ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

25
ಮಾರ್ಚ್

ನೆಡುವ ಗಿಡ, ಪ್ರಾಕೃತಿಕ ಸಮಸ್ಯೆಗಳ ನೈಜ ಪರಿಹಾರವೇ ?

– ಅನೇಕಲೇಖ

ವನಮಹೋತ್ಸವ, ಜನ್ಮದಿನ ಇಂತಹ ಹಲವು ಸಂದರ್ಭಗಳಲ್ಲಿ ಸಸಿಗಳನ್ನು, ಗಿಡಗಳನ್ನು ನೆಡುತ್ತೇವೆ. ಇದರ ಹಿಂದಿನ ಕಾರಣಗಳು, ಉದ್ದೇಶಗಳು ನಮಗೆ ಗೊತ್ತೇ ಇವೆ. ತಾಪಮಾನ ಏರಿಕೆ, ಪ್ರಾಕೃತಿಕ ಅಸಮತೋಲನ ಮುಂತಾದ ಪರಿಣಾಮಗಳನ್ನು ತಡೆಯಲು,ನಾವು ಈ ಹಸಿರೀಕರಣದ ಮೊರೆ ಹೋಗಿದ್ದೇವೆ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಉಸಿರಾಟಕ್ಕೆ ಆಮ್ಲಜನಕ ಬೇಕು ಅದನ್ನು ಬಹುದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದು ಗಿಡಗಳು ಎಂಬ ಕಾರಣಕ್ಕಾಗಿ ನಾವು ಹಸಿರನ್ನು ಬೆಳೆಸುತ್ತೇವೆ. ಇತರ ಜೀವಿಗಳ ಉಳಿವು ಅಭಿವೃದ್ಧಿ ನಮ್ಮ ಗುಂಪಿಗೆ ಸೇರದ ವಿಷಯ. ಅದಕ್ಕೆ ಕಾರಣವಿಷ್ಟೇ, ನಮ್ಮ ಮನುಜ ಸಂತತಿಯನ್ನೇ ನಮ್ಮಿಂದ ಸಂಭಾಳಿಸುವುದು ಸಾಧ್ಯವಾಗದಿರದಾಗ ಇನ್ನು ಬ್ರಹತ್ ಜೀವರಾಶಿಯ ಜವಾಬ್ದಾರಿ ನಮ್ಮಿಂದ ಆಗುಹೋಗದ ವಿಷಯ.ಹಾಗಾಗಿ ನಮ್ಮ ಧ್ಯೇಯ ಸ್ಪಷ್ಟ “ಮನುಷ್ಯರಿಗೆ ಮಾತ್ರ”.

ಈ ಹಸಿರೀಕರಣಕ್ಕೆ ನಾವು ಕಾಲಾಂತರಗಳಲ್ಲಿ ಅಳವಡಿಸಿಕೊಂಡ ಸೂತ್ರಗಳು, ಪದ್ಧತಿಗಳನ್ನು ಗಮನಿಸಿದರೆ ನಾವು ಮಾಡಿದ ತಪ್ಪು ನಿರ್ಧಾರಗಳು ನಮ್ಮ ಕಣ್ಣೆದುರೆ ನಿಲ್ಲುತ್ತವೆ. ಈ ಸೂತ್ರಗಳ ಹಿಂದೆ ಅರಣ್ಯ ಇಲಾಖೆ, ಸರ್ಕಾರದ ಯೋಜನೆಗಳ ಕೈ ಕೂಡ ಶಾಮೀಲು.

ಮೊದಲಿಗೆಲ್ಲ ನಮ್ಮ ಯೋಜನೆಯಿದ್ದದ್ದು ಆರ್ಥಿಕ ಆದಾಯಗಳುಳ್ಳ ಮರಗಳನ್ನು ಬೆಳೆಸುವುದು (ಉದಾ :ಅಕೇಶಿಯ, ನೀಲಗಿರಿ). ನಾವು ಒಂದೇ ಹೂಡಿಕೆಯಿಂದ ಪ್ರಾಣವಾಯು, ಹಣ ಎರಡನ್ನೂ ಸಂಪಾಡಿಸುವ ಅಂದಾಜಿನಲ್ಲಿದ್ದೆವು. ನಂತರದ ದಿನಗಳಲ್ಲಿ ನಮಗೆ ತಿಳಿಯಿತು. ಈ ರೀತಿಯ ಮರಗಳು ಮಣ್ಣಿನ ಸತ್ವಸಾರಗಳನ್ನು ಬರಿದು ಮಾಡಿ, ನಿಸರ್ಗದಲ್ಲಿನ ಶೀತವನ್ನು ಹೀರಿಕೊಂಡು, ಸುತ್ತಲಿನ ತಾಪಮಾನವನ್ನು ಏರಿಸುತ್ತದೆ ಹಾಗೂ ಇವುಗಳ ಸುತ್ತಮುತ್ತ ಅನ್ಯ ರೀತಿಯ ಗಿಡಗಳು ಬೆಳೆಯದಂತೆ ಇವು ತಡೆಯುತ್ತವೆ ಎಂದು. ಹಾಗಾಗಿ ನಾವು ನಮ್ಮ ಉಪಾಯಗಳನ್ನು ಬದಲಾಯಿಸಿಕೊಂಡೆವು ಹಣ್ಣಿನ ಮರಗಳನ್ನು ಬೆಳೆಸುವ ಯೋಜನೆಯನ್ನು ಹೊಂದಿದೆವು. ಇದರ ಹಿಂದಿನ ಉದ್ದೇಶ ಒಳ್ಳೆಯದೇ. ಗಿಡ ಬಿಡುವ ಹಣ್ಣುಗಳು ಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತದೆ. ಇವುಗಳಿಂದ ಪಸರಿಸಲ್ಪಡುವ ಹಣ್ಣಿನ ಬೀಜಗಳಿಂದ ಹೊಸ ಸಸಿಯೊಂದರ ಹುಟ್ಟಾಗುತ್ತದೆ. ಈ ಉಪಾಯ ಮೇಲ್ನೋಟಕ್ಕೆ ಅದ್ಭುತವೆಂದು ತೋರುತ್ತದೆ.

ಆದರೆ ಕಾಡುಗಳು ಹೇಗೆ ನಿರ್ಮಾಣಗೊಳ್ಳುತ್ತವೆ?  ಪ್ರಕೃತಿಯಲ್ಲಿ ಹಣ್ಣು ಕೊಡದ ಸಸ್ಯ ಪ್ರಭೇದಗಳ ವೈವಿಧ್ಯತೆ, ಪ್ರಾಮುಖ್ಯತೆಗಳನ್ನು ನೋಡಿದರೆ ನಮ್ಮ ಅದ್ಭುತ ಉಪಾಯ ತನ್ನ ಉಪಯುಕ್ತತೆ ಕಳೆದುಕೊಳ್ಳುತ್ತದೆ. ಒಂದು ಕಾಡು ನಿರ್ಮಿತವಾಗಬೇಕಾದರೆ ಮೊದಲು ಪಾಚಿಗಳ ಪದರ ಬೆಳೆದು ಕಲ್ಲು-ಖನಿಜಗಳನ್ನು ಮಣ್ಣನ್ನಾಗಿ ಮಾಡಿ. ಅದರ ಮೇಲೆ ಫರ್ನ್,ಮಾಸಸ್(Ferns Mosses) ಬೆಳೆದು ಮಣ್ಣನ್ನು ಹದಗೊಳಿಸಿ, ತದನಂತರ ಹುಲ್ಲು ಗಿಡಗಳು ಬೆಳೆದು,ಕೆಲವು ಗಿಡವು ಮರವಾಗುತ್ತವೆ. ಇಷ್ಟು ಕ್ಲಿಷ್ಟ ಹಾಗೂ ಸಮಯ ಯಾಚಕ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಹಲವು ಸೂಕ್ಷ್ಮಜೀವಿಗಳ, ಪ್ರಾಣಿಕೀಟಗಳ ಸಂಯುಕ್ತತೆಯು ಸಹಕರಿಸುತ್ತದೆ. ಅಲ್ಲೊಂದು ಸಮತೋಲಿತ ವ್ಯವಸ್ಥೆ ರೂಪುಗೊಳ್ಳುತ್ತದೆ.

ಆದರೆ ಗಿಡಗಳನ್ನಷ್ಟೇ ನೆಟ್ಟಾಗ, ಆ ಗಿಡಕ್ಕೆ ಸಹಕರಿಸುವ ಅಥವಾ ಅವಲಂಬಿತವಾದ ಜೀವಿಗಳು ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ. ತದನಂತರ ಪಾಚಿ ಹುಲ್ಲುಗಳ ಬೆಳವಣಿಗೆ ಆಗುತ್ತದೆಯಾದರೂ ಅದೊಂದು ವ್ಯವಸ್ಥಿತ ಸಮತೋಲಿತ ವ್ಯವಸ್ಥೆಯಲ್ಲ. ನಾವು ರಸ್ತೆ ಕಟ್ಟಡಗಳನ್ನು ಮಾಡುವಾಗ ಪ್ರಕೃತಿಯ ಪ್ರಾಣಿ, ಪಕ್ಷಿ, ಕೀಟ, ಕಲ್ಲು, ನೀರ ಒರತೆ, ಮಣ್ಣು ಸಕಲವನ್ನು ನಾಶ ಮಾಡುತ್ತೇವೆ, ಆದರೆ ಪರಿಸರದ ಪುನಶ್ಚೇತನಕ್ಕೆ ಒಂದು ಗಿಡವನ್ನು ನೆಟ್ಟು ಸುಮ್ಮನಾಗುತ್ತೇವೆ. ಇದು ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಸಾಮರಸ್ಯದಲ್ಲಿರುವ ವ್ಯವಸ್ಥೆ.ಅದರ ಅಡಿಪಾಯವನ್ನೆಲ್ಲ ತೆಗೆದು ಒಂದು ಗೋಡೆಯನ್ನಷ್ಟೇ ನಿಲ್ಲಿಸಿದರೆ ಅದನ್ನು ‘ಮನೆ’ ಎಂದು ಹೇಗೆ ಕರೆಯಲಾದೀತು?. ನಾವು ಗಿಡಗಳನ್ನು ನೆಡಬಹುದು ಆದರೆ ಪ್ರಕೃತಿ ತನ್ನನ್ನು ತಾನು ಕಟ್ಟಿಕೊಳ್ಳುವ ಪ್ರಕ್ರಿಯೆ ವಿಧಾನಗಳನ್ನು ನಾವು ಅರ್ಥೈಸಿಕೊಂಡು ಅದನ್ನು ಮರುಸೃಷ್ಟಿ ಮಾಡುವುದು ಬಹುಷಃ ಅಸಾಧ್ಯ. ಹಾಗಾಗಿ ಗಿಡ ನೆಡುವುದು, ನಾವು ಸೃಷ್ಟಿಸಿದ ಪ್ರಾಕೃತಿಕ ಸಮಸ್ಯೆಗಳಿಗೆ ಪರಿಹಾರವಾಗಲಾರದು. ಏಕೆಂದರೆ ಈ ಯೋಜನೆ ಎಲ್ಲ ಜೀವಿಗಳ ಶ್ರೇಯವನ್ನು ಒಳಗೊಂಡ ಉಪಾಯವಲ್ಲ.

ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು?. ಬಹುಷಃ ಮನುಜ ‘ತಾನು’ ಎಲ್ಲದಕ್ಕೂ ಉತ್ತರ ಕಂಡುಹಿಡಿಯುತ್ತಾನೆ ಎಂಬುದು ಮನುಜನ ಅಹಂಕಾರ. ಪ್ರಕೃತಿಯ ವಿಷಯದಲ್ಲಿ ಅದಕ್ಕೆ ತನ್ನನ್ನು ತಾನು ಕಟ್ಟಿಕೊಳ್ಳುವ, ಕಂಡುಕೊಳ್ಳುವ ಸಾಮರ್ಥ್ಯವಿದೆ. ನಾವು ಪ್ರಕೃತಿಯ ಪ್ರಕ್ರಿಯೆಗಳಲ್ಲಿ ಮೂಗು ತೂರಿಸದಿದ್ದರೆ, ಅದು ಪ್ರಕೃತಿಯ ಉಳಿವಿಗೆ ನಾವು ಮಾಡುವ ದೊಡ್ಡ ಉಪಕಾರ. ಈ ಪ್ರಕೃತಿಯೆ ನಮ್ಮನ್ನು ರೂಪಿಸಿದ್ದು ಎಂಬುದನ್ನುನಾವು ಮರೆಯಬಾರದು. ಅಷ್ಟಕ್ಕೂ ನೂರು ಮರಗಳನ್ನು ಕಡಿದು ಹತ್ತು ಸಸಿಗಳನ್ನು ನೆಡುವುದು, ಕಡಿಯಲ್ಪಟ್ಟ ಮರ ಅದರ ಬೆಳವಣಿಗೆಗೆ ತೆಗೆದುಕೊಂಡ ಸಮಯ ಅದು ಬಳಸಿಕೊಂಡ ಪ್ರಾಕೃತಿಕ ಸವಲತ್ತುಗಳ ಮೌಲ್ಯವನ್ನು ನಾವು ಅವಮಾಣನಿಸಿದಂತೆ ಅಲ್ಲವೇ?. ಹಾಗಾಗಿ ಈ ಪ್ರಕೃತಿಯ ಬಗ್ಗೆ ನಮಗಿರುವ ಕಲ್ಪನೆ ಹಾಗೂ ಜ್ಞಾನ ಯಾವ ರೀತಿಯಲ್ಲೂ ಸಂಪೂರ್ಣವಲ್ಲ ಎಂಬುದನ್ನು ಅರಿತು ಮುನ್ನಡೆಯಬೇಕು.

9
ಮಾರ್ಚ್

ರಷ್ಯಾ-ಉಕ್ರೇನ್ ಕದನ: ಮಾನವ ಹಕ್ಕು ಹೋರಾಟಗಾರರು ಎಲ್ಲಿ ಅಡಗಿ ಕುಳಿತಿದ್ದಾರೆ?

– ರಾಘವೇಂದ್ರ ಅಡಿಗ ಎಚ್ಚೆನ್.

ಯುದ್ಧ

ಕಳೆದ ಒಂದು ವಾರದಿಂದ ಭಾರತ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ಜನರಲ್ಲಿ ಆತಂಕ, ದುಗುಡಕ್ಕೆ ಕಾರಣವಾಗಿರುವುದು ರಷ್ಯಾ-ಉಕ್ರೇನ್ ಯುದ್ಧ.  ಉಕ್ರೇನ್ ನ್ಯಾಟೋ ರಾಷ್ಟ್ರಗಳ ಜತೆ ಕೈಜೋಡಿಸಲಿದೆ, ಯುರೋಪಿಯನ್ ಯೂನಿಯನ್ ಜತೆಯಾಗಿ ತನ್ನ ಕಮ್ಯುನಿಸ್ಟ್ ಸಿದ್ಧಾಂತ ಆಧಾರಿತ ವ್ಯವಸ್ಥೆಯ ಪ್ರಭಾವದಿಂದ ದೂರವಾಗಲಿದೆ ಎಂಬ ಕಾರಣದಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ.  ರಷ್ಯಾ ಕಳುಹಿಸಿದ ಯುದ್ಧ ವಾಹನಗಳ ಮೇಲೆ *Z* ಸಂಕೇತವನ್ನು ರಷ್ಯಾ ಸೂಚಿಸಿದ್ದು, ಇದರ ಸೂಚನೆ ಎಂದರೆ 8  ಗಣರಾಜ್ಯಗಳನ್ನು ರಷ್ಯಾಕ್ಕೆ ಸೇರಿಸುವ ಮೂಲಕ ರಷ್ಯಾವನ್ನು ವಿಸ್ತರಿಸುವ ದೂರ ದೃಷ್ಠಿ ಹಾಗೂ ಮುಂದಾಲೋಚನೆ ಈ ಸೇನಾ ಕಾರ್ಯಾಚರಣೆಯ ಹಿಂದಿದೆ ಎನ್ನಲಾಗುತ್ತಿದೆ. ಎಂದರೆ ಇದರ ಪರಿಣಾಮ ಭವಿಷ್ಯದಲ್ಲಿ ಜಗತ್ತಿನ ಭೂಪಟವನ್ನೇ ಬದಲಾಯಿಸಲಿದೆ, ಕೆಲವೊಂದು ರಾಷ್ಟ್ರಗಳನ್ನು ಪ್ರಪಂಚದ ನಕಾಶೆಯಿಂದಲೇ ಅಳಿಸಿ ಹಾಕಲಾಗುತ್ತದೆ!

ಆದರೆ ಇದೀಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ ಜಗತ್ತಿನಲ್ಲಿ ಶಾಂತಿ ನೆಲೆಗೊಳಿಸಿ ಎಲ್ಲವೂ ಸುಗಮವಾಗಿ ನಡೆಯುವಂತೆ  ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಹುಟ್ಟಿಕೊಂಡ ವಿಶ್ವಸಂಸ್ಥೆ ರಷ್ಯಾ-ಉಕ್ರೇನ್ ಯುದ್ಧ ವಿಷಯದಲ್ಲಿ ಏಕೆ ಗಟ್ಟಿ ನಿರ್ಧಾರವನ್ನು ತಾಳದೆ ಹೋಗಿದೆ?  ಹೌದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್-ರಷ್ಯಾ ಯುದ್ಧದ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ.  ಉಕ್ರೇನ್‌ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯದ ಪರ ಒಂದು ಡಜನ್‌ಗೂ ಹೆಚ್ಚು ದೇಶಗಳ ರಾಯಭಾರಿಗಳು ದನಿ ಎತ್ತಿದ್ದಾರೆ. ಐದು ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್‌ ಅಪಾರ ನಷ್ಟ ಅನುಭವಿಸಿದೆ. ಸಾವಿರಾರು ಅಮಾಯಕ ಜೀವಗಳು ಹಾರಿ ಹೋಗಿವೆ. “ಈ ಅನಾಹುತ ಇಲ್ಲಿಗೆ ಕೊನೆಗೊಳಿಸಿ. ಮನುಷ್ಯತ್ವದ ಕಡೆ ಹೆಜ್ಜೆ ಹಾಕಿ” ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಅದರೆ ರಷ್ಯಾದಂತಹಾ ಬಲಿಷ್ಟ, ವಿಸ್ತರಣಾದಾಹ್ಹಿ, ಕಮ್ಯುನಿಸ್ಟ್ ಸಿದ್ದಾಂತದ ಪ್ರತಿಪಾದಕ ರಾಷ್ಟ್ರವೊಂದಕ್ಕೆ ಇಂತಹಾ ಕೇವಲ ಸಲಹೆ ಸೂಚನೆಗಳು ಸಾಕಾಗುತ್ತದೆಯೆ? ಒಂದೊಮ್ಮೆ ಈ ಯುದ್ಧದಲ್ಲಿ ಉಕ್ರೇನ್ ಸೋಲೊಪ್ಪಿದ್ದಾದರೆ ಭವಿಷ್ಯದಲ್ಲಿ ನ್ಯಾಟೋ ರಾಷ್ಟ್ರಗಳೂ ಸಹ ರಷ್ಯಾವನ್ನು ಎದುರಿಸಲಾರವು. ಅಲ್ಲದೆ ವಿಶ್ವಸಂಸ್ಥೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವೂ ಇದೆ. ಒಟ್ತಾರೆ ಜಗತ್ತಿನ ಯಾವುದೇ ರಾಷ್ಟ್ರ ರಷ್ಯಾವನ್ನು ಮುಖಾಮುಖಿಯಾಗಿ ಎದುರಿಸಲು ವಿಫಲವಾಗಲಿದೆ.

ಇದಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇರುವ ಮಾನವ ಹಕ್ಕು ಹೋರಾಟ(ಹಾರಾಟ)ಗಾರರು, ಬುದ್ದಿಜೀವಿಗಳು ರಷ್ಯಾ-ಉಕ್ರೇನ್ ನಡುವಿನ ಈ ಯುದ್ಧದ ಬಗ್ಗೆ ಏಕೆ ಯಾವ ಹೇಳಿಕೆಯನ್ನು ನೀಡುತ್ತಿಲ್ಲ? ಪ್ರತಿಭಟನೆ ನಡೆಸುತ್ತಿಲ್ಲ? ಭಾರತದಂತಹಾ ಸರ್ವಮತ ಸಹಬಾಳ್ವೆ ಇರುವ ದೇಶದಲ್ಲಿ ಅದೆಲ್ಲೋ ಒಂದು ಗುಂಪು ಹತ್ಯೆ ನಡೆದಿದೆ, ಇನ್ನೆಲ್ಲೋ ಗುಂಪುಗಳ ನಡುವೆ ಸಂಘರ್ಷ ನಡೆದಿದೆ ಎನ್ನುವ ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆ, ಭಾರತದಲ್ಲಿ ಯಾವುದೂ ಸರಿಯಿಲ್ಲ ಎಂದು ಬೊಬ್ಬಿಡುವ ಜಗತ್ತಿನ ಪ್ರಚಂಡ ಮಾನವ ಹಕ್ಕು ಪ್ರತಿಪಾದಕರು ಇಂದು ಎಲ್ಲಿ ಹೋಗಿದ್ದಾರೆ? ರಷ್ಯಾ ಉಕ್ರೇನ್ ನ ಹಲವಾರು ಸೈನಿಕರನ್ನು ಮಾತ್ರವಲ್ಲದೆ ಅಮಾಯಕ ನಾಗರಿಕರ ಮೇಲೆ ಸಹ ದಾಳಿ ಮಾಡುತ್ತಿದೆ. ಈ ದಾಳಿಯ ನಡುವೆ ಕರ್ನಾಟಕದ ಹಾವೇರಿಯ ವೈದ್ಯ ವಿದ್ಯಾರ್ಥಿ ನವೀನ್ ಎನ್ನುವವ ಸಹ ದುರಂತ ಸಾವಿಗೆ ಈಡಾಗಿದ್ದಾನೆ. ಇಷ್ಟೆಲ್ಲಾ ಘಟಸುತ್ತಿದ್ದರೂ ಬುದ್ದಿಜೀವಿಗಳೆನಿಸಿಕೊಂಡವರು ಯಾರೂ ರಷ್ಯಾ ನಡೆಯನ್ನು ಟೀಕಿಸುವ ಮಾತನಾಡುತ್ತಿಲ್ಲ ಏಕೆ? ಕೇವಲ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಬೇಕಿದೆಯೆ?


ಕಳೆದ ವರ್ಷಗಳಲ್ಲಿ “ಟೂಲ್ ಕಿಟ್” ಮೂಲಕ ಭಾರತದಲ್ಲಿ ಅಸಮಾನತೆ ಇದೆ, ಅಸಹಿಷ್ಣುತೆ, ಮಾನವ ಹಕ್ಕು ಉಲ್ಲಂಘನೆ ಸತತ ಆಗುತ್ತಿದೆ ಎನ್ನುತ್ತಿದ್ದ ಜಾಗತಿಕ ಹೋರಾಟಗಾರ್ತಿಯರಾರೂ ಇದೀಗ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ತುಟಿ ಪಿಟಿಕೆನ್ನುತ್ತಿಲ್ಲ.  ಇದಷ್ಟೇ ಅಲ್ಲ ಕಳೆದ ತಿಂಗಳಲ್ಲಿ ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಕುರಿತು ವಿವಾದ ಏರ್ಪಟ್ಟ ಸಮಯದಲ್ಲಿ ಅಮೆರಿಕಾ, ಪಾಕಿಸ್ತಾನ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ನಾಯಕರು ಅಲ್ಲದೇ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಲಾಲಾಳಂತಹಾ ವ್ಯಕ್ತಿಗಳು ಭಾರತದಲ್ಲಿ ಪರಿಸ್ಥಿತಿ “ಭಯಂಕರವಾಗಿದೆ” ಅಂತ ಅಂದಿದ್ದರು. ಆದರೆ ಇದೀಗ ಅವರಾರೂ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ಅದರಿಂದಾಗುತ್ತಿರುವ ಜೀವಹಾನಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.


ಇದೆಲ್ಲದರಿಂದ ತಿಳಿದುಬರುತ್ತಿರುವುದೇನೆಂದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ತಾವೇನು ಮಾಡಿದರೂ ಅದೆಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಭಾರತದಂತ ಕೆಲವು ರಾಷ್ಟ್ರಗಳು ಮಾತ್ರ ಅವರ ಅಣತಿಯ ಪ್ರಕಾರವೇ ನಡೆಯಬೇಕು!  ಉದಾಹರಣೆಗಾಗಿ ಹೇಳುವುದಾದರೆ ರಷ್ಯಾ-ಉಕ್ರೇನ್ ಮೇಲೆ ದಾಳಿ ನಡೆಸಿದ್ದಂತೆ ಭಾರತವೇನಾದರೂ ಪಾಕಿಸ್ತಾನದ ಕರಾಚಿ, ಲಾಹೋರ್ ಮೇಲೆ ದಾಳಿ ನಡೆಸಿದ್ದರೆ ಆಗ  ಅಮೆರಿಕಾ ಸೇರಿ ಜಾಗತಿಕ ಶಕ್ತಿಗಳು ಹೀಗೆಯೇ ಸುಮ್ಮನೆ ಕುಳಿತಿರುತ್ತಿದ್ದವೆ?  ಖಂಡಿತಾ ಇಲ್ಲ. ಭಾರತದ ವಿರುದ್ಧ ವಿಷ ಕಾರುತ್ತಿದ್ದವು.

ಇನ್ನು ಇಂದಿನ ಯುದ್ಧ ಪರಿಸ್ಥಿತಿಯಲ್ಲಿ ಭಾರತ ತಟಸ್ಥ ಧೋರಣೆ ತಾಳಿದೆ. ಇದಕ್ಕೆ ಕಾರಣ ಕೂಡ ಇದೆ. ರಷ್ಯಾ ನಮ್ಮ ಅನಾದಿ ಕಾಲದ ಮಿತ್ರರಾಷ್ಟ್ರ.  ಅಂತಹಾ ದೇಶದ ವಿರುದ್ಧ ನಿಲುವು ತೆಗೆದುಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಇನ್ನೊಂದು ಸಂಗತಿ ಎಂದರೆ ಭಾರತಕ್ಕೆ ಅಮೆರಿಕಾ ಸಹ ಮಿತ್ರರಾಷ್ಟ್ರವೇ ಆಗಿದ್ದರೂ ಅಮೆರಿಕಾದ ಭಾರತ ಪರ  ನಿಲುವು ಎಲ್ಲಾ ಕಾಲದಲ್ಲಿ ಏಕಪ್ರಕಾರವಾಗಿ ಇರುವುದಿಲ್ಲ.  ಹಾಗಾಗಿ ಇಂದು ಅಮೆರಿಕಾ ಮಾತುಕೇಳಿ ರಷ್ಯಾ ವಿರುದ್ಧ ಹೋದರೆ ನಾವು ಒಬ್ಬ ಆಪ್ತಮಿತ್ರನನ್ನೇ ಕಳೆದುಕೊಳ್ಳುತ್ತೇವೆ.  ಹಾಗೆಂದ ಮಾತ್ರಕ್ಕೆ ರಷ್ಯಾ ನಡೆಸಿರುವ ಈ ಯುದ್ಧಕ್ಕೆ ಭಾರತದ ಸಮ್ಮತಿ ಇದೆ ಎಂದೂ ಅರ್ಥವಲ್ಲ. ಭಾರತ ಪ್ರಧಾನಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಪದೇ ಪದೇ ಕರೆ ಮಾಡಿ ಯುದ್ಧ ನಿಲ್ಲಿಸುವ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಉಕ್ರೇನ್‌ ನಲ್ಲಿ ಸಿಲುಕಿದ್ದ ನಮ್ಮ ದೇಶವಾಸಿಗಳನ್ನು ಮರಳಿ ಕರೆತರುತ್ತಿದ್ದಾರೆ.  ಆದರೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಭಾರತ ಒತ್ತಡ ಹಾಕುವುದು ಸಾಧ್ಯವಿಲ್ಲ. ಮತ್ತು ವಿಶ್ವಸಂಸ್ಥೆಯಲ್ಲಿಯೂ ಸಹ ಯುದ್ಧದ ವಿರುದ್ಧ ಮತ ಚಲಾವಣೆ ಅಸಾಧ್ಯ. ಏಕೆಂದರೆ ರಷ್ಯಾದಂತೆ ಉಕ್ರೇನ್ ನಮಗೆ ಹಳೇ ಮಿತ್ರನಲ್ಲ. ಇದೀಗ ತನ್ನ ಮೇಲೆ ರಷ್ಯಾ ಎಲ್ಲಾ ದಿಕ್ಕುಗಳಿಂದ ಆಕ್ರಮಣ ನಡೆಸಿದೆ. ನನ್ನ ಪರವಾಗಿ ರಷ್ಯಾ ಅಧ್ಯಕ್ಷರೊಂದಿಗೆ  ಮಾತನಾಡಿ ತಕ್ಷಣವೇ ಯುದ್ಧ ನಿಲ್ಲಿಸಲು ಮಧ್ಯ ಪ್ರವೇಶಿಸುವಂತೆ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಬೆಂಬಲಿಸುವಂತೆ ಉಕ್ರೇನ್ ಸರ್ಕಾರವು ಭಾರತವನ್ನು ಅಂಗಲಾಚುತ್ತಿದೆ. ಆದರೆ ಇದೇ ದೇಶ ಈ ಹಿಂದೆ ಹಲವು ಬಾರಿ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡ ಉದಾಹರಣೆಗಳು ನಮ್ಮ ಮುಂದಿದೆ.  1998ರಲ್ಲಿ ಅಂದಿನ ಆಟಲ್ ಬಿಹಾರಿ ವಾಜಪೇಯಿ ಸರ್ಕಾರ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಪಾಕಿಸ್ತಾನ-ಭಾರತ ಯುದ್ಧ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನಿಸುತ್ತಿದ್ದ ಸಮಯ, ಕಾಶ್ಮೀರ ವಿಷಯದಲ್ಲಿ ಸಹ ಉಕ್ರೇನ್ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡಿದೆ. ಹೀಗಿರುವಾಗ ಇಂದು ಉಕ್ರೇನ್ ಪರ ಭಾರತ ನಿರ್ನಯ ತೆಗೆದುಕೊಳ್ಳಲಾಗುತ್ತದೆಯೆ?


ಒಟ್ಟಾರೆಯಾಗಿ ಹೇಳುವುದಾದರೆ ಯುದ್ಧ ಎಂದಿಗೂ ಒಳ್ಳೆಯದಲ್ಲ. ಮಾನವ ವಿಕಾಸದ ಇತಿಹಾಸದಲ್ಲಿ ಅಳಿಸಲಾಗದ ಕಠೋರ ಕಪ್ಪು ಕಲೆ ಎಂದರೆ ಅವು ಯುದ್ಧದ ಕಲೆಗಳು. ಹಾಗಾಗಿ ಇಂದೂ ಸಹ ಕೋಟ್ಯಾಂತರ ಜೀವಹಾನಿಗೆ ಪ್ರೇರಣೆಯಾಗಿರುವ ಯುದ್ಧ ತಕ್ಷಣ ನಿಲ್ಲಲೇಬೇಕು, ಜಗತ್ತು ಶಾಂತಿ ಸೌಹಾರ್ದತೆಯಿಂದ ನಡೆಯುವಂತಾಗಬೇಕು ರಷ್ಯಾ-ಉಕ್ರೇನ್ ಕದನ ಶೀಘ್ರವೇ ಮುಕ್ತಾಯವಾಗಲಿ, ಅದಕ್ಕಾಗಿ ನಮ್ಮೆಲ್ಲರ ಪ್ರಾರ್ಥನೆ ಇರಲಿ. 

15
ಡಿಸೆ

ಮೋದಿಯ ಅಂತರಂಗಲ್ಲಿರುವ ಮಾಧವ; ಮಹಾಭಾರತದಲ್ಲಿ ಭೀಷ್ಮ ಮಾಡಿದ ತಪ್ಪನ್ನು ಈ ಭಾರತದಲ್ಲಿ ಮೋದಿಯಿಂದ ಆಗಲು ಬಿಡಲಿಲ್ಲ!


– ಅಜಿತ್ ಶೆಟ್ಟಿ ಹೆರಂಜೆ

ಕುರುಕ್ಷೇತ್ರದಲ್ಲಿ ಭೀಷ್ಮ ಪಿತಾಮಹರು ಕೌರವರ ಪಕ್ಷದಿಂದ ಯುದ್ಧ ಮಾಡುತ್ತಾರೆ. ಕಾರಣ ಅವರು ತೆಗೆದುಕೊಂಡ ಭೀಷಣ ಪ್ರತಿಜ್ಞೆ. ಭೀಷ್ಮರಿಗೂ ಇದರ ಬಗ್ಗೆ ಹೆಮ್ಮೆ ಇತ್ತು. ಆದರೆ ಅವರಿಗೆ ತಮ್ಮ ಬಗ್ಗೆ ಇದ್ದ ಈ ಅಭಿಮಾನದ ಭ್ರಮನಿರಸನವಾಗಿದ್ದು ಧರ್ಮಕ್ಷೇತ್ರ ಕುರುಕ್ಷೇತ್ರದಲ್ಲಿ. ಭೀಷ್ಮರು ಮಹಾಭಾರತ ಕಾಲದಲ್ಲಿ ಅತ್ಯಂತ ಪರಾಕ್ರಮಿ ಮತ್ತು ಶಕ್ತಿಶಾಲಿ ಯೋಧ. ಅವರನ್ನು ಸೋಲಿಸುವ ಒಬ್ಬನೇ ಒಬ್ಬ ಯೋಧ ಇಡೀ ಆರ್ಯವರ್ತದಲ್ಲಿ ಇರಲಿಲ್ಲ. ಆ ಕಾರಣಕ್ಕೆ ಹಸ್ತಿನಾವತಿಯ ಗೃಹ ಕಲಹದ ನಡುವೆಯೋ ಬೇರೆ ರಾಜರು ಹಸ್ತಿನಾವತಿಯ ಮೇಲೆ ಆಕ್ರಮಣ ಮಾಡಲಿಲ್ಲ. ಹದಿನೆಂಟು ದಿನದ ಮಹಾಭಾರತದ ಯುದ್ಧದಲ್ಲಿ 10 ದಿನ ಭೀಷ್ಮರು ಯುದ್ಧ ಮಾಡುತ್ತಾರೆ. ಆ ಹತ್ತೂ ದಿನ ಅವರು ಪಾಂಡವರ ಸೈನ್ಯವನ್ನು ಧ್ವಂಸ ಮಾಡುತ್ತಾರೆ. ಇನ್ನು ಇವರು ಬದುಕುಳಿದರೆ ಪಾಂಡವರ ಜಯ ಅಸಾಧ್ಯ ಎಂದು ಅರಿತ ಕೃಷ್ಣ, ಭೀಷ್ಮರಿಗೆ ಒಂದೋ ಯುದ್ಧಭೂಮಿಯ ತ್ಯಾಗ ಮಾಡಿ, ಇಲ್ಲಾ ನಾನೇ ನಿಮ್ಮನ್ನು ವಧಿಸುತ್ತೇನೆ ಎಂದವನೇ ಚಕ್ರಧಾರಿಯಾಗಿ ರಣರಂಗದಲ್ಲಿ ಶಸ್ತ್ರ ಹಿಡಿಯುವುದಿಲ್ಲ ಎನ್ನುವ ತನ್ನ ಪ್ರತಿಜ್ಞೆಯನ್ನ ತಾನೇ ಮುರಿಯುತ್ತಾನೆ. ಆಗ ಅರ್ಜುನ, ಮಾಧವ ಲೋಕ ನಿನ್ನನ್ನು ವಚನ ಭ್ರಷ್ಟ ಎಂದು ಆಡಿಕೊಳ್ಳುತ್ತದೆ ಅಂದಾಗ, ಕೃಷ್ಣ “ನನಗೆ ಲೋಕ ಹಿತ ಮುಖ್ಯವೇ ಹೊರತು ನನ್ನ ವೈಯಕ್ತಿಕ ಪ್ರತಿಷ್ಠೆಗಳಲ್ಲ. ಒಂದೋ ನೀನು ಭೀಷ್ಮರನ್ನು ಕೊಲ್ಲು, ಇಲ್ಲವಾದರೆ ನಾನು ಕೊಲ್ಲುತ್ತೇನೆ” ಎನ್ನುತ್ತಾನೆ. ಆಗ ಕೃಷ್ಣ ಮತ್ತು ಭೀಷ್ಮರಲ್ಲಿ ಒಂದಷ್ಟು ಧರ್ಮಸೂಕ್ಷ್ಮಗಳ ಚರ್ಚೆ ನಡೆಯುತ್ತದೆ. “ನಾನು ಕೊಟ್ಟ ವಚನವನ್ನು ಸದಾ ನಿಭಾಯಿಸುತ್ತಲೇ ಬಂದೆ. ಎಷ್ಟೇ ಕಷ್ಟವಾದರೂ ನಾನು ನನ್ನ ಪ್ರತಿಜ್ಞೆಯ ಭಂಗ ಮಾಡಲ್ಲಿಲ್ಲ. ಆ ಮೂಲಕ ಸದಾ ಧರ್ಮದ ಮಾರ್ಗದಲ್ಲಿ ನನ್ನ ಜೀವನದ ಉದ್ದಕ್ಕೂ ನಡೆದೆ” ಎನ್ನುತ್ತಾರೆ ಭೀಷ್ಮರು. ಆಗ ಕೃಷ್ಣ “ದೃತರಾಷ್ಟ್ರನಂತಹ ಒಬ್ಬ ಅಪಾತ್ರ ಹಸ್ತಿನಾವತಿಯ ಸಿಂಹಾಸನ ಏರುವುದರಿಂದ ಹಿಡಿದು ಇವತ್ತಿನ ಈ ಭಾರತ ಯುದ್ಧದ ಎಲ್ಲಾ ಅಧರ್ಮಕ್ಕೆ ನಿನ್ನ ಪ್ರತಿಜ್ಞೆಯೇ ಕಾರಣ. ಭಗವಂತ ನಿನ್ನ ಸರ್ವಶಕ್ತನನ್ನಾಗಿ ಮಾಡಿದ್ದ, ನಿನ್ನಲ್ಲಿ ಧರ್ಮ ಜ್ಞಾನ ಇತ್ತು, ಬಾಹುಬಲ ಇತ್ತು. ಈ ಮೂಲಕ ನೀನು ನಿನ್ನ ಪ್ರಜಾ ವರ್ಗದ ಹಿತವನ್ನು ಕಾಪಾಡಬೇಕಿತ್ತು. ಆದರೆ ನಿನ್ನ ಜೀವನದ ಉದ್ದಕ್ಕೂ ಆದ ಅಧರ್ಮಗಳನ್ನು ನೋಡಿ ಅದನ್ನ ತಡೆಯುವ ಸಾಮರ್ಥ್ಯವಿದ್ದರೂ ನಿನ್ನ ಪ್ರತಿಜ್ಞೆಗೆ ಕಟ್ಟುಬಿದ್ದು ಎಲ್ಲವನ್ನೂ ಆಗಲು ಬಿಟ್ಟೆ. ಲೋಕ ಹಿತಕ್ಕೆ ಉಪಯೋಗವಾಗದ ನಿನ್ನ ಸಾಮರ್ಥ್ಯ ಇದ್ದರೆಷ್ಟು ಬಿಟ್ಟರೆಷ್ಟು? ಇದು ನೀನು ಭಗವಂತನಿಗೂ ಮಾಡುವ ಅವಮಾನವಲ್ಲವೇ? ನೀನು ಸದಾ ನಿನ್ನ ಪ್ರತಿಜ್ಞೆಗಾಗಿ ಬದುಕಿದೆಯೇ ಹೊರತು,ಸಮಾಜಕ್ಕಾಗಿ ನಿನ್ನ ಸ್ವಜನರ ಕಲ್ಯಾಣಕ್ಕಾಗಿ ಬದುಕಲೇ ಇಲ್ಲ. ಅದರಿಂದ ಆದ ಅನಾಹುತಗಳು ಅನರ್ಥಗಳೆ ಹೆಚ್ಚು. ಭೀಮನಿಗೆ ವಿಷಪ್ರಾಶನ ಆದಾಗ, ಪಾಂಡವರಿಗೆ ಹಸ್ತಿನಾವತಿಯ ಅಧಿಕಾರ ಸಿಗದಿದ್ದಾಗ, ಅರಗಿನ ಮನೆಯಲ್ಲಿ ಪಾಂಡವರನ್ನು ಸುಡುವ ಯೋಜನೆ ಆದಾಗ, ಮೋಸದ ದ್ಯೂತ ಆಗುವಾಗ, ದ್ರೌಪದಿ ವಸ್ತ್ರಾಪಹರಣ ಆಗುವಾಗ, ಈಗ ಧರ್ಮ ಸ್ಥಾಪನೆಯ ಕಾರಣಕ್ಕೆ ಭಾರತ ಯುದ್ಧ ಆಗುತ್ತಿರುವಾಗಲೂ ನಿನ್ನ ಸಾಮರ್ಥ್ಯವನ್ನು ನಿನ್ನ ಪ್ರತಿಜ್ಞೆಯನ್ನು ಕಾಪಾಡಲು ವಿನಿಯೋಗ ಮಾಡುತ್ತಿರುವೆಯೇ ಹೊರತು ಧರ್ಮದ ರಕ್ಷಣೆಗೆ ನೀನು ಏನೂ ಮಾಡುತ್ತಿಲ್ಲ. ನಿಯತಿ ಕಾರ್ಯಕ್ಕೆ ಅಡ್ಡಿಯಾಗಿ ನಿಂತಿದ್ದೆ. ನನಗೆ ಧರ್ಮ ಸ್ಥಾಪನೆ ಮುಖ್ಯವೇ ಹೊರತು ನನ್ನ ಸ್ವಪ್ರತಿಷ್ಟೆ ಅಲ್ಲ. ಲೋಕ ಕಲ್ಯಾಣಕ್ಕೆ ಇಂತಹ ಸಾವಿರ ಅಪರಾಧಗಳನ್ನು ಬೇಕಿದ್ದರೆ ಸಹಿಸಿಕೊಳ್ಳಬಲ್ಲೆ. ನಾವು ಯಾವುದೋ ಕಾಲಘಟ್ಟದಲ್ಲಿ ಆ ಪರಿಸ್ಥಿಗೆ ಅನುಗುಣವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ಆದರೆ ಬದಲಾದ ಸನ್ನಿವೇಶದಲ್ಲಿ ಅದೇ ನಿರ್ಣಯಗಳು ಸಮಾಜದ ಹಿತಕ್ಕೆ ಧಕ್ಕೆ ಆಗುವಂತಿದ್ದರೆ ಅಥವಾ ಅದನ್ನೇ ಕಾರಣ ಮಾಡಿ ದುಷ್ಟರು ಸಮಾಜದಲ್ಲಿ ಅಧರ್ಮ ಮಾಡುತ್ತಿದ್ದಾರೆ ಅಂದಾಗ ಸ್ವಪ್ರತಿಷ್ಟೆಯನ್ನು ಬಿಟ್ಟು ಸಮಾಜದ ಹಿತಕ್ಕಾಗಿ ಅಂತಹ ನಿರ್ಣಯಗಳ ಕೈಬಿಡಬೇಕು. ಅದೇ ಧರ್ಮ!” ಎಂದ ಕೃಷ್ಣ, ಜೀವನಪೂರ್ತಿ ತನ್ನ ಪ್ರತಿಜ್ಞೆಗಾಗಿ ಬದುಕಿದ ಭಿಷ್ಮರನ್ನು ವಧಿಸಲು, ಆ ಮೂಲಕ ಧರ್ಮ ಸ್ಥಾಪನೆ ಮಾಡಲು ತಾನು ಮಾಡಿದ ಪ್ರತಿಜ್ಜೆಯನ್ನೇ ಮುರಿಯಲು ಮುಂದಾಗುತ್ತಾನೆ.

ಪ್ರಧಾನಿ ಮೋದಿ ನವೆಂಬರ್‌ 19ರ ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ತಾವು ರೈತರ ಹಿತಕಾಯುವ ಉದ್ದೇಶದಿಂದ ಒಂದು ವರ್ಷ ಮೂರು ತಿಂಗಳ ಹಿಂದೆ ಜಾರಿಗೆ ತಂದಿದ್ದ ತ್ರಿವಳಿ ಕೃಷಿ ಸುಧಾರಣಾ ಮಸೂದೆಯನ್ನು ವಾಪಾಸು ಪಡೆಯುವುದಾಗಿ ಘೊಷಣೆ ಮಾಡಿದರು. ಈ ಮೂರು ಕೃಷಿ ಸುಧಾರಾಣಾ ಮಸೂದೆಗಳು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಸುಧಾರಣೆಗಳಾಗಿದ್ದವು. ಕರ್ನಾಟಕದ ರೈತ ಹೋರಾಟದ ಪಿತಾಮಹಾ ಎಂದೇ ಖ್ಯಾತಿಯಾಗಿದ್ದ ಪ್ರೊ.ನಂಜುಂಡ ಸ್ವಾಮಿಯಿಂದ ಹಿಡಿದು ಉತ್ತರ ಭಾರತದಲ್ಲಿ ರೈತ ಕ್ರಾಂತಿಯ ಹರಿಕಾರ ಚೌಧರಿ ಚರಣ್‌ಸಿಂಗ್ ಆದಿಯಾಗಿ ದಶಕಗಳಿಂದ ಇಟ್ಟ ಬೇಡಿಕೆಗಳು ಅಕ್ಷರಶಃ ಈ ಕಾಯಿದೆಯ ಮುಖಾಂತರ ಅನುಷ್ಠಾನಕ್ಕೆ ಬಂದವು. ಕೇವಲ ದೇಶದ ರೈತ ಹೋರಾಟಗಳು ಮಾತ್ರವಲ್ಲ, ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಅವರುಗಳು ವಿರೋಧ ಪಕ್ಷದಲ್ಲಿ ಇದ್ದಾಗ ರೈತರ ಇದೇ ಬೇಡಿಕೆಗಳನ್ನು ಮುಂದಿಟ್ಟು ಆಳುವ ಸರಕಾರಗಳ ವಿರುದ್ಧ ಪ್ರತಿಭಟನೆಗೂ ಕೂತಿದ್ದವು. ಅದೆಲ್ಲವನ್ನು ಅಕ್ಷರಶಃ ಅನುಷ್ಟಾನಕ್ಕೆ ತರುವ ಕಾಯಿದೆಯನ್ನು ಮೋದಿ ಸರಕಾರ ಕಳೆದ ವರ್ಷ‌ ಸೆಪ್ಟಂಬರ್‌ ತಿಂಗಳಿನಲ್ಲಿ ತಂದಿತು. ಮಧ್ಯವರ್ತಿಗಳ ಕಪಿಮುಷ್ಠಿಯಿಂದ ರೈತರನ್ನು ಮುಕ್ತಗೊಳಿಸಿ, ರೈತರು ತಾವು ಉತ್ಪಾದಿಸಿದ ಬೆಳೆಗೆ ತಾವೇ ಬೆಲೆ ನಿಗದಿಪಡಿಸಿ ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯದ ಜೊತೆಗೆ ವಾಣಿಜ್ಯಕ್ಕೆ ಖಾಸಗೀ ಕಂಪೆನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಕಾನೂನಿನ ರಕ್ಷಣೆಯೊಂದಿಗೆ ಕೃಷಿ ಮಾಡುವ ಅವಕಾಶವನ್ನೂ ಈ ಕಾಯಿದೆ ರೈತರಿಗೆ ಕೊಟ್ಟಿತು. ದುರಂತ ಅಂದರೆ ಮೋದಿ ಕಳೆದ 7 ವರ್ಷಗಳಿದೆ ಕೇವಲ ವಿರೋಧಿಸುವ ಕಾರಣಕ್ಕೆ ವಿರೋಧ ಮಾಡುತ್ತಿದ್ದ ಎಲ್ಲಾ ವಿರೋಧ ಪಕ್ಷಗಳು ಹಿಂದೆ ತಾವೇ ಧರಣಿ ಕೂತು ಜಾರಿಯಾಗಲೇಬೇಕು ಎಂದ ಕಾನೂನು ಜಾರಿಗೆ ಬಂದಾಗ ಅದನ್ನ ಸ್ವಾಗತಿಸುವ ಬದಲು ವಿರೋಧಿಸಲು ಮುಂದಾದರು. ಕೇಂದ್ರ ಸರಕಾರ ಈ ರೈತ ಸಂಘಟನೆಗಳ ಜತೆಗೆ ಸುಮಾರು 12 ಸುತ್ತಿನ ಮಾತುಕತೆ ನಡೆಸಿದರೂ ಅವರು ತಮ್ಮ ವಿತಂಡವಾದದ ಪಟ್ಟನ್ನು ಸಡಿಸಲೇ ಇಲ್ಲ. ರೈತ ಮಸೂದೆ ಕಾಯಿದೆಯ ಯಾವ ಅಂಶದಲ್ಲಿ ನಿಮಗೆ ಸಮಸ್ಯೆ ಇದೆ ಚರ್ಚಿಸೋಣ ಎಂದರೆ ಅದಕ್ಕೂ ಅವರು ಸಿದ್ದರಿರಲಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ಮತ್ತು ಅದಕ್ಕೂ ಪೂರ್ವದ ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಕೂಡ ಆಳುವ ಸರಕಾರಗಳು ಎಲ್ಲಾ ನಿಲುವುಗಳು ಬಹುತೇಕ ರೈತ ವಿರೋಧಿಗಳೇ ಆಗಿದ್ದವು. 2ನೇ ವಿಶ್ವ ಯುದ್ಧದ ಕಾಲದಲ್ಲಿ ಬ್ರಿಟಿಷ್‌ ಸರಕಾರ ತಂದ ಎಪಿಎಮ್‌ಸಿ ಕಾಯಿದೆ ಭಾರತದಲ್ಲಿ ಕೃತಕ ಅಹಾರ ಧಾನ್ಯಗಳ ಅಭಾವ ಸೃಷ್ಟಿ ಮಾಡಿತು. ಬಂಗಾಳದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಹಸಿವಿನಿಂದ ಸತ್ತರು. ಅಲ್ಲಿಂದ ಪ್ರಾರಂಭವಾಗಿ 2020ರ ಕೃಷಿ ಸುಧಾರಣಾ ನೀತಿ ಬರುವ ತನಕ ಭಾರತದ ರೈತನ ಬದುಕು ಸುಧಾರಿಸುವ ಯಾವುದೇ ನೀತಿಗಳು ಜಾರಿಯಾಗಲೇ ಇಲ್ಲ. ಈ ಕಾರಣಕ್ಕೆ ರೈತರು ಸರಕಾರದ ವಿರುದ್ಧ ನಿರಂತರವಾಗಿ ಪ್ರತಿಭಟಿಸುತ್ತ ಬಂದ. ರೈತನ ಮನಸ್ಸಿನಲ್ಲಿ ಸರಕಾರಗಳು ರೈತವಿ ರೋಧಿಗಳು ಅನ್ನುವ ಭಾವನೆ ಅಚ್ಚೊತ್ತಿತು. ನಮ್ಮ ದೇಶದ ಎಡಪಂಥೀಯ ಪಕ್ಷಗಳಿಗೆ ಇಂತಹಾ ಮನಃಸ್ಥಿತಿಯ ರೈತ ಸಮುದಾಯಗಳನ್ನು ತಮ್ಮತ್ತ ಸೆಳೆದುಕೊಳ್ಳುವುದು ಕಷ್ಟವಾಗಲಿಲ್ಲ. ಇಂತವರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ದೇಶದೊಳಗೆ ಹಲವಾರು ವಿಧ್ವಂಸಕ ಕೆಲಸಗಳನ್ನು ಮಾಡುತ್ತಲೇ ಬಂದರು. ಈ ದೇಶದಲ್ಲಿ ರೈತನನ್ನು ಅನ್ನದಾತ ಎಂದೇ ಕಾಣುತ್ತೇವೆ ಮತ್ತು ಸರಕಾರಗಳು ಇವರ ಹೋರಾಟ, ಪ್ರತಿಭಟನೆ ಎಲ್ಲದರ ಬಗ್ಗೆಯ ಹೆಚ್ಚು ಸಹಿಷ್ಣುಗಳಾಗಿರುತ್ತಿದ್ದವು. ರೈತರನ್ನು ಬಳಸಿಕೊಂಡು ಪ್ರತಿಭಟನೆ ಮಾಡಿದರೆ ಸರಕಾರಗಳು ನಮ್ಮನ್ನು ಏನೂ ಮಾಡಲಾರವು. ಒಂದೊಮ್ಮೆ ಅವುಗಳನ್ನು ಬಲಪೂರ್ವವಾಗಿ ಹತ್ತಿಕ್ಕಲು ಸರಕಾರ ಮುಂದಾದರೆ ಅಂತಹಾ ಘಟನೆಗಳನ್ನು ಸಮಾಜ ಯಾವತ್ತೂ ಸಹಿಸಿಕೊಂಡಿರಲಿಲ್ಲ ಅನ್ನುವುದರ ಅರಿವು ಅವರಿಗಿತ್ತು. ಕರ್ನಾಟಕದಲ್ಲಿ 1980ರ ನರಗುಂದ-ನವಲಗುಂದದಲ್ಲಿ ಆದ ರೈತ ಬಂಡಾಯದಲ್ಲಿ ಅಂದಿನ ಸರಕಾರ ತಾಳ್ಮೆ ಕಳೆದುಕೊಂಡ ಮಾಡಿದ ಗೋಲಿಬಾರ್‌ ಮುಂದಿನ ದಿನಗಳಲ್ಲಿ ಗುಂಡೂರಾವ್‌ ಅವರ ಸರಕಾರವನ್ನೇ ಬಲಿತೆಗೆದುಕೊಂಡಿತ್ತು. ಇದೆಲ್ಲದರಿಂದ ಹುಟ್ಟಿದ ಅನೇಕ ರೈತ ಸಂಘಟನೆಗಳು, ಒಂದಷ್ಟು ನಾಯಕರು, ಉದಾಹರಣೆಗೆ ಪ್ರೊ. ನಂಜುಂಡ್‌ಸ್ವಾಮಿ, ಚೌಧರಿ ಚರಣ ಸಿಂಗ್‌, ಟಿಕಾಯತ್‌ ಅಂತವರು ರೈತರ ನೈಜ ಕಾಳಜಿಯನ್ನು ತೋರಿದರಾದರೂ, ಅವರ ನಂತರ ಬಂದವರೆಲ್ಲರೂ ರೈತ ಹೋರಾಟದ ನೆಪದಲ್ಲಿ ತಮ್ಮ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರಗಳಿಗೆ ರೈತ ಹೋರಾಟಗಳನ್ನು ಬಳಸತೊಡಗಿದರು. ರೈತರೂ ತಮಗೆ ಅರಿವಿಲ್ಲದೇ ಈ ವೀಷ ವರ್ತುಲದಲ್ಲಿ ಸಿಕ್ಕಿಕೊಂಡರು. ಇಂತಹಾ ರಾಜಕೀಯ ಸ್ವಾರ್ಥ ಭರಿತ ಹೋರಾಟದ ಉಗ್ರ ಸ್ವರೂಪವೇ ದೆಹಲಿಯಲ್ಲಿ ರಾಕೇಶ್‌ ಸಿಂಗ್‌ ಟಿಕಾಯತ್‌ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವುದು.

ಕಾಯಿದೆ ಜಾರಿಯಾದಾಗಿನಿಂದ ಇಲ್ಲಿಯ ತನಕ ಮಧ್ಯವರ್ತಿಗಳೂ ಒಂದಿಷ್ಟು ಅಮಾಯಕ ರೈತರನ್ನು ಮುಂದಿಟ್ಟು ದೆಹಲಿ ಪರಿಸರದಲ್ಲಿ ಈ ಕಾಯಿದೆಯನ್ನು, ರೈತ ವಿರೋಧಿ ಪ್ರತಿಭಟನೆಯನ್ನಾಗಿ ಮಾಡಲು ಪ್ರಾರಂಭಿದರು. ಹೀಗೆ ಪ್ರಾರಂಭವಾದ ಪ್ರತಿಭಟನೆ ಆರಂಭದಲ್ಲಿ ಇಂದೊದು ಪ್ರತಿಕ್ರಿಯೆ ಅಷ್ಟೇ ಎಂದು ಭಾವಿಸಲಾಗಿತ್ತು. ನಂತರದ ದಿನಗಳಲ್ಲಿ ಆದ ಬೆಳವಣಿಗೆಯಿಂದ ಇದು ದೆಹಲಿಯ CAA ಪ್ರತಿಭಟನೆಯ ಮುಂದುವರಿದ ಭಾಗವಾಗಿದ್ದು. ಇದು ಸಂಪೂರ್ಣ ಪೂರ್ವಯೋಜಿತ ಮತ್ತು ಪೂರ್ವ ನಿರ್ಧಾರಿತ ಅನ್ನುವುದು ಅರಿಯಲು ಬಹಳ ಕಾಲ ಬೇಕಾಗಿರಲಿಲ್ಲ. ದೇಶದ ಹಿತ ದೃಷ್ಟಿಯಿಂದ ಮೋದಿ ಸರಕಾರ ಕೈಗೊಂಡ ಅನೇಕ ನಿರ್ಧಾರಗಳು ಇಷ್ಟು ದಿನ ಭಾರತದ ಆಂತರಿಕ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಅನೇಕ ಸಂಘಟನೆಗಳು ಎನ್‌ಜಿಓಗಳ ಪ್ರಭಾವಗಳನ್ನು ಹತ್ತಿಕ್ಕಿತ್ತು. ವಿದೇಶಗಳಿಂದ ಇಂತಹ ಸಂಘಟನೆಗಳಿಗೆ ಲೆಕ್ಕವಿಲ್ಲದಷ್ಟು ಬರುತ್ತಿದ್ದ ಕೋಟ್ಯಂತರ ರುಪಾಯಿ ವಿದೇಶಿ ಅನುಧಾನಗಳನ್ನು ಮೋದಿಯರು 2020ರಲ್ಲಿ ತಂದ FCRA ತಿದ್ದುಪಡಿ ಕಾಯಿದೆಯಿಂದಾಗಿ ಸರಕಾರಿ ನಿಯಂತ್ರಣಕ್ಕೆ ಬಂದಿತು. ಇದೆಲ್ಲದರ ಜೊತೆಗೆ ಜಾಗತಿಕ ರಾಜಕಾರಣದಲ್ಲಿ ಮೋದಿಯವರ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಯಾವ ವ್ಯಕ್ತಿಗೆ ಅಮೇರಿಕಾ ವಿಸಾ ಕೊಡಬಾರದು ಎಂದು ಅಮೇರಿಕಾದ ಸರಕಾರದ ಮಂದೆ ಮಂಡಿಯೂರಿ ಗೋಗರೆದರೂ ಅದೇ ವ್ಯಕ್ತಿ ಈಗ ಅವರ ಕಣ್ಣಮುಂದೆ ವಿಶ್ವದ ಅತ್ಯಂತ ಪ್ರಭಾವಿ ನಾಯಕನಾಗಿ ಬೆಳದಿದ್ದ. ಹೀಗೆ ದೇದೀಪ್ಯಮಾನವಾಗಿ ಬೆಳಗುತ್ತಿದ್ದ ಮೋದಿ ಮತ್ತು ಭಾರತದ ವರ್ಚಸ್ಸಿಗೆ ಹೇಗಾದರೂ ಮಾಡಿ ಧಕ್ಕೆ ತರಬೇಕಾಗಿತ್ತು. ಭಾರತದ 5G ಇಂಟರ್ನೆಟ್‌ ಸಂಪರ್ಕದ ಗುತ್ತಿಗೆ ಚೀನಾದ ಹ್ವುವೆ ಕಂಪೆನಿಯ ಬದಲು ಭಾರತದ ಜಿಯೋದ ಪಾಲಾಗಿತ್ತು. ಇದರಿಂದ ಚೀನಾಕ್ಕೆ ಜಾಗತಿಕ ಮಟ್ಟದಲ್ಲಿ ಅವಮಾನದ ಜೊತೆಗೆ ಭಾರಿ ಆರ್ಥಿಕ ನಷ್ಟವೂ ಆಗಿತ್ತು. ಅದಕ್ಕೆ ಮೋದಿಯನ್ನು ಹಣಿಯಲು ರೈತ ಕಾಯಿದೆಯನ್ನು ಬಳಸಿಕೊಂಡರು. ಇವರ ಸ್ವಾರ್ಥ ರಾಜಕಾರಣಕ್ಕೆ ಅಮಾಯಕ ರೈತರು ದಾಳವೂ ಆದರು, ಗುರಾಣಿಯೂ ಆದರು. ಈ ಕಾಯಿದೆಯಿಂದ ಪೆಟ್ಟು ಬಿದ್ದದ್ದು ಎಪಿಎಮ್‌ಸಿಯ ಮಧ್ಯವರ್ತಿಗಗಳಿಗೆ, ಅವರು ಹೇಗೆ ಸುಮ್ಮನಿರಲು ಸಾಧ್ಯ? ಆ ಕಾರಣಕ್ಕೆ NDA ಒಕ್ಕೂಟದ ಮಿತ್ರ ಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳ ಈ ಕಾಯಿದೆಯನ್ನು ವಿರೋಧಿಸಿ ಸರಕಾರದಿಂದ ಹೊರನಡೆಯಿತು. ಪಂಜಾಬಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಏಕಸ್ವಾಮ್ಯ ಅವರಲ್ಲಿತ್ತು, ಕೇವಲ ದಲ್ಲಾಳಿಕೆಯಲ್ಲಿ ವಾರ್ಷಿಕ ಸುಮಾರು 400 ಕೋಟಿ ಕಮಿಶನ್‌ ಗಳಿಸುತ್ತಿದ್ದರು. ಈ ವ್ಯವಸ್ಥೆಯನ್ನು ಕಾಪಿಡಲೆಂದೇ ರಾಜಕಾರಣಕ್ಕೆ ಬಂದವರು, ಅದರ ಬುಡಕ್ಕೆ ಪೆಟ್ಟುಬಿದ್ದಾಗ ಸಹಿಸಿಕೊಂಡಾರೋ? ಖಂಡಿತಾ ಇಲ್ಲ. ಪಂಜಾಬಿನ ರೈತರನ್ನು ಕೇಂದ್ರ ಸರಕಾರದ ವಿರುದ್ದ ಎತ್ತಿ ಕಟ್ಟಿದರು. ಇವರ ಜೊತೆಗೆ ಮೋದಿಯಿಂದ ನೊಂದ, ಮೋದಿಯ ಕಾರಣಕ್ಕೆ ತಮ್ಮ ಅಸ್ತಿತ್ವ ಕಳೆದಕೊಳ್ಳುತ್ತಿರುವ ಅಷ್ಟೂ ಸಂಘಟನೆಗಳು, ವ್ಯಕ್ತಿಗಳು ಒಟ್ಟಿಗೆ ಸೇರಿ ರೈತರನ್ನು ಮುಂದೆ ಬಿಟ್ಟು ವ್ಯವಸ್ಥಿತ ಪ್ರತಿಭಟನೆಗೆ ಮುಂದಾದರು. ಇವರ ಉದ್ದೇಶ ಇದ್ದದ್ದು ಇಷ್ಟೆ ಮೋದಿಯವರಿಗೆ ನರ ಹಂತಕ ಎಂಬ ಹಣೆಪಟ್ಟಿ ಕಟ್ಟಬೇಕು, ಮೋದಿಯನ್ನು ರೈತ ವಿರೋಧಿ, ರೈತ ಹಂತಕ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಬೇಕು. ಮೋದಿಯನ್ನು ಈ ವ್ಯೂಹದಲ್ಲಿ ಕೆಡವಬೇಕು ಎನ್ನುವ ಕಾರಣಕ್ಕೆ ರೈತ ಹೋರಾಟದ ಹೆಸರಿನಲ್ಲಿ ಆಡಬಾರದ ಆಟಗಳೆನ್ನಲ್ಲಾ ಆಡಿದರು. ಇಲ್ಲದೇ ಹೋದರೆ ಪಂಜಾಬಿನಲ್ಲಿ ಕೃಷಿ ಮಸೂದೆಯ ವಿರುದ್ಧ ಹೋರಾಟ ಮಾಡುತ್ತಿದ್ದ ರೈತರು ರಾಜ್ಯಾದ್ಯಂತ ಜಿಯೋ ಕಂಪನಿಯ ಮೊಬೈಲ್‌ ಟವರ್‌ ಕೆಡೆಯುವ ಆವಶ್ಯಕತೆ ಏನಿತ್ತು? ಈ ರೈತ ಮಸೂದೆಯ ಹೋರಾಟಕ್ಕೂ ಜೀಯೋ ಕಂಪನಿಯ ಮೊಬೈಲ್‌ ಟವರಿಗೂ ಏನು ಸಂಬಂಧ? ಇವರು 1500 ಮೋಬೈಲ್ ಟವರ್‌ಗಳನ್ನು ದ್ವಂಸಮಾಡಿದರು. ಜನವರಿ 26 2021ರಂದು ದೆಹಲಿಯ ಕೆಂಪುಕೋಟೆಗೆ ನುಗ್ಗಿ ಅಲ್ಲಿ ಭಾರತದ ತ್ರಿವರ್ಣ ಬದಲು ಬೇರೆ ದ್ವಜ ಹಾರಿಸಿದರು. ಈ ಗಲಾಟೆಯಲ್ಲಿ ರೈತರು ತಮ್ಮ ಟ್ರಾಕ್ಟರ್ ಗಳಿಗೆ ಆರ್ಮರ್‌ ಪ್ಲೇಟ್‌ ಹಾಕಿಸಿಕೊಂಡು ಅದನ್ನು ಯೋದ್ಧ ಟ್ಯಾಂಕುಗಳಂತೆ ದೆಹಲಿ ಬೀದಿಬೀದಿಗಳಲ್ಲಿ ಓಡಿಸಿ ದಾಂಧಲೆ ಮಾಡಿದರು. ಈ ಗಲಾಟೆಯಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಪೋಲೀಸರಿಗೆ ಗಾಯವಾದವು, ಕೋವಿಡ್‌ ಸಮಯದಲ್ಲೂ ರೋಗ ಸಂಕ್ರಮಣ ಆಗಬೇಕು ಎಂಬ ದುರದ್ದೇಶದಿಂದಲೇ ಲಸಿಕೆ ಹಾಕಿಸಲು ಬಿಡಲಿಲ್ಲ, ಜೊತೆಗೆ ಲಸಿಕೆಯ ಬಗ್ಗೆ ಅಪಪ್ರಚಾರವನ್ನೂ ಮಾಡಿದರು. ಸಿಂಘೂ ಗಡಿ ಪ್ರದೇಶದಲ್ಲಿ ವಾಸವಿದ್ದ ಹಳ್ಳಿಯ ಜನರು ಇವರ ಮೇಲೆ ಅತ್ಯಾಚಾರ ದರೋಡೆಯಂತಹ ಗಂಬೀರ ಆರೋಪ ಮಾಡಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಪಂಜಾಬಿನ ಸಿಕ್ಖರೇ ಹೆಚ್ಚಿದ್ದ ಪ್ರತಿಭಟನೆಯಲ್ಲಿ ಖಲಿಸ್ಥಾನಿಯ ಉಗ್ರರೂ ಸೇರಿಕೊಂಡರು. ಕೆಂಪು ಕೋಟೆಯಲ್ಲಿ ತ್ರಿವರ್ಣಧ್ವಜ ತೆಗೆದು ಮತೀಯ ದ್ವಜ ಹಾರಿಸಿದ ದೀಪ್‌ ಸಿದ್ದುವನ್ನು ಬಂಧಿಸಿದ ಪೋಲಿಸರಿಗೆ, ಈತನಿಗೆ ಖಲಿಸ್ಥಾನಿ ಉಗ್ರ ಸಂಘಟನೆಯ ಭಾಗಾವಗಿರುವ SFJ (Sikhs for Justice) ಎಂಬ ಗುಂಪಿನ ನಡುವೆ ಸಂಪರ್ಕ ಇರುವುದು ತಿಳಿಯಿತು. ಕಳೆದ ಒಂದು ವರ್ಷದಿಂದ ಭಾರತ ಪಾಕಿಸ್ಥಾನ ಗಡಿಯಲ್ಲಿ ಅದರಲ್ಲೂ ಪಂಜಾಬಿನ ಗಡಿ ಪ್ರದೇಶದಲ್ಲಿ ಪಾಕಿಸ್ಥಾನದಿಂದ ಡ್ರೋನ್‌ಗಳು ದೇಶದ ಗಡಿ ಪ್ರವೇಶಿಸಿ ಅದರ ಮುಖಾಂತರ ಶಸ್ತ್ರಾಸ್ತ್ರ, ಡ್ರಗ್‌ಗಳನ್ನು ರವಾನಿಸುವವ ಕೆಲಸ ಹೆಚ್ಚಾಗತೊಡಗಿತು. ಎಲ್ಲಿಯ ತನಕ ಪಂಜಾಬಿನ ಆಡಳಿತದ ಚುಕ್ಕಾಣಿ ಕ್ಯಾಪ್ಟನ್‌ ಅಮರಿಂದರ್ ಅವರ ಬಳಿ ಇತ್ತೋ ಅವರು ರೈತ ಹೋರಾಟ ಮತ್ತು ದೇಶದ ಭದ್ರತೆಯ ನಡುವೆ ಎಲ್ಲೂ ಹೊಂದಾಣಿಕೆಮಾಡಿಕೊಳ್ಳದೆ ಒಂದು ಹಂತದ ತನಕವಷ್ಟೇ ಈ ರೈತ ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದರು.

ಅಫ್ಘಾನಿಸ್ಥಾದಲ್ಲಿ ತಾಲಿಬಾನಿನ ಆಡಳಿತ ಪ್ರಾರಂಭವಾದ ಮೇಲಂತೂ ಭಾರತದ ಗಡಿಯೊಳಗೆ ದ್ರೋಣ್‌ ಮುಖಾಂತರ ಮಾದಕ ವಸ್ತುಗಳನ್ನು ಕಳಿಸುವ ಪ್ರಮಾಣ ಇನ್ನೂ ಹೆಚ್ಚಾಯಿತು. ಕ್ಯಾಪ್ಟನ್‌ ಅಮರಿಂದರ್‌ ಸಿಂಗ್ ಇರುವ ತನಕ ಇದರ ಬಗ್ಗೆ ರಾಜ್ಯ ಪೊಲೀಸರಿಗೆ ಸಿಗುತ್ತಿದ್ದ ಗುಪ್ತಚರ ಮಾಹಿತಿ ಎಲ್ಲವೂ ಅವರು ಕೆಂದ್ರದ ಜೊತೆ ಹಂಚಿಕೊಳ್ಳುತ್ತಿದ್ದರು. ಯಾವಾಗ ಅವರು ರಾಜಿನಾಮೆ ಕೊಟ್ಟು ಹೊರೆನೆಡದು ಚರಣ್ಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾದರೋ, ಎಲ್ಲವೂ ಬದಲಾಯಿತು. ಗಡಿಯಾಚೆ ಭಾರತದ ವಿರುದ್ಧ ಚೀನಾ ಮತ್ತು ಪಾಕಿಸ್ಥಾನ ಯುದ್ಧದ ತಯಾರಿ ಹೆಚ್ಚಿಸುತ್ತಲೆ ಇದ್ದವು. ಗಡಿಯೊಳಗೆ ಪಾಕಿಸ್ಥಾನ ಡ್ರೋಣ್‌ ಮುಖಾಂತರ ವಿಧ್ವಂಸಕ ಚಟುವಟಿಕೆ ನಡೆಸುವುದು ಹೆಚ್ಚಾಯಿತು. ಇವುಗಳ ತೀವ್ರತೆ ಮನಗೊಂಡ ಕೇಂದ್ರ ಸರಕಾರ ಗುಜರಾತಿನಿಂದ ಬಂಗಾಳದ ತನಕ ದೇಶದ ಅಂತಾರಾಷ್ಟ್ರೀಯ ಗಡಿಯಿಂದ ೫೦ ಕಿಮಿ ಒಳಗಿನ ತನಕ ಯಾವುದೇ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾದರೂ ಅದನ್ನು ಅಲ್ಲಿಯ ಸ್ಥಳಿಯ ಪೊಲೀಸರ ಬದಲು ಗಡಿ ನಿಯಂತ್ರಣ ಪಡೆಯ ಅಧಿಕಾರಿಗಳು ನಿಭಾಯಿಸಬೇಕು ಎಂಬ ಆದೇಶ ಹೊರಡಿಸಿತು. ಇದನ್ನು ಪಂಜಾಬಿನ ಚನ್ನಿ ಸರಕಾರ ಸದನದಲ್ಲಿ ಒಂದು ನಿಲುವಳಿ ಜಾರಿಗೆ ತಂದು ವಿರೋಧಿಸಿತು. ಖಲಿಸ್ಥಾನಿ ಉಗ್ರ ಸಂಘಟನೆಯನ್ನು ಒಬ್ಬಂಟಿಯಾಗಿ ಬಲಪ್ರಯೋಗ ಮುಖಾಂತರ ನಿಭಾಯಿಸಬಹುದು. ಆದರೆ ಅದು ಯಾವಾಗ ರೈತ ಹೋರಾಟದ ಮುಖವಾಡ ಹಾಕುತ್ತದೆಯೋ ಅದನ್ನು ಬಲಪ್ರಯೋಗದ ಮುಖಾಂತರ ಹತ್ತಿಕ್ಕುವುದು ಕಷ್ಟವಾಗುತ್ತದೆ. ಇದರ ಜೊತೆಗೆ ದೇಶದ ನ್ಯಾಯಾಂಗ ವ್ಯವಸ್ಥೆ ಕೂಡ ಇಂತಹಾ ಹೋರಾಟಗಳಿಗೆ ಬೆಂಬಲ ಕೊಡಲು ಪ್ರಾರಂಭ ಮಾಡಿತು. ಕೆಲವೊಮ್ಮೆ ನ್ಯಾಯಾಲಯಗಳು ತೆಗೆದುಕೊಳ್ಳುವ ನಿಲುವುಗಳು ಭಾರತದ ಪ್ರಭುತ್ವದ ಬಗ್ಗೆ ಇರುವ ಬದ್ಧತೆಯನ್ನೇ ಪ್ರಶ್ನೆ ಮಾಡುವಂತೆ ಇರುತ್ತದೆ. ಚೀನಾ ಉತ್ತರದ್ ಖಂಡ್‌ ರಾಜ್ಯದ ಗಡಿಭಾಗದಲ್ಲಿ ತನ್ನ ಸೇನಾ ಜಮಾವಣೆ ಹೆಚ್ಚಿಸುತ್ತಿದೆ. ಅದಕ್ಕೆ ಪ್ರತಿಯಾಗಿ ಭಾರತದ ಸೈನ್ಯ ಕೂಡಾ ತನ್ನ ಸೈನ್ಯ ಜಮಾವಣೆ ಜೊತೆಗೆ ಯುದ್ದೋಪಕರಣಗಳನ್ನು ಸಾಗಿಸಲು ಅಗಲವಾದ ರಸ್ತೆ ಮಾಡಬೇಕಿತ್ತು.

ಸರಕಾರ ಈ ಕೆಲಸವನ್ನು ಕೈಗೆತ್ತಿಕೊಂಡಾಗ Citizen for GreenDoon ಎನ್ನುವ NGO ಒಂದು ಅಲ್ಲಿಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಹಾಕಿ ರಸ್ತೆ ಅಗಲೀಕರಣ, ಹಿಮಾಲಯದ ಪರಿಸರ ನಾಶಕ್ಕೆ ಎಡೆಮಾಡಿಕೊಡುತ್ತದೆ ಎಂದರು. ನ್ಯಾಯಾಲಯ ಈ ಅರ್ಜಿಯನ್ನು ಪರಿಗಣಿಸಿ ವಿಚಾರಣೆ ಪ್ರಾರಂಭಿಸಿ ದೇಶದ ಭದ್ರತೆಗೆ ಸಂಭಂದ ಪಟ್ಟ ಪ್ರಮುಖ ರಸ್ತೆ ನಿರ್ಮಾಣ ಕಾರ್ಯಕ್ಕೆ ತಡೆ ಒಡ್ಡಿದೆ. ಇತ್ತೀಚೆಗೆ ಕೇಂದ್ರ ಸರಕಾರ ಸಲ್ಲಿಸಿದ ಅಫಿಡವಿಟ್ಟನಲ್ಲಿ ಅಲ್ಲಿ ರಸ್ತೆಗಳು ಸುಮಾರು ೫ ಮೀ ಅಗಲವಿದ್ದು ಅದರಲ್ಲಿ ಸೈನ್ಯಕ್ಕೆ ಅತಿ ಭಾರಿ ವಾಹನಗಳನ್ನ ಬ್ರಹ್ಮೋಸ್‌ ಕ್ಷಿಪಣಿ ವಾಹಕಗಳನ್ನು ಸಾಗಿಸಲು ಆಗುವುದಿಲ್ಲ, ಆ ಕಾರಣಕ್ಕೆ ರಸ್ತೆಯನ್ನು ಕನಿಷ್ಟ ೮ ಮೀ ಅಗಲ ಮಾಡಬೇಕು ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಮೂರ್ತಿಗಳು “ದೇಶದ ಭದ್ರತೆ ಅಗತ್ಯ. ಆದರೆ ಪ್ರಕೃತಿ ನಾಶ ಮಾಡಿ ದೇಶದ ಗಡಿ ಕಾಯಬೇಕಾ?” ಎಂದು ತಮ್ಮ ತೀರ್ಪಿನಲ್ಲಿ ಹೇಳಿದರು. ನ್ಯಾಯಾಲಯಗಳು ದೇಶದ ಭದ್ರತೆಯ ವಿಷಯದಲ್ಲೂ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದಾಗ ಇವುಗಳ ಮೇಲೆ ಹೇಗೆ ವಿಶ್ವಾಸವಿಟ್ಟು ದೇಶ ನಡೆಸಬೇಕು? ಇಂತಹಾ ನ್ಯಾಯಾಲಯಗಳು, ರೈತರ ಮುಖವಾಡ ಹಾಕಿದ ಖಲಿಸ್ಥಾನಿ ಉಗ್ರರು, ಇಂತಹ ಉಗ್ರರಿಗೆ ಪರೋಕ್ಷ ಬೆಂಬಲ ಕೊಡುತ್ತಿರುವ ಪಂಜಾಬಿನ ಚನ್ನಿ ಸರಕಾರ ಇವೆಲ್ಲದರ ಲಾಭ ಪಡೆದು ಭಾರತದೊಳಗೆ ಅರಾಜಕತೆ ಸೃಷ್ಟಿಸಲು ಕಾಯುತ್ತಿರುವ ಟೂಲ್‌ ಕಿಟ್‌ ಗ್ಯಾಂಗ್‌, ಜೊತೆಗೆ ಭಾರತದ ಗಡಿಯಾಚಗೆ ಯುದ್ದ ದಾಳಿ ಮಾಡಲು ಕಾದು ಕೂತಿರುವ ಪಾಕಿಸ್ಥಾನ ಮತ್ತು ಚೀನಾ.

ಈ ಇಷ್ಟು ಸಮಸ್ಯೆಗಳನ್ನು ಪರಿಗಣಿಸಿ ಮೋದಿಯವರು ನಾನು ರೈತರಿಗೋಸ್ಕರ ಕಾಯಿದೆ ಜಾರಿಗೆ ತಂದೆ, ಈಗ ದೇಶಕ್ಕೋಸ್ಕರ ಹಿಂಪಡೆಯುತ್ತಿದ್ದೇವೆ ಅಂದಿದ್ದು ಈ ಕಾರಣಕ್ಕೆ. ನೇರವಾಗಿ ದಾಳಿಮಾಡುವ ಶತ್ರು ದೇಶಗಳನ್ನು ಮಣಿಸಬಹುದು ಆದರೆ ಆಂತರಿಕ ಶತ್ರುಗಳ ಜೊತೆ ಕಷ್ಟ. ಈ ಆಂತರಿಕ ಶತ್ರುಗಳ ದುಷ್ಟಕೂಟಗಳು ಒಟ್ಟಾಗಿರುವ ಕಾರಣ ರೈತ ಮಸೂದೆ, ರೈತರು ಅನ್ನು ಕಾರಣಕ್ಕೆ ದೇಶದ ಜನತೆ ಕೂಡ ಭಾವನಾತ್ಮಕವಾಗಿ ಅವರ ಜೊತೆ ಕೊಂಚ ವಾಲಿದ್ದಾರೆ. ಭಾರತದ ಪ್ರಥಮ ಸೇನಾ ಮುಖ್ಯಸ್ಥ ( CDS) ಜನರಲ್‌ ಬಿಪಿನ ರಾವತ್‌ ಹೇಳಿದ 2.5 ಫ್ರಂಟ್‌ ಯುದ್ದದ್ದಲ್ಲಿ .5 ಫ್ರಂಟ್‌ ಇದೇ ದೇಶದೊಳಗಿರುವ ಹಿತ ಶತ್ರುಗಳು. ಹಾಗಾಗಿ ಎಲ್ಲದಕ್ಕೂ ಮೂಲವಾದ ರೈತ ಕಾಯಿದೆಯನ್ನೇ ಹಿಂಪಡೆದರೆ ಎಲ್ಲ ಸಮಸ್ಯೆಗಳಿಗೆ ಮಂಗಳ ಹಾಡಿದಂತೆ ಎಂದು ಮನಗೊಂಡ ಸರಕಾರ ಈ ರೈತ ಕಾಯಿದೆಯನ್ನುಹಿಂಪಡೆಯಿತು.

ಈಗ ಮೋದಿ ತನ್ನವರಿಂದಲೇ ಟೀಕಾ ಪ್ರಹಾರಕ್ಕೆ ಗುರಿಯಾದರು. ಮೋದಿ ಹೀಗೆ ಮಾಡಬಾರದಿತ್ತು, ಮೋದಿ ಸೋತರು. ಸುಗ್ರೀವಾಜ್ಞೆಯ ಮುಖಾಂತರ ಜಾರಿಗೆ ತಂದ ಕಾಯಿದೆ, ರೈತರಿಗೆ ಇಷ್ಟು ಅನುಕೂಲ ಮಾಡಿಕೊಡುವ ಕಾಯಿದೆ ಮೋದಿ ಏಕಾಏಕಿ ಹಿಂತೆಗೆದುಕೊಂಡದ್ದು ಸರಿಯಲ್ಲ. ಇದನ್ನು ಜನ ಮೋದಿ ಸರಕಾರದ ದುರ್ಭಲತೆ ಎಂದು ಭಾವಿಸುತ್ತಾರೆ. ಇವತ್ತು ರೈತ ಮಸೂದೆಗೆ ಬಗ್ಗಿದರೆ ನಾಳೆ CAA ಬಗ್ಗೆ ಗಲಾಟೆ ಮಾಡುತ್ತಾರೆ, ತ್ರಿವಳಿ ತಲಾಕ್‌ ಬಗ್ಗೆ ಗಲಾಟೆ ಮಾಡುತ್ತಾರೆ. ಕಾಶ್ಮೀರದ ಕುರಿತು ಧರಣಿ ಕೂರುತ್ತಾರೆ. ನೀವೇ ಎದೆ ತಟ್ಟಿ ತೆಗೆದುಕೊಂಡ ನಿರ್ಣಯ ಈಗ ನೀವೇ ಹಿಂಪಡೆದುದು ದುರ್ಬಲತೆಯ ಲಕ್ಷಣ. ಯುದ್ಧರಂಗದಿಂದ ಪಲಾಯನ ಮಾಡಿದರು ಎಂಬಿತ್ಯಾದಿ ಟೀಕೆಗಳು ಕಳೆದ ಹಲವು ದಿನಗಳಿಂದ ಕೇಳುತ್ತಲೇ ಇದ್ದೇವೆ. ಹಾಗಿದ್ದರೆ ಇವರು ಹೇಳುತ್ತಿರುವುದು ಸರಿಯಾ ಎಂಬ ಪ್ರಶ್ನೆಗೆ ಒಂದಷ್ಟು ಉತ್ತರಗಳೂ ಸಿಗಲಾರಂಭಿಸಿದವು. ಮೋದಿಯವರು ರೈತಮಸೂದೆ ಕಾಯಿದೆಯನ್ನು ವಾಪಾಸು ಮಾಡಿದಾಗ ಈ ರೈತ ಹೋರಾಟಗಾರರು ಕೊಂಚ ವಿಚಲಿತರಾದಂತೆ ಕಂಡರು. ನಾವು ಸಂಸತ್ತಿನಲ್ಲಿ ಕಾಯಿದೆ ವಾಪಾಸು ತೆಗೆಯದ ಹೊರತು ಹೋರಾಟ ಮುಗಿಸುವುದಿಲ್ಲ ಅಂದರು. ಅದೂ ಆಯಿತು. ನಂತರ ತಮ್ಮ ಉಳಿದ ಬೇಡಿಕೆಗೆಗಳನ್ನೂ ಈಡೇರಿಸಿದರೇ ಮಾತ್ರ ಹೋರಾಟದಿಂದ ವಾಪಾಸು ಹೋಗುವುದಾಗಿ ಹೇಳಿದಾಗ ಅಮಿತ ಶಾವರು ಮದ್ಯ ಪ್ರವೇಶಿಸಿ.

ನಕಲೀ ಹೋರಾಟಗಾರಾರ ಮಧ್ಯೆ ಇದ್ದ ಒಂದಷ್ಟು ಅಸಲೀ ಹೋರಾಟಗಾರರ ಮನ ವಲಿಸಿ ಪ್ರತಿಭಟನೆಯನ್ನು ನಿಲ್ಲಿಸುವಲ್ಲಿ ಸಫಲರಾದರು. ಇದರಿಂದ ವಿಚಲಿತರಾದ ನಕಲಿ ಹೋರಾಟಗಾರರೂ ತಮ್‌ ಹೋರಾಟದ ನಾಟಕ ಮುಂದುವರಿಸಲೂ ಆಗದೆ ಇತ್ತ ಅದನ್ನು ನಿಲ್ಲಿಸಲೂ ಆಗದೆ ಒದ್ದಾಡುತ್ತಿರುವುದು ಎಲ್ಲರಿಗೂ ತೋರುತ್ತಿದೆ. ಯಾವಾಗ ಈ ಹೋರಾಟ ರೈತ ಆಶಯಗಳನ್ನು ಬಿಟ್ಟು ಇನ್ನಾವುದೇ ದಿಕ್ಕಿಗೆ ಇವರ ಹೋರಾಟಗಳು ತಿರುಗಿದರೂ ದೇಶದ ಜನರ ಭಾವನೆ ಇವರ ವಿರುದ್ದವಾಗಿಯೇ ಇರುತ್ತದೆ. ಮತ್ತು ಅಂತಹ ಹೋರಾಟಗಳನ್ನು ಹತ್ತಿಕ್ಕುವುದು ಸರಕಾರಕ್ಕೆ ಕಷ್ಟದ ಕೆಲಸವೂ ಅಲ್ಲ. ಅದು ಈ ಸಂಘಟನೆಗಳಿಗೂ ಗೊತ್ತು. ಇನ್ನು ಮೋದಿಯವರು ಅವರದ್ದೇ ನಿರ್ಧಾರಗಳಿಂದ ಹಿಂದೆ ಸರಿದಿದ್ದು ಸರಿ ಅಲ್ಲ, ಒಬ್ಬ ಬಲಿಷ್ಟ ನಾಯಕನ ಲಕ್ಷಣ ಅಲ್ಲ, ಒಮ್ಮೆ ನಿರ್ಧಾರ ತೆಗೆದುಕೊಂಡ ನಂತರ ಅದರಿಂದ ಹಿಂದೆ ಸರಿಯಬಾರದು ಅನ್ನುವವರಿಗೆ ನಾನು ಹೇಳುವುದು ಇಷ್ಟೆ. ಮೋದಿಯ ಅಂತರಂಗಲ್ಲಿದ್ದ ಮಾಧವ ಮಹಾಭಾರತದಲ್ಲಿ ಭೀಷ್ಮ ಮಾಡಿದ ತಪ್ಪನ್ನು ಈ ಭಾರತದಲ್ಲಿ ಮೋದಿಯಿಂದ ಆಗಲು ಬಿಡಲಿಲ್ಲ!

1
ಜೂನ್

ತೈಲ ಬೆಲೆಯೇರಿಕೆಯೆಂಬ ರಾಜಕೀಯ ದಾಳ

– ಬೇಲಾಡಿ ದೀಪಕ್ ಶೆಟ್ಟಿ, ನ್ಯಾಯವಾದಿಗಳು ಹೈಕೋರ್ಟ್ ಕರ್ನಾಟಕ

ತೈಲ ಬೆಲೆಯೇರಿಕೆ ಎನ್ನುವ ಶಬ್ಧ ಯಾವತ್ತೂ ವಿರೋಧ ಪಕ್ಷಗಳಿಗೆ ನೆಚ್ಚಿನ ಶಬ್ದ. ಅಲ್ಲದೇ ಆಡಳಿತ ಪಕ್ಷವನ್ನು ವಿರೋಧಿಸಲು ಸುವರ್ಣ ಅವಕಾಶ ಮಾಡಿಕೊಡುವ ಸುವರ್ಣ ಶಬ್ದಗಳು. ಅದು ಯಾರೇ ಇರಲಿ ಮತ್ತು ಯಾವುದೇ ಪಕ್ಷವಿರಲಿ . ಬಿಜೆಪಿಯು ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ರಸ್ತೆಗಳಲ್ಲಿ ಇಳಿದು ಜನಾಂದೋಲನ ರೂಪಿಸಿ ಹೋರಾಟಕ್ಕೆ ಇಳಿದಿತ್ತು . ಈಗ ಅದನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಇವೆರಡರಲ್ಲಿ ಸಾಮಾನ್ಯ ಸಂಗತಿ ಏನೆಂದರೆ ತೆರಿಗೆದಾರರಾದ ಜನಸಾಮಾನ್ಯರು ತಮ್ಮ ಮೇಲಿನ ಹೊರೆಗೆ, ಬದುಕಲು ಪಕ್ಷ ನೋಡದೇ ವಿಷಾಯಾಧಾರಿತ ಬೆಂಬಲ ನೀಡುತ್ತಿರುವುದು.

ಇನ್ನು ಪೆಟ್ರೋಲ್ ಡಿಸೆಲ್ ವಿಷಯಕ್ಕೆ ಬಂದರೆ ಮೋದಿಯವರನ್ನು ಟೀಕಿಸಲು ವಿರೋಧಿಗಳು ಅವರ 2012ನೇ ಇಸವಿಯ ಟ್ವೀಟ್ ಅನ್ನು ಉಲ್ಲೇಖಿಸುತ್ತಾರೆ. ಇವರು ವಿರುದ್ದವಾಗಿ ಕಾಂಗ್ರೆಸ್ ಸಮಯದ ಪಾಲಿಸಿಗಳಿಂದ ಆದ ತೊಂದರೆ ಮತ್ತು ಎಡವಟ್ಟುಗಳನ್ನು ಉಲ್ಲೇಖಿಸುತ್ತಾರೆ. ಎಲ್ಲಾ ಕಡೆ ರಾಜಕೀಯ ಕಾಣುತ್ತದೆಯೇ ವಿನಃ ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ನಾಯಕರಲ್ಲಿ ಪಕ್ಷಾತೀತವಾಗಿ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತದೆ.

ಮೋದಿಯವರು ತೈಲವನ್ನು ಜಿ ಎಸ್ ಟಿ ವ್ತಾಪ್ತಿಯಲ್ಲಿ ತಂದರೆ ಇದನ್ನು ಕಾಂಗ್ರೆಸ್ಸಿಗರು ಮತ್ತು ಮಹಾಘಟಬಂಧನದ ಮಹಾನಾಯಕರು ವಿರೋಧ ಮಾಡುತ್ತಾರೆ ಎಂಬುದು ಬಿಜೆಪಿಗರ ವಾದ. ಬಿಜೆಪಿ ನಾತಕರ ಗಮನಕ್ಕೆ ಕಾಂಗ್ರೆಸಿನ ಸರ್ವೋಚ್ಚ ನಾಯಕ ರಾಹುಲ್ ಗಾಂಧಿ 2017 ರಲ್ಲಿಯೇ ತೈಲಗಳನ್ನು ಜಿಎಸ್ಟಿ ಗೆ ತನ್ನಿ ಅಂತ ಆಗ್ರಹಿಸುತ್ತಾರೆ. ಉತ್ತಮ ಆಂಗ್ಲಭಾಷಾ ಸಾಮರ್ಥ್ಯ ಹೊಂದಿದ ಪಂಡಿತರಾದ ಶಶಿತರೂರವರು ಇತ್ತೀಚೆಗೆ ಇದನ್ನು ಸಮರ್ಥಿಸುವ ಟ್ವೀಟ್ ಕೂಡಾ ಮಾಡಿ ಸರ್ಕಾರಕ್ಕೆ ಆಗ್ರಹ ಮಾಡಿರುತ್ತಾರೆ. ಇದರಲ್ಲಿ ಗಮನಾರ್ಹ ಅಂಶ ಏನೆಂದರೆ ಇವರಿಬ್ಬರೂ ಕೇರಳದ ಸಂಸದರು ಮತ್ತು ಕೇರಳದ ಆಶೋತ್ತರಗಳನ್ನು ಸರ್ಕಾರಕ್ಕೆ ತಲುಪಿಸುವವರು. ಒಂದು ವೇಳೆ ಮೋದಿ ಸರ್ಕಾರ ಜಿಎಸ್ಟಿ ತೈಲಗಳಿಗೂ ಅನ್ವಯಿಸಿದಲ್ಲಿ ಇವರ ಬೆಂಬಲ ಇದೆ ಎಂದು ಆಯಿತು. ಇವರು ಮಹಾಘಟಬಂಧನದ ನಾಯಕರಿಗೂ ಅರ್ಥ ಮಾಡಿಸುತ್ತಾರೆ ಮತ್ತು ಕೇರಳದಲ್ಲಿ ಇದರ ಸಮರ್ಪಕ ಜಾರಿಯನ್ನು ಇವರು ವಹಿಸಿಕೊಳ್ಳುತ್ತಾರೆ ಎಂದು ಭಾವಿಸೋಣ. ಆಗ ಇದರ ವಿರುದ್ಧ ಹೊರಾಡಲು ಬಂದರೆ ಜನರೇ ಇವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಆದರೆ ಬಿಜೆಪಿ ಮುಖಂಡರಾದ ಸುಶಿಲ್ ಮೋದಿ ಇನ್ನು ಏಳೆಂಟು ವರ್ಷಕ್ಕೆ ಇದು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ವಿತ್ತೀಯ ಮಂತ್ರಿಗಳು ಅಂತಹ ಪ್ರಸ್ತಾಪ ಸದ್ಯ ಸರ್ಕಾರದ ಎದುರಿಗೆ ಇಲ್ಲ ಎಂದಿದ್ದಾರೆ. ಪ್ರಯತ್ನ ಮಾಡದೇ ಅವರು ವಿರೋಧಿಸುತ್ತಾರೆ ಎಂಬುದಕ್ಕೆ ಸುಮ್ಮನಿದ್ದೇವೆ ಎಂಬುದು ಹಾಸ್ಯಾಸ್ಪದ ಅಲ್ಲವೇ. ಕೊನೆಪಕ್ಷ ನಾವು ಇನ್ನು ಮೂರರಿಂದ ಆರು ತಿಂಗಳ ಒಳಗೆ ಸದನದ ಮುಂದಿಟ್ಟು ಜಿ ಎಸ್ಟಿಯನ್ನು ಪೆಟ್ರೋಲ್ ಡೀಸೆಲ್ ಗಳಿಗೆ ಅಸ್ವಯಿಸುತ್ತೇವೆ ಎಂಬ ಹೇಳಿಕೆಯನ್ನಾದರೂ ನೀಡಿ. ಆಗ ವಿರೋಧಪಕ್ಷಗಳು ವಿರೋಧಿಸಲು ಬಂದರೆ ಜನರೇ ನೋಡಿಕೊಳ್ಳುತ್ತಾರೆ. ಯಾಕೆಂದರೆ ಇದರಿಂದ ತುಂಬಾ ಅನುಕೂಲವಾಗುವುದು ಅವರಿಗೆ ತಾನೇ. ಆದ್ದರಿಂದ ವಿರೋಧ ಪಕ್ಷಗಳಲ್ಲಿ ಒಂದು ಮನವಿ, ಬೆಲೆಯೇರಿಕೆ ಬಗ್ಗೆ ಹೊರಳಾಡುವ ಬದಲು ತೈಲೋತ್ಪನ್ನಗಳಿಗೆ ಜಿಎಸ್ಟಿ ಅನ್ವಯಿಸಲು ಹೋರಾಡಿ ಮತ್ತು ಜನಾಂದೋಲನ ರೂಪಿಸಿ.

ಇನ್ನು ಪೆಟ್ರೋಲ್ ಡಿಸೆಲ್ ನಿಂದ ಮಾತ್ರವೇ ಸರ್ಕಾರದ ಬೊಕ್ಕಸ ತುಂಬುವುದು ಎಂಬ ಕಲ್ಪನೆಯ ವಾದ ವಿಚಿತ್ರವಾಗಿ ಕಾಣುತ್ತದೆ. ಒಂದು ಸಣ್ಣ ಬೆಂಕಿಪೆಟ್ಟಿಗೆಯಿಂದ ಎಲ್ಲಾ ವಸ್ತುಗಳಿಗೂ ತೆರಿಗೆ ಇದೆ. ಡೈರೆಕ್ಟ್ ಟ್ಯಾಕ್ಷ್ ಮತ್ತು ಇನ್ಡೈರೆಕ್ಟ್ ಟ್ಯಾಕ್ಸ್ ಎರಡೂ ಟ್ಯಾಕ್ಷೇಷನ್ ಅಳವಡಿಸಿಕೊಂಡಿರುವ ದೇಶ ನಮ್ಮದು. ಸಮಸ್ಯೆ ಇರುವುದು ತೆರಿಗೆ ಸಂಗ್ರಹದಲ್ಲಿ ಅಲ್ಲ ಅದರ ವಿನಿಯೋಗದಲ್ಲಿ. ಮಾಡಿರುವ ಸಾಲಗಳೂ ಕಾರಣ. ಇದಕ್ಕೆ ಸ್ವಾತಂತ್ರ್ಯ ನಂತರದ ಎಲ್ಲಾ ಸರ್ಕಾರಗಳು ಕಾರಣ. ಈ ಹಣದ ಖಜಾನೆಗಳು ರಾಜಕಾರಣಿಗಳ ಮನೆ ತುಂಬಿರೋದು ಒಂದು ಕಾರಣ. ಈ ಕಾರಣಕ್ಕೆ ಇವತ್ತು ಚುನಾವಣೆಗಳಲ್ಲಿ ಖರ್ಚುಗಳು ಕೋಟಿ ಲೆಕ್ಕದಲ್ಲಿ ನಡೆಯುತ್ತಿರುವುದು. ಈಗಿನ ಸರ್ಕಾರ ರಾಜಕೀಯ ನೋಡದೇ ಹಗರಣದ ಲೆಕ್ಕ ಮಾಡಿ ಅವರಿಂದ ವಸೂಲಿಗೆ ಕ್ರಮ ಕೈಗೊಂಡರೆ ಆದೀತು. ನನ್ನ ಪ್ರಕಾರ ಇದು ಪ್ರಾಕ್ಟಿಕಲಿ ಎದೆಗಾರಿಕೆ ತೋರಿಸಿ ಮಾಡಬಹುದಾದ ಕಷ್ಟಸಾಧ್ಯವಾದ ಕೆಲಸ. ನೀವೆ ಆಲೋಚನೆ ಮಾಡಿ ಕಲ್ಲಿದ್ದಲು, ಕಾಮನ್ವೆಲ್ತ್ ಮತ್ತು 2ಜಿ ಹಗರಣದ ಒಟ್ಟು ಮೊತ್ತ ಎಷ್ಟಿರಬಹುದು. ದೇಶದ ರಾಜಕಾರಣಿಗಳು ಲೂಟಿ ಹೊಡೆದಿರುವ ಸಂಪೂರ್ಣ ದುಡ್ಡನ್ನು ಇಲ್ಲಿಯೇ ಬಂಡವಾಳ ಹೂಡಿದ್ದರೆ ಕೊನೆಪಕ್ಷ ಸ್ಥಳಿಯರಿಗೆ ಉದ್ಯೋಗ ಸೃಷ್ಟಿಸಿ ಇಲ್ಲಿಯ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಇನ್ನೊಂದು ರೀತಿಯಲ್ಲಿಯಾದರೂ ಕೊಡುಗೆ ನೀಡಿದ್ದಾರೆ ಅಂತ ಹೇಳಬಹುದಿತ್ತು. ಬೇನಾಮಿ ಹೆಸರಲ್ಲಿ ವಿದೇಶಗಳಲ್ಲಿ ಮಾಡಿರುವ ಉದ್ದಿಮೆ ಮತ್ತು ಬಂಡವಾಳ ಹೂಡಿಕೆಯನ್ನು ಪತ್ತೆ ಹಚ್ಚಲು ಕೂಡಾ ಸರ್ಕಾರವೇ ವೆಚ್ಚ ಮಾಡಬೇಕಾದ ಸ್ಥಿತಿ.

ಇನ್ನೊಂದು ವಿಪರ್ಯಾಸದ ವಿಷಯವೇನೆಂದರೆ ವಿರೋಧಪಕ್ಷಗಳು ಜನತೆಯ ಹಿತಕ್ಕಾಗಿ ಆಲೋಚಿಸದೇ ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿರುವುದು. ನಾಯಕರು ಮತ್ತು ಕಾರ್ಯಕರ್ತರ ನಡುವೆ ವಿಷಯಾಧಾರಿತ ಗೊಂದಲಗಳಿರುವುದು . ಇದಕ್ಕೆ ಮುಖ್ಯಕಾರಣ ಸಿದ್ದಾಂತ ಹೊಂದಿರುವ ರಾಜಕೀಯ ಪರಿಚಯವಿರದೇ ಇರುವುದು. ಕರ್ನಾಟಕವನ್ನೇ ತೆಗೆದುಕೊಳ್ಳಿ ತೈಲಬೆಲೆ ಏರಿಕೆ ಬಗ್ಗೆ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತದೆ ಮತ್ತು ಆ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಎಸ್ಟಿಯನ್ನು ಪೇಟ್ರೋಲಿಯಂ ತೈಲೋತ್ಪನ್ನಗಳಿಗೆ ಅನ್ವಯಿಸುವುದನ್ನು ವಿರೋಧಿಸುತ್ತಾರೆ. ಈವಾಗ ಹೇಳಿ ಜಿಎಸ್ಟಿ ಅನ್ವಯಿಸಿದರೆ 28% ಅಂತ ಲೆಕ್ಕ ಹಾಕಿ 10% ಸೆಸ್ ಹಾಕಿದ್ರೂ ಪೆಟ್ರೋಲ್ ಬೆಲೆ 60 ರೂಪಾಯಿ ಅಸುಪಾಸು ಆಗುತ್ತದೆ. ಜನರಿಗೆ ಇದರಿಂದ ಲಾಭ ತಾನೇ. ಜಿಎಸ್ಟಿ ವಿರೋಧಿಸುವ ತಾವು ತಮ್ಮ ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಬೆಲೆಯೇರಿಕೆ ಬಗ್ಗೆ ಹೋರಾಡಲು ಹೇಗೆ ನಿರ್ದೇಶನ ನೀಡುತ್ತೀರಿ?

ಇನ್ನು ಅಗತ್ಯವಸ್ತುಗಳ ಬೆಲೆಯೇರಿಕೆ. ಹೌದು ಡಿಸೆಲ್ ಏರಿಕೆಗೆ ಸಾಗಾಟದ ವೆಚ್ಚ ಹೆಚ್ಚು ಆಗಿ ಬೆಲೆ ಏರುತ್ತದೆ ಆದರೆ ಇದೊಂದೇ ಕಾರಣವಲ್ಲ. ಮಧ್ಯವರ್ತಿಗಳು ಸೃಷ್ಟಿಸುವ ಕೃತಕ ಕ್ಷಾಮವೂ ಕಾರಣ. ಒಂದು ರೈತ ಬೆಳೆಗೆ ಬೆಲೆ ಸಿಗುತ್ತಿಲ್ಲ ಅಂತ ರಸ್ತೆಗೆ ಸುರಿಯುತ್ತಿದ್ದಾನೆ. ಅಂದ್ರೆ ಬೆಳೆ ಯೇಥೇಚ್ಚ ಆಗಿ ಬೇಡಿಕೆಗಿಂತ ಸಪ್ಲೈ ಜಾಸ್ತಿ ಆಗಿರಬೇಕು ತಾನೇ. ಅಂದರೆ ಮಾರುಕಟ್ಟೆಯಲ್ಲೂ ಕೂಡಾ ಜನರು ಖರೀದಿಸುವಾಗ ಬೆಲೆ ಕಡಿಮೆ ಇರಬೇಕಲ್ಲ. ಹಾಗಾಗುತ್ತಿಲ್ಲವಲ್ಲ ಯಾಕೆ? ಯಾಕೆಂದರೆ ಮಾರುಕಟ್ಟೆ ಮೇಲೆ ದಲ್ಲಾಳಿಗಳ ಹಿಡಿತ ಇದು ಹೋಗಿ ಮುಕ್ತ ಮಾರುಕಟ್ಟೆ ಬಂದರೆ ಬೇರೆಯವರೂ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಜಡ್ಡುಗಟ್ಟಿರುವ ಸರ್ಧೆ ನೀಡಿದರೆ ಕೃಷಿಗೆ ಬಂಡವಾಳ ಹರಿದು ಬಂದು ರೈತನಿಗೂ ದುಡ್ಡಿನ ಹರಿವು ಹೆಚ್ಚಾಗಿ ಕೃಷಿ ರಂಗದ ಪುನಶ್ಚೇತನ ಆಗಬಹುದು. ಸ್ಪರ್ಧಾತ್ಮಕ ವ್ಯಾಪಾರ ವ್ಯವಸ್ಥೆ ಹುಟ್ಟಿ ಗ್ರಾಹಕರಿಗೂ ಲಾಭ ಆಗುತ್ತದೆ. ಇದು ಬೆಲೆ ಏರಿಕೆ ಸಮಸ್ಯೆಗಳಲ್ಲಿ ಪರಿಹಾರೋಪಾಯಗಳಲ್ಲಿ ಒಂದಾಗಬಹುದು .

ಈ ವ್ಯವಸ್ಥೆ ಸರಿಪಡಿಸಲು ಕಾನೂನು ತೊಂದ್ರೆ ರಸ್ತೆಗಳಲ್ಲಿ ಇಳಿದು ವಿರೋಧ ಪಕ್ಷಗಳು ತೋರಿದ ವಿರೋಧ ಮತ್ತು ಅಂತಾರಾಷ್ಟ್ರೀಯವಾಗಿ ರಚಿಸಿದೆ ಷಡ್ಯಂತ್ರಗಳು ಹೇಗೆ ಮರೆಯಲು ಸಾಧ್ಯ. ಕಾನೂನು ರಚಿಸುವುದಷ್ಟೇ ಸರ್ಕಾರದ ಕಾರ್ಯ ಅಲ್ಲ ಜನತೆಗೆ ಮನದಟ್ಟು ಮಾಡಿಸಬೇಕು. ಹೀಗಾಗಿ ಅದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಮೋದಿ ಸರ್ಕಾರ ಎಡವಿದೆ ಅಂತ ನನ್ನ ಅಭಿಪ್ರಾಯ.

ಇನ್ನು ತೈಲೋತ್ಪನ್ನಗಳ ಮೇಲೆ ಜಿಎಸ್ಟಿ ವಿಧಿಸೋದರಿಂದ ಸರ್ಕಾರದ ವರಮಾನ ಕಡಿಮೆ ಆಗುತ್ತದೆ ಎಂಬ ವಾದ. ಈಗಿರುವ ಪೆಟ್ರೋಲಿಯಂ ತೈಲಗಳ ಟ್ಯಾಕ್ಸ್ ಸರಿ ಸುಮಾರು 100 ರಿಂದ 120% . ಜಿಎಸ್ಟಿ ಆಕ್ಟಿಗೆ ತಿದ್ದುಪಡಿ ತಂದು ತೈಲೋತ್ಪನ್ನಗಳ ಮೇಲೆ ಅತೀ ಹೆಚ್ಚಿನ 28% ಸ್ಲಾಬ್ ಅನ್ನು 30 % ಅಥವಾ 50% ಏರಿಸಲಿ. ತೆರಿಗೆಯ ಆದಾಯ ಕಡಿಮೆಯಾದರೂ ಅದನ್ನು ಬೇರೆ ಮೂಲಗಳಲ್ಲಿ ಹೆಚ್ಚಿಸಲು ನೋಡಲಿ. ಮನುಷ್ಯ ಸಹಜ ಗುಣ ಪ್ರಕಾರ ಆದಾಯ ಕಡಿಮೆಯಾದಾಗ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲೇಬೇಕು. ಹೀಗೆ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲಿ, ಬಿಳಿಯಾನೆಗಳ ಸಾಕುವಿಕೆ ಸ್ವಲ್ಪ ಕಡಿಮೆ ಮಾಡಲಿ. ಮೋದಿ ಸರ್ಕಾರ ಈ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಗಮನ ಕೊಟ್ಟಿದೆ ಕೂಡ. ಭಾರತಕ್ಕೆ ಚುನಾವಣೆ ವೆಚ್ಚವೂ ಒಂದು ಅತಿವೆಚ್ಚದ ವಿಷಯವೇ. ಭಾರತೀಯರು ದೇಶದ ಒಂದಲ್ಲ ಒಂದು ಭಾಗದಲ್ಲಿ ಹಬ್ಬದಂತೆ ವರ್ಷಂಪ್ರತಿ ಚುನಾವಣೆ ಮಾಡುತ್ತಿರುತ್ತಾರೆ . ಅದೇ ಒಂದೇ ಖರ್ಚಿನಲ್ಲಿ ಎಲ್ಲಾ ಚುನಾವಣೆಗಳನ್ನು ಒಂದೇ ಸಲ 5 ವರ್ಷಕೊಮ್ಮೆ ನಡೆಸಿದರೆ ಸುಮಾರು ವೆಚ್ಚವನ್ನು ಕಡಿಮೆ ಮಾಡಬಹುದು. ಜಿಎಸ್ಟಿಯನ್ನು ತೈಲೋತ್ಪನ್ನಗಳಿಗೆ ಅನ್ವಯಿಸಿ ಒಂದು ದೇಶ ಒಂದು ಚುನಾವಣೆ ನಡೆಸಿ ಚುನಾವಣಾ ವೆಚ್ಚ ಕಡಿಮೆ ಮಾಡಿ ಸ್ವಲ್ಪ ಮಟ್ಟಿಗೆ ಸರಿದೂಗಿಸಬಹುದಲ್ಲ.

ಈಗ ಜನರಿಗೆ ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆ ಅರ್ಥವೇ ಆಗುವುದಿಲ್ಲ. ನೀವು ಒಂದು ಬಟ್ಟೆ ತೆಗೆದುಕೊಂಡರೆ , ಅದನ್ನು ತೊಳೆಯುವ ಸೋಪು ತೆಗೆದುಕೊಂಡರೆ ಅಥವಾ ಒಂದು ಪ್ಲೇಟ್ ಇಡ್ಲಿ ತಿಂದರೆ ಕೂಡಾ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಅಂತ ತಿಳಿಯುತ್ತೆ. ಆದರೆ ಈ ಪೆಟ್ರೋಲಿನ ವಿಷಯದಲ್ಲಿ ಹಾಗಿಲ್ಲ. ತೆರಿಗೆ ಎಷ್ಟು ನೀಡಿದ್ದೇವೆ ಎಂದು ಬಿಲ್ಲಲ್ಲಿ ತಿಳಿಯೋದೇ ಇಲ್ಲ. ಇದು ವಂಚನೆಯಲ್ಲವೇ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸೆಸ್ ಗಳು . ಆ ಸೆಸ್ ಗಳ ಬಳಕೆಯನ್ನು ಬೇರೆ ಉದ್ದೇಶಕ್ಕೆ ಮಾಡುವಂತಿಲ್ಲ. ಕೆಲವೊಮ್ಮೆ ಫಂಡಿನ ಬಳಕೆ ಮಾಡಲು ಯಾವುದೊ ಒಂದು ಸಮಾರಂಭ, ಯೋಜನೆಯ ಹೆಸರಿನಲ್ಲಿ ಕೊಟಿ ಕೋಟಿಯಲ್ಲಿ ಬಿಲ್ ಮಾಡಿ ಫಂಡಿನ ವಿನಿಯೋಗ ಮಾಡ್ತಾರೆ. ಕೊನೆಪಕ್ಷ ನಾವು ಯಾವ ಕಾರಣಕ್ಕೆಲ್ಲ ಸೆಸ್ ಕೊಡ್ತಾ ಇದ್ದೇವೆ ಎಂದು ಬಿಲ್ಲಿನಲ್ಲಿ ತಿಳಿಯಬೇಕು ತಾನೇ?

ದುಡ್ಡು ಮಾಡುವ ಇಂತಹ ವಿಷಯಗಳಲ್ಲಿ ಮಾತ್ರ ಪಕ್ಷಾತೀತವಾಗಿ ಒಗ್ಗೂಡುತ್ತಾರೆ. ಯಾವುದೇ ವಿರೋಧ ಪಕ್ಷದ ನಾಯಕನೂ ಈ ವಿಚಾರಗಳನ್ನು ಎತ್ತುವುದಿಲ್ಲ. ಯಾಕೆಂದರೆ ಜನರಿಗೆ ಮಾಹಿತಿ ಕೊಡದೇ ಕತ್ತಲೆಯಲ್ಲಿ ಇಟ್ಟರೆ ಆತನಿಗೆ ತಾನು ನೀಡುತ್ತಿರುವ. ತೆರಿಗೆ ಎಷ್ಟು ಎಂದು ಗೊತ್ತಾಗೋಲ್ಲ ಮತ್ತು ಸರ್ಕಾರವನ್ನು ಮತ್ತು ತನ್ನ ನಾಯಕರನ್ನೂ ಪ್ರಶ್ನಿಸುವ ಗೋಜಿಗೂ ಹೋಗೋದಿಲ್ಲ. ಇದರಿಂದ ವಿರೋಧವನ್ನೂ ಮಾಡುವ ಅವಶ್ಯಕತೆ ಬರೋಲ್ಲ. ಎಲ್ಲರೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಹಾಯಾಗಿ ರಾಜ್ಯಭಾರ ಮಾಡಿಕೊಂಡಿರಬಹುದು. ಇದೇ ತೈಲೋತ್ಪನ್ನಗಳ ಜಿ ಎಸ್ಟಿ ಬಂದರೆ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ನೀಡಿದೆ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ನೀಡಿದೆ ಅಂಥ ಗೊತ್ತಾಗುತ್ತೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಬೆಟ್ಟು ಮಾಡಿ ತೋರಿಸಿ ಪರಸ್ಪರರ ಮೇಲೆ ಆಪಾದನೆ ಮಾಡಿ ರಾಜಕೀಯ ಮಾಡುವುದೂ ತಪ್ಪುತ್ತದೆ.

ವಿರೋಧ ಪಕ್ಷಗಳು ಸ್ವಲ್ಪ ಇಸ್ರೇಲಿನ ವಿರೋಧ ಪಕ್ಷಗಳನ್ನು ನೋಡಿ ಕಲಿಯಬೇಕು. ನನ್ನ ಹೈಸ್ಕೂಲ್ ಜೀವನದ ಸಂದರ್ಭದಲ್ಲಿ ನಾವು ನೋಡಿದ ಈ ದೇಶದ ಅತ್ಯುತ್ತಮ ಪ್ರಧಾನಿ ನೆಚ್ಚಿನ ನಾಯಕ ಅಟಲ್ ವಾಜಪೇಯಿಯವರ ಮಾತುಗಳಾದ ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ದೇಶ ಉಳಿಯಬೇಕು ಎಂಬ ವಿಚಾರವನ್ನು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು.

ಹಾಗಂತ ನಾನು ಮೋದಿಯವರು ಎಲ್ಲದರಲ್ಲೂ ಪ್ರಶಂಸನೀಯರು ಅಂತ ಹೇಳಲ್ಲ. ಅವರೇನು ಭಗವಂತರಲ್ಲವಲ್ಲ. ಮಾನವ ಸಹಜ ಇತಿಮಿತಿಗಳು ಇರುತ್ತದೆ. ರಾಜಕೀಯದ ಲೆಕ್ಕಾಚಾರಗಳಿರುತ್ತದೆ. ಆದರೆ ತೈಲದ ವಿಷಯದಲ್ಲಿ ಮತ್ತು ಅದಕ್ಕೆ ಜಿ ಎಸ್ಟಿ ಅನ್ವಯಿಸುವ ವಿಷಯದಲ್ಲಿ ಅವರು ಇಚ್ಚಾಶಕ್ತಿ ಸಾಲದು , ಇನ್ನಷ್ಟು ಎದೆಗಾರಿಕೆ ತೋರಿಸಬೇಕು, ತೋರಿಸುತ್ತಾರೆ ಎಂಬ ಆಶಾಭಾವನೆ ನಮ್ಮದು. ಅಷ್ಟೇ ಅಲ್ಲದೇ ವಿರೋಧಪಕ್ಷಗಳು ಯಾವತ್ತಿನಂತೆಯೇ ವಿನಾ ಕಾರಣ ತೊರಿಸುವ ವಿರೋಧ ತೋರದೇ ಜನಹಿತಕೋಸ್ಕರ ಕೇಂದ್ರ ನಡೆಗೆ ಬೆಂಬಲ ಸೂಚಿಸಿಬೇಕು ಮತ್ತು ಇದು ಜನರು ಈ ವಿಷಯದಲ್ಲಿ ವಿರೋಧ ಪಕ್ಷಗಳಿಂದ ಅಪೇಕ್ಷಿಸುವ ನಡೆ ಕೂಡಾ ಆಗಿರುತ್ತದೆ.

ಚಿತ್ರಕೃಪೆ : Business Today

25
ಮೇ

ಫಾರ್ಮಾ ಲಾಬಿ Vs ಮೋದಿಯವರ ಭಾರತ

– ಅಜಿತ್ ಶೆಟ್ಟಿ ಹೆರಂಜೆ

ಜಗತ್ತಿನ ತಥಾಕಥಿತ ಮುಂದುವರಿದ  ರಾಷ್ಟ್ರಗಳಿಗೆ, ಭಾರತದ ಸಾಮರ್ಥ್ಯವನ್ನು ಒಪ್ಪಿ ಅರಗಿಸಿಕೊಳ್ಳಲು ಇಂದಿಗೂ ಕಷ್ಟ ಆಗುತ್ತಿರುವುದಂತೂ ಸತ್ಯ.

ಕೋವಿಡ್ ಇಡೀ ವಿಶ್ವಕ್ಕೆ ಸಂಕಷ್ಟದ ಜೊತೆಗೆ‌ ಜಗತ್ತಿನ ರಾಷ್ಟ್ರಗಳಿಗೆ  ಔಷಧೀಯ ಕ್ಷೇತ್ರದಲ್ಲಿ ತಮ್ಮ‌ ತಮ್ಮ‌ ಸಾಮರ್ಥ್ಯವನ್ನು ಸಾಬೀತುಪಡಿಸುವ ಒಂದು‌ ವೇದಿಕೆಯನ್ನೂ‌ ನಿರ್ಮಾಣ‌ ಮಾಡಿಕೊಟ್ಟಿತು.‌‌ ಯಾವುದೇ ರೋಗ ಮತ್ತು ಅದರ ಔಷಧಿ ಎರಡೂ ಒಂದಕ್ಕೊಂದು ಸಮಾನಾಂತರವಾಗಿ ಅಥವಾ ಒಂದರ ಹಿಂದೆ ಇನ್ನೊಂದು ಅಷ್ಟೇ ವೇಗದಲ್ಲಿ‌‌‌ ಚಲಿಸುವ ಸರಳ‌ ರೇಖೆಯಂತೆ. ಅದು ಯಾವುದೇ ಕಾಯಿಲೆ ಇರಲಿ. ಪೋಲಿಯೋ, ಕ್ಷಯ, ಕ್ಯಾನ್ಸರ್, ಏಡ್ಸ್ ಹೀಗೆ. ಒಂದೋ‌ ಈ ರೋಗಗಳಿಗೆ  ಚಿಕಿತ್ಸೆ ಕೊಟ್ಟು ಅವುಗಳನ್ನು ನಿಯಂತ್ರಿಸುವುದು ಅಥವಾ ‌ಅವುಗಳಿಗೆ ಮದ್ದು ಕಂಡು ಹಿಡಿದು ರೋಗವನ್ನು ವಾಸಿ ಮಾಡುವುದು. ಅಂದಹಾಗೆ ಇವೆರಡೂ ವ್ಯವಸ್ಥೆಯ ನಿಯಂತ್ರಣ, ‌ಇಂದಿಗೂ‌ ಯಾವುದೇ ದೇಶದ ಸರಕಾರಗಳ ಬಳಿ‌ ಇಲ್ಲ. ಅವುಗಳ ನಿಯಂತ್ರಣ ಇರುವುದು‌ ಈ‌ ಔಷಧ‌‌ ಕಂಪೆನಿಗಳ‌ ಕಪಿ ಮುಷ್ಟಿಯಲ್ಲಿ. ಅವುಗಳು ಪೇಂಟೆಂಟ್ ಎನ್ನುವ ಕೃತಿ ‌ಸೌಮ್ಯದ ಹಕ್ಕನ್ನು ‌ಕಾಯ್ದಿರಿಸುವ ಮೂಲಕ‌  ಬಹುತೇಕ ಅಮೇರಿಕಾ ಮತ್ತು ಪಾಶ್ಚಿಮಾತ್ಯ ದೇಶಗಳೇ ಇದರ‌ ಪಾರುಪತ್ಯ ನಡೆಸುತ್ತಿವೆ.  ಈ ಪೇಟೆಂಟ್ ಮತ್ತು ಯಾವ ರೋಗಕ್ಕೆ ಔಷಧ ಕಂಡು‌ಹಿಡಿದರೆ ಹೆಚ್ಚು ಲಾಭ? ಹಾಗೆಯೇ ಯಾವ ರೋಗಕ್ಕೆ ಔಷಧಿ ಕಂಡು‌ಹಿಡಿಯದೇ ಇದ್ದರೆ ಅಥವಾ ಕಂಡು‌ಹಿಡಿದರೂ ಅದನ್ನು ಜಗತ್ತಿಗೆ ಕೊಡದೇ ಇದ್ದರೆ ಔಷಧ‌‌ ಕಂಪೆನಿಗಳಿಗೆ  ಹೆಚ್ಚು ಲಾಭ? ಅನ್ನುವ ಲೆಕ್ಕಾಚಾರ ಇವರ ಕಾರ್ಯ ಯೋಜನೆಯನ್ನು ನಿರ್ಧಾರ ಮಾಡುತ್ತದೆ.

ಉದಾಹರಣೆಗೆ ಕ್ಯಾನ್ಸರ್ ರೋಗವನ್ನೇ ತೆಗೆದುಕೊಳ್ಳಿ!

ಈ ರೋಗ ಮನುಕುಲವನ್ನು ಕ್ರಿ. ಪೂರ್ವ 3000 ದಿಂದಲೇ ಕಾಡಲು ಶುರು ಮಾಡಿದೆ. ಮನುಷ್ಯ ಇವತ್ತು ವಿಜ್ಞಾನ ತಂತ್ರಜ್ಞಾನದ ಮುಖಾಂತರ ಸೌರಮಂಡಲದ ಆಚೆಗೂ ಹೋಗಿದ್ದಾನೆ  ಆದರೆ 5000 ವರ್ಷಗಳಷ್ಟು ಹಳೆಯ ಕ್ಯಾನ್ಸರ್ ರೋಗಕ್ಕೆ ಮದ್ದು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ ಅಂದ್ರೆ ಇದು ತಮ್ಮನ್ನು ತಾವು ಆಧುನಿಕರು, ವೈಜ್ಞಾನಿಕರು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವವರಿಗೆ   ನಾಚಿಕೆಯ ವಿಷಯ ಅಲ್ವಾ? 

ನಾಚಿಕೆ ಯಾಕೆ ಆಗಬೇಕು ಹೇಳಿ! ಈ ರೋಗ 2019ರ ಹೊತ್ತಿಗೆ $ 1,18,352 ಮಿಲಿಯನ್ ಡಾಲರ್ ಮಾರುಕಟ್ಟೆ, 2027ರ ಹೊತ್ತಿಗೆ ಇದು ಇನ್ನೂ 7% ಬೆಳವಣಿಗೆ ಸಾಧಿಸಲಿದೆ ಅಂತೆ. ಈ ರೋಗಕ್ಕೆ ಇರುವ  ಜನಜನಿತ ಚಿಕಿತ್ಸೆ ಕಿಮೋ ಥೆರಪಿ ಯ  ಒಟ್ಟು  ವಾರ್ಷಿಕ ವಹಿವಾಟು ಸುಮಾರು 74.3 ಬಿಲಿಯನ್ ಡಾಲರ್.  ಜಗತ್ತಿನ ಔಷಧಿ ಕಂಪೆನಿ ಗಳಿಗೆ, ಆಸ್ಪತ್ರೆಗಳಿಗೆ  ಕ್ಯಾನ್ಸರ್ ಒಂದು ಚಿನ್ನದ ಮೊಟ್ಟೆ ಇಡುವ ಕೋಳಿ. ಇಂತಿಪ್ಪ ಕಾಯಿಲೆಗೆ ಔಷಧಿ ಕಂಡು ಹಿಡಿದು  ತಮ್ಮ  ಉದ್ಯಮದ ಬುಡಕ್ಕೆ ತಾವೇ ಪೆಟ್ಟು ಕೊಟ್ಟುಕೊಂಡಾರಾ?  ಖಂಡಿತಾ ಇಲ್ಲ! ಸಾವಿರ ವರ್ಷ ಹೋದರೂ ಇವ್ರು ಕ್ಯಾನ್ಸರ್ ರೋಗಕ್ಕೆ ಮದ್ದು ಕಂಡುಹಿಡಿಯೋಲ್ಲ. ಒಂದೊಮ್ಮೆ ಕಂಡು ಹಿಡಿದರೂ ಅದನ್ನು ಗುಪ್ತವಾಗಿಯೇ ಇಡುತ್ತಾರೆ. ಜಗತ್ತಿನ ಯಾವುದೋ ಪ್ರಭಾವಿ ವ್ಯಕ್ತಿಯ ಜೀವ ರಕ್ಷಣೆಗೆ ಮಾತ್ರ ಉಪಯೋಗಿಸಿಯಾರು ಅಷ್ಟೇ! ಜನಸಮಾನ್ಯನ ಕೈಗೆ ಖಂಡಿತ ಅದು ಸಿಗಲಿಕ್ಕೆ ಇಲ್ಲ.

ನಾಗರಿಕತೆಯ ಇತಿಹಾಸವನ್ನೇ ತೆಗೆದು ನೋಡಿ! ಮಾನವ ಭೂಮಿಯ ಮೇಲೆ ಬದುಕಿದ್ದ ಅಷ್ಟು ಸಮಯ ರೋಗರುಜಿನಗಳ ಜೊತೆಗೆ ಬದುಕಿದ. ತನ್ನ ಅನುಭವದ ಆಧಾರದ ಮೇಲೆ  ಕೆಲವೊಂದಿಷ್ಟು ರೋಗಗಳಿಗೆ ಔಷಧೋಪಚಾರ ವನ್ನೂ ಕಂಡುಹಿಡಿದ. ಇದು ಜಗತ್ತು ಕಂಡ ಎಲ್ಲಾ ನಾಗರೀಕತೆಯಲ್ಲೂ ಇತ್ತು.ಅಮೇರಿಕಾದ ಮಾಯನ್ ನಾಗರೀಕತೆ ಇರಲಿ, ಈಜಿಪ್ಟಿನ ನಾಗರೀಕತೆ ಇರಲಿ, ರೋಮನ್ ನಾಗರೀಕತೆ, ಮಸೊಪೊಟೋಮಿಯಾ,  ಚೀನಾದ ನಾಗರೀಕತೆಯೇ ಇರಲಿ ಅಥವಾ ಭಾರತದ ಸಿಂಧೂ ಕಣಿವೆಯ ನಾಗರೀಕತೆಯೇ ಇರಲಿ,ಈ ಎಲ್ಲಾ ಸಮಾಜಗಳಲ್ಲೂ ರೋಗಗಳು ಕಾಡುತ್ತಿದ್ದವು ಹಾಗು ಅವರು ಅವುಗಳೊಡನೆ ಸೆಣಸಾಡಲು ತಮ್ಮದೇ ರೀತಿಯ  ಔಷಧೋಪಚಾರದ ಪದ್ದತಿಯನ್ನು ಬೆಳೆಸಿಕೊಂಡರು. ಇಲ್ಲಿ ಯಾವತ್ತೂ ಸರಕಾರದ ಹಸ್ತಕ್ಷೇಪ ಇರಲಿಲ್ಲ. ಪ್ರತಿ ಸಮಾಜದ ಒಂದು‌ ವರ್ಗ ಔಷಧಯ ಪದ್ದತಿಯನ್ನು ಸಂಶೋಧನೆ ಮಾಡುತ್ತಾ ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಿ ಕೊಂಡು ಬಂದರು. ಎಲ್ಲೂ ಯಾರೂ ಯಾವತ್ತೂ ಇಂತಾ ರೋಗಕ್ಕೆ ಇಂತವರೇ ಔಷಧೋಪಚಾರ ಮಾಡಬೇಕು, ಇಂತವರು ಹೇಳಿದ್ದರೆ ಮಾತ್ರ ಅದು ಔಷಧ, ಈ ರೋಗಕ್ಕೆ ನಾನು ಮಾತ್ರ ಔಷಧ ಕಂಡುಹಿಡಿಯ ಬೇಕು, ಬೇರೆಯವರು ಕಂಡುಹಿಡಿಯಲು ಅನುಮತಿ ಕೊಡ ಬಾರದು ಇಂತಹ ಯಾವುದೇ ವಿಲಕ್ಷಣ ಕಟ್ಟುಪಾಡುಗಳು ಇರಲಿಲ್ಲ.

ಯಾವ ರೋಗಕ್ಕೆ ಯಾರಬಳಿ ಔಷಧ ತೆಗೆದು ಕೊಳ್ಳಬೇಕು ಎಂದು ಜನತೆಯೇ ತೀರ್ಮಾನ ಮಾಡುತ್ತಿದ್ದರು. ಬಹುತೇಕ  ಔಷಧೋಪಚಾರ ಮಾಡುವವರು ತಾವೇ ಖುದ್ದಾಗಿ ಔಷಧ ತಯಾರು  ಮಾಡುತ್ತಿದ್ದರು. ಇಂದಿನ ಹಾಗೆ ಯಾರೋ ಮಾಡಿದ ಔಷಧಿಗೆ ಪಟ್ಟಿ ಬರೆದು ಕೊಡುವ ಡಾಕ್ಟರ್ ಅಲ್ಲ. ಆದರೆ ಈ ಆಧುನಿಕ ವೈದ್ಯಕೀಯ ವಿಜ್ಞಾನ, ಎಲ್ಲಾ ಸ್ಥಳೀಯ ಔಷಧಿ ಪದ್ಧತಿಗಳನ್ನು ಕೊಲ್ಲುತ್ತಾ ಬಂತು, ವಿಜ್ಞಾನದ ಹೆಸರಿನಲ್ಲಿ ಇವುಗಳ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುತ್ತಾ ಬಂದರು. ಜನರಿಗೂ ಹಿತ್ತಲ‌ಗಿಡ ಮದ್ದಲ್ಲ ಅನ್ನಿಸತೊಡಗಿತು. ಕೊನೆಗೆ ರೋಗಗಳಿಗೆ ಇಂಗ್ಲಿಷ್ ಮದ್ದು ಬಿಟ್ಟರೆ ಬೇರೆ ಉಪಾಯ ಇಲ್ಲ ಅನ್ನುವಷ್ಟು ಜನ ಇವರ ಮೇಲೆ ಅವಲಂಬಿತರಾದರು. 

ಈ ಜಾಗತೀಕರಣ ಉಳಿದ ಎಲ್ಲಾ ಸ್ಥಳೀಯ ಸಂಸ್ಕೃತಿಗಳಂತೆಯೇ ಸ್ಥಳೀಯ ಔಷದೀಯ ವ್ಯವಸ್ಥೆಯನ್ನು ಆಪೋಷಣೆಗೆ ತೆಗೆದುಕೊಂಡಿತು.  ಈಗ ಪ್ರಪಂಚದಲ್ಲಿ ಹುಟ್ಟಿದ ಯಾವುದೇ ರೋಗಕ್ಕೆ ಇವರೇ ಔಷಧ ಕಂಡು ಹಿಡಿಯವ ದೊಣ್ಣೆ ನಾಯಕರು, ಇವರು ಹೇಳಿದ ಮಾತೇ ವೇದ ವಾಕ್ಯ, ಇವರು ಹೇಳಿದ್ದನ್ನು ಮಾತ್ರ ಜಗತ್ತು ಕೇಳಬೇಕು. ಉಳಿದ ಯಾವುದೇ ಚಿಕಿತ್ಸಾ ವಿಧಾನಕ್ಕೆ ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಬೌದ್ದಿಕ ಸಾಮರ್ಥ್ಯ ಇಲ್ಲ. ಒಂದೊಮ್ಮೆ ಅವರು ಅಂತಹಾ ಸಾಮರ್ಥ್ಯವನ್ನು ತೋರಿಸಿದರೂ ಅವರಿಗೆ ಡಾ.ಗಿರಿಧರ್ ಕಜೆ, ಬಾಬಾ ರಾಮ ದೇವ್ ಅಥವಾ ಈಗ ಆಂದ್ರಧಲ್ಲಿ ಸುದ್ದಿ ಮಾಡುತ್ತಿರುವು ಆನಂದಯ್ಯಾ ಅವರಿಗೆ ಆದ ಪರಿಸ್ಥಿತಿಯೇ ಆಗುತ್ತದೆ.

ಗಿರಿಧರ ಕಜೆಯವರು ಔಷಧಿ ಕಂಡುಹಿಡಿದಾಗ ಅವರಿಗೆ ಮತ್ತು ಅವರ ಔಷದಕ್ಕೆ ಅಪ‌ಪ್ರಚಾರ ಮಾಡಲು ತಾ ಮುಂದು ನಾ ಮುಂದು‌ ಎಂದು ನಿಂತರು, ಇವರು ಕಜೆಯವರನ್ನು ಕೇಳಿದ ಒಟ್ಟು ಪ್ರಶ್ನೆಗಳ ಸಾರಂಶ ಇಷ್ಟೆ, ಅಲ್ಲಾ ನಾವು ಕೋಟಿಗಟ್ಟಲೆ ಹಣ ಹಾಕಿ ಅಷ್ಟು ದೊಡ್ಡ ಕಂಪೆನಿ‌ ಜಗತ್ತಿನಾದ್ಯಂತ ಮಾಡಿದ್ದೇವೆ ನೀನು‌ ಪುಸಕ್ಕನೆ ಬಂದು ಈ ನಾಕಾಣೆ ಗಿಡಮೂಲಿಕೆ ಔಷಧ ಮಾಡಿ  ಜನರಿಗೆ ಕೊಟ್ಟರೆ ನಾವು ಹಾಕಿದ ಕೋಟ್ಯಾಂತರ ರೂಪಾಯಿ ಬಂಡವಾಳ ಯಾವ ಸಮುದ್ರದಿಂದ ವಾಪಾಸ್ ತೆಗೆಯೋದು?.  ಇದನ್ನ ಅವರು ನೇರವಾಗಿ ಹೇಳದ ವಿಜ್ಞಾನದ ಭಾಷೆ ಅಂದ್ರೆ ಸೈಂಟಿಫಿಕ್ ಲಾಂಗ್ವೇಜ್‌ ಮುಖಾಂತರ ಹೇಳಿದರು. ಕೊನೆಗೆ ಈ ಲಾಬಿಗೆ ಮಣಿದ ಕಜೆಯವರು ಇದೇ ಔಷಧಿಯನ್ನು ಇಮ್ಯುನಿಟಿ ಬೂಷ್ಟರ್ ಹೆಸರಿನಲ್ಲಿ ಕೊಡಬೇಕಾಯಿತು. ಕಜೆಯವರಿಗೆ ಬೈದ ಅದೆಷ್ಟು ಮಂದಿ ಅವರ ಕ್ಲಿನಿಕ್ ಮುಂದೆ ಬಂದು ನಿಂತು ಮುಖ ಮುಚ್ಚಿಕೊಂಡು ಅವರ ಔಷಧ ಕೊಂಡು ಹೋಗಿಲ್ಲ?. ಅನ್ ಅಫೀಷಿಯಲ್ಲಿ ಅವರ ಮದ್ದು ಕರೋನ ಒಂದರ ಅಲೆಯ ಸಂದರ್ಭದಲ್ಲಿ ಬಹುತೇಕ ಎಲ್ಲ ಮನೆಯಲ್ಲೂ ಇತ್ತು. ಅವರ ಕಂಪೆನಿ‌ ಈ ಔಷಧದ ಉತ್ಪಾದನೆ ಹಗಲೂ ರಾತ್ರಿ ಮಾಡಬೇಕಾಯಿತು.  ಅಧೀಕೃತವಾಗಿ ವಿರೋಧ ವ್ಯಕ್ತಪಡಿಸಿದ  ಆರೋಗ್ಯ ಇಲಾಖೆಯ ಅಧಿಕಾರಿ ಕೂಡ ತನ್ನ ಮನೆಯವರಿಗೆ ಕರೋನ ಬಂದಾಗ ಇದೆ ಔಷಧ ಕೊಟ್ಟು ಸಂಬಾಳಿಸಿದ್ದು ನನಗೆ ಗೊತ್ತಿದೆ. ಆದರೆ ಆತ ಅದನ್ನ ಬಹಿರಂಗವಾಗಿ ಹೇಳುವಂತಿಲ್ಲ. ಬಾಬಾ ರಾಮ್‌ದೇವ್ ಅವರ ಕರೊನಿಲ್ ಔಷಧಯ ವಿರುದ್ಧ ಎಂತಹಾ ಅಪಪ್ರಚಾರ  ಮಾಡಿದರು. ಕೊನೆಗೆ ಸರಕಾರಕ್ಕೂ ಮುಜುಗರ ಆಗುವಂತೆ ಮಾಡಿ ಅದನ್ನ ಇಮ್ಯುನಟಿ ಭೂಸ್ಟರ್ ಎಂದು ಮಾರುಕಟ್ಟೆಗೆ ತಂದರು. ಈಗ ಕೋವಿಡ್ ರೋಗಕ್ಕ ಡಿ.ಆರ್.ಡಿ.ಒ ಮತ್ತು ರೆಡ್ಡಿ ಲೆಬೋರಟರಿ ಜಂಟಿಯಾಗಿ ಔಷಧ ಕಂಡುಹಿಡಿದು ‌ ಮಾರುಕಟ್ಟೆಗೆ ತಂದರು. ಬಹುಶಃ ಇದು ವಿಶ್ವದ ಮೊದಲ ಕೋವಿಡ್ ಔಷಧ. ಈ ಮದ್ದು ಹೊರಗೆ ಬಂದು ಜನಮಾನಸದ ನಡುವೆ ವಿಶ್ವಾಸ ಮೂಡುವ ತನಕ ಎಲ್ಲೂ ಇದರ  ಮೂಲ ಬಾಬಾ ರಾಮ್ ದೇವ್ ಅವರ ಪತಂಜಲಿ  ಮಾಡಿದ‌ ಸಂಶೋಧನೆಯ ಆಧಾರದ ಮೇಲೆ ಎಂದು ಹೇಳಲಿಲ್ಲ. ಹೇಳಿದ್ದರೆ ಪಾಶ್ಚಾತ್ಯ ಆಧುನಿಕ‌ ವೈದ್ಯಕೀಯ ಜಗತ್ತು ಕಜೆಯವರನ್ನು ಪ್ರಶ್ನೆ ಮಾಡಿದಂತೆ ಇದನ್ನೂ‌ ಮಾಡುತ್ತಿತ್ತು. ಒಂದು ವಾರದಿಂದ ಆಂಧ್ರ ಪ್ರದೇಶದ ಒಂದು ಪುಟ್ಟ ಹಳ್ಳಿಯ ನಾಟೀ ವೈದ್ಯರು ಒಬ್ಬರು ಕರೋನಾಕ್ಕೆ ಕೊಡುತ್ತಿರುವ ನಾಟಿ ಔಷದ ಅವರನ್ನ ಇವತ್ತು  ಜಗತ್ತಿನಾದ್ಯಂತ ಹೆಸರುವಾಸಿ ಮಾಡಿದೆ. ಇವರ ಇರುವ ಎರಡೂ ಹಳ್ಳಿಗೆ ಇವರ ಮದ್ದಿನ ಕಾರಣ ಕರೋನ ಬಂದೇ ಇಲ್ಲ ಇವರ ಕೊಟ್ಟ ಔಷದಿಯ ಪ್ರಭಾವಕ್ಕೆ! ಇವರು ಈ ಔಷದವನ್ನ ಹಣಕ್ಕೂ ಮಾರುತ್ತಿರಲಿಲ್ಲ. ಜನರು ಮುಗಿಬಿದ್ದರು. ಮಾಧ್ಯಮಕ್ಕೆ ಗೊತ್ತಾಯಿತು, ಸರಕಾರಕ್ಕೆ ಇದು ಮುಜುಗರ, ಮೂಢನಂಬಿಕೆ ‌ಎಂಬಂತೆ ಭಾಸವಾಯಿತು, ಬಂಧಿಸಿದರು, ಜನರು ದಂಗೆ ಎದ್ದರು. ಅದು ಉಪರಾಷ್ಟ್ರಪತಿ ವೇಂಕಯ್ಯ ನಾಯ್ಡು  ಅವರ ಕ್ಷೇತ್ರ ಹಾಗು‌  ಆನಂದಯ್ಯನವರ ಪರಿಚಯ ಅವರಿಗೂ ತಕ್ಕಮಟ್ಟಿಗೆ ಇರುವ ಕಾರಣ ಕೂಡಲೆ ಆಂದ್ರಪ್ರದೇಶದ ಸರಕಾರ ಅವರನ್ನು ಬಿಡುಗಡೆ ಮಾಡಿ ಅವರಿಗೆ ಜಡ್ + ಭದ್ರತೆ ಒದಗಿಸುವಂತೆ ಹೇಳಿದರು ಜೊತೆಗೆ ಅವರ ಔಷಧದ ಸ್ಯಾಂಪಲ್ ಐಎಮ್ ಆರ್ ಸಿ ಗೆ ಪರೀಕ್ಷೆಗೆ ಕಳುಹಿಸಲಾಯಿತು. ಒಟ್ಟಿನಲ್ಲಿ  ಕೇಂದ್ರ ಸರಕಾರದ ಮುಂಜಾಗ್ರತೆಯಿಂದ ಒಬ್ಬ ನಾಟೀ ವೈದ್ಯರ ಮತ್ತು ಅವರ ಜ್ಞಾನದ ರಕ್ಷಣೆ ಮಾಡುವಲ್ಲಿ ಸದ್ಯಕ್ಕೆ ಸಫಲ ಆಯಿತು. ನೋಡಿತ್ತಿರಿ  ಈ ನಾಟಿ ವೈದ್ಯರ ಔಷಧಿಯ ಮಾನ ಹಾರಾಜು ಹಾಕಲು ಈ ಫಾರ್ಮಾ ಲಾಭಿಗಳು ಮಾಧ್ಯಮಕ್ಕೆ ಹೇಗೆ ಹಣ ಸುಪಾರಿ ಕೊಡಲಿದ್ದಾರೆ ಎಂದು. ಅವರು ಮಾಡುವುದೇ ಇದನ್ನು, ಮೊದಲು ಸಾದ್ಯವಾದರೆ ವ್ಯಕ್ತಿಯ ಪ್ರಾಣ ಹರಣ, ಇಲ್ಲವೋ ಮಾನ ಹರಣ. ನೀವು ಒಮ್ಮೆ ಭಾರತದ ಅಣು ವಿಜ್ಞಾನದ ಪಿತಾಮಹ ಹೋಮೀ ಬಾಬಾ ಅವರ ಸಾವು ಹೇಗಾಯಿತು ಎಂದು ಗೂಗಲ್ ಮಾಡಿ. ನಿಮಗೇ ತಿಳಿಯುತ್ತದೆ, ಈ ಪಾಶ್ಚಾತ್ಯ ದೇಶಗಳು ಭಾರತವನ್ನ ಹೇಗೆ ನಡೆಸಿಕೊಳ್ಳುತ್ತವೆ ಎಂದು. 

ಕೋವಿಡ್ ಕಾಯಿಲೆಗ  ಔಷಧ ಕಂಪೆನಿಗಳು ಮೊದಮೊದಲು ಔಷಧ ಕಂಡುಹಿಡಿಯಲು ಬಹುಕಾಲ ತಗೆದುಕೊಳ್ಳತ್ತದೆ ಎಂದರೂ ಕೊನೆಗೆ ರೋಗದ ಒತ್ತಡ ತೀವ್ರತೆ ಅರಿತು ತ್ವರಿತವಾಗಿ ಔಷಧ ಕಂಡುಹಿಡಿಯುವ ಪ್ರಕ್ರಿಯೆ ಆರಂಭಿಸಿದರು. ಭಾರತ ಸೇರಿದಂತೆ ಬಹತೇಕರು ಈ ರೋಗಕ್ಕೆ ಅಮೇರಿಕಾ ಇಲ್ಲಾ ಯುರೋಪ್ ದೇಶಗಳು ಔಷಧ ಕಂಡುಹಿಡಿಯುತ್ತವೆ ಅಂದುಕೊಂಡಿದ್ದರು. ಮೊದಲಬಾರಗೆ ಈ ಪ್ರಕ್ರಿಯೆಯುಲ್ಲಿ ಭಾರತ ಸರಕಾರ ಈ  ಸಂಪೂರ್ಣ ನೇತ್ರತ್ವ ವಹಿಸಿತು. ಭಾರತ ಬಯೋಟೆಕ್ ಸೇರಿದಂತೆ ನಾಲ್ಕೈದು ಫಾರ್ಮಾ ಕಂಪೆನಿಗಳಿಗೆ ಅಗತ್ಯ ಕಾನೂನು ಮತ್ತು ಹಣಕಾಸಿನ ಸಹಾಯ ಮಾಡಿ ಔಷಧಿ ತಯಾರಿಕೆಗೆ ವೇಗ ಕೊಟ್ಟಿತು. ಜಗತ್ತಿನ ಫಾರ್ಮಾ ಕಂಪೆನಿಯ ದೈತ್ಯ ಫೈಜರ್ ಕಂಪೆನಿ ತನ್ನ ಲಸಿಕೆ ಮಾರುಕಟ್ಟೆಗೆ ಪರಿಚಯಿಸವ ಸಮಯಕ್ಕೆ ಸರಿಯಾಗಿ ಭಾರತದ ಭಾರತ್ ಬಯೋಟೆಕ್ ಕಂಪೆನಿಯ ಕೋವ್ಯಾಕ್ಸ್ಇನ್ ಹೊರಬಂತು. ಇದರ ಜೊತೆಗೆ ಮೋದಿ ‌ಸರಕಾರ ಇದರ ಬೆಲೆ  ಪ್ರತೀ ಡೋಸಿಗೆ ಇನ್ನೂರೈವತ್ತು ನಿಗದಿ ಮಾಡಿತು. ಮತ್ತು ಜಗತ್ತಿನ ಸುಮಾರು ನೂರು ದೇಶಗಳಿಗೆ  ಕೊಟ್ಟಿತು. ದಕ್ಷಿಣ ಆಫ್ರಿಕಾದೊಂದಿಗೆ ಸೇರಿ ಲಸಿಕೆಯ ಪೇಟೆಂಟ್ ತೆಗೆದು ಈ ಲಸಿಕೆಗಳು ಜಗತ್ತಿನ ಎಲ್ಲಾ ದೇಶಗಳಿಗೂ ಕೈಗೆಟಕುವ ದರಕ್ಕೆ ಸಿಗಲಿ ಎಂದಿತು. ಇದು ವಿಶ್ವದ ಫಾರ್ಮಾ ಲಾಭಿಗಳ ನಿದ್ದೆಗೆಡಿಸಿತು. ಆಗ ಕೋವ್ಯಾಕ್ಸಿನ್ ವಿಶ್ವಾಸಾರ್ಹತೆ ಹಾಳು ಮಾಡುವ ಎಲ್ಲಾ ಪ್ರಯತ್ನ ಕಾಂಗ್ರಸ್ ಪಕ್ಷದ ನೇತ್ರತ್ವದಲ್ಲಿ ನಡೆಯಿತು. ಭಾರತದ ಜನರು ಕೊಂಚಮಟ್ಟಿಗೆ ಇದನ್ನ ನಂಬಿದರು. ಕಾರಣ ಜಗತ್ತಿನ ಯಾವ ಮುಂದುವರಿದ ರಾಷ್ಟ್ರಗಳು ಭಾರತ ಇವುಗಳಿಗೆ ಸರಿಸಮಾನವಾಗಿ ಅವುಗಳಿಗಿಂತ ಕಮ್ಮಿ ಬೆಲೆಯ ಮತ್ತು ಹೆಚ್ಚು ಸಮರ್ಥ ಲಸಿಕೆ ಕಂಡುಹಿಡುತ್ತದೆ ಎಂಬ ನಿರೀಕ್ಷೆಯಲ್ಲಿ ಇರಲೇ ಇಲ್ಲ. ಇವರ ಲೆಕ್ಕಾಚಾರವೇ ಬೇರೆ ಇತ್ತು. ಭಾರತ ಒಂದು ದೊಡ್ಡ ಮಾರುಕಟ್ಟೆ , ತಮ್ಮ  ಈಕೊ ಸಿಸ್ಟಮ್ ಬಳಸಿ ಭಾರತ ಸರ್ಕಾರದ ಮೇಲೆ ಒತ್ತಡ ಹೇರಿ ತಾವು ಹೇಳಿದ ಬೆಲೆಗೆ ಮತ್ತು ತಾವು ಹೇಳಿದ ಷರತ್ತಿಗೆ ಭಾರತ ಸರಕಾರವನ್ನು ಸಿಕ್ಕಿಸಿ ಇಲ್ಲಿ‌ ಲಸಿಕೆ ಮಾರಬಹುದು ಅಂದುಕೊಂಡಿದ್ದರು. ಇದರಲ್ಲಿ ಅಮೇರಿಕಾದ ಫೈಜರ್ ಕಂಪೆನಿಯ ಪಾತ್ರ ಬಹಳಾ ದೊಡ್ಡದು. ತನ್ನ ಬಳಿ ಮಿಲಿಯನ್ ಗಟ್ಟಲೆ ಲಸಿಕೆ ಶೇಖರಿಸಿ ಇಟ್ಟಿದ್ದ ಈ ಕಂಪೆನಿ ತನ್ನ ಲಸಿಕೆ ಬೇಕಾದರೆ ನೀವು ನಿಮ್ಮ ಮಿಲಟರಿ ನೆಲೆಗಳನ್ನು ನಮಗೆ ಅಡಮಾನವಾಗಿಡಿ ಎಂದು ಲ್ಯಾಟಿನ್ ಅಮೆರಿಕ ದೇಶಗಳಿಗೆ ನಿಬಂಧನೆ ಹಾಕಿತ್ತು. ಒಂತರಾ ಈಷ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಹಿಂದೆ ಮಾಡಿದ ರೀತಿಯಲ್ಲೇ. ನೋಡಿ ಸರಕಾರದ ಅಸಹಾಯಕತೆಯನ್ನ ಈ ದೈತ್ಯ ಕಂಪೆನಿಗಳು ಹೇಗೆ ಬಳಸಕೊಳ್ಳುತ್ತವೆ ಎಂದು. ಭಾರತದಲ್ಲೂ ಅದೇ ರೀತಿಯಲ್ಲಿ ಹೊಗಬಹುದು ಎಂದು ಯೋಚಿಸಿತು. ಇದೇ ಸಮಯದಲ್ಲಿ ನಮ್ಮ ದೇಶದ ವಿರೋಧ ಪಕ್ಷಗಳು ಒಂದಷ್ಟು ಬುದ್ದಿ ಜೀವಿಗಳು, ಸುದ್ದಿ ಸಂಸ್ಥಗಳು ಒಂದು ಹಂತದ ಲಸಿಕೆ ಯೋಜನೆಯನ್ನ ಅಪ್ರಚಾರದ ಸುಳಿಗೆ ಸಿಕ್ಕಿಸಿ ಎರಡನೇ ಹಂತದ ಅಪ ಪ್ರಚಾರದಲ್ಲಿ ತೊಡಗಿದ್ದವು. “ಭಾರತದಲ್ಲಿ‌ ಲಸಿಕೆ ಸಾಲುತ್ತಿಲ್ಲ, ವಿದೇಶದಿಂದಾದರೂ ಲಸಿಕೆ ತಂದು ಕೊಡಿ” ಇದು ಸಿದ್ದರಾಮಯ್ಯನವರು ಮೋದಿಗೆ ಹೇಳಿದ ಮಾತು.  ಈ ರೀತಿ ಸರಕಾರದ ಮೇಲೆ ಇನ್ನೊಂದು ಹಂತದ ಒತ್ತಡ ಹೇರುವ ಪ್ರಯತ್ನ ನಡೆಯಿತು‌. ಇದರ ನಡುವೆ ಫೈಜರ್ ಭಾರತ ಸರಕಾರದ ಮುಂದೆ ಪ್ರಸ್ತಾಪ ಇಟ್ಟಿತು,  ಭಾರತ ಈ ಕಂಪೆನಿಗೆ ಎರಡು ನಿಭಂದನೆ ಇಟ್ಟಿತು. ನಿಮ್ಮ‌ ಲಸಿಕೆ ಭಾರತದಲ್ಲಿ ಉಪಯೋಗಿಸಲು ಯೋಗ್ಯಾವಾ ಎಂದು ಒಂದು ಸಣ್ಣ ಪ್ರಾಯೋಗಿಕ ಪರೀಕ್ಷೆ ಮಾಡಿ, ಇನ್ನೊಂದು ನಿಮ್ಮ‌ ಲಸಿಕೆಯುಂದ ತೊಂದರೆಗೆ ಒಳಗಾದ ಯಾರಾದರೂ ನಿಮ್ಮ ಮೇಲೆ ಕಾಂಪನ್ಸೇಶನ್ ಕೇಳಿ ಕೇಸು ಹಾಕಿದರೆ ಅದಕ್ಕೇ ನೀವೆ ಜವಾಬ್ದಾರರು ಎಂದಿತು. ಫೈಜರ್ ಇವೆರಡಕ್ಕೂ ಒಪ್ಪಲಿಲ್ಲ. ಮೋದಿ ಸರಕಾರ ಈ ಶರತ್ತಿಗೆ ಒಪ್ಪದೆ ಇದ್ದರೆ ‌ನಿಮಗೆ ಭಾರತದ ಮಾರುಕಟ್ಟಗೆ ಪ್ರವೇಶ ಇಲ್ಲ ಎಂದಿತು. ಇದರ ಬೆನ್ನಲ್ಲೇ ಮತ್ತೆ ಸರಕಾರದ ಲಸಿಕೆ ಜನರಿಗೆ ತಲುಪುತ್ತಿಲ್ಲ ಎಂಬ ಮಾಧ್ಯಮ ಮತ್ತು ವಿಪಕ್ಷಗಳ ಹಾಹಾಕಾರ ಜೋರಾಯಿತು. ಮೋದಿ‌ಸರಕಾರ ನೀತಿಆಯೋಗದೊಂದಿಗೆ ಒಂದು ಹೊಸ ಪ್ರಸ್ತಾವನೆ ಇಟ್ಟಿತು. ಭಾರತದ  ಎರಡು ಕಂಪೆನಿ ಸೇರಿದಂತೆ ವಿಶ್ವದ ಒಟ್ಟು ಎಂಟು ಕಂಪೆನಿಗಳ ಸಹಯೋಗದೊಂದಿಗೆ ಡಿಸೆಂಬರ ಒಳಗೆ ಭಾರತದ ಅಷ್ಟೂ ಜನರಿಗೆ ವ್ಯಾಕ್ಸಿನ್ ಹಾಕಿಸುವ ಯೋಜನೆ ಜನರ ಮುಂದೆ ಇಟ್ಟಿತು. ಇಲ್ಲೂ ಅಮೇರಿಕಾದ ಫೈಜರ್ ಕಂಪೆನಿಗೆ ಅವಕಾಶ ಇರಲಿಲ್ಲ. ಈಗ ಮೋದಿ‌ಸರಕಾರ ಯಾವುದಕ್ಕೂ ಅಷ್ಟು ಸುಲಭಾಗಿ ಜಗ್ಗುವುದಿಲ್ಲ ಎಂದು ಮನಗಂಡು ಭಾರತದ ಮಾರುಕಟ್ಟೆ ಕಳೆದುಕೊಂಡರೆ ಆಗುವ ನಷ್ಟವನ್ನು ತಪ್ಪಿಸಲು ಭಾರತ ಸರಕಾರ ಹಾಕಿದ ಷರತ್ತು ಒಪ್ಪಿ ಲಸಿಕೆ ಪೂರೈಸುವ ಬಗ್ಗೆ ಮತ್ತೊಂದು ಪ್ರಸ್ತಾಪ ಇಟ್ಟಿರುವುದು ಮಾಧ್ಯಮಗಳಲ್ಲಿ ವರದಿಯಗಿದೆ.

ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ  ತನ್ನ ಲಸಿಕೆ ಪಟ್ಟಿಯಲ್ಲಿ ಭಾರತದ ಕೊ ವ್ಯಾಕ್ಸಿನನ್ನು ಸೇರಿಸುವುದಿಲ್ಲ. ಹೀಗಾದಾಗ ವಿಶ್ವದ ಇತರ ದೇಶಗಳು ಈ ಲಸಿಕೆಯನ್ನು ಬಳಸುವಲ್ಲಿ ಒಮ್ಮೆ ಯೋಚಿಸುತ್ತವೆ. ಒಟ್ಟಿನಲ್ಲಿ ಭಾರತ ಇವರ ಯಾವುದೇ ಪಟ್ಟುಗಳಿಗೆ ಬಗ್ಗದೆ ಇರುವುದು ಈ ಫಾರ್ಮ ಲಾಬಿಗಳಿಗೆ ನುಂಗಲಾರದ ತುತ್ತಾಗಿದೆ. ಭಾರತದ ಸೇವೆಯ ಭಾವ ಇವರ ವ್ಯವಹಾರಕ್ಕೆ ಅಡ್ಡಗಾಲಾಗುತ್ತಿದೆ. ಹಾಗಾಗಿ ಅವಕಾಶ ಸಿಕ್ಕ ಕಡೆಯಲ್ಲಾ ಭಾರತವನ್ನು ಹಣಿಯಬೇಕು, ಅವಮಾನಿಸಬೇಕು. ಮೊನ್ನೆ ಬೆಂಗಳೂರಿನ ಮಹಿಳ ಇನ್ಸ್ಪೆಕ್ಟರ್ ಒಬ್ಬರು ಇದೇ ಫಾರ್ಮಾ ಲಾಭಿಯ ಬೆನ್ನು ಮುರಿಯಲು ಹೋಗಿ ಸಸ್ಪೆಂಡ್ ಆಗಿ ಮನೆಯಲ್ಲಿ ಕೂತಿದ್ದಾರೆ. ಮೋದಿಯನ್ನೇ ಬಿಡದ ಈ ಫಾರ್ಮಾ ಲಾಭಿಗಳು, ಇವರ ವಿರುದ್ಧ ತೊಡೆ ತಟ್ಟುವ ದಕ್ಷ ಅಧಿಕಾರಿಗಳನ್ನು ಸುಮ್ಮನೆ ಬಿಟ್ಟಾರಾ?  ಇವರು ಭಾರತವನ್ನು ಹಿಂದೆ ಗುಲಾಮಿತನಕ್ಕೆ ತಳ್ಳಿದ ಈಸ್ಟ್ ಇಂಡಿಯಾ ಕಂಪೆನಿಗೆ ಯಾವ ಲೆಕ್ಕದಲ್ಲೂ ಕಮ್ಮಿ ಇಲ್ಲ..!! 

ಚಿತ್ರಕೃಪೆ : biospace.com

12
ಫೆಬ್ರ

ರೈತ ಹೋರಾಟದ ಸೋಗಿನಲ್ಲಿ ಮಹಾಸಂಚು

– ರಾಕೇಶ್ ಶೆಟ್ಟಿ 

ಕಳೆದ ಮೂರ್ನಾಲ್ಕು ತಿಂಗಳಿಂದ ದೆಹಲಿಯ ಬಾಗಿಲಿಗೆ ಬಂದು ನಿಂತಿರುವ ಪಂಜಾಬ್, ಹರ್ಯಾಣ ರೈತರ ಪ್ರತಿಭಟನೆ ದಿನ ಕಳೆದಂತೆ ತನ್ನ ಅಸಲಿ ರೂಪವನ್ನು ಅದು ತೋರಿಸಲಾರಂಭಿಸಿದೆ.

ರೈತರ ಪ್ರತಿಭಟನೆಯ ನಾಯಕತ್ವ ವಹಿಸಿರುವ “ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)” ಅಧ್ಯಕ್ಷ ರಾಕೇಶ್ ಟಿಕಾಯತ್ ಅವರು ಜೂನ್ 2020ರಲ್ಲಿ ನೀಡಿದ ಹೇಳಿಕೆಯಲ್ಲಿ, ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಸ್ವಾಗತಿಸಿದ್ದರು. ನಮ್ಮ ಬಹುಕಾಲ ಬೇಡಿಕೆ ಈಡೇರಿತು ಎಂದಿದ್ದರು. ಆದರೆ, ಈಗ ಅದೇ ರಾಕೇಶ್ ಟಿಕಾಯತ್ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕುಳಿತಿದ್ದಾರೆ.

ಮತ್ತೊಂದು ಕಡೆ, ತನ್ನ ಪ್ರಣಾಳಿಕೆಯಲ್ಲಿ APMC ಹಾಗೂ Essential Commodities Act ಅನ್ನು ತೆಗೆದು ಹಾಕುವುದಾಗಿ ಹೇಳಿಕೊಂಡಿತ್ತು. ಆದರೆ, ಈಗ ಅದೇ ಕಾಂಗ್ರೆಸ್ಸು ಪ್ರತಿಭಟನೆಗೆ ಬೇಕಾದ ಸಪ್ಲೈ ಮಾಡುತ್ತಿದೆ. ರೈತರನ್ನು ಎತ್ತಿಕಟ್ಟುತ್ತಿದೆ.

ಜನವರಿ 26ರ ಗಣತಂತ್ರ ದಿನದಂದು, ಈ ರೈತರ ವೇಷದ ಪ್ರತಿಭಟನಾಕಾರರು ದೆಹಲಿಯೊಗೆ ನುಗ್ಗಿ ನಡೆಸಿದ ದಾಂಧಲೆಯನ್ನೂ, ಕೆಂಪುಕೋಟೆಗೆ ಲಗ್ಗೆಯಿಟ್ಟು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದನ್ನು ಇಡೀ ಜಗತ್ತಿನ ಕಣ್ಣುಗಳು ನೋಡಿದವು. ಆವತ್ತಿನ ದಿನ ಇವರು ನಡೆಸಿದ ದಾಂಧಲೆಗೆ ಪ್ರತಿಯಾಗಿ ಪೋಲಿಸರು ಗೋಲಿಬಾರ್ ಮಾಡಬೇಕು ಮತ್ತು ಆ ಗುಂಡಿಗೆ ಒಂದಷ್ಟು ಹೆಣ್ಣು ಉರುಳಬೇಕು ಎಂದು ರೈತ ಹೋರಾಟದ ವೇಷ ತೊಟ್ಟ ತೋಳಗಳು ಬಯಸಿದ್ದವು.   ಆದರೆ, ದೆಹಲಿ ಪೋಲಿಸರು ತಾವು ಪೆಟ್ಟು ತಿಂದರೆ ಹೊರತು ಪ್ರತಿದಾಳಿ ಮಾಡದೇ ಇವರ ಪ್ಲಾನ್ ಹಾಳುಗೆಡವಿದರು. ರೈತ ನಾಯಕನೆಂದು ಕಳೆದುಕೊಳ್ಳುವ  ರಾಕೇಶ್ ಟಿಕಾಯತ್ ಅವರೇ, ಪೋಲಿಸರೇಕೆ ಗುಂಡು ಹಾರಿಸಲಿಲ್ಲ ಎಂದು ಕೇಳುತ್ತಾರೆ ಎಂದರೆ, ಇವರ ಉದ್ದೇಶ ಅರ್ಥವಾಗದೇ?

ಅವನೊಬ್ಬ ಪೋಲಿಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಬಂದು ಪಲ್ಟಿಯಾಗಿ ಬಿದ್ದು ಸತ್ತಾಗ ಪತ್ರಕರ್ತ ರಾಜದೀಪ ಸರ್ದೇಸಾಯಿ, ಸಂಸದ ಶಶಿತರೂರ್ ಮತ್ತಿತ್ತರರು ಪೋಲಿಸರು ಗುಂಡು ಹಾರಿಸಿ ಕೊಂದರು ಎಂದು ಸುಳ್ಳು ಹರಡಲು ನೋಡಿದರು. ಅಂದರೆ ಇವರ ಇರಾದೆ ಪಕ್ಕಾ ಇತ್ತು. ಕೇಂದ್ರ ಸರ್ಕಾರ ರೈತರ ಮಾರಣ ಹೋಮ ನಡೆಸಿದೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಎಲ್ಲಾ ಪ್ಲಾನ್ ರೆಡಿಯಾಗಿತ್ತು.

ಅಂತಹ ದೊಡ್ಡ ಸಂಚಿನ ಸಣ್ಣ ಭಾಗವಾದ ಡಾಕ್ಯುಮೆಂಟ್ ಒಂದು ಅಪ್ಪಿತಪ್ಪಿ ಹೊರಬಿದ್ದಿದೆ.

ಸೋ ಕಾಲ್ಡ್ ರೈತ ಪ್ರತಿಭಟನೆಯೊಂದನ್ನು ಹೇಗೆ ವ್ಯವಸ್ಥಿತವಾಗಿ ನಿರ್ವಹಿಸಬೇಕು ಎನ್ನುವುದನ್ನು  ನಗರನಕ್ಸಲರು + ಖಲಿಸ್ತಾನಿಗಳಿಂದ ಕಲಿಯಬೇಕು ನೋಡಿ. ಯಾವಾಗ ದೇಶದ ಮುಂದೆ ಜನವರಿ 26ರಂದು ಇವರು ಬೆತ್ತಲಾದರೋ, ಮುಂದಿನ ಹಾರಿಸಿದ ಮೊದಲೇ ನಿರ್ಧರಿಸಿದಂತೆ ವಿದೇಶಿ ಸೆಲೆಬ್ರಿಟಿಗಳನ್ನು ಮುಂದೆ ತಂದು ನಿಲ್ಲಿಸಿದರು. ಹಾಗೆ ಎದುರು ಬಂದು ನಿಂತ ಒಂದು ಪುಟ್ಟ ಹುಡುಗಿ ಗ್ರೇಟಾ ಥುನ್ಬರ್ಗ್. ಪರಿಸರ ಹೋರಾಟಗಾರ್ತಿ ಎಂದು ಈಕೆಯನ್ನು ಪಾಶ್ಚಿಮಾತ್ಯ ಮಾಫಿಯಾಗಳು ಬಿಂಬಿಸಿ ಸೆಲೆಬ್ರಿಟಿ ಪಟ್ಟ ಕಟ್ಟಿವೆ. 

ಈ ಎಳಸು ಹುಡುಗಿ, ಫೆಬ್ರುವರಿ 3ರಂದು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿ, ಅದರಲ್ಲಿ ಎಡವಟ್ಟಾಗಿ ಈ ಮಹಾ ಹಂಚಿನ Document ಹೊರಗೆ ಬಿಟ್ಟಿದ್ದಾಳೆ. (ಕಡೆಗೆ ಆ ಟ್ವೀಟನ್ನು ಅವಳಿಂದ ಡಿಲೀಟ್ ಮಾಡಿಸಿದ್ದಾರೆ)

ಆ ಡಾಕ್ಯುಮೆಂಟಿನಲ್ಲಿ ಹೇಗೆ ಟ್ವೀಟ್ ಮಾಡಬೇಕು, ಯಾರನ್ನು ಟ್ಯಾಗ್ ಮಾಡಬೇಕು ಎನ್ನುವ ಮಾಹಿತಿಗಳಿವೆ. ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಬ್ರಿಟನ್ ಪ್ರಧಾನಿಯನ್ನು ಭಾರತದ ಮೇಲೆ ಒತ್ತಡ ಹೇರಲು ಏನೆಲ್ಲಾ ಮಾಡಬೇಕು ಎಂದು ಅದರಲ್ಲಿ ಬರೆಯಲಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರತಿಭಟನೆಯಲ್ಲಿ ನೂರಾರು ರೈತರು ಸತ್ತಿದ್ದಾರೆ, ನೂರಾರು ಜನರನ್ನು ಸರ್ಕಾರ ನಾಪತ್ತೆ ಮಾಡಿದೆ ಅಂತೆಲ್ಲಾ ಸುಳ್ಳೇ ಬರೆಯಲಾಗಿದೆ.

ದೇಶದ ವಿರುದ್ಧ ಹೇಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಮೂಡಿಸುವ ಪ್ರಯತ್ನ ನೋಡಿ. 26ನೇ ತಾರೀಖಿನಂದು ಇವರು ಗಲಭೆ ಎಬ್ಬಿಸಿದಾಗ ಅಪ್ಪಿ ತಪ್ಪಿ ಪೋಲಿಸರು ಒಂದೇ ಒಂದು ಗುಂಡು ಹಾರಿಸಿ ಯಾವನಾದರೂ ಸತ್ತಿದ್ದರೆ, #AskIndiaWhy  ಎಂದು ದೊಡ್ಡ ಮಟ್ಟದ ಟ್ವಿಟರ್ ವಾರ್ ನಡೆಯಲಿಕ್ಕಿತ್ತು.

ಆ ಡಾಕ್ಯುಮೆಂಟಿನಲ್ಲಿ ಇರುವ ಮತ್ತೊಂದು ಅಂಶ ಅಂಬಾನಿ-ಅದಾನಿಯವರ ಜೊತೆ ಸೇರಿ ಮೋದಿ ರೈತರನ್ನು ಮುಗಿಸಲು ಹೊರಟಿದ್ದಾರೆ. ಅಂಬಾನಿ-ಅದಾನಿಗಳ ಕಂಪೆನಿಗಳ ಎದುರು ಪ್ರತಿಭಟಿಸಿ ಅವರ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದಾರೆ. ಆದರೆ, ವಿಚಿತ್ರವೆಂದರೆ ಈ ರೈತರ ಐಷಾರಾಮಿ ಪ್ರತಿಭಟನೆಗೆ ವಿದೇಶಿ ಕಾರ್ಪೋರೇಟ್  ಶಕ್ತಿಗಳ ನಿಗೂಢ ಬೆಂಬಲವಿದೆ. ಹೊಲದ ಕೆಲಸ ಬಿಟ್ಟು ಎರಡ್ಮೂರು ದಿನ ನಂಟರ ಮನೆಗೆ ಹೋಗಲಾಗದ ಸರಾಸರಿ ಭಾರತೀಯ ರೈತರು ಒಂದು ಕಡೆಯಿದ್ದರೆ, ಈ ಸೋಕಾಲ್ಡ್ ರೈತರು ತಿಂಗಳಾನುಗಟ್ಟಲೆ ಜಮೀನು ಬಿಟ್ಟು ಬಂದಿದ್ದಾರೆ. ಕೇಂದ್ರ ಸರ್ಕಾರ ಕಾಯ್ದೆಯನ್ನು ಎರಡರ ವರ್ಷ ತಡೆ ಹಿಡಿಯುತ್ತೇವೆ. ಪ್ರತಿಭಟನೆ ನಿಲ್ಲಿಸಿ ಎಂದರೂ ಇವರು ಕಲ್ಲು ತಯಾರಿಲ್ಲ. ಇವರ ಪ್ರತಿಭಟನೆಗೆ ದೊಡ್ಡ ದೊಡ್ಡ ಟೆಂಟುಗಳಿವೆ. ತರಹೇವಾರಿ ತಿಂಡಿ,ತಿನಿಸುಗಳಿವೆ. ಪಿಜ್ಜಾ ಪಾರ್ಟಿ, ಮದ್ಯದ ಪಾರ್ಟಿ, ಡಿಜೆ , ಸಿನಿಮಾ ಪ್ರದರ್ಶನ, ವಾಷಿಂಗ್ ಮಷೀನು, ರೊಟ್ಟಿ, ಚಪಾತಿ ಮಾಡುವ ಮಷೀನ್ ಎಲ್ಲವೂ ಇವೆ. ಇವಿಷ್ಟೇ ಅಲ್ಲ ಇವರ ಹಾರಾಟವನ್ನು ಬೆಂಬಲಿಸಿದ ಪಾಪ್ ಗಾಯಕಿ ರಿಹಾನಳ ಒಂದೇ ಒಂದು ಟ್ವೀಟಿಗೆ 2.5 ಮಿಲಿಯನ್ ಸಂದಾಯವಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಅಂಬಾನಿ,ಅದಾನಿಯನ್ನು ವಿರೋಧಿಸುವ ಈ ಹೋರಾಟಗಾರರಿಗೆ ಇಂತಹ ಐಷಾರಾಮಿ ಸವಲತ್ತುಗಳನ್ನು ಒದಗಿಸುತ್ತಿರುವ ಕೋಟ್ಯಾಧೀಪತಿಗಳು ಯಾರು?

ವಿಷಯ ಸ್ಪಷ್ಟವಿದೆ.  ಇವರ ಹೋರಾಟ ರೈತ ಕಾಯ್ದೆಗಳ ಬಗ್ಗೆ ಅಲ್ಲವೇ ಅಲ್ಲ. ರೈತರನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿಯನ್ನು ಹಣಿಯುವ, ಹಿಂಸಾಚಾರದ ಮೂಲಕ ಸರ್ಕಾರವನ್ನು ಗೋಲಿಬಾರಿನಂತ ಕಡೆಯ ಅಸ್ತ್ರ ಪ್ರಯೋಗ ಮಾಡಿಸುವುದು ಮತ್ತು ಆ ಮೂಲಕ ದೇಶದಲ್ಲಿ ಮಿಲಿಟರಿ ಆಡಳಿತವಿದೆಯೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಮಹಾ ಸಂಚು ಇದು.

ಆದರೆ, ಈ ನೆಲದ ಅದೃಷ್ಟ ದೊಡ್ಡದು. ದೇಶವನ್ನು ಹಾಳು ಗೆಡವಲು ಸಾವಿರಾರು ಕಳ್ಳರು ಒಂದಾದರೂ, ಅಗೋಚರ ಶಕ್ತಿಯೊಂದು ಇಂದಿಗೂ ತಲೆ ಕಾಯುತ್ತಿದೆ.

ಆಟ ಇನ್ನೂ ಮುಗಿದಿಲ್ಲ. ಈ ಅಂತರರಾಷ್ಟ್ರೀಯ ಕಳ್ಳರ ಕೂಟವನ್ನು ಮೋದಿಯವರು ಹೇಗೆ ಎದುರಿಸುತ್ತಾರೆ ಕಾದು ನೋಡಬೇಕು.

26
ಆಕ್ಟೋ

ಈಗ ರೈತನಿಗೂ ಅನಿಸುತ್ತಿದೆ, ಇದು ೨೦೨೦ರ ಭಾರತ ಎಂದು

– ಅಜಿತ್ ಶೆಟ್ಟಿ ಹೆರಂಜೆ

ಪ್ರಧಾನಿ ಮೋದಿಯವರು ೨೦೨೨ರ ಹೊತ್ತಿಗೆ ದೇಶದ ರೈತರ ಆದಾಯ ದ್ವಿಗುಣ ಮಾಡುವ ಬಗ್ಗೆ ಮಾತನಾಡಿದ್ದರು. ಇದೇ ನಿಟ್ಟಿನಲ್ಲಿ ಮೋದಿ ಸರ್ಕಾರ ಕಳೆದ ಆರು ವರ್ಷಗಳಿಂದ ದೇಶದ ಬಡವರ ಮತ್ತು ಕೃಷಿಕರ ಶ್ರೇಯೋಭಿವೃದ್ಧಿಯತ್ತ ಕೆಲಸಮಾಡಿದೆ. ಆ ಕಾರಣಕ್ಕೆ ಮೋದಿಯವರು ಜಾರಿಗೆ ತಂದ ಯೋಜನೆಗಳಾದ ಯೂರಿಯಾಕ್ಕೆ ಬೇವಿನ ಲೇಪನ ಮಾಡಿದ್ದು, ಜನ್‌ಧನ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಕಿಸಾನ್ ಸಿಂಚಾಯಿ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಆಯುಷ್ಮಾನ್ ಭಾರತ್ ಯೋಜನೆ, ಫಸಲ್ ಭೀಮಾ ಯೋಜನೆ, ಸೋಯ್ಲ್ ಹೆಲ್ತ್ ಕಾರ್ಡ್ ಯೋಜನೆ, ಪಾರಂಪರಿಕ ಕೃಷಿ ಯೋಜನೆ ಅಥವಾ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಸುಧಾರಣಾ ಮಸೂದೆ ೨೦೨೦ ಇವೆಲ್ಲವೂ ಮೋದಿಯವರು ರೈತರಿಗೆ ಕೊಟ್ಟ ಮಾತಿಗೆ ಪೂರಕವಾಗಿ ಬಂದ ಯೋಜನೆಗಳು. ಚೀನಿಯರು ಭಾರತದ ಗಡಿಯಲ್ಲಿ ನಿಂತು ನಾವು ನಿಮ್ಮನ್ನು ೬೨ರಂತೆ ಹೊಸಕಿ ಹಾಕುತ್ತೇವೆ ಅಂದಾಗ ಅದಕ್ಕೆ ಅಂದಿನ ರಕ್ಷಣಾ ಮಂತ್ರಿಗಳಾದ ದಿವಂಗತ ಅರುಣ್ ಜೇಟ್ಲಿಯವರು ಮಾರ್ಮಿಕವಾಗಿ ಇದು ೬೨ರ ಭಾರತ ಅಲ್ಲ, ೨೦೨೦ರ ಭಾರತ ಅಂದಿದ್ದರು. ಅವರು ಹೇಳಿದ್ದು ದೇಶದ ಸೈನ್ಯ ಶಕ್ತಿಯ ಮಟ್ಟಿಗೆ ಸರಿಯಾಗೆ ಇತ್ತು. ಆದರೆ ಅಂದು ದೇಶದ ರೈತನಿಗೆ ಬಹುಶಃ ಇದು ೨೦೨೦ರ ಭಾರತ ಅನ್ನಿಸಿರಲಿಕ್ಕಿಲ್ಲ. ಕಾರಣ ಅವನು ಮೋದಿಯವರು ಕೃಷಿ ಸುಧಾರಣಾ ಕಾನೂನು ೨೦೨೦ ತರುವ ತನಕ ಬ್ರಿಟೀಷರ ಕಾಲೋನಿಯಲ್ ಕಾನೂನುಗಳ ಸಂತ್ರಸ್ತನಾಗಿಯೆ ಇದ್ದ. ರೈತ ತನಗೆ ಇಷ್ಟ ಬಂದ ಬೆಳೆಯನ್ನೇನೋ ಬೆಳೆಯುತ್ತಿದ್ದ. ಆದರೆ ಆತ ಅದನ್ನು ತನಗೆ ಇಷ್ಟ ಬಂದ ಜಾಗದಲ್ಲಿ ಇಷ್ಟ ಬಂದ ಬೆಲೆಗೆ, ತನಗೆ ಇಷ್ಟ ಬಂದ ವ್ಯಕ್ತಿಗೆ ಮಾರುವ ಅವಕಾಶದಿಂದ ವಂಚಿತನಾಗಿದ್ದ. ಇವನನ್ನು ದಾಸ್ಯದ ಸಂಕೋಲೆಯಿಂದ ಬಿಡುಗಡೆ ಮಾಡಿದ್ದು ಕೃಷಿ ಮಸೂದೆ-೨೦೨೦. ಮತ್ತಷ್ಟು ಓದು »

3
ಆಗಸ್ಟ್

ಸ್ವ ರಕ್ಷಣೆಯಿಂದ ರಾಷ್ಟ್ರರಕ್ಷಣೆ: ರಕ್ಷಾಬಂಧನ ಸಂದೇಶ

– ರಾಜೇಶ್ ನರಿಂಗಾನ
ಶ್ರಾವಣ ಹುಣ್ಣಿಮೆ ಮತ್ತೆ ಬಂದಿದೆ. ಶ್ರಾವಣ ಹುಣ್ಣಿಮೆಯಂದು ಆಚರಿಸುವ ರಕ್ಷಾಬಂಧನ ಹಬ್ಬಕ್ಕೆ ಅದರದೇ ಆದ ಪೌರಾಣಿಕ, ಐತಿಹಾಸಿಕ ಹಿನ್ನೆಲೆಯಿದೆ. ಓರ್ವ ಜವಾಬ್ದಾರಿಯುತ ಸಹೋದರ ತನ್ನ ಸಹೋದರಿಯನ್ನು ರಕ್ಷಣೆ ಮಾಡಬೇಕು ಎನ್ನುವ ಆಶಯದಿಂದ ಹಿಡಿದು ಸ್ವಯಂಸೇವಕರು ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡು ರಾಷ್ಟ್ರ ರಕ್ಷಣೆಗೈಯುವ ಸಂಕಲ್ಪದ ಉದಾತ್ತ ಧ್ಯೇಯ ಆಶಯದವರೆಗೆ ರಕ್ಷಾಬಂಧನವನ್ನು ವಿವಿಧ ರೀತಿಯಲ್ಲಿ ವಿಶ್ವದಾದ್ಯಂತ ಆಚರಿಸುತ್ತೇವೆ. ಇಂತಿಪ್ಪ ರಕ್ಷಾಬಂಧನ ಮತ್ತೆ ಬಂದಿದೆ. ಕಟ್ಟಲು ಬಗೆಬಗೆಯ ರಕ್ಷೆಗಳು ಮಾರುಕಟ್ಟೆಗೆ ಮಿತವಾಗಿ ಬಂದಿದೆ.
ಸಹೋದರ ಸಹೋದರಿಯರ ನಡುವೆ ನಂಬಿಕೆ, ಭರವಸೆಯನ್ನು ಉದ್ದೀಪನಗೊಳಿಸುವ, ಸಹೋದರನಿಗೆ ಸಹೋದರಿಯ ಮೇಲೆ ಇರುವ ಕಾಳಜಿ, ಸಹೋದರಿಗೆ ಸಹೋದರನ ಮೇಲೆ ಇರುವ ಅಕ್ಕರೆ, ನವಿರಾದ ಬಾಂಧವ್ಯವನ್ನು ಉಜ್ವಲಗೊಳಿಸುವ ಹಬ್ಬವೇ ರಕ್ಷಾಬಂಧನ. ಸಹೋದರನ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ, ನಿನ್ನ ಸುಖ-ದುಃಖಗಳಲ್ಲಿ ಸಮಾನ ಭಾಗಿಯಾಗುತ್ತೇನೆ; ನನ್ನ ಯೋಗಕ್ಷೇಮ, ರಕ್ಷಣೆಯ ಭಾರ ನಿನ್ನ ಹೆಗಲಿಗೆ ಎಂದು ದೇವರ ಮುಂದೆ ಪ್ರಾರ್ಥಿಸಿ ರಕ್ಷೆಯನ್ನು ಕಟ್ಟುವುದು ತಲೆತಲಾಂತರದಿಂದ ಬಂದಿರುವ ಪದ್ಧತಿ, ಸಂಪ್ರದಾಯ.

ಮತ್ತಷ್ಟು ಓದು »

3
ಜುಲೈ

ಕಮ್ಯುನಿಸಂನ ಅಭದ್ರತೆ ಮತ್ತು ಅಸಹನೆಯೇ ಚೀನಾ ಆಕ್ರಮಣದ ಮೂಲ

– ಅಜಿತ್ ಶೆಟ್ಟಿ ಹೆರಂಜೆ

ಯಾವುದೇ ದೇಶ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪ್ರಭುತ್ವ ಸ್ಥಾಪಿಸಬೇಕಾದರೆ ಅದು ವ್ಯಾಪಾರ ನಡೆಸುವ ಮಾರ್ಗ ಸುರಕ್ಷಿತವಾಗಿರಬೇಕು ಮತ್ತು ಬಹುತೇಕ ಅದು ಆ ದೇಶದ ನಿಯಂತ್ರಣದಲ್ಲಿ ಇರಬೇಕು. ಈ ಭೂಮಿಯ ಮೇಲೆ ಶತಮಾನಗಳಿಂದಲೂ ಅಂತಾರಾಷ್ಟ್ರೀಯ ವ್ಯಾಪಾರ ಬಹುತೇಕ ಸಮುದ್ರ ಮಾರ್ಗದ ಮುಖಾಂತರವೇ ನೆಡೆದಿದ್ದು. ಇದರ ನಿಯಂತ್ರಣ ಯಾರ ಕೈಯಲ್ಲಿ ಇರುತ್ತದೆಯೋ ಅವರು ಜಗತ್ತಿನ ರಾಜಕೀಯವನ್ನು ನಿಯಂತ್ರಿಸುತ್ತಾರೆ. ಇದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ನೆಪೋಲಿಯನ್ ಬೊನಪಾರ್ಟೆ ಇಂಗ್ಲೆಂಡನ್ನು ಸಾಮರಿಕವಾಗಿ ಬಗ್ಗುಬಡಿಯಲು ಆಗದ ಸಂದರ್ಭದಲ್ಲಿ ಅದರ ಆರ್ಥಿಕತೆಯ ನರಮಂಡಲವಾಗಿದ್ದ ಸಮುದ್ರ ವ್ಯಾಪಾರ ಮಾರ್ಗದ ಮೇಲೆ ದಿಗ್ಭಂಧನವನ್ನು ಹಾಕುತ್ತಾನೆ. ಇದು ಆ ಕಾಲದಲ್ಲಿ ಇಂಗ್ಲೆಂಡಿಗೆ ಬಲವಾದ ಹೊಡತವನ್ನೇ ಕೊಟ್ಟಿತ್ತು. ಯೂರೋಪ್ ಮತ್ತು ಪೂರ್ವ ರಾಷ್ಟ್ರಗಳ ನಡುವೆ ವಾಣಿಜ್ಯ ವ್ಯವಹಾರಗಳ ಸಂಪರ್ಕದ ಕೊಂಡಿಯಾಗಿದ್ದ ಕಾಂನ್‌ಸ್ಟಾಂಟಿನೋಪಲನ್ನು ಒಟ್ಟೋಮನ್ ತುರ್ಕರು ವಶಪಡಿಸಿಕೊಂಡಾಗ ಯುರೋಪಿಯನ್ನರಿಗೆ ಪೂರ್ವದ ಜೊತೆಗೆ ವ್ಯವಹಾರ ಮಾಡಲು ಹೊಸ ಮಾರ್ಗದ ಅನ್ವೇಷಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಹಾಗೆಯೆ ಇವತ್ತು ಚೀನಾ ಇಂತಹುದೇ ಒಂದು ಕೃತ್ಯಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳುತ್ತಿದೆ.

ಕಳೆದ ಕೆಲವು ದಿನಗಳಿಂದ ಲಡಾಕಿನ ಗಲ್ವಾನ್ ಸರೋವರದ ತೀರದಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉಪದ್ರವ ಚೀನಾ ಇಡೀ ಜಗತ್ತಿನಲ್ಲಿ ತಾನು ವಿಶ್ವದ ಆರ್ಥಿಕ ಜಗತ್ತಿನ ಅನಭಿಶಕ್ತ ದೊರೆಯಾಗಬೇಕು ಎನ್ನುವ ಕೂಟ ನೀತಿಯ ಒಂದು ಚಿಕ್ಕ ಭಾಗ. ಇದು ಭಾರತ ಮತ್ತು ಚೀನಾದ ಒಂದು ಸಣ್ಣ ಗಡಿ ವಿವಾದ ಎಂದು ಭಾವಿಸಿದರೆ ಖಂಡಿತ ತಪ್ಪಾಗುತ್ತದೆ.

ಮತ್ತಷ್ಟು ಓದು »

26
ಜೂನ್

ಅಧಿಕಾರ ನಿಮಿತ್ತಂ ಬಹುಕೃತ ವೇಷಂ

– ಬಿದಿರೆ ಪ್ರಕಾಶ್

ಎಂತಹ ಮಾತು? :  ‘ನನ್ನ ಮೇಲೆ ಬಿಜೆಪಿಯ ಕೃಪೆಯಿದೆ, ಬಿಜೆಪಿಯ ಕೃಪೆಯಿಂದ, ಬಿಜೆಪಿಯ ಹಿರಿಯರು ನೀಡಿದ ನನಗೊಂದು ಅವಕಾಶದಿಂದ ನಾನು ಇಂತಹ ಸ್ಥಾನದಲ್ಲಿದ್ದೇನೆ’ ಇದು ಇಡೀ ದೇಶದಲ್ಲಿ ತನ್ನದೇ ನಾಮಬಲದಿಂದ ಬಿಜೆಪಿಯನ್ನು ಮೇರು ಶಿಖರಕ್ಕೆ ಹೊತ್ತೊಯ್ದ ದೇಶದ ನೆಚ್ಚಿನ ಪ್ರಧಾನಿಯವರ ಮಾತುಗಳು.

ಕಳೆದ ಲೋಕಸಭಾ ಚುನಾವಣೆಯಲ್ಲಿ 282ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದದ್ದೂ ಇವರ ನಾಮಬಲದಿಂದಲೇ, ನಂತರ ಒಂದಾದ ಮೇಲೆ ಒಂದರಂತೆ ದೇಶದ ರಾಜ್ಯಗಳೆಲ್ಲಾ ಬಿಜೆಪಿ ಗೆಲುವು ಸಾಧಿಸುತ್ತಿರುವುದೂ ಇವರ ಸಾಮರ್ಥ್ಯದಿಂದಲೇ. ಆದರೆ ಈ ಗೆಲುವು, ಸಾಧನೆಗಳೆಲ್ಲವಕ್ಕೂ ತಾವೇ ಕಾರಣೀ ಪುರುಷನಾಗಿದ್ದರೂ ಅದನ್ನು ‘ಕಾರ್ಯಕರ್ತರ ಗೆಲುವು’, ಹಿರಿಯರು ಕೊಟ್ಟ ಅವಕಾಶ’ ಎಂದು ಹೇಳುವ ಶ್ರೀ ನರೇಂದ್ರ ಮೋದಿಯವರಂತಹ ಮೇರು ವ್ಯಕ್ತಿತ್ವವಿರುವುದೂ ಬಿಜೆಪಿಯಲ್ಲೇ.

ಎಂತಹ ವಿಪರ್ಯಾಸ… ! :  ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತ್ರ ಬಿಜೆಪಿಗೆ ಬಂದರು, ಅಧಿಕಾರವನ್ನೂ ಅನುಭವಿಸಿದರು. ಬಿಜೆಪಿಗೆ ಏನನ್ನೂ ಕೊಡದೆ, ಬಿಜೆಪಿಯಿಂದಲೇ ಎಲ್ಲವನ್ನೂ ಪಡೆದರು. ಕೊನೆಗೆ ಬಿಜೆಪಿಯನ್ನೂ, ಬಿಜೆಪಿ ನಾಯಕರನ್ನೂ ಜರಿದು ಬಿಡುವ ಬಿ.ಜೆ. ಪುಟ್ಟಸ್ವಾಮಿಯಂತಹ ನಾಯಕ(?)ರುಗಳು ಇರುವುದೂ ಬಿಜೆಪಿಯಲ್ಲೇ.ಬಿಜೆಪಿಗೆ ಒಳಹೊಕ್ಕಾಗ ಇದರಿಂದ ಬರುವಂತಹ ಮಾತುಗಳೆಂತಹವು? ಬಿಜೆಪಿ ಬಿಡುವಾಗ ಇವರುಗಳ ಬಾಯಿಂದ ಉದುರುವ ನುಡಿಮುತ್ತುಗಳೆಂತವು? ಎಂಎಲ್‌ಸಿ ಸ್ಥಾನ ವಂಚಿತರಾದ ಕೂಡಲೇ ಎಂತಹ ಮಾತುಗಳು ಈ ಪುಟ್ಟಸ್ವಾಮಿಯವರಿಂದ ಬಂದು ಬಿಟ್ಟಿತು! ಇವರು ಬಂದ ಮೇಲೆಯೇ ಬಿಜೆಪಿಯಲ್ಲಿ ಹಿಂದುಳಿದ ವರ್ಗ ಸಂಘಟನೆಯಾಯಿತಂತೆ! ಪುಟ್ಟಸ್ವಾಮಿಯವನರನ್ನು ಒಮ್ಮೆ ಕೇಳಲೇಬೇಕು. ಎಲ್ಲಿದ್ದೀರಾ ಪುಟ್ಟಸ್ವಾಮಿಯವರೇ? ನೀವು ಬರುವ ಮೊದಲು ಬಿಜೆಪಿ ಏನಾಗಿತ್ತು? ನೀವು ಬಂದ ಮೇಲೆ ಬಿಜೆಪಿ ಏನಾಯಿತು? ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ, ಹಾಗೆಯೇ ಬಿಜೆಪಿಗೆ ನೀವು ಬಂದ ಮೇಲೆ, ನೀವೂ, ನಿಮ್ಮ ಅಂತಸ್ತು ಏನಾಯಿತೆಂಬುದನ್ನೂ ಮನನ ಮಾಡಿಕೊಳ್ಳಿ.

ಮತ್ತಷ್ಟು ಓದು »