ನಾಡು-ನುಡಿ : ಮರುಚಿಂತನೆ – ನೈನಂ ದಹತಿ ಪಾವಕಃ
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಇತ್ತೀಚೆಗೆ ಕೇಂದ್ರಸಚಿವರೊಬ್ಬರು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಮಾಡಬೇಕು ಎನ್ನುವ ಹೇಳಿಕೆ ನೀಡಿ ಸುದ್ದಿ ಮಾಡಿದ್ದರು. ಭಗವದ್ಗೀತೆಯನ್ನು ಭಾರತೀಯರಿಗೆಲ್ಲರಿಗೂ ಕಡ್ಡಾಯವಾಗಿ ಕಲಿಸಬೇಕು ಎಂಬ ಕೂಗು ಕೂಡ ಒಂದೆಡೆ ಏಳುತ್ತಿದೆ. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದೆಡೆ ಅದನ್ನು ಸುಟ್ಟುಹಾಕಬೇಕು ಎಂಬ ಹೇಳಿಕೆಗಳು ಕೂಡ ಬರತೊಡಗಿವೆ. ಭಗವದ್ಗೀತೆಯನ್ನು ರಾಷ್ಟ್ರ ಗ್ರಂಥವನ್ನಾಗಿ ಮಾಡಬೇಕೆನ್ನುವ ಅನೇಕರು ಅದನ್ನು ಓದಿ ಅರ್ಥಮಾಡಿಕೊಂಡು ಪ್ರಭಾವಿತರಾಗಿ ಅದೊಂದು ಮಹತ್ವದ ಗ್ರಂಥ ಎಂದು ಮನಗಂಡಿರುವ ಸಂಭಾವ್ಯತೆ ಇಲ್ಲ. ಅದು ಹಿಂದೂಗಳ ಪವಿತ್ರಗ್ರಂಥ, ಅದರಲ್ಲಿ ಏನೋ ಮಹತ್ವದ ಸಂಗತಿ ಇದೆ ಎಂಬುದಷ್ಟೇ ಅವರಿಗೆ ಮುಖ್ಯವಾಗಿದೆ. ಅಂದರೆ ಯಾವುದೋ ಒಂದು ಪುಸ್ತಕವನ್ನು ನಾವು ಓದದಿದ್ದರೂ ಅದರಷ್ಟಕ್ಕೇ ಅದು ಮುಖ್ಯ ಎಂದೇಕೆ ಅವರಿಗೆ ಅನ್ನಿಸುತ್ತದೆ ಎಂಬುದಕ್ಕೆ ಅವರು ಅದನ್ನು ಬೈಬಲ್ಲು, ಖುರಾನುಗಳ ಸಾಲಿನಲ್ಲಿ ಇಟ್ಟು ನೋಡುತ್ತಿದ್ದಾರೆ ಎನ್ನದೇ ಬೇರೆ ಉತ್ತರ ಹೊಳೆಯುವುದಿಲ್ಲ.
ಇದಕ್ಕಿಂತಲೂ ಆಶ್ಚರ್ಯಕರವಾದ ಸಂಗತಿಯೆಂದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವ ಹೇಳಿಕೆಗಳು. ಇಂಥ ಹೇಳಿಕೆಗಳನ್ನು ಮಾಡುವವರು ಕೂಡ ಹಿಂದೂಯಿಸಂ ಎಂಬುದಿದೆ, ಭಗವದ್ಗೀತೆಯು ಹಿಂದೂಗಳ ಪವಿತ್ರಗ್ರಂಥ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಹಾಗೂ ಬ್ರಾಹ್ಮಣರು ಅದರ ಪುರೋಹಿತಶಾಹಿ ಎಂಬುದನ್ನು ಭದ್ರವಾಗಿ ನಂಬಿದ್ದಾರೆ. ಹಾಗೂ ಆ ನಿರ್ದಿಷ್ಟ ಕಾರಣದಿಂದಲೇ ಅದನ್ನು ಸುಡಬೇಕು ಎನ್ನುತ್ತಿದ್ದಾರೆ. ಏಕೆ ಸುಡಬೇಕೆಂದರೆ ಬ್ರಾಹ್ಮಣರು ಭಗವದ್ಗೀತೆಯ ಮೂಲಕ ವರ್ಣ ವ್ಯವಸ್ಥೆಯನ್ನು ಹಾಗೂ ಶೋಷಣೆಯ ಡಾಕ್ಟ್ರಿನ್ನುಗಳನ್ನು ಬೋಧಿಸುತ್ತಿದ್ದಾರೆ. ಅದನ್ನಾಧರಿಸಿಯೇ ಭಾರತೀಯ ಜಾತಿವ್ಯವಸ್ಥೆ, ತರತಮಗಳು, ಶೋಷಣೆಗಳು ಅಸ್ತಿತ್ವದಲ್ಲಿ ಇವೆ, ಹಾಗಾಗಿ ನಮ್ಮ ಸಮಾಜದಲ್ಲಿ ಇದನ್ನೆಲ್ಲ ತೊಡೆಯಬೇಕಾದರೆ ಭಗವದ್ಗೀತೆಯನ್ನು ಸುಡಬೇಕು ಎನ್ನುವುದು ಅವರ ವಾದ. ಇಂಥ ಹೇಳಿಕೆಗಳನ್ನು ಮಾಡುವವರೂ ಭಗವದ್ಗೀತೆಯನ್ನು ಓದಿರುವುದಿಲ್ಲ, ಓದಿದ್ದರೂ ಅರ್ಥಮಾಡಿಕೊಂಡಿಲ್ಲ.
ಮತ್ತಷ್ಟು ಓದು 
“ಧರ್ಮ”ದ ದಾರಿ ತಪ್ಪಿಸುತ್ತಿರುವ ಹಿರಿಯರು;ಇಲ್ಲದ ಹಿಂದೂ ರಿಲಿಜನ್ನಿನ ಭ್ರಮೆಯಲ್ಲಿ ಕಿರಿಯರು
– ರಾಕೇಶ್ ಶೆಟ್ಟಿ
ಕಳೆದ ಜೂನ್ ೯ರಂದು ನಡೆದಿದ್ದ ಮೌಢ್ಯಮುಕ್ತ ಸಮಾಜ,ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಕಲ್ಬುರ್ಗಿಯವರು,“ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದು” ಎಂದು ಹೇಳಿ ಸುದ್ದಿಯಾಗಿದ್ದರು. ಈಗ ಮತ್ತೆ, ಗದುಗಿನಲ್ಲಿ ಆಯೋಜಿಸಲಾಗಿದ್ದ ’ಸಮಾಜಶಾಸ್ತ್ರ,ಕನ್ನಡಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಚಾರಗೋಷ್ಠಿ’ಯಲ್ಲಿ, “ಹಿಂದುಗಳಿಗೆ ಧರ್ಮಗ್ರಂಥವೇ ಇಲ್ಲ.ಭಗವದ್ಗೀತೆ ಹಿಂದುಗಳ ಧರ್ಮ ಗ್ರಂಥವಲ್ಲ,ಅದೊಂದು ವಚನ ಸಾಹಿತ್ಯ… ರಾಜ್ಯ ಸರ್ಕಾರ ನಡೆಸಲು ತೀರ್ಮಾನಿಸಿರುವ ಜಾತಿಜನಗಣತಿಯ ಪ್ರಶ್ನಾವಳಿಯಲ್ಲಿ ಧರ್ಮ,ಜಾತಿ,ಉಪಜಾತಿಗೊಂದು ಪ್ರತ್ಯೇಕ ಕಾಲಂ ನಿಗದಿಪಡಿಸಲಾಗಿದೆ.ಜಾತಿ ಜನಗಣತಿಯಲ್ಲಿ ಧರ್ಮ ಯಾಕೆ ಬೇಕು.ಏಕೆಂದರೆ ಧರ್ಮ ಮತ್ತು ಜಾತಿ ಎರಡೂ ಒಂದೇ.ಜೈನ ಧರ್ಮವೂ ಹೌದು,ಜಾತಿಯೂ ಹೌದು.ಅದರಂತೆ ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮವೂ ಹೌದು,ಜಾತಿಯೂ ಹೌದು.ಹೀಗಿದ್ದಾಗ ಇಂತಹ ಅನವಶ್ಯಕ ಕಾಲಂಗಳು ಏಕೆ ಬೇಕು?” ಎಂದು ಪ್ರಶ್ನಿಸಿದ್ದಾರೆಂದು ವರದಿಯಾಗಿತ್ತು.
ಡಾ.ಕಲ್ಬುರ್ಗಿಯವರ ಹೇಳಿಕೆಯನ್ನು ವಿರೋಧಿಸಿ,ಹಿರಿಯ ಸಂಶೋಧಕರಾದ ಡಾ.ಎಂ ಚಿದಾನಂದ ಮೂರ್ತಿಗಳು ವಿಜಯವಾಣಿಯ ಜನಮತ ವಿಭಾಗದಲ್ಲಿ ಪತ್ರವೊಂದನ್ನು ಬರೆದು ’ಕಲ್ಬುರ್ಗಿಯವರು ಗದುಗಿನಲ್ಲಿ ಮಾತನಾಡುತ್ತ ’ಹಿಂದೂ ಎಂಬ ಧರ್ಮವೇ ಇಲ್ಲ’ ಎಂದು ವಿತಂಡವಾದ ಮಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ’ ಎನ್ನುತ್ತಾ ಮುಂದುವರೆದೂ ’ಧರ್ಮ ಎಂಬ ಶೀರ್ಷಿಕೆಯಡಿಯಲ್ಲಿ ಹಿಂದೂ ಎಂದು ದಾಖಲಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ.’ಹಿಂದೂ ವಿವಾಹ ಕಾನೂನು’ ಎಂಬ ಕಾನೂನು ಕೂಡ ಇದೆ.ಕಲ್ಕತ್ತೆಯ ಮಠವೊಂದು ತಾನು ಹಿಂದು ವ್ಯಾಪ್ತಿಗೆ ಬರುವುದಿಲ್ಲವೆಂದಾಗ,೧೯೯೫ರಲ್ಲಿ ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠವು ಅದು ’ಹಿಂದು ಧರ್ಮಕ್ಕೆ ಸೇರಿದ ಮಠ” ಎಂದು ತೀರ್ಪು ನೀಡಿದೆ.ಗಾಂಧೀಜಿ ತಮ್ಮನ್ನು ’ಸನಾತನಿ ಹಿಂದೂ’ ಎನ್ನುತ್ತಾರೆ.ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ತಮ್ಮನ್ನು ’ಹಿಂದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ… ” ಇತ್ಯಾದಿ ಉದಾಹರಣೆಗಳನ್ನು ನೀಡಿದ್ದಾರೆ.




