ಹಿಂದಿ ಜ್ವರಕ್ಕೆ ತುತ್ತಾದ ವಿಜಯ ಕರ್ನಾಟಕ
ಪ್ರಿಯಾಂಕ್ ಬೆಂಗಳೂರು
೧೭ನೇ ಜನವರಿ ೨೦೧೧ ವಿಜಯ ಕರ್ನಾಟಕದಲ್ಲಿ “ವಿದೇಶೀಯರ ಹಿಂದಿ ಮೋಹ” ಎಂಬ ಹೆಸರಿನಡಿ ಒಂದು ಅಂಕಣ ಮೂಡಿ ಬಂದಿದೆ. ವಿದೇಶೀಯರು ಹಿಂದಿ ಕಲಿಯಲು ಆಸಕ್ತಿ ತೋರುತ್ತಿರುವುದು, ಕೇಂದ್ರ ಸರಕಾರವು ಜನವರಿ ಹತ್ತರಂದು ಹಿಂದಿ ದಿವಸ್ ಆಚರಿಸುವುದು, ಇತ್ಯಾದಿ ವಿಷಯಗಳನ್ನು ಮುಂದಿಟ್ಟು, ಕನ್ನಡಿಗರಲ್ಲಿ ಹಿಂದಿ ಕಲಿಕೆ ಬಗ್ಗೆ ಒಲವು ಮೂಡಿಸುವ ಒಂದು ಪ್ರಯತ್ನದಂತೆ ಈ ಅಂಕಣ ಕಾಣುತ್ತದೆ. ಹಿಂದಿಗೆ ಎಲ್ಲಿಲ್ಲದ ಬೇಡಿಕೆಯಿದೆ ಎಂದು ಹೇಳುವ ಅವಸರದಲ್ಲಿ, ವ್ಯವಸ್ಥಿತ ಹಿಂದಿ ಹೇರಿಕೆಯಿಂದ ಕನ್ನಡಕ್ಕಾಗುತ್ತಿರೋ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಕೆಲಸವನ್ನು ವಿಜಯ ಕರ್ನಾಟಕ ಮರೆತಂತಿದೆ. ಈ ಅಂಕಣ ಓದಿದ ಕನ್ನಡಿಗರಲ್ಲಿ “ವಿಜಯ ಕರ್ನಾಟಕ ಹಿಂದಿ ಹೇರಿಕೆಯ ಪರ ಇದೆಯೇ?” ಎಂಬ ಪ್ರಶ್ನೆ ಹುಟ್ಟಿರುವುದಂತೂ ಹೌದು.
ಅಂಕಣದಲ್ಲಿ ಹೇಳಲಾಗಿರುವ ಕೆಲವು ವಿಷಯಗಳಲ್ಲಿ ಎರಡನ್ನು ಇಲ್ಲಿ ಹೆಸರಿಸಿ, ಆ ವಿಷಯಗಳು ಕನ್ನಡಕ್ಕೆ ಹೇಗೆ ಕುತ್ತು ಎಂಬುದನ್ನು ವಿವರಿಸಲಾಗಿದೆ.
೧. “ಹಿಂದಿ ಭಾಷೆಯನ್ನು ಕಲಿಯುವುದರಿಂದ, ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಹೆಚ್ಚಿನ ಜ್ನ್ಯಾನ ಪಡೆಯಬಹುದು”.
ಹೇಗೆ ಹಿಂದಿ ಭಾಷೆಯನ್ನು ಕಲಿಯುವುದರಿಂದ, ಹಿಂದಿ ಭಾಷಿಕರ ಸಂಸ್ಕೃತಿ ಬಗ್ಗೆ ಹೆಚ್ಚಿನ ಜ್ನ್ಯಾನ ಪಡೆಯಬಹುದೋ, ಅದೇ ರೀತಿ ಕನ್ನಡಿಗರ, ತುಳುವರ, ತಮಿಳರ, ಮರಾಟಿಗಳ, ಬೆಂಗಾಲಿಗಳ, ತೆಲುಗು ಭಾಷಿಕರ ಸಂಸ್ಕೃತಿ ಬಗ್ಗೆ ಹೆಚ್ಚಿನ ಜ್ನ್ಯಾನ ಪಡೆಯಲು ಆಯಾ ಭಾಷೆಗಳನ್ನು ಅರಿಯುವುದೇ ಸೂಕ್ತ. ಭಾರತೀಯ ಸಂಸ್ಕೃತಿಯು, ಎಲ್ಲಾ ಭಾಷಿಕ ಸಂಸ್ಕೃತಿಗಳ ಒಟ್ಟು ಆಗಿದೆ. “ಹಿಂದಿ = ಭಾರತೀಯ ಸಂಸ್ಕೃತಿ” ಎಂಬುದನ್ನು ಜನರ ಮನಸ್ಸಿನಲ್ಲಿ ಬಿತ್ತಿ, ನಂತರ “ಭಾರತೀಯರಾಗಲು ಹಿಂದಿ ಕಲಿಯಿರಿ” ಎನ್ನುವುದು ಹಿಂದಿ ಹೇರಿಕೆಗೆ ಬಳಸಲಾಗುತ್ತಿರುವ ಒಂದು ಅಸ್ತ್ರವಾಗಿದೆ. ವಿಜಯ ಕರ್ನಾಟಕವೂ ಅದನ್ನೇ ಹೇಳಿರುವುದು ನಿಜಕ್ಕೂ ಹುಬ್ಬೇರಿಸಿದೆ.
ಕರ್ನಾಟಕದಲ್ಲಿ ಸಂಪೂರ್ಣ ಹಿಂದಿ ಹೇರಿಕೆ ನಡೆದದ್ದೇ ಆದರೆ, ಕನ್ನಡವು ತನ್ನ ಸ್ವಂತ ಊರುಗಳಲ್ಲೇ ಹಿಂದಿಗೆ ಜಾಗ ಬಿಟ್ಟುಕೊಟ್ಟು ಕಾಣೆಯಾಗುವುದರಲ್ಲಿ ಸಂದೇಹವಿಲ್ಲ.
೨. “ವಿದೇಶ ವ್ಯವಹಾರ ಸಚಿವಾಲಯ ಜನವರಿ ಹತ್ತರಂದು ಆಚರಿಸುವ ಹಿಂದಿ ದಿವಸ್”
ದೇಶದ ಎಲ್ಲಾ ಭಾಷಿಕರನ್ನು ಪ್ರತಿನಿಧಿಸುವ ಕೇಂದ್ರ ಸರಕಾರದ ಹಣದಲ್ಲಿ ವಿದೇಶಗಳಲ್ಲಿ ಹಿಂದಿ ದಿವಸ್ ಆಚರಿಸಲಾಗುತ್ತಿದೆ. ಆ ಮೂಲಕ ಹಿಂದಿ ಮಾತ್ರ ಭಾರತದ ಭಾಷೆ ಎಂಬಂತಹ ಸಂದೇಶ ವಿದೇಶಗಳಲ್ಲಿ ಹಬ್ಬಿಸಲಾಗುತ್ತಿದೆ. ಹಿಂದಿಯನ್ನು ಮಾತ್ರ ಪೋಷಿಸುವ, ಪ್ರಚಾರಕ್ಕಾಗಿ ಹಣ ವ್ಯಯಿಸುವ ಕೇಂದ್ರ ಸರಕಾರವು, ಇತರೆ ಭಾಷೆಗಳ ಕಡೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಎಲ್ಲಾ ಭಾಷೆಗಳನ್ನೂ ಸಮಾನವಾಗಿ ಕಾಣಬೇಕಾದ ಕೇಂದ್ರ ಸರಕಾರವು, ಇತರೆ ಭಾರತೀಯ ಭಾಷೆಗಳ ಏಳ್ಗೆಗೆ, ಪ್ರಚಾರಕ್ಕೆ ಇಂತಹ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. “ಈ ರೀತಿಯ ತಾರತಮ್ಯ ಯಾಕೆ? ಕನ್ನಡವೂ ಸೇರಿದಂತೆ ಇತರೆ ಭಾಷೆಗಳ ಪ್ರಚಾರಕ್ಕೆ ಕ್ರಮ ಕೈಗೊಳ್ಳುವುದೇ ಸರಿಯಾದ್ದು” ಎಂದು ಕನ್ನಡಿಗರ ಪರವಾಗಿ ಕೇಂದ್ರ ಸರಕಾರಕ್ಕೆ ಗಟ್ಟಿಯಾಗಿ ಹೇಳಬೇಕಾದ ಕನ್ನಡಿಗರ ಹೆಮ್ಮೆಯ ಪತ್ರಿಕೆ, ಹಿಂದಿ ದಿವಸ್ ಆಚರಣೆಯನ್ನು ಹೊಗಳಿ ಬರೆದಿರುವುದು, ಕನ್ನಡಿಗರ ಮನಸ್ಸನ್ನು ಖಿನ್ನವಾಗಿಸಿದೆ.





ಮೊದಲು ಕನ್ನಡಿಗರು, ಕನ್ನಡಕ್ಕೆ ಆಗಿರುವ ದಗ,ಮೋಸ ವನ್ನು ಎತ್ತಿ ತೋರಿಸಬೇಕು.
ಕನ್ನಡಿಗರು ಇದನೆಲ್ಲ ಒಗ್ಗಟ್ಟಾಗಿ ಸರಿಪಡಿಸಬೇಕು.
ಕನ್ನಡಿಗರೇ, ಕನ್ನಡಕ್ಕೆ ಮೋಸ ಮಾಡಿರುವಾಗ , ತಮಿಳ್, ಸಂಸ್ಕೃತ , ತೆಲುಗು , ಬಂದರೆ ಏನು ಆಗುತ್ತೆ ??
astakoo kannadada belavanegegu hindi kaliyuvadakoo yenu sambhanda? evattu hindi kaliyabayasuva videshiyaru nale kannadavannoo kalitaaru alve..?
@Iranagouda Patil,
ಅಂಕಣದಲ್ಲಿ, ನೀವು ಕೇಳಿದಂತ ಸಂಬಂಧ ಹೇಗಿದೆ ಅಂತ ಬರೆಯಲಾಗಿದೆ.
ಅದನ್ನೇ ಮತ್ತೊಮ್ಮೆ ಇಲ್ಲಿ ಲಗತ್ತಿಸುತ್ತಿದ್ದೇನೆ. ನಿಮ್ಮ ಪ್ರಶ್ನೆಗೆ ಸರಿ ಉತ್ತರ ಅನಿಸಲಿಲ್ಲ ಎಂದರೆ ಹೇಳಿ, ಬಗೆಹರಿಸಲು ಪ್ರಯತ್ನಿಸುತ್ತೇನೆ.
“ವಿದೇಶೀಯರು ಹಿಂದಿ ಕಲಿಯಲು ಆಸಕ್ತಿ ತೋರುತ್ತಿರುವುದು, ಕೇಂದ್ರ ಸರಕಾರವು ಜನವರಿ ಹತ್ತರಂದು ಹಿಂದಿ ದಿವಸ್ ಆಚರಿಸುವುದು, ಇತ್ಯಾದಿ ವಿಷಯಗಳನ್ನು ಮುಂದಿಟ್ಟು, ಕನ್ನಡಿಗರಲ್ಲಿ ಹಿಂದಿ ಕಲಿಕೆ ಬಗ್ಗೆ ಒಲವು ಮೂಡಿಸುವ ಒಂದು ಪ್ರಯತ್ನದಂತೆ ಈ ಅಂಕಣ ಕಾಣುತ್ತದೆ. ಹಿಂದಿಗೆ ಎಲ್ಲಿಲ್ಲದ ಬೇಡಿಕೆಯಿದೆ ಎಂದು ಹೇಳುವ ಅವಸರದಲ್ಲಿ, ವ್ಯವಸ್ಥಿತ ಹಿಂದಿ ಹೇರಿಕೆಯಿಂದ ಕನ್ನಡಕ್ಕಾಗುತ್ತಿರೋ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಕೆಲಸವನ್ನು ವಿಜಯ ಕರ್ನಾಟಕ ಮರೆತಂತಿದೆ.”
ಭಾರತೀಯ ಭಾಷೆಗಳನ್ನ ಕನ್ನಡಕ್ಕೆ ಅನುವಾಧ ಮಾಡುವಂತಾ ತಂತ್ರಾಂಶಗಳನ್ನು ಅಬಿವೃದ್ದಿ ಪಡಿಸುವಲ್ಲಿ ನಮ್ಮ ಐಟಿ ಕಂಪನಿಗಳು ಏಕೆ ಆಸಕ್ತಿ ತೊರಿಸುತ್ತಿಲ್ಲ ? ಇದರಿಂದ ಹಲವಾರು ಅನ್ಯ ಭಾಷಾ ವಿಷಯಗಳನ್ನು ನಾವು ಕನ್ನಡಕ್ಕೆ ಅನುವಾದ ಮಾಡಿಕೊಂಡು ತಿಳಿದುಕೊಳ್ಳಬಹುದಲ್ಲವೇ? ಈ ನಿಟ್ಟಿನಲ್ಲೂ ಪ್ರಯತ್ನಿಸ ಬಹುದು .