ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

14
ಡಿಸೆ

ಆಪರೇಷನ್ ವ್ರಾತ್ ಆಫ್ ಗಾಡ್ ಮತ್ತು ಉಕ್ಕಿನ ಮಹಿಳೆ ಗೋಲ್ಡಾ ಮೈಯರ್

– ತಾರಾನಾಥ್ ಎಸ್.ಎನ್

ಗೋಲ್ಡಾ ಮೈಯರ್” ನಾನು ಸಮಯವನ್ನು ಆಳುತ್ತೇನೆ ಹೊರತು ಸಮಯ ನನ್ನನಲ್ಲ.”

ಇಸ್ರೇಲ್ ಎಂದರೆ ತಕ್ಷಣ ನೆನಪಾಗುವುದು ಯುದ್ದ-ಹೋರಾಟ ಅಥವಾ ಅದರ ರಾಷ್ಟ್ರಭಕ್ತಿ.2000 ವರ್ಷಗಳಿಂದ ತಾಯಿನೆಲೆ ಬಿಟ್ಟು ಅಲೆಮಾರಿಯಾದ ಯಹೂದಿ ಜನಾಂಗ ಇಂದು ನೆಲೆಸಿರುವ ನಾಡು. 20 ಶತಮಾನಗಳು ಅವರಿವರಿಂದ ತುಳಿತಕ್ಕೆ ಒಳಗಾಗಿ ವಿಶ್ವದಾದ್ಯಂತ ಹಂಚಿ ಹೋದ ಜನಾಂಗ ಮತ್ತೆ ಒಂದುಗೂಡಿದ ದೇಶ. ಜರ್ಮನಿ ಸರ್ವಾಧಿಕಾರಿ ಹಿಟ್ಲರನ ವಿಷಾನೀಲಕ್ಕೆ ತಮ್ಮವರನ್ನು ಕಳೆದುಕೊಂಡ ನೋವಲ್ಲಿ ಮತ್ತೆ ದೇಶಕಟ್ಟಿದ ಛಲಗಾರರ ದೇಶ. ಸಿಕ್ಕ ಸ್ವಾತಂತ್ಯವನ್ನು ಉಳಿಸಿಕೊಳ್ಳಲು,ಸುತ್ತ ನೆರೆದಿರುವ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸದಾ ಎಚ್ಚರಿಕೆಯಿಂದ ಇರುವ ದೇಶ. ಮರುಭೂಮಿಯಲ್ಲಿ ಹಸಿರು ಬೆಳೆದ ಮಾಯಗಾರರ ನಾಡು.ಇಂಥಹ ನಾಡಿನ ಧೀರ ಮಹಿಳೆಯೇ ಗೋಲ್ಡಾ ಮೈಯರ್.

ಗೋಲ್ಡಾ ಮೈಯರ್ ಇಂದಿನ ಉಕ್ರೇನ್ ದೇಶದಲ್ಲಿರುವ ಕೀವ್ ಪಟ್ಟಣದಲ್ಲಿ ಮೇ 3 1898ರಲ್ಲಿ ಜನಿಸಿದರು. ತಂದೆ ಮೋಶೆ ಮಬೋವಿಚ್ಚ್ ಒಬ್ಬ ಬಡಗಿ. ಅವರು ನಂತರ ಉದ್ಯೋಗ ಹುಡುಕಿ ಅಮೆರಿಕಕ್ಕೆ ಹೊರಟರು.ಅಮೇರಿಕಾದಲ್ಲಿ ಓದು ಮುಗಿಸಿದ ಗೋಲ್ಡಾ ಕೆಲಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. 1917ರಲ್ಲಿ ಮಾರಿಸ್ ಮೆಯೇರ್ಸೋನ್ ಎನ್ನುವರನ್ನು ಮದುವೆಯಾದರು. 1921ರಲ್ಲಿ ಪ್ಯಾಲೆಸ್ಟೈನ್ನಲ್ಲಿ ನೆಲೆಯಾದರು. ಅಲ್ಲಿ ಕೃಷಿ ಮಾಡಿ ನೆಲೆಸುವುದು ಅವರ ಇಚ್ಛೆಯಾಗಿತ್ತು ಅವರಿಗೆ 2 ಜನ ಮಕ್ಕಳು ಜನಿಸಿದವು. ಇಲ್ಲಿಗೆ ಗೋಲ್ಡಾಳ ಬದುಕಿನ ಒಂದು ಘಟ್ಟ ಮುಗಿದಿತ್ತು. ಮತ್ತೆ ಅಮೇರಿಕಕ್ಕೆ ಹೋದ ಗೋಲ್ಡಾ ತಮ್ಮ ಬದುಕನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು. ಮೊದಲಿಗೆ ಪ್ಯಾಲೆಸ್ಟೈನ್ ನಲ್ಲಿ ಯಹೂದಿಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು.

ಬದಲಾದ ಸನ್ನಿವೇಶದಲ್ಲಿ ಹಿಟ್ಲರನ ಕಿರುಕುಳಕ್ಕೆ ನಲುಗಿದ ಯಹೂದಿಗಳಿಗೆ ಅಮೇರಿಕಾ ದೇಶ ಕಟ್ಟುವ ಭರವಸೆ ನೀಡಿತು. 1946ರಲ್ಲಿ ಗೋಲ್ಡಾ ಯಹೂದಿ ಹೋರಾಟ ವೇದಿಕೆಯ ರಾಜಕೀಯ ವಿಭಾಗದ ಮುಖ್ಯಸ್ಥರಾದರು. ದೇಶ ರಚಿಸುವ ಮಾತುಕತೆಗೆ ಹೋರಾಟಗಾರರು ಹಾಗು ಬ್ರಿಟನ್ ನಡುವಿನ ಕೊಂಡಿಯಾದರು. ಜೂನ್ 1948ರ ಹೊತ್ತಿಗೆ ಹೊಸ ದೇಶ ಇಸ್ರೇಲ್ ರಚನೆಗೆ ನೀಲನಕ್ಷೆ ಸಿದ್ದವಾದವು. ಸುತ್ತಮುತ್ತ ಶತ್ರುಗಳನ್ನು ಹೊಂದಿರುವ ಕಾರಣ ರಕ್ಷಣಾ ಉಪಕರಣಗಳ ಖರೀದಿಗೆ ಅಗತ್ಯವಾಗಿ 8 ಮಿಲಿಯನ್ ಡಾಲರ್ ಬೇಕಾಗಿತ್ತು. ಇದಕ್ಕಾಗಿ ಇಸ್ರೇಲ್ ನಾಯಕ ಬೆನ್ ಗುರಿಯನ್ ಅಮೇರಿಕಾಕ್ಕೆ ಹೋಗಲು ಯೋಚಿಸಿದರು. ಯುದ್ದ ನಡೆಯುವ ಸಂದರ್ಭ ಇರುವುದರಿಂದ ಅವರು ದೇಶ ಬಿಟ್ಟು ಹೋಗುವುದು ತರವಲ್ಲ ಎಂದು ಯೋಚಿಸಿದ ಗೋಲ್ಡಾ ತಾವು ಹೋದರು. ಅಮೇರಿಕಾದಲ್ಲಿ ನೆಲೆಸಿರುವ ಯಹೂದಿಗಳಿಂದ ಧನ ಸಂಗ್ರಹಿಸಲು ನಿರ್ಧರಿಸಿದರು.ತಾಯಿನೆಲಕ್ಕೆ ಒದಗಿದ ದುಸ್ಥಿತಿಯನ್ನು ಮನ ಮಿಡಿಯುವಂತೆ ವಿವರಿಸಿ 50 ಮಿಲಿಯನ್ ಡಾಲರ್ ಸಂಗ್ರಹಿಸಿ ನಾಡಿಗೆ ಮರಳಿದಾಗ ಅವರಿಗೆ ಭವ್ಯ ಸ್ವಾಗತ ಸಿಕ್ಕಿತ್ತು. ಸ್ವತಹ ಬೆನ್ ಗುರಿಯನ್ ಅವರೇ “ಇಸ್ರೇಲ್ ಎನ್ನುವ ದೇಶವನ್ನು ಸಾಧ್ಯವಾಗಿಸಿದ ಮಹಿಳೆ” ಎಂದು ಘೋಷಿಸಿದರು. ಮೇ 14, 1948 ರಲ್ಲಿ ಇಸ್ರೇಲ್ ಸ್ವಾತಂತ್ರ ಘೋಷಣೆಗೆ ಸಹಿ ಹಾಕಿದ 24 ಮಂದಿಯಲ್ಲಿ ಗೋಲ್ಡಾ ಒಬ್ಬರಾಗಿದ್ದರು. ಮರುದಿನವೇ ಅರಬ್ ದೇಶಗಳು ಇಸ್ರೇಲ್ ನತ್ತ ದಾಳಿಯಿಕ್ಕಿದವು. ಇಸ್ರೇಲಿಗರು ಸಾಹಸದಿಂದ ಅರಬ್ಬರನ್ನು ಸೋಲಿಸಿ 2000 ವರ್ಷಗಳಿಂದ ಕಳೆದುಹೋಗಿದ್ದ ತಾಯಿನೆಲವನ್ನು ಮತ್ತೆ ಪಡೆದರು.
ಮತ್ತಷ್ಟು ಓದು »

12
ಡಿಸೆ

ಗೂಢಚರ್ಯದ ಅಂತ’ರಾ’ಳ

– ಸಂತೋಷ್ ತಮ್ಮಯ್ಯ

India's External Intelligenceಕಾಲೇಜು ದಿನಗಳ ರಸಪ್ರಶ್ನೆಯಲ್ಲಿ ಅದರ ಬಗ್ಗೆ ಪ್ರಶ್ನೆಗಳು ಬಂದಿರಬಹುದು. ಪತ್ರಿಕೆಗಳ ವರದಿಗಳು ಅವುಗಳ ಕುತೂಹಲವನ್ನು ಬೆಳೆಸಿರಬಹುದು. ಸಿನೆಮಾಗಳು ಆ ಕುತೂಹಲವನ್ನು ಕೆರಳಿಸಿರಬಹುದು. ದೇಶ ದ್ರೋಹಿ ISI ಪ್ರಸ್ಥಾಪವಾದಾಗಲೆಲ್ಲಾ ಅದು ನೆನಪಾಗಿರಬಹುದು, ಬಾಂಡ್ ಸಿನೆಮಾಗಳು ನೋಡುವಾಗಲೆಲ್ಲಾ ಅದು ನೆನಪಾಗಿರಬಹುದು. ಅದರ ಬಗ್ಗೆ ಹೆಮ್ಮೆ ಹುಟ್ಟಿರಬಹುದು. ಇಸ್ರೇಲಿನ ಮೊಸಾದ್‌ನಂತೆ, ಅಮೇರಿಕಾದ ಸಿಐಎನಂತೆ, ಇಂಗ್ಲೆಂಡಿನ MI-6 ನಂತೆ ನಮ್ಮ Research and Analysis Wing ಎಂದುಕೊಂಡಿರಲೂಬಹುದು.

ನಿಜ ಆ ಹೆಸರಲ್ಲಿ ಆಕರ್ಷಣೆಯಿದೆ. ಹಾಗಾಗಿ RAW ಎಂದರೆ ಎಲ್ಲರಿಗೂ ಗೊತ್ತಿದೆ. ಆ ಹೆಸರಿನೊಂದಿಗೆ ನಿಗೂಢತೆ ಮೆತ್ತಿಕೊಂಡಿದೆ. ಎಲ್ಲರಿಗೂ ಅದರ ಬಗ್ಗೆ ಕುತೂಹಲ ಇದ್ದೇ ಇದೆ. ಏಕೆಂದರೆ ಪ್ರತಿಯೊಬ್ಬ ಭಾರತೀಯನಿಗೂ RAW ಎಂದರೆ ಗೂಢಾಚಾರಿಕೆ ನೆನಪಾಗುತ್ತದೆ. ಪಾಕಿಸ್ಥಾನ ನೆನಪಾಗುತ್ತದೆ. ರೋಚಕ ಕಥೆಗಳು ನೆನಪಾಗುತ್ತವೆ. ಜೇಮ್ಸ್ ಬಾಂಡ್ ಸಿನೆಮಾಗಳಂತಹ ಸಾಹಸಗಳು ನೆನಪಾಗುತ್ತವೆ. ಶತ್ರು ದೇಶದೊಳಗೆ ನುಗ್ಗಿ ರಹಸ್ಯಗಳನ್ನು ಭೇದಿಸುವ ಪರಾಕ್ರಮಿ, ಯಾವುದೋ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಏಜೆಂಟ್ ನೆನಪಾಗುತ್ತದೆ. ಭಾರತದ ‘ರಾ’ ಅಂಥದ್ದು. ಸಿಕ್ಕಿ ಹಾಕಿಕೊಂಡು ವರ್ಷಾನುಗಟ್ಟಲೆ ಪಾಕಿಸ್ಥಾನದ ಜೈಲುಗಳಲ್ಲಿ ಕೊಳೆಯುವ ಅಥವಾ ಗಲ್ಲಿಗೇರಿಸಲ್ಪಡುವ ಆತನಿಗಾಗಿ ದೇಶ ಮರುಗಿದೆ.  ದೇಶದ ರಹಸ್ಯಗಳು ಸೋರಿಕೆಯಾಗದಂತೆ ತಡೆಯುವುದು ಮತ್ತು ಶತ್ರುಗಳ ಆಗುಹೋಗುಗಳನ್ನು ಅರಿಯುವುದು ಈ ‘ರಾ‘ ದ ಕೆಲಸ.

ಆದರೆ ‘ರಾ’ ದ ಬಗ್ಗೆ ತಿಳಿಯಲು ಆಸಕ್ತರಾಗಿದ್ದರೂ ಅದರ ಬಗ್ಗೆ ಬಂದ ನಂಬಿಗಸ್ಥ ಪುಸ್ತಕಗಳು ಕಡಿಮೆ. ವಿಚಿತ್ರ ಎಂದರೆ  ‘ರಾ’ ಬಗ್ಗೆ ಭಾರತೀಯರು ಬರೆದಿರುವುದಕ್ಕಿಂತಲೂ ಪಾಕ್ ನ ಐಎಸ್‌ಐ ಏಜೆಂಟರು, ಸಾಹಿತಿಗಳು ಬರೆದಿರುವುದೇ ಹೆಚ್ಚು! ನಿಂದಾಸ್ತುತಿಗಳಿಂದ ಕೂಡಿದ, ಸತ್ಯಕ್ಕೆ ದೂರವಾದ ಸಂಗತಿಗಳು ಮತ್ತು ಊಹೆಗಳಿಂದ ತುಂಬಿದ ಪಾಕಿಸ್ತಾನಿ ಪುಸ್ತಕಗಳು ತಮ್ಮ ಮೂಗಿನ ನೇರಕ್ಕೆ ‘ರಾ’ವನ್ನು ಚಿತ್ರಿಸಿವೆ. ಭಾರತದ ಕೆಲವು ಪುಸ್ತಕಗಳಲ್ಲಿ ಕೂಡ ಕೇವಲ ರೋಮಾಂಚಕಾರಿ ಕಥನಗಳಿಗೆ ಪ್ರೇಮವನ್ನು ತುರುಕಿ ಸತ್ಯವನ್ನು ಲಗಾಡಿ ಎಬ್ಬಿಸಿಲಾಗಿದೆ.ಒಟ್ಟು ‘ರಾ’ ವನ್ನು ಹೊರಗಿನಿಂದ ನೋಡಿ ಬರೆದವರೇ ಹೆಚ್ಚು. ಆದರೂ ಭಾರತೀಯ ಸಾಹಿತ್ಯದಲ್ಲಿ ಅಶೋಕ್ ರೈನಾ ಅವರ ಪುಸ್ತಕ ಮತ್ತು ‘ರಾ’ದ ಎಡಿಶನಲ್ ಸಕ್ರೇಟರಿಯಾಗಿದ್ದ ಬಿ. ರಾಮನ್ ಅವರ ಪುಸ್ತಕಗಳು ‘ರಾ’ ದ ನೈಜ ಮುಖವನ್ನು ಚಿತ್ರಿಸುತ್ತದೆ. ಹಾಗೆ ನೋಡಿದರೆ ಭಾರತದಲ್ಲಿ ‘ರಾ’ಬಗ್ಗೆ ಬರೆಯುವುದಕ್ಕಿಂತ ಸಿಐಎ ಬಗ್ಗೆ ಬರೆಯುವುದೇ ಸುಲಭ ಎಂಬಂತಹ ಪರಿಸ್ಥಿತಿ ಇದೆ. ಏಕೆಂದರೆ ಅವುಗಳ ಬಗ್ಗೆ ಅಧಿಕೃತ ವೆಬ್‌ಸೈಟುಗಳಿವೆ.ಅದರೆ ಭಾರತದಲ್ಲಿ ಇಲ್ಲ. ಜೊತೆಗೆ ಭಾರತದ ೧೯೨೩ರ ಭಾರತೀಯ ರಹಸ್ಯ ಕಾಯ್ದೆ ಸುರಕ್ಷತೆಯ ಹೆಸರಲ್ಲಿ ಕೆಲವು ಅಂಶಗಳನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದ ಭಾರತೀಯರಿಗೆ ‘ರಾ’ ಬಗ್ಗೆ ತಿಳಿಯಬೇಕೆಂದು ಹೊರಟಷ್ಟೂ  ಪಾಕಿಸ್ತಾನದ RAW ಕಾಣುತ್ತಾ ಹೋಗುತ್ತದೆ.
ಮತ್ತಷ್ಟು ಓದು »

11
ಡಿಸೆ

ಮಲೇಷ್ಯಾದಲ್ಲಿ ನರಕಯಾತನೆ ಅನುಭವಿಸುತಿದ್ದ ಯುವಕರಿಗೆ ಒಂದು ಈ-ಮೇಲ್ ‪#‎ಅಚ್ಚೇದಿನ್‬ ತಂದ ಕಥೆ

– ಅರುಣ್ ಬಿನ್ನಡಿ

Anil Chalageriಕಾಡಿ ಬೇಡಿದ್ದಕ್ಕೆ ದಿನಕ್ಕೆ ಸಿಗುತ್ತಿದ್ದದ್ದು ಕೇವಲ ಒಂದೊತ್ತು ಊಟ,ಭವಿಷ್ಯದ ಕನಸುಗಳು ಮೊಸದ ಜಾಲಕ್ಕೆ ಸಿಲುಕಿ ಕಣ್ಮರೆಯಾಗಿದ್ದವು,ಕತ್ತಲೆಯ ಕೊಣೆಯಲ್ಲಿ ೨೦ ದಿನಗಳಿಂದ ನರಕಯಾತನೆಯ ರೌದ್ರನರ್ತನ,ಅಷ್ಟಕ್ಕೂ ಹೇಗಾದರು ಈ ವಿಷವರ್ತುಲದಿಂದ ಜೀವವನ್ನಾದರು ಉಳಿಸಿಕೊಳ್ಳೊಣವೆಂದರೆ ಆ ದೇಶದಲ್ಲಿ ಯಾರು ಪರಿಚಿತರಿರಲಿಲ್ಲ,ಒಟ್ಟಿನಲ್ಲಿ ಆ ಯುವಕರ ಪಾಲಿಗೆ ಜಗತ್ತಿನ ಬೆಳಕು ನೊಡಲು ಯಾವ ದಾರಿಯು ಉಳಿದಿರಲಿಲ್ಲ,ಉದ್ಯೋಗ ಅರಸಿ ದೂರದ ಮಲೇಶಿಯಾಕ್ಕೆ ಹೋದ ನಮ್ಮ ಬೆಂಗಳೂರಿನ ಇಬ್ಬರು ಯುವಕರ ದಾರುಣ ಕಥೆ ಇದು.

ಬೆಂಗಳೂರಿನ ಕೆಂಗೇರಿಯ ರಾಜೀವ್ ಮತ್ತು ಪ್ರಭು ಎಂಬ ಯುವಕರಿಬ್ಬರು ಉದ್ಯೋಗಕ್ಕಾಗಿ ಮಲೇಷ್ಯಾಗೆ ತೆರಳಲು ನಿರ್ಧರಿಸಿದ್ದರು.ಆಗ್ರಾದಲ್ಲಿರುವ ಟ್ರಾವೆಲ್ ಏಜೆಂಟ್ ಇಬ್ಬರಿಂದಲೂ ತಲಾ ೨.೫೦ಲಕ್ಷ ಹಣವನ್ನು ಕೇಳಿದ್ದಾನೆ.ಈ ಹುಡುಗರು ಹಣ ನೀಡಿದ ಬಳಿಕ ಅವರಿಗೆ ಏರ್-ಟಿಕೇಟ್ ಕೊಟ್ಟು ಮಲೇಷ್ಯಾಗೆ ಕಳುಹಿಸಲಾಗಿದೆ.ಅಲ್ಲಿ ತಲುಪಿಕೊಂಡ ನಂತರ ತಿಳಿದುಬಂದಿದ್ದೇನೆಂದರೆ ಭಾರತದ ಏಜೆಂಟ್ ಅಲ್ಲಿನ ಏಜೆಂಟರಿಗೆ ದುಡ್ಡು ನೀಡಿರಲಿಲ್ಲ.ಅಲ್ಲಿನ ಏಜೆಂಟರು ಈ ಹುಡುಗರನ್ನು ೧೮ ದಿನಗಳ ಗೃಹಬಂಧನದಲ್ಲಿಟ್ಟು ದಿನಕ್ಕೆ ಒಂದೊತ್ತು ಊಟ ಮಾತ್ರ ನೀಡುತಿದ್ದರು ಮತ್ತು ಕುಟುಂಬದವರಿಗೆ ಕರೆ ಮಾಡಿಸಿ ಹಣಕ್ಕಾಗಿ ಬೇಡಿಕೆಯಿಡುತಿದ್ದರು.ಅತ್ತ ಆ ಯುವಕರು ಸಿಬು ಎಂಬ ಸಣ್ಣ ಪಟ್ಟಣದಲ್ಲಿ ಒಂದು ಕೋಣೆಯಲ್ಲಿ ಬಂಧಿತರಾಗಿ ಹೈರಾಣಗಿದ್ದರೇ,ಇತ್ತ ಹೆತ್ತವರಿಗೆ ದಿಕ್ಕು ತೋಚದಂತಾಗಿತ್ತು.ಈ ಸುದ್ದಿ ಕೆಂಗೇರಿ ಬಿಜೆಪಿಯ ಯುವಮುಖಂಡರಾದ ಅನಿಲ್ ಚಳಗೇರಿಯವರ ಗಮನಕ್ಕೆ ಬಂದಿದೆ.

ಮತ್ತಷ್ಟು ಓದು »

10
ಡಿಸೆ

ಎ ಸ್ಟ್ರೇಂಜ್ ಸ್ಟೋರಿ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಓ ಹೆನ್ರಿಅಮೆರಿಕಾದ ಟೆಕ್ಸಾಸ್ ರಾಜ್ಯದ ರಾಜಧಾನಿಯಾಗಿರುವ ಆಸ್ಟಿನ್ ಪಟ್ಟಣದ ಉತ್ತರ ಭಾಗದಲ್ಲಿ ವಾಸವಿದ್ದ ಆ ಕುಟುಂಬ ನಗರದ ಸಂಸ್ಕಾರವಂತ ಕುಟುಂಬಗಳಲ್ಲೊಂದು ಎಂದು ಗುರುತಿಸಲ್ಪಡುತ್ತಿತ್ತು. ’ಸ್ಮೂದರ್ಸ್ ಕುಟುಂಬ’ ಎಂದೇ ಕರೆಯಲ್ಪಡುತ್ತಿದ್ದ  ಕುಟುಂಬದಲ್ಲಿದ್ದಿದ್ದು ಜಾನ್ ಸ್ಮೂದರ್ಸ್, ಅವನ ಮಡದಿ ಮತ್ತವನ ಐದು ವರ್ಷದ ಪುಟ್ಟ ಮಗಳು ಮಾತ್ರ.ಪರಿವಾರದಲ್ಲಿದ್ದದ್ದು ಮೂರು ಸದಸ್ಯರೇ ಆಗಿದ್ದರೂ ,ಸರಕಾರಿ ದಾಖಲಾತಿಗಳಲ್ಲಿ ಮಾತ್ರ ಕುಟುಂಬ ಸದಸ್ಯರ ಸಂಖ್ಯೆ ಆರು ಎಂದು ದಾಖಲಾಗಿರುವುದು ಏಕೆನ್ನುವುದು ಸ್ವತ: ಜಾನ್ ಸ್ಮೂದರ್ಸನಿಗೂ ಸಹ ತಿಳಿದಿರಲಿಲ್ಲ.

ಅದೊಂದು ದಿನ ರಾತ್ರಿಯ ಊಟ ಮುಗಿಸಿ ಮಡದಿಯೊಂದಿಗೆ ಹರಟುತ್ತ ಕುಳಿತಿದ್ದ ಜಾನ್,ತನ್ನ ಮಗಳು ಹೊಟ್ಟೆ ನೋವಿನಿಂದ ಒದ್ದಾಡುತ್ತಿರುವುದನ್ನು  ಗಮನಿಸಿದ.ಕ್ಷಣಗಳು ಉರುಳಿದಂತೆ ಮಗಳ ಉದರಶೂಲೆ ಹೆಚ್ಚುತ್ತ ಆಕೆ ಕಿರುಚಾಡುತ್ತಿರುವುದನ್ನು ಕಂಡು ಗಾಬರಿಯಾದ ಆತ ಔಷಧಿಯನ್ನು ತರಲು ತಕ್ಷಣ ಪಟ್ಟಣದತ್ತ ತೆರಳಿದ.ಮಗಳೆಡೆಗೆ ಗಮನವಿರಿಸುವಂತೆ ಮಡದಿಗೆ ತಿಳಿಸಿ,ಔಷಧಿಗಾಗಿ ಹಾಗೆ ಪಟ್ಟಣಕ್ಕೆ ತೆರಳಿದ ಜಾನ್,ಪುನ: ವಾಪಸ್ಸು ಬರಲೇ ಇಲ್ಲ!!ಅವನಿಗಾಗಿ ಕಾಯುತ್ತ ಕುಳಿತಿದ್ದ ಮಡದಿಗೆ ನಿಜಕ್ಕೂ ಇದು ಆಘಾತಕರ ಸಂಗತಿ.ಆದರೆ ಅಂಥದ್ದೊಂದು ಆಘಾತದಿಂದ ಆಕೆ ಬಲುಬೇಗ ಚೇತರಿಸಿಕೊಂಡಳು. ಸರಿಸುಮಾರು ಮೂರು ತಿಂಗಳನಂತರ ಮತ್ತೊಬ್ಬರನ್ನು ಮದುವೆಯಾದ ಆಕೆ ಆಸ್ಟಿನ್ ಪಟ್ಟಣವನ್ನು ತೊರೆದು ಸಾನ್ ಅಂಟೋನಿಯೊ ಪಟ್ಟಣವನ್ನು ಸೇರಿಕೊಂಡಳು.ಕಾಲಚಕ್ರ ಉರುಳುತ್ತ ಸಾಗಿತು.ಅಪ್ಪ ನಾಪತ್ತೆಯಾಗುವಾಗ ಐದು ವರ್ಷವಾಗಿದ್ದ ಬಾಲಕಿಗೆ ಈಗ ಇಪ್ಪತ್ತೈದರ ವಸಂತ.ಮನ ಮೆಚ್ಚಿದ ಹುಡುಗನೊಂದಿಗೆ ವಿವಾಹವಾದ ಅವಳು ಒಂದು ಮುದ್ದಾದ ಹೆಣ್ಣುಮಗುವಿನ ತಾಯಿಯೆನಿಸಿಕೊಂಡಿದ್ದಳು.ಮಗಳಿಗೆ ’ಪನ್ಸಿ’ ಎಂದು ನಾಮಕರಣ ಮಾಡಿದ ಆಕೆ ಕಳೆದು ಹೋದ ಅಪ್ಪನನ್ನು ಮರೆಯಲಾಗದೆ,ಪುನಃ ಆಸ್ಟಿನ್ ಪಟ್ಟಣವನ್ನು ಸೇರಿಕೊಂಡು ತಮ್ಮ ಹಳೆಯ ಮನೆಯಲ್ಲಿಯೇ ಪತಿಯೊಂದಿಗೆ ವಾಸವಾಗಿದ್ದಳು.

ಮತ್ತಷ್ಟು ಓದು »

7
ಡಿಸೆ

ಮಹಾಪಂಡಿತ ರಾಹುಲ ಸಾಂಕೃತ್ಯಾಯನರ ಲೇಖನ – ಡಾ.ಅನಂತರಾಮ ಭಟ್ಟರ ದುರಂತ ಕಥನ

ಮಹಾಪಂಡಿತ ರಾಹುಲ ಸಾಂಕೃತ್ಯಾಯನ (1893-1963)ರ ಬದುಕು ಮತ್ತು ಬರಹ ಒಬ್ಬ ಲೇಖಕನ ಸಾಧ್ಯತೆಗಳ ಬಗ್ಗೆ ಇರುವ ಇದುವರೆಗಿನ ಕಲ್ಪನೆಗಳಿಗೊಂದು ದೊಡ್ಡ ಸವಾಲು. ಈ ಜಗತ್ತು ಕಂಡ ಅಪರೂಪದ ‘ಮಹಾಕಾವ್ಯಾತ್ಮಕ’ ವ್ಯಕ್ತಿತ್ವ ಅವರದು. ಧರ್ಮ-ದರ್ಶನ, ರಾಜಕೀಯ, ಇತಿಹಾಸ, ಪುರಾತತ್ವ, ಸಾಹಿತ್ಯ ಭಾಷೆ, ಸಂಶೋಧನೆ-ಇತ್ಯಾದಿ ನಾನಾ ಕ್ಷೇತ್ರಗಳಲ್ಲಿ ಅದ್ಭುತ ಕೊಡುಗೆಯನ್ನಿತ್ತ ರಾಹುಲ್ ಒಂದು ಮಹಾವಿಸ್ಮಯ. ಅವರಿಗೆ ಮುವತ್ತಾರು ಭಾಷೆಗಳು ತಿಳಿದಿದ್ದುವು. ನೂರೈವತ್ತಕ್ಕೂ ಮಿಕ್ಕಿ ಅವರ ಕೃತಿಗಳು ಪ್ರಕಟವಾಗಿದ್ದರೆ, ಅಪ್ರಕಟಿತ ಸಾಕಷ್ಟಿವೆ. ಒಬ್ಬ ವ್ಯಕ್ತಿಯಾಗಿ ಒಂದು ವಿಶ್ವವಿದ್ಯಾಲಯಕ್ಕೂ ಅಸಂಭವವೆನಿಸುವಂತೆ ನಾಲ್ಕು ಕೋಶಗ್ರಂಥಗಳನ್ನು ರಚಿಸಿದವರು ರಾಹುಲರು (ಶಾಸನ ಶಬ್ದಕೋಶ, ಟಿಬೇಟ್ ಹಿಂದಿಕೋಶ್, ಟಿಬೇಟ್ ಸಂಸ್ಕೃತಕೋಶ್, ರಾಷ್ಟ್ರ ಭಾಷಾಕೋಶ್). ತ್ರಿಪಿಟಕಗಳ ಹಾಗೂ ಬೌದ್ಧದಾರ್ಶನಿಕ ಕೃತಿಗಳ ಮಹಾನ್ ಸಂಪಾದಕರು. ‘ದರ್ಶನ ದಿಗ್ದರ್ಶನ’ ಅವರು ಬರೆದ ತತ್ವಶಾಸ್ತ್ರದ ಮೇರುಕೃತಿ. ಕಾಶಿಯ ವಿದ್ಯಾಪೀಠವೇ ಇವರ ಅಗಾಧ ಸಂಸ್ಕೃತ ಪಾಂಡಿತ್ಯಕ್ಕೆ ‘ಮಹಾಪಂಡಿತ’ ಎಂಬ ಬಿರುದನ್ನಿತ್ತಿದೆ. ಶ್ರೀಲಂಕಾ ಬೌದ್ಧ ವಿಶ್ವವಿದ್ಯಾಲಯ ‘ತ್ರಿಪಿಟಕಾಚಾರ್ಯ’ ಎಂಬ ಪ್ರಶಸ್ತಿಯನ್ನಿತ್ತು ಗೌರವಿಸಿತ್ತು. ಮಹಾನ್ ಪರ್ಯಟಕ, ಪುರಾತತ್ವವೇತ್ತ, ಸಾಹಿತ್ಯ ವಾಚಸ್ಪತಿ, ಪದ್ಮವಿಭೂಷಣ, ಮಹಾಪಂಡಿತ ರಾಹುಲ ಸಾಂಕೃತ್ಯಾಯನರ ಕೃತಿಗಳ ಸಂಖ್ಯೆ ಅಗಾಧ. 1994ರಲ್ಲಿ ಡೆಲ್ಲಿಯ ರಾಧಾಕೃಷ್ಣ ಪ್ರಕಾಶನವು ದೊಡ್ಡ ಗಾತ್ರದ ಐವತ್ತು ಖಂಡಗಳಲ್ಲಿ ರಾಹುಲರ ಕೃತಿಗಳನ್ನು ಪ್ರಕಟಿಸಿದೆ. ಆದರೆ, ಅಪ್ರಕಟಿತ ಇನ್ನೂ ಸಾಕಷ್ಟಿವೆ. ಖೇದದ ವಿಷಯವೆಂದರೆ ಪ್ರಕಟಿತ ಖಂಡಗಳಲ್ಲಿ ಹಲವು ಈಗ ಉಪಲಬ್ಧವಿಲ್ಲ.

ಪ್ರಸ್ತುತ ಲೇಖನ ಖಂಡ 2 ಭಾಗ 1 (ಜೀವನ ಚರಿತ್ರೆ ಮತ್ತು ಸಂಸ್ಮರಣ)ದ “ಜಿನ್‍ಕಾ ಮೈ ಕೃತಜ್ಞ್” ಮಾಲೆಯಲ್ಲಿ 34ನೇ ಲೇಖನ ಡಾ| ಅನಂತರಾಮ ಭಟ್ಟರ ದುರಂತ ಕಥನ. ಇದು ಪುಟ 685 ರಿಂದ 692ರಲ್ಲಿದೆ. ಅದರ ಪೂರ್ತಿ ಕನ್ನಡ ಅನುವಾದ ತಮ್ಮ ಮುಂದಿದೆ.

ಹಿಂದಿ ಮೂಲ: ಮಹಾಪಂಡಿತ ರಾಹುಲ ಸಾಂಕೃತ್ಯಾಯನ
ಕನ್ನಡಕ್ಕೆ : ಡಾ| ಜಿ. ಭಾಸ್ಕರ ಮಯ್ಯ

ಮಹಾಪಂಡಿತ ರಾಹುಲ ಸಾಂಕೃತ್ಯಾಯನಕೊಡವೂರು ಶ್ರೀ ಅನಂತರಾಮ ಭಟ್ಟರನ್ನು ನಾನು ಮೊದಲು ಭೇಟಿಯಾದದ್ದು 1928ನೆಯ ಇಸವಿಯಲ್ಲಿ. ಕೊಲೊಂಬೋದಲ್ಲಿ. ಒಬ್ಬ ಪಂಡಿತ ಭಿಕ್ಷು ನನ್ನೊಡನೆಂದ – ‘ನಮ್ಮಲ್ಲಿ ಜಂಬೂ ದ್ವೀಪದ ಒಬ್ಬ ಪಂಡಿತರು ಇದ್ದಾರೆ.’ ಇದನ್ನು ಕೇಳಿ ನಾನು ಅಲ್ಲಿಗೆ ಹೋದೆ. ಇಪ್ಪತ್ತು ವರ್ಷದ ಒಬ್ಬ ತರುಣನೊಂದಿಗೆ ನನ್ನ ಭೇಟಿಯಾಯ್ತು – ಅನಂತರಾಮ ಹುಟ್ಟಿದ್ದು ಫೆಬ್ರವರಿ 7, 1908. ಆತ ಸಂಸ್ಕೃತವನ್ನು ಮಾತೃಭಾಷೆಯ ಹಾಗೆ ಮಾತನಾಡುತ್ತಿದ್ದ. ಆನಂತರ ಪರಸ್ಪರ ಭೇಟಿಯಾಗುತ್ತಿದ್ದೆವು. ಅದು ಆಳವಾದ ಮೈತ್ರಿಯನ್ನೇ ಉಂಟುಮಾಡಿತು.

ಅನಂತರಾಮ ಮದ್ರಾಸಿನ ದಕ್ಷಿಣಕನ್ನಡ ಜಿಲ್ಲೆಯ ಉಡುಪಿಯವರಾಗಿದ್ದರು.ಅವರ ಮಾತೃಭಾಷೆ ಕನ್ನಡ. ಮಾಧ್ವ ಸಂಪ್ರದಾಯದ ವೈಷ್ಣವ ಬ್ರಾಹ್ಮಣ. ಅವರು ಬಾಲ್ಯದಿಂದಲೇ ಸಂಸ್ಕೃತ ಓದಿದವರು. ಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯ ಪಡೆದವರು. ಮೈಸೂರಿನಲ್ಲಿ ಓದು ಮುಗಿಸಿದ ನಂತರ ಅವರಿಗೆ ಅನ್ನಿಸಿದ್ದೇನೆಂದರೆ ಸಂಸ್ಕೃತ ವಿದ್ವಾಂಸನಿಗೆ ಮಾರುಕಟ್ಟೆಯಲ್ಲಿ ಯಾವ ಬೆಲೆಯೂ ಇಲ್ಲ. ಇಂಗ್ಲಿಷ್ ಓದಿದರೆ ಬೆಲೆ ಹೆಚ್ಚಾಗುತ್ತದೆ. ಇಂಗ್ಲಿಷ್ ಓದಿ ಮೆಟ್ರಿಕ್ ಪರೀಕ್ಷೆಗೆ ಕುಳಿತರು. ಆದರೆ ತೇರ್ಗಡೆಯಾಗಲಿಲ್ಲ. ಮುಂದಿನ ವರ್ಷವೂ ಇದೇ ಗತಿ ಎಂದು ಅನ್ನಿಸಿತು. ಯಾರೋ ಹೇಳಿದರು … ಸಿಲೋನಿನಲ್ಲಿ ನೇರವಾಗಿ ಲಂಡನ್ ಯುನಿವರ್ಸಿಟಿಯ ಪರೀಕ್ಷೆಗೆ ಕುಳಿತುಕೊಳ್ಳಲಿಕ್ಕಾಗುತ್ತದೆ. ಅದರ ಬೆಲೆ ಭಾರತೀಯ ಡಿಗ್ರಿಗಳಿಗಿಂತ ಹೆಚ್ಚು. ಹೇಗೋ ಮಾಡಿ ಅವರು ಸಿಲೋನಿಗೆ ಬಂದರು. ಸಿಲೋನಿನ ಮಹಾಸ್ಥವಿರ ಧರ್ಮಸ್ಕಂಧರನ್ನು ಭೇಟಿ ಮಾಡಿದರು. ಅವರು ಅನಂತರಾಮ ಅವರನ್ನು ತಮ್ಮ ಬಳಿ ಸೇರಿಸಿಕೊಂಡರು. ಮಹಾಸ್ಥವಿರರದ್ದು ಒಂದು ಸಣ್ಣ ವಿಹಾರ. ಅದರಲ್ಲಿ ನಾಲ್ಕಾರು ಭಿಕ್ಷುಗಳು ವಾಸಿಸುತ್ತಿದ್ದರು. ಭಟ್ಟರ ವಿದ್ಯೆಯ ಪೂರ್ಣ ಉಪಯೋಗ ಅಲ್ಲಿ ಆಗುತ್ತಿರಲಿಲ್ಲ. ಆದರೆ, ಅಲ್ಲಿ ಇರುವುದರಿಂದ ವಾಸ ಮತ್ತು ಊಟದ ಚಿಂತೆ ನೀಗಿತು. ಮಹಾಸ್ಥವಿರರು ಆಗಾಗ್ಗೆ ಒಂದು ನಾಲ್ಕು ಪುಟದ ಸಂಸ್ಕೃತದ ಪತ್ರಿಕೆ ಪ್ರಕಟಿಸುತ್ತಿದ್ದರು. ಭಟ್ಟರು ಅದರಲ್ಲಿ ಬರೆಯ ತೊಡಗಿದರು.
ಮತ್ತಷ್ಟು ಓದು »

4
ಡಿಸೆ

ವಿಶ್ವರೂಪಂ,ಶಾರುಕ್ ಖಾನ್ ಮತ್ತು ಪಾಕಿಸ್ತಾನ

– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ

ಶಾರೂಕ್-ಅಮೀರ್(ಮುಸ್ಲಿಂ ಸಮುದಾಯದ ಕುರಿತು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಭಾಷಣ ಬಿಗಿಯುವ ಬುದ್ದಿಜೀವಿಗಳಿಗೆ 2013 ರಲ್ಲಿ ಬರೆದ ನನ್ನ ಈ ಲೇಖನ ಒಂದು ಪ್ರತಿಕ್ರಿಯೆಯಾಗಿ)

ಕಳೆದ ತಿಂಗಳು ಕಮಲ್ ಹಾಸನ್ ಚಿತ್ರ ಬದುಕಿನ ಮಹತ್ವಾಕಾಂಕ್ಷೆ ಸಿನಿಮಾ ‘ವಿಶ್ವ ರೂಪಂ’ ದೇಶದಾದ್ಯಂತ ಬಿಡುಗಡೆಯಾಗಬೇಕಿತ್ತು. ಪ್ರೇಕ್ಷಕರೂ ಸಹ ಸಿನಿಮಾ ವೀಕ್ಷಣೆಗಾಗಿ ಕಾತುರದಿಂದಲೇ ಕಾಯುತ್ತಿದ್ದರು. ಸಿನಿಮಾ ಏನೋ ಬಿಡುಗಡೆಯಾಯಿತು ಆದರೆ ಅದು ಕಮಲ್ ಹಾಸನ್ ತವರು ರಾಜ್ಯ ತಮಿಳುನಾಡೊಂದನ್ನು ಹೊರತುಪಡಿಸಿ. ಕಮಲ್ ಹಾಸನ್‍ಗೆ ಅತಿ ಹೆಚ್ಚಿನ ಅಭಿಮಾನಿಗಳಿರುವುದು ಮತ್ತು ಆತ ಅತ್ಯಂತ ಜನಪ್ರಿಯತೆ ಪಡೆದಿರುವುದು ತಮಿಳುನಾಡಿನಲ್ಲೇ. ಜೊತೆಗೆ ತನ್ನ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕಾಗಿ ಆತ ತನ್ನ ಸಿನಿಮಾ ಬದುಕಿನುದ್ದಕ್ಕೂ ದುಡಿದು ಗಳಿಸಿರುವುದನ್ನೆಲ್ಲ ಖರ್ಚು ಮಾಡಿರುವನು. ಆದ್ದರಿಂದ ಆತ ‘ವಿಶ್ವ ರೂಪಂ’ ನಿಂದ ಅತಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಿದ್ದು ಈ ತಮಿಳುನಾಡು ರಾಜ್ಯದಿಂದಲೇ. ಏಕಾಏಕಿ ಹೀಗೆ ‘ವಿಶ್ವ ರೂಪಂ’ ಸಿನಿಮಾ ಬಿಡುಗಡೆಗೆ ಆ ರಾಜ್ಯದಲ್ಲಿ ನಿಷೇಧ ಹೇರಿದಾಗ ಸಹಜವಾಗಿಯೇ ಕೋಟ್ಯಾಂತರ ರೂಪಾಯಿಗಳ ಬಂಡವಾಳ ಹೂಡಿದ ನಟ, ನಿರ್ಮಾಪಕ ಮತ್ತು ನಿರ್ದೇಶಕ ಕಮಲ್ ಹಾಸನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂಥ ಪರಿಸ್ಥಿತಿ ಎದುರಾಯಿತು. ಈ ಚಿತ್ರದ ನಿರ್ಮಾಣದಿಂದಾದ ಸಾಲ ತೀರಿಸಲು ತನ್ನ ಮನೆಯನ್ನೇ ಕಳೆದುಕೊಳ್ಳಬೇಕಾಯಿತು ಎಂದು ಹೇಳಿಕೊಂಡ ಆ ಹಿರಿಯ ನಟ ಒಂದು ಹಂತದಲ್ಲಿ ದೇಶವನ್ನೇ ಬಿಟ್ಟು ಹೋಗುವುದಾಗಿ ನುಡಿದ. ಇದು ಆ ಕ್ಷಣಕ್ಕೆ ನುಡಿದ ಆಕ್ರೋಶದ ಮಾತು ಎಂದೆನಿಸಿದರೂ ಒಂದು ಸೃಜನಶೀಲ ಮನಸ್ಸು ಸರ್ಕಾರದ ಮತ್ತು ಒಂದು ಧರ್ಮದ ಪಿತೂರಿಗೆ ಘಾಸಿಗೊಂಡು ವ್ಯಕ್ತಪಡಿಸಿದ ಸಾತ್ವಿಕ ಸಿಟ್ಟು ಅದಾಗಿತ್ತು.
ಮತ್ತಷ್ಟು ಓದು »

4
ಡಿಸೆ

ಹೆಚ್ಚುತ್ತಿರುವುದು ಅಸಹಿಷ್ಣುತೆಯೋ?ಗೊಡ್ಡು ವಿಚಾರವಾದಿಗಳ ಹತಾಶೆಯೋ?

– ಶ್ರೀವತ್ಸ ಭಟ್

ಅಸಹಿಷ್ಣುತೆ2014ರ ಲೋಕಸಭಾ ಚುನಾವಣೆಗೂ ಮುಂಚಿನ ಭಾರತವನ್ನು,ಅಂದರೆ ಸ್ವಾತಂತ್ರ್ಯೋತ್ತರದ ಆರು ದಶಕಗಳ ವೈಚಾರಿಕ ಭಾರತವನ್ನು ಓಮ್ಮೆ ಅವಲೋಕಿಸಿ ನೋಡಿ.ನಿಜವಾದ ವಿಚಾರವಾದಿಗೆ ಸ್ಥಾನವಿತ್ತೆ?ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ,ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು,ರಾಜಾರಾಮ ಮೋಹನರಾಯರು,ವಿದ್ಯಾಸಾಗರರಂತಹ ಅಪ್ರತಿಮ ಮೇಧಾವಿಗಳನ್ನೂ,ಮಹಾನ್ ವಿಚಾರವಾದಿಗಳನ್ನು ಕಂಡಿದ್ದ ಭಾರತರಾಷ್ಟ್ರ ಕೇವಲ ಕೆಲವು ದಶಕಗಳಲ್ಲಿ ಎಂತಹ ಜಾಢ್ಯತೆಯ ಕೂಪಕ್ಕೆ ಜಾರಿಹೋಗಿದೆಯಲ್ಲವೇ?  1947ರಲ್ಲಿ ಅನ್ಯರ ದಾಸ್ಯದಿಂದ ಮುಕ್ತರಾದೆವು ನಿಜ.ಆದರೆ ಸ್ವಾತಂತ್ರ್ಯ ಪೂರ್ವದಲ್ಲಿದ್ದ, ಆ ಮಹೋನ್ನತ ವಿಚಾರವಾದವು, ನಮ್ಮಯಾವ ವಿಚಾರಗಳಿಂದ ಪರಂಗಿಗಳು ನಮಗೆ ಹೆದರಿದ್ದರೋ, ಅದೇ ವಿಚಾರಶಕ್ತಿಯು ಅತಿ ಕಡಿಮೆ ಕಾಲದಲ್ಲಿ ಕ್ಷುದ್ರಗತಿಗೆ ಜಾರಿದ್ದು ನಮ್ಮ ದುರ್ದೈವವಲ್ಲವೇ?

2014 ಹೂಸ ಯುಗದ ಆರಂಭ, ವೋಟ್ ಬ್ಯಾಂಕ್ ರಾಜಕಾರಣದಿಂದ ಅಭಿವೃದ್ದಿ ರಾಜಕೀಯದೆಡೆಗೆ ಹೆಜ್ಜೆಯಿಡಲಾರಂಭಿಸಿದ ದಿನಗಳು. ತುಕ್ಕುಹಿಡಿದ ಆಲೋಚನೆಗಳಿಂದ, ನವನವೀನವಾದ, ಅಷ್ಟೇ  ಶ್ರೇಷ್ಠವಾದ,ಸಮೃದ್ದ ಭಾರತದ ನಿರ್ಮಾಣಕ್ಕೆ ಪೂರಕವಾದ,ವಿದ್ಯುತ್ ಪ್ರವಾಹದಂತಹ ಶಕ್ತಿಯುತ ಆಲೋಚನಾ ಕ್ರಮಕ್ಕೆ ಹೊರಳಿದ ಸಂಧಿಕಾಲ. ಈ ಬದಲಾವಣೆಯೆಂಬ ಉತ್ಕರ್ಷದ ಚಾಟಿಯ ಏಟು ಮೂದಲು ಬಿದ್ದಿದ್ದು ಗೊಡ್ಡು ವಿಚಾರವಾದದ ಮೇಲೆ. ಪರಿಣಾಮ! ಅಂಗಡಿಯಲ್ಲಿ ದುಡ್ಡುಕೊಟ್ಟು ಹೊಸ ಬಟ್ಟೆ ಖರೀದಿಸಿ ತೊಟ್ಟುಕೊಂಡು ಖುಷಿಪಡುವ ಹಾಗೆ,ಅಧಿಕಾರಿಗಳಿಗೆ ಲಂಚನೀಡೀಯೋ…ಇಲ್ಲವೇ ರಾಜಕೀಯದ ಪ್ರಭಾವ ಬಳಸಿಯೋ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದವರಿಗೂ,ಬುದ್ಧಿಜೀವಿಗಳ ಸೋಗು ಹಾಕಿಕೊಂಡು ಮೆರೆಯುತ್ತಿದ್ದ ಅರ್ಧಂಬದ್ದ ಓದಿಕೊಂಡಿದ್ದವರಿಗೂ,ಬುಡಕ್ಕೆ ಬೆಂಕಿಯಿಟ್ಟಂತಾಯಿತು.ಏನೂ ಮಾಡಲಾಗದೆ ಹತಾಶರಾದರು…ಎಷ್ಟಾದರೂ ಸತ್ಯ ಕಹಿಯಲ್ಲವೇ?

ಮತ್ತಷ್ಟು ಓದು »

3
ಡಿಸೆ

ವಾಲ್ಮೀಕಿ ರಾಮಾಯಣದ ಕ್ಷೇಪಕಗಳು

– ಡಾ| ಜಿ. ಭಾಸ್ಕರ ಮಯ್ಯ

ವಾಲ್ಮೀಕಿ ರಾಮಾಯಣಕ್ಷೇಪಕವೆಂದರೆ ನಂತರ ಸೇರಿಸಿದ್ದು.ಒಂದೊ ನಿಂದಿಸಲು ಅಥವಾ ವೈಭವೀಕರಿಸಲು ಅಥವಾ ಮೌಖಿಕ ರೂಪದಲ್ಲಿರುವ ಕಾವ್ಯವು ಸಹಜವಾಗಿಯೇ ಕಾಲಧರ್ಮಪ್ರಭಾವದಿಂದ ಜನರ ರುಚಿಸ್ವಾದ ಮತ್ತು ವಾಚಕರ ಪ್ರತಿಭೆಗನುಸರಿಸಿ ಭಾವಧರ್ಮಪರಿವರ್ತನೆಗಳಾಗುತ್ತಾ ಇರುತ್ತವೆ. ಐತಿಹಾಸಿಕ ಕಾಲಗಣನೆಯ ಪ್ರಕ್ರಿಯೆಯಲ್ಲಿ ಇಂಥವುಗಳಲ್ಲಿ ವಿದ್ವಾಂಸರು ಸಾಧಾರಣವಾಗಿ ಯಾವುದು ಪ್ರಕ್ಷಿಪ್ತ ಮತ್ತು ಯಾವುದು ಮೂಲವೆಂಬುದನ್ನು ಶೋಧಿಸುತ್ತಾರೆ.

ರಾಮಾಯಣದಲ್ಲಿರುವ ಒಟ್ಟು 7 ಕಾಂಡಗಳಲ್ಲಿ ಮೊದಲ ಮತ್ತು ಕೊನೆಯದು (1 ಮತ್ತು 7) ನಂತರ ಸೇರಿಸಲ್ಪಟ್ಟವುಗಳೆಂದು ಇಂದು ನಿರ್ವಿವಾದವಾಗಿ ವಿದ್ವತ್‍ವಲಯದಲ್ಲಿ ಸಿದ್ಧವಾದ ವಿಚಾರ. ಮೂಲಭಾರತವು ರಾಮಾಯಣಕ್ಕಿಂತ ಹಳೆಯದು. ವೇದದಲ್ಲಿ ರಾಮಾಯಣದ ಸುದ್ದಿಯೇ ಇಲ್ಲ; ಭಾರತದ ಸುಳಿವಿದೆ. ತ್ರಿಪಿಟಕಗಳಲ್ಲಿ ರಾಮಾಯಣದ ಪ್ರಸ್ತಾಪವಿಲ್ಲ. ಪಾಣಿನಿಯೂ ರಾಮಾಯಣವನ್ನು ಉದಾಹರಿಸುವುದಿಲ್ಲ. ಹಾಗಾಗಿ ಕ್ರಿ.ಪೂ. 3ನೆಯ ಶತಮಾನಕ್ಕಿಂತ ಹಿಂದೆ ರಾಮಾಯಣದ ರಚನೆಯಾಗಿರುವ ಸಂಭವವೇ ಇಲ್ಲ.

ರಾಮಾಯಣವು ಮೌಖಿಕ ಕಾವ್ಯ. ಅದು ಬರವಣಿಗೆಗೆ ಬಂದುದು ಕ್ರಿಸ್ತಶಕದ ನಂತರ.ಆ ಮುಂಚೆಯೂ ಆನಂತರವೂ ಎಷ್ಟೆಷ್ಟೋ ಅಂಶಗಳು ಅದರಲ್ಲಿ ಸೇರ್ಪಡೆಯಾಗಿವೆ. ವಾಲ್ಮೀಕಿಯದ್ದೆಂದು ಹೇಳಲಾಗುವ ಪ್ರಖ್ಯಾತ ಸಂಸ್ಕೃತ ರಾಮಾಯಣವು ಕ್ರಿ.ಪೂ. 2-3ರಲ್ಲಿ ರಚಿಸಲ್ಪಟ್ಟಿರಬಹುದು; ಬರೆಯಲ್ಪಟ್ಟಿರುವುದಿಲ್ಲ. ಹೊಸ ಸೇರ್ಪಡೆಗಳು ಅಂದರೆ ಪ್ರಕ್ಷಿಪ್ತಗಳು ಹೇರಳವಾಗಿ ತುಂಬಿಸಲ್ಪಟ್ಟು ಇಂದು ಉಪಲಬ್ಧ ವಾಲ್ಮೀಕಿ ರಾಮಾಯಣ ಒಂದಾದರೆ, ಬೇರೆ ಸಾವಿರಾರು ರಾಮಾಯಣಗಳೂ ಅಸ್ತಿತ್ವದಲ್ಲಿವೆ. ರಾಮನ ತಂಗಿ ಸೀತೆ ಎಂಬ ರಾಮಾಯಣವೂ ಇದೆ. ರಾವಣನನ್ನು ಕೊಂದವ ರಾಮನಲ್ಲ, ಲಕ್ಷ್ಮಣನೆಂತಲೂ ಇದೆ. ಅದಕ್ಕಾಗಿ ಆತ ನರಕಕ್ಕೆ ಹೋಗುತ್ತಾನೆ ಎಂತಲೂ ಜೈನ ‘ಪವುಮ ಚರಿತ’ ಹೇಳುತ್ತದೆ. ಎ.ಕೆ. ರಾಮಾನುಜನ್ ಸಂಗ್ರಹಿಸಿಕೊಟ್ಟ 300 ರಾಮಾಯಣಗಳಲ್ಲಿ ಒಂದು ಜಾನಪದ ರಾಮಾಯಣದಲ್ಲಿ ಸೀತೆ ರಾವಣನನ್ನು ಎಷ್ಟು ಮೋಹಿಸಿದ್ದಳೆಂದರೆ ಆಕೆ ಆತನ ಚಿತ್ರವನ್ನೂ ಬಿಡಿಸಿ ಅನಾಹುತ ಮಾಡಿಕೊಳ್ಳುತ್ತಾಳೆ. ಹೀಗಾಗಿ ರಾಮಾಯಣ ಯಾರ ಆಸ್ತಿಯೂ ಅಲ್ಲ, ಹಾಗೆಯೇ ಎಲ್ಲರ ಆಸ್ತಿಯೂ ಹೌದು.

ಏನೇ ಇರಲಿ, ವಾಲ್ಮೀಕಿ ರಾಮಾಯಣವನ್ನು ನಾವು ಒಂದು ಶ್ರೇಷ್ಠ ಮಹಾಕಾವ್ಯವೆಂದು ಭಾವಿಸುವುದಾದರೆ ಅದರಲ್ಲಿ ರಾಮನ ಉಜ್ವಲ ವ್ಯಕ್ತಿತ್ವಕ್ಕೆ ಕಳಂಕವನ್ನುಂಟು ಮಾಡುವ ಅಂಶಗಳನ್ನು ಪ್ರಕ್ತಿಪ್ತವೆಂದು ಕಿತ್ತೊಗೆಯಲೇ ಬೇಕು.
1) ಸೀತಾಪರಿತ್ಯಾಗ 2) ಶಂಬೂಕವಧ ಮತ್ತು 3) ಲವಕುಶರೊಡನೆ ರಾಮನ ಯುದ್ಧ – ಈ ಮೂರು ಅಸಂಬದ್ಧ ಮತ್ತು ಪ್ರಕ್ಷಿಪ್ತವೆಂದು ವೈದಿಕ ಜ್ಞಾನ ವಿಜ್ಞಾನ ಕೋಶದಲ್ಲೇ ಸ್ಪಷ್ಟೀಕರಿಸಲಾಗಿದೆ (ವೈದಿಕ ಜ್ಞಾನ ವಿಜ್ಞಾನ್ ಕೊಷ್: ಡಾ|| ಮನೋದತ್ತ ಪಾಠಕ್, ಪುಟ 252-254) :-
ಮತ್ತಷ್ಟು ಓದು »

2
ಡಿಸೆ

ಆರ್ಯರಿಂದ ಭಾರತದ ಮೇಲೆ ದಾಳಿ ಎಂಬ ಪೊಳ್ಳು ವಾದ

– ವಿನೋದ್ ಹಿಂದೂ ನ್ಯಾಷನಲಿಸ್ಟ್

ಆರ್ಯರ ಆಕ್ರಮಣದೇಶದಲ್ಲಿ ಅಸಹಿಷ್ಣುತೆ (Intolerance) ಮಿತಿ ಮೀರುತ್ತಿದೆ ದೇಶದಲ್ಲಿ ಉಸಿರುಗಟ್ಟೋ ವಾತಾವರಣವಿದೆ ಅಂತ ಕೆಲ ತಿಂಗಳಿನಿಂದ ಹಲವಾರು ಸಾಹಿತಿಗಳು, ಬುದ್ಧಿಜೀವಿಗಳು, ಲೇಖಕರು, ನಟ ನಟಿಯರು ತಮಗೆ ದೊರೆತ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿರುವುದು ನಿಮಗೆಲ್ಲ ತಿಳಿದ ವಿಷಯವೇ, ಅದೇ ಪ್ರಶಸ್ತಿ ವಾಪಸಾತಿ, ಅಸಹಿಣ್ಣುತೆಯ ವಾದದ ತಿಕ್ಕಾಟದಲ್ಲೇ ಅಮೀರ್ ಖಾನ್ ಕೂಡ ದೇಶದಲ್ಲಿ ಕಳೆದ 6-8 ತಿಂಗಳಿನಿಂದ ಒಂದು ತರಹ ಭಯದ ವಾತಾವರಣ ದೇಶದಲ್ಲಿದೆ, “ನನ್ನ ಪತ್ನಿ ದೇಶ ಬಿಡೋಣವೇ” ಅಂದಿದ್ದಳು ಅಂತ ಹೊಸ ವಿವಾದವನ್ನೇ ಸೃಷ್ಟಿಸಿದ್ದರು ಹಾಗು ಅಮೀರ್ ಖಾನರವರ ಪರ ವಿರೋಧವಾಗಿ ನಾನಾ ರೀತಿಯ ಪ್ರತಿಭಟನೆಗಳು ನಡೆದಿದ್ದು ತಮಗೆಲ್ಲ ತಿಳಿದ ವಿಷಯವೇ.

ಇದೇ ವಿಷಯವನ್ನಿಟ್ಟುಕೊಂಡು ಮೊನ್ನೆ ತಾನೆ ಶುರುವಾಗಿರೋ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೂ ಕೋಲಾಹಲವೆದ್ದಿತ್ತು. ಆಗ ನಮ್ಮ ದೇಶದ ಮಾನ್ಯ ಗೃಹಮಂತ್ರಿ ರಾಜನಾಥ ಸಿಂಗ್ ಸಂಸತ್ತಿನಲ್ಲಿ ಮಾತನಾಡುತ್ತ ಈ ತಥಾಕತಿತ ಅಸಹಿಣ್ಣುತೆಯ ಬಗ್ಗೆ ಚರ್ಚೆ ಮಾಡುವಾಗ ಸಂವಿಧಾನ ಕರ್ತೃ ಅಂಬೇಡ್ಕರರ ವಿಷಯವನ್ನು ಪ್ರಸ್ತಾಪಿಸುತ್ತ ದಲಿತ ಶೋಷಣೆಯನ್ನು ತಮ್ಮ ಧ್ವನಿ ಎತ್ತಿ ದಲಿತರ ಹಕ್ಕುಗಳಿಗಾಗಿ ಸಮರ್ಥವಾಗಿ ಹೋರಾಟ ನಡೆಸಿ ಅವರ ಹಕ್ಕುಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು ಹೊರತು ಅಂಬೇಡ್ಕರರು ಯಾವತ್ತೂ ದೇಶ ಬಿಡುವ ಯೋಚನೆ ಮಾಡಿರಲಿಲ್ಲ ಅಂತ ಉಲ್ಲೇಖಿಸುತ್ತ ನಮ್ಮ ದೇಶ ಸಾವಿರಾರು ವರ್ಷಗಳಿಂದ ಇಡೀ ಜಗತ್ತಿನಲ್ಲೇ ಸಹಿಷ್ಣು ರಾಷ್ಟ್ರವಾಗಿದೆ ಅನ್ನೋ ಮಾತನ್ನು ಹೇಳಿದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಹಾಗು ಕಲ್ಬುರ್ಗಿಯ ಸಂಸದ ಮಲ್ಲಿಕಾರ್ಜುನ ಖರ್ಗೆಯವರು ಅಂಬೇಡ್ಕರ್ ದೇಶ ಬಿಡ್ತೀನಿ ಅನ್ನೋ ಮಾತನ್ನು ಆಡಿರಲೇ ಇಲ್ಲ. ನಾವು ದ್ರಾವಿಡರು ಈ ದೇಶದ ಮೂಲನಿವಾಸಿಗಳು ನೀವು(ಆರ್ಯರು) ಹೊರಗಿನಿಂದ ಬಂದವರು ಅಂತ ಒಂದು ಸ್ಟೇಟ್’ಮೆಂಟ್ ಕೊಟ್ಟಿದ್ದರು.

ಭಾರತಕ್ಕೆ ಆರ್ಯರು ಹೊರಗಿನಿಂದ ಬಂದವರು, ದ್ರಾವಿಡರು ಮೂಲನಿವಾಸಿಗಳು ಅನ್ನೋದು ಪೊಳ್ಳು ವಾದವಂತ ಎಷ್ಟೋ ಜನ ಪಾಶ್ಚಾತ್ಯ ವಿದ್ವಾಂಸರು, ಇತಿಹಾಸಕಾರರೇ ಸಾಕ್ಷ್ಯಾಧರ, ಸಂಶೋಧನೆಗಳ ಮೂಲಕ ಒಪ್ಪಿಕೊಂಡಾಗ “Aryan Invasion Theory” ಒಟ್ಟಾರೆಯಾಗಿ baseless ಅನ್ನೋದು ಜಗಜ್ಜಾಹಿರಾಗಿರುವ ಸಂದರ್ಭದಲ್ಲಿ ಮತ್ತೆ ಆ ಪೊಳ್ಳು ವಾದವನ್ನಿಟ್ಟುಕೊಂಡು ರಾಜಕಾರಣ ಮಾಡುವುದು ಮಾತ್ರ ಇನ್ನೂ ಭಾರತದಲ್ಲಿ ನಿಂತಿಲ್ಲ ಅನ್ನುವುದಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಮಾತಿನಿಂದಲೆ ಅರ್ಥವಾಗುತ್ತದೆ. ಇದೇ “ಆರ್ಯರಿಂದ ಭಾರತದ ಮೇಲೆ ದಾಳಿ” ಎಂಬ ವಿಷಯ ಮಂಡಿಸಿ ಬ್ರಿಟೀಷರು ಅನುಸರಿಸಿದ divide and rule ಪಾಲಿಸಿಯನ್ನ ನಮ್ಮ ರಾಜಕಾರಣಿಗಳು ಇನ್ನೂ ಅನುಸರಿಸಿ ಜನರ ಮನಸ್ಸಿನಲ್ಲಿ ಜಾತಿಯೆಂಬ ವಿಷಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಮಾತ್ರ ದೇಶದ ಐಕ್ಯತೆಗೆ ಮಾರಕವೇ ಸರಿ.

ಮತ್ತಷ್ಟು ಓದು »

2
ಡಿಸೆ

ಅಸಹಿಷ್ಣುತೆ – ಮನೆ ಮನೆ ಕಥೆ!

– ನಾಗೇಶ ಮೈಸೂರು

ಅಸಹಿಷ್ಣುತೆ ಕಾರ್ಟೂನ್ಯಾಕೋ ಗುಬ್ಬಣ್ಣ ಪತ್ತೆಯಿಲ್ಲದೆ ಮಾಯಾವಾಗಿಹೋಗಿದ್ದ ಒಂದು ತಿಂಗಳಿಂದ. ಆಗೀಗ ಮಧ್ಯೆ ಬರಿ ಒಂದೆರಡು ಮೆಸೇಜ್ ಮಾತ್ರ ಕಳಿಸಿ ‘ವೆರಿ ಬಿಜಿ’ ಅಂತೊಂದು ಚೋಟು ಸುದ್ಧಿ ಹಾಕಿ ಇನ್ನು ಕುತೂಹಲ ಜಾಸ್ತಿ ಮಾಡಿಬಿಟ್ಟಿದ್ದ. ‘ಪ್ರಾಜೆಕ್ಟುಗಳೆಲ್ಲ ಕ್ಯಾನ್ಸಲ್ಲಾಗಿ ಇದ್ದಕ್ಕಿದ್ದಂತೆ ಫುಲ್ ಫ್ರೀ ಟೈಮ್ ಸಿಕ್ಕಿಬಿಟ್ಟಿದೆ; ಸ್ವಲ್ಪ ಬ್ರೇಕು ಸಿಕ್ಕಿದಾಗಲೆ ಅಲ್ಲಿ ಇಲ್ಲಿ ಓಡಾಡಿಕೊಂಡು ಬಿಡಬೇಕು ಸಾರ್.. ಈಗಲಾದರು ನೋಡೊ ಜಾಗವೆಲ್ಲ ನೋಡಿಬಿಡಬೇಕು ಅನ್ಕೊಂಡಿದೀನಿ’ ಅಂತಿದ್ದ. ‘ಹೇಳಿದ ಹಾಗೆ ಎಲ್ಲಾದರು ಟೂರು ಹೊಡಿತಿದಾನ ?’ ಅನ್ಕೊಂಡೆ, ಕ್ರಿಸ್ಮಸ್ಸಿನ ರಜೆ ಹತ್ತಿರವಾಗುವಾಗಲಾದರೂ ಸಿಕ್ತಾನ ನೋಡೋಣ ಅನ್ಕೊಂಡು ‘ವಾಟ್ಸಪ್ ಗುಬ್ಬಣ್ಣ ? ಮೆರ್ರಿ ಕ್ರಿಸ್ಮಸ್’ ಎಂದು ಮತ್ತೊಂದು ತುಂಡು ಸುದ್ದಿ ಕಳಿಸಿದೆ.

ಈ ಮೆಸೇಜಿಗೆ ಗುಬ್ಬಣ್ಣ ಖಂಡಿತವಾಗಿ ರೆಸ್ಪಾಂಡ್ ಮಾಡ್ತನೆ ಅಂತ ಭರವಸೆಯಿತ್ತು. ಯಾವ ಹಬ್ಬಹರಿದಿನಕ್ಕು ನಾನು ‘ವಿಷ್’ ಮೆಸೇಜ್ ಕಳಿಸಿದವನಲ್ಲ.. ಗುಬ್ಬಣ್ಣ ಹಬ್ಬ ಹರಿದಿನಕ್ಕೆ ವಿಷಸ್ ಕಳಿಸಿದಾಗಲೂ ಬರಿ ‘ಥ್ಯಾಂಕ್ಸ್’ ಅನ್ನೊ ರಿಪ್ಲೈ ಬರೆದರೆ ಅದೇ ಹೆಚ್ಚು. ಅಂತಹವನಿಗೆ ಅವನು ಆಚರಣೆ ಮಾಡದ ಹಬ್ಬಗಳಿಗೆಲ್ಲ ಬೇಕಂತಲೆ ವಿಷಸ್ ಕಳಿಸಿ ಸ್ವಲ್ಪ ರೇಗುವಂತೆ ಮಾಡುತ್ತಿದ್ದೆ.. ಅವಕ್ಕೆಲ್ಲ ಕಳಿಸಿದ್ದಕ್ಕಲ್ಲ ಅವನಿಗೆ ಕೋಪ ; ‘ನಮ್ಮ ಹಬ್ಬಗಳಿಗೆ ಕಳಿಸದೆ, ಕಳಿಸಿದ್ದಕ್ಕು ರೆಸ್ಪಾಂಡ್ ಮಾಡದೆ ಸಂಬಂಧಿಸದೆ ಇರೋದಕ್ಕೆ ಮಾತ್ರ ಉದ್ದುದ್ದ ಮೆಸೇಜ್ ಕಳಿಸಿ ವಿಷ್ ಮಾಡುವೆನಲ್ಲಾ?’ ಅಂತ. ಹಾಗೆ ಕಳಿಸಿದಾಗೆಲ್ಲ ಉರಿದೆದ್ದು ಬೀಳುವುದು, ರೇಗುವುದು ಮಾಮೂಲಾದ ಕಾರಣ, ಬೇಕೆಂತಲೆ ಆ ಮೆಸೇಜ್ ಕಳಿಸಿದ್ದು!

ಮತ್ತಷ್ಟು ಓದು »