ವಿಷಯದ ವಿವರಗಳಿಗೆ ದಾಟಿರಿ

ಜನವರಿ 5, 2011

55

ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ,ಕನ್ನಡ ಮಾತ್ರ ಸಾಕು

‍ನಿಲುಮೆ ಮೂಲಕ

ಕಲ್ಯಾಣ ರಾಮನ್ ಚಂದ್ರಶೇಖರನ್

*****
ಕಳೆದ ಭಾನುವಾರ, ೨೬ ಡಿಸಂಬರ್ ೨೦೧೦ ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ, ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿಯ ೩೭ನೇ ಘಟಿಕೋತ್ಸವದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತ “ರಾಷ್ಟ್ರ ಭಾಷೆ ಹಿಂದಿ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳು ಭಾರತದ ಏಕತೆಯ ಸಂಕೇತಗಳಿದ್ದಂತೆ” ಎಂದು ತಿಳಿಸಿರುತ್ತಾರೆ(ವಿಜಯ ಕರ್ನಾಟಕ ಸುದ್ಧಿ ೨೭/೧೨/೨೦೧೦, ಪುಟ ೧೧).

ಮೊದಲಿಗೆ ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ. ಹಾಗೆಂದು ನಮ್ಮ ಸಂವಿಧಾನದಲ್ಲಿ ಎಲ್ಲೂ ನಮೂದಾಗಿಲ್ಲ. ಅರಿವು-ತಿಳಿವುಳ್ಳ ಕಾಯ್ಕಿಣಿಯಂತಹವರೇ, ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ತಪ್ಪು ಅಭಿಪ್ರಾಯ ಹೊಂದಿರುವಾಗ ಇನ್ನು ಜನ ಸಾಮಾನ್ಯರ ಆಭಿಪ್ರಾಯದ ಕುರಿತಾಗಿ ಹೇಳುವುದೇನಿದೆ? ಇದು ಈ ಹಿಂದಿ ಸೇವಾ ಸಮಿತಿಗಳು, ತಮ್ಮ ಪ್ರಚಾರಕ್ಕಾಗಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಬಿಂಬಿಸುತ್ತಿರುವ ಪರಿಯನ್ನು ಎತ್ತಿ ತೋರಿಸುತ್ತಿದೆ ಮತ್ತು ಜನಸಾಮಾನ್ಯರಲ್ಲಿ, ಹಿಂದಿ ಭಾರತದ ರಾಷ್ಟ್ರ ಭಾಷೆ, ಹಿಂದಿ ಬಲ್ಲವ ಮಾತ್ರ ರಾಷ್ಟ್ರ ಭಕ್ತಿ ಹೊಂದಿರಲು ಸಾಧ್ಯ , ಇಡೀ ಭಾರತದ ಸಂಸ್ಕೃತಿಯೆಂದರೆ ಕೇವಲ ಹಿಂದಿ ಸಂಸ್ಕೃತಿ ಮಾತ್ರ, ಹಿಂದಿ ಬಲ್ಲವನಿಗೆ ಮಾತ್ರ ಸರ್ಕಾರದ ಎಲ್ಲಾ ಉದ್ಯಮಗಳಲ್ಲಿ ಕೆಲಸ ಲಭ್ಯ, ಹಿಂದಿಯನ್ನು ಕಲಿತು ಇಡೀ ಭಾರತವನ್ನು ಸುತ್ತಾಡಿ ಎಲ್ಲವನ್ನು ಗ್ರಹಿಸಿ, ಎಲ್ಲರೊಂದಿಗೆ ಐಕ್ಯತೆಯನ್ನು ಸಾಧಿಸಿಬಿಡಬಹುದು ಮತ್ತು ಹಿಂದಿ ಬಾರದಿರುವುದೇ ನಮ್ಮ ಜನಪ್ರತಿನಿಧಿಗಳಿಗೆ ರಾಷ್ಟ್ರ ವರ್ಚಸ್ಸು ಗಳಿಸಲು ಸಾಧ್ಯವಾಗದಿರುವ ಕಾರಣ ಎಂಬ ಕಲ್ಪನೆ – ಭ್ರಮೆಯನ್ನು ಆಳವಾಗಿ ಬಿತ್ತಿದೆ. ವಾಸ್ತವವೆಂದರೆ ಭಾರತದೆಲ್ಲೆಡೆ ಹಿಂದಿಯ ಪ್ರತಿಪಾದನೆ ಕೇವಲ ಹಿಂದಿ ಭಾಷಿಕರಿಗೆ/ಪ್ರದೇಶಗಳಿಗೆ ಮಾತ್ರ ಒಲಿದಿರುವ ವರದಾನವಾಗಿ ಪರಿಣಮಿಸಿದೆ ಮತ್ತು ಹಿಂದಿ ಭಾಷಿಕರು ತಾವು ನೆಲಸಲು ಬರುವ ಪ್ರದೇಶಗಳ ಭಾಷೆಯನ್ನು ಕಡೆಗಣಿಸಲು ಮತ್ತು ಅಸಡ್ಡೆ ತೋರಲು ಪರೋಕ್ಷವಾಗಿ ಸಹಕಾರಿಯಾಗಿದೆ.

ಭಾಷೆ ಕೇವಲ ಸಂಪರ್ಕ ಸಾಧನವಲ್ಲ. ಅದು ಒಂದು ಪ್ರದೇಶದ ಆಚಾರ,ವಿಚಾರ,ನಡೆ,ನುಡಿಗಳ ಸಂಕೇತ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವವ ಹಿಂದಿ ಕಲಿತು ಹೋಗುವುದು/ ರಾಷ್ಟ್ರಭಾಷೆ ಸೋಗಿನಲ್ಲಿ ಹಿಂದಿಗಾಗಿ ಆಗ್ರಹಿಸುವುದು ಖಂಡಿತ ಈ ದೇಶವನ್ನು ಒಗ್ಗೂಡಿಸುವ ಸಾಧನವಲ್ಲ ಎಂಬುದನ್ನು ನಾವು ಅರಿಯಬೇಕಿದೆ. ಯಾವುದೇ ಪ್ರಾಂತ್ಯಕ್ಕೆ ವಲಸೆ ಹೋಗುವವ ಆಯಾ ಪ್ರದೇಶದ ಭಾಷೆ ಕಲಿತು, ಅಲ್ಲಿನ ಸಂಸ್ಕೃತಿಯನ್ನ ಮನ್ನಿಸಿ, ಅಲ್ಲಿಯವರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಔದಾರ್ಯ-ಸಜ್ಜನಿಕೆ-ಕರ್ತವ್ಯವನ್ನು ಮೆರೆಯುವುದು ಮಾತ್ರ ಪರಸ್ಪರ ಸಂಸ್ಕೃತಿ ವಿನಿಮಯಕ್ಕೆ ಅವಕಾಶವೀಯುತ್ತದೆ. ತಮಿಳ ಕರ್ನಾಟಕಕ್ಕೆ ಬಂದು ನೆಲೆಸಿದರೆ ಅವನು ಕನ್ನಡ ಕಲಿಯಬೇಕು, ಮಲಯಾಳಿ ಮಹಾರಾಷ್ಟ್ರಕ್ಕೆ ಹೋದರೆ ಮರಾಠಿಗೆ ಒಲಿಯಬೇಕು. ಉತ್ತರ-ಮಧ್ಯ-ಹಿಮಾಚಲ ಪ್ರದೇಶದವರು ಆಂದ್ರಕ್ಕೆ ಹೋದರೆ ತೆಲುಗು ಕಲಿಯಬೇಕು… ಎನ್ನುವುದೇ ಸತ್ಯವಾದದ್ದು ಮತ್ತು ಇದೇ ಭಾರತ ಒಕ್ಕೂಟ ವ್ಯವಸ್ಥೆಯ ಐಕ್ಯತೆಯನ್ನು ಬಲಪಡಿಸುವ ಇಂದಿನ ಬಹುದೊಡ್ಡ ಸಾಧನವಾಗಿದೆ ಮತ್ತು ಕಾಯ್ಕಿಣಿಯವರು ತಿಳಿಸಿದಂತೆ “ಎಲ್ಲ ಪ್ರಾದೇಶಿಕ ಭಾಷೆಗಳು ಭಾರತದ ಏಕತೆಯ ಸಂಕೇತಗಳಂತೆ ” ಎಂಬ ಮಾತಿಗೆ ಅರ್ಥ ಬರುತ್ತದೆ. ಹಾಗಾಗಿ ಆಯಾ ರಾಜ್ಯಗಳ ಸಂಸ್ಕೃತಿಯ – ಭಾಷೆಯ ಬೆಳವಣಿಗೆಗೆ ಅಕಾಡಮಿ, ನಿಗಮ, ಮಂಡಳಿ, ಸೇವಾ ಸಂಸ್ಥೆಗಳು ಶ್ರಮಿಸಬೇಕಾಗಿರುವುದು ಪ್ರಸ್ತುತ ಸತ್ಯವಾಗಿದೆ.

ಕನ್ನಡಿಗರು ಕನ್ನಡವನ್ನು ಪ್ರೀತಿಸಿ ಕನ್ನಡ ಪ್ರಾದೇಶಿಕತೆಯನ್ನು ಬಲಪಡಿಸುವುದು ಸಹ ನಮ್ಮ ರಾಷ್ಟ್ರವನ್ನು ಬಲಪಡಿಸಿದಂತೆ ಎಂಬುದನ್ನು ಅರಿಯಬೇಕಿದೆ. ಒಂದು ಹಿಂದಿ ಪದ ಮಾತನಾಡದೇ ತಮ್ಮ ಯಾವುದೇ ಕೆಲಸ ಮಾಡಿಕೊಳ್ಳಲು, ಮಾಡಿಸಿಕೊಳ್ಳಲು, ಕೇಂದ್ರದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು, ತಾವು ಸಬಲರಾಗಿ ಈ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಲು ಈ ಮೂಲಕ ತಮ್ಮ ಅಧಮ್ಯ ದೈವ ಭಕ್ತಿ, ರಾಷ್ಟ್ರ ಭಕ್ತಿಯನ್ನು ಕಟ್ಟಿಕೊಳ್ಳಲು ಸಮರ್ಥವಾಗಿರುವ ನಮ್ಮ ಪಕ್ಕದ ತಮಿಳುನಾಡನ್ನು ನಾವು ಗಮನಿಸಬೇಕಿದೆ. ಅಂತೆಯೇ ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ, ಕನ್ನಡ ಮಾತ್ರ ಸಾಕು. ಈ ಹಿನ್ನಲೆಯಲ್ಲಿ ಇಂದು ಕರ್ನಾಟಕದಲ್ಲಿ ಹಿಂದಿ ಸೇವಾ ಸಂಸ್ಥೆಗಳಿಗೆ ಯಾವುದೇ ವಾಸ್ತವಿಕ ಮೌಲ್ಯ ಮತ್ತು ಅರ್ಥ ಇಲ್ಲ. ಅವು ಕನ್ನಡ ಸೇವಾ ಸಂಸ್ಥೆಗಳಾಗಿ ಮಾರ್ಪಾಡಾಗಬೇಕಾಗಿರುವುದು ಸಹಜ, ಸ್ವಾಭಾವಿಕವಾದುದಾಗಿದೆ.

Read more from ಲೇಖನಗಳು
55 ಟಿಪ್ಪಣಿಗಳು Post a comment
  1. ಮಹೇಶ ಪ್ರಸಾದ್ ನೀರ್ಕಜೆ's avatar
    ಮಹೇಶ ಪ್ರಸಾದ್ ನೀರ್ಕಜೆ
    ಜನ 5 2011

    {ಕನ್ನಡಿಗರು ಕನ್ನಡವನ್ನು ಪ್ರೀತಿಸಿ ಕನ್ನಡ ಪ್ರಾದೇಶಿಕತೆಯನ್ನು ಬಲಪಡಿಸುವುದು ಸಹ ನಮ್ಮ ರಾಷ್ಟ್ರವನ್ನು ಬಲಪಡಿಸಿದಂತೆ ಎಂಬುದನ್ನು ಅರಿಯಬೇಕಿದೆ.}
    ಈ ಮಾತನ್ನು ಎಲ್ಲರೂ ಒಪ್ಪತಕ್ಕದ್ದೇ. ಆದರೆ ಕನ್ನಡಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿರುವ ಕಾಯ್ಕಿಣಿ ಯನ್ನು ಈ‌ರೀತಿ ಕಾಲೆಳೆಯುವುದು ಬೇಕಿಲ್ಲ ಅನಿಸುತ್ತೆ. ಕನ್ನಡ ಪ್ರೇಮ ಅಂದರೆ ಕೇವಲ ಭಾಷಾ ಪ್ರೇಮ ಮಾತ್ರ ಅಲ್ಲ. ಕನ್ನಡದ ವ್ಯಕ್ತಿ ಪ್ರೇಮವೂ ಹೌದು. ಹಾಗಿದ್ದಲ್ಲಿ ಕನ್ನಡಿಗರೇ ಆದ ಕಾಯ್ಕಿಣಿಯವರನ್ನು ಗುರಿಮಾಡುವುದೇಕೆ? ಕೇಳುಗರಿಗೆ ಅಪ್ಯಾಯಮಾನವಾದ ಕನ್ನಡ ಗೀತೆಗಳನ್ನು ಬರೆದವರು ಕಾಯ್ಕಿಣಿ. ಅವರು ಹೇಳಿದ್ದರಲ್ಲಿ ತಪ್ಪಿದ್ದರೂ ಬರೀ ಬಾಯ್ಮಾತನ್ನು ನೋಡದೆ ಮನಸನ್ನು ಅರಿಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಮಾಡುವ ಕೆಲಸ ನೋಡಬೇಕು. ಇಲ್ಲದಿದ್ದರೆ ಕನ್ನಡತನ ಪರದೂಷಣೆಯಲ್ಲೇ ಕಳೆದುಹೋಗಬಹುದು.

    ಉತ್ತರ
    • ಕಲ್ಯಾಣ ರಾಮನ್'s avatar
      ಕಲ್ಯಾಣ ರಾಮನ್
      ಜನ 6 2011

      ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ. ಹಿಂದಿ ಪ್ರಚಾರಕರು ಯಾರನ್ನೇ ಬೇಕಾದ್ರೂ ಮರುಳು ಮಾಡ್ತಾರೆ ಅನ್ನೋದಕ್ಕೆ ಕಾಯ್ಜಿಣಿಯವರ ಹೇಳಿಕೆ ಸಾಕ್ಷಿ. ಅದು ತಪ್ಪು ಎಂದು ಕಾಯ್ಕಿಣಿಯವರಿಗೆ ತಿಳಿಸುವ ಉದ್ದೇಶವೇ ಹೊರತು ನಿಮ್ಮ ಅಭಿಪ್ರಾಯದ ಕಾಲೆಳೆಯುವಿಕೆಯಲ್ಲ.

      ಉತ್ತರ
  2. ಕನ್ನಡ ಹೇಗೆ ನಮ್ಮ ರಾಷ್ಟ್ರ ಭಾಷೆಯಾಗಿದೆಯೋ, ಹಾಗೇಯೇ ಹಿಂದೀಯೂ ಕೂಡ ನಮ್ಮ ರಾಷ್ಟ್ರ ಭಾಷೆಯೇ ಆಗಿದೆ.
    ಕನ್ನಡ ಹೇಗೆ ಒಂದು ಭಾರತೀಯ ಭಾಷೆಯಾಗಿದೆಯೋ, ಹಾಗೆಯೇ ಹಿಂದೀಯೂ ಒಂದು ಭಾರತೀಯ ಭಾಷೆಯೇ ಆಗಿದೆ.

    :: ಭಾಷೆ ಕೇವಲ ಸಂಪರ್ಕ ಸಾಧನವಲ್ಲ. ಅದು ಒಂದು ಪ್ರದೇಶದ ಆಚಾರ,ವಿಚಾರ,ನಡೆ,ನುಡಿಗಳ ಸಂಕೇತ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವವ ಹಿಂದಿ ಕಲಿತು ಹೋಗುವುದು/ ರಾಷ್ಟ್ರಭಾಷೆ ಸೋಗಿನಲ್ಲಿ ಹಿಂದಿಗಾಗಿ ಆಗ್ರಹಿಸುವುದು ಖಂಡಿತ ಈ ದೇಶವನ್ನು ಒಗ್ಗೂಡಿಸುವ ಸಾಧನವಲ್ಲ ಎಂಬುದನ್ನು ನಾವು ಅರಿಯಬೇಕಿದೆ. ::

    ಈ ಮೇಲಿನ ನಿಮ್ಮ ಮಾತುಗಳಿಗಾಗಿ ನನ್ನಲ್ಲಿ ಮೂಡಿದ ಪ್ರಶ್ನೆಗಳು:

    “ರಾಮನ್” ಮತ್ತು “ಚಂದ್ರಶೇಖರನ್” ಅನ್ನುವ ಈ ಪದಗಳು ಕನ್ನಡ ಪದಗಳೇ?
    ಹಾಗಿಲ್ಲವಾದರೆ ತಾವು ಮೂಲತಃ ತಮಿಳು ಅಥವಾ ಅನ್ಯ ಭಾಷಿಗರೇ?
    ಹಾಗಾಗಿದ್ದಲ್ಲಿ ತಾವು ಈಗ ಕನ್ನಡವನ್ನು ಬಳಸುತ್ತಿರುವುದೂ ಒಂದು ತೆರನಾದ ಸೋಗಲಾಡಿತನವೇ?

    ಉತ್ತರ
    • :: ಒಂದು ಹಿಂದಿ ಪದ ಮಾತನಾಡದೇ ತಮ್ಮ ಯಾವುದೇ ಕೆಲಸ ಮಾಡಿಕೊಳ್ಳಲು, ಮಾಡಿಸಿಕೊಳ್ಳಲು, ಕೇಂದ್ರದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು, ತಾವು ಸಬಲರಾಗಿ ಈ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಲು ಈ ಮೂಲಕ ತಮ್ಮ ಅಧಮ್ಯ ದೈವ ಭಕ್ತಿ, ರಾಷ್ಟ್ರ ಭಕ್ತಿಯನ್ನು ಕಟ್ಟಿಕೊಳ್ಳಲು ಸಮರ್ಥವಾಗಿರುವ ನಮ್ಮ ಪಕ್ಕದ ತಮಿಳುನಾಡನ್ನು ನಾವು ಗಮನಿಸಬೇಕಿದೆ.::

      ಅವರು ಹೋದಲ್ಲೆಲ್ಲಾ ಕೇವಲ ತಮಿಳು ಭಾಷೆಯಲ್ಲೇ ವ್ಯವಹರಿಸುತ್ತಿಲ್ಲ.
      ಒಂದೋ ಅವರೆಲ್ಲಾ ಆಂಗ್ಲಭಾಷೆಯನ್ನು ಬಳಸುತಿದ್ದಾರೆ ಅಥವಾ ಭಾಂಷಾಂತರಕಾರರನ್ನು ಬಳಸಿಕೊಳ್ಳುತ್ತಿದ್ದಾರೆ.
      ಭಾಷಾಂತರಕಾರರನ್ನು ಬಳಸುವ ಮೂಲ ಉದ್ದೇಶ ಏನೆಂದರೆ, ತನ್ನ ಭಾವನೆಗಳನ್ನು ತಾನಾಡುತ್ತಿರುವ ಭಾಷೆಯ ಮೂಲಕ ಜನರು ಅರಿಯುತ್ತಿಲ್ಲ. ಅದಕ್ಕೆ ಬದಲಿ ವ್ಯವಸ್ಥೆ ಬೇಕು ಎನ್ನುವುದೇ ಆಗಿದೆ. ನಾನು ಭಾಷಾಂತರಕಾರರ ಬದಲಿಗೆ, ಜನರು ಅರ್ಥಮಾಡಿಕೊಳ್ಳುವ ಭಾಷೆಯನ್ನೇ ಬಳಸಿ ಮಾತನಾಡಿದರೆ, ಭಾಷಾಂತರಕಾರರನ್ನು ಬಳಸುವ ಆ ತಮಿಳಿನಾಡಿನವರಿಗಿಂತ ಮೂರ್ಖನೆನಿಸಿಕೊಳ್ಳುವೆನೋ ಅಥವಾ ಜಾಣನೆನಿಸಿಕೊಳ್ಳುವೆನೋ?
      ತಮಗೆ ತಮಿಳಿನವರನ್ನು ಹೊಗಳುವ ಉದ್ದೇಶ ಇದ್ದರೆ ಹೊಗಳಿ ಪರವಾಗಿಲ್ಲ. ಆದರೆ ತಮಿಳುನಾಡಿನ ಕರುಣಾನಿಧಿಯಂಥವರನ್ನು ಹೊಗಳಲು, ನಮ್ಮವರೇ ಆದ ಜಯಂತ ಕಾಯ್ಕಿಣಿಯಂಥವರನ್ನು ದೂರುವ ಅಗತ್ಯ ಇಲ್ಲ ಕಣ್ರೀ.

      ಉತ್ತರ
      • Priyank's avatar
        Priyank
        ಜನ 6 2011

        ತಮಿಳು ನಾಡಿನಿಂದ ಹೊರಗೆ ಹೋದಲ್ಲೆಲ್ಲಾ ತಮಿಳಿನಲ್ಲಿ ವ್ಯವಹರಿಸುತ್ತಿಲ್ಲ ಎನ್ನುವುದು ನಿಜ.
        ಆದರೆ, ಅವರಿಗೆ ಹಿಂದಿ ಗೊತ್ತಿಲ್ಲದೇ ಇದ್ದರೂ, ತಮಿಳುನಾಡಿಗೆ ಬೇಕಾದ ಹಲವು ಕೆಲಸಗಳನ್ನು ಕೇಂದ್ರ ಸರ್ಕಾರದಿಂದ ಮಾಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
        ತಮಿಳುನಾಡಿಗೆ ರೈಲು ಬಜೆಟ್ಟಿನಲ್ಲಿ ದೊರೆಯುವ ಹೊಸ ರೈಲುಗಳೇ ಇರಬಹುದು, ಹೊಸ ಹೆದ್ದಾರಿಗಳೇ ಇರಬಹುದು, ಕರ್ನಾಟಕಕ್ಕಿಂತ ಹೆಚ್ಚೇ ಇದೆ.
        ಇದರ ಬಗ್ಗೆ ನಿಮಗೂ ಅರಿವಿರಬಹುದು ಎಂದುಕೊಂಡಿದ್ದೇನೆ.
        ತಮ್ಮ ಜನರಿಗೆ ಅನುಕೂಲ ಮಾಡಿಕೊಡಲು, ಇಚ್ಛೆ ಇರಬೇಕೆ ಹೊರತು, ಇನ್ನೊಂದು ಭಾಷೆ ಕಲಿಯುವ ಅವಶ್ಯಕತೆಯೇನಿಲ್ಲ.
        ಇನ್ನೊಂದು ಭಾಷೆ ಕಲಿಯುವುದರಿಂದ, ಕೆಲಸ ಮಾಡಿಸಿಕೊಳ್ಳಲು ಸುಲಭವಾಗುತ್ತದೆ ಎಂದು ನೀವು ಹೇಳುತ್ತಿದ್ದರೆ ಅದು ಸಮಂಜಸವೆಂದು ನನಗೆ ಅನಿಸುತ್ತಿಲ್ಲ.

        ಉತ್ತರ
      • Nija's avatar
        Nija
        ಜನ 6 2011

        ನಾಲ್ಕಾರು ಜನರಿಂದ ಮಂಗಳಾರತಿ ಮಾಡಿಸಿಕೊಂಡ ಹೆಗ್ಡೆ ಮಹಾಶಯರೇ ::ಆತ್ರಾಡಿ::.. ::ಮಾತಾಡಿ::….

        ಉತ್ತರ
      • ಕಲ್ಯಾಣ ರಾಮನ್'s avatar
        ಕಲ್ಯಾಣ ರಾಮನ್
        ಜನ 6 2011

        ಕರುಣಾನಿಧಿಯನ್ನು ಹೊಗಳಿದ ಅಥವ ಕಾಯ್ಕಿಣಿಯವರನ್ನು ತೆಗಳಿದ ಯಾವ ವಿವರವೂ ಲೇಖನದಲ್ಲಿಲ್ಲ.

        ಉತ್ತರ
    • Priyank's avatar
      Priyank
      ಜನ 6 2011

      ಬರಹದ ಕೆಲವು ಭಾಗಗಳನ್ನು ಮಾತ್ರ ಆಯ್ದು, ಅದಕ್ಕೆ ಸಂಬಂಧಪಡದ ಪ್ರಶ್ನೆಗಳನ್ನು ಯಾಕೆ ಕೇಳುತ್ತಿದ್ದೀರಾ?
      ಇಲ್ಲಿ ನಿಮ್ಮ ಉದ್ದೇಶ ತರ್ಕ ಮಾಡುವುದೋ? ಅಥವಾ ದಿಕ್ಕು ತಪ್ಪಿಸುವ ಪ್ರಯತ್ನವೋ?
      ನಿಮಗೆ ಪೂರ್ತಿ ಬರಹ ಅರ್ಥವಾಗಿಲ್ಲವೋ? ಅಥವಾ ಅರ್ಥವಾಗಿದ್ದರೂ ಒಪ್ಪಲಾರದ ಧರ್ಮಸಂಕಟವೋ?
      ದಯವಿಟ್ಟು ತಿಳಿಸಿ.

      ಉತ್ತರ
      • ನಾನು ಬರಹದ ಭಾಗಗಳನ್ನು ಉಲ್ಲೇಖಿಸಿ ಪ್ರಶ್ನೆಗಳನ್ನು ಮುಂದಿಟ್ಟೆ.

        ನನಗೆ ಅರ್ಥವಾಗದ್ದನ್ನು ಲೇಖಕರಿಂದ ತಿಳಿಯಬಯಸಿದರೆ ಅದು ತಪ್ಪೇ?

        “ಸಂಬಂಧಪಡದ ಪ್ರಶ್ನೆಗಳು” ಅಂತ ತಿಮಗೆ ಅನಿಸಿದ್ದು ಹೇಗೆ ಮತ್ತು ಏಕೆ?

        ನಾನು ಉಲ್ಲೇಖಿಸಿದ ಭಾಗಗಳ ಮೇಲಷ್ಟೇ ಪ್ರಶ್ನೆ ಕೇಳಿದ್ದೇನೆ.

        ತಮಗೆ ದಿಕ್ಕು ತಪ್ಪುವ ಭಯ ಇದೆಯಾದರೆ ನನ್ನನ್ನು ಹಿಂಬಾಲಿಸಬೇಡಿ.

        ಉತ್ತರ
    • ಕಲ್ಯಾಣ ರಾಮನ್'s avatar
      ಕಲ್ಯಾಣ ರಾಮನ್
      ಜನ 6 2011

      ರಾಮ “ನ್” ಚಂದ್ರಶೇಖರ “ನ್” ಹೆಸರಿನ ಬಗ್ಗೆ ತಕರಾರು ಎತ್ತಿರುವಂತೆ ಚಾಲುಕ್ಯ ದೊರೆ “ಕೀರ್ತಿವರ್ಮನ್” ಹೆಸರಿನ ಬಗ್ಗೆ ಸಹ ವಿವಾದ ಎದ್ದಿದ್ದಿರಬಹುದು! ಕೆಲವು ಹೆಸರುಗಳ ಕೊನೆಗೆ “ನ್” ಪ್ರತ್ಯಯ ಸೇರುವುದು ಮೂಲತಃ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿರುವ ಪದ್ಧತಿ. ರಾಜನು “ರಾಜನ್” ಆದ ಹಾಗೆ, ದಂಡಿಯು “ದಂಡನ್” ಆದ ಹಾಗೆ, ವರ್ಮ “ವರ್ಮನ್” ಆಗುವುದು ಸಹಜ. ಗೋತ್ರ ಪ್ರವರ, ಪೂರ್ವಕ ಹೆಸರು ಹೇಳಿಕೊಂಡು ನಮಸ್ಕರಿಸುವ ಬಳಕೆ ಇರುವವರಿಗೆ ಇದು ಮತ್ತಷ್ಟು ಮನದಟ್ಟಾದೀತು. “ಶರ್ಮನ್ ಅಹಂ ಬೋಃ ಅಭಿವಾದಯೇ” ಹೀಗೆ. ಮತ್ತೆ, ಅಶ್ವತ್ಥಾಮನ್, ಭೀಮನ್, ರಾಧೇಯನ್, ಇತ್ಯಾದಿ, ಈ ಬಳಕೆಯನ್ನು ಹಳೆಗನ್ನಡದಲ್ಲಿ ವಿಫುಲವಾಗಿ ಕಾಣಬಹುದು. ಅಚ್ಚಕನ್ನಡಿಗರಾದ ಬಾದಾಮಿ ಚಾಲುಕ್ಯರ ಕಾಲದ ಪ್ರಖ್ಯಾತ ಶಾಸನದ ವಾಕ್ಯವನ್ನು ಗಮನಿಸಿ. “ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್, ಸಾಧುಂಗೆ ಸಾಧು,ಮಾಧುರ್ಯಂಗೆ ಮಾಧುರ್ಯನ್, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್, ಮಾಧವೀತನ್ ಪೆರನಲ್ಲ…”

      ಈ ಕ್ರಮವನ್ನು ಕಾಲಕ್ರಮೇಣ ಅನೇಕ ಕನ್ನಡಿಗರು ಕೈಬಿಟ್ಟಿದ್ದಾರೆ. ಕನ್ನಡಿಗರಾದ ಎಂ.ವಿ. ರಾಜಶೇಖರನ್, ಎಸ್. ಕೆ. ಬಸವರಾಜನ್, ಆರ್. ಕೆ. ಶ್ರೀಕಂಠನ್, ಪ್ರಣತಾರ್ಥಿ ಹರನ್, ಹಿರೇಮಗಳೂರು ಕಣ್ಣನ್….ಹೀಗೆ ಇವರುಗಳ ಹೆಸರಿನಲ್ಲಿ ನೀವು ಹೇಳಿದಂತೆ ಕನ್ನಡದ ಸೊಗಡಿಲ್ಲದ “ಎನ್” ಅಕ್ಷರಗಳು ಇವೆ. ಕನ್ನಡಿಗರಾದ ಇವರನ್ನು ಸೋಗಲಾಡಿಗಳಾ? ಎಂದು ಪ್ರಶ್ನಿಸಿವುದು ತಪ್ಪು.

      ಉತ್ತರ
      • ತಾವು ಕನ್ನಡಿಗರೇ ಎಂದು ತಿಳಿಯುವ ಅಪೇಕ್ಷೆ ಇತ್ತು.
        ಕೊನೆಗೂ ತಮ್ಮಿಂದ ನನಗೆ ನೇರ ಉತ್ತರ ಸಿಗಲಿಲ್ಲ.
        ಅದರಿಂದ ಬೇಸರವೂ ಇಲ್ಲ.
        ನನ್ನ ಅನಿಸಿಕೆ ಇಷ್ಟೇ,
        ಓರ್ವ ಪರಭಾಷಿಗ, ಕನ್ನಡನಾಡಿನಲ್ಲಿದ್ದು ಕನ್ನಡ ಕಲಿಯುವುದು ಸೋಗಲಾಡಿತನ ಅಲ್ಲವಾದರೆ, ಓರ್ವ ಕನ್ನಡಿಗ ಹಿಂದೀ ಭಾಷೆಯನ್ನು ಕಲಿಯುವುದೂ ಸೋಗಲಾಡಿತನ ಅಲ್ಲ.
        ನಾನು ತಾವು ಕಾಯ್ಕಿಣಿಯನ್ನು ದೂಷಿಸಿದ್ದೀರಿ ಅಂತ ಎಲ್ಲೂ ಹೇಳಿಲ್ಲ. ಕರುಣಾನಿಧಿಯಂಥವರನ್ನು ಹೊಗಳಲು ಕಾಯ್ಕಿಣಿಯಂಥವರನ್ನು ದೂಷಿಸುವ ಅಗತ್ಯ ಇಲ್ಲ ಅಂದೆ ಅಷ್ಟೇ.

        ಓರ್ವ ಕಾಯ್ಕಿಣಿ ಹಿಂದೀಯನ್ನು ರಾಷ್ಟ್ರಭಾಷೆ ಅಂದ ಕೂಡಲೇ ಅದು ರಾಷ್ಟ್ರಭಾಷೆಯಾಗಲಾರದು ಅನ್ನುವುದು ನನ್ನ ಅನಿಸಿಕೆ.

        ಉತ್ತರ
    • ಕಲ್ಯಾಣ ರಾಮನ್'s avatar
      ಕಲ್ಯಾಣ ರಾಮನ್
      ಜನ 6 2011

      ರಾಮ “ನ್” ಚಂದ್ರಶೇಖರ “ನ್” ಹೆಸರಿನ ಬಗ್ಗೆ ತಕರಾರು ಎತ್ತಿರುವಂತೆ ಚಾಲುಕ್ಯ ದೊರೆ “ಕೀರ್ತಿವರ್ಮನ್” ಹೆಸರಿನ ಬಗ್ಗೆ ಸಹ ವಿವಾದ ಎದ್ದಿದ್ದಿರಬಹುದು! ಕೆಲವು ಹೆಸರುಗಳ ಕೊನೆಗೆ “ನ್” ಪ್ರತ್ಯಯ ಸೇರುವುದು ಮೂಲತಃ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿರುವ ಪದ್ಧತಿ. ರಾಜನು “ರಾಜನ್” ಆದ ಹಾಗೆ, ದಂಡಿಯು “ದಂಡನ್” ಆದ ಹಾಗೆ, ವರ್ಮ “ವರ್ಮನ್” ಆಗುವುದು ಸಹಜ. ಗೋತ್ರ ಪ್ರವರ, ಪೂರ್ವಕ ಹೆಸರು ಹೇಳಿಕೊಂಡು ನಮಸ್ಕರಿಸುವ ಬಳಕೆ ಇರುವವರಿಗೆ ಇದು ಮತ್ತಷ್ಟು ಮನದಟ್ಟಾದೀತು. “ಶರ್ಮನ್ ಅಹಂ ಬೋಃ ಅಭಿವಾದಯೇ” ಹೀಗೆ. ಮತ್ತೆ, ಅಶ್ವತ್ಥಾಮನ್, ಭೀಮನ್, ರಾಧೇಯನ್, ಇತ್ಯಾದಿ, ಈ ಬಳಕೆಯನ್ನು ಹಳೆಗನ್ನಡದಲ್ಲಿ ವಿಫುಲವಾಗಿ ಕಾಣಬಹುದು. ಅಚ್ಚಕನ್ನಡಿಗರಾದ ಬಾದಾಮಿ ಚಾಲುಕ್ಯರ ಕಾಲದ ಪ್ರಖ್ಯಾತ ಶಾಸನದ ವಾಕ್ಯವನ್ನು ಗಮನಿಸಿ. “ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್, ಸಾಧುಂಗೆ ಸಾಧು,ಮಾಧುರ್ಯಂಗೆ ಮಾಧುರ್ಯನ್, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್, ಮಾಧವೀತನ್ ಪೆರನಲ್ಲ…”

      ಈ ಕ್ರಮವನ್ನು ಕಾಲಕ್ರಮೇಣ ಅನೇಕ ಕನ್ನಡಿಗರು ಕೈಬಿಟ್ಟಿದ್ದಾರೆ. ಕನ್ನಡಿಗರಾದ ಎಂ.ವಿ. ರಾಜಶೇಖರನ್, ಎಸ್. ಕೆ. ಬಸವರಾಜನ್, ಆರ್. ಕೆ. ಶ್ರೀಕಂಠನ್, ಪ್ರಣತಾರ್ಥಿ ಹರನ್, ಹಿರೇಮಗಳೂರು ಕಣ್ಣನ್….ಹೀಗೆ ಇವರುಗಳ ಹೆಸರಿನಲ್ಲಿ ನೀವು ಹೇಳಿದಂತೆ ಕನ್ನಡದ ಸೊಗಡಿಲ್ಲದ “ಎನ್” ಅಕ್ಷರಗಳು ಇವೆ. ಕನ್ನಡಿಗರಾದ ಇವರನ್ನು ಸೋಗಲಾಡಿಗಳಾ? ಎಂದು ಪ್ರಶ್ನಿಸಿವುದು ತಪ್ಪು.

      ಉತ್ತರ
      • ಕಲ್ಯಾಣ ರಾಮನ್,
        ತಾವೂ ನನ್ನಂತೆಯೇ ಶಾಂತಚಿತ್ತರಾಗಿ ಪ್ರತಿಕ್ರಿಯೆ ನೀಡುತ್ತೀರಿ ಎಂದು ತಿಳಿದು ಸಂತಸವಾಯಿತು.

        ಧನ್ಯವಾದಗಳು.

        ಉತ್ತರ
  3. : : ಭಾಷೆ ಕೇವಲ ಸಂಪರ್ಕ ಸಾಧನವಲ್ಲ. ಅದು ಒಂದು ಪ್ರದೇಶದ ಆಚಾರ,ವಿಚಾರ,ನಡೆ,ನುಡಿಗಳ ಸಂಕೇತ. : :

    ನಾನು ನನ್ನೆದುರಿಗಿರುವ ಜನರ ಮುಂದೆ ಅವರಿಗರ್ಥವಾಗದ ಭಾಷೆಯಲ್ಲಿ ಎಷ್ಟೇ ಕೊರೆದರೂ, ಅದು ನಮ್ಮ ಪ್ರದೇಶದ ಆಚಾರ, ವಿಚಾರ, ನಡೆನುಡಿಗಳ ಬಗ್ಗೆ, ಆ ಜನರ ಮನದಲ್ಲಿ ಆದರದ ಭಾವ ಮೂಡಿಸುತ್ತದೆ ಎನ್ನುವುದು ಈ ವರ್ಷದ ಆರಂಭದಲ್ಲೇ ಸಿಡಿಸಿರುವ ಹಾಸ್ಯ ಚಟಾಕಿ ಅಷ್ಟೇ!
    🙂 😀

    ಉತ್ತರ
    • ಕಲ್ಯಾಣ ರಾಮನ್'s avatar
      ಕಲ್ಯಾಣ ರಾಮನ್
      ಜನ 6 2011

      ವಿಷಯ ತಿಳಿಸಬೇಕೆಂದಿರುವವನಿಗೆ, ತಿಳಿದುಕೊಳ್ಳಬೇಕಾಗಿರುವವರ ಭಾಷೆ ಗೊತ್ತಿದ್ರೆ ಅದರಲ್ಲಿ ತಿಳಿಸಿದರೆ ತಪ್ಪಿಲ್ಲ. ಆದರೆ ಇದಕ್ಕಾಗಿ ಇವರಿಬ್ಬರಿಗೂ ತಿಳಿಯದ ಹಿಂದಿ ಭಾಷೆ ಕಲಿಯುವ ಅವಶ್ಯಕತೆ ಇಲ್ಲ.

      ಉತ್ತರ
      • ಅವಶ್ಯಕತೆ ಅನ್ನುವುದು ಆಯಾ ವ್ಯಕ್ತಿಗೆ ಬಿಟ್ಟ ವಿಚಾರ ಅನ್ನುವುದಷ್ಟೇ ನನ್ನ ಅನಿಸಿಕೆ.

        ಉತ್ತರ
  4. “ರಾಷ್ಟ್ರೀಯತ್ವ” ಅಂದರೆ ಏನು?
    ಬಹುಷಃ ಇದು ನಾನು ಕಂಡು ಕೇಳರಿಯದ ಹೊಸ ಪದ.

    ಉತ್ತರ
    • Nija's avatar
      Nija
      ಜನ 6 2011

      “ಆತ್ರಾಡಿ” ಎಂದರೇನು? ಇದು ಖಂಡಿತವಾಗಿಯೂ ನಾನು ಕಂಡು ಕೇಳರಿಯದ ಹೊಸ ಪದ.
      ಇದು “ಡಿ” ಇಂದ ಕೊನೆಗೊಂಡಿರುವುದು ಕಂಡರೆ ನೀವು ಕನ್ನಡಿಗರೇ ಎಂಬ ಪ್ರಶ್ನೆ ನನಗೆ ಮೂಡುತ್ತಿಲ್ಲ.. ಛೆ! ನಮಗೆಲ್ಲಾ ಈ ರೀತಿಯ ಬುದ್ದಿವಂತ ಪ್ರಶ್ನೆಗಳೇ ಮೂಡುವುದಿಲ್ಲವೇ!!

      ಉತ್ತರ
      • ನನಗೆ ರಾಷ್ಟ್ರೀಯತ್ವದ ಅರ್ಥ ಕನ್ನಡ ನಿಘಂಟಿನಲ್ಲಿ ಮತ್ತು ಅಂತರ್ಜಾಲದ ನಿಘಂಟಿನಲ್ಲಿ ಸಿಗದೇ ಇದ್ದುದರಿಂದ ಪ್ರಶ್ನೆ ಕೇಳಿದ್ದೆ.

        ಆದರೆ, ಈಗ ನೋಡಿದರೆ, ವಿಕಿಪೀಡಿಯಾದಲ್ಲಿ ಅದಕ್ಕೆ ರಾಷ್ಟ್ರೀಯತೆ ಅನ್ನುವ ಹೆಚ್ಚಾಗಿ ಚಾಲ್ತಿಯಲ್ಲಿರುವ ಪದವನ್ನು ಅರ್ಥವಾಗಿ ಕೊಡಮಾಡಿದ್ದಾರೆ.

        ನಾನು ನನಗೆ ತಿಳಿಯದ್ದನ್ನು ಬಹಿರಂಗಪಡಿಸಿದ್ದೆ.
        ಹಾಗೂ ಅದರ ಅರ್ಥ ಏನು ಎಂದು ಕೇಳಿದ್ದೆ.
        ಉತ್ತರಿಸುವ ಸಂಯಮ ತೋರದ ತಾವು ನನ್ನ ಊರಿನ ಹೆಸರಿನ (ಆತ್ರಾಡಿ) ಅರ್ಥ ಕೇಳಿದ್ದೀರಿ.
        ನನ್ನ ಊರಿನ ಹೆಸರಿಗೆ ವಿಶೇಷ ಅರ್ಥ ಏನೂ ಇದ್ದಂತಿಲ್ಲ.

        ಮತ್ತೆ ಮತ್ತೆ ದಿಕ್ಕು ತಪ್ಪಿಸುವ ನನ್ನ ಹಾದಿಗೆ ಬರುತ್ತಿರುವ ತಮಗೆ ನಮನ!
        😀

        ಉತ್ತರ
  5. Priyank's avatar
    Priyank
    ಜನ 6 2011

    ಹಿಂದಿ ನಮ್ಮ ದೇಶದ ರಾಷ್ಟ್ರಭಾಷೆ ಎಂಬ ಸುಳ್ಳನ್ನು ಸಾರುವ ಕೆಲಸಕ್ಕೆ ಕಾಯ್ಕಿಣಿಯವರು ಇಳಿದಿರುವುದು ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೋ ಮಾಡುತ್ತಿರುವ ತಪ್ಪೇ ಆಗಿದೆ.
    ಹೆಸರಾಂತ ಜನರೇ ಈ ರೀತಿಯ ಸುಳ್ಳನ್ನು ಸಾರಿದರೆ, ಜನಸಾಮಾನ್ಯರು ಸುಳ್ಳನ್ನೇ ಸತ್ಯವೆಂದು ನಂಬಿಕೊಳ್ಳುವ ಸಾಧ್ಯತೆ ಹೆಚ್ಚು.

    ಉತ್ತರ
  6. Nija's avatar
    Nija
    ಜನ 6 2011

    ಮಹೇಶ್ ಪ್ರಸಾದ್ ಅವ್ರೆ,
    {ಆದರೆ ಕನ್ನಡಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿರುವ ಕಾಯ್ಕಿಣಿ ಯನ್ನು ಈ‌ರೀತಿ ಕಾಲೆಳೆಯುವುದು ಬೇಕಿಲ್ಲ ಅನಿಸುತ್ತೆ. ಕನ್ನಡ ಪ್ರೇಮ ಅಂದರೆ ಕೇವಲ ಭಾಷಾ ಪ್ರೇಮ ಮಾತ್ರ ಅಲ್ಲ. ಕನ್ನಡದ ವ್ಯಕ್ತಿ ಪ್ರೇಮವೂ ಹೌದು.}

    ಒಬ್ಬ ವ್ಯಕ್ತಿಯ ಉನ್ನತ ಸ್ಥಾನವನ್ನು ಜನರಲ್ಲಿ ಸರಿಯಾದ ನಿಲುವು ಮೂಡಿಸಲು ಪ್ರಯೋಗವಾದರೆ ಚೆಂದವಲ್ಲವೇ? ಇಲ್ಲಿ ಉನ್ನತ ಸ್ಥಾನಮಾನ ಹೊಂದಿರುವ ಕಾಯ್ಕಿಣಿಯವರು ಬಹಿರಂಗವಾಗಿ ಸರಳವೇ ಆದರೂ ಇಷ್ಟು ಮೂಲಭೂತ ವಿಷಯದಲ್ಲಿ ತಪ್ಪು ಮಾಡಿದರೆ ಜನರಲ್ಲಿ ಎಂತಹ ತಪ್ಪು ವಿಷಯವನ್ನೇ ಸಮರ್ಥಿಸಿದ ಹಾಗಾಗೋದಿಲ್ವೇ? ಮಾತು ಎಂತಹವರಿಂದಲೇ ಬಂದಿರಲಿ, ಪರಿಣಾಮ ಇಲ್ಲೇ ತಾನೆ ಹೆಚ್ಚು? ಭಾಷಾ ಪ್ರೇಮವನ್ನು ಒಂದು ದೀಪಕ್ಕೆ ಹೋಲಿಸಿ ನೋಡಿದರೆ ಬೆಳಕನ್ನು ಉಳಿಸಿಕೊಳ್ಳಲು ದೀಪ ಹಚ್ಚುವ ಕೆಲಸದೊಡನೆ ಅದನ್ನು ಗಾಳಿಯಿಂದ ಆರದ ಹಾಗೆ ಕಾಪಾಡುವ ಕೆಲಸ ಮಾಡುವುದೂ ಮುಖ್ಯವೇ. ಇಲ್ಲಿ ಚಂದ್ರಶೇಖರನ್ ಅವ್ರು ಆ ಕಾಪಾಡುವ ಕೆಲಸವನ್ನು ಮಾಡಲು ಹೊರಟಿದ್ದಾರೆ. ಆ ನಿಟ್ಟಿನಲ್ಲಿ ಕಾಯ್ಕಿಣಿಯವರ ಕಾಲನ್ನೆಳೆಯುವ ಉದ್ದೇಶವೇನಿಲ್ಲವೆಂಬುದು ನನ್ನ ಭಾವನೆ. ಏಕೆಂದರೆ ಇಲ್ಲಿ ಯಾವೊಬ್ಬ ವ್ಯಕ್ತಿಗಿಂತಲೂ ನಮ್ಮೆಲ್ಲರ ನುಡಿಯೇ ಅತಿ ಮುಖ್ಯ. ಅದರ ಮರ್ಯಾದೆ ಎಲ್ಲಕ್ಕಿಂತಲೂ ಮುಖ್ಯ.

    ಹೆಗ್ಡೆ ಅವ್ರೆ,
    ಎಂದಿನಂತೆ ಇಂದೂ, ಇಲ್ಲಿಯೂ ನಿಮ್ಮ ನಿಲುವು ಏನೆಂಬುದನ್ನು ಸರಿಯಾಗಿ, ಬಿಡಿಸಿ ಹೇಳದೆ ಮಾತಾಡುತ್ತಿದ್ದೋರ. ನೀವು ವಾದಕ್ಕಾಗಿ ವಾದ ಮಾಡುವ ಹಾಗೆ ಕಾಣಿಸಿಕೊಳ್ಳಲು ಏಕೆ ಇಷ್ಟಪಡುತ್ತಿದ್ದೀರ ಎಂದು ಇಲ್ಲಿ ಹಲವರಿಗೆ ಅನಿಸಲು ಶುರುವಾಗುವ ಮುನ್ನ, ನಿಮ್ಮ ನಿಲುವನ್ನು ಒಂದು ವಾಕ್ಯದಲ್ಲಿ ವ್ಯಕ್ತ ಪಡಿಸಿ. ಅಲ್ಲದೆ ನಿಮ್ಮ ಭಾಷೆಯನ್ನು ಬಳಸಿಕೊಂಡು ಜೀವನ ಸಾಗಿಸಲು ನಿಮಗೆ ಬರದೇ ಹೋದರೆ ಇಂತಹ ಬರಹಗಳನು ಹಾಸ್ಯ ಚಟಾಕಿಯೆಂದು ಕರೆದು ನಿಮ್ಮನ್ನು ನೀವೇ ಬಹಿರಂಗವಾಗಿ ಸಂತೈಸಿಕೊಳ್ಳುವ ಅವಶ್ಯಕತೆ ಏನಿಲ್ಲ ಎನಿಸುತ್ತದೆ.

    ಉತ್ತರ
    • “ನಿಜ” ಅನ್ನುವ ಸುಳ್ಳು ನಾಮಧೇಯಿಗಳೇ,

      “….ಸಂತೈಸಿಕೊಳ್ಳುವ ಅವಶ್ಯಕತೆ ಏನಿಲ್ಲ ಎನಿಸುತ್ತದೆ”

      ಅವಶ್ಯಕತೆ ಏನಿಲ್ಲ ಅನ್ನುವುದು ಯಾರಿಗೆ? ತಮಗೋ … ನನಗೋ?

      ತಾವು ತಮ್ಮ ನಿಲುವನ್ನು ಸ್ಪಷ್ಟಪಡಿಸಿ. ಸಾಕು. ನಾನು ಬರೆದುದು ಎಲ್ಲಾ ಓದುಗರಿಗೂ ಅರ್ಥ ಆಗುತ್ತದೆ ಎನ್ನುವ ಭ್ರಮೆಯಲ್ಲಿ ನಾನಿಲ್ಲ. ಅರ್ಥೈಸಿಕೊಳ್ಳುವ ಅರ್ಹತೆ ಇದ್ದವರಿಗೆ ಆಗುತ್ತದೆ. ಅಂಥವರು ಕಡಿಮೆ ಸಂಖ್ಯೆಯಲ್ಲಿ ಇದ್ದರೂ ಪರವಾಗಿಲ್ಲ.

      ನಾನು ಕನ್ನಡದಲ್ಲಿ ಬರೆದುದರ ಅರ್ಥ ಕನ್ನಡಿಗರಾದ ತಮಗೇ ಆಗಿಲ್ಲವಾದರೆ, ಇನ್ನು ಕನ್ನಡೇತರರಿಗೆ ಹೇಗೆ ಅರ್ಥ ಆಗಬೇಕು ಹೇಳಿ.
      ಈಗ, ನನ್ನ ಆ “ಹಾಸ್ಯ” ಅನ್ನುವ ಮಾತಿಗೆ ಇನ್ನೂ ಅರ್ಥ ಬರುತ್ತಿದೆ ನೋಡಿ. ತಾವೇ ಅದರ ಅರ್ಥವನ್ನು ಪರೋಕ್ಷವಾಗಿ ಸಾದರಪಡಿಸಿಬಿಟ್ಟಿದ್ದೀರಿ.
      ಅದಕ್ಕಾಗಿ ಹಾರ್ದಿಕ ಕೃತಜ್ಞತೆಗಳು.

      😀

      ಉತ್ತರ
      • Nija's avatar
        Nija
        ಜನ 6 2011

        ನಿಮ್ಮ ಹುರುಳಿಲ್ಲದ ಬರವಣಿಗೆ, ಅದರಲ್ಲೂ ಚರ್ಚೆಯ ದಿಕ್ಕನ್ನೇ ಬೇಕೂ ಅಂತ ತಪ್ಪಿಸುವ ಬರವಣಿಗೆಯ ಅವಶ್ಯಕತೆಯಿಲ್ಲವೆಂದದ್ದು ಈ ಚರ್ಚೆಗೆ, ನನಗೋ, ನಿಮಗೋ ಅಲ್ಲ. ಏಕೆಂದರೆ ನೀವು ಚರ್ಚೆಯನ್ನು ಕಡಿಮೆ, ವಿತಂಡ ವಾದ ಹೆಚ್ಚು ಮಾಡುತ್ತಿರುವ ಹಾಗಿದೆ. ಲೇಖಕನ ಹೆಸರಿನಿಂದ ಅವರು ತಮಿಳರಾದರೆ ಲೇಖನದಿಂದ ಬೇರೆ ಅರ್ಥ ತೆಗೆದುಕೊಳ್ಳುವಂತಹ ನಿಮ್ಮ ಸಾಮರ್ಥ್ಯವನ್ನು ತೋರಿಸಿಕೊಳ್ಳಿ ಎಂದು ಇಲ್ಲಿ ಯಾರು ಕೇಳಿದರು?!

        ಇನ್ನೂ ಅವಕಾಶ ಇದೆ. ನಿಮ್ಮ ನಿಲುವೇನೆಂಬುದನ್ನು ಇಲ್ಲಿ ವ್ಯಕ್ತಪಡ್ಸಿ. ಇಲ್ಲಿಯವರೆಗೂ ನೀವು ಒಮ್ಮೆಯೂ ಅದನ್ನು ಹೇಳಿಲ್ಲವೆಂಬುದನ್ನು ಗಮನಿಸಿಯೇ ಈ ಪ್ರಶ್ನೆ ಮತ್ತೊಮ್ಮೆ ಕೇಳುತ್ತಿರುವುದು.

        ನಾನು ಕಡಲೆ-ಬೇಳೆ ಕೊಡಿ ಎಂದು ಬರೆದರೆ ನಿಮ್ಮಲ್ಲಿ ಹರಳೆಣ್ಣೆಯಿದೆ ಎಂದು ಬರೆದು ಬಿಸಾಕಿದರೆ ಅದು ನಿಮ್ಮ ನಿಲುವು ವ್ಯಕ್ತ ಪಡಿಸಿದಂತಲ್ಲ. ಇಲ್ಲಿ ಕಲ್ಯಾಣ್ ರಾಮನ್ ಅವರು ಬರೆದಿರುವುದು ಕಾಯ್ಕಿಣಿ ನವರು ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಕರೆದಿರುವುದರ ಕುರಿತು. ನಮ್ಮ ದೇಶದಲ್ಲಿ ಯಾವುದನ್ನೂ ರಾಷ್ಟ್ರ ಭಾಷೆಯೆಂದು ಕರೆಯಲಾಗಿಲ್ಲ. ಇದು ನಿಮಗೆ ಗೊತ್ತಿಲ್ಲವೆಂಬುದು ಬಹಳ ಜೋರಾಗೇ ಹೇಳಿಕೊಂಡಿರುವುದು ಬಿಟ್ಟರೆ ಮಿಕ್ಯಾವ (ಚರ್ಚೆಗೆ) ಸಂಬಂಧಿಸಿದಂತಿರುವ ನಿಲುವನ್ನೂ ಇಲ್ಲಿ ವ್ಯಕ್ತಪಡಿಸಿಕೊಂಡಿಲ್ಲ. ಅದನ್ನು ಮೊದಲು ಮಾಡಿದರೆ ಎಲ್ಲರ ಸಮಯ ಉಳಿದೀತು.

        ಉತ್ತರ
  7. ಅರುಣ್'s avatar
    ಅರುಣ್
    ಜನ 6 2011

    ಹಿಂದಿ ನಮ್ಮ ರಾಷ್ಟ್ರಭಾಷೆ, ಭಾರತೀಯನಾಗಿರಲು ಹಿಂದಿ ಕಲಿತಿರಬೇಕು ಅನ್ನೊ ಮಾತು ಹಲವಾರು ಜನ ಹಿಂದಿ ಭಾಷಾಂದರು ಹೇಳ್ತಾರೆ! ಈ ರೀತಿಯ ಅನುಭವ ವೈಯಕ್ತಿಕವಾಗಿ ನನಗೂ ಆಗಿದೆ, ನಮ್ಮ ಕಾಲೇಜಿನಲ್ಲಿ/ಕಚೇರಿಯಲ್ಲಿ ಇದ್ದ ಉತ್ತರ ಭಾರತೀಯ ವಿದ್ಯಾರ್ಥಿಗಳು ಹಿಂದಿ ಬರದವರನ್ನು ಭಾರತೀಯರೇ ಅಲ್ಲ. ಅನ್ನೋ ಮಟ್ಟಕ್ಕೆ ಮಾತಾಡ್ತಿದ್ರು. ಇದಕ್ಕಾಗಿ ಹಿಂದಿ ಭಾಷಾಂದರು ಹಿಂದಿ ಭಾರತದ ರಾಷ್ಟ್ರ ಭಾಷೆ ಅನ್ನೊ ಸುಳ್ಳುನ್ನ ಆದಾರದವಾಗಿ ಇಟ್ಟುಕೊಂಡಿದ್ದಾರೆ.

    ಕಾಯ್ಕಿಣಿ ಯವರ ವಿಷಯಕ್ಕೆ ಬಂದ್ರೆ,
    ಕನ್ನಡಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿರುವ ಕಾಯ್ಕಿಣಿಯವರು ಭಾರತದ ಸಂವಿಧಾನ ಭಾಷೆಗಳಿಗೆ ನೀಡಿರುವ ಸ್ಥಾನಮಾನವನ್ನು ತಿಳಿಯದೇ ಹಿಂದಿಯನ್ನು ರಾಷ್ಟ್ರ ಭಾಷೆ ಅಂದಿರೋದು ತಪ್ಪೇ. ತಪ್ಪು ದೊಡ್ಡೋರು(ಕನ್ನಡಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿರೋರು) ಮಾಡೀದ್ರು ತಪ್ಪೆ, ಚಿಕ್ಕೋರು((ಕನ್ನಡಕ್ಕೆ ಸಾಕಷ್ಟು ಕೊಡುಗೆ ಕೊಡದಿರುವವರು) ತಪ್ಪು ಮಾಡಿದ್ರು ತಪ್ಪೇ.

    ತಪ್ಪನ್ನ ತಪ್ಪು ಅಂತ ಹೇಳಿದ್ರೆನೆ, ತಪ್ಪು ಮಾಡಿದರವಿಗೆ ತಪ್ಪಿನ ಅರಿವಾಗಿ ಅದನ್ನ ತಿದ್ದಿಕೊಳ್ಳೊಕ್ಕೆ ಆಗೋದು ಅದನ್ನ ಬಿಟ್ಟು ದೊಡ್ಡೋರು ಮಾಡಿದ್ದು ಎಲ್ಲಾ ಸರಿ ಅನ್ನೋದು ವ್ಯಕ್ತಿ ಪೂಜೆ ಅನ್ನಿಸಿಕೊಳ್ಳುತ್ತೆ ಹೊರೆತು ಭಾಷಾ ಪ್ರೇಮ ಅಲ್ಲ.

    ಉತ್ತರ
  8. ರಮೇಶ್ ರಾವ್'s avatar
    ರಮೇಶ್ ರಾವ್
    ಜನ 6 2011

    ಮಹೇಶ್ ರವರೇ,

    ಇಲ್ಲಿ ಕಲ್ಯಾಣ್ ರಾಮನ್ ಕನ್ನಡ ಪ್ರೇಮ ಅಥವ ಕನ್ನಡಿಗನ ಬಗ್ಗೆಗಿನ ಪ್ರೇಮದ ಬಗ್ಗೆ ಮಾತನಾಡುತ್ತಿರುವುದು ನನಗಿರುವ ಅನುಮಾನ. ಅವರು ಇಲ್ಲಿ ಹೇಳುತ್ತಿರುವುದು ಹಿಂದಿ ಎಂಬುದೊಂದೆ ರಾಷ್ಟ್ರ ಭಾಷೆ ಎಂದು ಬಿಂಬಿಸಿರುವ ಕಾಯ್ಕಿಣಿ ಹೇಳಿಕೆಯ ಬಗ್ಗೆ. ಈ ಹೇಳಿಕೆ ಕನ್ನಡಿಗರ ಮನಸ್ಸಿನಲ್ಲಿ ಕನ್ನಡ ನುಡಿ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾದದ್ದು, ಹಿಂದಿ ಇಡೀ ದೇಶದಲ್ಲಿ ವ್ಯಾಪಿಸಿರುವ ನುಡಿ ಎಂಬ ಭಾವನೆ ಮೂಡಿಸುವುದಿಲ್ಲವೇ? ಹಾಗೆಯೆ, ಕನ್ನಡಿಗನ ಮನಸ್ಸಿನಲ್ಲಿ ಕನ್ನಡದ ಬಗ್ಗೆ ಕೀಳರಿಮೆ ಮೂಡಿಸುವುದಿಲ್ಲವೇ?

    ನಾಡಿಗರ ಮನಸ್ಸಿನಲ್ಲಿ ಗೊಂದಲ ಉಂಟು ಮಾಡುವ ಹೇಳಿಕೆ ನೀಡುವ ಯಾವುದೆ ವ್ಯಕ್ತಿಗೆ ಅವನ ತಪ್ಪೇನು ಎಂಬುದನ್ನು ಹೇಳದೆ ವಿನಾಯತಿ ನೀಡುವುದು ಎಲ್ಲಿಯ ನ್ಯಾಯ?

    ಇಂತಿ
    ರಮೇಶ್ ರಾವ್

    ಉತ್ತರ
    • ಮಹೇಶ ಪ್ರಸಾದ ನೀರ್ಕಜೆ's avatar
      ಮಹೇಶ ಪ್ರಸಾದ ನೀರ್ಕಜೆ
      ಜನ 6 2011

      ನನಗೆ ಹಾಗೆ ಭಾವನೆ ಮೂಡಿಲ್ಲ ದೊರೆ. ಅದಕ್ಕೆ ಹೇಳಿದೆ. ಕಾಯ್ಕಿಣಿ ಮಾತು ಕೇಳಿ ಕನ್ನಡ ಪ್ರೇಮಿಯೊಬ್ಬ ಹಿಂದಿ ಹುಚ್ಚು ಹಿಡಿಸಿಕೊಳ್ಳುತ್ತಾನೆ ಅಂತ ನನಗಂತೂ ಅನಿಸ್ತಿಲ್ಲ. ಒಬ್ಬನ ಮಾತಿನಿಂದ ಹೆಚ್ಚು ಅವನ ಕೃತಿಯನ್ನು ನೋಡುವುದು ಶ್ರೇಯಸ್ಕರ ಎಂದು ನಾನು ಇಗಲೇ ಹೇಳುತ್ತೇನೆ.

      ಉತ್ತರ
      • Nija's avatar
        Nija
        ಜನ 6 2011

        ಮಹೇಶ್ ಪ್ರಸಾದ್,
        ನೀವು ಹೇಳುವುದು ಒಬ್ಬಾತನ ಮಾತಿಗಿಂತ ಕೃತಿಯನ್ನು ಹೆಚ್ಚು ಜನ ನೋಡುತ್ತಾರೆ, ಹಾಗಾಗಿ ಕಾಯ್ಕಿಣಿಯವರ ಈ ತಪ್ಪು ಮಾತು ಜನರನ್ನು ಹಿಂದಿಯ ವಿಚಾರದಲ್ಲಿ ತಪ್ಪು ತಿಳಿಯುವ ಹಾಗೆ ಮಾಡಲಾರದು ಎಂಬ ನಿಮ್ಮ ನಂಬಿಕೆ ನನ್ನ ಆಸೆಯೂ ಆಗಿದೆ.

        ಆದರೆ ನೆನಪಿಸಿಕೊಂಡರೆ, ಸ್ವಾತಂತ್ರ್ಯ ಹೋರಾಟದ ವೇಳ, ಯಾಕೆ ಇಂದಿಗೂ ಎಲ್ಲಾ ಚುನಾವಣೆಗಳ ವೇಳೆ ಕೃತಿಗಳಿಗಿಂತ ಮಾತಿನಿಂದಲೇ ಹೆಚ್ಚು ಪ್ರಭಾವಕ್ಕೊಳಗಾಗುತ್ತಿರುವ ಜನರೇ ನಾವು. ಅಂತಹ ಸಮಾಜದಲ್ಲೇ ಇಲ್ಲಿ ಕಲ್ಯಾಣ್ ರಾಮನ್ ಹೇಳುತ್ತಿರುವ ಬದಲಾವಣೆ ಮೂಡಬೇಕಿರುವುದು. ನೀವು ಹೇಳುವ ಹಾಗೆ ನಡೆದುಕೊಳ್ಳುವ ಸಮಾಜ ಎದ್ದು ನಿಂತಾಗ ಸರಿ, ಯಾವ ಕಾಯ್ಕಿಣಿಯ ತಪ್ಪು ಮಾತೂ ಕೂಡ ಯಾರನ್ನೂ ತಪ್ಪು ದಾರಿಗೆಳೆಯದು.

        ಉತ್ತರ
  9. ರಮೇಶ್ ರಾವ್'s avatar
    ರಮೇಶ್ ರಾವ್
    ಜನ 6 2011

    ಆತ್ರಾಡಿ ಸುರೇಶ ಹೆಗ್ಡೆ ರವರೇ,

    ನಿಮಗೆ ಹಾಸ್ಯ ಚಟಾಕಿಯಾಗಿ ಕಂಡಿರುವುದು, ನನಗೆ ಕಾಣಿಸದು. ಆಥವ ನಿಮಗೆ ಕಾಣಸಿಗದ್ದು ನನಗೆ ಕಾಣಿಸಿದೆ.

    ಇನ್ನು ನಿಮ್ಮ ಇತರೆ ವ್ಯಕ್ತಿಗತ ನಿಂದನೆಗಳು “ಕಮೆಂಟಿಗೆ” ಅರ್ಹವಲ್ಲಾ ಎಂದು ಬಿಟ್ಟುಬಿಡುತ್ತೇನೆ.

    ಇಂತಿ
    ರಮೇಶ್ ರಾವ್

    ಉತ್ತರ
  10. Nija :
    ನಾಲ್ಕಾರು ಜನರಿಂದ ಮಂಗಳಾರತಿ ಮಾಡಿಸಿಕೊಂಡ ಹೆಗ್ಡೆ ಮಹಾಶಯರೇ ::ಆತ್ರಾಡಿ::.. ::ಮಾತಾಡಿ::….

    ನಾನು ಇಲ್ಲಿ ಬರೆಯುವುದು ಅನಗತ್ಯ ಎನ್ನುವವರು ಈಗ ಕರೆದು ಕರೆದು ಮಾತಾಡಿ ಅನ್ನುವುದೇಕೋ…?
    ನಾನು ದಿಕ್ಕು ತಪ್ಪಿಸುವವನು ಎನ್ನುವವರು ಮತ್ತೆ ಮತ್ತೆ ಕೂಗಿ ಕರೆಯುತ್ತಿರುವುದೇಕೋ…?
    ನೀವುಗಳು ಮಾಡುವುದು ಮಾತ್ರ ವಾದವಾಗಿರುತ್ತದೆ.
    ಆದರೆ, ನಾನು ಲೇಖನದಲ್ಲಿನ ಮಾತುಗಳನ್ನು ಉಲ್ಲೇಖಿಸಿ ಪ್ರಶ್ನೆ ಮುಂದಿಟ್ಟರೆ ಅದು ವಿತಂಡವಾದವಾದವಾಗುತ್ತದೆ.
    😀

    ಉತ್ತರ
    • Nija's avatar
      Nija
      ಜನ 6 2011

      ಇಡೀ ಲೇಖನವನ್ನು ಉದ್ದೇಶಿಸಿ ನಿಮ್ಮ ಪ್ರಶ್ನೆಗಳನ್ನು ಖಂಡಿತವಾಗಿಯೂ ಕೇಳಿ ಮಾರಾಯ್ರೇ! ಅದನ್ನು ಕೇಳಿಯೆಂದು ಹೇಳಲು ನನಗೇನು ಹಕ್ಕಿಲ್ಲ, ಆದರೆ ಚರ್ಚೆಯು ಸರಿಯಾಗಿ ನಡೆಯಬೇಕು ಎಂಬ ಉದ್ದೇಶದಿಂದ ಹಾಗೆ ಹೇಳುವೆ.

      ಲೇಖನದ ವ್ಯಾಕರಣ, ಬರೆಯುವವರ ಹೆಸರಿನ ಕೊನೆಯ ಅಕ್ಷರ, ಅವರ ಹುಟ್ಟೂರು, ಪದದ ಕೊನೆಯ ತೆ ಅಥವಾ ತ್ವ-ಕಾರಗಳ ಮಿಶ್ರ ಬಳಕೆ ಇವುಗಳನ್ನೇ ಮಾತ್ರ ಪ್ರಶ್ನೆಯೆಂದು ಕೇಳಿದರೆ ಚರ್ಚೆ ಮುಂದುವರೆದೀತೆ?

      ನಿಮ್ಮನ್ನು ಇಲ್ಲಿ ಇನ್ನೊಮ್ಮೆ ಮಾತಾಡಲು ಹೇಳಿದ್ದರೂ ನೀವು ನಿಮ್ಮ ನಿಲುವನ್ನು ಹೇಳದೇ ಬರೀ ಠೀಕೆ ಮಾಡಲು ಬಂದಿರುವುದನ್ನು ಸಮರ್ಥಿಸಿಕೊಳ್ಳುತ್ತಿದ್ದೀರ. ಅದರ ಬದಲು ನಿಮಗೆ ಇರುವುದು ಬರೀ ಆ ರೀತಿಯ ಪ್ರಶ್ನೆಗಳೆಂದಾದರು ಹೇಳಿದರೆ ಈ ವಾದ ಬೇಡವಾದೀತು.

      ಉತ್ತರ
      • ಬೇಡವಾದೀತಾದರೆ ಬೇಡ ಅನ್ನಿ. ಮತ್ತೆ ಮತ್ತೆ ಕರೆಯಬೇಡಿ.
        ಲೇಖನ ಓದಿದಾಗ ಎದ್ದ ಪ್ರಶ್ನೆಗಳನ್ನು ಕೇಳಿದೆ.
        ಉತ್ತರಿಸುವುದು ಬಿಡುವುದು ಲೇಖಕರಿಗೆ ಬಿಟ್ಟ ವಿಚಾರ.
        ಇದರಲ್ಲಿ ನನ್ನ ವಾದ ಏನಿಲ್ಲ.
        ಅಲ್ಲದೆ ದಿಕ್ಕು ತಪ್ಪಿಸುವ ನನ್ನ ಹಾದಿಯಲ್ಲಿ ಬರಲು ಯಾರಿಗೂ ಆಹ್ವಾನವೂ ಇಲ್ಲ.
        😀

        ಉತ್ತರ
    • Priyank's avatar
      Priyank
      ಜನ 6 2011

      ವಿಷಯ ನಿಮಗೆ ಮುಖ್ಯವೆಂಬಂತೆ ಕಾಣುವುದಿಲ್ಲ.
      ನಿಮ್ಮ (ಬರೆಯಲಾದ) ಮಾತುಗಳನ್ನು ನೋಡಿದರೆ, ವಿಷಯದ ಬಗ್ಗೆ ಆರೋಗ್ಯಕರ ಚರ್ಚೆ ನಿಮಗೆ ನಿಜಕ್ಕೂ ಬೇಡವಾಗಿದೆ ಎನಿಸುತ್ತಿದೆ.
      ಹಾಗಾಗಿ, ನಿಮ್ಮ ಶೈಲಿಯ ವಾದದಲ್ಲಿ ಪಾಲ್ಗೊಳ್ಳಲು ನಾನು ಬಯಸುವುದಿಲ್ಲ.

      ಉತ್ತರ
      • ಇಲ್ಲಿ ವಿಷಯ ಯಾವುದು.

        ನನ್ನ ಪಾಲಿಗೆ:

        ಹಿಂದೀಯನ್ನು ನಾನು ಕನ್ನಡದಷ್ಟೇ ಪ್ರಮುಖ ರಾಷ್ಟ್ರಭಾಷೆಯೆಂದು ನಾನು ಪರಿಗಣಿಸುತ್ತೇನೆ. ಏಕೆಂದರೆ ನಾನು ಕನ್ನಡವನ್ನೂ ರಾಷ್ಟ್ರಭಾಷೆಯೆಂದೇ ಪರಿಗಣಿಸುವವನು.
        ನಾನು ಕನ್ನಡ ನಾಡು ನುಡಿಯನ್ನು ಪ್ರೀತಿಸುತ್ತೇನೆ.
        ಕಾಯ್ಕಿಣಿಯಂಥವರು ಏನು ಹೇಳಿಕೊಂಡು ಬಂದರೂ ನಾನು ನನ್ನ ಅಭಿಪ್ರಾಯವನ್ನು ಬದಲಿಸಲಾರೆ. ನನ್ನ ನಾಡಿನ ಜನತೆಯ ಬಗ್ಗೆಯೂ ನನಗೆ ಅದೇ ನಂಬಿಕೆ ಇದೆ. ಕಾಯ್ಕಿಣಿಯಂಥವರು ಹೇಳಿದ ಕೂಡಲೇ ಹಿಂದೀಯ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಬದಲಿಸಿಕೊಳ್ಳುವ ಮೂರ್ಖರು ನಮ್ಮ ನಾಡಿನ ಜನರಲ್ಲ ಅನ್ನುವ ಭರವಸೆ ನನಗಿದೆ.

        ಈ ಲೇಖನದಲ್ಲಿ ಪರೋಕ್ಷವಾಗಿ ತಮಿಳಿಯನ್ನರ ಗುಣಗಾನ ನಡೆದಿರುವುದು ನನ್ನ ಕಣ್ಣಿಗೆ ಬಿದ್ದಿದೆ. ಕನ್ನಡನಾಡಿನಲ್ಲಿ, ಕನ್ನಡದಲ್ಲೇ, ಕನ್ನಡಿಗರನ್ನೇ ದೂಷಿಸುತ್ತಾ ತಮಿಳಿಯನ್ನರನ್ನು ಹೊಗಳುವ ಇಂಥ ಬರಹಗಳು ಹೊಸದೇನೂ ಅಲ್ಲ, ಬಿಡಿ.

        ನನ್ನ ಕಣ್ಣಿಗೆ ಕಂಡದ್ದು ಅನ್ಯರ ಕಣ್ಣಿಗೆ ಕಂಡಿಲ್ಲ ಅಂದ ಕೂಡಲೇ ಮಹಾಪರಾಧವೇನೂ ಅಲ್ಲ.
        🙂

        ಉತ್ತರ
      • Nija's avatar
        Nija
        ಜನ 6 2011

        ಹೆಗ್ಡೆ ಅವ್ರೆ,
        ಕೊನೆಗೂ ನಿಮ್ಮ ಅನಿಸಿಕೆಯನ್ನು ನೇರವಾಗಿ ಹೇಳಿದಕ್ಕೆ ನನ್ನಿ. ಈಗ ಅದನ್ನೇ ಕುರಿತು ಮಾತನಾಡೋಣ. ಏಕೆಂದರೆ ಈ ರೀತಿಯ ವಿಷಯವನ್ನು ಕುರಿತು ಸರಿಯಾದ ಚರ್ಚೆ ಕನ್ನಡಿಗರಲ್ಲಿ ನಡೆವುದು ಬಹಳ ಮುಖ್ಯ.

        ::ಹಿಂದಿಯನ್ನು ಕನ್ನಡದಷ್ಟೇ ಪ್ರಮುಖ ರಾಷ್ಟ್ರಭಾಷೆಯೆಂದು ನಾನು ಪರಿಗಣಿಸುತ್ತೇನೆ::
        ನೀವು ಎಲ್ಲವನ್ನೂ ಸಮ ಎಂದು ತಿಳಿದು ಆ ಮೂಲಕ ಮನಸ್ಶಾಂತಿ ಪಡೆದುಕೊಳ್ಳುತ್ತಿರಬಹುದು, ಆದರೆ ಬೀದಿಯಲ್ಲಿ ಇಳಿದು ನೋಡಿ, ಲಕ್ಷಗಟ್ಟಲೆ ಕನ್ನಡಿಗರ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದೇ ಈ ಹಿಂದಿಯೆಂಬ ಭೂತ. ಅಂತಹ ಭೂತಕ್ಕೆ ನಾವೇ ಚುನಾಯಿಸಿರುವ ಕೇಂದ್ರ ಸರ್ಕಾರದ ಹಲವಾರು ಹಿಂದಿ-ಪರ (ಇತರ ಭಾಷಾ ವಿರುದ್ಧವೆಂದೂ ಓದಬಹುದು) ಯೋಜನೆಗಳನ್ನು ಶಕ್ತಿ ನೀಡುತ್ತಿವೆ. ನಾನು ನೀವು ಈ ರೀತಿ ಸಮಾನತೆಯ ಭ್ರಮೆಯಲ್ಲಿ ಕುಳಿತರೆ ಈ ನಿಜ ಬದಲಾಗುವ ಹಾಗೆ ಕಾಣುತ್ತಿಲ್ಲ.

        ::ಕಾಯ್ಕಿಣಿಯಂಥವರು ಏನು ಹೇಳಿಕೊಂಡು ಬಂದರೂ ನಾನು ನನ್ನ ಅಭಿಪ್ರಾಯವನ್ನು ಬದಲಿಸಲಾರೆ. ನನ್ನ ನಾಡಿನ ಜನತೆಯ ಬಗ್ಗೆಯೂ ನನಗೆ ಅದೇ ನಂಬಿಕೆ ಇದೆ::
        ಆದರೆ ಇಲ್ಲಿ ಕಾಯ್ಕಿಣಿಯವರು ಹೇಳಿರುವುದಕ್ಕೂ ನೀವು ಅಂದುಕೊಂಡಿರುವುದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ರಾಷ್ಟ್ರಭಾಷೆ ಎಂಬ ಪದಕ್ಕೆ ನೀವು ನಿಮ್ಮದೇ ಭಿನ್ನ ಅರ್ಥ ಕೊಟ್ಟಿದ್ದರೆ ಆಗ ಬೇರೆ. ಆದರೆ ಪುಸ್ತಕದಲ್ಲಿ ರಾಷ್ಟ್ರಭಾಷೆಯೆಂಬುದರ ಅರ್ಥ ಈ ದೇಶದ ಒಗ್ಗಟ್ಟಿಗೆ ಒಳಿತಂತೂ ತರುವುದಿಲ್ಲ. ಭಾರತವೆಂಬ ವಿಭಿನ್ನ ಭಾಷೆಗಳ ಆಗರದಲ್ಲಿ ಯಾವುದೋ ಒಂದಿಷ್ಟು ಭಾಷೆಗಳನ್ನು ರಾಷ್ಟ್ರಭಾಷೆಗಳಾಗಿ ಕರೆಯುವುದರ ಅರ್ಥವಾದರು ಏನು ಹೇಳಿ? ರಾಷ್ಟ್ರಭಾಷೆ ಎಂಬ ಪದಕ್ಕೇ ಅರ್ಥ ಕೊಡಲಾಗದ ದೇಶದಲ್ಲಿ ಆ ಬಿರುದಿನ ಎರಡು ಅಥವಾ ಹೆಚ್ಚು ಭಾಷೆಗಳನ್ನು ಗುರುತಿಸುವ ನಿಮ್ಮ ಚಿಂತನೆ ಮರುಚಿಂತನೀಯವಲ್ಲವೇ?

        ಉತ್ತರ
  11. Priyank's avatar
    Priyank
    ಜನ 6 2011

    ಆತ್ರಾಡಿ ಸುರೇಶ ಹೆಗ್ಡೆ :
    ಇಲ್ಲಿ ವಿಷಯ ಯಾವುದು.
    ನನ್ನ ಪಾಲಿಗೆ:
    ಹಿಂದೀಯನ್ನು ನಾನು ಕನ್ನಡದಷ್ಟೇ ಪ್ರಮುಖ ರಾಷ್ಟ್ರಭಾಷೆಯೆಂದು ನಾನು ಪರಿಗಣಿಸುತ್ತೇನೆ. ಏಕೆಂದರೆ ನಾನು ಕನ್ನಡವನ್ನೂ ರಾಷ್ಟ್ರಭಾಷೆಯೆಂದೇ ಪರಿಗಣಿಸುವವನು.
    ನಾನು ಕನ್ನಡ ನಾಡು ನುಡಿಯನ್ನು ಪ್ರೀತಿಸುತ್ತೇನೆ.
    ಕಾಯ್ಕಿಣಿಯಂಥವರು ಏನು ಹೇಳಿಕೊಂಡು ಬಂದರೂ ನಾನು ನನ್ನ ಅಭಿಪ್ರಾಯವನ್ನು ಬದಲಿಸಲಾರೆ. ನನ್ನ ನಾಡಿನ ಜನತೆಯ ಬಗ್ಗೆಯೂ ನನಗೆ ಅದೇ ನಂಬಿಕೆ ಇದೆ. ಕಾಯ್ಕಿಣಿಯಂಥವರು ಹೇಳಿದ ಕೂಡಲೇ ಹಿಂದೀಯ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಬದಲಿಸಿಕೊಳ್ಳುವ ಮೂರ್ಖರು ನಮ್ಮ ನಾಡಿನ ಜನರಲ್ಲ ಅನ್ನುವ ಭರವಸೆ ನನಗಿದೆ.
    ಈ ಲೇಖನದಲ್ಲಿ ಪರೋಕ್ಷವಾಗಿ ತಮಿಳಿಯನ್ನರ ಗುಣಗಾನ ನಡೆದಿರುವುದು ನನ್ನ ಕಣ್ಣಿಗೆ ಬಿದ್ದಿದೆ. ಕನ್ನಡನಾಡಿನಲ್ಲಿ, ಕನ್ನಡದಲ್ಲೇ, ಕನ್ನಡಿಗರನ್ನೇ ದೂಷಿಸುತ್ತಾ ತಮಿಳಿಯನ್ನರನ್ನು ಹೊಗಳುವ ಇಂಥ ಬರಹಗಳು ಹೊಸದೇನೂ ಅಲ್ಲ, ಬಿಡಿ.
    ನನ್ನ ಕಣ್ಣಿಗೆ ಕಂಡದ್ದು ಅನ್ಯರ ಕಣ್ಣಿಗೆ ಕಂಡಿಲ್ಲ ಅಂದ ಕೂಡಲೇ ಮಹಾಪರಾಧವೇನೂ ಅಲ್ಲ.

    ಸುರೇಶ ಅವರೇ,
    ನಿಮ್ಮ ಭರವಸೆಯೇ ನನ್ನ ಆಸೆ.
    ಕಾಯ್ಕಿಣಿಯವರ ಮಾತುಗಳನ್ನ ನಂಬದೇ, ಹಿಂದಿಗೆ ಮಾತ್ರ ರಾಷ್ಟ್ರಭಾಷೆಯ ಸ್ಥಾನವಿಲ್ಲ ಎಂಬುದನ್ನು ಕನ್ನಡಿಗರು ಎಲ್ಲರೂ ಅರಿಯುವಂತಾದರೆ ಒಳ್ಳೆಯದು.
    ನಮ್ಮ ಸುತ್ತಮುತ್ತ ನೋಡಿದರೆ, ವಾಸ್ತವ ಹಾಗಿಲ್ಲ ಎಂಬುದು ಕಾಣಿಸುತ್ತದೆ.
    ಬಹುತೇಕ ಕನ್ನಡಿಗರು ಇವತ್ತಿಗೂ ಹಿಂದಿ ಮಾತ್ರ ರಾಷ್ಟ್ರಭಾಷೆ ಎಂಬುದನ್ನು ನಂಬಿ ಕುಳಿತಿದ್ದಾರೆ.
    ಶಾಲೆಯ ಪುಸ್ತಕಗಳಲ್ಲಿ, ಈ ರೀತಿಯ ಸಭೆ ಸಮಾರಂಭಗಳಲ್ಲಿ, ದಿನಪತ್ರಿಕೆಗಳಲ್ಲಿ, ಮೇಲಿಂದ ಮೇಲೆ ಸುಳ್ಳನ್ನು ಹೇಳಲಾಗುತ್ತಿದ್ದು, ಅದನ್ನೇ ಕನ್ನಡಿಗರು ಸತ್ಯವೆಂದು ನಂಬುತ್ತಿದ್ದಾರೆ.
    ಸುಳ್ಳನ್ನು ಬಿತ್ತರಿಸುವ ಕೆಲಸ ನಿಲ್ಲಬೇಕು. ಅದನ್ನು ಯಾರೇ ಮಾಡುತ್ತಿದ್ದರೂ ನಿಲ್ಲಿಸಬೇಕು.

    ತಮಿಳುನಾಡಿನ ರಾಜಕಾರಣಿಗಳ ಉಲ್ಲೇಖ ನನಗೆ ಸಮಂಜಸವೆಂದು ತೋರುತ್ತಿದೆ.
    ತಮ್ಮ ರಾಜ್ಯದ ಜನತೆಗೆ ಅನುಕೂಲ ಏರ್ಪಡಿಸಲು, ಕೇಂದ್ರ ಸರಕಾರವನ್ನು ಬಗ್ಗಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.
    ತಮ್ಮ ಜನರಲ್ಲಿ, ತಮ್ಮ ಭಾಷೆ ಬಗ್ಗೆ, ತಮ್ಮ ನೆಲದ ಬಗ್ಗೆ ಅಭಿಮಾನ ಹೆಚ್ಚಿಸುವ ಕೆಲಸ, ಕೀಳರಿಮೆ ಕಿತ್ತು ಹಾಕುವ ಕೆಲಸ ಚೆನ್ನಾಗಿ ಮಾಡುತ್ತಿದ್ದಾರೆ.
    ಅಂತಹ ಒಳ್ಳೆಯ ಕೆಲಸಗಳನ್ನು ಕನ್ನಡಿಗ ರಾಜಕಾರಣಿಗಳೂ ಕಲಿಯಬೇಕು. ಕನ್ನಡಿಗರ ಅನುಕೂಲಕ್ಕೆ ತಕ್ಕ ಏರ್ಪಾಟು ಮಾಡಲು ದುಡಿಯಬೇಕು.

    ಉತ್ತರ
    • ತಮಗೆ ಸಮಂಜಸ ಕಂಡಿದ್ದು, ನನಗೆ ಕಂಡಿಲ್ಲ ಅಷ್ಟೇ.
      ಓರ್ವನನ್ನು ಹೊಗಳಲು ಮತ್ತೋರ್ವನನ್ನು ತೆಗಳುವುದು ಮತ್ತು ಓರ್ವನನ್ನು ತೆಗಳಲು ಮತ್ತೋರ್ವನನ್ನು ಹೊಗಳುವುದು ಅನಗತ್ಯ ಎಂದು ನನ್ನ ಅನಿಸಿಕೆ.
      ಆ ತಮಿಳಿಯರನ್ನು ನೋಡಿಯಾದರೂ ಸ್ವಲ್ಪ ಬುದ್ಧಿ ಕಲೀರಿ ಅನ್ನುವ ಮಾತಿನಿಂದ ಅನಾಹುತವೇ ಆದೀತು ಅನ್ನುವ ಭಯ ನನಗೆ.
      ಮಕ್ಕಳಿಗಾದರೂ ಅಷ್ಟೇ, ಅವರನ್ನು ಅವರ ಸಹಪಾಠಿಗಳೊಂದಿಗೆ ಹೋಲಿಸಿ, ತೆಗಳಿದರೆ ಹಿಡಿಸದು.
      ಅದರ ಬದಲು ಅವರಿಂದ ಏನಾಗಬೇಕು, ಅವರು ಹೇಗಿರಬೇಕು ಅನ್ನುವುದನ್ನಷ್ಟೇ ತಿಳಿಸಬೇಕು.
      ನಾವು ಏನು ಮಾಡಬೇಕಾಗಿದೆ ಅನ್ನುವುದಷ್ಟೇ ಮುಖ್ಯ ನನಗೆ. ಅವರಿವರ ಉದಾಹರಣೆ ಅನಗತ್ಯ. ತಮಿಳರ ಉದಾಹರಣೆ ನೀಡಿ ತಿಳಿಹೇಳಬೇಕಾದಷ್ಟು ಮೂಢರೇ ನಮ್ಮ ಕನ್ನಡಿಗರು? ಖಂಡಿತಕ್ಕೂ ಅಲ್ಲ ಎಂದು ನನ್ನ ಅನಿಸಿಕೆ.
      ಹಾದಿ ತಪ್ಪಿಸುವ ನನ್ನ ಹಾದಿಗೆ ಬಂದು ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು.
      🙂

      ಉತ್ತರ
      • Priyank's avatar
        Priyank
        ಜನ 6 2011

        ಒಳಿತು ಎಲ್ಲಿದ್ದರೂ ಕಲಿಯಬೇಕು.
        ಕೆಡುಕು ದೂರವಿಡಬೇಕು.
        ಒಳಿತು ತಮಿಳರಲ್ಲಿದ್ದರೇನು? ಕಲಿಯಬಾರದೇ?

        ಅಂತಹ ಮೂಡರಲ್ಲ ಕನ್ನಡಿಗರು ಅಂತ ನೀವು ಹೇಳಿದ್ದೀರಿ. ಕನ್ನಡಿಗ ರಾಜಕಾರಣಿಗಳು ಕನ್ನಡಿಗ ಪರ ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ನಾನು ಹೇಳುತ್ತೇನೆ.
        ಕೃಷ್ಣಾ ನದಿ ಹಂಚಿಕೆಯಲ್ಲಿ ಕನ್ನಡಿಗರಿಗೆ ಒಳಿತಾಗಿಲ್ಲದಿದ್ದರೂ, ಒಳಿತಾಗಿದೆ ಎಂದು ಹೇಳುವ ರಾಜಕಾರಣಿಗಳನ್ನು ನೋಡಿದಾಗ, ಅವರು ಕಲಿಯುವುದು ತುಂಬಾ ಇದೆ ಎಂದು ನನಗನಿಸುತ್ತದೆ.
        ಕನ್ನಡ ಶಾಲೆಗಳಿಗೆ, ಸೆಪ್ಟಂಬರ್-ವರೆಗೂ ಪುಸ್ತಕಗಳು ಸಿಗದಿದ್ದು ನೋಡಿದಾಗ, ನಮ್ಮ ರಾಜಕಾರಣಿಗಳು ಕಲಿಯುವುದು ಇನ್ನೂ ಇದೆ ಎಂದು ನನಗನಿಸುತ್ತದೆ.
        ರೈಲ್ವೆ ಬಜೆಟ್ಟಿನಲ್ಲಿ ಪ್ರತೀ ವರ್ಷ ರಾಜ್ಯಕ್ಕೆ ಅನ್ಯಾಯವಾದಾಗಲೂ, ಮಾಡಬೇಕಾದ ಕೆಲಸ ಮಾಡದೇ ಸುಮ್ಮನಿರುವುದು ನೋಡಿದಾಗ, ನಮ್ಮ ರಾಜಕಾರಣಿಗಳು ಕಲಿಯುವುದು ಇನ್ನೂ ಇದೆ ಎಂದು ನನಗನಿಸುತ್ತದೆ.

        ಉತ್ತರ
  12. chukkichandira's avatar
    ಜನ 6 2011

    ನನಗೆ ಕಾಯ್ಕಿಣಿ ಅಪರಾಧಿಯಂತೆ ಕಾಣುತ್ತಿಲ್ಲ. ಜೊತೆಗೆ ಕೆಲವು ದಿನಗಳ ಹಿಂದೆ ಕನ್ನಡಿಗರ ಬಗ್ಗೆ ತಮ್ಮ ನಿಲುವನ್ನು ತಿಳಿಸಿದ ಎಸ್‌.ಎಲ್‌.ಬೈರಪ್ಪ ಕೂಡ. ಯಾಕೆಂದರೆ ಅವರಿಬ್ಬರೂ ಕನ್ನಡ ಭಾಷೆಗೆ, ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ನನ್ನ ವೈಯಕ್ತಿಕ ಮಾತೆಂದರೆ ಕನ್ನಡ ನನಗೆ ಮಮತೆಯ ಭಾಷೆ. ಆದರೆ ಬೆಂಗಳೂರಿನಂತಹ ನಗರದಲ್ಲಿ ಇದೊಂದು ಭಾಷೆ ನನಗೆ ಸಾಕಾಗುತ್ತಿಲ್ಲ. ಈ ಲೇಖನದಲ್ಲಿ ಆರಂಭದ ನೀರ್ಕಜೆ ಅಭಿಪ್ರಾಯಕ್ಕೆ ಮತ್ತು ಆರಂಭದಲ್ಲಿ ಹೇಳಿದ ಸುರೇಶ್‌ ಹೆಗ್ಡೆ ಮಾತಿಗೆ ನನ್ನ ಸಹಮತವಿದೆ. ತಪ್ಪು ತಪ್ಪೇ ಎಂಬ ಮಾತನ್ನು `ಪ್ರೀಯಾ` ಕಾಯ್ಕಿಣಿಗೆ ಅನ್ವಯಿಸುವುದು ನನಗೆ ಇಷ್ಟವಾಗುವುದಿಲ್ಲ. ಅತ್ಯುತ್ತಮ ಚರ್ಚೆ ನಡೆಯುತ್ತಿದೆ ಎಂದೆನಿಸುತ್ತದೆ. `ನಿಜ’ ಹೊರಬರಲಿ

    ಉತ್ತರ
    • Priyank's avatar
      Priyank
      ಜನ 6 2011

      “ಹಿಂದಿ ಮಾತ್ರ ರಾಷ್ಟ್ರಭಾಷೆಯಲ್ಲ” ಎಂಬುದು ನಿಜ.
      ಹಿಂದಿಯು ಮಾತ್ರ ರಾಷ್ಟ್ರಭಾಷೆ ಎಂಬುದು ಸುಳ್ಳು.
      ಕಾಯ್ಕಿಣಿಯವರು ಇಂತಹ ಸುಳ್ಳನ್ನು ಪ್ರತಿಪಾದನೆ ಮಾಡುತ್ತಿದ್ದರೆ ಅದು “ಸುಳ್ಳಿನ ಪ್ರತಿಪಾದನೆಯೇ” ಆಗುತ್ತದೆ ಹೊರತು ನಿಜದ ಪ್ರತಿಪಾದನೆಯಾಗುವುದಿಲ್ಲ.
      ಬೆಂಗಳೂರಿನಲ್ಲಿ ಇವತ್ತು ಕನ್ನಡ ಮಾತ್ರ ಸಾಕಾಗದೇ ಇರುವುದಕ್ಕೆ, ನಮ್ಮ ನಾಡನ್ನು ಕಟ್ಟಲಾದ ರೀತಿಯಲ್ಲಿ ಹುಳಕಿದೆ.
      ಚೆಂದದ ನಾಡು ಕಟ್ಟಲು ಬೇಕಾದ ಎಲ್ಲವನ್ನು ಮಾಡಿದ್ದೆ ಆಗಿದ್ದಲ್ಲಿ, ಜರ್ಮನಿಯಲ್ಲಿ ಜರ್ಮನ್ ಭಾಷೆ ಹೇಗಿದೆಯೋ ಹಾಗೆಯೇ ಕರ್ನಾಟಕದಲ್ಲಿ ಕನ್ನಡವೂ ಇರುತ್ತಿತ್ತು.
      ನಿಮಗೆ ಬೆಂಗಳೂರಲ್ಲಿ ಕನ್ನಡ ಮಾತ್ರ ಸಾಕಾಗುತ್ತಿತ್ತು.
      ಅಂತಹ ನಾಡು ಕಟ್ಟಲು, ಸುಳ್ಳಿನ ಮೇಲೆ ನಿಂತರೆ ಆಗದು. ಸತ್ಯದ ಮೇಲೆ ನಿಂತು ಮಾಡಬೇಕು.

      ಉತ್ತರ
      • chukkichandira's avatar
        ಜನ 6 2011

        “ಎಲ್ಲ ಪ್ರಾದೇಶಿಕ ಭಾಷೆಗಳು ಭಾರತದ ಏಕತೆಯ ಸಂಕೇತಗಳಿದ್ದಂತೆ”

        -ಧನ್ಯವಾದ ಪ್ರಿಯಾಂಕ್‌

        ಉತ್ತರ
  13. Nija :
    ಹೆಗ್ಡೆ ಅವ್ರೆ,
    ರಾಷ್ಟ್ರಭಾಷೆ ಎಂಬ ಪದಕ್ಕೇ ಅರ್ಥ ಕೊಡಲಾಗದ ದೇಶದಲ್ಲಿ ಆ ಬಿರುದಿನ ಎರಡು ಅಥವಾ ಹೆಚ್ಚು ಭಾಷೆಗಳನ್ನು ಗುರುತಿಸುವ ನಿಮ್ಮ ಚಿಂತನೆ ಮರುಚಿಂತನೀಯವಲ್ಲವೇ?

    ಹೌದು ಇದು ಖಂಡಿತಕ್ಕೂ ಮರುಚಿಂತನೀಯ.
    ನೀವೂ ಸೇರಿ, ಎಲ್ಲರೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿ.
    ಚಿಂತನೆ ಅಸಾಧ್ಯ ಎಂದಾಗಲೀ, ಈ ಬದಲಾವಣೆ ಅಸಾಧ್ಯ ಎಂದಾಗಲೀ, ಕೈಚೆಲ್ಲಿ ಕೂರಬೇಡಿ.
    ಮುಂದೊಮ್ಮೆ, ನಮ್ಮ ನಾಡಿನ ಎಲ್ಲಾ ಭಾಷೆಗಳೂ ಸಮಾನ ರಾಷ್ತ್ರಭಾಷೆಗಳೆಂಬ ನನ್ನ ನಿಲುವೇ ಎಲ್ಲರ ನಿಲುವೂ ಆಗುವಂತಾಗಲಿ.

    ಉತ್ತರ
  14. Sundar's avatar
    Sundar
    ಜನ 7 2011

    ಚಂದ್ರಶೇಕರ್ ರಾಮನ್ ಹಾಗು ಅವರ ಕುಟುಂಬದ ಬಗ್ಗೆ ಅರಿವಿರುವ ಪ್ರತಿಯೊಬ್ಬರೂ ಅವರಿಗಿರುವ ಕನ್ನಡ ನಾಡು ನುಡಿಯ ಬಗೆಗಿನ ಕಾಳಜಿ ಮೆಚ್ಚ್ಚತಕ್ಕಂತಹದ್ದು. ಆದರೆ ಕೆಲ ಕಾಮೆಂಟ್ ಕಾಮಣ್ಣ ರು (ಎಲ್ಲದರಲ್ಲೂ ಮೂಗು ತುರಿಸುವುದು ಅವರ ಹವ್ಯಾಸ) ಸುಮ್ಮನಿರಲಾರದೆ, ಎಲ್ಲ ಬ್ಲಾಗ್ ಗಳಲ್ಲಿ ಕೈಯಾಡಿಸುತ್ತಾ, ಕಛೇರಿಯ ಸಮಯದಲ್ಲಿ ಕಾಮೆಂಟ್ ಮಾಡ್ತಾ ಕುಳಿತುಕೊಳ್ಳುವದು ಅವರ ಹುಟ್ಟುಗುಣ. ಏನು ಮಾಡೋದಿಕ್ಕೆ ಆಗಲ್ಲ. ಅವರಿಗೆ ಬೈದರು ಬುದ್ದಿ ಬರಲ್ಲ, ಉಗುಳಿದರು ಬುದ್ದಿ ಬರಲ್ಲ. ಕೊಚ್ಚೆ ಒಳಗೆ ಕಲ್ಲನ್ನು ಹಾಕದೆ ಸುಮ್ಮನಿರುವುದು ವಾಸಿ.

    ಉತ್ತರ
    • V. M. Kumaraswamy's avatar
      V. M. Kumaraswamy
      ಜನ 12 2011

      ಸುಂದರ್ ರವರೆ, ಕಲ್ಯಾಣ್ ರಾಮನ್ ಫ್ಯಾಮಿಲಿ ಬಗ್ಗೆ ಗೊತ್ತು. ಬರಹ ಕನ್ನಡ ಫಾಂಟ್ಸ್ ಅನ್ನು ಕಲ್ಯಾಣ್ ರಾಮನ್ ಸಹೋದರ ಶೇಷಾದ್ರಿ ವಾಸು ಸೃಷ್ಟಿ ಮಾಡಲಿಲ್ಲ. ಬರಹ ಕನ್ನಡ ಫಾಂಟ್ಸ್ ಅನ್ನು ಕದ್ದು ಮಾಡಿದ್ದು ಅಂತ ಶೇಷಾದ್ರಿ ವಾಸು ನೆ ಇದನ್ನು ಇಮೇಲ್ ನಲ್ಲಿ ತಿಳಿಸಿದ್ದಾನೆ.

      ಉತ್ತರ
  15. ಶ್ರೀನಿವಾಸ್'s avatar
    ಶ್ರೀನಿವಾಸ್
    ಜನ 8 2011

    ಹೆಗಡೆಯವರ ಕಾಮೆಂಟ್ಸ್ ಓದಿದಾಗ “ತೆಂಗಿನಕಾಯಿಯ ತಿರುಳನ್ನು ಬಿಟ್ಟು ಬರೀ ಕರಟಕ್ಕಾಗಿ ಬಡಿದಾಡಿದರು” ಅನ್ನೋ ಮಾತು ನೆನಪಿಗೆ ಬಂತು. ಅವರು ಇನ್ನೊಮ್ಮೆ ಕಲ್ಯಾಣರಾಮನ್ ಬರೆದಿರೋ ಲೇಖನ ಓದಿಕೊಂಡು ಅದರ ತಿರುಳನ್ನು ಪರಿಗ್ರಹಿಸಬೇಕು. ಕಲ್ಯಾಣರಾಮನ್ ಲೇಖನದಲ್ಲಿ ಕಾಯ್ಕಿಣಿಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆಯೇ ಹೊರತು ಎಲ್ಲಿಯೂ ಅವರನ್ನು ಎಲ್ಲಿಯೂ ತೆಗಳಿಲ್ಲ. ಅದೇರೀತಿ, ತಮಿಳರ ಭಾಷಾಪ್ರೇಮವನ್ನು ಮಾತ್ರ ಹೊಗಳಿದ್ದಾರೆ ಹೊರ್ತು ತಮಿಳರೇ ತಮ್ಮ ಆದರ್ಶ ಎಂದು ಹೇಳಿಲ್ಲ. ಕಲ್ಯಾಣರಾಮನ್ ಅವರ ಬ್ಲಾಗ್ ಓದುಗರಿಗೆ ಅವರು ತಮಿಳರ ದಬ್ಬಾಳಿಕೆಗಳ ಬಗ್ಗೆಯೂ ಹಲವಾರು ಲೇಖನಗಳನ್ನು ಬರೆದಿರುವುದು ತಿಳಿದಿರುತ್ತೆ.

    ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಕಲ್ಯಾಣರಾಮನ್ ಹೆಸರಿನ ಮೂಲವನ್ನು ಕೆದುಕುವ, ಅವರ ಲೇಖನದಲ್ಲಿರಬಹುದಾದ ವ್ಯಾಕರಣದೋಷಗಳನ್ನು ಹುಡುಕುವ ವ್ಯರ್ಥಪ್ರಯತ್ನಗಳು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲಾಗದ ಹೆಗಡೆಯವರ ಅಸಹಾಯಕತೆಯನ್ನು ಎತ್ತಿ ತೋರಿಸುತ್ತೆ. ತಮ್ಮೆಲ್ಲಾ ಕಾಮೆಂಟ್ಸ್ ನಲ್ಲೂ ಸ್ಮೈಲಿ ಮುಖಗಳನ್ನು ಹಾಕಿದ ಮಾತ್ರಕ್ಕೆ ಓದುಗರು ನಕ್ಕು ಅವರ ವಾದಕ್ಕೆ ಮರುಳಾಗಿಬಿಡುತ್ತಾರೆ ಎನ್ನುವ ಭ್ರಮೆಯಿಂದ ಇವರು ಹೊರಬರಬೇಕಿದೆ.

    ಉತ್ತರ
    • ವ್ಯಾಕರಣ ದೋಷಗಳನ್ನು ನಾನು ಎಲ್ಲಿ ಹುಡುಕಿದೆ ಎಂದು ಉದಾಹರಣೆಯೊಂದಿಗೆ ಹೇಳಿ.
      ನನ್ನ ಎಲ್ಲಾ ಪ್ರತಿಕ್ರಿಯೆಗಳಲ್ಲೂ ತಮಗೆ ಸ್ಮೈಲಿ ಕಂಡಿದ್ದು ಅದು ಹೇಗೋ?

      ಉತ್ತರ
  16. ellakavi's avatar
    ಜನ 8 2011

    ಲೇಖನಕ್ಕೆ ಸಂಬಂದಿಸಿಲ್ಲದ ಕಾರಣ ಈ ಪ್ರತಿಕ್ರಿಯೆಯನ್ನ ತೆಗೆಯಲಾಗಿದೆ.
    ಪ್ರತಿಕ್ರಿಯೆಗಳು ವಿಷಯದ ಸುತ್ತ ಇರಲಿ,ನಿಂದಾನಾತ್ಮಕ ಬರಹಗಳು ಬೇಡ.
    -ನಿಲುಮೆ

    ಉತ್ತರ
  17. Narendra's avatar
    Narendra
    ಜನ 12 2011

    ಆತ್ರಾಡಿ ಸುರೇಶ ಹೆಗ್ಡೆ :
    ಇಲ್ಲಿ ವಿಷಯ ಯಾವುದು.
    ನನ್ನ ಪಾಲಿಗೆ:
    ಹಿಂದೀಯನ್ನು ನಾನು ಕನ್ನಡದಷ್ಟೇ ಪ್ರಮುಖ ರಾಷ್ಟ್ರಭಾಷೆಯೆಂದು ನಾನು ಪರಿಗಣಿಸುತ್ತೇನೆ. ಏಕೆಂದರೆ ನಾನು ಕನ್ನಡವನ್ನೂ ರಾಷ್ಟ್ರಭಾಷೆಯೆಂದೇ ಪರಿಗಣಿಸುವವನು.
    ನಾನು ಕನ್ನಡ ನಾಡು ನುಡಿಯನ್ನು ಪ್ರೀತಿಸುತ್ತೇನೆ.
    ಕಾಯ್ಕಿಣಿಯಂಥವರು ಏನು ಹೇಳಿಕೊಂಡು ಬಂದರೂ ನಾನು ನನ್ನ ಅಭಿಪ್ರಾಯವನ್ನು ಬದಲಿಸಲಾರೆ. ನನ್ನ ನಾಡಿನ ಜನತೆಯ ಬಗ್ಗೆಯೂ ನನಗೆ ಅದೇ ನಂಬಿಕೆ ಇದೆ. ಕಾಯ್ಕಿಣಿಯಂಥವರು ಹೇಳಿದ ಕೂಡಲೇ ಹಿಂದೀಯ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಬದಲಿಸಿಕೊಳ್ಳುವ ಮೂರ್ಖರು ನಮ್ಮ ನಾಡಿನ ಜನರಲ್ಲ ಅನ್ನುವ ಭರವಸೆ ನನಗಿದೆ.
    ಈ ಲೇಖನದಲ್ಲಿ ಪರೋಕ್ಷವಾಗಿ ತಮಿಳಿಯನ್ನರ ಗುಣಗಾನ ನಡೆದಿರುವುದು ನನ್ನ ಕಣ್ಣಿಗೆ ಬಿದ್ದಿದೆ. ಕನ್ನಡನಾಡಿನಲ್ಲಿ, ಕನ್ನಡದಲ್ಲೇ, ಕನ್ನಡಿಗರನ್ನೇ ದೂಷಿಸುತ್ತಾ ತಮಿಳಿಯನ್ನರನ್ನು ಹೊಗಳುವ ಇಂಥ ಬರಹಗಳು ಹೊಸದೇನೂ ಅಲ್ಲ, ಬಿಡಿ.
    ನನ್ನ ಕಣ್ಣಿಗೆ ಕಂಡದ್ದು ಅನ್ಯರ ಕಣ್ಣಿಗೆ ಕಂಡಿಲ್ಲ ಅಂದ ಕೂಡಲೇ ಮಹಾಪರಾಧವೇನೂ ಅಲ್ಲ.

    “ಸತ್ತಂತಿಹರನು ಬಡಿದೆಚ್ಚರಿಸು” ಎಂದು ಕುವೆಂಪು ಅವರೇ ಹೇಳಿದ್ದಾರೆ!
    ಕನ್ನಡಿಗರು ಮತ್ತು ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ.
    ಇದಕ್ಕೆ ಪರರ ಧೂಷಿಸಿ ಉಪಯೋಗವಿಲ್ಲ.
    ಉದಾಹರಣೆಗೆ, ಇತ್ತೀಚೆಗೆ ಗೋವಾದಿಂದ ಕೇರಳಕ್ಕೆ ಹೊಸ ರೈಲೊಂದನ್ನು ಬಿಡಲಾಗಿದೆ.
    ಅದಕ್ಕೆ ಕರ್ನಾಟಕದಲ್ಲಿ ಕೇವಲ ಒಂದು ನಿಲುಗಡೆ.
    ಕರ್ನಾಟಕದಲ್ಲಿ ಓಡುವುದರ ಕಾಲು ಭಾಗದಷ್ಟೂ ಓಡದ ಕೇರಳದಲ್ಲಿ ಹತ್ತು ನಿಲುಗಡೆ.
    ನಮ್ಮವರೇ ರೈಲು ಮಂತ್ರಾಲಯದಲ್ಲಿದ್ದಾರೆ. ಹೀಗಿದ್ದರೂ ಕರ್ನಾಟಕಕ್ಕೆ ಏಕೆ ಅನ್ಯಾಯ?
    ಇದನ್ನು ನೋಡಿದಾಗ, ಕೇರಳದವರ “lobby” ನೋಡಿ ಬುದ್ಧಿ ಕಲಿಯಿರಿ ಎನ್ನಬೇಕಾಗುತ್ತೆ.
    ಅದು ಕೇರಳದವರ ಕುರಿತಾದ ಮೆಚ್ಚುಗೆಯ ಮಾತಾಗುವುದಿಲ್ಲ.
    ಬದಲಾಗಿ, ಕರ್ನಾಟಕದವರು ಏನೂ ಮಾಡುತ್ತಿಲ್ಲವಲ್ಲ ಎಂಬ ಮನದಾಳದ ಬೇಗುದಿಯಷ್ಟೇ!

    ನಮ್ಮ ದೇಶದ ಎಲ್ಲ ಭಾಷೆಗಳೂ ರಾಷ್ಟ್ರಭಾಷೆಗಳೇ.
    ಈ ವಿಷಯ ಅನೇಕರಿಗೆ ತಿಳಿದಿಲ್ಲ. ಪರಿಣಾಮವಾಗಿ “ಹಿಂದಿಯೊಂದೇ ರಾಷ್ಟ್ರಭಾಷೆ” ಎನ್ನುವ “ಮೂಢನಂಬಿಕೆ” ಬೆಳೆದಿದೆ.
    ಹಿಂದಿ ಪ್ರಚಾರಕ್ಕೆ ಸಂಬಂಧಿಸಿದ “ರಾಷ್ಟ್ರಭಾಷಾ ವಿಷಾರದಾ” ಇತ್ಯಾದಿ ಪರೀಕ್ಷೆಗಳೂ ಇದಕ್ಕೆ ಪರೋಕ್ಷ ಕಾರಣವಿರಬಹುದು.

    ತಮ್ಮ ಲೇಖನದ ಮೇಲೆತ್ತಿರುವ ಪ್ರಶ್ನೆಗಳಿಗೆ, ಸಮತೋಲನ ಕಳೆದುಕೊಳ್ಳದೆ, ಸಮರ್ಪಕವಾಗಿ ಉತ್ತರಿಸಿರುವ ಕಲ್ಯಾಣ ರಾಮನ್ ಚಂದ್ರಶೇಖರನ್ ಅವರಿಗೆ ಧನ್ಯವಾದಗಳು.
    ಮೂಲ ಲೇಖನದಿಂದ ಮತ್ತು ಅದಕ್ಕೆ ಬಂದಿರುವ ಟೀಕೋತ್ತರಗಳಿಂದ ಅನೇಕ ಹೊಸ ಮಾಹಿತಿಗಳು ತಿಳಿದಂತಾಯಿತು.

    ಈ ರೀತಿಯ ಮಥನ-ಮಂಥನಗಳು ಮತ್ತಷ್ಟು ನಡೆದು, ನನ್ನಂತಹವರಿಗೆ ಹೊಸಹೊಸ ವಿಚಾರಗಳು ತಿಳಿಯುತ್ತಿರಲಿ ಎಂದು ಆಶಿಸುವೆ.

    ಉತ್ತರ
    • ನರೇಂದ್ರ,
      ನಾವು ಎಚ್ಚರಿಸಬೇಕಾದದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ಶಿಕ್ಷಣ ಇಲ್ಲಾಖೆ ಇಲ್ಲಿ ಇರುವವರನ್ನು.
      ನಾವು ಎಚ್ಚರಿಸಬೇಕಾದದ್ದು ಈ ನಾಡಿನ ೩೦ ಕ್ಕೂ ಹೆಚ್ಚು ಲೋಕಸಭಾ ಮತ್ತು ರಾಜ್ಯಸಭಾ ಸದ್ಸಸ್ಯರನ್ನು.
      ಅದರೆ, ಅವರಿಗೆ ಬರೆದ ಪತ್ರಗಳು ಸ್ವೀಕೃತವಾಗಿದೆಯೇ ಇಲ್ಲವೇ ಅನ್ನುವುೂ ಗೊತ್ತಾಗುವುದಿಲ್ಲ.
      ಪ್ರತಿಕ್ರಿಯೆ ನಿರೀಕ್ಷೆಯಂತೂ ಬಹುದೂರ.

      ಉತ್ತರ
      • Narendra Kumar.S.S's avatar
        Narendra Kumar.S.S
        ಜನ 12 2011

        ರಾಜಕಾರಣಿಗಳಿಗೆ ಅರ್ಥವಾಗುವುದು ಒಂದೇ ಭಾಷೆ – ಅದು ಓಟಿನ ಭಾಷೆ.
        ಹೀಗಾಗಿ, ಅವರಿಗೆ ಓಟು ನೀಡುವ ಕನ್ನಡಿಗರು ಎಚ್ಚರಾಗಲೇಬೇಕಲ್ಲವೇ?
        ಕನ್ನಡಿಗರು ಮಲಗಿದ್ದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ಶಿಕ್ಷಣ ಇಲ್ಲಾಖೆ ಮುಂತಾದುವೆಲ್ಲಾ ವ್ಯರ್ಥವೇ.
        ಹುತ್ತದೊಳಗೆ ಹಾವು ಸೇರಿಕೊಂಡಂತೆ, ಅನ್ಯಭಾಷಿಕರೇ ಇಲ್ಲೆಲ್ಲಾ ಸೇರಿಕೊಂಡರೂ ಆಶ್ಚರ್ಯವಿಲ್ಲ!!
        ಬೆಂಗಳೂರಿನಲ್ಲಿ ಕನ್ನಡ ಕಲಿಸುತ್ತಿರುವ ಒಂದು ಸಂಸ್ಥೆಯ ಮಾಲೀಕರು ಮಲೆಯಾಳಿಗಳು.

        ನಮ್ಮ ಲೋಕಸಭಾ ಮತ್ತು ರಾಜ್ಯಸಭಾ ಸದ್ಸಸ್ಯರನ್ನು ನೆಚ್ಚಿಕೊಂಡು ಕುಳಿತರೆ “ಕನ್ನಡ ಎನ್ನಡ?”ವೇ ಗತಿ!

        ಉತ್ತರ
  18. ಸುಂದರ್'s avatar
    ಸುಂದರ್
    ಜನ 12 2011

    “ರಾಮನ್” ಮತ್ತು “ಚಂದ್ರಶೇಖರನ್” ಅನ್ನುವ ಈ ಪದಗಳು ಕನ್ನಡ ಪದಗಳೇ?
    ಹಾಗಿಲ್ಲವಾದರೆ ತಾವು ಮೂಲತಃ ತಮಿಳು ಅಥವಾ ಅನ್ಯ ಭಾಷಿಗರೇ?
    ಹಾಗಾಗಿದ್ದಲ್ಲಿ ತಾವು ಈಗ ಕನ್ನಡವನ್ನು ಬಳಸುತ್ತಿರುವುದೂ ಒಂದು ತೆರನಾದ ಸೋಗಲಾಡಿತನವೇ?
    ——-ಎಂದು ಪ್ರತಿಕ್ರಿಯಿಸಿ ಕಲ್ಯಾಣ ರಾಮನ್ ಚಂದ್ರಶೇಖರನ್ ರವರನ್ನು ಅವಮಾನ ಮಾಡಲೆತ್ನ್ಸಿರುವ ಹಿಂದಿನ ಹುನ್ನಾರ ತಿಳಿಯ ಬಹುದೆ ಕಾಮೆಂಟ್ ಕಾಮಿ ಯವರೆ?
    ಇಂದು ನೀವು ಉಪಯೋಗಿಸುತ್ತಿರುವ ಬರಹ, ಅವರ ಸಹೋದರ ವಾಸು ರವರ ಶ್ರಮದ ಫಲ ಗೊತ್ತೆ ತಮಗೆ?
    ಒಮ್ಮೆ “ಚಂದ್ರಶೇಖರನ್ ಕಲ್ಯಾಣ ರಾಮನ್ ” ಹೆಸರನ್ನು ಗೂಗಲಿಸಿ ನೋಡಿ, ಅವರ ಬರಹ ಗಳ ಬಗೆಗಿನ ಕನ್ನಡ ದ ಕಾಳಜಿ ತಮಗೆ ಅರಿವಾಗುವುದೊ ಏನೊ?
    ಒಮ್ಮೆ ಸಂಪದ ದಲ್ಲಿ ಸಹ ಹುಡುಕಿದರೆ ಕೆಲ ಬರಹಗಳು ದೊರಕಬಹುದೇನೊ?
    ಇಂದಿಗೂ “ನ್” ಅನ್ನು ಕೆಲ ಹಳೆ ಮೈಸೂರಿನ ಭಾಗದ ಬ್ರಾಹ್ಮಣರು ಉಪಯೋಗಿಸುತಿದ್ದು, ಅವರ ಮನೆ ಮಾತು ಕನ್ನಡ ವಾಗಿರುತ್ತದೆ.
    ಕಾಮೆಂಟ್ ಕಾಮಣ್ಣ ನವರೆ, ನಿಮಗೆ ಯಾವಗ್ರಿ ಬುದ್ದಿ ಬರುತ್ತೆ? ಆಗಲೆ “ಸಖೀ, ನಾನೇನ ಬರೆಯಲಿ?” ಅಂಥ ವರಾತ ಶುರು ಮಾಡಿದ್ದೀರಲ್ಲ, ನಿಮಗೆ ಮಾಡೋಕೆ ಏನು ಕೆಲಸ ಇಲ್ವ? ಬೇರೆ ಯವರ ಬ್ಲಾಗ್ ಗಳಲ್ಲಿ ಕೈಯಾಡಿಸುವುದನ್ನು ಮೊದಲು ಬಿಡಿ, ನಂತರ ಎಲ್ಲ ಸರಿಹೋಗುತ್ತೆ. ನಿಮ್ಮ ಮನದ ಅನಿಸಿಕೆ ಯನ್ನು ನಿಮ್ಮ ಮನದಲ್ಲಿಯೆ ತುಂಬಿಸಿಕೊಳ್ಳಿ, ಅ ಗಲೀಜನ್ನು ಅಂತರಜಾಲದಲ್ಲಿ ಹಾಕಬೇಡಿ. ಬೇರೆಯವರ ಬರಹ ಗಳಿಗೆ ಬೆಲೆಕೊಡಿ, ಯಾರಿಗೆ ಇಷ್ಟವಾಗುತ್ತೊ ಅವರು ಓದಿ ಕೊಳ್ತಾರೆ, ಯಾರಿಗೆ ಬೇಡ್ವೊ ಅವರು ಸುಮ್ಮನಿರುತ್ತಾರೆ.
    ನಿಮ್ಮ ಮನಸ್ಥಿತಿ ನಮಗೆ ತಿಳಿದಿದೆ, ಕೇವಲ ತಮ್ಮ ಲೇಖನಗಳನ್ನು ಮೆಚ್ಚುವ ಕೆಲ ಬ್ಲಾಗಿಗರಿಗೆ, ಚೆನ್ನಾಗಿದೆ ಎಂದು ಪ್ರತಿಕ್ರಿಯೆ ಬರೆಯುವ ತಾವುಗಳು, ಚೆಂದದ ಬ್ಲಾಗ್, ಕಥೆ, ಕವನ ಗಳನ್ನು ಬರೆದ ಜನರನ್ನು ಪ್ರೋತ್ಸಾಹಿಸುವುದೆ ಇಲ್ಲ. ಕೇವಲ ತಾವು ಮಾತ್ರ ಬರೆಯಬೇಕು, ತಮಗೆ ಮಾತ್ರ ಪ್ರಶಂಸೆ ಸಿಗಬೇಕು, ತಮ್ಮನ್ನು ಪ್ರೊತ್ಸಾಹಿಸಿದ ಬ್ಲಾಗಿಗರಿಗೆ ಮಾತ್ರ ಪ್ರತಿಕ್ರಿಯಿಸಬೇಕು ಅನ್ನುವ ನಿಮ್ಮ ಮನೋಧರ್ಮ ನಿಮ್ಮ ಅಹಂಕಾರವನ್ನು ಎತ್ತಿ ತೋರಿಸುತ್ತದೆ, ಸಂಪದ ದಲ್ಲಿನ ನಿಮ್ಮ ನೂರಾರು ಪ್ರತಿಕ್ರಿಯೆಗಳು ಅದಕ್ಕೆ ಸಾಕ್ಷಿ. ಕೆಲವರನ್ನು ಅವಮಾನ ಮಾಡುವುದಕ್ಕೋಸ್ಕರ indirect ಆಗಿ ಕವನ ಬರೆದು ಸೇಡು ತೀರಿಸಿಕೊಳ್ಳೊವ ನಿಮ್ಮ ಕೊಳಕು ಮನಸ್ಸಿಗೆ ಏನೆನ್ನ ಬೇಕು? ಒಂದು ಪ್ರತಿಕ್ರಿಯೆ ಬೇರೆಯವರ ಮನದಲ್ಲಿ ಹೇಗೆ ಪ್ರತಿಕಾರದ ಮನೋಭಾವದ ರೂಪ ವನ್ನು ತಾಳುತ್ತದೆ ಎಂದು ನಿಮ್ಮಿಂದಲೆ ಗೊತ್ತಾಗುತ್ತೆ. ಪಾಪದ ಜನರು ಒಂದು ಕೆಟ್ಟ ಪ್ರತಿಕ್ರಿಯೆ ಯನ್ನು ಪಡೆದ ನಂತರ, ಮುಂದಿನ ಬರಹಗಳಿಗೆ ಕೈ ಹಾಕದೆ ಸುಮ್ಮನಾಗುವ ಜನರನ್ನು ನೋಡಿದ್ದೇನೆ. ನೀವು ನಕರಾತ್ಮಕ ವಾಗಿ, ಕೆಟ್ಟದಾಗಿ ಪ್ರತಿಕ್ರಿಯಿಸಿದ ಲೇಖನಗಳ ಲೇಖಕಕರು ಮತ್ತೊಮ್ಮೆ ಎಷ್ಟು ಲೇಖನ ಬರೆದಿದ್ದಾರೆ ಎಂಬುದನ್ನು ಗಮನಿಸಿ. ಕೆಲವರು, ಅವಮಾನಿಸಿಕೊಂಡು ಸುಮ್ಮನೆ ಕೂತಿದ್ದರೆ, ಇನ್ನು ಕೆಲವರು bye ಹೇಳಿದ್ದಾರೆ. ಅಂತವರು, ಸಾರ್ವಜನಿಕ ತಾಣದಲ್ಲಿ ನಿಮ್ಮ ಲೇಖನ ನೋಡಿದ ಕೂಡಲೆ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾರೆ.

    ಉತ್ತರ
    • ತಾವು ನನ್ನ ಬಗ್ಗೆ ಬಹಳಷ್ಟು ತಿಳಿದಿರುವಂತಿದೆ.
      ಸಂತಸವಾಯಿತು.
      ಈ ಅಧ್ಯಯನಾಬರಹಕ್ಕೆ ಯಾವುದಾದರೂ ವಿವಿ ಇಂದ “ಪಿಎಚ್‍ಡಿ” ಸಿಗಬಹುದೇನೋ.
      ತಾವು ನನ್ನ ಬದಲಾಗಿ ದೇವರ ಬಗ್ಗೆ ಅಧ್ಯಯನ ನಡೆಸಿದರೆ ಒಳ್ಳೆಯದು. ಮುಕ್ತಿ ದೊರೆಯಬಹುದು.

      ::: ನಿಮ್ಮ ಮನಸ್ಥಿತಿ ನಮಗೆ ತಿಳಿದಿದೆ, ಕೇವಲ ತಮ್ಮ ಲೇಖನಗಳನ್ನು ಮೆಚ್ಚುವ ಕೆಲ ಬ್ಲಾಗಿಗರಿಗೆ, ಚೆನ್ನಾಗಿದೆ ಎಂದು ಪ್ರತಿಕ್ರಿಯೆ ಬರೆಯುವ ತಾವುಗಳು, ಚೆಂದದ ಬ್ಲಾಗ್, ಕಥೆ, ಕವನ ಗಳನ್ನು ಬರೆದ ಜನರನ್ನು ಪ್ರೋತ್ಸಾಹಿಸುವುದೆ ಇಲ್ಲ:::

      ನಾನು ಏನು ಮಾಡಬೇಕು ಎನ್ನುವುದನ್ನು ತಮ್ಮಿಂ ಕಲಿಯುತ್ತಿದೇನೆ ಈಗೀಗ.

      ತಮ್ಮಿಂದ ಇಷ್ಟೊಂದು ತೆಗಳಿಸಿಕೋಳ್ಳುತ್ತಿರುವ, ನನ್ನಿಂದಲೂ ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕಾದು ಕೂತಿದ್ದಾರೆ ಜನ ಅಂತ ತಮ್ಮಿಂದ ತಿಳಿದು ಸಂತೋಷವಾಯ್ತು.

      :::ನೀವು ನಕರಾತ್ಮಕ ವಾಗಿ, ಕೆಟ್ಟದಾಗಿ ಪ್ರತಿಕ್ರಿಯಿಸಿದ ಲೇಖನಗಳ ಲೇಖಕಕರು ಮತ್ತೊಮ್ಮೆ ಎಷ್ಟು ಲೇಖನ ಬರೆದಿದ್ದಾರೆ ಎಂಬುದನ್ನು ಗಮನಿಸಿ. ಕೆಲವರು, ಅವಮಾನಿಸಿಕೊಂಡು ಸುಮ್ಮನೆ ಕೂತಿದ್ದರೆ, ಇನ್ನು ಕೆಲವರು bye ಹೇಳಿದ್ದಾರೆ.:::

      ಅದರಲ್ಲಿ ನನ್ನದೇನು ತಪ್ಪು?
      ಹೊಗಳಿಕೆಯ ಪ್ರತಿಕ್ರಿಯೇಯೇ ಬೇಕೆಂಬ ನಿರೀಕ್ಷೆ ಇರಬಾರದೆಂದು ತಾವೇ ಹೇಳುತ್ತಿದ್ದೀರಲ್ಲಾ?

      :::ಅಂತವರು, ಸಾರ್ವಜನಿಕ ತಾಣದಲ್ಲಿ ನಿಮ್ಮ ಲೇಖನ ನೋಡಿದ ಕೂಡಲೆ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾರೆ.:::

      ನೋಡಿ ಕೆಟ್ಟದಾಗಿ ಪ್ರತಿಕ್ರಿಯಿಸಿದವರ ಲೆಕ್ಕ ನೀವು ಇಟ್ಟಿದ್ದೀರಿ.
      ಆದರೆ, ಲೇಖನ ಓದಿ ಒಳ್ಳೆಯ ಪ್ರತಿಕ್ರಿಯೆ ನೀಡಿದವರೂ ಇದ್ದಾರೆ. ಅವರ ಲೆಕ್ಕ ನಾನಿಡುತ್ತೇನೆ.

      ಒಂದು ಮಾತ್ರಾ ಖುಷಿ ನೀಡುವ ಸಂಗತಿ ಎಂದರೆ, ತಾವು ಸತತವಾಗಿ ನನ್ನನ್ನು ಹಿಂಬಾಲಿಸುತ್ತಾ ಇದ್ದೀರಿ. ನನಗೆ ಪುಕ್ಕಟೆ ಪ್ರಚಾರವನ್ನೂ ನೀಡುತ್ತಿದ್ದೀರಿ. ಅದಕ್ಕಾಗಿ ನಾನು ಋಣಿಯಾಗಿದ್ದೇನೆ.

      ಉತ್ತರ
  19. ಸುಂದರ್'s avatar
    ಸುಂದರ್
    ಜನ 12 2011

    ನಿಮ್ಮಲ್ಲಿ ಬೇರೆಯವರ ಸೂಕ್ಷ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಗುಣ ವಿದ್ದಿದ್ದರೆ ಬೇರೆಯವರ ವಿಷಯಕ್ಕೆ ಮೂಗು ತೂರಿಸಲು ಹೋಗುತ್ತಿರಲಿಲ್ಲ. ಆದರೆ ನಿಮ್ಮಲ್ಲಿ ಅಹಂಕಾರ ನೆಲೆ ಮಾಡಿರುವುದರಿಂದ, ನಾನು ಹೇಳಿದ್ದೆ ನಾನು ಮಾಡಿದ್ದೆ ಸರಿ ಅನ್ನುವ ಮನೋಭಾವ ಬೇರೆಯವರ ಭಾವನೆಗಳಿಗೆ ಬೆಲೆ ಎಲ್ಲಿ ಕೊಡುತ್ತೆ, ಕೇವಲ ಘಾಸಿ ಮಾಡುವ ಹವ್ಯಾಸ ವನ್ನು ಮಾತ್ರ ಹೊಂದಿರುವ ತಮ್ಮಿಂದ ಬೇರೆನನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

    ಉತ್ತರ
    • ಬರಹಕ್ಕೆ ಪ್ರತಿಕ್ರಿಯೆ ಬರೆಯುವುದು ಮೂಗು ತೂರಿಸುವುದು ಎಂದಾಗುವುದೇ?
      ಇದು ಹೊಸ ವಿಷಯ ನನ್ನ ಪಾಲಿಗೆ.
      ನಾನು ಯಾರದ್ದೇ ವೈಯಕ್ತಿಕ ಬ್ಲಾಗಿನಲ್ಲಿ ಕೆಟ್ಟ ಪ್ರತಿಕ್ರಿಯೆ ನೀಡಿದ್ದನ್ನು ದಯವಿಟ್ಟು ತಾವು ನನಗೆ ನೆನಪಿಸುವಿರಾ?
      ವೈಯಕ್ತಿಕವಲ್ಲದ ಸಾರ್ವಜನಿಕ ವೇದಿಕೆಗಳಲ್ಲಿ ಎಲ್ಲಾ ತೆರನಾದ ಪ್ರತಿಕ್ರಿಯೆಗಳೂ ಬರುತ್ತವೆ. ಅಲ್ಲಿ ನನ್ನೊಬ್ಬನನ್ನೇ ಹಿಂಬಾಲಿಸದೇ, ಎಲ್ಲರ ಬಗ್ಗೆಯೂ, ಅಲ್ಲದೇ ಎಲ್ಲರ ಮೂಲ ಬರಹಗಳ ಬಗ್ಗೆಯೂ , ತಮ್ಮ ಪ್ರತಿಕ್ರಿಯೆಗಳಿದ್ದರೆ, ತಮ್ಮ ಪೂರ್ವಗ್ರಹಪೀಡಿತವಲ್ಲದ, ಪಕ್ಷಪಾತವಿಲ್ಲದ ಧೋರಣೆಯ ಪರಿಚಯ ಎಲ್ಲರಿಗೂ ಆದೀತು. ಆದರೆ, ನೀವು ಬರೀ ನನ್ನನ್ನಷ್ಟೇ ಹಿಂಬಾಲಿಸಿ ನನಗೆ ಪುಕ್ಕಟೆ ಪ್ರಚಾರ ನೀಡುತ್ತಿದ್ದೀರಿ.

      ನನ್ನಲ್ಲಿ ಅಹಂಕಾರ ನೆಲೆಮಾಡಿರುವುದನ್ನು ಅರಿತಿರುವ ತಾವು, ಈ ಅಹಂಕಾರಿಯನ್ನೇ ಹಿಂಬಾಲಿಸುತ್ತಿರುವುದೇಕೆ?
      ನನ್ನಿಂದ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಗೊತ್ತಿರುವ ತಾವೂ ನನ್ನನ್ನು ಸದಾ ಹಿಂಬಾಲಿಸುತ್ತಿರುವುದು, ನಾನು ಬರೆವ ಬರಹ, ಪ್ರತಿಕ್ರಿಯೆಗಳನ್ನೆಲ್ಲಾ, ಚಾಚೂತಪ್ಪದೇ ಓದುತ್ತಿರುವುದು, ನನಗೆ ನಿಜಕ್ಕೂ ಸಂತಸ ನೀಡಿದೆ.

      ನನ್ನಿಂದ ಘಾಸಿಮಾಡಿಕೊಂಡವರು ಯಾರು? ಅವರೆಲ್ಲಾ ತಮಗೆ ಗುತ್ತಿಗೆ ನೀಡಿದ್ದಾರೋ ಹೇಗೆ?
      ತಾವು ಇಷ್ಟು ಕೆಟ್ಟ ರೀತಿಯಲ್ಲಿ ಪ್ರತಿಕ್ರಿಯಿಸಿದರೂ, ನಾನು ತಮ್ಮನ್ನು ಘಾಸಿಗೊಳಿಸುವ ಮಾತನ್ನು ಇಲ್ಲಿ ಬರೆದಿಲ್ಲ, ನೋಡಿದಿರಾ?

      ಸುಮ್ಮ ಸುಮ್ಮನೇ ಘಾಸಿಮಾಡಿಕೊಂಡವರ ಬಗ್ಗೆ ನಾನೇನು ಹೇಳಲಾಗದು.
      ಘಾಸಿಗೊಂಡವರು ಘಾಸಿ ಆಗಿದೆ ಅಂತ ಹೇಳಲಿ. ಅವರ ಸುದ್ದಿಗೆ ಹೋಗಲಾರೆ.

      ಉತ್ತರ
      • ಸುಂದರ್'s avatar
        ಸುಂದರ್
        ಜನ 12 2011

        ಸಂಪದ ದಲ್ಲಿ ಯಾರ್ಯಾರಿಗೆ ತಾವು ಕಾಮೆಂಟ್ ಮಾಡಿದ್ದೀರೊ ಅದನ್ನು ಹುಡುಕಿ ಅಲ್ಲೇ ಲಿಸ್ಟ್ ಸಿಗುತ್ತೆ. ಯಾರ್ಯಾರು ಘಾಸಿ ಗೊಂಡಿದ್ದಾರೊ ಅಂತ ಗೊತ್ತಾಗುತ್ತೆ. ನಿಮಗೆ ಕಛೇರಿಯಲ್ಲಿ ಬಿಟ್ಟಿ ಸಂಭಳ ಕೊಡುತ್ತಾರೆ ಅದಕ್ಕೆ ಬೆಳಿಗ್ಗೆ ಯಿಂದ ಸಾಯಂಕಾಲದ ವರೆಗೆ ಕಾಮೆಂಟ್ ಮಾಡುವುದರಲ್ಲೆ ಕಾಲ ಕಳೆಯುತ್ತೀರ. ಅದಕ್ಕೇನು ೧ ಪುಟ ವೇನು ೨ ಪುಟ ಬೇಕಾದರು ಬರೀತಾ ಯಿರ್ತೀರ. ನಿಮಗೆ ಕೆಲಸ ಇಲ್ಲಂತ ನಾನು ನಿಮ್ಮ ಹಾಗೆ ಎಲ್ಲವನ್ನು ವಿವರಿಸಿ ಕೂತ್ಕೊಂಡು ಬರೀತಾ ಇರ್ಲ, ಹುಷಾರಿಲ್ಲದ ಕಾರಣ ರಜೆ ಯ ಮೇಲಿದ್ದ ನಾನು ಇಂದು ಅಪರೂಪಕ್ಕೆ ನಿಮ್ಮ ಜತೆ ಪ್ರತಿಕ್ರ್ಯಿಸಿಸುತಿದ್ದೀನಿ.

        ಉತ್ತರ

Trackbacks & Pingbacks

  1. ಹಿಂದಿ ಬೇಕು …. ಕೂಪಮಂಡೂಕತನ ಬೇಡ…….. « ನಿಲುಮೆ

Leave a reply to ಶ್ರೀನಿವಾಸ್ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments