ವಿಷಯದ ವಿವರಗಳಿಗೆ ದಾಟಿರಿ

Posts tagged ‘ಲೋಕಸಭೆ ಚುನಾವಣೆ’

15
ಏಪ್ರಿಲ್

ಪ್ರತ್ಯಕ್ಷ ಕಂಡು ಪರಾಂಬರಿಸಿ ನೋಡಿದ ಮೇಲೂ ನಮೋ ಎನ್ನದಿದ್ದರೆ…

– ರಾಜೇಶ್ ರಾವ್

ಮೋದಿಯಾವ ಘಟನೆ ಸಹನೆಯ ಕಟ್ಟೆಯೊಡೆದು ಸ್ವಾಭಿಮಾನ ಸಿಡಿದೆದ್ದು ನಡೆದಿತ್ತೋ ಆ ಘಟನೆ ಆತನನ್ನು ಜಗತ್ತಿಗೇ ಪರಿಚಯಿಸಿತು. ಜಗತ್ತಿಗೆ ಜಗತ್ತೇ ಆತನನ್ನು ಖಳನಾಯಕನನ್ನಾಗಿ, ರಾಕ್ಷಸನನ್ನಾಗಿ ಕಂಡು ದೂಷಿಸಿತು. ಜೊತೆಯಲ್ಲಿದ್ದವರೂ ದೂರವಾದರು. ಮಾಧ್ಯಮಗಳಿಂದ ನಿತ್ಯ ದೂಷಣೆಗಳ ಸಹಸ್ರನಾಮ. ರಾಷ್ಟ್ರವಿರೋಧಿ ಶಕ್ತಿಗಳಂತೂ ಹಬ್ಬದೂಟವೆಂಬಂತೆ ಈ ಸನ್ನಿವೇಶವನ್ನು ತಮಗೆ ತಕ್ಕಂತೆ ಮಾರ್ಪಡಿಸಿಕೊಂಡು ಕಣ್ಣಿಗೆ ರಾಚುವ ಸತ್ಯವನ್ನು ಕಾಲಗರ್ಭದಲ್ಲಿ ಅಡಗುವಂತೆ ಮಾಡಿದರು. ಮಾಧ್ಯಮಗಳು ಮುಚ್ಚಿಟ್ಟ ಕಾರಣ ಸಾಮಾನ್ಯ ಜನರಿಗೂ ಸತ್ಯ ತಿಳಿಯದೆ ಅವರೂ ದ್ವೇಷಿಸತೊಡಗಿದರು. ಅವನದೆಲ್ಲವನ್ನೂ ಮೌನವಾಗಿ ಸಹಿಸಿದ. ಮೌನವಾಗಿಯೇ ಕೆಲಸವನ್ನು ಮಾಡುತ್ತಾ ತನ್ನ ಜವಾಬ್ದಾರಿಯನ್ನು ಚ್ಯುತಿಯಿಲ್ಲದಂತೆ ಪೂರೈಸಿದ. ಯಾಕೆಂದರೆ ಅವನಲ್ಲೊಬ್ಬ ನಾಯಕನಿದ್ದ, ಸಂಘಟನಕಾರನಿದ್ದ, ಸಂಘದ ಶಿಸ್ತು, ಸಂಯಮ, ಸೇವಾಗುಣದ ಮೂರ್ತರೂಪವಿತ್ತು!

ಅದು 2013ರ ಜೂನ್ ತಿಂಗಳು. ಶಾಂತವಾಗಿದ್ದ ಗಂಗೆ ಉಕ್ಕಿ ಹರಿದಿದ್ದಳು. ಉತ್ತರ ಭಾರತ ಜಲ ಪ್ರಳಯದಿಂದ ತತ್ತರಿಸಿತ್ತು. ಚಾರ್ ಧಾಮಗಳಲ್ಲಿ ಯಾತ್ರಿಕರು ನಾಲ್ಕೂ ಕಡೆ ದಿಕ್ಕಾಪಾಲಾಗಿದ್ದರು. ಉತ್ತರಾಖಂಡದ ಜನರ ಬವಣೆಗೆ ಉತ್ತರ ಹೇಳುವವರಿರಲಿಲ್ಲ. ಕೇಂದ್ರ, ರಾಜ್ಯ ಸರಕಾರಗಳೆರಡೂ ನಿಷ್ಕ್ರಿಯವಾಗಿದ್ದ ಅಂತಹ ಕ್ಲಿಷ್ಟಕರ ಸಮಯದಲ್ಲಿ ಸಹಾಯಕ್ಕಾಗಿ ಪರಿತಪಿಸುತ್ತಿದ್ದ ಸಾವಿರಾರು ಸಂತ್ರಸ್ಥರಲ್ಲಿ ಸುಮಾರು 15,000 ಮಂದಿ ಸಂತ್ರಸ್ಥರನ್ನು ಹುಡುಕಾಡಿ ಅವರ ನೆರವಿಗೆ ಧಾವಿಸಿದ ಆತನ ಪಡೆ, ಸುಮಾರು 80 ಟೊಯೊಟಾ ಇನ್ನೋವಾ ಕಾರುಗಳಲ್ಲಿ ಅವರನ್ನು ಡೆಹ್ರಾಡೂನಿನ ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರಲ್ಲದೆ, ಅಲ್ಲಿಂದ 25 ಐಷಾರಾಮಿ ಬಸ್ಸುಗಳ ಸಹಾಯದಿಂದ ನವದೆಹಲಿಗೆ ಪ್ರಯಾಣ ವ್ಯವಸ್ಥೆ ಕಲ್ಪಿಸಿದರು. ಇದು ಒಬ್ಬ ನಾಯಕನಾದವ ಮಾಡುವ ಕಾರ್ಯ.ಪಾಕಿಸ್ತಾನದ ಪ್ರಧಾನಿ ನಮ್ಮ ದೇಶದ ಪ್ರಧಾನಿಯನ್ನು ಹಳ್ಳಿ ಹೆಂಗಸು ಎಂದು ಜರೆದಾಗ ಬೇರೆ ನಾಯಕರಿರಲಿ ಪ್ರಧಾನಿಯ ಪಕ್ಷದ ನಾಯಕರೇ ತುಟಿಪಿಟಿಕ್ಕೆನ್ನದಿದ್ದಾಗ ನಮ್ಮ ದೇಶದ ಪ್ರಧಾನಿಯನ್ನು ಹೀಯಾಳಿಸುವ ಅಧಿಕಾರ ತಮಗಿಲ್ಲವೆಂದು ಹೇಳುವ ಮೂಲಕ ಯುಧಿಷ್ಟಿರನ “ಮೂರನೆಯವ ಎದುರಾದಾಗ ನಾವು ನೂರೈವರು” ಎಂಬ ಮಾತನ್ನು ಅಕ್ಷರಷಃ ಪಾಲಿಸಿದ ನಾಯಕ ಪ್ರಸಕ್ತ ಸನ್ನಿವೇಶದಲ್ಲಿ ಆತನೊಬ್ಬನೇ!

ಮುನ್ನುಗ್ಗುತ್ತಿದ್ದ ವಿಸ್ತರಣಾ ಮನೋಭಾವದ ಚೀನಾಕ್ಕೆ ಖಡಕ್ಕಾಗಿ ಉತ್ತರ ನೀಡಿದ ನಾಯಕ ಆತನಲ್ಲದೆ ಮತ್ಯಾರು? ವೀಸಾಕ್ಕಾಗಿ ಅಂಗಲಾಚದೇ ಅಮೇರಿಕಾದವರನ್ನೇ ಭಾರತದ ವೀಸಾಕ್ಕಾಗಿ ಸರತಿಯಲ್ಲಿ ನಿಲ್ಲುವಂತೆ ಮಾಡುತ್ತೇನೆಂದು ಘೋಷಿಸುವ ಧೈರ್ಯ ಮತ್ಯಾರಿಗಿದೆ? ಹೌದು, ಯಾವ ದೊಣ್ಣೆನಾಯಕನ ಅಪ್ಪಣೆಗೆ ಕಾಯದೇ ಸಂಧಿಗ್ಧ ಪರಿಸ್ಥಿತಿಯಲ್ಲಿ ಸ್ವಯಂ ಖಚಿತ ನಿರ್ಧಾರದೊಂದಿಗೆ ಮುನ್ನುಗ್ಗುವುದು ಮಾತ್ರವಲ್ಲ ಅದನ್ನು ಯಶಸ್ವಿಯಾಗಿ ಪೂರೈಸುವುದನ್ನು ಹಾಗೂ ದೇಶದ ಘನತೆ, ಸ್ವಾಭಿಮಾನ, ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವ ಧೈರ್ಯ-ಸ್ಥೈರ್ಯ ಪ್ರದರ್ಶಿಸುವುದನ್ನು ಸರ್ದಾರ ಪಟೇಲ್ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿಯವರ ನಂತರದ ರಾಜಕೀಯ ನಾಯಕರಲ್ಲಿ ನೋಡಬಹುದಾದ ಏಕೈಕ ವ್ಯಕ್ತಿ ನರೇಂದ್ರ ಮೋದಿ!

ಮತ್ತಷ್ಟು ಓದು »