ್ಮಗಳು ಅಕಾಲ ಮೃತ್ಯುವನ್ನಪ್ಪಿ ಪ್ರೇತಗಳಾಗುತ್ತಿದ್ದವೋ ಗೊತ್ತಿಲ್ಲ. ವಿಜ್ಞಾನ ಉಳ್ಕೊಂಡ್ರೂ ಸಮಾಜ ವಿಜ್ಞಾನವನ್ನು ಮನಕ್ಕೆ ಬಂದ ತರ್ಕ, ಊಹೆಗಳನ್ನು ವೈಜ್ಞಾನಿಕವೆಂದು ಒರಲುತ್ತಾ ಬುಡವಿಲ್ಲದ ಸಿದ್ಧಾಂತ ಮಂಡನೆ ಮತ್ತು ಬ್ರಾಹ್ಮಣರ ಖಂಡನೆಯಿಂದ ಪ್ರಚಂಡನಾಗುವ ಕೌಶಲವು ಬುದ್ಧಿಜೀವಿಗಳು ಎಂದೆನಿಸಿಕೊಳ್ಳಬೇಕಾದರೆ ಕಲಿಯಬೇಕಾದ ಕಸರತ್ತಾದ್ದರಿಂದ, ಆ ವಿಷಯದಲ್ಲಿ ಅಸಾಮಾನ್ಯ ಪ್ರತಿಭೆಯನ್ನು ಮೆರೆದಿದ್ದಾರೆ. ಕಳೆದ ಅಧ್ಯಾಯದಲ್ಲಿ ಶಂಕರಾಚಾರ್ಯರಿಂದ ಶುರುಮಾಡಿದ ಪ್ರಲಾಪವನ್ನು ಕಡೆಯಾಗುವಾಗ ನೌಕರಿ ಮಾಡುವ ಜನರವರೆಗೂ ವಿಸ್ತರಿಸಿದ್ದು ಇವರ ಪ್ರತಿಭೆಗೆ ಸಾಕ್ಷಿ. ಇಲ್ಲಿಯೂ ಅಷ್ಟೆ; ಯುಗ ಯುಗಗಳನ್ನು ಲೀಲಾಜಾಲವಾಗಿ ಹಾರಿ ನೆಗೆದು ಒಂದೆರಡು ಉದಾಹರಣೆಗಳಿಂದ ಇಡೀ ಗ್ರಂಥದ ಆಶಯವನ್ನೇ, ಆ ಜನಪದದ ಸಾಮಾರ್ಥ್ಯವನ್ನೇ ದಿಕ್ಕಾಪಾಲು ಮಾಡುವ ಅಮೋಘ ವಾದಲಹರಿಯಲ್ಲಿ ಮುಳುಗಿ ತೇಲಿದ್ದಾರೆ. ಆದರೆ ಇತಿಹಾಸವನ್ನು ತಿರುಚಿ ಬರೆಯಬಹುದಾದರೂ ಐತಿಹಾಸಿಕ ಸತ್ಯಗಳನ್ನು ನಾಶಮಾಡಲು ಸಾಧ್ಯವಿಲ್ಲವಾದ್ದರಿಂದ ವಿಚಾರಗಳ ಸತ್ಯಾಂಶಗಳನ್ನು ಪ್ರಸ್ತುತಪಡಿಸುವಲ್ಲಿ ದಯನೀಯವಾಗಿ ಸೋತಿದ್ದಾರೆ. ಈ ಅಧ್ಯಾಯದಲ್ಲಿ ಮುಖ್ಯವಾಗಿ ಆಪಾದಿಸಿರುವ ನಾಗಾರ್ಜುನಕೊಂಡದ ಬೌದ್ಧ ಮಂದಿರಗಳು ಶಂಕರಾಚಾರ್ಯರ ನೇತೃತ್ವದಲ್ಲಿ ಧ್ವಂಸವಾಗಿದ್ದು ಎಂಬುದರ ಮತ್ತು ಇನ್ನಿತರ ಐತಿಹಾಸಿಕ ವಿಚಾರಗಳೆಡೆಗೆ ನೋಡೋಣ. ಉಳಿದಂತೆ ಅದೇ ಬ್ರಾಹ್ಮಣ, ಪುರೋಹಿತಶಾಹಿ, ಹಿಂದೂ ಧರ್ಮ ಮುಂತಾದ ಪದಪುಂಜಗಳಿಂದ ಅರೋಪ ಮಾಡುತ್ತ ಪುಟಭರ್ತಿ ಮಾಡುವ ಕೆಲಸ ಮಾಡಿದ್ದಾರಾದ್ದರಿಂದ ಮತ್ತೆ ಮತ್ತೆ ಅದನ್ನು ಪರಿಶೀಲಿಸುವ ಅಗತ್ಯವಿಲ್ಲ. ಮತ್ತಷ್ಟು ಓದು 
ಖಾಸಗಿ ಕಾಲೇಜಿನ ಕಲಿಕೆ- ಬರೀ ಗಿಲೀಟಿನ ಬುಡುಬುಡಿಕೆ
ಶ್ರದ್ಧಾಹಿ ಪರಮಾಗತಿಃ-
● ನನ್ನ ಆಟೋ ಮಾರಿದರು ಮಗಳಿಗೆ ಪ್ರವೇಶ ದೊರೆಯಲಿಲ್ಲ
● ೯೫% ಅಂಕ ಪಡೆದರೂ ಕಾಲೇಜಿನಲ್ಲಿ ಸೀಟಿಲ್ಲ
● ಹಿಂದೂ ಧರ್ಮದ ಮಕ್ಕಳಿಗೆ ಪ್ರವೇಶವಿಲ್ಲ; ನಮ್ಮ ಕೋಮಿನ ಮಕ್ಕಳಿಗೆ ಆದ್ಯತೆ
● ಪೋಷಕರು ಭರಿಸಲಾಗದಷ್ಟು ಕಾಲೇಜುಗಳು ದುಬಾರಿ
● ದುಬಾರಿ ಕಾಲೇಜಿಗೆ ಸೇರಿಸಿದರೂ ಟ್ಯೂಷನ್ ಹೇಳಿಸಲೇಬೇಕು – ಸಾವಿರಾರು ರೂಪಾಯಿಗಳ ಧಂಧೆ
● ದುಬಾರಿ ಕಾಲೇಜಿಗೆ ಸೇರಿಸುವ ಕುಟುಂಬಗಳಲ್ಲಿ ಆದಾಯದ ಬಹು ಭಾಗ ಶುಲ್ಕಕ್ಕೆ ಹೋಗುವ ಕಾರಣ ಜೀವನದ ಹಲವು ಅಗತ್ಯತೆಗಳನ್ನು ಕಡಿತಗೊಳಿಸಿಕೊಂಡು ಮನೆಯ/ಮನಸ್ಸಿನ/ದೇಹದ ಆರೋಗ್ಯಕ್ಕೆ ಸಂಚಾಕಾರ ತಂದುಕೊಳ್ಳುವ ಸಾಧ್ಯತೆ ಹೆಚ್ಚು.
● ಇಷ್ಟೆಲ್ಲಾ ಕಷ್ಟ ಪಡುವ ತಾಯಿತಂದೆಯರಿಂದ ಅಥವಾ ಮಗುವೇ ಸಂವೇದನಾಶೀಲನಾಗಿದ್ದರೆ ಅದಕ್ಕೆ ಕಷ್ಟಗಳು ತಿಳಿದು ನೇರ ಅಥವಾ ಪರೋಕ್ಷ ಒತ್ತಡಕ್ಕೆ ಒಳಗಾಗಿ ವಿದ್ಯಾಭ್ಯಾಸಕ್ಕೆ ಆಡ್ದಿಯಾಗಬಹುದು.
● ಇದು ಒಂದು ಆರೋಗ್ಯಕರ ಬೆಳವಣಿಗೆ ಅಲ್ಲ.
● ಕ್ರಿಶ್ಚಿಯನ್ ಅಥವಾ ಮುಸಲ್ಮಾನರ ವಿದ್ಯಾ ಸಂಸ್ಥೆಗಳಿಗೆ ಸೇರಿ ಅಲ್ಲಿ ಹೂವು ಮುಡಿಯುವಂತಿಲ್ಲ, ಹಣೇ ಕುಂಕುಮ ಇಡುವಂತಿಲ್ಲ, ಸೀರೆ ಉಡುವಂತಿಲ್ಲ, ಬಳೆ ತೊಡುವಂತಿಲ್ಲ ಎಂಬ ತಲೆಹರಟೆ ಅಸಹಿಷ್ಣತೆಯ ಪರಮಾವಧಿಯ ನಿಷೇಧಗಳನ್ನು ಅನುಭವಿಸಬೇಕು. ಇನ್ನು ಲವ್ ಜಿಹಾದು/ಪ್ರೇಮಕ್ಕೆ ಒತ್ತಡ ಹಾಕುವುದು ಇತ್ಯಾದಿ ಸಮಸ್ಯೆಗಳು ಸೇರಿ ‘ಕಾಸು ಹಾಳು ತಲೆಯು ಬೋಳು’ ಎಂಬ ಗಾದೆಯಂತೆ ಆಗುವುದೊಂದು ಅಭಾಸ.
ಈ ಸಮಸ್ಯೆಗಳು ಎಂದಿಗೂ ಇದ್ದಂತಹವೇ.ಆದರೆ ಇತ್ತೀಚೆಗೆ ಅದರ ವ್ಯಾಪ್ತಿ, ಗಹನತೆ ಹೆಚ್ಚಾಗಿದೆ. ಮತ್ತಷ್ಟು ಓದು 
ಸಾಮಾನ್ಯ ಘಟನೆಯೂ, ಅಸಾಮಾನ್ಯ ಕತೆಯೂ..
“ಟೇಬಲ್ ಫಾರ್ ಟೂ ಸರ್..? ಹೀಗೆ ಬನ್ನಿ ಸರ್, ಮೇಡಮ್ ಅಲ್ನೋಡಿ” ಎಂದ ಪರಿಚಾರಕ, ಕಿಟಕಿಯ ಪಕ್ಕದಲ್ಲಿದ್ದ ಮೇಜಿನತ್ತ ಕೈ ತೋರಿಸಿ, “ಅಲ್ಲಿ ಕುಳಿತುಕೊಳ್ಳಿ ಸರ್, ಅಲ್ಲಿಂದ ಸಮುದ್ರದ ನಯನ ಮನೋಹರ ದೃಶ್ಯವನ್ನು ನೀವು ಸುಲಭವಾಗಿ ವೀಕ್ಷಿಸಬಹುದು” ಎಂದು ನುಡಿದ. “ನಿಜ ಮಾರ್ಕ್, ನಾವು ಅಲ್ಲಿಯೇ ಕುಳಿತುಕೊಳ್ಳೋಣ. ದೋಣಿಯಲ್ಲಿ ಕುಳಿತು ಊಟ ಮಾಡಿದ ಸುಂದರ ಅನುಭವ ಆ ಟೇಬಲ್ಲಿನ ಮೇಲೆ ನಮಗಾಗಬಹುದು” ಎಂದು ನುಡಿದ ಆಲಿಸ್ ಪರಿಚಾರಕನನ್ನು ಹಿಂಬಾಲಿಸತೊಡಗಿದಳು. ಚಕ್ಕನೇ ಅವಳ ತೋಳನ್ನು ಬಳಸಿದ ಆಕೆಯ ಪತಿ ಮಾರ್ಕ್, “ಆ ಟೇಬಲ್ಲಿಗಿಂತ ಬಹುಶಃ ನಾವು ಈ ಟೇಬಲ್ಲಿನಲ್ಲಿ ಕುಳಿತು ಊಟ ಮಾಡುವುದು ಹೆಚ್ಚು ತೃಪ್ತಿಕರವೆನಿಸಬಹುದು” ಎಂದು ನುಡಿದ. ತೀರ ಹೊಟೆಲ್ಲಿನ ನಟ್ಟುನಡುವಿದ್ದ ಮೇಜನ್ನು ಗಮನಿಸಿ “ಅಷ್ಟು ಜನರ ನಡುವೆಯಾ..?? ಆದರೆ..”ಎಂದು ರಾಗವೆಳೆಯುತ್ತಿದ್ದ ಆಲಿಸಳ ಮಾತನ್ನು ಅರ್ಧಕ್ಕೆ ತುಂಡರಿಸಿದ ಮಾರ್ಕ್, “ಪ್ಲೀಸ್ ಆಲಿಸ್”ಎನ್ನುತ್ತ ಬಿನ್ನವಿಸಿದ. ಹಾಗೆ ಪತ್ನಿಯನ್ನು ವಿನಂತಿಸಿಕೊಂಡ ಆತ, ಆಕೆಯ ತೋಳನ್ನು ಬಿಗಿಯಾಗಿ ಹಿಡಿದೆಳೆದುಕೊಂಡ ರೀತಿಯನ್ನು ಗಮನಿಸಿದ ಆಕೆ “ಏನಾಯ್ತು ಮಾರ್ಕ್..”? ಎಂದು ಕೇಳಿದಳು.”
ಶ್ಶ್..!!”ಎನ್ನುತ್ತ ಕೈಬೆರಳನ್ನು ತುಟಿಗಳ ಮೇಲಿಟ್ಟುಕೊಂಡ ಅವನು, ಆಲಿಸಳನ್ನು ಕರೆದುಕೊಂಡು ಹೋಟೆಲ್ಲಿನ ನಡುಮಧ್ಯದಲ್ಲಿದ್ದ ಟೇಬಲ್ಲಿನೆಡೆಗೆ ಕರೆದೊಯ್ದ. ಆತನ ವಿಲಕ್ಷಣ ವರ್ತನೆಯನ್ನು ಗಮನಿಸಿದ ಆಲಿಸ್, “ಏನಾಯ್ತು ಮಾರ್ಕ್..”?ಎಂದು ಪುನ: ಪ್ರಶ್ನಿಸಿದಳು. “ಹೇಳುತ್ತೇನೆ ಡಾರ್ಲಿಂಗ್, ಮೊದಲು ಊಟವನ್ನು ತರಿಸಿಕೊಳ್ಳೋಣ, ನೀನು ಸಿಗಡಿ ಮೀನು ತಿಂತಿಯಾ ಅಥವಾ ಮೊಟ್ಟೆಯ ಆಮ್ಲೆಟ್ ತರಿಸಲಾ..”? ಎಂದು ಕೇಳಿದ ಮಾರ್ಕ್. “ನಿಮಗೇನು ಇಷ್ಟವೋ ಅದನ್ನೇ ತರಿಸಿ” ಎಂದಳು ಅವನ ಮಡದಿ. ಕ್ಷಣಕಾಲ ಇಬ್ಬರೂ ಪರಸ್ಪರರತ್ತ ಪ್ರೇಮದಿಂದ ಮುಗುಳ್ನಕ್ಕರು. ಅವರ ಟೇಬಲ್ಲಿನ ಪಕ್ಕದಲ್ಲೇ ನಿಂತಿದ್ದ ಪರಿಚಾರಕ ಕೊಂಚ ಅಸಹನೆಯಿಂದ ಚಲಿಸಿದ.
“ಮೊದಲು ಸಿಗಡಿ ಮೀನುಗಳನ್ನು ತನ್ನಿ” ಎನ್ನುತ್ತ, “ಆಮೇಲೆ ಆಮ್ಲೇಟ್, ನಂತರ ಸ್ವಲ್ಪ ಚಿಕನ್ ಮತ್ತು ಕಾಫಿ ತೆಗೆದುಕೊಳ್ಳೋಣ. ನನ್ನ ಡ್ರೈವರ್ ಕೂಡ ಇಲ್ಲಿಯೇ ಊಟ ಮಾಡಲಿದ್ದಾನೆ. ನಾವು ಎರಡು ಗಂಟೆಗೆಲ್ಲ ಇಲ್ಲಿಂದ ಹೊರಡಬೇಕು” ಎಂದು ವಿವರಿಸಿದ ಆತ, ಸುಸ್ತಾದವರಂತೆ ನಿಟ್ಟುಸಿರೊಂದನ್ನು ಹೊರಹಾಕಿದ. ದೂರದಲ್ಲಿ ಕಾಣುತ್ತಿದ್ದ ಸಮುದ್ರವನ್ನೊಮ್ಮೆ, ಶುಭ್ರವಾದ ಆಗಸದತ್ತ ಒಮ್ಮೆ ಕಣ್ಣು ಹಾಯಿಸಿದ ಅವನು ತನ್ನ ಮಡದಿಯನ್ನೇ ನೋಡತೊಡಗಿದ. ಸುಂದವಾದ ಟೋಪಿಯೊಂದನ್ನು ಧರಿಸಿದ್ದ ಆಕೆ, ಟೋಪಿಯ ಪಾರದರ್ಶಕ ಮುಖಪರದೆಯಡಿ ಮತ್ತಷ್ಟು ಮುದ್ದಾಗಿ ಗೋಚರಿಸಿದಳು ಅವನಿಗೆ. “ನೀನಿಂದು ತುಂಬಾ ಮುದ್ದಾಗಿ ಕಾಣುತ್ತಿದ್ದಿಯಾ ಡಾರ್ಲಿಂಗ್, ಸಾಗರದ ಈ ನೀಲಿ ನೀರಿನ ಪ್ರತಿಫಲನದಿಂದ ನಿನ್ನ ನೀಲಿ ಕಣ್ಣುಗಳು ಇನ್ನಷ್ಟು ಸುಂದರವಾಗಿ ಗೋಚರಿಸುತ್ತಿದೆ. ಇತ್ತೀಚೆಗೆ ನೀನು ಸ್ವಲ್ಪ ದಪ್ಪವಾಗಿದ್ದೀಯಾ. ಕೊಂಚ ದಪ್ಪವಾಗುವುದರಲ್ಲಿ ತಪ್ಪೇನಲ್ಲ ಆದರೆ ಮಿತಿ ಮೀರಬಾರದು ಅಷ್ಟೇ” ಎಂದು ಮುಗುಳ್ನಕ್ಕ. ತನ್ನ ಗಂಡನ ಹೊಗಳಿಕೆಯಿಂದ ಹೆಮ್ಮೆಯಿಂದ ಆಲಿಸಳ ಎದೆಯುಬ್ಬಿತು. “ಆದರೆ ನಾವೇಕೆ ಕಿಟಕಿಯ ಬಳಿಯಿದ್ದ ಟೇಬಲ್ಲಿನಲ್ಲಿ ಕೂರಲಿಲ್ಲ ಎಂದು ಹೇಳಲೇ ಇಲ್ಲವಲ್ಲ ನೀನು”ಎಂದು ಪ್ರಶ್ನಿಸಿದಳು ಆಲಿಸ್. ಮಾರ್ಕ್ ನಿಗೆ ಸುಳ್ಳು ಹೇಳಬೇಕೆನ್ನಿಸಲಿಲ್ಲ. “ಯಾಕೆಂದರೆ ಒಂದು ಕಾಲಕ್ಕೆ ನನಗೆ ತೀರ ಆತ್ಮೀಯರಾಗಿದ್ದವರೊಬ್ಬರು ಅಲ್ಲಿ ಕುಳಿತಿದ್ದರು” ಎಂದು ನುಡಿದ ಪತಿಯನ್ನು ಪ್ರಶ್ನಾರ್ಥಕವಾಗಿ ನೋಡಿದ ಆಲಿಸ್, “ಅವರು ನನಗೆ ಪರಿಚಯವಿಲ್ಲದವರೇನು ..”? ಎಂದು ಪ್ರಶ್ನಿಸಿದಳು. “ಹೌದು ನನ್ನ ಮಾಜಿ ಪತ್ನಿ”ಎಂದ ಮಾರ್ಕನ ದನಿಯಲ್ಲೊಂದು ಮುಜುಗರ. ಅಂಥದ್ದೊಂದು ಉತ್ತರವನ್ನು ನಿರೀಕ್ಷಿಸಿರದ ಆಲಿಸಳಿಗೆ ಹೇಗೆ ಪ್ರತಿಕ್ರಿಯಿಸಬೇಕೆನ್ನುವುದು ತಿಳಿಯದೆ ಅರೇಕ್ಷಣ ಪೆಚ್ಚಾಗಿ ಅವನನ್ನೇ ದಿಟ್ಟಿಸತೊಡಗಿದಳು. ನಿಮಿಷಾರ್ಧದಲ್ಲಿ ಸುಧಾರಿಸಿಕೊಂಡ ಆಲಿಸ್, “ಅರೇ..! ಅವಳು ಅಲ್ಲಿ ಕುಳಿತಿದ್ದರೇನಾಯ್ತು ಡಾರ್ಲಿ೦ಗ್, ಅದಕ್ಯಾಕೆ ನೀನು ತಲೆ ಕೆಡಿಸಿಕೊಳ್ಳಬೇಕಿತ್ತು? ಪ್ರಪಂಚ ತುಂಬ ಚಿಕ್ಕದು, ಆಕೆ ಮುಂದೆಯೂ ಎಲ್ಲಿಯಾದರೂ ನಮಗೆದುರಾಗಬಹುದು. ಅದರಲ್ಲೇನೂ ವಿಶೇಷವಿಲ್ಲ” ಎಂದು ನುಡಿದ ಆಲಿಸ್, ಕ್ಷಣ ಮಾತ್ರದ ಮೌನದ ನಂತರ, “ಆಕೆ ನಿನ್ನನ್ನು ನೋಡಿದಳಾ..?? ನೀನು ಅವಳನ್ನು ನೋಡಿದ್ದು ಆಕೆಗೆ ಗೊತ್ತಾಯಿತೆ..?? ಆಕೆಯನ್ನು ನನಗೆ ತೋರಿಸಬಲ್ಲೆಯಾ..”? ಎನ್ನುತ್ತ ಪ್ರಶ್ನೆಗಳ ಸುರಿಮಳೆಗೈದಳು.
“ಓಹ್, ಪ್ಲೀಸ್, ಈಗ ನೀನಾಕೆಯನ್ನು ನೋಡಬೇಡ ಆಲಿಸ್, ಬಹುಶಃ ಆಕೆ ನಮ್ಮನ್ನೀಗ ಗಮನಿಸುತ್ತಿರಲಿಕ್ಕೂ ಸಾಕು. ಅಲ್ಲಿ ಕುಳಿತಿದ್ದಾಳಲ್ಲ ಕಂದು ಕೇಶಗಳ ಟೋಪಿ ಧರಿಸಿದ ಹೆಂಗಸು. ನೋಡು, ಆ ಕೆಂಪಂಗಿ ಧರಿಸಿದ ಸಣ್ಣ ಹುಡುಗನ ಹಿಂದಿನ ಕುರ್ಚಿಯ ಮೇಲೆ ಕುಳಿತಿದ್ದಾಳಲ್ಲ ಅವಳೇ” ಎಂದ ಮಾರ್ಕ್. ತಾನಾಕೆಯನ್ನು ನೋಡಿದೆ ಎಂಬಂತೆ ತಲೆಯಾಡಿಸಿದ ಆಲಿಸ್, ನಿಜಕ್ಕೂ ತನ್ನ ಟೋಪಿಯಡಿಯಿಂದಲೇ ಆ ಹೆಂಗಸನ್ನು ಗಮಸಿದ್ದಳು. ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೇನೋ ಎನ್ನುವಂತೆ “ಹೊಂದಾಣಿಕೆ” ಎಂದು ಸುಮ್ಮನಾದನಾತ. ಆಲಿಸ್ ಕೇಳದಿದ್ದರೂ, “ಹೊಂದಾಣಿಕೆಯೇ ಇರಲಿಲ್ಲ ನಮ್ಮ ನಡುವೆ ಆಲಿಸ್. ಆದರೂ ಯಾವುದೇ ಜಗಳ ಕಿತ್ತಾಟಗಳಿಲ್ಲದಂತೆ ನಾವು ತುಂಬ ಪ್ರೌಢವಾಗಿಯೇ ಬೇರೆಯಾದೆವು. ಆನಂತರ ನನಗೆ ನಿನ್ನ ಮೇಲೆ ಪ್ರೀತಿಯಾಯಿತು. ನಿನಗೂ ನನ್ನ ಮೇಲೆ ಪ್ರೇಮವಿತ್ತು. ನಾವಿಬ್ಬರೂ ಒಂದಾಗಿದ್ದು ನಮ್ಮ ಅದೃಷ್ಟವೇ ಎನ್ನಬಹುದು ಆಲಿಸ್” ಎನ್ನುತ್ತ ಬಲಹೀನವಾಗಿ ನಕ್ಕ. ಸ್ವಚ್ಛ ಬಿಳುಪು ಉಡುಪುಗಳನ್ನು ಧರಿಸಿದ್ದ ಕಿಟಕಿ ಟೇಬಲ್ಲಿನ ಮಹಿಳೆಯ ಸುಂದರವಾದ ಕೂದಲುಗಳು ಸಮುದ್ರದ ಮೇಲಾಗುತ್ತಿದ್ದ ಬಿಸಿಲಿನ ಪ್ರತಿಫಲನದಿಂದ ಹೊಳೆಯುತ್ತಿದ್ದವು. ಆಕೆಯ ಅರೆತೆರೆದ ಕಣ್ಣುಗಳು, ಸೇದುತ್ತಿರುವ ಸಿಗರೇಟನ್ನು ಆಕೆ ಅಸ್ವಾದಿಸುತ್ತಿದ್ದಳೆನ್ನುವುದರ ಸಾಕ್ಷಿಯಂತಿತ್ತು. ಆಕೆಯನ್ನು ಗಮನಿಸುತ್ತಿದ್ದ ಆಲಿಸ್ ತನ್ನ ದೃಷ್ಟಿಯನ್ನು ತನ್ನ ಪತಿಯತ್ತ ತಿರುಗಿಸಿದಳು. ಕ್ಷಣ ಕಾಲದ ಮೌನದ ನಂತರ, “ಆಕೆಯ ಕಣ್ಣುಗಳೂ ಸಹ ನೀಲಿಯಾಗಿವೆ ಎಂದು ನೀನು ನನಗೇಕೆ ತಿಳಿಸಲಿಲ್ಲ ಮಾರ್ಕ್”? ಎಂದು ಪ್ರಶ್ನಿಸಿದಳು. “ಅದನ್ನು ನಿನಗೆ ಹೇಳಬೇಕೆಂದು ನನಗೆಂದೂ ಅನ್ನಿಸಲೇ ಇಲ್ಲ” ಎಂದ ಮಾರ್ಕ್, ಬ್ರೆಡ್ಡಿನ ಬುಟ್ಟಿಯನ್ನೆತ್ತಿ ಹಿಡಿದಿದ್ದ ಆಲಿಸಳ ಕೈಯನ್ನು ಮೃದುವಾಗಿ ಚುಂಬಿಸಿದ. ಹಾಗೊಂದು ಅನಿರೀಕ್ಷಿತ ಚುಂಬನದಿಂದ ಆಲಿಸಳ ಮುಖ ನಾಚಿಕೆಯಿಂದ ಕೆಂಪಾಯಿತು. ಹೊಂಬಣ್ಣದ ಕೇಶರಾಶಿಯ ಆಲಿಸ್, ನಾಜೂಕು ಸ್ವಭಾವದ ಭಾವುಕ ಮಹಿಳೆಯಾಗಿದ್ದಳು. ತನ್ನ ಪತಿಯ ಪ್ರೇಮದ ಭಾವುಕತೆಗೆ ಶರಣಾಗಿದ್ದ ಆಕೆಯ ಮುಖದಲ್ಲಿ ಸಂತೋಷವೆನ್ನುವುದು ಎದ್ದು ಕಾಣುತ್ತಿತ್ತು. ಅವರು ತೃಪ್ತಿಯಿಂದ ಊಟ ಮಾಡಿದರು. ಇಬ್ಬರೂ ಸಹ ಬಿಳಿಯುಡುಪಿನ ಮಹಿಳೆಯನ್ನು ಮರೆತವರಂತೆ ವರ್ತಿಸಿದರು. ಆಲಿಸ್ ಆಗಾಗ ಜೋರಾಗಿ ನಗುತ್ತಿದ್ದಳಾದರೂ, ಮಾರ್ಕ್ ಮಾತ್ರ ಕೊಂಚ ಎಚ್ಚರಿಕೆಯಿಂದಿದ್ದ. ಆತ ಕುರ್ಚಿಯ ಮೇಲೆ ತಲೆಯೆತ್ತಿ ನೇರವಾಗಿ ಕುಳಿತಿದ್ದ. ಕಾಫಿಗಾಗಿ ಕಾಯುತ್ತಿದ್ದಷ್ಟು ಸಮಯ ಇಬ್ಬರೂ ಪರಸ್ಪರ ಮಾತನಾಡದೆ ಮೌನವಾಗಿಯೇ ಕುಳಿತಿದ್ದರು. ನೆತ್ತಿಯ ಮೇಲಿನ ಸೂರ್ಯ ನಿಧಾನವಾಗಿ ಸಮುದ್ರದತ್ತ ಸಾಗುತ್ತಿದ್ದ. ಕೆಲವು ಕ್ಷಣಗಳ ನಂತರ, “ಆಕೆಯಿನ್ನೂ ಅಲ್ಲಿಯೇ ಕುಳಿತಿದ್ದಾಳೆ ಮಾರ್ಕ್”ಎಂದು ಪಿಸುಗುಟ್ಟಿದಳು ಆಲಿಸ್.
“ಆಕೆಯ ಉಪಸ್ಥಿತಿ ನಿನಗೆ ಕಿರಿಕಿರಿಯನ್ನುಂಟು ಮಾಡುತ್ತಿದೆಯಾ ಆಲಿಸ್..? ನಾವು ಬೇರೆಲ್ಲಿಯಾದರೂ ಕಾಫಿ ಕುಡಿಯೋಣವಾ..”? ಎನ್ನುತ್ತ ಕಾಳಜಿಯಿಂದ ಕೇಳಿದ ಮಾರ್ಕ್. “ಅಯ್ಯೋ..!! ಇಲ್ಲಪ್ಪ, ನಾನ್ಯಾಕೆ ಕಿರಿಕಿರಿ ಅನುಭವಿಸಬೇಕು. ಕಿರಿಕಿರಿಯನ್ನು ಬೇಕಿದ್ದರೆ ಆಕೆ ಅನುಭವಿಸಲಿ. ಇಷ್ಟಕ್ಕೂ ಆಕೆ ತುಂಬ ಸಂತೋಷವಾಗಿರುವಂತೆಯೇನೂ ಗೋಚರಿಸುತ್ತಿಲ್ಲ, ನೀನೊಮ್ಮೆ ಆಕೆಯನ್ನು ನೋಡಿದರೆ ನಿನಗೇ ಗೊತ್ತಾಗುತ್ತದೆ” ಎಂದಳು ಆಲಿಸ್. “ನನಗೆ ಆಕೆಯನ್ನು ನೋಡುವುದು ಇಷ್ಟವಿಲ್ಲ. ಆಕೆಯ ನೋಟ ಎಂಥದೆನ್ನುವುದು ನನಗೆ ಗೊತ್ತು” ಎಂದ ಮಾರ್ಕ್ ಒಮ್ಮೆ ನಿಟ್ಟುಸಿರಾದ. “ಓಹ್,ಆಕೆ ಅಷ್ಟು ಕೆಟ್ಟವಳಾಗಿದ್ದಳೇ..? ಎನ್ನುವ ಮರುಪ್ರಶ್ನೆ ಆಲಿಸಳದ್ದು. ಸೇದುತ್ತಿದ್ದ ಸಿಗರೇಟಿನ ಹೊಗೆಯನ್ನೊಮ್ಮೆ ತನ್ನ ಹೊಳ್ಳೆಗಳಿಂದ ಹೊರಚೆಲ್ಲಿದ ಮಾರ್ಕ್, ಹುಬ್ಬುಗಂಟಿಕ್ಕಿ, “ಛೇ,ಛೇ ಕೆಟ್ಟವಳು ಅಂತಲ್ಲ, ಆದರೆ ಆಕೆಯೊಂದಿಗೆ ನನಗೆ ಸಂತೋಷದಿಂದಿರಲಾಗಲಿಲ್ಲ ಅಷ್ಟೇ” ಎಂದು ನಕ್ಕ. “ಈಗ ನೀನು ಸಂತೋಷದಿಂದಿರುವೆಯಾ ಮಾರ್ಕ್..”? ಎಂದು ಪ್ರಶ್ನಿಸಿದ ಆಲಿಸ್, ಉತ್ತರಕ್ಕಾಗಿ ಕಾತುರದಿಂದ ಮಾರ್ಕನತ್ತ ನೋಡತೊಡಗಿದಳು. “ಇದೆಂತಹ ಪ್ರಶ್ನೆ ಆಲಿಸ್. ನಿನ್ನ ಪ್ರೀತಿಯಿಂದ ನಾನೆಷ್ಟು ಸುಖಿ ಎನ್ನುವ ಅನುಮಾನವೂ ನಿನಗಿಲ್ಲ. ನೀನು ನಿಜಕ್ಕೂ ಒಬ್ಬ ದೇವತೆ. ನೀನೇ ನನ್ನ ನಿಜವಾದ ಪ್ರೇಮ. ನಿನ್ನಂಥವಳನ್ನು ಪಡೆಯಲು ನಾನು ಪುಣ್ಯ ಮಾಡಿರಬೇಕು. ನಿನ್ನ ಪ್ರೇಮ ತುಂಬಿದ ಕಣ್ಣುಗಳನ್ನು ನೋಡುತ್ತಿದ್ದರೇ, ಸಾಗರದಬಣ್ಣ ತುಂಬಿದ ನಿನ್ನ ಕಣ್ಣುಗಳಲ್ಲಿ ನಾನು ಕಳೆದೇ ಹೋಗುತ್ತೇನೆ “ಎಂದ ಮಾರ್ಕ್ ನ ಮಾತುಗಳಲ್ಲಿ ಕೊಂಚ ನಾಟಕೀಯತೆ ಇತ್ತು. “ಆಕೆಯನ್ನು ಸಂತೊಷವಾಗಿಡುವುದು ಹೇಗೆನ್ನುವುದೇ ನನಗೆ ತಿಳಿಯುತ್ತಿರಲಿಲ್ಲ. ಅಸಾಧ್ಯಳು ಆಕೆ” ಎಂದು ನುಡಿದ ಮಾರ್ಕನ ಕಣ್ಣುಗಳಲ್ಲೊಂದು ಅವ್ಯಕ್ತ ಅಸಹನೆ. ವಾತಾವರಣ ತಂಪಾಗಿಯೇ ಇದ್ದರೂ ತೀರ ಸೆಖೆಯೆನ್ನುವಂತೆ ತನ್ನ ಕೈಯಿಂದ ಗಾಳಿಯಾಡಿಸಿಕೊಳ್ಳಲಾರಂಭಿಸಿದಳು ಆಲಿಸ್. ಆಕೆಯ ಕಣ್ಣಗಳಿನ್ನೂ ಬಿಳಿಯುಡುಪಿನ ಯುವತಿಯ ಮೇಲೆ ನೆಟ್ಟಿದ್ದವು. ಸಿಗರೇಟಿನ ಕೊನೆಯ ಜುರಿಕೆಗಳನ್ನೆಳೆಯುತ್ತಿದ್ದ ಆ ಯುವತಿಯ ತಲೆ ಕುರ್ಚಿಗೆ ಆತುಕೊಂಡಿತ್ತು. ತೀರ ಬಳಲಿಕೆಯಿಂದ ಮುಕ್ತಿ ಸಿಕ್ಕಿದ ಭಾವದ ಅಭಿವ್ಯಕ್ತಿಯೆನ್ನುವಂತೆ ಆಕೆ ಕಣ್ಣು ಮುಚ್ಚಿಕೊಂಡಿದ್ದಳು.
ಸಭ್ಯವಾಗಿಯೇ ತನ್ನ ಭುಜವನ್ನೊಮ್ಮೆ ಮೇಲೆ ಹಾರಿಸಿದ ಮಾರ್ಕ್, “ಏನು ಮಾಡುವುದು ಆಲಿಸ್..? ಕೆಲವರು ಇರುವುದೇ ಹಾಗೆ. ಸದಾಕಾಲ ಅತೃಪ್ತರು. ಅಂಥವರು ಯಾವತ್ತಿಗೂ ಆನಂದದಿಂದ ಇರಲಾರರು. ಅಂಥವರೆಡೆಗೆ ನಾವು ಸಹಾನುಭೂತಿ ತೋರುವುದರ ಹೊರತಾಗಿ ಇನ್ನೇನೂ ಮಾಡಲಾಗದು. ಆದರೆ ನಾವು ಸಂಪೂರ್ಣ ತೃಪ್ತರು ಅಲ್ಲವಾ ಡಾರ್ಲಿಂಗ್..”? ಎಂದು ಹಿತವಾಗಿ ಪ್ರಶ್ನಿಸಿದ ಮಾರ್ಕ್. ಆಕೆ ಉತ್ತರಿಸಲಿಲ್ಲ. ತನ್ನ ಪತಿಯ ಮುಖದತ್ತ ಕಳ್ಳನೋಟ ಬೀರುತ್ತಿದ್ದ ಆಲಿಸಳಲ್ಲೊಂದು ಅವ್ಯಕ್ತ ಕಸಿವಿಸಿ. ನಸುಗೆಂಪು ಮೊಗದ, ತುಂಬು ತೋಳುಗಳ ತನ್ನ ಸದೃಡ ಪತಿಯನ್ನೇ ದಿಟ್ಟಿಸುತ್ತಿದ್ದ ಆಲಿಸಳ ಮನದಲ್ಲಿ, “ಇಷ್ಟು ಸುಂದರ ವ್ಯಕ್ತಿಯೊಂದಿಗೂ ಸಂತಸದಿಂದಿರದಿದ್ದ ಆಕೆಗೆ ಬೇಕಿದ್ದಾದರೂ ಏನು..”? ಎನ್ನುವ ಅನುಮಾನವೊಂದು ಮೂಡಿತ್ತು. ಊಟ ಮುಗಿಸಿ ಎದ್ದ ಮಾರ್ಕ್, ಬಿಲ್ ಕೊಟ್ಟು ತನ್ನ ಕಾರು ಚಾಲಕನಿಗೆ ತಾವು ತೆರಳಬೇಕಾಗಿರುವ ವಿಳಾಸದ ಬಗ್ಗೆ ವಿವರಿಸುತ್ತಿದ್ದರೆ, ಅಸೂಯೆ ಮತ್ತು ಕುತೂಹಲಭರಿತ ದೃಷ್ಟಿಯಿಂದ ಬಿಳಿಯುಡುಪಿನ ಹೆಂಗಸನ್ನೇ ನೋಡುತ್ತಿದ್ದ ಆಲಿಸಳ ಬಾಯಲ್ಲಿ “ಥೂ ಎಂಥಾ ಹೆಂಗಸಪ್ಪ ಈಕೆ, ಅಸಂತೃಪ್ತ, ಅಸಾಧ್ಯ, ಗರ್ವಿ ಹೆಣ್ಣು”ಎನ್ನುವ ಮಾತುಗಳೇ…..
ತೀರ ಸಾಮಾನ್ಯವಾದ ಸಂಗತಿಗಳನ್ನಿಟ್ಟುಕೊಂಡು ಹೀಗೆ ಅಸಾಮಾನ್ಯವಾದ ಕತೆಗಳನ್ನು ಬರೆಯುವುದು ಫ್ರೆಂಚ್ ಕತೆಗಾರರಿಂದ ಮಾತ್ರ ಸಾಧ್ಯವೇನೋ. ನಮ್ಮ ನಡುವೆಯೇ ನಡೆಯಬಹುದಾದ ಸಣ್ಣದ್ದೊಂದು ಘಟನೆಯನ್ನು ಹೆಕ್ಕಿಕೊಂಡು ರಚಿಸಲ್ಪಟ್ಟಿರುವ ಕತೆಯ ಓಘವನ್ನು ಗಮನಿಸಿ. ಊಟಕ್ಕೆಂದು ಹೊಟೆಲ್ಲೊಂದಕ್ಕೆ ತೆರಳುವ ಯುವಕನಿಗೆ ತನ್ನ ಗತಕಾಲದ ಮಡದಿಯೆದುರು ಹೊಸ ಮಡದಿಯನ್ನು ಹೊಗಳುವ ಅನಿವಾರ್ಯತೆ. ಆತ ತನ್ನದೇ ಮನಸ್ಸಿನ ತುಮುಲಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. ಹಾಗಾಗಿ ತೀರ ನಾಟಕೀಯವಾಗಿ ತನ್ನ ಪ್ರೇಮವನ್ನು ಹೊಸ ಮಡದಿಯೆದುರು ಅಭಿವ್ಯಕ್ತಿಸುತ್ತಿದ್ದಾನೆ. ಏನೇ ಹರ ಸಾಹಸಪಟ್ಟರೂ ನವದಂಪತಿಗಳಿಗೆ ಮುಜುಗರವನ್ನು ತಪ್ಪಿಸಿಕೊಳ್ಳುವುದು ಅಸಾಧ್ಯವೆನ್ನಿಸಿ ತಮ್ಮನ್ನು ತಾವೇ ಪರಸ್ಪರರು ಸಂತೈಸಿಕೊಳ್ಳುತ್ತಿದ್ದಾರೆ. ತನ್ನ ಹೊಸ ಮಡದಿಯೊಂದಿಗೆ ಕುಳಿತಿರುವ ಯುವಕನಿಗೆ ತನ್ನ ಮೊದಲ ಮಡದಿ ಏಕಾಏಕಿ ಎದುರಾಗಿಬಿಟ್ಟರೇ ಉಂಟಾಗುವ ಕಸಿವಿಸಿ ತಲ್ಲಣಗಳ ಚಿತ್ರಣವನ್ನು ಬಹುಶಃ “The other wife” ಎನ್ನುವ ಈ ಕತೆಯಷ್ಟು ಅದ್ಭುತವಾಗಿ ಇನ್ಯಾವ ಕತೆಯೂ ಕಟ್ಟಿಕೊಡಲಾರದು. ಫ್ರೆಂಚ್ ಸಾಹಿತ್ಯ ಲೋಕದ ಶ್ರೇಷ್ಟ ಕತೆಗಾರ್ತಿ ಎಂದು ಗುರುತಿಸಲಟ್ಟ ಸಿಡನಿ ಕೂಲೆಟ್ 1937ರಲ್ಲಿ ಈ ಕತೆಯನ್ನು ಬರೆದರು. ಮೂರು ಬಾರಿ ವಿವಾಹವಾಗಿದ್ದ ಕೂಲೆಟ್ಟರ ವೈಯಕ್ತಿಕ ಅನುಭವವೇ ಇಂಥದ್ದೊಂದು ಕತೆಗೆ ಪ್ರೇರಣೆಯಾಗಿರಬಹುದೆನ್ನುವುದು ವಿಮರ್ಶಕರ ಅಭಿಮತ. ಸುಮ್ಮನೇ ಓದಿಕೊಳ್ಳಿ. ನಿಮಗೊಬ್ಬ ಮಾಜಿ ಪ್ರೇಮಿಯೋ, ಪ್ರಿಯಕರನೋ ಇದ್ದು, ಬದುಕಿನ ಅನೂಹ್ಯ ತಿರುವಿನಲ್ಲೊಮ್ಮೆ ನಿಮ್ಮ ಬಾಳಸಂಗಾತಿಯೆದುರು ಅಂಥವರು ಸಿಕ್ಕಾಗ, ನೀವು ಅನುಭವಿಸಿರಬಹುದಾದ ಕಿರಿಕಿರಿ, ಮುಜುಗರಗಳು ನೆನಪಾಗಿ ಸಣ್ಣದ್ದೊಂದು ಮುಗುಳ್ನಗು ನಿಮ್ಮ ಮುಖದಲ್ಲರಳಲಿಕ್ಕೂ ಸಾಕು…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಯಾಕ್ ಯಾಕ್ ಚಿಕ್ಕಪ್ಪ, ಕಣ್ಕಣ್ ಬಿಡ್ತೀಯ?
ಗೊತ್ತಾಯ್ತಾ ಗೊತ್ತಾಯ್ತಾ ಗೊತ್ತಾಯ್ತಾ
ಎಂದರೆ ಗೊತ್ತಾದ್ದನ್ನು ಗೊತ್ತಾಯ್ತು ಅನ್ನಬೇಕು
ಗೊತ್ತಾಗದ್ದನ್ನು ಗೊತ್ತಾಗಿಲ್ಲ ಅನ್ನಬೇಕು
ಗೊತ್ತಾಗದ್ದನ್ನೂ ಗೊತ್ತಾಯ್ತು ಅಂದರೆ
ಗೊತ್ತಾಗದೇ ಹೋದೀತು ಗೊತ್ತಾಯ್ತಾ?
-ಅಂತ ನಾವು ಚಿಕ್ಕವರಿರುವಾಗ ಒಬ್ಬರಿಗೊಬ್ಬರು ಹೇಳಿಕೊಂಡು, ಈಗ ನೀನು ಹೇಳು ನೋಡೋಣ ಎಂದು ಸವಾಲು ಹಾಕಿಕೊಂಡು, ಹಾಕಿಸಿಕೊಂಡು, ಹೇಳಿ, ನಾಲಗೆ ತೊದಲಿ ಬ್ಬೆಬ್ಬೆಬ್ಬೆ ಎಂದು ನಕ್ಕು-ನಗಿಸುವ ಆಟವಾಡುತ್ತಿದ್ದೆವು. ಹಾಗೆಯೇ ಕಾಗೆಪುಕ್ಕ ಗುಬ್ಬಿಪುಕ್ಕ ಎಂದು ವೇಗವಾಗಿ ಹೇಳಲು ಹೋದರೆ ಅದು ಕಕ್ಕಪಕ್ಕ ಎಂದು ಬದಲಾಗುವ ಪರಿಗೆ ಕಕ್ಕಾಬಿಕ್ಕಿಯಾಗಿ ನಿಲ್ಲುತ್ತಿದ್ದೆವು. “ಯಾಕ್ ಯಾಕ್ ಚಿಕ್ಕಪ್ಪ ಕಣ್ಕಣ್ ಬಿಡ್ತೀಯ?” ಎಂದು ಹೇಳಲು ಹೋದರೆ ಚಿಕ್ಕಪ್ಪನ ಲಿಂಗ ಬದಲಾಗಿ ಚಿಪ್ಪಕ್ಕ ಎದುರು ನಿಲ್ಲುತ್ತಿದ್ದಳು. “ಬಂಕಾಪುರದ ಕೆಂಪು ಕುಂಕುಮ”ವನ್ನೂ ಅಷ್ಟೇ, ಜೋರಾಗಿ ಹಾರಿಸಹೋದರೆ ಅದು “ಕೆಂಕು ಪುಂಕಮ”ವಾಗಿ ಬದಲಾಗಿ ನಮಗೆ ಅಳ್ಳು ಹಿಡಿಸುವಷ್ಟು ನಗು ತರಿಸುತ್ತಿತ್ತು. “ಅವಳರಳಳೆದ ಕೊಳಗದಲಿ ಇವಳರಳಳೆದ”ದ್ದನ್ನು ನಿಧಾನವಾಗಿ ಹೇಳಿದೆವೋ ಬದುಕಿಕೊಂಡೆವು. ಜೋರಾಗಿ ಅಳೆಯಹೋದರೆ ಗಂಟಲಲ್ಲಿ ಬರಿಯ ಗೊಳಗೊಳಗಳೇ ನಿಂತು ಸುತ್ತಲಿನವರು ಗೊಳ್ಳೆಂದು ನಗುವಂತಾಗುತ್ತಿತ್ತು. ಅರಳು ಮತ್ತು ಕೊಳಗಗಳು ಮಾಯವಾಗಿರುವ ಈ ಕಾಲದ ಮಕ್ಕಳಿಗೆ ಇದೇನು ಗ್ರೀಕೋ ಫ್ರೆಂಚೋ ಎಂದೂ ಅನುಮಾನ ಬಂದೀತು! ಮತ್ತಷ್ಟು ಓದು 
ಅನಾಥ ಪ್ರಜ್ಞೆಯ ಸ್ಥಿತಿ
ಇದೊಂದು ಮನಸಿನ ಭಾವನೆ ವಿಚಿತ್ರವಾದರೂ ಸತ್ಯ. ಅದೆಷ್ಟು ಮನಸ್ಸನ್ನು ಕಾಡುವ ಹಿಂಸೆ ಕೊಟ್ಟು ಸಾಯಿಸಿಬಿಡುವ ದುರ್ಬಲ ಮನಸ್ಸಿನ ಹಪಹಪಿಸುವ ಕ್ಷಣ. ಆ ಒಂದು ಸಂದರ್ಭ ನಾನು ಒಂಟಿ, ನನಗ್ಯಾರು ಇಲ್ಲ, ನಾನು ಯಾಕೆ ಬದುಕಿರಬೇಕು, ಯಾರಿಗಾಗಿ ಬದುಕಬೇಕು, ನಾನಿಲ್ಲದಿದ್ದರೆ ಏನಂತೆ, ನಾನು ಯಾರಿಗೂ ಬೇಡಾದವಳು/ನು. ಹೀಗೆ ದುರ್ಬಲ ಮನಸ್ಸು ಹೇಳಿಕೊಳ್ಳುತ್ತದೆ. ಯಾಕೆ ಹೀಗೆ ಈ ಮನಸ್ಸು. ಇದಕ್ಕಿನ್ನೇನು ಬೇಕು ? ಸುತ್ತ ಎಲ್ಲರೂ ಇದ್ದಾರಲ್ಲ! ಇನ್ನೂ ಯಾಕೆ ಈ ಕೊರಗು. ಹೀಗೆ ಎಷ್ಟು ಬುದ್ಧಿ ಹೇಳಿದರೂ ಕೇಳಲಾರದ ಮನಸ್ಸು ಪದೇ ಪದೇ ಈ ಸ್ಥಿತಿಗೆ ಬರುತ್ತದೆ. ಯೋಚಿಸಿ ಯೋಚಿಸಿ ಕಣ್ಣೀರು ಹೆಣ್ಣಾದರೆ, ಅದೇ ಗಂಡಾದರೆ ಸಾಮಾನ್ಯವಾಗಿ ದುಶ್ಚಟಕ್ಕೆ ದಾಸ. ಯಾಕೆ ಹೀಗೆ? ಮತ್ತಷ್ಟು ಓದು 













