ವಿಷಯದ ವಿವರಗಳಿಗೆ ದಾಟಿರಿ

Posts tagged ‘ಮೀಡಿಯಾ’

11
ಜೂನ್

ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ ಏನೋ..!!

– ಕೆ.ಎಸ್ ರಾಘವೇಂದ್ರ ನಾವಡ

ನೀವು ಏನಾದ್ರೂ ಹೇಳಿ… ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹವನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್ ಗೆ ಆದೇಶ ನೀಡುವುದರ ಮೂಲಕ ಅದಕ್ಕೊ೦ದು ಗತಿ ಕಾಣಿಸಿದರು! ಇ೦ದು ರಾಮ್ ದೇವ್ ಹಣೆಬರಹವನ್ನು ಕೇ೦ದ್ರ ಸರ್ಕಾರ ಈ ರೀತಿ ಬರೆಯಿತು!! ಒಟ್ಟಾರೆ ನಾವು ಬ್ರಿಟೀಶ್ ಸತ್ತೆಯ ಕಾಲಕ್ಕೆ ಹೋಗುತ್ತಿದ್ದೇವೇನೋ ಎ೦ಬುದು ನನ್ನ ಸ೦ಶಯ!!

ಭರತ ಭೂಮಿಯಲ್ಲಿ  ಬ್ರಿಟೀಶ್ ಆಡಳಿತದಿ೦ದ ಮುಕ್ತರಾಗ ಬಯಸಿ ಸ್ವಾತ೦ತ್ರ್ಯದ ಕನಸು ಕ೦ಡು ಅದಕ್ಕಾಗಿ ಹೋರಾಡಿದವರು- ಶೋಷಿತ ವರ್ಗ – ತಮ್ಮ ಬೇಡಿಕೆಯನ್ನು ನ್ಯಾಯಬಧ್ಧವಾಗಿ ಕೇಳುವವರು- ಜನ ಕಲ್ಯಾಣಕ್ಕಾಗಿ ಹಾತೊರೆದು ಮುನ್ನುಗ್ಗುವವರು – ರಾಜಕೀಯ ವ್ಯವಸ್ಥೆಯನ್ನು ಸುಧಾರಿಸ ಬಯಸುವವರು ಮು೦ತಾದವರ ಹೋರಾಟದ ಅ೦ತ್ಯ ಹೀಗೇ!! ಸರಿ ಸುಮಾರು ಬ್ರಿಟೀಷರಿ೦ದ ಆರ೦ಭವಾದ ಈ ಪ್ರಜೆಗಳ ಧ್ವನಿಯನ್ನು  ಅವರುಗಳ ಗ೦ಟಲನ್ನೇ ಹಿಸುಕುವ ಮೂಲಕ ,ಅವರ ಹೋರಾಟಕ್ಕೊ೦ದು ಅನೈತಿಕ ಅ೦ತ್ಯ ನೀಡುವ ಈ ಕ್ರಮ ದುರದೃಷ್ಟವಶಾತ್ ಇಲ್ಲಿಯವರೆವಿಗೂ ಮು೦ದುವರೆದಿದೆ!! ಹಾಗ೦ತ ಎಲ್ಲ ಹೋರಾಟಗಳೂ ಇದೇ ಅ೦ತ್ಯವನ್ನು ಕ೦ಡವೇ ಎ೦ದರೆ ಖಚಿತವಾದ ಉತ್ತರ ನೀಡಲಿಕ್ಕಾಗುವುದಿಲ್ಲ.. “ಕೆಲವು ಸಮಸ್ಯೆಗಳು ತಾವಾಗೇ ಸೃಷ್ಟಿಯಾದರೆ ಕೆಲವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ“ ಎ೦ಬ ನಾವಡ ಉವಾಚವೊ೦ದಿದೆ.. ಅದರ ಪ್ರಕಾರ ಪ್ರಸಕ್ತ ಭರತಭೂಮಿಯಲ್ಲಿಯೂ ಏಕೆ ಸಮಸ್ತ ಜಗತ್ತಿನಲ್ಲಿಯೂ  ಸರ್ಕಾರ ಗಳು ಹಾಗೂ ಜನತೆಗಳ ವಿಚಾರದಲ್ಲಿ ನಡೆಯುತ್ತಿರುವುದು ಇದೇ!!

ಮತ್ತಷ್ಟು ಓದು »

9
ಜೂನ್

ನೈಂಟಿ ಜತೆಗಿನ ನಂಟು!!!

– ರಶ್ಮಿ.ಕಾಸರಗೋಡು

ನೈಂಟಿ! ಅದೊಂದು ಥರಾ ಕಿಕ್ ಕೊಡುವಂತದ್ದೇ. ಅರೇ..ನೀವು ಉದ್ದೇಶಿಸುತ್ತಿರುವ ‘ಬಾಟಲಿ’ ಬಗ್ಗೆ ನಾನು ಹೇಳುತ್ತಿಲ್ಲ. ನಾನು ಹೇಳೋಕೆ ಹೊರಟಿರುವುದು 90ರ ದಶಕದ ಟಿವಿ ಕಾರ್ಯಕ್ರಮಗಳ ಬಗ್ಗೆ. ದೂರದರ್ಶನ ಅದೊಂದೇ ಚಾನೆಲ್ ಸಾಕು…ಎಲ್ಲ ತಿಳಿಯೋಕೆ, ಕಲಿಯೋಕೆ. ಹಿಂದಿ ಅರ್ಥವಾಗುತ್ತಿಲ್ಲವಾದರೂ ಟಿವಿ ಮುಂದೆ ನಾವು ಹಾಜರು. ಆವಾಗನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ, ಆದರೂ ಒಂದು ಕಿಮೀ ನಡೆದು ಪಕ್ಕದ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆ. ಅದೂ ಮಹಾಭಾರತ ನೋಡಲು. ಮಹಾ….ಭಾರತ್ ಅಂತ ಅದರ ಹಾಡು ಶುರುವಾಗುವ ಹೊತ್ತಿಗೆ ನಾವು ಮೂವರು (ಜತೆಗೆ ಅಣ್ಣ, ಅಕ್ಕ) ಅಲ್ಲಿ ಹಾಜರು. ಅಲ್ಲಿ ಯುದ್ಧ ನಡೆಯುತ್ತಿದ್ದರೆ ಕಣ್ಣು ಮುಚ್ಚಿ ನೋಡುವುದು, ಮರಣ ಶಯ್ಯೆಯಲ್ಲಿರುವ ಬೀಷ್ಮನನ್ನು ನೋಡಿ ಅಳುವುದು ಹೀಗೆ ಸಾಗುತ್ತಿತ್ತು ನಮ್ಮ ‘ಮಹಾ’ ಭಾರತ. ಆಮೇಲೆ ನಮ್ಮ ಮನೆಗೂ ಬ್ಲಾಕ್ ಆ್ಯಂಡ್ ವೈಟ್ ಟಿವಿ ಬಂತು. ಟಿವಿ ಬಂದ ಮೊದಲ ದಿನ ಫುಲ್ ಚಾಲೂ. ಪ್ರೋಗ್ರಾಂ ಮುಗಿದು ಬಣ್ಣ ಬಣ್ಣದ ಸ್ಟೈಪ್ ಕಾಣಿಸಿಕೊಂಡರೂ ಅದನ್ನೇ ನೋಡುತ್ತಾ ಕುಳಿತಿರುತ್ತಿದ್ದೆವು. ರುಕಾವಟ್ ಕೆ ಲಿಯೆ ಕೇದ್ ಹೈ ಅಂದ್ರೆ ಏನೂ ಅಂತಾ ಗೊತ್ತಿಲ್ಲದಿದ್ದರೂ ಸ್ವಲ್ಪ ಸಮಯದ ನಂತರ ಪ್ರೋಗ್ರಾಂ ಬರುತ್ತೆ ಅಂತಾ ಗೊತ್ತಿತ್ತು. “ಟಿವಿ ಬಂತಾ…ಇನ್ನು ಮಕ್ಕಳು ಓದಲ್ಲ ಬಿಡಿ” ಅಂತಾ ಅಮ್ಮನಿಗೆ ಚಾಡಿ ಹೇಳುವ ನೆರೆಯವರು ಬೇರೆ. ಅಂತೂ ಟಿವಿಯ ಮೂಲಕ ಹಿಂದಿ ಬೇಗನೆ ಕಲಿತುಕೊಳ್ಳುವಂತಾಯಿತು.
ಮತ್ತಷ್ಟು ಓದು »

7
ಜೂನ್

ನಾವಿನ್ನೂ ಬ್ರಿಟಿಷರ ಆಳ್ವಿಕೆಯಲ್ಲಿದ್ದೇವೆಯೇ?

– ಸಂಪತ್ ಕುಮಾರ್

ಸ್ವತಂತ್ರ, ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸುವ  ದೇಶದಲ್ಲಿ ಇಂತಹ ಘಟನೆಗಳು ನಡೆಯಲು ಸಾಧ್ಯವೇ!? ಜೂನ್ ೪ ರ ಘಟನೆ ನಾವೆಲ್ಲರೂ ತಲೆತಗ್ಗಿಸುವಂತೆ ಮಾಡಿದೆ.ಪ್ರಜೆಗಳ ಮೂಲಭೂತ ಹಕ್ಕುಗಳ ಕಗ್ಗೊಲೆಯಾಗಿದೆ. ಗಾಂಧಿಜಿ ಹೇಳಿಕೊಟ್ಟ ಸತ್ಯಾಗ್ರಹದಂತಹ ಅಸ್ತ್ರ ಬೆಲೆ ಕಳೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದನೆ ನೀಡಿದಂತಾಗಿದೆ.
ಪ್ರಜೆಗಳ ದನಿಯನ್ನು ಹತ್ತಿಕ್ಕಲು ಹೊಸ ವಿಧಾನವನ್ನು ಸರಕಾರ ಹೇಳಿಕೊಟ್ಟಿದೆ. ಬಾಬಾ ರಾಮದೇವ್ ಅವರ ಅಹಿಸಾತ್ಮಕ ಪ್ರತಿಭಟನೆಗೆ ಹಿಂಸಾತ್ಮಕ ಉತ್ತರ ನೀಡಿ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ.

ಏಪ್ರಿಲ್ ೧೨ ರಂದು ನಾನು ನಿಲುಮೆಯಲ್ಲಿ ಬರೆದ ಲೇಖನ “ಇನ್ನೊಂದು ಸಮರಕ್ಕೆ ಸಿದ್ದರಾಗಿ” ಸದಾಶಯದಂತೆ ಬಾಬಾ ರಾಮದೇವ್ ಅವರು ಸತ್ಯಾಗ್ರಹಕ್ಕೆ ಕುಳಿತದ್ದು ಸಂತೋಷದ ವಿಚಾರವಾಗಿರುತ್ತದೆ. ಲೋಕಪಾಲದಂತಹ ಬಹು ಆಯಾಮದ ಸಮಸ್ಯೆಯನ್ನು ಎದುರಿಸುವ ಬದಲು, “ಕಪ್ಪು ಹಣ” ದಂತಹ ಒಂದೇ ಸಮಸ್ಯೆಯನ್ನು ಎದುರಿಸಿ ಬಾಬಾ ಯಶಸ್ಸನ್ನು ಪಡೆಯುವ ಹಂತದಲ್ಲಿರುವಾಗಲೇ ಹೀಗೆ ಸತ್ಯಾಗ್ರಹವನ್ನು ಹತ್ತಿಕ್ಕಿದ್ದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಸರಕಾರದ ಸರ್ವಾಧೀಕಾರದ ಧೋರಣೆ ಎಂದಿಗೂ ಸಲ್ಲ.

ಮತ್ತಷ್ಟು ಓದು »

5
ಜೂನ್

ಗಾಂಧಿ ಪಕ್ಷದೊಳಗಿನ ಬ್ರಿಟಿಷರು…!

– ರಾಕೇಶ್ ಶೆಟ್ಟಿ

ತಲೆಬರಹವನ್ನ ನಕಲಿ ಗಾಂಧಿಗಳ ಪಕ್ಷದೊಳಗಿನ ಬ್ರಿಟಿಷರು ಅಂತ ಓದಿಕೊಳ್ಳಿ.ಮಹಾತ್ಮರ ಹೆಸರನ್ನ ಬೇಡ ಬೇಡವೆಂದರೂ ಅನಿವಾರ್ಯವಾಗಿ ಅವರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಕ್ಷದ/ಸರ್ಕಾರದ ದೌರ್ಜನ್ಯದ ವಿರುದ್ಧ ಮಾತನಾಡುವಾಗ ಬಳಸಿಕೊಳ್ಳಲೇಬೇಕಿದೆ.

ಪ್ರಾಮಾಣಿಕ ಪ್ರಧಾನಿಯ ಸರ್ಕಾರ ಅನೈತಿಕ ಕೆಲಸಕ್ಕೆ ಕಡೆಗೂ ಕೈ ಇಟ್ಟಿದೆ.ಮಧ್ಯರಾತ್ರಿ ಕಳ್ಳರಂತೆ-ದರೋಡೆಕೋರರಂತೆ ರಾಮ್ ಲೀಲಾ ಮೈದಾನಕ್ಕೆ ನುಗ್ಗಿ ಹೆಂಗಸರು-ಮಕ್ಕಳು ಅಂತ ನೋಡದೆಯೆ ರಾಕ್ಷಸರಂತೆ ವರ್ತಿಸಿದ ರೀತಿ ನೋಡಿದರೆ, ಮನಮೋಹನ್ ಸಿಂಗ್ ಅನ್ನುವ ಸೋ-ಕಾಲ್ಡ್ ಪ್ರಧಾನಿಯ ಪ್ರಾಮಾಣಿಕತೆ ಉಪ್ಪಿನಕಾಯಿ ಹಾಕಲಿಕ್ಕಾ ಅಂತ ಕೇಳಲೆಬೇಕಾಗುತ್ತದೆ.

ಹುಚ್ಚು ನಾಯಿ ಕಡಿತಕ್ಕೆ ಚುಚ್ಚು ಮದ್ದು ತೆಗೆದುಕೊಳ್ಳದಿದ್ದರೆ ಏನಾಗುತ್ತೆ ಅನ್ನೋದಕ್ಕೆ ದಿಗ್ವಿಜಯ್ ಸಿಂಗ್ ಆಗಾಗ ನೀಡೋ ಹೇಳಿಕೆಗಳೇ ಉದಾಹರಣೆ.ಇಂತ ದಿಗ್ಗಿ ನಿನ್ನೆ ಹೇಳಿದ ಮಾತು ನೆನಪಿದೆಯಾ? ‘ಸರ್ಕಾರ ರಾಮ್ದೇವ್ ಅವರಿಗೆ ಹೆದರಿಲ್ಲ, ಒಂದು ವೇಳೆ ಹೆದರಿದ್ದರೆ ರಾಮ್ ದೇವ್ ಅವರನ್ನ ಬಂಧಿಸುತಿತ್ತು!’.ಹಾಗೇ ಹೇಳಿದ ಮಧ್ಯರಾತ್ರಿಯೇ ಬ್ರಿಟಿಷರು ಜಲಿಯನ್ ವಾಲಾಬಾಗ್ಗೆ ನುಗ್ಗಿದ ರೀತಿಯಲ್ಲೆ ನುಗ್ಗಿ ಅದೇ ರಾಮ್ ದೇವ್ರನ್ನ ಬಂಧಿಸಿದ್ದಾರೆ.ಅಂದರೆ ಕಾಂಗ್ರೆಸ್ಸ್ ಸರ್ಕಾರದ ಬೆದರಿದೆ ಅಂತಲೇ ಅರ್ಥವಲ್ಲವಾ?

ಮತ್ತಷ್ಟು ಓದು »

5
ಜೂನ್

ಹನುಮಪ್ಪನೆ ಆಗಿರಲಿ ಇಮಾಂ ಸಾಬಿಯೇ ಆಗಿರಲಿ…!

– ಪವನ್‍ ಪಾರುಪತ್ತೇದಾರ‍್, ಬೆಂಗಳೂರು

ಜನ ಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಹೋರಾಟ ಮಾಡಿದ್ರು , ಮೇಧಾ ಪಾಟ್ಕರ್ ಹೋರಾಟಗಳನ್ನ ಮಾಡುತ್ತಲೇ ಇರ್ತಾರೆ. ಎರಡು ಗ್ರೇಟ್‍  ಹಗರಣ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸುಬ್ರಮಣ್ಯನ್ ಸ್ವಾಮಿ ಅವರ ಹೋರಾಟವೇ ಕಾರಣ. ಈಗ ತಾನೆ ಮಿಲಿಂದ್ ಸೋಮನ್ ಹಸಿರು ಕ್ರಾಂತಿ ಮಾಡಲು 531 ಕಿ.ಮೀ. ಓಟ ಮುಗಿಸಿದ್ದಾರೆ.ಇನ್ನು ಎಷ್ಟೋ ಹೋರಾಟಗಳು ನಡಿತನೆ ಇರುತ್ತವೆ. ಆದರೆ ,ಈಗ ಬಾಬಾ ರಾಮದೇವ್ ಹೋರಾಟ ಮಾಡಲು ಪ್ರಾರಂಭ ಮಾಡಿದ ತಕ್ಷಣ ಈ  ಮಾಧ್ಯಮಗಳು ಏಕೆ ಅದಕ್ಕೆ ಕೋಮುವಾದದ ಬಣ್ಣ ಹಚ್ಹುತ್ತಿವೆಯೋ ಅ ದೇವರೇ ಬಲ್ಲ ” ಟೈಮ್ಸ್ ನೌ” ಅರ್ನಬ್ ಗೋಸ್ವಾಮಿ ಇರಬಹುದು ಅಥವಾ “ಸಿಎನ್‍ಎನ್‍”  ನ ರಾಜ್ದೀಪ್ ಸರ್ದೇಸಾಯಿ ಇರಬಹುದು, ಶಾರುಕ್ ಖಾನ್, ಸಲ್ಮಾನ್ ಖಾನ್ ,ಶೋಭಾ ಡೆ ಮುಂತಾದ ಸೆಲೆಬ್ರಿಟಿಗಳು ಆಗಿರಬಹುದು, ಬಾಬಾ ರಾಮದೇವ್ ಮಾಡುತ್ತಿರುವುದು ನಾಟಕ ಅವರಿಗೆ ಯೋಗ ಹೇಳಿಕೊಡುವುದು ಬಿಟ್ಟು ಈ ಕೆಲಸ ಯಾಕೆ ಅಂತ ಕೇಳುತಿದ್ದಾರೆ .ಕಾಂಗ್ರೆಸ್ಸ್ ನ ದಿಗ್ವಿಜಯ್ ಸಿಂಗ್ ಅಂತು ಗಂಟೆಗೊಂದು ಹೇಳಿಕೆ ರಾಮದೇವ್ ವಿರುದ್ದ ನೀಡುತಿದ್ದಾರೆ  ಆದರೆ ಅತ್ತ ಅವರ ಪಕ್ಷದ ಹಿರಿಯ ಸಚಿವರೆಲ್ಲ ಬಾಬ ಅವರನ್ನ ಮೀಟ್ ಮಡಿ ಕಾಂಪ್ರಮೈಸ್‍ ಅಗೋ ತಂತ್ರ ಹೆಣೆಯುತಿದ್ದಾರೆ .

ಇಷ್ಟಕ್ಕೂ ಮಾಧ್ಯಮದವರು ಕೋಮುವಾದದ ಬಣ್ಣ ಕಟ್ಟುತ್ತಿರುವುದು ಯಾಕೆ ರಾಮದೇವ್ ಅವರು ಕಾವಿ ವಸ್ತ್ರ ಧರಿಸಿ ಮರದ ಪಾದರಕ್ಷೆ ಧರಿಸಿದ್ದಾರೆ ಅಂತಲೇನು?? ಭ್ರಷ್ಟಾಚಾರದ ವಿರುದ್ದ ಹೋರಾಡಲು ಕಾವಿಯದರೇನು ಕಪ್ಪು ವಸ್ತ್ರವಾದರೇನು ? ಮರದ ಚಪ್ಪಲಿ ಅದರೇನು ADIDAS ಶೂ ಅದರೇನು? ಭಾರತದ ಪ್ರತಿಯೊಬ್ಬ ಪ್ರಜೆಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಹಕ್ಕಿದೆ, ಎಲ್ಲ ಡಾಕುಮೆಂಟ್ ಸರಿ ಇದ್ದರು ಪೋಲಿಸ್ ಗಾಡಿ ಅಡ್ಡ ಹಾಕಿದ ಮೇಲೆ 50 ರೂಪಾಯಿ ಲಂಚ ಕೊಟ್ಟ ಪ್ರತಿಯೊಬ್ಬ ನಾಗರಿಕನಿಗೂ ಅವಾಜ್ ಹಾಕುವ ತಾಕತ್ತಿದೆ. ಈ ಎಲ್ಲ ಭಾರತದ ಪ್ರಜೆಗಳಲ್ಲಿ ಬಾಬಾ ರಾಮದೇವ್ ಸಹ ಒಬ್ಬರು ಎಂದು ಏಕೆ ಮಾಧ್ಯಮದವರು ಬಿಂಬಿಸಬಾರದು? ಮಾಧ್ಯಮಗಳಲ್ಲಿ ಅಪ ಪ್ರಚಾರ ಮಾಡಿ ಹೋರಾಟಕ್ಕೆ ತೊಡಕು ಮಾಡಲು ಕಾಂಗ್ರೆಸ್ ಗೆ ಸಹಾಯ ಮಾಡುವ ತಂತ್ರವಾ? ರಾಜಕೀಯ ವ್ಯಕ್ತಿಗಳಿಗೆ ಹೋರಾಟದಲ್ಲಿ ನಿಷೇಧ ಇದೆ ಆದ್ದರಿಂದ ಈ ಹೋರಾಟದಲ್ಲಿ ಯಾವುದೇ ಪಕ್ಷಗಳಿಗೆ ಲಾಭವಂತು ಇಲ್ಲ.ಈ ಹೋರಾಟದ ಯೆಶಸ್ಸಿನಿಂದ ಲಾಭವಗೋದು ನಾಗರಿಕರಿಗೆ. ಆದರೆ ವಿರೋಧ ಪಕ್ಷದಲ್ಲಿರುವ ಬಿಜೆಪಿ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲೇ ಕಪ್ಪು ಹಣವನ್ನು ತರುವ ಪ್ರಸ್ತಾವನೆ ಮಾಡಿತ್ತು. ಈಗ ಬೆಂಬಲ ಸೂಚಿಸಿದೆ. ಅದಕ್ಕೆ ಮಾಧ್ಯಮಗಳ ಕಣ್ಣಿಗೆ ಬಾಬಾ ರಾಮದೇವ್ ಬಿಜೆಪಿ ಏಜೆಂಟ್ ಆಗಿದ್ದಾರೆ.

ಮತ್ತಷ್ಟು ಓದು »

5
ಜೂನ್

ರಾಮದೇವ್,ಮೀಡಿಯಾ ಮತ್ತು ಸಂಪಾದಕೀಯ

– ಮಹೇಶ ಪ್ರಸಾದ ನೀರ್ಕಜೆ

ಸಂಪಾದಕೀಯ ತಂಡ ಬರೆದ “ಸಂವಿಧಾನವನ್ನೇ ಒಪ್ಪದ ರಾಮದೇವ ಸತ್ಯಾಗ್ರಹಕ್ಕೆ ಇಳಿದಿದ್ದಾರೆ… ಜೈ ಹೋ! ” ಈ ಲೇಖನದ ಬಗ್ಗೆ ನನ್ನ ಕೆಲವು ಅನಿಸಿಕೆಗಳು. ಇವು ಒಟ್ಟಾರೆಯಾಗಿ ಮಾಧ್ಯಮಗಳ ಬೇಜವಾಬ್ದಾರಿತನದ ಬಗ್ಗೆ ನನ್ನ ಕೆಲವು ಟಿಪ್ಪಣಿಗಳು ಕೂಡ ಹೌದು. ಸದಾ ಮಾಧ್ಯಮದ ತಪ್ಪು ಒಪ್ಪುಗಳನ್ನು ಪ್ರಕಟಿಸುವ ತಂಡ ಅದರ ಜೊತೆಜೊತೆಗೆ ಬೇರೆ ಕೆಲವು ವಿಚಾರಗಳನ್ನು ಕೂಡ ಬರೆಯುತ್ತದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಸಂಪ್ರದಾಯವಾದಿಗಳ ಬಗ್ಗೆ, ಮೂಢ ನಂಬಿಕೆಗಳ ಬಗ್ಗೆ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಅವರ ಕೆಲವು ಪ್ರಯತ್ನಗಳ ಬಗೆಗೆ ನನಗೆ ಹೆಮ್ಮೆಯಿದೆ. ಅದರಲ್ಲೂ ಜಿ ಕನ್ನಡ ವಾಹಿನಿಯಲ್ಲಿ ನಡೆಯುತ್ತಿದ್ದ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದ ಬಗೆಗಿನ ವಿರೋಧ ಎಲ್ಲರ ಗಮನ ಸೆಳೆದಿತ್ತು. ಆದರೆ ಮೊದಲಿನಿಂದಲೂ ಕೂಡ ನನಗೆ ಸಂಪಾದಕೀಯ ತಂಡದ ಬಗೆಗೆ ಕೆಲವು ಅನುಮಾನಗಳಿವೆ. ಮೊದಲನೆಯದಾಗಿ ತನ್ನ TRP ಹೆಚ್ಚಿಸಿ ಕೊಳ್ಳಲೋ ಎಂಬಂತೆ ಬ್ಲಾಗಿನಲ್ಲಿ ಎಲ್ಲೆಂದರಲ್ಲಿ ಅನಾಮಿಕ ಪ್ರತಿಕ್ರಿಯಗಳ ಮಹಾಪೂರ. ಈ ಪ್ರತಿಕ್ರಿಯೆಗಳನ್ನು ಯಾರು ಬರೆಯುತ್ತಾರೆ, ಅವರ ಪ್ರತಿಕ್ರಿಯೆಗಳಲ್ಲಿ ಏನಾದರು ಕುತ್ಸಿತ ಉದ್ದೇಶಗಳಿವೆಯೇ ಇತ್ಯಾದಿ ಪ್ರಶ್ನೆಗಳು ನನಗೆ ಮೊದಲಿನಿಂದಲೂ ಇವೆ. ಅಲ್ಲದೆ ಮೂಢ ನಂಬಿಕೆಯನ್ನು ವಿರೋಧಿಸುವ ನೆಪದಲ್ಲಿ ಎಲ್ಲಾ ಅಧ್ಯಾತ್ಮಿಕ ವ್ಯಕ್ತಿಗಳನ್ನು ಟೀಕಿಸುವ ಹುನ್ನಾರವೋ ಎಂದು ಕೂಡ ಸಂಶಯವಿದೆ. ಆದರೆ ಕೆಲವು ಬರಹಗಳಲ್ಲಿ ಉತ್ತಮ ಅಧ್ಯಾತ್ಮಿಕ ಮೌಲ್ಯಗಳನ್ನು ಅದರಲ್ಲೂ ವಿವೇಕಾನಂದ, ಬುಧ್ಧ ಗಾಂಧೀಜಿ ಬಗ್ಗೆ ಬರೆದಿದ್ದೂ ಹೌದು. ಒಟ್ಟಿನಲ್ಲಿ ನನ್ನ ಮಟ್ಟಿಗೆ ಸಂಪಾದಕೀಯ ವಿರೋಧಾಭಾಸಗಳ ಗೂಡು. ಇರಲಿ, ಈಗ ಪ್ರಸ್ತುತ ಲೇಖನದ ಬಗ್ಗೆ ಹೇಳುವುದಾದರೆ ನನ್ನ ಪ್ರಕಾರ ಇದರಲ್ಲಿ ಹಲವಾರು ತಪ್ಪುಗ್ರಹಿಕೆಗಳು, ಮತ್ತು ತಪ್ಪು ಮಾಹಿತಿಗಳು ಕಾಣಸಿಗುತ್ತವೆ. ಅವುಗಳನ್ನು ಪಟ್ಟಿ ಮಾಡಿ, ನಿಜ ಸಂಗತಿಯನ್ನು ಹೊರಗೆಡಹುವ ಒಂದು ಪ್ರಯತ್ನ ಇದು.

ಮತ್ತಷ್ಟು ಓದು »

25
ಮೇ

ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!

– ಪಾಲಚಂದ್ರ

ನೀವು ತೆಗೆದ ಚಿತ್ರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅಂತರ್ಜಾಲಕ್ಕೆ ಸೇರಿಸ ಹೊರಟಿದ್ದೀರ? ಸ್ವಲ್ಪ ನಿಧಾನಿಸಿ, ಯಾಕೆಂದರೆ “ಫೋಟೋ ಕಳ್ಳರಿದ್ದಾರೆ ಎಚ್ಚರಿಕೆ!”.  ದಿನೇ ದಿನೇ ಹೆಚ್ಚುತ್ತಿರುವ ವೃತ್ತ ಪತ್ರಿಕೆಗಳೇ ಈ ಕಳ್ಳತನ ಮಾಡುತ್ತಿರುವುದು ವಿಷಾದದ ವಿಚಾರ.

ಕಳ್ಳತನ ಏಕೆ, ಹೇಗೆ?
ಇದು instant ಕಾಲ. ಆಹಾರದಿಂದ ಹಿಡಿದು ಸುದ್ದಿಯವರೆಗೂ ನಮಗಿರುವುದು ಅವಸರವೇ. ಮಾಹಿತಿಯ ಪರಿಶೀಲನೆಗೇ ಸಮಯವಿಲ್ಲದಿರುವಾಗ ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ಜೊತೆಗೆ ಮುದ್ರಿತವಾಗುವ ಚಿತ್ರಗಳನ್ನು ಪಡೆಯಲು ಬಿಡುವೆಲ್ಲಿದೆ. ಗೂಗಲ್, ಯಾಹೂ ಮೊದಲಾದ ಹುಡುಕು ತಾಣಗಳಲ್ಲಿ ನಿಮ್ಮ ಲೇಖನಕ್ಕೆ ಬೇಕಾದ ಕೀ-ವರ್ಡ್ ಹೊಡೆದರೆ ಲಕ್ಷಾಂತರ ಚಿತ್ರಗಳು ಕ್ಷಣಾರ್ಧದಲ್ಲಿ ಲಭಿಸುತ್ತದೆ. ಅದರಲ್ಲಿ ಕೆಲವನ್ನು ಆಯ್ದು, ತಮಗೆ ಬೇಕಾದಂತೆ ಮಾರ್ಪಡಿಸಿ ಪತ್ರಿಕೆಯಲ್ಲಿ ಪ್ರಕಟಿಸಿದರಾಯ್ತು. ಪುಕ್ಕಟೆಯಾಗಿ ಸಿಗುವ ಸರಕು ಬೇರೆ, ಛಾಯಾಗ್ರಾಹಕನಿಗೆ ಹಣ ಕೊಡುವ ಅಗತ್ಯವೂ ಇಲ್ಲ.

ಏಕೆ ಕದಿಯಬಾರದು
ಅಂತರ್ಜಾಲದ ಹುಡುಕು ತಾಣಗಳು ನಿಮಗೆ ಬೇಕಾದ ಚಿತ್ರವನ್ನು ಹುಡುಕಿ ಕೊಡುತ್ತದಾದರೂ ಆ ಚಿತ್ರದ ಸಂಪೂರ್ಣ ಹಕ್ಕು  ಚಿತ್ರ ತೆಗೆದವರ ಅಥವಾ ಅದನ್ನು ಅಂತರ್ಜಾಲಕ್ಕೆ ಸೇರಿಸಿದವರದ್ದಾಗಿರುತ್ತದೆ. ಅವರ ಅನುಮತಿಯಿಲ್ಲದೆಯೇ ಯಾವುದೇ ರೀತಿಯಲ್ಲಿ ಅದನ್ನು ಉಪಯೋಗಿಸುವುದು ಅನೀತಿ ಮಾತ್ರವಲ್ಲ ಅಪರಾಧ ಕೂಡ.ಚಿತ್ರ ತೆಗೆದವನ, ತೆಗೆಯಿಸಿಕೊಂಡವನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಧಕ್ಕೆಯುಂಟುಮಾಡುತ್ತದೆ. ಆದರೆ ಕಳ್ಳತನ ಮಾಡುವವರು ಇದರ ಹಿಂದೆ ಇನ್ನೊಬ್ಬರ ಪರಿಶ್ರಮ ಅಡಗಿದೆ ಎಂಬುದನ್ನು ಸುಲಭದಲ್ಲಿ ಮರೆಯುತ್ತಾರೆ.

ಕದಿಯುವುದನ್ನು ತಡೆಗಟ್ಟುವುದು ಹೇಗೆ?
ಫ್ಲಿಕರ್, ಫೋಟೋ ಬಕೆಟ್ ಮೊದಲಾದ  ಚಿತ್ರ ತಾಣಗಳಲ್ಲಿ ನೀವು ಸೇರಿಸಿದ ಚಿತ್ರಗಳು ಹುಡುಕು ತಾಣಗಳಲ್ಲಿ ಕಾಣಿಸದಿರುವಂತೆ, ಡೌನ್ ಲೋಡ್ ಮಾಡಿಕೊಳ್ಳದಂತೆ ಸೆಟ್ಟಿಂಗ್ ಮಾಡಬಹುದು. ಚಿತ್ರದ ಮೇಲೆ ಕಾಪಿ ರೈಟ್ ವಾಟರ್ ಮಾರ್ಕ್ ಹಾಕುವುದೂ ಕೂಡ ಈ ನಿಟ್ಟಿನಲ್ಲಿ ಒಳ್ಳೆಯದು. ಮತ್ತಷ್ಟು ಓದು »

21
ಮೇ

ಪಾಕಿಸ್ತಾನದ ಭೂಪಟ 17.05.2011ರ ಕನ್ನಡಪ್ರಭದಲ್ಲಿ…

– ಪಿ.ಎಸ್.ರಂಗನಾಥ

ಒಂದು ದೇಶದ ಭೂಪಟ ಅಂದರೆ  ಅದರ ಭೌಗೋಳಿಕ ವಿನ್ಯಾಸ ಹಾಗು ಅದರ ಸರಿಹದ್ದು ಗಳನ್ನು ತೋರಿಸುವ ಚಿತ್ರ ಅಂತ ನಮ್ಮೆಲ್ಲರಿಗು ಗೊತ್ತಿರುವ ವಿಷಯ. ಪ್ರತಿಯೊಂದು ದೇಶವೂ ತನ್ನದೇ ಆದ ಒಂದು ನಕ್ಷೆಯನ್ನು ಸಿದ್ದಪಡಿಸಿಕೊಂಡು ಅಂತರಾಷ್ಟ್ರೀಯವಾಗಿ ತನ್ನನ್ನು ಗುರುತಿಸಿಕೊಳ್ಳುತ್ತದೆ. ಸದ್ಯಕ್ಕೆ ನಮ್ಮ ದೇಶಕ್ಕೆ ಬಂದರೆ ನಮ್ಮ ಕೆಲವು ಪ್ರಾಂತ್ಯಗಳು ಪಾಕಿಸ್ತಾನ ಹಾಗು ಚೀನಾದ ವಶದಲ್ಲಿದ್ದರು ನಾವುಗಳು ನಮ್ಮ ದೇಶದ ಗಡಿಯನ್ನು ಹಾಕಿ ನಾವು ಗುರುತಿಸಿಕೊಂಡಿದ್ದೇವೆ ಹಾಗು ಸರಕಾರ ಅದನ್ನು ಒಪ್ಪಿ ಅಧಿಕೃತವಾಗಿ ಮುದ್ರೆ ಹಾಕಿದೆ ಜತೆ ರಾಷ್ಟ್ರದ ಪ್ರಜೆಗಳಿಗೆ ಸಹ ಒಪ್ಪಿಗೆ ಯಾಗಿದೆ. ಯಾವುದೇ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಹಾಗು ರಾಷ್ಟ್ರದ ಮೂಲೆ ಮೂಲೆ ಗಳಲ್ಲಿ ಮುದ್ರಿತವಾಗಿ ಪ್ರಸಾರ ವಾಗುತ್ತಿರುವುದು POK (Pak Occupied Kashmir) ಹಾಗು ಚೈನಾ ಆಕ್ರಮಿತ ಕೆಲ ಭಾಗವನ್ನು ಒಳಗೊಂಡ ಭೂಪಟ ಮಾತ್ರ. ಆದರೆ ಪಾಕಿಸ್ತಾನ POK ಪ್ರಾಂತ್ಯವನ್ನು ತನ್ನ ಅಧಿಕೃತ ನಕ್ಷೆ ಯಾಗಿ ಉಪಯೋಗಿಸುತ್ತಿದೆ. ಅದನ್ನು ನಮ್ಮ ರಾಷ್ಟ್ರದವರು ಒಪ್ಪುವುದಿಲ್ಲ ಹಾಗು ಆ ಪ್ರಾಂತ್ಯ ಪಾಕಿಸ್ತಾನದ ವಶದಲ್ಲಿದ್ದರು ಸಹ ಅದಕ್ಕೆ ಅಂತರಾಷ್ಟ್ರೀಯ ಮನ್ನಣೆ ಇನ್ನು ದೊರಕಿಲ್ಲ. ಅದು disputed area ಅಂತ ಬೇರೆ ದೇಶದವರು dotted / dashed line ನಲ್ಲಿ ತೋರಿಸುತ್ತಾರೆ.

ನಾನು ಕಳೆದ ೪ ವರ್ಷಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತಿದ್ದೀನಿ, ಸಾಮನ್ಯವಾಗಿ ಭಾರತದ ಭೂಪಟ, ರಾಷ್ಟ್ರದ ಲಾಂಛನ, ಭಾವುಟ ಗಳನ್ನು ನೋಡಿ ನನಗೆ ಬಹಳ ಖುಶಿ ಯಾಗುತ್ತೆ. ಯಾವುದಾದರು ಕಛೇರಿ ಗಳಲ್ಲಿ ಹಾಕಿರುವ ಪ್ರಪಂಚದ ಭೂಪಟ ದಲ್ಲಿ ನಮ್ಮ ಭಾರತ ದೇಶವನ್ನು ಗಮನಿಸುವುದು ನನ್ನ ಅಭ್ಯಾಸ, ಒಂದು ವೇಳೆ ಭಾರತದ ಭೂಪಟದಲ್ಲಿ ಏನಾದರು ವ್ಯತ್ಯಾಸ ಗಳಿದ್ದರೆ, ಅಲ್ಲಿರುವ ಭಾರತೀಯ ಸಿಬ್ಬಂದಿ ಯವರ ಗಮನಕ್ಕೆ ತರುವ ಪ್ರಯತ್ನ ಮಾಡಿ ಬದಲಾಯಿಸಲು ಯತ್ನಿಸುವೆ. ಕೆಲವರು ನನ್ನ ವಿಚಾರಕ್ಕೆ ಸಹಮತ ವ್ಯಕ್ತ ಪಡಿಸಿ ವಿಷಾದ ವ್ಯಕ್ತ ಪಡಿಸುದ್ದುಂಟು. ಇನ್ನು ಕೆಲವರು, ಇಲ್ಲಿ ಸಿಗೋದೆ ಇದೇ ಮ್ಯಾಪ್ ಇದು ಬಿಟ್ರೆ ಬೇರೆ ವಿಧಿಯಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತಿದ್ದರು, .

ಕನ್ನಡಪ್ರಭ ೧೭.೦೫.೨೦೧೧ ಪುಟ ೯ರಲ್ಲಿ ಪ್ರಕಟವಾಗಿರುವ ಲೇಖನ “ದಾವುದ್ ನ ಮುಗಿಸುವ ಗುಂಡು ಸಿದ್ಧವಾಗಿಲ್ಲವೇ? ರಲ್ಲಿ ಮುದ್ರಿತವಾಗಿರುವ ಪಾಕಿಸ್ತಾನದ ಭೂಪಟ, ನಮ್ಮ ದೇಶದ ಕಾಶ್ಮಿರದ ಒಂದು ಭಾಗವನ್ನು ಅದರಲ್ಲಿ ಒಳಗೊಂಡಿದೆ.

ಮತ್ತಷ್ಟು ಓದು »

17
ಮೇ

ಮೀಡಿಯಾದ ಅಜ್ಜಿ ಕಥೆಯೂ,ಬುಷ್-ಬಿನ್ ಲಾಡೆನ್ ಎ೦ಬ ಟೆರೆರಿಸ್ಟ್ ಗಳೂ…

(ಒಸಾಮ ಸತ್ತ ಮೇಲೆ,ಎಲ್ಲ ಅಮೇರಿಕಾವನ್ನು ಬಯ್ಯುತ್ತಲೋ,ಒಸಾಮನನ್ನು ಹೊಗಳುತ್ತಲೋ ಬರೆಯುವಾಗ, ಶಿಹಾ ಅವ್ರ ವಿಭಿನ್ನ ಯೋಚನಾ ದಾಟಿಯ ಈ ಬರಹ ನಿಲುಮೆಯ ಓದುಗರಿಗಾಗಿ)

– ಶಿಹಾ ಉಳ್ಳಾಲ್

ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹತ್ಯೆಯ ಸುದ್ಧಿಯನ್ನು ಜಗತ್ತಿನ ವಿವಿಧ ಚಾನೆಲುಗಳು ವಿವಿಧ ರೀತಿಯಲ್ಲಿ ಪ್ರಸಾರಮಾಡುತ್ತಿದ್ದಾಗ ನಮ್ಮ ಕರ್ನಾಟಕದ ನ೦.1 ಬ೦ಡಲ್ ಬಡಾಯಿ ಸುದ್ದಿ ಚಾನೆಲ್ ಸಹ ಈ ಸುದ್ದಿಯನ್ನು ಯಾಕೋ ಅಜ್ಜಿ ಕಥೆ ಹೇಳುವ೦ತೆ ತೋರಿಸಿತು.

 ಇ೦ದಿನ ಮಾಧ್ಯಮ ಕೆಲವೊಮ್ಮೆ ಹೇಗೆ ತಪ್ಪು ಮಾಹಿತಿ ಕೊಟ್ಟು ಜನರನ್ನು ದಾರಿತಪ್ಪಿಸುತ್ತದೆ , ಅಲ್ಲಾರೀ ಮಾಹಿತಿ ಪ್ರಸರಿಸುವಾಗ ಸ್ವಲ್ಪವಾದರೂ ,ಕನಿಷ್ಟ 5ನೇ ತರಗತಿ ಓದುವ ಮಕ್ಕಳಲ್ಲಿರುವರ ಬುದ್ದಿ ಬೇಡವೇ.. ಅದನ್ನು ಇಡೀ ವಿಶ್ವ ನೋಡುತ್ತದೆ ಎ೦ಬ ಅರಿವು ಬೇಡವೇ? ಅಲ್ಲ ಅವರ೦ತೆ ,ನೋಡುವವರು ದಡ್ಡರು ಎ೦ದುಕೊ೦ಡಿದ್ದಾರೆಯೇ ?

 ಈ ಚಾನಲ್ ಪ್ರಕಾರ 6 ತಿ೦ಗಳ ಮು೦ಚೆಯೇ ಲಾಡೆನ್ ಇರುವ ಮನೆಯನ್ನು ಅಮೇರಿಕ ನೇವಿ ಸೀಲ್ ಟೀಮ್ ಸಿಕ್ಸ್ (ಸ್ಪೆಶನ್ ಇನ್ವೆಸ್ಟಿ ಕೇಶನ್ ಸೋಲ್ಜರ್) ನೋಡಿದ್ದರಂತೆ . ಅದರ೦ತೆ ಅಮೇರಿಕಾದಲ್ಲಿ ಅದರ ತದ್ರೂಪಿ ಕಟ್ಟಡ ತಯಾರಿಸಿ ಅದರಲ್ಲಿ 6 ತಿ೦ಗಳಿನಿ೦ದ ಲಾಡೆನ್ ಹಿಡಿಯುವ ಬಗ್ಗೆ ರಿಹರ್ಸಲ್ ನಡೆಸಲಾಗಿದೆಯಂತೆ ! ಅಬ್ಬಾ ಎ೦ತಹ ಜೋಕ್ ಅಲ್ವೇ ?

 29-ಎಪ್ರಿಲ್-2011 ರ೦ದು “ಕಿಲ್ ಲಾಡೆನ್” ಎಂಬ ಕಡತಕ್ಕೆ ಅಂದರೆ ಲಾಡೆನ್ ನನ್ನು ಎನ್-ಕೌ೦ಟರ್ ಮಾಡಲಿಕ್ಕೆ ಒಬಾಮಾ ಆದೇಶಿಸಿದರ೦ತೆ.ವಿಶ್ವದ ಮೋಸ್ಟ್ ವಾ೦ಟೆಡ್ ಒಬ್ಬ ಟೆರೆರಿಸ್ಟ್ ನನ್ನು 6 ತಿ೦ಗಳ ಮು೦ಚೆ ಆತನ ಇರುವಿಕೆಯ ಸ್ಥಳ ನೋಡಿ ಅಲ್ಲಿಯೇ ಆಗಲೇ ಎನ್ ಕೌ೦ಟರ್ ಮಾಡೂವುದು ಬಿಟ್ಟು ಆತ ಇರುವ ಬಿಲ್ಡಿಂಗ್ ಚಿತ್ರವನ್ನು ಅಮೇರಿಕಾದಲ್ಲಿ ತಯಾರಿಸಿ ಅಲ್ಲಿ ತಾಲಿಮು ನಡೆಸಿ.. ಹೋ……..

ಮತ್ತಷ್ಟು ಓದು »

12
ಮೇ

ಎಂಥಾ ಮರುಳಯ್ಯಾ ಇದು…

ಚಾಮರಾಜ ಸವಡಿ

ತುಂಬ ದಿನಗಳ ಹಿಂದೆ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಸಂದರ್ಶನವೊಂದರಲ್ಲಿ ಹೇಳಿದ ಮಾತೊಂದು ನೆನಪಾಗುತ್ತಿದೆ. ಓದುಗರನ್ನು ಈ ಪರಿ ಸೆಳೆಯುವಲ್ಲಿ ನೀವು ಯಶಸ್ವಿಯಾಗಿದ್ದು ಹೇಗೆ? ಎಂಬಂರ್ಥದ ಪ್ರಶ್ನೆಗೆ ಯಂಡಮೂರಿ ಉತ್ತರ: ಅವರ ದೌರ್ಬಲ್ಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ.

ಇವತ್ತು ನಮ್ಮ ಸುತ್ತಮುತ್ತ ನಡೆಯುತ್ತಿರುವ ಹಲವಾರು ವಿಷಯಗಳನ್ನು ನೋಡಿದಾಗ ನನಗೆ ಈ ಮಾತು ಪದೆ ಪದೆ ನೆನಪಿಗೆ ಬರತೊಡಗಿದೆ.

ಸ್ವಾಮಿಗಳು, ಕಪಟ ಜ್ಯೋತಿಷಿಗಳು, ಬಹುತೇಕ ರಾಜಕಾರಣಿಗಳು, ಟಿವಿಗಳು, ಪತ್ರಿಕೆಯವರು, ಸರ್ಕಾರಿ ನೌಕರರು, ವಕೀಲರು, ವೈದ್ಯರು- ಹೀಗೆ ನೀವು ಯಾವುದೇ ರಂಗ ನೋಡಿದರೂ ಸಾಕು, ಯಂಡಮೂರಿ ಹೇಳಿದ ಮಾತು ಸತ್ಯ ಎಂಬುದು ಸ್ಪಷ್ಟವಾಗುತ್ತ ಹೋಗುತ್ತದೆ. ಪ್ರತಿಯೊಬ್ಬರೂ ಜನರ ದೌರ್ಬಲ್ಯ ಹಾಗೂ ಅನಿವಾರ್ಯತೆಗಳನ್ನೇ ಬಳಸಿಕೊಳ್ಳುವವರು. ಎಲ್ಲೋ ಒಬ್ಬಿಬ್ಬರು ಪುಣ್ಯಾತ್ಮರು ಇರಬಹುದು. ಆದರೆ, ಬಹುತೇಕರ ಜೀವನ ನಡೆಯುತ್ತಿರುವುದೇ ಜನರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದರಿಂದ.

ಸಾಮಾನ್ಯ ವ್ಯಕ್ತಿಯಂತೆ ಓಡಾಡಿಕೊಂಡವ ಕಾವಿ ಬಟ್ಟೆ ಧರಿಸಿದ ಕೂಡಲೇ ಆತ ಸ್ವಾಮೀಜಿಯಾಗಿಬಿಡುತ್ತಾನೆ. ಕಿಂಚಿತ್ತೂ ವಿಚಾರ ಮಾಡದೇ ಆತನ ಕಾಲಿಗೆ ಬೀಳಲು ಜನ ಹಾತೊರೆಯತೊಡಗುತ್ತಾರೆ. ಖಾಲಿ ಓಡಾಡಿಕೊಂಡವ, ಒಂದಕ್ಕೆರಡು ಪಟ್ಟು ಹಣ ಕೊಡುತ್ತೇನೆ ಎಂದ ಕೂಡಲೇ ಸಾಲ ಮಾಡಿ ಹಣ ಕೊಡಲು ಜನ ಮುಂದಾಗುತ್ತಾರೆ. ಜ್ಯೋತಿಷಿಗಳು ಹೇಳಿದಂತೆ ನಡೆದುಕೊಳ್ಳುವವರು, ಜಾಹೀರಾತು ನೋಡಿ ಔಷಧಿ ಕೊಳ್ಳುವವರು, ಕೆಲಸಕ್ಕೆ ಹಣ ಕಟ್ಟುವವರು, ಅರ್ಧ ರೇಟಿಗೆ ಚಿನ್ನ ಕೊಳ್ಳಲು ಹಾತೊರೆಯುವವರು, ಕೆಲಸ ಕೊಡುತ್ತೇನೆ ಎಂದರೆ ಕರೆದಲ್ಲಿಗೆ ಹೋಗುವವರು ನಮ್ಮ ಸುತ್ತಮುತ್ತಲೇ ಇದ್ದಾರೆ. ಮಾತಿಗೆ ಬಂದರೆ, ಅವರೂ ರಾಜಕಾರಣಿಗಳನ್ನು, ಜ್ಯೋತಿಷಿಗಳನ್ನು, ಸ್ವಾಮೀಜಿಗಳನ್ನು, ನಕಲಿ ವೈದ್ಯರನ್ನು, ವಂಚಕರನ್ನು ಬೈಯುವವರೇ. ಆದರೆ, ತಮಗೆ ಲಾಭವಾಗುತ್ತದೆ ಎಂದು ಅನಿಸಿದ ತಕ್ಷಣ ವಿವೇಚನೆ ಮರೆತುಬಿಡುತ್ತಾರೆ. ಕಣ್ಣು ಮುಚ್ಚಿಕೊಂಡು ಹಳ್ಳಕ್ಕೆ ಬೀಳುತ್ತಾರೆ.

ಮತ್ತಷ್ಟು ಓದು »