ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 10, 2013

16

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧

‍ನಿಲುಮೆ ಮೂಲಕ

– ಮು.ಅ ಶ್ರೀರಂಗ, ಬೆಂಗಳೂರು

S L Byrappaಎಸ್. ಎಲ್. ಭೈರಪ್ಪನವರ” ಧರ್ಮಶ್ರೀ”ಯಿಂದ  “ಅನ್ವೇಷಣ”ದವರೆಗಿನ ಹನ್ನೆರೆಡು ಕಾದಂಬರಿಗಳನ್ನು ಕುರಿತಂತೆ ಒಟ್ಟು ಅರವತ್ತಾರು ವಿಮರ್ಶೆಗಳಿರುವ “ಸಹಸ್ಪಂದನ” ಎಂಬ ವಿಮರ್ಶಾ ಗ್ರಂಥ ೧೯೭೮ರಲ್ಲಿ ಪ್ರಕಟವಾಯ್ತು. (ಪ್ರಕಾಶಕರು :ಸಾಹಿತ್ಯ ಭಂಡಾರ ಬೆಂಗಳೂರು —೫೩) ಅದರ ಪ್ರಕಾಶಕರು ಹೇಳಿರುವ ಮಾತುಗಳಿಂದ ಈ ನನ್ನ ಮುನ್ನುಡಿಯನ್ನು ಪ್ರಾರಂಭಿಸುವುದು ಉತ್ತಮ.”ಇದು (ಸಹಸ್ಪಂದನ) ಭೈರಪ್ಪನವರ ಮೇಲಿನ ಕೇವಲ ಅಭಿಮಾನದಿಂದ ತಂದಿರುವ ಗ್ರಂಥವಲ್ಲ. ಮೆಚ್ಚಿಗೆ,ಹೊಗಳಿಕೆಗಳ ಬರವಣಿಗೆಯಿಂದ ಯಾವ ಲೇಖಕನ ಕೃತಿಗಳೂ ಬದುಕಲಾರವು. ಇಲ್ಲಿ ಬಂದಿರುವ ಲೇಖನಗಳು ಒಂದೇ ಬಗೆಯ ದೃಷ್ಟಿಕೋನದವೂ ಅಲ್ಲ. ಮೆಚ್ಚುಗೆ, ವಿರೋಧ,ಟೀಕೆ,ಘಾಟು, ಹೀಗೆ ……….. ”

ಈ ಮುಖಾಮುಖಿಯನ್ನು ಆ ಒಂದು ಎಚ್ಚರ,ಜವಾಬ್ದಾರಿಗಳ ಹಿನ್ನೆಲೆಯಲ್ಲಿ ನಡೆಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.

ನಮ್ಮ ಅಕಾಡೆಮಿಕ್ ವಲಯದ ವಿಮರ್ಶಕರುಗಳು ಜತೆಗೆ ನಾನ್ ಅಕಾಡೆಮಿಕ್ ವಿಮರ್ಶಕರುಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಹೊಸ ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಗೊಂದು ಮಹತ್ವವಿದೆ. ಕಾಲಾನುಕಾಲಕ್ಕೆ ಅದು ಓದುಗರ ವಿವೇಕವನ್ನು ಎಚ್ಚರಿಸುತ್ತಾ, ಸಾಹಿತಿಗಳನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಭಾವಿಸುತ್ತಲಿದೆ. ಇಷ್ಟಲ್ಲದೆ ಸಾಹಿತಿಗಳು ಹೊಸಹೊಸ ತಂತ್ರಗಳತ್ತ, ವಿಷಯಗಳತ್ತ ಯೋಚಿಸುವಂತೆ ಹೊರಳುವಂತೆ ಮಾಡಿವೆ. ಭಾಷೆಯನ್ನು ಪರಿಣಾಮಕಾರಿಯಾಗಿ ಯಾವ ರೀತಿ ಉಪಯೋಗಿಸಬೇಕೆನ್ನುವ ಮಾರ್ಗದರ್ಶನ ಕೂಡ ವಿಮರ್ಶೆಯಿಂದ ನಡೆಯುತ್ತಿರುತ್ತದೆ.
ಇಷ್ಟೆಲ್ಲಾ ಧನಾತ್ಮಕ ಅಂಶಗಳ ಜತೆಗೆ ನಮ್ಮ ವಿಮರ್ಶೆಯನ್ನು ಆಗಾಗ ಕಾಡುತ್ತಿರುವ “ವೈರಸ್”ಗಳ ಬಗ್ಗೆಯೂ ಪ್ರಸ್ತಾಪಿಸುವುದು ಅಗತ್ಯ. ಪೂರ್ವಗ್ರಹ,ವಿಪರ್ಯಾಸ,ತಾವು ಕಂಡಿದ್ದಷ್ಟೇ ಸತ್ಯ ಎಂಬ ರೀತಿಯ ವಿಮರ್ಶೆಗಳು ಒಂದೆಡೆಯಾದರೆ ಪ್ರತಿಗಾಮಿ ಪುರೋಹಿತಶಾಹಿ ಸನಾತನ ಧರ್ಮದ ಪುನರುತ್ಥಾನದ ಹಿಡನ್ ಅಜೆಂಡಾ ಕೋಮುವಾದಿ ಇತ್ಯಾದಿ ಪಂಕ್ತಿ ಬೇಧಗಳು ಮತ್ತೊಂದೆಡೆ. ಭೈರಪ್ಪನವರ ಕಾದಂಬರಿಗಳು ಈ ಎಲ್ಲಾ ಅಗ್ನಿ ಪರೀಕ್ಷೆಗಳಿಗೆ ಒಳಗಾಗಿವೆ. ಜತೆಗೆ ಆ ಅಗ್ನಿಪರೀಕ್ಷೆಯಿಂದ ಬಳಲದೆ ಬಾಡದೆ ಜನಪ್ರಿಯವಾಗಿರುವುದು ವಿಮರ್ಶಕರ ವಲಯಕ್ಕೆ ಬಿಡಿಸಲಾಗದ ಒಗಟಾಗಿದೆ.

ಸಹಸ್ಪಂದನದಲ್ಲಿ ಶ್ರೀ ಗೌರೀಶ ಕಾಯ್ಕಿಣಿಯವರು ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿರುವ ಒಂದು ಘಟನೆ:-

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ನಡೆದ ಸಾಹಿತ್ಯ ವಿಷಯ ಗೋಷ್ಟಿಯೊಂದರಲ್ಲಿ ಕಾಯ್ಕಿಣಿಯವರು ಅವರ ಪಕ್ಕದಲ್ಲೇ ಇದ್ದ ತಮ್ಮ ಮಿತ್ರರಾದ ನವ್ಯ ವಿಮರ್ಶಕರಿಗೆ ‘ಅಲ್ರೀ ಇಷ್ಟೆಲ್ಲಾ ಕಥೆ ಕಾದಂಬರಿಕಾರರ ಉಲ್ಲೇಖ ಚರ್ಚೆ ನಡೆದಿದೆ. ಭೈರಪ್ಪನವರ ವಿಷಯವೇಕೆ ಯಾರೂ ಎತ್ತುವುದಿಲ್ಲ?’
ನವ್ಯ ವಿಮರ್ಶಕರು: “ಭೈರಪ್ಪರೇನ್ರಿ? ಒಳ್ಳೆ ಕಥೆ ಬರೀತಾರೆ”

ಗೌರೀಶಕಾಯ್ಕಿಣಿ (ಸ್ವಗತ)–ಅಂದರೆ?ಒಳ್ಳೆ ಕಥೆ ಬರೆಯುವುದೆಂದರೆ ಅದೊಂದು ಅಪರಾಧ!………. (ಪುಟ ೧)

ಇದುವರೆಗಿನ ಭೈರಪ್ಪನವರ ಎಲ್ಲಾ ಕಾದಂಬರಿಗಳ ಬಗ್ಗೆ ಬರೆಯುವುದು ನನ್ನ ಉದ್ದೇಶವಲ್ಲ. ಅದರ ಅಗತ್ಯವೂ ಇಲ್ಲ. ಈ ಲೇಖನಮಾಲೆಗೆ ನಾನು ಒಂದು ಮಿತಿಯನ್ನು ಹಾಕಿಕೊಂಡಿದ್ದೇನೆ. ಸ್ಥೂಲವಾಗಿ ಅದರ ರೂಪರೇಷೆಗಳು ಹೀಗಿವೆ.

೧. ಎಸ್ ಎಲ್ ಭೈರಪ್ಪ ಅವರ ವಂಶವೃಕ್ಷ ಮತ್ತು ದಾಟು  ಹಾಗು  ಯು ಆರ್ ಅನಂತಮೂರ್ತಿಯವರ ಸಂಸ್ಕಾರ ಮತ್ತು ಭಾರತೀಪುರ ಕಾದಂಬರಿಗಳ ಕೆಲವು ಸಮಾನ ಅಂಶಗಳ ಬಗ್ಗೆ ತೌಲನಿಕ ವಿಮರ್ಶೆಗಳು ಈಗಾಗಲೇ ನಡೆದಿದೆ. ವಂಶವೃಕ್ಷ ಮತ್ತು ಸಂಸ್ಕಾರದ ಬೇರುಗಳು ನಾವು ಯಾವುದನ್ನು ಸನಾತನ ಧರ್ಮ ಮತ್ತು ಸಂಸ್ಕೃತಿ ಎಂದು ಕರೆಯುತ್ತಾ ಬಂದಿದ್ದೇವೆಯೋ ಅದರಲ್ಲಿರುವುದು ಒಂದು ಕಾರಣವಿರಬಹುದು. ಆ ಬೇರುಗಳು ಎಷ್ಟು ಆಳಕ್ಕೆ ಇಳಿದಿವೆ? ಅದರ ಪ್ರಸ್ತುತತೆ ಅಪ್ರಸ್ತುತತೆ ಇತ್ಯಾದಿಗಳು ಆ ತೌಲನಿಕ ವಿಮರ್ಶೆಯ ಹಿಂದಿರುವ ಉದ್ದೇಶವಿದ್ದಂತೆ ತೋರುತ್ತದೆ. ಜತೆಗೆ ವಂಶವೃಕ್ಷದ ಶ್ರೀನಿವಾಸ ಶ್ರೋತ್ರಿ ಮತ್ತು ಸಂಸ್ಕಾರದ ಪ್ರಾಣೇಶಾಚಾರ್ಯರ  ನಡುವೆ ಹೋಲಿಕೆ ಇತ್ಯಾದಿಗಳು ನಡೆದಿವೆ. ಅದೇ ರೀತಿ ಜಾತಿ ಸಮಸ್ಯೆಯನ್ನು ಆಧಾರವಾಗಿಟ್ಟುಕೊಂಡಿರುವ ದಾಟು ಮತ್ತು ಭಾರತೀಪುರ ಕಾದಂಬರಿಗಳ ಬಗ್ಗೆ ಈಗಾಗಲೇ ನಡೆದಿರುವ  ಚರ್ಚೆಗಳನ್ನು ಕುರಿತಂತೆ ಮರುಪರಿಶೀಲನೆ  ನಡೆಸುವುದು.

೨. ವಂಶವೃಕ್ಷ ಮತ್ತು ದಾಟು ಕಾದಂಬರಿಗಳ ನಂತರ ಅತಿ ಹೆಚ್ಚು ವಿವಾದಗಳನ್ನೆಬ್ಬಿಸಿದ “ಆವರಣ” ಮತ್ತು “ಕವಲು” ಕಾದಂಬರಿಗಳ ಬಗ್ಗೆ ಬಂದಂತಹ ವಿಮರ್ಶೆಗಳು ಆ ವಿಮರ್ಶೆಗಳಲ್ಲಿನ ವಿಪರ್ಯಾಸಗಳ ಬಗ್ಗೆ ಒಂದು ವಿವರವಾದ ಹಿನ್ನೋಟ.

೩. ಭೈರಪ್ಪನವರ ಹಿಂದಿನ ಕಾದಂಬರಿಗಳ ಬಗೆಗಿನ ಪೂರ್ವಗ್ರಹ ಮತ್ತು ನಂತರದಲ್ಲಿ ಆವರಣ ಮತ್ತು ಕವಲುಗಳ ಅತಿ ವಿವಾದಗಳಿಂದ ಕೆಲವು ಕಾದಂಬರಿಗಳ ಬಗ್ಗೆ (ಉದಾಹರಣೆಗಾಗಿ:- ನೆಲೆ ಸಾಕ್ಷಿ ಅಂಚು ತಂತು)ಅವು ಪ್ರಕಟವಾದಾಗ ಯಾವುದಾದರೊಂದು ಪತ್ರಿಕೆಯಲ್ಲಿ ಬಂದಿರಬಹುದಾದ ವಿಮರ್ಶೆಗಳನ್ನು ಬಿಟ್ಟರೆ ಹೆಚ್ಚಿನ ಚರ್ಚೆ ನಡೆದಿಲ್ಲ. ಮರೆತುಹೋದ ಹಾಗೆ ಆಗಿರುವ ಆ  ಕಾದಂಬರಿಗಳ ಬಗ್ಗೆ  ಒಂದು ಪೂರ್ವಾವಲೋಕನ.

ಮೇಲಿನ ಮೂರೂ ವಿಷಯಗಳನ್ನು   ಕುರಿತಂತೆ ಒಂದೇ ಉಸಿರಿನಲ್ಲಿ ಬರೆಯುವುದು ಸಾಧ್ಯವಲ್ಲ. ಸಾಧುವೂ  ಅಲ್ಲ . ಆ ರೀತಿಯ ಬರವಣಿಗೆ ಜಾಳು ಜಾಳಾಗಿ ಹೋಗುತ್ತದೆ. ಹೀಗಾಗಿ ನಾಲ್ಕು ಭಾಗಗಳಲ್ಲಿ ಬರೆಯುವುದು ಸರಿಯಾದ ಮಾರ್ಗ. ತಿಂಗಳಿಗೊಂದು ಭಾಗದಂತೆ ಬರೆಯುವುದರಿಂದ ಓದುಗರ ಪ್ರತಿಕ್ರಿಯೆಗೂ ಸಾಕಷ್ಟು ಕಾಲಾವಕಾಶವಿರುತ್ತದೆ. ಮುಂದಿನ ಭಾಗಗಳ ಶೀರ್ಷಿಕೆಗಳು ಮುಖಾಮುಖಿ ೨, ೩ ಮತ್ತು ೪ ಎಂದಷ್ಟೇ ಇರುತ್ತದೆ. ಪ್ರತಿ ಲೇಖನದ ಪ್ರಾರಂಭಕ್ಕೆ ಮುನ್ನ ಅದನ್ನು ಕುರಿತಂತೆ ಒಂದು ಉಪ ಶೀರ್ಷಿಕೆಯಿರುತ್ತದೆ.  ಭೈರಪ್ಪನವರ ಇದುವರೆಗಿನ ಎಲ್ಲಾ ಕಾದಂಬರಿಗಳು ಮತ್ತು ಕಾದಂಬರಿಯೇತರ ಪುಸ್ತಕಗಳ ಪ್ರಕಾಶಕರು ಸಾಹಿತ್ಯ ಭಂಡಾರ ಬೆಂಗಳೂರು– ೫೩ . ಆದುದರಿಂದ ಪ್ರತಿಬಾರಿ ಅದನ್ನು ಲೇಖನದಲ್ಲಿ ಬರೆಯುವುದು ಅಗತ್ಯವಿಲ್ಲ ಎಂದು ಭಾವಿಸಿದ್ದೇನೆ.

ಮತ್ತೆ ಮುಂದಿನ ತಿಂಗಳ ಕೊನೆಯ ವಾರದಲ್ಲಿ ಈ  ಮುಖಾಮುಖಿ ಮುಂದುವರಿಯುತ್ತದೆ.

ಚಿತ್ರ ಕೃಪೆ : http://folks.co.in

16 ಟಿಪ್ಪಣಿಗಳು Post a comment
  1. Nagshetty Shetkar
    ಆಕ್ಟೋ 10 2013

    ಹೂರಣವಿಲ್ಲದ ಹೋಳಿಗೆ!!

    ಉತ್ತರ
    • M.A.Sriranga
      ಆಕ್ಟೋ 10 2013

      Mr Shetkar please wait. This is just a introduction. You may get holige in the following MUKHAMUKHI’s

      ಉತ್ತರ
      • Nagshetty Shetkar
        ಆಕ್ಟೋ 11 2013

        Mr. Sriranga, no problem, I will wait. You have promised a lot. Let’s see if you will deliver anything.

        ಉತ್ತರ
    • ನವೀನ
      ಆಕ್ಟೋ 10 2013

      ಮನಸ್ಸಿನಲ್ಲಿ ‘ಕಹಿ’ ತುಂಬಿಕೊಂಡವರಿಗೆ ‘ಸಿಹಿ’ ಕಾಣುವುದೆಂತು?

      ಉತ್ತರ
    • ಶೈಲೇಶ್
      ಆಕ್ಟೋ 11 2013

      ಇದು ಹೋಳಿಗೆ ಬದಸೋ ಮೊದಲು ರುಚಿಗಿ ಹಾಕಿದ ತುಪ್ಪ .. ಹೋಳಿಗಿ ಅವರ ಮುಂದಿನ ಕಂತಿನಾಗ ಬಡಿಸ್ತಾರ ಸ್ವಲ್ಪ ತಾಳ್ಮೆ ತಂದ್ಕೊಬೇಕು . ಅಂಧಂಗ ಊಟಕ ಮೊದಲು ಉಪ್ಪಿನಕಾಯಿ ಅಂತ ಬರೀ ಉಪ್ಪಿನಕಾಯಿ ತಿಂದು ಕೈ ಬಾಯಿ ಉರಿಸ್ಕೊಬ್ಯಾಡ್ರಿ.

      ಉತ್ತರ

Trackbacks & Pingbacks

  1. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨ | ನಿಲುಮೆ
  2. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩ | ನಿಲುಮೆ
  3. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊದಿಗೆ ಮುಖಾಮುಖಿ – ೪ | ನಿಲುಮೆ
  4. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫ | ನಿಲುಮೆ
  5. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬ | ನಿಲುಮೆ
  6. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭ | ನಿಲುಮೆ
  7. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮ | ನಿಲುಮೆ
  8. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯ | ನಿಲುಮೆ
  9. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦ | ನಿಲುಮೆ
  10. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮ – ನಿಲುಮೆ
  11. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪ – ನಿಲುಮೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments