ಬಗೆಬಗೆಯಾಗಿ ಕಾಡುವ ನಗೆಗಾರ: ಚಾಪ್ಲಿನ್
– ರೋಹಿತ್ ಚಕ್ರತೀರ್ಥ
ನನಗಾಗ ಹದಿನಾಲ್ಕು ವರ್ಷ. ಪ್ರೈಮರಿ ದಾಟಿ ಆಗಷ್ಟೇ ಹೈಸ್ಕೂಲಿಗೆ ಕಾಲಿಟ್ಟಿದ್ದೆ. ಮನೆಯಲ್ಲಿ ನಡೆಯಲಿದ್ದ ಒಂದು ಮದುವೆ ಸಮಾರಂಭಕ್ಕಾಗಿ ವಿಸಿಆರ್ ಬಾಡಿಗೆ ಪಡೆದಿದ್ದರು. ಎರಡೇ ಎರಡು ದಿನ ಮನೆಯಲ್ಲಿರುವ ಈ ಭಾಗ್ಯದ ಪೂರ್ಣ ಸದುಪಯೋಗ ಪಡೆಯಬೇಕಾದರೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಪಿಚ್ಚರ್ ಹಾಕಿ ಓಡಿಸಬೇಕು ಎಂಬುದು ನಮ್ಮ ನಿಲುವು. ಹಾಗೆ ಬಾಡಿಗೆಗೆ ತಂದಿದ್ದ ಮೂರ್ನಾಲ್ಕು ಚಿತ್ರಗಳ ಪೈಕಿ ಒಂದು – ಗೋಲ್ಡ್ ರಶ್. ದೂರ ದೇಶವೊಂದರಲ್ಲಿ ದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪವಿದೆ ಎಂಬ ಸುದ್ದಿಯ ಜಾಡು ಹಿಡಿದು ಹೊರಡುವ ಮನುಷ್ಯರು ಎಂತೆಂಥ ತೊಂದರೆಗಳಲ್ಲಿ ಸಿಕ್ಕಿಕೊಳ್ಳುತ್ತಾರೆ; ಕೊನೆಗೂ ಮನುಷ್ಯನಿಗೆ ಮುಖ್ಯವಾಗುವುದು ಚಿನ್ನವೋ ಜೀವನವೋ ಎಂಬುದನ್ನು ತೋರಿಸುವ ಆ ಚಿತ್ರ ಕಪ್ಪುಬಿಳುಪಿನದ್ದು. ಅದನ್ನು ಒಮ್ಮೆ ನೋಡಿ ತೃಪ್ತಿಯಾಗದೆ ಮನೆಗೆ ಬಂದುಹೋದವರಿಗೆಲ್ಲ ತೋರಿಸಿ ಟೇಪು ಕಿತ್ತು ಬರುವಷ್ಟು ಸಲ ಬಳಸಿ ಮರಳಿಸಿದ್ದು ಅಚ್ಚಳಿಯದ ನೆನಪು ನನಗೆ. ಅದುವೇ ನನ್ನ ಮತ್ತು ಚಾಪ್ಲಿನ್ನನ ಪ್ರಥಮ ಚುಂಬನ. ಬಿದ್ದೂಬಿದ್ದೂ ನಕ್ಕು ದಂತಭಗ್ನವಾಗುವುದೊಂದು ಬಾಕಿ ಇತ್ತು ಅಷ್ಟೆ! ಮತ್ತಷ್ಟು ಓದು 
ಯುಗಾದಿಯ ತಗಾದೆ
– ನಾಗೇಶ್ ಮೈಸೂರು
ಗುಬ್ಬಣ್ಣ ‘ಗುರ್ರ್’ ಎಂದು ಏದುಸಿರಲ್ಲೆ ಭುಸುಗುಟ್ಟುತ್ತ, ಧುಮುಗುಟ್ಟುತ್ತಲೆ ಮನೆಯೊಳಗೆ ಕಾಲಿಟ್ಟಾಗ ಇಂದೇಕೊ ಅಪರೂಪಕ್ಕೆ ಗುಬ್ಬಣ್ಣನಿಗು ಕೋಪ ಬಂದಿರುವಂತಿದೆಯಲ್ಲ ಅನಿಸಿ ಕುತೂಹಲವಾಯ್ತು. ಸಹನೆಯಲ್ಲಿ ಸಾಧು ಸಂತರ ಅಪರಾವತಾರವಾದ ಗುಬ್ಬಣ್ಣ ಕೂಗಾಡಿದರು ಪೂಜೆಗೆ ದೇವರ ಮೇಲೆಸೆದ ಹೂವಂತಿರುವುದನ್ನು ಮಾತ್ರ ಕಂಡಿದ್ದ ನನಗೆ, ಅವನ ಈ ಅವತಾರ ಸ್ವಲ್ಪ ಹೊಸದು. ಅದರಲ್ಲು ಮನೆಯಲ್ಲಿ ನರಸಿಂಹಿಣಿಯವತಾರದ ‘ಫುಲ್ ಟೈಮ್ ಕಾಂಟ್ರಾಕ್ಟ್’ ಅನ್ನು ಅವನ ಶ್ರೀಮತಿಯೆ ಶ್ರದ್ಧಾಪೂರ್ವಕವಾಗಿ (ಬಲಾತ್ಕಾರವಾಗಿಯೆ), ವಹಿಸಿಕೊಂಡ ಮೇಲೆ ಗುಬ್ಬಣ್ಣ ಇನ್ನೂ ತೀರಾ ಸಾಧುವಾಗಿಬಿಟ್ಟಿದ್ದ. ಅದೇ ಹಿನ್ನಲೆಯಲ್ಲೆ,
‘ ಗುಬ್ಬಣ್ಣ… ಯಾಕೊ ಮುಖವೆಲ್ಲ ಕೆಂಪಗೆ ಚೆಂಡು ಮಲ್ಲಿಗೆಯಾಗಿಬಿಟ್ಟಿದೆ ? ಜ್ವರ ಗಿರ ಬಂದುಬಿಟ್ಟಿದಿಯಾ ಹೇಗೆ ? ಹುಷಾರಾಗಿದ್ದೀಯಾ ತಾನೆ ?’ ಎಂದೆ ಒಂದೆ ಉಸಿರಲ್ಲಿ.
ಸುಳ್ಸುದ್ದಿ: ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ಮೇಲೆ ಅಮೀರ್ ಖಾನ್ ಕಣ್ಣು!
– ಪ್ರವೀಣ್ ಕುಮಾರ್ ಮಾವಿನಕಾಡು
ಅಸಹಿಷ್ಣುತೆ ಹೇಳಿಕೆಯಿಂದ ಸ್ನ್ಯಾಪ್ ಡೀಲ್ ನ ಜಾಹೀರಾತಿನಿಂದ ಹೊರಹಾಕಲ್ಪಟ್ಟಿದ್ದ ಬಾಲಿವುಡ್ ನಟ ಅಮೀರ್ ಖಾನ್ ಕಣ್ಣು ಇದೀಗ ಇದುವರೆಗೂ ಅಬ್ಬಾಸ್ ನಟಿಸುತ್ತಿದ್ದ ಹಾರ್ಪಿಕ್ ಜಾಹೀರಾತಿನ ಮೇಲೆ ಬಿದ್ದಿದೆ! ಜಾಹೀರಾತಿನಲ್ಲಿ ದೇಶದ ಪರವಾಗಿ ಮಾತನಾಡುವ ವ್ಯಕ್ತಿ ಹೊರಗೆ ದೇಶದ ಮಾನ ತೆಗೆಯುವ ಮಾತನ್ನಾಡಿದ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಇನ್ಕ್ರೆಡಿಬಲ್ ಇಂಡಿಯಾ ಜಾಹೀರಾತಿನಿಂದಲೂ ಹೊರ ಹಾಕಲ್ಪಟ್ಟ ನಂತರ ಅಮೀರ್ ಖಾನ್,ಮೊದಲ ಬಾರಿಗೆ ತನ್ನ ಕೈಯಲ್ಲಿ ಯಾವುದೇ ಜಾಹೀರಾತಿಲ್ಲದೇ ಕುಳಿತುಕೊಳ್ಳುವಂತಾಗಿದೆ.
ಇದೇ ಸಮಯದಲ್ಲಿ ನಟ ಅಬ್ಬಾಸ್ ನೊಂದಿಗಿನ ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ನ ಜಾಹೀರಾತಿನ ಒಪ್ಪಂದದ ಅವಧಿ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿರುವ ಕಾರಣ ಶತಾಯ ಗತಾಯ ಹಾರ್ಪಿಕ್ ಕಂಪನಿಯ ರಾಯಭಾರಿಯಾಗಲೇಬೇಕೆಂದು ನಿರ್ಧರಿಸಿರುವ ಅಮೀರ್,ತನ್ನ ಕಾರ್ಯದರ್ಶಿಯ ಮೂಲಕ ಈಗಾಗಲೇ ಕಂಪನಿಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.ದಂಗಾಲ್ ಹೀರೋನ ಈ ನಡೆಯಿಂದ ಕಂಗಾಲ್ ಆಗಿರುವ ಹಾರ್ಪಿಕ್ ಹೀರೋ ಜಾಹೀರಾತನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ ನಟ ಅಮೀರ್ ಖಾನ್,ನಾನು ಇದುವರೆಗೂ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದೇನೆ.ಇನ್ನು ಮುಂದೆಯೂ ನಟಿಸುತ್ತೇನೆ.ನಾನು ಮತ್ತು ನನ್ನ ಕುಟುಂಬ ಭಾರತವನ್ನು ಅಪಾರವಾಗಿ ಪ್ರೀತಿಸುತ್ತೇವೆ.ನಾವು ಈ ದೇಶವನ್ನು ಬಿಟ್ಟು ಹೋಗುವ ಬಗ್ಗೆ ಯಾವುದೇ ನಿದ್ದೆ ಬಾರದ ರಾತ್ರಿಯಲ್ಲೂ ಸಮಾಲೋಚಿಸಿಲ್ಲ.ಒಂದು ವೇಳೆ ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ನ ಜಾಹೀರಾತಿನಲ್ಲಿ ನಟಿಸುವ ಅವಕಾಶ ದೊರೆತರೆ ಅದರಿಂದ ಬರುವ ಸಂಭಾವನೆಯ ಶೇ.೫೦ ರಷ್ಟು ಮೊತ್ತವನ್ನು ಪಾಕೀಸ್ತಾನದಲ್ಲಿ ಬಾಂಬ್ ದಾಳಿಯಿಂದ ಸಂತ್ರಸ್ತರಾದ ಜನರಿಗೆ ನೆರವಾಗಲು ಬಳಸುವುದಾಗಿ ಹೇಳಿದರು.
ಈ ನಡುವೆ ಬೆಂಗಳೂರಿನ ಜಾತ್ಯಾತೀತ ಶಾಸಕ ಜಮೀರ್ ಅಹಮ್ಮದ್ ಅವರನ್ನು ಭೇಟಿಯಾದ ಅಬ್ಬಾಸ್,ಈ ವಿಷಯದಲ್ಲಿ ತನಗೆ ಸಹಾಯ ಮಾಡಬೇಕೆಂದು ಕೋರಿದರು.ಅವರಿಗೆ ಪ್ರತಿಕ್ರಿಯಿಸಿದ ಜಮೀರ್,ಜಾತ್ಯಾತೀತರ ನಡುವೆ ಈ ರೀತಿಯ ಸ್ಪರ್ಧೆ ಒಳ್ಳೆಯದಲ್ಲ.ನಮ್ಮ ಹಿರಿಯರ ಮುಂದೆ ಈ ವಿಷಯವನ್ನಿಟ್ಟು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು.ಎಲ್ಲಾ ಜಾತ್ಯಾತೀತರ ಕಂಪನಿಗಳ ಉತ್ಪನ್ನಗಳ ಪ್ರಚಾರಕ್ಕೂ ರಾಯಭಾರಿಗಳನ್ನಾಗಿ ಜಾತ್ಯಾತೀತರನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಫ಼ತ್ವಾ ಹೊರಡಿಸುವ ಬಗ್ಗೆ ತಾನು ಈಗಾಗಲೇ ನಮ್ಮ ವೈಯುಕ್ತಿಕ ಕಾನೂನು ಮಂಡಳಿ ಮತ್ತು ಶಾಹಿ ಇಮಾಂ ಬುಖಾರಿಯವರ ಜೊತೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಕೆಲವೇ ದಿನಗಳಲ್ಲಿ ಈ ಬಗ್ಗೆ ಫ಼ತ್ವಾ ಹೊರಬೀಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನಮ್ಮ ದೇಶದ ಸಂವಿಧಾನದಲ್ಲಿ ಫ಼ತ್ವಾಗಳಿಗೆ ಮಾನ್ಯತೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಮೀರ್,ನಮ್ಮ ವೈಯುಕ್ತಿಕ ಕಾನೂನಿನಲ್ಲಿ ಸಂವಿಧಾನಕ್ಕೇ ಮಾನ್ಯತೆಯಿಲ್ಲ ಎಂದು ಸ್ವಲ್ಪ ಖಾರವಾಗಿಯೇ ಉತ್ತರಿಸಿದರು.
ಮುಂದಿನ ಶುಕ್ರವಾರ ಡಿ.ಎಸ್.ಯು.ಮುಖಂಡ ಉಮರ್ ಖಾಲಿದ್ ನ ನೇತೃತ್ವದಲ್ಲಿ ಬನಾರಸ್ ಹಿಂದೂ ವಿ.ವಿ.ಸೇರಿದಂತೆ ದೇಶದ ಹದಿನೆಂಟು ವಿಶ್ವವಿದ್ಯಾಲಯಗಳಲ್ಲಿ ಅಮೀರ್ ಖಾನ್ ಪರ ಘೋಷಣೆ ಕೂಗಿ ಹಾರ್ಪಿಕ್ ಜಾಹೀರಾತಿನಲ್ಲಿ ನಟಿಸಲು ಅವರಿಗೆ ಬೆಂಬಲ ವ್ಯಕ್ತಪಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದೇ ವೇಳೆ ಪಾಕೀಸ್ತಾನದ ಪ್ರಧಾನಿ ನವಾಜ್ ಷರೀಫ್ ಲಾಹೋರ್ ನಲ್ಲಿ ಇಂದು ಮಾತನಾಡುತ್ತಾ,ಮುಂದಿನ ತಿಂಗಳು ಅಮೇರಿಕಾದಲ್ಲಿ ನಡೆಯುವ ಪರಮಾಣು ಶೃಂಗಸಭೆಯಲ್ಲಿ ಈ ವಿಷಯದ ಬಗ್ಗೆ ಅಲ್ಲಿನ ಅಧ್ಯಕ್ಷರ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.
ಕೆಲ ರಾಜಕೀಯ ಪಕ್ಷಗಳೂ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ಹಲವು ಪ್ರಗತಿಪರ ಸಂಘಟನೆಗಳು ‘ದೇಶದಲ್ಲಿ ಜಾತ್ಯಾತೀತರ ನಡುವೆ ನಡೆಯುತ್ತಿರುವ ಈ ರೀತಿಯ ಅನಾರೋಗ್ಯಕರ ಸ್ಪರ್ಧೆಗೆ ಮೋದಿ ಸರ್ಕಾರದ ಷಡ್ಯಂತ್ರವೇ ಕಾರಣ’ ಎಂದು ಆರೋಪಿಸಿದ್ದು,ಮುಂದಿನ ಸೋಮವಾರದಂದು ಖಾಸಗಿ ಜಾಹೀರಾತಿನಲ್ಲಿ ಜಾತ್ಯಾತೀತರಿಗೆ ಮೀಸಲಾತಿಗೆ ಒತ್ತಾಯಿಸಿ ದೇಶದಾದ್ಯಂತ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿವೆ.ಈ ಬಗ್ಗೆ ಸರ್ಕಾರ ಶೀಘ್ರವಾಗಿ ಕಾನೂನು ತರದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿಯೂ ಅವು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ!
ಒಟ್ಟಿನಲ್ಲಿ ಎಲ್ಲವೂ ಅಮೀರ್ ಖಾನ್ ಅಂದುಕೊಂಡಂತೆಯೇ ಆದರೆ ಇನ್ನು ಕೆಲವೇ ದಿನಗಳಲ್ಲಿ ಅಮೀರ್ ಖಾನ್ ಕೂಡಾ ಅಬ್ಬಾಸ್ ನಂತೆಯೇ ನೇರವಾಗಿ ನಿಮ್ಮ ಶೌಚಾಲಯ ಕೋಣೆಗೆ ನುಗ್ಗುವ ದಿನ ದೂರವಿಲ್ಲ!!
*ವಿ.ಸೂ:ಈ ಸುದ್ದಿಯು ಕೇವಲ ಕಾಲ್ಪನಿಕವಾಗಿದ್ದು ಮೇಲೆ ಹೆಸರಿಸಿದ ಆಯಾ ಪಕ್ಷ,ವ್ಯಕ್ತಿ,ಸಂಸ್ಥೆ,ಸಂಘಟನೆಗಳ ಇದುವರೆಗಿನ ನಡವಳಿಕೆಗಳನ್ನಾಧರಿಸಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿಯೇ ಹೊರತೂ ಯಾರನ್ನೂ ನೋಯಿಸುವ ಅಥವಾ ಅವಮಾನಿಸುವ ಉದ್ದೇಶದ್ದಲ್ಲ.
ಸುಳ್ಸುದ್ದಿ : ಭಯೋತ್ಪಾದಕಿಯನ್ನು ವರಿಸಲಿರುವ ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷ!
– ಪ್ರವೀಣ್ ಕುಮಾರ್ ಮಾವಿನಕಾಡು
ಕಳೆದ ಹಲವು ದಶಕಗಳಿಂದ ಭಾರತದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎನಿಸಿಕೊಂಡಿದ್ದ ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷರೊಬ್ಬರು ಭಯೊತ್ಪಾದಕಿಯೊಬ್ಬಳನ್ನು ವಿವಾಹವಾಗಲಿರುವುದಾಗಿ ಆ ಪಕ್ಷದ ಹಿರಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಇತ್ತೀಚಿಗೆ ಪಕ್ಷ ಕೈಗೊಂಡ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಭಯೋತ್ಪಾದಕರು ಅಥವಾ ಭಯೋತ್ಪಾದಕರ ಬೆಂಬಲಿಗರು ಸುಮಾರು 15 ರಿಂದ 20 ಪ್ರತಿಶತ ಇದ್ದು,ಅವರೆಲ್ಲರೂ ಈ ಮೊದಲು ನಮ್ಮ ಪಕ್ಷದ ಖಾಯಂ ಮತದಾರರಾಗಿದ್ದರು,ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಪಕ್ಷದಂತೆಯೇ ಹಲವು ಮೂಲಭೂತವಾದೀ ಪಕ್ಷಗಳು ಉದಯಿಸಿದ್ದು, ಇನ್ನು ಕೆಲವು ಪಕ್ಷಗಳು ವೋಟಿಗಾಗಿ ತಮ್ಮ ತತ್ವ-ಸಿದ್ದಾಂತ ಗಳನ್ನು ಬದಲಾಯಿಸಿಕೊಂಡಿದ್ದು,ಇದರಿಂದಾಗಿ ಭಯೋತ್ಪಾದಕರ ಓಟಿಗಾಗಿ ದೇಶದಲ್ಲಿ ತೀವ್ರ ಸ್ಪರ್ದೆ ಏರ್ಪಟ್ಟಿದೆ.ಆದ ಕಾರಣ ಆಂಧ್ರ,ಪಶ್ಚಿಮ ಬಂಗಾಳ,ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿರುವ ನಮ್ಮ ಸಾಂಪ್ರದಾಯಿಕ ಭಯೋತ್ಪಾದಕರ ಮತಗಳನ್ನು ಮತ್ತೆ ಬುಟ್ಟಿಗೆ ಹಾಕಿಕೊಳ್ಳುವ ದೃಷ್ಠಿಯಿಂದಾಗಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಕಳೆದ ತಿಂಗಳು ಹೈದರಾಬಾದ್ ನಲ್ಲಿ ಬಾಂಬ್ ಇಟ್ಟಿದ್ದ ಯಾಕೂಬ್ ಮೆಮನ್ ಎನ್ನುವ ಉಗ್ರವಾದಿಯ ಬೆಂಬಲಿಗರ ಪರವಾಗಿ ಹೋರಾಟ ನಡೆಸಿದ ಆ ಯುವರಾಜನಿಗೆ ಸಿಕ್ಕ ಅಭೂತಪೂರ್ವ ಬೆಂಬಲವನ್ನು ಕಂಡು ಪುಳಕಗೊಂಡ ಪಕ್ಷದಿಂದ ನೇಮಿಸಲ್ಪಟ್ಟ ಹಲವು ಸಲಹೆಗಾರರು,ಆತನ ತಾಯಿಯೂ ಆದ ಪಕ್ಷದ ಅಧ್ಯಕ್ಷೆಯ ಮುಂದೆ ಈ ರೀತಿಯ ಸಲಹೆಯನ್ನಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.ನಂತರ ಪಕ್ಷಾಧ್ಯಕ್ಷೆ ಈ ಬಗ್ಗೆ ಸಕಾರಾತ್ಮಕ ತೀರ್ಮಾನವನ್ನು ಕೈಗೊಂಡು ಪಕ್ಷದ ನೀತಿ ನಿರೂಪಣಾ ಸಮಿತಿಯ ಮುಂದೆ ಮಂಡಿಸಿದ್ದು, ಸಮಿತಿ ತನ್ನ ಸರ್ವಾನುಮತದ ಒಪ್ಪಿಗೆ ಸೂಚಿಸಿದ ಬಳಿಕ ಪಕ್ಷ ಈ ಕುರಿತು ಅಂತಿಮ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಸುಳ್ಸುದ್ದಿ : ರಾಜ್ಯದಲ್ಲಿ “ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ” ಅಸ್ತಿತ್ವಕ್ಕೆ
– ಪ್ರವೀಣ್ ಕುಮಾರ್ ಮಾವಿನಕಾಡು
ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ”ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ”ಅಸ್ತಿತ್ವಕ್ಕೆ ತರಲಾಗಿದ್ದು, ವೇದಿಕೆಗೆ ನೂತನ ಪದಾಧಿಕಾರಿಗಳನ್ನೂ ಸಹಾ ಆಯ್ಕೆ ಮಾಡಲಾಗಿದೆ.ಶಂಕಿತ ಭಯೋತ್ಪಾದಕರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಾಗೂ ಕೆಲ ಸುಧಾರಣೆಗಳ ಉದ್ದೇಶದಿಂದ ರಾಜ್ಯದಲ್ಲಿ “ಶಂಕಿತ ಭಯೋತ್ಪಾದಕರ ಹಿತರಕ್ಷಣಾ ವೇದಿಕೆ” ಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಶ್ರೀಯುತ.ಕಾಣೇಶ್ ಜಲ್ಲಿಕಟ್ಟು ಹೇಳಿದರು.ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ವೇದಿಕೆಯ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರವಾಗಿದ್ದು ಆ ವೈವಿಧ್ಯತೆಯಲ್ಲಿ ಭಯೋತ್ಪಾದನೆಯೂ ಒಂದು ಸಂಸ್ಕೃತಿಯಾಗಿದೆ. ಆದರೆ ಇತ್ತೀಚಿಗೆ ಕೆಲವು ಪರಿವಾರಗಳು ಈ ದೇಶದಲ್ಲಿ ಏಕಸಂಸ್ಕೃತಿ ಹೇರುವ ಹುನ್ನಾರ ನಡೆಸಿದ್ದು ಭಯೋತ್ಪಾದಕರ ಮೂಲ ಸಂಸ್ಕೃತಿಯನ್ನು ನಾಶಪಡಿಸಲು ಯತ್ನಿಸುತ್ತಿವೆ ಎಂದು ಕಿಡಿಕಾರಿದರು.ಇಂತಹಾ ಸಂದರ್ಭದಲ್ಲಿ ಶಂಕಿತ ಭಯೋತ್ಪಾದಕರಿಗೆ ನೈತಿಕ ಬೆಂಬಲ ಅತ್ಯಗತ್ಯವಾಗಿದ್ದು ಅವರಿಗೆ ಬೆಂಬಲವಾಗಿ ವೇದಿಕೆ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.ಮುಂದಿನ ತಿಂಗಳು ವೇದಿಕೆಯವತಿಯಿಂದ ಶಂಕಿತ ಉಗ್ರಗಾಮಿಗಳನ್ನು ಸನ್ಮಾನಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸುಳ್ಸುದ್ದಿ – ಪ್ರಶಸ್ತಿ ವಾಪಸ್ ಪ್ರಹಸನ : ಬೇಸ್ತುಬಿದ್ದ ಸಾಹಿತಿಗಳು
– ಪ್ರವೀಣ್ ಕುಮಾರ್,ಮಾವಿನಕಾಡು
ಘಟನೆ ಒಂದು:
ಅವರೊಬ್ಬ ಹಳೆಯ ಸಾಹಿತಿ.ಹಲವಾರು ವರ್ಷಗಳ ಹಿಂದೆ ಅವರಿಗೆ ಎರಡು ಲಕ್ಷ ನಗದಿನ ಜೊತೆಗೆ ಅಕಾಡೆಮಿ ಪ್ರಶಸ್ತಿ ಕೂಡಾ ದೊರಕಿತ್ತು.ಕೆಲ ದಿನಗಳ ಹಿಂದೆ ಟೌನ್ ಹಾಲ್ ಬಳಿ ಅವರನ್ನು ಭೇಟಿಯಾದ ವ್ಯಕ್ತಿಯೊಬ್ಬ,ವಿಚಾರವಾದಿಗಳ ಹತ್ಯೆಯನ್ನು ಖಂಡಿಸಿ, ಅರವತ್ತು ವರ್ಷದಲ್ಲಿ ದೇಶದಲ್ಲಿ ಎಂದೂ ಇಂತಹಾ ಘಟನೆ ನಡೆದಿಲ್ಲ ಎಂದು ಬಿಂಬಿಸುವ ಸಲುವಾಗಿ ಅದೇ ಕಾರಣವನ್ನು ನೀಡಿ ನಿಮಗೆ ನೀಡಲಾದ ಪ್ರಶಸ್ತಿ ಮತ್ತು ಪ್ರಶಸ್ತಿಯ ಜೊತೆ ದೊರೆತ ಹಣವನ್ನು ಅಕಾಡೆಮಿಗೆ ಮರಳಿಸಿದರೆ ಮುಂದೆ ರಚಿಸಲ್ಪಡುವ “ಗಂಜಿ ಗಿರಾಕಿಗಳ ಉದ್ಧಾರ ಸಮಿತಿ”ಗೆ ನಿಮ್ಮನ್ನೇ ಅಧ್ಯಕ್ಷರಾಗಿಸಲಾಗುವುದು ಮತ್ತು ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನ ನೀಡಲಾಗುವುದು ಎಂದು ಪುಸಲಾಯಿಸಿದ್ದಾನೆ.ಪ್ರಮುಖ ಪಕ್ಷವೊಂದರ ಹಿರಿಯ ನಾಯಕನೆಂದು ಹೇಳಿಕೊಂಡಿದ್ದ ಆತನ ಮಾತು ಕೇಳಿ 5 ಪರ್ಸೆಂಟ್ ಬಡ್ಡಿಗೆ ಹಣ ತಂದು ತಮ್ಮ ಬ್ಯಾಂಕ್ ಖಾತೆಗೆ ತುಂಬಿ ಚೆಕ್ ನ ಜೊತೆಗೆ ಪ್ರಶಸ್ತಿಯನ್ನೂ ತೆಗೆದುಕೊಂಡು ಹೋಗಿ ಅಕಾಡೆಮಿಗೆ ಮರಳಿಸಿ ಇಂದಿಗೆ ಹದಿನೈದು ದಿನವಾಯಿತು.ಇದುವರೆಗೂ ಆತನ ಕಡೆಯಿಂದ ಯಾವುದೇ ಸುದ್ದಿಯೂ ಇಲ್ಲ! ಆ ನಾಯಕನ ಮಾತು ಕೇಳಿ ಸಾಲ ಮಾಡಿ ಪ್ರಶಸ್ತಿ ಮರಳಿಸಿದ ಸಾಹಿತಿ ಈಗ,ಅತ್ತ ಹುದ್ದೆಯೂ ಇಲ್ಲ,ಇತ್ತ ಪ್ರಶಸ್ತಿ ಮತ್ತು ಹಣವೂ ಇಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ!!
ಮತ್ತಷ್ಟು ಓದು 
ಸುಳ್ಸುದ್ದಿ-ಬೆಂಗಳೂರಿನಲ್ಲಿ ಮಿತಿಮೀರಿದ ಸರಗಳ್ಳರ ಹಾವಳಿ:ಮೋದಿ ವಿರುದ್ಧ ವ್ಯಾಪಕ ಟೀಕೆ
– ಪ್ರವೀಣ್ ಕುಮಾರ್,ಮಾವಿನಕಾಡು
ಬೆಂಗಳೂರಿನಲ್ಲಿ ದಿನೇ ದಿನೇ ಸರಗಳ್ಳರ ಹಾವಳಿ ಮಿತಿ ಮೀರುತ್ತಿದ್ದು ಪ್ರಧಾನಿ ಮೋದಿ ಈ ಬಗ್ಗೆ ತಮ್ಮ ಧೀರ್ಘ ಮೌನ ಮುರಿಯಬೇಕು ಎಂದು ರಾಜ್ಯದ ಗೃಹ ಸಚಿವರು ಆಗ್ರಹಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮಾನ್ಯ ಗೃಹ ಸಚಿವರು,ನಮ್ಮ ರಾಜ್ಯದಲ್ಲಿ,ಅದರಲ್ಲೂ ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಊಹೆಗೂ ನಿಲುಕದ ಮಟ್ಟಕ್ಕೆ ಬೆಳೆದು ನಿಂತಿದೆ.ಆದರೆ ಈ ಬಗ್ಗೆ ಪ್ರಧಾನಿ ಇದುವರೆಗೂ ಬಾಯಿ ಬಿಟ್ಟು ಏನನ್ನೂ ಹೇಳಿಲ್ಲ.ಇದು ವೈಯುಕ್ತಿಕವಾಗಿ ನನಗೆ ತೀರಾ ಆಶ್ಚರ್ಯವನ್ನುಂಟುಮಾಡಿದೆ ಎಂದು ಹೇಳಿದರು. ಈ ನಡುವೆ ಸರಗಳ್ಳತನಕ್ಕೆ ಹೊಸದೊಂದು ವ್ಯಾಖ್ಯಾನ ಕೊಟ್ಟ ಸಚಿವರು,ಮಹಿಳೆಯರ ಕತ್ತಿನಿಂದ ಇಬ್ಬರು ಸರಗಳ್ಳರು ಸರವನ್ನು ಕಿತ್ತೊಯ್ದರೆ ಅದು ಸರಗಳ್ಳತನವಾಗುವುದಿಲ್ಲ,ಮೂರು ಅಥವಾ ಅದಕ್ಕಿಂತಾ ಹೆಚ್ಚು ಜನ ಕದ್ದರೆ ಮಾತ್ರ ಅದನ್ನು ಸರಗಳ್ಳತನ ಎಂದು ದೂರು ದಾಖಲಿಸಿಕೊಳ್ಳಲು ನಮ್ಮ ಪೊಲೀಸರಿಗೆ ಆದೇಶಿಸಿದ್ದೇನೆ ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ,ಇತ್ತೀಚಿಗೆ ನರೇಂದ್ರ ಮೋದಿ ಮೌನೇಂದ್ರ ಮೋದಿ ಆಗುತ್ತಿದ್ದಾರೆ ಎಂದು ಟೀಕಿಸಿದರು.ಈ ಸರಗಳ್ಳತನ ಪ್ರಕರಣಗಳಲ್ಲಿ ಪ್ರಮುಖವಾಗಿ ಇರಾನೀ ಗ್ಯಾಂಗ್ ನ ಹೆಸರು ಕೇಳಿಬರುತ್ತಿದ್ದರೂ ಪ್ರಧಾನಿ ಮೋದಿ ಇದುವರೆಗೂ ಪ್ರಕರಣ ಸಂಬಂಧ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.ಒಂದು ವೇಳೆ ಪ್ರಕರಣದಲ್ಲಿ ಇರಾನೀ ಗ್ಯಾಂಗ್ ನ ಪಾತ್ರ ಇರುವುದೇ ಹೌದಾದಲ್ಲಿ ಇರಾನಿನ ಅಧ್ಯಕ್ಷ ಹಸನ್ ರೌಹಾನಿ ಅವರನ್ನು ಭೇಟಿ ಮಾಡಿದ ಸಮಯದಲ್ಲಿ ಯಾಕೆ ಅವರ ಗಮನಕ್ಕೆ ತರಲಿಲ್ಲ ಎಂದು ಪ್ರಶ್ನಿಸಿದರು.
ವಿಷ್ಣುವರ್ಧನ್: ಅವಕಾಶವಾದಿಗಳ ನಡುವೆ ನಲುಗಿದ ನಟ
– ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ವಿಷ್ಣುವರ್ಧನ್ ನಿಧನರಾದಾಗ ಸಿನಿಮಾವನ್ನು ಬಹುವಾಗಿ ಪ್ರೀತಿಸುವ ಪ್ರೇಕ್ಷಕರು ‘ಇನ್ನು ಮುಂದೆ ಭಾವನಾತ್ಮಕ ಪಾತ್ರಗಳಲ್ಲಿ ನಾವುಗಳು ಯಾರನ್ನು ನೋಡುವುದು’ ಎಂದು ಉದ್ಘರಿಸಿದರು. ಏಕೆಂದರೆ ಆ ಹೊತ್ತಿಗಾಗಲೆ ವಿಷ್ಣುವರ್ಧನ್ ಭಾವನಾತ್ಮಕ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸುಗಳಲ್ಲಿ ನೆಲೆಯೂರಿದ್ದರು. ಆಶ್ಚರ್ಯದ ಸಂಗತಿ ಎಂದರೆ ಈ ನಟನಿಗೆ ‘ಸಾಹಸ ಸಿಂಹ’ ಎನ್ನುವ ಬಿರುದಿನಿಂದ ಕನ್ನಡ ಚಿತ್ರರಂಗದಲ್ಲಿ ಐಡೆಂಟಿಟಿ ಸಿಕ್ಕರೂ ಅವರು ತಮ್ಮ ಭಾವನಾತ್ಮಕ ಪಾತ್ರಗಳಿಂದಲೇ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಹೊಂಬಿಸಲು, ಬಂಧನ, ಸುಪ್ರಭಾತ, ಲಾಲಿಯಂಥ ಭಾವಪ್ರಧಾನ ಸಿನಿಮಾಗಳು ವಿಷ್ಣುವರ್ಧನ್ ಅವರಲ್ಲಿನ ಮನೋಜ್ಞ ಅಭಿನಯದ ಕಲಾವಿದನನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ವಿಯಾದವು. ವಿಷ್ಣುವರ್ಧನ್ ನಟನಾ ವೃತ್ತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರಿಂದಲೇ ಅವರು ತಮ್ಮ ಸಿನಿಮಾ ಬದುಕಿನ ಯಶಸ್ಸಿನ ಉತ್ತುಂಗದಲ್ಲಿದಾಗಲೇ ಹೊಸದೊಂದು ಬದಲಾವಣೆಗೆ ತಮ್ಮನ್ನು ತಾವು ತೆರೆದುಕೊಂಡರು. ಹೀಗೆ ಪ್ರಯತ್ನಿಸದೆ ಹೋಗಿದ್ದರೆ ಅವರೊಳಗಿನ ಕಲಾವಿದ ಒಂದೇ ಪ್ರಕಾರದ ಪಾತ್ರಗಳಿಗೆ ಬ್ರ್ಯಾಂಡ್ ಆಗುವ ಅಪಾಯವಿತ್ತು. ಅನೇಕ ನಟ ನಟಿಯರು ತಮ್ಮ ವೃತ್ತಿಬದುಕಿನುದ್ದಕ್ಕೂ ಒಂದೇ ಪ್ರಕಾರದ ಪಾತ್ರಗಳಿಗೆ ಜೋತುಬಿದ್ದು ಆ ಒಂದು ಏಕತಾನತೆಯ ನಡುವೆ ಅವರೊಳಗಿನ ಕಲಾವಿದ ಕಳೆದು ಹೋಗಿರುವುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಅಂಥದ್ದೊಂದು ಸಮಸ್ಯೆಯಿಂದ ಕಳಚಿಕೊಳ್ಳುವಲ್ಲಿ ವಿಷ್ಣುವರ್ಧನ್ ಯಶಸ್ವಿಯಾದರೂ ಅವರೊಳಗಿನ ಪರಿಪೂರ್ಣ ಕಲಾವಿದನನ್ನು ಪರಿಚಯಿಸುವಲ್ಲಿ ಕನ್ನಡ ಚಿತ್ರರಂಗ ಸೋತಿದೆ ಎನ್ನುವುದು ಪ್ರಜ್ಞಾವಂತ ಪ್ರೇಕ್ಷಕರ ಅಭಿಮತ. ಇನ್ನು ಕೆಲವು ವರ್ಷಗಳ ಕಾಲ ವಿಷ್ಣುವರ್ಧನ್ ನಮ್ಮೊಡನಿದ್ದರೆ ಅವರನ್ನು ನಾವು ಒಬ್ಬ ಪರಿಪೂರ್ಣ ಮತ್ತು ಮಾಗಿದ ಕಲಾವಿದನಾಗಿ ನೋಡಲು ಸಾಧ್ಯವಿತ್ತೇನೋ. ಆದರೆ ಸಾವಿನ ರೂಪದಲ್ಲಿ ಬಂದ ವಿಧಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತು. ಬದುಕಿದ್ದರೆ ಈ ದಿನ (ಸೆಪ್ಟೆಂಬರ್, 18) ವಿಷ್ಣುವರ್ಧನ್ ತಮ್ಮ 65 ನೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು.
ಸುಳ್ಸುದ್ದಿ : ಉದ್ಯಮಿಗಳಿಬ್ಬರ ದೇವರ ಕೋಣೆಗಳು ಇನ್ನು ಮುಜರಾಯಿ ಇಲಾಖೆಯ ವಶಕ್ಕೆ!!
– ಪ್ರವೀಣ್ ಕುಮಾರ್ ಮಾವಿನಕಾಡು
ಹೂವು,ಹಣ್ಣು,ಅಗರಬತ್ತಿ,ಕರ್ಪೂರ ಮುಂತಾದ ಪೂಜಾ ಸಾಮಗ್ರಿಗಳ ಖರೀದಿಯ ಲೆಕ್ಕ ಪತ್ರಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ನೀಡಿ ಬೆಂಗಳೂರಿನ ಇಬ್ಬರು ಉದ್ಯಮಿಗಳ ಪೂಜಾ ಗೃಹಗಳನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆಯುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ! ಉದ್ಯಮಿಗಳ ವಿರುದ್ದ ಅವರ ಹೆಂಡತಿ ಹಾಗೂ ಮಕ್ಕಳಿಂದ ಸಲ್ಲಿಕೆಯಾಗಿರುವ ದೂರುಗಳ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮಗಳು ಜರುಗಲಿವೆ.ಈ ಬಗ್ಗೆ ಈಗಾಗಲೇ ಇಲಾಖೆಯ ಕಾನೂನು ತಜ್ಞರಿಂದ ಅಭಿಪ್ರಾಯ ನಿರೀಕ್ಷಿಸಲಾಗುತ್ತಿದ್ದು,ಅವರಿಂದ ಶಿಫಾರಸು ಬಂದ ನಂತರ ಇಲಾಖೆಯ ಆಯುಕ್ತರು ಅಗತ್ಯ ಕಾನೂನು ಕ್ರಮಕೈಗೊಳ್ಳುತ್ತಾರೆ ಎಂದು ಮುಜರಾಯಿ ಸಚಿವರು ತಿಳಿಸಿದರು.
ಇದಕ್ಕೂ ಮುನ್ನ ಒಬ್ಬ ಉದ್ಯಮಿಯ ಪತ್ನಿ,ತನ್ನ ಪತಿ ನನ್ನನ್ನು ತುಂಬಾ ಹಣ ಖರ್ಚಾಗುತ್ತದೆ ಎನ್ನುವ ಕಾರಣವೊಡ್ಡಿ ಶಾಪಿಂಗ್ ಗೆ ಕರೆದು ಕೊಂಡು ಹೋಗುವುದಿಲ್ಲ, ಆದರೆ ಪ್ರತೀ ತಿಂಗಳೂ ಸಂಕಷ್ಟ ಹರ ಗಣಪತಿ ವ್ರತಕ್ಕಾಗಿ ಸಾವಿರಾರು ರೂ.ಖರ್ಚು ಮಾಡುತ್ತಾರೆ.ಜೊತೆಗೆ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ ಎಂದರೆ ಅದನ್ನೂ ಕೊಡುತ್ತಿಲ್ಲ ಎಂದು ದೂರು ದಾಖಲಿಸಿದ್ದರು.
ಇನ್ನೊಬ್ಬ ಉದ್ಯಮಿಯ ಪುತ್ರ,ನನ್ನ ತಂದೆ ತುಂಬಾ ಹಣ ಖರ್ಚಾಗುತ್ತದೆ ಎಂದು ನನ್ನ ಬಹು ದಿನದ ಬೇಡಿಕೆಯಾದ ಸೈಕಲ್ ಕೊಡಿಸಿರಲಿಲ್ಲ.ಆದರೆ ಮೊನ್ನೆ ಮೊನ್ನೆ ವರಮಹಾ ಲಕ್ಷ್ಮಿ ಹಬ್ಬಕ್ಕೆ ಸುಮಾರು ಹತ್ತು ಸಾವಿರ ರೂ.ಗಳಿಗಿಂತಾ ಹೆಚ್ಚು ಹಣ ಖರ್ಚು ಮಾಡಿದ್ದಾರೆ ಮತ್ತು ಇದ್ಯಾವುದಕ್ಕೂ ಸರಿಯಾದ ಲೆಕ್ಕ ಪತ್ರವನ್ನೂ ಇಟ್ಟಿಲ್ಲ ಎಂದು ದೂರು ದಾಖಲಿಸಿದ್ದನು.
ಮತ್ತಷ್ಟು ಓದು 
ಸುಳ್ಸುದ್ದಿ : ಹಿಂದೂಪರ ಸಂಘಟನೆಗಳಿಂದಲೇ ಇನ್ನು ಬುದ್ಧಿಜೀವಿಗಳ ರಕ್ಷಣೆ !!
– ಪ್ರವೀಣ್ ಕುಮಾರ್ ಮಾವಿನಕಾಡು
ರಾಜ್ಯದಲ್ಲಿ ವಿಚಾರವಾದಿಯೆಂದು ಹೇಳಿಕೊಳ್ಳುವ ಯಾವುದೇ ವ್ಯಕ್ತಿಗೆ ಏನೇ ಆದರೂ ಅದಕ್ಕೆ ಯಾವುದೇ ಆಧಾರವಿಲ್ಲದೆಯೂ ಹಿಂದೂಪರ ಸಂಘಟನೆಗಳೇ ನೇರ ಹೊಣೆ ಹೊರಬೇಕಾಗಿದ್ದು, ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಿಂದೂಪರ ಸಂಘಟನೆಗಳೇ ನೇರವಾಗಿ ಅವರುಗಳ ರಕ್ಷಣೆಯ ಹೊಣೆಯನ್ನು ಹೊರಲು ಮುಂದಾಗಿವೆ!
ಎಲ್ಲಿ ಯಾರಿಗೆ ಏನೇ ಆಗಲೀ,ಸ್ಥಳಕ್ಕೆ ಪೊಲೀಸರು ಬರುವ ಮುನ್ನವೇ ಉಳಿದ ಬುದ್ಧಿಜೀವಿಗಳು ಮತ್ತು ಕೆಲವು ಪಕ್ಷಗಳು ಹಿಂದೂಪರ ಸಂಘಟನೆಗಳನ್ನೇ ಹೊಣೆ ಮಾಡಿ ಅವರನ್ನು ಅಪರಾಧಿ ಎಂದು ತೀರ್ಮಾನಿಸಿ ಶಿಕ್ಷೆಯ ಪ್ರಮಾಣವನ್ನೂ ಪ್ರಕಟಿಸಿಯಾಗಿರುತ್ತದೆ! ಆದ್ದರಿಂದ ಹಿಂದೂ ಸಂಘಟನೆಗಳಿಗೆ ಈ ಬುದ್ಧಿಜೀವಿಗಳು ‘ಬದುಕಿದ್ದರೂ ಕಷ್ಟ-ಸತ್ತರೂ ಕಷ್ಟ’ ಎಂಬಂತಾಗಿದೆ. ಈ ಸಂಕಟದಿಂದ ಪಾರಾಗಲು ಈ ಬೇಜವಬ್ದಾರಿ ಅವರುಗಳ ಒಂದು ಕೂದಲೂ ಕೊಂಕದಂತೆ ರಕ್ಷಣೆ ಮಾಡುವ ಜವಾಬ್ಧಾರಿಯನ್ನು ಇನ್ನು ಮುಂದೆ ನಮ್ಮ ಸಂಘಟನೆಗಳೇ ಹೊರಲಿವೆ ಎಂದು ಹೆಸರು ಹೇಳಲಿಚ್ಚಿಸದ ಹಿಂದೂಪರ ಸಂಘಟನೆಯ ಕಾರ್ಯಕರ್ತರೊಬ್ಬರು ತಿಳಿಸಿದರು.
“ವಿಚಾರವಾದಿಗಳ ರಕ್ಷಣಾ ಪಡೆ” ಎನ್ನುವ ಗಟ್ಟಿಮುಟ್ಟಾದ ಯುವಕರ ತಂಡವೊಂದನ್ನು ರಚಿಸಿದ್ದು,ಸುಮಾರು 2000 ಯುವಕರಿಗೆ ಈ ಬಗ್ಗೆ ಈಗಾಗಲೇ ತರಬೇತಿಯನ್ನು ನೀಡಲಾಗುತ್ತಿದೆ.ಇನ್ನು ಕೆಲವೇ ದಿನಗಳಲ್ಲಿ ಅವರನ್ನು ವಿಚಾರವಾದಿಗಳ ರಕ್ಷಣೆಗೆ ನೇಮಿಸಲಾಗುತ್ತದೆ.ಹಿರಿಯ “ಮಾಜಿ ಪತ್ರಕರ್ತ,ಹಾಲಿ ಬುದ್ದಿಜೀವಿ ಕಮ್ ರಾಜಕಾರಣಿ”ಯೊಬ್ಬರು ನೀಡಿದ, ಪ್ರಾಣಾಪಾಯವನ್ನೆದುರಿ -ಸುತ್ತಿರುವ ವಿಚಾರವಾದಿಗಳ ಜ್ಯೇಷ್ಠತಾ ಪಟ್ಟಿಯನ್ನಾಧರಿಸಿ ಮೇಲ್ವರ್ಗದ ಬುದ್ಧಿಜೀವಿಗಳಿಂದ ಹಿಡಿದು ಅತ್ಯಂತ ಕೆಳ ಹಂತದ ಬುದ್ಧಿಜೀವಿಗಳವರೆಗೂ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.





