ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕಾರಂತ’

6
ಆಗಸ್ಟ್

ಶತಮಾನ ಕಂಡ ಕಾದಂಬರಿ: ಮಾಡಿದ್ದುಣ್ಣೋ ಮಹಾರಾಯ

– ರಾಘವೇಂದ್ರ ಅಡಿಗ ಎಚ್ಚೆನ್

ಮಾಡಿದ್ದುಣ್ಣೋ ಮಹಾರಾಯಸ್ನೇಹಿತರೇ ನಾನಿಲ್ಲಿ ಹೇಳ ಹೊರಟಿರುವ ಕಾದಂಬರಿ ಕನ್ನಡ ಕಾದಂಬರಿಗಳಲ್ಲೆಲ್ಲಾ ಅತ್ಯಂತ ಪ್ರಮುಖವಾದದ್ದು ಹಾಗೂ ಒಂದು ಶತಮಾನವನ್ನು ಕಂಡಂತದೂ ಆಗಿದೆ. ಕನ್ನಡದಲ್ಲಿ ಕಾದಂಬರಿ ಪ್ರಕಾರವನ್ನು ಜನಪ್ರಿಯಗೊಳಿಸಿದವರು ಕಾರಂತರು, ಅ.ನ.ಕೃ. ಮುಂತಾದವರಾದರೆ ಕಾದಂಬರಿ ಪ್ರಕಾರವನ್ನು ಹುಟ್ಟುಹಾಕಿದವರು ಗುಲ್ವಾಡಿ ವೆಂಕಟರಾವ್ (ಇಂದಿರಾಬಾಯಿ-ಕನ್ನಡದ ಮೊದಲ ಸಾಮಾಜಿಕ ಕಾದಂಬರಿ) ಮೈಸೂರು ಸೂರ್ಯನಾರಾಯಣ ಭಟ್ಟ ಪುಟ್ಟಣ್ಣ (ಎಂ.ಎಸ್. ಪುಟ್ಟಣ್ಣ) ನವರುಗಳು. ಇದರಲ್ಲಿ ಎಂ.ಎಸ್. ಪುಟ್ಟಣ್ಣನವರು ಬರೆದ ಪ್ರಥಮ ಕಾದಂಬರಿ-ಮಾಡಿದ್ದುಣ್ಣೋ ಮಹಾರಾಯ (1915) ಗೆ ಇದೀಗ ಶತಮಾನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕೃತಿಕಾರರಾದ ಪುಟ್ಟಣ್ಣ ಹಾಗೂ ಕೃತಿಯ ಕುರಿತಂತೆ ನಾಲ್ಕು ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಇರಾದೆ ನನ್ನದು.

ಅನೇಕರಿಗೆ ಇದಾಗಲೇ ಪುಟ್ಟಣ್ಣನವರ ಬಗೆಗೆ ತಿಳಿದಿರಬಹುದು ಆದರೂ ಇಲ್ಲಿ ಅವರ ಜೀವನದ ಕುರಿತಂತೆ ಸ್ವಲ್ಪ ತಿಳಿದುಕೊಂಡು ಬಳಿಕ ಕಾದಂಬರಿಯ ಕುರಿತು ವಿಚಾರ ಮಾಡೋಣ

ಪುಟ್ಟಣ್ಣ (ಲಕ್ಷ್ಮೀನರಸಿಂಹ ಶಾಸ್ತ್ರಿ)ನವರು ಹುಟ್ಟಿದ್ದು ಮೈಸೂರಿನಲ್ಲಿ (21-11-1854). ತಂದೆ ಸೂರ್ಯನಾರಾಯಣ ಭಟ್ಟ, ತಾಯಿ ಲಕ್ಷ್ಮಮ್ಮ. ಹುಟ್ಟಿದ ಹತ್ತು ದಿವಸದಲ್ಲೇ ತಾಯಿಯನ್ನು ಕಳೆದುಕೊಂಡು ಬೆಳದದ್ದು ಸೋದರ ಮಾವನ ಮನೆಯಲ್ಲಿ. ಪ್ರಾರಂಭಿಕ ವಿದ್ಯಾಭ್ಯಾಸ ಖಾಸಗಿ ಮಠಗಳಲ್ಲಿ ಪೂರೈಸಿದ ಪುಟ್ಟಣ್ಣನವರು ಬಳಿಕ ರಾಜಾ ಸ್ಕೂಲಿನಲ್ಲಿ (ಇಂದಿನದ ಮಹಾರಾಜಾ ಕಾಲೇಜು) ಎಫ್. ಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೋಲಾರದ ಪ್ರೌಢಶಾಲೆಯಲ್ಲಿ ಸಹ ಅಧ್ಯಾಪಕರಾಗಿ ನೇಮಕಗೊಂಡರು.ಮದರಾಸಿನಲ್ಲಿ ಬಿ.ಎ. ಪದವಿ ವ್ಯಾಸಂಗವನ್ನು ಮುಗಿಸಿದ ಇವರು ಅಧ್ಯಾಪಕ ಪದವಿ ಬಿಟ್ಟು ಬೆಂಗಳೂರಿನ ಚೀಫ್ ಕೋರ್ಟಿನಲ್ಲಿ (ಈಗಿನ ಹೈಕೋರ್ಟಿನಲ್ಲಿ) ಭಾಷಾಂತರಕಾರರಾಗಿ ದುಡಿದರು. 1867 ರಲ್ಲಿ ಅವರನ್ನು ಚಿತ್ರದುರ್ಗದ ಅಮಲ್ದಾರನ್ನಾಗಿ ನೇಮಿಸಲಾಯಿತು. ಮುಂದೆ ನೆಲಮಂಗಲ, ಚಾಮರಾಜನಗರ, ಬಾಗೇಪಲ್ಲಿ, ಮುಳಬಾಗಿಲು, ಹೊಸದುರ್ಗಗಳಲ್ಲಿ  ಅಮಲ್ದಾರರಾಗಿ  ಕಾರ್ಯ ನಿರ್ವಹಿಸಿದರು. ಬೆಂಗಳೂರಿನ ತೆರಿಗೆದಾರರ ಸಂಘಟಕರಾಗಿದ್ದ ಅವರು ಆ ದಿನಗಳಲ್ಲಿಯೇ ದಾಖಲೆಗಳನ್ನು ಕನ್ನಡದಲ್ಲಿ ಮೂಡಿಸಲು ಕಾರಣರಾದರು. ಮತ್ತಷ್ಟು ಓದು »

31
ಜನ

ಕುಚ್ಚಿನ ಟೋಪಿಯ ಬೆಚ್ಚನೆ ಬೇಂದ್ರೆ, ನೆನಪುಗಳ ಗುಂಗಿನಲ್ಲಿ…

– ಅಶೋಕ ಶೆಟ್ಟರ್

Bendre(ಇಂದು, ಅಂದರೆ ಜನವರಿ ಮೂವತ್ತೊಂದು., ದ.ರಾ ಬೇಂದ್ರೆ ಜನಿಸಿದ ದಿನ. ಬೇಂದ್ರೆ ಕಾವ್ಯ ಒಂದು ಕಣಜ. ಮೊಗೆದಷ್ಟೂ ಒಸರುವ ಒರತೆ. ಜಗತ್ತಿನ ಶ್ರೇಷ್ಠ ಕವಿಗಳ ಸಾಲಿನಲ್ಲಿ ನಿಲ್ಲಬಲ್ಲ ಪ್ರತಿಭೆ.ಅವರು ಕನ್ನಡ ಕಾವ್ಯದ ಬಹುಮುಖ್ಯ ಧ್ವನಿ.ಅವರ ಕುರಿತಾಗಿ ಅಶೋಕ್ ಶೆಟ್ಟರ್ ಅವರು ೨ ವರ್ಷದ ಹಿಂದೆ ಬರೆದ ಈ ಲೇಖನ ಈಗ ಇಲ್ಲಿ, “ನಿಲುಮೆ”ಯ ಓದುಗರಿಗಾಗಿ – ನಿಲುಮೆ)

“ಅಲ್ಲಿ ಸಂಪಿಗೆಯಿತ್ತು ಪಾರಿಜಾತಕವಿತ್ತು
ಮಾವು ಮಲ್ಲಿಗೆಯಿತ್ತು ಮನೆಯಿದುರು
ಮುಗಿಲ ಮಲ್ಲಿಗೆಯಿತ್ತು ತೆಂಗಿತ್ತು ಹಲಸಿತ್ತು
ನಿಂಬಿಯ ಇಂಬಿತ್ತು ಎಡೆಎಡೆಗೆ
ಹೊಂಗೆಯ ಸಾಲಿತ್ತು ಕಣ್ಮುಂದೆ ಕೆರೆಯಿತ್ತು
ಗುಡ್ಡದ ನೆರೆಯಿತ್ತು ಅದರಾಚೆಗೆ… …..”

“ಸಖಿಗೀತ”ದಲ್ಲಿ ಬರುವ ಈ ಸಾಲುಗಳು ಬೇಂದ್ರೆ ಕಂಡ ಸಾಧನಕೇರಿಯ ಶಬ್ದಚಿತ್ರಗಳು.ನಿನ್ನೆ ಅಂದರೆ ೨೯ ಜನವರಿ ೨೦೧೧ ರಂದು ಮಧ್ಯಾಹ್ನ ಒಂದೆರಡು ತಾಸು ಧಾರವಾಡದ ಬೇಂದ್ರೆ ಭವನದಲ್ಲಿ ಇದ್ದೆ. ಬೇಂದ್ರೆ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಶಾಮಸುಂದರ ಬಿದರಕುಂದಿಯವರೊಂದಿಗೆ ಮಾತಾಡಿ ಆಮೇಲೆ ಬೇಂದ್ರೆಯವರ ಮೂಲನಿವಾಸ “ಶ್ರೀಮಾತಾ”ದಲ್ಲೇ ಇರುವ ಅವರ ಪುತ್ರ ವಾಮನ ಬೇಂದ್ರೆಯವರ ಜೊತೆ ಸ್ವಲ್ಪ ಹೊತ್ತು ಕಳೆದೆ. ಬೇಂದ್ರೆ ಭವನದ ಮೇಲಂತಸ್ತಿನ ಬಾಲ್ಕನಿಯಿಂದ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ನವೀಕೃತ ಸಾಧನಕೆರೆಗೆ ಹೋಗುವ ದಾರಿ,ಉದ್ದಕ್ಕೂ ಕಟಾಂಜನ ಇವನ್ನೆಲ್ಲ ನೋಡುತ್ತಿದ್ದಾಗ ನನ್ನ ಮನಸಿನಲ್ಲಿ ಅಚ್ಚೊತ್ತಿದಂತಿರುವ ಆ ಪರಿಸರದ ಬೇರೆಯದೇ ಚಿತ್ರದ ಮೇಲೆ ನಾನು ಇವುಗಳನ್ನು ಸುಪರಿಂಪೋಸ್ ಮಾಡಬೇಕಾಗಿ ಬಂತು.ನನ್ನ ಮನಸಿನಲ್ಲಿ ಸುಳಿಯುತ್ತಿದ್ದುದು ೩೦-೩೫ ವರ್ಷಗಳ ಹಿಂದೆ ಬೇಂದ್ರೆ ಮನೆ ಇರುವ ಸಾಲಿಗೆ ಎದುರಾಗಿ,ಗೋವಾಕ್ಕೆ ಹೋಗುವ ಮುಖ್ಯರಸ್ತೆಯಾಚೆ, ಸಾಧನಕೆರೆಯ ಒಂದು ಮೇರೆಯಾಗಿರುವ, ನಾನು ಪೋಲಿಸ್ ವಸತಿಗೃಹಗಳಿಗೆ ಸಾಗಿ ಹೋಗುತ್ತಿದ್ದ, ಕಿರಿದಾದ ಮಣ್ಣ ರಸ್ತೆ, ಸಾಧನಕೆರೆಯ ಇನ್ನೊಂದು ಮೇರೆಯಾಗಿ ಆ ಕೆರೆಯ ಏರಿ, ಅದರಾಚೆ ಭತ್ತದ ಗದ್ದೆ, ತೋಟ ಪಟ್ಟಿಗಳು,ಆಗೊಂದು ಈಗೊಂದರಂತೆ ಗೋವಾಕ್ಕೆ ಹೋಗುತ್ತಿದ್ದ ಖಾಸಗಿ ಅಥವಾ ಸರಕಾರಿ ವಾಹನಗಳು,ಕೆಲಗೇರಿ ಹಾಗು ಮುಗದ ಗ್ರಾಮಗಳ ನಡುವಿನ ಕುರುಚಲು ಕಾಡುಗಳಲ್ಲಿ ಸಂಗ್ರಹಿಸಿದ ಕಟ್ಟಿಗೆಗಳ ಹೊರೆ ಹೊತ್ತು ಓಟದ ನಡಿಗೆಯಲ್ಲಿ ಧಾರವಾಡದತ್ತ ಹೋಗುತ್ತಿದ್ದ ಬಡಪಾಯಿ ಹೆಂಗಳೆಯರು, ಮುಕ್ತಾಯಗೊಳ್ಳಬೇಕು ಎಂಬ ಯಾವ ಧಾವಂತವೂ ಇಲ್ಲದೇ ನಿಷ್ಕಾರಣವೆಂಬಂತೆ ನಿಷ್ಕರುಣೆಯಿಂದ ಸುರಿಯುತ್ತಿದ್ದ ಜಿಡ್ಡುಮಳೆ,ಅಂಚಿನಲ್ಲೆಲ್ಲ ಜೊಂಡು ಬೆಳೆದಿದ್ದ ಚಿಕ್ಕದೂ ಅಲ್ಲದ ಬಹಳ ವಿಸ್ತಾರವೂ ಅಲ್ಲದ ಸಾದನಕೆರೆ..ಹಳೆ ಕಾಲದ ಕೆಂಪು ಹಂಚಿನ ಮನೆಗಳು,ಸುಶಿಕ್ಷಿತ ಜನ..ಆ ಪರಿಸರದಲ್ಲಿದ್ದಷ್ಟೂ ಹೊತ್ತು ಮನಸಿನಲ್ಲಿ ನೆನಪುಗಳ ಸಂತೆ ನೆರೆದಿತ್ತು. “ಸಾಧನಕೇರಿಯ ಸಂಜೆ ಮಳೆ ಸೆಳಕುಗಳು” ಎಂಬ ನನ್ನದೊಂದು ಕವಿತೆಯಲ್ಲಿ ಸಾದನಕೇರಿಯ ಇತರೆ ಚಿತ್ರಗಳೊಂದಿಗೆ ಬೇಂದ್ರೆ ನನ್ನ ಮನಸಿನಲ್ಲಿ ಮೂಡಿದ್ದು ಹೀಗೆ:
ಮತ್ತಷ್ಟು ಓದು »