ಪ್ರೇತದ ಆತ್ಮ ಚರಿತೆ! (ಭಾಗ ೧)
– ಶ್ರೀಕಾಂತ್ ಶೆಟ್ಟಿ
ಒಂದು ಪ್ರೇತದ ಕತೆ. ಆ ಒಂದು ಪ್ರೇತ ಮಾಡಿದ ಆವಾಂತರಕ್ಕೆ ಇತಿಹಾಸವೇ ಹೊಸ ತಿರುವು ಪಡೆದುಕೊಂಡು ಬಿಟ್ಟಿತು. ಈ ಭೂತ ಪ್ರೇತ ಇದೆಲ್ಲಾ ಇದೆಯೋ ಇಲ್ಲವೋ, ಇದ್ದರೆ ವೈಜ್ಞಾನಿಕ ಕಾರಣ ಕೊಡಿ. ಅದರ ಇರುವನ್ನು ಸಾಬೀತು ಮಾಡಿ ಎನ್ನುವವರಿಗೆ ಈ ಕತೆ ಹೇಳಿ ಮಾಡಿಸಿದ್ದಲ್ಲ. ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದುಕೊಂಡು ಬಂದಿರುವ ದಂತಕತೆಯನ್ನು ಆಧಾರವಾಗಿಟ್ಟುಕೊಂಡು ಈ ಸರಣಿಯನ್ನು ಬರೆಯುತ್ತಿದ್ದೇನೆ. ಇದರಲ್ಲಿ ಕೇವಲ ಪ್ರೇತ ಮಾತ್ರ ಬಂದು ಹೋಗುವುದಿಲ್ಲ. ಹದಿನೆಂಟನೇ ಶತಮಾನದಲ್ಲಿ ಭೂಮಿ ನಡುಗಿಸುವಷ್ಟು ಸೇನೆ ಕಟ್ಟಿಕೊಂಡು, ಮೊಘಲರನ್ನು ಬೇರು ಸಮೇತ ಕಿತ್ತೊಗೆದ ಮರಾಟಾ ಪೇಶ್ವಾಗಳು ಬರುತ್ತಾರೆ. ಉತ್ತರದ ಹಿಮಾಲಯದಿಂದ ದಕ್ಷಿಣದ ಕೃಷ್ಣಾ ನದಿ ದಂಡೆಯವರೆಗೆ ಪೇಶ್ವಾಗಳ ಕತ್ತಿಯ ಅಬ್ಬರ, ಕುದುರೆಗಳ ಹೇಷಾರವ, ಮದೋನ್ಮತ್ತ ಆನೆಗಳ ಹೂಂಕಾರ.. ನಭವನ್ನೇ ನಡುಗಿಸುವ ಮರಾಠಾ ಮಾವಳಿಗಳ ಹರಹರಾ ಮಹಾದೇವ ರಣಘರ್ಜನೆ.. ಚಿತ್ಪಾವನ ಬ್ರಾಹ್ಮಣ ರಣಕಲಿಗಳ ಅಪ್ರತಿಮ ರಣತಂತ್ರ.. ಒಂದು ಶತಮಾನ ಕಾಲ ವಿಜೃಂಭಿಸಿದ ಮರಾಠ ಶಕ್ತಿಯ ವಿವಿಧ ಮುಖ ಪರಿಚಯ ಇಲ್ಲಿ ನಿಮಗಾಗಲಿದೆ.





