ಕಳೆದುಹೋಗುತ್ತಿರುವ ದಲಿತ ಚಿಂತನೆ
– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ
ದಲಿತ ಸಾಹಿತ್ಯವಲಯ ಒಂದಿಷ್ಟು ಹೆಚ್ಚೇ ಎನ್ನುವಷ್ಟು ಮುನಿಸಿಕೊಂಡಿದೆ. ಅದಕ್ಕೆಂದೇ ಕಳೆದ ಆರು ವರ್ಷಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಅವರು ದಲಿತ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸುತ್ತಿರುವರು. ಸಾಹಿತ್ಯದ ಮುಖ್ಯವಾಹಿನಿಯಲ್ಲಿ ನಮಗೆ ಪ್ರವೇಶ ದೊರೆಯುತ್ತಿಲ್ಲ, ಪ್ರಶಸ್ತಿ-ಪುರಸ್ಕಾರ-ಗೌರವಗಳಿಂದ ನಾವು ವಂಚಿತರು, ದಲಿತ ಸಾಹಿತ್ಯ ಮತ್ತು ಬರಹಗಾರರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಕನ್ನಡದ ದಲಿತ ಸಾಹಿತ್ಯವಲಯ ತನ್ನ ಅಸ್ಮಿತೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಿಜಕ್ಕೂ ಕನ್ನಡದ ಒಟ್ಟು ಸಾಹಿತ್ಯ ಕ್ಷೇತ್ರಕ್ಕೆ ಆತಂಕ ತಂದೊಡ್ಡುತ್ತಿರುವ ಬೆಳವಣಿಗೆಯಿದು. ದಲಿತ ಸಾಹಿತ್ಯ ಈಗ ಕನ್ನಡ ಸಾಹಿತ್ಯದ ಬಹುಮುಖ್ಯ ಭಾಗ ಎನ್ನುವ ಮನ್ನಣೆಗೆ ಪಾತ್ರವಾಗಿದೆ. ದಲಿತ ಸಾಹಿತ್ಯವನ್ನು ಹೊರಗಿಟ್ಟು ಕನ್ನಡ ಸಾಹಿತ್ಯದ ಬೆಳವಣಿಗೆ ಹಾಗೂ ಇತಿಹಾಸವನ್ನು ನೋಡುವುದು ಅಧ್ಯಯನ ಹಾಗೂ ಸಂಶೋಧನೆಯ ದೃಷ್ಟಿಯಿಂದ ಅಸಾಧ್ಯದ ಸಂಗತಿ. ಹಾಗೆ ನೋಡುವುದು ಕೂಡ ಸಲ್ಲದು. ಹಾಗೊಂದು ವೇಳೆ ದಲಿತ ಸಾಹಿತ್ಯವನ್ನು ಹೊರಗಿಟ್ಟು ನೋಡಿದಲ್ಲಿ ಕನ್ನಡ ಸಾಹಿತ್ಯದ ಒಟ್ಟು ಚಿತ್ರಣ ನಮಗೆ ದಕ್ಕಲಾರದು. ಇಲ್ಲಿ ಕುವೆಂಪು, ಕಾರಂತ, ಬೇಂದ್ರೆ ಅವರಷ್ಟೇ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯ ಸಹ ಕನ್ನಡದ ಬಹುಮುಖ್ಯ ಬರಹಗಾರರು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ದಲಿತ ಬರಹಗಾರರು ನೀಡಿದ ಕೊಡುಗೆ ತುಂಬ ಮೌಲಿಕವಾದದ್ದು. ಇವತ್ತು ದಲಿತ ಸಾಹಿತ್ಯ ಕನ್ನಡ ಸಾಹಿತ್ಯದ ಮುಖ್ಯಧಾರೆಯಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಅನೇಕ ದಲಿತ ಲೇಖಕರ ಸಾಹಿತ್ಯವನ್ನು ಆದರ್ಶವಾಗಿಟ್ಟುಕೊಂಡು ಬರವಣಿಗೆಯ ಕೃಷಿಯಲ್ಲಿ ತೊಡಗಿಸಿಕೊಂಡ ಹಲವಾರು ದಲಿತೇತರ ಬರಹಗಾರರು ಇಲ್ಲಿರುವರು. ಕಾರಂತರ ‘ಚೋಮನ ದುಡಿ’ಯಷ್ಟೇ ಮಹಾದೇವರ ‘ಕುಸುಮ ಬಾಲೆ’ ಸಹ ಅಸಂಖ್ಯಾತ ಓದುಗರ ಓದಿನ ವ್ಯಾಪ್ತಿಗೆ ದಕ್ಕಿದೆ. ಅನೇಕ ದಲಿತ ಲೇಖಕರು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ಗೌರವಕ್ಕೆ ಭಾಜನರಾಗಿರುವರು. ದಲಿತ ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುತ್ತಿಲ್ಲ ಎನ್ನುವ ಆಪಾದನೆಯಿಂದ ಕಳಚಿಕೊಳ್ಳುವ ಪ್ರಯತ್ನವಾಗಿ 81 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧಲಿಂಗಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಗೆ ದಲಿತ ಸಾಹಿತಿಗಳನ್ನು ಆಯ್ಕೆ ಮಾಡಿದ ಉದಾಹರಣೆಗಳಿವೆ. ಹೀಗಿದ್ದೂ ದಲಿತ ಸಾಹಿತ್ಯವಲಯ ಮುನಿಸಿಕೊಂಡಿದೆ.
ಹಣದ ಹೊಳೆ ನಿಲ್ಲಿಸಿ, ಮೇಲ್ಮನೆ ಮಾನ ಉಳಿಸಿ
– ಎಸ್. ಸುರೇಶ್ ಕುಮಾರ್, ಮಾಜಿ ಸಚಿವರು,ಹಿರಿಯ ಬಿಜೆಪಿ ನಾಯಕ
ಕರ್ನಾಟಕದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ 25 ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ಮುಗಿದು ಫಲಿತಾಂಶಗಳೂ ಪ್ರಕಟವಾಗಿವೆ. ಈಗೇನಿದ್ದರೂ ಆಯಾ ಪಕ್ಷ ಎಷ್ಟು ಸ್ಥಾನಗಳನ್ನು ಗೆದ್ದಿದೆ? ಸೋತಿರುವ ಕ್ಷೇತ್ರಗಳಲ್ಲಿ ಕಾರಣಗಳೇನು? ಎಂಬುದರ ಲೆಕ್ಕಾಚಾರ ನಡೆಯುವ ಸಮಯ. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ನನ್ನದೊಂದು ಈ ಮನವಿ ಪತ್ರ.
ಕೆಲವು ವರ್ಷಗಳ ಹಿಂದೆ ನನ್ನ ಮೊಬೈಲ್ಗೆ ಒಂದು ವಿಚಿತ್ರವಾದ, ಆದರೆ ಅರ್ಥಗರ್ಭಿತ ಸಂದೇಶ ಬಂದಿತ್ತು. ‘ಸ್ನೇಹಿತರೇ. ನಾನು ಮಹಾತ್ಮಾ ಗಾಂಧೀಜಿಯವರ ಫೋಟೋಗಳನ್ನು ಸಂಗ್ರಹಿಸುತ್ತಿದ್ದೇನೆ. ನನ್ನ ಈ ಸಂಗ್ರಹ ಕಾರ್ಯದಲ್ಲಿ ನೀವು ಸಹಕರಿಸಿ. ನಿಮ್ಮ ಕೊಡುಗೆಯನ್ನು ನೀಡಿ. ಆದರೆ ಒಂದು ಷರತ್ತು. ನನಗೆ ಸಂಗ್ರಹವಾಗಬೇಕಿರುವ ಮಹಾತ್ಮಾ ಗಾಂಧೀಜಿ ಪೋಟೋಗಳು ಒಂದು ಸಾವಿರ ರೂಪಾಯಿ ನೋಟುಗಳ ಮೇಲೆ ಇರಬೇಕು.’ ಇದು ಆಘಾತಕಾರಿ ಎನಿಸಿದರೂ ಇಂದಿನ ಅತ್ಯಂತ ಕಟು ಸತ್ಯವನ್ನು ಬಿಂಬಿಸುತ್ತದೆ.
ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಹಣದ ಬಲ ವಹಿಸುವ ಪಾತ್ರ ಎಲ್ಲರಿಗೂ ತಿಳಿದಿದೆ. ಟಿ. ಎನ್.ಶೇಷನ್ ಅವರು ಭಾರತದ ಮುಖ್ಯ ಚುನಾವಣಾಧಿಕಾರಿ ಆಗಿದ್ದಾಗ ಈ ಕುರಿತು ಕೈಗೊಂಡ ಕೆಲವು ಕಠಿನ ಕ್ರಮಗಳು ಚುನಾವಣಾ ಸುಧಾರಣೆಯ ಪಥದಲ್ಲಿ ಮಹತ್ವ ಪಡೆದುಕೊಂಡಿದ್ದವು. ಆದರೆ, ದಿನೇ ದಿನೇ ಚುನಾವಣೆಗಳಲ್ಲಿ ಹಣದ ಪಾತ್ರ ಹೆಚ್ಚಾಗುತ್ತಿದೆ ಎಂಬುದು ಎಲ್ಲರ ಅನುಭವ. ನಗರ ಪಾಲಿಕೆ ಚುನಾವಣೆಗಳಲ್ಲಿಯೂ ಹಲವಾರು ಕೋಟಿ ರೂ. ಖರ್ಚು ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಂದೊಮ್ಮೆ ಮಹಾತ್ಮ ಗಾಂಧೀಜಿ, ಅಬ್ದುಲ್ ಕಲಾಂ ಅಥವಾ ಅಣ್ಣಾ ಹಜಾರೆಯಂಥವರು ನಿಲ್ಲಲು ಬಯಸಿದರೆ ಅವರ ಬಳಿ ಹಣವಿಲ್ಲವೆಂಬ ಅಂಶವೇ ದೊಡ್ಡ ತೊಡಕೆಂದು ಇಂದಿನ ರಾಜಕಾರಣದಲ್ಲಿ ಆಗಾಗ ಕೇಳಿ ಬರುವ ಮಾತು.
ನಿನ್ನೆಗೆ ನನ್ನ ಮಾತು – ಭಾಗ ೬
– ಮು.ಅ ಶ್ರೀರಂಗ ಬೆಂಗಳೂರು
ನಿನ್ನೆಗೆ ನನ್ನ ಮಾತು – ಭಾಗ ೧
ನಿನ್ನೆಗೆ ನನ್ನ ಮಾತು – ಭಾಗ ೨
ನಿನ್ನೆಗೆ ನನ್ನ ಮಾತು – ಭಾಗ ೩
ನಿನ್ನೆಗೆ ನನ್ನ ಮಾತು – ಭಾಗ ೪
ಒಂದು ಪೀಠಿಕೆ :- ನಿನ್ನೆಗೆ ನನ್ನ ಮಾತು ಎಂಬ ಶೀರ್ಷಿಕೆಯಲ್ಲಿ ಈ ಹಿಂದೆ ನಿಲುಮೆಯಲ್ಲಿ ಐದು ಲೇಖನಗಳನ್ನು ಬರೆದಿದ್ದೆ. ಅದರ ಹೆಚ್ಚಿನ ಅಂಶ ನನ್ನ ಹವ್ಯಾಸಿ ಓದಿನ ಮತ್ತು ಆಗಾಗ ದಿನ ಪತ್ರಿಕೆಗಳ ಭಾನುವಾರದ ಸಂಚಿಕೆಗಳಲ್ಲಿ/ಸಾಹಿತ್ಯಿಕ ಪತ್ರಿಕೆಗಳಲ್ಲಿ ಬರೆದ ಲೇಖನಗಳ ಬಗ್ಗೆ ಮತ್ತು ಅದನ್ನು ಬರೆದ ನಂತರ ನಡೆದ ಕೆಲವು ವಿದ್ಯಮಾನಗಳ ಬಗ್ಗೆ ಮಾತ್ರ ಸೀಮಿತವಾಗಿತ್ತು ಎಂದು ನನ್ನ ನೆನಪು. ಈ ಸಲ ನಾನು ಇತ್ತೀಚೆಗೆ ಓದಿದ ಕಥಾಸಂಕಲನ/ಕಾದಂಬರಿ/ಅಂಕಣ ಬರಹಗಳು ಅಥವಾ ಯಾವುದಾದರು ಒಂದು ವಿಷಯಕ್ಕೆ ಸಂಬಂಧಿಸಿದ ಲೇಖನಗಳ ಗುಚ್ಛದ ಬಗ್ಗೆ ನನ್ನ ಅಭಿಪ್ರಾಯ, ಅನಿಸಿಕೆಗಳನ್ನು ಹೇಳುವ ಪ್ರಯತ್ನ ಮಾಡುತ್ತೇನೆ.ಕಥಾ ಸಂಕಲನ/ಕಾದಂಬರಿಗಳಾದರೆ ಅವುಗಳಲ್ಲಿನ ಯಾವುದಾದಾರೂ ಪಾತ್ರಗಳ ಛಾಯೆ ಅಥವಾ ಸನ್ನಿವೇಶಗಳ ಚಿತ್ರಣ ಈವರೆಗಿನ ನನ್ನ ಜೀವನದಲ್ಲಿ ಅಲ್ಪ ಸ್ವಲ್ಪವಾದರೂ ಕಂಡು ಬಂದಿದ್ದರೆ ಅಥವಾ ನನ್ನ ಸ್ನೇಹಿತರ, ಬಂಧು ಬಾಂಧವರಲ್ಲಿ ಕಂಡಿದ್ದರೆ,ಕೇಳಿದ್ದರೆ ಅವುಗಳ ಬಗ್ಗೆ ನನ್ನ ಸಹಸ್ಪಂದನಗಳನ್ನು ಓದುಗರೊಡನೆ ಹಂಚಿಕೊಳ್ಳುವ ಆಸೆಯಿದೆ. ನಾನು ಹೊಸಗನ್ನಡ ಸಾಹಿತ್ಯದ ಒಬ್ಬ ಹವ್ಯಾಸಿ ಓದುಗ. ಆದ್ದರಿಂದ ಇಲ್ಲಿನ ನನ್ನ ಅಭಿಪ್ರಾಯಗಳಲ್ಲಿ ವಿಮರ್ಶೆಯ ಪರಿಭಾಷೆಗಳು ಇರುವುದಿಲ್ಲ.ನಾನು ಈ ಅಂಕಣದಲ್ಲಿ ಪ್ರಸ್ತಾಪಿಸುವ ಕೃತಿಗಳ ಬಗ್ಗೆ ಈ ಹಿಂದೆ ವಿಮರ್ಶೆಗಳು ಬಂದಿರಬಹುದು. ಅದನ್ನು ನಾನು ಓದಿದ್ದರೆ ಅವುಗಳ ಬಗ್ಗೆಯೂ ನನ್ನ ಅನಿಸಿಕೆಗಳನ್ನು ಹೇಳುವ ಮನಸ್ಸಿದೆ.ನೋಡೋಣ ಇವೆಲ್ಲಾ ಎಷ್ಟರಮಟ್ಟಿಗೆ ನೆರವೇರುತ್ತದೋ! ನನ್ನ ಬರವಣಿಗೆ ನನಗೇ ತೃಪ್ತಿ ಕೊಡದ ದಿನ ಈ ಲೇಖನಮಾಲೆ ಮುಗಿಯುತ್ತದೆ.
ಇಲ್ಲಿಯ ಲೇಖನಗಳನ್ನು ಯಾವ ರೀತಿ ಬರೆಯಬೇಕು ಎಂದು ಒಂದೆರೆಡು ದಿನ ಯೋಚಿಸಿದೆ. ನನಗೆ ಪತ್ರ/ಇಮೇಲ್/ಫೋನ್/ವಾಟ್ಸ್ ಅಪ್ ಮೂಲಕ ಸಂಪರ್ಕ ಇರುವವವರ ಮತ್ತು ನಾನು ಒಂದು ಬಾರಿಯಾದರೂ ಮುಖತಃ ಭೇಟಿಯಾದವರ ಕೃತಿಗಳ ಬಗ್ಗೆ ಪತ್ರ ಬರೆಯುವ ಶೈಲಿಯಲ್ಲಿ ಬರೆಯುವುದು ಒಂದು ರೀತಿ ಆಪ್ತತೆ ತರುತ್ತದೆ.ಯಾವ ರೀತಿಯ ಸಂಪರ್ಕವಿಲ್ಲದ ಲೇಖಕರುಗಳ ಕೃತಿಗಳ ಬಗ್ಗೆ ಲೇಖನದ ರೂಪದಲ್ಲಿ ಬರೆಯುವುದು ಎಂದು ಅಂದುಕೊಂಡಿದ್ದೇನೆ. ಇದೇನೂ ಕಟ್ಟುನಿಟ್ಟಾದ ನಿಯಮವಿಲ್ಲ. ಬರೆಯುವ ವೇಳೆಗೆ ಯಾವುದು ಸೂಕ್ತವೆನಿಸುತ್ತದೋ ಆ ರೀತಿಯಲ್ಲಿ ಬರೆಯಬಹುದು. ಈ ಲೇಖನಮಾಲೆಗೆ ಅಕ್ಷರ ಅನುಸಂಧಾನ ಎಂದು ಹೆಸರಿಡುವ ಆಸೆಯಿತ್ತು. ಅಕ್ಷರವೇನೋ ಸರಿ; ಅನುಸಂಧಾನವೆಂದರೆ ಪರಿಶೀಲನೆ, ಧ್ಯಾನ ಎಂಬ ಅರ್ಥವಿದೆ. ಇನ್ನು ಪರಿಶೀಲನೆಗೆ ಸೂಕ್ಷ್ಮವಾದ ವಿಚಾರಣೆ ಎಂಬ ಅರ್ಥ ಬರುತ್ತದೆ. ಇವೆಲ್ಲಾ ಏಕೋ ಒಂದು ರೀತಿ ಜಂಭ,ನಾನೇನೋ ವಿಶೇಷವಾದದ್ದನ್ನು ಹೇಳುತ್ತಿದ್ದೇನೆ ಎಂಬ ಒಣ ಹೆಮ್ಮೆಯ ಲಾಂಛನಗಳಾಗುತ್ತವೆ ಎನಿಸಿತು. ಒಬ್ಬ ಹವ್ಯಾಸಿ ಓದುಗನಿಗೆ ಆ ರೀತಿಯ ಜಂಭ,ಒಣ ಹೆಮ್ಮೆಗಳು ತರವಲ್ಲ. ಆದ್ದರಿಂದ ಹಿಂದಿನ ನಿನ್ನೆಗೆ ನನ್ನ ಮಾತು ಎಂಬ ಹೆಸರೇ ಸೂಕ್ತವೆಂದು ಅದನ್ನೇ ಮುಂದುವರೆಸಿದ್ದೇನೆ. ಇದು ಸುಮಾರು ಆರೇಳು ತಿಂಗಳುಗಳ ನಂತರ ನಾನು ಬರೆಯುತ್ತಿರುವ ಲೇಖನವಾದ್ದರಿಂದ ಇಷ್ಟು ದೊಡ್ಡ ಪೀಠಿಕೆ ಬರೆದಿದ್ದೇನೆ. ಮುಂದಿನ ಲೇಖನಗಳಲ್ಲಿ ಪೀಠಿಕೆಗಳು ಇರುವುದಿಲ್ಲ. ಅವಶ್ಯವಿದ್ದರೆ ನಾಲ್ಕೈದು ಸಾಲಿನಷ್ಟೇ ಇರುತ್ತದೆ. ಈ ಸಲ ಹಿರಿಯ ಕಥೆಗಾರರಾದ ಕೆ ಸತ್ಯನಾರಾಯಣ ಅವರ ಕಾಲಜಿಂಕೆ (ಪ್ರಕಾಶಕರು- ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು–೪೦ ಪ್ರಥಮ ಮುದ್ರಣ ೨೦೦೫). ಕಾದಂಬರಿಯ ಬಗ್ಗೆ ಬರೆದಿದ್ದೇನೆ. ಈ ಕಾದಂಬರಿಯನ್ನು ನನಗೆ ಓದಲು ಕೊಟ್ಟ ಪ್ರಿಯ ಸ್ನೇಹಿತರಾದ ಶ್ರೀ ಗಿರೀಶ್ ವಾಘ್ ಬೆಂಗಳೂರು ಅವರಿಗೆ ನಾನು ಆಭಾರಿಯಾಗಿದ್ದೇನೆ.
ಮತ್ತಷ್ಟು ಓದು 
ಬಂಗುಡೆ ಫ್ರೈ ಮತ್ತು ಭಗವದ್ಗೀತೆ
– ರೋಹಿತ್ ಚಕ್ರತೀರ್ಥ
ವರ್ಷಕ್ಕೋ ಎರಡು ವರ್ಷಕ್ಕೋ ಒಂದು – ಎರಡಲ್ಲ, ಒಂದೇ – ಸಿನೆಮಾ ಕೊಡುತ್ತಿದ್ದ ಹಿಂದಿಯ ರಾಜ್ಕುಮಾರ್ ಮೇಲೆ, ನನ್ನ ತಂದೆಗೆ ಕುತೂಹಲ, ಪ್ರೀತಿ, ಹುಚ್ಚು ಅಭಿಮಾನ ಇದ್ದವು. ಹಾಗೆಯೇ, ಬಹುಕಾಲ ಮೌನವಾಗಿದ್ದು ವರ್ಷಕ್ಕೆ ಒಂದೆರಡು ಮಾತು, ಒಂದೆರಡು ಹಾಳೆ ಸಾಹಿತ್ಯ ಬರೆಯುವವರ ಬಗ್ಗೆ ಹೆಚ್ಚಾಗಿ ಜನರಿಗೆ ಕುತೂಹಲ ಇರುತ್ತದೆ. ಇಂಥವರು ಕಾವಿ ತೊಟ್ಟರೆ, ಮಾತಾಡದೆ ಕೂತರೂ ಜಗತ್ಪ್ರಸಿದ್ಧರಾಗುತ್ತಾರೆ! ಇಂತಹ ಮಿತಾಕ್ಷರಿಗಳ ಪಂಥಕ್ಕೆ ಸೇರಿದ ಕನ್ನಡದ ಸಾಹಿತಿ ದೇವನೂರ ಮಹಾದೇವ, ವರ್ಷಕ್ಕೆ ಒಂದು ಭಾಷಣ ಮಾಡಿದರೆ, ಅದರ ಹಿಂದೆ ಹಲವು ದಿನಗಳ ಚಿಂತನೆ ಇರುತ್ತದೆ; ಇರಬೇಕು ಎಂದು ನಾವೆಲ್ಲ ಬಯಸುತ್ತೇವೆ. ಹಾಗೆಯೇ, ಅವರ ಐನೂರು ಪದಗಳೊಂದು ಲೇಖನ ಪ್ರಕಟವಾದರೂ, ಅದರಲ್ಲೇನೋ ಗಹನವಾದ ಸೂತ್ರರೂಪೀ ಸಂಗತಿಗಳು ಅಡಕವಾಗಿರಬಹುದು ಎಂಬ ಪೂರ್ವಗ್ರಹದಿಂದ ಎರಡೆರಡು ಬಾರಿ ಓದಿನೋಡುವ ಸಾಹಿತ್ಯಪ್ರೇಮಿಗಳಿದ್ದಾರೆ. ಹಾಗಾಗಿ ದಿನಕ್ಕೆ ಸಾವಿರ ಪದಗಳನ್ನು ಕುಟ್ಟುವ ನನ್ನಂಥ ಕೈಬಡುಕರಿಗಿಂತ ದೇವನೂರರ ಮೇಲೆ ಹುಟ್ಟುವ ನಿರೀಕ್ಷೆ ದೊಡ್ಡದು. ಅದನ್ನು ನಿಜ ಮಾಡುವ ಆನೆಯಂಥ ಹೊಣೆಗಾರಿಕೆಯೂ ಅವರ ಹೆಗಲ ಮೇಲೆ ಕೂತಿರುತ್ತದೆ.
ಈ ವರ್ಷ, ನಿಯಮ ತಪ್ಪಿ, ದೇವನೂರ ಎರಡು ಸಲ ಮಾತಾಡಿದರು. ಒಮ್ಮೆ, ಪ್ರಶಸ್ತಿ ಯಾಕೆ ವಾಪಸು ಮಾಡುತ್ತಿದ್ದೇನೆ ಎಂದು ಹೇಳಲು ಪತ್ರ ಬರೆಯುವುದರ ಮೂಲಕ. ಇನ್ನೊಮ್ಮೆ, ಮಂಗಳೂರಲ್ಲಿ ನಡೆದ – ಸಾಹಿತ್ಯವೊಂದು ಬಿಟ್ಟು ಮಿಕ್ಕೆಲ್ಲ ಅಪಸವ್ಯಗಳೂ ಇದ್ದ – ಒಂದು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷಭಾಷಣ ಮಾಡುವ ಮೂಲಕ. ಪ್ರಶಸ್ತಿ ವಾಪಸು ಪ್ರಹಸನದ ನಿಜಬಣ್ಣ ಲೋಕಕ್ಕೇ ಗೊತ್ತಾಗಿರುವುದರಿಂದ, ಆ ಸಂದರ್ಭದ ಮಾತುಗಳನ್ನು ಮತ್ತೆ ಕೆದಕುವುದು ಬೇಡ. ನಕಲು ಸಮ್ಮೇಳನದಲ್ಲಿ ಅವರು ಏನು ಹೇಳಿದರು ಎನ್ನುವುದನ್ನು ಮಾತ್ರ ಈ ಲೇಖನದ ಸೀಮಿತ ಚೌಕಟ್ಟಿಗೆ ಎತ್ತಿಕೊಂಡಿದ್ದೇನೆ.
**
ಇತ್ತೀಚೆಗೆ ರಾಮಾಯಣ, ಮಹಾಭಾರತಗಳ ಕಡೆ ನಮ್ಮ ಸಮಕಾಲೀನ ಲೇಖಕರು ಮತ್ತೆಮತ್ತೆ ಹೊರಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಚರ್ಚೆಯ ವಿಷಯವಾಗಿರುವುದರಿಂದ ದೇವನೂರ ಕೂಡ ಆ ಎರಡು ಗ್ರಂಥಗಳನ್ನು ಎತ್ತಿಕೊಂಡಿದ್ದಾರೆ. ಮಿದುಳಿಲ್ಲದ ಧ್ವನಿವರ್ಧಕದಂತೆ ತನ್ನನ್ನು ಬಿಂಬಿಸಿಕೊಂಡು ಪ್ರಚಾರ ಪಡೆದ ಭಗವಾನ್ಗಿಂತ ಭಿನ್ನ ಧಾಟಿಯಲ್ಲಿ ಮಾತಾಡಿದ್ದರಿಂದ ದೇವನೂರರ ಮಾತುಗಳು – ಒಪ್ಪುವ ಒಪ್ಪದಿರುವ ಪ್ರಶ್ನೆಗಿಂತ, ಕನಿಷ್ಠ ವಿಶ್ಲೇಷಣೆಗೊಳಪಡಿಸಲು ಅರ್ಹವಾಗಿವೆ. ದೇವನೂರ ಬಹುಶಃ ಮೂರು ಪೂರ್ವಗ್ರಹಗಳಿಂದ ತನ್ನ ಮಾತು-ಚಿಂತನೆಗಳನ್ನು ಶುರುಮಾಡುತ್ತಾರೆ ಎಂದು ಕಾಣುತ್ತದೆ. ಒಂದು – ಭಾರತದಲ್ಲಿ ಇಂದಿಗೂ ದೇವಸ್ಥಾನಗಳಿಗೆ ಪ್ರವೇಶ ಪಡೆಯುವುದೇ ದಲಿತರ ದೊಡ್ಡ ಸವಾಲಾಗಿದೆ. ಎರಡು – ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಹಲವು ಭಾಗಗಳು ಸರಿಯಿಲ್ಲ, ಮತ್ತು ಈ ಗ್ರಂಥಗಳೇ ಇಂದಿಗೂ ನಮ್ಮನ್ನು ಸಾಮಾಜಿಕವಾಗಿ ಬೌದ್ಧಿಕವಾಗಿ ಆಳುತ್ತಿವೆ. ಮೂರು – ಜಾತಿ ವರ್ಗ ಕಳೆದು ಎಲ್ಲವೂ ಸಮಾನವಾದರೆ ದೇಶದಲ್ಲಿ ಸರ್ವೋದಯವಾಗುತ್ತದೆ. ನಾನು ನನ್ನ ಸುತ್ತಲಿನ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನಷ್ಟೆ ಹಿನ್ನೆಲೆಯಾಗಿಟ್ಟುಕೊಂಡು ದೇವನೂರರ ಮಾತುಗಳ ವಿಶ್ಲೇಷಣೆ ನಡೆಸುವುದು ಸಾಧ್ಯ. ಹಾಗಾಗಿ ಮುಂದಿನ ಎಲ್ಲ ಮಾತುಗಳನ್ನು ಓದುಗರು ತಂತಮ್ಮ ಜಗತ್ತಿನ ಹಿನ್ನೆಲೆಯಲ್ಲಿಟ್ಟು ತಾಳೆ ನೋಡುವುದಕ್ಕೆ ಸ್ವತಂತ್ರರು.
ಮತ್ತಷ್ಟು ಓದು 
ಇಂಧನ ಸಮಸ್ಯೆಯ ಪರಿಹಾರಕ್ಕಾಗಿ ನಡೆಯುತ್ತಿರುವ ಸಂಶೋಧನೆಗಳ ಮತ್ತೊಂದು ಮುಖ…
– ಶ್ರೀವತ್ಸ ಭಟ್
ಒಮ್ಮೆ ಊಹಿಸಿಕೊಳ್ಳಿ ನಮ್ಮ ಮನೆಯ ಬಲ್ಬುಗಳು ವಿದ್ಯುತ್ತಿಲ್ಲದೆಯೇ ಉರಿಯತೊಡಗಿದರೆ,ಮನೆಯಂಗಳದಲ್ಲಿರುವ ಗಿಡಗಳು ಬೆಳಕನ್ನು ಹೊರಸೂಸತೊಡಗಿದರೆ ಹೇಗಿರುತ್ತದೆ ಅಲ್ಲವೇ..! ಹೌದು ಬಲ್ಬುಗಳೇ ಬೆಳಕನ್ನು ಉತ್ಪಾದಿಸಿ ಬೆಳಗುವ,ಸಸ್ಯಗಳು ಬೆಳಕನ್ನು ಸೂಸುವ ಅದ್ಭುತ ಸಂಶೋಧನೆಯೊಂದು ಬಹುತೇಕ ಯಶಸ್ಸಿನ ಹಂತದಲ್ಲಿದೆ.ನೀವು ಮಿಣುಕುಹುಳುಗಳನ್ನು ನೋಡಿರಬಹುದು. ಕತ್ತಲಿನಲ್ಲಿ ಬೆಳಕನ್ನು ಹೊರಸೂಸುತ್ತಾ ಹಾರುವ ಜೀವಜಗತ್ತಿನ ವಿಸ್ಮಯ ಜೀವಿಗಳು. ಹೀಗೆ ಜೀವಿಗಳು ಬೆಳಕನ್ನು ಹೊರಸೂಸುವ ಈ ಪ್ರಕ್ರಿಯೆಗೆ ಜೈವದೀಪ್ತತೆ ಎಂದು ಹೆಸರು.ಇಂಗ್ಲಿಷಿನಲ್ಲಿ ಇದಕ್ಕೆ Bio luminescence ಎಂದು ಕರೆಯುತ್ತಾರೆ.
ಜೈವದೀಪ್ತತೆ ಮನುಷ್ಯನ ಕುತೂಹಲ ಕೆರಳಿಸಿದ್ದು ಇವತ್ತು ನಿನ್ನೆಯ ವಿಷಯವಲ್ಲ. ಮೈಕೆಲೆಂಜಲೋ ಮೆರಿಜಿ (Michelangelo Merisi da Caravaggio) ಎಂಬ ಇಟಲಿಯ ಪ್ರಸಿದ್ಧ ಚಿತ್ರಕಾರನೊಬ್ಬ ಇದೇ ಹುಳುಗಳ ಒಣಗಿದ ಪುಡಿಯನ್ನು ಬಳಸಿಕೊಂಡು ತನ್ನ ಪೇಂಟಿಂಗ್ ಹೊಳೆಯುವಂತೆ ಮಾಡುತ್ತಿದ್ದನಂತೆ. ಇಂತಹ ಬಹುತೇಕ ಜೀವಿಗಳು ಕಾಣಸಿಗುವುದು ಸಮುದ್ರದಲ್ಲಿ. ವಿಶ್ವವಿಖ್ಯಾತ ಜೀವಶಾಸ್ತ್ರಜ್ಞ ಚಾರ್ಲ್ಸ್ ಡಾರ್ವಿನ್ ತನ್ನ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾನೆ…“ ವಿಶಾಲ ಸಾಗರದಲ್ಲಿ ಪಯಣಿಸುತ್ತಿದ್ದೆ, ರಾತ್ರಿಯ ಸಮಯವದು, ತಂಪಾದ ಗಾಳಿ ಬೀಸುತ್ತಿತ್ತು, ಹಗಲಿನಲ್ಲಿ ಸಮುದ್ರದ ಮೇಲೆ ನೊರೆಯಂತೆ ಕಾಣುತ್ತಿದ್ದ ವಸ್ತುಗಳು ರಾತ್ರಿಯ ಸಮಯದಲ್ಲಿ ಹೊಳೆಯುತ್ತಿದ್ದವು.”
ವೈಚಾರಿಕತೆ, ನಾಸ್ತಿಕತೆ ಮತ್ತು ಬುದ್ಧಿಜೀವಿಗಳ ದುರಂತ ಕತೆ
– ರೋಹಿತ್ ಚಕ್ರತೀರ್ಥ
“ನಾವು ವಿಚಾರವಾದಿಗಳಾಗಿ ನಾಸ್ತಿಕರಾಗೋಣ” ಎಂಬ ಮಾತನ್ನು ಒಬ್ಬ ಲೇಖಕ ಇತ್ತೀಚೆಗೆ ಬುದ್ಧಿಜೀವಿಗಳೆ ತುಂಬಿದ್ದ ಸಾಹಿತ್ಯ ಸಮ್ಮೇಳನವೊಂದರಲ್ಲಿ ಹೇಳಿದರಂತೆ. ಬಹುಶಃ ಅವರು ಪ್ರತಿಯೊಬ್ಬ ವಿಚಾರವಾದಿಯೂ ನಾಸ್ತಿಕನಾಗಿರಲೇಬೇಕು ಎಂಬ ಅರ್ಥದಲ್ಲಿ ಆ ಮಾತನ್ನು ಹೇಳಿರಬಹುದು. ಈ ಮಾತಿನ ಒಳಗಿಳಿಯಲು, ಮೊದಲು, ನಾವು “ವಿಚಾರವಾದ” ಅಂದರೆ ಏನು ಎನ್ನುವುದನ್ನು ನೋಡಬೇಕಾಗಿದೆ.
ವಿಚಾರವಾದಕ್ಕೆ ಕನ್ನಡದಲ್ಲಿರುವ ಅರ್ಥ: ವಿಚಾರ ಮಾಡುವ ಶಕ್ತಿ; ಚಿಂತನೆಯ ಶಕ್ತಿ ಎಂದು. ಇನ್ನೂ ಮುಂದುವರಿದು ತಾತ್ವಿಕ ದೃಷ್ಟಿ ಎಂದೂ ಹೇಳಬಹುದು. ಇಂಗ್ಲೀಷಿನಲ್ಲಿ Intellectual attitude, Ideological stance ಎಂದೆಲ್ಲ ಹೇಳುತ್ತಾರೆ. ಅಂದರೆ ಯಾವುದೇ ವಿಷಯವನ್ನು ಸರಿಯಾಗಿ ಗ್ರಹಿಸಿ, ಅದರ ಅಂತರಾರ್ಥವನ್ನು ಅರಿತು ಅದರಂತೆ ನಡೆಯುವವರು ವೈಚಾರಿಕತೆ ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದು. ವಿಚಾರವಾದ ಅಥವಾ ವೈಚಾರಿಕತೆ ಎಂಬುದಕ್ಕೆ ಸಂವಾದಿಯಾಗಿ ಇಂಗ್ಲೀಷಿನಲ್ಲಿ ಬಳಕೆಯಾಗುವ “Intellectualism” ಎಂಬುದಕ್ಕೆ ಇರುವ ಅರ್ಥ: The exercise of the intellect at the expense of the emotions. ಅಂದರೆ, ಒಂದು ವಿಷಯವನ್ನು ಸರಿಯಾಗಿ ಗ್ರಹಿಸಲು ಹೋಗುವಾಗ ಅದಕ್ಕೆ ಸುತ್ತಿಕೊಂಡಿರುವ ಭಾವನಾತ್ಮಕ ಅಂಶಗಳನ್ನೆಲ್ಲ ಬದಿಗಿಟ್ಟು ಸತ್ಯವನ್ನಷ್ಟೇ ಎತ್ತಿ ಹಿಡಿಯುವುದು ಎಂದು ಅರ್ಥ. ಮಗ ಕಳ್ಳತನ ಮಾಡಿದ್ದಾನೆ. ಅದು ತಾಯಿಗೂ ಗೊತ್ತಿದೆ. ಆತನನ್ನು ಸೆರೆಮನೆಗೆ ಹಾಕಿದರೆ ತಾಯಿ ಅನಾಥೆಯಾಗುತ್ತಾಳೆ; ಆದರೆ ಆತನನ್ನು ಶಿಕ್ಷಿಸದೆ ಬಿಟ್ಟರೆ ದೇಶದ ಕಾನೂನಿಗೆ ಅಪಚಾರ. ಅಲ್ಲದೆ ಇದೇ ಉದಾಹರಣೆಯನ್ನು ನೋಡಿ ನೂರಾರು ಜನ ಕಳ್ಳತನಕ್ಕೆ ಇಳಿಯಬಹುದು. ಹಾಗಾಗಿ, ತಾಯಿಯ ಕಣ್ಣೀರನ್ನು ಕಷ್ಟಪಟ್ಟು ಅಲಕ್ಷಿಸಿ ಮಗನಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು ಕಾನೂನನ್ನು ಎತ್ತಿಹಿಡಿಯುವುದು ಇಂಟಲೆಕ್ಚುಲಿಸಮ್ ಅಥವಾ ವೈಚಾರಿಕತೆಯ ಒಂದು ಮುಖ.
ವೈಚಾರಿಕತೆ – ಈಗೇನೋ ಬಹಳ ಪರಿಚಿತವಾದ ಭಾರತೀಯ ಶಬ್ದ ಅನ್ನಿಸಿದರೂ ಅದರ ಉಗಮವಾದದ್ದು ಭಾರತದಲ್ಲಲ್ಲ. ಇದು ಮಧ್ಯ ಯುರೋಪಿನಲ್ಲಿ ಸುಮಾರು ಹದಿನಾರನೇ ಶತಮಾನದಲ್ಲಿ ಹುಟ್ಟಿದ ಪದ ಮತ್ತು ಪರಿಕಲ್ಪನೆ. ಇದರ ಹುಟ್ಟಿನ ಹಿನ್ನೆಲೆ ತಿಳಿಯಲು ನಾವು ಸ್ವಲ್ಪ ಹಿಂದೆ ಹೋಗಬೇಕಾಗುತ್ತದೆ. ಕ್ರಿಸ್ತ ಹುಟ್ಟಿ ಒಂದೂವರೆ ಸಾವಿರ ವರ್ಷಗಳಾದರೂ ಯುರೋಪಿಯನ್ನರು ಬೈಬಲ್ಲಿನ ಭಾಗಗಳನ್ನು ಪ್ರಶ್ನೆ ಮಾಡಲು ಹೋಗಿರಲಿಲ್ಲ. ಚರ್ಚು ಅತ್ಯಂತ ಪ್ರಬಲವಾಗಿದ್ದ ವ್ಯವಸ್ಥೆ. ಅದನ್ನು ಎದುರುಹಾಕಿಕೊಳ್ಳುವವರಿಗೆ ಸಿಗುತ್ತಿದ್ದ ಪ್ರತಿಫಲ ಮರಣ. ಬೈಬಲ್ಲಿನ ವಿರುದ್ಧ ಮಾತಾಡಿದವರನ್ನು ಒಂದೋ ಜೀವಮಾನವೆಲ್ಲ ಸೆರೆಯಲ್ಲಿ ಹಾಕಿ ಭೀಕರ ಶಿಕ್ಷೆಗಳನ್ನು ಕೊಡಲಾಗುತ್ತಿತ್ತು ಇಲ್ಲವೇ ಹಲವು ಹತ್ಯಾರಗಳ ಮೂಲಕ ದೇಹವನ್ನು ಹಾಯಿಸಿ ಕೊಲ್ಲಲಾಗುತ್ತಿತ್ತು. ಪ್ರಭುತ್ವ ಯಾವತ್ತೂ ತನ್ನ ವಿರುದ್ಧ ಮಾತಾಡುವವನನ್ನು ಬದುಕಗೊಡುವುದಿಲ್ಲ ಅಥವಾ ಆತನನ್ನು ಸಂಪೂರ್ಣವಾಗಿ ಅಲಕ್ಷಿಸಿ ಕೊನೆಗೆ ತಾನಾಗಿ ಆತ ಬಾಯಿಮುಚ್ಚಿಕೊಂಡು ಸುಮ್ಮನಾಗುವಂತೆ ಮಾಡುತ್ತದೆ. ಗ್ರೀಸ್, ರೋಮ್ ನಾಗರಿಕತೆಗಳಲ್ಲಿ ಆ ಕಾಲದಲ್ಲಿ ರಾಜರಾಗಿದ್ದವರು, ಜೊತೆಗೆ ಅವರ ಆಸ್ಥಾನ ಪಂಡಿತರಾಗಿದ್ದವರು ಜನ ನಂಬಬೇಕಾದ ಮಾತುಗಳನ್ನು ಹೇಳುತ್ತಿದ್ದರು, ಬರೆದಿಡುತ್ತಿದ್ದರು. ಅವುಗಳು ಸರಿಯಿಲ್ಲ; ಸುಳ್ಳಿನ ಕಂತೆ ಎಂದವರನ್ನು ಅಲಕ್ಷಿಸಿ ದೂರಕ್ಕೆಸೆಯುತ್ತಿದ್ದರು. ಹಾಗಾಗಿ ಸೂರ್ಯ ಭೂಮಿಗೆ ಸುತ್ತು ಬರುತ್ತಾನೆ ಎಂದು ಹೇಳಿದ ಟಾಲೆಮಿ, ಅರಿಸ್ಟಾಟಲ್ ಮೊದಲಾದವರ ತಪ್ಪು ಚಿಂತನೆಗಳು ನೂರಾರು ವರ್ಷಗಳ ಕಾಲ ನಿಂತವು. ಟಾಲೆಮಿ ರಾಜನಾಗಿದ್ದ, ಅರಿಸ್ಟಾಟಲ್ ಅಸ್ಥಾನ ಪಂಡಿತನಾಗಿದ್ದ ಎನ್ನುವುದೇ ಇದಕ್ಕೆ ಕಾರಣ. ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಂದು ಅವರ ಕಾಲದಲ್ಲಿ ಹೇಳಿದ ಅರಿಸ್ಟಾರ್ಕಸ್ನ ದನಿ ಪ್ರಭುತ್ವದ ಧ್ವನಿವರ್ಧಕದ ಕೆಳಗೆ ಉಡುಗಿಯೇ ಹೋಯಿತು.
ಮತ್ತಷ್ಟು ಓದು 
ಮತ್ತೆ ಮತ್ತೆ ಹೆಮ್ಮಿಂಗ್ವೆ…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಹತ್ತಾರು ಎತ್ತಿನಬಂಡಿಗಳು,ಲಾರಿಗಳು ಓಡಾಡುತ್ತಿದ್ದ ಸೇತುವೆಯ ತುದಿಯಲ್ಲಿ ಆ ವೃದ್ಧ ಕುಳಿತಿದ್ದ.ತೀರ ಕೊಳಕಾದ ಉಡುಪುಗಳನ್ನು ತೊಟ್ಟಿದ್ದ ಆತ ಸಾಧಾರಣ ಗುಣಮಟ್ಟದ ಚಾಳೀಸೊಂದನ್ನು ಧರಿಸಿದ್ದ. ಸೇತುವೆಯ ಒಂದು ತುದಿಯಲ್ಲಿ ಮಣಭಾರದ ಮೂಟೆಗಳನ್ನು ಹೊತ್ತು ನಡೆಯಲಾಗದೇ ನಿಂತಿದ್ದ ಹೇಸರಗತ್ತೆಗಳನ್ನು ಸೈನಿಕರು ಕಷ್ಟಪಟ್ಟು ಮುಂದೆ ತಳ್ಳುತ್ತಿದ್ದರು.ಹೆಂಗಸರು ತಮ್ಮ ಮಕ್ಕಳೊಂದಿಗೆ ಸಂಕವನ್ನು ಅವಸರದಲ್ಲಿ ದಾಟಿಕೊಂಡು ಮತ್ತೊಂದು ತುದಿಯನ್ನು ತಲುಪಿಕೊಳ್ಳುವ ಧಾವಂತದಲ್ಲಿದ್ದರೂ ಮುದುಕ ಮಾತ್ರ ಸುಮ್ಮನೇ ಕುಳಿತುಕೊಂಡಿದ್ದ.ಮೈಲುಗಟ್ಟಲೆ ನಡೆದು ಬಂದ ಆತನ ಮುಖದಲ್ಲಿ ಸುಸ್ತು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆತ ಅದಾಗಲೇ ಸೇತುವೆಯನ್ನು ದಾಟಿ ಬಂದಿದ್ದರಿಂದಲೋ ಏನೋ, ಮುಂದೆ ನಡೆಯಲಾರೆನೆನ್ನುವ ಭಾವ ಆತನ ನಿತ್ರಾಣಗೊಂಡ ಮೊಗದಲ್ಲಿ ಕಾಣಿಸುತ್ತಿತ್ತು.ಸೇತುವೆಯ ಮತ್ತೊಂದು ತುದಿಯನ್ನು ದಾಟಿ ಶತ್ರುಗಳ ಚಲನವಲನವನ್ನು ಗಮನಿಸುವ ಜವಾಬ್ದಾರಿ ನನ್ನ ಮೇಲಿತ್ತು.ನಾನು ಸೇತುವೆಯನ್ನೊಮ್ಮೆ ದಾಟಿ ಎಚ್ಚರಿಕೆಯಿಂದ ಅಲ್ಲಿನ ಪರಿಸರವನ್ನು ಗಮನಿಸಿದೆ.ಶತ್ರುಗಳ ಭಯದಿಂದ ಸೇತುವೆಯನ್ನು ದಾಟಿ ಸುರಕ್ಷಿತ ತಾಣವನ್ನು ಸೇರಿಕೊಳ್ಳಲು ನಡೆದುಬರುತ್ತಿದ್ದ ಜನರ ಸಂಖ್ಯೆಯೂ ವಿರಳವಾಗತೊಡಗಿತ್ತು. ಹೆಚ್ಚಿನವರು ಸೇತುವೆಯ ಸುರಕ್ಷಿತ ಪಕ್ಕವನ್ನು ಸೇರಿಕೊಂಡಾಗಿತ್ತು.ಶತ್ರುಗಳು ತೀರ ಸೇತುವೆಯನ್ನು ಸಮೀಪಿಸಿಲ್ಲವೆನ್ನುವದು ಖಚಿತಪಡಿಸಿಕೊಂಡು ನಾನು ಹಿಂತಿರುಗಿ ಬಂದ ನಂತರವೂ ವೃದ್ಧ ಸೇತುವೆಯ ಪಕ್ಕದಲ್ಲಿಯೇ ಕುಳಿತಿದ್ದ.
“ನಿನ್ನ ಊರಾವುದು ತಾತ..”? ಎಂದು ನಾನು ಆ ವೃದ್ಧನನ್ನು ಕೇಳಿದೆ.”ಸಾನ್ ಕಾರ್ಲೋಸ್” ಎಂದ ವೃದ್ಧನ ಮುಖದಲ್ಲಿ ಸಣ್ಣದೊಂದು ಔಪಚಾರಿಕ ಮಂದಹಾಸ.ನಾನು ಕೇಳದಿದ್ದರೂ”ಅಲ್ಲಿ ನಾನು ಕೆಲವು ಸಾಕುಪ್ರಾಣಿಗಳ ಮೇಲ್ಚಿಚಾರಕನಾಗಿ ಕೆಲಸ ಮಾಡುತ್ತಿದ್ದೆ”ಎಂದು ನುಡಿದನಾತ.”ಹೌದಾ..”ಎನ್ನುವ ಉದ್ಗಾರವೊಂದು ನನ್ನ ಬಾಯಿಂದ ಹೊರಬಿದ್ದದ್ದೇನೋ ನಿಜ.ಆದರೆ ಪ್ರಾಣಿಗಳ ಮೇಲ್ವಿಚಾರಣೆ ಎನ್ನುವ ಆತನ ಮಾತುಗಳು ನನಗೆ ಅರ್ಥವಾಗಲಿಲ್ಲ.”ಮ್ಮ್,ನಾನು ಕೆಲವು ಪ್ರಾಣಿಗಳನ್ನು ಸಾಕಿಕೊಂಡು ಜೀವನವನ್ನು ನಡೆಸುತ್ತಿದ್ದೆ.ಯುದ್ಧ ಭೀತಿಗೆ ನನ್ನೂರಿನ ಹೆಚ್ಚಿನ ಜನ ಊರನ್ನು ತೊರೆದು ಸೇತುವೆಯನ್ನು ದಾಟಿ ಬಂದುಬಿಟ್ಟರು,ಕದನಭಯದ ನಡುವೆಯೂ ಹುಟ್ಟೂರಿನೆಡೆಗಿನ ನನ್ನ ಭಾವುಕತೆ ನನ್ನನ್ನು ಇಷ್ಟು ದಿನ ಅಲ್ಲಿಯೇ ಉಳಿದುಕೊಳ್ಳುವಂತೆ ಮಾಡಿತ್ತು,ಸಾನ್ ಕಾರ್ಲೋಸ್ ಬಿಟ್ಟ ಕೊನೆಯ ಕೆಲವು ನಾಗರಿಕರಲ್ಲಿ ನಾನೂ ಒಬ್ಬ”ಎನ್ನುತ್ತ ಮಾತು ಮುಂದುವರೆಸಿದ ವೃದ್ಧ.
ಮತ್ತಷ್ಟು ಓದು 
ಭಾರತದಲ್ಲಿ ಯಾವ ರೀತಿಯ ಅಸಹಿಷ್ಣುತೆ ಬೆಳೆಯುತ್ತಿದೆ?
ಮೂಲ: ಪ್ರೊ. ಎಸ್.ಎನ್ ಬಾಲಗಂಗಾಧರ
ಕನ್ನಡಕ್ಕೆ : ಇಂಚರ
ಇತ್ತೀಚೆಗೆ ಭಾರತದ ಸಾಮಾಜಿಕ ವಾತಾವರಣದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂಬ ಧ್ವನಿ ಭಾರತದ ಹಲವು ಕಡೆಗಳಿಂದ ಜೋರಾಗಿ ಕೇಳಿಬರುತ್ತಿವೆ. ಪಾಶ್ಚಾತ್ಯ ಮಾಧ್ಯಮಗಳು ಈ ಕೀರಲು ಕೂಗುಗಳನ್ನೇ ಹಿಗ್ಗಿಸಿ, ಬೂದುಗಾಜಿನಿಂದ ನೋಡುತ್ತಿರುವುದೂ ಅಲ್ಲದೆ, ಪ್ರಧಾನಿ ಮೋದಿಯವರ ಬ್ರಿಟನ್ ಭೇಟಿಯ ವಿಚಾರವನ್ನು ಕೂಡ ಇದೇ ನೆಲೆಗಟ್ಟಿನಲ್ಲಿ ವ್ಯಂಗ್ಯ ಮಾಡಲು ಬಳಸುತ್ತಿವೆ. ಭಾರತೀಯರ ಈ ಅಸಹಿಷ್ಣುತೆಯ ಮಂತ್ರವನ್ನು ಒಂದು ಪಕ್ಷ ಅರ್ಥ ಮಾಡಿಕೊಂಡರೂ, ಯುರೋಪಿಯನ್ನರು ಏಕೆ ಇದೇ ಮಂತ್ರವನ್ನು ಪುನರುಚ್ಛರಿಸುತ್ತಿದ್ದಾರೆ? ಎಂಬದನ್ನು ಯೋಚಿಸಬೇಕು. ಈ ಘಟನೆಯನ್ನು ಅವಲೋಕಿಸಿದಾಗ, ಇಲ್ಲಿ ಕಾಡುತ್ತಿರುವ ಅಸಹಿಷ್ಣುತೆಯ ಕುರಿತು ಇರುವ ಅಸ್ಪಷ್ಟತೆ! ಇವೆಲ್ಲವೂ ಒಂದು ಒಗಟಿನ ಹಾಗೆಯೇ ಕಾಣುತ್ತದೆ.
ಬಹುಶಃ ಇಲ್ಲಿ ನಡೆದಿರುವ ಕೆಲವಾರು ಕೊಲೆಗಳ ಕುರಿತು ಪ್ರತಿಭಟಿಸಲು ಅಸಹಿಷ್ಣುತೆಯ ಕೂಗನ್ನು ಒಂದಷ್ಟು ಜನರು ಎಬ್ಬಿಸಿರಬಹುದು. ಹಾಗೆಯೇ ಒಂದಷ್ಟು ಜನರ ಕೊಲೆಗಳಾಗಲು, ಆ ವ್ಯಕ್ತಿಗಳು ಒಂದಷ್ಟು ಜನರ ಅಸಹಿಷ್ಣುತೆಗೆ ಗುರಿಯಾಗಿದ್ದದು ಕೂಡ ಕಾರಣವಿರಬಹುದು. ಆದರೆ ಜನರು ಮಾತ್ರ ಭಾರತದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ಪ್ರತಿಭಟಿಸುತ್ತಿಲ್ಲವೆಂಬುದು ಹಾಗೂ ಭಾರತ ಇಂತಹ ಅಪರಾಧಗಳಲ್ಲಿ ಪ್ರಪಂಚದಲ್ಲಿ ಮುಂಚೂಣಿಯಲ್ಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ ಸಂಗತಿ.
ನಿರ್ದಿಷ್ಟ ವ್ಯಕ್ತಿಗಳ ಕೊಲೆಗಳಾದಾಗ ಮಾತ್ರ ದೇಶದಲ್ಲಿ ಅಸಹಿಷ್ಟುತೆ ಹೆಚ್ಚುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಉದಾ: ಕಲ್ಬುರ್ಗಿ ಅವರ ಕೊಲೆ ಈ ಅಸಹಿಷ್ಟುತೆಯ ಕೂಗನ್ನು ಹುಟ್ಟುಹಾಕಿತು. ಆದರೆ ಕಲ್ಬುರ್ಗಿಯವರು ಕೂಡ ಅನೇಕ ವಿಷಯಗಳಲ್ಲಿ ಅಸಹಿಷ್ಣುತೆ ಹೊಂದಿದ್ದವರು. ಸೆಮೆಟಿಕ್ ಥಿಯಾಲಜಿ ಪ್ರಕಾರ ಮೂರ್ತಿ ಪೂಜೆ ಎಂಬ ಪದದ ಅರ್ಥವನ್ನು ತಿಳಿದುಕೊಳ್ಳದೆ ಅಥವಾ ಅದು ಪಾಪ ಹೇಗೆ? ಎಂಬುದನ್ನುಅರ್ಥ ಮಾಡಿಕೊಳ್ಳದೆಯೇ ಮೂರ್ತಿ ಪೂಜೆಯ ವಿರುದ್ಧ ಭಾರತದ ಅನೇಕ ಬುದ್ಧಿಜೀವಿಗಳಿಗಿರುವ ಅಸಹಿಷ್ಣುತೆ / ಪೂರ್ವಗ್ರಹ ಕಲ್ಬುರ್ಗಿಯವರಿಗೂ ಇತ್ತು. ಅವರ ಸಿದ್ದಾಂತಗಳಿಗಿಂತ ಭಿನ್ನವಾದ ಸಿದ್ದಾಂತಗಳನ್ನು ಒಪ್ಪದಿರುವಷ್ಟು ಅಸಹಿಷ್ಣುತೆ / ಅಸಹನೆ ಅವರಲ್ಲಿತ್ತು. ಅವರಂತಹುದೇ ಮನಸ್ಥಿತಿಯುಳ್ಳ ಒಂದಷ್ಟು ಜನರನ್ನೊಳಗೊಂಡ ತಂಡದ ಮುಂದಾಳತ್ವ ವಹಿಸಿ ಕಲ್ಬುರ್ಗಿಯವರು, ಕನ್ನಡ ದಿನಪತ್ರಿಕೆಯ ಮಾಲೀಕರನ್ನು ಭೇಟಿ ಮಾಡಿ ಅದರಲ್ಲಿ ಬರುತ್ತಿದ್ದ ಅಂಕಣವನ್ನು ನಿಲ್ಲಿಸಿದ್ದರು!
ಬೌದ್ಧಿಕ ಅಸಹಿಷ್ಣು ಪಾಕಿಸ್ತಾನ ಕರ್ನಾಟಕಕ್ಕಿಂತ ವಾಸಿ!
– ಪ್ರೇಮಶೇಖರ
ಎರಡು ವರ್ಷಗಳ ಹಿಂದೆ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ (ಸಿಎಸ್ಎಲ್ಸಿ) ವಚನಸಾಹಿತ್ಯದ ಬಗ್ಗೆ ಇದುವರೆಗೂ ಪೋಷಿಸಿಕೊಂಡು ಬಂದಿರುವ ತಪ್ಪುಕಲ್ಪನೆಗಳನ್ನು ದೂರಮಾಡಲು ನಿಖರ ಸಂಶೋಧನೆಯ ಮಾರ್ಗ ಹಿಡಿದಾಗ ಕಂಗೆಟ್ಟ ನಮ್ಮ ಪಟ್ಟಭದ್ರ ವಿಚಾರವಾದಿಗಳು ಸಂಸ್ಥೆಯ ವಿರುದ್ಧ ವೈಚಾರಿಕ ಗೂಂಡಾಗಿರಿ ನಡೆಸಿದ್ದು, ಅವರ ಉಗ್ರ ಬೌದ್ಧಿಕ ಅಸಹಿಷ್ಣುತೆಗೆ ಪ್ರಮುಖ ಕನ್ನಡ ದೈನಿಕವೊಂದು ವೇದಿಕೆಯಾಗಿ ಪತ್ರಿಕಾಧರ್ಮವನ್ನು ಗಾಳಿಗೆ ತೂರಿದ್ದು, ಕೊನೆಗೆ ಇವರೆಲ್ಲರ ಪಿತೂರಿಯಿಂದ ರಾಜ್ಯದ ಪರಮ ಸೆಕ್ಯೂಲರ್ ಕಾಂಗ್ರೆಸ್ ಸರ್ಕಾರ ಸಂಶೋಧನಾ ಕೇಂದ್ರವನ್ನು ಮುಚ್ಚಿದ್ದು ನೆನಪಿದೆಯೇ? ಇದಕ್ಕಿಂತ ಸ್ವಲ್ಪ ಕಡಿಮೆ ಅಸಹ್ಯಕರ ಹಾಗೂ ಪ್ರತಿಗಾಮಿ ಘಟನೆ ಇದೇ ಡಿಸೆಂಬರ್ 3ರಂದು ಪಾಕಿಸ್ತಾನದಲ್ಲಿ ಘಟಿಸಿದೆ. ಅಂದು ಇಸ್ಲಾಮಾಬಾದ್ನ ಕಾಯದ್- ಎಫ್ ಆಜಂ ವಿಶ್ವವಿದ್ಯಾಲಯದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹಿಸ್ಟಾರಿಕಲ್ ಆಂಡ್ ಕಲ್ಚರಲ್ ರೀಸರ್ಚ್ (ಎನ್ಐಎಚ್ಸಿಆರ್) ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸಯೀದ್ ವಖಾರ್ ಅಲಿ ಶಾ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಯಿತು.
ಅವರು ಮಾಡಿದ ಅಪರಾಧ ಇಷ್ಟೇ- ನವೆಂಬರ್ 25ರಂದು ಸಿಂಧ್ ಪ್ರಾಂತ್ಯದ ಖಾಯರ್ಪುರ್ನಲ್ಲಿರುವ ಶಾ ಅಬ್ದುಲ್ ಲತೀಫ್ ವಿಶ್ವವಿದ್ಯಾಲಯ ಮತ್ತು ಎನ್ಐಎಚ್ಸಿಆರ್ ಜಂಟಿಯಾಗಿ ‘ಸಿಂಧ್: ಇತಿಹಾಸ ಮತ್ತು ಸಂಸ್ಕೃತಿ’ ಎಂಬ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ವಿಚಾರಸಂಕಿರಣವೊಂದನ್ನು ಆಯೋಜಿಸಿದವು. ಅಲ್ಲಿ ತಮ್ಮ ಪ್ರಬಂಧ ಮಂಡಿಸುತ್ತ ಪ್ರೊ. ಶಾ, ಪಾಕಿಸ್ತಾನದ ಅಧಿಕೃತ ಇತಿಹಾಸದಲ್ಲಿ ದಾಖಲಾಗಿಲ್ಲದ ಹಲವು ಹೆಸರುಗಳನ್ನು ಪ್ರಸ್ತಾಪಿಸಿದರು. ಭಗತ್ ಸಿಂಗ್ರಂತಹ ಸ್ವಾತಂತ್ರ್ಯ ಹೋರಾಟಗಾರರು, ಜಿ. ಎಂ. ಸಯೀದ್, ಬಚ್ಚಾ ಖಾನ್, ವಲೀ ಖಾನ್ ಮುಂತಾದ ಸ್ವಾತಂತ್ಯ್ರೋತ್ತರ ಪಾಕಿಸ್ತಾನದ ಪ್ರಾಂತೀಯ ನಾಯಕರೂ ಪಾಕಿಸ್ತಾನದ ಇತಿಹಾಸದ ಪುಸ್ತಕಗಳಲ್ಲಿ ಸ್ಥಾನ ಪಡೆಯಬೇಕು ಎಂದು ವಾದಿಸಿದರು. ಅವರ ಮಾತುಗಳು ಪಠ್ಯಕ್ರಮಗಳ ಮೇಲೆ ನಿಗಾ ವಹಿಸುವುದಕ್ಕೆಂದೇ ಇರುವ ಸರ್ಕಾರದ ಉನ್ನತ ಶಿಕ್ಷಣ ಆಯೋಗದ ಕೆಂಗಣ್ಣಿಗೆ ಗುರಿಯಾದವು.
ಅಜ್ಜನ ಮಾವಿನ ಮರ!
– ಮುರಳೀ ಮೋಹನ
ನಾನು ಚಿಕ್ಕವನಿದ್ದಾಗ ನಮ್ಮ ಮನೆಯ ಮುಂದೊಂದು ಬೃಹತ್ತಾದ ಮಾವಿನ ಮರವಿತ್ತು. ಕೇವಲ ಗಾತ್ರದಲ್ಲಷ್ಟೇ ಅಲ್ಲ ಪಾತ್ರದಲ್ಲೂ ಅದು ಬೃಹತ್ತಾದುದೇ. ಕಬಂಧ ಬಾಹುಗಳಂತೆ ಅದರ ಹತ್ತಾರು ರೆಂಬೆ ಕೊಂಬೆಗಳು ಸುತ್ತಲೂ ಹರಡಿದ್ದವು. ಆ ಮರದ ಅಡಿಯಲ್ಲಿನ ಒಂದು ಭಾಗದ ಸಮತಟ್ಟಾದ ನೆಲವೇ ನಮ್ಮ ಆಟದ ಮೈದಾನವಾಗಿತ್ತು. ಮಟಮಟ ಮಧ್ಯಾಹ್ನದಲ್ಲೂ ಸೂರ್ಯಕಿರಣಗಳು ಅಲ್ಲಿ ನೆಲಕ್ಕೆ ತಾಕುತ್ತಿರಲಿಲ್ಲ. ಬಿರುಬೇಸಿಗೆಯಲ್ಲೂ ತಂಪಾದ ಗಾಳಿಗೆ ಕೊರತೆಯಿರಲಿಲ್ಲ. ಚಿನ್ನಿ-ದಾಂಡು, ಲಗೋರಿ, ಕ್ರಿಕೆಟ್ ಹೀಗೆ ಎಲ್ಲ ಆಟಗಳಿಗೂ ಆಶ್ರಯ ನೀಡಿದ್ದಿದ್ದು ಆ ಮರದ ನೆರಳು. ದೊಡ್ಡವರಿಗೆ ಹೇಳಿ ಹಗ್ಗ ಕಟ್ಟಿಸಿಕೊಂಡು ದಿನಗಟ್ಟಲೆ ನಾವು ಜೋಕಾಲಿ ಆಡುತ್ತಿದ್ದುದೂ ಅಲ್ಲೇ.
ನಮಗೆ, ಮಕ್ಕಳಿಗೆ ಮಾತ್ರ ಅಂತಲ್ಲ, ಆ ಮರದ ಮೇಲೆ ಆಶ್ರಯ ಪಡೆದ ಹಕ್ಕಿಗಳೆಷ್ಟೊ! ಅದೂ ಹತ್ತಾರು ಜಾತಿಯ, ಹತ್ತಾರು ಬಣ್ಣದ, ಬಾಗು ಕೊಕ್ಕಿನ, ಉದ್ದ ಬಾಲದ, ಬಣ್ಣಬಣ್ಣದ ಗರಿಗಳ ಜುಟ್ಟಿನ ಹಕ್ಕಿಗಳಿಂದ ಹಿಡಿದು ಕಪ್ಪುಕಾಗೆಯವರೆಗೆ ಎಲ್ಲವಕ್ಕೂ ಆ ಮರವೇ ಆಶ್ರಯತಾಣ. ಅವುಗಳ ಕೂಗು, ಚಿಲಿಪಿಲಿ ನೆನಪಿಸಿಕೊಂಡಾಗಲೆಲ್ಲ ಈಗಲೂ ಕಿವಿಗಳಲ್ಲಿ ಅನುರಣಿಸುತ್ತದೆ. ಮಾವಿನ ಮರ ಚಿಗುರತೊಡಗಿದಾಗಲಂತೂ ನಿತ್ಯ ಬೆಳ್ಳಂಬೆಳಗ್ಗೆಯೇ ಕೋಗಿಲೆಗಳ ದಿಬ್ಬಣ; ಇನ್ನು ಕಾಯಿ ಬಲಿತು, ಹಸಿರು ಹಳದಿಯಾಗಿ ಮಾವು ಹಣ್ಣಾಗುವ ಸಮಯಕ್ಕಂತೂ ದಿನವಿಡೀ ಕೆಂಪು ಕೊಕ್ಕಿನ, ಹಳದಿ ಕೊಕ್ಕಿನ ಗಿಣಿಗಳದೇ ಸಾಮ್ರಾಜ್ಯ.ನಮಗೋ ಅವುಗಳನ್ನು ನೊಡುತ್ತಿದ್ದರೆ ದಿನವೂ ಕಾಡುತ್ತಿದ್ದುದು ಒಂದೇ ಡೌಟು: ಮಾವಿನ ಹಣ್ಣು ತಿಂದಿದ್ದರಿಂದಲೇ ಆ ಗಿಳಿಗಳ ಕೊಕ್ಕು ಹಳದಿಯೂ ಕೆಂಪೂ ಆಗಿದ್ದಿರಬೇಕು! ಎಂದು.




