ಕನ್ನಡದ ಅಳಿವು–ಉಳಿವು ಮತ್ತು ಭಾಷಾ ಮಾಧ್ಯಮ: ಕೆಲವು ಟಿಪ್ಪಣಿಗಳು
– ಎಂ.ಎಸ್. ಚೈತ್ರ, ನಿರ್ದೇಶಕರು, “ಆರೋಹಿ” ಸಂಶೋಧನಾ ಸಂಸ್ಥೆ, ಬೆಂಗಳೂರು
ಕಳೆದ ಒಂದು ತಿಂಗಳಿನಿಂದ ಭಾರತದ ಸುಪ್ರೀಂ ಕೋರ್ಟ್ನ ತೀರ್ಪೊಂದು ಕರ್ನಾಟಕದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ, ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕುರಿತು ನೀಡಿದ ತೀರ್ಪಿನ ಕಾರಣಕ್ಕಾಗಿ ಎಲ್ಲ ಹುಟ್ಟು ಹೋರಾಟಗಾರರು, ಸಾಹಿತಿಗಳು, ಬುದ್ಧಿ ಜೀವಿಗಳು ದಿಢೀರನೇ ರಾಜ್ಯದಲ್ಲಿ ಕನ್ನಡದ ಡಿಂಡಿಮ ಬಾರಿಸಲು ಪ್ರಾರಂಭಿಸಿದ್ದಾರೆ. ಈ ಚರ್ಚೆಯ ಸಂದರ್ಭದಲ್ಲಿ ಕನ್ನಡದ ಕೆಲವು ಚಿಂತಕರು ಆವೇಶ ಪೂರಿತ ಹೋರಾಟದ ಹಾದಿಯನ್ನು ಬಿಟ್ಟು, ಸುಪ್ರೀಂ ಕೋರ್ಟಿನ ತೀರ್ಪನ್ನು ಗೌರವಿಸಿ, ಕನ್ನಡದ ಬಗ್ಗೆ ಗಂಭೀರವಾಗಿ ಯೋಚಿಸಲು ಇದು ಸರಿಯಾದ ಸಮಯವೆಂದು ವಾದಿಸುತ್ತಿದ್ದಾರೆ. ನಮ್ಮ ಹಿರಿಯರ-ಹೋರಾಟಗಾರರ ಆದೇಶ-ಅಬ್ಬರಗಳಿಗೆ ಮಣಿದ ಕೆಲವರು ಸುಮ್ಮನಾದರೆ, ಮತ್ತೆ ಕೆಲವರ ಪಿಸು ಮಾತುಗಳು ಯಾರಿಗೂ ಕೇಳಿಸುತ್ತಿಲ್ಲ. ಈ ಎಲ್ಲ ಹಿನ್ನಲೆಯಲ್ಲಿ ಸ್ವಲ್ಪ ಕ್ರಮಬದ್ಧವಾಗಿ, ಈಗಿರುವ ನ್ಯಾಯಾಲಯದ ತೀರ್ಪು ಮತ್ತು ಅದಕ್ಕೂ ಕನ್ನಡದ ಉಳಿವಿಗೂ ಇರುವ ಸಂಬಂಧದ ಕುರಿತು ಯೋಚಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತೇನೆ.
ಮೇಲೆ ತಿಳಿಸಿದ ಯೋಚನೆ ಮಾಡಲು ನಾನು ಕೆಲವು ಪ್ರಮುಖ ವಿಷಯಗಳನ್ನು ಪ್ರಾರಂಭದಲ್ಲೇ ಪಟ್ಟಿ ಮಾಡಿ, ಅದೇ ಕ್ರಮದಲ್ಲಿ ಚರ್ಚೆಯನ್ನು ಕಟ್ಟುವ ಸಣ್ಣ ಪ್ರಯತ್ನವನ್ನು ಮಾಡುತ್ತೇನೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಭಾಷೆಯ ಉಳಿವಿನ ಕುರಿತು ನಾವು ಚಿಂತಿಸುವ ಮುನ್ನ ನಮಗೆ ತಿಳಿಯ ಬೇಕಿರುವ ಸಂಗತಿಗಳು ಯಾವವು ಮತ್ತು ಆ ರೀತಿಯ ಚಿಂತನೆಯ ಪ್ರಯತ್ನವನ್ನು ಮಾಡುವುದೇ ಆದಲ್ಲಿ, ಆಗ ನಮ್ಮ ಮುಂದೆ ಏಳುವ ಸವಾಲುಗಳು ಯಾವ ರೀತಿಯಲ್ಲಿರುತ್ತವೆ ಎಂಬುದನ್ನು ಹುಡುಕುವುದೇ ಈ ಲೇಖನದ ಮೂಲ ಆಶಯ.
ಈ ಆಶಯಗಳ ಹಿನ್ನೆಲೆಯಲ್ಲಿ, ಈ ಲೇಖನವು ತೆಗೆದುಕೊಳ್ಳಬಹುದಾದ ವಿಷಯಗಳನ್ನು ಪಟ್ಟಿಮಾಡುವ ಪ್ರಯತ್ನ ಆರಂಭಿಸುತ್ತೇನೆ.
1. ಅಸಲಿಗೆ ಸುಪ್ರೀಂ ಕೋರ್ಟಿನ ತೀರ್ಪಿನ ವಿಷಯದ ಕೇಂದ್ರವೇನು? ಅದರಿಂದ ನಮ್ಮ ಕನ್ನಡದ ಹೋರಾಟಗಾರರು ಗುರುತಿಸುತ್ತಿರುವ ಸಮಸ್ಯೆ ಯಾವುದು ಮತ್ತು ಆ ಕುರಿತು ನಮ್ಮ ಬುದ್ಧಿ ಜೀವಿಗಳು ಸರಿಯಾದ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಎನ್ನುವುದು.
2. ನಮ್ಮ ಹೋರಾಟಗಾರರು ವಾದಿಸುವಂತೆ, ಕನ್ನಡ ಮಾಧ್ಯಮದ ಶಿಕ್ಷಣಕ್ಕೂ ಮತ್ತು ಕನ್ನಡ ಭಾಷೆಯ ಅಳಿವು-ಉಳಿವಿಗೂ ಏನಾದರೂ ಸಂಬಂಧವಿದೆಯೇ? ಮತ್ತು ಹೇಗೆ ಕನ್ನಡ ಮಾಧ್ಯಮ ಶಾಲೆಗಳು ಕನ್ನಡವನ್ನು ಉಳಿಸಬಲ್ಲವು? ಎಂಬುದು.
3. ಅಂತಿಮವಾಗಿ ಈ ಎಲ್ಲ ವಾದಗಳ ಗುಣ ದೋಷಗಳನ್ನು ಗುರುತಿಸಿ, ಕನ್ನಡವನ್ನು ಕುರಿತಂತೆ ಒಂದು ಗಂಭೀರ ಯೋಚನೆಯನ್ನು ಹುಟ್ಟುಹಾಕಲು ಸಾಧ್ಯವಾದರೆ, ಆ ಮಾರ್ಗದ ಸಾಧ್ಯತೆಯನ್ನು ಹುಡುಕುವುದು.
ಸಾಹಿತಿಗಳೆಂದರೆ ಸರ್ವಸ್ವವೇ?
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಕನ್ನಡ ಕಲಿಕಾ ಮಾಧ್ಯಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಆಶಯ ಕುರಿತು ಬರುತ್ತಿರುವ ಅಭಿಪ್ರಾಯಗಳಲ್ಲಿ ಸುಪ್ರೀಂ ತೀರ್ಪಿನ ಪರ ಬಹುತೇಕ ದನಿಗಳಿವೆ. ಸುಪ್ರೀಂ ತೀರ್ಪು ಸರಿ. ನಮ್ಮ ಸರ್ಕಾರದ ನೀತಿಗಳು ಸರಿ ಇಲ್ಲ ಎಂಬುದೂ ಸರಿ, ಆದರೂ… ಎಂದು ಅನುಮಾನದ ರಾಗ ಎಳೆಯುವವರು ಕೆಲವರು ಮಾತ್ರ. ಈ ಸರ್ವೇ ಸ್ಯಾಂಪಲ್ ಸಂಖ್ಯೆ ತುಂಬ ಕಡಿಮೆ ಎನಿಸಿದರೂ ಸುಪ್ರೀಂ ತೀರ್ಪು ಜನಸಾಮಾನ್ಯರ ದೃಷ್ಟಿಗೆ ತಕ್ಕಂತೆಯೇ ಇದೆ ಎಂಬುದರಲ್ಲಿ ಅನುಮಾನವಿಲ್ಲ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದ ಮೇಲೂ ಇದು ಇನ್ನೂ ತೀವ್ರ ಚರ್ಚೆಯ ವಿಷಯವಾಗಿಯೇ ಇರುವುದು ವಿಷಯದ ಗಂಭೀರತೆಯನ್ನು ತೋರಿಸುತ್ತದೆ. ಆದರೆ ಸರ್ಕಾರ ಬಹುಸಂಖ್ಯಾತರ ಆಶಯವನ್ನು ಗಮನಕ್ಕೆ ತಂದುಕೊಂಡು ಹೆಜ್ಜೆ ಇಡುತ್ತಿದೆಯೇ? ಇಲ್ಲ.
ಘನ ನ್ಯಾಯಾಲಯದ ತೀರ್ಪು ಯಾವುದೇ ನಿರ್ದಿಷ್ಟ ಭಾಷಾ ಮಾಧ್ಯಮ ಹೇರಿಕೆಯ ವಿರುದ್ಧವಿದ್ದರೂ ನಮ್ಮ ಸರ್ಕಾರ ಮಾತ್ರ ಕನ್ನಡದ ರಕ್ಷಣೆ ಹೇಗಾಗಬಲ್ಲುದು ಎಂಬುದಕ್ಕಿಂತ ಕನ್ನಡ ಮಾಧ್ಯಮ ರಕ್ಷಣೆಗೆ ಪಣ ತೊಟ್ಟಂತೆ ಕಾಣುತ್ತದೆ. ತನ್ನ ಆದೇಶವನ್ನು ಅದು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಸದಾ ಸುದ್ದಿ ಬಯಸುವ ಬೆರಳೆಣಿಕೆ ಸಾಹಿತಿಗಳ ಹಾಗೂ ಹೋರಾಟಗಾರರ ಭಾವಾವೇಶದ ಅಭಿಪ್ರಾಯಕ್ಕೆ ಸರ್ಕಾರ ಬಗ್ಗುವಂತೆ ಕಾಣುತ್ತಿದೆ. ತೀರ್ಪನ್ನು ಕುರಿತು ಚರ್ಚಿಸಲು ಸರ್ಕಾರ ಕರೆದ ಸಭೆಯಲ್ಲಿ ಆಹ್ವಾನಿತರಾದವರು ಯಾರು? ಒಂದಿಷ್ಟು ಸಾಹಿತಿಗಳು, ಚಳವಳಿಗಾರರು ಹಾಗೂ ಸರ್ಕಾರಿ ಅಧಿಕಾರಿಗಳು. ಇವರೇ ಈ ವಿಷಯಕ್ಕೆ ಸಂಬಂಧಿಸಿದ ಸಮಸ್ತ ಸಂಗತಿಗಳನ್ನು ಪ್ರತಿನಿಧಿಸುತ್ತಾರಾ? ಇವರನ್ನೇ ಶಿಕ್ಷಣ ತಜ್ಞರು, ಪಾಲಕ-ಪೋಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗದವರು ಇತ್ಯಾದಿ ಊಹಿಸಿಕೊಳ್ಳಬೇಕಾ? ಅಷ್ಟಕ್ಕೂ ಈ ಸಭೆಯಲ್ಲಿ ಪಾಲ್ಗೊಂಡವರಲ್ಲಿ ಕನ್ನಡ ಕಲಿತರೆ ಭವಿಷ್ಯವಿದೆ ಎಂಬ ವಾತಾವರಣ ಹುಟ್ಟಿಸಬೇಕಿದೆ ಎಂದ ಗಿರೀಶ್ ಕಾರ್ನಾಡ್ ಹಾಗೂ ಭಾಷೆಯಾಗಿ ಕನ್ನಡ ಕಲಿಸಲು ಅಡ್ಡಿ ಇಲ್ಲ ಹಾಗೂ ಅಂಥ ವಾತಾವರಣ ರೂಪಿಸಬೇಕು ಎಂದ ಸಿ ಎನ್ ರಾಮಚಂದ್ರನ್ ಅವರ ಮಾತುಗಳನ್ನು ಬಿಟ್ಟರೆ ಉಳಿದವರ ಅಭಿಪ್ರಾಯಗಳೆಲ್ಲ ಹೋರಾಟಗಾರರ ಮಾತಿನಂತೆ ತಥಾಕಥಿತವಾಗಿವೆ.
ಸುಪ್ರೀಂ ತೀರ್ಪಿಗೆ ತಕರಾರೆತ್ತುವ ಮುನ್ನ…
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ, ತುಮಕೂರು ವಿವಿ
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದು ಮಂಗಳವಾರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಕರ್ನಾಟಕದಲ್ಲಿ ಖಾಸಗಿ ಶಾಲೆಯವರಿಗೆ ಸಂಭ್ರಮವಾದರೆ, ಕನ್ನಡ ಹೋರಾಟಗಾರರು ಹಾಗೂ ಸಾಹಿತಿಗಳಿಗೆ ಸಂಕಟ ಆರಂಭವಾಗಿದೆ. ರಾಜ್ಯ ಮಟ್ಟದ ಪತ್ರಿಕೆಯ ಮಿತ್ರರೊಬ್ಬರು ಕರೆ ಮಾಡಿ ಈ ತೀರ್ಪು ಸರಿ ಇಲ್ಲ, ಇದರಿಂದ ಕನ್ನಡ ಸರ್ವನಾಶವಾಗುತ್ತದೆ. ಇದನ್ನು ಕುರಿತು ಸ್ಟ್ರಾಂಗ್ ಆಗಿ ಲೇಖನ ಬರೆದುಕೊಡಿ ಸಾರ್ ಎಂದರು. ಇಲ್ಲ, ಸುಪ್ರೀಂ ತೀರ್ಪು ಸರಿಯಾಗಿಯೇ ಇದೆ ಎಂದು ನನ್ನ ಅಭಿಪ್ರಾಯ ಹೇಳುವಷ್ಟರಲ್ಲಿ ಏನ್ ಸಾರ್, ಕನ್ನಡ ಮೇಷ್ಟ್ರಾಗಿ ನೀವೇ ಹಿಂಗದ್ರೆ ಹೆಂಗೆ ಎನ್ನುತ್ತ ಆಮೇಲೆ ಕರೆ ಮಾಡ್ತೀನಿ ಅಂತ ಫೋನ್ ಇಟ್ಟರು. ಅವರು ನನ್ನನ್ನು ಕನ್ನಡ ವಿರೋಧಿ ಸ್ಥಾನದಲ್ಲಿ ಸ್ಥಾಪಿಸಿಬಿಟ್ಟರು. ಈ ತೀರ್ಪು ಕುರಿತಂತೆ ಕನ್ನಡ ಪರ ಎಂದುಕೊಳ್ಳುವ ಬಹುತೇಕರ ನಿಲುವು ಹೀಗೇ ಇದ್ದರೆ ಅಚ್ಚರಿ ಇಲ್ಲ.
ಸಮಸ್ಯೆಯ ಮೂಲ 33 ವರ್ಷಗಳ ಹಿಂದಿದೆ. ಗೋಕಾಕ್ ಸಮಿತಿ 1981ರಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗಬೇಕು ಎಂದು ವರದಿ ನೀಡಿದ್ದರ ಆಧಾರದಲ್ಲಿ 1982ರಲ್ಲಿ ಸರ್ಕಾರ ಹೀಗೆ ಆದೇಶ ನೀಡಿತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. 1984ರಲ್ಲಿ ಕೇಸು ಬಿತ್ತು. ಸ್ವಲ್ಪ ಕಾಲ ಸುಮ್ಮನಿದ್ದ ಸರ್ಕಾರ ಮತ್ತೆ 1994ರಲ್ಲಿ 1ರಿಂದ 4 ನೇ ತರಗತಿವರೆಗೆ ಕನ್ನಡವಲ್ಲದೇ ಬೇರೆ ಮಾಧ್ಯಮದಲ್ಲಿ ಕಲಿಸುವ ಶಾಲೆಗಳಿಗೆ ಅನುಮತಿ ಕೊಡುವುದಿಲ್ಲ ಎಂದು ಆದೇಶಿಸಿತು. ಕೆಲವು ಖಾಸಗಿ ಶಾಲೆಗಳು ಕನ್ನಡದಲ್ಲೇ ಕಲಿಸುತ್ತೇವೆಂದು ಅನುಮತಿ ಪಡೆದು ಇಂಗ್ಲಿಷ್ನಲ್ಲಿ ಬೋಧಿಸತೊಡಗಿದವು. ಮತ್ತೆ ತಕರಾರು ಎದ್ದು ನ್ಯಾಯಾಲಯದ ಮೆಟ್ಟಿಲಿಗೆ ಹೋಯಿತು. ಮತ್ತೆ ಸರ್ಕಾರದ ಆದೇಶ ಬಿತ್ತು. 2009ರಲ್ಲಿ ಕೇಸು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು. ಈಗ ತೀರ್ಪು ಹೊರಬಿದ್ದಿದೆ. ಈ ತೀರ್ಪಿನಿಂದ ಕನ್ನಡ ಶಾಶ್ವತವಾಗಿ ಸತ್ತೇ ಹೋಗುತ್ತದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಹೌದೇ? ಇದರಿಂದ ಕನ್ನಡ ಸತ್ತೇ ಹೋಗುತ್ತಾ?





