ಸಂಸ್ಕೃತಿ ಸಂಕಥನ – 18 – ಇಸ್ಲಾಮಿಕ್ ಹಾಗೂ ಯುರೋಪಿಯನ್ ವಸಾಹತುಶಾಹಿ
-ರಮಾನಂದ ಐನಕೈ
ಇತ್ತೀಚೆಗೆ ಮಂಚೀಕೇರಿಯಲ್ಲಿ ಬಾಲಗಂಗಾಧರರ ಸಂವಾದ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಮುಂಚೀಕೇರಿಯ ಸಂಹತಿ ಟ್ರಸ್ಟ್ ಹಾಗೂ ಶಿವಮೊಗ್ಗ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಂಹತಿ ಗೆಳೆಯರು ತುಂಬಾ ಅಚ್ಚುಕಟ್ಟಾಗಿ ಸಂಘಟಿಸಿದ್ದರು. ನೂರಕ್ಕೂ ಹೆಚ್ಚು ಜನ ಸಂವಾದದಲ್ಲಿ ಪಾಲ್ಗೊಂಡು ಪ್ರಶ್ನೆಗಳ ಸುರಿಮಳೆ ಗೈದರು. ಬೇರೆ ಬೇರೆ ಪ್ರಶ್ನೆಗಳಿಗೆ ಬಾಲ ಗಂಗಾಧರರು ನೀಡಿದ ಉತ್ತರಗಳನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿಡುವ ಪ್ರಯತ್ನ ಇಲ್ಲಿದೆ.
ಭಾರತ ತನ್ನ ಇತಿಹಾಸದಲ್ಲಿ ಎರಡು ವಸಹಾತು ಶಾಹಿಗಳನ್ನು ಕಂಡಿದೆ. ಇಸ್ಲಾಮಿಕ್ ಹಾಗೂ ಯುರೋಪಿಯನ್ ವಸಾಹತುಶಾಹಿ. ಇವೆರಡೂ ಕೂಡಾ ಸೆಮೆಟಿಕ್ ರಿಲಿಜನ್ ಹೊಂದಿದ ಸಂಸ್ಕೃತಿ ಯಿಂದ ಬಂದಂತಹವುಗಳು. ಇವರು ಪ್ರಪಂಚದ ಎಲ್ಲ ಸಂಸ್ಕೃತಿಗಳಲ್ಲಿ ರಿಲಿಜನ್ ಇದೆ ಎಂದು ನಂಬಿ ದವರು, ಭಾರತಕ್ಕೆ ಬಂದಾಗ ಇಲ್ಲಿನ ಸಂಸ್ಕೃತಿ ಯಲ್ಲೂ ರಿಲಿಜನ್ ಹುಡುಕಲು ಪ್ರಾರಂಭಿಸಿದರು. ಅದು ಅವರಿಗೆ ಸುಲಭಕ್ಕೆ ಸಾಧ್ಯವಾಗಲಿಲ್ಲ. ಸೆಮೆಟಿಕ್ ರಿಲಿಜನ್ಗಳ ಕನ್ನಡಕ ಹಾಕಿಕೊಂಡು ಹುಡುಕಿದರು. ಕೊನೆಗೂ ‘ಹಿಂದೂಯಿಸಂ’ ಎಂಬ ರಿಲಿಜನ್ನನ್ನು ಕಂಡುಹಿಡಿದೇಬಿಟ್ಟರು. ಹಿಂದೂ ರಿಲಿಜನ್ ಅಂದರೆ ಪಾಶ್ಚಾತ್ಯರಿಗೆ ಮಾತ್ರ ಅರ್ಥ ವಾಗುತ್ತದೆ. ಭಾರತೀಯರಿಗೆ ಅರ್ಥವಾಗುವು ದಿಲ್ಲ. ಏಕೆಂದರೆ ಭಾರತದ ಹೆಚ್ಚಿನ ಜನರಿಗೆ ಹಿಂದೂ ರಿಲಿಜನ್ನಿನ ಅನುಭವವೇ ಆಗುವುದಿಲ್ಲ. ರಿಲಿಜ ನ್ನಿನ ಯಾವುದೇ ಸರಳ ರೇಖೆಗಳು ನಮ್ಮಲ್ಲಿಲ್ಲ. ದಿನನಿತ್ಯ ನಮ್ಮ ನಡುವೆ ಕಾಣುವ ಗೊಂದಲಗಳು ರಿಲಿಜನ್ ಹಾಗೂ ಸಂಸ್ಕೃತಿಯ ನಡುವಿನ ಹೊಂದಾಣಿಕೆ ಆಗದ ತಿಕ್ಕಾಟಗಳು, ಆದರೆ ಇದು ವರೆಗೆ ಯಾವ ಭಾರತೀ ಯನೂ ಈ ಕುರಿತು ಸಂಶೋಧನೆ ನಡೆಸದೇ ಇದ್ದದ್ದು ಆಶ್ಚರ್ಯದ ವಿಷಯ. ಪಾಶ್ಚಿಮಾತ್ಯರು ಭಾರತದ ಕುರಿತಾದ ತಮ್ಮ ಅನುಭವಗಳನ್ನು ಹೇಳಿ ಕೊಳ್ಳುತ್ತ ಬಂದರು. ಅವರ ಅನುಭವಗಳನ್ನೇ ಭಾರತೀಯರು ತಮ್ಮ ನಿಜ ಎಂದು ನಂಬಿಕೊಳ್ಳುತ್ತ ಬಂದರು. ಅವರ ಅನುಭವಗಳನ್ನೇ ಈಗ ನಮ್ಮ ಅನುಭವಗಳೆಂಬಂತೆ ಪುನರಾವರ್ತಿಸುತ್ತಿದ್ದೇವೆ. ಇದನ್ನೇ ವಸಾಹತು ಪ್ರಜ್ಞೆ ಅನ್ನುವುದು. ಬಾಲ ಗಂಗಾಧರರು ಈ ಕುರಿತು ಸಂಶೋ ಧನೆ ನಡೆಸುತ್ತಿರುವ ದೇಶದ ಹಾಗೂ ಪ್ರಪಂಚದ ಪ್ರಪ್ರಥಮ ಚಿಂತಕರು.
ಧ್ಯಾನಸ್ಥಯೋಗಿಯಾಗಿದೆ ಮಹಾಸಹ್ಯಗಿರಿ!
-ಬಿ.ಆರ್. ಸತ್ಯನಾರಾಯಣ್
“ನಾವು ನಿಂತ ಸ್ಥಳ ಎತ್ತರವಾಗಿತ್ತು. ಸುಮಾರು ಮೂವತ್ತು ಮೈಲಿಗಳ ದೃಶ್ಯ ನಮ್ಮೆದುರಿಗಿತ್ತು. ದಿಗಂತವಿಶ್ರಾಂತವಾದ ಸಹ್ಯಾದ್ರಿ ಪರ್ವತಶ್ರೇಣಿಗಳು ತರಂಗತರಂಗಗಳಾಗಿ ಸ್ಪರ್ಧೆಯಿಂದ ಹಬ್ಬಿದ್ದುವು. ದೂರ ಸರಿದಂತೆಲ್ಲ ಅಸ್ಫುಟವಾಗಿ ತೋರುತ್ತಿದ್ದುವು. ಕಣಿವೆಗಳಲ್ಲಿ ಇಬ್ಬನಿಯ ಬಲ್ಗಡಲು ತುಂಬಿತ್ತು. ವೀಚಿವಿಕ್ಷೋಭಿತ ಶ್ವೇತಫೇನಾವೃತ ಮಹಾವಾರಿಧಿಯಂತೆ ಪಸರಿಸಿದ್ದ ತುಷಾರ ಸಮುದ್ರದಲ್ಲಿ ಶ್ಯಾಮಲಗಿರಿಶೃಂಗಳು ದ್ವೀಪಗಳಂತೆ ತಲೆಯೆತ್ತಿಕೊಂಡಿದ್ದುವು. ಕಂದರ ಪ್ರಾಂತಗಳಲ್ಲಿದ್ದ ಗದ್ದೆ ತೋಟ ಹಳ್ಳಿ ಕಾಡು ಎಲ್ಲವೂ ಹೆಸರಿಲ್ಲದಂತೆ ಅಳಿಸಿಹೋಗಿದ್ದುವು. ದೃಷ್ಟಿಸೀಮೆಯನ್ನೆಲ್ಲ ಆವರಿಸಿದ್ದ ತುಷಾರಜಲನಿಧಿಯಲ್ಲಿ ಹಡಗುಗಳಲ್ಲಿ ಕುಳಿತು ಸಂಚರಿಸಬಹುದೆಂಬಂತಿತ್ತು! ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು. ಇಬ್ಬನಿಯ ಕಡಲಿನಿಂದ ತಲೆಯೆತ್ತಿ ನಿಂತಿದ್ದ ಗಿರಿಶೃಂಗಗಳು ಮುಂಬೆಳಕಿನ ಹೊಂಬಣ್ಣವನ್ನು ಹೊದೆದಿದ್ದುವು. ಬಾಲಸೂರ್ಯನ ಸ್ನಿಗ್ಧಕೋಮಲ ಸುವರ್ಣಜ್ಯೋತಿಯಿಂದ ವೃಕ್ಷಾರಜಿಗಳ ಶ್ಯಾಮಲಪರ್ಣವಿತಾನಗಳಲ್ಲಿ ಖಚಿತವಾಗಿದ್ದ ಸಹಸ್ರ ಸಹಸ್ರ ಹಿಮಮಣಿಗಳು ಅನರ್ಘ್ಯರತ್ನಸಮೂಹಗಳಂತೆ ವಿರಾಜಿಸುತ್ತಿದ್ದುವು. ಬೆಳ್ನೊರೆಯಂತೆ ಹಬ್ಬಿದ ಇಬ್ಬನಿಯ ಕಡಲಿನಲ್ಲಿ ಮುಳುಗಿಹೋಗಿದ್ದ ಕಣಿವೆಯ ಕಾಡುಗಳಿಂದ ಕೇಳಿಬರುತ್ತಿದ್ದ ವಿವಿಧವಿಹಂಗಮಗಳ ಮಧುರವಾಣಿ ಅದೃಶ್ಯರಾಗಿ ಉಲಿಯುವ ಗಂಧರ್ವಕಿನ್ನರರ ಗಾಯನದಂತೆ ಸುಮನೋಹರವಾಗಿತ್ತು. ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು! ನೋಡಿದೆವು, ನೋಡಿದೆವು, ಸುಮ್ಮನೆ ಭಾವಾವಿಷ್ಟರಾಗಿ!”
ಸ್ನೇಹಿತರೊಂದಿಗೆ ಇರುಳು ಬೇಟೆಗೆ ಹೋಗಿದ್ದ ಯುವಕವಿ ಪುಟ್ಟಪ್ಪ, ತಾನು ಕುಳಿತಿದ್ದ ಜಾಗ, ಸಮಯ ಎಲ್ಲವನ್ನೂ ಮರೆತು ಪ್ರಕೃತಿ ಉಪಾಸಕನಾಗಿಬಿಡುತ್ತಾನೆ. ’ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು’ ಎಂಬಂತೆ ಕವಿಗೆ ಕಂಡ ಚಂದ್ರೋದಯ ’ಬೇಟೆಗಾರನಿಗೆ ಬೇಟೆಯಾಗದಿದ್ದರೂ ಕಬ್ಬಿಗನಿಗೆ ಬೇಟೆಯಾಯಿತು’ ಅನ್ನಿಸಿಬಿಡುತ್ತದೆ. ಇಡೀ ರಾತ್ರಿಯನ್ನು ಹೀಗೇ ಕಳೆದು, ನಸುಕಿನಲ್ಲಿಯೇ ಬರಿಗೈಯಲ್ಲಿ ಸ್ನೇಹಿತರೊಂದಿಗೆ ಮನೆಗೆ ಹಿಂತಿರುಗುವಾಗ ’ಅರುಣೋದಯದ ಹೇಮಜ್ಯೋತಿ ಪೂರ್ವದಿಗ್ಭಾಗದಲ್ಲಿ ಪ್ರಬಲಿಸುತ್ತಿತ್ತು.’ ಬರುವ ದಾರಿಯಲ್ಲಿ ಬಂಡೆಗಳಿಂದ ಬಯಲಾದ ಪ್ರದೇಶದಲ್ಲಿ ನಿಂತು ನೋಡಿದಾಗ ಕಂಡ ದೃಶ್ಯವೇ ಮೇಲೆ ಕವಿಯ ಮಾತುಗಳಲ್ಲಿ ಮೂಡಿದೆ. ಅಂದು ಆ ದೃಶ್ಯವನ್ನು ಕವಿಗೆ ತೋರಿಸಿದ ಆ ಜಾಗವೇ ’ಕವಿಶೈಲ’. ಕುವೆಂಪು ಸಾಹಿತ್ಯದ ಪರಿಚಯವಿದ್ದವರೆಲ್ಲರಿಗೂ ’ಕವಿಶೈಲ’ ಗೊತ್ತಿರುತ್ತದೆ.
ಕುಪ್ಪಳಿ ಕವಿಮನೆಯ ಹಿಂಬದಿಗೆ ದಿಗಂತಮುಖಿಯಾಗಿರುವ ಪರ್ವತವೇ ಕವಿಶೈಲ. ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು; ಕಲಾವಂತನಿಗೆ ಸಗ್ಗವೀಡು ಆಗಿರುವ ಕವಿಶೈಲದ ನಿಜಮನಾಮ ಆಗ್ಗೆ ’ದಿಬ್ಬಣಕಲ್ಲು’. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.
ಬೇಟೆಗಾರರಾಗಿ ಬನಕೆ ಹೋದವರು ಮರಳಿ ಮನೆಗೆ ಬಂದುದು ಕಬ್ಬಿಗರಾಗಿ! ಕವಿಶೈಲದ ಬಗ್ಗೆ ಕವಿ ಕೇವಲ ಹನ್ನೆರಡು ದಿನಗಳಲ್ಲಿ ಆರು ಸಾನೆಟ್ಟುಗಳನ್ನು ಬರೆದಿದ್ದಾರೆ! ಮೊದಲ ಒಂದನ್ನು ಬಿಟ್ಟರೆ ಉಳಿದ ಐದು ಸಾನೆಟ್ಟುಗಳು ಐದೇ ದಿನದಲ್ಲಿ ದಿನಕ್ಕೊಂದರಂತೆ ರಚನೆಯಾಗಿವೆ! ಮಲೆನಾಡಿನ ಚಿತ್ರಗಳು ಪುಸ್ತಕದಲ್ಲಿ ಮೇಲೆ ವರ್ಣಿಸಿರುವ ಕವಿಶೈಲದ ವರ್ಣನೆಗೆ ಸಂವಾದಿಯಾಗಿ ೧೬.೪.೧೯೩೪ರಲ್ಲಿ ಮೊದಲನೆಯ ಸಾನೆಟ್ ರಚಿತವಾಗಿದೆ. ಮತ್ತಷ್ಟು ಓದು 
ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ
-ಹರಿಹರಪುರಶ್ರೀಧರ್
ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ ದೇಶಕ್ಕೆ “ವಿಶ್ವಗುರುವಿನ” ಸ್ಥಾನ ಲಭಿಸಿತ್ತು ಎಂಬ ವಿಚಾರವನ್ನೂ ಸಹ ಕೇಳುತ್ತೇವೆ.ನಮ್ಮ ಈ ನೆಲದಲ್ಲಿಯೇ “ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದರೆಂದೂ” ಕೇಳಿದ್ದೇವೆ.ಇವೆಲ್ಲದರ ಜೊತೆಗೆ ನಮ್ಮ ನಿತ್ಯ ಸಂಕಲ್ಪವಾದರೋ ” ಸರ್ವೇ ಭವಂತು ಸುಖಿನ:…….ಮಾ ಕಶ್ಚಿತ್ ದು:ಖ ಭಾಗ್ಭವೇತ್”-ಎಲ್ಲರೂ ಸುಖವಾಗಿರಬೇಕು…….., ಯಾರಿಗೂ ದು:ಖ ಬರುವುದು ಬೇಡ”. ಇದು ನಮ್ಮ ನಿತ್ಯ ಪ್ರಾರ್ಥನೆ ಯಾಗಿತ್ತು. ಆದರೆ ಎಲ್ಲೋ ಎನೋ ತಪ್ಪಾಗಿದೆಯಲ್ಲಾ! ಯಾವುದೋ ಕೊಂಡಿ ಕಳಚಿದೆಯಲ್ಲಾ!!
ಮೊನ್ನೆ ನಾನು ಅಗ್ನಿಹೋತ್ರ ಮಾಡುತ್ತಾ ಕುಳಿತಿದ್ದೆ. ನಮ್ಮಕ್ಕ ನಮ್ಮ ಮನೆಗೆ ಬಂದವರು ” ಇದೇನೋ ನೀನು “ಹೋಮ ಮಾಡುತ್ತಿದ್ದೀಯಾ? ಯಜುರ್ವೇದವರು ಮಾಡಬೇಕಾದ್ದು,ಋಗ್ವೇದಿಯಾದ ನೀನು ಮಾಡುತ್ತಿದ್ದೀಯಲ್ಲಾ!!” ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಸ್ವತ: ಅಗ್ನಿಹೋತ್ರ ಮಾಡಿದ್ದ ನಮ್ಮ ಅಕ್ಕ ಶ್ರೀ ಸುಧಾಕರ ಶರ್ಮರಿಂದ ಅಗ್ನಿಹೋತ್ರದ ಅರ್ಥವಿವರಣೆಯನ್ನು ಸವಿಸ್ತಾರವಾಗಿ ಕೇಳಿದ್ದರು. ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದವರು. ಇವರೇ. ಆದರೆ ಅವರ ಬಾಯಲ್ಲಿಯೇ ಈ ಪ್ರಶ್ನೆ. ನಾನು ನಮ್ಮಕ್ಕನಿಗೆ ಹೇಳಿದೆ” ಆರೋಗ್ಯ ನಿಮಗೆ ಮಾತ್ರ ಬೇಕೋ? ಬೇರೆಯವರಿಗೆ ಬೇಡವೋ?
ಅವರು ನಿರುತ್ತರರಾಗಿದ್ದರು.
ಸ್ಥಳೀಯ ಭಾಷೆಗಳ ಬಳಕೆಯ ಬಗೆಗೆ RBI ಹಾಗೂ BCSBI ಏನು ಹೇಳುತ್ತದೆ?
-ರವಿ ಸಾವ್ಕರ್
ಇತ್ತೀಚಿಗೆ ಹಲವಾರು ಕನ್ನಡಿಗ ಗ್ರಾಹಕರು ತಮಗೆ ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಕೊಡಬೇಕು ಎಂದು ಬ್ಯಾಂಕ್ ಗಳಿಗೆ ದೂರನ್ನು ಕೊಟ್ಟಿದಾರೆ. ಕೆಲವು ಬ್ಯಾಂಕ್ ಗಳು ಗ್ರಾಹಕರ ದೂರಿಗೆ ಸ್ಪಂದಿಸಿ ಕನ್ನಡದಲ್ಲಿ ಸೇವೆ ಕೊಟ್ಟಿದಾರೆ. ಮತ್ತೆ ಕೆಲವರು ಕೊಡುವುದಿಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದ ಸಂಗತಿಗಳು ಇದೆ.
RBI ಹಾಗೂ BCSBI ಭಾಷೆಯ ಬಳಕೆಯ ಬಗ್ಗೆ ಏನು ಹೇಳುತ್ತದೆ ಹಾಗೂ ಕನ್ನಡದಲ್ಲಿ ಸೇವೆ ಕೊಡಲು ನಿರಾಕರಿಸಿದರೆ ಬ್ಯಾಂಕ್ ಗಳ ಲೋಕಪಾಲರಿಗೆ(Banking ombudsman) ದೂರು ಕೊಡುವುದು ಹೇಗೆ ಅಂತ ಇಲ್ಲಿ ಕಲೆ ಹಾಕಲಾಗಿದೆ. ಕನ್ನಡದಲ್ಲಿ ಸೇವೆ ಸಿಗದೇ ಹೋದರೆ ಈ ನಿಯಮಗಳನ್ನು ತಿಳಿಸಿ ಬ್ಯಾಂಕ್ ಗಳಿಗೆ ದೂರು ಕೊಡಿ.
ಭಾಷಾ ಆಯಾಮದಲ್ಲಿ RBI ನಿರ್ದೇಶನ ಹೀಗಿದೆ
“In order to ensure that banking facilities percolate to the vast sections of the population,banks should make available all printed material used by retail customers including account opening forms, pay-in-slips, passbooks etc. in trilingual form i.e. English, Hindi and the concerned Regional Language.”
http://rbi.org.in/scripts/BS_ViewMasCirculardetails.aspx?Id=2673&Mode=0
“ಎಲ್ಲ ಜನರಿಗೆ ಉಪಯೋಗ ಆಗುವಂತೆ ಚೆಕ್ಕು, ಪಾಸ್ ಬುಕ್ ಗಳು ಸೇರಿದಂತೆ ಎಲ್ಲ ಮುದ್ರಿತ ಸಾಮಗ್ರಿಗಳನ್ನು (printed material) ಸ್ಥಳೀಯ ಭಾಷೆಗಳಲ್ಲಿಯೂ ಕೊಡಬೇಕು ”
ಭಾಷಾ ಆಯಾಮದಲ್ಲಿ Code of Banks Commitment to Customers ಏನು ಹೇಳುತ್ತದೆ?
“Key commitment of BCSBI is to help You To Understand How Our Financial Products And Services Work By Giving you information about them in any one or more of the following languages – Hindi, English or the appropriate local language”
http://www.bcsbi.org.in/pdf/CodeOfBanks_Aug09.pdf ಮತ್ತಷ್ಟು ಓದು 
ಸಂಸ್ಕೃತಿ ಸಂಕಥನ – 16 ನೆಹರೂ ಸೆಕ್ಯುಲರಿಸಂ
-ರಮಾನಂದ ಐನಕೈ
ನೆಹರೂರವರು ಸಂಪೂರ್ಣ ಪಾಶ್ಚಾತ್ಯ ಶಿಕ್ಷಣ ಹಾಗೂ ಪ್ರಭಾವದಿಂದ ರೂಪಗೊಂಡವರು. ಹಾಗಾಗಿ ಅವರು ಭಾರತದ ಕುರಿತು ಚಿಂತಿಸುವಾಗ ಪಶ್ಚಿಮದಿಂದ ಪ್ರವೇಶಿಸುತ್ತಾರೆ. ಮೂಲಭೂತವಾಗಿ ನೆಹರೂರವರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅಸಡ್ಡೆಯ ಭಾವನೆ ಇದೆ. ಈ ಭಾವನೆ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯಿಂದ ಬಂದಿದ್ದು. ಹಾಗಾಗಿ ನೆಹರೂ ಸೆಕ್ಯುಲರಿಸಂನಲ್ಲಿ ಪ್ರಭುತ್ವ ಈ ಮೌಢ್ಯವನ್ನು ನಿವಾರಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಅಂದರೆ ಪ್ರಭುತ್ವ ಹೇಗೆ ‘ತಟಸ್ಥ’ ಇದ್ದಂತಾಯಿತು?
ನೆಹರೂ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ. ಸ್ವಾತಂತ್ರ್ಯ ಹಾಗೂ ಸಮಾನತೆಯ ಬಗ್ಗೆ ಕಸನು ಕಂಡವರು. ಪಂಚವಾರ್ಷಿಕ ಯೋಜನೆಗಳ ಮೂಲಕ ಭಾರತವನ್ನು ಹಂತಹಂತವಾಗಿ ಪ್ರಗತಿಗೆ ತರಲು ಹೆಗಲು ಕೊಟ್ಟವರು. ಭಾರತ ಲಿಬರಲ್ ಸೆಕ್ಯುಲರ್ ರಾಷ್ಟ್ರವಾಗಿ ಪ್ರಗತಿ ಮತ್ತು ಸಮಾ ನತೆಯ ತುತ್ತತುದಿಗೆ ಹೋಗಬೇಕೆಂಬ ದೃಢವಾದ ಸಂಕಲ್ಪ ಹೊಂದಿದವರು. ಹಾಗಾದರೆ ನೆಹರೂರವರ ಪ್ರಕಾರ ಲಿಬರಲ್ ಸೆಕ್ಯುಲರ್ ನೀತಿಯೆಂದರೆ ಏನು? ಅದನ್ನೇ ನೆಹರೂ ಸೆಕ್ಯುಲರ್ ಎನ್ನುವುದು.
ಪ್ರಭುತ್ವ ಎಲ್ಲಾ ರಿಲಿಜನ್ಗಳಿಂದ ತಟಸ್ಥವಾಗಿರ ಬೇಕು ಹಾಗೂ ರಿಲಿಜನ್ನನ್ನು ತನ್ನ ಎಲ್ಲಾ ವ್ಯವಹಾರ ಗಳಿಂದ ಹೊರಗಿಡಬೇಕೆಂದು ನೆಹರೂ ಅಭಿ ಪ್ರಾಯಪಡುತ್ತಾರೆ. ಪ್ರಭುತ್ವ ರಿಲಿಜನ್ನನ್ನು ಪುರಸ್ಕರಿ ಸಿದರೆ ಆ ರಾಷ್ಟ್ರ ಒಂದು ಪ್ರಗತಿಹೀನ ರಾಷ್ಟ್ರವಾಗು ತ್ತದೆ ಎಂಬುದು ಅವರ ದೃಢವಾದ ನಂಬಿಕೆ. ನೆಹರೂ ಸೆಕ್ಯುರಿಸಂನ್ನು ವೈಜ್ಞಾನಿಕ ಸೆಕ್ಯುಲರಿಸಂ ಅಂತಲೂ ಕರೆಯುತ್ತಾರೆ. ಹಾಗಾದರೆ ಈ ವೈಜ್ಞಾನಿಕ ಸೆಕ್ಯುಲರಿಸಂ ಅಂದರೆ ಏನು?
ದಾರಿ
-ಪ್ರೇಮಶೇಖರ
ಆ ದಾರಿ ತನ್ನನ್ನು ಊರೊಂದರೊಳಕ್ಕೆ ಕರೆದೊಯ್ಯುತ್ತದೆ ಎಂದವಳು ಊಹಿಸಿರಲೇ ಇಲ್ಲ. ಇದೂ ಒಂದು ದಾರಿ, ಒಂದಲ್ಲಾ ಒಂದು ದಾರಿ ಹಿಡಿದು ನಡೆಯಲೇಬೇಕಲ್ಲಾ ಅಂದುಕೊಂಡು ಈ ದಾರಿ ಹಿಡಿದು ಬಂದಿದ್ದಳು.
ಕೆಂಪುಮಣ್ಣಿನ ಹಾದಿ. ಇಕ್ಕೆಲಗಳಲ್ಲಿ ಹಚ್ಚಹಸಿರ ತಂಪಿನ ನಡುವೆ ಹಳ್ಳದಲ್ಲಿಳಿದು ದಿಣ್ಣೆಯೇರಿ ಬಳುಕಿ ಬಳುಕಿ ಸಾಗಿತ್ತು. ಕಾಲಿಟ್ಟಾಗ ಆಕರ್ಷಕ ಅನಿಸಿದ್ದೇನೋ ನಿಜ. ಆದರೆ ಎಷ್ಟು ಹೊತ್ತು ನಡೆದರೂ ಅದು ಮುಗಿಯುವುದೇ ಇಲ್ಲವೇನೋ ಅನ್ನುವಂತೆ ಕಂಡಾಗ ಆತಂಕಗೊಂಡಳು. ಅದರೊಟ್ಟಿಗೆ, ಒಂದು ನರಪಿಳ್ಳೆಯೂ ಎದುರಾಗದಾಗ ಎದೆಯಲ್ಲಿ ಭಯ ಬುಗ್ಗೆಯಾಗಿ ಉಕ್ಕತೊಡಗಿತು. ಇದು ನನಗೊಬ್ಬಳಿಗೇ ಮೀಸಲಾದ ದಾರಿಯೇನೋ ಎಂದವಳಿಗೆ ಅನುಮಾನ ಬರುವಷ್ಟರಲ್ಲಿ ದಾರಿ ಫಕ್ಕನೆ ಎಡಕ್ಕೆ ಹೊರಳಿತ್ತು. ಆಗ ಕಂಡಿತು ಆ ಊರು. ಅದನ್ನು ಕಾಣುತ್ತಿದ್ದಂತೇ ಅವಳು ಗಕ್ಕನೆ ನಿಂತುಬಿಟ್ಟಳು.
ಊರಿಗೆ ಹರದಾರಿ ದೂರವಿರುವಾಗಲೇ ಹೊಸಬರೆದುರು ಅಟ್ಟಹಾಸದಿಂದ ಎಗರಾಡುವ ನಾಯಿಗಳೊಂದೂ ಈ ಊರಲ್ಲಿಲ್ಲವಲ್ಲ! ಗ್ರಾಮಸಿಂಹಗಳಿಲ್ಲದ ಊರೂ ಉಂಟೇ? ಅವಳಿಗೆ ಅಚ್ಚರಿ. ಮೂಗಿನ ಮೇಲೆ ಬೆರಳಿಟ್ಟುಕೊಂಡು ನಾಲ್ಕು ಹೆಜ್ಜೆ ಸರಿಸಿದವಳು ಮತ್ತಷ್ಟು ಅಚ್ಚರಿಗೊಳಗಾದಳು. ಬೀದಿಯಲ್ಲಿ ಜನರೇ ಇಲ್ಲ! ಹೊತ್ತು ಮಾರುದ್ದ ಏರಿ ಬಿಸಿಲು ಚುರುಗುಟ್ಟುತ್ತಿದ್ದರೂ ಈ ಊರ ಜನರ ನಿದ್ದೆ ಇನ್ನೂ ಕಳೆದಿಲ್ಲವೇ? ಎಂಥಾ ಜನರಪ್ಪ! ಎಂಥಾ ಊರಪ್ಪ!
ಕುತೂಹಲದಿಂದ ಎದುರಾದ ಮೊದಲ ಮನೆಯತ್ತ ನೋಡಿದರೆ ಅದರ ಬಾಗಿಲು ತೆರೆದಿದೆ! ಹಾಗೇ ಮುಂದೆ ನೋಟ ಹೊರಳಿಸಿದರೆ ಎಲ್ಲ ಮನೆಗಳ ಬಾಗಿಲುಗಳೂ ತೆರೆದಿವೆ! ಇದೇನು ಸೋಜಿಗ ಎಂದುಕೊಳ್ಳುತ್ತಾ ಮೊದಲ ಮನೆಯ ಬಾಗಿಲು ಸಮೀಪಿಸಿದಳು. ಮೂರು ಮೆಟ್ಟಲುಗಳನ್ನು ಅನುಮಾನದಿಂದಲೇ ಏರಿದಳು. ಹೊಸ್ತಿಲಲ್ಲಿ ನಿಂತು ಒಳಗಿಣುಕಿದಳು.
ಕೋಲ್ಕತ್ತಾದಲ್ಲಿ ಕುವೆಂಪು
-ಪ್ರೊ. ಬಿ ಎ ವಿವೇಕ ರೈ
ಕನ್ನಡದ ಯುಗದ ಕವಿ ಕುವೆಂಪು (೨೯ ದಶಂಬರ ೧೯೦೪-೧೦ ನವಂಬರ ೧೯೯೪ ) ಅವರು ತಮ್ಮ ಜೀವಮಾನದಲ್ಲಿ ಕರ್ನಾಟಕದಿಂದ ಹೊರಗೆ ಪ್ರಯಾಣ ಮಾಡಿದ್ದು ಎರಡೇ ಬಾರಿ. ಮೊದಲನೆಯದು ೧೯೨೯ರಲ್ಲಿ ಕಲ್ಕತ್ತಾಕ್ಕೆ ಪ್ರಯಾಣ.ಅಲ್ಲಿ ಬೇಲೂರು ರಾಮಕೃಷ್ಣ ಮಠದಲ್ಲಿ ಸ್ವಾಮಿ ಶ್ರದ್ಧಾನಂದರಿಂದ ಮಂತ್ರ ದೀಕ್ಷೆ ಪಡೆದದ್ದು. ಎರಡನೆಯದು ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಲು ಎಲ್ಲ ಆಪ್ತರ ಒತ್ತಾಯದ ಮೇಲೆ ದೆಹಲಿಗೆ ಹೋದದ್ದು ೧೯೬೮.ಅವರ ಕಲ್ಕತ್ತಾದ ಭೇಟಿಯ ವೇಳೆಗೆ ಅವರಿಗೆ ಸುಮಾರು ಇಪ್ಪತ್ತೈದು ವರ್ಷ ಪ್ರಾಯ.ಅದೇ ವರ್ಷ ಅವರು ಎಂ ಎ ಮುಗಿಸಿದ್ದು.ಕಲ್ಕತ್ತಾ ಸಂದರ್ಶನ ಮತ್ತು ರಾಮಕೃಷ್ಣ ಆಶ್ರಮದ ದರ್ಶನ ಕುವೆಂಪು ಬದುಕಿನ ಮೇಲೆ ಅಪಾರ ಪ್ರಭಾವವನ್ನು ಬೀರಿತು.ಅವರ ಸಾಹಿತ್ಯದ ದ್ರವ್ಯಗಳನ್ನು ರೂಪಿಸಿತು.
ಅಂತಹ ಕಲ್ಕತ್ತಾದಲ್ಲಿ ,ಅಂದರೆ ಈಗಿನ ಕೊಲ್ಕೊತ್ತಾದಲ್ಲಿ ‘ಕುವೆಂಪು’ ಬಗ್ಗೆ ಎರಡು ದಿನಗಳ ರಾಷ್ಟೀಯ ವಿಚಾರಸಂಕಿರಣ ಮೊನ್ನೆ ಮತ್ತು ನಿನ್ನೆ (ಸಪ್ಟಂಬರ ೧೦ ಮತ್ತು ೧೧ ) ನಡೆಯಿತು.ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕುಪ್ಪಳಿಯ ಕುವೆಂಪು ಪ್ರತಿಷ್ಠಾನ ಜಂಟಿಯಾಗಿ ನಡೆಸಿದ ಈ ಮಹತ್ವದ ಸಂಕಿರಣಕ್ಕೆ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಸಂಸ್ಥೆ ಮತ್ತು ಕನ್ನಡ ವಿಶ್ವವಿದ್ಯಾಲಯ ಸಹಯೋಗ ಕೊಟ್ಟಿದ್ದವು.ವಿಚಾರಸಂಕಿರಣ ನಡೆದದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಲ್ಕತ್ತಾದ ಪ್ರಾದೇಶಿಕ ಕಚೇರಿಯಲ್ಲಿ .
ಹೈಟೆಕ್ ಬಹಿಷ್ಕಾರ…!
– ರಾಕೇಶ್ ಶೆಟ್ಟಿ
‘ಬೇರೆ ಬೇರೆ ವಿಷಯಗಳಲ್ಲಿ ಒಟ್ಟಿಗೆ ಸೇರಿ ಕೆಲಸ ಮಾಡಿದ ಗೆಳೆಯರು ಈಗ ಜನಲೋಕಪಾಲ ವಿಷಯವಾಗಿ ತಾತ್ವಿಕ ಭಿನ್ನಭಿಪ್ರಾಯಗಳನ್ನು ಇಟ್ಟುಕೊಂಡು ವಿರುದ್ಧವಾಗಿ ಮಾತನಾಡುತ್ತಿರುವುದು ಬೇಸರತರಿಸಿದೆ ‘ ಅಂತ ಆ ಗೆಳೆಯ ಕಳೆದ ಆಗಸ್ಟಿನಲ್ಲಿ ಫೆಸ್ಬುಕ್ಕಿನಲ್ಲಿ ಬರೆದುಕೊಂಡಿದ್ದರು.ಅದಕ್ಕೆ ನಾನು ‘ಸಾಮಾಜಿಕ ಕಳಕಳಿಯಿರುವ ಎಲ್ಲ ಮನಸ್ಸುಗಳು ಅಂತಿಮವಾಗಿ ಬಯಸುವುದು ಒಳ್ಳೆಯ ಸಮಾಜವನ್ನಷ್ಟೇ,ತಾತ್ವಿಕ ಭಿನ್ನಭಿಪ್ರಾಯ್ಗಳನ್ನ ವೈಯುಕ್ತಿಕವಾಗಿ ನೋಡಬೇಡಿ’ ಅನ್ನುವಂತೆ ಬರೆದಿದ್ದೆ.ಅವರೂ ಅದನ್ನ ಇಷ್ಟ ಪಟ್ಟಿದ್ದರು.
ಅದಾಗಿ ಬಹುಷಃ ೩-೪ ದಿನಗಳು ನಾನು ಊರಿನಲ್ಲಿ ಇರಲಿಲ್ಲ,ವಾಪಸ್ಸು ಬಂದವನು ಫೇಸ್ಬುಕ್ ತೆಗೆದಾಗ ಗೊತ್ತಾಗಿದ್ದು , ತಾತ್ವಿಕ ಭಿನ್ನಾಭಿಪ್ರಾಯಗಳನ್ನ ವೈಯುಕ್ತಿಕ ಮಟ್ಟಕ್ಕೆ ಆ ಗೆಳೆಯ ಮಾತ್ರವಲ್ಲದೆ ಅವನ ‘ಬಳಗ’ವೂ ತೆಗೆದುಕೊಂಡು ನನಗೆ ಅವರ ಗೂಗಲ್ ಗುಂಪಿನಿಂದ,ಫೆಸ್ಬುಕ್ಕ್ ಗೆಳೆತನದಿಂದ ‘ಹೈಟೆಕ್ -ಬಹಿಷ್ಕಾರ’ ಹಾಕಿದೆ ಅಂತ…! ಈ ಹೈಟೆಕ್ ಬಹಿಷ್ಕಾರ ಹಾಕಿಸಿಕೊಳ್ಳುವಂತೆ ನಡೆದಿದ್ದಾರೂ ಏನು ಅಂತ ನೋಡ ಹೊರಟರೆ….
ಅಣ್ಣಾ ಹಜ಼ಾರೆ ಜನಲೋಕಪಾಲ ಮಸೂದೆಗಾಗಿ ಜಂತರ್ ಮಂಥರ್ನಲ್ಲಿ ಉಪವಾಸ ಕುಳಿತ ದಿನಗಳಿವೆಯಲ್ಲ ಅವು ಈ ದೇಶದಲ್ಲಿ ಇನ್ನೇನು ಬದಲಾವಣೆ ಸಾಧ್ಯವೇ ಇಲ್ಲ ಅನ್ನುವಂತಿದ್ದ ಜನರ ಮನಸ್ಸಿಗೆ ಆಶಾಭಾವನೆ ಮೂಡಿಸಿದ ದಿನಗಳು.ಆಗ ’ಈ ಹೋರಾಟ ಗೆಲ್ಲಲೇ ಬೇಕು’ ಅಂದವರು ಅದ್ಯಾಕೋ ಮತ್ತೆ ಅಣ್ಣಾ ’ರಾಮ ಲೀಲಾ ಮೈದಾನ’ಕ್ಕೆ ಬಂದು ನಿಂತಾಗ ’ಪ್ರಜಾಪ್ರಭುತ್ವದ ಬುಡಕ್ಕೆ ಬೆಂಕಿ ತಗುಲಿದೆ’ ಅನ್ನಲಾರಂಭಿಸಿದರು.ಆಗಲೇ ಅಣ್ಣಾ ಹೋರಾಟವನ್ನು ಬೆಂಬಲಿಸುತಿದ್ದವರು-ವಿರೋಧಿಸುವ ಗೆಳೆಯರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳ ಚರ್ಚೆ ಫ಼ೇಸ್ಬುಕ್ಕಿನಲ್ಲಿ ಶುರುವಾಗಿದ್ದು.ಈ ಹೋರಾಟ ಸರಿಯಿಲ್ಲ ಅನ್ನಲು ಅವರುಗಳು ಏನೇನು ಅಂಶ ಮುಂದಿಡುತಿದ್ದರೋ, ಹೋರಾಟ ಹೇಗೆ ಸರಿ ಅಂತ ನಾವುಗಳು ನಮ್ಮ ವಾದ ಮುಂದಿಟ್ಟಿದ್ದೆವು. ಮತ್ತಷ್ಟು ಓದು 
ಸಂತಸ…ಸಂಕಟ…ಸಂತಾಪ ಆಗುತ್ತೆ ಪರಮಾತ್ಮ….!
– ಕುಮಾರ ರೈತ
ಯೋಗರಾಜ ಭಟ್ಟರೆ ನಿಮ್ಮಗೊಂದು ಬಹಿರಂಗ ಪತ್ರ……..‘ಪರಮಾತ್ಮ’ ಚಿತ್ರದ ಬಗ್ಗೆ ನನ್ನ ಅನೇಕ ಸ್ನೇಹಿತರು ನನ್ನೊಂದಿಗೆ ಮಾತನಾಡುತ್ತಿದ್ದರು. ಈ ಪ್ರತಿಯೊಬ್ಬರು ಹೇಳುತ್ತಿದ್ದ ಮಾತು ‘ ಚಿತ್ರ, ನಿರೀಕ್ಷೆಯನ್ನು ಹುಸಿಯಾಗಿಸಿದೆ’ ಇದು ನನ್ನ ಅಭಿಪ್ರಾಯ ಕೂಡ. ಸಿನಿಮಾ ತೆರೆಕಂಡ 12 ದಿನಗಳ ಬಳಿಕ ಈ ಪತ್ರ ಬರೆಯಲು ನನ್ನೊಳಗಿನ ಒತ್ತಡವೇ ಕಾರಣ. ಮಣಿ, ಮುಂಗಾರು ಮಳೆ ಮತ್ತು ಪಂಚರಂಗಿ ಯಿಂದ ಸಹಜವಾಗಿಯೆ ನಿಮ್ಮ ಚಿತ್ರಗಳೆಂದರೆ ನಮಗೆ ಹೆಚ್ಚು ನಿರೀಕ್ಷೆ-ಕುತೂಹಲ. ಪ್ರತಿಭಾನ್ವಿತ ನಟ ಪುನೀತ್ ಅವರು ನಟಿಸುವ ಚಿತ್ರವನ್ನು ನೀವು ನಿರ್ದೇಶಿಸುತ್ತೀರಿ ಎನ್ನುವುದು ಇವೆಲ್ಲವನ್ನೂ ಹೆಚ್ಚು ಮಾಡಿತ್ತು. ಬಹು ಕಲಾತ್ಮಕವಾಗಬಹುದಾಗಿದ್ದ ಚಿತ್ರವೊಂದು ನಿರೀಕ್ಷೆಯ ಮಟ್ಟ ಮುಟ್ಟದಿರಲು ನೀವೇ ಸಂಪೂರ್ಣ ಕಾರಣಕರ್ತರು. ಇದು ಹೇಗೆ….ಎನ್ನುತ್ತೀರಾ….ಮುಂದೆ ಓದಿ…ಭಟ್ಟರೆ…ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್
೨೨ ಸೆಪ್ಟೆಂಬರ್, ೨೦೧೧ ನನ್ನ ಸ್ನೇಹಿತನಿಂದ ಒಂದು ವಾಣಿಜ್ಯ-ಸಮಾಲೋಚನೆಗಾಗಿ ಕರೆಬಂದಾಗ, ಅದು ೨೪ರ ಸೆಪ್ಟೆಂಬರ್ಗೆ ನಿಗದಿಯಾಯಿತು. ೨೫ನೇ ಭಾನುವಾರ
ಚುಂಚನಗಿರಿಯಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಇನ್ನೊಬ್ಬ ಸ್ನೇಹಿತನಿಂದ ಬಂದ ಕರೆಗೆ ತುಂಬು ಆಸಕ್ತಿಯಿಂದಲೇ ಒಪ್ಪಿಗೆ ಇತ್ತಾಗಿತ್ತು. ೨೪ರ ಬೆಳಿಗ್ಗೆ ನಾ ಬೆಂಗಳೂರಿಗೆ ಬಂದಿಳಿದು, ಮಧ್ಯಾಹ್ನದ ಸಮಾಲೋಚನೆಯ ತಯ್ಯಾರಿಯಲ್ಲಿದ್ದಾಗ, ತಲೆ ಇನ್ನೇನೋ ಯೋಚಿಸಲಾರಂಭಿಸಿತ್ತು. ಮನಸ್ಸು ಹೊಯ್ದಾಡುತ್ತಾ, ಗೊಣಗುತಿತ್ತು.. ಸದ್ಯದಲ್ಲೆಲ್ಲೋ, ವಾಕ್ಪಥ ಕಾರ್ಯಕ್ರಮ ಇದೆ, ಎಂಬುದಾಗಿ. ಮನಸ್ಸಿನೊತ್ತಡ ತಡೆಯಲಾರದೇ, ಫೇಸ್ಬುಕ್ನ “ಇವೆಂಟ್ಸ್” ತೆರೆದು ನೋಡಿದಾಗ, ಆಶ್ಚರ್ಯ, ಆಘಾತ, ಸಂತೋಷ, ಎಲ್ಲಾ ಒಟ್ಟೊಟ್ಟಿಗೆ..! ನನ್ನ ಮನಸ್ಸಿನ ಹೊಳಹಿನಂತೆ ನಂತರದ ದಿನವೇ (೨೫/೦೯/೨೦೧೧) ವಾಕ್ಪಥದ “ಏಳನೇ ಹೆಜ್ಜೆ”. ಈ ವಿಚಾರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಯಾವಾಗಲೂ ಕಾಯುತ್ತಿದ್ದ ಈ ವಿಶೇಷ ಕಾರ್ಯಕ್ರಮ ಅಚಾನಕ್ಕಾಗಿ ನನ್ನ ಮುಂದೆ ತೆರೆದುಕೊಂಡಿದ್ದು, ನಿಜಕ್ಕೂ ನನಗೆ ಸಂತೋಷದೊಂದಿಗೆ ಅಚ್ಚರಿಗೊಳಿಸಿತ್ತು. ಆದರೆ ನನ್ನ ಸ್ನೇಹಿತನಿಗೆ ಚುಂಚನಗಿರಿಯ ಕಾರ್ಯಕ್ರಮಕ್ಕೆ ಬರುವೆ ಅಂದದ್ದು, ವಾಕ್ಪಥದಲ್ಲಿ ಭಾಗವಹಿಸಲು ಅಡ್ಡಿಮಾಡುತ್ತಲ್ಲಾ ಎಂಬ ಆಘಾತಕ್ಕೆ ಕಾರಣವಾಯಿತು.




