ಕನ್ನಡ ಸಾರಸ್ವತ ಲೋಕಕ್ಕೊಂದು ಹೊಸ ಓದು
ಶ್ರೀಪಾದ್ ಭಟ್
ಈಗ ಲೇಖಕರಾದ, ಬ್ಲಾಗರ್ ಆದ ಮಿತ್ರ ರಾಕೇಶ ಶೆಟ್ಟರು ಹೊಸ ಓದನ್ನು ಕೊಟ್ಟಿದ್ದಾರೆ. ಕೃತಿಯ ಹೆಸರು’ ಮುಚ್ಚಿಟ್ಟ ಕರ್ನಾಟಕದ ಚರಿತ್ರೆ’. ಯಾಕೆ ಇದು ಹೊಸ ಓದು ಅಂದರೆ – ಇದು ಇತಿಹಾಸದ ಹೊಸ ಓದು. ಇದುವರೆಗೆ ಶಾಲೆ ಕಲಿತ ನಾವು ಯಾರೂ ಕೇಳಿರದ ಇತಿಹಾಸದ ಸಂಗತಿಗಳು ಇರುವುದರಿಂದ.
ನಮ್ಮಲ್ಲಿನ ಅಂದರೆ ನಮ್ಮ ದೇಶದ ಸಮಸ್ಯೆ ಇರುವುದೇ ಇಲ್ಲಿ- ಇತಿಹಾಸದಲ್ಲಿ. ನಮ್ಮ ದೇಶಕ್ಕೆ ಆಧುನಿಕ ಇತಿಹಾಸ ಅಥವಾ ಚರಿತ್ರೆ ಕೊಟ್ಟವರು ಬ್ರಿಟಿಷರು. ಅದನ್ನು ಹೇಗೆ ನೋಡಬೇಕು, ಯಾವುದು ಇತಿಹಾಸ ಅನಿಸಿಕೊಳ್ಳುತ್ತದೆ. ಅದಕ್ಕೆ ಆಧಾರಗಳು ಯಾವುವು ಎಂಬುದನ್ನೂ ತಿಳಿಸಿದವರೂ ಅವರೇ. ಅದನ್ನೇ ನಾವು ಉರು ಹೊಡೆದು ಮುಂದುವರೆಸಿಕೊಂಡು ಶಿರಸಾವಹಿಸಿ ಪಾಲಿಸಿಕೊಂಡುಬರುತ್ತಿದ್ದೇವೆ. ಅದಕ್ಕೆ ವಿರುದ್ಧವಾದ ಅಥವಾ ಪ್ರತಿಯಾದ ಸಾಲುಗಳನ್ನು ನಾವು ಒಪ್ಪಲು ತಯಾರಿಲ್ಲ ಎಂಬಂತೆ ನಮ್ಮನ್ನು ನಮ್ಮ ಶಾಲಾ ವ್ಯವಸ್ಥೆ ಅಣಿಗೊಳಿಸಿ ಕೃತಾರ್ಥವಾಗಿದೆ.ಆದರೆ ಈಚೆಗೆ ಈ ದೃಷ್ಟಿಕೋನ ಬದಲಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಕಾರಣದಿಂದ ಸಾಮಾಜಿಕ ಜಾಲ ತಾಣಗಳ ಪ್ರಾಚುರ್ಯದಿಂದ ಜನರ ವಿವಿಧ ಬಗೆಯ ಅಭಿಪ್ರಾಯಗಳಿಗೆ ವೇದಿಕೆಗಳು ಸಾರ್ವಜನಿಕವಾಗಿ ದೊರೆಯುತ್ತಿದೆ. ಈ ಮೊದಲು ಪರಿಸ್ಥಿತಿ ಹೀಗೆ ಇರಲಿಲ್ಲ. ಸಾರ್ವಜನಿಕ ವೇದಿಕೆಯ ಜೊತೆಗೆ ಅಲ್ಲಿ ಹೇಳಬೇಕಾದ ವಿಷಯಗಳಿಗೂ ನಿರ್ದಿಷ್ಟ ದಿಕ್ಕು ದೆಸೆ, ನಿಯಂತ್ರಣ ಇರುತ್ತಿತ್ತು. ಈ ನಿಯಂತ್ರಣವನ್ನು ಕೂಡ ಯಾರು ಹೇಗೆ ಎಂಬುದೂ ನಿರ್ಧಾರವಾಗಿರುತ್ತಿತ್ತು. ಅಭಿಪ್ರಾಯ ಸ್ವಾತಂತ್ರ್ಯ ಮುಕ್ತತೆಗಳು ಮಾತಲ್ಲಿ ಮಾತ್ರ ಇತ್ತು ಅಂದರೂ ತಪ್ಪಿಲ್ಲ. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಿಯಂತ್ರಿತ ಮಾಧ್ಯಮಗಳು ಮೂಲೆ ಸೇರಿವೆ. ಸಾಮಾಜಿಕ ಮಾಧ್ಯಮ ಮುಕ್ತತೆ ಕೊಟ್ಟಿದೆ. ಹೀಗಾಗಿ ಜನರ ಅಭಿಪ್ರಾಯಕ್ಕೆ ಒಂದಲ್ಲ ಒಂದು ವೇದಿಕೆ ಸಾರ್ವಜನಿಕವಾಗಿ ಲಭಿಸಿ ಮುಕ್ತ ಚರ್ಚೆ ಆಗುತ್ತದೆ. ಲೆಕ್ಕವಿಲ್ಲದಷ್ಟು ಜನ ತಮ್ಮ ಮಾತನ್ನು ಹೇಳಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಹಿಂದೆ ಹತ್ತಿಕ್ಕಿದ್ದ ಮಾತು, ವಿಷಯಗಳೆಲ್ಲ ಎಲ್ಲ ಕ್ಷೇತ್ರಗಳಿಂದಲೂ ಹೊರಬರುತ್ತಿವೆ. ನಮ್ಮೆಲ್ಲರನ್ನೂ ಬೇಗ ಪ್ರಭಾವಿಸುವ ಹಾಗೂ ಕಾಡುವ ಇತಿಹಾಸ ಇಂಥ ವಿಷಯಗಳಲ್ಲಿ ಒಂದು. ಬೇರೆ ಬೇರೆ ಈ ಮೊದಲು ಚರಿತ್ರೆ ಅಥವಾ ಇತಿಹಾಸದ ಬಗ್ಗೆ ಅದರ ಪಂಡಿತರು ಅನಿಸಿಕೊಂಡವರು ಅದರಲ್ಲೂ ಎಲ್ಲವನ್ನೂ ತಮ್ಮ ನಿಲುವು, ಸಿದ್ಧಾಂತಗಳ ಮೂಲಕ ಪ್ರತಿಪಾದಿಸುತ್ತಿದ್ದ ರೋಮಿಲಾಥಾಪರ್ ಅವರಂಥವರು ಮಾತ್ರ ಮಾತನಾಡಬಹುದಿತ್ತು. ಆದರೆ ಇಂದು ಇತಿಹಾಸದ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಯಾರು ಬೇಕಾದರೂ ಮಾತನಾಡಬಹುದು. ಏಕೆಂದರೆ ಇಂದು ಯಾರು ಮಾತನಾಡುತ್ತಾರೆಂಬುದಕ್ಕಿಂತಲೂ ಏನು ಮಾತನಾಡುತ್ತಿದ್ದಾರೆಂಬುದು ಮುಖ್ಯವಾಗುತ್ತದೆ. ಆದ್ದರಿಂದಲೇ ಇತಿಹಾಸದಂಥ ವಿಷಯದ ಬಗ್ಗೆ ಇಂದು ಹೊಸ ತಲೆಮಾರಿನ ವಿಕ್ರಂ ಸಂಪತ್, ಅಭಿಜಿತ್ ಚಾವ್ಡಾರಂಥ ಹೊಸ ಯುವ ವಿದ್ವಾಂಸರು ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಜೊತೆಗೆ ನಮ್ಮ ಯಾವುದೇ ವಿಷಯದ ಬಗ್ಗೆ ಹತ್ತಾರು ಮೂಲಗಳಿಂದ ವಿಷಯ ಹೊರತೆಗೆದು ಚರ್ಚಿಸಬಹುದಾಗಿದೆ. ಇಲ್ಲಿ ರಾಕೇಶ್ ಶೆಟ್ಟರು ಕೂಡ ಇಂಥ ಯತ್ನವನ್ನು ಮಾಡಿದ್ದಾರೆ. ಅವರ ವೃತ್ತಿ ತಂತ್ರಜ್ಞಾನ, ಆಸಕ್ತಿ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಇತ್ಯಾದಿ. ತಮ್ಮ ಆಸಕ್ತಿಯನ್ನು ಈ ಕೃತಿಯಲ್ಲಿ ಸಾಧಿಸಿಕೊಳ್ಳಲು ಏನೆಲ್ಲ ಶ್ರಮಪಡಬೇಕಾಯಿತು ಎಂಬುದನ್ನು ಲೇಖಕರು ಇದರಲ್ಲಿ ದಾಖಲಿಸಿದ್ದಾರೆ. ತಾವು ಯಾವ ಕಾರಣಕ್ಕೆ ಈ ಕೆಲಸಕ್ಕೆ ಕೈ ಹಾಕಬೇಕಾಯಿತು ಎಂಬುದನ್ನೂ ಹೇಳಿದ್ದಾರೆ. ಅಷ್ಟೇ ನಮ್ರವಾಗಿ ಇದು ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯೇ ವಿನಾ ಇದೇ ಸಂಪೂರ್ಣ ಸತ್ಯ ಎಂದಲ್ಲವೆಂದು ಹೇಳಿದ್ದಾರೆ.
ಹೌದು. ನಿಸರ್ಗದಲ್ಲಿ ಎಲ್ಲವೂ ಬದಲಾಗುವಂತೆ ನಮ್ಮ ದೃಷ್ಟಿಯೂ ಬದಲಾಗುತ್ತದೆ. ಇತಿಹಾಸದ ಬಗ್ಗೆ ಇಂದು ಆಗಿರುವುದೂ ಅದೇ.ನಮಗೆ ಪಾಶ್ಚಾತ್ಯರು ಹೇಳಿಕೊಟ್ಟ ಇತಿಹಾಸ ಕಾಲಿಟ್ಟ ಕಡೆಯಲ್ಲೆಲ್ಲ ಘರ್ಷಣೆ ಆಗುತ್ತದೆ, ಶಾಂತಿ ನೆಲೆಸುವುದು ಕಷ್ಟವಾಗುತ್ತದೆ. ದಾಖಲೆಗಳು ದೊರೆತಂತೆ ಇತಿಹಾಸ ಮಾತಾಡುತ್ತಲೇ ಹೋಗುತ್ತದೆ. ಅಲ್ಲಿ ಮೌನ ಇರುವುದಿಲ್ಲ. ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಬ್ರಿಟಿಷ್ ಪೂರ್ವದಲ್ಲಿ ನಮ್ಮ ಸಮಾಜದಲ್ಲಿ ಗತ ಇತ್ತು. ಅದು ಕಾಲಾತೀತವಾಗಿದ್ದು ಅದನ್ನು ನಾವು ಜೀವಿಸುತ್ತಿದ್ದೆವು. ಅದರಲ್ಲಿ ನಂಬಿಕೆ ಮತ್ತು ಶ್ರದ್ಧೆಗಳಿದ್ದವು, ಆಚರಣೆ, ಸಂಪ್ರದಾಯಗಳನ್ನು ಅದು ಬೆಳೆಸಿತ್ತು. ಆದರೆ ಪಾಶ್ಚಾತ್ಯ ಹಿಸ್ಟರಿಯ ಚಿಂತನೆ ಹಾಗೂ ದೃಷ್ಟಿಕೋನ ಬಂದಮೇಲೆ ಎಲ್ಲವನ್ನೂ ಪ್ರಶ್ನಿಸುವ, ಶ್ರದ್ಧೆಯನ್ನು ಅಲುಗಾಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯತೊಡಗಿತು. ಇದರಿಂದ ಸಾಮಾಜಿಕ ಶಾಂತಿ ಮತ್ತು ನೆಮ್ಮದಿಗಳು ಇಲ್ಲವಾದವು. ಪಾಶದಚಾತ್ಯ ಹಿಸ್ಟರಿಯ ದೃಷ್ಟಿ ನಮ್ಮಲ್ಲಿ ನುಸುಳುವವರೆಗೂ ರಾಮಾಯಣ ಮತ್ತು ಮಹಾಭಾರತಗಳಂಥ ಗ್ರಂಥಗಳ ಯಾವ ವಿವರಗೂ ವಿವಾದಕ್ಕೆ ಆಸ್ಪದ ಮಾಡಿರಲಿಲ್ಲ. ಆದರೆ ಇಂದು ಅವುಗಳ ಸಣ್ಣಪುಟ್ಟ ವಿಚಾರಗಳೂ ಗದ್ದಲಕ್ಕೆ ಕಾರಣವಾಗುತ್ತಿವೆ. ಅದು ರಾಮಸೇತು, ಮಹಾಭಾರತ ಯುದ್ಧ ನಡೆದಿದ್ದು ನಿಜವಾ ಇತ್ಯಾದಿ ಆಗಿರಬೇಕಿಲ್ಲ. ಗಾಂಧಾರ, ಥುರಾ ಇವೆಲ್ಲ ಇಂದು ಎಲ್ಲಿವೆ ಕುರುಕ್ಷೇತ್ರ ಯುದ್ಧದಲ್ಲಿ ಅಷ್ಟುಜನ ಹೊಡೆದಾಡುವಷ್ಟು ಜಾಗ ಎಲ್ಲಿತ್ತು ಇತ್ಯಾದಿ ಏನು ಬೇಕಾದರೂ ಆಗಬಹುದು. ಪಾಶ್ಚಾತ್ಯ ಹಿಸ್ಟರಿ ದೃಷ್ಟಿ ನಮ್ಮ ಶ್ರದ್ಧೆ ಮತ್ತು ನಂಬಿಕೆಗಳನ್ನು ಮತ್ತೆ ಮತ್ತೆ ಘಾಸಿಗೊಳಿಸುತ್ತಿದೆ.ಅದು ಅಯೋಧ್ಯೆ ಆಗಲಿ, ಆಗ್ರಾ ಆಗಲಿ, ಯಾವುದೇ ಜಾಗವಾಗಲಿ, ವ್ಯಕ್ತಿ ಆಗಲಿ ಇವೆಲ್ಲಕ್ಕೂ ಹಿಸ್ಟರಿಯಲ್ಲಿ ಎರಡೂ ಕಡೆ ಮಾತನಾಡಬಹುದಾದ ದಾಖಲೆಗಳು ದೊರೆಯುತ್ತವೆ.

ನಮ್ಮ ರಾಜ್ಯದಲ್ಲಿ ಈಚೆಗೆ ಇಂಥ ದೃಷ್ಟಿಯಿಂದ ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿ ಅಂದರೆ ಅದು ಟಿಪ್ಪು ಸುಲ್ತಾನ. ಒಂದಿಷ್ಟು ಜನ ಆ ಕಡೆ ನಿಂತರೆ ಮತ್ತಷ್ಟು ಜನ ಈ ಕಡೆ ನಿಂತು ಹೊಡೆದಾಡುತ್ತರೆ, ಇಬ್ಬರ ಬಳಿ ಇರುವ ಅಸ್ತ್ರ ಒಂದೇ. ಅದು ಹಿಸ್ಟರಿ ಕೇಳುವ ದಾಖಲೆ. ಸಾಲದ್ದಕ್ಕೆ ಆಧುನಿಕ ಹಿಸ್ಟರಿ ಒಂದು ನಿರ್ದಿಷ್ಟ ವಾದಕ್ಕೆ ಬದ್ಧವಾಗಿ ಹಿಸ್ಟರಿ ಅಂದರೆ ಇಷ್ಟೇ ಹೇಳಬೇಕು ಎಂಬುದನ್ನೂ ಕಲಿಸಿ ತಾನು ಪ್ರತಿಪಾದಿಸುವ ದಾಖಲೆ ಆಧಾರಿತ ಸತ್ಯದ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ರಾಕೇಶ್ ಶೆಟ್ಟರು ಈ ಕೃತಿಯಲ್ಲಿ ಆಧುನಿಕ ಹಿಸ್ಟರಿಯ ದೃಷ್ಟಿಯನ್ನೇ ಬಳಸಿಕೊಂಡು ಇದುವರೆಗೆ ಅದು ಏನೆಲ್ಲವನ್ನು ಹೇಳಿದೆ, ಅದರ ದೃಷ್ಟಿಯಲ್ಲಿ ಎಲ್ಲೆಲ್ಲಿ ಏನು ಇರಬೇಕಿತ್ತು ಎಂದು ಸಾಧಾರ ತೋರಿಸಿದ್ದಾರೆ. ನಿಜ. ಆಧುನಿಕ ಹಿಸ್ಟರಿ ಕೆಲವು ಸಂಗತಿಗಳನ್ನು ಉದ್ದೇಶಪೂರ್ವಕ ಪಕ್ಕಕ್ಕೆ ಸರಿಸುತ್ತದೆ. ಮೈಸೂರು ಅರಸು ಮನೆತನ ಹಾಗೂ ಟಿಪ್ಪೂ ಕುರಿತ ವಿಷಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಂತೆ ರಾಕೇಶ್ ಶೆಟ್ಟರು ಅದೇ ಹಿಸ್ಟರಿಯ ಆಯುಧಗಳನ್ನು ಬಳಸಿ ಪ್ರತಿ ದಾಖಲೆ ಕೊಡುತ್ತಾರೆ, ಚರ್ಚೆ ಅಥವಾ ವಿವಾದವನ್ನು ಜೀವಂತ ಇಡುತ್ತಾರೆ. ಅಲ್ಲಿಗೆ ಆಧುನಿಕ ಹಿಸ್ಟರಿಯ ಒಂದು ದೃಷ್ಟಿ ಸಾಧಿತವಾಯಿತು.
ಆಧುನಿಕ ಶಾಲೆ ಅಥವಾ ಉನ್ನತ ಶಿಕ್ಷಣ ಪಡೆದ ನಮಗೆ ಯಾರಿಗೂ ಮೈಸೂರು ರಾಜಮನೆತನ ಹಾಗೂ ಟಿಪ್ಪು ಕುರಿತು ಮಾತನಾಡುವಾಗ ಅಥವಾ ಓದುವಾಗ ಸೀತಾದಂಡು ಎಂಬ ಹೆಸರು ಕೇಳಿದ ಅಥವಾ ಓದಿದ ನೆನಪೇ ಇರುವುದಿಲ್ಲ. ಹೌದು, ಟಿಪ್ಪು ಬಗ್ಗೆ ನಮ್ಮ ನಡುವೆ ಪ್ರತಿವರ್ಷ ಸಾಕಷ್ಟು ಚರ್ಚೆ ಆಗುತ್ತದೆ. ಆದರೆ ಇಲ್ಲಿ ಇದೇ ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸೀತಾದಂಡಿನ ಪ್ರಸ್ತಾಪ ಬರುತ್ತದೆ. ಟಿಪ್ಪು ಕುರಿತು ಜನಪದರಲ್ಲಿ ಸಾಕಷ್ಟು ಸಂಗತಿಗಳು ಇವೆಯಾದರೂ ಆಧುನಿಕ ಹಿಸ್ಟರಿ ಅವನ್ನೆಲ್ಲ ಮಾನ್ಯ ಮಾಡುವುದಿಲ್ಲ. ನಮ್ಮ ಮೌಖಿಕ ಪರಂಪರೆಯಲ್ಲಿ ಅದಕ್ಕೆ ಸಾಕಷ್ಟು ಬೆಲೆ ಇದೆ. ಏಕೆಂದರೆ ಅದು ನಮ್ಮ ಗತ. ಬ್ರಿಟಿಷ್ ಪೂರ್ವದ ನಮ್ಮ ಚರಿತ್ರೆ. ಇದನ್ನು ಆಧಾರವಾಗಿಟ್ಟುಕೊಂಡು ಜನಪದ ತಜ್ಞ ಹನೂರು ಕೃಷ್ಣ ಮೂರ್ತಿಯವರ ಅಜ್ಞಾತನೊಬ್ಬನ ಆತ್ಮ ಚರಿತ್ರೆ ಎಂಬ ಕಾದಂಬರಿಯನ್ನೂ ರಚಿಸಿದ್ದಾರೆ. ಅದು ಆಧುನಿಕ ಹಿಸ್ಟರಿ ಆಧರಿಸಿದ್ದಲ್ಲ. ಮೌಖಿಕ ಪರಂಪರೆ ಆಧರಿಸಿದ್ದು. ಜನಸಾಮಾನ್ಯರಿಗೆ ಇದು ಹಿಡಿಸುತ್ತದೆ, ಆಪ್ತವಾಗುತ್ತದೆ, ಹಿಸ್ಟರಿಗೆ ಅಲ್ಲ. ಈ ಕೃತಿಯಲ್ಲಿ ರಾಕೇಶರು ದಾಖಲಿಸುವ ಬಹುತೇಕ ಸಂಗತಿಗಳು ಹಾಗೂ ತಿರುಮಲರಾವ್ ಮತ್ತು ನಾರಾಯಣರಾವ್, ಉರಿಗೌಡ, ಹುಲಿಗೌಡರಂಥ ಹೆಸರುಗಳು ನಮಗೆ ತೀರಾ ಅಪರಿಚಿತವಾದವು. ಇದುವರೆಗೆ ಒಂದೇ ಒಂದು ರಸ್ತೆಗೂ ಅವರ ಹೆಸರು ಇಡದಂತೆ ಆಧುನಿಕ ಹಿಸ್ಟರಿ ನೋಡಿಕೊಂಡಿದೆ.
ಪ್ರಾಥಮಿಕ ಶಾಲಾ ಪಠ್ಯದಿಂದ ಹಿಡಿದು ಉನ್ನತ ಶಿಕ್ಷಣ ಪಠ್ಯದವರೆಗೆ ಯಾರದು ಯಾವುದನ್ನು ಬೋಧಿಸಬೇಕು ಎಂಬುದನ್ನು ತೀರ್ಮಾನಿಸುವ ಶಕ್ತಿಗಳು ಲಾಬಿಗಳು ಪಾಶ್ಚಾತ್ಯ ಚಿಂತನೆಯ ಪ್ರಭಾವದಲ್ಲಿ ಮುಳುಗಿಹೋಗಿವೆ. ಯಾವುದೇ ವಿಷಯದ ಪಠ್ಯ ಸಿದ್ಧಾಂತ ಬೋಧೊಸುತ್ತದೆಯೇ ವಿನಾ ಸಾಹಿತ್ಯ ಪಠ್ಯ ಸಾಹಿತ್ಯವನ್ನಾಗಲಿ, ಇತಿಹಾಸದ ಪಠ್ಯ ಚರಿತ್ರೆಯನ್ನಾಗಲೀ ಮಕ್ಕಳಿಗೆ ಕಲಿಸುವ ಬದಲು ಒಂದು ನಿರ್ದಿಷ್ಟ ಚಿಂತನೆಗೆ ಸದಸ್ಯರನ್ನು ಸೃಷ್ಟಿಸಿಕೊಡುತ್ತದೆ. ಭಾಷೆಯ ಪಠ್ಯ ಭಾಷೆಯನ್ನು ಎಲ್ಲಿಂದ ಹೇಗೆ ಕಲಿಯಬೇಕು ಅನ್ನುವುದಕ್ಕಿಂತಲೂ ಭಾಷಿಕ ರಾಜಕಾರಣ ಹಾಗೂ ಅನ್ಯ ಭಾಷೆಗಳ ವಿರುದ್ಧ ಎತ್ತಿಕಟ್ಟುತ್ತದೆ. ಹಾಗಾಗಿ ನಮ್ಮ ಸಂಪೂರ್ಣ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಏನನ್ನು ಕಲಿಸಬೇಕಿತ್ತೋ ಅದನ್ನು ಬಿಟ್ಟು ಬೇರೆಲ್ಲವನ್ನೂ ಮಾಡಲು ಕಲಿಸುತ್ತದೆ. ಹೊರತಾಗಿ ಯಾವುದಾದರೂ ವಿಷಯದ ಜ್ಞಾನ ಬೇಕು ಅನಿಸಿದರೆ ಸ್ವಂತ ಪರಿಶ್ರಮ ಅಗತ್ಯವಾಗುತ್ತದೆ. ಅಂಥ ಅಗತ್ಯವನ್ನು ಈ ಕೃತಿ ಪೂರೈಸಲು ಶ್ರಮಿಸುತ್ತದೆ.
ಹಾಗೆ ನೋಡಿದರೆ, ಮೈಸೂರನ್ನು ನೆಪವಾಗಿಟ್ಟುಕೊಂಡು ರಾಕೇಶರು ಮಾಡಿದ ಇತಿಹಾಸದ ಈ ಕೆಲಸ ನಮ್ಮ ದೇಶದ ಹಳ್ಳಿಯ ಇತಿಹಾಸದ ವಿಷಯದಲ್ಲೂ ನಡೆದು ಹೊಸದಾಗಿ ಗ್ರಾಮ ಚರಿತ್ರೆಗಳನ್ನು ರೂಪಿಸುವ ದಂಡು ಸಿದ್ಧವಾಗಬೇಕಿದೆ. ಆಗ ಮಾತ್ರ ಪಾಶ್ಚಾತ್ಯ ರೂಪಿತ ಇತಿಹಾಸದ ಬದಲಾಗಿ ನಮಗೆ ನಮ್ಮ ಗತದ ಚಿತ್ರಣ ಲಭಿಸಲು ಸಾಧ್ಯ. ಇಂಥ ಕೆಲಸ ಎಲ್ಲ ಕಡೆ ಶುರುವಾಗಲಿ.
ಇದು ನೇರ ಮಾರಾಟದಲ್ಲಿ ಮಾತ್ರವಲ್ಲದೇ ಆನ್ ಲೈನ್ ನಲ್ಲೂ ಲಭ್ಯ ಅನ್ನುವುದು ಖುಷಿಯ ಸಂಗತಿ. ಬಹುತೇಕ ಪುಸ್ತಕಗಳಂತೆ ಇದನ್ನು ಸಾಧ್ಯವಾದಷ್ಟು ಶಕ್ತಿ ಬಳಸಿ ಆದಷ್ಟು ದೂರ ಎಸೆಯುವಂಥದ್ದಲ್ಲ, ಎತ್ತಿಟ್ಟುಕೊಂಡು ಮತ್ತೆ ಮತ್ತೆ ಗಮನಿಸಬೇಕಾದ್ದು. ಇದರಿಂದ ನಮ್ಮ ಸಾಂಪ್ರದಾಯಿಕ ಜ್ಞಾನಭಂಡಾರಕ್ಕೆ ಮಾನ್ಯತೆ ದೊರೆಯುತ್ತದೆ.
ಕೃತಿ ವಿವರ: ಮುಚ್ಚಿಟ್ಟ ಕರ್ನಾಟಕ ಚರಿತ್ರೆ,
ಲೇ: ರಾಕೇಶ್ ಶೆಟ್ಟಿ,
ಪ್ರಕಾಶಕರು – ನಿಲುಮೆ ಪ್ರಕಾಶನ, ಬೆಂಗಳೂರು,
ಬೆಲೆ – ರೂ 350.
ಪುಟಗಳು-372
#ಮುಚ್ಚಿಟ್ಟಕರ್ನಾಟಕಚರಿತ್ರೆ #ರಾಕೇಶ್ ಶೆಟ್ಟಿ
– ಪುಸ್ತಕ, ಈ ಅಂಗಡಿಗಳಲ್ಲಿ ಲಭ್ಯವಿದೆ. (ದೂರದ ಊರಿನವರು ಪೋಸ್ಟ್ ಮೂಲಕ ತರಿಸಬಹುದು. ವಿವರ ಕೆಳಗಿನ ಚಿತ್ರದಲ್ಲಿದೆ)
ಬೆಂಗಳೂರು :
ರಾಷ್ಟ್ರೋತ್ಥಾನ
ನವಕರ್ನಾಟಕ
ಅಯೋಧ್ಯಾ
ದಾವಣಗೆರೆ :
ಜ್ಞಾನ ವಿಕಾಸ ಸಾಹಿತ್ಯ

ಬಿಚ್ಚಿಟ್ಟ ದಲಿತ ಚರಿತ್ರೆ
– ಶಿವರಾಮ್ ಕಾನ್ಸೇನ್
ಐತಿಹಾಸಿಕ ವ್ಯಕ್ತಿಗಳಾದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಪುಲೆ ಮುಂತಾದವರ ಸಾಲಿನಲ್ಲಿ ಸದಾ ನೆನಪಿಸಿಕೊಳ್ಳಬೇಕಾದ ಮತ್ತೊಬ್ಬ ಸುಧಾರಣಾವಾದಿಯ ಹೆಸರು “ಮಹಾಪ್ರಾಣ್ ಜೋಗೇಂದ್ರನಾಥ್ ಮಂಡಲ್”. ಸಾಮಾಜಿಕ-ಆರ್ಥಿಕ-ರಾಜಕೀಯ ಸ್ಥಿತ್ಯಂತರದಲ್ಲಿ ಮಹಾನ್ ವ್ಯಕ್ತಿಗಳ ಹೆಸರುಗಳು ಅನುಕೂಲಸಿಂಧು ಅನುಯಾಯಿ-ಅಭಿಮಾನಿಗಳಿಂದಾಗಿ ಹಾಗೂ ಮತರಾಜಕಾರಣದಿಂದಾಗಿ ಸದ್ಬಳಕೆಯಾದ್ದಕ್ಕಿಂತಲೂ ದುರ್ಬಳಕೆಯಾದದ್ದೇ ಹೆಚ್ಚು.!
ಬಹುಶಃ ಜೋಗೇಂದ್ರನಾಥ್ ಮಂಡಲ್ ಹೆಸರನ್ನು ಉಲ್ಲೇಖಿಸಿದರೆ ಅಥವಾ ಸ್ಮರಿಸಿದರೆ ಯಾವುದೇ ಸವಲತ್ತು-ಪದವಿ-ಪುರಸ್ಕಾರ-ಪ್ರಶಸ್ತಿಯೂ ಸಿಗದೆಂಬ ಖಾತರಿಯಿಂದಾಗಿ ಇವರನ್ನು ಇತಿಹಾಸಕಾರರು ಮರೆಮಾಚಿರಬಹುದು ! ಯಾರು ಮರೆತರೇನು? ನಿಲುಮೆಯ ರಾಕೇಶ್ ಶೆಟ್ಟಿಯವರು ಇತಿಹಾಸದ ಗರ್ಭದಿಂದ ಜೋಗೇಂದ್ರನಾಥ್ ಎಂಬ ಮಹಾಶಕ್ತಿಮಂಡಲವನ್ನು ಹೊರತೆಗೆದು ಪ್ರಾಣ ತುಂಬಿದ್ದಾರೆ. “ಮುಚ್ಚಿಟ್ಟ ದಲಿತ ಚರಿತ್ರೆಯನ್ನು ಬಿಚ್ಚಿಟ್ಟ” ಗೆಳೆಯ ರಾಕೇಶ್ ಶೆಟ್ಟಿಯವರಿಗೆ ಹಾಗೂ ನಿಲುಮೆ ಬಳಗಕ್ಕೆ ಅಭಿನಂದನೆಗಳು. ಮತ್ತಷ್ಟು ಓದು 
‘ಗ್ರಸ್ತ’ ಕಾದಂಬರಿ – ನನ್ನ ಅನಿಸಿಕೆಗಳು.
– ಸುದರ್ಶನ ಗುರುರಾಜ ರಾವ್
ಕೊಂಡು ತಂದು ೨ ವರ್ಷಗಳಷ್ಟೇ ಆಗಿದ್ದರೂ ಗ್ರಸ್ತವನ್ನು ಓದಲು ಕಾಲ ಕೂಡಿ ಬಂದಿರಲೇ ಇಲ್ಲ. ಅಂತರ್ಜಾಲದಲ್ಲೂ ,ಫೇಸ್ಬುಕ್ ಪುಟಗಳಲ್ಲೂ ಸಾಕಷ್ಟು ಓದುಗರು ಈ ಕಾದಂಬರಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೊದಲು ಕರಣಂ ಅವರ ಕರ್ಮ ಮತ್ತು ನನ್ನಿ ಎರಡನ್ನೂ ಓದಿ ಮೆಚ್ಚಿದ್ದೆ.ಈ ಭಾನುವಾರ ಯಾವ ಕೆಲಸ ಇಲ್ಲದ ಕಾರಣ ನಿಧಾನವಾಗಿ ಕುಳಿತು ಓದಿದ್ದಾಯ್ತು. ಚಿಕ್ಕದಾದ ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಯಿತು.
ಬೆಂಗಳೂರಿನ ಬ್ರಾಹ್ಮಣ ಬಡಾವಣೆಯಲ್ಲಿ ಪ್ರಾರಂಭವಾಗುವ ಕಥೆ ಅಲ್ಲಲ್ಲಿ ಹರಿದು, ಪ್ರಾಗ್ ಎಂಬ ವಿದೇಶಕ್ಕೆ ಹೋಗಿ ಪುನಃ ಬೆಂಗಳೂರಿಗೆ ಬಂದು, ತಿರುವು ಪಡೆದು ಮಲೆನಾಡಿನ ಮಲೆಯೊಂದರ ಮೇಲೆ ಬಂದು ನಿಲ್ಲುತ್ತದೆ ಮುಕ್ತಾಯವೋ ಹೊಸ ಆರಂಭವೋ ಎಂಬುದನ್ನು ಓದುಗರು ಊಹಿಸಿಕೊಳ್ಳಬೇಕು.
ಕೆಳ ಮಧ್ಯಮ ವರ್ಗದ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಕಣ್ಣಿನ ತುಂಬಾ ಕನಸು ಹೊತ್ತ ಯುವತಿ, ಸರಿಯಾಗಿ ತಿಳಿಯದೆ, ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ ಮನೆಬಿಟ್ಟು ಓಡಿಹೋಗಿ ಮದುವೆ ಮಾಡಿಕೊಳ್ಳುವ ಜಯಶ್ರೀ; ಕನಸುಗಳೊಂದೂ ಸಾಕಾರವಾಗದೆ ಬರೀ ಬೀಳುಗಳ ಹಾದಿಯಲ್ಲಿ ಕ್ರಮಿಸುತ್ತಲೇ ಇನ್ನೇನು ಸ್ವಲ್ಪ ಏಳು ಕಾಣುತ್ತಿದೆ ಎಂಬಲ್ಲಿ ಹೃದಯಾಘಾತದಿಂದ ನಿಧನಳಾಗುತ್ತಾಳೆ. ಕನಸುಗಳು ತುಂಬಿದ ಜೀವವೊಂದು, ಕನಸುಗಳೇ ಇಲ್ಲದ, ಕೆಲಸ ಮಾಡುವ ಕಸುವೂ ಇಲ್ಲದ ಒಬ್ಬನನ್ನು ಓಡಿಹೋಗಿ ಮದುವೆಯಾಗುವ ವಿಪರ್ಯಾಸಗಳು ದಿನವೂ ಕಂಡು ಕೇಳುವ ವಿಚಾರವೇ. ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಅವಳ ಮಗನೇ ಅಸಾಧಾರಣ ಬುದ್ಧಿಮತ್ತೆ ಮತ್ತು ಅತೀಂದ್ರಿಯ ಮನ:ಶಕ್ತಿ ಇರುವ ಅವಿನಾಶ್!
ರಾಮಾಯಣ,ಮಹಾಭಾರತ,ಪುರಾಣಗಳ 64 ಸಂಪುಟಗಳು ಕನ್ನಡದಲ್ಲಿ ಅತ್ಯಂತ ಕಡಿಮೆ ಬೆಲೆಗೆ
– ವಿಶ್ವನಾಥ ಸುಂಕಸಾಲ
ಮೂಲ ಶ್ಲೋಕಗಳೊಂದಿಗೆ ಕನ್ನಡದಲ್ಲಿ ರಾಮಾಯಣ, ಮಹಾಭಾರತದ ಗ್ರಂಥಗಳು ಸಿಗುತ್ತವೆಯೇ ಎಂಬ ಪ್ರಶ್ನೆ ಹಲವರದು. ಕನ್ನಡದಲ್ಲಿ ಸಮಗ್ರವಾಗಿ ಇಂಥ ಗ್ರಂಥಗಳು ದೊರೆಯುವುದು ವಿರಳವೇ. ಒಂದೆರಡು ಪ್ರಕಾಶನಗಳು ಮಾತ್ರ ಇಂದಿಗೂ ರಾಮಾಯಣ, ಮಹಾಭಾರತ, ಪುರಾಣಗಳನ್ನು ಜನರಿಗೆ ದೊರಕುವಂತೆ ಮಾಡುತ್ತಿವೆ. ಅವುಗಳಲ್ಲಿ ಭಾರತ ದರ್ಶನ ಪ್ರಕಾಶನವೂ ಒಂದು.
ಅತ್ಯಂತ ಕಡಿಮೆ ಬೆಲೆಗೆ ಕನ್ನಡದ ಜನತೆಗೆ ಭಾರತೀಯ ಸಂಸ್ಕೃತಿಯ ಮೂಲವಾದ ಈ ಗ್ರಂಥಗಳನ್ನು ತಲುಪಿಸಲೆಂದೇ ಹುಟ್ಟಿದ ಸಂಸ್ಥೆ ‘ಭಾರತ ದರ್ಶನ ಪ್ರಕಾಶನ’.
ಮುದ್ರಣದ ವ್ಯಯಕ್ಕಿಂತ ಕಡಿಮೆ ಬೆಲೆಗೆ ಪುಸ್ತಕವನ್ನು ಒದಗಿಸುತ್ತಿರುವ ಭಾರತ ದರ್ಶನ ಪ್ರಕಾಶನಕ್ಕೆ ಓದುಗರು, ದಾನಿಗಳೇ ಬೆನ್ನೆಲುಬು. ರಾಮಾಯಣ, ಮಹಾಭಾರತಗಳ ಕಥೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಅನೇಕ ಪುಸ್ತಕಗಳು ಸಿಗಬಹುದು. ಆದರೆ ಮೂಲ ವಾಲ್ಮೀಕಿ ಹಾಗೂ ವ್ಯಾಸರಿಂದ ಲಿಖಿತವಾದ ಪ್ರತಿ ಶ್ಲೋಕವನ್ನೂ ಸಂಪುಟದ ಒಂದು ಕಡೆ ಕೊಟ್ಟು, ಮತ್ತೊಂದು ಭಾಗದಲ್ಲಿ ಸಂಪೂರ್ಣ ಅರ್ಥವನ್ನು ವಿಸ್ತೃತವಾಗಿಯೂ, ನಿರ್ದುಷ್ಟವಾಗಿಯೂ, ಸರಳ ಕನ್ನಡದಲ್ಲಿ ವಿವರಿಸಿರುವ ಗ್ರಂಥಮಾಲೆ ತೀರಾ ವಿರಳ.
ಭಾರತ ದರ್ಶನ ಪ್ರಕಾಶನದ ಒಂದೊಂದು ಸಂಪುಟವೂ 620-650 ಪೇಜುಗಳಿಂದ ಕೂಡಿವೆ. ಪ್ರತಿ ಸಂಪುಟದ ಮುದ್ರಣಕ್ಕೂ ಸರಾಸರಿ 120-150 ರೂಪಾಯಿಗಿಂತ ಹೆಚ್ಚು ವ್ಯಯವಾಗುತ್ತದಂತೆ. ಆದರೆ, ರಾಮಾಯಣ, ಮಹಾಭಾರತಗಳ ಪ್ರಚಾರಕ್ಕಾಗಿಯೇ ಹುಟ್ಟಿಕೊಂಡ ಈ ಸಂಸ್ಥೆಯು ದಾನಿಗಳ ಸಹಕಾರದಿಂದ ಮುದ್ರಣ ವ್ಯಯಕ್ಕಿಂತಲೂ ಕಡಿಮೆ ದರಕ್ಕೆ ಅಂದರೆ ಸರಾಸರಿ ಬರೀ ನೂರು ರೂಪಾಯಿಗೆ ಕೊಡುತ್ತಿದೆ.
ತೊತ್ತೋಚಾನ್ (ಪುಸ್ತಕ ಪರಿಚಯ)
– ವಲವಿ ವಿಜಯಪುರ
“ಕನಸುಗಳನ್ನು ಕಾಣಬೇಕು. ಉನ್ನತೋನ್ನತವಾದ ಹಗಲು ಕನಸು ಕಾಣಿರಿ.”
ಇದು ಭಾರತದ ಮಾಜಿ ರಾಷ್ಟ್ರಪತಿ, ಕ್ಷಿಪಣಿ ಜನಕ ದಿ| ಶ್ರೀ ಅಬ್ದುಲ್ ಕಲಾಂ ಅವರ ಅಮೃತ ನುಡಿ.
ಹೌದು, ಕನಸು ಕಾಣಬೇಕು. ಉನ್ನತೋನ್ನತವಾದ ಕನಸನ್ನೇ ಕಾಣಬೇಕು. ಮತ್ತು ಅದನ್ನು ನನಸಾಗಿಸುವತ್ತ ಸತತ ಪ್ರಯತ್ನಿಸಬೇಕು. ಅಂಥ ಉನ್ನತ ಕನಸನ್ನು ಕಂಡು ಅದನ್ನು ನನಸಾಗಿಸಲು ಹಗಲಿರುಳು ಶ್ರಮಿಸಿದ, ಖ್ಯಾತ ಶಿಕ್ಷಣ ಪ್ರೇಮಿ, ಮಕ್ಕಳ ಪ್ರೇಮಿ, ಪ್ರಯೋಗಶೀಲ ವ್ಯಕ್ತಿತ್ವದ ಶ್ರೀ ಸೋಸಾಕು ಕೊಬಾಯಾಶಿ ಅವರ ಪ್ರಾಯೋಗಿಕ ಶಾಲೆ ತೊಮೆಯೆ ಗಾಕುಯೆನ್ ಹೇಗಿತ್ತು ಎಂದು ತಿಳಿಸುವ ಪ್ರಯತ್ನವನ್ನು ಆ ಶಾಲೆಯ ಹಾಗೂ ಕೊಬಾಯಾಶಿ ಅವರ ಪ್ರಯೋಗದ ನೇರ ಭಾಗೀದಾರಳಾದ ತೊಮೆಯೆ ಶಾಲೆಯ ಮಾಜಿ ವಿದ್ಯಾರ್ಥಿನಿ ಶ್ರೀಮತಿ ತೆತ್ಸುಕೋ ಕುರೊಯಾನಾಗಿ ಬರೆದ ಪುಸ್ತಕವೇ ಈ ‘ತೊತ್ತೋ ಚಾನ್’ ಮತ್ತಷ್ಟು ಓದು 
ಕುಂ.ವೀ ಮತ್ತೆ ಕುಳಿತು ಮೊದಲಿಂದ ಹೇಳಿದ ಕತೆ – “ಶಾಮಣ್ಣ”
– ಶ್ರೀರಂಗ ಯಲಹಂಕ
ನಾನು ‘ಶಾಮಣ್ಣ’ ಕಾದಂಬರಿ ಓದುವುದಕ್ಕೂ ಮುಂಚೆ ಕುಂ ವೀ ಅವರ ‘ಡೋಮ ಮತ್ತಿತರ ಕಥೆಗಳು’, ‘ಯಾಪಿಲ್ಲು’ ಕಾದಂಬರಿ, ‘ರಾಯಲಸೀಮಾ’ (ಆತ್ಮಕಥಾನಕ ಮಾದರಿಯ ಬರಹಗಳು), ಅವರ ಆತ್ಮ ಕಥೆ ‘ಗಾಂಧೀ ಕ್ಲಾಸು’, ‘ಅರಮನೆ’ ಕಾದಂಬರಿ ಇವುಗಳನ್ನು ಓದಿದ್ದೆ. ಯಾಪಿಲ್ಲು ಕಾದಂಬರಿಯು ಪುಸ್ತಕರೂಪ ಪಡೆದ ಬಗ್ಗೆ ಬರೆಯುತ್ತಾ ಕುಂ ವೀ ಅವರು ‘ಇದು ಶಾಮಣ್ಣ ಕಾದಂಬರಿಗಿಂತ ಮೊದಲೇ ಬರೆದು ಗೊಂಗಡಿಯಲ್ಲಿ ಅಡಗಿಸಿಟ್ಟಿದ್ದೆ… ‘ ಎಂದು ಬರೆದಿದ್ದಾರೆ.ಅದನ್ನು ಓದಿದ ಮೇಲೆ ‘ಶಾಮಣ್ಣ’ ಕಾದಂಬರಿಯನ್ನು ಓದಬೇಕೆಂಬ ಆಸೆಯನ್ನು ತಡೆಯಲಾರದೆ ಹೋದೆ. ಕೊಂಡುಕೊಂಡು ಓದಿದೆ. ಆಸೆ ನಿರಾಸೆಯಾಯಿತು. ಅದರ ವಿವರಗಳಿಗೆ ಹೋಗುವ ಮುನ್ನ ಒಂದೆರೆಡು ವಿಷಯಗಳನ್ನು ಮೊದಲೇ ಸ್ಪಷ್ಟಪಡಿಸುವುದು ಮುಖ್ಯ. ಈ ನನ್ನ ಬರಹ ‘ಶಾಮಣ್ಣ’ ಕಾದಂಬರಿಯ ಪೂರ್ಣ ಪ್ರಮಾಣದ ವಿಮರ್ಶೆಯಲ್ಲ.ನಾನು ಇದುವರೆಗೆ ಓದಿರುವ ಅವರ ಕೃತಿಗಳು ಕೆಲವೊಂದು ಮಿತಿಗಳ ನಡುವೆಯೂ ನನಗೆ ಓದಿನ ಸಂತೋಷವನ್ನು ಕೊಟ್ಟಿದೆ. ‘ಅರಮನೆ’ ಕಾದಂಬರಿಯಂತೂ ಒಂದು ಮಾಸ್ಟರ್ ಪೀಸ್.( ಅದಕ್ಕೆ ೨೦೦೭ನೇ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ.). ಪ್ರಶಸ್ತಿ ಬಂದ ಕೃತಿಗಳೆಲ್ಲಾ ಉತ್ತಮವಾಗಿರಲೇಬೇಕು ಎಂಬ ನಿಯಮವೇನಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ‘ಅರಮನೆ’ ಕಾದಂಬರಿ ನಿಜವಾಗಲೂ ಆ ಪ್ರಶಸ್ತಿಗೆ ಅರ್ಹವಾದ ಕೃತಿ. ‘ಅರಮನೆ’ ಓದಿದ ಮೇಲೆ ಕುಂ ವೀ ಅವರ ಎಲ್ಲಾ ಕಾದಂಬರಿಗಳನ್ನು ಓದಬೇಕೆಂಬ ಆಸೆ ಇತ್ತು. ಇತ್ತೀಚೆಗೆ ಅವರ ‘ಕತ್ತೆಗೊಂದು ಕಾಲ’ ಎಂಬ ಕಾದಂಬರಿ ಬಿಡುಗಡೆ ಆಯಿತು. ಸದಾ ಪ್ರಯೋಗಶೀಲರಾದ ಕುಂ ವೀ ಅವರ ಆ ಕೃತಿಯ ಬಗ್ಗೆ ನನಗೆ ತುಂಬಾ ಕುತೂಹಲವಿದೆ. ಆದರೆ ‘ಶಾಮಣ್ಣ’ ಕಾದಂಬರಿ ಓದಿದ ಮೇಲೆ ನನ್ನ ಆ ಕುತೂಹಲಕ್ಕೆ ಸ್ವಲ್ಪ ಬ್ರೇಕ್ ಹಾಕಿರುವೆ.
ಪುಸ್ತಕ ಪರಿಚಯ – “ಪ್ರಜ್ಞೆ ಮತ್ತು ಪರಿಸರ”
– ಚಂದ್ರಹಾಸ
“ಪ್ರಜ್ಞೆ ಮತ್ತು ಪರಿಸರ” – ಯು. ಆರ್. ಅನಂತಮೂರ್ತಿಯವರ ವಿಮರ್ಶಾ ಲೇಖನಗಳ ಸಂಕಲನ. ಪ್ರಸ್ತುತ ಪುಸ್ತಕ ಯಾವುದೋ ಕೆಲವು ಕೃತಿಗಳ ವಿಮರ್ಶೆಗಳಲ್ಲ, ಬದಲಾಗಿ ಕೃತಿಗಳನ್ನು ಸೃಷ್ಟಿಸಿದ ಕೃತಿಕಾರರ ದೃಷ್ಟಿಕೋನಗಳದ್ದು. ಸುತ್ತಲಿನ ಸಮಾಜ, ವಾಸ್ತವ ಅನುಭವಗಳು ಮತ್ತು ಲೋಕವ್ಯಾಪರ, ಹೇಗೆ ಸಾಹಿತಿಗಳ ಮನೋಭೂಮಿಕೆಯಲ್ಲಿ ವಿಶ್ಲೇಷಣೆಗೊಂಡು, ಶೋಧನೆಗೆ ಪ್ರೇರೇಪಿಸಿ ಕೃತಿಗಳಲ್ಲಿ ಮೂರ್ತಗೊಂಡಿರಬಹುದೆಂಬುದನ್ನು ತಮ್ಮ ಲೇಖನಗಳಾ ಮೂಲಕ ವಿವೇಶಿಸಿದ್ದಾರೆ. ಮುನ್ನುಡಿಯಲ್ಲಿ ಅವರೇ ಈ ಲೇಖನಗಳಾ ಹಿಂದಿನ ಪ್ರೇರಣೆಯನ್ನು ಹೀಗೆ ಹೇಳಿಕೊಂಡಿದ್ದಾರೆ – “ಸಾಹಿತ್ಯದಿಂದ ರಾಜಕೀಯದವರೆಗೆ ಸ್ನೇಹಿತರೊಡನೆ ನಡೆಸಿದ ಚರ್ಚೆಗಳಿಂದ,ಮಾರ್ಕ್ಸ್ ವಾದದ,ಲೋಹಿಯಾವಾದಗಳ ಬಗ್ಗೆ ಇದ್ದ ಅನುಮಾನ ಅಭಿಮಾನಗಳಿಂದ ಪ್ರಭಾವಗೊಂಡ ಅಲೋಚನ ಲಹರಿಗಳೇ, ಈ ಸಂಕಲನದಲ್ಲಿ ಲೇಖನಗಳಾಗಿ ಮೂಡಿವೆ.” ಮತ್ತಷ್ಟು ಓದು 
ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೩)
– ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.
ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)
ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೨)
ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇಬ್ಬರು, ಅಪ್ಪಳಸ್ವಾಮಿ ಮತ್ತು ಆರೋಕ್ಯಸ್ವಾಮಿ ಎಂಬ ಅಧಿಕಾರಿಗಳ ಹುನ್ನಾರದಲ್ಲಿ ಸಹ್ಯಾದ್ರಿಯ ಮಲೆ, ಇಳಿಜಾರು ಮತ್ತು ತಪ್ಪಲಿನ ಅರಣ್ಯವೆಲ್ಲ ಕೇರಳೀಯರ ವಶವಾದ ಪ್ರಸ್ತಾಪದೊಂದಿಗೆ ನಿರೂಪಣೆ ಮುಖ್ಯ ಮಜಲನ್ನು ತಲುಪುತ್ತದೆ. ಇದಕ್ಕೆ ಎರಡು ಮುಖ. ಒಂದು, ಅರಣ್ಯ ನಾಶ ಇನ್ನೊಂದು, ಸ್ಥಳೀಯರಿಗಾಗುವ ವಂಚನೆ. ಈ ಹಿಂದೆ ಹೇಳಿದ ಸೌಂದರ್ಯ, ಪರಿಪೂರ್ಣತೆ, ಪಂಥಾಹ್ವಾನ ಈ ಯಾವ ಸೆಲೆ, ಸೆಳೆತವೂ ಇಲ್ಲದ, ಲಾಭಕೋರತನವೊಂದೇ ಮಾರ್ಗದರ್ಶಿಯಾಗಿರುವ ರೂಕ್ಷ ಪ್ರಪಂಚದ ಒಂದು ಬೀಭತ್ಸ ಚಿತ್ರಣವನ್ನು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಕಾರಂತರು ಬಳಸುವ ಅವರ ಇಷ್ಟದ ಪದ `ಚೆಲುವು’ ಒಮ್ಮೆಯೂ ಈ ಕಾದಂಬರಿಯಲ್ಲಿ ಬಂದಿಲ್ಲ. ಪರಿಸರ ನಾಶದ ಜತೆಗೆ ಹೊರಗಿನ ಜನರ ಅವ್ಯಾಹತ ನುಸುಳುವಿಕೆಯಿಂದ ಜನಸಂಖ್ಯಾನುಪಾತ demography, ಏರುಪೇರಾಗಿ ಸಾಂಸ್ಕೃತಿಕ ಅವನತಿಯನ್ನೂ ಕಾಣುತ್ತೇವೆ. ನಿಸರ್ಗವೆಂದರೆ ವಿಶ್ವಾತ್ಮಕ ವ್ಯಕ್ತಿತ್ವವೆಂಬ ಭಾವ ಅಳಿದು ಅದು ಕೇವಲ ಒಂದು ಕಚ್ಚಾವಸ್ತುಗಳ ಮಂಡಿ ಎಂದಾಯಿತು. ಮತ್ತಷ್ಟು ಓದು 
ಅಂಕಣರಂಗ – 3 : ಡಿ.ವಿ ಪ್ರಹ್ಲಾದ್ ಅವರ ‘ಅನುದಿನವಿದ್ದು…’ ಪುಸ್ತಕದ ಪರಿಚಯ
– ಮು.ಅ ಶ್ರೀರಂಗ ಬೆಂಗಳೂರು
‘ಅನುದಿನವಿದ್ದು… ‘ ಕಿರು ಪುಸ್ತಕದಲ್ಲಿ ಒಂಭತ್ತು ಜನ ಲೇಖಕರ ಸಾವಿಗೆ ಮಿಡಿದ ಬರಹಗಳು ಮತ್ತು ಇಬ್ಬರು ಲೇಖಕರು ಬದುಕಿದ್ದಾಗಲೇ ಬರೆದ ಲೇಖನಗಳಿವೆ. ಇದರಲ್ಲಿ ರಾಘವೇಂದ್ರ ಖಾಸನೀಸ, ರಾಮಚಂದ್ರ ಶರ್ಮ,ಎಂ. ವ್ಯಾಸ, ಚಿ.ಶ್ರೀನಿವಾಸರಾಜು,ಸು.ರಂ.ಎಕ್ಕುಂಡಿ, ಕುಸುಮಾಕರ ದೇವರಗೆಣ್ಣೂರು,ಬೆಳಗೆರೆ ಕೃಷ್ಣಶಾಸ್ತ್ರಿ,ದೇಶಕುಲಕರ್ಣಿ,ಸ್ವಾಮಿನಾಥ,ಕಿ.ರಂ. ನಾಗರಾಜ ಮತ್ತು ನೀಲತ್ತಹಳ್ಳಿ ಕಸ್ತೂರಿ ಅವರುಗಳನ್ನು ಕುರಿತ ಅಪರೂಪದ ಬರಹಗಳಿವೆ. ಇಲ್ಲಿನ ಬರಹಗಳು ‘ಸಂಚಯ’ ಮತ್ತು ರಾಜ್ಯವ್ಯಾಪಿ ಪ್ರಸಾರದ ಕನ್ನಡ ದಿನಪತ್ರಿಕೆಗಳಲ್ಲಿಈ ಹಿಂದೆ ಪ್ರಕಟವಾಗಿದ್ದಂತಹವು. ಆಯಾ ಲೇಖಕರನ್ನು ಕುರಿತಂತೆ ಡಿ ವಿ ಪ್ರಹ್ಲಾದರ ಅಪರೂಪದ ಒಳನೋಟ ಮತ್ತು ಅವರುಗಳ ಬಗ್ಗೆ ಹಾಗೂ ಅವರ ಕೃತಿಗಳ ಬಗ್ಗೆ ವಿವರಗಳನ್ನು ಒಳಗೊಂಡ ‘ಅನುಬಂಧ’ ಈ ಪುಸ್ತಕದ ಪ್ಲಸ್ ಪಾಯಿಂಟ್. ಏಕೆಂದರೆ ಎಷ್ಟೋ ಸಲ ನಾವುಗಳು ಕೆಲವು ಲೇಖಕರ ಹೆಸರು ಕೇಳಿರುತ್ತೇವೆ ಆದರೆ ಅವರ ಪುಸ್ತಕಗಳ ಬಗ್ಗೆ ತಿಳಿದಿರುವುದಿಲ್ಲ. ಹಾಗೆಯೇ ನಾವು ಓದಬೇಕಾದಂತಹ ಲೇಖಕರು ಹಾಗೂ ಅವರ ಕೃತಿಗಳ ಬಗ್ಗೆ ಯಾವ ಮಾಹಿತಿಯೂ ನಮಗಿರುವುದಿಲ್ಲ. ಆ ಕೊರತೆಯನ್ನು ‘ಅನುದಿನವಿದ್ದು … ‘ ತುಂಬಿಕೊಟ್ಟಿದೆ. ಈ ಒಂದು ಪ್ರಸ್ತಾವನೆಯ ನಂತರ ಇಲ್ಲಿನ ಕೆಲವು ಲೇಖನಗಳ ಬಗ್ಗೆ ಪರಿಚಯ ಮಾಡಿಕೊಳ್ಳೋಣ.
ನ್ಯಾಸ ಕಾದಂಬರಿಯ ವಿಮರ್ಶೆ
– ಚೈತನ್ಯ ಮಜಲುಕೋಡಿ
ಹರೀಶ ಹಾಗಲವಾಡಿಯವರ ನ್ಯಾಸ ಕಾದಂಬರಿಯನ್ನು ನನ್ನ ಸ್ನೇಹಿತರು ಓದು ಅಂತ ಹೇಳಿ ನನಗೆ ಹೇಳಿದ್ದರೂ ಕೂಡಾ, ಹಲವು ಬಾರಿ ನನಗೆ ಅದರ ಗಾತ್ರ ನೋಡಿ ಓದುವುದಕ್ಕೆ ಹೆದರಿಕೆಯಾಗಿತ್ತು. ಹಾಗೆಯೇ ಕಾದಂಬರಿಯ ವಸ್ತು ಸನ್ಯಾಸದ ಕುರಿತಾದುದಾದ್ದರಿಂದ, ಓದುವುದಕ್ಕೆ ಸ್ವಲ್ಪ ಸಿದ್ಧತೆಯೂ ಬೇಕು ಅಂತ ಅನ್ನಿಸ್ತಾ ಇತ್ತು. ಕಾದಂಬರಿಯನ್ನು ಓದುವುದಕ್ಕೆ ಕೈಗೆತ್ತಿಕೊಂಡ ಮೇಲೆ ನನ್ನ ಮೇಲೆ ಅಪಾರ ಪ್ರಭಾವ ಬೀರಿ ದಿನಗಟ್ಟಲೆ ಗುಂಗು ಹಿಡಿಯುವ ಹಾಗೆ ಮಾಡುವಷ್ಟು ಪ್ರಭಾವಶಾಲಿಯಾಗಿಬಿಟ್ಟಿತು. ಲೇಖಕರ ಮೊದಲ ಕಾದಂಬರಿ ಅಂತ ಗೊತ್ತೇ ಆಗದಷ್ಟು ನೈಪುಣ್ಯ, ಚಿಂತನೆಯ ಆಳ ವಿಸ್ತಾರ ಎರಡರಲ್ಲೂ ಪ್ರಶಾಂತ ಧಾಟಿಯಿಂದ ಒಳಗೊಳ್ಳುತ್ತಾ, ಹಲವು ಬಾರಿ ಭೈರಪ್ಪರ ಬರವಣಿಗೆಯ ನಿಬಿಡ ಶೈಲಿಯನ್ನು ಮತ್ತೆ ಮತ್ತೆ ನೆನೆಸುತ್ತ, ಅವರ ರಸ ಸೃಷ್ಟಿಯ ಪಾಕವು ಕಲೆಯ ಹದ ಮುಟ್ಟಿ ನಿರಪೇಕ್ಷ ಬರವಣಿಗೆ ಸಿದ್ಧಿಸಬೇಕು ಎಂಬ ಮಾತಿಗೆ ಪ್ರತ್ಯಕ್ಷ ನಿದರ್ಶನವಾಗಿ ಹೊರಹೊಮ್ಮಿದ ಸೊಗಸಾದ ಕೃತಿ. (ಈ ಮಾತನ್ನು ಅವರು ಎಲ್ಲಿ ಹೇಳಿದ್ದಾರೆಂದು ನನಗೆ ಮರೆತು ಹೋಗಿದೆ. ಆದರೂ ಎಲ್ಲೋ ಒಂದು ಕಡೆ ಅದರ ಉದ್ಧರಣೆ ಇದೆ) ಅದೂ ಅವರ ಇಪ್ಪೈದರ ತರುಣ ವಯಸ್ಸಿನಲ್ಲೇ ರೂಪುಗೊಂಡ ನಾನೂರು ಪುಟದ ಈ ಸಾಂದ್ರ ಬರಹ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ.ಸನ್ಯಾಸಿಯಾದವನು ಸಮಾಜಕ್ಕೆ ತೆತ್ತುಕೊಂಡು ಲೋಕೋದ್ಧಾರಕ್ಕೆ ಸಮರ್ಪಿಸಿಕೊಳ್ಳಬೇಕು, ಸ್ವಂತಕ್ಕೆ ಸಾಧನೆಯನ್ನೂ ಮಾಡಬೇಕು ಎಂಬ ಘನ ಉದ್ದೇಶ ಹೊತ್ತು ಹೊರಡುವ ಸಂಸಾರ ವಿಮುಖವಾದ ಧೋರಣೆಯು ಹೇಗೆ ಮತ್ತೆ ಅದೇ ಪ್ರಪಂಚದ ಪಾಶ ಮೋಹಗಳಲ್ಲಿ ಸಿಲುಕಿ ಮಂಕಾಗಿ ಜನಪ್ರಿಯತೆಗೆ ಎರವಾಗುತ್ತ, ಜನಮನ್ನಣೆಗೆ ಹಿಗ್ಗುತ್ತ ಸಾಗಿ, ಕಡೆಯಲ್ಲಿ ಮೂಲೋದ್ದಿಶ್ಯವೇ ಮೂಲೋತ್ಪಾಟನೆಯಾದ ದಿಗ್ಭ್ರಮೆ ಬಹಳ ಕಡೆ ಓದುಗನನ್ನು ಚಿಂತನೆಗೆ ಹಚ್ಚುತ್ತದೆ. ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವೇ ಎಂಬಲ್ಲಿಂದ ಸಂನ್ಯಾಸದ ಅರ್ಥವೇನು ಎನ್ನುವವರೆಗೆ ನೂರಾರು ಮೂಲಭೂತ ಪ್ರಶ್ನೆಗಳನ್ನೆತ್ತುತ್ತ, ಅದಕ್ಕೆ ಪ್ರಾಮಾಣಿಕ ಉತ್ತರಗಳನ್ನೂ ತಡವುತ್ತ, ಹೆಚ್ಚು ಹೆಚ್ಚು ಆಲೋಚನೆಗೆ, ಜವಾಬ್ದಾರಿಯುತ ನಿರ್ಣಯ ನಡುವಳಿಕೆಗಳಿಗೆ ನಾವು ತೊಡಗಬೇಕೆಂಬ ಮಾನೋನ್ನತಿಗೂ ಕೃತಿಯು ಪ್ರೇರಣೆ ನೀಡುತ್ತದೆ.




