ಉಪನಿಷತ್ ವಾಙ್ಮಯ 2: ಆಮಿಷ ಒಡ್ಡದೆ ಉತ್ತರಿಸು; ಅರಿವಿನ ಮಟ್ಟವನೆತ್ತರಿಸು!
– ಸ್ವಾಮಿ ಶಾಂತಸ್ವರೂಪಾನಂದ
ಉಪನಿಷತ್ ವಾಙ್ಮಯ :- ಉಪನಿಷತ್ ವಾಙ್ಮಯ 1
ನಚಿಕೇತ ಯಮಸದನಕ್ಕೆ ಹೋದ. ಅಲ್ಲಿ ಮೂರು ದಿನ ಕಾದ. ಭೂಮಿಯಿಂದ ಸೂಕ್ಷ್ಮದೇಹಿಯಾಗಿ ಮೃತ್ಯುವಿನ ಲೋಕಕ್ಕೆ ಹೋಗುತ್ತಿರುವಾಗ ಅವನು ಒಬ್ಬನೇ ಇದ್ದದ್ದಲ್ಲ. ಅವನ ಮುಂದೆ ಸಾವಿರಾರು ಜನ, ಹಿಂದೆ ಸಾವಿರಾರು ಜನ ಸಾಗರದ ರೀತಿಯಲ್ಲಿ ಹೋಗುತ್ತಿದ್ದರಂತೆ. ಅವರೆಲ್ಲರೂ ಯಾವಾವುದೋ ಕಾರಣಕ್ಕೆ ತೀರಿಕೊಂಡರು. ಬದುಕಿನ ಯಾತ್ರೆ ಮುಗಿಸಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡವರು. ಭೂಮಿಯ ಮೇಲಿನ ವ್ಯವಹಾರಗಳನ್ನು ಮುಗಿಸಿ ಪರಲೋಕಕ್ಕೆ ಹೊರಟವರು. ಇಲ್ಲಿ ನಾವು ಉಪನಿಷತ್ಕಾರನ ಲೋಕಪ್ರಜ್ಞೆಯನ್ನು ಗಮನಿಸಬೇಕು. ಕತೆ ಕೇವಲ ನಚಿಕೇತ ಮತ್ತು ಯಮನ ಮಾತುಕತೆಯ ಸುತ್ತ ಸುತ್ತುವುದಾದರೂ ಉಪನಿಷತ್ಕಾರ ಇವೆಲ್ಲ ಸಣ್ಣಸಣ್ಣ ವಿವರಗಳನ್ನು ಕೂಡ ನಮ್ಮ ಕಣ್ಮುಂದೆ ತಂದು ಬೆಚ್ಚಿಬೀಳಿಸುತ್ತಾನೆ. ಭೂಮಿಯಲ್ಲಿ ಪ್ರತಿಕ್ಷಣದಲ್ಲೂ ನೂರಾರು ಜೀವಗಳು ಕೈಕಾಲು-ಪಪ್ಪುಸಗಳ ಕಾರ್ಯ ನಿಲ್ಲಿಸಿ ನಿಶ್ಚೇಷ್ಟಿತವಾಗುತ್ತಲೇ ಇರುತ್ತವೆ; ಪ್ರತಿ ನಿಮಿಷದಲ್ಲೂ ಅಸಂಖ್ಯಾತ ಜನರು ಮೃತ್ಯುವಿಗೆ ಪಕ್ಕಾಗುತ್ತಲೇ ಇರುತ್ತಾರೆ ಎಂಬ ಎಚ್ಚರಿಕೆಯನ್ನು ಓದುಗನಿಗೆ ಅದುಹೇಗೆ ಉಪನಿಷತ್ ದಾಟಿಸುತ್ತದೆ ನೋಡಿ! ಇಂಥ ನೂರಾರು ಜೀವರ ನಡುವಿನಲ್ಲಿ ನಚಿಕೇತನೂ ಇದ್ದ. ಅವನಿಗೆ ಭೂಲೋಕವನ್ನು ಬಿಟ್ಟು ಬಂದೆನಲ್ಲಾ ಎಂಬ ಚಿಂತೆಯೂ ಇರಲಿಲ್ಲ; ದೇವರ ಲೋಕ ಸೇರುವ ದಾರಿಯಲ್ಲಿದ್ದೇನೆಂಬ ಸಂತೋಷವೂ ಇರಲಿಲ್ಲ. ದುಃಖ ಸಂತೋಷಗಳಿಲ್ಲದ ಒಂದು ವಿಚಿತ್ರ ಸ್ಥಿತಿಯಲ್ಲಿ ಅವನು ಯಮಪುರಿಗೆ ಹೋದ. ಮತ್ತಷ್ಟು ಓದು 
ಉಪನಿಷತ್ ವಾಙ್ಮಯ 1: ಮೃತ್ಯುಮುಖದಲ್ಲಿ ಜ್ಞಾನದಾಹಿ; ಕೇಳಿದ ಗುರುವನು “ದೇಹಿ! ದೇಹಿ!”
– ಸ್ವಾಮಿ ಶಾಂತಸ್ವರೂಪಾನಂದ
ಉಪನಿಷತ್ ಎಂಬುದು ವೇದಕಾಲದ ಗದ್ಯಕಾವ್ಯ. ವಿದ್ಯೆ, ಜ್ಞಾನ, ಚಿಂತನೆಗಳು ಮುಪ್ಪುರಿಗೊಂಡ ಮನಸ್ಸುಗಳು ರಚಿಸಿದ ಅನನ್ಯ ಜೀವನಾಮೃತ ಸಾರ. ವೇದಗಳ ಒಟ್ಟರ್ಥವನ್ನು ಇವು ಸಂಗ್ರಹವಾಗಿ ತಿಳಿಸುತ್ತವೆ ಎನ್ನುವ ಕಾರಣಕ್ಕೆ ಇವನ್ನು ವೇದಾಂತ ಎಂದೂ ಕರೆಯುತ್ತಾರೆ. ಉಪನಿಷತ್ತುಗಳ ಸಾಲಿನಲ್ಲಿ ಅತಿವಿಶಿಷ್ಟವಾದದ್ದು ಕಠ. ಕೃಷ್ಣಯಜುರ್ವೇದದ ಕಠ ಪರಂಪರೆಯಲ್ಲಿ ಬರುವ ಈ ಉಪನಿಷತ್ತು ಗುರು-ಶಿಷ್ಯರ ಸಂವಾದದ ಒಂದು ಸಂಕ್ಷಿಪ್ತ ಚಿತ್ರಣ. ಗುರುಸ್ಥಾನದಲ್ಲಿ ಕೂತವನು ಸಾಕ್ಷಾತ್ ಯಮಧರ್ಮರಾಯ! ಮತ್ತು ಅವನೆದುರು ಶಿಷ್ಯನಾಗಿ ತಲೆಬಾಗಿ ವಿನೀತನಾಗಿ ಪವಡಿಸಿದವನು ಏಳೋ ಎಂಟೋ ವಯಸ್ಸಿನ ಮುದ್ದುಬಾಲಕ ನಚಿಕೇತ. ಪ್ರಪಂಚದ ಎರಡು ಧ್ರುವಗಳಂತಿರುವ ಈ ಇಬ್ಬರು ಜೊತೆಯಾದದ್ದು ಹೇಗೆ ಎಂಬುದೇ ಒಂದು ವಿಚಿತ್ರ ಕತೆ. ಕಠೋಪನಿಷತ್ತನ್ನು ಪ್ರವೇಶಿಸುವ ಮೊದಲು ನಮಗೆ ಆ ಹಿನ್ನೆಲೆ ತಿಳಿದಿದ್ದರೆ ಒಳ್ಳೆಯದು. ಮತ್ತಷ್ಟು ಓದು 




