ಸೌಜನ್ಯ ಹಂತಕರು ನೇಣಿಗೇರುವುದೆಂತು?
– ರಾಕೇಶ್ ಶೆಟ್ಟಿ
“ಬಹುಷಃ ಆಗಿನ ಕಾಲವೇ ಚೆನ್ನಾಗಿತ್ತೆನೋ.ಆಗಲಾದರೂ ಕುರು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಅವಳ ಸಹಾಯಕ್ಕೆ ಕರೆದೊಡನೆಯೇ ಶ್ರೀ ಕೃಷ್ಣ ಪರಮಾತ್ಮ ಬಂದಿದ್ದ.ಪಾಪ! ಈ ಕಾಲದ ಹೆಣ್ಣು ಮಕ್ಕಳ ಕೂಗು ಆ ಕಾಣದ ದೇವರಿಗೂ,ಕಾನೂನು ಪಾಲಕರಾದ ಮನುಷ್ಯ(?)ರಿಗೂ ಕೇಳುತ್ತಿಲ್ಲ.ಕುರುಕ್ಷೇತ್ರದ ಯುದ್ಧದ ಮುಗಿದರೂ ಕೌರವರು ಇನ್ನೂ ಸತ್ತಿಲ್ಲ.ದ್ರೌಪದಿಯರ ಗೋಳು ಮುಗಿಯೋಲ್ಲ…” ಅಂತ ’ನಿರ್ಭಯ’ ಅತ್ಯಾಚಾರದ ಪ್ರಕರಣದ ಸಮಯದಲ್ಲಿ ಬರೆದಿದ್ದೆ. ಮತ್ತೆ ಅದೇ ಸಾಲುಗಳನ್ನು ನಮ್ಮ ಧರ್ಮಸ್ಥಳದ ’ಸೌಜನ್ಯ’ ಅನ್ನುವ ಹೆಣ್ಣುಮಗಳ ಬಗ್ಗೆ ಬರೆಯುವಾಗಲೂ ಬಳಸಬೇಕಾಗಿ ಬಂದಿದೆ.ಆಗ ಕೃಷ್ಣನೇನೋ ಕರೆದಾಗ ಬಂದಿದ್ದ.ಆದರೆ ಇಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ಯಾಕೋ ವರುಷ ಕಳೆದರೂ ಇನ್ನು ಕರುಣೆ ತೋರಲಿಲ್ಲ …! ನನಗೆ ಈ ದೇವರುಗಳ ಮೇಲೆ ಒಮ್ಮೊಮ್ಮೆ ಕೋಪಬರುವುದು ಇದೇ ಕಾರಣಕ್ಕಾಗಿ, ಏನೆಲ್ಲಾ ಪಾಪಗಳನ್ನು ಮಾಡಿ ಒಂದು ನೇಮ,ಒಂದು ಹರಕೆ,ಒಂದು ಹೋಮ,ಒಂದು ಹವನ,ತಪ್ಪು ಕಾಣಿಕೆ ಸಲ್ಲಿಸಿ ಸುಮ್ಮನಾಗಿಬಿಡಬಹುದೇ? ಹಾಗಿದ್ದರೆ ’ಧರ್ಮ’ವೆಲ್ಲಿದೆ?
ದಿಲ್ಲಿಯಲ್ಲಿ ಕಳೆದ ಡಿಸೆಂಬರಿನಲ್ಲಿ ನಡೆದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ’ನಿರ್ಭಯ’ ಅತ್ಯಾಚಾರ ಪ್ರಕರಣದಲ್ಲಿ ಹೋರಾಟದ ಕಿಡಿಯನ್ನು ದೆಹಲಿಯ ವಿದ್ಯಾರ್ಥಿ ಮಿತ್ರರು ಹಚ್ಚಿದ್ದರು.ಅದು ದೇಶವ್ಯಾಪಿಯೂ ಹಬ್ಬಿತ್ತು. ಖುದ್ದು ಕೇಂದ್ರ ಸರ್ಕಾರವನ್ನೇ ಮಂಡಿಯೂರುವಂತೆ ಮಾಡಿದ್ದು ಯುವಶಕ್ತಿಗೆ ಸಂದ ಜಯವಾಗಿತ್ತು.ಈಗ ನಿರ್ಭಯ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದೆ.ಆದರೆ ನಮ್ಮ ಸೌಜನ್ಯ ಪ್ರಕರಣದ ಆರೋಪಿಗಳೇ ಇನ್ನೂ ಸಿಕ್ಕಿಲ್ಲ…! ಅತ್ಯಾಚಾರದ ಆರೋಪಿಗಳನ್ನು ವರ್ಷವಾದರೂ ಬಂಧಿಸಲಾಗದಷ್ಟು ನಿಷ್ಕ್ರಿಯರಾಗಿದ್ದಾರೆಯೇ ನಮ್ಮ ಕರ್ನಾಟಕ ಪೋಲಿಸರು? ಅಥವಾ ಪೋಲಿಸರನ್ನು ನಿಷ್ಕ್ರಿಯಗೊಳಿಸುವಲ್ಲಿ ಕಾಣದ ’ಕೈ’ ಗಳು ಕೆಲಸ ಮಾಡುತ್ತಿವೆಯೇ? ಪ್ರಕರಣ ನಡೆದಾಗ ಇದ್ದಿದ್ದು ಬಿಜೆಪಿ ಸರ್ಕಾರ.ಈಗ ಇರುವುದು ಕಾಂಗ್ರೆಸ್ಸ್ ಸರ್ಕಾರ.ಹಾಗಿದ್ದರೆ ಆ ಕಾಣದ ಕೈಗಳು ಸರ್ಕಾರದ ಕೈಗಳನ್ನೇ ಕಟ್ಟಿಹಾಕಬಲ್ಲಷ್ಟು ಬಲಿಷ್ಟವಾಗಿವೆಯೇ?
‘ದಾಮಿನಿ’ಗೆ ಮಿಡಿದ ಹೃದಯಗಳು ’ಸೌಜನ್ಯ’ಳಿಗೂ ಮಿಡಿಯಲಾರವೇ?
– ಭುವಿತ್ ಶೆಟ್ಟಿ
ಪ್ರಿಯ ಮಂಗಳೂರಿನ ನಾಗರೀಕರೇ,
ನಾವೇಕೆ ಈ ರೀತಿ? ನಮ್ಮ ಮನೆಯಲ್ಲಿ ಸೂತಕವಿದ್ದರೂ ಪರಮನೆಯ ಸಾವಿಗೆ ಕಣ್ಣೀರು ಸುರಿಸುವ ಹೃದಯ ವೈಶಾಲ್ಯತೆ ನಮಗೇಕೆ? ಊರ ಉಸಾಬರಿ ನಮಗ್ಯಾಕೆ ಅಂತ ಸುಮ್ಮನೆ ಕೂರುವಂಥ ಕಾಲ ಇದಲ್ಲ. ಅದನ್ನು ಒಪ್ಪಲೇ ಬೇಕು. ಆದರೆ, ಇತ್ತೀಚೆಗೆ ನಾವು ತೀರ ಸ್ವಂತಿಕೆಯ ಎಲ್ಲೆ ಮೀರಿ ಹೋಗುತ್ತಿದ್ದೇವೆ. ನೆರೆಮನೆ ಸುಡುತ್ತಿದ್ದರೂ ಮಾತಾಡದೆ, TV ಯಲ್ಲಿ ಕ್ರೈಂ ಸ್ಟೋರಿ ನೋಡಿ ಅಯ್ಯೋ ಪಾಪ ಎನ್ನುತ್ತೇವೆ. ಅಂಥ ಮನೋಸ್ಥಿಥಿ ನಮ್ಮದು. ಮಾನವೀಯತೆ ಎಂಬುದು ಮಾದ್ಯಮಗಳು ಬಿತ್ತರಿಸುವ ಸುದ್ದಿಯನ್ನು ನೋಡಿ ಉಕ್ಕಿ ಹರಿಯುತ್ತದೆ ಹೊರತು ವಾಸ್ತವತೆಯನ್ನರಿತಲ್ಲ. ಮಂಗಳೂರು ಖಂಡಿತವಾಗಿಯೂ ಬದಲಾಗಿದೆ ಎನ್ನಲು ಇತ್ತೀಚೆಗೆ ನಡೆದ Home Stay ಗಲಾಟೆ ಹಾಗೂ ಸೌಜನ್ಯ ಸಾವಿನ ಪ್ರಕರಣದ ಬಗ್ಗೆ ಮಂಗಳೂರಿನ ಜನತೆ ವ್ಯಕ್ತಪಡಿಸಿದ ಪ್ರತಿಕ್ರಿಯೆಯೇ ಸಾಕು.
ರಾಜಕೀಯ ಪ್ರೇರಿತ ‘ಮಂಗಳೂರು ರೆಸಾರ್ಟ್ ಗಲಾಟೆ’ಯಲ್ಲಿ ಸಿರಿವಂತ ಮನೆಯ ಹೆಣ್ಣುಮಕ್ಕಳಿಗಾದ ಅನ್ಯಾಯಕ್ಕೋಸ್ಕರ ಅದೆಷ್ಟು ಮಂದಿ ಬೀದಿಗಿಳಿಯಲಿಲ್ಲಾ? Facebook ತುಂಬಾ ಅದೇನೂ ಸ್ಟೇಟಸ್ Update ಗಳು, ಅದೇನೂ ಅಕ್ರೋಶ? ದಾಳಿ ಮಾಡಿದವರನ್ನು ಕೈಗೆ ಕೊಟ್ಟಿದ್ದರೆ ಕೊಂದು ಬಿಡುತ್ತಿದ್ದರೋ ಏನೋ… ಆ ರೀತಿ ಇತ್ತು ಪ್ರತಿಭಟನೆಯ ಜೋರು.





